Thursday, November 21, 2013

ಈರುಳ್ಳಿ ವಿಷ್ಣು, ವಿಷ್ಣು ಅಂತ ತಪಸ್ಸು ಮಾಡಿದ ಕಥೆ

ಈರುಳ್ಳಿ ಕುಯ್ದರೆ ಯಾಕೆ ಕಣ್ಣೀರು ಬರುತ್ತೆ ಅನ್ನೋದಕ್ಕೆ ಈರುಳ್ಳಿ ತಪಸ್ಸು ಮಾಡಿ ಅದನ್ನು ಕುಯ್ದವರಿಗೆಲ್ಲಾ ಕಣ್ಣೀರು ಬರುವಂತೆ ವರ ಪಡೆದ ಕಥೆ ಹೇಳಿದ್ದೆ ನಮ್ಮನೆ ಪುಟ್ಟವಳಿಗೆ. ನಾನು ಹೇಳಿದ ಕಥೆಯಲ್ಲಿ ದೇವರು ಶಿವ ಆಗಿದ್ದ, ಯಾಕೆಂದರೆ ನನಗೆ ತಪಸ್ಸು ಅಂದ ಕೊಡಲೇ ನಾ ಕೇಳಿದ ಕಥೆಯಲ್ಲೆಲ್ಲ ಇದ್ದಿದ್ದು ಓಂ ನಮ: ಶಿವಾಯ, ಅದೇ ನೆನಪಿಗೆ ಬರೋದು.

ಸ್ವಲ್ಪ ಹೊತ್ತಾದ ಮೇಲೆ ಮನೆಯ ಹೊರಗಡೆ ನನ್ನ ಕಥೆ ರಿಪ್ರೊಡಕ್ಷನ್ ಆಗ್ತಿರುವುದು ಕೇಳಿಸ್ತು, ಹಾಗೇ ಒಂದು ಕಿವಿ ಆಕಡೆಗೆ ಇಟ್ಟಿದ್ದೆ. ನಮ್ಮನೆ ಪುಟ್ಟವಳು ಅವಳ ಬೇಬಿ ಸಿಟ್ಟರು ಹುಡುಗಿ, ಎದುರುಮನೆ ಅಜ್ಜಿ, ಪಕ್ಕದ ಮನೆ ಹುಡುಗನ್ನ ಸೇರಿಸಿಕೊಂಡು ಕಥೆ ಹೇಳ್ತಿದ್ದಳು. ಅವಳ ಕಥೆಯಲ್ಲಿ ದೇವರು ಶಿವ ಹೋಗಿ ವಿಷ್ಣು ಆಗಿಬಿಟ್ಟಿತ್ತು! :-)

ಓಂ ವಿಷ್ಣವೇ ನಮ: ಅಂತ ನಾ ಹೇಳ್ಕೊಟ್ಟಿರಲಿಲ್ಲವಾದ್ದರಿಂದ ಅವಳ ಕಥೆಯಲ್ಲಿ ಈರುಳ್ಳಿ 'ವಿಷ್ಣು ವಿಷ್ಣು' ಅಂತ ತಪಸ್ಸು ಮಾಡ್ತಿತ್ತು. ಪಕ್ಕಾ ಮಾಧ್ವ ಸಂತತಿ :-) ನಮ್ಮಲ್ಲಿ ಗೌರಿ ಪೂಜೆ ಮಾಡ್ಬೇಕಾದ್ರೆ ಒಂದೊಂದ್ಸಲ ಹಿರಿಯರು ಲಕ್ಷ್ಮಿ ಹಾಡು ಹಾಡ್ತಾರೆ! ಶಿವ ಭಜನೆ ಮಾಡ್ಬೇಕಾದ್ರೆ "ಕೈಲಾಸವಾಸ ಗೌರೀಶ ಈಶ.. ತೈಲಧಾರೇಯಂತೆ ಮನಸು ಕೊಡು ಹರಿಯಲ್ಲಿ ಶಂಭೋ.." ಅಂತಾರೆ...

ಸದ್ಯ.. ಶಿವ ದೇವ್ರು narrow-minded ಆಗಿದ್ದಿದ್ದರೆ ಎಲ್ಲಾರ್ನೂ ಲಯ ಮಾಡ್ಬಿಡ್ತಾ ಇದ್ನೇನೋ!!! :-)

Friday, November 1, 2013

ಮತ್ತೆ ಕಾಡಿದ ಸತ್ಯ...

ಬಿಸಿ ಹಬೆ ಸುತ್ತ ತುಂಬಿದಾಗ
ಮಸುಕಾಗುತ್ತದೆ ಮನದ ಕನ್ನಡಿ
ಬಿಸಿ ತಣಿಸಿ ಮಸುಕು ತಿಳಿಯಾಗಿಸಬೇಕು -
ಇಲ್ಲ, ಕನ್ನಡಿ ನೋಡುವ ಹುಚ್ಚು ಬಿಡಬೇಕು...

*********

ಮಸುಕು ತಣಿಯದ ಮನಕೆ
ನೀನಾರೆಂದು ಕೇಳಿದರೆ
ಕನ್ನಡಿಗೆ ಉತ್ತರ ಹೇಳಲು ತಿಳಿದೀತೆ,
ಕಾಣುವ ಮಸುಕೇ ಸತ್ಯವಾಗುತ್ತದೆ,
ನಿಜವಾದ ಸತ್ಯ ಕಾಣುವುದು ಸುಲಭವಲ್ಲ.

***********

ಅಸಲು, ಈ 'ಸತ್ಯ' ಅಂದರೇನು?
ಅವರವರ ಭಾವಕ್ಕೆ ಅವರವರ ಬುದ್ಧಿಗೆ
ನಿಲುಕುವುದಷ್ಟೇ ಸತ್ಯ
ಉಳಿದಿದ್ದು ಮಿಥ್ಯ....
ನಾವು ನೋಡಬಯಸಿದ್ಧಷ್ಟೇ ಸತ್ಯ
ನಮಗಿಷ್ಟವಿಲ್ಲದ್ದು ಮಿಥ್ಯ....
ಸಂತೋಷ ಕೊಡುವುದು ಸತ್ಯ...
ದು:ಖ ಕೊಟ್ಟಲ್ಲಿ ಮಿಥ್ಯ...

************

ಮಿಥ್ಯವೂ ಬೇಕಲ್ಲವೇ ಜೀವನಕ್ಕೆ?
ಬದುಕು ಸಹನೀಯವಾಗಲಿಕ್ಕೆ
ಸತ್ಯದ ಸಾಂಗತ್ಯ ಬೆಂಕಿಯಿದ್ದಂತಲ್ಲವೇ?
ಬೆಂಕಿಯೊಳಗಿದ್ದೂ ಬಿಸಿಯಾಗದೆ ಬದುಕುವುದು
ಸಾಧ್ಯವಾ?

*************

ಬಿಸಿಯಾದರೆ ಮತ್ತೆ ಕನ್ನಡಿ ಮಸುಕು...
ಮತ್ತದೇ ಚಕ್ರದ ಆವರ್ತನ...!