Tuesday, December 3, 2013

ನಮ್ಮನೆ ಪುಟ್ಟ ಬೆಕ್ಕು


ಅಮ್ಮಾ... ನಂಗೆ ಚೆಟರು ಬೇಡಮ್ಮಾ.... ನೀ ಯಾಕೆ ನಂಗೆ ಹಾಕ್ತೀಯಾ...
ಪುಟ್ಟವಳದು ರಾತ್ರಿರಾಗ ಶುರು... ಅಂದರೆ ನಿದ್ದೆ ಮಾಡುವ ಸಮಯ ಹತ್ತಿರವಾಗಿದೆ.
ಹೀಗವಳು  ಅತ್ತಾಗಲೆಲ್ಲಾ ಮೊದಮೊದಲು ಕೈಕಾಲು ಬೀಳುತ್ತಿತ್ತು. ಆಮೇಲೆ ನಿನ್ನ ಹಠವೆಲ್ಲಾ ಕಲಿತಿದ್ದಾಳೆ ಅಂತ ನಮ್ಮವರು ನನ್ನನ್ನು ದೂರಿದರೆ, ಅವೆಲ್ಲಾ ನಿಮ್ಮದೇ ಬಳುವಳಿ ಅಂತ ನಾನು ಅವರನ್ನು ದೂರುವುದು ಸ್ವಲ್ಪ ದಿನ ನಡೆಯಿತು. ಈಗೊಂದು ತಿಂಗಳಿಂದ ಹೊಸ ಉಪಾಯ ಕಂಡುಕೊಂಡಿದ್ದೇವೆ.
"ಪಪ್ಪಾ, ಅಳೋರೆಲ್ಲಾ ಅಳ್ತಾ ಇರ್ಲಿ, ನಾವು ನೀವು ನಾಟ್ಕ ಮಾಡೋಣ...!" ನಾ ಶುರು ಮಾಡುತ್ತೇನೆ. ಇಬ್ಬರೂ ಮಂಚದ ಮೇಲೆ ಎದುರು-ಬದುರು ಕುಳಿತಿದ್ದಾಗಿದೆ. ಅವಳಿನ್ನೂ ಬಾಗಿಲಾಚೆಗೆ ನಿಂತಿದ್ದಾಳೆ.
"ಹೌದು ಹೌದು, ಶುರು ಮಾಡೋಣ" ಅಂತಾರೆ ನಮ್ಮವರು.
ಅಳು ಇನ್ನೂ ಮುಂದುವರಿದೇ ಇದೆ.
"ನಾನು ಮಂಗ, ನೀವೂ ಮಂಗ, ಬನ್ನಿ, ಬೆಣ್ಣೆ ಕದಿಯೋಣ'' ಅಂತೀನಿ ನಾನು.
''ಸರಿ, ಕದಿಯೋಣ,  ಆದ್ರೆ ನಂಗೆ ಜಾಸ್ತಿ ಬೆಣ್ಣೆ ಬೇಕು'' ಅಂತಾರೆ ನಮ್ಮವರು.
'' ಇಲ್ಲ, ನಂಗೆನೇ ಜಾಸ್ತಿ'' ಅಂತೀನಿ ನಾನು.
''ಹಂಗಾರೆ ನಾನು ಕದಿಯಕ್ಕೇ ಬರಲ್ಲ'' ಅಂತಾರೆ ನಮ್ಮವರು.
ನಾಟಕದ ಪರಿಣಾಮ ಕಾಣಿಸಲು ಶುರುವಾಗಿದೆ,
''ಇಲ್ಲಿಲ್ಲ, ಬನ್ನಿ ಪ್ಲೀಸ್, ಇಬ್ರೂ ಕದ್ದು ಬಿಟ್ಟು ತಿನ್ನೋಣ'' ಅಂತೀನಿ ನಾನು.
ಸರಿ, ದಿಂಬಿನ ಆಚೆಗೆ ಕೈಹಾಕಿ ಪಪ್ಪಮಂಕಿ ಬೆಣ್ಣೆ ಕದಿಯಲು ಶುರುಮಾಡಿದರೆ, ಅಮ್ಮ ಮಂಕಿ ಕೈಯನ್ನು ಎತ್ತಿಹಾಕಿ ಸಪೋರ್ಟ್ ಮಾಡುತ್ತಾಳೆ.
ಮಂಚದಿಂದಾಚೆಗೆ ಬೆಕ್ಕು ಮೇಲೆ ಬರಲು ಸಿದ್ಧವಾಗುತ್ತಿರುವುದು ಕಣ್ಣಂಚಿನಲ್ಲೇ ಕಾಣಿಸಿ ಪಪ್ಪ-ಅಮ್ಮ ಮಂಕಿ ಇಬ್ಬರಿಗೂ ನಗು ಬರುತ್ತದೆ, ಆದರೆ ತೋರಿಸಿಕೊಳ್ಳುವುದಿಲ್ಲ. ನಾಟಕ ಮುಂದುವರಿಯುತ್ತದೆ.
''ಆಹಾ, ಎಷ್ಟೊಂದು ಬೆಣ್ಣೆ.... ಘಮ್ಮಂತಿದೆಯಲ್ಲಾ..'' ಪಪ್ಪ ಮಂಕಿಯ ಉದ್ಗಾರ.
ಅಮ್ಮ ಮಂಕಿ ''ಹೂಂ, ನಾನು ನಿಮ್ಗೆ ಬೆಣ್ಣೆ ಕದಿಯಕ್ಕೆ ಸಹಾಯ ಮಾಡಿದ್ದೀನಲ್ಲಾ, ನಂಗೆ ಜಾಸ್ತಿ ಬೆಣ್ಣೆ ಬೇಕು'' ಅನ್ನುತ್ತಾಳೆ.
''ಕದ್ದಿದ್ದು ನಾನು ತಾನೇ, ನನಗೇ ಜಾಸ್ತಿ,'' ಅಂತಾರೆ ಪಪ್ಪ ಮಂಕಿ. ಜಗಳ ಶುರುವಾಗುತ್ತದೆ.
ಅಷ್ಟರಲ್ಲಿ...
''ಮಿಯ್ಯಾಂವ್!''
ಪುಟ್ಟವಳು ಬೆಕ್ಕಾಗಿ ಮಂಚದ ಮೇಲೇರುತ್ತಾಳೆ, ಕಣ್ಣಂಚಿನ ಹನಿಯೆಲ್ಲಾ ಒರಸಿಕೊಂಡಿದ್ದಾಗಿದೆ, ಹಠ ಮರೆತುಹೋಗಿದೆ.
ಪಪ್ಪ ಹೇಳುತ್ತಾರೆ, ''ಬೆಕ್ಕೇ ನೀನು ನಮಗಿಬ್ರಿರಿಗೂ ಬೆಣ್ಣೆ ಹಂಚು'' ಅಂತ.
ಬೆಕ್ಕು ಬೆಣ್ಣೆ ಹಂಚುವ ಬದಲು ತಾನೇ ತಿನ್ನುವ ನಾಟಕವಾಡುತ್ತಿದ್ದರೆ, ಅಪ್ಪ- ಅಮ್ಮನ ಮನಸ್ಸು ನಿರಾಳ.
ಆಮೇಲೊಂದಿಷ್ಟು ಕಥೆ, ಹಾಗೇ ಎಲ್ಲರಿಗೂ ನಿದ್ದೆ.

Thursday, November 21, 2013

ಈರುಳ್ಳಿ ವಿಷ್ಣು, ವಿಷ್ಣು ಅಂತ ತಪಸ್ಸು ಮಾಡಿದ ಕಥೆ

ಈರುಳ್ಳಿ ಕುಯ್ದರೆ ಯಾಕೆ ಕಣ್ಣೀರು ಬರುತ್ತೆ ಅನ್ನೋದಕ್ಕೆ ಈರುಳ್ಳಿ ತಪಸ್ಸು ಮಾಡಿ ಅದನ್ನು ಕುಯ್ದವರಿಗೆಲ್ಲಾ ಕಣ್ಣೀರು ಬರುವಂತೆ ವರ ಪಡೆದ ಕಥೆ ಹೇಳಿದ್ದೆ ನಮ್ಮನೆ ಪುಟ್ಟವಳಿಗೆ. ನಾನು ಹೇಳಿದ ಕಥೆಯಲ್ಲಿ ದೇವರು ಶಿವ ಆಗಿದ್ದ, ಯಾಕೆಂದರೆ ನನಗೆ ತಪಸ್ಸು ಅಂದ ಕೊಡಲೇ ನಾ ಕೇಳಿದ ಕಥೆಯಲ್ಲೆಲ್ಲ ಇದ್ದಿದ್ದು ಓಂ ನಮ: ಶಿವಾಯ, ಅದೇ ನೆನಪಿಗೆ ಬರೋದು.

ಸ್ವಲ್ಪ ಹೊತ್ತಾದ ಮೇಲೆ ಮನೆಯ ಹೊರಗಡೆ ನನ್ನ ಕಥೆ ರಿಪ್ರೊಡಕ್ಷನ್ ಆಗ್ತಿರುವುದು ಕೇಳಿಸ್ತು, ಹಾಗೇ ಒಂದು ಕಿವಿ ಆಕಡೆಗೆ ಇಟ್ಟಿದ್ದೆ. ನಮ್ಮನೆ ಪುಟ್ಟವಳು ಅವಳ ಬೇಬಿ ಸಿಟ್ಟರು ಹುಡುಗಿ, ಎದುರುಮನೆ ಅಜ್ಜಿ, ಪಕ್ಕದ ಮನೆ ಹುಡುಗನ್ನ ಸೇರಿಸಿಕೊಂಡು ಕಥೆ ಹೇಳ್ತಿದ್ದಳು. ಅವಳ ಕಥೆಯಲ್ಲಿ ದೇವರು ಶಿವ ಹೋಗಿ ವಿಷ್ಣು ಆಗಿಬಿಟ್ಟಿತ್ತು! :-)

ಓಂ ವಿಷ್ಣವೇ ನಮ: ಅಂತ ನಾ ಹೇಳ್ಕೊಟ್ಟಿರಲಿಲ್ಲವಾದ್ದರಿಂದ ಅವಳ ಕಥೆಯಲ್ಲಿ ಈರುಳ್ಳಿ 'ವಿಷ್ಣು ವಿಷ್ಣು' ಅಂತ ತಪಸ್ಸು ಮಾಡ್ತಿತ್ತು. ಪಕ್ಕಾ ಮಾಧ್ವ ಸಂತತಿ :-) ನಮ್ಮಲ್ಲಿ ಗೌರಿ ಪೂಜೆ ಮಾಡ್ಬೇಕಾದ್ರೆ ಒಂದೊಂದ್ಸಲ ಹಿರಿಯರು ಲಕ್ಷ್ಮಿ ಹಾಡು ಹಾಡ್ತಾರೆ! ಶಿವ ಭಜನೆ ಮಾಡ್ಬೇಕಾದ್ರೆ "ಕೈಲಾಸವಾಸ ಗೌರೀಶ ಈಶ.. ತೈಲಧಾರೇಯಂತೆ ಮನಸು ಕೊಡು ಹರಿಯಲ್ಲಿ ಶಂಭೋ.." ಅಂತಾರೆ...

ಸದ್ಯ.. ಶಿವ ದೇವ್ರು narrow-minded ಆಗಿದ್ದಿದ್ದರೆ ಎಲ್ಲಾರ್ನೂ ಲಯ ಮಾಡ್ಬಿಡ್ತಾ ಇದ್ನೇನೋ!!! :-)

Friday, November 1, 2013

ಮತ್ತೆ ಕಾಡಿದ ಸತ್ಯ...

ಬಿಸಿ ಹಬೆ ಸುತ್ತ ತುಂಬಿದಾಗ
ಮಸುಕಾಗುತ್ತದೆ ಮನದ ಕನ್ನಡಿ
ಬಿಸಿ ತಣಿಸಿ ಮಸುಕು ತಿಳಿಯಾಗಿಸಬೇಕು -
ಇಲ್ಲ, ಕನ್ನಡಿ ನೋಡುವ ಹುಚ್ಚು ಬಿಡಬೇಕು...

*********

ಮಸುಕು ತಣಿಯದ ಮನಕೆ
ನೀನಾರೆಂದು ಕೇಳಿದರೆ
ಕನ್ನಡಿಗೆ ಉತ್ತರ ಹೇಳಲು ತಿಳಿದೀತೆ,
ಕಾಣುವ ಮಸುಕೇ ಸತ್ಯವಾಗುತ್ತದೆ,
ನಿಜವಾದ ಸತ್ಯ ಕಾಣುವುದು ಸುಲಭವಲ್ಲ.

***********

ಅಸಲು, ಈ 'ಸತ್ಯ' ಅಂದರೇನು?
ಅವರವರ ಭಾವಕ್ಕೆ ಅವರವರ ಬುದ್ಧಿಗೆ
ನಿಲುಕುವುದಷ್ಟೇ ಸತ್ಯ
ಉಳಿದಿದ್ದು ಮಿಥ್ಯ....
ನಾವು ನೋಡಬಯಸಿದ್ಧಷ್ಟೇ ಸತ್ಯ
ನಮಗಿಷ್ಟವಿಲ್ಲದ್ದು ಮಿಥ್ಯ....
ಸಂತೋಷ ಕೊಡುವುದು ಸತ್ಯ...
ದು:ಖ ಕೊಟ್ಟಲ್ಲಿ ಮಿಥ್ಯ...

************

ಮಿಥ್ಯವೂ ಬೇಕಲ್ಲವೇ ಜೀವನಕ್ಕೆ?
ಬದುಕು ಸಹನೀಯವಾಗಲಿಕ್ಕೆ
ಸತ್ಯದ ಸಾಂಗತ್ಯ ಬೆಂಕಿಯಿದ್ದಂತಲ್ಲವೇ?
ಬೆಂಕಿಯೊಳಗಿದ್ದೂ ಬಿಸಿಯಾಗದೆ ಬದುಕುವುದು
ಸಾಧ್ಯವಾ?

*************

ಬಿಸಿಯಾದರೆ ಮತ್ತೆ ಕನ್ನಡಿ ಮಸುಕು...
ಮತ್ತದೇ ಚಕ್ರದ ಆವರ್ತನ...!