Showing posts with label ಕಥೆ. Show all posts
Showing posts with label ಕಥೆ. Show all posts

Thursday, November 24, 2022

ಬಲೂನು

ಭುಸ್ಸೆಂದು ಕಪ್ಪುಕಪ್ಪಾಗಿ ಬಿಸಿಯುಸಿರು ಬಿಡುತ್ತ ತಿರುವುಗಳು ತುಂಬಿದ ಹಾದಿಯನ್ನು ಹತ್ತಿ ಸಾಗಿದ ಕೆಂಪು ಬಸ್ಸು ಕರೆಕ್ಟಾಗಿ ಎಂಟೂ ಇಪ್ಪತ್ತಕ್ಕೆ ಅಡ್ಕದ ಬಸ್ ಸ್ಟಾಪಿಗೆ ಬಂದು ನಿಂತಿತು. ಬ್ಯಾಗು ಹೊತ್ತುಕೊಂಡು ಅದರಿಂದಿಳಿದವಳು ಅಲ್ಲೇ ನಿಂತು ಸುತ್ತ ಕಣ್ಣಾಡಿಸಿದಳು. 

ವರ್ಷವರ್ಷ ಅಪ್ಪ-ಅಮ್ಮನೇ ಬೆಂಗಳೂರಿಗೆ ಬರುತ್ತಿದ್ದರು. ತನಗೆ ರಜಗಳ ಕೊರತೆಯಿದ್ದು, ಮಗನಿಗೆ ರಜದಲ್ಲೂ ಕ್ಲಾಸುಗಳು, ಕ್ಯಾಂಪುಗಳು ಇತ್ಯಾದಿ ಇದ್ದ ಕಾರಣ ಊರಕಡೆಗೆ ಐದು ವರ್ಷದಿಂದೀಚೆಗೆ ತಲೆ ಹಾಕಿರಲಿಲ್ಲ. ಬಂದಾಗೆಲ್ಲ ಕಾರಲ್ಲಿ ಬರುತ್ತಿದ್ದ ಕಾರಣ ಅಡ್ಕದ ಪುಟ್ಟ ಪೇಟೆಯಾಗಲೀ, ಮನುಷ್ಯರಾಗಲೀ ಗಮನಕ್ಕೆ ಬರುತ್ತಿರಲಿಲ್ಲ. 

ಇವತ್ತು ನೋಡುತ್ತಿರುವಾಗ ಎಲ್ಲವೂ ಹೊಸಹೊಸದಾಗಿದೆ. ಎಂದೋ ನೋಡಿದ ಬಣ್ಣಮಾಸಿದ ಬಸ್ಟಾಪು ಕೇಸರಿ ಬಣ್ಣ ಮೆತ್ತಿಕೊಂಡಿದೆ. ಅದರ ಪಕ್ಕದ ಆಲದ ಮರ ಇನ್ನಷ್ಟು ದೊಡ್ಡದಾಗಿ ನೆರಳು ನೆರಳಾಗಿ ಹಬ್ಬಿದೆ. ಆಗ ಮೂರ್ನಾಕು ಪುಟ್ಟ ಅಂಗಡಿಗಳಿದ್ದ ಅಡ್ಕ ಈಗ ಎರಡು ಕಮರ್ಶಿಯಲ್ ಕಾಂಪ್ಲೆಕ್ಸುಗಳು ಹುಟ್ಟಿಕೊಂಡು ದೊಡ್ಡದಾಗಿದೆ. ಟೈಲರ್ ಶಾಪುಗಳು, ಮೊಬೈಲು ಅಂಗಡಿ, ಹೋಟೆಲು, ಮೆಡಿಕಲ್ಲು, ದಿನಸಿ ಅಂಗಡಿ, ಒಂದು ಪುಟಾಣಿ ಸುಪರ್ ಮಾರ್ಕೆಟು —ತರತರದ ಅಂಗಡಿಗಳಿದ್ದು ಹೆಚ್ಚಿನವಕ್ಕೆ ಈಗಷ್ಟೇ ಬೆಳಗಾಗುತ್ತಿದೆ.

ಇಲ್ಲಿಂದ ಮನೆಗೆ ಐದು ಕಿಲೋಮೀಟರ್. ಬಸ್ಸಲ್ಲಿ ಹೋಗುವುದಾ ಇಲ್ಲ ಆಟೋ ಮಾಡಲಾ? ಆಟೋ ಆದರೆ ಸೀದಾ ಮನೆಗೇ ಹೋಗುತ್ತದೆ. ಬಸ್ಸಾದರೆ ಮತ್ತೊಂದು ಕಿಲೋಮೀಟರ್ ನಡೆಯಬೇಕು, ಲಗೇಜ್ ಜೊತೆಗೆ ಕಷ್ಟವಾಗ್ತದೇನೋ...

ಯೋಚನೆ ಮಾಡುತ್ತ ಆಟೋ ಸ್ಟಾಂಡಿನಲ್ಲಿ ನಿಂತಿದ್ದ ಎರಡು ಆಟೋಗಳ ಕಡೆ ಕಣ್ಣು ಹಾಯಿಸಿದಳು. ಡ್ರೈವರುಗಳಿಬ್ಬರೂ ಇವಳೆಡೆಗೇ ನೋಡುತ್ತಿದ್ದರು. ಅವರಲ್ಲೊಬ್ಬ ಗಡ್ಡ ಬಿಟ್ಟುಕೊಂಡು ಎಡಬದಿಗೆ ಕ್ರಾಪ್ ಮಾಡಿಕೊಂಡಿದ್ದ ಚೂಪುಕಣ್ಣಿನಾತ. ಇವಳು ಅವನ ಕಡೆ ನೋಡಿದಾಗ ಅದಕ್ಕೇ ಕಾಯ್ತಿದ್ದವನ ಹಾಗೆ ನಕ್ಕ. ಇವನನ್ನೆಲ್ಲೋ ನೋಡಿದ್ದೀನಲ್ಲ? ಅಷ್ಟರಲ್ಲಿ ಇನ್ನೊಬ್ಬ ಆಟೋ ಡ್ರೈವರ್ ಅವಳೆಡೆಗೆ ಸರಿದು ಬಂದ.

ಕೇಳಿದ: “ನೀವು ಗಣೇಶ ಮಾಷ್ಟ್ರ ಮಗಳಲ್ಲವಾ?”

“ಹೌದು…” ಅಂದಳು, ಹೇಗೆ ಗೊತ್ತು ಅನ್ನುವ ಪ್ರಶ್ನೆಯನ್ನು ನುಂಗಿಕೊಂಡಳು. ಚಿಕ್ಕ ಊರು, ಎಲ್ಲರಿಗೂ ಎಲ್ಲರನ್ನೂ ಗೊತ್ತಿರ್ತದೆ.

“ಅಕ್ಕಾ ನಾನು ಶ್ಯಾಮ, ನಿಮಿಗೆ ನನ್ನ ಗುರ್ತ ಸಿಕ್ಲಿಲ್ವಾ?”

ಓಹೋ… ಇವನನ್ನು ನೋಡಿದ್ದು ಎಂದೋ ಚಿಕ್ಕಂದಿನಲ್ಲಿ. ತೋಟದ ಕೆಲಸಕ್ಕೆ ಲಚ್ಚಿಮಿ ಬರುವಾಗ ಅಮ್ಮನ ಜತೆ ಇವನೂ ಬಂದು ಆಟವಾಡಿಕೊಂಡಿರುತ್ತಿದ್ದ. “ಹಾ... ಶ್ಯಾಮ, ನೀನು ಚಿಕ್ಕವನಿರುವಾಗ ನೋಡಿದ್ದಲ್ವಾ, ಗುರ್ತು ಸಿಗ್ಲಿಲ್ಲ,” ಅಂತ ನಕ್ಕಳು.

“ಮನೆಗೆ ಹೋಗೂದಲ್ವ, ನಾ ಬಿಡ್ತೇನೆ ನಿಮ್ಗೆ, ಬನ್ನಿ,” ಅಂತ ಕರೆದಾಗ ಅವಳಿಗೂ ಸಮಸ್ಯೆ ಪರಿಹಾರವಾದಂತಾಯಿತು. ಅವಳ ಲಗೇಜ್ ಎತ್ತಿ ದುರ್ಗಾಪರಮೇಶ್ವರಿ ಅಂತ ಬರೆದ ಆಟೋದ ಹಿಂದೆ ಕಂಪಾರ್ಟ್ಮೆಂಟಲ್ಲಿಟ್ಟು ಅವಳನ್ನೂ ಹತ್ತಿಸಿಕೊಂಡು ಹೊರಟ ಶ್ಯಾಮ.

ದಟ್ಟ ಕಾಡಿನ ನಡುವೆ ಗುಡ್ಡ ಹತ್ತಿ ಇಳಿದು ಹಾವಿನಂತೆ ಹಾಯುವ ಕಿತ್ತುಹೋದ ಐದು ಕಿಲೋಮೀಟರ್ ಡಾಂಬರು ಹಾದಿಯುದ್ದಕ್ಕೂ ಅವನ ಕಥೆ ಹೇಳಿಕೊಂಡ. ಅಪ್ಪ ತೀರಿಕೊಂಡಿದ್ದು, ಅಕ್ಕಂದಿರ ಮದುವೆ ಜವಾಬ್ದಾರಿ ಎಲ್ಲ ಇವನ ಮೇಲೆಯೇ ಬಂದು ಡಿಗ್ರಿ ಓದಲಾಗದೆ ಕೈಬಿಟ್ಟಿದ್ದು. ಆಮೇಲೆ ಅದೇ ಊರಿನ ಕಾಪರೇಟಿವ್ ಬ್ಯಾಂಕಿನಲ್ಲಿ ಸಾಲ ತಗೊಂಡು ಆಟೋ ತಗೊಂಡಿದ್ದು ಇತ್ಯಾದಿ.

ಅವನ ಮಾತೇನೋ ಕೇಳುತ್ತಿದ್ದರೂ ಅವಳಲ್ಲಿನ ಕುತೂಹಲ ಮಾತ್ರ ಹೆಡೆಬಿಚ್ಚಿ ಕೂತಿತ್ತು. ಕೊನೆಗೆ ಕೇಳಿಯೇ ಬಿಟ್ಟಳು, “ಅಲ್ಲಿದ್ದ ಇನ್ನೊಂದು ಆಟೋ ಯಾರ್ದು?”

“ಮೋಞಿ ಬ್ಯಾರಿ ಮಗ ಅಬೂಬಕರ್ ದು,” ಅಂತಂದ ಶ್ಯಾಮ. 

ಓಹ್, ಅಬೂಬಕರ್… ಇಪ್ಪತ್ತು ವರ್ಷಗಳ ಹಿಂದೆ ನೋಡಿದ್ದು ಅವನನ್ನ. ಎಷ್ಟು ಬದಲಾಗಿದ್ದಾನೆ…

ಒಂಬತ್ತು ಗಂಟೆಗೆ ಹತ್ತು ನಿಮಿಷ ಇದ್ದಂತೆ ಆಟೋ ಮನೆ ಮುಟ್ಟಿತು. ಹೇಳದೆಯೇ ಬಂದವಳನ್ನು ಕಂಡು ಅಮ್ಮ-ಅಪ್ಪನಿಗೆ ಆಶ್ಚರ್ಯ ಖುಷಿ ಒಟ್ಟಿಗೇ ಆಯ್ತು.

“ಎಲ್ಲಿ, ಒಬ್ಳೇ ಬಂದ್ಯಾ ಕೂಸೆ, ಪುಳ್ಳಿ ಎಲ್ಲಿ” ಅಂತ ಅಪ್ಪ ಕೇಳಿದರು. “ಮಂಗ್ಳೂರಲ್ಲಿ ಆಫೀಸಿನವರ ಕಡೆಯಿಂದ ಕಾನ್ಫರೆನ್ಸ್ ಉಂಟಪ್ಪ, ಅದಕ್ಕೇ ಅರ್ಜೆಂಟಿಗೆ ಒಬ್ಳೇ ಬಂದೆ, ಮಗ ಬೆಂಗ್ಳೂರಲ್ಲೇ ಇದಾನೆ ಅವನಪ್ಪನೊಟ್ಟಿಗೆ, ನಾ ನಾಡಿದು ವಾಪಸ್ ಹೋಗ್ಬೇಕು,” ಅಂದಳು.

ಲಗೇಜು ಒಳಗಿಟ್ಟು ಅಮ್ಮ ಮಾಡಿಕೊಟ್ಟ ಚಾ ಕುಡಿದ ಶ್ಯಾಮ ತಿಂಡಿ ಕೊಡಹೊರಟರೆ “ಇಲ್ಲ ಅಕ್ಕ, ಭಜನಾಮಂಡಳಿ ಮೀಟಿಂಗ್ ಉಂಟು, ಲೇಟ್ ಆಯ್ತು,” ಅಂದ.

ಎಂತ ಭಜನಾಮಂಡಳಿ ಅಂತ ಕೇಳಿದ್ದಕ್ಕೆ ಶ್ಯಾಮ ಹೇಳಿದ. "ದುರ್ಗಾಪರಮೇಶ್ವರಿ ಭಜನಾಮಂಡಳಿ ಅಂತ ಅಕ್ಕ. ಎರಡು ವರ್ಷ ಆಯ್ತು ಸುರುವಾಗಿ. ಪ್ರತಿ ಶುಕ್ರವಾರ ಭಜನೆ ಮಾಡ್ತೇವೆ. ಈ ವರ್ಷ ಯಕ್ಷಗಾನ ಉಂಟು. ಊರಲ್ಲಿ ಏನೇ ಧಾರ್ಮಿಕ ಕಾರ್ಯಕ್ರಮ ಇದ್ರೂ ಸಹಾಯ ಮಾಡ್ತೇವೆ."

ಗ್ರಾಮ ಪಂಚಾಯತು ಅಧ್ಯಕ್ಷರಿಗೆ ಇವರನ್ನು ಕಂಡರೆ ಪ್ರೀತಿಯಿರುವುದರಿಂದ ಗವರ್ಮೆಂಟಿನ ಬೇರೆ ಬೇರೆ ಯೋಜನೆಗಳನ್ನ ಜನಗಳಿಗೆ ತಲುಪಿಸಲಿಕ್ಕೂ ಇವರನ್ನು ಸೇರಿಸಿಕೊಳ್ಳುತ್ತಾರಂತೆ. "ಅಂತೂ ವರ್ಷ ಇಡೀ ಬಿಸಿ ಇರ್ತೇವೆ ಅಕ್ಕ" ಅಂತಂದ. 

ನೂರೈವತ್ತು ರೂಪಾಯಿ ಆಟೋಚಾರ್ಜ್ ತಗೊಂಡು “ನನ್ನ ನಂಬರು ಅಣ್ಣೇರ ಹತ್ರ ಇದೆ, ಬೇಕಾದಾಗ ಫೋನ್ ಮಾಡಿ ಅಕ್ಕ,” ಅಂತ ಹೇಳಿ ಹೊರಟುಹೋದ.

ಅವ ಹೋದಮೇಲೆ ಅಮ್ಮ ಇನ್ನೊಂದು ವಿಷಯ ಗುಟ್ಟಿನ ದನಿಯಲ್ಲಿ ಹೇಳಿದರು. ಪಕ್ಕದ ಊರಿನಲ್ಲಿ ಒಬ್ಬ ಬ್ಯಾರಿ ಆಟೋ ಡ್ರೈವರ್ ಕಾಲೇಜು ಹೋಗುತ್ತಿದ್ದ ಹುಡುಗಿಯೊಬ್ಬಳನ್ನು ಚಙ್ಗಾಯ ಮಾಡಿ (ಪಟಾಯಿಸಿ) ಕೆಡಿಸಿಬಿಟ್ಟನಂತೆ. ಇದು ಊರೆಲ್ಲ ಗೊತ್ತಾಗಿ ದೊಡ್ಡ ಗಲಾಟೆಯೇ ಆಯಿತಂತೆ. ಆಮೇಲೆ ಎರಡು ದಿನ ಬಿಟ್ಟು ಅವನ ಹೆಣ ಮಂಜೂರಿನ ಹತ್ತಿರವಿರುವ ಬೀಚಲ್ಲಿ ಸಿಕ್ಕಿತಂತೆ. ಆ ಹುಡುಗಿ ಮನೆಯೊಳಗಿಂದ ಆಚೆಗೇ ಬಂದಿಲ್ಲವಂತೆ. ಇದಾದ ಸಮಯದಲ್ಲಿ ಭಜನಾಮಂಡಳಿಯ ಹುಡುಗರೆಲ್ಲ ಮನೆಮನೆಗೆ ಬಂದು ಯಾರೂ ‘ಅವರ’ ಆಟೋಗಳಲ್ಲಿ ಹೋಗಬೇಡಿ, ಹೆಚ್ಚು ಕಮ್ಮಿ ಆದರೆ ಕಷ್ಟ, ಯಾವ ಆಟೋದಲ್ಲಿ ದೇವರ ಹೆಸರು ಅಥವಾ ಧ್ವಜ ಇರುತ್ತದೆಯೋ ಅಂತದಕ್ಕೆ ಮಾತ್ರ ಹತ್ತಬೇಕು ಅಂತ ತಾಕೀತು ಮಾಡಿ ಹೋಗಿದ್ದರಂತೆ. ಇವೆಲ್ಲ ವಾಟ್ಸಾಪಿನಲ್ಲಿಯೂ ಬಂದಿತ್ತಂತೆ.

ಅಮ್ಮ ಕತೆ ಹೇಳಲು ಶುರು ಮಾಡಿದರೆ ಹೊತ್ತು ಹೋಗಿದ್ದೇ ಗೊತ್ತಾಗೂದಿಲ್ಲ. ಅದರಲ್ಲಿ ಅರ್ಧಕ್ಕರ್ಧ ಗಾಳಿಸುದ್ದಿ ಅಂತ ಗೊತ್ತಿದ್ದರೂ ಒಂದು ದಿನಕ್ಕೆ ಬಂದವಳಿಗೆ ಅಮ್ಮನ ಕೈಲಿ ವಾದ ಯಾಕೆ ಅಂತ ಎಲ್ಲದಕ್ಕೂ ಹೂಂಕುಟ್ಟುತ್ತ ಕೇಳಿದಳು. ಅಪ್ಪ ಕೇಳಿದ ಲೋಕಾಭಿರಾಮದ ಪ್ರಶ್ನೆಗಳಿಗೆ ಉತ್ತರ ನೀಡುತ್ತ, ಮರುದಿನದ ಕಾನ್ಫರೆನ್ಸಿಗೆ ಬೇಕಾದ ವಿಚಾರಗಳನ್ನು ರೆಡಿ ಮಾಡುತ್ತ, ಅಮ್ಮನ ಕೈಲಿ ಉಪಚಾರ ಮಾಡಿಸಿಕೊಳ್ಳುತ್ತ ಊರ ಸುದ್ದಿಯೆಲ್ಲ ಕೇಳುತ್ತ ದಿನ ಕಳೆಯಿತು.

ನಾಳೆ ಮಂಗಳೂರಿಗೆ ಹೋಗಬೇಕಲ್ಲ. ಆಟೋದಲ್ಲಿ ಅಡ್ಕದ ತನಕ ಹೋಗಿ ಅಲ್ಲಿಂದ ಬಸ್ಸಲ್ಲಿ ಹೋಗುವುದು ಒಳ್ಳೇದು. ಅಮ್ಮನ ಹತ್ತಿರ ಆಟೋ ಕರೆಯಲು ಹೇಳಿದಳು. ಆಮೇಲೆ ಅದೇನೋ ಹೊಳೆದಂತಾಗಿ ಅಮ್ಮನಿಗೆ ಕೇಳಿದಳು: “ನೀನು ಯಾವಾಗ್ಲೂ ಹೋಗೂದು ಯಾರ ಆಟೋದಲ್ಲಿ ಅಮ್ಮ?”

ಅಮ್ಮ ಹೇಳಿದ್ಲು. “ಈಗೆಲ್ಲಾ ಶ್ಯಾಮನ ಆಟೋನೇ.” 

“ಹಂಗಾರೆ ಮೊದಲೆಲ್ಲ?”

“ಅಬೂಬಕರ್ ಅಂತ... ಅವ ನಿನ್ನ ಕ್ಲಾಸ್ ಮೇಟ್ ಅಂತೆ ಅಲ್ವಾ, ಒಂದ್ ಸರ್ತಿ ಹೇಳಿದ್ದ ನಂಗೆ.. ಅವ ಚಂದಕ್ಕೆ ಮಾತಾಡ್ತಿದ್ದ. ತುಂಬ ಸಹಾಯ ಮಾಡ್ತಿದ್ದ. ಅವನಪ್ಪ ಅಂಗಡಿ ಮೋಞಿಬ್ಯಾರಿ, ನೆನಪುಂಟಲ್ಲ… ಬೇಕಾದಾಗೆಲ್ಲ ಅಬೂಬಕರ್ ಅಥವಾ ಶ್ಯಾಮ ಇಬ್ರಲ್ಲಿ ಒಬ್ರಿಗೆ ಫೋನ್ ಮಾಡ್ತಿದ್ದೆ. ಈಗ ಅಬೂಬಕರ್ ಗೆ ಫೋನ್ ಮಾಡೂದಿಲ್ಲ, ಆ ಹುಡುಗಿ ಗಲಾಟೆ ಎಲ್ಲ ಆದ ಮೇಲೆ.”

ಅವಳು ಕೆಲ ಸೆಕೆಂಡು ಅಳೆದು ಸುರಿದು ಕೊನೆಗಂದಳು: "ಅಬೂಬಕರಿಗೇ ಫೋನ್ ಮಾಡಮ್ಮ, ನಾಳೆ ಅವನ ಆಟೋದಲ್ಲಿಯೇ ಹೋಗ್ತೇನೆ. ಕ್ಲಾಸ್ಮೇಟಲ್ವಾ, ಮಾತಾಡಿದ ಹಾಗೂ ಆಯ್ತು.”

"ಶ್ಯಾಮನಿಗೇ ಹೇಳೂದು ಬೇಡ್ವಾ?”

“ಯಾಕಮ್ಮ ಅಬೂಬಕರ್ ಸರಿಯಿಲ್ವಾ, ನಿನ್ ಜತೆ ಏನಾದ್ರೂ ಗಲಾಟೆ ಆಗಿತ್ತಾ?” ಅಂತ ಕೇಳಿದಳು. ಅಮ್ಮ "ಹಾಗೇನಿಲ್ಲ, ಅವನಿಗೇ ಹೇಳ್ತೇನೆ," ಅಂದರು. ಅಬೂಬಕರ್ ಗೆ ಫೋನ್ ಮಾಡಿ “ಇದು ಗಣೇಶ ಮಾಸ್ತ್ರ ಮನೆಯಿಂದ, ನಾಳೆ ಬೇಗ ಆರೂವರೆಗೆ ಮನೆ ಹತ್ರ ಬಾ,” ಅಂದರು. ಫೋನಿಟ್ಟು ಬರುತ್ತಾನಂತೆ ಅಂತಂದು ಅಡಿಗೆಮನೆಗೆ ನಡೆದರು.

ಸಂಧ್ಯಾವಂದನೆ ಮುಗಿಸಿ ಬಂದ ಅಪ್ಪನ ಜತೆ ಕೂತು ಅವಳು ಊಟ ಮುಗಿಸಿದಳು. ಮೋಞಿ ಬ್ಯಾರಿ ಅಪ್ಪನ ಬೀಡಿ ದೋಸ್ತಿ ಕೂಡ. ಪ್ರತಿ ರಂಜಾನಿನ ಸಮಯ ಖರ್ಜೂರ ಗೋಡಂಬಿ ಎಲ್ಲ ತಂದುಕೊಡೋರು, ಇತ್ತೀಚೆಗೆ ನಿಂತಿದೆಯಂತೆ ಆ ಪದ್ಧತಿ, ಅಪ್ಪ ನೆನಪಿಸಿಕೊಂಡರು. “ಅವನಿಗೂ ವಯಸ್ಸಾಯ್ತು, ನಂಗೂ ವಯಸ್ಸಾಯ್ತು, ಇನ್ನೆಲ್ಲಿಗೆ ಆಚೀಚೆ ಓಡಾಡೂದು?”

ಅಪ್ಪನ ಮಾತು ಕೇಳುತ್ತಿದ್ದರೂ ಅವಳ ತಲೆ ಇನ್ನೆಲ್ಲೋ ಓಡಾಡ್ತಿತ್ತು.

ಅಬೂಬಕರ್ ಆಟೋನೇ ಬೇಕಂತ ಯಾಕೆ ಕರೆಸಿದೆ ತಾನು? ಬೆಳಿಗ್ಗೆ ಅವನ ಹೆಸರು ಕೇಳಿದಾಗಿಂದ ಮನಸಿನೊಳಗೆ ಸುಳಿದಾಡುತ್ತಿರುವ ಚಳಿಗಾಳಿಯ ಗುರಿಯೇನು?

***

ಅವಳಮ್ಮ ಅಂದುಕೊಂಡಂತೆ ಅವ ಅವಳಿಗೆ ಬರೀ ಕ್ಲಾಸ್ ಮೇಟ್ ಮಾತ್ರವಾಗಿರಲಿಲ್ಲ. ಅವನೆಂದರೆ ಮಿಠಾಯಿ. ಅವನೆಂದರೆ ಬಲೂನು.

ಅವಳು ಮೋಞಿಯವರ ಅಂಗಡಿಗೆ ಮನೆಸಾಮಾನಿಗಂತ ಹೋಗಲಾರಂಭಿಸಿದ್ದು ಎಂಟನೇ ಕ್ಲಾಸಿರಬೇಕಾದರೆ. ಅಬೂಬಕರ್ ಅಂಗಡಿ ಕೌಂಟರಲ್ಲಿದ್ದರೆ ಅವಳಿಗೊಂಥರಾ ಖುಷಿ. ಅವನು ಇರುವ ಹೊತ್ತು ನೋಡಿಯೇ ಅವಳು ಅಂಗಡಿಗೆ ಹೋಗುತ್ತಿದ್ದುದೂ ಇದೆ. ಹಾಗೆ ಹೋದಾಗ ಮನೆ ಸಾಮಾನು ಜತೆ ಅವಳಿಗಿಷ್ಟದ ಮಿಠಾಯಿ ನಾಕು ಬೇಕಂತ ಕೇಳಿದರೆ ಅವನು ಆರು ಹಾಕಿರುತ್ತಿದ್ದ. ಅವಳಿಗೆ ಬುಗ್ಗೆಯೆಂದರೆ ಇಷ್ಟ ಅಂತ ಅವನಿಗೆ ಅದು ಹೇಗೆ ಗೊತ್ತಾಯ್ತೋ, ಒಂದೊಂದು ಸಲ ಬಲೂನು ಕೂಡ ಹಾಕಿರುತ್ತಿದ್ದ. ಒಂದು ಸಲವೂ ಬುಗ್ಗೆ ಊದಿ ಅವನಿಗೆ ತೋರಿಸುವ ಅವಕಾಶ ಮಾತ್ರ ಅವಳಿಗೆ ಸಿಕ್ಕಿರಲಿಲ್ಲ.

ಬಸ್ಸಲ್ಲಿ ಶಾಲೆಗೆ ಹೋಗಬೇಕಾದರೆ ಅವಳಿಗಿಂತ ಕರೆಕ್ಟಾಗಿ ಎರಡು ಸೀಟು ಹಿಂದೆ ನಿಂತಿರುತ್ತಿದ್ದ, ಬಸ್ಸಿನ ಕನ್ನಡಿಯಲ್ಲಿ ಅವಳನ್ನೇ ನೋಡುತ್ತಿರುತ್ತಿದ್ದ. ಬಸ್ಸು ಖಾಲಿ ಇದ್ದಾಗ ಅವಳ ಹಿಂದಿನ ಸೀಟಲ್ಲಿ ಜಾಗ ಹಿಡಿದು ಕೂತು ಅವಳನ್ನು ಎದುರುಗಡೆಯ ಅಥವಾ ಸೈಡಿನ ಕನ್ನಡಿಯಲ್ಲಿ ನೋಡುತ್ತಿದ್ದ. ಅವಳು ಕನ್ನಡಿಯಲ್ಲಿಯೇ ಅವನನ್ನು ನೋಡಿದ ತಕ್ಷಣ ದೃಷ್ಟಿ ತಪ್ಪಿಸಿಕೊಳ್ಳುತ್ತಿದ್ದ. 

ಮೊದಮೊದಲು ಇದೊಂದು ಆಟವಾಗಿತ್ತು. ಆಮೇಲೆ ಅವಳಿಗೂ ಅವನು ಕನ್ನಡಿಯಲ್ಲಿ ನನ್ನನ್ನು ನೋಡಲಿ, ನಾನೂ ಅವನನ್ನು ನೋಡಬೇಕು ಅಂತನಿಸಲು ಶುರುವಾದಾಗ ಮಾತ್ರ ಸ್ವಲ್ಪ ಭಯವಾಗ್ತಿತ್ತು. ಅಜ್ಜಿಗೆ ಕೋಪ ಬಂದಾಗ, “ಹೆಣ್ಣೆ ನೀ ಒಂದಿನ ಬ್ಯಾರಿಯೊಟ್ಟಿಗೆ ಓಡಿ ಹೋಗ್ತೀ ನೋಡು,” ಅನ್ನುತ್ತಿದ್ದರಲ್ಲ, ಅದು ಗಂಟೆಯಂತೆ ಕಿವಿಯಲ್ಲಿ ಕೇಳಿಸುತ್ತಿತ್ತು. ಅಕ್ಕಪಕ್ಕದಲ್ಲಿದ್ದವರಿಗೆ ಯಾರಿಗಾದರೂ ಈ ಕಣ್ಣಾಟಗಳು ಗೊತ್ತಾದರೆ ಚೆನ್ನಾಗಿರುವುದಿಲ್ಲ ಅಂತ ಅರಿವು ಇದ್ದ ಕಾರಣ ಎಲ್ಲವೂ ಹದತಪ್ಪದೆ ಸಾಗಿತು.

ಶಾಲೆಯಲ್ಲಿ ಕತೆ ಬೇರೆಯೇ ಇತ್ತು. ಕೊಎಜುಕೇಶನ್ ಆದರೂ ಆ ಕಾಲಕ್ಕೆ ಹುಡುಗರು-ಹುಡುಗಿಯರು ಮಾತಾಡುವುದು ಅಪರೂಪ. ಹಾಗಾಗಿ ಇವರಿಬ್ಬರು ಶಾಲೆಯೊಳಗೆ ಭಯಂಕರ ಸೀರಿಯಸ್. ನೋಡುವುದು ಇರಲಿ, ಒಬ್ಬರಿಗೊಬ್ಬರು ಓಡಾಡಿದ ಗಾಳಿಯೂ ತಾಗದಷ್ಟು ದೂರದಲ್ಲಿರ್ತಿದ್ರು. ಅವ ಓದಿನಲ್ಲಿ ಅಷ್ಟೇನೂ ಇಲ್ಲದಿದ್ದರೂ ಕಬಡ್ಡಿಯಲ್ಲಿ, ಕ್ರಿಕೆಟಿನಲ್ಲಿ ಜೋರು. ಅವ ಆಡ್ತಿರಬೇಕಾದ್ರೆ ಇವಳು ದೂರದಲ್ಲಿ ಬೇರೆ ಹುಡುಗಿಯರ ಜತೆ ನಿಂತು ನೋಡಿ ಮನಸಿನಲ್ಲಿಯೇ ಸಪೋರ್ಟ್ ಮಾಡ್ತಿದ್ಲು. ಹೂವಿನೊಳಗೆ ಪರಿಮಳ ಎಲ್ಲಿದೆಯೆಂದು ಕೇಳಿದರೆ ಹೇಳಲಾಗುವುದೇ? ಅವರ ನಡುವಿನ ಅರೇಂಜ್ಮೆಂಟು ಹಾಗಿತ್ತು. ಇದ್ದೂ ಇಲ್ಲದ ಹಾಗೆ, ಮುಟ್ಟಿಯೂ ಮುಟ್ಟದ ಹಾಗೆ.

ಒಂಬತ್ತನೇ ಕ್ಲಾಸಿನ ಕೊನೆಯಲ್ಲಿ ವಾರ್ಷಿಕೋತ್ಸವದ ದಿವಸ ಇವಳಿಗೆ ಕ್ಲಾಸಲ್ಲಿ ಎಲ್ಲರಿಗಿಂತ ಮಾರ್ಕ್ಸ್ ಜಾಸ್ತಿ ಬಂದಾಗ, ಸ್ಟೇಜ್ ಮೇಲೆ ಹೋಗಿ ದತ್ತಿ ಬಹುಮಾನಗಳು ಪಡೆಯುವಾಗ ಅವನ ಕಣ್ಣುಗಳು ದೂರದಿಂದಲೇ ನಗುತ್ತ ಖುಷಿಪಡುತ್ತಿರುವುದು ಅರಿವಾಗಿ ಮೆತ್ತಗೆ ಬೆವರಿದ್ದಳು.

ವಾರ್ಷಿಕೋತ್ಸವದ ಮರುದಿನ ಶಾಲೆಯಲ್ಲಿ ಅವಳು ಲೈಬ್ರರಿಯಲ್ಲಿ ಯಾವುದೋ ಪುಸ್ತಕ ಹುಡುಕುತ್ತಿರಬೇಕಾದರೆ ಅಬೂಬಕರ್ ಕಾಣಿಸಿದ. ಎಂದೂ ಲೈಬ್ರರಿಗೆ ಮುಖ ಮಾಡಿ ನಿಲ್ಲದವ ಇವತ್ತು ಇಲ್ಲಿ ಯಾಕೆ ಅಂತ ಅವಳು ಯೋಚಿಸುತ್ತಿರಬೇಕಾದರೆ ಅವಳ ಎದುರಿಗೇ ಬಂದ. ಕೈಯಲ್ಲೊಂದು ಪೊಟ್ಟಣವಿತ್ತು. ತಗೋ ಎಂಬಂತೆ ಕೈಚಾಚಿದ. ಮುಖದಲ್ಲಿ ಎಂದಿನ ನಗುವಿರಲಿಲ್ಲ. ಅವಳು ಗಲಿಬಿಲಿಯ ನಡುವೆಯೇ ಕೈಚಾಚಿ ಅದನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಅವಳ ಮುಖ ನೋಡಿ, ತಕ್ಷಣ ತಿರುಗಿ ಪುಸ್ತಕಗಳನ್ನು ನೋಡುವಂತೆ ನಟಿಸುತ್ತಾ ಕಪಾಟುಗಳನ್ನು ದಾಟಿ ಹೊರಟೇಹೋದ. 

ಅವಳ ಎದೆಬಡಿತ ಜೋರಾಯ್ತು. ಏನಿರ್ತದೋ ಪೊಟ್ಟಣದಲ್ಲಿ, ಐ ಲವ್ಯೂ ಅಂತ ಬರೆದಿರುವ ಪ್ರೇಮ ಪತ್ರ ಇರಬಹುದಾ ಅಂತ ಸ್ಟ್ರಾಂಗಾಗಿ ಸಂಶಯ ಬಂತು. ಆದರೆ ಅವ ಅಷ್ಟೆಲ್ಲ ಬರೆಯುವಷ್ಟು ಜೋರಾಗಿರ್ತಾನಾ ಅಂತ ಗೊತ್ತಿರಲಿಲ್ಲ. ಇಲ್ಲಿ ತೆರೆಯುವುದು, ಓದುವುದು ಬೇಡ ಎಂದು ಮೆಲ್ಲಗೆ ಯೂನಿಫಾರ್ಮಿನ ಜೇಬಿಗೆ ಅದನ್ನು ಜಾರಿಸಿದಳು. 

ಬಸ್ಸಿಂದ ಮನೆಗೆ ಹೋಗುವ ದಾರಿಯಲ್ಲಿ ಮರವೊಂದರ ಕೆಳಗೆ ಕುಳಿತು ಪೊಟ್ಟಣ ಬಿಚ್ಚಿ ನೋಡಿದಳು. ಎರಡು ಮಿಠಾಯಿ ಮತ್ತೆ ಒಂದು ಬಲೂನು. ಅಷ್ಟೇ. ಪತ್ರವೇನೂ ಇರಲಿಲ್ಲ. ಆದರೆ ಬಲೂನು ಮಾತ್ರ… ಹಾರ್ಟ್ ಶೇಪಲ್ಲಿತ್ತು. 

ಈತರದ್ದಕ್ಕೆ ಆವಳು ತಯಾರಾಗಿಯೇ ಇದ್ದರೂ ಅದನ್ನು ನೋಡಿದ ಕ್ಷಣ ಮಾತ್ರ ಅವಳಿಗೆ ಎಂದೂ ಮರೆಯಲಾಗದು. ಕಾಲಡಿಯಲ್ಲಿನ ನೆಲವೆಲ್ಲ ಅಲೆಗಳು ಸೆಳೆದುಕೊಂಡ ಮರಳಂತೆ ಕುಸಿದುಕೊಂಡು ಹೋಗಿ, ಎಲ್ಲವೂ ವೇಗವಾಗಿ ಕೊಚ್ಚಿ ಹೋದಂಗಾಗಿ, ಎದೆಯೊಳಗೆ ಏನೇನೋ ಆಗಿ… ಹೇಳತೀರದ ಸಿಹಿವೇದನೆ, ಸಂಭ್ರಮ.

ಆಮೇಲೆ ದಾರಿಯುದ್ದಕ್ಕೂ ಮತ್ತು ಮನೆಯಲ್ಲೂ ಯೋಚನೆಗಳೋ ಯೋಚನೆಗಳು. ನಾಳೆ ಸಿಗ್ತಾನೆ ಮತ್ತೆ, ನಾನೇನಾದರೂ ಹೇಳಬೇಕು ಅಂತ ಅಂದ್ಕೊಂಡಿರ್ತಾನಾ? ಏನು ಹೇಳುವುದು? ಹೇಳಬೇಕೇ ಬೇಡವೇ? ನಾನಿನ್ನೂ ಒಂಬತ್ತನೇ ಕ್ಲಾಸು, ಏನು ಹೇಳಬಹುದು ಹೇಳಿದರೆ? ತಲೆಬಿರಿಯುವಷ್ಟು ಯೋಚನೆ ಮಾಡಿ ಮಾಡಿ ಮಾಡಿ ಕೊನೆಗೊಂದು ನಿರ್ಧಾರಕ್ಕೆ ಬಂದಳು. ಒಂದು ಪೇಪರಲ್ಲಿ ಬರೆದಳು. “ನಂಗೆ ಮಿಠಾಯಿ, ಬಲೂನ್ ತುಂಬಾ ಇಷ್ಟ ಅಂತ ನಿಂಗೆ ಹೇಗೆ ಗೊತ್ತು? ನಂಗೆ ನಿನ್ ಜತೆ ಮಾತಾಡ್ಬೇಕು.”

ಮರುದಿನ ಮೂಡುಕೆಂಪಾದಾಗ ರಾತ್ರಿಯಿಡೀ ನಿದ್ದೆಮಾಡದೆ ಇವಳ ಕಣ್ಣೂ ಕೆಂಪಾಗಿತ್ತು. ಬರೆದ ಪತ್ರವನ್ನು ಅವನಿಗೆ ಕೊಡಲಿಕ್ಕೆಂದು ಲಂಗದ ಜೇಬಿನಲ್ಲಿ ಹಾಕಿಕೊಂಡು ಸಿದ್ಧವಾಗಿ ಶಾಲೆಗೆ ಹೋದಳು. ಆದರೆ ಅವ ಮಾತ್ರ ಎಲ್ಲೂ ಕಾಣಲಿಲ್ಲ.

ಅವ ಮತ್ತೆಂದೂ ಶಾಲೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಶಾಲೆ ಬಿಟ್ಟು ಎಲ್ಲಿಯೋ ಹೋದನೆಂದು ಎಲ್ಲರೂ ಹೇಳುತ್ತಿದ್ದುದು ಕೇಳುತ್ತಿತ್ತು. ಸ್ವಲ್ಪ ದಿನ ಇವಳಿಗೆ ಖಾಲಿಖಾಲಿಯೆನಿಸಿತು. ಆ ಬಲೂನು ಸುಮ್ಮನೇ ಕೊಟ್ಟಿರಬೇಕು, ಅದಕ್ಕೆ ನಾನೇ ಏನೋ ಅರ್ಥ ಕಟ್ಟಿಕೊಂಡೆ ಅನಿಸಿತು. ಹಾಗೇನಾದರೂ ಸೀರಿಯಸ್ ಇದ್ದಿದ್ರೆ ಬರೆದೋ ಬಾಯಲ್ಲೋ ತಿಳಿಸಿರುತ್ತಿದ್ದನೇನೋ. ತಾನು ಬರೆದ ಚೀಟಿ ಅಮ್ಮ ಅಪ್ಪನಿಗೆ ಸಿಕ್ಕಿದರೆ ಏನಾದೀತೋ ಅಂತ ಹೆದರಿ ಹರಿದು ಬಿಸಾಕಿದಳು. ಆ ಮೇಲೆ ಹತ್ತನೇ ತರಗತಿ ಶುರುವಾಯ್ತು. ಓದುವುದು ಬರೆಯುವುದರ ನಡುವೆ ಅಬೂಬಕರ್ ಹಳೆಯ ಪುಸ್ತಕದ ನಡುವೆ ಸೇರಿಸಿಟ್ಟ ಹೂವಿನ ಹಾಗೆ ಕಳೆದುಹೋದ.

ಇವೆಲ್ಲಾ ಆಗಿ ಇಪ್ಪತ್ತು ವರ್ಷಗಳಾಗಿವೆ. ಬಾಳ ಹಾದಿಯಲ್ಲಿ ಅವೆಷ್ಟೋ ನಿಲ್ದಾಣಗಳು ಬಂದುಹೋಗಿವೆ. ನೆನೆದಷ್ಟೂ ಮುಗಿಯದಷ್ಟು ಪ್ರೀತಿಮಳೆ ಸುರಿಸುವ ಗಂಡ, ಹೋದಲ್ಲಿ ಬಂದಲ್ಲಿ ಹಿಂದೆ ಮುಂದೆ ಸುತ್ತುವ ಮಗ... ಈಗ ಹಳೆಯದೆಲ್ಲ ಬರಿಯ ಮಿಠಾಯಿ ನೆನಪು ಮಾತ್ರ. ರೈಲಲ್ಲಿ ಹೋಗ್ತಾ ಯಾವುದೋ ಸ್ಟೇಶನಲ್ಲೊಂದು ಅಂಗಡಿ, ಅದರಲ್ಲಿ ಮಿಠಾಯಿಗಳು. ಇಳಿದು ತಿಂತೀವಿ. ಅದೇ ಸ್ಟೇಶನ್ ನನ್ನ ಫೈನಲ್ ಸ್ಟೇಶನ್ ಅಂತ ಅಂದ್ಕೊಂತೀವಾ? ಈ ಥರ ಮಿಠಾಯಿ ಸ್ಟೇಶನ್ ಅವೆಷ್ಟೋ? ಅವನೂ ಮುಂದೆ ಹೋಗಿರ್ತಾನೆ. ನಾನೂ ಕೂಡ. ನೆನಪುಗಳಷ್ಟೇ ಮಿಂಚುಹುಳಗಳ ಥರ ಹೊಳೀತಿರ್ತವೆ.

ಅವತ್ತು ಕಾಣೆಯಾದ ಹುಡುಗ ನಾಳೆ ಸಿಗ್ತಾನೆ. ಆವತ್ತು ಮಾತಾಡಬೇಕೆಂದುಕೊಂಡಿದ್ದು ಚರಿತ್ರೆಯ ಕಸದಬುಟ್ಟಿ ಸೇರಿದೆ. ಈಗ ಮಾತಾಡಲಿಕ್ಕೇನಾದರೂ ಉಳಿದಿದೆಯಾ? ನನಗ್ಯಾಕೆ ಈ ಹುಚ್ಚು ಬುದ್ಧಿ? ಯೋಚಿಸುತ್ತ ಮಲಗಿದವಳಿಗೆ ಹಿಂದಿನ ರಾತ್ರಿ ನಿದ್ದೆಯಿಲ್ಲದೆ ಸುಸ್ತಾಗಿತ್ತಲ್ಲ, ನಿದ್ದೆ ಯಾವಾಗ ಬಂತೋ ತಿಳಿಯಲಿಲ್ಲ.

***

ಬೆಳಿಗ್ಗೆ ಆರೂವರೆಗೆ ಸರಿಯಾಗಿ ಆಟೋ ತಗೊಂಡು ಬಂದ ಅಬೂಬಕರ್. ಲ್ಯಾಪ್ಟಾಪ್ ಬ್ಯಾಗ್ ಇಟ್ಟುಕೊಂಡು ಆಟೋ ಹತ್ತಿದಳು. ಕಳಿಸಿಕೊಡಲು ನಿಂತಿದ್ದ ಅಮ್ಮನಿಗೆ “ಬರ್ತೀನಮ್ಮ.” ಅಂದಳು. “ಬರಲಾ ಅಕ್ಕ,” ಅಬೂಬಕರ್ ಕೂಡ ಅಂದ, ಆಟೋ ಹೊರಡಿಸಿದ. 

ಎರಡು ನಿಮಿಷಗಳಾಯ್ತು. ಪದವಿಗೆ ಹೋಗಲು ಬೇಕಾದ್ದು ಇಪ್ಪತ್ತು ನಿಮಿಷ. ಅವನು ತುಟಿಪಿಟಕ್ ಅನ್ನದೆ ಡ್ರೈವ್ ಮಾಡುತ್ತಿದ್ದ. ಹೋಗುವ ಹಾದಿಯ ಅಕ್ಕಪಕ್ಕದ ಮರಗಳಿಂದ ಹೆಸರುತಿಳಿಯದ ಹಕ್ಕಿಗಳು ಹಾಡು ಶುರುಮಾಡಿದ್ದವು. ಜೇನ್ನೊಣಗಳು ರೊಯ್ಯನೆ ಹಾರುತ್ತಿದ್ದವು. ಆದರೆ ಅವರ ನಡುವೆ ಆಟೋದ ಗಡಗಡ ಶಬ್ದ, ಅಸಹಜವೆನಿಸುವಂತಹ ಮೌನದ ಜೊತೆಗೆ ಅದ್ಯಾವುದೋ ಗಾಜಿನ ಗೋಡೆ ಬಂದು ಕುಳಿತಂತೆ ಅನಿಸಿತು ಅವಳಿಗೆ. ಅದನ್ನು ಮುರಿಯಬೇಕೆಂಬ ಆತುರಕ್ಕೆ ತಾನೇ ಮಾತು ಶುರುಮಾಡಿದಳು. 

“ಮೋಞಿ ಬ್ಯಾರಿ ಹೇಗಿದ್ದಾರೆ?”

“ಚೆನ್ನಾಗಿದ್ದಾರೆ. ವಯಸ್ಸಾಯ್ತು ಹಾಗಾಗಿ ಆಚೆಗೆ ಬರೂದು ಕಮ್ಮಿ.”

“ಅಂಗಡಿ ವ್ಯಾಪಾರ ಎಲ್ಲ ಹೇಗುಂಟು ಈಗ?”

“ಜನ ಎಲ್ಲದಕ್ಕೂ ಜಾಸ್ತಿ ಅಡ್ಕಕ್ಕೇ ಹೋಗ್ತಾರೆ, ಜತೆಗೆ ನಾರಾಯಣ ಮೂಲ್ಯನ ಅಂಗಡಿ ಬಂದಾಗಿಂದ ನಮ್ಮ ಅಂಗಡಿಗೆ ವ್ಯಾಪಾರ ಕಮ್ಮಿಯಾಯ್ತು. ಅಂಗಡಿ ಮುಚ್ಚಿ ಒಂದು ವರ್ಷ ಆಯ್ತು.”

ಹೀಗೆ ಚಿಕ್ಕಪುಟ್ಟದೆಲ್ಲ ಮಾತಾಡಿ ಆದ ಮೇಲೆ ಮುಖ್ಯವಾದ ಪ್ರಶ್ನೆಗೆ ಉತ್ತರ ಬೇಕಿತ್ತು. 

“ನೀನು ಶಾಲೆ ಬಿಟ್ಟು ಎಲ್ಲಿಗೆ ಹೋಗಿದ್ದೆ?” 

“ಅಣ್ಣನ ಜತೆ ದುಬೈಗೆ ಹೋದೆ, ಅಲ್ಲಿ ಒಂದು ಹೋಟೆಲಲ್ಲಿ ಸಪ್ಲೈಯರ್ ಆಗಿದ್ದೆ. ಒಂದು ನಾಕು ವರ್ಷ ದುಡಿದೆ, ಆಮೇಲೆ ಅಲ್ಲಿರ್ಲಿಕ್ಕಾಗ್ಲಿಲ್ಲ, ವಾಪಸ್ ಬಂದೆ.”

ನೀವು ಏನು ಮಾಡ್ತಿದೀರಿ ಅಂತ ಕೇಳಿದ. ಹತ್ತನೇ ಕ್ಲಾಸಾದ ಮೇಲೆ ಪಿಯುಸಿ, ಡಿಗ್ರಿ, ಮಾಸ್ಟರ್ಸ್ ಎಲ್ಲ ಮುಗಿಸಿ ಕೆಲಸ ಸಿಕ್ಕಿ ಬೆಂಗಳೂರಿಗೆ ಹೋದವರೆಗಿನ ಕತೆ ಸಂಕ್ಷಿಪ್ತವಾಗಿ ಹೇಳಿ ಮುಗಿಸಬೇಕಾದರೆ ಪದವು ಬಂತು. “ಸಂಜೆ ಇರ್ತೀಯಾ, ನಾ ಬರೂದು ಆರು ಗಂಟೆಯಾಗ್ಬಹುದು,” ಅಂತ ಕೇಳಿದಳು. ಇರ್ತೀನಿ ಅಂದ.

****

ಕಾನ್ಫರೆನ್ಸಿನಲ್ಲಿ ಅವಳ ಪ್ರೆಸೆಂಟೇಶನ್ ಮುಗಿದ ಮೇಲೆ ಉಳಿದಿದ್ದೆಲ್ಲ ಬೋರಿಂಗ್ ಆಗಿತ್ತು. ಎಲ್ಲಾ ಮುಗಿಸಿ ಮನೆಗೆ ವಾಪಸ್ ಹೊರಟು, ಆರೂಕಾಲಕ್ಕೆ ಅಡ್ಕದಲ್ಲಿ ಬಂದಿಳಿದಳು. ಶ್ಯಾಮ ಮತ್ತೆ ಅಬೂಬಕರ್ ಇಬ್ಬರ ಆಟೋಗಳೂ ಅಲ್ಲಿದ್ದು ಅವಳಿಗೆ ಫಜೀತಿಗಿಟ್ಟುಕೊಂಡಿತು. ಆಗಿದ್ದಾಗಲಿ ಎಂದು ಅಬೂಬಕರ್ ಆಟೋಕ್ಕೆ ಹತ್ತಿದಾಗ ಶ್ಯಾಮ ಅವಳನ್ನೇ ನೋಡುತ್ತಿದ್ದುದರ ಅರಿವಾಗಿತ್ತು.

ಹೇಗಿತ್ತು ಹೋದ ಕೆಲಸ ಅಂತ ಕೇಳಿದ ಅಬೂಬಕರ್. ಚೆನ್ನಾಗಿತ್ತು ಅಂದಳು. ಶಾಲೆ ಅದು ಇದು ಅವರು ಇವರು ಅಂತ ಕಾಡುಹರಟೆ ಶುರುವಾಯಿತು. 

ಕತ್ತಲು ಕವಿಯಲಾರಂಭಿಸಿತ್ತು, ಕಾಡಿನೊಳಗಿಂದ ಮಿಡತೆಗಳ ಕಿರಿಚಾಟ ತೂರಿಬರುತ್ತಿತ್ತು. ಅರ್ಧದಾರಿಗೆ ಬಂದಿರಬಹುದು, ಅಬೂಬಕರ್ ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿ ಗಾಡಿ ಯಾಕೋ ಸ್ವಲ್ಪ ನಿಧಾನ ಮಾಡಿದ.

ಸ್ವಲ್ಪ ದೂರದಲ್ಲಿ ಯಾರೋ ಇಬ್ಬರು ಕಾವಿಬಣ್ಣದ ಪಂಚೆಯುಟ್ಟವರು ನಿಂತಿದ್ದುದು ಕಾಣಿಸಿತು. ಆಟೋ ನಿಲ್ಲಿಸುವಂತೆ ಸನ್ನೆ ಮಾಡಿದರು, ನಿಲ್ಲಿಸಿದ. ಅವರು ಆಟೋದೊಳಗೆ ಕಣ್ಣುತೂರಿಸಿದರು. ಅವರಲ್ಲೊಬ್ಬ “ನೀವು ಯಾರು, ಎಲ್ಲಿಗೆ ಹೋಗ್ತಿದೀರಿ,” ಅಂತ ಕೇಳಿದ. 

“ಗಣೇಶ ಮಾಸ್ತ್ರ ಮಗಳು, ಮನೆಗೆ ಹೋಗ್ತಾ ಇದೇನೆ.”

“ಹೀಗೆ ಒಬ್ಬೊಬ್ರೇ ಯಾಕೆ ಹೋಗ್ತಿದೀರಿ?” ಅಂತ ನೇರವಾಗಿಯೇ ಕೇಳಿದ ಒಬ್ಬ, ಅಬೂಬಕರನ್ನೇ ಸೋಡುತ್ತ. 

 “ಇಲ್ಲ, ಇವ ನನ್ನ ಕ್ಲಾಸ್ಮೇಟು, ಚಿಕ್ಕಂದಿನಿಂದಲೇ ಚೆನ್ನಾಗಿ ಪರಿಚಯ, ನಮ್ಮ ಮನೆಗೆಲ್ಲ ಬರ್ತಾ ಇದ್ದ ಇವನು, ಇವನಪ್ಪ ನಮ್ಮಪ್ಪ ಫ್ರೆಂಡ್ಸು,” ಅಂದಳು. ಹಾಗೇ ನೀವು ಯಾರು ಆಂತ ಕೇಳಿದಳು. 

ಅವರಲ್ಲೊಬ್ಬ "ನಾವು ದುರ್ಗಾಪರಮೇಶ್ವರಿ ಭಜನಾ ಮಂಡಳಿಯವ್ರು.." ಅಂದ. "ನೀವು ಒಬ್ರೇ ಇದ್ರಿ ಅಲ್ವಾ, ಅದಿಕ್ಕೆ ನಿಲ್ಲಿಸಿ ಕೇಳಿದ್ದು" ಅಂತ ಒತ್ತಿ ಹೇಳಿದ. 

ಅಬೂಬಕರ್ ಸೌಜನ್ಯದಿಂದ ನಕ್ಕ, “ಜಾಗ್ರತೆ ಕರ್ಕೊಂಡು ಹೋಗ್ತೇನೆ ಅಣ್ಣ,” ಅಂದ. 

ಅವರಿಗಿನ್ನೇನು ಹೇಳಬೇಕು ಗೊತ್ತಾಗಲಿಲ್ವೇನೋ ಅನ್ನುವಂತೆ, “ಸರಿ, ಜಾಗ್ರತೆ ಹೋಗಿ,” ಅಂತ ಬದಿಗೆ ಸರಿದರು, ಆಟೋ ಮುಂದೆ ಸಾಗಿತು.

ಅವಳು ನಡೆದುದನ್ನು ನೆನೆಸಿಕೊಳ್ಳುತ್ತ ಕೂತಿದ್ದಳು. ತಲೆಯಲ್ಲಿ ಏನೇನೋ ಲೆಕ್ಕಾಚಾರ ನಡೆದಿತ್ತು. 

ಸ್ವಲ್ಪ ಹೊತ್ತಿನ ಮೇಲೆ ಮೌನ ಮುರಿದ ಅಬೂಬಕರ್, ನಗುತ್ತ ಕೇಳಿದ, “ನಾನು ನಿಮ್ಮನೆಗೆ ಯಾವಾಗ ಬಂದದ್ದು?” 

ಅವಳೂ ನಗು ಜೋಡಿಸಿದಳು. “ಅಮ್ಮ ಹೇಳ್ತಿದ್ರು ನೀನ್ ಬರ್ತಿದ್ದೆ ಅಂತ.”

“ಅದು ಈಗ, ಆಗ ಅಲ್ವಲ್ಲ?”

“ಆಗ ಅಂತಂದ್ರೆ ಯಾವಾಗ?" ಅವನ ಪ್ರಶ್ನೆಯಲ್ಲಿ ೯ಗತಾತಿನ ತುಂಟತನವೆಲ್ಲ ಹೆಪ್ಪುಗಟ್ಟಿದಂತೆನಿಸಿ ಅವಳಿಗೆ ಎದೆಯೊಳಗೆ ಏನೋ ಭಾರವಾದದ್ದು ಕೂತಂತೆನಿಸಿತು. 

ಆದರೆ ಆಷ್ಟಕ್ಕೆಲ್ಲ ಮಾತು. ಮರೆತಂತೆ ಕೂತರೆ ಹೇಗೆ? 

'ಈಗೇನು ಹೇಳ್ಬಾರದಿತ್ತಾ, ಸ್ಸಾರಿ...” ಅಂತ ಪ್ರತ್ಯುತ್ತರ ಕೊಟ್ಟವಳನ್ನು ಆಟೋದ ಕನ್ನಡಿಯಲ್ಲಿಯೇ ನೋಡಿ ನಕ್ಕ ಅಬೂಬಕರ್. ಇವಳೂ ಕನ್ನಡಿಯಲ್ಲಿಯೇ ಅವನನ್ನು ನೋಡಿ ನಕ್ಕಳು.

ಆ ಕ್ಷಣಕ್ಕೆ ಆಟೋದ ಕನ್ನಡಿ ಬಸ್ಸಿನ ಕನ್ನಡಿಯಾಯಿತು. ನೆನಪುಗಳು ಮತ್ತೆ ಗರಿಬಿಚ್ಚಿ ಕುಣಿದವು. ಕಾಣದ ಗಾಜಿನ ಗೋಡೆ ಸೀಳಿ ಬಂದ ತಂಗಾಳಿಯೊಂದು ಅವರ ನಡುವಲ್ಲಿ ಹಿತವಾಗಿ ಮನೆಮಾಡಿತು. ಮಾತಾಡಿದರೆ ಎಲ್ಲಿ ಆ ಕ್ಷಣದ ನವಿರು ಕಳೆದುಹೋಗುತ್ತದೋ, ಆಗಷ್ಟೇ ಅರಳಿದ ಹೂವೊಂದರ ಕೋಮಲ ಪಕಳೆಗಳು ಎಲ್ಲಿ ಬಾಡಿಹೋಗುವವೋ ಎಂದು ಹೆದರಿದವರಂತೆ ಇಬ್ಬರೂ ಸುಮ್ಮನಾದರು. 

ಸ್ವಲ್ಪ ಹೊತ್ತಿನ ಮೌನದ ನಂತರ ಮತ್ತೆ ಅವನೇ ಮಾತು ಮುಂದುವರಿಯಿದ. ಅವನ ಮನೆಯಲ್ಲಿ ಹೆಂಡತಿ, ಇಬ್ಬರು ಮಕ್ಕಳಿದ್ದಾರೆ. ಮಕ್ಕಳು ಇವರು ಹೋಗುತ್ತಿದ್ದ ಸ್ಕೂಲಿಗೇ ಹೋಗುತ್ತಿದ್ದಾರೆ, ದೊಡ್ಡವ ಮೂರನೇ ಕ್ಲಾಸು, ಚಿಕ್ಕವಳು ಒಂದನೇ ಕ್ಲಾಸು. ಜೀವನಕ್ಕೆ ಆಟೋ. ಮತ್ತೆ ಮನೆಯಲ್ಲಿ ಜೇನು ಸಾಕಿದ್ದಾನೆ, ಜೇನು ವ್ಯಾಪಾರ ಮಾಡ್ತಾರೆ. "ಆತರದ್ದು ಜೇನು ಚೆನ್ನಾಗಿರ್ತದೆ, ಬೆಂಗ್ಳೂರಲ್ಲಿ ಎಷ್ಟು ದುಡ್ಡು ಕೊಟ್ರೂ ಸಿಗೂದಿಲ್ಲ", ಅಂದಳು. 

ಅಷ್ಟರಲ್ಲಿ ಮನೆ ಬಂತು.

"ನಾಳೆ ಸಂಜೆ ನಾ ಹೊರಡ್ತೇನೆ. ಮನೆಯಿಂದ ಮಂಜೂರಿಗೆ ಡ್ರಾಪ್ ಮಾಡ್ತೀಯಾ," ಅಂತ ಕೇಳಿದಳು. ಬರ್ತೇನೆ ಅಂದ. ದುಡ್ಡು ನಾಳೆ ತಗೊಳ್ತೇನೆ ಅಂತ ಹೊರಟುಹೋದ. ಅಮ್ಮ ಶ್ಯಾಮನಿಗೆ ಕರೆದ ಹಾಗೆ ಕರೆದು ಕಾಫಿ ಕೊಡಲಿಲ್ಲ ಅನ್ನುವುದು ಅವಳು ಗಮನಿಸದಿರಲಾಗಲಿಲ್ಲ.

ಹಾಗೆಯೇ ಹಾದಿಯಲ್ಲಿ ಸಿಕ್ಕ ಕಾವಿಧಾರಿಗಳು ಯಾಕೆ ಹಾಗಂದರು, ಏನಾಯ್ತು ಅನ್ನುವುದರ ಬಗ್ಗೆ ಇಬ್ಬರೂ ಮಾತಾಡಲಿಲ್ಲ ಅನ್ನುವುದೂ ಅವಳಿಗೆ ತಲೆಯಲ್ಲುಳಿಯಿತು. 

****

ಮರುದಿವಸ ಸಂಜೆ ಅವಳು ಮಂಗಳೂರಿಗೆ ಹೋಗಿ ಬೆಂಗಳೂರು ಬಸ್ ಹಿಡಿಯಬೇಕಿತ್ತು. ಸಂಜೆ ಐದೂವರೆಗೆ ಬಂದ ಅಬೂಬಕರ್. ಅಮ್ಮ-ಅಪ್ಪ ಕಟ್ಟಿಕೊಟ್ಟ ಉಪ್ಪಿನಕಾಯಿ, ಹಪ್ಪಳ ಎಲ್ಲ ಎತ್ತಿಕೊಂಡು ಬಾಯ್ ಹೇಳಿ ಆಟೋ ಹತ್ತಿ ಕೂತಳು, ಹೊರಟರು. 

ನೆನ್ನೆಯ ನೆನಪು ಹಿತವಾಗಿ ಕಾಡ್ತಿತ್ತು. ಮಾತುಗಳ ರೂಪ ಕೊಡಲು ಆಗದಿದ್ದ ವಿಚಾರ ಮನದಲ್ಲಿ ಹಾಗೇ ಕೂತಿತ್ತು. ಇವತ್ತು ಏನು ಮಾತಾಡುವುದೋ ಗೊತ್ತಾಗಲಿಲ್ಲ. ಏನಾದ್ರೂ ಕೇಳಲಾ ಅಂತ ಮನಸೆಂದರೆ, ಬೇಡ ಸುಮ್ಮನಿರು ಅಂತ ಬುದ್ಧಿ ತಿವಿಯಿತು. ಬೇಕಾದ್ದೆಲ್ಲ ಇದೆ ಜೀವನದಲ್ಲಿ, ಆದರೂ ಹೃದಯವನ್ನ ಬಣ್ಣದ ಚಿಟ್ಟೆಯಂತೆ ಹಾರಬಿಡ್ತಿದೀಯ ಅಂತ ತನಗೆ ತಾನೇ ಬೈದುಕೊಂಡಳು.

ಆತನೇ ಮಾತು ಶುರುಮಾಡಿದ. ಇತ್ತೀಚಿನ ದಿನಗಳಲ್ಲಿ ಊರು ಹೇಗೆ ಬದಲಾಗಿದೆ ಅಂತ ಹೇಳಿದ. ಮನುಷ್ಯ ಮನುಷ್ಯರ ನಡುವೆ ಬೆಳೆದಿರುವ ಗೋಡೆಗಳು… ಕಾರಣವಿಲ್ಲದೇ ಸಂಶಯದಿಂದ ಇರಿಯುವ ಕಣ್ಣುಗಳು… ಬಡವರ ಹೊಟ್ಟೆಮೇಲೆ ಹೊಡೆಯುವ ಸುಳ್ಳುಸುದ್ದಿಗಳು… ಅವನೂ ಮಂಜೂರಿನಲ್ಲಿ ಹೆಣ ಸಿಕ್ಕ ಕತೆ ಹೇಳಿ ಅದರಿಂದ ಬೇರೆ ಮುಸ್ಲಿಂ ಮತ್ತೆ ಹಿಂದೂ ಆಟೋ ಡ್ರೈವರುಗಳ ಜೀವನ ಹೇಗೆ ಬದಲಾಯಿತು ಅಂತ ಬಿಡಿಸಿ ಬಿಡಿಸಿ ಹೇಳಿದ. ರಾಜಕೀಯ ಮತ್ತೆ ಧರ್ಮಗಳಿಗೆ ಸಂಬಂಧಿಸಿದ ಮಾತೆಂದರೆ ಮೂರು ಮೈಲು ದೂರ ಸರಿಯುತ್ತಿದ್ದ ಆಕೆಗೆ ಇದಕ್ಕೆ ಏನು ಹೇಳಬೇಕೆಂದು ತಿಳಿಯಲಿಲ್ಲ. 

ಇನ್ನು ಸ್ವಲ್ಪ ದಿನಕ್ಕೆ ಹೊಟ್ಟೆಪಾಡು ನಡೆಯಬೇಕಾದರೆ ಈ ಊರು ಬಿಟ್ಟು ಕಾಸರಗೋಡಿಗೋ ಮಂಜೂರಿಗೋ ಹೋಗುವುದು ಬೇಸರದ ವಿಚಾರವಾದರೂ ಅನಿವಾರ್ಯವಾಗುತ್ತದೋ ಏನೋ ಅಂತಂದಾಗ ಅವನ ಜೀವನಕ್ಕೆ ತಟ್ಟಿದ ಬಿಸಿಯ ಅರಿವು ಅವಳಿಗಾಯಿತು. ಅವನ ಸುಂಟರಗಾಳಿಯೊಳಗೆ ಸಿಕ್ಕ ನಾವೆಯಂತ ಬದುಕು ತನ್ನ ಏರ್ ಕಂಡೀಶನ್ಡ್ ಜಗತ್ತಿಗಿಂತ ತುಂಬಾ ದೂರದಲ್ಲಿರುವುದರ ಅರಿವು ಬಿಸಿಗಾಳಿಯಂತೆ ಅವಳಿಗೆ ರಾಚಿತು. ಏನು ಹೇಳಬೇಕೋ ತಿಳಿಯದಿರುವಾಗ ಏನೇ ಹೇಳಿದ್ರೂ ಕೃತಕವಾಗಿರ್ತದೆ ಅಂತ ಸುಮ್ಮನಿದ್ದಳು.

“ಇವೆಲ್ಲ ಹೇಳಿ ನಿಮ್ಗೆ ಬೋರ್ ಮಾಡಿದ್ನೇನೋ ಸಾರಿ,” ಅಂದ. 

“ಇಲ್ಲ ಬೋರ್ ಆಗಿಲ್ಲ, ನಂಗೆ ಈತರ ಸಮಸ್ಯೆಗಳು ಗೊತ್ತೇ ಇಲ್ವಲ್ಲ, ಏನ್ ಮಾಡಿದ್ರೆ ಸರಿ ಅಂತ ಗೊತ್ತಿಲ್ಲ, ಏನು ಹೇಳ್ಬೇಕು ಅಂತ್ಲೂ ಗೊತ್ತಿಲ್ಲ,” ಅಂತಂದಳು. ಅವನೂ ತಲೆಯಲ್ಲಾಡಿಸಿದ.

ಆಮೇಲೆ ಸಣ್ಣಪುಟ್ಟ ವಿಚಾರಗಳು ಮಾತಾಡ್ತ ಮಾತಾಡ್ತ ಹಾದಿ ಮುಂದೆ ಸಾಗಿ, ಬೇಡಬೇಡವೆಂದರೂ ಮಂಜೂರು ಬಂತು. ಬಸ್ಟ್ಯಾಂಡಿನಾಚೆಗೆ ಆಟೋ ನಿಲ್ಲಿಸಿದ. ಅವಳು ಇಳಿದಳು. ಲಗೇಜ್ ಇಳಿಸಿದ್ದಾಯಿತು. ಎರಡೂ ದಿನದ್ದು ಸೇರಿಸಿ ದುಡ್ಡು ಕೊಟ್ಟಳು. ಬನ್ನಿ ಒಳಗೆ ಬಿಡ್ತೇನೆ ಅಂತ ಲಗೇಜಿಗೊಂದು ಕೈ ಸೇರಿಸಿಕೊಂಡು ಬಸ್ಟ್ಯಾಂಡಿನೊಳಗೆ ಬಂದ ಅಬೂಬಕರ್. ಅವಳನ್ನು ಬಸ್ಸಿಗೆ ಹತ್ತಿಸಿದ. ಈಗ ಬಂದೆ ಅಂತ ಆಚೆಗೆ ಹೋಗಿ ಬಂದವನ ಕೈಲಿ ಒಂದು ಪುಟಾಣಿ ಬಟ್ಟೆ ಬ್ಯಾಗಿತ್ತು. ಅದನ್ನವಳಿಗೆ ಕಿಟಿಕಿಯಿಂದಲೇ ಕೊಟ್ಟ. 

ಅವಳಿಗಾಗ ದೇಜಾವೂ ಫೀಲಿಂಗ್... ಏನಿದು ಅಂತ ಕೇಳಬೇಕಂತಲಾಗಲೀ, ತೆಗೆದು ನೋಡಬೇಕೆಂತಲಾಗಲೀ ಅನಿಸಲಿಲ್ಲ. ಮಾತು ಮರೆತುಹೋಗಿತ್ತು. ಅದನ್ನು ಮಡಿಲಲ್ಲಿಟ್ಟುಕೊಂಡು ಬಸ್ಸಿನಾಚೆಗೆ ಕೆಂಪಗಾಗುತ್ತಿದ್ದ ಆಕಾಶವನ್ನೂ ಅವನನ್ನೂ ನೋಡುತ್ತ ಅವಳು ಕುಳಿತರೆ ಅವ ಕಿಟಿಕಿಯಲ್ಲಿ ಕಾಣುತ್ತಿದ್ದ ಅವಳ ಕೈಯ ಉಂಗುರ ನೋಡುತ್ತ ನಿಂತಿದ್ದ. ಈ ಮೌನದಲ್ಲಿ ವರ್ಷಾನುಗಟ್ಟಲೆಯ ಬಾಂಧವ್ಯಕ್ಕಿರುವ ಬೆಚ್ಚನೆಯಿತ್ತು.

ಹೀಗೆ ಅದೆಷ್ಟು ಹೊತ್ತು ಕಳೆಯಿತೋ. ಇದ್ದಕ್ಕಿದ್ದಂತೆ ತೂರಿಬಂದ ಕಂಡಕ್ಟರನ ಸೀಟಿ ಶಬ್ದಕ್ಕೆ ಮ್ಯಾಜಿಕ್ ಒಡೆದುಹೋಯಿತು. ಅವನೇ ಕೈಬೀಸಿ ನಕ್ಕ, ಸಿಗುವ ಇನ್ನೊಮ್ಮೆ ಅಂದ. ಅವಳೂ ಬಾಯ್ ಮಾಡುತ್ತಿದ್ದಂತೇ ಬಸ್ ಹೊರಟಿತು.

ಬಸ್ ಸ್ಟ್ಯಾಂಡ್ ತಿರುವು ದಾಟಿ ಬಸ್ ಆಚೆಗೆ ಹೋಗುತ್ತಿದ್ದಂತೆ, ಬರೀ ಪಡೆದುಕೊಳ್ಳುವುದೇ ಆಯಿತಲ್ಲ ಇವನ ಕೈಲಿ, ಎಂದೂ ಏನೂ ಕೊಡಲೇ ಇಲ್ಲವೆಂದು ತೀವ್ರವಾಗಿ ಅನಿಸಿಬಿಟ್ಟು ಹೇಳಲರಿಯದ ಭಾವವೊಂದು ಕಾಡಿತು.

ಹಾಗೇ ಬ್ಯಾಗಿಗೆ ಕಟ್ಟಿದ್ದ ದಾರ ಬಿಚ್ಚಿ ಏನಿದೆ ಅಂತ ನೋಡಿದರೆ ಒಳಗಿತ್ತು, ಅವಳಂದುಕೊಂಡ ಹಾಗೆಯೇ, ಅದೇ ಹಳೆಯ ಅವಳಿಗಿಷ್ಟದ ಮಿಠಾಯಿ ಒಂದು ಡಜನ್… ಮತ್ತೆ ಹೊಸದಾಗಿ ಒಂದು ಜೇನಿನ ಬಾಟಲ್.

ಹಾರ್ಟ್ ಶೇಪಿನ ಬಲೂನ್ ಮಾತ್ರ ಇರಲಿಲ್ಲ.


Sunday, November 20, 2022

ಪಾಪ


 ಬೌ… ಬೌವೌ… ಬೌವೌವೌ…. 

ಎರಡೆರಡು ನಾಯಿಗಳು ಬೊಗಳುತ್ತ ತನ್ನತ್ತ ಓಡಿಬರುವುದು ಕಂಡು ದಣಪೆ ತೆರೆಯಹೊರಟಿದ್ದ ರಮೇಶ ಪಟ್ಟನೆ ಅದನ್ನು ಮುಚ್ಚಿ ಅಂಗಳದಾಚೆಗೇ ನಿಂತ. ಪಕ್ಕದಲ್ಲೇ ಬಿದ್ದಿದ್ದ ಕೋಲೊಂದನ್ನು ಕೈಗೆತ್ತಿಕೊಂಡ.

 

ಅಷ್ಟರಲ್ಲಿ ಮನೆಯ ಬಾಗಿಲು ತೆರೆದು ದಣಪೆಯತ್ತ ಕಣ್ಣು ತೂರಿದ ವಯಸ್ಕರೊಬ್ಬರು "ಯಾರೂ" ಅಂತ ಕೇಳುತ್ತ ಕೆಳಗಿಳಿದು ಬಂದರು. ಬಾಯಲ್ಲಿದ್ದ ಬಳ್ಳೆಲೆ ಪಿಚಕ್ಕೆಂದು ತೆಂಗಿನ ಮರದ ಬುಡಕ್ಕೆ ಉಗಿದು "ಏಯ್ ಹಡಬೆಗ್ಳೇ, ಸಾಕ್ ನಿಮ್ಮ ಗಲಾಟೆ, ಬಾಯ್ ಮುಚ್ನಿ ಕಾಂಬ," ಎಂದು ನಾಯಿಗಳಿಗೆ ಬೈದು ಸುಮ್ಮನಾಗಿಸಿದರು.


"ಐತಾಳಮಾವ, ನಾನು ರಮೇಶ… ರುಕ್ಮಕ್ಕನ ಮಗ, ನೆನಪುಂಟಾ," ಅಂತ ಕೇಳಿದ ರಮೇಶ.


"ಓಹೋ... ನೀನೋ ಮಾರಾಯ… ಬೆಂಗ್ಳೂರಲ್ಲಿ ದೊಡ್ಡ ಡಾಕ್ಟರು ಅಲ್ವ ಈಗ ನೀನು… ಬಾ..ಬಾ.." ಅನ್ನುತ್ತ ಐತಾಳರು ದಣಪೆ ಸರಿಸಿದರು. "ಹೌದು, ಊರು ಬಿಟ್ಟು ಎಷ್ಟೋ ವರ್ಷ ಆಯ್ತಲ್ಲ, ನಿಮ್ಮ ಮನೆಯೊಂದು ನೆನ್ಪಿತ್ತು ನಂಗೆ" ಎಂದ ರಮೇಶ.


"ಎಷ್ಟು ವರ್ಷ ಆಯ್ತು ನಿಮ್ದೆಲ್ಲ ಸುದ್ದಿ ಇಲ್ದೇ… ಕೈಕಾಲು ತೊಳ್ಕೋ ಬಾ, ಕಾಫಿ ಮಾಡ್ತೇನೆ" ಅಂತ ಐತಾಳರು ಮನೆಯೊಳಗೆ ನಡೆದರು.


ಗುಡ್ಡಕ್ಕಾನಿಸಿದಂತೆ ಕಟ್ಟಿದ್ದ ಮನೆಯ ಬದಿಯಲ್ಲಿ ಕಾಲುಹಾದಿಯ ಪಕ್ಕವಿದ್ದ ಸುರಂಗದಿಂದ ಪೈಪಿನಲ್ಲಿ ಬರುತ್ತಿದ್ದ ನೀರಿನಲ್ಲಿ ಕಾಲು ತೊಳೆದುಕೊಂಡ ರಮೇಶ. ಚಿಕ್ಕವನಿರಬೇಕಾದರೆ ಶಾಲೆಯಿಂದ ಬರುವಾಗ ದಿನಾ ಸಂಜೆ ಇದೇ ಸುರಂಗದ ನೀರು ಕುಡಿಯುತ್ತಿದ್ದುದು ನೆನಪಾಯ್ತು. ಹಾಗೇ ಈಗಲೂ ಕುಡಿಯಬೇಕೆಂದು ತೀವ್ರವಾಗಿ ಅನಿಸಿ ಬೊಗಸೆ ತುಂಬಿಕೊಂಡು ಕುಡಿದೇ ಕುಡಿದ. 


ತಣ್ಣಗಿನ ಸಿಹಿ ನೀರು ಗಂಟಲಲ್ಲಿಳಿದಾಗ ಬೆಂಗಳೂರಿನಿಂದ ಬಂದ ಪ್ರಯಾಣದ ಸುಸ್ತೆಲ್ಲ ಒಂದು ತೂಕ ಕಡಿಮೆಯಾದಂತಾಯಿತು.

ಒಳಗೆ ಹೋಗಿ ಕುಳಿತುಕೊಂಡು ಗೋಡೆಯಲ್ಲಿದ್ದ ಫೋಟೋಗಳನ್ನೆಲ್ಲ ನೋಡತೊಡಗಿದ. ಕಾಫಿ ಜತೆ ಬಂದ ಐತಾಳರು ಪಟ್ಟಾಂಗ ಆರಂಭಿಸಿದರು. ಮಕ್ಕಳೆಲ್ಲ ಮಂಗಳೂರಲ್ಲಿದ್ದಾರೆ. ಹೆಂಡತಿ ದೊಡ್ಡ ಮಗನ ಮನೆಗೆ ಹೋಗಿದ್ದಾಳೆ, ಬರುವುದು ಒಂದು ತಿಂಗಳಾಗಬಹುದು, "ಹೀಗಾಗಿ ಮನೆಗೆಲ್ಲಾ ನನ್ನದೇ ಸಾಮ್ರಾಜ್ಯ" ಅಂತ ನಕ್ಕರು. ರಮೇಶನೂ ನಕ್ಕ.


ಐತಾಳರು ಊರಲ್ಲಿದ್ದ ಕಾರ್ಯಕ್ರಮಗಳಿಗೆಲ್ಲ ಅಡಿಗೆಮಾಡುತ್ತ ತಮ್ಮ ತುಂಬುಸಂಸಾರವನ್ನು ಸಾಕಿದವರು. ಈಗ ಆ ಕೆಲಸ ನಿಲ್ಲಿಸಿದ್ದರೂ ಊರಲ್ಲಿರುವ ಎಲ್ಲರ ಬಗ್ಗೆಯೂ ವಿಷಯಗಳು ಗೊತ್ತು. ತನಗೆ ಬೇಕಿರದಿದ್ದರೂ ಐತಾಳರ ಹತ್ತಿರ ಇನ್ನೇನು ಮಾತಾಡಲೂ ತೋಚದೆ ಅವರು ಹೇಳಿದ್ದೆಲ್ಲ ಕೇಳಿಸಿಕೊಂಡ. 


“ನಿಮ್ಮಪ್ಪ ಅಮ್ಮ ಚೆನ್ನಾಗಿದ್ದಾರಾ,” ಅಂತ ಕೇಳಿದ ಐತಾಳರಿಗೆ, “ಅಮ್ಮ ತೀರಿಹೋಗಿ ಒಂದು ತಿಂಗ್ಳಾಯ್ತು. ಅವ್ಳು ಹೇಳಿದ್ದೊಂದು ಕೆಲಸ ಬಾಕಿಯಿತ್ತು, ಅದಕ್ಕೆ ಬಂದದ್ದು ನಾನು. ಅಪ್ಪನ ಕತೆ ಗೊತ್ತಿಲ್ಲ, ನಮ್ ಮನೆಗೆ ಬರ್ಲೇ ಇಲ್ಲ, ನೀವೇನಾದ್ರೂ ನೋಡಿದ್ರಾ,” ಅಂದ ರಮೇಶ.


“ಅಯ್ಯೋ ರುಕ್ಮಕ್ಕ ತೀರ್ಕೊಂಡ್ಲಾ... ಪುಣ್ಯಾತ್ಗಿತ್ತಿ ಅವಳು ಜೀವನದಲ್ಲಿ ಅನುಭವಿಸಿದಷ್ಟು ಯಾರೂ ಅನುಭವಿಸಿರೂದಿಲ್ಲ ಬಿಡು, ಆ ದೊಡ್ಮನೆಗೋಸ್ಕರ ಏನೇನೋ ಮಾಡ್ಬೇಕಾಯ್ತು ಅವ್ಳು. ಊರು ಬಿಟ್ಟು ಬೇರೆಕಡೆ ಹೋಗಿ ಒಳ್ಳೆ ಕೆಲಸ ಮಾಡಿದ್ಲು,” ಎಂದು ನಿಟ್ಟುಸಿರು ಬಿಟ್ಟರು ಐತಾಳರು.


ರಮೇಶನಿಗೆ ಗೊತ್ತಿಲ್ಲದ್ದೇನಲ್ಲ ಅವನಮ್ಮ ಪಟ್ಟ ಕಷ್ಟ. ಪಾಪ, ಕೆಲಸ ಮಾಡಿ ಮಾಡಿ ಜೀವ ತೇದಿದ್ದಳು ಅವಳು. "ದೊಡ್ಮನೆಯಲ್ಲಿ ಈಗ ಯಾರಿದಾರೆ?" ಕೇಳಿದ.


ಐತಾಳರು ರಮೇಶನನ್ನ ದಿಟ್ಟಿಸಿ ನೋಡಿದರು. "ಅಲ್ಲಿ ಯಾರಿರ್ತಾರೆ, ಲಕ್ಷ್ಮಮ್ಮ ಇರುವವರೆಗೆ ಮನೇಲಿ ಜನ ಇದ್ರು. ಈಗ ಮೂರನೇ ಮಗ ವಿಶ್ವನಾಥ ತಿಂಗಳಿಗೊಂದ್ಸಲ ಬಂದು ಕೆಲಸದವರಿಗೆ ಸಂಬಳ ಕೊಟ್ಟು ಹೋಗ್ತಾನೆ, ಉಳಿದವರು ಮೂವರು ಅಮೆರಿಕಾದಲ್ಲಿದ್ದಾರೆ," ಎಂದರು. ಏನೋ ನಾಲಿಗೆ ತುದಿಗೆ ಬಂದ ಮಾತು ಹಿಡಿದಿಡುತ್ತಿದ್ದಾರೆ ಅಂತನಿಸಿತು ರಮೇಶನಿಗೆ. ಅವರಾಗಿಯೇ ಹೇಳಲಿ ಅಂದುಕೊಂಡ, ಆದರೆ ಅವರು ಹೇಳಲಿಲ್ಲ.


“ಕೃಷ್ಣಪ್ಪಂದು ಏನೂ ಸುದ್ದಿ ಇಲ್ಲ, ಅವ ಇಲ್ಲಿ ಬಂದು ಒಂದು ನಾಕು ವರ್ಷ ಆಯ್ತೇನೋ. ಒಂದಿನ ರಾತ್ರಿ ಬಂದವ ಇಲ್ಲಿಯೇ ಇದ್ದ. ಹೆಚ್ಚು ಮಾತಾಡ್ಲೇ ಇಲ್ಲ, ಮರುದಿನ ಬೆಳಿಗ್ಗೆ ಹೊರಟೋದವ ಆಮೇಲೆ ಬರ್ಲೇ ಇಲ್ಲ,” ಅಂದರು.


"ನೀನು ಮಲ್ಕೊಂಡು ರೆಸ್ಟ್ ತಕ್ಕೋ, ನಾನು ತಿಂಡಿ ಏನಾದ್ರು ಮಾಡ್ತೇನೆ," ಅಂತ ಚಾಪೆ ಹಾಸಿ ಕೊಟ್ಟು ಐತಾಳರು ಒಳನಡೆದರು. 

ಹೀಗೆ ತನ್ನ ಅಪ್ಪ ಏನಾದ ಅಂತ ಯಾರಿಗೂ ಗೊತ್ತಿಲ್ಲದಿರುವುದು ರಮೇಶನಿಗೆ ಅದೇನೋ ಖುಷಿ ಕೊಟ್ಟಿತು. ಬದುಕಿದ್ದಾಗ ಅಪ್ಪ ಮಾಡಿದ ಪಾಪಕ್ಕೆ ಇದೇ ಶಿಕ್ಷೆ ಅಂದುಕೊಂಡ. ಕಾಫಿ ಕುಡಿದು ಹಾಗೇ ಚಾಪೆಯಲ್ಲಿ ಮೈಚಾಚಿ ಅರೆಗಣ್ಣಾದ.

************

ರಮೇಶನ ಅಪ್ಪ ಮಾಡುತ್ತಿದ್ದ ಕೆಲಸಕ್ಕೆ ಹೆಸರು ಸಂಸ್ಕೃತದಲ್ಲಿ ಪರಿಕರ್ಮ ಅಂತ, ಕನ್ನಡದಲ್ಲಿ ಹಾಗಂದರೆ ಸೇವೆ. ಪೂಜೆಗಳಿಗೆ ಪುರೋಹಿತರ ಜತೆ ಹೋಗಿ ಸಾಮಗ್ರಿಗಳನ್ನು ಸಿದ್ಧಪಡಿಸಿ ಮಂಡಲ ಹಾಕುವುದು ಇತ್ಯಾದಿಗೆ ಅವರಿಗೆ ಸಹಾಯ ಮಾಡಬೇಕು. ಯಾರಾದರೂ ಸತ್ತಾಗ ಅವರ ಅಪರಕ್ರಿಯೆ, ಬೊಜ್ಜ, ಶಪಿಂಡಿ ಇತ್ಯಾದಿಗಳಲ್ಲಿ ದೊಡ್ಡ ಪುರೋಹಿತರ ಜತೆ ಪಾಲ್ಗೊಳ್ಳಬೇಕು. ಬೇಕಾದಾಗ ಗರುಡಪುರಾಣವೂ ಓದಬೇಕು. 


ಪಾಪ ಪರಿಹಾರಕ್ಕೆಂದು ಅವರು ಕೊಡುವ ದಾನಗಳನ್ನು ತೆಗೆದುಕೊಳ್ಳಬೇಕು. ತೆಗೆದುಕೊಂಡ ದಾನಗಳು ತನ್ನ ಮೇಲೆ ಕೆಟ್ಟ ಪರಿಣಾಮ ಬೀರದಿರಲೆಂದು ನಿಷ್ಟೆಯಿಂದ ಅದಕ್ಕಿರುವ ಮಂತ್ರಗಳನ್ನು ಹೇಳಿ ಜಪ ಮಾಡಬೇಕು. ಇಲ್ಲವಾದರೆ ಸತ್ತವರ ಪಾಪವು ಭೂತವಾಗಿ ಕಾಡುತ್ತದೆಯೆಂದು ಅಮ್ಮ ಹೇಳುತ್ತಿದ್ದಳು. ಇವೆಲ್ಲ ಕೇಳಿ ಕೇಳಿ ಪಾಪವೆಂದರೆ ಒಂದು ಅಸಹ್ಯವಾದ ವಾಸನೆ ಬರುವ ಅಂಟುಪದಾರ್ಥವೆಂಬ ಕಲ್ಪನೆ ರಮೇಶನ ಮನಸಲ್ಲಿ ಕೂತುಬಿಟ್ಟಿತು.


ಇದು ಬಿಟ್ಟರೆ ಚಿಕ್ಕಪುಟ್ಟ ವಾರ್ಷಿಕ ತಿಥಿಗಳಿಗೆ ಅಪ್ಪ ಹೋಗ್ತಿದ್ದ. ಅವರಿಗೆ ಬೇರೆ ಆದಾಯವೇನೂ ಇರಲಿಲ್ಲ. ಕಾಡಿನ ನಡುವಿರುವ ಪುಟ್ಟ ಊರಿನಲ್ಲಿ ಜನರೂ ಕಡಿಮೆ, ಹುಟ್ಟುಸಾವುಗಳೂ ಕಡಿಮೆ. ಹಾಗಾಗಿ ದೂರದೂರುಗಳಿಗೆ ಅಪ್ಪ ಹೋಗಬೇಕಾಗಿ ಬರುತ್ತಿತ್ತು. ಮನೆಗೆ ಬಂದಾಗೆಲ್ಲ ಅಪ್ಪ ಮೌನಿಯಾಗಿರುತ್ತಿದ್ದ. ಮೂರು ಹೊತ್ತೂ ಬೀಡಿ ಸೇದುತ್ತಿದ್ದ. ಆಚೆಗೆ ಯಾರ ಜತೆಯೂ ಹೆಚ್ಚು ಬೆರೆಯುತ್ತಿರಲಿಲ್ಲ.


ಅಪ್ಪ ಇರುವ ರೀತಿ ನೋಡಿದ ರಮೇಶನಿಗೆ ಪರಿಕರ್ಮ, ಅಪರಕರ್ಮ, ದಾನ, ಪುರಾಣ, ಪಾಪ, ಪುಣ್ಯ, ನೀತಿ, ನಿಯಮ, ಸ್ವರ್ಗ, ನರಕ, ಪೂಜೆ, ಪುನಸ್ಕಾರ ಎಲ್ಲದರ ಮೇಲೆಯೂ ಚಿಕ್ಕವನಿದ್ದಾಗಲೇ ಜಿಗುಪ್ಸೆ ಹುಟ್ಟಿತ್ತು. ಅಪ್ಪ ಜಪ ಮಾಡುತ್ತಾ ಕೂತಿರುವುದು ಕಂಡರೆ ಅವನಿಗೆ ಅಪ್ಪನ ಮೈಮೇಲೆಲ್ಲ ಪಾಪ ಕೂತಿದೆ ಎನಿಸಿ ಅಸಹ್ಯವೆನಿಸುತ್ತಿತ್ತು.


ಮನೆಯಲ್ಲಿದ್ದ ಹಸುಗಳು, ಅವಕ್ಕೆ ಮೇವು, ತೋಟಕ್ಕೆ ಮಣ್ಣು, ಗೊಬ್ಬರ ಇತ್ಯಾದಿ ಖರ್ಚುಗಳಿಗೆ ಅಪ್ಪ ದುಡಿಯುತ್ತಿದ್ದುದು ಸಾಕಾಗುತ್ತಿರಲಿಲ್ಲ. ಆದರೆ ಅಮ್ಮ ಪಕ್ಕದಲ್ಲಿದ್ದ ಶಂಕರಮಾಮನ ಮನೆಯಲ್ಲಿ ದುಡಿಯುತ್ತಿದ್ದಳಲ್ಲ, ಹಾಗಾಗಿ ಮನೆ ಸುಸೂತ್ರವಾಗಿ ಸಾಗಿತ್ತು. ಶಂಕರಮಾಮ ರಮೇಶ ಹುಟ್ಟುವುದಕ್ಕೆ ಮೊದಲೇ ತೀರಿಕೊಂಡಿದ್ದರಂತೆ. ಅವರಿಗೆ ನಾಲ್ಕು ಗಂಡು ಮಕ್ಕಳು. ಚೆನ್ನಾಗಿ ಓದಿಕೊಂಡು ದೇಶವಿದೇಶಗಳ ಬೇರೆ ಬೇರೆ ಊರುಗಳಲ್ಲಿ ಕೆಲಸ ಹುಡುಕಿಕೊಂಡು ಹೋಗಿದ್ದರಂತೆ. ಅವರ್ಯಾರನ್ನೂ ರಮೇಶ ನೋಡಿಯೇ ಇರಲಿಲ್ಲ.


ನಡೆದರೆ ಭೂಮಿ ನಡುಗುವಷ್ಟು ದಪ್ಪವಿದ್ದ ಶಂಕರಮಾಮನ ಹೆಂಡತಿ ಲಕ್ಷ್ಮಮ್ಮನಿಗೆ ಮನೆ, ತೋಟ ನೋಡಿಕೊಳ್ಳಲು, ಪಾತ್ರೆ-ಬಟ್ಟೆ ತೊಳೆಯಲು, ಕೆಲಸಕ್ಕೆ ಬರುವ ಆಳುಗಳಿಗೆ ಮತ್ತು ಮನೆಯವರಿಗೆ ಅಡಿಗೆ ಮಾಡಿಹಾಕಲು, ಹಸುಗಳನ್ನು ನೋಡಿಕೊಳ್ಳಲು ಸಹಾಯ ಬೇಕಿತ್ತು. ಅಮ್ಮ ದೊಡ್ಮನೆಗೆ ಹೆಚ್ಚು ಕಮ್ಮಿ ಇಪ್ಪತ್ತು ವರ್ಷದಿಂದ ಹೋಗ್ತಿದ್ದಳಂತೆ. ಅವರ ಮನೆಕೆಲಸವೆಲ್ಲ ಅಮ್ಮನೇ ಮಾಡುತ್ತಿದ್ದಳು, ತಿಂಗಳಿಗೆ ಅವರು ಕೊಡುವ ಇನ್ನೂರು ರುಪಾಯಿ, ಜತೆಗೆ ಅವರ ಮನೆ ಹಳೆಬಟ್ಟೆಗಳು, ಹೆಚ್ಚಾಗಿ ಉಳಿದ ಊಟ ಇತ್ಯಾದಿಗಳಲ್ಲಿ ಮನೆವಾರ್ತೆ ಕಳೆಯುತ್ತಿತ್ತು. ಪ್ರತಿವರ್ಷ ಕರು ಹಾಕುತ್ತಿದ್ದ ಹಸುವಿನ ಹಾಲು ಮಾರುವುದರಿಂದಲೂ ಒಂದಷ್ಟು ದುಡ್ಡು ಬರುತ್ತಿತ್ತು.


ರಮೇಶ ಅವನಮ್ಮನಿಗೆ ಕೊನೇಮಗ. ಅವನಿಗೊಬ್ಬ ಅಕ್ಕ ಮತ್ತು ಅಣ್ಣ. ಅಕ್ಕನಿಗೂ ಇವನಿಗೂ ಹದಿನಾರು ವರ್ಷದ ಅಂತರ. ಅವಳಿಗೆ ಹದಿನೆಂಟು ತುಂಬುತ್ತಲೇ ಇವನು ತೀರಾ ಚಿಕ್ಕವನಿದ್ದಾಗಲೇ ತಿರುವನಂತಪುರದ ನಂಬೂದಿರಿಗಳೊಬ್ಬರ ಮನೆಗೆ ಮದುವೆ ಮಾಡಿ ಕೊಟ್ಟಿದ್ದರು. ಅವಳು ಅದ್ಯಾಕೋ ಏನೋ, ಮನೆಕಡೆಗೆ ಬರುತ್ತಲೇ ಇರಲಿಲ್ಲ.


ಅಣ್ಣ ಇವನಿಗಿಂತ ಐದು ವರ್ಷ ದೊಡ್ಡವನಂತೆ, ಆದರೆ ಅವನನ್ನು ನೋಡಿದ್ದೇ ರಮೇಶನಿಗೆ ನೆನಪಿಲ್ಲ. ಎಂಟು ವರ್ಷದ ಹುಡುಗನ ಹೆಣ ಅಕ್ಕನ ಮದುವೆಯಾದ ಮರುವರ್ಷ ಶಂಕರಮಾಮನ ಹಿತ್ತಿಲಲ್ಲಿ ತೋಟದಲ್ಲಿದ್ದ ಬಾವಿಯಲ್ಲಿ ಸಿಕ್ಕಿತ್ತು. ಬಾವಿಗಿಳಿದು ಅವನ ಹೆಣವನ್ನು ಮೇಲೆತ್ತಿ ತಂದಿದ್ದ ಅಪ್ಪ ವಾರಗಟ್ಟಲೆ ಮಂಕುಬಡಿದವನಂತೆ ಕೂತಿದ್ದನಂತೆ. ಇದಾದ ಮೇಲೆ ಆ ಬಾವಿಯನ್ನು ಮುಚ್ಚಿಯೇ ಬಿಟ್ಟಿದ್ದರು.


ಇವೆಲ್ಲ ರಮೇಶನಿಗೆ ಅವನ ಅತ್ತೆ ಹೇಳಿ ಗೊತ್ತಾಗಿದ್ದು. ಅಮ್ಮ-ಅಪ್ಪ ಇಬ್ಬರೂ ಈ ಬಗ್ಗೆ ಯಾವತ್ತೂ ಮಾತಾಡಿರಲಿಲ್ಲ. ಅಮ್ಮನ ಕಪ್ಪುಕಣ್ಣುಗಳಲ್ಲಿ ಅಡಗಿದ ನೋವು ರಮೇಶನಿಗೆ ಅರ್ಥವಾಗಿರಲಿಲ್ಲ. ಅವಳು ಅವನ ಜೊತೆಗೆ ಅದನ್ನು ಹಂಚಿಕೊಂಡಿರಲೂ ಇಲ್ಲ.

************

ಮನೆಗೆಲ್ಲ ಒಬ್ಬನೇ ಮಗನಾಗಿ ಬೆಳೆದರೂ ಅಪ್ಪನ ಪ್ರೀತಿ ಅಂದರೇನು ಅಂತಲೇ ರಮೇಶನಿಗೆ ಗೊತ್ತಿರಲಿಲ್ಲ. ಆತ ಯಾವತ್ತೂ ಸಮಾಧಾನದಲ್ಲಿ ಮಾತಾಡಿಸಿದ್ದಾಗಲೀ ಮುಖಕ್ಕೆ ಮುಖ ಕೊಟ್ಟು ಪ್ರೀತಿಯಿಂದ ನೋಡಿದ್ದಾಗಲೀ ಅವನಿಗೆ ನೆನಪೇ ಇಲ್ಲ. ಇವನ ಮುಖ ಕಂಡರೆ ಸಿಂಡರಿಸಿಕೊಳ್ಳುತ್ತಿದ್ದ. ಆಗಾಗ ಮೈಮೇಲೆ ಬಂದವರಂತೆ ಬೈಯುತ್ತಿದ್ದ, ಹೊಡೆಯುತ್ತಿದ್ದ. ಅಮ್ಮನಿಗಂತೂ ಅಪ್ಪ ದನಕ್ಕೆ ಬಡಿದಂತೆ ಬಡಿದಿದ್ದಕ್ಕೆ ಲೆಕ್ಕವೇ ಇಲ್ಲ. ಅವಳ ಮೈತುಂಬಾ ತರತರದ ಗಾಯಗಳಿತ್ತು. ಅಷ್ಟಾದರೂ ಅಮ್ಮ ಸುಮ್ಮನಿರುತ್ತಿದ್ದಳು, ಒಂದು ದಿನವೂ ಆಕೆ ಎದುರಾಡಿದ್ದು ರಮೇಶ ನೋಡಿರಲಿಲ್ಲ. ಸದಾ ಗಂಟುಮುಖ ಹಾಕಿರುತ್ತಿದ್ದ ಅಪ್ಪ ಅಂದರೆ ರಮೇಶನ ಮನಸ್ಸಲ್ಲಿರುವುದು ದ್ವೇಷ ಮಾತ್ರ.


ಅಮ್ಮ ರಮೇಶನ ಮೇಲೆ ಜೀವವನ್ನೇ ಇಟ್ಟಿದ್ದಳು. ಅವನನ್ನು ಒಂಟಿಯಾಗಿ ಅಪ್ಪನ ಜತೆ ಯಾವತ್ತೂ ಬಿಡುತ್ತಿರಲಿಲ್ಲ. ಅವನ ಶಾಲೆ, ಫೀಸು, ಯೂನಿಫಾರ್ಮು, ಪುಸ್ತಕ ಎಲ್ಲದೂ ಅವಳೇ ನೋಡಿಕೊಳ್ಳುತ್ತಿದ್ದಳು. ರಮೇಶನೂ ಅಷ್ಟೇ, ಅಮ್ಮ ಮನೆಯಲ್ಲಿರಬೇಕಾದರೆ ಅವಳ ಬೆನ್ನು ಬಿಡುತ್ತಿರಲಿಲ್ಲ. ಹಸುವಿಗೆ ಹುಲ್ಲು ತರಲಿಕ್ಕೆ, ನೀರು ತರಲಿಕ್ಕೆ, ತೋಟಕ್ಕೆ - ಹೀಗೆ ಅಮ್ಮ ಎಲ್ಲೇ ಹೋದರೂ ಅವಳ ಜತೆಯೇ ಹೋಗುತ್ತಿದ್ದ. 


ಶಂಕರಮಾಮನ ಮನೆಗೆ ಮಾತ್ರ ಬರುವುದು ಬೇಡವೆಂದು ಹೇಳಿಬಿಟ್ಟಿದ್ದಳು ಅಮ್ಮ. ರಮೇಶ ಶಾಲೆಗೆ ಹೋದ ಸಮಯ ತಾನು ಅಲ್ಲಿಗೆ ಹೋಗಿ ಕೆಲಸ ಮುಗಿಸಿಕೊಂಡು ಬರುತ್ತಿದ್ದಳು, ಭಾನುವಾರ ರಮೇಶನಿಗೆ ರಜಾ ಇರಬೇಕಾದರೆ ಮನೆಯಲ್ಲೇ ಇರುತ್ತಿದ್ದಳು.

ಮನೆಯ ಹಸು ನಂದಿನಿಯೆಂದರೆ ರಮೇಶನಿಗೆ ಸಿಕ್ಕಾಪಟ್ಟೆ ಪ್ರೀತಿ. ಮೇಯಲಿಕ್ಕೆ ಬಿಟ್ಟ ನಂದಿನಿಯನ್ನು ಸಂಜೆ ಹೊತ್ತು ಮನೆಗೆ ಕರೆಯುವುದು ರಮೇಶನ ಪ್ರೀತಿಯ ಕೆಲಸ. ಐದಾಗುತ್ತಲೇ ಮನೆಯಂಗಳದಲ್ಲಿ ನಿಂತು “ನಂದಿನೀ ಬಾ… ಬಾ...” ಅಂತ ಕರೆದು, ತನ್ನ ದನಿ ಸುತ್ತಲ ಕಾಡು ತುಂಬಿದ ಗುಡ್ಡಗಳಿಗೆ ಹೊಡೆದು ಮಾರ್ದನಿಸುವುದನ್ನು ಕೇಳಿ ಖುಷಿ ಪಡುತ್ತಿದ್ದ. ನಂದಿನಿಯ ಕರುಗಳೆಂದರೆ ರಮೇಶನಿಗೆ ತುಂಬಾ ಪ್ರೀತಿ. 


ಒಂದು ಸಾರಿ ಪ್ರಶ್ನೆಯೆದ್ದಿತ್ತು ಅವನಲ್ಲಿ, ನಂದಿನಿ ಹಾಕಿದ ಕರುಗಳ ಅಪ್ಪ ಯಾರು ಅಂತ. ಅದು ಯಾಕಂದರೆ ಎಲ್ಲರಿಗೆ ಎಲ್ಲರೂ ಗೊತ್ತಿರುವ ಊರಿನಲ್ಲಿ ಆವ ಹೋಗುತ್ತಿದ್ದ ಶಾಲೆಯಲ್ಲಿ ಮಾಸ್ತರೊಬ್ಬರು ನೀನಿರೋದು ನಿಮ್ಮಪ್ಪನ ಹಾಗಲ್ಲ ಅಂತಂದಿದ್ದರು. ಅವನ ಮನಸಿನಲ್ಲಿ ವಿಧವಿಧದ ಪ್ರಶ್ನೆಗಳೆದ್ದಿದ್ದವು. ನಂದಿನಿಯ ಕರು ಅವಳ ಹಾಗಿರಲಿಲ್ಲ. ಅದರ ಅಪ್ಪನ ಹಾಗಿದೆಯೇನೋ ಎಂಬ ಸಂಶಯಕ್ಕೆ ಅಮ್ಮನಿಗೆ ಕೇಳಿದರೆ “ಹುಟ್ಟಿಸಿದ್ರು ಅನ್ನೂದಷ್ಟೇ ಕಾರಣಕ್ಕೆ ಹೋರಿಗಳು ಅಪ್ಪ ಆಗೂದಿಲ್ಲ ಮಗಾ. ಅಪ್ಪ ಯಾರಾದ್ರೇನು, ಕರು ನೋಡ್ಕೊಳೋದು ನಂದಿನಿ ತಾನೇ,” ಅಂತಿದ್ದಳು.


ಆದರೆ ಹುಟ್ಟಿದ ಹೆಣ್ಣುಕರುಗಳನ್ನೆಲ್ಲಾ ಸಾಕುವವರಿಗೆ ಮಾರಿ, ಗಂಡು ಕರುಗಳನ್ನು ಕಸಾಯಿಖಾನೆಯ ಬ್ಯಾರಿಗೆ ಅಮ್ಮ ಕೊಡುವಾಗ ಮಾತ್ರ ರಮೇಶನಿಗೆ ಬೇಸರವೆನಿಸುತ್ತಿತ್ತು. ಆದರೇನು ಮಾಡುವುದು, ಹಟ್ಟಿಯಲ್ಲಿದ್ದ ಜಾಗ ಒಂದು ಹಸು, ಒಂದು ಕರುವಿಗೆ ಮಾತ್ರ ಸಾಲುವಷ್ಟಿದ್ದು ಬೇರೆ ಉಪಾಯವಿರಲಿಲ್ಲ.

************

ಅಪ್ಪ ಎನ್ನುವ ಶಬ್ದ ರಮೇಶನಿಗೆ ನೆನಪಿಸುವುದು ಮಾತ್ರ ಅವನು ಆರನೇ ಕ್ಲಾಸು ಇರಬೇಕಾದರೆ ಆಗಿದ್ದ ಘಟನೆ.

ಆದಿನ ಊರು ಬಿಟ್ಟು ವಾರವಾದ ಮೇಲೆ ಅಪ್ಪ ಮನೆಗೆ ಬಂದ. ಅಮ್ಮ ಶಂಕರಮಾಮನ ಮನೆಯಿಂದ ಇನ್ನೂ ಬಂದಿರಲಿಲ್ಲ. ಮನೆಯ ಚಾವಡಿಯಲ್ಲಿ ರಮೇಶ  ಕೂತುಕೊಂಡು ಶಾಲೆಯ ಹೋಂವರ್ಕ್ ಮಾಡ್ತಿದ್ದ.


ತನ್ನ ಚೀಲದಿಂದ ಅಕ್ಕಿ, ತೆಂಗಿನಕಾಯಿ, ಬಟ್ಟೆ ಇತ್ಯಾದಿಗಳು ತೆಗೆದಿಟ್ಟ ಅಪ್ಪ ಜೋರಾಗಿ ಕೆಮ್ಮಿದಂತೆ ಮಾಡಿ ತಾನು ಬಂದಿದ್ದೇನೆಂದು ತಿಳಿಯಪಡಿಸಿದ. ಅಮ್ಮ ಇದ್ದಿದ್ದರೆ ಸ್ವಲ್ಪ ಹೊತ್ತಿನಲ್ಲೇ ಅಲ್ಯುಮಿನಿಯಂ ಚೊಂಬಿನಲ್ಲಿ ನೀರು, ಪ್ಲೇಟಿನಲ್ಲಿ ಬೆಲ್ಲ ತಂದಿಡುತ್ತಿದ್ದಳು. ಅವಳಿರಲಿಲ್ಲವಾದ ಕಾರಣ ರಮೇಶ ಹೆದರುತ್ತಲೇ ನೀರು ತಂದು ಕೊಟ್ಟ.


ಪ್ರಯಾಣದ ಸುಸ್ತಿಗೋ ಏನೋ ಹಾಗೇ ಗೋಡೆಗೆ ತಲೆಯೊರಗಿಸಿ ಕುಳಿತ ಅಪ್ಪ ಚೊಂಬು ನೆಲದಲ್ಲಿಟ್ಟ ಶಬ್ದಕ್ಕೆ ಕಣ್ತೆರೆದ. ಮಗನನ್ನೇ ದಿಟ್ಟಿಸಿದ. ರಮೇಶನಿಗೆ ಭಯಕ್ಕೆ ತೊಡೆ ನಡುಗಲು ಶುರುವಾಯಿತು. ದೂರ ಕುಳಿತುಕೊಂಡು ಪುಸ್ತಕ ಬಿಡಿಸಿ ಬರೆಯುವಂತೆ ನಟಿಸತೊಡಗಿದ.


ನೀರು ಕುಡಿಯದೇ ಹಾಗೇ ಬೀಡಿ ಹಚ್ಚಿ ಸೇದತೊಡಗಿದ ಅಪ್ಪ ಎರಡು ನಿಮಿಷಕ್ಕೆ ಎದ್ದು ರಮೇಶನ ಬಳಿ ಬಂದ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಅವನ ಬಲತೋಳಿನಲ್ಲಿದ್ದ ಕಾಸಗಲದ ಮಚ್ಚೆಗೆ ಉರಿಯುತ್ತಿದ್ದ ಬೀಡಿಯಿಂದ ಚುಚ್ಚಿದ. ರಮೇಶ ಜೋರಾಗಿ ಅಳುತ್ತ ತಪ್ಪಿಸಿಕೊಳ್ಳಲು ಹೊರಟರೆ ಅಪ್ಪ ಬಿಡಲಿಲ್ಲ.


ಮಗನನ್ನು ಅಟ್ಟಾಡಿಸಿಕೊಂಡು ಮನೆಯಾಚೆಗೆ ಬಂದ ಅಪ್ಪನನ್ನು ಶಂಕರಮಾಮನ ಮನೆಯಿಂದ ತೋಟದ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ಕೆಲಸದವರು ಹಿಡಿದು ನಿಲ್ಲಿಸಿ, “ಇದೆಂತ ಅಣ್ಣೇರೇ, ಮಗುವಿಗೆ ಯಾಕೆ ಹೊಡೀತೀರಿ, ಬಿಡಿ,” ಅಂತ ಸುಮ್ಮನಾಗಿಸದೇ ಇದ್ದಿದ್ದರೆ ತನ್ನ ಗತಿ ಏನಾಗಿರುತ್ತಿತ್ತು ಅಂತ ರಮೇಶನಿಗೆ ಇವತ್ತಿಗೂ ಯೋಚನೆಯಾಗುತ್ತದೆ. 

ಗಾಯ ಮಾಗಿದರೂ ಚರ್ಮ ಚಿಕ್ಕದಾಗಿ ಬೊಬ್ಬೆಯೆದ್ದು ಇನ್ನೂ ಗುರುತುಳಿದಿದ್ದ ಆ ಮಚ್ಚೆಯನ್ನು ಆಗಾಗ ಕೈಯಲ್ಲಿ ಮುಟ್ಟಿಕೊಳ್ಳುತ್ತಾನೆ ರಮೇಶ. ಅಪ್ಪನ ಮೇಲೆ ಮನಸು ಮೃದುವಾಗದಂತೆ ಅದು ಅವನನ್ನು ತಡೆಯುತ್ತದೆ.

********

ಇದಾದ ಮೇಲೆ ಅಮ್ಮ ರಮೇಶನನ್ನು ಒಬ್ಬನೇ ಇರಲು ಬಿಡಲಿಲ್ಲ. ಆ ವರ್ಷದ ಬೇಸಿಗೆ ರಜೆಯಲ್ಲಿ ಅವನನ್ನು ಹತ್ತೂರಿನಲ್ಲಿದ್ದ ತನ್ನ ಅಣ್ಣನ ಮನೆಗೆ ಕಳಿಸಿದಳು. “ಅಲ್ಲಿ ಅವರೇನಾದರೂ ಹೇಳಿದ್ರೆ ಬೇಜಾರ್ ಮಾಡ್ಕೊಬೇಡ, ಅವ್ರು ಹೇಳಿದ ಕೆಲಸಗಳೆಲ್ಲ ಮಾಡ್ಕೊಂಡು ಓದ್ಬೇಕು, ನಿನ್ನ ಗಮನ ಬೇರೆಲ್ಲೂ ಹೋಗ್ಬಾರ್ದು,” ಅಂತ ಕಟ್ಟುನಿಟ್ಟಾಗಿ ಹೇಳಿದಳು.


ಅಮ್ಮ ಹೇಳಿದಂತೆಯೇ ಮಾವನ ಮನೆಯಲ್ಲಿ ಅಜ್ಜಿ, ಮಾವ, ಅತ್ತೆ ಹೇಳಿದ ಕೆಲಸ ಮಾಡಿಕೊಂಡು ಅವರ ಮಕ್ಕಳ ಜತೆಗೆ ನಾಕು ವರ್ಷ ಇದ್ದ ರಮೇಶ. ಅತ್ತೆ ಅಮ್ಮನಷ್ಟು ಒಳ್ಳೆಯವಳಲ್ಲದಿದ್ದರೂ, ಹಸುವಿಗೆ ಹುಲ್ಲು ತರುವುದರಿಂದ ಹಿಡಿದು ಎಲ್ಲ ಕೆಲಸ ಮಾಡಿಸಿಕೊಂಡರೂ, ಊಟ ಮಾಡುವಾಗ ತನ್ನ ಮಕ್ಕಳಿಗೆ ತುಪ್ಪ ಬಡಿಸಿ ಇವನಿಗೆ ಎಣ್ಣೆ ಬಡಿಸಿದರೂ, ಒಳ್ಳೆಯವಳೇ ಆಗಿದ್ದಳು. ಹೊತ್ತು ಹೊತ್ತಿಗೆ ಊಟ ಹಾಕುತ್ತಿದ್ದಳು. ನಯವಾಗಿ ಮಾತಾಡುತ್ತಿದ್ದಳು.


ಅಜ್ಜಿ ಭಾವಂದಿರ ಹಳೆಬಟ್ಟೆಗಳು ಹೊಲಿದು ರಮೇಶನಿಗೆ ಕೊಡುತ್ತಿದ್ದಳು. ಏನೇನೋ ಕತೆಗಳು ಹೇಳುತ್ತಿದ್ದಳು. ಆದರೆ ರಮೇಶನಿಗೆ ಅಜ್ಜಿಯ ಜತೆ ಕಳೆಯಲು ಸಮಯವಿರುತ್ತಿರಲಿಲ್ಲ. ಮಾವ ಆಗಾಗ ನೀನು ಹಾಗಾಗಬೇಕು ಹಾಗಾಗಬೇಕು ಅಂತ ಉಪದೇಶ ಕೊಡುತ್ತಿದ್ದ. ಪೇಟೆಗೆ ಹೋಗಿ ಸಾಮಾನು ತರುವಾಗ ಜತೆಗೆ ಕರೆದುಕೊಂಡು ಹೋಗಿ ವ್ಯವಹಾರ ಕಲಿಸಿದ. ಜತೆಗೆ ಸಾಮಾನು ಕೂಡ ಹೊರಿಸಿದ, ಕೆಲಸಗಳು ಕೂಡ ಮಾಡಿಸಿದ.


ರಮೇಶನನ್ನು ಅಣ್ಣನ ಮನೆಗೆ ಕಳಿಸಿದ ಸಮಯದಲ್ಲೇ ಮೂಲೆಮನೆಯ ಐತಾಳರು ಅವರ ಸಂಬಂಧಿಗಳು ಯಾರೋ ಬೆಂಗಳೂರಿನಲ್ಲಿದ್ದಾರೆ, ಗಂಡ ಹೆಂಡತಿ ಆಫೀಸಿಗೆ ಹೋಗ್ತಾರೆ, ಅಡಿಗೆ ಮಾಡಿಕೊಂಡು ಮಗು ನೋಡಿಕೊಂಡು ಇರಬೇಕು, ಹೋಗ್ತೀಯಾ ಅಂತ ಅಮ್ಮನಿಗೆ ಕೇಳಿದರು. ಅಮ್ಮ ಅಪ್ಪನ ಕೈಲಿ ಕೇಳಿದ್ದಳೋ ಇಲ್ಲವೋ ಗೊತ್ತಿಲ್ಲ, ಸಿಕ್ಕಿದ್ದೇ ಅವಕಾಶವೆಂಬಂತೆ ಹಸು-ಕರುಗಳನ್ನು ಮಾರಿ ಮನೆ, ತೋಟ ಬಿಟ್ಟು ಬೆಂಗಳೂರಿಗೆ ಹೊರಟುಹೋದಳು. ಅಲ್ಲಿಂದಲೇ ಯಾವಾಗಾದರೊಮ್ಮೆ ಅಣ್ಣನ ಮನೆಗೆ ಬಂದು ಮಗನನ್ನು ನೋಡಿ ಎರಡುಮೂರು ದಿನ ಇದ್ದು ಒಂದಿಷ್ಟು ದುಡ್ಡು ಅವನ ಕೈಲಿಟ್ಟು ವಾಪಸ್ ಹೋಗುತ್ತಿದ್ದಳು. 


ಇದೆಲ್ಲದರ ನಡುವೆ ರಮೇಶ ಹತ್ತನೇ ಕ್ಲಾಸಿನಲ್ಲಿ ಶೇಕಡಾ 92ರಷ್ಟು ಮಾರ್ಕು ತೆಗೆದ. ಅಷ್ಟು ಮಾರ್ಕು ತೆಗೆಯಲಾಗದ ತನ್ನ ಮಕ್ಕಳ ಅಚ್ಚರಿ ಮತ್ತೆ ಅಸೂಯೆಯ ನಡುವೆಯೇ ಮಾವ ರಮೇಶನನ್ನು ಅಲ್ಲಿಯೇ ಇದ್ದ ಕಾಲೇಜಿಗೆ ಸೇರಿಸಿದ. ಅಲ್ಲಿ ಸಯನ್ಸ್ ತೆಗೆದುಕೊಂಡು ರಮೇಶ ಪಿಯುಸಿ, ಸಿಇಟಿಗಳಲ್ಲಿ ಒಳ್ಳೆಯ ಮಾರ್ಕ್ಸ್ ತೆಗೆದಿದ್ದು, ಸ್ಕಾಲರ್ಶಿಪ್ಪುಗಳು ಮತ್ತು ಮಾವನ ಸಹಾಯದಿಂದ ಮೆಡಿಕಲ್ ಓದಿದ್ದು, ಡಾಕ್ಟರಾಗಿದ್ದು ಎಲ್ಲವೂ ಈಗ ಚರಿತ್ರೆ. 


ಆದರೆ, ತನ್ನ ಮೇಲೆ ಪ್ರೀತಿಯಿದ್ದ ಒಂದೇ ಒಂದು ಜೀವವಾದ ಅಮ್ಮನಿಂದ ದೂರವಾಗಿ, ಹೇಗೋ ಬೆಳೆದು ದೊಡ್ಡವನಾದ ರಮೇಶನ ಮನಸಲ್ಲಿ ತಾನು ಯಾರಿಗೂ ಬೇಡದವನು ಎಂಬ ಭಾವ ಮನೆಮಾಡಿತ್ತು. ಬೆಂಗಳೂರಿನಲ್ಲಿ ಕ್ರಿಶ್ಚಿಯನ್ ಚಾರಿಟಿ ಕಾಲೇಜಿನಲ್ಲಿ ಮೆಡಿಕಲ್ ಓದುವಾಗ ಹೆಚ್ಚಾಗಿ ಯಾರ ಜತೆಗೂ ಬೆರೆಯದೆ ಏಕಾಂಗಿಯಾಗಿರುತ್ತಿದ್ದ ಇವನ ಫ್ರೆಂಡ್ಶಿಪ್ ಬೆಳೆಸಿಕೊಂಡಿದ್ದ ಜೋಸೆಫ್ "ವೈ ಡು ಯೂ ವಾಂಟು ಟು ಬಿ ಎ ಲೋನರ್" ಅಂತ ಬೈದಿದ್ದ. ರಮೇಶನನ್ನು ತಾನು ನಡೆದುಕೊಳ್ಳುತ್ತಿದ್ದ ಸೆಮಿನರಿಯ ಫಾದರ್ ಹತ್ತಿರ ಕರೆದುಕೊಂಡು ಹೋಗಿ ಮನಸಿನಲ್ಲಿದ್ದ ಕಹಿಯೆಲ್ಲ ಕಕ್ಕುವಂತೆ ಮಾಡಿದ್ದ.


ಆ ಫಾದರ್ ಸುಮಾರು ಸಮಾಧಾನದ ಮಾತುಗಳಾಡಿ ಪ್ರತಿ ವಾರ ಬಂದು ಮಾತಾಡಲು ಹೇಳಿದಾಗ ರಮೇಶನಿಗೆ ಕೊನೆಗೂ ತನ್ನನ್ನು ಕೇಳುವವರು ಯಾರೋ ಸಿಕ್ಕರು ಅನ್ನುವ ಭಾವನೆ ಬಂದು ವಿಚಿತ್ರ ಸಮಾಧಾನ ಸಿಕ್ಕಿತ್ತು. ಫಾದರ್ ಹೇಳಿದಂತೆಯೇ ನಡೆದುಕೊಂಡ ರಮೇಶ್ ಮೆಡಿಕಲ್ ಬಿಡುವಷ್ಟೊತ್ತಿಗೆ ಎಲ್ಲರಂತಾಗಿದ್ದ. ಎಲ್ಲರ ಜತೆಗೆ ಬೆರೆತು ಬದುಕುವುದು ಅಭ್ಯಾಸ ಮಾಡಿಕೊಂಡ. 


ಅಷ್ಟರಲ್ಲಾಗಲೇ ಅವ ಎಂಟನೇ ಕ್ಲಾಸಿನಲ್ಲಿರುವಾಗ ಹಾಕಿದ್ದ ಜನಿವಾರ ಕಿತ್ತು ಬಿಸಾಕಿ ತನ್ನ ಬೇರಿನೊಡನಿದ್ದ ಕೃತಕವೆನಿಸಿದ ಸಂಬಂಧವನ್ನು ಕಡಿದುಕೊಂಡಿದ್ದ. ತನಗೆ ಜೀವನದಲ್ಲಿ ಉಪಕಾರಕ್ಕೆ ಬರದ ತತ್ವಸಿದ್ಧಾಂತಗಳೆಲ್ಲ ಕಳಚಿಕೊಂಡು ಬೇರೆಯೇ ತರ ಬದಲಾದ. ಹಾಗೂ ಅಪ್ಪ ಅನ್ನುವ ಎರಡಕ್ಷರಗಳನ್ನು ತನ್ನ ಡಿಕ್ಷನರಿಯಿಂದಲೇ ಅಳಿಸಿಹಾಕಿದ.

************

ಎಂಬಿಬಿಎಸ್ ಆದ ಮೇಲೆ ಅದೇ ಚಾರಿಟಿ ಹಾಸ್ಪಿಟಲಿನಲ್ಲಿ ಶ್ವಾಸಕೋಶದ ವಿಭಾಗದಲ್ಲಿ ಎಂಡಿ ಮುಗಿಸಿದ ರಮೇಶ ಜೋಸೆಫ್ ಜತೆಗೆ ಅಲ್ಲಿಯೇ ಕೆಲಸಕ್ಕೆ ಸೇರಿಕೊಂಡ. ಕೆಲಸ ಸಿಕ್ಕಿದಾಗ ಮಾಡಿದ ಮೊದಲ ಕೆಲಸ ಮನೆ ಹುಡುಕಿದ್ದು, ಮತ್ತು ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಮ್ಮನನ್ನು ಮನೆಗೆ ಕರೆ ತಂದಿದ್ದು.


ವರ್ಷಾನುಗಟ್ಟಲೆ ಅಪ್ಪನ ಸುದ್ದಿಯಿಲ್ಲದೆ ಕಳೆದು ಕೊನೆಗೊಂದು ದಿನ, ಮದರಾಸಿನಲ್ಲಿ ಯಾವುದೋ ಲಾಡ್ಜಿನಲ್ಲಿ ಅಪ್ಪನ ಹೆಣ ಸಿಕ್ಕಿದಾಗ ಪೊಲೀಸರು ಫೋನು ಮಾಡಿ ಐಡೆಂಟಿಫಿಕೇಶನಿಗೆ ಕರೆದಿದ್ದರು. ಹೋಗಿ ನೋಡಿ ಅಪ್ಪನೆಂದು ಗುರುತು ಹಿಡಿದ. ಆತನ ಮೇಲಿದ್ದ ಕೋಪ ಆರಿರಲಿಲ್ಲ. ಯಾವ ವಿಧಿವಿಧಾನಗಳಿಲ್ಲದೆ ಅಲ್ಲಿಯೇ ಆತನ ಅಂತ್ಯಕ್ರಿಯೆ ಮುಗಿಸಿದ. ಜೀವನವಿಡೀ ಬೇರೆಯವರ ಪಾಪ ಕಳೆಯಲು ದಾನಗಳು ತೆಗೆದುಕೊಂಡು ಜಪತಪಗಳಲ್ಲಿ ಕಾಲ ಕಳೆಯುತ್ತಿದ್ದ ಅಪ್ಪ, ತನ್ನ ಅಪರಕರ್ಮವೂ ಸರಿಯಾಗಿ ಆಗದೆ ಯಾವುದೋ ತಿಳಿಯದ ನಗರದಲ್ಲಿ ಅನಾಥ ಹೆಣದಂತೆ ಬೂದಿಯಾಗಿದ್ದ. ಯಾರದೋ ಸಾವಿಗೆ ಗರುಡ ಪುರಾಣ ಓದುತ್ತಿದ್ದ ಅಪ್ಪ ಸತ್ತಾಗ ಅವನಿಗಾಗಿ ಯಾರೂ ಅದನ್ನು ಓದದಂತೆ ರಮೇಶ ನೋಡಿಕೊಂಡ.


ವಾಪಸ್ ಬಂದ ಮೇಲೆ ಅಪ್ಪ ಜೀವನ ಪರ್ಯಂತ ಮಾಡಿದ ಹೊಡೆತಬಡಿತಗಳು, ಅವನಮೇಲೆ ಕುಳಿತ ಪಾಪ ಎಲ್ಲಾ ತನ್ನ ಮೈಗೂ ಅಂಟೀತೇನೋ ಎಂದುಕೊಂಡು ಮೈತಲೆಯೆಲ್ಲ ತಿಕ್ಕಿ ತಿಕ್ಕಿ ತೊಳೆದ. ಅಮ್ಮನಿಗೆ ವಿಷಯ ತಿಳಿಸಿದ. ಆಕೆ ತಣ್ಣೀರಲ್ಲಿ ತಲೆಸ್ನಾನ ಮಾಡಿ ಬಂದವಳು ಎಂದಿನಂತೆ ಟೀವಿ ಸೀರಿಯಲ್ಲು ಅಡಿಗೆ ಅಂತ ಬಿಸಿಯಾದಳು. ಏನಾದರೂ ಹೇಳುತ್ತಾಳೇನೋ ಅಂತ ಕಾದ ಆದರೆ ಅವಳೇನೂ ಹೇಳಲಿಲ್ಲ. ಮಳೆ ತುಂಬಿಕೊಂಡು ತೇಲುವ ಕರಿಮೋಡದಂತಿದ್ದ ಅಮ್ಮ ಹಾಕಿದ ಕಾಣದ ಗೆರೆ ದಾಟುವುದು ಹೇಗೆಂದು ಅವನಿಗೆ ತಿಳಿಯಲಿಲ್ಲ.


ಇಷ್ಟರಲ್ಲಾಗಲೇ ರಮೇಶ ತನ್ನ ಜತೆಗೆ ಕೆಲಸ ಮಾಡುತ್ತಿದ್ದ ನಫೀಸಾಳನ್ನು ಪ್ರೀತಿಸುತ್ತಿದ್ದ. ಅಮ್ಮ ಒಪ್ಪಿದಳು. ಮಾವ ಒಪ್ಪಲಿಲ್ಲ. ಆದರೆ ಕೇಳುವವರ್ಯಾರು? ನಫೀಸಾಳ ಮನೆಯಲ್ಲಿ ವಿರೋಧದ ನಡುವೆಯೂ ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ರೆಜಿಸ್ಟರ್ಡ್ ಮದುವೆ ಕಳೆದ ವರ್ಷವಷ್ಟೇ ನಡೆಯಿತು.


ಇದಾದ ಮರುವರ್ಷ ಅಮ್ಮನಿಗೆ ರಕ್ತದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅದೂ ಕೊನೆಯ ಹಂತದಲ್ಲಿರುವಾಗ ಪತ್ತೆಯಾದ ಕಾರಣ ಕೆಮೋಥೆರಪಿ, ರೇಡಿಯೋ ಥೆರಪಿ ಇತ್ಯಾದಿಗಳು ಉಪಯೋಗಕ್ಕಿಲ್ಲ. ಇನ್ನೇನಿದ್ದರೂ ದಿನವೆಣಿಸುವುದಷ್ಟೇ ಉಳಿದಿದೆ ಎಂದು ಡಾಕ್ಟರು ಹೇಳಿದರು.


ರುಕ್ಮಮ್ಮನಿಗೆ ಕೂಡ ಎಲ್ಲವೂ ಯಾರೂ ಹೇಳದೆಯೂ ಗೊತ್ತಾಗಿತ್ತು. ಒಂದು ರಾತ್ರಿ ರಮೇಶನನ್ನು ಕರೆದು ತನ್ನ ಪೆಟ್ಟಿಗೆಯಲ್ಲಿದ್ದ ಒಂದಷ್ಟು ಸಾವಿರ ರೂಪಾಯಿಗಳನ್ನು ಕೊಟ್ಟು “ಇದರಲ್ಲಿ ನಫೀಸಾಗೆ ಏನಾದರೂ ಮಾಡ್ಸು, ಬೇಡ್ವಾದ್ರೆ ಅವಳ ಹೆಸರಲ್ಲಿ ಬ್ಯಾಂಕಲ್ಲಿಡು,” ಅಂತಂದಳು. "ಇದೆಲ್ಲ ಯಾಕಮ್ಮ ಈಗ, ನೀನು ಹುಷಾರಾದ್ಮೇಲೆ ನಾವು ಒಟ್ಟಿಗೇ ಜೆವೆಲ್ಲರ್ಸಿನವರತ್ರ ಹೋಗುವ," ಅಂತಂದ ರಮೇಶ.


ಕಾರ್ಪರೇಶನ್ ಟ್ಯಾಪಲ್ಲಿ ಬರುವ ನೀರಿನ ಕೊನೇ ತೊಟ್ಟಿನಂತೆ ಅಮ್ಮನ ಮುಖದಲ್ಲೊಂದು ನಗು ಜಾರಿತು. "ಇನ್ನೂ ಒಂದು ವಿಷಯ ನಿಂಗೆ ಹೇಳ್ಬೇಕು," ಅಂತಂದು ಅವಳ ಪೆಟ್ಟಿಗೆಯಿಂದ ಒಂದು ಪುಟಾಣಿ ಮರದ ಪೆಟ್ಟಿಗೆ ತೆಗೆದು ಅವನ ಕೈಲಿಟ್ಟಳು.


"ಇದ್ರಲ್ಲಿ ಶಂಕರಮಾಮನ ಹೆಂಡತಿ ಲಕ್ಷ್ಮಮ್ಮ ಕಷ್ಟಕ್ಕಾಗ್ತದೆ ಇರ್ಲಿ ಅಂತ ನಂಗೆ ಕೊಟ್ಟ ಅವಲಕ್ಕಿ ಸರ ಉಂಟು.. ಆ ಕಾಲಕ್ಕೆ ನಾನೂ ಇರ್ಲಿ ಅಂತ ತಗೊಂಡಿದ್ದೆ, ಈಗ ಅವರ ಋಣ ಮುಗಿಯಿತು, ನಮ್ಗೆ ಬೇಡ ಮಗ ಇದು, ವಾಪಸ್ ಕೊಡು," ಅಂದಳು.


"ಅವ್ರು ನಿಂಗ್ಯಾಕೆ ಕೊಟ್ರಮ್ಮಾ ಇದು, ಅವಾಗೆಲ್ಲ ಕತ್ತೆ ತರ ಕೆಲಸ ಮಾಡ್ತಿದ್ಯಲ್ಲ, ಒಂದು ಹೊಸ ಸೀರೆ-ಬಟ್ಟೆ ನಿಂಗೆ ಕೊಟ್ಟದ್ದು ನೆನ್ಪಿಲ್ಲ ನಂಗೆ," ಅಂದ ರಮೇಶ ಆಶ್ಚರ್ಯದಲ್ಲಿ. 


ಅದಕ್ಕೆ ಅಮ್ಮ ರಮೇಶನ ಮುಖ ದಿಟ್ಟಿಸಿ ನೋಡಿದಳು. ಏನೋ ಹೇಳುವವಳಿದ್ದಳು, ಅಷ್ಟರಲ್ಲಿ ಕೆಮ್ಮು ಒತ್ತರಿಸಿಕೊಂಡು ಬಂದು ಮಾತು ನಿಂತಿತು. ಸುಸ್ತಾದ ಅಮ್ಮನಿಗೆ ನೀರು ಕುಡಿಸಿ ಮಲಗಿಸಿ ಹೊದಿಕೆ ಸರಿ ಮಾಡಿ, "ಸರಿ, ಇದೆಲ್ಲ ನಾಳೆ ಮಾತಾಡುವ, ಈಗ ಮಲಗಮ್ಮ" ಅಂತ ಲೈಟ್ ಆಫ್ ಮಾಡಿ ಆಚೆಗೆ ಹೋದ.


ರುಕ್ಮಮ್ಮ ಮರುದಿನ ಏಳಲೇ ಇಲ್ಲ. ರಮೇಶ ಈಸಲವೂ ಅಷ್ಟೇ, ಯಾವ ಶಾಸ್ತ್ರ ಸಂಪ್ರದಾಯಗಳಿಲ್ಲದೆ ಅಂತ್ಯಕ್ರಿಯೆಯನ್ನು ಸರಳವಾಗಿ ಮುಗಿಸಿದ. ಅಮ್ಮ ಕೊಟ್ಟಿದ್ದ ದುಡ್ಡನ್ನು ತಾನು ಕೆಲಸ ಮಾಡುತ್ತಿದ್ದ ಹಾಸ್ಪಿಟಲಿನ ಜತೆ ಕೆಲಸ ಮಾಡುತ್ತಿದ್ದ ಸರಕಾರೇತರ ಸಂಸ್ಥೆಯೊಂದಕ್ಕೆ ದಾನ ಮಾಡಿದ.


ಅಮ್ಮನ ಕೊನೆಯಾಸೆಯ ಪ್ರಕಾರ ಲಕ್ಷ್ಮಮ್ಮನ ಅವಲಕ್ಕಿ ಸರ ಕೊಡಲಿಕ್ಕೋಸ್ಕರ ಊರಿಗೆ ಬಂದಿದ್ದ ರಮೇಶ. ಎಲ್ಲವನ್ನೂ ನೆನಪಿಸಿಕೊಳ್ಳುತ್ತ ಐತಾಳರ ಮನೆಯ ಚಾವಡಿಯಲ್ಲಿ ಮಲಗಿದ್ದವನಿಗೆ ನಿದ್ದೆ ಬಂದಿದ್ದೇ ತಿಳಿಯಲಿಲ್ಲ.

****************

ಊಟ ಮುಗಿಸಿ ಊರಕತೆಯೆಲ್ಲ ಮಾತಾಡಿದ್ದಾದ ಮೇಲೆ ಐತಾಳರು ತೋಟಕ್ಕೆ ಹೋಗಿ ಬರುತ್ತೇನೆ ಅಂತ ಹೊರಟರು, ರಮೇಶ ನಾನೂ ನನ್ನ ಕೆಲಸ ಮುಗಿಸಿಕೊಂಡು ಬರ್ತೇನೆ ಅಂತ ಒಂದಾನೊಂದು ಕಾಲದಲ್ಲಿ ತಾನಿದ್ದ ಮನೆಕಡೆ ಹೊರಟ.


ಮನೆ ಹಾಳುಬಿದ್ದಿತ್ತು. ಅಂಗಳದಲ್ಲಿ ಹೂಗಿಡಗಳ ಜತೆ ಪೊದೆಗಳು ಬೆಳೆದಿದ್ದವು. ಈ ಜಾಗದ ವಿಲೇವಾರಿ ಮಾಡಬೇಕು, ಒಂದೋ ಮಾರಬೇಕು, ಅಥವಾ ಮನೆ ರಿಪೇರಿಮಾಡಿ ಹೋಮ್ ಸ್ಟೇ ಏನಾದರೂ ಮಾಡಿಸಬೇಕು ಅಂತ ಅಂದುಕೊಂಡ.


ಇನ್ನೀಗ ದೊಡ್ಡಮನೆಗೆ ಹೋಗಬೇಕು. ಲಕ್ಷ್ಮಮ್ಮ ತೀರಿಕೊಂಡು ಎಂಟು ವರ್ಷವಾಗಿತ್ತಂತೆ. ಶಂಕರಮಾಮನ ಮನೆಗೆ ರಮೇಶ ಯಾವತ್ತೂ ಹೋಗಿರಲಿಲ್ಲ. ಒಂದು ಸಲ ಚಿಕ್ಕವನಿದ್ದಾಗ ಅಪ್ಪ ಸಿಕ್ಕಾಪಟ್ಟೆ ಹೊಡೆದು ಮನೆಬಿಟ್ಟು ಹೋಗಿದ್ದಾಗ ಅಮ್ಮ ಹುಷಾರಿಲ್ಲದೆ ಮಲಗಿಬಿಟ್ಟಿದ್ದಳು. ಆಗ ಅವಳನ್ನು ವಿಚಾರಿಸಲೆಂದು ಮನೆಗೆ ಲಕ್ಷ್ಮಮ್ಮ ಬಂದಿದ್ದು, ರಮೇಶನನ್ನು ನೋಡಿ ಕಾರಣವಿಲ್ಲದೆ ಮುಖ ಸಿಂಡರಿಸಿದ್ದು ನೆನಪಿದೆ ರಮೇಶನಿಗೆ. ಅಂಥಾ ಲಕ್ಷ್ಮಮ್ಮ ತನ್ನಮ್ಮನಿಗೆ ಸರ ಯಾಕೆ ಕೊಟ್ರೋ.


ಅಲ್ಲೇ ಕಟ್ಟೆಯ ಮೇಲೆ ಕುಳಿತು ಸರವನ್ನು ಒಂದು ಸಲ ನೋಡುವ ಎಂದು ಜೇಬಿನಿಂದ ಪೆಟ್ಟಿಗೆ ತೆಗೆದ. ಅದಕ್ಕೆ ಕಟ್ಟಿದ ನೂಲು ಬಿಚ್ಚಿ ತೆರೆದಾಗ ಅಲ್ಲಿ ಕೂತಿತ್ತು ಅವಲಕ್ಕಿಸರ. ಜತೆಗೇ ಅಮ್ಮನ ಕೈಬರಹದಲ್ಲಿದ್ದ ಒಂದು ಪತ್ರ ಕೂಡ.


ಜನ್ಮಾಂತರಗಳ ಒಗಟುಗಳನ್ನು ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡಂತಿದ್ದ ಆ ಪತ್ರವನ್ನು ಓದುತ್ತ ಓದುತ್ತ ರಮೇಶನ ಎದೆ ಬೇಯತೊಡಗಿತು. ಅಪ್ಪನಲ್ಲದ ಅಪ್ಪನಿಗೆ ಬರುತ್ತಿದ್ದ ಕೋಪ, ಅಮ್ಮ ಬಚ್ಚಿಟ್ಟುಕೊಂಡಿದ್ದ ಬೆಂಕಿಯಂತಾ ಗುಟ್ಟು, ತಾನು ಕಾಣದ ಅಣ್ಣನ ಸಾವು, ಊರವರ ಕುಹಕ, ಬಾಯಿ ಮುಚ್ಚಿ ಕೂರಲೆಂದೇ ಬಹುಶಃ ಕೊಟ್ಟಿದ್ದ ಅವಲಕ್ಕಿಸರ — ಎಲ್ಲದರ ಹಿಂದಿನ ಕರಿಪರದೆ ಬೆತ್ತಲಾದ ಆ ಕ್ಷಣ, ತನ್ನ ಇರುವಿಕೆಯೇ ಒಂದು ದೊಡ್ಡ ಸುಳ್ಳೆನಿಸಿ ಅವ ಕುಸಿದು ಕುಳಿತ.

************

ರಮೇಶ ದೊಡ್ಡಮನೆಯ ಕಾಲಿಂಗ್ ಬೆಲ್ ಮಾಡಿದಾಗ ಗಂಟೆ ಮೂರಾಗಿತ್ತು.


ಮೂರನೇ ಬೆಲ್ಲಿಗೆ ಬಾಗಿಲು ತೆರೆದ, ಐವತ್ತು ವರ್ಷವಿರಬಹುದಾದ ಟೀ ಶರ್ಟ್ ಹಾಕಿಕೊಂಡಿದ್ದ ವ್ಯಕ್ತಿ. ರಮೇಶನಿಗೆ ಮೊಟ್ಟಮೊದಲು ಕಂಡಿದ್ದೇ ಆತನ ಬೆಳ್ಳಗಿನ ಬಲತೋಳಿನ ಮೇಲಿನ ಕಾಸಗಲ ಮಚ್ಚೆ. ಆತ ರಮೇಶನ ಪಡಿಯಚ್ಚಿನಂತಿದ್ದ — ಹಾಗೂ ಇವನನ್ನು, ಇವನ ಬಲತೋಳಿನ ಮೇಲಿದ್ದ ಮಚ್ಚೆಯನ್ನು ಅಚ್ಚರಿಯಿಂದ ಮತ್ತು ಹೇಳಲರಿಯದ ಯಾವುದೋ ಭಾವದಿಂದ ನೋಡುತ್ತ ನಿಂತ.


ಕಣ್ಣೆದುರೇ ನಿಂತಿದ್ದ ಅಮ್ಮನ ಪತ್ರದಲ್ಲಿದ್ದ ಬೆಂಕಿಯಂತಾ ಸತ್ಯವನ್ನು ನೋಡುತ್ತ, ಅವಳ ಕಣ್ಣುಗಳ ನೋವಿನಾಳವನ್ನು ನೆನಪಿಸಿಕೊಳ್ಳುತ್ತ, ಅಚಾನಕ್ಕಾಗಿ ಬಲತೋಳಿನ ಮಚ್ಚೆ ಮುಟ್ಟಿಕೊಳ್ಳುತ್ತ ರಮೇಶ ದೊಡ್ಡಮನೆಯೊಳಗಡೆ ಕಾಲಿಟ್ಟ.

************

ಎಂಟು ದಿನಗಳ ನಂತರ:


ನಫೀಸಾಗೆ ಬೆಳಿಗ್ಗೆ ಡ್ಯೂಟಿಯಿದ್ದುದರಿಂದ ಬೇಗನೇ ಹೋಗಿದ್ದಳು. ರಮೇಶ ಇನ್ನೂ ಹೊರಟಿರಲಿಲ್ಲ. ಮೊಬೈಲು ರಿಂಗಾಯಿತು. ಐತಾಳರ ಹೆಸರು ನೋಡಿ ಒಂದು ಕ್ಷಣ ತಡೆದ ರಮೇಶ ಫೋನ್ ಎತ್ತಿದ. ಐತಾಳರು “ನಿಂಗೆ ವಿಷಯ ಗೊತ್ತಾಯ್ತಾ” ಎಂದರು. “ಎಂತ ವಿಷಯ” ಅಂತ ಕೇಳಿದ. 


ಶಂಕರಮಾಮನ ಮೂರನೇ ಮಗ ವಿಶ್ವನಾಥನ ಹೆಣ ದೊಡ್ಡಮನೆಯ ಹಿತ್ತಲಹಿಂದಿನ ಹಾಳುಬಾವಿಯಲ್ಲಿ ತೇಲುತ್ತಿತ್ತೆಂಬ ವಿಚಾರವನ್ನು ರಮೇಶನಿಗೆ ಹೇಳಿದರು. “ಅದೇ, ನಿನ್ನ ಅಣ್ಣ ಬಿದ್ದಿದ್ದ ಬಾವಿಯಲ್ಲೇ,” ಅಂದರು.


“ಓಹ್, ಹೇಗೆ ಬಿದ್ರಂತೆ” ಅಂತ ಕೇಳಿದ ರಮೇಶ, ದನಿಯಲ್ಲಿ ಆತಂಕ ತುಂಬಿ. “ಏನೋ ಗೊತ್ತಿಲ್ಲ, ಮನೆಯಲ್ಲಿ ಯಾರೂ ಇರ್ಲಿಲ್ವಲ್ಲಾ, ನಿನ್ನೆ ತೋಟದ ಕೆಲಸ ಮಾಡ್ತಿದ್ದ ಐತ ಹಿತ್ತಿಲ ಬಾವಿಯಿಂದ ಬರ್ತಿದ್ದ ವಾಸನೆ ತಡೀಲಿಕ್ಕಾಗದೆ ನೋಡಿದಾಗ ಬಾಡಿ ತೇಲ್ತಾ ಇತ್ತಂತೆ, ಊರವರೆಲ್ಲ ಬಂದು ತೆಗ್ಸಿದ್ದಾಯ್ತು,” ಅಂದರು.


“ಛೇ… ಒಂದು ಸರ್ತಿ ಮಾತಾಡುವ ಚಾನ್ಸ್ ಕೂಡ ಸಿಕ್ಕಿಲ್ಲ ನಂಗೆ,” ಅಂದ ರಮೇಶ.


“ಆ ದಿನ ನೀನು ಹೋಗಿದ್ದಲ್ಲ, ಅಲ್ಲಿ ಯಾರೂ ಇರ್ಲಿಲ್ಲಾಂತ ಹೇಳಿದ್ಯಲ್ಲ,” ಅಂದರು ಐತಾಳರು. “ಹೌದು, ಕಾಲಿಂಗ್ ಬೆಲ್ ಮಾಡಿ ಮಾಡಿ ಸಾಕಾಯ್ತು,” ಅಂದ ರಮೇಶ. 


“ಅವ ಯಾವಾಗ ಬಂದಿದ್ದಾಂತ ಗೊತ್ತಿಲ್ಲ, ಕಾಲುಜಾರಿ ಕತ್ತಲಲ್ಲಿ ಬಿದ್ದಿರ್ಬೇಕು ಅಂತ ಎಲ್ಲಾ ಮಾತಾಡ್ತಿದಾರೆ, ಹೆಣ ಗುರ್ತು ಸಿಕ್ಕದ ಹಾಗೆ ಬಾತಿತ್ತು," ಐತಾಳರಂದರು.


ಹೌದೋ, ಓಹೋಗಳ ಹೊರತು ಬೇರೇನೂ ಹೇಳಲು ತೋರದೆ ಕಷ್ಟ ಪಡುತ್ತಿದ್ದ ರಮೇಶ. ಅಷ್ಟರಲ್ಲಿ ತಗ್ಗಿದ ದನಿಯಲ್ಲಿ ಐತಾಳರಂದರು, "ಪೊಲೀಸುಗಳು ಕೇಳ್ತಿದ್ರು ಯಾರ್ಯಾರು ಬಂದು ಹೋಗಿದಾರೆ ಅಂತ, ನೀನು ಬಂದಿದ್ದು ನಾ ಹೇಳ್ಲಿಲ್ಲ." 

ಮೌನವಾಗಿ ಕೇಳಿಸಿಕೊಂಡ ಆತ. ಐತಾಳರೂ ಸುಮ್ಮನಿದ್ದರು. ಕೆಲ ಕ್ಷಣಗಳ ನಂತರ "ಮತ್ತೇನಾದರೂ ಇದ್ರೆ ಫೋನ್ ಮಾಡ್ತೇನೆ" ಅಂತ ಫೋನಿಟ್ಟರು.


ಬೆಂಗಳೂರಿನ ಥಂಡಿಯಲ್ಲೂ ಫ್ಯಾನ್ ಹಾಕಿ ಕೂತರೂ ಮೈಯೆಲ್ಲ ಬೆವರಿ ಅಂಟಂಟಾಗಿತ್ತು. ತಲೆ ಸಿಡಿಯುತ್ತಿತ್ತು. ಅಮ್ಮನ ಪತ್ರ ತಗೊಂಡು ಬಾತ್ರೂಮಿಗೆ ಹೋದ ರಮೇಶ ಅದನ್ನ ಹರಿದು ಟಾಯ್ಲೆಟಿಗೆ ಹಾಕಿ ಫ್ಲಶ್ ಮಾಡಿ ಸ್ನಾನಕ್ಕಿಳಿದ. ತಲೆ ಮೇಲೆ ಬಿಸಿಬಿಸಿ ನೀರು ಸುರಿದುಕೊಂಡ. ಅಂಟು ಕಳೆಯುವ ಯತ್ನದಲ್ಲಿ ಬಾಡಿವಾಶ್ ಹಾಕಿ ಮೈ ತಿಕ್ಕೀ ತಿಕ್ಕೀ ತೊಳೆಯತೊಡಗಿದ.


Thursday, August 5, 2021

ಅಜ್ಜನ ಮೈಕ್


ನಾನು ಆಗ ತುಂಬಾ ಚಿಕ್ಕವಳಿದ್ದೆ. ನಮ್ಮ ಮನೆಯ ಅಟ್ಟವೆಂದರೆ ನನಗೆ ಅದೇನೋ ಪ್ರೀತಿ. ಅಲ್ಲಿ ನಮ್ಮಜ್ಜಿ ಅಜ್ಜ ಒಟ್ಟು ಹಾಕಿದ ಸಾಮಾನು ಏನೇನಿದೆ ಅಂತ ತೆಗೆದು ನೋಡುವ ಚಾಳಿ ನನಗೆ.
ಅಟ್ಟದಲ್ಲಿ ಒಂದು ಹಳೆಯ ಕಬ್ಬಿಣದ ತಗಡಿನ ಕೈಯಲ್ಲಿ ಹಿಡಿಯುವಂತಹ ಧ್ವನಿವರ್ಧಕ ಬಹಳ ಸಮಯದಿಂದ ಬಿದ್ದಿತ್ತು. ನಾನು ಒಂದು ದಿನ ಈ ಅಟ್ಟದಲ್ಲಿ ನಿಧಿ ಹುಡುಕುವ ಸಾಹಸಕ್ಕಿಳಿದಾಗ ನನ್ನ ಕೈಗೆ ಈ ಮೈಕ್ ಸಿಕ್ಕಿತು. ಕುತೂಹಲಕ್ಕೆ ಇದೇನು ಅಂತ ಕೇಳಿದಾಗ ಅಜ್ಜ ಅಜ್ಜಿ ಅಪ್ಪ ಎಲ್ಲ ಅದರ ಕಥೆ ಹೇಳಿದರು.
ನಮ್ಮಜ್ಜ ಆ ಮೈಕನ್ನು ಹಿಡಿದುಕೊಂಡು ಜೊತೆಗೆ ಹಲವಾರು ಚಳವಳಿಗಾರರನ್ನು ಕಟ್ಟಿಕೊಂಡು ಕುಂಬಳೆ ಮತ್ತು ಉಪ್ಪಳ ಇತ್ಯಾದಿ ಪುಟ್ಟ ಪಟ್ಟಣಗಳಲ್ಲಿ ಕಾಸರಗೋಡು ಕನ್ನಡ ನಾಡು, ಕನ್ನಡ ಮಕ್ಕಳ ತವರೂರು ಎಂದು ಕೂಗುತ್ತ ಜಾಥಾ ಹೋಗಿದ್ದರಂತೆ.


ಅದು ಎಪ್ಪತ್ತು-ಎಂಭತ್ತರ ದಶಕ. ಮಹಾಜನ ವರದಿ ಜಾರಿ ಮಾಡಬೇಕು, ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಚಳವಳಿಗಳು ನಡೆಯುತ್ತಿದ್ದ ಕಾಲ. ನಮ್ಮಜ್ಜ ಜೀವನ ಪರ್ಯಂತ ಒಂದು ರೀತಿಯ ಸಾಮಾಜಿಕ ಕಳಕಳಿ ಕಾಪಾಡಿಕೊಂಡೇ ಬಂದವರು. ಜೀವನಕ್ಕೆ ಹೋಟೆಲ್ ನಡೆಸುತ್ತಿದ್ದರು.
ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿ ಘೋಷಿಸಿದಾಗ ಅಜ್ಜ ಕರ್ನಾಟಕದಿಂದ ತರಬೇಕಾದಂತಹ ಅಗತ್ಯ ಸಾಮಗ್ರಿಗಳನ್ನು ಅಡ್ಡದಾರಿಗಳಲ್ಲಿ ಕದ್ದು ತಂದು ಅಗತ್ಯ ಇರುವವರಿಗೆ ಹಂಚುತ್ತಿದ್ದರಂತೆ. ಅದಕ್ಕೋ ಅಥವಾ ಅವರ ಹೋಟೆಲಿಗೋ ಗೊತ್ತಿಲ್ಲ, ಅವರ ಹೆಸರಿಗೆ ಊರಿನ ಜನ 'ಸಪ್ಲೈ' ಅಂತ ಸೇರಿಸಿ ಸಪ್ಲೈ ಗೋವಿಂದಣ್ಣ ಅಂತ ಕರೆಯುತ್ತಿದ್ದರು.
ಕಾಸರಗೋಡು ಕರ್ನಾಟಕಕ್ಕೆ ಸೇರುವ ತನಕ ಗಡ್ಡ ಬೋಳಿಸುವುದಿಲ್ಲ ಅಂತ ಶಪಥ ಮಾಡಿ ಮೊಣಕಾಲುದ್ದದ ಗಡ್ಡ ವರ್ಷಗಳ ಕಾಲ ಬಿಟ್ಟಿದ್ದರು ನನ್ನಜ್ಜ.
ಕೊನೆಗೊಂದು ದಿನ ರಾಮಕೃಷ್ಣ ಹೆಗಡೆಯವರು ಜನತಾದಳದಿಂದ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸಮಯ ಅವರೆದುರು ಜನರ ಗುಂಪುಕಟ್ಟಿಕೊಂಡು ಬೆಂಗಳೂರಿಗೆ ಹೋಗಿ ಅವರಿಗೆ ತೊಂದರೆಗಳನ್ನೆಲ್ಲ ತಿಳಿಸಿ ಹೇಳಿ ಅವರಿಂದ 'ಆಯಿತು, ವರದಿ ಜಾರಿ ಮಾಡಿಸಲು ಪ್ರಯತ್ನ ಮಾಡುತ್ತೇವೆ' ಅಂತ ಆಶ್ವಾಸನೆ ಪಡೆದುಕೊಂಡು ಬಂದರು. ಆಮೇಲೆ ಮಂತ್ರಾಲಯಕ್ಕೆ ಹೋಗಿ ಗಡ್ಡ ಬೋಳಿಸಿಕೊಂಡರು.
*****
ಆಗೆಲ್ಲ ನನಗೆ ಅವರೇನು ಮಾಡಿದ್ದು ಯಾಕೆ ಮಾಡಿದ್ದು ಎಂದು ಅರ್ಥವಾಗುವ ಕಾಲವಾಗಿರಲಿಲ್ಲ. ಅಜ್ಜ ನಾನು 11 ವರ್ಷದವಳಿರಬೇಕಾದರೆ ತೀರಿಕೊಂಡರು. ಆಮೇಲೆ ಬೆಳೆಯುತ್ತಾ ಬೆಳೆಯುತ್ತಾ 10ನೇ ತರಗತಿಗೆ ಬಂದಾಗ ನಿಜವಾದ ಸಮಸ್ಯೆ ಅರ್ಥವಾಗಲು ಶುರುವಾಯಿತು.
ನಾನು ಓದಿದ್ದು ಸರಕಾರಿ ಶಾಲೆಯಲ್ಲಿ. ನಮಗೆ ಪಾಠಗಳೆಲ್ಲ ಕನ್ನಡದಲ್ಲಿಯೇ ಇರುತ್ತಿತ್ತು. ಮಲಯಾಳಂ ಒಂದು ಭಾಷೆಯಾಗಿಯೂ ಕೂಡ ಕಲಿಯುವ ಅವಕಾಶವಿರಲಿಲ್ಲ. ರಜೆಯಲ್ಲಿ ಕರ್ನಾಟಕದಲ್ಲಿರುವ ಅಜ್ಜನ ಮನೆಗೆ ಹೋದಾಗ ಅಲ್ಲಿಯ ಮಕ್ಕಳ ಪಾಠಪುಸ್ತಕಗಳನ್ನು ತೆಗೆದು ಓದುವ ಅಭ್ಯಾಸವಿದ್ದ ನನಗೆ ಕೇರಳದ ಪಠ್ಯಕ್ರಮ ತುಂಬಾ ಮುಂದುವರಿದಿದೆ ಎಂದು ಅನಿಸಿತ್ತು.
ಉದಾಹರಣೆಗೆ ಹೇಳುವುದಾದರೆ. ನಾನು ಸಂಸ್ಕೃತ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದೆ. ನಾನು ಸಂಸ್ಕೃತ ಪರೀಕ್ಷೆ ಬರೆಯಬೇಕೆಂದರೆ ಸಂಸ್ಕೃತದಲ್ಲಿಯೇ ಬರೆಯಬೇಕಿತ್ತು. ಕರ್ನಾಟಕದಲ್ಲಿ ಸಂಸ್ಕೃತ ಒಂದು ಸ್ಕೋರಿಂಗ್ ಸಬ್ಜೆಕ್ಟ್ ಅಂತ ಪರಿಗಣನೆಯಾಗಿತ್ತು. ಅದನ್ನು ಕನ್ನಡದಲ್ಲಿ ಬರೆದು ಕೂಡ ಪರೀಕ್ಷೆ ಪಾಸಾಗಬಹುದಿತ್ತು ಅಂತ ಕೇಳಿದಾಗ ನನಗೆ ಅದರಷ್ಟು ವಿಚಿತ್ರ ಇನ್ಯಾವುದೂ ಕಾಣಿಸಿರಲಿಲ್ಲ.
ಕರ್ನಾಟಕದಲ್ಲಿ ಲೆಕ್ಕದ, ವಿಜ್ಞಾನದ ಪಾಠಗಳಲ್ಲಿ ಎಂಟನೇ ತರಗತಿಗೆ ಬರುವ ಪಾಠಗಳು ನಾವು ಏಳನೇ ತರಗತಿಯಲ್ಲೇ ಕಲಿತಿರುತ್ತಿದ್ದೆವು—ಹೀಗೆಲ್ಲ ನೋಡಿ ನನಗೆ ಕೇರಳವೇ ಒಂಥರಾ ಶ್ರೇಷ್ಠ ಎಂಬ ಭಾವನೆ ಅವಾಗಿಂದಲೇ ತಲೆಯಲ್ಲಿ ಕೂತುಬಿಟ್ಟಿತು.
ಆದರೆ ಒಂದು ಸಮಸ್ಯೆ ಏನಾಗಿತ್ತೆಂದರೆ, ನಾವು ಕಾಲೇಜಿಗೆ ಕೇರಳದಲ್ಲಿ ಹೋಗಬೇಕೆಂದರೆ ಕಾಸರಗೋಡು ಪಟ್ಟಣಕ್ಕೆ ಹೋಗಬೇಕಿತ್ತು. ಆಗ ಅವಾಗವಾಗ ಪ್ರತಿಭಟನೆಗಳು, ಅಲ್ಲಿ ಇಲ್ಲಿ ಕೋಮು ಗಲಭೆಗಳು ಆಗಿ ಬಸ್ ಸಂಚಾರಗಳು ಏಕಾಏಕಿ ನಿಲ್ಲುತ್ತಿದ್ದ ಕಾಲ. ಹಾಗಾಗಿ ಹೆಚ್ಚಿನ ಅಪ್ಪ ಅಮ್ಮಂದಿರಿಗೆ ಮಕ್ಕಳನ್ನು ಕರ್ನಾಟಕದಲ್ಲಿದ್ದ ಕಾಲೇಜುಗಳಿಗೆ ಕಳಿಸುವ ಪರಂಪರೆ ಬೆಳೆದು ಬಂದಿತ್ತು.
ಇದಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ ಭಾಷೆ ಬರದಿರುವುದು. ಮಲಯಾಳ ಗೊತ್ತಿಲ್ಲದೆ ಅಲ್ಲಿನ ಕಾಲೇಜುಗಳಿಗೆ ಹೋಗಿ ಸೇರಿಕೊಳ್ಳುವುದರಿಂದ ಆಗಬಹುದಾದ ಸಮಸ್ಯೆಗಳ ಅರಿವಿದ್ದುದರಿಂದಲೇ ಸುಮ್ಮನೆ ಕರ್ನಾಟಕಕ್ಕೆ ಸೇರಿಸುತ್ತಿದ್ದರು. ನಾನು, ತನ್ನ ತಂಗಿ, ತಮ್ಮ ಮೂರೂ ಜನ ಕರ್ನಾಟಕದ್ದೇ ಬೇರೆ ಬೇರೆ ಕಾಲೇಜುಗಳಲ್ಲಿ ಕಲಿತೆವು, ಬದುಕು ಕಟ್ಟಿಕೊಂಡೆವು.
ನಮ್ಮ ಹಾಗೆ ಜಾತಿ ಮತ್ತು ಮೆರಿಟ್ ಎರಡರ ಬಲ ಇಲ್ಲದ ನಮ್ಮೂರಿನ ಇತರ ಹುಡುಗರು ಹುಡುಗಿಯರು ಹೆಚ್ಚು ಓದದೇ ಅದೇ ಊರಲ್ಲಿಯೇ ಕೂಲಿ ನಾಲಿ ಮಾಡುವುದು, ಇಲ್ಲ ಮಂಗಳೂರು ಕಡೆಗೆ ಹೋಗಿ ಏನಾದರೂ ಮಾಡುವುದು ಮಾಡುತ್ತಿದ್ದರು. ಹಲವಾರು ಜನ ದುಬೈ ಕಡೆಗೆ ಮುಖ ಮಾಡಿ ಹೋಟೆಲ್ ನಲ್ಲಿ ಪಾತ್ರೆ ತೊಳೆಯುವುದು ಸಪ್ಲೈಯರ್ ಈ ಥರದ ಕೆಲಸಗಳಿಗೆ ಹೋಗಿ ಸೇರಿಕೊಳ್ಳುತ್ತಿದ್ದರು.
ನಮ್ಮಪ್ಪ ಕೇರಳದಲ್ಲಿ ಪಿಯುಸಿ ತನಕ ಅದು ಹೇಗೋ ಕಲಿತರೂ ಅಲ್ಲಿ ಕೆಲಸ ಸಿಗುವಷ್ಟು ಏನೂ ಮಾಡಲಾಗದೆ ಕೊನೆಗೆ ಮೈಸೂರಲ್ಲಿ ಹಿಂದಿ ಅಧ್ಯಾಪನದ ಕೋರ್ಸ್ ಮಾಡಿ ಹಿಂದಿ ಟೀಚರ್ ಆಗಿ ಗುತ್ತಿಗೆ ಕೆಲಸಕ್ಕೆ ಕರ್ನಾಟಕದಲ್ಲಿ ಸೇರಿಕೊಂಡರು. ಅವರಿದ್ದಿದ್ದು ಸುಳ್ಯದ ಗುತ್ತಿಗಾರಿನ ಹತ್ತಿರದ ಮಡಪಾಡಿ ಎಂಬ ಕುಗ್ರಾಮವಾಗಿದ್ದು, ನಮಗೆ ಅಪ್ಪನ ಮುಖ ವಾರಕ್ಕೋ 15 ದಿನಕ್ಕೋ ಒಂದು ಸಲ ಮಾತ್ರ ಕಾಣಲು ಸಿಗುತ್ತಿತ್ತು.
*******
ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇರಳ ಸರಕಾರ ಕನ್ನಡಲ್ಲಿಯೇ ಕಾಸರಗೋಡಿನ ಶಾಲೆಗಳಲ್ಲಿ ಶಿಕ್ಷಣ ಬಹುಕಾಲ ಕೊಟ್ಟಿತ್ತು. ಆಮೇಲೆ ನಿಧಾನವಾಗಿ ಇಂಗ್ಲಿಷ್ ಮೀಡಿಯಂ ಶಾಲೆಗಳು ಬರಲು ಆರಂಭವಾದ ಮೇಲೆ ಪರಿಸ್ಥಿತಿ ಬದಲಾಗಲು ಆರಂಭವಾಯಿತು.
ನನ್ನ ನಂತರದ ತಲೆಮಾರಿನವರು ಕೇರಳದಲ್ಲಿಯೇ ಓದಿ ಕೆಲಸ ಗಳಿಸಿಕೊಂಡು ಜೀವನ ನಡೆಸುತ್ತಿರುವುದು ಈಗ ಅಪರೂಪವೇನಲ್ಲ, ಆದರೆ ತುಂಬಾ ಇಲ್ಲ. ಬಹಳಷ್ಟು ಜನ ಚಿಕ್ಕ ಪುಟ್ಟ ಸ್ವ-ಉದ್ಯೋಗಗಳು ಮತ್ತು ಕೃಷಿ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.
ಕಿತ್ತು ತಿನ್ನುವ ಬಡತನ ಎಂಬುದು ನಿಮಗೆ ಕಾಸರಗೋಡಿನಲ್ಲಿ ಅಷ್ಟೇನೂ ಕಾಣುವುದಿಲ್ಲ. ಸಹಜವಾದ ಪ್ರಕೃತಿ ಮತ್ತು ಕೃಷಿಭೂಮಿಯ ಪಾಲು ಇದರಲ್ಲಿ ಹೆಚ್ಚು.
ಕೃಷಿ ಕೆಲಸಗಳಿಗೆ ದಿನನಿತ್ಯ ಮಜೂರಿ ಮೇಲೆ ಕೆಲಸ ಮಾಡುವವರು ಸಿಗುವುದು ಕಷ್ಟ. ಸಿಕ್ಕಿದರೂ ದಿನಗೂಲಿ ತುಂಬಾ ಜಾಸ್ತಿ. ಆಮೇಲೆ ಸರಕಾರದ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಊರುಗಳಿಗೆ ಬೇಕಾದ ಮತ್ತು ಕಮ್ಯುನಿಟಿ ಕೆಲಸಗಳು ಅನ್ನಬಹುದಾದ ಕೃಷಿ ಕೆಲಸಗಳನ್ನು ಮಾಡಿಸಿಕೊಳ್ಳಲು ಕೂಡ ಅನುಕೂಲವಾಗುತ್ತದೆ. ಇದರಲ್ಲಿ ಜಾತಿಭೇದವಿಲ್ಲದೆ ಕೂಲಿಗೆ ಸೇರಿದ ಎಲ್ಲರಿಗೂ ಸಂಬಳ ಸಿಗುತ್ತದೆ.
ಈಗ ಕಲಿಯುತ್ತಿರುವ ಮಕ್ಕಳಿಗೆ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯವಾಗಿ ಕಲಿಸಲಾಗುತ್ತಿದೆ. ಎಂದೋ ಆಗಬೇಕಿದ್ದ ಕೆಲಸ ಇಂದು ಆಗುತ್ತಿದೆ. ತಂಗಿಯ ಮಗ ಪಿಯುಸಿ ಓದಲು ಬೇರೆ ಬೇರೆ ದೊಡ್ಡ, ಒಳ್ಳೆಯ ಕಾಲೇಜಿನ ಕನಸು ಕಾಣುತ್ತಿದ್ದವನು ಕೋವಿಡ್ ಬಂದಕಾರಣ ಏನೂ ಮಾಡಲಾಗದೆ ಈಗ ಮನೆಯಿಂದ 4 ಕಿಲೋಮೀಟರ್ ದೂರದಲ್ಲಿರುವ ಸರಕಾರಿ ಕಾಲೇಜಿನಲ್ಲಿ ಪಿಯುಸಿಗೆ ಸೇರಿಕೊಂಡು ಮನೆಯಲ್ಲಿಯೇ ಪಾಠಗಳನ್ನು ಮಲಯಾಳಂ ಮತ್ತೆ ಇಂಗ್ಲಿಷ್ ಭಾಷೆಗಳಲ್ಲಿ ಆನ್ಲೈನಿನಲ್ಲಿ ಕಲಿಯುತ್ತಿದ್ದಾನೆ. ಪ್ರೈವೇಟ್ ಬ್ರಾಂಡ್ ಬ್ಯಾಂಡ್ ಮತ್ತು ಇಂಟರ್ ನೆಟ್ ಕಾಸರಗೋಡಿನ ಹಳ್ಳಿ ಹಳ್ಳಿಗೂ ಬಂದಿದೆ, ಎಲ್ಲಾ ಮಕ್ಕಳಿಗೂ ತಲುಪಿದೆ.
*******
ಕಾಸರಗೋಡಿನ ಸಮಸ್ಯೆಗಳೆಂದು ನೋಡಿದರೆ ಮುಖ್ಯವಾಗಿ ಇಂದು ಇರುವುದು - ದೊಡ್ಡ ಸ್ಪೆಶಾಲಿಟಿ ಆಸ್ಪತ್ರೆಗಳು ಮತ್ತು ದೊಡ್ಡ ಕಾಲೇಜುಗಳು ಜನಕ್ಕೆ ಹತ್ತಿರವಾಗಿಲ್ಲ, ಮತ್ತು ಬೇಕಾದಷ್ಟಿಲ್ಲ. ಯಾರಿಗಾದರೂ ಹೃದಯದ ತೊಂದರೆ, ಕ್ಯಾನ್ಸರ್, ಪಾರ್ಶ್ವವಾಯು ಇತ್ಯಾದಿ ಬಂದರೆ ಕರ್ನಾಟಕದ ಮಂಗಳೂರೇ ಗತಿ. ಒಳ್ಳೆಯ ಕಾಲೇಜು ಬೇಕಂದರೂ ಇದೇ ಕಥೆ.
ನನ್ನ ಅಜ್ಜ ಚಳುವಳಿಕಾರರಾಗಿದ್ದ ಸಮಯ ಮಹಾಜನ ವರದಿ ಬಂದು 20 ವರ್ಷಗಳೂ ಆಗಿರಲಿಲ್ಲ ಮತ್ತು ಜನಕ್ಕೆ ಇಂದಲ್ಲ ನಾಳೆ ಕರ್ನಾಟಕಕ್ಕೆ ಸೇರುತ್ತೇವೆ ಎಂಬ ಕನಸಿತ್ತು.
ಇಂದಿಗೆ ವರದಿ ಬಂದು 50 ವರ್ಷಗಳ ಮೇಲಾಗಿದೆ. ಆ ಕಾಲದ ಜನರ ಭಾವನೆಗಳಿಗೆ ಕೇರಳ ಸರಕಾರ ಕೊಟ್ಟ ಬೆಲೆಗೆ ಎರಡು ತಲೆಮಾರಿನ ಮಕ್ಕಳು ಪಟ್ಟ ಕಷ್ಟಗಳ ಮೂಲಕ ಕಪ್ಪ ಕಟ್ಟಬೇಕಾಯ್ತು. ಇದನ್ನೆಲ್ಲ ನೋಡಿದಮೇಲೂ ಹಲವಾರು ಹಳಬರ ಎದೆಯಲ್ಲಿ ಈ
ಕರ್ನಾಟಕಕ್ಕೆ ಸೇರುವ ಕನಸಿನ್ನೂ ಜೀವಂತವಿದೆ ಅಂತ ಇತ್ತೀಚೆಗೆ ಅರ್ಥವಾಯ್ತು.
ಇದಕ್ಕೆ ಗಾಳಿ ಹಾಕುವವರು ಕರ್ನಾಟಕದ ಇನ್ಯಾವುದೋ ಮೂಲೆಯಲ್ಲಿ ಕುಳಿತುಕೊಂಡು ಸಮಸ್ಯೆಯ ಹಿಂದು ಮುಂದಿನ ಅರಿವಿಲ್ಲದ ಮಾತಿನಮಲ್ಲರು. ಇದರಿಂದಾಗಿ ನಿಜ ಸಮಸ್ಯೆ ಎಲ್ಲೋ ಹೋಗಿ ಕೇರಳದವರು ಹೆಸರು ಬದಲಾಯಿಸಲು ಪ್ರಯತ್ನಿಸಿದರು ಎಂಬಂತಹ ಸುದ್ದಿಗಳು ಅಗತ್ಯಕ್ಕಿಂತ ಹೆಚ್ಚು ಸದ್ದು ಮಾಡುತ್ತವೆ.
ಕೆಲವು ರಾಜಕೀಯ ವಲಯಗಳು ಕೂಡ ಇವುಗಳಿಗೆ ಗಾಳಿ ಹಾಕಿ ಬೆಂಕಿ ಹತ್ತಿಸಲು ನೋಡುತ್ತವೆ ಯಾಕೆಂದರೆ ಅಲ್ಲಿರುವ ಎಡಪಕ್ಷದ ಸರಕಾರದ ಕೆಲಸಕಾರ್ಯದಲ್ಲಿ ಕಲ್ಲು ಹುಡುಕಲು ಇವೆಲ್ಲಾ ಬೇಕಾಗುತ್ತದೆ.
*******
ಈ ವಾರ ಕೋವಿಡ್ ಕೇಸುಗಳು ಜಾಸ್ತಿ ಇರುವ ಕಾರಣ ಕೇರಳದಿಂದ ಕರ್ನಾಟಕಕ್ಕೆ ಬರುವ ಎಲ್ಲಾ ದಾರಿಗಳೂ ಬಂದ್ ಆಗಿವೆ. ಪಕ್ಷಭೇದ ಮರೆತು ಜನ ಪ್ರತಿಭಟನೆಗಳು ಮಾಡುವುದು, ರಾಜಕೀಯ ಒತ್ತಡಗಳು ತರುವುದು ಇತ್ಯಾದಿ ಕೆಲಸಗಳು ಆಗುತ್ತಿವೆ.
ಈ ರೀತಿಯ ಬಂದ್ ಎರಡನೇ ಅಲೆ ಮತ್ತು ಮೊಡಲನೇ ಅಲೆ ಬಂದಾಗಲೂ ಆಗಿತ್ತು. ಅದರ ಪರಿಣಾಮ 23 ಜನ ಕರ್ನಾಟಕದಲ್ಲಿ (ಬೇರೆಯ ತೊಂದರೆಗಳಿಗೆ, ಕೋವಿಡ್ ಗೆ ಅಲ್ಲ) ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಮರಣ ಹೊಂದಿದ್ದರು ಹಾಗೂ ನೂರಾರು ಜನ ಕೇರಳದಲ್ಲಿ ಮನೆಯಿದ್ದು ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ಜವರು ಹೋಗಿ ಬಂದು ಮಾಡಲು ಆಗದೆ ಕೆಲಸ ಕಳೆದುಕೊಂಡಿದ್ದರು.
ಕೋವಿಡ್ ಬರುವ ಮೂರು ವರ್ಷ ಮೊದಲು ನಮ್ಮಪ್ಪ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಹತ್ತಿರದ
ಚಿಕ್ಕಪುಟ್ಟ ವೃದ್ಯರ ಮದ್ದಿನಿಂದ ಗುಣವಾಗದೇ ಕೊನೆಗೆ ಮಂಗಳೂರಿಗೆ ಕರೆದು ತಂದು. ಕ್ಯಾನ್ಸರ್ ಅಂತ ಗೊತ್ತಾಗಿ ಅದಕ್ಕೆ ಬೇಕಾದ ಸಂಪೂರ್ಣ ಚಿಕಿತ್ಸೆ ಮಂಗಳೂರಿನಲ್ಲಿಯೇ ಮಾಡಿಸಿದ್ದೆವು. ಆದಕ್ಕಿಂತ ಹಿಂದೆ ಕೂಡ ಮನೆಯಲ್ಲಿ ಯಾರಿಗೇ ಏನೇ ಕಾಯಿಲೆ ಬಂದಲ್ಲಿ ಮಂಗಳೂರಿಗೇ ಅಥವಾ ಕರ್ನಾಟಕ್ಕೇ ಹೋಗುತ್ತಿದ್ದೆವು ಯಾಕೆಂದರೆ ಕಾಸರಗೋಡು ಸಿಟಿಯಲ್ಲಿ ಹೋಗಿ ಮಲಯಾಳಂ ಮಾತನಾಡಿ ಕೆಂಲಸ ಮಾಡಿಸಿಕೊಳ್ಳುವ ಸಾಮರ್ಥ್ಯ ನಮಗಿರಲಿಲ್ಲ.
*******
ಕೇರಳ ಸರಕಾರಕ್ಕೆ ಇಲ್ಲಿ ಆಸ್ಪತ್ರೆಗಳು ಮಾಡಲು ಏನು ಕಷ್ಟ? ಮೊದಲ ಕಾರಣ ಕಾಣಿಸುವುದೆಂದರೆ ಇಲ್ಲಿನ ಜನಪ್ರತಿನಿಧಿಗಳು ಅದರ ಬಗ್ಗೆ ಸರಕಾರಕ್ಕೆ ಸರಿಯಾಗಿ ಒತ್ತಡ ಹಾಕಿಲ್ಲ. ಅದಕ್ಕೆ ಒಂದು ಕಾರಣವೇನಿರಬಹುದೆಂದರೆ ಇದ್ದ ವ್ಯವಸ್ಥೆಗಳು ಸಾಕಾಗುತ್ತಿತ್ತು, ಮತ್ತು ಹೇಗೂ ಹತ್ತು ಹಲವು ದೊಡ್ಡ ದೊಡ್ಡ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜುಗಳಿರುವ ಮಂಗಳೂರು ಪಕ್ಕದಲ್ಲೇ ಇತ್ತು. ಮತ್ತೆ ಹೃದಯಾಘಾತದಲ್ಲಿ ಅಕಾಲದಲ್ಲಿ ಸತ್ತುಹೋದವರ ಸಂಖ್ಯೆ ನಮ್ಮೂರಲ್ಲಿ ತೀರಾ ತೀರಾ ಕಡಿಮೆ. ಹಳ್ಳಿಯ ಕ್ರಿಯಾಶೀಲ ಜೀವನದಿಂದಾಗಿ ಸಕ್ಕರೆಕಾಯಿಲೆ ಅಥವಾ ಹೃದಯದ ತೊಂದರೆಗಳಂತಹ ದೊಡ್ಡ ದೊಡ್ಡ ವಿಚಾರಗಳು ಇರಲೇ ಇಲ್ಲ.
ನಾನು ಕಂಡಂತೆ ಮಾನಸಿಕ ಸಮಸ್ಯೆಗಳದ್ದೇ ಇಲ್ಲಿನ ಕಾಯಿಲೆಗಳಲ್ಲಿ ಬಹುಪಾಲು. ಇದಕ್ಕೆ ಮಂಗಳೂರಲ್ಲೂ ಸರಿಯಾದ ಮದ್ದಿರಲಿಲ್ಲ. ಆದರೆ ಮಾನಸಿಕ ಕಾಯಿಲೆಗಳು ಕಾಯಿಲೆಗಳೇ ಅಂತ ನೋಡುವ ಮನಸ್ಥಿತಿ ಯಾರಿಗೂ ಇರಲಿಲ್ಲ. ಅದು ಬಂದವರು ಮರ್ಲು, ಭ್ರಾಂತು ಎಂದು ಬದಿಗೆ ತಳ್ಳಲ್ಪಟ್ಟು ಅವರು ಎಷ್ಟು ದಿನವಾಗುತ್ತದೋ ಅಷ್ಚು ದಿನ ಇದ್ದು ತೀರಿಹೋಗುತ್ತಿದ್ದರು. ಅವರಿಗೂ ಮದ್ದು ಮಾಡಬಹುದು ಎಂಬ ಕಾನ್ಸೆಪ್ಟ್ ಯಾರಿಗೂ ಗೊತ್ತಿರಲಿಲ್ಲ.
ಇನ್ನೊಂದು ಕಾರಣ ಕೇರಳ ಸರಕಾರಕ್ಕೆ ಇದ್ದಿದ್ದು administrational problems. ದೊಡ್ಡ ಸರಕಾರಿ ಆಸ್ಪತ್ರೆಯೊಂದನ್ನು ತೆರೆಯುವಾಗ ಅದರಲ್ಲಿ ನೇಮಕಾತಿಯಿಂದ ಹಿಡಿದು ಎಲ್ಲದಕ್ಕೂ ತಲೆಕೆಡಿಸಿಕೊಳ್ಳಬೇಕು. ಮಲಯಾಳಂ ಬರದ ಮನುಷ್ಯರಿಗೆ ಕನ್ನಡದಲ್ಲಿ ಮಾತಾಡುವಂಥವರೇ ಇರಬೇಕು. ಕಾಸರಗೋಡಿಂದ ಮೇಲೆ ಬಂದು ಕೇರಳದ ವ್ವವಸ್ಥೆಯಲ್ಲಿ ಕಲಿತವರು ಕಡಿಮೆಯಿರುವ ಕಾರಣ ಇವನ್ನೆಲ್ಲ ಮಾಡುವುದು ದೊಡ್ಡ ಸವಾಲು. ಮಾಡಲಿಕ್ಕೆ ಬಹಳ ಪ್ಲಾನಿಂಗ್ ಮಾಡಬೇಕಾಗ್ತದೆ.
ಇನ್ನೂ ಒಂದು ಕಾರಣ-ಪ್ರತಿ ಐದು ವರ್ಷಕ್ಕೆ ಸರಕಾರ ಬದಲಾಗುತ್ತಿದ್ದ ಕೇರಳದಲ್ಲಿ ಬಂದಂತಹ ಸರಕಾರಗಳಿಗೆ ಮುಖ್ಯವಾಗಿ ಮಲಯಾಳಂ ಮಾತಾಡುವ ಜಿಲ್ಲೆಗಳ ಸಮಸ್ಯೆಗಳನ್ನು ಪರಿಹರಿಸುವುದೇ ಮುಖ್ಯವಾಗುತ್ತಿತ್ತು, ಯಾಕಂದರೆ ಇಲ್ಲಿನ ಜನ ಎಷ್ಟೆಂದರೂ ಕೇರಳವನ್ನು ಧಿಕ್ಕರಿಸಿವರಲ್ಲವೇ? ಇಂದಿಗೂ ಕರ್ನಾಟಕದ ಕನಸು ಕಾಣುತ್ತಿರುವವರಲ್ಲವೇ? ಕೇರಳ ಸರಕಾರದ ಪ್ರಯತ್ನಗಳಿಗೆ ಪೂರಕವಾದ ಯಾವುದೇ ಕೆಲಸಗಳು ಮಾಡದೇ, ಮಲಯಾಳಂ ಬೇಡಬೇಡವೆನ್ನುತ್ತಲೇ ನಮಗೆಲ್ಲಾ ಸವಲತ್ತುಗಳೂ ಕೊಡಿ ಎಂದು ಕೇಳಿದರೆ, ರಾಜಕೀಯ ಲಾಭವಿಲ್ಲದ ಇಂತಹಾ ಇರುವೆ ಗೂಡಿಗೆ ಕೈಹಾಕುವ ಕೆಲಸ ಮಾಡಲಿಕ್ಕೆ ಯಾರಾದರೂ ಯಾಕೆ ತಲೆಕೆಡಿಸಿಕೊಳ್ಳುತ್ತಾರೆ?
*******
ಸರಕಾರಗಳೆಂದರೆ ಜನರಿಗೋಸ್ಕರವೇ ಇರುವಂಥವು. ನಮ್ಮ ದಕ್ಷಿಣದ ರಾಜ್ಯಗಳಲ್ಲಿ ಇನ್ನೂ ಪ್ರಜಾಪ್ರಭುತ್ವ ಉಳಿದುಕೊಂಡಿದೆ. ಆದರೆ ಸರಕಾರ ನಮಗಿಷ್ಟವಿಲ್ಲದ ಪಕ್ಷದ್ದು ಎಂದ ಮಾತ್ರಕ್ಕೆ ಅದನ್ನು ಬೇಕಾಬಿಟ್ಟಿ ಬಯ್ಯುವುದು ಇಂದು ಫ್ಯಾಶನ್ ಆಗಿಬಿಟ್ಟಿದೆ. ವಸ್ತುನಿಷ್ಚವಾಗಿ ಅವರು ಏನು ಮಾಡಿದ್ದಾರೆ, ಮಾಡಲಿದ್ದಾರೆ, ಯಾಕೆ ಇತ್ಯಾದಿ ನೋಡಿ ಮಾತಾಡುವ ಜನ ವಿರಳ.
ಕರ್ನಾಟಕ ಮಾಡಿದ ಕೆಲಸಕ್ಕೆ ಕರ್ನಾಟಕವನ್ನು ಬೈಯ್ಯುವುದರಿಂದ ಪ್ರಯೋಜನವಿಲ್ಲ. ಯಾಕಂದರೆ ಈ ರಾಜ್ಯದ ಜನರ ರಕ್ಷಣೆ ಅದು ಮಾಡಲೇಬೇಕು. ಒಂದು ವೇಳೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋವಿಡ್ ಕೇಸುಗಳು ಹೆಚ್ಚಾದಲ್ಲಿ ಅದಕ್ಕೆ ಕೇರಳದಿಂದ ಬರುವವರೇ ಕಾರಣರಾಗಿರುತ್ತಾರೆ. ಹೆಚ್ಚೆಂದರೆ ಆರೋಗ್ಯಕ್ಕೆ ಸಂಬಂಧಿಸಿದ ಪ್ರಯಾಣಗಳಿಗೆ ಮತ್ತು ದಿನನಿತ್ಯ ಕೆಲಸಕಾರ್ಯಕ್ಕೆ ಹೋಗುವವರಿಗೆ ಅನುಕೂಲವಾಗುವಂತೆ ನಿಯಮ ಬದಲಾಯಿಸಿ ಎಂದು ಹೇಳಬಹುದಷ್ಟೇ.
ಹಾಗೇ ಕಮ್ಯುನಿಸ್ಟರು ಅಂತ ಕೇರಳ ಸರಕಾರಕ್ಕೆ ಬಯ್ಯುವ ಬದಲು ಸರಕಾರದ ಜತೆ ಸೇರಿ ಜನರಿಗೆ ಬೇಕಾದ ಆರೋಗ್ಯ, ಶಿಕ್ಷಣ, ಕೆಲಸ ಇತ್ಯಾದಿಗಳನ್ನು ಒದಗಿಸುವುದು ಹೇಗೆಂದು ಯೋಚಿಸುವುದು, ಆ ನಿಟ್ಟಿನಲ್ಲಿ ಕೆಲಸ ಮಾಡುವುದು ಕಾಸರಗೋಡಿನ ಇಂದಿನ ರಾಜಕೀಯಕ್ಕೆ, ರಾಜಕಾರಣಿಗಳಿಗೆ ಅತ್ಯಗತ್ಯ. ಅದೇ ಅವರು ಮಾಡಬಹುದಾದ ಅತ್ಯುತ್ತಮ ದೇಶಸೇವೆ.
*******
ಮೊದಲಿಗೇ ಹೇಳಿದ್ದೆನಲ್ಲ, ಆ ನನ್ನ ಅಜ್ಜನ ಮೈಕ್ ನಮ್ಮ ಅಟ್ಟದಲ್ಲಿದ್ದ ಧೂಳುಕಸ ಇತ್ಯಾದಿ ತೆಗೆದು ಸ್ವಚ್ಛಮಾಡುವ ಸಮಯ ಅಮ್ಮ ತೆಗೆದು ಯಾವುದೋ ಗಿಡದ ಬುಡಕ್ಕೆ ಬಿಸಾಕಿದ್ದರಂತೆ. ನಾನು ಹುಡುಕುತ್ತಿರಬೇಕಾದರೆ ಹೇಳಿದರು.
ಆ ಮೈಕ್ ಈಗ ಇತ್ತು ಅಂದರೆ ನಾನು ಏನು ಮಾಡುತ್ತಿದ್ದೆ? ಅಬ್ಬಬ್ಬಾ ಅಂದರೆ ಯಾರಾದೂ ಮ್ಯೂಸಿಯಂನವರು ತೆಗೆದುಕೊಳ್ಳುತ್ತಾರಾ ಅಂತ ಕೇಳುತ್ತಿದ್ದೆ. ತೆಗೆದುಕೊಳ್ಳುತ್ತಾರೆ ಎಂದರೆ ಅದರ ಹಿಂದಿನ ಕಥೆಯ ಜೊತೆಗೆ ಅದನ್ನು ಅವರಿಗೆ ಕೊಡುತ್ತಿದ್ದೆ.
ಬಹಳಷ್ಟು ವಿಚಾರಗಳ ಕಥೆ ಇಷ್ಟೇ, ಒಂದು ಕಾಲಕ್ಕೆ ತುಂಬಾ ಪ್ರಸ್ತುತವಾದದ್ದು ಇನ್ನೊಂದು ಕಾಲಕ್ಕೆ ಪ್ರಸ್ತುತವಲ್ಲ. ಕಾಲಕ್ಕೆ ತಕ್ಕಂತೆ ಯೋಚಿಸದಿರುವ ಜಿಗುಟುತನ, ಜಡ್ಡುತನ ತೊಂದರೆ ಬಿಟ್ಟು ಇನ್ನೇನೂ ತರುವುದಿಲ್ಲ.

Sunday, October 12, 2008

ಲ್ಯಾಂಡ್ ಲೈನೂ - ಮೊಬೈಲೂ


>>>>>>>>>>>>>>>>>>>>>>>

ಗಂಟೆ ಸರಿಯಾಗಿ ಹನ್ನೊಂದೂಮುಕ್ಕಾಲು. ರಾಜ್ಯದ ಒಂದು ಕಡೆ ಸಿಎಂ ಭೇಟಿ ಇದ್ದರೆ, ಇನ್ನೊಂದು ಕಡೆ ಯಾವುದೋ ಮಠದ ಸ್ವಾಮೀಜಿ ಪ್ರೆಸ್ ಕಾನ್ಫರೆನ್ಸ್, ಮತ್ತೊಂದೆಡೆ ಇಂಧನ ಸಚಿವರ ಭೇಟಿ... ಇದಲ್ಲದೇ ಅಲ್ಲಲ್ಲಿ ನಡೆಯುತ್ತಿರುವ ಧರಣಿಗಳು... ದಸರಾ ಮುಗಿಸಿ ಕಾಡಿಗೆ ಹೋಗ್ತಾ ಇರೋ ಆನೆಗಳು... ಹೀಗೆ ಒಂದು ಗಂಟೆಯ ಬುಲೆಟಿನ್ನಿಗೆ ಸುದ್ದಿಯ ಮಹಾಪೂರ ಹರಿದು ಹರ್ತಾ ಇರೋ ಟೈಮು. ಒಂದಾದ ಮೇಲೊಂದರ ಹಾಗೆ ಮೊಬೈಲಿಗೆ ಬರುತ್ತಾ ಇರುವ ಸುದ್ದಿ ಕರೆಗಳನ್ನು ರಿಸೀವ್ ಮಾಡುತ್ತ ಮಾತಾಡುತ್ತ ಕೆಲಸದಲ್ಲಿ ಕುತ್ತಿಗೆ ತನಕ ಮುಳುಗಿದ್ದಳು ಅವಳು. ಅಷ್ಟರಲ್ಲಿ ಪಕ್ಕದಲ್ಲಿದ್ದ ಪರ್ಸನಲ್ ಫೋನ್ ರಿಂಗ್ ಆಯಿತು. ಯಾರೆಂದು ನೋಡಿದರೆ, ಅಮ್ಮ ನಿನ್ನೆ ತಾನೇ ತೆಗೆದುಕೊಂಡ ಹೊಸಾ ಮೊಬೈಲಿನಿಂದ ಕರೆ ಬರುತ್ತಿದೆ.

ಸಾಧ್ಯವಾದಷ್ಟು ಬೇಗ ಸುದ್ದಿ ಕಳುಹಿಸಲು ಹೇಳಿ ಮಾತು ಮುಗಿಸಿ ಅಮ್ಮನ ಕರೆ ರಿಸೀವ್ ಮಾಡಿದಳು. ಹಲೋ ಎಂದಳು. ಆ ಕಡೆಯಿಂದ ಸುದ್ದಿಯೇ ಇಲ್ಲ. ಯಾರೂ ಮಾತಾಡುತ್ತಿಲ್ಲ. ಮತ್ತೆರಡು ಸಲ ಹಲೋ ಹಲೋ ಎಂದಳು. ಊಹುಂ, ಏನೂ ಕೇಳುತ್ತಿಲ್ಲ. ಹಾಗೇ ಕೆಲ ಸೆಕೆಂಡುಗಳ ನಂತರ ಫೋನ್ ಕಟ್ ಆಯಿತು. ರಿಡಯಲ್ ಮಾಡಿದಳು. ರಿಸೀವ್ ಆಯಿತು, ಆದರೆ ಏನೂ ಸ್ವರ ಕೇಳಲಿಲ್ಲ. ಕಟ್ ಮಾಡಿ ಮತ್ತೆ ಕರೆ ಮಾಡಿದರೆ ನಾಟ್ ರೀಚೇಬಲ್ ಬಂತು.

ಮನದಲ್ಲೇ ಬೈದುಕೊಳ್ಳುತ್ತ ಮನೆಯ ಲ್ಯಾಂಡ್ ಲೈನ್ ನಂಬರಿಗೆ ಕರೆ ಮಾಡಿದರೆ, ಯಥಾಪ್ರಕಾರ ಅಮ್ಮ ಫೋನೆತ್ತಲಿಲ್ಲ. ಏನಾದ್ರೂ ಮಾಡ್ಕೊಳ್ಳಲಿ, ಈಗ ತಲೆಕೆಡಿಸಿಕೊಳ್ಳುವುದಿಲ್ಲ ಅಂತ ಮತ್ತೆ ಕೆಲಸದಲ್ಲಿ ಮುಳುಗಿದಳು.

ಕೆಲಸ ನಡೆಯುತ್ತಲೇ ಇದ್ದರೂ ಅಮ್ಮನ ಬಗ್ಗೆ ಆರಂಭವಾದ ಯೋಚನೆ ಮಾತ್ರ ನಿಲ್ಲಲಿಲ್ಲ. ಇತ್ತೀಚೆಗೆ ಕರೆ ಮಾಡಿದಾಗ ಅಮ್ಮ ಸ್ವಲ್ಪ ಹಿಂಜರಿಕೆಯಿಂದಲೇ 'ನಿಂಗೇನೋ ಹೇಳ್ಬೇಕಿತ್ತು, ನೀನು ಕೋಪ ಮಾಡ್ಕೋಬಾರ್ದು' ಅಂದಳು. ಮಗಳು ಏನಪ್ಪಾ ವಿಷಯ ಅಂದುಕೊಳ್ಳುತ್ತಲೇ "ಇಲ್ಲ, ಕೋಪ ಮಾಡ್ಕೊಳ್ಳುವುದಿಲ್ಲ, ಏನು ಹೇಳು" ಅಂದಳು. "ಅಪ್ಪ ನಿಂಗೆ ಅಂತ ಚಿನ್ನ ತೆಗೆದಿದ್ದಾರೆ, ನಿನ್ನ ಮದುವೆಯಲ್ಲಿ ಕೊಡಲಿಕ್ಕಾಯಿತು ಅಂತ... ನಲುವತ್ತು ಸಾವಿರ ಆಯ್ತು..."

ಕೇಳುತ್ತಿದ್ದಂತೆ ಇವಳಿಗೆ ತಲೆ ಚಚ್ಚಿಕೊಳ್ಳಬೇಕು ಅಂತನಿಸಿತು. ಕೆಲದಿನದ ಹಿಂದಷ್ಟೇ ಚಿನ್ನ ಕೊಳ್ಳುವ ಪ್ರಸ್ತಾಪ ಮಾಡಿದ್ದಾಗ ಅಮ್ಮನಿಗೆ ಹೇಳಿದ್ದಳು, "ಈಗ ಚಿನ್ನಕ್ಕೆ ರೇಟು ಜಾಸ್ತಿ, ಕಡಿಮೆಯಾದಾಗ ತೆಗೆದುಕೊಳ್ಳುವ, ನಾನಿದ್ದಾಗಲೇ ತೆಗೆದುಕೊಳ್ಳುವ, ನಾನೇ ಹೇಳುತ್ತೇನೆ ಯಾವಾಗ ಅಂತ, ಈಗ ಬೇಡ..." ಅಮ್ಮ ಆಯಿತು ಎಂದಿದ್ದಳು. ಮತ್ತು ಈಗ, ಸ್ಟಾಕ್ ಮಾರ್ಕೆಟ್ ಪೂರ್ತಿ ಕುಸಿದಿರುವಾಗ, ಚಿನ್ನಕ್ಕೆ ದಿನದಿಂದ ದಿನಕ್ಕೆ ಬೆಲೆ ಏರುತ್ತಿರುವಾಗ, 1350 ರೂಪಾಯಿ ಕೊಟ್ಟು ಅಪ್ಪ-ಅಮ್ಮ ಚಿನ್ನ ಕೊಂಡಿದ್ದರು. ಏನು ಅರ್ಜೆಂಟಿತ್ತು ಚಿನ್ನ ಕೊಳ್ಳಲಿಕ್ಕೆ ಅಷ್ಟು? ಇಷ್ಟು ಸಮಯ ಕಾದವರಿಗೆ ಇನ್ನೊಂದಿಷ್ಟು ದಿನ ಕಾಯಬಾರದಿತ್ತೇ ಎನಿಸಿ ಬೇಸರವಾಗಿತ್ತು. ತನ್ನ ಇಷ್ಟು ವರ್ಷಗಳ ಲೋಕಜ್ಞಾನ, ತಿಳುವಳಿಕೆ, ವಿವೇಚನೆ ಎಲ್ಲವೂ ಜಗತ್ತಿಗೆ ಉಪದೇಶ ಕೊಡಲಿಕ್ಕೆ ಮಾತ್ರ ಉಪಯೋಗವಾಗುತ್ತಿದ್ದು, ದೀಪದ ಬುಡ ಕತ್ತಲಾಯಿತಲ್ಲ ಅಂತನಿಸಿತು. ಈಗ ಬೇಡಾಂತ ಹೇಳಿದ್ನಲ್ಲ, ಮತ್ತೆ ಯಾಕೆ ತಗೊಂಡಿದ್ದು ಅಂತ ಅಮ್ಮನಿಗೆ ಕೇಳಿದಳು. ಅಮ್ಮ ಅಪ್ಪನ ಮೇಲೆ ಹಾಕಿದಳು, "ಅವರೇ ಹಠ ಮಾಡಿ ತಗೊಂಡ್ರು, ನಾನು ಏನು ಮಾಡ್ಲಿಕ್ಕೂ ಆಗ್ಲಿಲ್ಲ" ಅಂತ...

ಆಫೀಸ್ ಮೊಬೈಲು ರಿಂಗಾಯಿತು, ಯೋಚನೆ ಕಟ್ಟಾಯಿತು. ಕರೆಮಾಡಿದವರಿಗೆ ಉತ್ತರಿಸಿ, ಹೇಳಬೇಕಾದ್ದು ಹೇಳಿ ಮತ್ತೆ ಇಟ್ಟಳು, ಮತ್ತೆ ಮುಂದುವರಿಯಿತು ಯೋಚನೆ... ಚಿನ್ನ ತೆಗೆದುಕೊಳ್ಳುವಾಗ ಮಾಡಿದ್ದನ್ನೇ ಈಗ ಮತ್ತೆ ಮಾಡಿದ್ದಾರೆ. ಆಗ ಚಿನ್ನ, ಈಗ ಮೊಬೈಲು.

ನಿಜವಾಗಿ ಹೇಳಬೇಕೆಂದರೆ ಮೊಬೈಲು ತೆಗೆದುಕೊಳ್ಳುವುದು ಅಮ್ಮನ ಸ್ವಂತ ನಿರ್ಧಾರವಲ್ಲವೆಂಬುದು ಅವಳಿಗೂ ಗೊತ್ತು. ಅಮ್ಮನಿಗೆ ಮೊಬೈಲು ತೆಗೆದುಕೊಳ್ಳುವ ಐಡಿಯಾ ಕೊಟ್ಟು, ಅಪ್ಪನನ್ನೂ ಅದಕ್ಕೆ ಒಪ್ಪಿಸಿ ಮೊಬೈಲು ತೆಗೆಸಿಕೊಟ್ಟವರ ಬಗ್ಗೆ ಅವಳಿಗೆ ವಿಪರೀತ ಕೋಪವಿತ್ತು. ಮೂರನೇ ಕ್ಲಾಸು ಓದಿದ, ಇಂಗ್ಲೀಷು-ಪಂಗ್ಲೀಷು ಅರಿಯದ ಅಮ್ಮನ ಮುಗ್ಧತೆಯ ಲಾಭ, ಮೇಸ್ತರಾಗಿದ್ದರೂ ಅಪ್ಪನಲ್ಲಿದ್ದ ವ್ಯವಹಾರ ಜ್ಞಾನದ ಕೊರತೆಯ ಸದುಪಯೋಗವನ್ನು ಪಡೆದವರು ತಮ್ಮ ಲಾಭಕ್ಕೋಸ್ಕರ ಅಪ್ಪ-ಅಮ್ಮನಿಗೆ ಮೊಬೈಲು ಹಿಡಿಸಿದ್ದರು. ಆದರೂ ಅಮ್ಮ ಸ್ವಲ್ಪ ಗಟ್ಟಿಯಾಗಿ ನಿಂತು ನನಗೆ ಮೊಬೈಲು ಬೇಡವೆಂದಿದ್ದರೆ ಮೊಬೈಲು ಖಂಡಿತಾ ಬರುತ್ತಿರಲಿಲ್ಲ.

ಅದಕ್ಕೇ ಅಮ್ಮನಿಗೆ ತಿಳಿಸಿ ಹೇಳಿದ್ದಳು. "ಅಮ್ಮಾ, ಅಲ್ಲಿ ನೆಟ್ ವರ್ಕೇ ಇಲ್ಲ, ಮೊಬೈಲಲ್ಲಿ ಮಾತಾಡಬೇಕೆಂದರೆ ನೀನು ನೆಟ್ ವರ್ಕ್ ಹುಡುಕಿಕೊಂಡು ಗುಡ್ಡೆ ಹತ್ತಬೇಕು. ಯಾಕಮ್ಮಾ ಅಷ್ಟೊಂದು ಕಷ್ಟ? ನೀನು ಹೋದರೆ ಎಲ್ಲಿಗೆ ಹೋಗುತ್ತೀ? ಹೆಚ್ಚೆಂದರೆ ತಂಗಿ ಮನೆ, ಅದು ಬಿಟ್ಟು ಬೇರೆಲ್ಲಿ ಹೋಗುವಾಗಲೂ ಹೇಳಿಯೇ ಹೋಗುತ್ತೀಯಲ್ಲ, ಅಲ್ಲೆಲ್ಲ ಲ್ಯಾಂಡ್ ಲೈನ್ ಫೋನ್ ಇರ್ತದೆ, ಎಲ್ಲರ ನಂಬರೂ ನನ್ನ ಹತ್ರ ಇದೆ... ಮತ್ಯಾಕೆ ಮೊಬೈಲಿನ ಸಹವಾಸ... ನಿಂಗೆ ಗೊತ್ತಾಗುವುದಿಲ್ಲ ಮೊಬೈಲಿನ ಕಷ್ಟಗಳು, ನಾವೆಲ್ಲ ಅನುಭವಿಸ್ತಾ ಇದೇವೆ, ಅನಿವಾರ್ಯ.. ನಿಂಗೂ ಯಾಕಮ್ಮಾ ಅದು... ಒಂದು ವೇಳೆ ಮೊಬೈಲು ನೆಟ್ ವರ್ಕು ಬಂತು ಅಂತಿಟ್ಕೋ, ಮೊಬೈಲು ಎಷ್ಟು ಡೇಂಜರ್ ಅಂತ ಗೊತ್ತಾ ನಿಂಗೆ, ತುಂಬಾ ಹೊತ್ತು ಮಾತಾಡಿದ್ರೆ ಕಿವಿ ಬಿಸಿಯಾಗ್ತದೆ, ತಲೆನೋವಾಗ್ತದೆ, ಆರೋಗ್ಯಕ್ಕೆ ಒಳ್ಳೇದಲ್ಲ ಅಂತ ಕೂಡ ಹೇಳ್ತಾರೆ, ತಂಗಿಮನೆಯಲ್ಲಿ ಪೆಟ್ಟಿಗೆಯಲ್ಲಿಟ್ಟ ಜೇನುಹುಳುವೆಲ್ಲ ವಾಪಸ್ ಬರದೇ ಹೋಗಿದ್ದು, ಹೊಸ ಜೇನುಹುಳು ತರಲಿಕ್ಕೆ ಎಲ್ಲೂ ಸಿಗದಿದ್ದದ್ದು, ಎಲ್ಲವೂ ನಿಂಗೇ ಗೊತ್ತು, ಅದಕ್ಕೆ ಮೊಬೈಲೇ ಕಾರಣ ಅನ್ನುವುದು ತಂಗಿ ಮನೆಯವರಿಗೂ ಗೊತ್ತು, ನಿಂಗೂ ಗೊತ್ತು, ಬೇಡಮ್ಮಾ ಮೊಬೈಲಿನ ಸಹವಾಸ... "

ಊಹುಂ. ಯಾವುದೇ ಉಪಯೋಗವಾಗಿರಲಿಲ್ಲ. ಲ್ಯಾಂಡ್ ಲೈನು ಸರಿ ಮಾಡಿಸಲು 500 ರುಪಾಯಿ ಖರ್ಚಿದೆ ಅಂತ ತಿಂಗಳಾನುಗಟ್ಟಲೆ ಸುಮ್ಮನೆ ಕೂತಿದ್ದ ಅಪ್ಪ-ಅಮ್ಮ, 1500 ರುಪಾಯಿ ಕೊಟ್ಟು ಹೊಸಾ ಮೊಬೈಲು ತೆಗೆದುಕೊಂಡು ಅಂಗಡಿಯಿಂದಲೇ ಫೋನ್ ಮಾಡಿ ಸುದ್ದಿ ಹೇಳಿದ್ದರು. ಅಪ್ಪ-ಅಮ್ಮನ ಖುಷಿಗೆ ನೀರೆರಚುವುದು ಸರಿಯಲ್ಲ... ಈಗ ತೆಗೆದುಕೊಂಡಾಗಿದೆಯಲ್ಲ, ಏನು ಹೇಳಿ ಏನು ಉಪಯೋಗ ಅಂದುಕೊಳ್ಳುತ್ತ ಅವಳು ತೆಪ್ಪಗಾಗಿದ್ದಳು.

ಹಾಗೆ ಅಂಗಡಿಯಲ್ಲಿ ಮಾತಾಡಿದ್ದೇ ಕೊನೆ. ಮನೆಯಲ್ಲಿ ಹೋಗಿ ಮೊಬೈಲಿನಿಂದ ಕರೆ ಮಾಡಲು ಯತ್ನಿಸಿರಬಹುದು, ಮೊಬೈಲ್ ನೆಟ್ ವರ್ಕು ಸರಿಯಾಗಿ ಬರುತ್ತಿರಲಿಕ್ಕಿಲ್ಲ. ಬಂದರೂ ತುಂಬಾ ದುರ್ಬಲವಾಗಿರುತ್ತದೆ, ಅದಕ್ಕೇ ಮಾತಾಡಿದ್ದು ಕೇಳುತ್ತಿಲ್ಲ. ಈಗ ಗೊತ್ತಾಗಿರುತ್ತದೆ, ನೆಟ್ ವರ್ಕೇ ಬರದ ಮನೆಯಲ್ಲಿ ಮೊಬೈಲು ಇಟ್ಟುಕೊಂಡು ಏನು ಮಾಡುತ್ತಾರೆ. ಲ್ಯಾಂಡ್ ಲೈನ್ ಸರಿಮಾಡಿಸಿದ್ದರೆ ಮನೆಯೊಳಗೇ ಕುಳಿತು ಮಾತಾಡುವ ಸೌಲಭ್ಯ. ಅದು ಬಿಟ್ಟು ನೆಟ್-ವರ್ಕ್ ಎಲ್ಲಿದೆ ಅಂತ ಹುಡುಕಿಕೊಂಡು ಗುಡ್ಡೆ ಹತ್ತಬೇಕಾದ ಖರ್ಮ... ತಿಳಿಸಿ ಹೇಳಿದರೆ ಅರ್ಥವೇ ಆಗಲಿಲ್ಲ...

ಆಫೀಸ್ ಮೊಬೈಲು ಮತ್ತೆ ರಿಂಗಾಯಿತು, ಯೋಚನೆಗಳಿಗೆ ಫುಲ್-ಸ್ಟಾಪ್ ಹಾಕಿ ಕರ್ತವ್ಯದ ಕರೆಗೆ ಓಗೊಟ್ಟು ಮತ್ತೆ ಕೆಲಸದಲ್ಲಿ ಮುಳುಗಿದಳು. ಒಂದು ಗಂಟೆ ಲೈವ್ ನ್ಯೂಸ್ ಶುರುವಾಯಿತು. ಬರಬೇಕಾದ ಸುದ್ದಿಯೆಲ್ಲ ಬಂದಾಗಿತ್ತು. ನಂತರ ಸ್ವಲ್ಪ ಆರಾಮಾಗಿ ಕುಳಿತರೆ, ಮತ್ತೆ ಅಮ್ಮನ ಕರೆ, ಈಸಾರಿ ಲ್ಯಾಂಡ್ ಲೈನಿನಿಂದ. "ನಿಂಗೆ ಮೊಬೈಲಿನಿಂದ ಫೋನ್ ಮಾಡಿದ್ರೆ ರಿಂಗ್ ಆಗ್ತದೆ ಮಗಾ, ಮಾತಾಡಲಿಕ್ಕೆ ಆಗುವುದಿಲ್ಲ ... ಪಕ್ಕದ ಮನೆಯವ್ರು ಹೇಳ್ತಾರೆ, ಸ್ವಲ್ಪದಿನದಲ್ಲಿ ಸರಿಯಾಗ್ಬಹುದು ಅಂತ..."

ಅವಳಿಗೆ ವಿಪರೀತ ಬೇಸರವಾಯಿತು... ನಾನು ತಿಳಿದುಕೊಂಡು ಹೇಳುವ ಮಾತ್ಯಾವುದೂ ಇವರಿಗೆ ತಲೆಗೇ ಹೋಗುವುದಿಲ್ಲ. ಯಾರ್ಯಾರೋ ಹೇಳುವುದು ಮಾತ್ರ ಸರಿಯೆನಿಸುತ್ತದೆ. "ನೋಡಮ್ಮಾ, ನಾನು ಹೇಳುವುದು ಮೊದಲೇ ಹೇಳಿದ್ದೆ, ನೀವಿಬ್ರೂ ನನ್ನ ಮಾತು ಕೇಳ್ಲಿಲ್ಲ... ನಂಗಂತೂ ಅರ್ಥವಾಗ್ತಿಲ್ಲ, ಇದರಿಂದ ಯಾರಿಗೆ ಉಪಯೋಗ ಅಂತ. ಬೇಡ ಅಂದಿದ್ದು ಮಾಡಿ ಈಗ ಪಶ್ಚಾತ್ತಾಪ ಪಟ್ರೆ ಏನುಪಯೋಗ, ನಿಂಗೆ ಈಗ್ಲೂ ಅಕ್ಕಪಕ್ಕದವ್ರು ಹೇಳುವುದೇ ಸರಿ ಅನಿಸಿದರೆ ಇಟ್ಕೋ ಮೊಬೈಲು. ನಂಗೇನಿಲ್ಲ"

"ಹಾಗಲ್ಲ ಮಗಾ. ಏನು ಮಾಡ್ಬೇಕು ಅಂತ ಕೇಳೋಣಾಂತ ಮಾಡಿದೆ, ಈಗ ರಿಲಯನ್ಸ್ ಇದೆ, ಪಕ್ಕದ ಮನೆ ಅಣ್ಣ ಹೇಳ್ತಾರೆ ಏರ್ ಟೆಲ್ ಹಾಕಿದ್ರೆ ನೆಟ್ ವರ್ಕು ಸಿಗಬಹುದು ಅಂತ... ಹಾಕಿಸಲಾ ಅಂತ ಕೇಳಲಿಕ್ಕೆ ಫೋನ್ ಮಾಡಿದೆ..." ಅಮ್ಮ ಸಮಜಾಯಿಷಿ ಕೊಡುತ್ತಿದ್ದಳು. ಅವಳ ಬೇಸರ ಕೋಪಕ್ಕೆ ತಿರುಗಿತು. "ನನ್ನ ಕೇಳೋದಿದ್ರೆ ಆ ಮೊಬೈಲು ಎಲ್ಲಿಂದ ತಂದ್ರೋ ಅಲ್ಲಿಯೇ ವಾಪಸ್ ಕೊಡಿ, ದುಡ್ಡು ವಾಪಸ್ ತಗೊಂಡು ಅದೇ ದುಡ್ಡಲ್ಲಿ ಲ್ಯಾಂಡ್ ಲೈನು ಸರಿಮಾಡಿಸಿ... ಮೊಬೈಲು ಸಹವಾಸ ಬೇಡ... ಇಷ್ಟರ ಮೇಲೆ ನಿನ್ನಿಷ್ಟ ಅಮ್ಮಾ, ಈಸಲ ನಾನು ಹೇಳಿದ್ದು ನಿಂಗರ್ಥ ಆಗದೇ ಇದ್ರೆ ಮತ್ತೆ ನನ್ ಹತ್ರ ಏನೂ ಕೇಳ್ಬೇಡ" ಅಂದಳು. ಅಮ್ಮ "ಸರಿ, ಅಪ್ಪನ ಹತ್ರ ಹೇಳ್ತೇನೆ" ಅಂತ ಹೇಳಿ ಫೋನಿಟ್ಟಳು.

>>>>>>>>>>>>>>

ಮೂರು ದಿನ ಕಳೆಯಿತು. ನಡುವಿನಲ್ಲಿ ಎರಡು ಸಾರಿ ಅಮ್ಮ ಏನು ಮಾಡಿದಳು ಅಂತ ತಿಳಿದುಕೊಳ್ಳಲು ಅಮ್ಮನಿಗೆ ಫೋನ್ ಮಾಡಿದರೆ, ಯಥಾಪ್ರಕಾರ, ಲ್ಯಾಂಡ್ ಲೈನು ರಿಸೀವಾಗಿರಲಿಲ್ಲ, ಮೊಬೈಲು ರೀಚಾಗಿರಲಿಲ್ಲ. ಕೋಪ, ಬೇಸರದಿಂದ ಕರೆ ಮಾಡುವುದು ನಿಲ್ಲಿಸಿದ್ದಳು. ಆ ಮಧ್ಯಾಹ್ನ ಅಮ್ಮನ ಕರೆ ಬಂತು, ಲ್ಯಾಂಡ್ ಲೈನಿನಿಂದ... ಏನಂತ ಕೇಳಿದರೆ, ''ಬಿಎಸ್ಸೆನ್ನೆಲ್ ನೆಟ್ವರ್ಕು ಬರಬಹುದು, ಅದನ್ನು ಹಾಕುವ ಅಂತ ಹೇಳ್ತಿದಾರೆ... ಏನ್ಮಾಡ್ಲಿ...'' ಪ್ರತಿ ಸಲ ಮನೆಗೆ ಹೋದಾಗಲೂ ನೆಟ್ ವರ್ಕ್ ಸರ್ಚ್ ಕೊಟ್ಟು ಫೇಲ್ ಆಗಿದ್ದ ಅವಳಿಗೆ ಗೊತ್ತಿತ್ತು, ಬಿಎಸ್ಸೆನ್ನೆಲ್ ಮೊಬೈಲ್ ಕಥೆ ಕೂಡ ಇದೇ ಅಂತ.


"ನೀನಿನ್ನೂ ವಾಪಸ್ ಕೊಟ್ಟಿಲ್ವಾ ಅದನ್ನು..." ಕೇಳಿದಳು. ಇಲ್ಲ, "ಏನಾದ್ರೂ ಮಾಡ್ಬಹುದಾ ಅಂತ ನೋಡ್ಲಿಕ್ಕೆ ಹೇಳಿದರು ಅಂಗಡಿಯವರು..." ಅಂದಳು ಅಮ್ಮ. ಪ್ರತೀ ಸಲ ಏನು ಮಾಡಬೇಕು ಅಂತ ತನ್ನ ಅಭಿಪ್ರಾಯ ಹೇಳಿದ ಮೇಲೂ ಮತ್ತೆ ಅಕ್ಕಪಕ್ಕದವರ ಮಾತು ಕೇಳಿಕೊಂಡು ಒದ್ದಾಡುವ ಅಮ್ಮನ ಮೇಲೆ ಅವಳಿಗೆ ವಿಪರೀತ ಕೋಪ ಬಂತು. ಕೇಳಿಯೇ ಬಿಟ್ಟಳು ಅಮ್ಮನಿಗೆ, "ಅಮ್ಮಾ ನೀನು ಮೊಬೈಲು ತಗೊಳ್ಳುವ ಉದ್ದೇಶ ಏನು" ಅಂತ. "ನಿನ್ನ ಹತ್ರ ಬೇಕಾದಾಗ ಮಾತಾಡಲಿಕ್ಕೆ ಅನುಕೂಲವಾಗಲಿ ಅಂತ" ಅಂದಳು ಅಮ್ಮ.


ಅವಳ ತಲೆ ಕೆಟ್ಟು ಹೋಯಿತು. ಆ ವ್ಯವಸ್ಥೆ ಈಗಲೂ ಅಮ್ಮನಿಗಿತ್ತು. ಮಾತಾಡಬೇಕೆನಿಸಿದಾಗಲೆಲ್ಲ ಲ್ಯಾಂಡ್ ಲೈನಿಂದ ಫೋನ್ ಮಾಡುವ ಅಮ್ಮ ಆಫೀಸಿನಲ್ಲಿದೀಯಾ ಅಂತ ಕೇಳುತ್ತಿದ್ದಳು. ಹೌದೆಂದ ಮೇಲೂ ಅಲ್ಲಿ ಬೊಜ್ಜ, ಇಲ್ಲಿ ಇಂಥವರ ಸೊಸೆ ಹೆತ್ತಳು, ನಾಳೆ ಅವರ ಮಗಳಿಗೆ ಮದುವೆ, ಇವರ ಮನೆಯ ಗೃಹಪ್ರವೇಶ - ಇತ್ಯಾದಿ ಸಿಕ್ಕಿಸಿಕ್ಕಿದವರ ವಿಚಾರಗಳನ್ನು ಮಗಳಿಗೆ ಬೇಕೋ ಬೇಡವೋ ಅಂತ ಯೋಚಿಸದೆ ಅಮ್ಮ ಹೇಳುತ್ತಿದ್ದಳು. ಅದನ್ನೆಲ್ಲ ಕೇಳಿಸಿಕೊಳ್ಳುವ ತಾಳ್ಮೆಯಿಲ್ಲದಿದ್ದರೂ, ಫೋನ್ ಕಟ್ ಮಾಡಿದರೆ ಅಮ್ಮನಿಗೆ ಬೇಸರವಾಗುತ್ತದೆಂದು ಸುಮ್ಮನೆ ಕೇಳಿಸಿಕೊಳ್ಳುತ್ತಲೇ ಬೇರೆ ಕೆಲಸ ಮಾಡುತ್ತಿದ್ದಳು ಅವಳು. ಕೊನೆಗೆ ಇಡಲಾ ಅಂತ ಕೇಳಿ ಅಮ್ಮ ಫೋನಿಟ್ಟ ಮೇಲೆ, ಅಷ್ಟು ಹೊತ್ತು ಅದೇನು ಮಾತಾಡಿದಳೋ ನೆನಪಿರುತ್ತಿರಲಿಲ್ಲ. ಹಾಗೆಯೇ ಅವಳಿಗೆ ಬೇಕಾದಾಗ ಅಮ್ಮನಿಗೆ ಫೋನ್ ಮಾಡಿದರೆ ಅದು ರಿಂಗಾಗಿದ್ದೇ ಕೇಳದ ಕಾರಣ ತನಗೆ ಬೇಕಾದಾಗ ಅಮ್ಮನ ಜತೆ ಮಾತಾಡುವ ಸೌಲಭ್ಯ ಅವಳಿಗಿಲ್ಲವಾಗಿತ್ತು.


ಎಲ್ಲಾ ಅಸಮಾಧಾನ, ಸಿಟ್ಟು ಹೊಟ್ಟೆಯಿಂದ ಹೊರಬರುವ ಕಾಲ ಬಂದಿತ್ತು. ಹೇಳಿದಳು - "ಅಮ್ಮಾ ದಮ್ಮಯ್ಯ, ನನ್ನ ಮಾತಿಗೆ ಏನಾದ್ರೂ ಒಂಚೂರು ಬೆಲೆ ಇದೆ ಅಂತಾದ್ರೆ ಆ ಮೊಬೈಲು ವಾಪಸ್ ಕೊಡು, ಲ್ಯಾಂಡ್ ಲೈನು ಸರಿಮಾಡಿಸು. ಹಾಗೆ ನೀ ಮಾಡಿಸ್ಲಿಲ್ಲಾಂದ್ರೆ ಮತ್ತೆ ನನ್ ಹತ್ರ ಮಾತಾಡೂದೇ ಬೇಡ, ನಿಂಗೆ ಯೂರ್ ಬೇಕೋ ಅವರ ಮಾತು ಕೇಳ್ಕೊಂಡು ನಿಂಗೆ ಬೇಕಾದ್ದು ಮಾಡ್ಕೋ, ನಾ ನಿನ್ನ ತಂಟೆಗೇ ಬರೂದಿಲ್ಲ... ಊರಿಗೂ ಬರೂದಿಲ್ಲ" ಅಷ್ಟು ಹೇಳಬೇಕಾದರೆ ಅವಳ ದನಿ ಗದ್ಗದವಾಗಿತ್ತು...


ಅಮ್ಮ ಏನು ಮಾಡಬೇಕೆಂದು ತಿಳಿಯದೇ ಮಗಳನ್ನು ಸಮಾಧಾನಿಸತೊಡಗಿದಳು... "ಹಾಗೆಲ್ಲಾ ಹೇಳ್ಬೇಡ, ಕೋಪ ಮಾಡ್ಬೇಡ, ನೀ ಹೇಳಿದಂಗೇ ಮಾಡ್ತೇನೆ, ನಿನ್ನ ಹತ್ರ ಮಾತಾಡ್ಲಿಕ್ಕಾಗದಿದ್ದ ಮೇಲೆ ಮೊಬೈಲು ಯಾಕೆ ನಂಗೆ, ಊರಿಗೇ ಬರೂದಿಲ್ಲ ಅಂತೆಲ್ಲ ಹೇಳ್ಬೇಡ, ಅಪ್ಪ ಬೇಜಾರ್ ಮಾಡ್ಕೊಳ್ತಾರೆ, ನಿನಗೋಸ್ಕರವೇ ತಾನೇ ಇಷ್ಟೆಲ್ಲ ಮಾಡ್ತಿರೂದು..." ಇತ್ಯಾದಿ... ಮಾತಾಡುತ್ತ ಮಾತಾಡುತ್ತ ಅಮ್ಮನ ದನಿ ಒದ್ದೆಯಾಗಿ ನೀರೊಡೆದಿತ್ತು, ಸುಮ್ಮನೇ ಕೇಳಿಸಿಕೊಳ್ಳುತ್ತಿದ್ದ ಮಗಳ ಕಣ್ಣಲ್ಲೂ ಗಂಗಾಧಾರೆ ಹರಿದಿತ್ತು...

ಆತುದಿಯ ರಿಂಗಾಗಲಾರದ ಲ್ಯಾಂಡ್ ಲೈನು ಅಮ್ಮನ ಕಣ್ಣೀರಿಗೆ ಸಾಕ್ಷಿಯಾದರೆ, ಈ ತುದಿಯಲ್ಲಿದ್ದ ಮೊಬೈಲು ಮಗಳ ಸಂಕಟಕ್ಕೆ ಸಾಥ್ ಕೊಟ್ಟಿತ್ತು.

Saturday, October 4, 2008

ಎಲ್ಲವೂ ಸರಿಯಿತ್ತು...


ಮಟಮಟ ಮಧ್ಯಾಹ್ನ, ಅಂದು ದೂರದೂರಿಗೆ ಪಯಣ... ಕಣ್ಣು ತೇವವಾಗಿಸಿಕೊಂಡು ಕಳಿಸಿಕೊಟ್ಟ ಅಮ್ಮ, ಕಾಳಜಿಯಿಂದ ಬಸ್ಸು ಹತ್ತಿಸಿದ ಅಪ್ಪನ ಮುಖಗಳನ್ನು ಮರೆಯಲೆತ್ನಿಸುತ್ತಾ ಆಕೆ ಬಸ್ಸಿನಲ್ಲಿ ಕುಳಿತಿದ್ದಳು.

ಒಂದು ದಿನದ ಪಯಣ, ಕಿಟಿಕಿ ಬದಿಯ ಸೀಟು. ಓದಲೆಂದು ಸುಧಾ, ತರಂಗ... ಬೋರಾದಾಗ ಬಾಯಿಯಾಡಿಸಲೆಂದು ಅಮ್ಮ ಕಟ್ಟಿಕೊಟ್ಟ ಚಕ್ಕುಲಿ... ಜತೆಗೆ ರಜಾದಲ್ಲಿ ಮನೆಯಲ್ಲಿ ಕಳೆದ ನೆನಪುಗಳು.

ಆಕೆ ಸುಧಾ ತೆರೆದು ಕಥೆಯೊಂದನ್ನು ಓದಲು ಶುರುಮಾಡಿದಳು. ಹಾಗೇ ಅದರಲ್ಲಿ ಮುಳುಗಿದಳು. ಬಸ್ಸು ಹೊರಡಲು ಇನ್ನು ಹತ್ತೇ ನಿಮಿಷ. 

ಆಕೆಯ ಪಕ್ಕದ ಸೀಟಿನಲ್ಲಿ ಬಂದು ಕುಳಿತನಾತ. ಲಗೇಜನ್ನೆಲ್ಲ ಮೇಲಿಟ್ಟು, ಜಾಕೆಟು ಸೀಟಿನ ಮೇಲೆ ಬಿಚ್ಚಿಟ್ಟು ಸುತ್ತಮುತ್ತ ಎಲ್ಲಾ ನೋಡಿ, ಮತ್ತೆ ಕೆಳಗಿಳಿದು, ನೀರು ಕೊಂಡು ತಂದು, ಹೋಲ್ಡರಲ್ಲಿ ಇಟ್ಟು ಸೆಟಲ್ ಆದ. 

ಅವಳು ಪುಸ್ತಕದೊಳಗಿದ್ದರೂ ಅವಳೊಳಗೆ ಕಳವಳ. ಎಂತಹವನೋ ಏನೋ, ಅಪರಿಚಿತನ ಜತಗೆ ಕುಳಿತುಕೊಳ್ಳುವ ಕರ್ಮ. ಲೇಡೀಸ್ ಸೀಟ್ ಕೇಳಬೇಕಿತ್ತು ಅಂದುಕೊಂಡಳು. 

ಆಮೇಲೆ ತನಗೆ ತಾನೇ ಬೈದುಕೊಂಡಳು, ಕಂಡವರನ್ನೆಲ್ಲ ಸಂಶಯದ ದೃಷ್ಟಿಯಿಂದ ನೋಡುತ್ತಿದ್ದೀನಲ್ಲ ಅಂತ ತನ್ನ ಬಗ್ಗೆ ತನಗೇ ಅಸಹ್ಯವೆನಿಸಿತು. ಸರಿ ಹೋಗದಿದ್ದರೆ ಇದ್ದೇ ಇದ್ದಾನೆ ಕಂಡಕ್ಟರ್. ಆತನಲ್ಲಿ ಸಿಂಗಲ್ ಸೀಟ್ ಕೇಳಿದರಾಯಿತು ಅಂದುಕೊಂಡಳು.

ಸ್ವಲ್ಪ ಹೊತ್ತಲ್ಲಿ ಬಸ್ ಹೊರಟಿತು. ಒಬ್ಬೊಬ್ಬರದೇ ಟಿಕೆಟ್ ಚೆಕ್ ಮಾಡುತ್ತಾ ಕಂಡಕ್ಟರ್ ಇವರ ಹತ್ತಿರಕ್ಕೆ ಬಂದ. ಆತ ಟಿಕೆಟ್ ತೋರಿಸಿದ. ಓದಿನಿಂದ ಬ್ರೇಕ್ ತೆಗೆದುಕೊಂಡ ಆಕೆಯೂ ಟಿಕೆಟ್ ತೋರಿಸಿದಳು. ಒಂದು ಕಥೆ ಓದಿ ಮುಗಿಸಿಯಾಗಿತ್ತು. ಹಾಗೇ ಅದನ್ನು ಮೆಲುಕು ಹಾಕುತ್ತಿದ್ದರೆ ಆತ ಇಂಗ್ಲೀಷಿನಲ್ಲಿ ಕೇಳಿದ, ಎಲ್ಲಿ ಹೋಗುತ್ತಿದ್ದೀಯಾ ಅಂತ. 

ಯಾಕೋ ಒಳ್ಳೆಯವನ ಥರ ಕಂಡ. ಯಾವಾಗಲೂ ಸುಳ್ಳು ಹೇಳುವ ಅವಳು ಈಸಲ ಸತ್ಯ ಹೇಳಿದಳು. ಪ್ರಯಾಣದ ಉದ್ದೇಶ ಕೇಳಿದ. ಕೆಲಸದ ಮೇಲೆಂದಳು. ಇದು ಸ್ವಂತ ಊರಾ ಅಂತ ಕೇಳಿದ. ಹೌದೆಂದಳು. 

ಮತ್ತೆ ಆಕೆಯನ್ನು ಪುಸ್ತಕದೆಡೆಗೆ ಕಣ್ಣು ಹಾಯಿಸಲು ಬಿಡದೆ ಮಾತು ಆರಂಭಿಸಿದನಾತ. ದಿಲ್ಲಿಯವನಂತೆ. ಈ ಊರಲ್ಲಿ ಕೆಲಸ ಮಾಡುತ್ತಾನಂತೆ. ಆ ಊರಲ್ಲಿ ಅವನ ತಮ್ಮನಿದ್ದಾನಂತೆ. ಆತನನ್ನು ಭೇಟಿ ಮಾಡಲು ಹೋಗುತ್ತಿರುವುದಂತೆ. ಅಲ್ಲಿಂದ ಹಾಗೇ ದಿಲ್ಲಿಗೆ ಹೋಗುತ್ತಾನಂತೆ. ಆ ಊರಿನ ಬಗ್ಗೆ ಏನೂ ಗೊತ್ತಿಲ್ಲವಂತೆ. ಮೊದಲ ಸಲ ಹೋಗುತ್ತಿರುವುದಂತೆ.

ಬಸ್ಸು ನಿಂತಲ್ಲಿ ಊಟಕ್ಕೆ ಕರೆದ. ಆಕೆ ನಯವಾಗಿ ನಿರಾಕರಿಸಿದಳು, ಅಮ್ಮ ಚಪಾತಿ ಕಟ್ಟಿಕೊಟ್ಟಿದ್ದಳಲ್ಲ. ತಿಂದು ಮುಗಿಸಿ ನೀರು ಕುಡಿಯುತ್ತಿದ್ದರೆ ಆತ ಫ್ರೂಟಿ ಪ್ಯಾಕೆಟ್ ಹಿಡಿದು ಬಂದ. This is for you ಅಂದ. ಅಯ್ಯೋ ಇದ್ಯಾಕೆ ತರಲಿಕ್ಕೆ ಹೋದೆ ಎಂದಳು. ಅವನು ನಾನು ಅಲ್ಲೇ ಕುಡಿದೆ, ನಿನಗೆಂದೇ ತಂದೆ ಎಂದ. ಮತ್ತೆ ಬೇಡವೆನ್ನದೆ ತೆಗೆದುಕೊಂಡಳು. 

ಮತ್ತೆ ಮಾತು ಶುರು. ಶುದ್ಧ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಮಾತಾಡುತ್ತಿದ್ದ ಆತ ರಾಜಕೀಯದಿಂದ ಹಿಡಿದು ದಿಲ್ಲಿಯವರೆಗೆ, ತಾನಿದ್ದ ಊರಿನ ಸಮುದ್ರತೀರದಿಂದ ಹಿಡಿದು ಚೆನ್ನೈಯ ಹೋಟೆಲುಗಳ ವರೆಗೆ ಸುಮಾರು ವಿಚಾರಗಳನ್ನು ಹೇಳುತ್ತಿದ್ದರೆ ಆಕೆಯೂ ಹೂಂಗುಟ್ಟಿದಳು, ತನಗನಿಸಿದ್ದು ಹೇಳಿದಳು. ಆತನ ವಾಗ್ಧಾರೆಯ ನಡುವೆ ಪುಸ್ತಕ ಓದುವುದಂತೂ ದೂರದ ಮಾತು. ಮಾತಾಡುತ್ತ ಹೋದಂತೆ ಅಪರಿಚಿತ ಭಾವ ಕಳೆಯುತ್ತ ತಕ್ಕಮಟ್ಟಿಗೆ ಪರಿಚಿತನೆಂಬಷ್ಟು ಮಟ್ಟದ ಬಂಧ ಆತನ ಜತೆಗೆ ಬೆಳೆಯಿತು.

ಹಾಗೇ ಸಮಯ ಕಳೆದು ರಾತ್ರಿಯಾಯಿತು. ಎಲ್ಲೋ ಬಸ್ ಊಟಕ್ಕೆಂದು ನಿಂತಲ್ಲಿ ಜತೆಗೇ ಊಟವೂ ಮುಗಿಯಿತು. ಬಸ್ ಮತ್ತೆ ಹೊರಟಿತು. ಹೊರಗೆ ಕೊರೆವ ಚಳಿ, ಬೆಚ್ಚಗಿನ ಸ್ವೆಟರ್, ಅಮ್ಮ ಕಟ್ಟಿಕೊಟ್ಟ ಚಕ್ಕುಲಿ ಅವನ ಜತೆ ಹಂಚಿಕೊಂಡು ಹರಟೆ ಹೊಡೆದಳು. ದೇವರ ಬಗ್ಗೆ, ಅಮ್ಮನ ಬಗ್ಗೆ, ಬಾಲ್ಯದ ಬಗ್ಗೆ, ಬದುಕಿನ ಬಗ್ಗೆ, ದ್ವೇಷದ ಬಗ್ಗೆ, ಪ್ರೀತಿಯ ಬಗ್ಗೆ… 

ಆತನ ಬಗ್ಗೆ ತಪ್ಪು ತಿಳಿದುಕೊಂಡಿದ್ದಕ್ಕೆ ತನ್ನ ಬಗ್ಗೆಯೇ ನಾಚಿಕೆಯಾಗಿದ್ದಕ್ಕೋ ಏನೋ, ಸ್ವಲ್ಪ ಹೆಚ್ಚಾಗಿಯೇ ಆತನ ಜತೆಗೆ ಮಾತಾಡಿದಳು. 

****

ಮಾತಾಡುತ್ತ ಮಾತಾಡುತ್ತ ಎಷ್ಟು ಹೊತ್ತು ಕಳೆಯಿತೋ ಗೊತ್ತಿಲ್ಲ. ಅದ್ಯಾವುದೋ ಅಪರಾತ್ರಿಯಲ್ಲಿ ಅವಳಿಗೆ ಆಕಳಿಕೆ, ಕಣ್ಣು ಎಳೆಯಲಾರಂಭಿಸಿತು. ಅಷ್ಟರಲ್ಲಿ ಅವನೇ ಗುಡ್ ನೈಟ್ ಹೇಳಿದ. ತಿರುಗಿ ಗುಡ್ ನೈಟ್ ಹೇಳಿ ಮಲಗಿದಳು. ಆದರೆ ನಿದ್ದೆ ಬರಲಿಲ್ಲ.

ನಾಳೆಯಿಂದ ಅದೇ ಆಫೀಸು. ಅದೇ ಕೆಲಸ... ದಿನಾ ಆಫೀಸಿಗೆ ಹೋಗುವ ಅದೇ ಹಳೆಯ ದಾರಿ... ಮಾತಿಲ್ಲದ, ಯಾವುದೇ ಉದ್ದೇಶವಿಲ್ಲದೆ ಸುಮ್ಮನೆ ಕಾಡುವ ಅದೇ ಅವನು... ತಲೆಗೊಂದು ಮಾತಾಡುವ ಅದೇ ಅವರು... ಎಲ್ಲವೂ ಬೋರ್ ಅನಿಸುತ್ತಿತ್ತು. ಮಾತಿದ್ದಷ್ಟು ಹೊತ್ತು ಕಾಡದ ಭಾವಗಳು ಶೂನ್ಯದಲ್ಲಿ ಬಂಡಿ ಹೊಡೆಯುತ್ತ ಬಂದು ಮನದೊಳಗೆ ನುಗ್ಗಿದವು. 

ಪಕ್ಕದಲ್ಲಿದ್ದ ಆತ ನಿದ್ದೆಯಲ್ಲೇ ಆಕೆಯ ಕಡೆ ತಿರುಗಿ ಮಲಗಿದ. ಅವಳು ನಿದ್ದೆ ಮರೆತುಹೋಗಿ ಸುಮ್ಮನೆ ಯೋಚಿಸುತ್ತ ಕಿಟಿಕಿಯಾಚೆಗೆ ಕತ್ತಲು ನೋಡುತ್ತ ಮಲಗಿದ್ದಳು.

ಆತ ನಿದ್ದೆಯಲ್ಲೇ ಹತ್ತಿರ ಸರಿದ. ಮಗುವಿನಂತೆ ನಿದ್ದೆ ಮಾಡುತ್ತಿದ್ದಾನೆ. ತಾನು ಪುಟ್ಟ ಮಗುವಾಗಿದ್ದಾಗ ಕೋಣೆಯ ಒಂದು ಬದಿಯಲ್ಲಿ ಮಲಗಿದವಳು ನಿದ್ದೆಯಲ್ಲೇ ಮೀಟರ್-ಗಟ್ಟಲೆ ದೂರ ಉರುಳಿ ಎಚ್ಚರವಾದಾಗ ಇನ್ನೊಂದು ಬದಿಯಲ್ಲಿರುತ್ತಿದ್ದುದು ನೆನಪಾಗಿ ನಗು ಬಂತು. ಹಾಗೇ ಮತ್ತೆ ನೆನಪುಗಳಲ್ಲಿ ಕಳೆದುಹೋದಳು.

ಸ್ವಲ್ಪ ಹೊತ್ತಿನ ನಂತರ ನಿದ್ದೆಯಲ್ಲಿದ್ದ ಆತನ ಕೈ ನಿಧಾನವಾಗಿ ಅವಳ ಕಾಲಿನ ಮೇಲೆ ಬಂತು. ನಿದ್ದೆಯಲ್ಲಿ ಹೀಗೆಲ್ಲಾ ಆಗೋ ಸಾಧ್ಯತೆ ಇದೆಯಾ ಅಂತ ಸಂಶಯದಲ್ಲಿ ಆತನ ಮುಖ ನೋಡಿದರೆ ಹೌದು, ಆತನಿಗೆ ಗಾಢ ನಿದ್ರೆ. ಕೈಯನ್ನು ಪಕ್ಕಕ್ಕೆ ಸರಿಸಿದಳು, ಆದರೆ ತಲೆಲ್ಲಿ ಅಲಾರಂ ಜೋರಾಗಿ ಹೊಡೆಯಲಾರಂಭಿಸಿತು.

ಮತ್ತೆ ಸ್ವಲ್ಪ ಹೊತ್ತಿಗೆ ಪುನಹ ಆತನ ಕೈ ಅವಳ ಕಾಲಮೇಲೆ ಬಂತು. ಮತ್ತೆ ಅದನ್ನು ಸರಿಸಿದವಳ ನಿದ್ರೆ ಹಾರಿಹೋಯಿತು. ತಲೆ ಮಿಂಚಿನ ವೇಗದಲ್ಲಿ ಕೆಲಸ ಮಾಡಲಾರಂಭಿಸಿತು. ಅವನ ಉಸಿರಾಟ ನಿದ್ರೆಯಲ್ಲಿದ್ದಾಗ ಇರಬೇಕಾದಂತೆ ಮಾಮೂಲಾಗಿಯೇನೂ ಇರಲಿಲ್ಲ, ನಿದ್ರೆಯ ನಟನೆ ಮಾಡುತ್ತಿದ್ದುದು ಸ್ಪಷ್ಟವಾಗಿತ್ತು. ಎಷ್ಟು ಸಲ ಇದನ್ನು ಸಹಿಸಲು ಸಾಧ್ಯ?

ಅಲ್ಲಿಯವರೆಗಿನ ಪ್ರಯಾಣದಲ್ಲಿ ಆತನ ಜತೆಗೆ ಚೆನ್ನಾಗಿ ಹೊಂದಿಕೊಂಡು, ಮಾತಾಡುತ್ತ ಬಂದಿದ್ದಳಾದ ಕಾರಣ, ಈಗ ಆತನ ಬಗ್ಗೆ ಕಂಡಕ್ಟರನಿಗೆ ದೂರು ಕೊಡುವುದು ಯಾಕೋ ಸರಿಯೆನ್ನಿಸಲಿಲ್ಲ. ಅಕ್ಕಪಕ್ಕದವರಿಗೆ ಹೇಳುವುದಂತೂ ದೂರವೇ ಉಳಿಯಿತು. ಏನು ಮಾಡಬಹುದು?

ಕಾಲೇಜು ಓದುತ್ತಿದ್ದಾಗಲೊಮ್ಮೆ ಬಸ್-ನಲ್ಲಿ ಹೋಗುವಾಗ ಹದಮೀರಿ ವರ್ತಿಸಿದವನನ್ನು ಎದುರಿಸಲಾಗದೆ, ಆಡಲಾಗದೆ, ಅನುಭವಿಸಲಾಗದೆ ಕಷ್ಟಪಟ್ಟಿದ್ದು ನೆನಪಾಯಿತು. ಮತ್ತೊಂದು ಸಾರಿ ಇದೇ ರೀತಿ ದೂರಪ್ರಯಾಣದ ಸಮಯ ಪಕ್ಕ ಕೂತ ರಾಜಕಾರಣಿಯೊಬ್ಬ ಈಕೆಯ ಪೂರ್ವಾಪರವೆಲ್ಲ ವಿಚಾರಿಸಿದ್ದಾದ ಮೇಲೆ, ನನ್ನೂರಿಗೆ ಬಾ, ನಿನಗೆ ಕೆಲಸ ಕೊಡಿಸುತ್ತೇನೆಂದು ಕಣ್ಣುಹೊಡೆದು ಹೇಳಿದ್ದು, ಲೈಟು ಆರಿದ ಮೇಲೆ ತನ್ನ ಮಿತಿ ದಾಟಹೊರಟ ಆತನಿಗೆ ತಾನು ಕೆಲಸ ಮಾಡುವುದು ಎಲ್ಲಿ ಎಂದು ತಿಳಿಸಿ ಸಾರಿ ಕೇಳುವಂತೆ ಮಾಡಿದ್ದು, ಎಲ್ಲಾ ನೆನಪಾಯ್ತು…

ಈ ಬಾರಿ ಏನು ಮಾಡುವುದು ಅಂತ ಮಿಂಚಿನ ವೇಗದಲ್ಲಿ ತಲೆ ಕೆಲಸ ಮಾಡುತ್ತಿರುವಾಗ ಆತನ ಕೈ ಮತ್ತೆ, ಮೆಲ್ಲಗೆ, ಅವಳ ಕಾಲಮೇಲೆ ಸ್ವಲ್ಪವೇ ಸ್ವಲ್ಪ ಚಲಿಸಿತು. ಅಚಾನಕ್ಕಾಗಿ ಆಕೆ ತನ್ನ ಎಡಗೈಯನ್ನು ಆತನ ಕೈಯ ಮೇಲಿಟ್ಟಳು. ಆತನ ಕೈ ಇದ್ದಲ್ಲೇ ಸ್ತಬ್ಧವಾಯಿತು. 

ಆತನೆಡೆಗೆ ನೋಡಿದರೆ ಮುದ್ದುಮಗುವಿನಂತೆ ಮಲಗಿದ್ದ ಅವನಿಗೆ ಏನೊಂದೂ ತಿಳಿಯದಂತಹ ಗಾ....ಢ ನಿದ್ರೆ… ಅಂತ ಯಾರೇ ಆದರೂ ನಂಬಬೇಕು, ಆರೀತಿಯ ನಟನೆ! ಆಕೆ ತನ್ನ ಕೈಯನ್ನು ಹಿಡಿದಿಟ್ಟಿದ್ದು ಕೂಡ ಗೊತ್ತಾಗದಂತೆ. ಸಿಕ್ಕಿಬಿದ್ದ ನಂತರ ಹೇಗೆ ಪಾರಾಗುವುದೆಂದು ತಿಳಿಯದಾಗಿದ್ದ ಆತ ನಿದ್ರೆ ನಟಿಸುವ ಹೊರತು ಬೇರೇನೂ ಮಾಡುವ ಹಾಗಿರಲಿಲ್ಲ.

ಅವಳಿಂದ ಬೇರೆಲ್ಲ ಯೋಚನೆ ಓಡಿಹೋಗಿ, ಸದ್ಯದ ಪರಿಸ್ಥಿತಿ ಮಾತ್ರ ಸತ್ಯವಾಯಿತು. ಎಲ್ಲೂ ತಪ್ಪಿಸಿಕೊಳ್ಳಲು, ಚಲಿಸಲು ಸಾಧ್ಯವಿಲ್ಲದಂತೆ ಆ ಕೈ ಹಿಡಿದಿದ್ದ ಅವಳಿಗೆ ಅದೆಷ್ಟು ಹೊತ್ತಿಗೆ ನಿದ್ರೆ ಬಂತೋ ಗೊತ್ತಿಲ್ಲ. ಬೆಳಗಿನ ಜಾವಕ್ಕೆ ಎಚ್ಚರಾದಾಗಲೂ ಆತ ಅವಳ ಕಡೆಗೇ ತಿರುಗಿ ಮಲಗಿದ್ದ. ಆತನ ಕೈ ಅವಳ ಕೈಯೊಳಗೆ ಹಾಗೇ ಇತ್ತು. ಇನ್ನು ಸಾಕು, ಇನ್ನೇನೂ ಆಗಲಾರದು ಅಂತ ಖಚಿತವಾದ ಮೇಲೆ ಆತನ ಕೈ ಕಿತ್ತೆಸೆದಳು. ಆತ ಏನೂ ಗೊತ್ತಾಗದವನಂತೆ ಹಾಗೇ ಬಿದ್ದುಕೊಂಡಿದ್ದ.

ಸ್ವಲ್ಪ ಹೊತ್ತಿಗೆ ಆತ ಎಚ್ಚರಾದ ನಟನೆ ಮಾಡಿದ. ಆಕೆಯನ್ನು ಮಾತಾಡಿಸಲು ಯತ್ನಿಸಿದ. ಅಷ್ಟರಲ್ಲಾಗಲೇ ಪುಸ್ತಕದಲ್ಲಿ ಮುಳುಗಿದ್ದ ಅವಳು ಪ್ರತಿಕ್ರಿಯಿಸಲಿಲ್ಲ. ಆತ ಉಗುರು ಕಚ್ಚುತ್ತ ಅವಳ ಪಕ್ಕದಲ್ಲಿ ಕೂತಿದ್ದರೆ, ಅವಳು ಬಂಡೆಕಲ್ಲಾಗಿದ್ದಳು.

ಅವಳೊಳಗೆ ಯೋಚನೆ ಸಾಗಿಯೇ ಇತ್ತು. ಇದು ನನಗೆ ಬೇಕಾಗಿದ್ದಾಗಿತ್ತಾ ಅಥವಾ ಬೇಡವಿದ್ದೂ ಅನಿವಾರ್ಯವಾಗಿ ಆತನ ಜತೆ ಅಷ್ಟು ಮಾತಾಡಿದೆನಾ ಅಥವಾ ನಾನು ಮಾತಾಡದಿರುವ ಆಯ್ಕೆ ಇತ್ತಾ? ಆತನ ಜತೆ ಮಾತಾಡಿದಾಗ ಖುಷಿಯಾಗಿದ್ದು ಸುಳ್ಳಾ? ಅಷ್ಟೆಲ್ಲ ತಿಳಿದುಕೊಂಡಂತಿದ್ದ ವ್ಯಕ್ತಿ ನಾ ಮಾತಾಡಿದ್ದೇ ಗಡಿ ಮೀರಲಿಕ್ಕೆ ಅನುಮತಿ ಎಂದುಕೊಂಡಿದ್ದು ಯಾಕಿರಬಹುದು? ಮನಸು ಕಲ್ಲಾಗಿದ್ದು ಯಾವ ಬಿಂದುವಿನಲ್ಲಿ?

ಅವಳ ತಲೆಯಲ್ಲಿ ಗಾಡಿ ಹೀಗೆಲ್ಲಓಡುತ್ತಿದ್ದರೂ ಬೇರೆ ಯಾರೂ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. ನಿನ್ನೆ ಅಷ್ಟೆಲ್ಲ ಮಾತಾಡುತ್ತಿದ್ದವರು ಇವತ್ತು ಯಾಕೆ ಮಾತಾಡುತ್ತಿಲ್ಲವೆಂದು ಯಾರಿಗೂ ಪ್ರಶ್ನೆಗಳಿದ್ದಂತೆ ಕಾಣಲಿಲ್ಲ. ಇವರ ನಡುವಿನ ಖಾಸಗಿ ವ್ಯವಹಾರಗಳು ಖಾಸಗಿಯಾಗಿಯೇ ಉಳಿದಿತ್ತು. ಎಲ್ಲವೂ ಸರಿಯಿತ್ತು. ಬಸ್ ಅದರ ಪಾಡಿಗೆ ಓಡುತ್ತಿತ್ತು. ಬದುಕೂ ಅದರ ಪಾಡಿಗೆ ಓಡುತ್ತಲೇ ಇತ್ತು.

Thursday, August 2, 2007

ನಿಶೆ, ನಶೆ, ಉಷೆ... ಮತ್ತು ಹೀಗೊಬ್ಬ ಪ್ರೀತಿಕಾರ :)

ಇಳೆಯನ್ನು ನಿಶೆ ತಬ್ಬಿಕೊಳ್ಳುತ್ತಿರುವ ತಂಪು ಹೊತ್ತಿನಲ್ಲಿ ನಶೆಯ ರಂಗೇರಿಸಿಕೊಂಡ ನಿಶಾಚರನೊಬ್ಬ ರಸ್ತೆ ಬದಿಯ ಮಸುಕು ದೀಪದಡಿ ಮಿಸುಕಾಡುತ್ತ ಕುಳಿತಿದ್ದ. ಅವನ ಜೋಶ್-ಬಾರಿತನಕ್ಕೆ ಕೈಲಿದ್ದ ಮೊಬೈಲು ಕಂಪೆನಿ ನೀಡಿತ್ತು.

ಮೊಬೈಲಿನ ಎಲ್ಲಾ ನಂಬರುಗಳನ್ನೂ ಒಂದರ ನಂತರ ಒಂದರಂತೆ ನೋಡುತ್ತ ಕುಳಿತವನಿಗೆ ಒಂದು ನಂಬರು ಸಿಕ್ಕಾಪಟ್ಟೆ ಸೆಳೆಯಿತು. ಅದು ಚಂದದ ನಂಬರಾಗಿ ಕಂಡಿತು. ಹಾಗೇ ಅದರಲ್ಲಿದ್ದ ಎಲ್ಲಾ ನಂಬರನ್ನೂ ಒಂದಕ್ಕೊಂದು ಕೂಡಿಸಿದ. ಒಂದೊಂದು ಸರ್ತಿ ಕೂಡಿಸಿದಾಗ ಒಂದೊಂದು ಉತ್ತರ ಬಂತು. ಅವನಿಗೆ ಪ್ರತಿಸಲ ಕೂಡಿಸಿದಾಗವೂ ಬೇರೆ ಬೇರೆ ಉತ್ತರ ಕೊಡುವ ಅದ್ಭುತ ನಂಬರು ಅಂತನಿಸಿತು... ಏನೋ ಕಂಡುಹಿಡಿದ ಹಾಗೆ ಸಿಕ್ಕಾಪಟ್ಟೆ ಖುಷಿಯಾಯಿತು.

ಬೇರೆಬೇರೆ ದಿಕ್ಕಿನಲ್ಲಿ ಮೊಬೈಲು ಹಿಡಿದು ತಿರುಗಿಸಿ ತಿರುಗಿಸಿ ನೋಡಿದ ಕುಡುಕ. ಹೇಗೆ ನೋಡಿದರೂ ಆ ನಂಬರಿನ ಚಂದ ಮತ್ತು ರಹಸ್ಯ ಇಮ್ಮಡಿಸುತ್ತ ಹೋಯಿತು. ಕೊನೆಗೆ ಮನಸೋತ ಕುಡುಕ ಆ ನಂಬರಿಗೆ ಒಂದು ಎಸ್ಸೆಮ್ಮೆಸ್ಸು ಕಳಿಸಿದ... 'ನೀನಂದ್ರೆ ನಂಗೆ ತುಂಬಾ ಪ್ರೀತಿ'!!

ಅಷ್ಟು ಕಳಿಸಿದ್ದೇ ತಡ, ಕುಡುಕನ ಹೃದಯ ಹಕ್ಕಿಯಾಗಿ ಡವಡವನೆ ಹೊಡೆದುಕೊಂಡಿತು... ಏನೋ ಸಂಭ್ರಮಕ್ಕೆ ಕಾಯತೊಡಗಿತು... ಚೂರು ಹೊತ್ತಿನ ನಂತರ ಆ ನಂಬರು ಮಾರುತ್ತರ ಕೊಟ್ಟಿತು... 'ಈ ಸಮಯದಲ್ಲಿ ಈ ಮಾತಾ? ಅದೂ ನಿನ್ನಿಂದ?'

ಕುಡುಕ ಡವಗುಟ್ಟುವ ಎದೆಯನ್ನು ಒಂದು ಕೈಯಲ್ಲಿ ನೀವಿಕೊಳ್ಳುತ್ತ ಉತ್ತರಿಸಿದ... 'ಹೌದು... ನನಗೆ ಹೇಳಲು ಭಯ... ನನಗೆ ಕೆಲದಿನಗಳಿಂದ ಹೊಸದಾಗಿ ನೀನು ಕಾಡುತ್ತಿದ್ದೀಯ... ಇದನ್ನು ಹೇಳಲು ಈಗ ಧೈರ್ಯ ಬಂದಿದೆ...'

ನಂಬರು ಸ್ವಲ್ಪ ಸಮಯದ ನಂತರ ಉತ್ತರಿಸಿತು... 'ತಿಂಗಳ ಬೆಳಕು, ತಂಪು ಗಾಳಿ, ರಾತ್ರಿಯ ಅಮಲು ಹುಟ್ಟಿಸುವ ಮ್ಯಾಜಿಕ್, ಬೆಳಗಿನ ಸೂರ್ಯ ಹುಟ್ಟಿದಾಗ ನಿಜದ ಬಿಸಿಲಿಗೆ ಕರಗಿಹೋಗುತ್ತೆ... ಎಲ್ಲೋ ಒಂದು ಸ್ವರ ಮನಸನ್ನ ಮಿಡಿಯುತ್ತೆ... ಇನ್ನೆಲ್ಲೋ ಒಂದು ಮುಖ ಕನಸಾಗಿ ಕಾಡುತ್ತೆ... ಇವತ್ತು ಮನಸಲ್ಲೇನೋ ಹುಟ್ಕೊಳ್ಳುತ್ತೆ... ನಾಳೆ ಅದೃಶ್ಯವಾಗುತ್ತೆ... ಹಗಲನ್ನ ಮತ್ತು ನಿಜವನ್ನ ಎದುರಿಸೋ ಧೈರ್ಯ ಇರೋದು ಮಾತ್ರ ಉಳ್ಕೊಳ್ಳತ್ತೆ...'

ಕುಡುಕ ಇದನ್ನು ಒಂದು ಸಲ ಓದಿದ. ಅರ್ಥವಾಗಲಿಲ್ಲ. ಎರಡು ಸಲ ಓದಿದ. ಅರ್ಥವಾಗಲಿಲ್ಲ. ಮೂರು ಸಲ ಓದಿದ. ಅರ್ಥವಾಗಲಿಲ್ಲ. ನಾಲ್ಕನೇ ಸಲವೂ ಅರ್ಥವಾಗಲಿಲ್ಲ. ಐದನೇ ಸಲ ಎಲ್ಲವೂ ಕಲಸುಮೇಲೋಗರವಾಯಿತು, ತಲೆ ಕೆರೆದುಕೊಂಡ ರಭಸಕ್ಕೆ ನಾಲ್ಕು ಕೂದಲು ಕಿತ್ತುಬಂತು.

ಯಾಕೋ ಇವತ್ತು ಪರಮಾತ್ಮ ಸ್ವಲ್ಪ ಹೆಚ್ಚಾದ ಹಾಗಿದೆ, ಇದೇನು ಅಂತಲೇ ಅರ್ಥವಾಗುತ್ತಿಲ್ಲವಲ್ಲ... ಇಷ್ಟು ಚಂದದ ನಂಬರು ಹೀಗ್ಯಾಕೆ ಮೆಸೇಜು ಕಳಿಸುತ್ತೆ ಅಂತ ಮೂಗಿನ ಮೇಲೆ ಬೆರಳಿಟ್ಟು ಯೋಚಿಸಿದ... 'ಹಂಗಂದ್ರೇನು, ಅರ್ಥವಾಗಲಿಲ್ಲ, ನಾನು ದಡ್ಡ, ಬಿಡಿಸಿ ಹೇಳು' ಅಂತ ಮತ್ತೆ ಮೆಸೇಜು ಮಾಡಿ ನಂಬರಿಗೆ ಕೇಳಿದ.

ನಂಬರು 'ಅರ್ಥಗಳು ನೀನು ಕಟ್ಟಿಕೊಂಡ ಹಾಗಿರುತ್ತವೆ' ಅಂತ ಉತ್ತರಿಸಿತು.

ಅರ್ಥಗಳನ್ನು ನಾನು ಕಟ್ಟಿಕೊಳ್ಳುವುದೆಂದರೇನು, ಹೇಗೆ? ಈ ನಂಬರೇ ಹಾಗೆ ಹೇಳುತ್ತದಾದರೆ ಅರ್ಥ ಕಾಣುತ್ತದೆ ಅಂತಾಯಿತಲ್ಲ. ಇಲ್ಲೇ ಎಲ್ಲಿಯೋ ಇರಬೇಕು. ಕಂಡರೆ ಕಟ್ಟಬಹುದು, ಕಾಣದಿದ್ದರೆ ಹುಡುಕಿಕೊಂಡು ಎಲ್ಲಿ ಹೋಗುವುದು, ಹೇಗೆ ಕಟ್ಟುವುದು ಅಂತೆಲ್ಲ ಯೋಚಿಸಿ ತಲೆಬಿಸಿಯಾಯಿತು.

ಇರಲಿರಲಿ, ಈಗ ರಾತ್ರಿ ಬಹಳವಾಗಿದೆ, ಏನೂ ಕಾಣಿಸುತ್ತಿಲ್ಲ, ರಸ್ತೆದೀಪದ ಬೆಳಕು ಸಾಲುತ್ತಿಲ್ಲ, ನಾಳೆ ಸೂರ್ಯ ಹುಟ್ಟಲಿ, ಅರ್ಥ ಎಲ್ಲಿದ್ದರೂ ಹುಡುಕಿ ಕಟ್ಟುತ್ತೇನೆ ಅಂತ ಪ್ರತಿಜ್ಞೆ ಮಾಡಿ ಕುಡುಕ ರಸ್ತೆಬದಿಯಲ್ಲೇ ಬಿದ್ದುಕೊಂಡು ನಿದ್ದೆ ಹೋದ.

........................

ತಿಂಗಳ ಬೆಳಕು ಕರಗಿ ಉಷೆ ಮೆಲ್ಲನೆ ಮುಸುಕು ತೆಗೆದು ಹೊರಗಿಣುಕಿದಳು. ಅವಳ ಕಿರುನಗುವಿನ ಎಳೆಬಿಸಿಲು ಜಗವೆಲ್ಲ ಹಬ್ಬಿ, ರಸ್ತೆಬದಿಯಲ್ಲಿ ಮಲಗಿದವನ ಮುಖದ ಮೇಲೆ ತುಂಟುತುಂಟಾಗಿ ಕುಣಿದು ಎಬ್ಬಿಸಿತು. ಆತ ಎದ್ದು ಕುಳಿತ. ನಿದ್ರೆ ರಾತ್ರಿಯ ನೆನಪೆಲ್ಲ ಅಳಿಸಿ ಹಾಕಿದ್ದಳು. ಅರ್ಥವನ್ನು ಹುಡುಕಿ ಕಟ್ಟಬೇಕೆಂದು ಆತ ಮಾಡಿದ ಪ್ರತಿಜ್ಞೆ ಅಲ್ಲೇ ಪಕ್ಕದ ಚರಂಡಿ ಪಾಲಾದಳು. ಮೈಮುರಿಯುತ್ತ ಎದ್ದು ಮನೆಯ ಹಾದಿ ಹಿಡಿದು ನಡೆದ ಆತ.

ಹೀಗೆ ಅಮಲು ಇಳಿದಿತ್ತು. ಪ್ರೀತಿ ಅಳಿದಿತ್ತು. ತಿಂಗಳ ಬೆಳಕಿನ ಜತೆ ಹಾರಿ ಬಂದು ಮೊಬೈಲಿನಲ್ಲಿ ಕುಳಿತಿದ್ದ ಮೆಸೇಜು, ನಿಶೆನಶೆಯರು ಹುಟ್ಟಿಸಿದ ಪ್ರೀತಿ ಉಷೆಗೆ ಹೆದರಿ ಕಾಣೆಯಾಗಿದ್ದು ಕಂಡು ಸದ್ದಿಲ್ಲದೆ ನಗುತ್ತಿತ್ತು.

Thursday, July 26, 2007

ಒಂದಿಷ್ಟು ಮಳೆಗಾಲ, ಮೀನು ಮತ್ತು ಚಿನ್ನು

ಕಮಲನ ಮನೆಯಲ್ಲಿದ್ದ ದೊಡ್ಡ ಕರಿ ಭೂತಬೆಕ್ಕು ಕಳೆದ ಬೇಸಗೆ ಶುರುವಾಗುತ್ತಿದ್ದಂತೆ ಒಂದೇ ಸಲಕ್ಕೆ ಆರು ಮರಿ ಹಾಕಿತ್ತು. ಅಲ್ಲೇ ಇದ್ದ ಪುಟ್ಟಣ್ಣಜ್ಜನ ಮನೆಗೆ ಹಾಲು ತರಲು ಅಮ್ಮನ ಜತೆ ಚಿನ್ನು ಹೋಗಿದ್ದಾಗ 'ಪುಚ್ಚೆ ಕಿಞ್ಞಿ ದೀತುಂಡು, ತೂಪರಾ ಅಕ್ಕ' ಅಂತ ಕಮಲ ಕರೆದಿದ್ದಳು. ಚಿನ್ನುವಿಗೆ ಬೆಕ್ಕೆಂದರೆ ತುಂಬ ಇಷ್ಟವಾದ ಕಾರಣ ಅಮ್ಮನಿಗೂ ಮನೆಗೊಂದು ಬೆಕ್ಕಿನ ಮರಿ ತರೋಣವೆಂದು ಮನಸಿತ್ತು. ಹಾಗೆ ಚಿನ್ನು ಮತ್ತೆ ಅಮ್ಮ ಕಮಲನ ಮನೆಗೆ ಹೋದರು.

ಇನ್ನೂ ಪೂರ್ತಿ ಕಣ್ಣು ಬಿಡದ ಕರಿಯ ಮತ್ತು ಕಪ್ಪು-ಬಿಳಿ ಚುಕ್ಕೆಯಿದ್ದ ಮರಿಗಳ ಜತೆಗೆ ಹಾಲು ಬಣ್ಣದ ಮರಿಯೊಂದಿತ್ತು. ಕಣ್ಣುಗಳು ಅವಾಗಷ್ಟೆ ಚೂರೇ ಚೂರು ಬಿರಿಯುತ್ತ, ತನ್ನ ಗುಲಾಬಿ ಬಣ್ಣದ ತುಟಿಗಳನ್ನು ಅರೆತೆರೆದು ಅದೇನನ್ನೋ ಹುಡುಕುತ್ತಿದ್ದ ಮುದ್ದು ಬಿಳಿ ಮರಿ ಚಿನ್ನುಗೆ ಮೊದಲ ನೋಟಕ್ಕೇ ಆತ್ಮೀಯವಾಗಿಬಿಟ್ಟಿತು. ಚಿನ್ನು ಮೆಲ್ಲನೆ ತನ್ನ ಕಿರಿಬೆರಳು ಅದರ ಬಾಯಿಯ ಹತ್ತಿರ ತಂದರೆ ತುಂಟುಮರಿ ತನ್ನ ಪುಟ್ಟಪುಟ್ಟ ಬಿಳಿಯ ಹಲ್ಲುಗಳಿಂದ ಬೆರಳನ್ನು ಮೆತ್ತಗೆ ಕಚ್ಚಿತು. ಚಿನ್ನುಗೆ ಖುಷಿಯೋ ಖುಷಿ.

ಆಮೇಲಿನ ದಿನಗಳಲ್ಲಿ ಚಿನ್ನು ದಿನಾ ಸಂಜೆಯಾಗಲು ಕಾಯುತ್ತಿದ್ದಳು. ಅಮ್ಮನ ಜತೆ ಹಾಲಿಗೆಂದು ಹೋಗಿ, ತಾನು ಕಮಲನ ಮನೆಯಲ್ಲುಳಿದು, ಪುಟ್ಟಮರಿಗಳ ಜತೆ ಅಮ್ಮ ಬರುವವರೆಗೆ ಆಡುತ್ತಿದ್ದಳು. ಮರಿಗಳು ಸ್ವಲ್ಪ ದೊಡ್ಡದಾಗತೊಡಗಿದಾಗ ಚಿನ್ನು ಮತ್ತು ಅಮ್ಮ ಹಾಲು ಬಣ್ಣದ ಮರಿಯನ್ನು ಮನೆಗೆ ತಂದರು. ಚುರುಕು ಚುರುಕಾಗಿ ಮೀನಿನಂತೆ ಅತ್ತಿತ್ತ ಓಡಾಡುತ್ತಿದ್ದ ಅದಕ್ಕೆ ಮೀನು ಅಂತ ಹೆಸರಿಟ್ಟರು.
ooooooooooooooooooooooooooooooo

ಮೀನು ಬಂದಮೇಲೆ ಚಿನ್ನುವಿನ ದಿನಚರಿಯೇ ಬದಲಾಯಿತು. ಚಿನ್ನು ಬೆಳಿಗ್ಗೆ ಎದ್ದು ಸ್ನಾನಕ್ಕೆ ಹೋದಾಗ ಹಿಂಬಾಲಿಸಿ ಬಚ್ಚಲೊಳಗೆ ಸೇರಿಕೊಳ್ಳುವ ಮೀನು, ಬಚ್ಚಲುಮನೆಯ ಕಟ್ಟೆಯ ಮೇಲೆ ಕುಳಿತು ಕಣ್ಣು ಪಿಳಿಪಿಳಿ ಬಿಡುತ್ತಾ ನೋಡುತ್ತಿದ್ದರೆ, ಚಿನ್ನು ಪ್ರೀತಿಯಿಂದ ಮೀನುಗೆ ಬೈಯುತ್ತಿದ್ದಳು. ಚಿನ್ನು ರಾತ್ರಿ ಮಲಗುವಾಗ ತನ್ನ ಜತೆ ಮೀನುವನ್ನೂ ಮಲಗಿಸಿಕೊಳ್ಳುತ್ತಿದ್ದಳು. ಅದು ಅಮ್ಮನಿಗೆ ಅಷ್ಟು ಇಷ್ಟವಾಗುತ್ತಿರಲಿಲ್ಲ. ಆದರೆ ಅದು ಹೇಗೋ ಅಮ್ಮನ ಕಣ್ಣು ತಪ್ಪಿಸಿ ಚಿನ್ನುವಿನ ಹೊದಿಕೆಯೊಳಗೆ ತೂರಿಕೊಂಡು ಪುರುಗುಡುತ್ತ ಬೆಚ್ಚಗೆ ಮಲಗುತ್ತಿದ್ದಳು ಮೀನು, ಬೆಳಗ್ಗೆ ಅಮ್ಮನಿಗೆ ಗೊತ್ತಾಗದಂತೆ ಚಿನ್ನುವಿನ ಪಕ್ಕದಿಂದ ಜಾರಿಕೊಳ್ಳುತ್ತಿದ್ದಳು. ಇವರ ಕಣ್ಣು ಮುಚ್ಚಾಲೆಯಾಟವನ್ನು ಅಮ್ಮ ನೋಡಿಯೂ ನೋಡದಂತಿರುತ್ತಿದ್ದಳು.

ಅಲ್ಲಿಯ ವರೆಗೆ ದಿನಾ ಸಂಜೆಹೊತ್ತು ಅಜ್ಜನಿಗೆ ರಾಮಾಯಣ, ಭಾಗವತ, ಜೈಮಿನಿ ಭಾರತ ಓದಿಹೇಳುತ್ತ ಹೆಚ್ಚಿನ ಸಮಯ ಕಳೆಯುತ್ತಿದ್ದ ಚಿನ್ನು ಈಗ ಹೆಚ್ಚಿನ ಸಮಯ ಮೀನುವಿನ ಜತೆ ಆಟದಲ್ಲಿ ಕಳೆಯುತ್ತಿದ್ದಳು. ಅಜ್ಜ ಕಟ್ಟಿಟ್ಟಿದ್ದ ಕನ್ನಡಕವನ್ನು ಮತ್ತೆ ಹಾಕಿಕೊಂಡು ಸಂಜೆಹೊತ್ತು ತಾವೇ ಏನಾದರೂ ಓದುತ್ತ ಕೂರುವುದು ಆರಂಭವಾಯಿತು.

ಚಿನ್ನು ಮೀನು ಹೋದಲ್ಲೆಲ್ಲ ಹೋಗುತ್ತಿದ್ದಳು. ಚಿಟ್ಟೆ ಹಿಡಿಯಲು ನೋಟ ಹಾಕುತ್ತ ಮೀನು ಕೂತಿದ್ದರೆ, ಚಿನ್ನು ಅಲ್ಲಿ ಹೋಗುವಳು. ಅವಳು ಮೆಲ್ಲಮೆಲ್ಲಗೆ ಹೆಜ್ಜೆಯಿಟ್ಟಲ್ಲಿ ಹುಲ್ಲುಗಳು ಮೆಲ್ಲಗೆ ಅಲುಗಾಡಿರೂ ಚಿಟ್ಟೆಗಳಿಗೆ ಯಾರೋ ಬಂದರು ಅಂತ ಗೊತ್ತಾಗಿ ಅಲ್ಲಿಂದ ಎದ್ದು ಹಾರುವವು. ಅಷ್ಟು ಹೊತ್ತು ಸಮಯ ಕಾಯುತ್ತ ನೋಟ ಹಾಕುತ್ತಿದ್ದ ಮೀನುಗೆ ನಿರಾಸೆ. ಮತ್ತೆ ಎದ್ದು ಬಂದು ಪಕ್ಕಕ್ಕೆ ನಿಂದು ಚಿನ್ನುವಿನ ಕಾಲಿಗೆ ಜೋರಾಗಿ ತಲೆ ಉಜ್ಜುತ್ತ ತನ್ನ ಭಾಷೆಯಲ್ಲಿ ಬೈದುಕೊಳ್ಳುತ್ತ ಏನೋ ಹೇಳುತ್ತಿದ್ದಳು. ಚಿನ್ನು ಇನ್ನೆಲ್ಲಿ ಚಿಟ್ಟೆ ಕೂತಿದೆ ಅಂತ ಹುಡುಕುತ್ತಿದ್ದಳು.

ಪ್ರತಿ ವರ್ಷ ಮನೆಯ ಕೆಳಗೆ ಹರಿಯುವ ಪುಟ್ಟ ತೋಡಿಗೆ ಕಟ್ಟ ಕಟ್ಟುತ್ತಾರೆ. ಆ ನೀರಿನಿಂದ ಚಳಿಗಾಲದಲ್ಲಿ ಮತ್ತು ಬೇಸಗೆಯಲ್ಲಿ ತೋಟಕ್ಕೆ ನೀರು ಹಾಯಿಸುತ್ತಾರೆ. ಕಟ್ಟದಲ್ಲಿ ನೀರು ತುಂಬಿದಾಗ ಅದು ಒಂದು ಪುಟ್ಟ ತೂಬಿನ ಮೂಲಕ ಹರಿಯುತ್ತ ಮತ್ತೆ ತೋಡಿಗೆ ಸೇರಿ ತೋಡು ಮುಂದೆ ಹರಿಯುತ್ತದೆ. ಈ ತೋಡಿನ ಆರಂಭದ ಜಾಗದಲ್ಲಿ ಚಿನ್ನು ಯಾವಾಗಲೂ ಹೋಗಿ ಕುಳಿತು ನೀರಿನಲ್ಲಿ ಆಡುತ್ತಿರುತ್ತಾಳೆ.

ಅಲ್ಲಿ ಓಡಾಡುವ ಪುಟ್ಟ ಪುಟ್ಟ ಮೀನುಗಳನ್ನು ನೋಡುವುದು, ಅವಕ್ಕೆ ಅಕ್ಕಿಕಾಳು, ಅನ್ನ, ಅರಳು ಇತ್ಯಾದಿ ಹಾಕುವುದು, ಪಾದದಿಂದ ಸ್ವಲ್ಪವೇ ಮೇಲಕ್ಕೆ ಬರುವ ನೀರಿನಲ್ಲಿ ನಿಂತು, ಮೀನುಗಳಿಂದ ಕಾಲಿಗೆ ಕಚ್ಚಿಸಿಕೊಳ್ಳುವುದು, ಕಚಗುಳಿ ಅನುಭವಿಸುವುದು ಚಿನ್ನುಗೆ ಸಂತೋಷ ಕೊಡುವ ದಿನನಿತ್ಯದ ಆಟ. ಅದರಲ್ಲೂ ಒಂದು ಪುಟ್ಟ ಮರಿಮೀನು, ಸಣ್ಣ ಕೆಂಪು ಚುಕ್ಕೆಯಿರುವ ಮೀನುಮರಿ ಭಯಂಕರ ತುಂಟ. ಚಿನ್ನುವಿನ ಬಿಳೀ ಕಾಲಿಗೆ ಸಿಕ್ಕಾಪಟ್ಟೆ ಕಚ್ಚಿ ಕಚ್ಚಿ ಕಚಗುಳಿಯಿಡುತ್ತದೆ. ಈ ತುಂಟಮೀನನ್ನೂ ಸೇರಿಸಿದಂತೆ ಪುಟ್ಟ ಪುಟ್ಟ ಮೀನುಮರಿಗಳನ್ನು ಕೈಯಲ್ಲೇ ಅಟ್ಟಿಸಿ ಅಟ್ಟಿಸಿ ನೀರು ಸ್ವಲ್ಪ ಕಡಿಮೆಯಿದ್ದಲ್ಲಿಗೆ ತಂದು, ಅವುಗಳ ಸುತ್ತ ಹೊಯಿಗೆಯ ಕೋಟೆ ಕಟ್ಟಿ ಕೂಡಿಹಾಕಿ ಅವುಗಳ ಓಡಾಟ ಹತ್ತಿರದಿಂದ ನೋಡಿ ಮಜಾ ಮಾಡುವುದು ಚಿನ್ನುಗೆ ಅಭ್ಯಾಸ.

ಮೀನು ಬಂದ ಮೇಲೆ ಚಿನ್ನು ಅವಳನ್ನೂ ಜತೆಗೆ ಕರೆದುಕೊಂಡು ಹೋಗತೊಡಗಿದಳು. ಚಿನ್ನು ನೀರಿನಲ್ಲಿ ಆಡುತ್ತಿದ್ದರೆ ಮೊದಮೊದಲು ನೀರಿಗೆ ಹೆದರಿ ದೂರ ನಿಂತು ನೋಡುತ್ತಿದ್ದಳು ಮೀನು. ನಿಧನಿಧಾನವಾಗಿ ತಾನೂ ನೀರಿಗಿಳಿಯದೆ, ಕೈಕಾಲು ಒದ್ದೆ ಮಾಡಿಕೊಳ್ಳದೆ ಗಮ್ಮತ್ತು ಮಾಡತೊಡಗಿದಳು. ಚಿನ್ನು ಹೊಯಿಗೆ ಕೋಟೆ ಕಟ್ಟಿ ಮೀನುಮರಿಗಳನ್ನು ಕೂಡಿಹಾಕುತ್ತ ಸಂಭ್ರಮಿಸಿದರೆ, ಮೀನು ಅದರ ಹತ್ತಿರ ನೀರಿಲ್ಲದ ಜಾಗದಲ್ಲಿ ಕುಳಿತು ಮೀನುಗಳ ಓಡಾಟಕ್ಕೆ ಸರಿಯಾಗಿ ತಾನೂ ತಲೆ ಕುಣಿಸುತ್ತ ಕೂರುತ್ತಿದ್ದಳು.
ooooooooooooooooooooooooooooooo

ಹೀಗೇ ಒಂದು ದಿನ ಚಿನ್ನು ಮತ್ತು ಮೀನು ನೀರಲ್ಲಿ ಆಡುತ್ತಿದ್ದರು. ಹೊಯಿಗೆಕೋಟೆಯೊಳಗೆ ನಾಲ್ಕೈದು ಮೀನು ಮರಿಗಳನ್ನು ಕೂಡಿಹಾಕಿ ಗಮ್ಮತ್ತುಮಾಡುತ್ತಿದ್ದಳು ಚಿನ್ನು. ಮೀನು ಎಂದಿನಂತೆ ಬದಿಯಲ್ಲಿ ಕುಳಿತು ಮೀನುಗಳಾಟವನ್ನು ಗಮನವಿಟ್ಟು ನೋಡುತ್ತಿದ್ದಳು. ಅವಾಗ ಅಕಸ್ಮಾತ್ತಾಗಿ ಆ ಕೆಂಪು ಚುಕ್ಕೆಯ ತುಂಟ ಮೀನಿನ ಮರಿ ಮರಳುಕೋಟೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಹಾರಿ, ನೀರಿಲ್ಲದಲ್ಲಿ ಹೊಯಿಗೆಕಲ್ಲುಗಳ ಮೇಲೆ ಬಿದ್ದಿತು. ವಿಲವಿಲನೆ ಒದ್ದಾಡಿ ಎತ್ತರೆತ್ತರಕ್ಕೆ ಹಾರಿತು.

ಅಷ್ಟೇ ಅನಿರೀಕ್ಷಿತವಾಗಿ ಟಪಕ್ಕನೆ ಕೂತಲ್ಲಿಂದ ಜಿಗಿದ ಮೀನು ಆ ಮೀನುಮರಿ ಹಾರಿದಂತೆಲ್ಲ ಹಾರಿ, ಕೊನೆಗೂ ಅದನ್ನು ಹಿಡಿದು, ಹೊಡೆದು, ಬೀಳಿಸಿ, ಕಚ್ಚಿ, ಬಾಯಿಯೊಳಗೆ ಹಾಕಿಕೊಂಡು 'ಮುರ್ರ್...' ಅಂತ ಶಬ್ದ ಮಾಡುತ್ತ, ತುಂಟು ಮೀನಿನ ಮರಿಯನ್ನು ತಿಂದೇ ಬಿಟ್ಟಳು. ಚಿನ್ನುಗೆ ಏನೂ ಯೋಚಿಸುವ ಅವಕಾಶವೇ ಕೊಡದೆ ನಡೆದ ಈ ಎಲ್ಲ ಘಟನೆಗಳನ್ನೆಲ್ಲಾ ನೋಡುತ್ತ ಏನು ಮಾಡಬೇಕೋ ತಿಳಿಯದೆ ಚಿನ್ನು ಸುಮ್ಮನೆ ಕೂತುಬಿಟ್ಳು.

ಮೀನು ತಿಂದಾದಮೇಲೆ ಮೀನು ಹೊಯಿಗೆ ಮೇಲೆ ಕುಕ್ಕರಗಾಲಲ್ಲಿ ಕುಳಿತು ಒಂದು ಕೈ ನೆಲಕ್ಕೂರಿ ಕಣ್ಣುಮುಚ್ಚಿ ಇನ್ನೊಂದು ಕೈಯಲ್ಲಿ ಸುಖವಾಗಿ ಮುಖ ಉಜ್ಜಿಕೊಳ್ಳುತ್ತ ಕೈಯನ್ನು ನೆಕ್ಕತೊಡಗಿದಳು. ಹೀಗೆ ಮೀನು ದಿವ್ಯ ಆನಂದವನ್ನು ಅನುಭವಿಸುತ್ತಿದ್ದರೆ, ಅದೇನೋ ತಪ್ಪುಮಾಡಿದ ಭಾವ ಚಿನ್ನುವಿನಲ್ಲಿ. ಛೆ, ತಾನು ಹೊಯಿಗೆ ಕೋಟೆ ಕಟ್ಟಿ ಆ ತುಂಟುಮೀನನ್ನು ಕೂಡುಹಾಕದಿದ್ದರೆ ಮೀನುಗೆ ಅದನ್ನು ಹಿಡಿದು ತಿನ್ನಲು ಸಿಗುತ್ತಲೇ ಇರಲಿಲ್ಲ, ತಾನು ಹೊಯಿಗೆಕೋಟೆ ಕಟ್ಟಿ ಆಡಬಾರದಿತ್ತೇನೋ ಅನ್ನುವ ಸಂಶಯ. ಜತೆಗೆ ಆ ಪುಟ್ಟ ಮೀನಿನ ಮರಿಗೆ ಅದೆಷ್ಟು ನೋವಾಯಿತೋ, ಕೊಂದು ತಿಂದೇ ಬಿಟ್ಟಳು ರಾಕ್ಷಸಿ ಅಂತ ಮೀನುಳ ಮೇಲೆ ಕೋಪ. ಕೆಂಪು ಚುಕ್ಕೆಯ ತುಂಟು ಮೀನುಮರಿಯಿಂದ ಕಚ್ಚಿಸಿಕೊಳ್ಳುವುದು ಇನ್ನೆಂದಿಗೂ ಇಲ್ಲ ಅಂತ ಸಂಕಟ. ಅಜ್ಜನಿಗೆ ಇದೆಲ್ಲವನ್ನ ಹೇಳಿದರೆ, ಅಜ್ಜ ನಕ್ಕುಬಿಟ್ಟರು.

ಆದರೆ ಎಷ್ಟು ಬೈದುಕೊಂಡರೂ ತುಂಟು ಮೀನಿನ ಮರಿಯ ಮೇಲೆ ಎಷ್ಟು ಪ್ರೀತಿ ಇತ್ತೋ ಮೀನುಳ ಮೇಲೆ ಅದಕ್ಕಿಂತ ಒಂದು ತೊಲ ಹೆಚ್ಚೇ ಪ್ರೀತಿ ಚಿನ್ನುಗೆ. ಎಷ್ಟಂದರೂ ನನ್ನ ಮೀನು ತಾನೆ ಅಂತ.

ಮರುದಿನ ಚಿನ್ನು ಸುಮ್ಮನೆ ಮನೆಯಲ್ಲಿ ಕುಳಿತುಕೊಂಡಿದ್ದರೆ, ಮೀನು ಪಕ್ಕಕ್ಕೆ ಬಂದು, ಮಡಿಲೇರಿ ನಿಂದು ಅವಳ ಗದ್ದಕ್ಕೆ ತನ್ನ ಮುಖವನ್ನು ತಾಡಿಸುತ್ತ ನೀರಲ್ಲಿ ಆಡಲು ಹೋಗೋಣ ಅಂತ ಹಠ ಮಾಡಿದಳು. ಮೀನಿನ ರುಚಿ ಸಿಕ್ಕಿದೆ ನಿಂಗೆ ರಕ್ಕಸಿ ಅಂತ ಬೈದಳು ಚಿನ್ನು. ಹಾಗೇ ಕೊನೆಗೆ ಮೀನುನ ರಗಳೆ ತಡೆಯದೆ ನೀರಲ್ಲಾಡಲು ಹೋದಳು ಚಿನ್ನು. ಅಲ್ಲಿ ಹೋಗಿ ನೀರಲ್ಲಿ ಕಾಲು ಮುಳುಗಿಸಿ ನಿಂತಳು ಚಿನ್ನು, ಕಾಲಿಗೆ ಮೀನು ಕಚ್ಚತೊಡಗಿದವು. ಹಾಗೇ ನೋಡುತ್ತಾಳೆ, ಬೇರೆಲ್ಲಾ ಮೀನುಗಳ ಜತೆ ಕೆಂಪು ಚುಕ್ಕೆಯ ಎರಡು ಮೀನುಗಳಿವೆ..! ಯಾಕೋ ಚಿನ್ನುಗೆ ತುಂಬ ಸಮಾಧಾನವಾಯಿತು. ಅಜ್ಜನಿಗೆ ಹೇಳಿದರೆ ಅಜ್ಜ 'ಆ ಸತ್ ಹೋದ ಮೀನು ಸ್ವರ್ಗಂದ ಇನ್ನೆರಡ್ ಮೀನ್ ಕಳ್ಸಿಂತ್ ಕಾಣ್' ಅಂತ ವೀಳ್ಯದೆಲೆ ತಿಂದು ಕೆಂಪಾದ ಬೊಚ್ಚು ಬಾಯಿ ಬಿಟ್ಟು ನಕ್ಕರು.
ooooooooooooooooooooooooooooooo

ಚಿನ್ನು ಮತ್ತು ಮೀನು ಆಡುತ್ತಿದ್ದ ಇನ್ನೊಂದು ಆಟವೆಂದರೆ, ಅಡಿಕೆ ಅಂಗಳದಲ್ಲಿ. ಬಿದಿರುಮುಳ್ಳಿನ ಬೇಲಿ ಹಾಕಿ ಅಂಗಳದ ಭಾಗವೊಂದನ್ನು ಅಡಿಕೆ ಒಣಗಿಸಲು ಮೀಸಲಿಡುತ್ತಿದ್ದರು. ಸಂಜೆ ಹೊತ್ತು ಮೀನು ಹೋಗಿ ಹರವಿದ್ದ ಅಡಿಕೆಯ ನಡುವೆ ಕೂರುವಳು. ಎಲ್ಲಾ ಕಡೆ ದೃಷ್ಟಿ ಬೀರುವಳು. ಇದ್ದಕ್ಕಿದ್ದಂತೆ ತನ್ನ ಪಕ್ಕದಲ್ಲಿರುವ ಕಿತ್ತಳೆ ಬಣ್ಣದ ಸಿಪ್ಪೆ ಜೂಲುಜೂಲಾಗಿ ಹೊರಬಂದ ಹೊಸ ಹಣ್ಣಡಿಕೆಯನ್ನು ಕಚ್ಚಿಕೊಂಡು ಆಟವಾಡತೊಡಗುವಳು. ಅದನ್ನು ಮುಂಗೈಯಲ್ಲಿ ಹೊತ್ತು ಬಾಯಿಂದ ಕಚ್ಚುತ್ತ ನೆಲದಲ್ಲಿ ಉರುಳಿ ಉರುಳಿ ಜಗಳಾಡುವಳು. ಯಾವುದೋ ಹಾವಿನೊಡನೆಯೋ ಹಲ್ಲಿಯೊಡನೆಯೋ ಕಾದಾಡುವ ರೀತಿಯಲ್ಲಿ ಜೀವವಿಲ್ಲದ ಹಣ್ಣಡಿಕೆಯೊಂದಿಗೆ ಮೀನು ಜಗಳಾಡುತ್ತಿದ್ದರೆ, ಚಿನ್ನುವಿಗೆ ಅದು ನೋಡಲು ಎಲ್ಲಿಲ್ಲದ ಸಂಭ್ರಮ.

ಚಿನ್ನು ಮೀನುನೆದುರಿಗೆ ನಿಂತು ಅಜ್ಜನ ಊರುಗೋಲನ್ನೋ ದಾರವನ್ನೋ ಅಲ್ಲಾಡಿಸುತ್ತ ಮೀನುಳಿಗೆ ಅದು ಹಾವು ಅಥವಾ ಜೀವವಿರುವ ಪ್ರಾಣಿ ಅಂತ ಭ್ರಮೆ ತರಿಸುವಳು. ಮೀನು ಹಾರಿ ಹಾರಿ ಅದನ್ನು ಹಿಡಿಯ ಹೊರಟಾಗ ಅವಳಿಗೆ ಎಟುಕಗೊಡದೆ ಎತ್ತರೆತ್ತರಕ್ಕೆ ಅಲ್ಲಾಡಿಸುವಳು. ಅಜ್ಜ ಇವರ ಎಲ್ಲಾ ಆಟಗಳನ್ನು ದೂರ ನಿಂತು ನೋಡುವರು.
ooooooooooooooooooooooooooooooo

ಬೇಸಗೆ ಮುಗಿಯುತ್ತ ಬಂದಿತ್ತು. ಆಳುಗಳು ಅಂಗಳದಲ್ಲಿದ್ದ ಅಡಿಕೆಯನ್ನೆಲ್ಲ ಬಾಚಿ ಗೋಣಿಯಲ್ಲಿ ಕಟ್ಟಿ, ಬಿದಿರುಮುಳ್ಳಿನ ಬೇಲಿಯನ್ನು ತೆಗೆದು ಮನೆಯ ಬದಿಯಲ್ಲಿಟ್ಟು ಅಂಗಳವನ್ನು ಖಾಲಿ ಮಾಡಿದರು. ಚಿನ್ನು ಮತ್ತು ಮೀನುನಿಗೆ ಆಡಲು ಅಡಿಕೆಯಂಗಳ ಇಲ್ಲವಾಯಿತು. ಅಷ್ಟರಲ್ಲಿ ಗಂಗಾವತಾರವಾಗಿ ಮಳೆಗಾಲ ಬಂದುಬಿಟ್ಟಿತು. ಅಜ್ಜ ಚಿನ್ನುವಿಗೆ ಶಾಲೆಗೆ ಸೇರಿಸಿದರು. ಚಿನ್ನು ಶಾಲೆಚೀಲ ಹೆಗಲಿಗೇರಿಸಿ ಮಳೆಗೆ ನೆನೆಯದ ಹಾಗೆ ರೈನ್-ಕೋಟ್ ಹಾಕಿಕೊಂಡು ಅಕ್ಕಪಕ್ಕದ ಮನೆಯ ಮಕ್ಕಳೊಂದಿಗೆ ಶಾಲೆಗೆ ಹೋಗತೊಡಗಿದಳು.

ಆಟಿಯ ಮಳೆ ಎಡೆಬಿಡದೆ ಸುರಿಯಿತು. ಗುಡ್ಡದ ನೀರೆಲ್ಲ ತೋಡಿಗೆ ಬಂದು, ಕಟ್ಟ ಕಡಿದು, ತೋಡಿನ ಎಂದಿನ ಸೌಮ್ಯರೂಪ ಕಳೆದು, ಸಿಕ್ಕಸಿಕ್ಕಿದ್ದೆಲ್ಲ ಕೊಚ್ಚಿಕೊಂಡು ಕೆಂಪಾಗಿ ಮೈದುಂಬಿ ಹರಿಯಿತು. ಚಿನ್ನು ಮತ್ತು ಮೀನು ಜತೆಗೆ ಕಳೆಯಲು ಹೆಚ್ಚಿನ ಸಮಯ ಸಿಗುತ್ತಿರಲಿಲ್ಲ. ಸಿಕ್ಕಿದ ಕಾಲವನ್ನು ಮನೆಯೊಳಗೇ ಕಳೆಯಬೇಕಾಗುತ್ತಿತ್ತು. ಅವಾಗಾವಾಗ ಮಳೆ ಬಿಟ್ಟಾಗ ಮೀನು ಹೊರಗೆ ಹೋಗಿ ಹಿತ್ತಲಿನಲ್ಲಿ ಹುಲ್ಲಿನ ನಡುವೆ, ಕೂರುತ್ತಿದ್ದಳು. ಅಲ್ಲಿ ಹಾವೋ ಹರಣೆಯೋ ಹರಿದಾಡಿದಾಗ ಬೆಂಬತ್ತಿ ಹೋಗುತ್ತಿದ್ದಳು. ಅವಳು ಓಡಾಡುವಾಗ ಚಿನ್ನುವೂ ದೂರ ನಿಂತು ನೋಡುವಳು. ಎಲ್ಲೆಂದರಲ್ಲಿ ಹೋಗುವ ಮೀನುವಿನ ಜತೆ ಸಾಧ್ಯವಾದಲ್ಲೆಲ್ಲ ತಾನೂ ಹೋಗುತ್ತಿದ್ದಳು.

oooooooooooooooooooooooooooooo

ಅದೊಂದು ದಿನ ರೈನ್-ಕೋಟಿದ್ದರೂ ಮಳೆಗೆ ಒದ್ದೆ ಮುದ್ದೆಯಾಗಿ ಚಳಿಗೆ ಗಡಗಡನೆ ನಡುಗುತ್ತ ಮನೆ ಜಗಲಿ ಹತ್ತಿದ ಚಿನ್ನು ನೀರು ಬಸಿಯುತ್ತಿದ್ದ ರೈನ್-ಕೋಟ್ ಬಿಚ್ಚಿ ಜಗಲಿಯ ಬದಿಗಿಟ್ಟಳು. ಅಮ್ಮ ಬಂದು 'ನಿಂಗೆ ರೈನ್-ಕೋಟ್ ಇದ್ರೂ ಒಂದೆ ಹೆಣ್ಣೆ, ಇಲ್ಲದಿದ್ರೂ ಒಂದೆ' ಅಂತ ಪ್ರೀತಿಯಲ್ಲಿ ಬೈಯುತ್ತ ಚಿನ್ನುವಿನ ಬೆನ್ನಿಂದ ಶಾಲೆಚೀಲವನ್ನು ತೆಗೆದು ಚಾವಡಿಯಲ್ಲಿಟ್ಟಳು, ಮನೆಯಲ್ಲಿ ಹಾಕುವ ಬೆಚ್ಚನೆಯ ಹಳೆಬಟ್ಟೆ ಕೊಟ್ಟಳು. ಚಿನ್ನು ಶಾಲೆಯ ಚೀಲವನ್ನು ಚಾವಡಿಯಲ್ಲಿಟ್ಟು ಒಳಮನೆಗೆ ನಡೆದಳು.

ಬಟ್ಟೆ ಬದಲಾಯಿಸುತ್ತ ಅತ್ತಿತ್ತ ಹುಡುಕುನೋಟ ಬೀರಿದ ಚಿನ್ನು, ಮಿಯಾಂವ್ ಅಂತ ಮೆಲ್ಲನೆ ಕೂಗಿದಳು. 'ಮೊದ್ಲು ಬಿಸಿಬಿಸಿ ಕಾಫಿ ಕುಡಿ, ಹಪ್ಪಳ ತಿನ್ನು, ಮತ್ತೆ ಎಷ್ಟು ಹೊತ್ತು ಬೇಕಾರೂ ಪುಚ್ಚೆಯೊಟ್ಟಿಗೆ ಆಡು' ಅಂತ ಅಂದ ಅಮ್ಮ ಬೆಚ್ಚನೆಯ ಬೈರಾಸಿನಲ್ಲಿ ಚಿನ್ನುವಿನ ತಲೆಯೊರಸತೊಡಗಿದಳು.

ಅಡಿಗೆಮನೆಯಾಚೆಗಿನ ಚಾವಡಿಯಲ್ಲಿ ಚಕ್ಕಳಮಕ್ಕಳ ಹಾಕಿ ಕೂತ ಚಿನ್ನು ಬಿಸಿಬಿಸಿ ಕಾಫಿ ಕುಡಿಯುತ್ತ, ಕೆಂಡದಲ್ಲಿ ಕಾಯಿಸಿದ ಹಪ್ಪಳದಿಂದ ಪುಟ್ಟ ತುಂಡೊಂದನ್ನು ಕರಕ್ಕೆಂದು ಮುರಿದಳು. ಅಲ್ಲೆಲ್ಲ ಘಮ್ಮೆಂದು ಹಪ್ಪಳದ ಕಂಪು ಹಬ್ಬಿತು. ಕರಕ್ಕೆಂಬ ಸದ್ದು ಕೇಳುತ್ತಲೂ ಅಲ್ಲಿವರೆಗೆ ಆಡಿಗೆಮನೆಯ ಕತ್ತಲಲ್ಲಿ ಒಲೆಯ ಪಕ್ಕ ಬೆಚ್ಚಗೆ ಮೈಕಾಸಿಕೊಳ್ಳುತ್ತಿದ್ದ ಮೀನು ಮಿಯಾಂವ್ ಅನ್ನುತ್ತ ಓಡಿ ಬಂದು ಚಿನ್ನುವಿನ ಮಡಿಲೇರಿದಳು. ಚಿನ್ನು ಖುಷಿಯಿಂದ ನಗುತ್ತ ಮೀನುವಿನ ಮೈಸವರಿ ಮಡಿಲಲ್ಲಿ ಕೂರಿಸಿ ಹಪ್ಪಳದ ಚೂರುಗಳನ್ನು ಒಂದೊಂದೇ ಅವಳ ಬಾಯಿಗಿಡತೊಡಗಿದಳು. ಮೀನು ಕಣ್ಣುಮುಚ್ಚಿ ಆ ಚೂರುಗಳನ್ನು ತಿನ್ನತೊಡಗಿದಳು.

ರಾತ್ರಿಯ ಅಡಿಗೆಗೆ ತಯಾರು ಮಾಡಲಾರಂಭಿಸಿದ ಅಮ್ಮ ಇವರ ಸಂಭ್ರಮವನ್ನು ನೋಡುತ್ತ, 'ಅದಕ್ಕೆ ಆಗಲೂ ಹಾಕಿದೆ ನಾನು ಹಪ್ಪಳ, ಹೆಚ್ಚು ತಿಂದ್ರೆ ನಾಳೆ ಮತ್ತೆ ಹೊಟ್ಟೆ ಉಬ್ಬರಿಸ್ತ್ ಕಾಣ್ ಪುಚ್ಚೆಗೆ', ಅಂದಳು. 'ಪಾಪ ಮೀನುಂಗೆ ನನ್ನೊಟ್ಟಿಗೆ ತಿನ್ನದೆ ಉದಾಸೀನ ಆತಿಲ್ಯಾ ಅಮ್ಮ', ಅನ್ನುತ್ತ ಮೀನುಳ ತಲೆಸವರಿದ ಚಿನ್ನು, 'ಅಲ್ದಾ ಮೀನು' ಅಂತ ಮೀನುಳ ಹತ್ತಿರ ಕೇಳಿದಳು. ಭಾವಸಮಾಧಿಗೆ ಭಂಗ ಬಂದವರ ಹಾಗೆ, ನಿದ್ರೆಯಿಂದ ಎದ್ದವರ ಹಾಗೆ ಹೂಂ ಎಂದು ಮುಲುಗಿದ ಮೀನು ಕಣ್ಣು ಮುಚ್ಚಿ ಚಿನ್ನು ಕೊಟ್ಟ ಇನ್ನೊಂದು ಚೂರು ಹಪ್ಪಳ ತಿನ್ನತೊಡಗಿದಳು. 'ನೋಡಮ್ಮ, ಮೀನು ಹೌದು ಹೇಳ್ತ್-ಳ್ ಕಾಣ್' ಅಂತ ಚಿನ್ನು ಸಂಭ್ರಮಿಸಿದಳು. 'ಪುಚ್ಚೆಗೆ ಮಾತಾಡ್-ಗೆ ಕಲ್ಸಿಯಲ್ಲ ನೀನ್, ಹುಷಾರಿ ಹೆಣ್ಣ್' ಅಂತ ಅಜ್ಜ ಬೊಚ್ಚುಬಾಯಿ ಬಿಟ್ಟು ನಕ್ಕರು.

ತಿಂಡಿಯ ಕಾರ್ಯಕ್ರಮ ಮುಗಿದಮೇಲೆ ಮೆಲ್ಲಗೆ ಹೊರಗಿಣುಕುತ್ತಾಳೆ ಚಿನ್ನು, ಬಿಸಿಲು ಮೂಡಿತ್ತು! ಮಳೆಬಂದುದರ ಕುರುಹೇ ಇಲ್ಲದ ಹಾಗೆ ಜಗತ್ತೆಲ್ಲ ನಗುತ್ತಿತ್ತು. ಮನೆಯ ಹಿಂದಿನ ಗುಡ್ಡದಾಚೆಗೆ ಆಕಾಶದಲ್ಲಿ ಕಾಮನಬಿಲ್ಲು ಮೂಡಿತ್ತು. ಮನೆಯ ಕೆಳಗಿನ ಅಡಿಕೆ ತೋಟ, ತೆಂಗಿನ ಮರಗಳು, ಮರಗಳಿಗೆ ಸುತ್ತಿಕೊಂಡ ಕರಿಮೆಣಸಿನ ಗಿಡಗಳು, ಮನೆಯೆದುರಿನ ದಾಸವಾಳದ ಗಿಡ, ಬಯ್ಯಮಲ್ಲಿಗೆ, ದುಂಡುಮಲ್ಲಿಗೆ, ರಾತ್ರಿರಾಣಿಗಿಡ, ತೋಡಿನ ಮತ್ತು ಅಂಗಳದ ನಡುವೆ ಬೇಲಿಯಾಗಿ ನೆಟ್ಟಿದ್ದ ಬಣ್ಣ ಬಣ್ಣದ ಕ್ರೋಟನ್ ಗಿಡಗಳು - ಎಲ್ಲವೂ ಸಂಜೆಬಿಸಿಲಿನ ಚಿನ್ನದ ರಂಗಿಗೆ ತಿರುಗಿ ಶೋಭಿಸುತ್ತಿತ್ತು. ರಾತ್ರಿರಾಣಿ ಗಿಡದಲ್ಲೆರಡು ಮೊಗ್ಗು ಈ ಸಂಜೆಗೆ ಅರಳುವ ತಯಾರಿ ನಡೆಸಿತ್ತು. ಇದ್ಯಾವುದರ ಪರಿವೆಯಿಲ್ಲದೆ ಮನೆಯ ಕೆಳಗಿನ ತೋಡು ತನ್ನಪಾಡಿಗೆ ತಾನು ಮೈದುಂಬಿ ಧೋ ಎಂದು ಹರಿಯುತ್ತಿತ್ತು. ಅಂಗಳದ ನೀರು ಮತ್ತು ತೋಡಿನ ನೀರಿನ 'ಧೋ..' ಶಬ್ದ ಬಿಟ್ಟರೆ ಮಳೆ ಬಂದದ್ದಕ್ಕೆ ಸಾಕ್ಷಿಯೇ ಇರದ ಹಾಗಿತ್ತು.

ಚಿನ್ನುವಿಗೆ ಈ ಸುಂದರ ಸಂಜೆಯ ವೈಭವ ಕಂಡು ತುಂಬಾ ಖುಷಿಯಾಯಿತು. ಮೀನುಗೂ ಸಿಕ್ಕಾಪಟ್ಟೆ ಖುಷಿಯಾಗಿ ಛಂಗನೆ ಜಿಗಿದು ಹೂಗಿಡಗಳ ನಡುವೆ ಓಡಿದಳು. ಅಲ್ಲಿ ಬಯ್ಯಮಲ್ಲಿಗೆ ಹೂಗಳ ಮೇಲೆ ಅವಾಗಷ್ಟೆ ಬಂದು ಕೂತಿದ್ದ ಹಳದಿ ಹಾತೆಯ ಹಿಂದೆ ಬಿದ್ದು ಬೆನ್ನಟ್ಟಿದಳು. ಅಂಗಳದಲ್ಲಿ ಹರಡಿದ ಮಳೆನೀರನ್ನು ಕಾಲಲ್ಲಿ ಚಿಮ್ಮುತ್ತ ಚಿನ್ನು ಹಿಂಬಾಲಿಸಿದಳು. ಅಜ್ಜ ಜಗಲಿಯಲ್ಲಿ ನಿಂತು ಇವರಾಟ ನೋಡುತ್ತಿದ್ದರು.

ಮೀನು ಎಲ್ಲಾಕಡೆ ಓಡಾಡಿದಳು. ದೊಡ್ಡದೊಡ್ಡ ರೆಕ್ಕೆಗಳಿದ್ದ ಆ ಹಳದಿ ಹಾತೆ ಅಲ್ಲಿದ್ದ ಎಲ್ಲ ಗಿಡಗಳ ಮೇಲೆ ಹೂಗಳ ಮೇಲೆ ಹಾರಿ ಹಾರಿ ಮೀನುವನ್ನು ಆಟವಾಡಿಸಿತು. ಕೊನೆಗೆ ಅಂಗಳದ ಬದಿಗೆ ಬೇಲಿಗಿಡವಾಗಿ ನೆಟ್ಟಿದ್ದ ಕ್ರೋಟನ್ ಗಿಡಗಳ ಕಡೆ ಹಾರಿತು. ಮೀನು ಕೂಡ ಅದರ ಜತೆಗೆ ಹಾರಿದಳು. ಚಿನ್ನುವೂ ಗಿಡಗಳ ನಡುವೆ ದಾರಿಮಾಡಿಕೊಂಡು ಅಲ್ಲಿಗೆ ತಲುಪಿದಳು.

ತೋಡಿನ ಬದಿಯಿಂದ ಮೇಲಕ್ಕೆ ಬೆಳೆದ ಸಂಪಿಗೆ ಮರದ ಕೊಂಬೆಯೊಂದು ಕ್ರೋಟನ್ ಗಿಡಕ್ಕೆ ತಾಗಿಕೊಂಡಂತೆ ಅಂಗಳಕ್ಕೆ ಇಣುಕಿತ್ತು. ಮಾಯಾಮೃಗದಂತಹ ಹಳದಿ ಹಾತೆ ಹಾರಿ ಹೋಗಿ ಸಂಪಿಗೆ ಮೊಗ್ಗಿನ ಮೇಲೆ ಕುಳಿತಿತು. ಮೀನು ಹಠ ಬಿಡದೆ ತಾನೂ ಹೋಗಿ ಸಂಪಿಗೆ ಗಿಡದ ಕಡೆಗೆ ಹಾರಿದಳು. ಹಾತೆ ಅಲ್ಲಿಂದಲೂ ಹಾರಿತು. ಅದನ್ನು ಹಿಡಿಯಲು ಮತ್ತೆ ಹಾರಿದ ಮೀನುಳ ಕೈಗೆ ಸಂಪಿಗೆ ಗಿಡದ ರೆಂಬೆಯೊಂದು ಆಧಾರವಾಗಿ ಸಿಕ್ಕಿ ಅದಕ್ಕೆ ನೇತಾಡಿದಳು. ರೆಂಬೆ ಅವಳ ಭಾರಕ್ಕೆ ಜಗ್ಗಿ ನೇರವಾಗಿ ಕೆಳಗಿದ್ದ ತೋಡಿನ ಮೇಲೆ ನೇತಾಡತೊಡಗಿತು. ಈಗ ಮೀನು ಏನಾದರೂ ಕೈಬಿಟ್ಟು ಹೋದರೆ ನೇರ ಕೆಳಗೆ ತೋಡಿಗೆ ಬೀಳುತ್ತಾಳೆ.

ಚಿನ್ನುವಿಗೆ ಕಳವಳವಾಯಿತು. ಮೀನು ಅದು ಹೇಗೆ ಈಚೆ ಬರುತ್ತಾಳೋ ಅಂತ ಗಡಿಬಿಡಿಯಲ್ಲಿ ಕ್ರೋಟನ್ ಗಿಡಗಳನ್ನು ದಾಟಿ ಹೋಗಿ ದರೆಯ ಬದಿಯಲ್ಲಿ ನಿಂತ ಚಿನ್ನು ನೇತಾಡುತ್ತಿದ್ದ ಮೀನುವನ್ನು ಕೈಗೆಟಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆಯೇ, ಕಾಲಕೆಳಗಿನ ಸಡಿಲ ಮಣ್ಣು ಜಾರಿ ಕುಸಿಯಿತು. ಕಾಲೂ ಜಾರಿತು. ಅಮ್ಮಾ ಎಂದು ಕಿರುಚುತ್ತ ದರೆಯ ಬದಿಯಲ್ಲಿ ಕೆಳಗಡೆ ಬೀಳುತ್ತಾ ಇದ್ದಾಗ ಚಿನ್ನುವಿನ ಕಣ್ಣಿಗೆ ಕಂಡಿದ್ದು ಮೇಲೆ ಸಂಪಿಗೆ ರೆಂಬೆಯಲ್ಲಿ ನೇತಾಡುತ್ತಿದ್ದ ಮೀನು, ಮತ್ತೆ ಹತ್ತಡಿ ಜಾರಿದಾಗ ಹತ್ತಿರವಾಗುತ್ತಿದ್ದ ಇಪ್ಪತ್ತಡಿ ಆಳದಲ್ಲಿ ರಭಸವಾಗಿ ಹರಿಯುತ್ತಿದ್ದ ತೋಡಿನ ಕೆಂಪುನೀರು.

ooooooooooooooooooooooooooooooo

ಅಮ್ಮಾ... ಅಂತ ನರಳುತ್ತ ಚಿನ್ನು ಕಣ್ಣುಬಿಟ್ಟಾಗ ಮೊದಲು ಕಂಡಿದ್ದು ಪಕ್ಕದಲ್ಲಿ ಕುಳಿತು ಕನ್ನಡಕವಿಟ್ಟು ಏನೋ ಪುಸ್ತಕ ಕೈಯಲ್ಲಿ ಹಿಡಿದಿದ್ದ ಅಜ್ಜ. ತಾನು ಮನೆಯೊಳಗಿನ ಬೆಡ್-ರೂಮಿನಲ್ಲಿ ಮೆತ್ತಗಿನ ಹಾಸಿಗೆಯ ಮೇಲೆ ಮಲಗಿದ್ದೇನೆ ಅಂತ ಅರಿವಾಯಿತು. ಅವಳು ಕಣ್ಣುಬಿಟ್ಟಿದ್ದು ಕಂಡ ಅಜ್ಜ 'ಎಚ್ರಾಯ್ತ ಚಿನ್ನೂ, ಮಾತಾಡ್ ಮಗಾ' ಅಂತ ಅವಳನ್ನು ಮಾತಾಡಿಸುವ ಪ್ರಯತ್ನ ಮಾಡುತ್ತಿದ್ದರು. ಮೈಕೈಯಲ್ಲ ಅಸಾಧ್ಯ ನೋವು, ತಡೆಯಲಾರದೆ ಚಿನ್ನು ಮುಲುಗಿದಳು. 'ಮುಗು ಕಣ್ ಬಿಟ್ಲ್ ಕಾಣ್ ' ಅನ್ನುತ್ತ ಅಜ್ಜ ಅಮ್ಮನನ್ನು ಕರೆದರು.

ಅಮ್ಮ ಬಂದವಳು ಚಿನ್ನುಗೆ ಮೆಲ್ಲಗೆ ಎಬ್ಬಿಸಿ ಕೂರಿಸಿದಳು. ಬಿಸಿ ಹಾಲು ಕುಡಿಸಿದಳು. ನೋವಿನಿಂದ ಮುಖ ಕಿವಿಚಿಕೊಳ್ಳುತ್ತಿದ್ದಂತೆಯೇ ಚಿನ್ನುವಿಗೆ ಥಟ್ಟಂತ ನೆನಪಾಯಿತು, ಮೀನು ಎಲ್ಲಿ? ತಾನು ಬಿದ್ದಿದ್ದು, ಬೀಳುತ್ತಾ ಮೀನು ಸಂಪಿಗೆ ರೆಂಬೆಗೆ ನೇತಾಡುತ್ತಿದ್ದಿದ್ದು ನೋಡಿದ್ದು ಎಲ್ಲಾ ನೆನಪಾಯಿತು. 'ಮೀನು ಎಲ್ಲಿದ್ಲಮ್ಮಾ' ಅಂತ ಕೇಳಿದಳು. 'ಆ ಹಾಳು ಪುಚ್ಚೆಂದಾಗಿಯೇ ಇಷ್ಟೆಲ್ಲಾ ಆದ್ದ್, ಇನ್ನೊಂದ್ ಸರ್ತಿ ಪುಚ್ಚೆ ಸಾವಾಸ ಮಾಡ್ರೆ ಕಾಣ್ ನಿಂಗೆ... ಅಜ್ಜ ಕಾಣದೇ ಇದ್ದಿದ್ರೆ, ಆಚಮನೆ ಅಣ್ಣ ತೋಡಿಗೆ ಹಾರಿ ನಿನ್ನ ಹಿಡ್ಕಣದೇ ಇದ್ದಿದ್ರೆ ಈಗ ಆಯಿಪ್ಪ್ ಕಥೆ ನಂಗೆ ಜನ್ಮಕ್ಕೆ ಅನುಭವಿಸ್-ಗೆ, ಮೀನು ಅಂಬ್ರ್ ಮೀನು' ಅಂತ ಕಣ್ಣೀರಿನ ಜತೆ ಕಾಳಜಿ ಸೇರಿಸಿ ಬೈಯುತ್ತ ಚಿನ್ನುಗೆ ಬ್ರೆಡ್ ತಿನಿಸತೊಡಗಿದಳು ಅಮ್ಮ.

ಹಂಗಾದ್ರೆ ಮೀನು ಏನಾದ್ಲು? ನೀರಿಗೆ ಬಿದ್ದುಹೋದ್ಲಾ? ಗೊತ್ತಾಗ್ಲಿಲ್ಲ ಚಿನ್ನುಗೆ. ಅಮ್ಮ ಅಳುತ್ತಿದ್ದಾಳೆ, ಸಹಸ್ರನಾಮಾರ್ಚನೆ ಮಾಡುತ್ತಿದ್ದಾಳೆ ವಿನಹ ಮೀನುಗೇನಾಯಿತು ಅಂತ ಹೇಳುತ್ತಿಲ್ಲ. ಕಲ್ಪಿಸಿಕೊಳ್ಳಹೊರಟರೆ, ಏನಾಗಿರಬಹುದು ಅಂತ? ಊಹೂಂ.. ಭಯವಾಯ್ತು ಚಿನ್ನುಗೆ. ದಿಕ್ಕುತೋಚದೆ ಚಿನ್ನು ಸುಮ್ಮನಾದಳು. ಅಮ್ಮ ಚಿನ್ನುವಿಗೆ ಮಾತ್ರೆ ತಿನಿಸಿ, ಮದ್ದು ಕುಡಿಸಿ ಮೈತುಂಬ ಹೊದಿಸಿ ಹೊರಗಡೆ ಹೋದಳು.

ಚಿನ್ನುವಿಗೆ ಹಾಗೇ ಮೆಲ್ಲನೆ ಮಂಪರು ಕವಿದು ನಿದ್ರೆ ಬರಲಾರಂಭಿಸಿತು. ಸ್ವಲ್ಪ ಸ್ವಲ್ಪವೇ ಮಂಪರಿಗೆ ಜಾರುತ್ತಿದ್ದ ಹಾಗೆ ಯಾರೋ ಪಕ್ಕದಲ್ಲಿ ಬಂದು ಆತ್ಮೀಯವಾಗಿ ಕೂತಂತೆ, ಪ್ರೀತಿಯಲ್ಲಿ ಮುಖ ಸವರಿದಂತೆ, ಮೈಯನ್ನೆಲ್ಲ ನೇವರಿಸಿದಂತೆನಿಸಿ ಚಿನ್ನು ಮೆಲ್ಲನೆ ಯಾರೆಂದು ಕಣ್ಣು ಬಿಟ್ಟು ನೋಡಿದರೆ... ಅಜ್ಜ ಚಿನ್ನುವಿನ ಒಂದು ಬದಿಗೆ ಕೂತು ಕನ್ನಡಕ ಕೈಯಲ್ಲಿ ಹಿಡಿದು ಸಂತೋಷವಾಗಿ ನಗುತ್ತಿದ್ದರು. ಇನ್ನೊಂದು ಬದಿ... ಹಾಸಿಗೆಯ ಮೇಲೆ ನಿಂತುಕೊಂಡು ತನ್ನ ತಲೆಯನ್ನು ಚಿನ್ನುವಿನ ಹೊದಿಕೆಗೆ ಜೋರಾಗಿ ಉಜ್ಜುತ್ತ ಗುಟುರ್ರ್.ರ್ರ್ ಅಂತ ಮೈಯೊಳಗಿಂದ ಸಂಗೀತ ಹೊರಡಿಸುತ್ತ ಚಿನ್ನುವಿನ ಹೊದಿಕೆಯೊಳಗೆ ಸೇರಿಕೊಳ್ಳುವ ಪ್ರಯತ್ನ ನಡೆಸಿದ್ದಳು, ತುಂಟಿ ಮೀನು... :) :) :)