Showing posts with label ಪರಿಸರ - ವಿಚಾರ. Show all posts
Showing posts with label ಪರಿಸರ - ವಿಚಾರ. Show all posts

Sunday, November 9, 2008

ನಂಗೆ ಖುಷಿಯಾಗಿದೆ...! :-)


ವೀರಪ್ಪನ್-ಗೆ ಆನೆಕಳ್ಳ, ದಂತಚೋರ ಇತ್ಯಾದಿ ಬಿರುದುಗಳಿಟ್ಟು ಆತನನ್ನು ಕಳ್ಳರ ಕಳ್ಳನಾಗಿ, ಮಹಾಖದೀಮನಾಗಿ ಮಾಡಿದ್ದರಲ್ಲಿ ಮಾಧ್ಯಮಗಳ ಪಾಲೂ ಇದೆ ಎಂದರೆ ಒಪ್ಪತಕ್ಕಂಥ ಮಾತು. ಅದಕ್ಕೆ ನೂರು ಕಾರಣಗಳಿದ್ದಿರಬಹುದು, ಅದು ಬೇರೆ ಮಾತು. ಆದರೆ, ಗೊತ್ತಿದ್ದವರಿಗೆ ಗೊತ್ತಿರುತ್ತದೆ, ವೀರಪ್ಪನ್ ಹೆಸರಲ್ಲಿ ಆನೆ ಕೊಲ್ಲುತ್ತಿದ್ದವರು ಯಾರು ಅಂತ. ವೀರಪ್ಪನ್ ಆನೆ ಕೊಂದೇ ಇಲ್ಲ ಅಂತಲ್ಲ, ಆದ್ರೆ ಸತ್ತ ಎಲ್ಲಾ ಆನೆಗಳೂ ವೀರಪ್ಪನ್ ಕೈಲಿ ಸಾಯಲಿಲ್ಲ ಅನ್ನುವುದು ಹಸಿ ಹಸಿ ಸತ್ಯ.

ತಂತಿಬೇಲಿಗೆ ಹೈ ವೋಲ್ಟೇಜ್ ವಿದ್ಯುತ್ ಹಾಯಿಸಿಡುವುದು ರೈತರು ಆನೆ ನಿಗ್ರಹಕ್ಕೆ ಕಂಡುಕೊಂಡ ಉಪಾಯ. ಅದಕ್ಕೆ ತಾಗಿ ಆನೆಯೇನಾದರೂ ಸತ್ತರೆ, ಅದಕ್ಕೆ ಊದುಬತ್ತಿ, ಗಂಧ, ಅರಿಶಿನ, ಹೂವು ಇತ್ಯಾದಿ ಹಾಕಿ ಪೂಜೆ ಮಾಡಿ ಅದನ್ನು ಕೊಂದ ಪಾಪವನ್ನು ಪರಿಹಾರ ಮಾಡಿಕೊಳ್ಳುವ ರೂಢಿ ಕೂಡ ಕೆಲವು ಊರುಗಳಲ್ಲಿ ಇದೆ.

ಹೀಗೆ ಅಲ್ಲಲ್ಲಿ ಆಗಾಗ ನಡೆದ ಆನೆಗಳ ಸಾವುಗಳನ್ನು ವರದಿ ಮಾಡುವ ಮೂಲಕ ಮಾಧ್ಯಮಗಳು ಒಳ್ಳೆ ಕೆಲಸ ಮಾಡಿವೆ. ಮಾರುಕಟ್ಟೆಯ ಓಟದ ರಭಸದ ನಡುವೆ ಪರಿಸರದ ಬಗೆಗೆ ನಿಜವಾದ ಅರಿವು ಮಾಧ್ಯಮಗಳಲ್ಲಿ ಮಾಯವಾಗುತ್ತಿರುವ ಈ ದಿನಗಳಲ್ಲಿ ಕೂಡ, ತಾವು ಮಾಡುತ್ತಿರುವ ಕೆಲಸ ಎಷ್ಟು ದೊಡ್ಡದು ಅಂತ ಕೆಲವರಿಗೆ ಗೊತ್ತಿದ್ದು ಮಾಡಿದರೆ ಇನ್ನು ಕೆಲವರು ಗೊತ್ತಿಲ್ಲದೆಯೂ ಮಾಡಿದ್ದಾರೆ, ಆದರೆ ಹೆಚ್ಚುಕಡಿಮೆ ಎಲ್ಲಾ ಪತ್ರಿಕೆಗಳು ಮತ್ತು ಖಾಸಗಿ ವಾಹಿನಿಗಳ ಸುದ್ದಿಗಳೂ ಆನೆಗಳ ಸಾವಿನ ಬಗ್ಗೆ ಎಲ್ಲರಿಗೂ ಗೊತ್ತಾಗುವ ಹಾಗೆ ಮಾಡಿದ್ದಾರೆ ಅನ್ನುವುದು ಮುಖ್ಯ.ಅಷ್ಟೆಲ್ಲ ವರದಿಗಳು ಬರ್ತಾ ಇದ್ದರೂ ದಪ್ಪ ಚರ್ಮದ ಅರಣ್ಯ ಇಲಾಖೆ ಮಾತ್ರ ತೆಪ್ಪಗೆ ಕೂತಿತ್ತು.

ರಾಜ್ಯದಲ್ಲಿ ನಡೆಯುತ್ತಿರುವ ಆನೆಗಳ ಸಾವಿನ ಬಗ್ಗೆ ಮಾಧ್ಯಮಗಳ ವರದಿಗಳನ್ನು ಆಧರಿಸಿ, suo motu ಆಗಿ, ಅಂದರೆ ಸ್ವಯಂಪ್ರೇರಿತವಾಗಿ ಹೈಕೋರ್ಟ್ ಅರಣ್ಯ ಇಲಾಖೆಗೆ ನೋಟಿಸ್ ನೀಡಿದೆ. ಮಾಧ್ಯಮಗಳ ಗುಣಮಟ್ಟದ ಬಗ್ಗೆ HOPE ಕಳೆದುಕೊಂಡವರಿಗೆಲ್ಲ ಇದೊಂದು ಬೆಳಕಿನ ಕಿರಣ... ಒಳ್ಳೆಯ ಉದ್ದೇಶಗಳಿಗೆ ಸಿಗಬೇಕಾದ ಗೌರವವನ್ನು ಎತ್ತಿಹಿಡಿದ ಹೈಕೋರ್ಟಿನ ಈ ಕ್ರಮದಿಂದ ನನಗಂತೂ ತುಂಬಾ ಖುಷಿಯಾಗಿದೆ. ಪಿ.ಡಿ.ದಿನಕರನ್ ಅವರನ್ನು ದೇವರು ನೂರು ವರ್ಷ ಚೆನ್ನಾಗಿಟ್ಟಿರಲಿ.

ಇಲ್ಲಿವರೆಗೆ ತಣ್ಣಗಿದ್ದ ಅರಣ್ಯ ಇಲಾಖೆಗೂ ಇದರಿಂದ ಚೂರು ಬಿಸಿ ಮುಟ್ಟಿದೆ. "ಡೀಪ್ ಫಾರೆಸ್ಟ್ ಜಾಸ್ತಿ ಆಗಿ ಆನೆಗಳಿಗೆ ಅಲ್ಲಿ ಹೊಟ್ಟೆಗೆ ಸರಿಯಾಗಿ ಸಿಗದೆ ನಾಡಿಗೆ ಬರ್ತಾ ಇವೆ", "ಆನೆಗಳ ಸಂಖ್ಯೆ ಜಾಸ್ತಿ ಆಗಿದೆ" "ಹೊಲಕ್ಕೆ ನುಗ್ಗುವುದು ಕಂಟ್ರೋಲ್ ಮಾಡಲಿಕ್ಕೆ ಬೇಕಾದಷ್ಟು ಸಿಬ್ಬಂದಿ ಇಲ್ಲ" ಇತ್ಯಾದಿ ಆನೆಗಳು ನಾಡಿಗೆ ನುಗ್ಗುವುದಕ್ಕೆ ಮತ್ತು ಅವುಗಳ ಸಾವಿಗೆ ಅರಣ್ಯ ಇಲಾಖೆ ಹೇಳುವ ಕಾರಣಗಳು. ಈಗ plan of action ತಯಾರಿಸಿ ಆನೆಗಳನ್ನು ಉಳಿಸುವ ಬಗ್ಗೆ ಅಧಿಕಾರಿಗಳು ಚಿಂತಿಸುತ್ತಿದ್ದಾರೆ.

ಕೆಲವು ದಿನಕ್ಕೊಂದರಂತೆಯಾದರೂ ಕಳೆದ ಕೆಲ ತಿಂಗಳುಗಳಿಂದ ಪದೇ ಪದೇ ಬರುತ್ತಿರುವ ಆತಂಕಕಾರಿ ಸುದ್ದಿ ಇನ್ನೊಂದಿದೆ. ಇತ್ತೀಚೆಗೆ ಚಿಕ್ಕಮಗಳೂರು, ಮಂಗಳೂರು, ಉಡುಪಿ ಮತ್ತಿತರ ಜಿಲ್ಲೆಗಳಲ್ಲಿ, ಅಷ್ಟ್ಯಾಕೆ, ಬೆಂಗಳೂರಲ್ಲಿ ಕೂಡ ಜಿಂಕೆ ಚರ್ಮ, ಚಿರತೆ ಚರ್ಮ, ಹುಲಿಯುಗುರು ಇತ್ಯಾದಿ ಮಾರುತ್ತ ಸಿಕ್ಕಿಬಿದ್ದವರ ಸಂಖ್ಯೆ ಹೆಚ್ಚುತ್ತಲೇ ಇದೆ. ಪೊಲೀಸರಿಗೆ ಸಿಕ್ಕಿಬೀಳುವವರೇ ಇಷ್ಟೊಂದು ಮಂದಿಯಾದರೆ, ಸಿಕ್ಕಿಬೀಳದವರು ಇನ್ನೆಷ್ಟಿದ್ದಾರೋ? ಪೊಲೀಸರಿಗೆ ಕೊಲೆಗಾರರು ಸಿಕ್ಕಿದರೂ ಸಿಗದಿದ್ದರೂ, ಒಂದು ಸಾರಿ ಸತ್ತ ಪ್ರಾಣಿ ಮತ್ತೆ ಬದುಕದು, ಪೊಲೀಸರು ಯಾರನ್ನು ಹಿಡಿದು ಏನು ಪ್ರಯೋಜನ?

ಹಾಗೆಯೇ, ಗದಗ, ಚಿತ್ರದುರ್ಗ, ಉತ್ತರಕನ್ನಡ ಇತ್ಯಾದಿ ಜಿಲ್ಲೆಗಳಲ್ಲಿ ಚಿರತೆ, ಜಿಂಕೆ ಇತ್ಯಾದಿಗಳು ಕಾಡು ಬಿಟ್ಟು ನಾಡಿಗೆ ಬಂದು ಜನರಲ್ಲಿ ಭಯವುಂಟುಮಾಡಿದ ಪ್ರಕರಣಗಳು ಕೂಡ ಬಹಳಷ್ಟಿವೆ. ಕೆಲವು ಕಡೆ ಇಂಥ ಪ್ರಾಣಿಗಳು ಸತ್ತು ಹೋಗಿದ್ದೂ ಇದೆ. ಇಂತಹ ಪ್ರಕರಣಗಳು ಸಿಕ್ಕಿದಾಗಲೆಲ್ಲ ಅದನ್ನು ಇಟ್ಟುಕೊಂಡು ಅರ್ಧರ್ಧ ಗಂಟೆ ಸುದ್ದಿ ಕೊಡುವ ಕನ್ನಡದ ಸುದ್ದಿವಾಹಿನಿಗಳಲ್ಲಿ, ಹೀಗೆ ಯಾಕೆ ಕಾಡುಪ್ರಾಣಿಗಳು ನಾಡಿಗೆ ಬರುತ್ತವೆ ಎಂಬುದರ ಬಗ್ಗೆ ಸರಿಯಾದ, ಮನಮುಟ್ಟುವ ವಿಶ್ಲೇಷಣೆ ಕೊಟ್ಟು, ಮನುಷ್ಯರದೂ ಅದರಲ್ಲಿ ತಪ್ಪಿದೆ ಅಂತ ಹೇಳುವ ಗಟ್ಟಿತನದ ಕೊರತೆಯಿದೆ. ಇದನ್ನು ಸರಿಪಡಿಸಿಕೊಂಡಲ್ಲಿ ಸುದ್ದಿವಾಹಿನಿಗಳ ಗುಣಮಟ್ಟ ಇನ್ನಷ್ಟು ಹೆಚ್ಚುತ್ತದೆ.

ಆನೆಗಳ ಸಾವಿನ ಬಗ್ಗೆ ಕಾರಣಗಳನ್ನು ಹುಡುಕಿಕೊಂಡಿರುವ ಅರಣ್ಯ ಇಲಾಖೆ ತಕ್ಷಣಕ್ಕೆ ಬಚಾವಾಗಿದೆ. ಹೆಚ್ಚಿನ ಮಾಧ್ಯಮಗಳು ಅರಣ್ಯ ಇಲಾಖೆಯ ಪ್ರಮುಖ ಅಧಿಕಾರಿಗಳನ್ನು ಈ ಬಗ್ಗೆ ನೇರವಾಗಿ ಪ್ರಶ್ನಿಸಿಲ್ಲ. ಅರಣ್ಯ ಇಲಾಖೆ ತನ್ನಲ್ಲಿರುವ ಕಾರಣಗಳನ್ನು ಕೊಟ್ಟು ಹೈಕೋರ್ಟಿನಿಂದಲೂ ಬಚಾವಾಗಬಹುದು, ಹೇಳಲಾಗದು. ಜಿಂಕೆ, ಚಿರತೆ ಇತ್ಯಾದಿ ಪ್ರಾಣಿಗಳ ಕೊಲೆಗಳ ಬಗ್ಗೆ ಯಾರೂ ಇನ್ನೂ ಏನೂ ಪ್ರಶ್ನೆ ಎತ್ತಿಲ್ಲ. ಯಾರು ಕೇಳಬೇಕು, ಯಾರು ಕೇಳುತ್ತಾರೆ ಅನ್ನುವುದೂ ಗೊತ್ತಿಲ್ಲ. ಒಂದು ವೇಳೆ ಯಾರಾದರೂ ಕೇಳಿದರೆ ಅರಣ್ಯ ಇಲಾಖೆ ಏನು ಉತ್ತರ ಕೊಡುತ್ತದೆಯೋ ಗೊತ್ತಿಲ್ಲ.

ಅರಣ್ಯ ಇಲಾಖೆಯೊಳಗೆ ಮತ್ತು ಹೊರಗೆ ಇರುವ ಹೆಗ್ಗಣಗಳ ನಿಗ್ರಹ, ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಆಗದಂತೆ ತಡೆಯುವುದು, ಅರಣ್ಯ ಪ್ರದೇಶ ನಿಜವಾಗಿಯೂ ಹೆಚ್ಚುವಂತೆ ಮಾಡುವುದು, ಇವೆಲ್ಲ ಸಾಧ್ಯವಾದರೆ ಎಲ್ಲಾ ಅಕ್ರಮಗಳು ಕಡಿಮೆಯಾಗಬಹುದು... ಇವೆಲ್ಲವನ್ನೂ ಸಾಧ್ಯಮಾಡಿ, ನಮಗೆಲ್ಲ LIVE-AND LET LIVE ಪಾಠ ಕಲಿಸುವ ಸೂಪರ್ ಮ್ಯಾನ್ ಯಾರಾದ್ರೂ ಇದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ನನ್ನದೊಂದು ಕನಸು... ಮತ್ತು ನಮಗೆಲ್ಲಾ ಒಳ್ಳೆ ಬುದ್ಧಿ ಆದಷ್ಟು ಬೇಗ ಬರಲಿ ಅಂತ ಹಾರೈಕೆ...

Friday, July 18, 2008

ಬೆಳಕಿಲ್ಲದ ದಾರಿಯಲ್ಲಿ...

ಸುತ್ತಲೆತ್ತಲೆತ್ತಲೂ ಬರಿಯ ಕತ್ತಲೇ ಕತ್ತಲು... ಅದರ ನಡುವೆಯೂ ಗುಡ್ಡ... ಬೆಟ್ಟ... ಕಾಡು... ಕತ್ತಲಲ್ಲಿ ತೂರಿದ ಕಣ್ಣುಗಳಿಗೆ ಅಸ್ಪಷ್ಟವಾಗಿ ಗೋಚರಿಸುತ್ತಿದೆ. ಒಳಗಣ್ಣು ಒಂಚೂರು ತೆರೆದು ಹೊರಗೆ ನೋಡಿದರೆ ಕಾಣುವುದು, ಕಣ್ಣು ಹಾಯುವಷ್ಟು ದೂರಕ್ಕೆ ಮತ್ತು ಅದರಿಂದಲೂ ಆಚೆಗೆ ಗುಡ್ಡಕ್ಕೆ ಹಾಸಿದ ಹಸಿರು ಮರಗಳ ಹಾಸು...

ಕಿಟಿಕಿಯ ಗಾಜು ಪೂರ್ತಿ ತೆರೆದು, ನೋಟ ಹೊರಗೆ ತೂರುತ್ತಾ ಹೊರಗಿನ ಶಬ್ದ ಜಗತ್ತಿಗೆ ಕಿವಿಯಾಗುತ್ತೇನೆ... ದಾರಿಯುದ್ದಕ್ಕೂ ಸಿಗುವ ಪುಟ್ಟ ಪುಟ್ಟ ತೊರೆಗಳ ಜುಳುಜುಳು... ಜೀರುಂಡೆಗಳ ಜೀರ್ಗುಟ್ಟುವಿಕೆ... ಹೆಸರು ತಿಳಿಯದ ಹಕ್ಕಿಗಳು ಮಾಡುವ ಇಲ್ಲಿವರೆಗೆ ಕೇಳದ ಶಬ್ದಗಳು...

ಇವೆಲ್ಲವನ್ನೂ ತೂರಿಕೊಂಡು, ಮೀರಿಕೊಂಡು ರೈಲು ತನ್ನದೇ ಆದ ಹದದಲ್ಲಿ ಸಾಗುತ್ತದೆ... ಅದರಲ್ಲಿರುವವರಲ್ಲಿ ಕೆಲವರಿಗೆ ತಮ್ಮದೇ ಚಿಂತೆ.. ಇನ್ನು ಕೆಲವರಿಗೆ ಯಾವುದೋ ಧ್ಯಾನ... ಗುಂಪುಗಳಿದ್ದ ಕಂಪಾರ್ಟ್-ಮೆಂಟುಗಳಲ್ಲಿ ತಡೆಯಿಲ್ಲದೆ ಸಾಗಿದ ಹರಟೆಗಳು... ಯಾವ ಉಸಾಬರಿಯೂ ಬೇಡವೆಂದು ಆಗಲೇ ಮುಸುಕು ಹೊದ್ದು ಮಲಗಿರುವ ಹಲವರು... ಇವರೆಲ್ಲರ ನಡುವೆ, ಕಿಟಿಕಿ ತೆಗೆದು ಕುಳಿತಿರುವವರು ಅಲ್ಲೊಬ್ಬರು, ಇಲ್ಲೊಬ್ಬರು...

ಹೌದು, ಕಿಟಿಕಿ ತೆಗೆದು ಹೆಚ್ಚಿನವರು ಹೊರನೋಡಲಿಕ್ಕಿಲ್ಲ... ಯಾಕೆಂದರೆ, ಆಗಾಗ ತಿರುವಿನಲ್ಲಿ ಕಾಣುವ ಅಲ್ಪಸ್ವಲ್ಪ ಬೆಳಕಲ್ಲಿ ರೈಲು ಹೋಗುವ ಹಾದಿ ನೋಡಿದರೆ ಸಾಕು, ಎಂಟೆದೆಯವರಿಗೂ ಒಂದು ಕ್ಷಣ ಎದೆ ಝಲ್ಲೆನ್ನಬಹುದು... ಗುಡ್ಡಗಳನ್ನೇ ಕಡಿದು ಮಾಡಿದ ರೈಲಿನ ಹಾದಿ, ಕೊರಕಲಿದ್ದಲ್ಲಿ ಅದು ಹೇಗೋ ಅದರ ಮೇಲೆಯೇ ಹಾದುಹೋಗುತ್ತದೆ... ಇದರ ಬಗ್ಗೆ ನಾ ಹೇಳುವುದನ್ನು ಕೇಳುವ ಬದಲು, ನೀವೇ ಅನುಭವಿಸಿದರೆ ಚೆನ್ನ...

ದೂರದೂರದವರೆಗೂ ಸುತ್ತ ಬರೀ ಕಾಡು... ಮರ... ಗುಡ್ಡ... ರಾತ್ರಿ ಮಾಡಿದ ಕರಾಮತ್ತೋ ಅಥವಾ ನಿಜವಾಗಿಯೂ ಅದು ಹಾಗೆಯೋ, ಮನುಷ್ಯರ ಅಥವಾ ಜನವಾಸದ ಸುಳಿವೇ ಇಲ್ಲ... ಯಾಮಿನಿ ತನ್ನೆಲ್ಲಾ ಸೌಂದರ್ಯದೊಡನೆ ಕಾಲುಮುರಿದುಕೊಂಡು ಬಿದ್ದ ಹಾಗಿದೆ ಇಲ್ಲಿ... ಹತ್ತಿಯ ಹಾಗೆ ಹರಡಿದ ಬಿಳಿಮೋಡಗಳು ಇನ್ನೇನು, ಕೈಚಾಚಿದರೆ ಕೈಗೆ ಸಿಕ್ಕೇಬಿಡುತ್ತವೇನೋ ಎಂಬ ಭ್ರಮೆ ಹುಟ್ಟಿಸುತ್ತವೆ... ಒಂದು ಗುಡ್ಡದಿಂದ ಇನ್ನೊಂದಕ್ಕಿರುವ ನಡುವಿನ ಅಂತರದಲ್ಲೆಲ್ಲ ಈ ಹತ್ತಿಮೋಡಗಳದೇ ಕಾರುಬಾರು...

ಮತ್ತೂ ಮೇಲೆ ಆಗಸಕ್ಕೆ ದೃಷ್ಟಿ ತೂರಿದರೆ ಕಾಣುವುದು, ಇನ್ನೇನು ಮಳೆ ಸುರಿಸಿಯೇ ಬಿಡುತ್ತವೆನ್ನುವ ಭಾರವಾದ ಕರಿಮೋಡಗಳ ರಾಶಿ ರಾಶಿ... ಚಂದ್ರನ ತಣ್ಣಗಿನ ಮಂದ ಬೆಳಕಿನ ಹೊನಲು ಆಗೀಗ ಇವುಗಳ ನಡುವೆ ಇಣುಕಿ ತಾನಿದ್ದೇನೆನ್ನುತ್ತದೆ...

ಬೆಟ್ಟಗಳ ನಡುವಿನ ಕೊರಕಲಿನಲ್ಲಿ ತಿರುವಿನ ದಾರಿಯಲ್ಲಿ ನಿಧಾನವಾಗಿ ರೈಲು ಸಾಗುವಾಗ ಮೆಲ್ಲನೆದ್ದು ಕಂಪಾರ್ಟ್ಮೆಂಟಿನ ಬಾಗಿಲು ತೆಗೆಯುವ ಸಾಹಸಕ್ಕಿಳಿಯುತ್ತೇನೆ. ಮೆಲ್ಲಗಿಣುಕಿದರೆ, ಆ ಕಡೆಯೂ ದೂರದಲ್ಲಿ ಬೆಟ್ಟ, ಈ ಕಡೆಯೂ ದೂರದಲ್ಲಿಯೇ ಬೆಟ್ಟ... ಹಿಂದೆ ಬೆಟ್ಟದ ನಡುವೆ ಕಾಣುವ ಸಾಗಿ ಬಂದ ದಾರಿ, ಮುಂದೆ ಕಾಣುವುದು ಇನ್ನೊಂದು ಬೆಟ್ಟ, ಮತ್ತು ಹೋಗಲಿರುವ ದಾರಿ. ಕೆಳಗೆ ಕೆಲವು ಅಡಿಗಳ ಆಳದಲ್ಲಿ ಸುಮ್ಮನೇ ಜುಳುಜುಳು ಹರಿವ ನೀರು ಚಂದ್ರನ ಬೆಳಕಿಗೆ ಪ್ರತಿಫಲಿಸುತ್ತದೆ. ಅಷ್ಟರಲ್ಲಿಯೇ ಅಲ್ಲಿ ಬಂದ ಗಾರ್ಡ್ ಕೈಲಿ ಬೈಗುಳ ತಿಂದು ಬಾಗಿಲು ಮುಚ್ಚಿ ತೆಪ್ಪಗೆ ನನ್ನ ಜಾಗದಲ್ಲಿ ಹೋಗಿ ಕೂರುತ್ತೇನೆ.

ಇದೊಂದು ಏಕಾಂಗಿ ಜಗತ್ತು. ಯಾವುದೋ ಲೋಕಕ್ಕೆ ಹೋಗುವ ದಾರಿಯಿದು ಎನ್ನುವ ಭ್ರಮೆ ಹುಟ್ಟಿಸುವ ಮಾಯಾಪ್ರಪಂಚ. ಹೊರಜಗತ್ತಿನೊಡನೆ ಸಂಪರ್ಕ ಸಾಧಿಸಬೇಕೆಂದರೆ ಇಲ್ಲಿ ಏನೇನೂ ಇಲ್ಲ... ದೂರದೂರದ ವರೆಗೆ ರೈಲು ಹೋಗುವ ದಾರಿಯಲ್ಲೆಲ್ಲೂ ಮೊಬೈಲ್ ನೆಟ್-ವರ್ಕ್ ಇಲ್ಲ... ಟೆಲಿಫೋನ್ ಅಂತೂ ಇಲ್ಲವೇ ಇಲ್ಲ. ಸುಮ್ಮಸುಮ್ಮನೇ ಮೊಬೈಲಿನಿಂದ SOS ಕಾಲ್ ಪ್ರಯತ್ನಿಸಿ ವಿಫಲಳಾಗುತ್ತೇನೆ.

ಇಲ್ಲಿ ಎಲ್ಲೂ ವಿದ್ಯುತ್ ಸಂಪರ್ಕವಿಲ್ಲ, ಬೆಳಕೇ ಇಲ್ಲ.. ಹಾಂ, ಬೆಳಕು ಇಲ್ಲವೇ ಇಲ್ಲವೆನ್ನುವುದು ಸುಳ್ಳು. ಅಲ್ಲಲ್ಲಿ, ಕೆಲವು ಕಿಲೋಮೀಟರುಗಳಿಗೊಮ್ಮೆ, ರೈಲ್ವೇ ಕಟ್ಟಿಸಿದ ಚಿಕ್ಕಚಿಕ್ಕ ನಿಲ್ದಾಣಗಳಂತಹ ಕಟ್ಟಡಗಳು ಕಾಣಬರುತ್ತವೆ... ಪ್ರತಿ ಕಟ್ಟಡಕ್ಕೊಬ್ಬ ರೈಲ್ವೇ ಸಿಬ್ಬಂದಿಯಿರುತ್ತಾನೆ... ಆತ ರೈಲು ಬರುವವರೆಗೆ ಎಚ್ಚರವಿದ್ದು, ಸಿಳ್ಳೆ ಹಾಕಿ ರೈಲು ಮುಂದೆ ಹೋಗಬಹುದೆನ್ನುವ ಸೂಚನೆ ನೀಡುತ್ತಾನೆ. ಬೆಳಕೇ ಇಲ್ಲದ ಈ ವಾತಾವರಣದಲ್ಲಿ ಒಂದು ರೀತಿಯಲ್ಲಿ ಈತನೇ ಬೆಳಕು... ಅರೆಬೆಳಕಿನ ದಾರಿಯನ್ನು ಕಾಯುತ್ತಿರುವ ಇಂತಹ ಹಲವಾರು ಮಾನವರೂಪದ ದೇವದೂತರಿಗೆ ಬೆಳಕು ನೀಡಲು ಸೋಲಾರ್ ಅಳವಡಿಸಿದ ಕಂಬಗಳಲ್ಲಿರುವ ದೀಪ ತಕ್ಕಮಟ್ಟಿಗೆ ಸಹಾಯ ಮಾಡುತ್ತದೆ. ಇವರನ್ನು ಬಿಟ್ಟರೆ ಸುತ್ತಮುತ್ತ ಎಲ್ಲೂ ನರಮಾನವರೆನ್ನುವವರ ಕುರುಹೇ ಇಲ್ಲ... ಅದ್ಯಾಕೋ ಭಾರತೀಯ ರೈಲ್ವೇ ಬಗೆಗೆ ಹೆಮ್ಮೆ ಮೂಡುತ್ತದೆ.

ಈ ಜಗತ್ತಿನ ಮಾಯೆಗೆ ಮರುಳಾಗಿ ಕಳೆದು ಹೋಗಿದ್ದೇನೆ... ಇದ್ದಕ್ಕಿದ್ದಂತೆ, ದೂರದಲ್ಲಿ, ಗುಡ್ಡಗಳ ನಡುವಿನ ತಳಭಾಗದಲ್ಲಿ, ಕತ್ತಲನ್ನು ಸೀಳಿ, ಸಾಲುಸಾಲು ಬೆಳಕಿನ ಮಾಲೆ ಗೋಚರಿಸುತ್ತದೆ...

ಕತ್ತಲ ಸೀಳಿ ಬೆಳಕು ನುಗ್ಗಿದರೆ ಅದಕ್ಕೊಂದು ಒಳ್ಳೆಯ ಅರ್ಥವಿದೆ... ಬೆಳಕು ಬದುಕಿನ ಸಂಕೇತ. ಇದಕ್ಕಾಗಿಯೇ ತಮಸೋಮಾ ಜ್ಯೋತಿರ್ಗಮಯ ಅಂತ ಮಾತೇ ಇದೆ... ಆದರೆ, ಇಲ್ಲಿ ಕಾಣುವ ಬೆಳಕು ಯಾಕೋ ಕ್ರೂರವಾಗಿದೆ... ಈ ಬೆಳಕು ಸುತ್ತ ಹೊನಲಾಗಿ ಸೂಸುತ್ತಿರುವ ಚಂದ್ರಧಾರೆಯ ಜತೆಗೆ ಬೆರೆಯದಾಗಿದೆ. ಅಲ್ಲಿ ಸೃಷ್ಟಿಯಾಗಿರುವ ಮಾಯಾಜಾಲದ ಪ್ರಪಂಚಕ್ಕೆ ಸೇರದಾಗಿದೆ... ಕೃತಕವಾದ ಬೆಳಕು ಏನೋ ಅಪಶಕುನದಂತೆ ತೋರುತ್ತದೆ.

ಅಷ್ಟೊಂದು ಬೆಳಕು ಚೆಲ್ಲುತ್ತ ದೂರದ ಗುಡ್ಡದ ತಪ್ಪಲಲ್ಲಿ ಕಾಣುತ್ತಿರುವುದು ಸಾಲು ಸಾಲಾಗಿ ಹೋಗುತ್ತಿರುವ ವಾಹನಗಳ ಫ್ಲಡ್ ಲೈಟ್-ಗಳ ಬೆಳಕು. ಗಂಟೆ ನೋಡುತ್ತೇನೆ. ಸರಿಯಾಗಿ ಒಂದು. ಅಷ್ಟು ಹೊತ್ತಿನಲ್ಲಿ ಆ ಗುಡ್ಡಗಳ ತಪ್ಪಲಲ್ಲಿ ಅಷ್ಟೊಂದು ವಾಹನಗಳಿಗೇನು ಕೆಲಸ? ಈ ಅಪರಾತ್ರಿಯಲ್ಲಿ ಏನು ಮಾಡುತ್ತಿರಬಹುದು? ಇತ್ಯಾದಿ ತರ್ಕಗಳು ಮನದಲ್ಲಿ ಮೂಡಲಾರಂಭಿಸುತ್ತವೆ...

ರಸಭಂಗವೆಂದರೆ ಇದೇ ಇರಬೇಕು. ಹಾಗೇ ಹೊರಗೆ ಕಣ್ಣು ತೂರಿಸಿ ಕೂರುವ ಯತ್ನ ಮಾಡುತ್ತೇನೆ. ಝರಿ-ತೊರೆಗಳ ಜುಳುಜುಳ ಆಗಲೇ ಕಡಿಮೆಯಾಗಿಬಿಟ್ಟಿದೆ. ಸ್ವಲ್ಪವೇ ಸಮಯದಲ್ಲಿ ಗುಡ್ಡ-ಬೆಟ್ಟಗಳ ಶ್ರೇಣಿಯೂ ಬರಬರುತ್ತ ಕಡಿಮೆಯಾಗಿ, ಅಲ್ಲೊಂದು-ಇಲ್ಲೊಂದು ಮನೆಗಳು ಕಾಣಲಾರಂಭ... ಯಾವುದೋ ಪಟ್ಟಣದ ಕುರುಹುಗಳು ಇಲ್ಲಿವರೆಗೆ ನೋಡಿದ್ದೆಲ್ಲ ಕನಸೆಂಬಷ್ಟು ಸತ್ಯವಾಗಿ ಕಣ್ಣಿಗೆದುರಾಗುತ್ತವೆ... ಸರಿ, ಇನ್ನೇನೂ ನೋಡಲು ಉಳಿದಿಲ್ಲ, ಕಿಟಿಕಿ ಹಾಕಿ ಮಲಗಿ ಕಣ್ಣು ಮುಚ್ಚುತ್ತೇನೆ...

ಕಣ್ಮುಚ್ಚಿದವಳೇ, ಇಲ್ಲಿವರೆಗೆ ನೋಡಿದ್ದರಲ್ಲಿ ಒಳ್ಳೆಯದು ಕನಸಲ್ಲದಿರಲಿ, ಕೆಟ್ಟದು ನನಸಾಗದಿರಲಿ ಎಂದು ಜಗತ್ತನ್ನು ನಡೆಸುವ ಶಕ್ತಿಯೊಡನೆ ಬೇಡಿಕೊಳ್ಳುತ್ತೇನೆ...

Saturday, July 7, 2007

ಒಂದು ಒಳ್ಳೇ ದಿವಸ...

ಇವತ್ತು 07-07-07 ಶನಿವಾರ, ವಾರದ 7ನೇ ದಿನ, ಸಪ್ತಮಿ - ಒಳ್ಳೇ ದಿವಸವಂತೆ, ಒಳ್ಳೇ ಕೆಲಸ ಮಾಡಬೇಕಂತೆ. ಮೂರು ದಿವಸದಿಂದ ಬೇರೆ ಬೇರೆಯವರು ಹೇಳುತ್ತಲೇ ಇದ್ದಾರೆ. ಮೆಸೇಜುಗಳು ಬರುತ್ತಲೇ ಇವೆ. ಒಳ್ಳೇ ಕೆಲಸ ಅಂದ್ರೇನು? ಅದು ಮಾಡ್ಲಿಕ್ಕೆ ಒಳ್ಳೇ ದಿವಸವೇ ಬೇಕಾ? ಇವತ್ತು ಯಾರಿಗೂ ಏನೂ ಕೆಟ್ಟದಾಗುವುದಿಲ್ಲ ಅಂತೇನು ಗ್ಯಾರಂಟಿ? ಹೀಗೆಲ್ಲ ನಿನ್ನೆ ರಾತ್ರಿ ಯೋಚಿಸುತ್ತ ಕುಳಿತಿದ್ದೆ.
ಇವತ್ತು ಎದ್ದಾಗ ಮತ್ತೆ ಯಾರದೋ ಮೆಸೇಜು. ನೋಡುತ್ತಿದ್ದ ಹಾಗೇ ನನ್ನಿಂದಾಗುವ ನಾನು ಒಳ್ಳೇದು ಅಂದ್ಕೊಳ್ಳುವ ಕೆಲಸಗಳನ್ನು ಇವತ್ತು ಒಳ್ಳೇ ದಿವಸ ಅನ್ನುವ ನೆಪದಲ್ಲಾದರೂ ಮಾಡಿಬಿಡೋಣ ಅಂತನಿಸಿತು. ಹಾಗೆ ಒಂದು ಸಲ ಅನಿಸುವುದಷ್ಟೇ ಮುಖ್ಯ, ಅನಿಸಿದ ಮೇಲೆ ಕಾರ್ಯರೂಪಕ್ಕೆ ತರುವುದೇನು ಕಷ್ಟವಲ್ಲ!


************

ಕೆಲ ಸಮಯದ ಹಿಂದೆ ನಮ್ಮ ಚಿನ್ನಿ ಜತೆ ಮಾತಾಡುತ್ತ ಕುಳಿತಿದ್ದೆ. ಅವನು ವಿಶ್ವಗೋಸಮ್ಮೇಳನಕ್ಕೆ ಹೋಗಿ ಅಲ್ಲಿಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದ. ಅದನ್ನು ನನಗೂ ಹಂಚುತ್ತಿದ್ದ. ಅಲ್ಲಿ ಏನೇನು ಇತ್ತು, ಹೇಗಿತ್ತು, ಗುರುಗಳು ಏನು ಮಾತಾಡಿದರು, ಬೇರೆಬೇರೆ ಸೆಲೆಬ್ರಿಟಿಗಳು ಏನು ಮಾಡಿದರು, ಯಾವ್ಯಾವ ರೀತಿಯ ದನ ಇತ್ತು, ಇತ್ಯಾದಿ ಇತ್ಯಾದಿ. ಜತೆಗೆ ಅಲ್ಲಿಯ ಪರಿಸರ ಹೇಗಿತ್ತು, ಸುತ್ತಮುತ್ತ ಹೇಗಿತ್ತು, ಅಲ್ಲಿ ಪಕ್ಕದ ಕಾಡು ಹೇಗಿದೆ -ಇತ್ಯಾದಿ ಕೂಡಾ.

ಕೊನೆಗೆ ಆತ ಕೇಳಿದ, 'ಅಕ್ಕಾ, ನಾನು ದೊಡ್ಡೋನಾದ್ಮೇಲೆ ಏನ್ಮಾಡ್ತೀನಿ ಗೊತ್ತಾ?'

'ಗೊತ್ತಿಲ್ಲ, ಏನ್ಮಾಡ್ತಿ?' - ನಾನು.

'ಯಾವ್ದಾದ್ರು ದೂರದ ಹಳ್ಳಿಯಲ್ಲಿ ಜಾಗ ತಗೊಂಡು ಮನೆ ಕಟ್ಟಿಸ್ತೀನಿ, ನಾನು ರಿಟೈರ್ಡ್ ಆದ್ಮೇಲೆ ಅಲ್ಲಿ ಹೋಗಿ ಬದುಕ್ತೀನಿ... ಅಲ್ಲಿ ಜನ ಜಾಸ್ತಿ ಇರಲ್ಲ, ಗಲಾಟೆ ಇರಲ್ಲ, ಸುತ್ತಲೂ ಹಸಿರಿರತ್ತೆ, ಚೆನ್ನಾಗಿರತ್ತೆ...'

11ರ ಪುಟ್ಟ ಪೋರನಿಗೆ ಎಷ್ಟು ದೂರದೃಷ್ಟಿ ಬೆಳೆದುಬಿಟ್ಟಿದೆ! ಇವಾಗ್ಲೇ ರಿಟೈರ್-ಮೆಂಟ್ ನಂತರ ಏನ್ಮಾಡ್ಬೇಕು ಅಂತ ಪ್ಲಾನ್! ನನಗೆ ಮೊದಲಿಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಆಮೇಲೆ ಅಂದೆ, 'ಸೂಪರ್ ಆಗಿದೆ ನಿನ್ ಐಡಿಯಾ. ನನ್ನೂ ಕರೀತೀಯ ತಾನೇ?'

ಏನಿಲ್ಲವೆಂದರೂ ಇನ್ನೂ 45 ವರ್ಷಗಳ ನಂತರದ ಮಾತು. ಅವಾಗ ಹಳ್ಳಿಗಳು ಹಳ್ಳಿಗಳಾಗಿ ಉಳಿದಿರುತ್ತವೆಯಾ? ಪಟ್ಟಣಗಳಲ್ಲಿ ಇರಲು ಜಾಗವಿಲ್ಲದೆ ಮಹಡಿಯ ಮೇಲೆ ಮಹಡಿ ಕಟ್ಟಿಸಿ ಅದರಲ್ಲಿ ಬದುಕುತ್ತಾರೆ. ಹೀಗೆ Vertical ಆಗಿ ಎಷ್ಟು ದಿನ ಪಟ್ಟಣಗಳು ಬೆಳೆಯಲು ಸಾಧ್ಯ? Horizontal ಆಗಿ ಬೆಳೆಯಲು ಇನ್ನು ಪಟ್ಟಣಗಳಲ್ಲಿ ಜಾಗವಿಲ್ಲವೆಂದ ಮೇಲೆ ಪಟ್ಟಣಗಳು ಹಳ್ಳಿ ಕಡೆ ಹಬ್ಬಲೇ ಬೇಕು, ಹಬ್ಬಿಯೇ ಹಬ್ಬುತ್ತವೆ. ಇವನ್ನೆಲ್ಲಾ ಅವನಿಗೆ ಹೇಳಿ, ಅವನಿಗೆ ಅರ್ಥವಾಗದೆ, ಈ ಅಕ್ಕ ಏನು ಹೀಗೆ ಮಾತಾಡ್ತಾಳೆ ಅಂತ ಅವನಿಗನಿಸುವುದು ಬೇಡವೆಂದುಕೊಂಡೆ.

ಜತೆಗೇ ಪೇಟೆಯಲ್ಲಿಯೇ ಹುಟ್ಟಿ ಪೇಟೆಯಲ್ಲೇ ಬೆಳೆದ, ಸಹಜವಾಗಿಯೇ ಹಳ್ಳಿಯೆಂದರೆ ಅಕ್ಕರೆಗಳಿರಲಾರದ 5ನೇ ಕ್ಲಾಸಿನ ಹುಡುಗನಲ್ಲಿ ಇಷ್ಟು ಯೋಚನೆಯನ್ನಾದರೂ ಹುಟ್ಟಿಸಲು ಶಕ್ತವಾದ ವಿಶ್ವ ಗೋಸಮ್ಮೇಳನಕ್ಕೆ ನಾನು ಮನಸಿನಲ್ಲಿಯೇ ಥ್ಯಾಂಕ್ಸ್ ಹೇಳಿದೆ.

************

ಭಾಗಮಂಡಲದಿಂದ ಬಂದ ನಮ್ಮ ಹುಡುಗಿಯೊಬ್ಬಳು ಮೊನ್ನೆ ಅಲ್ಲಿಯ ಮಳೆಯ ಕಥೆ ಹೇಳುತ್ತಿದ್ದರೆ, ಮೈಯೆಲ್ಲ ಕಿವಿಯಾಗಿ ಕೇಳುತ್ತಿದ್ದೆ. ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡು, ಕೇರಳ, ಪಾಂಡಿಚೆರಿ- ಹೀಗೆ ಮನಬಂದಲ್ಲಿ ಹರಿದು ಜಗಳ ಹುಟ್ಟಿಸಿದ ತುಂಟಿ ಕಾವೇರಿ ಹುಟ್ಟುವ ಆ ಜಾಗದಲ್ಲಿ ಈ ಸಲ ಮಳೆ ಹೆಚ್ಚಂತೆ. (ಮಳೆರಾಯನಿಗೂ ಸುಪ್ರೀಕೋರ್ಟ್ ತೀರ್ಪು, ಅದರಿಂದಾಗಿ ಆಗುತ್ತಿರುವ ಜಗಳ ಗೊತ್ತಾಗಿ ಕರುಣೆ ತೋರಿದ್ದಾನೇನೋ?) ಎಲ್ಲಿ ನೋಡಿದರೂ ನೀರೇ ನೀರಂತೆ. ಸಿಕ್ಕಾಪಟ್ಟೆ ಚಳಿಯಂತೆ. ವರ್ಷಕ್ಕೆ ಆರು ತಿಂಗಳು ಚಳಿಗೆ ಗಾಡಿಯ ಬ್ಯಾಟರಿ ಸತ್ತು ಹೋಗಿ ಗಾಡಿ ಸ್ಟಾರ್ಟ್ ಮಾಡಲು ಹರಸಾಹಸ ಪಡುತ್ತಾರಂತೆ.

ಹಳೇಕಾಲದ ಅವರ ಮನೆಯಲ್ಲಿ ಮಣ್ಣಿನಲ್ಲಿ ಮಾಡಿದ ಎರಡು ಅಂತಸ್ತು ಇವೆಯಂತೆ. ಒಂದರಲ್ಲಿರುವ ಕೋಣೆಗಳನ್ನು ಯಾರೂ ಉಪಯೋಗಿಸುವುದಿಲ್ಲವಂತೆ, ಇನ್ನೊಂದನ್ನು ಮಳೆಗಾಲದಲ್ಲಿ ಶಟಲ್ ಆಡಲು ಉಪಯೋಗಿಸುತ್ತಾರಂತೆ. ಅದರ ವಿಸ್ತಾರವೆಷ್ಟಿರಬಹುದು, ಹೇಗೆ ಕಟ್ಟಿರಬಹುದು, ಅದನ್ನೊಮ್ಮೆ ಕಣ್ಣಿಂದಾದರೂ ನೋಡಬೇಕಲ್ಲಾ ಅಂತೆಲ್ಲಾ ಯೋಚಿಸುತ್ತಿದ್ದೆ ನಾನು.

ಅಲ್ಲಿ ಕಾವೇರೀ ನದೀ ಪಾತ್ರದಲ್ಲಿ ಅವರಿಗೆ ಸೇರಿದ ಮಟ್ಟಸವಾದ ಬಯಲು ಜಾಗವಿದೆ, ಅದರ ಮೇಲೆ ಅವಾಗಲೇ ಯಾರ್ಯಾರದೋ ಕಣ್ಣು ಬಿದ್ದಿದೆಯಂತೆ. ಸ್ವಿಮ್ಮಿಂಗ್ ಪೂಲ್ ಮಾಡುತ್ತೇವೆ, ಅದನ್ನು ನಮಗೆ ಮಾರಿ ಅಂತ ಕೇಳುತ್ತಿದ್ದಾರಂತೆ. ಅವಳ ಅಪ್ಪ ಒಪ್ಪಿಲ್ಲವಂತೆ.

************

ವರ್ಷಗಳ ಹಿಂದೆ ನಮ್ಮೂರಲ್ಲಿ ಒಂದು ಮಲಯಾಳಂ ಸಿನಿಮಾದ ಶೂಟಿಂಗ್ ನಡೆದಿತ್ತು. ಸಿನಿಮಾದ ಹೆಸರು WAR AND LOVE. ನಮ್ಮೂರಿನ ಗುಂಪೆ ಗುಡ್ಡೆಯನ್ನು ಕಥೆಯಲ್ಲಿ ಕಾರ್ಗಿಲ್ ಸಮೀಪದ ಯಾವುದೋ ಬೆಟ್ಟವೆಂದು ತೆಗೆದುಕೊಂಡಿದ್ದರು. ಅಲ್ಲಿಯೇ ಶೂಟಿಂಗ್ ನಡೆಸಿದ್ದರು. ಒಂದು ವಾರ ಅಲ್ಲಿ ಶೂಟಿಂಗ್ ತಂಡ ಬೀಡುಬಿಟ್ಟಿತ್ತು. ಊರಿನಲ್ಲಿ ಚಿಳ್ಳೆಪಿಳ್ಳೆಗಳಿಂದ ಹಿಡಿದು ಮುದುಕರ ವರೆಗೆ ಎಲ್ಲರಿಗೂ ಸಂಭ್ರಮ, ಗುಂಪೆಗುಡ್ಡೆಲಿ ಸಿನ್ಮಾ ಶೂಟಿಂಗ್ ಆಗ್ತಿದೆ ಅಂತ. ಊರಿಗೆ ಊರೇ ದಿನಾ ಶೂಟಿಂಗ್ ನೋಡಲು ಗುಂಪೆಗುಡ್ಡೆಗೆ ಹೋಗುತ್ತಿತ್ತು. ಅಷ್ಟು ದೂರ ಹೋಗಲು ಆಗದವರು ಅಕ್ಕಪಕ್ಕದ ಗುಡ್ಡಗಳನ್ನೇರಿ ಚುಕ್ಕೆಯ ಹಾಗೆ ಕಾಣುವ ಮನುಷ್ಯರನ್ನೂ, ಅಲ್ಲಿದ್ದ ಕ್ರೇನ್ ಇತ್ಯಾದಿಗಳನ್ನೂ ನೋಡಿ ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ನಾನು ಊರಿಗೆ ಹೋಗಿದ್ದು ಶೂಟಿಂಗ್-ನ ಕೊನೆಯ ದಿನ. ಆದಿನ ಅದೇನ್ಮಾಡ್ತಾರೋ ನೋಡೋಣ ಅಂತ ನಾನೂ ಗುಂಪೆಗುಡ್ಡೆಗೆ ಹೋದೆ. ಕಥೆ ನೆನಪಿಲ್ಲ ನನಗೆ. ಬೆಂಕಿ ಹತ್ತಿಕೊಂಡು ಉರಿಯುವ ದೃಶ್ಯ, ಯಾರೋ ಯಾರನ್ನೋ ಉಳಿಸುವ ದೃಶ್ಯ ಇತ್ಯಾದಿಗಳ ಶೂಟಿಂಗ್ ನಡೆಯಿತು.

ಶೂಟಿಂಗ್ ಮುಗಿಸಿ ತಂಡ ಹೊರಟುಹೋದ ಮೇಲೆ ಗುಂಪೆ ಗುಡ್ಡೆ ಹೇಗಿತ್ತು ಅಂತೀರಾ? ಚಾ ಕುಡಿದು ಬಿಸಾಕಿದ ಪ್ಲಾಸ್ಟಿಕ್ ಲೋಟಗಳು, ಕೂಲ್ ಡ್ರಿಂಕ್ಸ್ ಬಾಟಲ್-ಗಳು, ಪ್ಲಾಸ್ಟರ್ ಆಫ್ ಪ್ಯಾರಿಸ್-ನಿಂದ ಮಾಡಿದ ಮಾಡೆಲ್ ಗೊಂಬೆಗಳು, ಥರ್ಮಾಕೋಲ್, ಬ್ರಾಂಡಿ, ವಿಸ್ಕಿ ರಂ ಬಾಟಲ್-ಗಳು, ಅರ್ಧಮರ್ಧ ಉರಿದ ಮರದ ದಿಮ್ಮಿಗಳು, ಮಸಿ ಮೆತ್ತಿಕೊಂಡ ಕಲ್ಲುಗಳು, ನಿಜವಾಗಿಯೂ ಅಲ್ಲಿ WAR ಕಾಣುತ್ತಿತ್ತು... ಮನುಷ್ಯನ ಮತ್ತೆ ಪ್ರಕೃತಿಯ ನಡುವೆ. ಪ್ರಕೃತಿ ಸ್ವಲ್ಪ ಘಾಸಿಗೊಂಡು ಬಿದ್ದ ಹಾಗಿತ್ತು.

ಆದರೆ ಪ್ರಕೃತಿ ಅದನ್ನೆಲ್ಲ ಮರೆತು ಮತ್ತೆ ಅರಳುತ್ತಾಳೆ. ಈಗ ನೋಡಿ, ಅದೇ ಗುಂಪೆಗುಡ್ಡೆ. ಮಳೆಗೆ ಚಿಗುರಿಸಿಕೊಂಡಿದೆ, ಹಸಿರಾಗಿದೆ. ಕೆಲ ದಿನಗಳ ಹಿಂದೆ ತೆಗೆದಿದ್ದು.





(ಚಿತ್ರಗಳನ್ನು ಉಪಯೋಗಿಸಲು ಅನುಮತಿಯಿತ್ತ ಮಹೇಶನಿಗೆ ಪ್ರೀತಿಯಿಂದ ಥ್ಯಾಂಕ್ಸ್)





(ಪ್ರಕೃತಿ ಎಲ್ಲಿಯವರೆಗೆ ಚೇತರಿಸಿಕೊಳ್ಳಲು ಸಾಧ್ಯ? ಆಗಿರುವ ಹಾನಿ ಮಿತಿಯಲ್ಲಿರುವವರೆಗೆ ಮಾತ್ರ. ಗುಂಪೆಗುಡ್ಡೆಗೆ ಅಥವಾ ಇನ್ಯಾವುದೇ ಪಸಿರು ಪರಿಸರದ ತಾಣಕ್ಕೆ ಜಾಗಕ್ಕೆ ಟ್ರೆಕ್ಕಿಂಗ್ ಹೋಗುವ ಮಿತ್ರರೆಲ್ಲರಿಗೂ ಒಂದು ಸಲಹೆ... ನಿಮ್ಮಿಂದಾಗಿ ಅಲ್ಲಿಯ ಪರಿಸರ, ಜನ ತೊಂದರೆಗೊಳಗಾಗದಂತೆ ಪ್ರಕೃತಿಯ ಚೆಲುವನ್ನು ಆನಂದಿಸಿ. ಪ್ಲಾಸ್ಟಿಕ್, ಗ್ಲಾಸ್, ರಬ್ಬರ್, ರಾಸಾಯನಿಕಗಳಿಂದ ಮಾಡಿದ ಇನ್ಯಾವುದೇ ವಸ್ತು ಇತ್ಯಾದಿಗಳು ಮಣ್ಣೊಳಗೆ ಸೇರಿಕೊಂಡರೆ, non-biodegradable ಆಗಿರುವ ಕಾರಣ ಅವು ವರ್ಷಾನುಗಟ್ಟಲೆ FOREIGN BODYಗಳಾಗಿ ಹಾಗೇ ಉಳಿದುಕೊಳ್ಳುತ್ತವೆ. ಹಾಗಾಗಿ ಅಂಥವುಗಳ ಕೊಡುಗೆ ಪರಿಸರಕ್ಕೆ, ಮಣ್ಣಿಗೆ ನಿಮ್ಮಿಂದ ಸಿಗದ ಹಾಗೆ ನೋಡಿಕೊಳ್ಳಿ. ನಿಮಗೆಲ್ಲ ಇದು ಗೊತ್ತಿರಲಾರದು ಅಂತಲ್ಲ, ಆದರೆ ಗೊತ್ತಿಲ್ಲದವರು, ಅಥವಾ ಇದರ ಬಗ್ಗೆ ಹೆಚ್ಚು ಯೋಚಿಸದವರೂ ಕೂಡಾ ಇರಬಹುದು ಅನ್ನುವುದಕ್ಕೋಸ್ಕರ ಈ ಮಾತು)

************

ಹಣ್ಣು, ತರಕಾರಿ, ಸೊಪ್ಪುಗಳನ್ನು ರೈತರಿಂದ ಪಡೆದುಕೊಂಡು ಸುಪರ್ ಮಾರ್ಕೆಟಿನಲ್ಲಿ ಮಾರುವ ರಿಲಯನ್ಸ್ ಫ್ರೆಷ್ ಕೇರಳದಲ್ಲಿ ತನ್ನ ಚಟುವಟಿಕೆಗಳನ್ನು ಹಬ್ಬಿಸದ ಹಾಗೆ ಕೇರಳ ಸರಕಾರ ತಡೆದ ಸುದ್ದಿಯ ಮೇಲೆ ಗೆಳತಿ ನನ್ನ ಗಮನ ಸೆಳೆದಳು. ಆಗ ಹೈದರಾಬಾದಿನಲ್ಲಿದ್ದಾಗ ನಾವೆಲ್ಲ ರೈತ ಬಜಾರಿಗೆ ಹೋಗಿ ತರಕಾರಿ ಕೊಳ್ಳುತ್ತಿದ್ದ ದಿನಗಳು ನೆನಪಾಯಿತು. ಆ ರೈತ ಬಜಾರಿನಲ್ಲಿ ಎಷ್ಟು ಗಮ್ಮತ್ತು ಗೊತ್ತಾ? ಸಂಜೆಹೊತ್ತು ನಾವೆಲ್ಲ ಪುಟ್ಟ ಪುಟ್ಟ ಗುಂಪು ಕಟ್ಟಿಕೊಂಡು ತಿರುಗಾಡಲೆಂದು ರೈತಬಜಾರಿಗೆ ಹೋಗುತ್ತಿದ್ದುದು... ಆ ಸಂತೆಗೆ ಬರುತ್ತಿದ್ದ ಚಿಗುರುತ್ತಿರುವ ಮಕ್ಕಳು, ಬದುಕಿನ ಸಂಜೆಯಲ್ಲಿದ್ದ ಮುದುಕರು, ಜವಾಬ್ದಾರಿ ಹೊತ್ತ ಹೆಂಗಸರು, ಹಣ್ಣಿನ ವ್ಯಾಪಾರಿಗಳು, ಬದುಕಿನ ಬವಣೆಗೆ ಒರಟಾದರೂ ಒಳ್ಳೆ ಹೃದಯದ ಮೋಸವರಿಯದ ರೈತರು... ತೆಲುಗು ಬಿಟ್ಟು ಬೇರೆ ಭಾಷೆ ಬರದ ಆ ರೈತರು ಮತ್ತು ತೆಲುಗು ಬಿಟ್ಟು ಬೇರೆಲ್ಲ ಭಾಷೆಗಳು ಗೊತ್ತಿದ್ದ ನಾವುಗಳು ಸಂವಹನ ಸಾಧಿಸಲು ಪಡುತ್ತಿದ್ದ ಸಾಹಸ, ಕೊನೆಗೂ ಹರಕು ಮುರುಕು ಉರ್ದುವಿನಲ್ಲಿ ಡೀಲ್ ಮಾಡಿ ಕಡಿಮೆ ಬೆಲೆಗೆ ತರಕಾರಿ ಕೊಳ್ಳುತ್ತಿದ್ದುದು...

ಹೈದರಾಬಾದಿನ ಗೆಳತಿಯೊಬ್ಬಳು ಇತ್ತೀಚೆಗೆ ಹೇಳುತ್ತಿದ್ದಳು, ಈಗ ಆ ರೈತಬಜಾರಿನೆದುರಿಗೇ ರಿಲಯನ್ಸ್ ಫ್ರೆಶ್ ಸುಪರ್ ಮಾರ್ಕೆಟ್ ಬಂದಿದೆಯಂತೆ. ರೈತ ಬಜಾರಿನಲ್ಲಿ ರೈತರು ಮಾರುವುದಕ್ಕಿಂತ ಕಡಿಮೆ ಬೆಲೆಗೆ ತರಕಾರಿ ಅವರು ಮಾರುತ್ತಾರಂತೆ. ಅದರ ಜತೆಗೆ SUPER MARKETನ AMBIENCE ಬೇರೆ ಇರುತ್ತದಲ್ಲ? SOPHISTICATED ಜನ ರೈತಬಜಾರಿಗೆ ಹೋಗುವುದು ನಿಲ್ಲಿಸಿ ರಿಲಯನ್ಸ್ ಫ್ರೆಶ್-ಗೇ ಹೋಗುತ್ತಿದ್ದಾರಂತೆ.

ನಾನು ಕೇರಳ ಸರಕಾರ ಒಳ್ಳೆಯದೇ ಮಾಡಿದೆ ಅಂದುಕೊಂಡೆ. ಈ ತಡೆ ಕೂಡ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ. ಕೇರಳ ಸರಕಾರ ರಿಲಯನ್ಸ್-ಗೆ ತಡೆಯೊಡ್ಡಿದ್ದು ಸರಿಯೇ ತಪ್ಪೇ ಅನ್ನುವುದರ ಬಗ್ಗೆ CNN IBNನಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆದಿತ್ತು. SMS POLL ನಲ್ಲಿ 70% ಜನ ತಡೆಯೊಡ್ಡಿದ್ದು ಸರಿಯಲ್ಲ ಅಂದಿದ್ದರು. ಎಷ್ಟು ಜನ SMS ಕಳಿಸಿದ್ದರು ಅನ್ನುವುದು ಗೊತ್ತಾಗಲಿಲ್ಲ.

************

ಮೊನ್ನೆ ಮೊನ್ನೆ ಎಲ್ಲಾ ಪತ್ರಿಕೆಗಳಲ್ಲಿ, ರಿಯಲ್ ಎಸ್ಟೇಟ್ ಕುರಿತ ವೆಬ್ಸೈಟ್-ಗಳಲ್ಲಿ, ಪಬ್ಲಿಕ್ ರಿಲೇಶನ್ ವೆಬ್-ಸೈಟ್-ಗಳಲ್ಲಿ - ಒಂದು ಮಹತ್ವದ ಸುದ್ದಿ. ರಿಯಲ್ ಎಸ್ಟೇಟಿಗೆಂದೇ ಒಂದು ಟಿವಿ ಚಾನೆಲ್ ಆರಂಭವಾಗುತ್ತದಂತೆ. ಭಾರತಕ್ಕೆ ಮೊತ್ತಮೊದಲನೆಯದಾದ ಈ ಚಾನೆಲ್ ರಿಯಲ್ ಎಸ್ಟೇಟ್ ಕುರಿತ ಎಲ್ಲಾ ಸುದ್ದಿಗಳನ್ನೂ ನೀಡುತ್ತದಂತೆ. 24 ಘಂಟೆ, 365 ದಿವಸ ತುಂಬಬೇಕು ಅವರು, ದೇಶದೆಲ್ಲಾ ಮೂಲೆಗೂ ಹೋಗಲಿದ್ದಾರೆ, unexplored ಜಾಗಗಳ ಬಗ್ಗೆ ಮಾಹಿತಿಯಂತೆ. ಟೂರಿಸ್ಟ್ ಸ್ಪಾಟ್-ಗಳ ಬಗ್ಗೆ, heritage homeಗಳ ಬಗ್ಗೆ, ಪರಿಸರದ ಬಗ್ಗೆ (:-]) ಮಾಹಿತಿಯಂತೆ.

ಇದಕ್ಕೆ ಜಾಹೀರಾತುಗಳ ಮಳೆಯೇ ಸುರಿಯಲಿದೆ, ಯಾಕಂದರೆ ಚಾನೆಲ್-ನ ಗುರಿ ಧನಿಕರು, ದುಡ್ಡಿರುವವರು, ಅಂದುಕೊಂಡದ್ದನ್ನು ಕ್ಷಣಮಾತ್ರದಲ್ಲಿ ಕೊಳ್ಳುವ ಶಕ್ತಿಯುಳ್ಳವರು ಮಾತ್ರ. ಚಾನೆಲ್ ಜತೆ ನಾವೂ ಅವರನ್ನು ಮುಟ್ಟೋಣ, ಅವರ ದುಡ್ಡಿನ ಪಾಲೊಂದು ತಮಗಿರಲಿ ಎಂದು ವಿವಿಧ ಬ್ರಾಂಡ್-ಗಳು ಆಶಿಸುವುದು ತಪ್ಪಲ್ಲ ಬಿಡಿ. ಅದು ಉಳ್ಳವರಿಂದ, ಉಳ್ಳವರಿಗಾಗಿ ಉಳ್ಳವರೇ ನಡೆಸುವ ಚಾನೆಲ್, ಉಳ್ಳವರುಳಿದು ಬೇರೆಲ್ಲರೂ ಅಲ್ಲಿ ಅಪ್ರಸ್ತುತ.

ಒಂದು ಕ್ಷೇತ್ರಕ್ಕೆ ಒಬ್ಬನೇ ರಾಜ ಸಾಧಾರಣವಾಗಿ ಈಗಿನ ಕಾಲದಲ್ಲಿ ಎಲ್ಲೂ ಇಲ್ಲ. ಇನ್ನೂ ಒಂದಷ್ಟು ಇದೇ ರೀತಿಯ ಚಾನೆಲ್-ಗಳು ಆರಂಭವಾಗಲಿಕ್ಕಿದೆ. ರಿಯಲ್ ಎಸ್ಟೇಟ್ ಕುರಿತ ಮಾಹಿತಿ ಮುಂದಿನ ದಿನಗಳಲ್ಲಿ ವೇಗವಾಗಿ ಹಬ್ಬಲಿದೆ, ಹಾಗೇ Suburban area ಮತ್ತು ಹಳ್ಳಿಗಳಲ್ಲಿ ಜಾಗಗಳ ಕೊಡು-ಕೊಳ್ಳುವಿಕೆ ಕೂಡಾ ಹಾಗೇ ಹೆಚ್ಚಲಿದೆ. ಮನೆಗಳು ಹೆಚ್ಚಲಿವೆ. Construction companyಗಳು, ಮತ್ತು ಇದಕ್ಕೆ ಸಂಬಂಧಿಸಿದ ಬೇರೆ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚಟುವಟಿಕೆ ಹೆಚ್ಚಲಿದೆ. ಈ ಬೆಳವಣಿಗೆಗೆ ಪೂರಕವಾಗಿ ಸೂಪರ್ ಮಾರ್ಕೆಟ್-ಗಳು, ಮಾಲ್-ಗಳು, ಐಷಾರಾಮದ ವಸ್ತುಗಳು ಮತ್ತಿತರ ಬಿಸಿನೆಸ್-ಗಳು ಹಳ್ಳಿಗಳಿಗೆ ಹಬ್ಬುವ ದಿನಗಳು ದೂರವಿಲ್ಲ.

ಅದೆಲ್ಲಾ ಹಾಗಿರಲಿ, ನಾನು ಮಾತ್ರ ನಮ್ಮ ಚಿನ್ನಿ 45 ವರ್ಷಗಳ ನಂತರ ಕೊಂಡುಕೊಳ್ಳಲಿಕ್ಕಿರುವ ದೂರದ ಹಳ್ಳಿಯಲ್ಲಿರುವ ಪರಿಸರದ ನಡುವಿರುವ ಗಲಾಟೆಯಿಲ್ಲದ ಶಾಂತ ಜಾಗ ಸಿಗಬಹುದೇ ಅಂತ ಯೋಚಿಸುತ್ತಿದ್ದೇನೆ. ಜಾಹೀರಾತು, ಮಾಧ್ಯಮ ಎಲ್ಲವೂ ಎಷ್ಟು ಹಾನಿ ಮಾಡಬಲ್ಲವು ಅಂತ ಗೊತ್ತಿದ್ದೂ ಅದರಲ್ಲೇ ಬದುಕಬೇಕಾದ ಅನಿವಾರ್ಯತೆ, ಮೋನೋಕಲ್ಚರ್ ಪರಿಸರಕ್ಕೆ ಕೆಟ್ಟದು ಅಂತ ಗೊತ್ತಿದ್ದೂ ಅದರ ಬಗ್ಗೆ ಸುಳ್ಳುಸುಳ್ಳೇ ಹೊಗಳಿ ಡಾಕ್ಯುಮೆಂಟರಿ ಮಾಡಬೇಕಾದ ನನ್ನ ಖರ್ಮ, ಎಲ್ಲಾ ಗೊತ್ತಿದ್ದೂ ಏನೂ ಮಾಡಲಾಗದ ಅಸಹಾಯಕತೆಗೆ ಮೌನ ಸಾಥಿಯಾಗಿದೆ.

*************

ಒಳ್ಳೇ ಕೆಲಸ ಅಂದ್ನಲ್ಲ, ನಮ್ಮನೆ ಎದುರು ಹೂವಿನ ಗಿಡದ ಚಟ್ಟಿ ಹಾಕುತ್ತಿದ್ದೇನೆ. ಮತ್ತು ಬಿಡಬ್ಲ್ಯುಎಸ್ ಎಸ್ ಬಿಯವರು ಪ್ರತಿ ಎರಡು ದಿವಸಕ್ಕೆ ಒಂದು ಸಲ ಮರೆಯದೇ ನೀರುಬಿಡುವ ಕೃಪೆ ತೋರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ.

*************

WORLD IS NOT WHAT WE INHERIT FROM OUR ANCESTORS, BUT WHAT WE BORROW FROM OUR CHILDREN...

Saturday, January 13, 2007

ಹಸಿರು - ಮನಸು

Orkutನಲ್ಲಿ ಪರಿಸರ ಸ೦ಬ೦ಧಿ ಗ್ರೂಪ್ ಗಳಲ್ಲಿ ಏನಿದೆ ಅ೦ತ ನೋಡ್ತಿದ್ದೆ. ಅದ್ಯಾಕೋ ಬೇಜಾರಾಯ್ತು.. ನಮ್ಮಲ್ಲಿ ಹೊಸದಾಗಿ ಯೋಚನೆಗಳೇ ಇಲ್ವಾ.. ಅನಿಸ್ತು... ಅಥವಾ, ಆಧುನಿಕ ಜೀವನಶೈಲಿಗೆ ನಾವೆಷ್ಟು ಒಗ್ಗಿ ಹೋದಿದ್ದೀವ೦ದ್ರೆ, ವಾಪಸ್ ಹೋಗಲಿಕ್ಕೆ ಸಾಧ್ಯವೇ ಆಗದಷ್ಟು.

ಪರಿಸರ ಉಳಿಸಬೇಕಾದ್ರೆ, ನಮ್ಮ comfort, convenience, ಸುಖಕ್ಕೆ ಉಪಯೋಗವಾಗುವ ಎಷ್ಟೊ೦ದು ವಸ್ತುಗಳನ್ನ ಬಿಟ್ಟು ಬಿಡಬೇಕು... ಅದು ಆಗೋದಿಲ್ಲ.. practically impossible!! ಮತ್ತೆ ಯಾಕೆ ಪರಿಸರ ಉಳಿಸೋ ತವಕ? ಬರೀ ತವಕ ಇದ್ರೆ ಸಾಕಾ? ಅದನ್ನ ಸಾಧಿಸೋದಕ್ಕೆ ಬೇಕಾದ will power - ಇಚ್ಛಾಶಕ್ತಿ ನಮ್ಮಲ್ಲಿಲ್ಲ.. ನನ್ನೊಬ್ಬಳಿ೦ದ, ಅಥವಾ ನನ್ನೊಬ್ಬನಿ೦ದ ಏನಾಗತ್ತೆ? ಅನ್ನೋ ಮನೋಭಾವ - ನನ್ನನ್ನೂ ಸೇರಿಸಿ, ಎಲ್ಲರಲ್ಲೂ ಇದೆಯೇನೋ..

ಇದೆಲ್ಲಾ ಯೋಚಿಸದೆ ಇರುವಷ್ಟು ಸಮಯ ಆರಾಮಾಗಿರ್ತೀವಿ, ಯೋಚಿಸಿದ್ರೆ ಹಿ೦ಸೆ ಅನ್ಸತ್ತೆ... ಪರಿಹಾರ???