Showing posts with label ಹರಟೆ. Show all posts
Showing posts with label ಹರಟೆ. Show all posts

Wednesday, September 26, 2018

ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ

Image may contain: one or more people
(ಕಾಮನಬಿಲ್ಲು, ಓನಾಮ, ಮಜಲು, ಎಂಜಿರೋಡ್)
ಎಂ ಜಿ ರೋಡಿನ ತುಂಬೆಲ್ಲ ಹೂಳಿದ
ಕರಿಕಾಂಕ್ರೀಟಿನ ಕಂಬಗಳ
ಮೈ ತಿಕ್ಕಿತೊಳೆದು
ಪೋಸ್ಟರುಗಳಿಗೆ ಓನಾಮ ಹಾಕಿ
ಹೊಸ ಬಣ್ಣ ಮೆತ್ತಿದಾಗ
ಮಜಲುಮಜಲಲ್ಲೂ ಕಾಣುವುದು
ಬರೀ ಕೆಂಪುಕಂಬಗಳಲ್ಲ,
ಕಾಮನಬಿಲ್ಲೂ ಕೂಡ.
ಕಾಣಬೇಕೆಂಬವರಿಗೆ ಕಾಣುತ್ತದೆ
ಮಳೆಯಿಲ್ಲದ ಬರಡುಬಾನಿನ
ಎಂಜಿರೋಡಿನ ಭುವಿಯಲ್ಲೂ
ಹಾಸಿ ಕಾಡುವ ಕಾಮನಬಿಲ್ಲು

===================

(ಪುನೀತ -ದರ್ಶನ- ಯಶ- ಸುದೀಪ)
ಬೆಂಗಳೂರ ಆಷಾಢವೆಂದರೆ ಹೀಗೆ...
ಯಾವಾಗಲೋ ಬರುವ ಮಳೆ,
ಹೊರಹೋದರೆ ಕೊಚ್ಚೆಕೊಳಕು,
ಒಂದಿನವೂ ಇರದಾಗದ ಟ್ರಾಫಿಕ್ ಜಾಮು
ಎಲ್ಲೆಲ್ಲೂ ಡಿಸ್ಕೌಂಟ್ ಸೇಲು..
ಮನೆಯೊಳಗೆ ಅಮ್ಮನ ಕೈಯಡುಗೆ,
ಚಳಿಜ್ವರ, ಕಷಾಯ, ಟ್ಯಾಬ್ಲೆಟ್ಟು,
ಉಪಚಾರ, ಬುದ್ಧಿಮಾತು,
ನನಗೆ ಮಾತ್ರ ನಿನ್ನದೇ ಧ್ಯಾನ
ಎಲ್ಲರೂ ಶ್ರಾವಣಕ್ಕೆ ಚಾತಕವಾದರೆ
ನಾ ಮಾತ್ರ ಇನ್ನೆಲ್ಲಿವರೆಗೆ ಕಾಯಬೇಕೋ,
ಅದ್ಯಾವಾಗಲೋ ನಿನ್ನ ದರ್ಶನ?
ಹೊದಿಕೆಯೊಳಗಿನ ಬಿಸುಪು,
ನೀತಂದ ಕನವರಿಕೆಯ ಕೋಶ,
ಅದೇನೋ ಅರಿಯದ ಆತಂಕ,
ವಿಷ್ಣು ಸಹಸ್ರನಾಮ ದಿನಾ ಕೇಳಿದರೆ
ಯಶಂ ಪ್ರಾಪ್ನೋತಿ ವಿಪುಲಂ ಅನ್ನುತ್ತಾಳೆ
ಕಂಪ್ಯೂಟರಿನೊಳಗಿಂದ ಸುಬ್ಬುಲಕ್ಷ್ಮಿ
ಅದ್ಹೇಗೆ ಅಮ್ಮ, ಅಂದರೆ ನನ್ನಮ್ಮ ಬೈಯುತ್ತಾಳೆ,
ಹೊತ್ತಾಯಿತು ಮಲಕೋ ಕೂಸೇ,
ಸಾಕು ತಲೆಹರಟೆ, ಆರಿಸು ದೀಪ.

=======
(ಗಮನ-ಗಹನ-ಗಗನ-ಬೆಂಡೆಕಾಯಿ)
ಬೆಂಡೆಕಾಯಿ ಬೆಳೆಸುವುದೆಂದರೆ ಸುಮ್ಮನೆಯಲ್ಲ
ಬೇಕದಕೆ ಬಹಳ ತಿಳುವಳಿಕೆ, ಅದು ಆಟವಲ್ಲ
ಮಣ್ಣು ಗೊಬ್ಬರ ಹಾಕಿ ಬೀಜ ಬಿತ್ತು
ಹಕ್ಕಿತಿನ್ನದಿರಲಿ, ಅದಕ್ಕೊಂದು ಕೋಟೆ ಕಟ್ಟು
ನೀರು ಹಾಕು, ಹೆಚ್ಚೂ ಬೇಡ, ಕಡಿಮೆಯೂ ಬೇಡ
ನೆರಳಿರಲಿ, ಬೆಳಕಲ್ಲಿ ಬೀಜ ಚಿಗುರೊಡೆಯುವುದು ತಡ
ಮೊಳಕೆ ಬಂದೀತು ಇನ್ನೇನು, ಗಮನವಿರಲಿ,
ಎಳೆಚಿಗುರು ತಿನ್ನಲು ಓಡಿಬರುವವು ಹೆಗ್ಗಣ, ಇಲಿ..
ಗಿಡ ಬಂತೇ, ಮನೆಯ ಚಿಳ್ಳೆಪಿಳ್ಳೆಗಳಿಗೆ ಬಲು ಖುಷಿ
ನೀರು ಹಾಕುವ ಭರಕೆ ಗಿಡದ ಬುಡವೆಂದೂ ಹಸಿಹಸಿ
ಮತ್ತೆ ಸುರಿ ಗೊಬ್ಬರ, ಇದು ಮಗುವಿಗಿಂತ ಹೆಚ್ಚು
ತಾನೆ ಬೆಳೆವ ತರಕಾರಿ ಅಂದ್ರೆ ಅದೊಂದು ಹುಚ್ಚು
ಹಂತ ಹಂತಕ್ಕೆ ಚಿತ್ರ ತೆಗೆದು ಫೇಸ್ಬುಕ್ಕಲ್ಹಾಕು
ಲೈಕು ಕಮೆಂಟು ಶೇರು ಆಹಾ ಎಂಥಾ ಶೋಕು
'ಓಹ್, ಇದ್ಯಾಕೆ ಮುರುಟಿದೆ ಎಲೆ,' ಅಂತಾರೆ ಗೆಳತಿ
'ಹಾಗ್ಮಾಡು ಹೀಗ್ಮಾಡು' ಚರ್ಚೆ ಮುಟ್ಟುತ್ತದೆ ಗಹನಗತಿ
ಅಂತೂ ಇಂತೂ ಬಂತು ಹೂವು, ಎಲ್ಲೆಲ್ಲೂ ಖುಷಿ ಖುಷಿ
ಅಗೋ ಎಳೆಕಾಯಿಯೂ ಬಂತು, ಈಗ ತಟ್ಟುತ್ತಿದೆ ಬಿಸಿ
ಪಕ್ಕದ್ಮನೆ ಆಂಟಿ ಕಣ್ಣಿಂದ ಹೇಗೆ ಕಾಪಾಡಲಿ ಇದನು?
ಹಾಕು ಪುಟ್ಟುಕೂಸಿನ ಸುಸ್ಸು, ಎಕ್ಸೆಲೆಂಟ್ ಪ್ಲಾನು :-)
ಹಾಕಿದರೆ ಸಾಕೇ, ಹೇಳು, ಇದೇ ಗೊಬ್ಬರ ನಮ್ಮನೇಲಿ..
ಆಂಟಿ ಕೇಳಬೇಕು, ಅಂದುಕೊಳ್ಳಬೇಕು, ನಂಗ್ಬೇಡ, ಅಲ್ಲೇ ಇರ್ಲಿ
ಪೇಟೆಯಲ್ಲಿ ಬೆಂಡೆಕಾಯಿ ಬೆಲೆ ಮುಟ್ಟಿದೆ ಗಗನ
ನಾ ಕಷ್ಟಪಟ್ಟು ಉಳಿಸಿದ ಬೆಂಡೆಕಾಯಿ, ಬೆಲೆಕಟ್ಟಲಾಗದ ರತ್ನ!

( :-P :-P :-P ಪಕ್ಕದ್ಮನೆ ತರಕಾರಿ ಕದಿಯೋ ಎಲ್ಲಾ ಆಂಟಿಯರ ಕ್ಷಮೆಕೋರಿ )


Friday, October 20, 2017

ಯಾರಿಗೆಷ್ಟು ಬೇಕೋ ಅಷ್ಟು ಬೆಳಕು, ಕತ್ತಲು ದಕ್ಕಲಿ....



ಕತ್ತಲು ಮತ್ತು ಬೆಳಕಿನ ನಡುವಿನ ಸಂಬಂಧ ಇಂದು ನಿನ್ನೆಯದಲ್ಲ. ಒಂದಿಲ್ಲದೆ ಇನ್ನೊಂದಿಲ್ಲ, ಒಂದಿಲ್ಲದೆ ಇನ್ನೊಂದಕ್ಕೆ ಬೆಲೆಯೂ ಇಲ್ಲ. ನಾಣ್ಯವೊಂದರ ಎರಡು ಮುಖಗಳಂತೆ ಇವು. ಎರಡೂ ಇದ್ದರೇ ಜೀವನ ಪೂರ್ಣ. ನಿತ್ಯದ ಕೆಲಸ ಕಾರ್ಯಗಳನ್ನು ಮುಗಿಸಲು ಬೆಳಕಿನ ಸಾಂಗತ್ಯ ಬೇಕು. ನಂತರದ ವಿಶ್ರಾಂತಿಗೆ ಕತ್ತಲಿನ ಮಡಿಲೇ ಬೇಕು.
ನಿಶೆ ಕನಸು ಹೊತ್ತು ತರುವವಳು, ಭರವಸೆಯ ಬೀಜ ಮನದಲ್ಲಿ ಬಿತ್ತುವವಳು. ಆದರೆ, ಉಷೆಯ ಸಹಕಾರವಿಲ್ಲವಾದಲ್ಲಿ ಇವು ನನಸಾಗುವುದು ಸಾಧ್ಯವೇ? ಉಷೆ ಪ್ರೋತ್ಸಾಹಿಸುವ ಕಾರ್ಯಶೀಲತೆ, ಚಟುವಟಿಕೆಗಳ ಮೂಲಕವೇ ಕನಸುಗಳಿಗೆ ರೆಕ್ಕೆ ಮೂಡಿ ಜೀವತಳೆಯಬೇಕು.. ಹಾಗೇ ಕನಸಿಲ್ಲದ, ಕತ್ತಲೆಯ ನೆಮ್ಮದಿಯಿಂದ ವಂಚಿತವಾದ ಜೀವನವೂ ಒಂದು ಜೀವನವೇ? ಸದಾ ಬೆಳಕು ತುಂಬಿದ ಕೋಣೆಯಲ್ಲಿ ನೆಮ್ಮದಿಯ ನಿದ್ದೆ ಸಾಧ್ಯವೇ?
ಬೆಳಕು-ಕತ್ತಲೆ - ಇವೆರಡರಲ್ಲಿ ಒಂದು ಮಾತ್ರ ಶ್ರೇಷ್ಠವೆಂದು ಪ್ರತಿಪಾದಿಸುವ 'ತಮಸೋಮಾ ಜ್ಯೋತಿರ್ಗಮಯ' ಎಂಬ ಘೋಷಣೆ, ಹುಲುಮಾನವರು ಅತಿ ಬುದ್ಧಿವಂತಿಕೆಯಿಂದ ಮಾಡಿದ ರಾಜಕಾರಣ—ಅಷ್ಟೇ.
******************
ಕಾರ್ಗತ್ತಲ ಹಾದಿ... ಮನೆ ದೂರ, ಕನಿಕರಿಸಿ ನನ್ನ ಕೈಹಿಡಿದು ನಡೆಸು ಬೆಳಕೇ, ಬಾ ಎಂದು ಕೇಳಿದ ಕವಿಗೆ ಈ ರಾಜಕಾರಣದ ಅರಿವಿದ್ದಿರಲಾರದು. ಇದ್ದಿದ್ದರೆ, ಹಾದಿ ತಪ್ಪಿದಾಗ ಕತ್ತಲ ದಾರಿಗೆ ಬೇಕಾದ ಕೈದೀಪ ಮನದೊಳಗೇ ಇದೆ ಎಂಬುದರ ಅರಿವೂ ಆತನಿಗೆ ಆಗಿರುತ್ತಿತ್ತು. ಎಲ್ಲೋ ಇರುವ ಬೆಳಕಿಗೆ ಹಾತೊರೆಯುವ ಬದಲು ಒಳಗಿನ ಬೆಳಕನ್ನು ಆತ ಕಂಡುಕೊಳ್ಳುತ್ತಿದ್ದನೇನೋ...
******************
ಕೆಲವು ವಿಧದ ಬೆಳಕುಗಳು ಅಪಾಯಕಾರಿಯೂ ಹೌದು... ಮಡಿಲಲ್ಲಿರುವ ನಿಗಿನಿಗಿ ಸುಡುವ ಕೆಂಡ ಬೆಳಕೇನೋ ನಿಜ. ಆದರೆ ಅದಕ್ಕೆ ಹಾಕಬೇಕಿರುವುದು ನೀರು, ಇದ್ದಲು ಅಥವಾ ಸೌದೆಯಲ್ಲ. ಸೌದೆ ಹಾಕಿದಲ್ಲಿ ಅದು ಮಡಿಲು ಸುಡುವುದು ಖಚಿತ. ಸುಡುವ ಸತ್ಯಕ್ಕೆ ನೀರು ಹಾಕುವವರು ಬೆಳಕನ್ನು ನಂದಿಸಿದರು, ಸತ್ಯವನ್ನು ಅಡಗಿಸಿದರು ಎಂಬ ಇನ್ನೊಂದು ರೀತಿಯ ಅಪವಾದಕ್ಕೂ ಒಳಗಾಗಬೇಕಾಗುತ್ತದೆ.
ಕುಶಾಲಿಗೆಂದು ಹಚ್ಚುವ ಬಣ್ಣಬಣ್ಣದ ಬಿರುಸುಮತಾಪುಗಳೂ ಅಷ್ಟೆ. ಬಣ್ಣ ಬರಬೇಕೆಂದು ಅದಕ್ಕೆ ಹಾಕುವ ವಿಧವಿಧದ ಪದಾರ್ಥಗಳಿಂದ ಹಾನಿಕಾರಕವಾಗಿ ಬದಲಾಗುತ್ತವೆ. ತಮಾಷೆ ನೋಡುವ ಭರದಲ್ಲಿ ಮಗು ಹಚ್ಚುವ ಬೆಳಕಿನ ಪುಂಜ ಹಾದಿಯಲ್ಲಿ ಹೋಗುವವರ ಕಣ್ಣು ತೆಗೆದರೂ ತೆಗೆದೀತು, ಸಿಕ್ಕಿದ್ದಕ್ಕೆ ಬೆಂಕಿ ಹಚ್ಚಿದರೂ ಹಚ್ಚೀತು.
******************
ಈ ಬೆಳಕಿನ ಹುಚ್ಚು ಇನ್ನೂ ಹಲವು ಬಗೆ ಅನಾಹುತಗಳಿಗೆ ಕಾರಣವಾಗುತ್ತದೆ. ಅರ್ಧ ಜಗತ್ತಿಗೆ ಕತ್ತಲೆ ಯಾವಾಗಲೂ ಇರುತ್ತದೆ. ಇನ್ನರ್ಧಕ್ಕೆ ಬೆಳಕು. ಆದರೆ ಕತ್ತಲಲ್ಲಿರುವವರೂ ಕೃತಕ ಬೆಳಕು ಸೃಷ್ಟಿಸಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವುದು ನಿಜ ತಾನೇ. ಬೆಳಕಿನ ಶ್ರೇಷ್ಠತೆ ಬರುವುದು ಇದರಿಂದಲೇ. ಬೆಳಕಿನ ಬೆಲೆ ವ್ಯಾವಹಾರಿಕವಾಗಿ ಜಾಸ್ತಿ. ಬೆಳಕು ಕತ್ತಲೆಯನ್ನು ಮೀರಿ ನಮ್ಮನ್ನು ಮುನ್ನಡೆಸುವ ಸಾಧನ, ಮತ್ತು ಇದರ ಅವಶ್ಯಕತೆ ಎಲ್ಲರಿಗೂ ಇದೆ. ಬೆಳಕಿಲ್ಲದೇ ಬದುಕು, ವ್ಯವಹಾರ ಯಾವುದೂ ಇಲ್ಲ. ಅದಕ್ಕೇ ತಮಸೋಮಾ ಜ್ಯೋತಿರ್ಗಮಯ ಅಂದರು. ತಪ್ಪಲ್ಲ, ಆದರೆ ಅದು ಬೆಳಕಿಗೆ ಅಗತ್ಯಕ್ಕಿಂತ ಹೆಚ್ಚಿನ ತೂಕ ಕೊಟ್ಟು, ಕತ್ತಲೆ ಕೆಟ್ಟದೆಂಬಂತೆ ತೋರಿಸುತ್ತದೆಯಲ್ಲವೇ? ಅದೇ ಸಮಸ್ಯೆ.
 
******************
ಎಲ್ಲೋ ಇರುವ ಬೆಳಕಿಗೆ ಹಾತೊರೆಯುವುದರಿಂದ ಏನು ತೊಂದರೆ? ಒಂದು ವಸ್ತು ಯಾವುದೋ ರೀತಿಯಲ್ಲಿ ಅಗತ್ಯ ಎನ್ನುವ ಅರಿವು, ಆ ವಸ್ತುವಿನ ಬೆಲೆಯನ್ನು ಹೆಚ್ಚಿಸುತ್ತದೆ. ಮತ್ತು ನಕಲಿ ವ್ಯವಹಾರಗಳಿಗೆ ಎಡೆಮಾಡಿಕೊಡುತ್ತದೆ. ಕಲಬೆರಕೆಗಳು ಹೆಚ್ಚುತ್ತವೆ.
ಬೆಳಕಿನ ವಿಚಾರದಲ್ಲೂ ಅಷ್ಟೇ. ಕತ್ತಲಿಗೂ ಬೆಳಕಿನ ವೇಷ ತೊಡಿಸಿ ಮಾರುವವರು ಹುಟ್ಟಿಕೊಳ್ಳುತ್ತಾರೆ. ಅಂಗೈಯ ಕಿಟಿಕಿಯಲ್ಲಿ ವಿಶ್ವ ನೋಡಬಹುದಾದಷ್ಟು ಬೆಳಕಿರುವ ಈ ಕಾಲಘಟ್ಟದಲ್ಲಿಯೂ ಕಿಟಿಕಿಯಲ್ಲಿ ಕೋಣೆ ತೋರಿಸಿ ಅದನ್ನೇ ವಿಶ್ವವೆಂದು ಮಾರಾಟ ಮಾಡುವವರು ಕಡಿಮೆಯಿಲ್ಲ. ಕತ್ತಲೆಯನ್ನು ಬೆಳಕನ್ನಾಗಿಸಿ, ಬೆಳಕನ್ನು ಕತ್ತಲೆಯಾಗಿಸಿ ಆಟವಾಡುವವರ ಸಂಖ್ಯೆ ಬಲುಜಾಸ್ತಿ. ಅರೆಗತ್ತಲೆಯಲ್ಲಿ ಅಥವಾ ಬಣ್ಣದ ಬೆಳಕಲ್ಲಿ ಏನು ಮಾಡಿದರೂ ಚಂದ—ಹಾಲಿಗೆ ಹುಳಿ ಹಿಂಡಬಹುದು, ಮನಸ್ಸುಗಳನ್ನು ಒಡೆಯಬಹುದು, ವಿಷಬೀಜ ಬಿತ್ತಬಹುದು. ತಮ್ಮೊಳಗಿನ ಬೆಳಕನ್ನು ನಂಬದ, ತಮ್ಮ ತಿಳುವಳಿಕೆಯಲ್ಲಿ ನಂಬಿಕೆಯಿಲ್ಲದ ಜನವನ್ನು ಹೇಗೆ ಬೇಕಾದರೂ ಆಟವಾಡಿಸಬಹುದು.
******************
ನಮ್ಮೊಳಗಿನ ತಿಳಿವಿನ ಬೆಳಕು ಎಷ್ಟು ಕಡಿಮೆಯೋ, ಬಾಹ್ಯದಲ್ಲಿ ಕಾಣುವ ಬೆಳಕು ನಮಗೆ ಅಷ್ಟೇ ಭೀಕರವೆನಿಸುತ್ತದೆ. ಬೆಳಕಿನ ಸಹವಾಸವೇ ಬೇಡವೆನಿಸಿ ಬೆಳಕಿಗೊಂದು ನಮಸ್ಕಾರ ಹಾಕಿ ಕತ್ತಲಲ್ಲೇ ಇರುತ್ತೇವೆ ಎಂಬ ಜನಕ್ಕೇನೂ ಕಡಿಮೆಯಿಲ್ಲ. ಬೆಳಕಿನ ಕುರಿತು ವ್ಯಂಗ್ಯವಾಡುವವರಿಗೂ ಕಡಿಮೆಯಿಲ್ಲ.
ಆದರೆ ಇಷ್ಟು ಮಾತ್ರ ನಿಜ. ಕತ್ತಲೆ-ಬೆಳಕು ಎರಡೂ ಜೀವನಕ್ಕೆ ಅವಶ್ಯಕ. ಯಾರೋ ಹೊಗಳಿದರೆಂದು ಬೆಳಕು ಹಿಗ್ಗುವುದಿಲ್ಲ, ಇನ್ಯಾರೋ ತೆಗಳಿದರೆಂದು ಕತ್ತಲೆ ಕುಗ್ಗುವುದಿಲ್ಲ. ಕತ್ತಲೆಯ ಕೆಲಸವೇ ಬೇರೆ. ಬೆಳಕಿನ ಕೆಲಸವೇ ಬೇರೆ. ಕತ್ತಲಿನಲ್ಲಿ ಬೆಳೆಯುವ ಹೂವು ಅರಳಲು ಸೂರ್ಯಕಿರಣಗಳು ತಾಗಲೇಬೇಕು. ಹಗಲಿನ ಬೆಳಕಲ್ಲಿ ಆಹಾರ ಸಂಪಾದಿಸುವ ಗಿಡ-ಮರಗಳು ಇರುಳಾದಾಗ ಬೆಳೆಯುತ್ತವೆ. ಹಗಲಲ್ಲಾದ ಗಾಯಗಳು ಮಾಯಲು ಇರುಳಿನ ಮಡಿಲೇ ಬೇಕು.
******************
ಹಾಗಂತ ಹಗಲು ನಿದ್ರಿಸುವ, ಇರುಳಲ್ಲೇ ತಮ್ಮ ಕೆಲಸ ಕಾರ್ಯಗಳು ಮಾಡುವವರು ಇಲ್ಲವೆಂದಲ್ಲ. ಸಂಜೆ ಮಲ್ಲಿಗೆ ಅರಳಲು ಮುಳುಗುವ ಸೂರ್ಯನ ಬಿಸಿಲೇ ಬೀಳಬೇಕು. ರಾತ್ರಿರಾಣಿ ಅಥವಾ ಬ್ರಹ್ಮಕಮಲ ಅರಳುವುದು ಸಂಪೂರ್ಣ ಕತ್ತಲೆಯಲ್ಲೇ. ಬಾವಲಿಗಳು, ಜಿರಲೆಗಳು, ಸರೀಸೃಪಗಳು ಇರುಳಿಲ್ಲವೆಂದರೆ, ಕತ್ತಲೆಯಿಲ್ಲವೆಂದರೆ ಸ್ವಾಭಾವಿಕವಾಗಿ ಎದ್ದು ಆಚೆಗೆ ಬರಲಾರವು. ರಾತ್ರಿಯ ಬದಲು ಹಗಲು ನಿದ್ರಿಸುವವರಿಗೆ, ಕನಸು ಕಾಣುವವರಿಗೇನೂ ಕಡಿಮೆಯಿಲ್ಲ. ಇವರೆಲ್ಲರಿಗೂ ಪ್ರಕೃತಿಯಲ್ಲಿ ಅವರದೇ ಆದಂತಹ ಸ್ಥಾನವಿದೆ, ಅಲ್ಲಗಳೆಯಲಾಗದಂತಹ ಕೆಲಸಕಾರ್ಯವಿದೆ.
ಹಾಗೇ ಕಳ್ಳಕಾಕರಿಗೂ ಕತ್ತಲೆಯೆಂದರೆ ಪ್ರೀತಿ, ಬೆಳಕಿದ್ದಲ್ಲಿ ಅವರ ಕಾರ್ಯಗಳು ಕೈಗೂಡುವ ಸಾಧ್ಯತೆ ಕಡಿಮೆ. ಈ ಜಗದ ವಿನ್ಯಾಸದಲ್ಲಿ ಕಳ್ಳಕಾಕರಿಗೂ ಬೆಳಕಿನ ಹೆಸರಲ್ಲಿ ಕತ್ತಲೆ ಹಂಚುವವರಿಗೂ ಅವರದೇ ಆದ ಸ್ಥಾನವಿದೆ. ಇವರೆಲ್ಲರೂ ಜಗತ್ತು ಸಂಪೂರ್ಣವೆನಿಸಿಕೊಳ್ಳಲು ಅತ್ಯಗತ್ಯ.
******************
ಬದುಕೊಂದು ಹಾವು-ಏಣಿ ಆಟದ ಹಾಗೆ. ಕತ್ತಲಿನಲ್ಲಿ ಜಾರಿ ಬೆಳಕಿನಲ್ಲೇಳುವುದು, ಕತ್ತಲಿನಲ್ಲಿ ಏರಿ ಬೆಳಕಿನಲ್ಲಿ ಜಾರುವುದು... ಎಲ್ಲಿ ಕತ್ತಲು ಬೇಕೋ ಅಲ್ಲಿ ಬೆಳಕಿದ್ದರೆ, ಬೆಳಕು ಬೇಕಾದಲ್ಲಿ ಕತ್ತಲಿದ್ದರೆ, ಆಟ ಹದತಪ್ಪಿಬಿಡುತ್ತದೆ.
ಬೆಳಕಿನ ಹಬ್ಬವೇನೋ ಈಗ ಕೊನೆಯಾಗುತ್ತಿದೆ, ಆದರೆ ಬದುಕು ನಿರಂತರ. ಬದುಕಿನಲ್ಲಿ ಯಾರಿಗೆಷ್ಟು ಬೆಳಕು ಬೇಕೋ ಅಷ್ಟು ಬೆಳಕು ದಕ್ಕಲಿ... ಯಾರಿಗೆಷ್ಟು ಬೇಕೋ ಅಷ್ಟು ಕತ್ತಲು ದಕ್ಕಲಿ. ಆದರೆ ಕಳ್ಳಕಾಕರ ಬಗ್ಗೆ, ಹುಳಿ ಹಿಂಡುವವರ ಬಗ್ಗೆ, ವಿಷ ಹಂಚುವವರ ಬಗ್ಗೆ ಎಚ್ಚರವಿರಲಿ, ಮಡಿಲಲ್ಲಿ ಸುಡುವ ಬೆಂಕಿಯ ಬೆಳಕನ್ನು, ಬೆಳಕಿನ ವೇಷ ಧರಿಸಿ ಬರುವ ಕತ್ತಲನ್ನು ಹೇಗೆ ನಿಭಾಯಿಸಬೇಕೆಂಬ ವಿವೇಚನೆ ಹುಟ್ಟಿಕೊಳ್ಳುವಷ್ಟು ತಿಳಿವಿನ ಬೆಳಕು ಮನದಲ್ಲಿರಲಿ. ಈ ತಿಳಿವಿನ ನಂದಾದೀಪ ಕಡುಗತ್ತಲೆಯಲ್ಲೂ ಮನದಲ್ಲಿ ಬೆಳಗುತ್ತಿರಲಿ. ಶುಭಾಶಯ...

Friday, October 8, 2010

ಮುಂಗಾರು ಮಳೆಯೇ...

ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ... ಮಹಾಮಾರಿ ಜನರಿಗೆ ಉರುಳೇ
ಸುರಿವ ಬಲುಮೆಯಾ ಜಡಿಮಳೆಗೆ ಭೀತಿ ಮೂಡಿದೆ...
ಯಾವ ತಿಪ್ಪೆಯಲ್ಲಿ ಎಷ್ಟು ಪ್ಲಾಸ್ಟಿಕ್ ಬ್ಲಾಕಾಗುವುದೊ
ಎಲ್ಲಿ ಕೆಸರು ಹೊರಚಿಮ್ಮುವುದೋ ತಿಳಿಯದಾಗಿದೇ...

ಎದುರು ರೋಡಿನಲ್ಲಿ.. ನೀರು ತುಂಬಿ ಹರಿವಾ ಒನಪು
ನನ್ನ ಮನೆಯ ಎದುರು.. ಕೆಂಪು ಮಣ್ಣ ಹೆಜ್ಜೆಯ ಗುರುತು
ಗುಡುಗು ಸಿಡಿಲಿನಾ ಅಡಚಿಕ್ಕು... ಏನು ರಭಸವೋ...
ಅಕ್ಕ ಪಕ್ಕದಾ ಮನೆಗಳಿಗೆ ನೀರು ನುಗ್ಗಿ ಚೆಲ್ಲಾಪಿಲ್ಲಿ
ಕಂಗಾಲಾದ ಮನುಜರ ನೋಡು.. ಯಾಕೆ ಹೀಗೆಯೋ...

ಮನೆಯು ಮುಳುಗಿ ಹೋಯ್ತು.. ಅಳುತ ನಿಂದ ಹೆಂಗಸರೆಲ್ಲಾ
ಇದ್ದಬದ್ದದ್ದೆಲ್ಲಾ.. ಕಟ್ಟಿ ಹೊರಟರು ಮೆರವಣಿಗೆ...
ನೆರೆಯು ಬರದ ಊರಿನ ಕಡೆಗೆ... ವಿಧಿಯ ಆಟವೋ...
ಕೂಡಿಇಟ್ಟುದೆಲ್ಲಾ... ಕಳೆದು ಹೋದ ದು:ಖವು ಕಾಡಿ
ನೆಲೆಯು ಇಲ್ಲದಾಗಿ ಹೋಗಿ... ಏನು ನೋವಿದೂ...
...............

ಎಂದೋ ಬರೆದಿದ್ದು, ಅರ್ಧಕ್ಕೇ ನಿಂತುಬಿಟ್ಟಿದೆ. ಮುಂಗಾರು ಮಳೆ ಪಿಚ್ಚರ್ ಬಿಡುಗಡೆಯಾದ ಸಮಯದಲ್ಲಿ ಬರೆದಿದ್ದು... ಅದಾದ ನಂತರ ಎರಡು ಮುಂಗಾರು ಮಳೆ ಸೀಸನ್ ಕಳೆದಿದೆ, ಈಗಂತೂ ಪಕ್ಕಾ ಹಿಂಗಾರು ಮಳೆ ಸೀಸನ್... ಬರೆಯುವುದು ಬಿಟ್ಟು ಎಷ್ಟು ಸಮಯವಾಗಿದೆಯೆಂದರೆ, ಮುಂದುವರಿಸುವುದು ಹೇಗೆಂದೇ ಹೊಳೆಯುತ್ತಿಲ್ಲ!

Monday, May 18, 2009

ಇದಪ್ಪಾ ಗೂಳಿಕುಣಿತ...!

ಈಬಾರಿ ಕೂಡ ಚೌಚೌ ಗವರ್ಮೆಂಟೇ ಬರುತ್ತೆ ಸೆಂಟರಲ್ಲಿ ಅಂತ ಎಲ್ಲಾ ಎಕ್ಸಿಟ್ ಪೋಲುಗಳೂ ಹೇಳುತ್ತಾ ಇದ್ದ ಹಾಗೆ, ಮಾರ್ಕೆಟ್ ಸ್ವಲ್ಪ ಏರಿದ ಸಮಯ ನೋಡಿ ನಾನು ಕೈಯಲ್ಲಿದ್ದ ಲಾಭದ ಸ್ಕ್ರಿಪ್ ಎಲ್ಲಾ ಮಾರಿಬಿಟ್ಟೆ. ನಾನು ಮಾರಿದ್ದು ಮಾತ್ರವಲ್ಲ, ನನ್ನಜತೆ ಆಗಾಗ ಡಿಸ್ಕಸ್ ಮಾಡುವ ಗೌಡ್ರಿಗೆ ಕೂಡ ನಾನು ಮಾಡಿದ್ದನ್ನು ಹೇಳಿದೆ, ಅವರು ಕೂಡ ಆಗಲೇ ಕೈಯಲ್ಲಿದ್ದುದೆಲ್ಲ ಮಾರಿ ದುಡ್ಡು ರೆಡಿ ಇಟ್ಟುಕೊಂಡಿದ್ದರು. ಚೌಚೌ ಗವರ್ಮೆಂಟು ಬಂದ ಕೂಡಲೇ ಮಾರ್ಕೆಟ್ಟು ಹೇಗೂ ಬೀಳುತ್ತದಲ್ಲ, ಆಗ ಕಡಿಮೆಗೆ ಸಿಗುವ ಒಳ್ಳೆ ಕಂಪೆನಿ ಶೇರುಗಳನ್ನು ಕೊಳ್ಳಬೇಕೆಂಬುದು ನಮ್ಮ ಪ್ಲಾನಾಗಿತ್ತು.

ಆದರೇನು ಮಾಡಲಿ, 16ನೇ ತಾರೀಖು ಶನಿವಾರ ಫಲಿತಾಂಶ ಬರುತ್ತಾ ಬರುತ್ತಾ ಕಾಂಗ್ರೆಸ್ ಸೀಟುಗಳು 180 ದಾಟುತ್ತಿದ್ದ ಹಾಗೆ ನನಗೆ ಚಳಿ ಶುರುವಾಯಿತು... ಮಾರ್ಕೆಟ್ ಮೇಲೇರಲಿರುವುದರ ಬಗ್ಗೆ ಖುಷಿಯ ಬದಲು ದು:ಖವಾಯಿತು. ಛೇ, ಅನ್ಯಾಯವಾಗಿ ರಿಲಯನ್ಸ್ ಮತ್ತು ಐಸಿಐಸಿಐ ತುಂಬಾ ಕಡಿಮೆ ಲಾಭಕ್ಕೆ ಮಾರಿಬಿಟ್ಟೆನಲ್ಲಾ ಅಂತ ಪಶ್ಚಾತ್ತಾಪವಾಗತೊಡಗಿತು... ಬುದ್ಧ ಹೇಳಿದ ಆಸೆಯೇ ದು:ಖಕ್ಕೆ ಮೂಲ ಎಂಬ ಮಾತು ನಂಗೆ ಆದಿನ ತನ್ನ ವಿವಿಧ ಬಣ್ಣಗಳಲ್ಲಿ ಚೆನ್ನಾಗಿ ಅರ್ಥವಾಗತೊಡಗಿತು. ಒಂದು ಕಡೆ ಸ್ಥಿರ ಸರಕಾರ ಬರುವ ಸೂಚನೆಗೆ ಖುಷಿಯಾದರೆ, ಇನ್ನೊಂದು ಕಡೆ ಛೇ, ಲೆಕ್ಕಾಚಾರ ತಪ್ಪಿತಲ್ಲಾ ಅಂತ ವಿಪರೀತ ದು:ಖ... ಮನಸ್ಸಿನಲ್ಲೇ ಶೋಕಾಚರಣೆ ಮಾಡಿದೆ. ಪಾಪ, ಗೌಡರದೂ ಅದೇ ಪರಿಸ್ಥಿತಿಯಾಗಿತ್ತೇನೋ, ಸಮಾನದು:ಖಿಗಳಾಗಿದ್ದರೂ ನಾವಿಬ್ಬರೂ ಆದಿನ ಮಾತಾಡಿಕೊಳ್ಳಲಿಲ್ಲ.

ಹೂಂ, ಇರಲಿ, ಹೇಗೂ ಸೋಮವಾರ ಮಾರ್ಕೆಟ್ ಮೇಲೇರುವುದೇ ಆದರೆ, ಇರುವ ಚೂರುಪಾರನ್ನು ಬೇಗನೇ ಮಾರಿ ಹೊಸದು ತೆಗೆದುಕೊಂಡುಬಿಡುವುದು, ಮತ್ತೆ ಹೊಸ ಸರಕಾರದ ಬಜೆಟ್ ಬಂದಾಗ ಹೇಗೂ ಮತ್ತೊಂದು ಏರಿಕೆ ಇದ್ದೇ ಇರುತ್ತದೆ, ಆಗ ಮತ್ತೆ ಮಾರಿದರಾಯಿತು ಅಂತೆಲ್ಲ ಲೆಕ್ಕಹಾಕಿ ಆದಿತ್ಯವಾರವನ್ನು ಕಷ್ಟದಲ್ಲಿ ಕಳೆದಿದ್ದಾಯಿತು. ಎಲ್ಲಾ ಎಕ್ಸ್-ಪರ್ಟುಗಳೂ 500ರಿಂದ 1000 ಪಾಯಿಂಟು ಮೇಲೆ ಹೋಗಬಹುದು ಸೆನ್ಸೆಕ್ಸು ಅಂತಿದ್ರು. ಶೇಕಡಾ ಹತ್ತರಷ್ಟು ಲಾಭಕ್ಕೇನೂ ಮೋಸವಿಲ್ಲ ಅಂತ ಅಂದುಕೊಂಡು, ಸೋಮವಾರದ 9.50ರ ಶುಭಗಳಿಗೆ ಬರಲಿಕ್ಕೇ ಕಾದುಕೂತಿದ್ದೆ.


ಬಂದೇ ಬಂತು ಶುಭಸೋಮವಾರ... The Golden Monday! 9.00 ಆಗುತ್ತಿದ್ದಂತೇ CNBCTV18 ಹಾಕಿ ಉದಯನ್ ಮುಖರ್ಜಿ ಮತ್ತು ಮಿತಾಲಿ ಶೋ ನೋಡ್ತಾ ಕೂತಿದ್ದೆ. ಉದಯನ್ ಮತ್ತು ಮಿತಾಲಿ ಮಾರ್ಕೆಟ್ ಬಿದ್ದರೆ ಮುಖ ಜೋತುಹಾಕುವ Anchorಗಳು. ನೋಡುಗರ ಭಾವನೆಗಳು ಅವರಲ್ಲೂ reflect ಆಗುತ್ತಿರುತ್ತವೆ. ಅವರು ಮಾತಾಡುತ್ತಿದ್ದಂತೇ, ಮಾರುಕಟ್ಟೆ 10% ಮೇಲೆ ಹೋದರೆ 1 ಗಂಟೆ ಟ್ರೇಡಿಂಗ್ ಇರುವುದಿಲ್ಲ, 15% ಮೇಲೇರಿದರೆ 2 ಗಂಟೆ ಬಂದ್ ಇತ್ಯಾದಿ ಮಾಹಿತಿಗಳು ಬರ್ತಾ ಇತ್ತು.

ಆಯ್ತು, 9.50 ಆಗಿಯೇ ಹೋಯ್ತು... ಅಷ್ಟೆ. ಏನಾಗುತ್ತಿದೆ ಎಂದು ತಿಳಿಯುವುದರೊಳಗಾಗಿ ಸೆನ್ಸೆಕ್ಸ್ 1300 ಅಂಕ ಮೇಲೇರಿತು, ಕೂಡಲೇ ಟ್ರೇಡಿಂಗ್ ಬಂದ್! ಇಷ್ಟಾಗಲಿಕ್ಕೆ ಮಾರ್ಕೆಟ್ ಓಪನ್ ಆಗಿ 20 ಸೆಕೆಂಡ್ ಕೂಡ ತೆಗೆದುಕೊಳ್ಳಲಿಲ್ಲ.

ನಾನು ಇಂಗು ತಿಂದ ಮಂಗನಂತೆ ಏನಾಗುತ್ತಿದೆಯೆಂದೇ ಅರ್ಥವಾಗದೆ ಉದಯನ್ ಮತ್ತು ಮಿತಾಲಿ ಹೇಳುವುದನ್ನೇ ಕೇಳುತ್ತ ಕೂತೆ. ಒಂದು ಗಂಟೆಯ ನಂತರ ಮತ್ತೆ ಮಾರುಕಟ್ಟೆ ತೆರೆಯಲಿದೆ ಎಂದು ಒಂದು ಸಾರಿ ಹೇಳಿದರೆ ಮತ್ತೆ ಎರಡು ಗಂಟೆಯ ನಂತರ ತೆರೆಯಲಿದೆ ಎಂದರು. ಇದಕ್ಕೆ ಕಾದು ಕೂತರೆ ಅಷ್ಟೇ ಗತಿ ಮತ್ತೆ ಅಂತ ನನಗೆ ನಾನೇ ಬುದ್ಧಿ ಹೇಳಿಕೊಂಡು ಆಫೀಸಿಗೆ ಹೊರಟೆ.

ಆಫೀಸಲ್ಲಿದ್ದರೂ, ಕೆಲಸ ಶುರುಮಾಡಿಕೊಂಡರೂ ಮಾರುಕಟ್ಟೆ ಏನಾಗುತ್ತದೋ ಎಂಬ ಕಪಿಕುತೂಹಲ ಸುಮ್ಮನೆ ಕೂರಲು ಬಿಡಲಿಲ್ಲ. ಸಮಾನಮನಸ್ಕರೆಲ್ಲ ಜತೆ ಸೇರಿ 11.45 ಆಗುತ್ತಿದ್ದಂತೆಯೇ ಐಬಿಎನ್ ಹಾಕಿ ಕೂತೆವು. 11.50 ಆಗುತ್ತಿದ್ದಂತೇ ಅಲ್ಲಿ CNBCTV18 ಪಂಚ್ ಆಯಿತು. ಈಗಲೂ ಅಷ್ಟೇ. ಮಾರುಕಟ್ಟೆ ಓಪನ್ ಆದಕೂಡಲೇ 700ರಷ್ಟು ಅಂಕಗಳು ಮೇಲೇರಿತು... And trading halted for the day!


Historical. Fantastic. Amazing. Wonderful. Unbelievable. Unpredictable. ಇನ್ನೇನು ಹೇಳಬಹುದೋ ಗೊತ್ತಿಲ್ಲ. ನಿಫ್ಟಿಯನ್ನು 650 ಅಂಕಗಳಿಂದ, ಸೆನ್ಸೆಕ್ಸನ್ನು 2110 ಅಂಕಗಳಿಂದ ಏರಿಸಿ, ಎಲ್ಲಾ ಮಿತಿಗಳನ್ನ ದಾಟಿ ನರ್ತಿಸಿತ್ತು ಗೂಳಿ! ಕರಡಿಗಳಿಗೆಲ್ಲ ಬೇಸರವಾಗಬೇಕಾದದ್ದೇ. ನಾನು 520ಕ್ಕೆ ಮಾರಿದ್ದ ಐಸಿಐಸಿಐ 745 ಮುಟ್ಟಿತ್ತು. ಇಷ್ಟರಲ್ಲಿ ನಾನು ಬುದ್ಧನ ಮಾತನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರಿಂದ ನಂಗೆ ಬೇಸರವಾಗಲಿಲ್ಲ, ಬದಲಿಗೆ ಸಖತ್ ಖುಷಿಯಾಯಿತು.

Anchor ಮಿತಾಲಿ ನಗುನಗುತ್ತಾ ಏನೇನೋ ಹೇಳಿದಳು, ಒಂದು ಬಾರಿ ತನ್ನ anchoring seatನಿಂದ ಎದ್ದು ಮೈಮುರಿದಳು, ಅವಳು ಅಷ್ಟು ಖುಷಿಯಾಗಿದ್ದು ನಾ ಎಂದೂ ನೋಡಿರಲಿಲ್ಲ. ಇನ್ನು ನಂಗೆ ಇವತ್ತಿಗೆ anchoring ಮಾಡುವ ಕೆಲಸವಿಲ್ಲ, ಇವತ್ತೆಲ್ಲಾ ಆರಾಮ, ಇನ್ನು ಟ್ರೇಡಿಂಗ್ ಇಲ್ಲ, ಇನ್ನು ಕರಡಿ ಕುಣಿತವಿಲ್ಲ, ಮಾರ್ಕೆಟ್ ಏರುತ್ತಿದೆ, ನಾನಿನ್ನು ಮುಖ ಬಾಡಿಸಲಿಕ್ಕಿಲ್ಲ ಇತ್ಯಾದಿ ಅವಳು ಹೇಳಿದ ಹಾಗೆ ನನಗನಿಸಿತು. ಉದಯನ್ ಅಂತೂ ...! ತನ್ನ ಲ್ಯಾಪ್ಟಾಪ್ ಎತ್ತಿ ಅದಕ್ಕೊಂದು ಕಿಸ್ ಕೊಟ್ಟು, ಫುಲ್ ಖುಷ್ ಆಗಿ ಹಲ್ಲುಬಿಟ್ಟು... ಅವರ ಖುಷಿಯನ್ನು ವೈರಸ್ ಥರಾ ನಮ್ಮಮೇಲೆಲ್ಲ ಬಿಟ್ಟು... ಆಹಾ! ಖುಷಿಗೆ ಅವರಿಬ್ಬರು ಹಾರ್ಟ್ ಫೇಲ್ ಒಂದು ಮಾಡಿಕೊಂಡಿಲ್ಲ ನೋಡಿ.

ಸ್ಟಾಕ್ ಮಾರ್ಕೆಟ್ ಹಿಸ್ಟರಿಯಲ್ಲೇ ಇದು ಐತಿಹಾಸಿಕ ದಿನವಂತೆ. ಒಟ್ಟಿನಲ್ಲಿ ಎಲ್ಲರಿಗೂ ಖುಷಿಯೋ ಖುಷಿ. ಗೌಡ್ರೂ ನನ್ನದೇ ಪರಿಸ್ಥಿತಿಯಲ್ಲಿದ್ದರು, ಹಾಗೆ ಮುಕ್ತವಾಗಿ ನಾಕುಮಾತು ಸುಖದು:ಖ ಹಂಚಿಕೊಂಡು ಹಗುರಾದೆವು.

ಸದ್ಯದ ಆರ್ಥಿಕ ಹಿಂಜರಿತದಿಂದ ಮೇಲೇಳಲಿಕ್ಕಾಗಿ ಇಡೀ ಜಗತ್ತು ಭಾರತ ಮತ್ತು ಚೀನಾದೆಡೆಗೆ ನೋಡುತ್ತಿರುವ ಈ ಕಾಲಘಟ್ಟ... ಎಡ-ಬಲಗಳನ್ನು ಬಿಟ್ಟು ಮಧ್ಯವನ್ನು ಆಯ್ಕೆ ಮಾಡಿ ಸುಭದ್ರತೆಯ ತೀರ್ಪು ನೀಡಿದೆ ಭಾರತ. ನಾಳೆ ಮಾರುಕಟ್ಟೆ ಮತ್ತೂ ಮೇಲೇರಬಹುದೇನೋ... ಏನಾಗಬಹುದೆಂದು ಊಹಿಸುವುದು ಸದ್ಯಕ್ಕೆ ನನ್ನ ಮಿತಿಗೆ ಮೀರಿದ್ದು. ಆದರೆ ಇವತ್ತು ಮಾತ್ರ ನಾನು ಖುಷ್... :-)

Saturday, March 7, 2009

ದಾನೇದಾನೇಪೇ ಲಿಖಾ ಹೋತಾ ಹೈ...

 ದಾನೇ ದಾನೇ ಪೇ ಲಿಖಾ ಹೋತಾ ಹೈ ಖಾನೇವಾಲೇ ಕಾ ನಾಮ್ ಅಂತಾರೆ. ಇದರ ನಿಜವಾದ ಅರ್ಥ ಏನಂತ ನಂಗೊತ್ತಿರಲಿಲ್ಲ. ನಿನ್ನೆಯಷ್ಟೇ ಸ್ವಲ್ಪಮಟ್ಟಿಗೆ ಅದೇನಂತ ಗೊತ್ತಾಯ್ತು... :-)
ಬಹಳ ದಿನದ ನಂತರ ಕಳೆದ ವಾರ ನಂಗೂ ನನ್ನ ರೂಂಮೇಟ್-ಗೂ ಒಟ್ಟಿಗೆ ಮಾರ್ನಿಂಗ್ ಶಿಫ್ಟ್ ಬಿದ್ದಿತ್ತು. ಮಾಮೂಲಾಗಿ ನಾನು  ಆಫೀಸಿಗೆ ಹೋಗುವುದು ಬೆಳಿಗ್ಗೆ 7.30ಕ್ಕೆ. ಆದರೆ ನಿನ್ನೆ ಬೆಳಿಗ್ಗೆ ಆಫೀಸಿಗೆ ಮಾತ್ರ ರಾತ್ರಿ ತನಕ ಆಫೀಸಲ್ಲಿರಬೇಕಾದ ಕಾರಣ ಸ್ವಲ್ಪ ಲೇಟ್ ಆಗಿ ಹೋಗ್ಬೇಕಿತ್ತು. ರೂಂಮೇಟ್ ಬೇಗ ಎದ್ದು ಚಪಾತಿ ಮಾಡಿದಳು. ಹಿಂದಿನ ದಿನ ಮಂಗಳೂರು ಸ್ಟೋರಿನಿಂದ  ತಂದ ಬ್ರಾಹ್ಮಿ (ಒಂದೆಲಗ) ಚಟ್ನಿ ಮಾಡಿ ಬಾಕ್ಸಿನಲ್ಲಿ ಹಾಕಿಕೊಂಡು 7.30ಕ್ಕೆ ಹೊರಟು ಹೋದಳು. ನಾನು ನಿಧಾನಕ್ಕೆದ್ದು 9ಕ್ಕೆ ಹೊರಟರೆ ಸಾಕಿತ್ತು.
ಗಂಟೆ 9.10 ಆಗಿತ್ತು. ಇನ್ನೂ ನಾನು ಮನೆಯಿಂದ ಹೊರಟಿರಲಿಲ್ಲ, ಆಗ ನನ್ನ ರೂಂಮೇಟ್ ಫೋನ್ ಮಾಡಿದಳು, ಚಟ್ನಿ ಮರೆತು ಬಂದಿದ್ದೇನೆ, ತರುತ್ತೀರಾ ಅಂತ ಕೇಳಿದಳು. ಆಯಿತು, ಅಂತ ಒಪ್ಪಿ, ಚಿಕ್ಕ ಬಾಕ್ಸಿನಲ್ಲಿ ಚಟ್ನಿ ಹಾಕಿ ತಗೊಂಡು ಆಫೀಸಿಗೆ ಹೊರಟೆ. ಬಸ್ಸಿನಲ್ಲಿ ಹೋಗಲು ಉದಾಸೀನವಾದ ಕಾರಣ ಯಾವುದೋ ಆಟೋ ನಿಲ್ಲಿಸಿ ಹತ್ತಿಕೊಂಡೆ. ಬ್ಯಾಗಿನಲ್ಲಿ ಚಟ್ನಿ ಇಡುವ ಬದಲು ನನ್ನ ಬದಿಯಲ್ಲಿ ಇಟ್ಟುಕೊಂಡು ಕೂತೆ. 
ಆಟೋ ಮೀಟರ್ ಯದ್ವಾತದ್ವಾ ಓಡುತ್ತಿದ್ದುದನ್ನೇ ನೋಡುತ್ತ ಕುಳಿತೆ. ಆಟೋದಲ್ಲಿ ಹೋಗುವಾಗ ಇದು ಮಾಮೂಲಾದ ಕಾರಣ ದಾರಿಯಲ್ಲೇ ಮೀಟರ್ ಜಾಸ್ತಿ ಓಡುತ್ತಿದೆ ಅಂತ ಹೇಳಿ ಕೆಟ್ಟವಳಾಗುವ ಅಭ್ಯಾಸ ಬಿಟ್ಟುಬಿಟ್ಟಿದ್ದೇನೆ. ಸರಿಯಾಗಿ ನಲುವತ್ತಮೂರು ರೂಪಾಯಿ ಎಣಿಸಿ ಕೈಲಿ ಹಿಡಿದುಕೊಂಡೆ. ಇಳಿದ ಮೇಲೆ ಅದನ್ನು ಕೊಟ್ಟು ತಿರುಗಿ ನೋಡದೇ ಆಫೀಸಿನೊಳಗೆ ಹೋಗುವುದು ಅಂತ ಪ್ಲಾನ್ ಹಾಕಿದೆ. ಒಂದು ವೇಳೆ  ಡ್ರೈವರ ಎದುರು ಮಾತನಾಡಿದರೆ ಆತನಿಗೆ ಹೇಗೆ ದಬಾಯಿಸಬೇಕು ಅಂತಲೂ ಆಭ್ಯಾಸ ಮಾಡಿಕೊಂಡೆ. 
ಆಫೀಸು ಬಂತು. ಪ್ಲಾನ್ ಮಾಡಿದ ಹಾಗೆಯೇ ನಲುವತ್ತಮೂರು ರೂಪಾಯಿ ಆತನ ಕೈಲಿಟ್ಟು ಆತ ಎಣಿಸುವುದಕ್ಕೆ ಕಾಯದೆ ಕೆಳಗಿಳಿದೆ, ನನ್ನ ಪಾಡಿಗೆ ನಾನು ಆಫೀಸಿನ ಮೆಟ್ಟಿಲು ಹತ್ತಿದೆ. ಬ್ಯಾಗ್ ಇಟ್ಟು ಡೆಸ್ಕಿಗೆ ಬರುತ್ತಿದ್ದ ಹಾಗೇ ರೂಂಮೇಟ್ ಕಾಣಿಸಿದಳು, ಆಗಷ್ಟೇ ನಂಗೆ ಚಟ್ನಿ ನೆನಪಾಗಿದ್ದು. ಮೀಟರ್ ಜಾಸ್ತಿ ಓಡಿದೆ ಅನ್ನುವ ತಲೆಬಿಸಿಯಲ್ಲಿ ನನ್ನ ಬದಿಯಲ್ಲಿಟ್ಟ ಬಾಕ್ಸ್ ಮರೆತು ಬಿಟ್ಟಿದ್ದೆ, ಹಾಗೇ ಎದ್ದುಕೊಂಡು ಬಂದಿದ್ದೆ. ಅವಳಿಗೆ ಹೇಳಿದೆ, ಚಟ್ನಿ ಆಟೋನಲ್ಲಿ ಹೋಯಿತು ಅಂತ. ಕೊನೆಗೆ ಡ್ರೈವರ್ ತಿನ್ನಲಿ ಬಿಡು ಅಂತ ಇಬ್ಬರೂ ನಕ್ಕು ಸುಮ್ಮನಾದೆವು.
ಒಂದು ಗಂಟೆ ಕಳೆದ ನಂತರ ರಿಸೆಪ್ಷನ್-ನಿಂದ ಕರೆ ಬಂತು, ನಿಮಗೊಂದು ಬಾಕ್ಸ್ ತಂದುಕೊಟ್ಟುಹೋಗಿದ್ದಾರೆ ಯಾರೋ, ಬಂದು ಕಲೆಕ್ಟ್ ಮಾಡಿ ಅಂತ. ಸರಿ, ಏನಪ್ಪಾ ಅಂತ ಹೋಗಿ ನೋಡಿದರೆ, ಅದೇ ಚಟ್ನಿ ಬಾಕ್ಸ್..! :-) ಆಟೋ ಡ್ರೈವರ್ ಸೆಕ್ಯೂರಿಟಿಯವರ ಹತ್ತಿರ ಅದನ್ನು ಕೊಟ್ಟುಹೋಗಿದ್ದನಂತೆ. ಚಟ್ನಿ ಸಿಕ್ಕಿತಲ್ಲ, ನನ್ನ ರೂಂಮೇಟ್ ಖುಷಿಯಾದಳು. ಅವಳ ಹಣೆಯಲ್ಲಿ ಆ ಚಟ್ನಿ ತಿನ್ನುವುದು ಅಷ್ಟು ಗಟ್ಟಿಯಾಗಿ ಬರೆದಿತ್ತು ಅನ್ಸುತ್ತೆ... ಇದನ್ನೇ ಹೇಳ್ತಾರೇನೋ, ದಾನೇದಾನೇಪೇ ಲಿಖಾ ಹೋತಾ ಹೈ.. ಅಂತ...! :-)
-----------------
ಕೆಲ ತಿಂಗಳ ಹಿಂದೆ ಇದೇ ರೀತಿ ಕ್ಯಾಮರಾ ಯಾವುದೋ ಆಟೋನಲ್ಲಿ ಮರೆತು ಎದ್ದುಬಂದಿದ್ದೆ. ಆ ಆಟೋದ ಡ್ರೈವರ್ ಕೂಡ ಇಷ್ಟೇ ಒಳ್ಳೆಯವನಾಗಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ಅನಿಸ್ತಿದೆ. ಈಗ ನಂಗೆ ಕ್ಯಾಮರಾ ತಗೊಳ್ಳಲಿಕ್ಕೆಯೇ ಭಯ ಬಿಡ್ತಿಲ್ಲ, ಎಲ್ಲಾದ್ರೂ ಕಳೆದುಹಾಕಿಬಿಡ್ತೀನಿ ಅಂತ.

Sunday, January 18, 2009

ಸ್ಲಂಡಾಗ್ ಸುತ್ತ...


ಹೆಸರು ಕೇಳಿದಾಗ ಮೊದಲಿಗೆ ಅನಿಸಿದ್ದು... ಸ್ಲಂನಲ್ಲಿದ್ದ ಮಾತ್ರಕ್ಕೆ ಅಷ್ಟು derogatory ಆಗಿ ಸ್ಲಂಡಾಗ್ ಅಂತ ಯಾಕೆ ಕರೆಯಬೇಕು- ಅಂತ. ಇರಲಿ. ಎಲ್ಲರೂ ಚಿತ್ರ ಚೆನ್ನಾಗಿದೆ ಅಂತಿದಾರಲ್ಲ, ನೋಡಿಯೇ ಬಿಡುವ ಅಂದುಕೊಂಡೆ.ಈಗೆಲ್ಲ ಚಿತ್ರ ಬಿಡುಗಡೆಯಾಗುವವರೆಗೆ ಕಾಯಬೇಕೆಂದೇನಿಲ್ಲವಲ್ಲ, ಇನ್ನೂ ಥಿಯೇಟರಿಗೆ ಬರುವ ಮೊದಲೇ ಚಿತ್ರದ ಒಳ್ಳೆ ಗುಣಮಟ್ಟದ ಸಿಡಿ ಸಿಕ್ಕಿತು, ನೋಡಿಯೇ ಬಿಟ್ಟೆ.
----------
ನೋಡುವಾಗ ತನ್ಮಯಳಾಗಿ ಹೋದೆ. ಚಂದಚಂದದ ಶಾಟ್-ಗಳು... ಸ್ಲಂ ಚಿಣ್ಣರ ಮುಗಿಲು ಮುಟ್ಟುವ ಸಂಭ್ರಮಕ್ಕೂ, ಹೃದಯ ತಟ್ಟುವ ನೋವುಗಳಿಗೂ ಜತೆಯಾಗುವ, ಖುಷಿಕೊಡುವ ಸಂಗೀತ... ಬದುಕನ್ನೇ ಶಾಲೆಯಾಗಿಸಿದ ಚಿಣ್ಣರ ಜೀವನಪ್ರೀತಿ.... ಭಾರತದಲ್ಲಿ ಯಾವುದೂ ಅಸಾಧ್ಯವಲ್ಲ ಅಂತ ತೋರಿಸುವ ಕಥೆ... ಎಲ್ಲಾ ಚೆನ್ನಾಗಿತ್ತು. ಆದರೆ ಕೊನೆಗೆ ಬರುವ ದೊಡ್ಡ ಹುಡುಗಿಯ ಪಾತ್ರ ಮಾತ್ರ ಅದ್ಯಾಕೋ irritable ಆಗಿತ್ತು. ಅದೊಂದು ಬಿಟ್ರೆ, ನನ್ನ ಮಟ್ಟಿಗೆ ಚಿತ್ರ ಚೆನ್ನಾಗಿತ್ತು. ಪ್ರಶ್ನೆಗಳಿಗೆ ತಪ್ಪು ತಪ್ಪು ಉತ್ತರಗಳನ್ನ ಕೊಟ್ಟಿದ್ರಂತೆ, ಎಡಿಟಿಂಗ್-ನಲ್ಲಿ ಕೆಲವು ತಪ್ಪುಗಳಿತ್ತು.. ಆದರೆ ಇವೇನೂ ಬೇಗನೆ ಗೊತ್ತಾಗುವಂತಹದೇನಲ್ಲವಾದ್ದರಿಂದ ಪರವಾಗಿಲ್ಲ. ಪುಟ್ಟ ಮಕ್ಕಳ ಪಾತ್ರ ಮಾಡಿದ ಹುಡುಗರು ತುಂಬಾ ಇಷ್ಟವಾದರು.
ಒಂದೇ ಬಿಂದುವಿನಿಂದ ಹೊರಡುವ ಇಬ್ಬರು ಚಿಣ್ಣರು... ಬದುಕಿಗಾಗಿ ಆಯ್ದುಕೊಳ್ಳುವ ವಿಭಿನ್ನ ದಾರಿಗಳು... ಭಾರತದಲ್ಲಿ ಕೆಟ್ಟ ರೀತಿಯಲ್ಲಾದರೂ ಬದುಕಬಹುದು, ಒಳ್ಳೆಯ ರೀತಿಯಲ್ಲಿಯೂ ಬದುಕಲು ಸಾಧ್ಯ ಎಂಬುದರ ಸಂಕೇತವೇನೋ, ಅನಿಸಿತು. ಬೀದಿ ದೀಪದಡಿ ಕೂತು ಓದಿ ಮೇಲೆ ಬಂದ ಮಹನೀಯರು... ಚಿಕ್ಕ ವ್ಯಾಪಾರದಿಂದ ಶುರು ಮಾಡಿ ಕರೋಡ್-ಪತಿಗಳಾದವರು... ದೊಡ್ಡ ದೊಡ್ಡ ಗ್ಯಾಂಗ್-ಸ್ಟರ್-ಗಳು... ಹೆಚ್ಚು ಓದದಿದ್ದರೂ ಬದುಕನ್ನೇ ಪಾಠಶಾಲೆಯಾಗಿಸಿಕೊಂಡವರು... ಹೀಗೆ ಎಲ್ಲರನ್ನೂ ನೆನಪಿಸಿತು ಚಲನಚಿತ್ರ. ಪುಟ್ಟ ಹುಡುಗರ ಜೀವನಪ್ರೀತಿ ನಮ್ಮೆಲ್ಲರೊಳಗೆ ಅಡಗಿರುವ ಆಶಯಕ್ಕೆ ರೆಕ್ಕೆ ಮೂಡಿಸುವಂತಿತ್ತು... ಅನಿಲ್ ಕಪೂರ್ ಪಾತ್ರ ನಮ್ಮೆಲ್ಲರೊಳಗಿನ ಸಿನಿಕತನದ ಪ್ರತಿಬಿಂಬದಂತಿತ್ತು...  ಲಗಾನ್ ಚಿತ್ರ ನೋಡುವವರೆಲ್ಲ ಅಮೀರ್ ಖಾನ್ ಟೀಮು ವಿನ್ ಆಗಲೆಂದು ಆಶಿಸುತ್ತಾರಲ್ಲ, ಹಾಗೆಯೇ ಜಮಾಲ್ ಗೆದ್ದರೆ ಸಾಕು ಅಂತ ಕಾಯಿಸಿತು. ಒಟ್ಟಿನಲ್ಲಿ ಚಿತ್ರ ಖುಷಿ ತಂದಿತು.

ಒಂದು ಸಿನಿಮಾ ಮನಸ್ಸಿನಲ್ಲುಳಿದರೆ, ಪದೇಪದೇ ನಮ್ಮ ಆಂತರ್ಯವನ್ನು ಕೆಣಕಿದರೆ ಆ ಸಿನಿಮಾ ಯಶಸ್ವಿಯಾದಂತೆ ಅಂತ ಬಲ್ಲವರು ಹೇಳುತ್ತಾರೆ. ಸ್ಲಂ ಡಾಗ್ ಮಿಲಿಯನೇರ್ ಈ ನಿಟ್ಟಿನಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿವೆ, ಆದರೆ ಭಾರತದ ಒಳಗಿದ್ದುಕೊಂಡು ನೋಡುವ ನನ್ನ ಮಟ್ಟಿಗೆ, ಕಥೆ ಅಷ್ಟೇನೂ ಕಾಡಲಿಲ್ಲ. ಬದುಕಬೇಕೆನ್ನುವ ಛಾತಿಯಿರುವ ಎಲ್ಲರಿಗೂ ಬದುಕಲು ಬಿಡುವ ಮುಂಬೈ ಚಿತ್ರದ ನಿಜವಾದ ಹೀರೋ.
-----------
ಈಗ ಚಿತ್ರ ಐದು ಗೋಲ್ಡನ್ ಗ್ಲೋಬ್ ಬಹುಮಾನಗಳಿಗೆ ಪಾತ್ರವಾಗಿದೆ... ಇದು ವೈಟ್ ಟೈಗರ್-ಗೆ ಬುಕರ್ ಸಿಕ್ಕಿದ ನಂತರ ಭಾರತದ ಬಡವರ ಕಥೆಗೆ ಸಿಕ್ಕಿದ ಮತ್ತೊಂದು ಬಹುಮಾನ. ಹೌದೂ... ಪಾಶ್ಚಾತ್ಯರಿಗೆ ಬಡ ಅಥವಾ ಮಧ್ಯಮ ವರ್ಗದ ಭಾರತವೇ ಯಾಕಿಷ್ಟ? ಸುಮ್ಮನೆ ಯೋಚಿಸುವಾಗ, ಇದೇ ರೀತಿಯ ಭಾರತೀಯರ ಕಥೆಗಳಿರುವ, ಪಾಶ್ಚಿಮಾತ್ಯರ ಪ್ರೊಡಕ್ಷನ್ ಅಥವಾ ನಿರ್ದೇಶನವಿರುವ ಹತ್ತುಹಲವು ಚಿತ್ರಗಳು ಕಣ್ಮುಂದೆ ತೆರೆದುಕೊಳ್ಳುತ್ತವೆ. ಎಲ್ಲಾ ಚಿತ್ರಗಳಲ್ಲೂ ಹೆಚ್ಚುಕಡಿಮೆ, ತಮ್ಮ ಸಾಂಪ್ರದಾಯಿಕ ಕೋಟೆಗಳನ್ನು ದಾಟಿ ಗ್ಲೋಬಲ್ ಆಗುವತ್ತ ಸಾಗುವ ಭಾರತೀಯರ ಕಥೆಗಳೇ ಇರುತ್ತವೆ. ಒಂದು ರೀತಿಯಲ್ಲಿ universal ಎನಿಸುವಂತಹ value system ಕಡೆಗೆ ಹೆಜ್ಜೆ ಹಾಕುವ ಭಾರತೀಯರ ಕಥೆಗಳು. ಹೆಚ್ಚುಕಡಿಮೆ ಎಲ್ಲವೂ ಬಡ ಅಥವಾ ಮಧ್ಯಮ ವರ್ಗದ ಬದುಕಲ್ಲಿ ಹುಟ್ಟಿದ ಕಥೆಗಳು.

ಮಿಸ್ಟ್ರೆಸ್ ಆಫ್ ಸ್ಪೈಸಸ್... ಐಶ್ವರ್ಯಾ ಅಭಿನಯದ ಚಿತ್ರ.  ಕೇರಳದ ಮೂಲೆಯಲ್ಲಿ ಮಾಯಾಶಕ್ತಿಯಿರುವ ಅಜ್ಜಿಯ ಜತೆ ಬೆಳೆದ ಹುಡುಗಿ, ಪಾಶ್ಚಾತ್ಯ ದೇಶದಲ್ಲಿ ಬದುಕಬೇಕಾಗುತ್ತದೆ. ಅಲ್ಲಿ ಆಕೆ ಮಾರುವ ಸ್ಪೈಸ್ ಅಥವಾ ಸಂಭಾರ ಪದಾರ್ಥಗಳಿಗೆ ಔಷಧೀಯ ಗುಣ. ಈ ದೈವೀ ಶಕ್ತಿಯನ್ನು ಆಕೆಗೆ ನೀಡಿದ ಅಜ್ಜಿ, ಜನ್ಮಪೂರ್ತಿ ಆಕೆಗೆ ಯಾರಿಗೂ ಮನಸೋಲದಂತೆ, ಮತ್ತು ಮದುವೆಯಾಗದಂತೆ ಶರತ್ತು ವಿಧಿಸಿರುತ್ತಾಳೆ. ಒಂದು ವೇಳೆ ಹಾಗೇನಾದರೂ ಆದರೆ, ಆಕೆಯ ಕೈಗುಣ ಕೆಟ್ಟು ಸಂಭಾರ ಪದಾರ್ಥಗಳ ಔಷಧೀಯ ಗುಣ ಹೊರಟುಹೋಗುತ್ತದೆ. ಹೀಗೆ ಬದುಕುವ ಅನಿವಾರ್ಯತೆಯ ನಡುವೆ, ಹೃದಯದ ಎಳೆತಸೆಳೆತಗಳಿಗೆ ಸೋತು, ಕೊನೆಗೆ ಮನಗೆದ್ದವನನ್ನೂ ತನ್ನವನಾಗಿಸಿಕೊಳ್ಳುವ ಜತೆಗೆ ಸಂಭಾರ ಪದಾರ್ಥಗಳನ್ನೂ ತನ್ನ ಪಾಲಿಗೆ ಒಲಿಸಿಕೊಳ್ಳುವ ಕಥೆ. ಭಾರತೀಯರ ಪ್ರಕಾರ ಅಡಿಗೆ ಮನೆ ಎಂತಹ ಔಷಧಾಲಯ ಎಂಬುದನ್ನು ತೋರಿಸುವ ಜತೆಗೆ, ಒಂದೊಂದು ಸಂಭಾರ ಪದಾರ್ಥದ ಗುಣವನ್ನೂ ವಿವರಿಸುತ್ತದೆ... ಜತೆಗೆ ಚಿತ್ರವಿಡೀ ಕಾಡುವ ವರ್ಣವೈವಿಧ್ಯ... ತಾಕಲಾಟಗಳು... ಕೆಂಪು ಬಣ್ಣವೆಂದರೇನು ಅಂತ ಈ ಚಿತ್ರ ನೋಡಿ ತಿಳಿದುಕೊಳ್ಳಬೇಕು ಅಂತ ಸಾವಿರ ಸಾರಿ ಅಂದುಕೊಂಡಿದ್ದೇನೆ ನಾನು.

ವರ್ಣವೈವಿಧ್ಯ ಎಂದ ಕೂಡಲೇ ನನಗನಿಸುತ್ತಿದೆ... ಭಾರತೀಯ ಕಥೆ ಹೊಂದಿದ ಚಿತ್ರಗಳ ಬಂಡವಾಳವೇ ಇದು. ಬದುಕಿನ ಬಣ್ಣಗಳು... ಕಣ್ಣಿಗೆ ಕಾಣಿಸುವ ಬಣ್ಣಗಳು... ಮನಸನ್ನು ಕಾಡುವ ಬಣ್ಣಗಳು... ಒಟ್ಟಿನಲ್ಲಿ ಬಣ್ಣಗಳೆಂದರೆ ನಮಗೆಲ್ಲ ಬಲು ಪ್ರೀತಿ... ಅದು ಚಿತ್ರಗಳಲ್ಲೂ ಕಾಣಿಸುತ್ತದೆ. ಸ್ಲಂಡಾಗ್ ಮಿಲಿಯನೇರ್ ಕೂಡ ಇದಕ್ಕೆ ಹೊರತಲ್ಲ.
-----------
ಶ್ರೀಮಂತಿಕೆ ಕೆಲವರ ಕೈಲಿ ಸಿಕ್ಕಿ ನರಳುತ್ತಿರುವ ನಮ್ಮ ದೇಶದಲ್ಲಿ ಬಡವರು ಹಾಗೂ ಮಧ್ಯಮವರ್ಗದ ಜನರೇ ಹೆಚ್ಚು. ಬದುಕಿನ ವಿಧವಿಧದ ಛಾಯೆಗಳನ್ನು ತೆರೆದಿಡುವ ವರ್ಣವೈವಿಧ್ಯ ಕೂಡ ಬಡವರಲ್ಲಿ ಮತ್ತು ಮಧ್ಯಮವರ್ಗದಲ್ಲೇ ಜಾಸ್ತಿ. ಬದುಕುವ ರೀತಿಗಳು, ಚಟುವಟಿಕೆಗಳು, ಉಡುಗೆತೊಡುಗೆಗಳು - ಎಲ್ಲವೂ ಇಲ್ಲಿ visually rich. ಮತ್ತು ಈ ಬದುಕಿನಲ್ಲಿ ಹೊಟ್ಟೆಪಾಡಿಗೆ, ದಿನಕಳೆಯಲು ಬೇಕಾದ ಚಟುವಟಿಕೆಗೆ ಹೆಚ್ಚು ಪ್ರಾಮುಖ್ಯ. ಸೂಕ್ಷ್ಮತೆಗೆ, ಸಂವೇದನೆಗಳಿಗೆ ನಂತರದ ಸ್ಥಾನ. ಈ ದೊಡ್ಡ ದೇಶದ ಒಂದು ಮೂಲೆಯಲ್ಲಿರುವ ಬಡವರಿಗಿಂತ ಇನ್ನೊಂದು ಮೂಲೆಯಲ್ಲಿ ಬದುಕುವ ಬಡವರಿಗೆ ಅಜಗಜಾಂತರವಿರುತ್ತದೆ. ಒಂದು ಬಿಲಿಯನ್ ಜನಸಂಖ್ಯೆಯಿರುವ, 26ಕ್ಕೂ ಹೆಚ್ಚು ಮುಖ್ಯ ಭಾಷೆಗಳ ಮತ್ತು ಅವುಗಳೊಳಗೆ ಉಪಭಾಷೆಗಳ ವೈವಿಧ್ಯವಿರುವ, ಮರಳುಗಾಡಿನಿಂದ ಹಿಡಿದು ಹಸಿರು ಕಾಡಿನ ತನಕ ಎಲ್ಲಾ ರೀತಿಯ ಭೂವೈವಿಧ್ಯವಿರುವ, ಸಾವಿರಾರು ಜಾತಿಗಳಿರುವ, ಅವುಗಳೊಳಗೆ ಸಾವಿರಾರು ಪರಂಪರೆ-ಆಚರಣೆಗಳಿರುವ ನಮ್ಮ ದೇಶದಲ್ಲಿ ಬಡವರ ಬದುಕು ಸಾವಿರ ರೀತಿಗಳಲ್ಲಿ ತೆರೆದುಕೊಳ್ಳುತ್ತದೆ. ಹಾಗಾಗಿ, ಸಹಜವಾಗಿಯೇ ಕಥೆ ಬರೆಯುವವರಿಗೂ ಚಿತ್ರ ನಿರ್ದೇಶಕರಿಗೂ ಬಡಭಾರತದಲ್ಲಿ ಹೆಚ್ಚಿನ ವಿಷಯಗಳು, ವಿಚಾರಗಳು ಸಿಗುತ್ತವೆ.

ಆದರೆ ಶ್ರೀಮಂತರಾಗತೊಡಗಿದಂತೆ ಭಾಷೆ-ಉಡುಗೆ-ತೊಡುಗೆ-ಆಚರಣೆ ಎಲ್ಲವೂ ಯೂನಿವರ್ಸಲ್ ಆಗುತ್ತವೆ. ಬದುಕು ಕಾರ್ಪೋರೆಟೈಸ್ ಆಗಿ ಹೋಗುತ್ತದೆ, ಎಲ್ಲವೂ ಬ್ರಾಂಡೆಡ್ ಆಗುತ್ತದೆ, ಬದುಕಿನ ರೀತಿನೀತಿಗಳೆಲ್ಲವೂ ನಮಗೆ ಬೇಕಾಗಿಯೋ ಬೇಡದೆಯೋ ಪ್ರಿಡಿಫೈನ್ಡ್, ಮತ್ತು ಇಂಟರ್-ನ್ಯಾಶನಲ್ ಆಗಿಹೋಗುತ್ತವೆ. ಒಬ್ಬ ಶ್ರೀಮಂತನಿಗೂ ಮತ್ತೊಬ್ಬ ಶ್ರೀಮಂತನಿಗೂ ಬದುಕಿನ ರೀತಿಗಳಲ್ಲಾಗಲೀ, ನೀತಿಗಳಲ್ಲಾಗಲೀ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಉಡುಗೆ-ತೊಡುಗೆಗಳಲ್ಲಿ, ನೋವು-ನಲಿವುಗಳಲ್ಲಿ ಹೆಚ್ಚು ಭಿನ್ನತೆಯಿರುವುದಿಲ್ಲ. ಕಾಸ್ಮಾಪಾಲಿಟನ್ ಸಂಸ್ಕೃತಿಗೆ ಕಾಲಿಡುವ ಕಾರಣ, ಒಬ್ಬನಿಗೆ ಇನ್ನೊಬ್ಬನನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಕಷ್ಟವಾಗುವುದಿಲ್ಲ. ಈ ಜಗತ್ತಿನ ಸುತ್ತ ಕಥೆ ಹೆಣೆಯಹೊರಟಾಗ ನಾವು ಈವರೆಗೆ ನೋಡಿನೋಡಿ ಬೇಜಾರಾದ ಚಿತ್ರಗಳ ಹಾಗಿನವೇ ಮತ್ತೆ ಹುಟ್ಟಿಕೊಳ್ಳುತ್ತವೆ.

ಬರಿಯ thrill, action, epics, romance, emotionsಗಳಲ್ಲೇ ಕಾಲಕಳೆಯುವ ಪಾಶ್ಚಾತ್ಯ ಜಗತ್ತಿಗೆ ಈ ದೃಶ್ಯವೈವಿಧ್ಯಗಳು, ಇಲ್ಲಿನ ಬದುಕಿನ ಭಿನ್ನತೆಗಳು, ಹೋರಾಟಗಳು ಇಷ್ಟವಾಗುವುದರಲ್ಲಿ ಆಶ್ಚರ್ಯವಿಲ್ಲ. ಶುಭಂ ಹೇಳುವ ಮುಂಚೆ ಹೀರೋ-ಹೀರೋಯಿನ್ನು ಒಂದಾಗುವ ಅದೇ ಹಳೇ ಲವ್ವು, ಅದೇ ಕಥೆಗಳು, ಅದೇ ಜಡ್ಡುಗಟ್ಟಿದ ಮರಸುತ್ತೋ ಸಾಂಗುಗಳು, ಅದೇ ಅದೇ ಲೊಕೇಶನ್ನು, ಅದೇ ಆರ್ಟಿಸ್ಟು, ಅದೇ ಕ್ಯಾಮರಾ ವರ್ಕು, ಅದೇ ಎಡಿಟಿಂಗು ನೋಡಿನೋಡಿ ಬರಗೆಟ್ಟು ಬೇಜಾರಾಗಿದ್ದ ನಮಗೆಲ್ಲ, ಮುಂಗಾರುಮಳೆ ಹೊಸತನದ ಜಡಿಮಳೆ ಸುರಿಸಿತಲ್ಲ, ಅವಾಗ ನಾವೆಲ್ಲ ಅದನ್ನು ಮತ್ತೆ ಮತ್ತೆ ನೋಡಿ, ಸಿಕ್ಕವರಿಗೆಲ್ಲಾ ರೆಕಮೆಂಡ್ ಮಾಡಿ ಸೂಪರ್ ಹಿಟ್ ಮಾಡಿದ್ದೆವಲ್ಲ... ಪಾಶ್ಚಾತ್ಯ ಜಡ್ಜುಗಳಿಗೆ ಭಾರತೀಯ ಚಿತ್ರಗಳು ಇಷ್ಟವಾಗುವುದು ಇಷ್ಟೇ ಸಹಜವೇನೋ... ಅದಲ್ಲದೇ ಭಾರತದ ಬಡತನವನ್ನೇ ನೋಡಲು ಬಯಸುವ ಸೈಕಿಕ್-ಗಳು ಅವರಾಗಿರಲಿಕ್ಕಿಲ್ಲ. ಇದು ನನಗನಿಸಿದ್ದು.
------------
ನಂತರ ಯೋಚಿಸುವಾಗ, ಒಂದು ಸರ್ಕಾರ್-ಗೆ, ಒಂದು ತಾರೇ ಝಮೀಂ ಪರ್-ಗೆ, ಒಂದು ರಂಗ್ ದೇ ಬಸಂತೀಗೆ, ಒಂದು 1947-ಅರ್ಥ್-ಗೆ ಅಥವಾ ಒಂದ್ ಲಗಾನ್-ಗೆ ಸಿಗದ ಅವಾರ್ಡುಗಳು ಸ್ಲಂ ಡಾಗ್ ಚಿತ್ರಕ್ಕೆ ಹೇಗೆ ಬಂದವಪ್ಪಾ ಅಂತ ಯೋಚನೆ ಸಹಜವಾಗಿಯೇ ಆಯಿತು. ಖಂಡಿತವಾಗಿಯೂ ಭಾರತೀಯರೇ ನಿರ್ದೇಶಿಸಿದ ಹಲವಾರು ಚಿತ್ರಗಳು ಇದಕ್ಕಿಂತ ಎಷ್ಟೋ ಚೆನ್ನಾಗಿದ್ದವು. ಇನ್ನೂ ಹೆಚ್ಚು ಖುಷಿ ಕೊಟ್ಟಿದ್ದವು. ಹೆಚ್ಚು ಸಿಂಬಾಲಿಕ್ - ಹೆಚ್ಚು ಅರ್ಥಪೂರ್ಣವಾಗಿದ್ದವು. ಹೆಚ್ಚು ಯೋಚನೆಗೆ ಹಚ್ಚಿದ್ದವು. ಭಾರತೀಯ ವರ್ಣವೈವಿಧ್ಯದ ಜತೆಗೆ ಜಾಗತಿಕವೆನ್ನಬಹುದಾದ ಗುಣಮಟ್ಟವನ್ನೂ ಹೊಂದಿದ್ದವು. ರೆಹಮಾನ್ ಇದಕ್ಕಿಂತ ಉತ್ತಮ ಸಂಗೀತ ಕೊಟ್ಟ ಚಿತ್ರಗಳು ಇನ್ನೂ ಬೇಕಾದಷ್ಟಿವೆ. ಬಹುಶ: ಅಂತರ್ರಾಷ್ಟ್ರೀಯ ಪ್ರಶಸ್ತಿಗಳ ಮಾನದಂಡವೇನು ಅಂತ ಅರ್ಥವಾಗಬೇಕಾದರೆ  ಭಾರತದ ಹೊರಗಿದ್ದು ಚಿತ್ರ ನೋಡಬೇಕೇನೋ ಅಂತ ನನಗನಿಸಿದ್ದು ಮಾತ್ರ ಸುಳ್ಳಲ್ಲ.

Sunday, January 4, 2009

ಭ್ರಮೆಯ ಭೂತ ತೊಲಗಿದೆ...

ಮುಂದುವರಿದಿದೆ...


ಮುಂಬೈ ದಾಳಿಯ ಕುರಿತು ಓದುತ್ತ ಓದುತ್ತ ಅಂತರ್ಜಾಲದಲ್ಲಿ ಓಡಾಡುತ್ತಿರುವಾಗ ಎಲ್ಲೋ ಒಂದು ಕಡೆ ಮುಂಬೈ ದಾಳಿಯನ್ನು ಪಾರ್ಲಿಮೆಂಟ್ ದಾಳಿಗೆ ಹೋಲಿಸಿ ಬರೆದಿದ್ದಿದ್ದು, ಮತ್ತು ಅದಕ್ಕೆ ಅರುಂಧತಿ ರಾಯ್ ಲೇಖನದ ಸಹಾಯ ಕೂಡ ತೆಗೆದುಕೊಂಡಿದ್ದು ಕಾಣಿಸಿತು. ಅರುಂಧತಿ ರಾಯ್ (THE GREATER COMMON GOOD ಲೇಖನಕ್ಕಾಗಿ) ನಾ ಕಂಡ ಧೈರ್ಯವಂತ ಲೇಖಕಿಯರಲ್ಲೊಬ್ಬರು ಆಕೆ... ಗಮನವಿಟ್ಟು ಆಕೆಯ ಲೇಖನ ಓದಿದೆ... ಈಗಾಗಲೇ ಅರ್ಧ ಕೆಟ್ಟಿದ್ದ ತಲೆ, ಸಂಪೂರ್ಣ ಕೆಟ್ಟು ಹೋಯಿತು.

ಅಫ್ಝಲ್ ಗುರುಗೆ ಗಲ್ಲು ಯಾಕಿಲ್ಲ?

ಮುತಾಲಿಕ್ ಅಥವಾ ತೊಗಾಡಿಯಾ ಅಥವಾ ಇನ್ಯಾರೋ ಅಫ್ಝಲ್ ಗುರುವನ್ನು ಗಲ್ಲಿಗೇರಿಸದ ಸರಕಾರದ ಮೇಲೆ ಕೆಂಡಕಾರುವಾಗ ನಮಗೆಲ್ಲ ಹೌದುಹೌದೆನ್ನಿಸಿ ರಕ್ತ ಕುದಿಯುತ್ತದೆ. ಸುಳ್ಯಾಕೆ ಹೇಳಲಿ, ನನಗೂ ರಾಷ್ಟ್ರದ ಹೃದಯವನ್ನೇ ಆಕ್ರಮಿಸಿದ ಒಬ್ಬ ಅಪರಾಧಿಯನ್ನು ಗಲ್ಲಿಗೇರಿಸದಷ್ಟು ಹೀನಾಯವಾಗಿ ಹೋಯಿತಾ ನಮ್ಮ ದೇಶ ಅನಿಸಿ ಬೇಸರವಾಗಿತ್ತು. ನಮ್ಮಲ್ಲಿ ತುಂಬಾ ಜನ, ಅಫ್ಝಲ್ ಗುರು ಭಯೋತ್ಪಾದಕನೆಂದು ಸಾಧಿತವಾಗಿದೆ ಅಂತಲೇ ಅಂದುಕೊಂಡಿರುತ್ತೇವೆ, ಆದರೆ - ವಿಷಯ ಯಾವುದೇ ಇರಲಿ, ಅದನ್ನು ಮನಸ್ಸು ಮುಟ್ಟುವಂತೆ ಶಕ್ತಿಯುತವಾಗಿ ಬರೆಯುವುದು ರಾಯ್-ಗೆ ಚೆನ್ನಾಗಿ ಗೊತ್ತು ಅನ್ನುವುದು ನಿಜವಾದರೂ, ಅದರಲ್ಲಿರುವ ಸತ್ಯಗಳು ಸತ್ಯಗಳೇ ತಾನೇ. ಅರುಂಧತಿ ರಾಯ್ ಬರೆದುದು ಓದಿದಾಗ ನನ್ನ ಭ್ರಮೆ ಸ್ವಲ್ಪ ಮಟ್ಟಿಗೆ ತೊಲಗಿದ್ದಂತೂ ಸತ್ಯ. ನೀವೂ ಓದಿ ನೋಡಿ...

ಆಕೆ ಸೂಚಿಸಿರುವ ಪುಸ್ತಕ, Nirmalangshu Mukherji ಬರೆದಿರುವ December 13th: Terror Over Democracy ನಾನಿನ್ನೂ ಓದಬೇಕಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿ ಸಿಕ್ಕಿದರೆ ಅದನ್ನೂ ನೋಡಬೇಕಿದೆ. ಹಾಗೇ ಅಫ್ಝಲ್ ಗುರುವಿನ ಹೇಳಿಕೆ ಕೂಡ ನೋಡಬೇಕಿದೆ. ಆದರೆ ಮೇಲ್ನೋಟಕ್ಕೆ ಅನಿಸಿದ್ದು - ಇಂದಿಗೂ ಅಫ್ಝಲ್ ಗುರುವನ್ನು ಯಾರು ಕಳುಹಿಸಿದರು, ಯಾಕೆ ಕಳುಹಿಸಿದರು, ಎಂಬುದನ್ನು ನಮ್ಮ ವ್ಯವಸ್ಥೆ ಪತ್ತೆಹಚ್ಚಲು ಸಾಧ್ಯವಾಗದೆಯೇ ವಿಚಾರಣೆ ಮುಗಿದಿರುವುದು ನಮ್ಮ ದೇಶದ ದುರಂತ. ಸಿಪಿಸಿ 313ನೇ ವಿಭಾಗದಡಿ ಆತ ನೀಡಿದ ಹೇಳಿಕೆಯನ್ನು ಯಾಕೆ ಸುಪ್ರೀಂಕೋರ್ಟ್ ಪರಿಗಣಿಸಲಿಲ್ಲ ಎಂಬುದು ಕೂಡ ಉತ್ತರ ಸಿಗದ ಪ್ರಶ್ನೆ. (ಯಾರಾದರೂ ಕಾನೂನು ಬಲ್ಲವರು ಈ ವಿಚಾರಗಳ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಂಡಿದ್ದಲ್ಲಿ, ಅಥವಾ ಅರುಂಧತಿ ರಾಯ್ ಲೇಖನಕ್ಕೆ ಏನಾದರೂ ಪ್ರತಿವಾದಗಳು ಇದ್ದಲ್ಲಿ ತಿಳಿಸಿ, ನಾವೂ ತಿಳಿದುಕೊಳ್ಳುತ್ತೇವೆ...) ಇವೆಲ್ಲ ಗೊತ್ತಾಗದೆ ಏನೇ ಮಾಡಿದರೂ, ನಮ್ಮ ಕಡೆ ಮುಳ್ಳಿಟ್ಟು ಮದ್ದು ಉಜ್ಜುವುದು ಅಂತಾರಲ್ಲ, ಹಾಗಾಗುತ್ತದೆ - ಅಷ್ಟೆ.

ಕರ್ನಾಟಕದ ಚುನಾವಣೆಗೆ ಬಿಜೆಪಿ ಬಿಡುಗಡೆಗೊಳಿಸಿದ, ಬಿಜೆಪಿಯೇ ಪರಿಹಾರ ಸಿರೀಸ್-ನ ಜಾಹೀರಾತುಗಳಲ್ಲಿ ಇನ್ನೂ ಅಫ್ಝಲ್ ಗುರುವಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಿಲ್ಲದ ಕಾಂಗ್ರೆಸ್ ಸರಕಾರವನ್ನು ಹೀಗಳೆಯಲಾಗಿತ್ತು. ದೇಶದ ಯಾವುದೋ ಮೂಲೆಯಲ್ಲಿದ್ದುಕೊಂಡು ಮಾಹಿತಿಗೆ ಮಾಧ್ಯಮವನ್ನೇ ಅವಲಂಬಿಸುವ ನಮ್ಮ ಹಾಗೆಯೇ, ದೇಶದೆಲ್ಲೆಡೆ ಇರುವ ಬಿಜೆಪಿ ನಾಯಕರು ಕೂಡ ಅಫ್ಝಲ್ ಗುರುವಿನ TRIAL ಬಗ್ಗೆ ಹೆಚ್ಚೇನೂ ತಿಳಿದುಕೊಂಡಿಲ್ಲವೋ ಏನೋ... ಅಥವಾ ಅಷ್ಟೊಂದು ಸೂಕ್ಷ್ಮವಾಗಿ ನೋಡುವ ಅವಶ್ಯಕತೆಯಿಲ್ಲ ಎನ್ನುವ ಅಸಡ್ಡೆಯೋ... ಅಥವಾ ಇನ್ನೇನೋ.... ?

ಅಷ್ಟು ಮಾತ್ರವಲ್ಲ. ಈಗ ಈ ಕೇಸ್ ಮೇಲೆ ಏನೇ ಹೇಳಿದರೂ ನ್ಯಾಯಾಂಗ ನಿಂದನೆಯಾಗುವ ಭಯಕ್ಕೆ ಸುಮ್ಮನಿದ್ದರೂ ಇರಬಹುದೇನೋ. ಹಾಗೇ, ಅಫ್ಝಲ್ ಗುರುವನ್ನು ಗಲ್ಲಿಗೇರಿಸಲು ಸರಕಾರ ಮೀನ-ಮೇಷ ಎಣಿಸುತ್ತಿರುವುದಕ್ಕೆ ಆತನ ವಿಚಾರಣೆಯೇ ಸರಿಯಾದ ರೀತಿಯಲ್ಲಿ ಆಗಿಲ್ಲ ಎಂಬುದು ಕಾರಣವಿರಬಹುದೇನೋ, ಆತನನ್ನು ಗಲ್ಲಿಗೇರಿಸಿದರೂ ಆತನ ಹಿಂದಿನ ಸೂತ್ರಧಾರಿಗಳು ಯಾರೆಂಬುದು ತಿಳಿಯುವುದಿಲ್ಲ ಎಂಬ ಸತ್ಯ ಎಲ್ಲೋ ಒಂದು ಕಡೆ ಕಾಂಗ್ರೆಸ್ ಸರಕಾರಕ್ಕೆ ಚುಚ್ಚುತ್ತಿರಬಹುದೇನೋ, ಅಂತ ನನಗನಿಸಿತು. (ಇದಕ್ಕೆ ಸರಬ್ಜಿತ್ ಕೂಡ ಕಾರಣ ಅನ್ನುವ ಹಳೆಯ ವಾದ ಕೂಡ ಇದೆ)

ಅರುಂಧತಿ ರಾಯ್ ಮಾತ್ರ ಇಂದಿಗೂ ತನ್ನ ಈ ಲೇಖನಕ್ಕಾಗಿ ನ್ಯಾಯಾಂಗ ನಿಂದನೆಯ ಆರೋಪ ಹೊತ್ತಿದ್ದಾರೆ. ಆಕೆ ನರ್ಮದಾ ಬಚಾವೋ ಆಂದೋಲನವನ್ನು ಬೆಂಬಲಿಸಿ ಬರೆದ, ನಿರ್ವಸಿತರಿಗೆ ಸರಿಯಾದ ವ್ಯವಸ್ಥೆಯಾಗಿರದಿದ್ದರೂ ಸರ್ದಾರ್ ಸರೋವರ್ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಅನುಮತಿಯಿತ್ತ ಸುಪ್ರೀಂಕೋರ್ಟಿನ ತೀರ್ಮಾನವನ್ನು ಪ್ರಶ್ನಿಸಿದ THE GREATER COMMON GOOD ಕೂಡ ನ್ಯಾಯಾಂಗ ನಿಂದನೆಯ ಆರೋಪ ಎದುರಿಸಿತ್ತು.

ಒಂದಿಷ್ಟು ಸಂಶಯಗಳು...

ಇಷ್ಟೆಲ್ಲ ಬರೆದ ಮೇಲೆ, ನನಗೆ ಕೆಲವು ಸಂಶಯಗಳು ಉಳಿದಿವೆ, ಅವುಗಳನ್ನೂ ಹಂಚಿಕೊಂಡುಬಿಡುತ್ತೇನೆ... ಚುನಾವಣೆಯಲ್ಲಿ ಎರಡನೇ ಹಂತದ ಮತದಾನ - ಉತ್ತರಕರ್ನಾಟಕ ಮತ ಹಾಕುವ ಮೊದಲಿನ ಆದಿತ್ಯವಾರ ಹುಬ್ಬಳ್ಳಿ ಕೋರ್ಟಲ್ಲಿ ಕೂಡ ಸ್ಫೋಟ ಆಗಿತ್ತು. ಧಾರವಾಡದಲ್ಲಿ ಜೀವಂತ ಬಾಂಬುಗಳು ಸಿಕ್ಕಿದ್ದವು. ಇವೆಲ್ಲ ಯಾರ ಕೃತ್ಯ ಅಂತ ಇಲ್ಲಿವರೆಗೆ ಪತ್ತೆಯಾಗಿಲ್ಲ. ನಮ್ಮ ಬೆಂಗಳೂರಿನಲ್ಲಿ ಐದಾರು ನಾಟಿ ಬಾಂಬ್ ಸಿಡಿಸಿ ಒಬ್ಬರನ್ನು ಕೊಂದು ಡ್ರೈ ರನ್ ಮಾಡಿದ್ದು ಯಾರು ಅಂತ ಇಷ್ಟು ದಿನವಾದರೂ ಪತ್ತೆಯಾಗಿಲ್ಲ. ಸಾಕ್ಷ್ಯ ಸಿಗದಿದ್ದರೆ ಏನೂ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇರುವ ನಮ್ಮ ದೇಶದಲ್ಲಿ, ಮುಂಬೈ ಭಯೋತ್ಪಾದಕ ಕೃತ್ಯದ ಪ್ರತಿ ಸಾಕ್ಷ್ಯವೂ ಪಾಕ್ ಕಡೆ ನೇರವಾಗಿ ಬೆಟ್ಟುಮಾಡಿ ತೋರಿಸುತ್ತಿದೆ. ಮುಂಬೈಯ ಇಂಚಿಂಚು ತಿಳಿದುಕೊಂಡು ಅದ್ಭುತವಾಗಿ ಪ್ಲಾನ್ ಮಾಡಿ, ಜಿಪಿಎಸ್, ಸ್ಯಾಟಲೈಟ್ ಫೋನ್ ಇತ್ಯಾದಿ ಉಪಯೋಗಿಸಿಕೊಂಡು ಹೈಟೆಕ್ ವಿಧಾನದಲ್ಲಿ ಭಯೋತ್ಪಾದನೆಯ ಕೆಲಸ ಮಾಡಿಸುವ ಅಂತರ್ರಾಷ್ಟ್ರೀಯ ಉಗ್ರರು - ನಮ್ಮ ನಾಟಿ ಉಗ್ರರಿಗಿಂತ ದಡ್ಡರಾ? ಅದೂ ಸಿಕ್ಕಿಸಿಕ್ಕಿದಲ್ಲಿ ಸಾಕ್ಷ್ಯ ಬಿಟ್ಟು ಹೋಗುವಷ್ಟು? ತಾವು ಉಪಯೋಗಿಸಿದ ಫೋನನ್ನು, ಸಿಮ್ ಕಾರ್ಡುಗಳನ್ನು ಯಾರಾದರೂ ಪೊಲೀಸರಿಗೆ ಸಾಕ್ಷ್ಯವಾಗಿ ಸಿಗುವ ಹಾಗೆ ಬಿಟ್ಟುಹೋಗುತ್ತಾರಾ? ಅಥವಾ, ಇಂತಹ ಕೃತ್ಯ ನಡೆಸಿ ಸಿಕ್ಕಿಬಿದ್ದರೆ ಏನಾಗುತ್ತದೆಂದು ಗೊತ್ತಿದ್ದು ಪೊಲೀಸರಿಗೆ ಸಿಕ್ಕಿಬೀಳುವ ಪರಿಸ್ಥಿತಿಯಲ್ಲಿ ತಮ್ಮನ್ನು ಇಟ್ಟುಕೊಳ್ಳುತ್ತಾರಾ? ಇವೆಲ್ಲ ಪ್ರಜ್ಞಾಪೂರ್ವಕವಾಗಿ ಯೋಚನೆಮಾಡುವ ಯಾರನ್ನೇ ಆದರೂ ಕಾಡುವ ಪ್ರಶ್ನೆಗಳು ಅನ್ನುವುದು ನಿಜ ತಾನೇ ?

ಉಗ್ರವಾದದ ವಿಚಾರದಲ್ಲಿ ಭಾರತಕ್ಕೆ ಬೆಂಬಲ ನೀಡುತ್ತಿರುವ ಅಮೆರಿಕಾ, ಬ್ರಿಟನ್ ಇತ್ಯಾದಿ ರಾಷ್ಟ್ರಗಳಿಗೆ ಎದುರಾಗಿ ನಿಂತರೆ ಆಗುವ ಪರಿಣಾಮಗಳು ಗೊತ್ತಿದ್ದೂ ಪಾಕ್, ಯಾಕೆ ಅಷ್ಟು ಧೃಢವಾಗಿ ಭಾರತಕ್ಕೆ ಸಾಕ್ಷ್ಯ ಸಾಲದು, ಸರಿಯಾದ ಸಾಕ್ಷ್ಯ ತೋರಿಸಿ ಅನ್ನುತ್ತಿದೆ? ಅದರ ಪರವಾದ ಯಾವ ಸತ್ಯ ಅದಕ್ಕೆ ಅಷ್ಟು ಶಕ್ತಿ ಕೊಟ್ಟಿದೆ? ಮೊದಮೊದಲು ಪಾಕ್ ನಡೆಸಿದ ಕೃತ್ಯ ಎಂದು ಪಾಕ್ ಮೇಲೆ ನೇರವಾಗಿ ವಾಗ್ದಾಳಿ ನಡೆಸಿದ ಪ್ರಣಬ್ ಮುಖರ್ಜಿ, ನಂತರ ಪಾಕ್ ನೆಲದಲ್ಲಿನ ಉಗ್ರರು ನಡೆಸಿದ ಕೃತ್ಯ ಅನ್ನಲು ಕಾರಣವೇನು? ನಮ್ಮಲ್ಲಿ ಆದ ಉಗ್ರರ ಕೃತ್ಯಕ್ಕೆ ಅಮೆರಿಕಾದಿಂದ, ಬ್ರಿಟನ್-ನಿಂದ ಸಾಕ್ಷ್ಯ ಹೇಗೆ ಸಿಗುತ್ತಿದೆ? ಅಷ್ಟಕ್ಕೂ, ಭಾರತ ಸರಕಾರ ಇಲ್ಲಿವರೆಗೆ ತೋರಿಸಿದ ಸಾಕ್ಷ್ಯಗಳಲ್ಲಿ ಯಾವುದು ತಾನೇ ಬಂಧಿತ ಉಗ್ರ ಪಾಕ್-ನವ ಅಂತ UNDISPUTABLE ಆಗಿ ಹೇಳುತ್ತಿದೆ? ಇಲ್ಲಿವರೆಗೆ ಭಾರತ ಇತರ ರಾಷ್ಟ್ರಗಳ ಜತೆಗೆ ಸಾಕ್ಷ್ಯ ಹಂಚಿಕೊಳ್ಳದಿದ್ದುದರ ಗುಟ್ಟೇನು? (ಟೀವಿ ಚಾನೆಲ್ಲುಗಳು ಮಾಡಿದ ಸ್ಟಿಂಗ್ ಆಪರೇಶನ್ ಅಥವಾ ಮಾಧ್ಯಮ ವರದಿಗಳು ಸಾಕ್ಷ್ಯವೆಂದು ಒಪ್ಪಿಕೊಳ್ಳಲು ಯ:ಕಶ್ಚಿತ್ ನಾನೇ ಸಿದ್ಧಳಿಲ್ಲ, ಇನ್ನು ಪಾಕ್ ಹೇಗೆ ಒಪ್ಪಿಕೊಳ್ಳುತ್ತದೆ?) ಇವಕ್ಕೆಲ್ಲ ಸರಿಯಾದ ಉತ್ತರಗಳು ಇಲ್ಲಿವರೆಗೆ ಸಿಕ್ಕಿಲ್ಲ ನನಗೆ. ಇವಕ್ಕೆಲ್ಲ ಸರಿಯಾದ ಉತ್ತರಗಳು ಸಿಗುವ ವರೆಗೆ conspiracy theoryಗಳ ಪ್ರಭಾವ ನನ್ನ ತಲೆಯಿಂದಲಂತೂ ಹೋಗುವುದಿಲ್ಲ.

ಇಂದು.....

ನಾ ಬರೆದಿದ್ದರ ಸತ್ಯಾಸತ್ಯತೆ ಪರಿಶೀಲಿಸಿ, ನಂಬಲಿಕ್ಕೆ ಇಷ್ಟವಿದ್ದವರು ನಂಬಬಹುದು, ಇಷ್ಟವಿಲ್ಲದವರು ನಂಬದಿರಬಹುದು, ಅಥವಾ ಇದಕ್ಕೆ ವಿರುದ್ಧವಾದ ಸಂಶೋಧನೆ, ಯೋಚನಾಸರಣಿ ಇತ್ಯಾದಿಗಳ ಮೂಲಕ ನನಗನಿಸಿದ್ದು ತಪ್ಪು ಅಂತ ಸಾಧಿಸಲು ಕೂಡ ಹೊರಡಬಹುದು. ಮೊಸ್ಸಾಡ್ ಮತ್ತು ಇಸ್ರೇಲ್ ಕುರಿತ ಆಪಾದನೆಗಳು ಊಹಾಪೋಹಗಳು ಅಥವಾ conspiracy theory ಕೂಡ ಆಗಿಬಹುದಾದ ಸಾಧ್ಯತೆಯನ್ನೂ ನಾನು ಅಲ್ಲಗಳೆಯುವುದಿಲ್ಲ. ಆದರೆ, ಎಲ್ಲೆಲ್ಲೋ ಅಲೆದಾಡಿ ಜಗತ್ತಿನ ಯಾವ ಭಾಗದಲ್ಲಿ ಏನು ಚರ್ಚೆ ನಡೆಯುತ್ತಿದೆ ಅಂತ ತಿಳಿದುಕೊಂಡದ್ದರಿಂದ ನನ್ನ ಜಗತ್ತು ವಿಶಾಲವಾಗಿದೆ. ನಾನು ತಿಳಿದುಕೊಂಡುದೇ ಸತ್ಯ ಅಂದುಕೊಂಡಿದ್ದೆ ನಾನು, ಅದು ಸುಳ್ಳಾಗಿದೆ, ಭ್ರಮೆಯ ಗುಳ್ಳೆಗಳೆಲ್ಲ ಒಡೆದುಹೋಗಿವೆ.

ಇವೆಲ್ಲಾ ಆದ ಮೇಲೆ ಇಸ್ರೇಲ್ ಮತ್ತೆ ಗಾಜಾ ಪಟ್ಟಿಯ ಮೇಲೆ ದಾಳಿ ಆರಂಭಿಸಿದೆ, ದಾಳಿಯಲ್ಲಿ ಸತ್ತ ನಾಗರಿಕರ ಸಂಖ್ಯೆ ಮುಂಬೈ ದಾಳಿಯಲ್ಲಿ ಸತ್ತವರಿಗಿಂತ ಮೂರು ಪಟ್ಟಿನಷ್ಟು ಹೆಚ್ಚಿದೆ. ಈ ನಡುವೆ ಹೊಟ್ಟೆಪಾಡಿಗಾಗಿ ಬಾಂಗ್ಲಾದಿಂದ ಅಕ್ರಮವಾಗಿ ವಲಸೆ ಹೊರಟಿದ್ದ 400ಕ್ಕೂ ಹೆಚ್ಚು ಜನರನ್ನು ಮೋಸದಿಂದ ಇಂಧನವಿಲ್ಲದ ಬೋಟುಗಳಲ್ಲಿ ಸಮುದ್ರ ಮಧ್ಯದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ನಡೆದಿದೆ, 100ರಷ್ಟು ಜನರನ್ನು ಭಾರತೀಯ ನೌಕಾಪಡೆ ರಕ್ಷಿಸಿತು, ಉಳಿದ 300 ಜನರ ಪತ್ತೆಯಿಲ್ಲ. ಈ ಎರಡೂ ಘಟನೆಗಳು ಮುಂಬೈ ಭಯೋತ್ಪಾದನೆ ಹುಟ್ಟಿಸಿದ ಗಾಬರಿ ಜಗತ್ತಿನಲ್ಲಿ ಹುಟ್ಟಿಸಿಯೇ ಇಲ್ಲ. ಆಲ್ಲಿ ಸತ್ತ ಜೀವಗಳಿಗೆ ಜಗತ್ತು ಮುಂಬೈ ದಾಳಿಯಲ್ಲಿ ಬಲಿಯಾದವರಿಗೆ ಕೊಟ್ಟ ಬೆಲೆ ಕೊಟ್ಟಿಲ್ಲ.

ನನಗೆ ಸಿಕ್ಕಿದ ಇಸ್ರೇಲಿ ಭೂತದ ಕಥೆ ಎಷ್ಟು ಸತ್ಯವೋ ಸುಳ್ಳೋ ಕಾಲವೇ ಹೇಳಬೇಕು. ಆದರೆ, ಧರ್ಮದ ಆಧಾರದಲ್ಲಿಯೇ ಯೋಚಿಸುವ ಬಹಳಷ್ಟು ಜನರಿಗೆ ಈ ಎಲ್ಲಾ ಘಟನೆಗಳು, ರಾಷ್ಟ್ರ-ರಾಷ್ಟ್ರಗಳ ನಡುವಿನ ಸಮೀಕರಣಗಳು, ರಾಜಕೀಯ ಪಕ್ಷಗಳ ಜಾಣ ಕೃತ್ಯಗಳು ಈಗಲಾದರೂ ಕಣ್ಣು ತೆರೆಸಬೇಕು. ಮತ್ತು ಸದ್ಯ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಜಗತ್ತು ಎಲ್ಲಿ ಸಾಗುತ್ತಿದೆ ಎಂಬುದೂ ಅರಿವಾಗಬೇಕು. ಯುದ್ಧ-ಯುದ್ಧವೆಂದು ಕುಣಿಯುತ್ತಿರುವವರು ಯಾರೆಂದು ಕಣ್ಣುಬಿಟ್ಟು ನೋಡಿದರೆ ಸತ್ಯ ಗೊತ್ತಾಗುತ್ತದೆ. ಯುದ್ಧದ ಮಾತು, ಹಾಗೂ ಅಮೆರಿಕಾ-ಫ್ರಾನ್ಸ್ ಮತ್ತಿತರ ದೇಶಗಳ ಜತೆಗಿನ ನಾಗರಿಕ ಅಣು ಒಪ್ಪಂದದ ಭರದಲ್ಲಿ ಇಂಡೋ-ಇರಾನ್ ಗ್ಯಾಸ್ ಪೈಪ್ ಲೈನ್ ಮಾತುಕತೆಯನ್ನು ಮುಂದೆ ತೆಗೆದುಕೊಂಡು ಹೋಗುವುದನ್ನು ಮರೆತೇ ಬಿಟ್ಟಿತು ಭಾರತ... ದೂರದಲ್ಲಿರುವ ನೆಂಟರನ್ನು ಮೆಚ್ಚಿಸಲು ಪಕ್ಕದ ಮನೆಯವರನ್ನು ದೂರವಿಟ್ಟ ತಪ್ಪಿಗೆ ಮುಂದೆಂದೋ ಒಂದು ದಿನ ಪಶ್ಚಾತ್ತಾಪ ಪಡುವ ದಿನ ಬರಬಹುದು. ಯಾರಿಗೆ ಯುದ್ಧದಿಂದ ಉಪಕಾರವೋ, ಅವರು ನಾವಲ್ಲ - ಅಂದರೆ ಭಾರತವಲ್ಲ, ಪಾಕಿಸ್ತಾನವೂ ಅಲ್ಲ. ಶಾಂತಿಗಿರುವ ಶಕ್ತಿ ಯುದ್ಧಕ್ಕಿಲ್ಲ ಎಂಬುದು ನಮಗೆಲ್ಲ ಎಷ್ಟು ಬೇಗ ಅರ್ಥವಾಗುತ್ತದೋ ಅಷ್ಟು ಎರಡೂ ರಾಷ್ಟ್ರಗಳಿಗೆ ಒಳ್ಳೆಯದಾಗುತ್ತದೆ. ಮತ್ತು ನಮ್ಮೊಳಗಿದ್ದುಕೊಂಡು ಪಾಕ್ ನಮ್ಮ ಬದ್ಧ ವೈರಿಯೆಂಬಂತೆ ಆಡುತ್ತ ನಿಜವಾದ ಹಿತಶತ್ರುಗಳ ಬಗ್ಗೆ ಜಾಣಕುರುಡರಾಗುವ ಮಹಾನುಭಾವರುಗಳಿಗೂ ಒಳ್ಳೆಯದಾಗುತ್ತದೆ.

ಉಗ್ರರು ಯಾರೇ ಇರಲಿ, ಅವರು ತಮ್ಮ ಕೃತಿಗಳ ಮೂಲಕ ಕೊಲ್ಲುವುದು ಯಾವಾಗಲೂ ಮುಗ್ಧರನ್ನು. ಇಬ್ಬರ ಜಗಳ ಮೂರನೆಯವನಿಗೆ ಲಾಭ - ಸರಳ ಸಿದ್ಧಾಂತ, ಇತರ ಧರ್ಮಗಳ ರಾಷ್ಟ್ರಗಳು ತಮ್ಮ ಹಿತಾಸಕ್ತಿಗೋಸ್ಕರ ಹಿಂದುಗಳಲ್ಲಿ ಅಡಕವಾಗಿರುವ ಮುಸ್ಲಿಂ ವಿರೋಧಿ ಭಾವನೆಯ ದುರುಪಯೋಗವನ್ನು ಪಡೆದುಕೊಳ್ಳುತ್ತಿರುವುದು ಅರ್ಥವಾದಾಗಲಾದರೂ ಹಿಂದು ಹಿಂದು ಎಂದು ಸಾಯುವವರು ಬದಲಾಗಬಹುದು ಅಂತ ಆಶಿಸಲೇ? ಒಂದು ಕಡೆ ಕಡೆ ಹಿಂದುತ್ವವೆಂದರೆ ವೇ ಆಫ್ ಲೈಫ್ ಅಂತ ಭಾಷಣ ಮಾಡುತ್ತ, ಇನ್ನೊಂದು ಕಡೆ ಚರ್ಚ್-ಗಳ ಮೇಲೆ ದಾಳಿ ನಡೆಸುತ್ತ so-called ಹಿಂದುತ್ವ ಮೆರೆಯುವ FANATICಗಳಿಗೆ, ಇನ್ನೊಂದು ಕಡೆ CHRISTIAN AGGRESSION ಬಗ್ಗೆ ದೊಡ್ಡದೊಡ್ಡದಾಗಿ ಮಾತಾಡುತ್ತ ಚರಿತ್ರೆಯ ಭಾರವನ್ನೆಲ್ಲ ಇಂದಿನ ಜನತೆಯ ಮೇಲೆ ಹಾಕಿ ನಾಳೆಗಳನ್ನು ಹಾಳುಮಾಡುವ SO-CALLED ಇತಿಹಾಸಕಾರರಿಗೆ ಅಥವಾ ಬುದ್ಧಿಜೀವಿಗಳಿಗೆ, ಮತ್ತು ಅದಕ್ಕೆ ಅಗತ್ಯವಿಲ್ಲದಷ್ಟು ಪ್ರಚಾರ ಕೊಟ್ಟು ಮನಸುಗಳನ್ನು ಕದಡಿದ ಮಾಧ್ಯಮಕ್ಕೆ ಈಗಲಾದರೂ ಜ್ಞಾನೋದಯವಾಗಬೇಕು.

ನಿನ್ನೆಯ ಕರಿನೆರಳುಗಳು ನಾಳೆಗಳನ್ನು ಹಾಳುಗೆಡವದಿರಲಿ...

ಒಂದು ಕಾಲದಲ್ಲಿ, ಮಂದಿರವಲ್ಲೇ ಕಟ್ಟುವೆವು ಅಂದವರ ಹಾಡಿಗೆ ದನಿಗೂಡಿಸಿದವರಲ್ಲಿ ನಾನೂ ಇದ್ದೆ. ಆಗ ತುಂಬಾ ಚಿಕ್ಕವಳಿದ್ದೆ. ಆರ್ ಎಸ್ ಎಸ್-ನವರಿಂದ ಬದುಕಿನಲ್ಲಿ ಶಿಸ್ತು, ಕರ್ತವ್ಯಪರತೆ, ದೇಶಪ್ರೇಮ ಮೈಗೂಡಿಸಿಕೊಂಡವರು ನಾವು. ನಮ್ಮನೆಯಲ್ಲಿ ಇವತ್ತಿಗೂ ಬಿಜೆಪಿಗೇ ಓಟು. ಒಂದಾನೊಂದು ಕಾಲದಲ್ಲಿ ನಾನೇ ಅನ್ನುತ್ತಿದ್ದೆ, ಸೇರಿದರೆ ಬಿಜೆಪಿ ಸೇರ್ತೇನೆ, ಬಿಜೆಪಿಯಿಂದಲೇ ಓಟಿಗೆ ನಿಲ್ತೇನೆ ಅಂತ... ಆದರೆ, ಈಗ ಅದೆಲ್ಲಾ ಹುಚ್ಚೂ ಬಿಟ್ಟುಹೋಗಿದೆ :-) ಸತ್ಯದ ವಿವಿಧ ಮಜಲುಗಳನ್ನು ಅರಿತುಕೊಳ್ಳುತ್ತ ಹೋದಂತೆ , ಕಾಲ ತನ್ನ ಹೆಜ್ಜೆಗಳನ್ನು ಹಾಕುತ್ತ ಹೋಗುವಾಗ ತಂದ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳುತ್ತ ಹೋದಂತೆ, ನನಗಿದ್ದ ಭ್ರಮೆಗಳು ತೊಲಗಿವೆ.

ಭಯೋತ್ಪಾದನೆ ಇಂದು ಚುನಾವಣಾವಿಷಯವಾಗಿ ಉಳಿದಿಲ್ಲ. ಈಗ ಅದು ನಮ್ಮಲ್ಲಿ ಪ್ರತಿಯೊಬ್ಬರ ಅಸ್ತಿತ್ವದ ಪ್ರಶ್ನೆ, ಸರಿ-ತಪ್ಪಿನ ನಡುವಿನ ತೂಗಾಟದ ಪ್ರಶ್ನೆ, ನಿನ್ನೆಗಳ ನೆರಳಿನಲ್ಲಿ ಇಂದು ಎಸಗುವ ಕೃತ್ಯಗಳ ಮೂಲಕ, ನಾಳೆಗಳನ್ನು ನಾಶಪಡಿಸಹೊರಟ ಪಿಡುಗು. ಇದು ಎಲ್ಲಾ ಜಾತಿ-ಮತಗಳನ್ನು ಮೀರಿದ ಸಾರ್ವತ್ರಿಕ ಸಮಸ್ಯೆ. ಇದನ್ನು ಹೇಳಹೊರಟವರು ಮೊದಮೊದಲು ವಿರೋಧ ಎದುರಿಸಿಯೇ ಎದುರಿಸುತ್ತಾರೆ, ಯಾಕೆಂದರೆ ನಮ್ಮ ಕೆಟ್ಟತನವನ್ನು ಒಪ್ಪಿಕೊಳ್ಳಲು ನಮಗೆ ಸಮಯ ಬೇಕು. ಕೆಲವೊಮ್ಮೆ ಬಹಳ ಸಮಯ ಕಳೆದ ನಂತರವೂ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿರಬಹುದು, ಅಥವಾ ಒಪ್ಪಿಕೊಳ್ಳುವುದು ಬೇಕಿಲ್ಲವಿರಬಹುದು. ಭಯೋತ್ಪಾದನೆ ನಿಗ್ರಹವಾಗಬೇಕು ಎಂದು ಹೋರಾಡುವವರೆಲ್ಲರೂ ಈ ಬೇಸಿಕ್ ಸತ್ಯವನ್ನು ಒಪ್ಪಿಕೊಂಡಾಗ ಮಾತ್ರ ಹೋರಾಟ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯ. ಈನಿಟ್ಟಿನಲ್ಲಿ ಯೋಚಿಸುವಾಗ, ನಮ್ಮ ರಾಜ್ಯದಲ್ಲಿ ಹೀಗಾದರೆ ಎಷ್ಟು ಚೆನ್ನ ಅಂತ ಮನಸು ಲೆಕ್ಕ ಹಾಕುತ್ತದೆ...

1) ಒಂದಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಲ್ಲಿ, ಯುವಜನತೆಗೆ ಉದ್ಯೋಗಗಳು ಕಲ್ಪಿಸಿ ಕೊಟ್ಟಲ್ಲಿ, ಅವರ ವಿಚಾರಧಾರೆಗಳು ಸರಿದಾರಿಯಲ್ಲಿ ಸಾಗುವಂತೆ ಮಾಡಿದಲ್ಲಿ, ಮುಂದೆ ಕೈಯಲ್ಲಿ ಕೋವಿ ಹಿಡಿದು ಭಯೋತ್ಪಾದಕರಾಗಬಹುದಾದ ಯುವಜನತೆ ಹಾದಿ ತಪ್ಪುವ ಬದಲು ತಮ್ಮ ಬದುಕಿನಲ್ಲಿ ತಾವು ವ್ಯಸ್ತರಾಗಬಹುದಲ್ಲವೇ?

2) ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯವಾಗಿಸುತ್ತೇವೆಂದು ಪ್ರಾಥಮಿಕ ಶಿಕ್ಷಣ ಸಚಿವರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಅದರ ಜತೆಗೆ, ನಮ್ಮ ರಾಷ್ಟ್ರದ ಪ್ರತಿ ಪ್ರಜೆಗೂ ಗೊತ್ತಿರಬೇಕಾದ ಪ್ರತಿಜ್ಞೆ, ಮತ್ತು ರಾಷ್ಟ್ರೀಯ ಭಾವೈಕ್ಯದ ಪ್ರತಿಜ್ಞೆ ಕೂಡ ಕಡ್ಡಾಯವಾಗಿಸಬಹುದಲ್ಲವೇ?

3) ಯಾವ್ಯಾವುದೋ ಸಂಘಸಂಸ್ಥೆಗಳಿಗೆ ಸೇನೆಯ ತರಬೇತಿ ನೀಡಲು ಅನುಮತಿ ನೀಡುವ ಬದಲು, ಸರಕಾರದೊಳಗಿನ ವ್ಯವಸ್ಥೆಯಲ್ಲಿ ನೇರವಾಗಿಯೇ ಇರುವ ಪೊಲೀಸರಿಗೇ ಅದನ್ನು ನೀಡಬಹುದಲ್ಲವೇ, ಸಂಘಸಂಸ್ಥೆಗಳಿಂದ ಈರೀತಿಯ ತರಬೇತಿ ತೆಗೆದುಕೊಳ್ಳುವವರನ್ನು ನೇರವಾಗಿ ಪೊಲೀಸ್ ಇಲಾಖೆ ಅಥವಾ ಸೇನೆಗೆ ಸೇರಲು ಪ್ರೋತ್ಸಾಹಿಸಬಹುದಲ್ಲವೇ?

4) ಭಯೋತ್ಪಾದನೆಯನ್ನು ಚುನಾವಣಾ ವಿಷಯವನ್ನಾಗಿಸಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿ ಅಂತ ಬೊಬ್ಬೆ ಹಾಕುವ ಬದಲು, ಎಲ್ಲೆಲ್ಲಿ ಅಧಿಕಾರವಿದೆಯೋ ಅಲ್ಲಿ ಚೆನ್ನಾಗಿ, ಭ್ರಷ್ಟಾಚಾರವಿಲ್ಲದೆ ಕೆಲಸ ಮಾಡಿ, ಒಳ್ಳೆ ಹೆಸರು ತೆಗೆದುಕೊಳ್ಳಬಾರದೇ?

5) ರಾಜ್ಯದಲ್ಲಿ ಸ್ಫೋಟಕ ವಸ್ತುಗಳು, ರಾಸಾಯನಿಕಗಳು ಇತ್ಯಾದಿಗಳ ಸಾಗಣಿಕೆ, ಉಪಯೋಗಗಳ ಮೇಲೆ ಇಂದಿಗೂ ಸರಿಯಾದ ನಿಯಂತ್ರಣವಿಲ್ಲ. ಅದನ್ನೆಲ್ಲ ಸರಿಪಡಿಸಿ, ಪೊಲೀಸ್ ಇಲಾಖೆಗೆ ಬೇಕಾದ ಸೌಲಭ್ಯ ಕೊಟ್ಟು ಆಧುನೀಕರಿಸಿ, ಸರಿಯಾದ ವ್ಯವಸ್ಥೆಗಳನ್ನು ಮಾಡಬಹುದಲ್ಲವೇ? ರೈಲು ಹೋದ ಮೇಲೆ ಟಿಕೇಟು ತೆಗೆದುಕೊಳ್ಳುವ ಉದಾಸೀನದ ಬುದ್ಧಿ ಬಿಟ್ಟು ಮುಂದಾಲೋಚನೆಯಿಂದ ಕಾಲಕಾಲಕ್ಕೆ ಸರಿಯಾಗಿ ಮಾಡಬೇಕಾದ್ದು ಮಾಡಬಹುದಲ್ಲವೇ?

6) ಭಯೋತ್ಪಾದನೆ ವಿರುದ್ಧ ನಮ್ಮ ಬಿಜೆಪಿ ಸರಕಾರ ನೇರವಾಗಿ ಕಾಲೇಜುಗಳಲ್ಲಿ ಭಾಷಣಗಳನ್ನು ಆಯೋಜಿಸುತ್ತಿದೆ, ಕಾಲೇಜು ವಿದ್ಯಾರ್ಥಿಗಳ ಮೂಲಕ ರ್ಯಾಲಿಗಳನ್ನು ಆಯೋಜಿಸುತ್ತಿದೆ. ಈ ರ್ಯಾಲಿಗಳಲ್ಲಿ, ಭಾಷಣಗಳಲ್ಲಿ ಉಗ್ರವಾದದ definition ಮತ್ತು ವ್ಯಾಪ್ತಿ ಮತ್ತು ವಿಸ್ತಾರವನ್ನು ಹೆಚ್ಚಿಸಿ, ಜಾತಿ-ಮತ-ದೇಶ-ಕಾಲ ರಹಿತವಾಗಿ ಉಗ್ರವಾದದ ಬಗ್ಗೆ ಮಾತ್ರ ಜಾಗೃತಿ ಮೂಡಿಸಲು ಯತ್ನಿಸಿದರೆ ಅದು ಶ್ಲಾಘನೀಯ. ಅದು ಬಿಟ್ಟು, ಪಾಕಿಸ್ತಾನದ ಮೇಲೆ ಕೆಂಡಕಾರುತ್ತ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಮೇಲೆ ವಾಗ್ದಾಳಿ ಮಾಡಿದರೆ ಅದು ವೋಟ್ ಬ್ಯಾಂಕ್ ರಾಜಕೀಯ.

7) ಎಲ್ಲಕ್ಕಿಂತ ಹೆಚ್ಚಾಗಿ, ಉಗ್ರವಾದವನ್ನು ವೈಚಾರಿಕ ನೆಲೆಗಟ್ಟಿನಲ್ಲಿಯೇ ಇಲ್ಲವಾಗಿಸುವ ಯತ್ನ ನಡೆಯಬೇಕಿದೆ. ಇಂದು ನಡೆಯುತ್ತಿರುವಷ್ಟು intellectual terrorism, ಮತ್ತು manipulation of media ಬಹುಶ ಎಂದೂ ನಡೆದಿರಲಿಲ್ಲ. ಸರ್ಕಾರ್ ಚಿತ್ರದಲ್ಲಿ ಕುತಂತ್ರಿ ಸಾಧು ಹೇಳುವ ಮಾತು ನೆನಪಿಗೆ ಬರುತ್ತಿದೆ... "अगर तुम सर्कार को मारना चाहते हो, तो पहले उसकी सोच को मारो..." ಉಗ್ರವಾದ ಹುಟ್ಟುವುದೂ ಯೋಚನೆಗಳಲ್ಲಿ, ಅದರ ಸಾವೂ ಕೂಡ ಯೋಚನೆಗಳಲ್ಲೇ ಅಡಗಿದೆ. ಯೋಚನೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ವ್ಯಕ್ತಿತ್ವವನ್ನೇ ಬದಲಾಯಿಸುತ್ತೇವಂತೆ, ನಮ್ಮ ಮನಸುಗಳಲ್ಲಿ ಹುದುಗಿರುವ ಉಗ್ರನನ್ನು ಕೊಲ್ಲುವುದು ಕಷ್ಟವಾ?

10 ಜನರನ್ನಿಟ್ಟುಕೊಂಡು ಇಡೀ ರಾಷ್ಟ್ರದ ನಿದ್ದೆ ಮೂರುದಿನ ಕೆಡಿಸಿದ, ಒಂದು ಬಿಲಿಯನ್ ಜನರ ಧೈರ್ಯಗೆಡಿಸಿದ ಮುಂಬೈ ದಾಳಿಯಂತಹ ಹೇಯಕೃತ್ಯಗಳು ಮುಂದೆಂದೂ ನಡೆಯದಿರಲಿ, ಯಾರಿಂದಲೂ ನಡೆಯದಿರಲಿ. ಎಲ್ಲೂ ನಡೆಯದಿರಲಿ... ನಾವು ಒಬ್ಬೊಬ್ಬರೂ ಬದಲಾಗೋಣ, ಆಮೂಲಕ ಇಡೀ ಸಮಾಜ ಬದಲಾಗಲಿ... ನಮ್ಮಲ್ಲಿ ಸಾಯುತ್ತಿರುವ ಮಾನವತ್ವವನ್ನು ಮತ್ತೆ ನೀರೆರೆದು ಬದುಕಿಸೋಣ, ಸುತ್ತಲವರ ನೋವಿಗೆ ನಮ್ಮ ಜೀವಗಳೂ ಜಾತಿ-ಮತ ಮರೆತು ಸ್ಪಂದಿಸಲಿ... ಮರೆತುಬಿಡೋಣ ಕಪ್ಪುಕಾಲನ ಮಡಿಲಲ್ಲಿ ಸೇರಿಹೋದ ನಿನ್ನೆಗಳನ್ನು... ನಿನ್ನೆಯ ಕರಿನೆರಳುಗಳು ನಾಳೆಗಳನ್ನು ಎಂದಿಗೂ ಹಾಳುಗೆಡವದಿರಲಿ...

(ವಿ.ಸೂ. - ವೈಯಕ್ತಿಕ ಹಾಗೂ ಅಸಭ್ಯ ಕಮೆಂಟುಗಳನ್ನು ಪ್ರಕಟಿಸಲಾಗುವುದಿಲ್ಲ, ಮತ್ತು ಗಣನೆಗೂ ತೆಗೆದುಕೊಳ್ಳಲಾಗುವುದಿಲ್ಲ, ಆರೋಗ್ಯಕರ ಚರ್ಚೆಗೆ ಮಾತ್ರ ಅವಕಾಶ)

Friday, January 2, 2009

ಇಸ್ರೇಲಿ ಭೂತ ತಲೆಗೆ ಹೊಕ್ಕಿದೆ...

ನವೆಂಬರ್ - 29:

ಚೆನ್ನೈಯಲ್ಲಿ ಎಡೆಬಿಡದೆ ಮಳೆ ಸುರಿದಿತ್ತು. ಬೆಂಗಳೂರಿನಲ್ಲೂ ಅದರ ಪರಿಣಾಮ, ಥಂಡಿ ಹವೆ, ವಿಚಿತ್ರ ಮಳೆ. ಸೈಕ್ಲೋನ್ ನಿಶಾಕ್ಕೆ 82 ಜನ ಸತ್ತಿದ್ದು ದೊಡ್ಡದಾಗಿಯೇನೂ ಸುದ್ದಿಯಾಗಿರಲಿಲ್ಲ. ಇನ್ನು ಮುಂದೆ ಮಾನವನ ಅಟ್ಟಹಾಸದೆದುರು ಕಾಲನ ಅಬ್ಬರ ಏನೂ ಅಲ್ಲ ಬಿಡಿ... ಹಿಂದಿನ ದಿನ ಮಳೆಗೆ ನೆನೆದ ಪರಿಣಾಮ ಜ್ವರ ಕಾಡುತ್ತಿತ್ತು. ಆಫೀಸಿಗೆ ರಜಾ ಹಾಕಿ ಮನೆಯಲ್ಲೇ ಕೂತಿದ್ದೆ. ಮುಂಬೈಯಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರಿದಿತ್ತು. ತಾಜ್ ಇನ್ನೂ ಬಿಡುಗಡೆಯಾಗಿರಲಿಲ್ಲ. ಟೀವಿ ನೋಡಿನೋಡಿ ತಲೆ ಸಿಡಿಯುತ್ತಿತ್ತು.

ಹಾಗೆಂದು ಮಲಗಲೂ ಆಗದೆ, ಹಳಸಿದ ಸುದ್ದಿಯಿದ್ದ ನಿನ್ನೆಯ ಪೇಪರ್ ಓದಲು ಇಷ್ಟವಿಲ್ಲದೆ, ಬೇರೆ ವಿಧಿಯಿಲ್ಲದೇ ಮತ್ತೆ ಟೀವಿಗೆ ಮೊರೆ ಹೋದೆ. ಚಾನೆಲಿಂದ ಚಾನೆಲಿಗೆ ಬದಲಾಯಿಸುತ್ತ ಕೂತಿದ್ದೆ. ಟೈಮ್ಸ್ ನವ್ ಯಥಾಪ್ರಕಾರ ಕಿರುಚುತ್ತಿತ್ತು... ಹಿಂದಿ ಚಾನೆಲುಗಳ ಗತಿಯೋ, ದೇವರಿಗೇ ಪ್ರೀತಿ. NDTV ಮತ್ತು CNN IBN ಆಗಷ್ಟೇ ಬುದ್ಧಿ ಕಲಿತಂತೆ LIVE ಕೊಡುವುದು ಬಿಟ್ಟು ಹುತಾತ್ಮರಾದವರ ಬಗ್ಗೆ ಗಮನ ಹರಿಸಲು ಆರಂಭಿಸಿದ್ದವು.

ನೋಡುತ್ತ ನೋಡುತ್ತ ನನಗೆ ಘಟನೆಯ ಬಗ್ಗೆ ಅಂತರ್ರಾಷ್ಟ್ರೀಯ ಪ್ರತಿಕ್ರಿಯೆಗಳು ಏನಿವೆ ಅಂತ ತಿಳಿಯಬೇಕೆನಿಸಿತು, ಯಾವ ಚಾನೆಲ್ಲೂ ಏನೂ ಕೊಡುತ್ತಿರಲಿಲ್ಲ. CNNನಲ್ಲೂ ಏನೂ ಇರಲಿಲ್ಲ. ಸರಿ, ಇಂಟರ್ನೆಟ್ಟಲ್ಲಿ ಏನಾದರೂ ಸಿಗಬಹುದು ಅಂತ ಎಣಿಸಿಕೊಂಡು ಸಿಸ್ಟಮ್ ಆನ್ ಮಾಡಿದೆ. ಪಕ್ಕದ ಮನೆಯಲ್ಲೆಲ್ಲೋ ಇರುವ ಅದೃಶ್ಯ ಅನ್-ಸೆಕ್ಯೂರ್ಡ್ ಇಂಟರ್ನೆಟ್ ನೀಟಾಗಿ ಕನೆಕ್ಷನ್ನು ಕೆಲಸ ಮಾಡುತ್ತಿತ್ತು. ಸರಿ, ಲಾಗಿನ್ ಆದೆ. ಅಲ್ಲೂ ಸುಲಭಕ್ಕೆ ಏನೂ ಸಿಗಲಿಲ್ಲ, ಆಸ್ಟ್ರೇಲಿಯಾ ಮತ್ತು ಅಮೆರಿಕಾದ ತೂಕದ ಪ್ರತಿಕ್ರಿಯೆಗಳ ಹೊರತಾಗಿ.

ಚಾನೆಲ್ಲುಗಳಲ್ಲಿ ಪದೇಪದೇ ದಾಳಿಯ ಹೊಣೆಹೊತ್ತ ಡೆಕ್ಕನ್ ಮುಜಾಹಿದೀನ್ ಸಂಸ್ಥೆಯ ಹೆಸರು ಕೇಳಿ ಬರುತ್ತಿತ್ತು. ಹಿಂದಿಯಲ್ಲಿ ಮೈಲ್ ಕಳುಹಿಸಿತ್ತು ಅದು, ಹಾಗಿತ್ತು, ಹೀಗಿತ್ತು ಇತ್ಯಾದಿ. ನನಗೆ ಭಯೋತ್ಪಾದಕರು ಮೈಲ್ ಮಾಡಿದರೆ ಹೇಗಿರುತ್ತದೆ, ಪೂರ್ತಿಯಾಗಿ ಒಂದು ಸಲ ಓದಬೇಕಲ್ಲ ಅನಿಸಿ ಒಂದಷ್ಟು ಹುಡುಕಿದೆ. ಸಿಕ್ಕಿಯೇ ಬಿಟ್ಟಿತು - ಇಂಡಿಯನ್ ಮುಜಾಹಿದೀನ್ ಕಳುಹಿಸಿದ ಮೈಲ್.... ದೆಹಲಿ ಸ್ಫೋಟದ ಸಮಯ ಕಳುಹಿಸಿದ್ದು.
ಇದರಲ್ಲಿ, ಉಗ್ರರು ಹಲವು ರಾಜ್ಯಗಳಲ್ಲಿ ಶಂಕಿತ ಉಗ್ರರ ಹೆಸರಲ್ಲಿ ಮುಸ್ಲಿಮರನ್ನು ಬಂಧಿಸಿ ಕಾಟ ಕೊಡುವುದಕ್ಕೆ ಕೆಂಡಾಮಂಡಲವಾಗಿದ್ದರು. (ಇಂತಹ ಕೇಸುಗಳು ಹಲವಾರು. ನಾಲ್ಕೈದು ವರ್ಷಗಳ ಹಿಂದೆ ಒಂದು ದಿನ ಹೈದರಾಬಾದಿನಲ್ಲಿ ದಿನಾ ಹಾಲು ಮಾರುತ್ತ ಎಲ್ಲರಂತೆ ಬದುಕುತ್ತಿದ್ದ ಮಾಮೂಲು ಹುಡುಗನನ್ನು ಉಗ್ರನೆಂದು ಗುಂಡುಹಾರಿಸಿ ಕೊಂದಿದ್ದರು ಪೊಲೀಸ್. ಹೈದರಾಬಾದಿನಲ್ಲಿ ಮತ್ತೆ ಹಲವರನ್ನು ಶಂಕಿತರೆಂದು ಬಂಧಿಸಿ ಕೊನೆಗವರು ಮುಗ್ಧರೆಂದು ಸಾಧಿತವಾದ ಬಳಿಕ ಬಿಡುಗಡೆಗೊಳಿಸುವಾಗ ಅವರಿಗೆ ಪರಿಹಾರ ಕೂಡ ಕೊಟ್ಟಿತ್ತು ಆಂಧ್ರಪ್ರದೇಶ ಸರಕಾರ. ಧಾರವಾಡದಲ್ಲಿ ತನ್ನ ಹೊಲದಲ್ಲಿ ಬಾಂಬ್ ಸಿಕ್ಕಿತೆಂದು ಪೊಲೀಸರಿಗೆ ತಿಳಿಸಹೊರಟ ಮುಸ್ಲಿಂ ರೈತನನ್ನು ಮನಬಂದಂತೆ ಹೊಡೆದು, ಕೊನೆಗೆ ಅವನ ತಪ್ಪಿಲ್ಲವೆಂದು ತಿಳಿದಾಗ ವಾಪಸ್ ಕಳುಹಿಸಿತ್ತು ಅಲ್ಲಿನ ಪೊಲೀಸ್. ಇತ್ತೀಚೆಗೆ ಮಂಗಳೂರಿನಲ್ಲಿ ಬಂಧಿತರಾದ ಶಂಕಿತ ಉಗ್ರರನ್ನು ಮುಂಬೈಗೆ, ಮತ್ತೆ ಬೆಂಗಳೂರಿಗೆ, ಪುನಹ ಗುಜರಾತಿಗೆ, ಹೀಗೆ ಬೇಕಾದಲ್ಲಿಗೆ ಕರೆಸಿಕೊಂಡು ಇನ್ವೆಸ್ಟಿಗೇಟ್ ಮಾಡುತ್ತಾರೆ. ಮುಂಬೈಯಲ್ಲಿ ಇದೇ ಖರ್ಖರೆಯ ಕೈಲಿ ಇನ್ವೆಸ್ಟಿಗೇಶನ್ ನಡೆದು ಅವರಿಗೆ ಬೇಕಾದ್ದು ಏನೂ ಸಿಗಲಿಲ್ಲವಾಗಿ ವಾಪಸ್ ತಂದುಬಿಟ್ಟಿದ್ದರು. ಆದರೂ ಅವರಿಗೆ ಮುಕ್ತಿ ಸಿಕ್ಕಿಲ್ಲ. ಮುಗ್ಧರು ಶಂಕಿತರ ಹೆಸರಲ್ಲಿ ಪೊಲೀಸರ ವಶವಾಗುವುದು ಹೊಸತೇನಲ್ಲ, ಒಬ್ಬ ಕಳ್ಳನನ್ನು ಹಿಡಿಯಲು ಕೆಲವೊಮ್ಮೆ ನೂರು ಜನ ಮುಗ್ಧರನ್ನು ಪರೀಕ್ಷೆ ಮಾಡಬೇಕಾಗುತ್ತದೆ, ಅದು ಅನಿವಾರ್ಯ ಕೂಡ, ಒಪ್ಪಬಹುದಾದದ್ದು ಕೂಡ - ಕಾನೂನಿನ ಚೌಕಟ್ಟಿನಲ್ಲಿ ನಡೆಯವ ವರೆಗೆ) ಉಗ್ರ ಮೈಲ್ ಕಳುಹಿಸಿದವರು ತಮ್ಮ ಮುಂದಿನ ಗುರಿ ಮುಂಬೈ ಅಂತ ನೇರವಾಗಿ ಹೇಳಿದ್ದರು. ಮುಂಬೈ ಎಟಿಎಸ್ (ಹೇಮಂತ್ ಕಾರ್ಕರೆ), ಗುಜರಾತ್ ಎಟಿಎಸ್ (ಪಿಸಿ ಪಾಂಡೆ), ಮೋದಿ, ವಿಲಾಸ್ ರಾವ್ ದೇಶಮುಖ್, ಆರ್ ಆರ್ ಪಾಟೀಲ್, ರಾಜಸ್ತಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ - ಎಲ್ಲರ ಮೇಲೆ ಕಿಡಿಕಾರಲಾಗಿತ್ತು. ಸಂಘಪರಿವಾರದ ಉಗ್ರಕೃತ್ಯಗಳ ಮೇಲೆ ಕ್ರಮ ಕೈಗೊಂಡಿಲ್ಲವೆಂದು ನೇರವಾಗಿ ಮುಂಬೈ ಎಟಿಎಸ್ ಮೇಲೆ ಆಪಾದಿಸಲಾಗಿತ್ತು. ಕೇಸರಿ ಭಯೋತ್ಪಾದನೆಯ ವಿಚಾರ ಬಂದಾಗ ಮಾಧ್ಯಮಗಳು ಹೇಗೆ ಇಡಿಯ ಎಪಿಸೋಡನ್ನು ಮುಚ್ಚಿಹಾಕಿದವೆಂದು reference ಸಮೇತ ವಿವರಿಸಲಾಗಿತ್ತು. ಅಲ್ಲಿಂದ ಎಲ್ಲೆಲ್ಲೋ ಹೋಗಿ, ಕೊನೆಗೆ ಜೆಹಾದ್ ಪ್ರತಿಜ್ಞೆಯೊಡನೆ ಮುಕ್ತಾಯವಾಗಿತ್ತು.

ಸರಿ, ಅದರಲ್ಲಿ ಹೇಳಿದ ಬಜರಂಗ್ ಬಾಂಬ್ ಬಗ್ಗೆ ಏನಾದರೂ ಇಂಡಿಯನ್ ಎಕ್ಸ್-ಪ್ರೆಸ್ ವೆಬ್-ಸೈಟಲ್ಲಿ ಸಿಗುತ್ತದಾ ಅಂತ ಹುಡುಕಿದೆ. ಸರ್ಚ್ ರಿಸಲ್ಟ್-ನಲ್ಲಿ ಹಲವು ವರದಿಗಳು ಸಿಕ್ಕಿದವು. ಲಿಂಕ್ ತೆರೆಯಹೋದರೆ ಯಾಕೋ ಗೊತ್ತಿಲ್ಲ, ಹಲವು ಲಿಂಕುಗಳಲ್ಲಿದ್ದ ಲೇಖನಗಳು ಡಿಲೀಟ್ ಆಗಿಬಿಟ್ಟಿದ್ದವು, ಇನ್ನು ಹಲವು ಓದಲು ಸಿಕ್ಕಿದವು. ಓದಲು ಸಿಕ್ಕಿದ್ದೆಲ್ಲವನ್ನೂ ಓದಿದೆ. ಓದುತ್ತ ಓದುತ್ತ ಎಲ್ಲೆಲ್ಲೋ ಹೋಗಿ, ನಾನು ಈ ಪುಟಕ್ಕೆ ಬಂದು ನಿಂತೆ... ಅಂತರ್ರಾಷ್ಟ್ರೀಯ ವಿಚಾರಗಳ ಬಗ್ಗೆ ಎಂದೂ ಹೆಚ್ಚು ತಲೆಕೆಡಿಸಿಕೊಂಡಿಲ್ಲದ ನಾನು ಇಲ್ಲಿವರೆಗೆ ಕೇಳಿಯೇ ಇರದ ಹೆಸರು - ಮೊಸ್ಸಾಡ್, ಮೊದಲ ಬಾರಿಗೆ ಅತ್ಯಂತ ಶಾಕಿಂಗ್ ಅನಿಸುವ ರೀತಿಯಲ್ಲಿ ಕಣ್ಣೆದುರಿಗೆ ಬಂದು ನಿಂತಿತ್ತು..

ಅಲ್ಲಿಂದ ಮತ್ತೆ ಅಲ್ಲಿರುವ ಎಲ್ಲಾ ಲಿಂಕುಗಳಿಗೂ ವಿಸಿಟ್ ಕೊಟ್ಟು, ಏನೇನಿದೆ ಅಂತ ನೋಡಿದೆ, ಅರ್ಥವಾದದ್ದು ಓದಿದೆ, ಅರ್ಥವಾಗದ್ದು ಬಿಟ್ಟೆ. ನನಗೆ ಅರ್ಥವಾದುದರ ಸಾರಾಂಶ ಇಷ್ಟು - ಭಾರತದಲ್ಲಿ ನಡೆಯುತ್ತಿರುವ anti-islamic ಉಗ್ರವಾದದ ಹಿಂದೆ - ಅಂದರೆ ಸಪ್ಟೆಂಬರ್ 26 -2008ರ ಮಾಲೆಗಾಂವ್ ಸ್ಫೋಟ, ನಾಂದೆಡ್-ನಲ್ಲಿ ಭಜರಂಗ ಕಾರ್ಯಕರ್ತರು ಸತ್ತ ಸ್ಫೋಟದ ಹಿಂದೆ, 64 ಜನ ಪಾಕಿಸ್ತಾನಿಗಳನ್ನು ಕೊಂದ, ಭಾರತ-ಪಾಕ್ ಸ್ನೇಹಸೇತುವಾದ ಸಂಝೋತಾ ಎಕ್ಸ್-ಪ್ರೆಸ್ ಸ್ಫೋಟದ ಹಿಂದೆ, ಹೈದರಾಬಾದಿನ ಲುಂಬಿನಿ ಗಾರ್ಡನ್ ಮಸೀದಿ ಸ್ಫೋಟದ ಹಿಂದೆ - ಸಂಘಪರಿವಾರವಿದೆ; ಅದರ ಹಿಂದೆ ಇಸ್ರೇಲಿ ಗುಪ್ತಚರ ಸಂಸ್ಥೆ MOSSADನ ಕೈವಾಡವಿದೆ, ಪ್ರೋತ್ಸಾಹವಿದೆ ಅಂತ ಈ ಲೇಖನಗಳನ್ನು ಬರೆದವರ ಹೇಳಿಕೆ. MOSSADಗೆ ಮತ್ತು ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಸಂಬಂಧವಿದೆಯೆಂದು ಕೂಡ ಇಲ್ಲಿ ಕಂಡುಬರುವ ಲೇಖನಗಳಲ್ಲಿ ಓದಲು ಸಿಗುತ್ತದೆ. ಅಮೆರಿಕಾದ CIA ಮತ್ತು ಭಾರತದ RAW MOSSADನ ಬೆಂಬಲಕ್ಕಿದ್ದು ಭಾರತದಲ್ಲಿ ಮತ್ತು ಜಗತ್ತಿನ ಇತರೆಡೆ ಕೆಲಸ ಮಾಡಿಸುತ್ತವೆ ಅಂತಲೂ ಓದಿ, ತಲೆಬಿಸಿಯಾಯಿತು. ಇವನ್ನೆಲ್ಲ ಸತ್ಯವೇ ಸುಳ್ಳೇ ಅಂತ ತೂಗುವುದು ನನ್ನ ಪೆದ್ದು ತಲೆಯ ಲಾಜಿಕ್-ಗೆ ಸಾಧ್ಯವಾಗಲಿಲ್ಲ. ಯಾವುದು ಸರಿ, ಯಾವುದು ತಪ್ಪು ಅಂತ ಗೊತ್ತಾಗದೆ ಸುಮ್ಮನೆ ಎಲ್ಲವನ್ನೂ ಓದುತ್ತಾ ಹೋದೆ.

ಹೀಗೆ ಇಸ್ರೇಲ್ ಬಗ್ಗೆ ಓದುತ್ತಿರುವಾಗ, ಇಸ್ರೇಲ್-ನವರು ಯಾರೋ ಈ ಸ್ಫೋಟದಲ್ಲಿ ಸತ್ತಿದ್ದರಲ್ಲ, ಯಾವುದೋ ಪುಟ್ಟ ಅನಾಥ ಮಗುವಿದು ಸುದ್ದಿಯಾಗಿತ್ತಲ್ಲ ಅಂತ ನೆನಪಾಯ್ತು. ಹುಡುಕಿದರೆ ಹೌದು - ಮೂವತ್ತೂ ದಾಟದ ಯುವಜೋಡಿ Gavriel Holtzberg ಮತ್ತು Rivka Holtzberg, ನಾರಿಮನ್ ಹೌಸ್-ನಲ್ಲಿ ಮುಂಬೈನ ಯಹೂದಿಗಳ ಸಮುದಾಯಕ್ಕೆ ಬೇಕಾದ ಧಾರ್ಮಿಕ ಮತ್ತು ಸಾಮುದಾಯಿಕ ಕೆಲಸ ಕಾರ್ಯಗಳನ್ನು ನಡೆಸುತ್ತಿದ್ದವರು... ಇವರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಕೊನೆಗೆ ಉಗ್ರರು ಸಾಯಿಸಿದ್ದರು. ನಾರಿಮನ್ ಹೌಸ್-ಗೆ ಚಬಡ್ ಹೌಸ್ ಅನ್ನುತ್ತಾರೆ, ಅದರಲ್ಲಿದ್ದವರು ಮುಖ್ಯವಾಗಿ ಇಸ್ರೇಲಿ ಯಹೂದಿಗಳೇ, ಮತ್ತು ಇಸ್ರೇಲಿಗಳಿಗಾಗಿಯೇ ಅದು ಇತ್ತು ಅಂತ ಆಗಷ್ಟೇ ನಂಗೆ ಗೊತ್ತಾಯಿತು.

ಹಾಗೆಯೇ, MOSSAD ವೆಬ್-ಸೈಟಿಗೆ ಹೋದೆ. ಗುಪ್ತಚರ ಕೆಲಸಗಳ ಜತೆಗೆ ಅಗತ್ಯವಿರುವ counterterrorism ಕೆಲಸಗಳನ್ನು ಕೂಡ ತಾನು ನಡೆಸುವುದಾಗಿ ತನ್ನ ವೆಬ್-ಸೈಟಿನಲ್ಲಿ MOSSAD ಹೇಳಿಕೊಳ್ಳುತ್ತದೆ. ಇಷ್ಟೆಲ್ಲ ಓದಿದ ನಂತರ ತಲೆಯೆಲ್ಲ ಕೆಟ್ಟು ಚಿತ್ರಾನ್ನವಾಯಿತು. ಸರಿ, ಸಹವಾಸ ಬೇಡವೆಂದುಕೊಂಡು ಕಂಪ್ಯೂಟರ್ ಲಾಗಾಫ್ ಮಾಡಿದೆ.
---------------
ನವೆಂಬರ್ 30, ಡಿಸೆಂಬರ್ 1:
ಆ ಪುಟ್ಟ ಮಗು, ಅದರ ಸತ್ತುಹೋದ ಇಸ್ರೇಲಿ ಅಪ್ಪ-ಅಮ್ಮನ ಬಗ್ಗೆ ಕರುಳು ಮಿಡಿಯುವ ಹಾಗೆ ಚಾನೆಲುಗಳು ಕೊಡುತ್ತಿದ್ದವು. ಕೆಲವು ಚಾನೆಲುಗಳು 22 ಉಗ್ರರಿದ್ದರು, 10 ಜನ ಮಾತ್ರ ಸಿಕ್ಕಿದ್ದಾರೆ, ಉಳಿದ ಉಗ್ರರು ಮಿಸ್ ಆಗಿದ್ದಾರೆ, ಅಂದವು. ಮತ್ತೆ ಕೆಲವು ಚಾನೆಲುಗಳು ಹೇಮಂತ ಖರ್ಖರೆಯ ಸಾವಿನ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದವು. ಪಾಟೀಲ್ ಮತ್ತು ದೇಶಮುಖ್ ತಲೆದಂಡದ ಪ್ರಕ್ರಿಯೆ ಆರಂಭವಾಗಿತ್ತು. ಸುತ್ತಮುತ್ತಿಂದೆಲ್ಲ ತನ್ನ ಮೇಲೆ ಬರುತ್ತಿದ್ದ ಆಪಾದನೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಪಾಕ್ ಕಕ್ಕಾಬಿಕ್ಕಿಯಾಗಿತ್ತು. ತಲೆ ಕೆಡಿಸುವ ಇಂಟರ್ನೆಟ್ಟು, ಮೂರ್ಖ ಟೀವಿಗಳ ಸಹವಾಸ ಬೇಡವೆಂದು ನಾನು ಮನೆಯ ಕೆಲಸಕಾರ್ಯಗಳಲ್ಲಿ, ಎಷ್ಟೋದಿನಗಳಿಂದ ಮಾಡಲು ಬಾಕಿಯಿದ್ದಂತಹ ಕೆಲಸಗಳಲ್ಲಿ ತೊಡಗಿದೆ. ಒಂದಿಷ್ಟು ಕಥೆಗಳು ಓದಿದೆ. ಆದರೂ ಕುತೂಹಲ ತಡೆಯಲಾಗದೆ ನಮ್ಮ ಬ್ಲಾಗಿಗರು ಏನು ಬರೆದಿದ್ದಾರೆ ಅಂತ ನೋಡಿದೆ. ಖುಷಿಯಾದದ್ದನ್ನು ಗೂಗಲ್-ರೀಡರಿನಲ್ಲಿ ಶೇರ್ ಮಾಡಿಕೊಂಡೆ.

ಡಿಸೆಂಬರ್ 2:
ಬೆಳಗಾಗೆದ್ದು ನೋಡಿದರೆ ಕನ್ನಡಪ್ರಭದಲ್ಲಿ ಇಸ್ರೇಲ್-ನ ಮೇಜರ್ ಜನರಲ್ ಭಾರತದ NSG ಕಾರ್ಯಾಚರಣೆ ಸರಿಯಿಲ್ಲವೆಂದಿದ್ದು ಕಾಣಿಸಿತು. ಆದರೆ ಇಸ್ರೇಲ್ ಸರಕಾರ ಭಾರತದ ಕಾರ್ಯಾಚರಣೆಯನ್ನು ಶ್ಲಾಘಿಸಿತ್ತು. ಇರಲಿ, ಕನ್ನಡ ಬ್ಲಾಗಿಗರೆಲ್ಲ ಏನೇನು ಬರೆದಿದ್ದಾರೆ ಅಂತ ನೋಡಹೊರಟರೆ ಗೃಹಸಚಿವರ ಬ್ಲಾಗಿನಲ್ಲಿ ಇಸ್ರೇಲಿಗೆ ಹೊಗಳಿ ಬರೆದಿದ್ದು ಕಾಣಿಸಿತು. ಹಾಗೇ ವೇಣುವಿನೋದ್ ಬ್ಲಾಗಿನಲ್ಲೂ ಕೂಡ. ಇದ್ಯಾಕಪ್ಪಾ ಕೇವಲ ಎರಡು-ಮೂರು ದಿನದಲ್ಲಿ ಎಲ್ಲೆಲ್ಲೂ ನಂಗೆ ಇಸ್ರೇಲೇ ಕಾಣ್ತಿದೆ... ಇಷ್ಟು ದಿನ ಗೊತ್ತೇ ಇಲ್ಲದ ವಿಚಾರಗಳೆಲ್ಲ ಗೊತ್ತಾಗ್ತಿವೆ ಅಂತ ತಲೆಬಿಸಿಯಾಯಿತು. ಇದ್ದಕ್ಕಿದ್ದಂತೆ ಇಸ್ರೇಲ್ ಭಾರತದಲ್ಲಿ ಇಷ್ಟು ಹೆಸರು ಯಾಕೆ ಮಾಡುತ್ತಿದೆ ಅಂತ ಟೆನ್ಶನ್ ಆಯಿತು.

ಡಿಸೆಂಬರ್ 5:

ಇವತ್ತು ಇದೇ ವಿಚಾರದಲ್ಲಿ ಮತ್ತಷ್ಟು ಲಿಂಕುಗಳು ಸಿಕ್ಕಿವೆ. ವಿವಿಧ ಆಧಾರಗಳನ್ನಿಟ್ಟುಕೊಂಡು ಈಸಲದ ದಾಳಿ ಕೂಡ ಇಸ್ರೇಲ್ ಮತ್ತು ಅಮೆರಿಕಾ ಕುಮ್ಮಕ್ಕಿನಿಂದಲೇ ನಡೆದಿವೆ ಅನ್ನುತ್ತಿವೆ. ಇವರ ಲೆಕ್ಕಾಚಾರಗಳ ಮತ್ತು ಅಭಿಪ್ರಾಯಗಳ ಪ್ರಕಾರ, ಪಾಕಿಸ್ತಾನವನ್ನು ಸಿಕ್ಕಿಸಲು ಮತ್ತು ಜೆಹಾದ್ ಹೆಸರಲ್ಲಿ ನಡೆಯುವ ಉಗ್ರವಾದವನ್ನು ಹತ್ತಿಕ್ಕಲು ಉಳಿದೆಲ್ಲಾ ದೇಶಗಳು ಸೇರಿಕೊಂಡು ಮಾಡಿದ ಷಡ್ಯಂತ್ರವೇ ಈ ಉಗ್ರರ ದಾಳಿ. ಇವರು ಹೇಳುವುದನ್ನು ನಂಬುವುದಾದರೆ, ಪಾಕ್ ಈಗ ಪಾಪ, ಮೊಸರು ತಿಂದ ಮಂಗನ ಪಕ್ಕದಲ್ಲಿದ್ದ ಆಡಿನಂತಾಗಿದೆ. ಭಾರತ ಕೊಟ್ಟ ಮೋಸ್ಟ್ ವಾಂಟೆಡ್ ಲಿಸ್ಟ್-ನ ವ್ಯಕ್ತಿಗಳನ್ನು ಪಾಕ್ ಒಪ್ಪಿಸದಿದ್ದರೆ, ಮುಂದಾಗುವುದು ಬಹುಶ: ಸಮರವೇ. ಅದಕ್ಕಾಗಿ ಅತ್ತಕಡೆಯಿಂದ ಈಗಾಗಲೇ ತಾಲಿಬಾನನ್ನೂ ಎತ್ತಿಕಟ್ಟಿಯಾಗಿದೆ.

ಹಾಗೆಂದು ಇಸ್ರೇಲಿ ರಾಬ್ಬಿಗಳು ಸತ್ತಿದ್ದಕ್ಕೂ ಇವರು ಕಾರಣ ಹೇಳುತ್ತಾರೆ - ಸತ್ತ ರಾಬ್ಬಿಗಳು ಝಿಯೋನಿಸ್ಟ್-ಗಳು ಅಲ್ಲವಂತೆ, MOSSAD ಯಹೂದಿಗಳು ವಿಶ್ವವನ್ನಾಳಬೇಕೆಂದು ಹೇಳುವ ಕಟ್ಟಾ ಝಿಯೋನಿಸ್ಟ್ ಪಂಗಡವನ್ನು ಬೆಂಬಲಿಸುತ್ತದಂತೆ. ಅಂದಹಾಗೆ, ಸತ್ತ ಇಸ್ರೇಲಿಗಳ ಶರೀರಗಳನ್ನು ವಾಪಸ್ ತಗೊಂಡು ಹೋದಾಗ ಅಲ್ಲಿ ಸರಕಾರ STATE HONOURS ಕೊಡುತ್ತೇನೆಂದರೆ ಸಂಬಂಧಿಕರೆಲ್ಲ ಅದನ್ನು ತಿರಸ್ಕರಿಸಿದರಂತೆ. ಯಾಕೆಂದರೆ, ಚಬಡ್ ಹೌಸ್-ನಲ್ಲಿ ಸತ್ತವರು ಕಟ್ಟಾ ಝಿಯೋನಿಸ್ಟ್-ಗಳು ಆಗಿರಲಿಲ್ಲವಂತೆ. ಅವರ ಮೇಲೆ ಸೇಡು ತೀರಿಸಿದ ಹಾಗೂ ಆಯಿತು, ಭಾರತದ ಮುಸ್ಲಿಮರ ಮೇಲೆ ಸೇಡು ತೀರಿಸಿದ ಹಾಗೂ ಆಯಿತು ಅಂತ ನಾರಿಮನ್ ಹೌಸ್ ಮೇಲೆ ಕೂಡ ಅಟ್ಯಾಕ್ ಮಾಡಿದರಂತೆ.

ಇದಕ್ಕಿಂತ ಹಿಂದೆ ನಾನು ಏಳೆಂಟು ವರ್ಷದ ಹಿಂದೆ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಮಾಡುವ ದಾಳಿಗಳ ಮೂಲಕ ಮಾತ್ರ ಇಸ್ರೇಲ್ ಬಗ್ಗೆ ತಿಳಿದಿದ್ದೆ. ಎಷ್ಟೋ ವರ್ಷಗಳ ನಂತರ ನಂಗೆ ಇಸ್ರೇಲ್ ಬಗ್ಗೆ ಹುಟ್ಟಿದ್ದು ಒಂದುರೀತಿಯ ಪವಿತ್ರ ಕಲ್ಪನೆ, ಅದು ಬಂದಿದ್ದು ನೇಮಿಚಂದ್ರ ಬರೆದ ಯಾದ್ ವಶೇಮ್ ಓದಿ. ಈಗ ನಂಗೆ ಕಾಣುತ್ತಿರುವ ಇಸ್ರೇಲ್ ಬೇರೆಯದೇ... ಇದು, ಅಮೆರಿಕಾ ಜತೆ ಸೇರಿ ಯಹೂದಿ ಜಗತ್ತು ಕಟ್ಟಹೊರಟಿರುವ ಇಸ್ರೇಲ್. ಜೆಹಾದಿ ಭಯೋತ್ಪಾದನೆಯನ್ನು, ಮುಸ್ಲಿಂ ರಾಷ್ಟ್ರಗಳನ್ನು ಹದ್ದುಬಸ್ತಿನಲ್ಲಿಡಲು ಕಟಿಬದ್ಧವಾದ ರಾಷ್ಟ್ರ...

ನನಗೆ ಈ ಮಾಹಿತಿಗಳು ಮತ್ತು ಸಂಬಂಧಿಸಿದ ವಿಷಯಗಳು ಸಿಕ್ಕಿದ ಲಿಂಕುಗಳು...

http://ghulammuhammed.blogspot.com/2008/11/cia-mossad-hand-behind-sangh-parivars.html

http://www.wakeupfromyourslumber.com/node/8534

http://en.wikipedia.org/wiki/Mossad

http://en.wikipedia.org/wiki/Mumbai_Chabad_House

http://en.wikipedia.org/wiki/Gavriel_Holtzberg

http://www.chabad.org/centers/default_cdo/aid/118651/jewish/Chabad-Mumbai.htm

http://timesofindia.indiatimes.com/India/Rabbi_wife_found_dead_at_Nariman/articleshow/3771244.cms
http://www.wakeupfromyourslumber.com/node/8534

http://www.indianmuslims.info/book/export/html/2736

http://www.wakeupfromyourslumber.com/comment/reply/9310#comment-form

http://www.thenews.com.pk/updates.asp?id=62200

http://www.hindu.com/2008/12/11/stories/2008121155660900.htm

http://www.hindu.com/2008/12/17/stories/2008121752001000.htm

http://therearenosunglasses.wordpress.com/

http://www.countercurrents.org/gatade241208.htm

(ಮುಂದುವರಿಯುವುದು...)

Wednesday, September 24, 2008

ಪರಿಚಯವಿದ್ದವ್ರು ಎದುರು ಸಿಕ್ರೆ...

ಆದಿನ ಬೆಳಿಗ್ಗೆ ಸುಶ್ರುತನ ಮೆಸೇಜು, ''ಗುಲಾಬಿ ಟಾಕೀಸು, ಪಿವಿಆರ್-ನಲ್ಲಿ, ಬರ್ತೀಯಾದ್ರೆ ಕನ್ಫರ್ಮ್ ಮಾಡು, ಟಿಕೆಟ್ ಬುಕ್ ಮಾಡ್ತಿದೀನಿ". ಕನ್ನಡ ಸಿನಿಮಾ ನೋಡಿ ತುಂಬಾ ದಿನವಾಗಿತ್ತು. ಜತೆಗೆ ನೆಚ್ಚಿನ ಲೇಖಕಿ ವೈದೇಹಿಯ ಕಥೆ ಆಧರಿತ ಚಿತ್ರ, ಕಾಸರವಳ್ಳಿ ಆಕರ್ಷಣೆ ಬೇರೆ. ಸರಿಯೆಂದೆ. ಹಾಗೆ ಆ ಸಂಜೆ ಗುಲಾಬಿ ಟಾಕೀಸು ನೋಡುವುದೆಂದು ನಿರ್ಧಾರವಾಯಿತು. ಬೆಂಗಳೂರಿನ ಟ್ರಾಫಿಕ್ಕಿನಲ್ಲೂ ಸಮಯಕ್ಕೆ ಸರಿಯಾಗಿ ಥಿಯೇಟರಿನ ಎದುರಿಗೆ ತಲುಪಿದೆವು. ನಮ್ಮ ಗುಂಪಿನ ಉಳಿದವರೂ ಬರಲಿ ಅಂತ ಥಿಯೇಟರಿನೆದುರು ಕಾಯುತ್ತಿದ್ದೆವು.
ಇದ್ದಕ್ಕಿದ್ದಂತೆ ನನ್ನ ಜತೆಗಿದ್ದ ನಿಧಿ ಖುಷಿಯಿಂದ ಕುಣಿದ, ನನ್ನೆಡೆಗೆ ತಿರುಗಿ ಗುಟ್ಟುಗುಟ್ಟಾಗಿ ಕಿರುಚಿಕೊಂಡ, ''ಅಲ್ಲಿ ನೋಡಿ, ಅವರ ಹೆಸರೇನು, ಕನ್ನಡ ಚಲನಚಿತ್ರರಂಗದ ಮಹಾನ್ ತಾರೆ ಅವ್ರು... ಹೆಸ್ರು ಮರ್ತು ಹೋಯ್ತು...'' ನಾನು ಎಲ್ಲಿ, ಯಾರು ಅಂತ ತಿರುಗಿ ನೋಡಿದರೆ.. ಹೌದು...! ಶೃತಿ... ಸಿನಿಮಾ ನಟಿ ಶೃತಿ...! ತಾಯಿ ಮತ್ತು ತವರಿಗೆ ಸಂಬಂಧಿಸಿದ ಚಿತ್ರಗಳಲ್ಲಿ ಮನೋಜ್ಞವಾಗಿ ನಟಿಸಿ, ಪ್ರೇಕ್ಷಕರ - ಅದರಲ್ಲೂ ಹೆಂಗಳೆಯರ ಮನಗೆದ್ದಿದ್ದ ಖ್ಯಾತ ನಟಿ, ಶ್ವೇತವಸ್ತ್ರಧಾರಿಣಿಯಾಗಿ ನಿಂತಿದ್ದರು. ಪಕ್ಕಕ್ಕೆ ಆಕೆಯ ಪತಿ ಮಹೇಂದರ್ ಅವರೂ ಇದ್ದರು. ನಾವು ಅವರನ್ನು ನೋಡಿದರೆ ಅವರೂ ನಮ್ಮನ್ನು ಅಪರಿಚಿತಭಾವದಲ್ಲಿ ನೋಡಿದರು. ನಮಗೆ ಅವರ ಪರಿಚಯವಿತ್ತೇನೋ ನಿಜ. ಆದರೆ ಅವರಿಗೆ ನಮ್ಮ ಪರಿಚಯವಿರಲಿಲ್ಲವಲ್ಲ.. ಹಾಗಾಗಿ ಅವರೆಡೆಗೆ ಪರಿಚಯದ ನಗು ಬೀರಬೇಕೆಂದರೂ ನಗಲಾಗಲಿಲ್ಲ..
ಅಷ್ಟರಲ್ಲಿ ಶೃತಿಯ ಜತೆಗೆ ಗುಲಾಬಿ ಟಾಕೀಸು ನಾಯಕಿ ಉಮಾಶ್ರೀ ಕೂಡ ಕಂಡುಬಂದರು. ಮಾತ್ರವಲ್ಲ, ಇನ್ನಷ್ಟು ಜನ ಸಿಲೆಬ್ರಿಟಿಗಳ ದಂಡೇ ನೆರೆದಿತ್ತು. ಅವರನ್ನೆಲ್ಲ ನೋಡಿಕೊಂಡು, ಈರೀತಿಯ ಹೈಫೈ ಕ್ರೌಡ್ ಜತೆ ಕೂತು ಫಿಲಂ ನೋಡೋ ಭಾಗ್ಯ ನಮ್ಮದಾದದ್ದಕ್ಕೆ ಒಳಗೊಳಗೇ ಖುಷಿಪಡುತ್ತಾ ಥಿಯೇಟರಿನ ಆವರಣದೊಳಗೆ ಹೋದೆವು.
ಥಿಯೇಟರಿನ ಆವರಣದೊಳಗೆ ನಾವೆಲ್ಲ ಥಿಯೇಟರಿನ ಬಾಗಿಲು ತೆರೆಯಲು ಕಾಯುತ್ತಿದ್ದರೆ, ನಮ್ಮಂತೇ ಕಾಯುತ್ತಿದ್ದ ಇನ್ನಷ್ಟು ಸೆಲೆಬ್ರಿಟಿಗಳ ದಂಡು ಕಾಣಿಸಿತು. ಅದರಲ್ಲೊಬ್ಬರು ನೀಲಿ ಅಂಗಿ ಹಾಕಿದವರನ್ನು ಎಲ್ಲೋ ನೋಡಿದ ನೆನಪು ನನಗೆ... ಆದರೆ, ಎಷ್ಟು ನೆನಪಿಸಿಕೊಂಡರೂ ಯಾರೆಂದು ನೆನಪಾಗಲೊಲ್ಲದು. ತುಂಬಾ ಪರಿಚಿತ ಚರ್ಯೆ, ತುಂಬಾ ಆತ್ಮೀಯರೆನ್ನುವ ಅನಿಸಿಕೆ. ಅವರೂ ನನ್ನನ್ನು ಒಂದೆರಡು ಬಾರಿ ನೋಡಿದರು. ಆಗ ಖಂಡಿತವಾಗಿಯೂ ಇವರನ್ನು ನಾನು ಭೇಟಿಯಾಗಿರಬೇಕು ಅಂತ ಅನಿಸಿತು. ಆದರೆ ಯಾವಾಗ, ಹೇಗೆ, ಎಲ್ಲಿ ಭೇಟಿಯಾಗಿದ್ದೇನೆ ಅಂತ ಮಾತ್ರ ಎಷ್ಟು ತಲೆಕೆರೆದುಕೊಂಡರೂ ಗೊತ್ತಾಗಲಿಲ್ಲ.
ಕೊನೆಗೆ, ಪಕ್ಕದಲ್ಲಿ ನಿಂತಿದ್ದ ಸುಶ್ರುತನಿಗೆ ಮೆಲ್ಲಗೆ ಕೇಳಿದೆ, ಅವರು ಯಾರು ಅಂತ. ಸುಶ್ರುತ ಜೋರಾಗಿ ನಕ್ಕು ''ಹೆಚ್ಚೆಸ್ ವೆಂಕಟೇಶ್ ಮೂರ್ತಿ ಕಣೇ, ಗೊತ್ತಿಲ್ವಾ'' ಅಂತ ವಿಚಿತ್ರಪ್ರಾಣಿಯನ್ನು ನೋಡುವಂತೆ ನನ್ನನ್ನು ನೋಡಿದ. ನನಗೆ ಆಕ್ಷಣ ಭೂಮಿ ಬಿರಿದು ನನ್ನನ್ನು ನುಂಗಬಾರದೇ ಅನಿಸಿತು. ಯಾಕೆಂದರೆ, ಹೆಚ್ಚು ಕಡಿಮೆ ಒಂದುವರೆ ವರ್ಷದ ಹಿಂದೆ ನಾನು ಜಾಹೀರಾತು ಸಂಸ್ಥೆಯೊಂದರಲ್ಲಿ ಕೆಲಸಮಾಡುತ್ತಿದ್ದಾಗ ಹೆಚ್ಚೆಸ್ವಿ ಮನೆಗೆ ಹೋಗಿ, ಅರ್ಧಗಂಟೆ ಕೂತು ಅವರ ಜತೆ ಯಾವುದೋ ಪ್ರಾಜೆಕ್ಟ್ ಬಗ್ಗೆ ಚರ್ಚಿಸಿದ್ದೆವು. ನನಗವರ ಮುಖ ಮಾತ್ರ ಪರಿಚಿತವೆನ್ನಿಸಿದರೂ ಮರೆತೇ ಹೋಗಿತ್ತು...!
ಅಷ್ಟು ಮಾತ್ರವಲ್ಲ.... ಚಿನ್ನಾರಿಮುತ್ತದ ''ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು'' ನನ್ನ ಫೇವರಿಟ್ ಹಾಡುಗಳಲ್ಲೊಂದು. ಹಾಗೇ ಮುಕ್ತದ ''ಮೊಗ್ಗಿನಿಂದ ಸೆರೆಯೊಡೆದ ಗಂಧ ಹೂವಿಂದ ದೂರದೂರಾ... ಎಲ್ಲುಂಟು ಆಚೆ ತೀರಾ...'' "ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ ಕಲಿಸಿದೆ ಜೀವನ ಪಾಠ..." ಮತ್ತು ಸಹಗಮನ ಧಾರಾವಾಹಿಯ '' ಗಾಳಿಯ ಜತೆಯಲಿ ಯಾರಿಗು ಕಾಣದ ಗಂಧದ ಸಹಗಮನ..." ಇತ್ಯಾದಿಗಳನ್ನು ತುಂಬಾ ಇಷ್ಟ ಪಡುವ ನನಗೆ ಇವೆಲ್ಲದರ ಕರ್ತೃ ಹೆಚ್ಚೆಸ್ವಿ ಅಂತ ಚೆನ್ನಾಗಿ ಗೊತ್ತಿತ್ತು. ಆದರೆ, ಅವರು ಭಾಗವಹಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಎಂದೂ ಹೋಗಿಯೇ ಇರದ ನನಗೆ ಅವರ ಮುಖ ಹೇಗಿದೆಯೆಂದೇ ಮರೆತು ಹೋಗಿತ್ತು! ಅವರೇನಾದರೂ ನನ್ನ ಗುರುತು ಹಿಡಿದರೆ ಏನು ಮಾಡಲಿ ಅಂತ ಭಯವಾಯಿತಾದರೂ ನನ್ನ ಪುಣ್ಯಕ್ಕೆ ಅವರಿಗೂ ನನ್ನ ಪರಿಚಯ ಮರೆತುಹೋಗಿದ್ದ ಕಾರಣ ನಾನು ಬಚಾವಾಗಿದ್ದೆ... :-)
ಅಷ್ಟರಲ್ಲಿ ಥಿಯೇಟರ್ ಬಾಗಿಲು ತೆರೆಯಿತು. ಸರಿ, ಒಳಗೆ ಹೋಗಿ ಸೀಟು ಹಿಡಿದು ಕುಳಿತೆವು. ಅಲ್ಲಿ ಗಿರೀಶ್ ಕಾಸರವಳ್ಳಿ, ವಿಧಾನಪರಿಷತ್ ಮಾಜಿ ಸಭಾಪತಿ ಸುದರ್ಶನ್, ಮಾಜಿ ನೀರಾವರಿ ಸಚಿವ ಹೆಚ್ ಕೆ ಪಾಟೀಲ್, ಜಯಂತಿ, ಅನು ಪ್ರಭಾಕರ್, ಇನ್ನೂ ಹಲವಾರು ಜನ. ಕುಳಿತು ನೋಡುತ್ತಿದ್ದರೆ ಅದೇನೋ ಖುಷಿ... ಪರವಾಗಿಲ್ಲ, ಒಳ್ಳೆ ದಿನವೇ ಸಿನಿಮಾ ನೋಡಲು ಬಂದಿದ್ದೇವೆ ಅಂತ ಏನೋ ಉನ್ನತವಾದಂತಹ ಭಾವ ...

ಅಂತೂ ಇಂತೂ ಫಿಲಂ ಶುರುವಾಯಿತು. ನನಗೆ ಬದಿಯ ಸೀಟು ದೊರೆತಿತ್ತು. ಯಾರ ತಂಟೆಯಿಲ್ಲದೆ ಸಿನಿಮಾ ನೋಡತೊಡಗಿದೆ. ನನ್ನ ಪಕ್ಕದಲ್ಲಿ ಕೂತಿದ್ದವರ ಜತೆ ಕೂಡ ಹೆಚ್ಚು ಮಾತಾಡಲಿಲ್ಲ. ಸುಪ್ಪರ್ ಸಿನಿಮಾ, ಎಲ್ಲಾ ಸಿಲೆಬ್ರಿಟಿಗಳನ್ನು, ಎಲ್ಲವನ್ನೂ ಮರೆಸಿ ತನ್ನೊಳಗೆ ಕರೆದೊಯ್ದಿತು. ಗುಲಾಬಿಯ ಬದುಕನ್ನು ಮತ್ತು ಕಡಲ ಮಕ್ಕಳ ಬವಣೆಯನ್ನು ಪ್ರೇಕ್ಷಕರಾಗಿ ಮಾತ್ರವಲ್ಲ, ಅಲ್ಲೇ ಅಕ್ಕಪಕ್ಕದ ಊರವಳಾಗಿ ತಲ್ಲೀನತೆಯಿಂದ ನೋಡುತ್ತಿದ್ದವಳಿಗೆ ಇಂಟರ್ವಲ್ಲು ಬಂದದ್ದೇ ಗೊತ್ತಾಗಲಿಲ್ಲ..
ಇಂಟರ್ವಲ್ಲು ಬಂತು, ಜತೆಗಿದ್ದವರೆಲ್ಲ ಎದ್ದು ಹೊರಹೋದರೆ ನಾನು ಕಾಲಮೇಲೆ ಕಾಲು ಹಾಕಿ ಅಲ್ಲೇ ಕುಳಿತು ಸಿನಿಮಾ ಮೆಲುಕು ಹಾಕುತ್ತಿದ್ದೆ. ನಾನು ಕುಳಿತ ಸೀಟಿನ ಬದಿಯಲ್ಲಿ ಮೇಲಿನ ಸಾಲುಗಳಿಗೆ ಹತ್ತುವ ದಾರಿಯಿತ್ತು. ಹೀಗೇ ಚೂರು ಹೊತ್ತಾಗಿರಬಹುದು... ಎದುರಿಂದ ಜುಬ್ಬಾ ಹಾಕಿದ ಎತ್ತರದ ಪರಿಚಿತ, ಧೀರಗಂಭೀರ ವ್ಯಕ್ತಿತ್ವವೊಂದು ಮೇಲಿನ ಸಾಲಿನ ಕಡೆಗೆ ಬರುತ್ತಿದೆ...! ಮೆದುಳಿಗೆ ತಕ್ಷಣ ಫ್ಲಾಷ್ ಆಯಿತು... ಜ್ಞಾನಪೀಠ ಪ್ರಶಸ್ತಿಭಾಜನರಾದ ಗಿರೀಶ್ ಕಾರ್ನಾಡ್!
ಹುಹ್ಹ್... ಎಷ್ಟು ದೊಡ್ಡ ವ್ಯಕ್ತಿ ಎದುರಿಂದ ಬರುತ್ತಿದ್ದಾರೆ, ನಾನು ಕಾಲಮೇಲೆ ಕಾಲು ಹಾಕಿ ಕುಳಿತು ನನ್ನದೇ ಲೋಕದಲ್ಲಿದ್ದೇನೆ... ಈ ಯೋಚನೆ ಮೂಡಿದ್ದೇ ತಡ, ಕಾಲು ಥಟ್ಟಂತ ಕೆಳಗಿಳಿಯಿತು, ನನ್ನ ಕಣ್ಣುಗಳು ವಿನಮ್ರಭಾವದೊಡನೆ ಅವರ ಮುಖ ನೋಡಿದವು. ಮುಖದಲ್ಲಿ ನಗುವೂ ಮೂಡಿತು. ಅದೇಕ್ಷಣ ಅವರೂ ನನ್ನನ್ನು ನೋಡಿದರು. ಅವರೇನಾದರೂ ಸ್ವಲ್ಪವೇ ಸ್ವಲ್ಪ ಮುಖ ಸಡಿಲಿಸಿದ್ದರೂ ನಾನು ಅವರಿಗೊಂದು ನಮಸ್ಕಾರ ಕೊಟ್ಟೇ ಬಿಡುತ್ತಿದ್ದೆ. ಆದರೆ ಹಾಗಾಗಲಿಲ್ಲ.ಗಂಭೀರಭಾವದಲ್ಲಿ ನನ್ನನ್ನು ನೋಡುತ್ತಲೇ ಅವರು ಮೇಲೆ ನಡೆದುಹೋದರು. ಹಾಗಂತ ನನಗೇನೂ ಬೇಸರವಾಗಲಿಲ್ಲ. ನನಗೆ ಅವರೊಬ್ಬರೇ ಕಾರ್ನಾಡರು, ಆದರೆ ಅವರು ನನ್ನಂತಹ ಎಷ್ಟು ವ್ಯಕ್ತಿಗಳನ್ನು ನೋಡಿದ್ದಾರೋ ಏನೋ ಎಂಬುದು ಸತ್ಯ ತಾನೇ...?
ಅಷ್ಟರಲ್ಲಿ ಇಂಟರ್ವಲ್ಲು ಮುಗಿ.ಯಿತು. ಸಿನಿಮಾವೂ ಮುಗಿಯಿತು. ವಾಪಸ್ ಮನೆಗೆ ಬರಬೇಕಲ್ಲ. ಗಂಟೆ ರಾತ್ರಿ 9.30. ಮೆಜೆಸ್ಟಿಕ್-ಗೆ ಬಸ್ ಎಲ್ಲಿ ಬರುತ್ತದೆಂದು ನನಗೆ ಗೊತ್ತಿರಲಿಲ್ಲ. ಅಲ್ಲಿ ಪೆಟ್ರೋಲ್ ಬಂಕಿನ ಹುಡುಗನಿಗೆ ಬಸ್ ಎಲ್ಲಿ ಬರುತ್ತದೆಂದು ಕೇಳಿದೆ. ಆತ ಉತ್ತರಿಸುವ ಮುನ್ನವೇ ಆತನ ಪಕ್ಕದಲ್ಲಿ ಗಾಡಿಗೆ ಡೀಸೆಲ್ ಹಾಕಿಸಿಕೊಳ್ಳುತ್ತಿದ್ದ ವ್ಯಕ್ತಿ ''ಎದುರುಗಡೆ ರಸ್ತೆಯ ಆಭಾಗದಲ್ಲಿ ಬಸ್ ಸ್ಟಾಪ್ ಇದೆ, 5 ನಿಮಿಷ ನಡೆಯಬೇಕು'' ಎಂದ. ಸರಿಯೆಂದು ನಾನು ಹೊರಟಾಗ, ''ಎರಡೇ ನಿಮಿಷ ನಿಲ್ಲಿ, ನಾನೇ ಡ್ರಾಪ್ ಮಾಡುತ್ತೇನೆ''' ಅಂದ. ಆತನ ಉದ್ದೇಶವೇನಿತ್ತೋ ಏನೋ ದೇವರಾಣೆಗೂ ನನಗೆ ಗೊತ್ತಿಲ್ಲ... ಆದರೆ ನನ್ನ ತಲೆಯಲ್ಲಿ ಕೂಡಲೇ ಅಲಾರಂ ಹೊಡೆಯಲಾರಂಭಿಸಿ ಫೋನು ಕೈಯಲ್ಲಿ ಹಿಡಿದುಕೊಂಡು ಯಾರಿಗೋ ಡಯಲ್ ಮಾಡುತ್ತಾ ಅಲ್ಲಿಂದ ಸತ್ತೆನೋ ಕೆಟ್ಟೆನೋ ಎಂಬಂತೆ ಓಟಕಿತ್ತೆ.
>>>>>>>>>>>>>>>>>
ಮನೆಗೆ ವಾಪಸ್ ಬಂದಮೇಲೆ ಹಾಗೇ ಯೋಚನೆ ಮಾಡುತ್ತಿದ್ದರೆ ಕೆಲ ತಿಂಗಳುಗಳ ಹಳೆಯ ಒಂದು ಘಟನೆ ನೆನಪಾಯಿತು. ಅದೊಂದು ದಿನ ಸಂಜೆಹೊತ್ತು ರವೀಂದ್ರ ಕಲಾಕ್ಷೇತ್ರದಲ್ಲಿ ಯಾವುದೋ ನಾಟಕವಿತ್ತು. ಆದಿನ ನಾನು ಬಿಡುವಾಗಿದ್ದುದರಿಂದ ನೋಡೋಣವೆಂದು ಹೋಗಿದ್ದೆ. ಟಿಕೆಟ್ ತೆಗೆದುಕೊಂಡೆ. ಒಳಗೆ ಹೋಗುವ ಮುನ್ನ ರಿವಾಜಿನಂತೆ ಬಾಗಿಲಲ್ಲಿ ನಿಂತಿದ್ದ ಟಿಕೆಟ್ ಚೆಕರ್/ ಗೇಟ್ ಕೀಪರ್-ಗೆ ಟಿಕೆಟ್ ತೋರಿಸಿದೆ. ಹಾಗೆಯೇ ಅವನ ಮುಖ ನೋಡಿದರೆ ಏನಾಶ್ಟರ್ಯ! ಆತ ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯ ದೀಪಕ್...! ಅವನ ನಿಜಹೆಸರು ಇವತ್ತಿಗೂ ಗೊತ್ತಿಲ್ಲ ನಂಗೆ. ಆದರೆ, ಈಟಿವಿಯ ಎಲ್ಲಾ ಧಾರಾವಾಹಿಗಳನ್ನೂ ಹೆಚ್ಚುಕಮ್ಮಿ ಬಿಡದೇ ನೋಡುತ್ತಿದ್ದ ನನಗೆ, ಚಂದದ ಅಭಿವ್ಯಕ್ತಿಯಿದ್ದ ದೊಡ್ಡದೊಡ್ಡ ಕಣ್ಣುಗಳ ಆತ ದಿನನಿತ್ಯ ಏನಿಲ್ಲವೆಂದರೂ ಎರಡು ಮೂರು ಧಾರಾವಾಹಿಯಲ್ಲಿ ನೋಡಿನೋಡಿ ತುಂಬಾ ಪರಿಚಿತನಾಗಿದ್ದ.
ಅದೇ ಪರಿಚಯದ ಗುಂಗಿನಲ್ಲಿ ನನಗೇ ಅರಿವಿಲ್ಲದೆ ಮುಗುಳ್ನಕ್ಕು ಹಾಯ್ ಎಂದೆ. ಆತನೂ ಅಷ್ಟೇ ಸಹಜವಾಗಿ ನಕ್ಕು ಹಾಯ್ ಎಂದ. ಆಮೇಲಷ್ಟೇ ನನಗೆ ಅರಿವಾಯಿತು, ನನಗೆ ಮಾತ್ರ ಆತ ಪರಿಚಿತ, ಆತನಿಗೆ ನನ್ನ ಪರಿಚಯವಿಲ್ಲ ಅಂತ. ಆದರೂ ಪರಿಚಯವಿಲ್ಲ ಎನ್ನುವ ಸಂಗತಿ ನಮ್ಮ ನಡುವಿನ ಮುಗುಳುನಗುವಿನ, ಕಿರುಮಾತಿನ ವಿನಿಮಯಕ್ಕೆ ಗೋಡೆಯಾಗಲಿಲ್ಲವೆಂಬುದು ಆಕ್ಷಣದ ಸತ್ಯವಾಗಿತ್ತು.
>>>>>>>>>>>>>>>>>>
ಮೊನ್ನೆ ಮೊನ್ನೆ ಹೀಗೇ ಒಂದು ದಿನ ರಿಲಯನ್ಸ್ ಟೈಮೌಟ್-ಗೆ ಭೇಟಿಯಿತ್ತಿದ್ದೆ. ಅಲ್ಲಿ ಒಂದು ಕಡೆ ಮಳೆಬಿಲ್ಲು ಧಾರಾವಾಹಿಯ ಮಲ್ಲಿಕಾ ಆರಾಮಾಗಿ ಕೂತಿದ್ದಳು. ಈಬಾರಿ ನನಗೇನೂ ಅನಿಸಲಿಲ್ಲ. ಪರಿಚಿತ ವ್ಯಕ್ತಿಯನ್ನು ನೋಡುತ್ತಿರುವೆನೆಂಬ ಭಾವ ಮರೆತು ನನ್ನಪಾಡಿಗೆ ನಾನು ನಡೆದು ಹೋದೆ. ಏನೂ ಆಗಲಿಲ್ಲ. ಗೋಡೆಗಳು ನಮಗೆ ಬೇಕಾದಲ್ಲೆಲ್ಲ, ನಾವು ಕಟ್ಟಿಕೊಂಡಲ್ಲೆಲ್ಲ ಹುಟ್ಟಿಕೊಳ್ಳುತ್ತವೆ ಎಂಬ ಸತ್ಯದ ದರ್ಶನ ನನಗಾಗಿತ್ತು.

ನಮ್ಮ ಪಕ್ಕದವರೇ ಸ್ವಲ್ಪ ಹೆಚ್ಚು ಸಲಿಗೆಯಿಂದಿದ್ದರೆ ಸಂಶಯದಿಂದ ನೋಡುವ ನಾವು, ಯಾರದೋ ಮುಗುಳ್ನಗುವಿಗೆ, ಗಮನಕ್ಕೆ ಹಾತೊರೆಯುತ್ತೇವೆ. ನಮಗೆ ಸುತ್ತಲವರಿಂದ ಗುರುತಿಸುವಿಕೆ ಬೇಕು, ಅದು ತರುವ ಕಿರಿಕಿರಿಗಳು ಬೇಡ. ಅದೇ ಗುರುತಿಸುವಿಕೆಯನ್ನು ಅವರೂ ನಮ್ಮಿಂದ ನಿರೀಕ್ಷಿಸುತ್ತಾರೇನೋ ಎಂದು ನಾವು ಚಿಂತಿಸುವುದಿಲ್ಲ. ಹಾದಿಯ ಕೊನೆಯಲ್ಲೆಲ್ಲೋ ಸಂತೋಷದ ಮನೆ ಕಾದಿದೆ ಅಂತಂದುಕೊಳ್ಳುವ ನಾವು ಹಾದಿಬದಿಯ ಪುಟ್ಟಪುಟ್ಟ ಸಂತೋಷಗಳಿಗೆ ಸ್ಪಂದಿಸದೇ ಸಾಗುತ್ತೇವೆ. ಒಳಿತು-ಕೆಡುಕನ್ನು ವಿವೇಚಿಸುವ ಶಕ್ತಿಯಿಲ್ಲದೇ ಎಲ್ಲವನ್ನೂ, ಎಲ್ಲರನ್ನೂದೂರವಿಡುತ್ತೇವೆ... ಸೇತುವೆಗಳ ಬಗೆಗೆ ಚಿಂತಿಸದೇ ಗೋಡೆಗಳನ್ನು ಕಟ್ಟಿಕೊಳ್ಳುತ್ತ ಸಾಗುತ್ತೇವೆ.
ಇಷ್ಟೆಲ್ಲ ಯೋಚಿಸಿದ ಮೇಲೂ, ಬಹುಷ: ಈ ಕಾಲಕ್ಕೆ ಹೀಗಿರುವುದೇ ಸರಿಯೇನೋ ಎಂಬ ಸಂಶಯ ನನ್ನನ್ನು ಆಗಾಗ ಕಾಡುತ್ತದೆ...!

Sunday, May 25, 2008

ಬಿಸಿ ಬಿಸಿ ಸುದ್ದಿ ತಣಿದ ಮೇಲೆ....

ಮೊನ್ನೆ ಮೊನ್ನೆ ಎಲ್ಲಾ ಟಿವಿ ಚಾನೆಲಲ್ಲೂ ಸುದ್ದಿಯಾಗಿ, ಇಂದಿಗೂ ಬಗೆಹರಿಯದಿರುವ, ಸುದ್ದಿಯಾಗುತ್ತಲೇ ಇರುವ ಪ್ರಕರಣ ಆರುಶಿ ಕೊಲೆ ಪ್ರಕರಣ. NOIDAದಲ್ಲಿ ಒಂದು ತಣ್ಣನೆಯ ರಾತ್ರಿ, ಆಗಷ್ಟೆ ಹದಿಹರೆಯಕ್ಕೆ ಕಾಲಿಟ್ಟಿದ್ದ ಚಂದದ ಹುಡುಗಿ ಆರುಶಿಯ ಕೊಲೆಯಾಗಿತ್ತ್ತು. ಆಕೆ ಕೊಲೆಯಾದ ಸಮಯ ಮನೆಯಲ್ಲೇ ಇದ್ದ್ದ ಹೆತ್ತವರು ಮಾಧ್ಯಮ ಮತ್ತು ಪೊಲೀಸರಿಗೆ ಹೇಳಿಕೆ ಕೊಡುವಾಗ ಸಂಶಯ ವ್ಯಕ್ತಪಡಿಸಿದ್ದು ಮನೆಯಲ್ಲಿ ಕೆಲಸಕ್ಕೆ ಬರುತ್ತಿದ್ದ (domestic help) ಹೇಮರಾಜ್ ಮೇಲೆ. ಇಷ್ಟು ಸುದ್ದಿ ಸಿಕ್ಕಿದ್ದೇ ತಡ, ಎಲ್ಲಾ ಟಿವಿ ಚಾನೆಲ್-ಗಳಲ್ಲೂ ಶುರು ಬ್ರೇಕಿಂಗ್ ನ್ಯೂಸ್... WHO KILLED ARUSHI ಅಂತ ಹೆಡ್ ಲೈನ್ ಕೊಟ್ಕೊಂಡು ಕೊಲೆಯ ಕುರಿತು ಚರ್ಚೆಗಳು ನಡೆದವು.
ಎಲ್ಲಾ ಚಾನೆಲ್-ಗಳು ಸೇರಿಕೊಂಡು, ಯಾವ ಹಂತಕ್ಕೆ ಮುಟ್ಟಿದವು ಎಂದರೆ, ಈ ಹಿಂದೆ ಮನೆಯಲ್ಲಿ ಕೆಲಸ ಮಾಡುವ ಸಹಾಯಕರು ನಡೆಸಿದ ವಿವಿಧ ಅಪರಾಧ ಕೃತ್ಯಗಳ ಕೇಸ್ ಸ್ಟಡೀಸ್ ಎಲ್ಲ ತೆಗೆದುಕೊಂಡು ಅವುಗಳ ಚರಿತ್ರೆಯನ್ನು ಬಿಚ್ಚಿಟ್ಟರು. TIMES NOW ಅಂತೂ ಇಷ್ಟು ಸುದ್ದಿ ಸಿಕ್ಕಿದ್ದೇ ಹಬ್ಬ ಅಂತ ಸೆಲೆಬ್ರೇಟ್ ಮಾಡಿತು. ಅದಕ್ಕೆ ಇದ್ದಿದ್ದು ಇಲ್ಲದ್ದು ಉಪ್ಪು ಖಾರ ಮಸಾಲೆ ಹಚ್ಚಿ ಇನ್ನಷ್ಟು ಬಣ್ಣ ತುಂಬಿತು.
ಹೋಗಲಿ ಬಿಡಿ, TIMES NOW ಇರುವುದೇ ಹಾಗೆ, ಎಷ್ಟಂದರೂ times of india ಸಂತತಿಯಲ್ಲವೇ ಅಂತ ನಾನು ಚಾನೆಲ್ ಬದಲಾಯಿಸಿ NDTV ಕಡೆ ಹೊರಟೆ. ಅಲ್ಲಿ ನೋಡುತ್ತೇನೆ, ಒಬ್ಬ ಕ್ರಿಮಿನಾಲಜಿಸ್ಟು, ಇನ್ನೊಬ್ಬ ಸೈಕಾಲಜಿಸ್ಟು, ಮತ್ತೊಬ್ಬ ಮಾಜಿ ಪೊಲೀಸ್ ಅಧಿಕಾರಿ, ಮತ್ತೊಬ್ಬ ಮನೆಕೆಲಸದವರಿಂದ ದರೋಡೆಗೊಳಗಾದ ವ್ಯಕ್ತಿ - ಇವರ ಜತೆಗೆ ಒಬ್ಬಳು ಮನೆ ಕೆಲಸ ಮಾಡುವ ಬೇಬಿ ಎಂಬ ಹೆಸರಿನ ಹುಡುಗಿಯನ್ನು ಕೂರಿಸಿಕೊಂಡು ಗಂಭೀರವಾದ ಚರ್ಚೆ ನಡೀತಿತ್ತು.
ಉಳಿದವರೆಲ್ಲ ಇಂಗ್ಲಿಶಿನಲ್ಲಿ ಬಡಬಡಿಸುತ್ತಿದ್ದರೆ, ಬೇಬಿ ಹಿಂದಿ ಮಾತ್ರ ಮಾತಾಡಬಲ್ಲವಳಾಗಿದ್ದಳು. ಅವಳಿಗೆ ಇತರರು ಮಾತಾಡಿದ್ದು ಅರ್ಥವಾಗಿತ್ತೋ ಇಲ್ಲವೋ ಗೊತ್ತಾಗುತ್ತಿರಲಿಲ್ಲ. ಇತರರ ಜತೆ ಈರೀತಿಯ ಅಪರಾಧ ಕೃತ್ಯಗಳ ವಿವಿಧ ಆಯಾಮಗಳ ಕುರಿತು ಮಾತಾಡಿಸಿದ್ದಾದ ಮೇಲೆ ANCHOR ಅವಳಿಗೆ ಹಿಂದಿಯಲ್ಲಿ ಪ್ರಶ್ನೆ ಆರಂಭಿಸಿದಳು... 'ಬೇಬಿ, ಕ್ಯಾ ಆಪ್ ಬತಾ ಸಕ್ತೀ ಹೈಂ ಕಿ ಐಸಾ ಅಪರಾಧ್ ಕೃತ್ಯ್ ಕ್ಯೂಂ ಹೋತಾ ಹೈ...' ಇದಕ್ಕೆ ಉತ್ತರವಾಗಿ ಬೇಬಿ, ಮನೆಯವರು ಕೆಲಸ ಮಾಡಿಸಿಕೊಳ್ಳುವಾಗ ಕೆಲಸದವರಿಗೆ ಸರಿಯಾದ ಮರ್ಯಾದೆ ಕೊಡುವುದಿಲ್ಲ, ಅದರಿಂದ ಹುಟ್ಟುವ ರೋಷ ಈರೀತಿಯ ಕೃತ್ಯಗಳಿಗೆ ಕಾರಣವಾಗುತ್ತದೆಂದು ಹೇಳಿದಳು. ಆಗ ಅಲ್ಲಿ ಕೂತಿದ್ದ ಪ್ರೇಕ್ಷಕರಲ್ಲಿ ಒಬ್ಬಾಕೆ ತಾನು ಅತ್ಯುತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ ಕೆಲಸದಾತ ತನಗೆ ಮೋಸ ಮಾಡಿ ಮನೆ ದೋಚಿದ್ದನ್ನು ಹೇಳಿಕೊಂಡು, ಬಲುಬೇಗನೆ ಧನವಂತರಾಗುವ ಹುಚ್ಚಿನಿಂದ ಕೆಲಸದವರು ಇಂತಹ ಅಪರಾಧಗಳನ್ನು ಮಾಡುತ್ತಾರೆಂಬ ಕನ್-ಕ್ಲೂಶನ್-ಗೆ ಬಂದಳು. ಇದಕ್ಕೆ ಬೇಬಿ ತೀವ್ರವಾಗಿ ವಿರೋಧಿಸಿ, ಸಾಧ್ಯವೇ ಇಲ್ಲ, ನೀವು ಎಲ್ಲಾದರೂ ತಪು ಮಾಡಿರುತ್ತೀರಿ ಎಂಬರ್ಥದ ಮಾತುಗಳನ್ನು ಆಡಿದಳು. ಆಗ ಅಲ್ಲಿದ್ದವರೆಲ್ಲ ಒಗ್ಗಟ್ಟಾಗಿ ಅವಳನ್ನು ವಿರೋಧಿಸಹೊರಟರು. Anchor ಪರಿಸ್ಥಿತಿ ಹತೋಟಿಗೆ ತರಲು ಹೆಣಗಾಡತೊಡಗುತ್ತಿದ್ದಂತೆಯೇ ನಾನು ಚಾನೆಲ್ ಬದಲಾಯಿಸಿದೆ.
ಮತ್ತೆ TIMES NOWಗೆ ಬಂದೆ. ಅಲ್ಲಿ ನೋಡಿದರೆ, ಆಗಷ್ಟೆ ಹೊಸಾ ಬಿಸಿ ಬಿಸಿ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು.. ARUSHI’S SUSPECTED KILLER HEMRAJ FOUND DEAD... DEAD BODY FOUND ON THE TERRACE OF ARUSHI'S HOME... NEIGHBOUR FINDS BODY TWO DAYS LATER AFTER DEATH... POLICE FAILED TO FIND THE DEAD BODY EARLIER .... ETC ETC...

----------

ಸಮಯ 7.30 ಬೆಳಿಗ್ಗೆ, ಆದಿತ್ಯವಾರ, ಮೇ 25. ಚುನಾವಣಾ ಮತ ಎಣಿಕೆ ಕಾರ್ಯ 8 ಘಂಟೆಗೆ ಸರಿಯಾಗಿ ಆರಂಭವಾಗಲಿತ್ತು... ಎಲ್ಲಾ ಚಾನೆಲ್-ಗಳಲ್ಲೂ ಬಿಸಿ ಬಿಸಿ ಸುದ್ದಿ ವೀಕ್ಷಕರಿಗೆ ನೀಡಲು ಎಲ್ಲ್ಕಾ ತಯಾರಿಯೂ ಆಗಿತ್ತು. ಹಾಗೆಯೇ ಎಲ್ಲಾ ಚಾನೆಲ್-ಗಳನ್ನೂ ಸುಮ್ಮನೆ ನೋಡುತ್ತಾ ಸಾಗುತ್ತಿದ್ದರೆ, TIMES NOWನಲ್ಲಿ ರಿಮೋಟ್ ನಿಂತುಬಿಟ್ಟಿತು. ಅಲ್ಲಿ ಹಿಂದಿನ ದಿನ ರಾತ್ರಿ ನಡೆಸಿದ ಚರ್ಚೆಯ ಮರುಪ್ರಸಾರ ನಡೆದಿತ್ತು. ರಿಮೋಟ್ ನಿಂತಿದ್ದು ಮಾತ್ರ ಅದಕ್ಕಲ್ಲ. ಇನ್ನೂ ಯಾವ ಕನ್ನಡ ಚಾನೆಲಲ್ಲೂ ಮತ ಎಣಿಕೆ ಕಾರ್ಯ ಆರಂಭವಾದ ಬಗ್ಗೆ ಸುದ್ದಿಯೇ ಇಲ್ಲ, ಎಷ್ಟು ಸ್ಥಾನಗಳಲ್ಲಿ ಯಾವ ಪಕ್ಷ ಮುಂದಿದೆ ಅಂತ ತಿಳಿಸುವ ಕೌಂಟರ್ TIMES NOWನಲ್ಲಿ ಈಗಾಗಲೇ ಕಾರ್ಯಾರಂಭ ಮಾಡಿತ್ತು. ಈಗಿನ್ನೂ 7.30, ಅದಾಗಲೇ ಕಾಂಗ್ರೆಸ್ - 1 ಅಂತ ತೋರಿಸುತ್ತ ಅಕೌಂಟ್ ಓಪನ್ ಮಾಡಿತ್ತು. ತಕ್ಷಣ ಎಲ್ಲಾ ವರದಿಗಾರರ ಮೂಲಕ ಕ್ರಾಸ್ ಚೆಕ್ ಮಾಡಿ TIMES NOW ಸುಳ್ಳು ಹೇಳುತ್ತಿದೆಯೆಂದು ಖಚಿತಪಡಿಸಿಕೊಂಡಿದ್ದಾಯಿತು.
ಘಂಟೆ 8 ಆಗುತ್ತಿದ್ದಂತೆಯೇ ಎಲ್ಲೆಲ್ಲಿ ಮತ ಎಣಿಕೆ ಕಾರ್ಯ ಆರಂಭವಾಯಿತೋ ಅಲ್ಲಿಂದೆಲ್ಲ ಮೆಲ್ಲಗೆ ಸುದ್ದಿ ಆರಂಭವಾಯಿತು. ಹಾಗೆಯೇ ಬಣ್ಡ್ಣಬಣ್ಣದ ಸುದ್ದಿಗಳೂ ಕೂಡ ಆರಂಭವಾಯಿತು. ಒಂದು ಚಾನೆಲ್ ಕನಕಪುರದಲ್ಲಿ ಡಿಕೆಶಿ ಹಿನ್ನಡೆ ಅಂತ ಕೊಟ್ಟರೆ ಇನ್ನೊಂದು ಮುನ್ನಡೆ ಅಂದಿತು. ಒಂದು ಚಾನೆಲ್-ನಲ್ಲಿ ಅಂಬರೀಶು ಹಿನ್ನಡೆ ಅನುಭವಿಸಿದರೆ ಇನ್ನೊಂದರಲ್ಲಿ ಮುನ್ನಡೆ ಸಾಧಿಸಿದರು.
ಒಂದು ಐದು-ಹತ್ತು ನಿಮಿಷ ಯಾವುದು ಸತ್ಯ ಯಾವುದು ಸುಳ್ಳು ಅಂತಲೇ ತಿಳಿಯದ ಹಾಗೆ ಸುದ್ದಿಗಳು ಓಡಿದವು. ಈ ಓಟದಲ್ಲಿ ಇಂಗ್ಲಿಷ್ ಚಾನೆಲುಗಳು ಕೂಡ ಹಿಂದುಳಿಯಲಿಲ್ಲ. ಆಮೇಲೆ, ಒಂದು ಹಂತಕ್ಕೆ ಬಂದ ಮೇಲೆ ಎಲ್ಲಾ ಚಾನೆಲ್-ನಲ್ಲೂ ಹೆಚ್ಚುಕಡಿಮೆ ಒಂದೇ ವಿಧವಾದ ಸುದ್ದಿಗಳು ಹೋಗಲಾರಂಭಿಸಿದವು. ಹತ್ತಿರವೆನಿಸಬಹುದಾದ ಸಂಖ್ಯೆಗಳು ಕೌಂಟರ್-ನಲ್ಲಿ ಬರಲು ಆರಂಭವಾಯಿತು.
ಕೊನೆಗೆ ಮಧ್ಯಾಹ್ನ 3.30ಕ್ಕೆ ಹೆಚ್ಚು ಕಡಿಮೆ ಎಲ್ಲಾ ಸ್ಥಾನಗಳಲ್ಲೂ ಫಲಿತಾಂಶ ಘೋಷಿತವಾಯಿತು. ಎಲ್ಲಾ ಕನ್ನಡ ಚಾನೆಲುಗಳೂ ಒಂದು ಸ್ಕೋರು ತೋರಿಸುತ್ತಿದ್ದರೆ ಎಲ್ಲಾ ಇಂಗ್ಲಿಷ್ ಚಾನೆಲುಗಳೂ ಇನ್ನೊಂದು ಸ್ಕೋರು ತೋರಿಸುತ್ತಿದ್ದವು. ನಮ್ಮಕ್ಕ ಫೋನ್ ಮಾಡಿ ಯಾವುದು ಸರಿ ಅಂತ ಕೇಳಿದರೆ, ನಾನು ಹೇಳಿದೆ, ಕನ್ನಡ ಚಾನೆಲುಗಳು ತೋರಿಸುತ್ತಿರುವ ಸ್ಕೋರು ಸತ್ಯ, ಅದನ್ನು ನಂಬಬಹುದು ಅಂತ. ಕೊನೆಗೆ ಬಂದಿದ್ದೂ ಅದೇ ಸ್ಕೋರು - 110-80-28-6.

------------

ಜನಾದೇಶ ಅನ್ನಬಹುದೋ, ಚುನಾವಣೆ ಅನ್ನಬಹುದೋ, ರಣರಂಗ ಅನ್ನಬಹುದೋ, ಚದುರಂಗ ಅನ್ನಬಹುದೋ - ಒಟ್ಟಿನಲ್ಲಿ ಪ್ರಜಾಪ್ರಭುತ್ವದ ಹಬ್ಬವೆಂದು ಕರೆಯಲ್ಪಡುವ ಕಾರ್ಯಕ್ರಮದ ಎಲ್ಲಾ ಪ್ರಕ್ರಿಯೆ ಮುಗಿದಿದೆ. ಕೊಟ್ಟೂ ಕೊಡದ ಹಾಗೆ ಬಹುಮತ ಕೊಟ್ಟಿದ್ದಾನೆ ಜಾಣ ಮತದಾರ. ಹಿಂದುತ್ವದ ಹೆಸರಲ್ಲಿ ಕೋಮುಗಲಭೆ ಎಬ್ಬಿಸಿದವರು, 36 ವರ್ಷಗಳಿಂದಲೂ ತಮ್ಮ ಕ್ಷೇತ್ರಕ್ಕೆ ಏನೂ ಉಪಕಾರ ಮಾಡದವರು, ಟಿಕೆಟ್ ಸಿಕ್ಕಲಿಲ್ಲವೆಂದು ಬೇರೆ ಪಕ್ಷಕ್ಕೆ ಹಾರಿದವರು, ಪಾರ್ಲಿಮೆಂಟಿನಿಂದ ಹೊರಬಂದು ವಿಧಾನಸೌಧದೊಳಗೆ ಕಾಲಿಟ್ಟು ಅದನ್ನು ಪಾವನವಾಗಿಸುವ ಆಸೆಹೊತ್ತವರು, ಇದೇ ಕೊನೆ ಚುನಾವಣೆಯೆನ್ನುತ್ತ ಓಟಿಗೆ ನಿಂತವರು, ಎಲ್ಲರ ಕಣ್ಣಿಗೆ ಸುಲಭವಾಗಿ ಕಾಣುವಂತಹ ಕೆಲಸಗಳನ್ನು ಮಾತ್ರ ಮಾಡಿ ಕೆಲಸ ಮಾಡಿದ್ದೇವೆಂದು ಕೊಚ್ಚಿಕೊಂಡವರು, ದುಡ್ಡು ಹ್ಚೆಲ್ಲಿ ಗೆಲ್ಲಬಹುದೆಂದು ತಿಳಿದವರು, ದೂರದಿಂದ ಹಾರಿಬಂದು ಬೆಂಗಳೂರನ್ನು ಉದ್ಧಾರ ಮಾಡುತ್ತೇನೆಂದು ಚುನಾವಣೆಗೆ ನಿಂತು, ಕ್ಯಾಂಪೇನ್ ಮಾಡಬೇಕಾದ ಸಮಯದಲ್ಲಿ ಟೀವಿ ಚಾನೆಲ್-ನಲ್ಲಿ ಚರ್ಚೆ ನಡೆಸುತ್ತಾ ಕೂತವರು - ಎಲ್ಲರಿಗೂ ತನಗೆ ಸಾಧ್ಯವಾದಷ್ಟು ಸರಿಯಾದ ರೀತಿಯಲ್ಲಿ ಮಣ್ಣುಮುಕ್ಕಿಸಿದ್ದಾನೆ ಮತದಾರ. ಆತನ ಎಲ್ಲಾ ಆಯ್ಕೆಗಳೂ ಉತ್ತಮವಾಗಿವೆಯೆಂದಲ್ಲ, ಆದರೆ ತನ್ನ ಮಿತಿಯಲ್ಲಿ, ತನಗೆ ಸಿಕ್ಕ ಅಪರೂಪದ ಒಂದೇ ಅವಕಾಶದಲ್ಲಿ, ಎಲ್ಲರಿಗೂ ಬುದ್ಧಿ ಕಲಿಸಿದ್ದಾನೆ. ಆದರೆ ಯಾರೂ, ಯಾವ ಪಕ್ಷವೂ, ಹೆಚ್ಚು ಹಾರಾಡಲು ಸಾಧ್ಯವಿಲ್ಲದ ರೀತಿಯಲ್ಲಿದೆ ಈ ಸಾರಿಯ ಚುನಾವಣಾಫಲಿತಾಂಶ.

------------

ಈಗ ಅಧಿಕಾರ ಹಿಡಿಯಲಿರುವುದು ಯಾರು ಅಂತ ಹೆಚ್ಚು ಕಡಿಮೆ ತೀರ್ಮಾನವಾಗಿದೆ - ರಾಜಕೀಯದ 'ಆಟ'ಗಳಲ್ಲಿ ಸಂಭವಿಸಬಹುದಾದ ಅನಿರೀಕ್ಷಿತ ಬೆಳವಣಿಗೆಗಳ ಹೊರತಾಗಿ. ಆದರೆ, ಈಗ ನನ್ನನ್ನು ಕಾಡುತ್ತಿರುವ ಪ್ರಶ್ನೆಗಳು ಇವು -

೧. ಅಕ್ರಮ ಗಣಿಗಾರಿಕೆಯ ಮೇಲೆ ಲೋಕಾಯುಕ್ತರು ಸರಕಾರಕ್ಕೆ ನೀಡಿದ ವರದಿಯ ಗತಿ ಏನಾಗಬಹುದು?
೨. ಹಣದುಬ್ಬರ, ಬೆಲೆಯೇರಿಕೆಯನ್ನು ನಿಯಂತ್ರಿಸುತ್ತೇನೆಂಬ ಆಶ್ವಾಸನೆಯ ಗಾಳವನ್ನು ಮತದಾರನಿಗೆ ಎಸೆದು ಅಧಿಕಾರಕ್ಕೆ ಬಂದ ಬಿಜೆಪಿ, ಇವುಗಳನ್ನು ಹೇಗೆ ನಿಯಂತ್ರಿಸಬಹುದು? ಹಣದುಬ್ಬರ-ಬೆಲೆಯೇರಿಕೆಗಳು ಒಂದು ರಾಜ್ಯದ ಒಳಗೆ ನಿಯಂತ್ರಿಸಬಹುದಾದ ಸಂಗತಿಗಳೇ?
೩. ಸರಕಾರ ಬಂದ ಕೂಡಲೇ ಇಂಡಸ್ಟ್ರಿಯಲೈಸೇಶನಿಗೆ ಸಹಾಯ ಮಾಡುತ್ತೇನೆಂದು ಬಹುಮತ ಸಿಕ್ಕಿದಕೂಡಲೇ ನಡೆಸಿದ ಪತ್ರಿಕಾಗೋಷ್ಟಿಯಲ್ಲ್ಲಿ ಯಡಿಯೂರಪ್ಪ ಹೇಳಿದ್ದಾರೆ. ಇದನ್ನು ಸಿಎನ್ ಬಿಸಿ, NDTV PROFIT ಇತ್ಯಾದಿಗಳು ಹೆಡ್ಲೈನ್ ಆಗಿ ತೋರಿಸುತ್ತಿವೆ. ಇದರ ಅರ್ಥ ಏನಿರಬಹುದು?
೪. ಎಲ್ಲಕ್ಕಿಂತ ಹೆಚ್ಚಾಗಿ, ಭೂಮಿ ಖರೀದಿಯ ನಿಯಮಾವಳಿಗಳನ್ನು ಸಡಿಲಗೊಳಿಸುತ್ತೇನೆಂದು ಈಗಾಗಲೇ ಬಿಜೆಪಿ ಹೇಳಿದೆ. ಎಲ್ಲರೂ ಸುಮ್ಮನಿದ್ದರೆ ಅದನ್ನು ಮಾಡಿಯೂ ಮಾಡುತ್ತದೆ. ಇದರಿಂದಾಗಿ ರೈತರು ಭೂಮಿ ಕಳೆದುಕೊಂಡು ನೆಲೆ ಕಳೆದುಕೊಂಡು ಯಾವುದೋ ನಗರದ ಸ್ಲಮ್ಮಿಗೋ ಕಾರ್ಮಿಕವರ್ಗಕ್ಕೋ ಸೇರಿಹೋಗಬಹುದಾದ ಸಾಧ್ಯತೆ - ಅನಿವಾರ್ಯವಾಗಲಿದೆಯೇ?

Sunday, May 11, 2008

ಚುನಾವಣೆ, ಮತ್ತು ಒಂದಿಷ್ಟು ಕೊರೆತಪುರಾಣ... :)

ಇದೇನಪ್ಪಾ ಇದ್ದಕ್ಕಿದ್ದಂತೆ ರಾಜಕೀಯದ ಬಗ್ಗೆ ಇಷ್ಟೊಂದು ಕೊರೆತ ಶುರುಮಾಡಿದಾಳಲ್ಲ ಅಂತ ಅನ್ಕೋಬೇಡಿ, ಇದರಷ್ಟು ಕಲರ್-ಫುಲ್ ವಿಷಯ ಇನ್ಯಾವುದೂ ಇಲ್ಲ!

++++++++++++++++

ಕನ್ನಡ ಟೀವಿ ಚಾನೆಲ್-ಗಳಲ್ಲಿ ಇತ್ತೀಚೆಗೆ ಬರ್ತಾ ಇರುವ ರಾಜಕೀಯ ಪಕ್ಷಗಳ ಜಾಹೀರಾತುಗಳನ್ನು ನೋಡ್ತಾ ಇದ್ರೆ ಮಜಾ ಅನ್ನಿಸುತ್ತದೆ. ಅಳಬೇಕೋ ನಗಬೇಕೋ ಗೊತ್ತಾಗುವುದಿಲ್ಲ.

ಕಾಂಗ್ರೆಸ್ ’20 ತಿಂಗಳುಗಳ ದುರಾಡಳಿತ’ದ ಬಗ್ಗೆ ತನ್ನ ಬೇಸರವನ್ನು ಒಂದು ಜಾಹೀರಾತಿನಲ್ಲಿ ಹೇಳಿಕೊಂಡರೆ, ಇನ್ನೊಂದು ಜಾಹೀರಾತಿನಲ್ಲಿ ತನ್ನ ಭರವಸೆಗಳನ್ನು ಹೇಳಿಕೊಂಡಿದೆ... ಕಲರ್ ಟೀವಿ, ಎರಡು ರುಪಾಯಿಗೆ ಅಕ್ಕಿ ಇತ್ಯಾದಿ ಇತ್ಯಾದಿ. ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡ ಬಡವರಿಗೆ ಅಪೀಲ್ ಆಗುವಂತಹ ಅಂಶಗಳನ್ನೇ ಜಾಹೀರಾತಿನಲ್ಲಿ ಹಾಕಿಕೊಂಡಿದೆ. ಇದರಲ್ಲಿ ಹೇಳುವಂತಹದೇನೂ ಇಲ್ಲ.

ಬಿಜೆಪಿಯ ಎಲ್ಲಾ ಜಾಹೀರಾತುಗಳು ನೇರವಾಗಿ ಐವತ್ತು ವರ್ಷ ಆಳಿದ ಪಕ್ಷಕ್ಕೆ ಸಡ್ಡು ಹೊಡೆಯುತ್ತವೆ. ಮೊದಲಿಗೆ ಕಾಂಗ್ರೆಸ್ ಪಕ್ಷದ ಹೆಸರು ನೇರವಾಗಿ ಬರ್ತಾ ಇತ್ತು, ಆಮೇಲೆ ಚುನಾವಣಾ ಆಯೋಗ ಕತ್ತರಿ ಹಾಕಿದ ಮೇಲೆ ಅದು ’ಐವತ್ತು ವರ್ಷ ಆಳಿದ ಪಕ್ಷ’ ಆಯಿತು.

ಇದರಲ್ಲಿ ಮೊದಲ ಜಾಹೀರಾತು ಸುಷ್ಮಾ ಸ್ವರಾಜ್ ಭಾಷಣವಿತ್ತು. ಕಾಂಗ್ರೆಸ್-ಗೆ ಹಿಗ್ಗಾಮುಗ್ಗ ಬೈದ ಕಾರಣ ಸೆನ್ಸಾರ್ ಆಗಿ ಕಾಂಗ್ರೆಸ್ ಅಂತ ಇದ್ದಲ್ಲೆಲ್ಲ ’ಟುಂಯ್’ ಅಂತ ಶಬ್ದ ಹಾಕಿಸಿಕೊಂಡು ಒಂದು ವಾರ ಟೆಲಿಕಾಸ್ಟ್ ಆಯಿತು. ನಂತರ ನಿಂತ ಹಾಗಿದೆ.

ಮುಂದಿನ ಜಾಹೀರಾತುಗಳ ಟಾರ್ಗೆಟ್ ನೇರವಾಗಿ ಮಧ್ಯಮವರ್ಗ. ಆಹಾರವಸ್ತುಗಳ ಬೆಲೆ ಹೆಚ್ಚಳ ಒಂದು ಜಾಹೀರಾತಿನಲ್ಲಿ, ಇನ್ನೊಂದ್ರಲ್ಲಿ ಗೃಹಸಾಲ ಬಡ್ಡಿ, ಮನೆ ಕಟ್ಟುವ ಸಾಮಗ್ರಿಗಳ ಬೆಲೆ ದುಬಾರಿ. ಇವೆಲ್ಲದಕ್ಕೂ ’ಐವತ್ತು ವರ್ಷ ಆಳಿದ ಪಕ್ಷ’ ಹೊಣೆಯಾಗಿದೆ. ಹಿನ್ನೆಲೆಯಲ್ಲಿ ಮೆಲುವಾಗಿ ’ದೋಣಿ ಸಾಗಲಿ ಮುಂದೆ ಹೋಗಲಿ’ ಹಾಡಿನ ಸಂಗೀತ ಕೇಳಿಬರುತ್ತದೆ, ನೋಡಿದವರೆಲ್ಲ ಹೌದು ಹೌದು ಅನ್ನುವ ಹಾಗಿದೆ ಜಾಹೀರಾತು.

ಇನ್ನೊಂದು ಜಾಹೀರಾತಿನಲ್ಲಿ ಭಯೋತ್ಪಾದನೆಯನ್ನು ಮುಖ್ಯವಾಗಿ ತೆಗೆದುಕೊಳ್ಳಲಾಗಿದ್ದು, ಬಿಜೆಪಿಯ ಟ್ರೇಡ್-ಮಾರ್ಕ್ ಆಗಿರುವ ಹಿಂದುತ್ವಕ್ಕೆ ಬದ್ಧತೆಯ agendaಕ್ಕೆ ಲೈಟಾಗಿ ಬಣ್ಣ ಬಳಿದು ಕೂಡಿಸಲಾಗಿದೆ. ಕೇಂದ್ರ ಸರಕಾರದ್ದು ಮುಸ್ಲಿಂ ತುಷ್ಟೀಕರಣ ಧೋರಣೆ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ’ಐವತ್ತು ವರ್ಷ ಆಳಿದ ಪಕ್ಷ’ಕ್ಕೆ ಯಾವುದು ಮುಖ್ಯ, ಅವರ ಸಗಟು ಮತಗಳೋ ಅಥವಾ ನಮ್ಮ ಅಮೂಲ್ಯ ಜೀವಗಳೋ’ ಅಂತ ಕೇಳಿ, ಕೊನೆಗೆ ’ಬಿಜೆಪಿಯೇ ಪರಿಹಾರ’ ಅನ್ನುತ್ತದೆ ಈ ಜಾಹೀರಾತು.

ಇದ್ದಿದ್ದರಲ್ಲಿ ಜೆಡಿ ಎಸ್ ಜಾಹೀರಾತೇ ವಾಸಿ. ಬೇರೆ ಪಕ್ಷಗಳ ಕುರಿತು ಮಾತೇ ಆಡದೆ ತಮ್ಮ ಪಕ್ಷ ಮತ್ತು ನಾಯಕನನ್ನು ಬಿಂಬಿಸುವ ಯತ್ನ ಮಾತ್ರ ಇಲ್ಲಿ ನಡೆದಿದೆ. ಆದರೆ ಹೆಚ್ಚಿನ ಚಾನೆಲ್-ಗಳಲ್ಲಿ ಹೆಚ್ಚು ದಿನ ಈ ಜಾಹೀರಾತು ಬರಲಿಲ್ಲ. ಬಹುಷ ಪಾರ್ಟಿ ಪಾಪರ್ ಆಗಿರುವುದು ಕಾರಣವಿರಬಹುದು, ೧೦ ಸೆಕೆಂಡಿಗೆ ಟೀವಿ ಚಾನೆಲ್-ನಲ್ಲಿ ಪ್ರೈಮ್ ಟೈಮ್-ನಲ್ಲಿ 14000 ರೂಪಾಯಿಯಷ್ಟು ಬೆಲೆಇರುವಾಗ, ಎಷ್ಟಂದರೂ ಪ್ರಾದೇಶಿಕ ಪಕ್ಷವಲ್ಲವೇ, ರಾಷ್ಟ್ರೀಯ ಪಕ್ಷಗಳಷ್ಟು ಕಾಸು ಎಲ್ಲಿಂದ ಬರಬೇಕು... :(

++++++++++++++++

ಏನೇ ಹೇಳಿ, ಇದ್ದಿದ್ರಲ್ಲಿ ಶಿಸ್ತುಬದ್ಧವಾಗಿ campaign ಮಾಡ್ತಾ ಇರೋದು ಈಸಾರಿ ಬಿಜೆಪಿಯೇ. ಮೊದಲ ಹಂತ ಕಳೆದ ಕೂಡಲೇ ಉತ್ತರದ ಕಡೆಗೆ ಹೆಚ್ಚು ಗಮನ ಕೊಡಲಿಕ್ಕಾಗಿ ತಾತ್ಕಾಲಿಕವಾಗಿ ಹುಬ್ಬಳ್ಳಿಗೆ ಪಕ್ಷದ ಆಫೀಸು ಸ್ಥಳಾಂತರಗೊಳ್ತಾ ಇದೆ. ಕಾಕತಾಳೀಯವಾಗಿ, ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಮೊದಲ ಹಂತದ ಮತದಾನದ ದಿನವೇ ಕೋರ್ಟಿನಲ್ಲಿ ಸಿಡಿದ ಬಾಂಬು ಬೇರೇನು ಮಾಡದಿದ್ದರೂ ಜನತೆಯಲ್ಲಿ ಭಯವನ್ನಂತೂ ಖಂಡಿತಾ ಹುಟ್ಟಿಸಿದೆ. ಇಂತಹಾ ಸಮಯದಲ್ಲಿ ಭಯೋತ್ಪಾದನೆಯ ಕುರಿತ ಬಿಜೆಪಿಯೇ ಪರಿಹಾರ ಜಾಹೀರಾತು ಕೆಲವರಿಗಾದರೂ ಪರಿಹಾರ ಸೂಚಿಸಿದರೆ ಆಶ್ಚರ್ಯವಿಲ್ಲ. ಸರಿಯಾದ ಸಮಯಕ್ಕೆ ಸರಿಯಾದ ಜಾಹೀರಾತು.

++++++++++++++++

ಇನ್ನೊಂದು ನನಗೆ ಮಜಾ ಅನಿಸಿದ್ದು ಪ್ರಣಾಳಿಕೆಗಳು. ಸಿಕ್ಕಿದರೆ ಒಂದು ಸಲ ಎಲ್ಲಾ ಪಕ್ಷಗಳ ಪ್ರಣಾಳಿಕೆಗಳನ್ನೂ ತೆಗೆದು ನೋಡಿ, ನನ್ನ ಹಾಗೆಯೇ ನೀವೂ ನಗಬೇಕೋ ಅಳಬೇಕೋ ತಿಳಿಯದೆ ಕಂಗಾಲಾಗುತ್ತೀರಿ. ಒಬ್ಬರು ಕಡುಬಡವರಿಗೆ 3 ರೂಪಾಯಿಗೆ ಅಕ್ಕಿ ಕೊಟ್ಟರೆ ಇನ್ನೊಬ್ಬರು ಅದನ್ನು 2 ರೂಪಾಯಿಗೆ ಇಳಿಸುತ್ತಾರೆ. ಕಡುಬಡವರು ಅಂದರೆ ಯಾರು ಗೊತ್ತಾ... ತಿಂಗಳಿಗೆ 1000 ರೂಪಾಯಿಗಿಂತ ಕಡಿಮೆ ಆದಾಯ ಇರುವವರು - ದಿನಕ್ಕೆ 34 ರೂಪಾಯಿಗಿಂತ ಕಡಿಮೆ ಆದಾಯ ಇರುವವರು. ತಿಂಗಳಿಗೆ 1000 ರೂಪಾಯಿಗಳಿಗಿಂತ ನಿಮ್ಮ ಆದಾಯ ಹೆಚ್ಚಿದ್ದಲ್ಲಿ ನೀವು ಬಡತನದ ರೇಖೆಗಿಂತ ಮೇಲಿದ್ದೀರಿ ಅಂತ ಅರ್ಥ :) ಎಲ್ಲಾ ಪಕ್ಷಗಳೂ ಇದನ್ನು ಗಣನೆಗೆ ತೆಗೆದುಕೊಳ್ಳದೇ ಪ್ರಣಾಳಿಕೆ ರಚಿಸಿದರೆ, ಬಿಜೆಪಿ ಚೂರು ಜಾಣತನ ತೋರಿಸಿತು. ಕಡುಬಡವರ ಆದಾಯಮಿತಿಯನ್ನು ವರ್ಷಕ್ಕೆ 30,000ಕ್ಕೆ ಹೆಚ್ಚಿಸಿ, 30,000ದಿಂದ 60,000ದ ವರೆಗೆ ಆದಾಯವಿರುವವರನ್ನು ಬಡವರು ಅಂತ ವರ್ಗೀಕರಿಸುವ ಭರವಸೆ ನೀಡಿತು, ಪ್ರಣಾಳಿಕೆಯಲ್ಲಿ ಈ ಅಂಶವನ್ನು bold ಮಾಡಿ ಮೊದಲಿಗೇ ಹಾಕಿತು.ಆದರೆ ಅದ್ಯಾಕೋ ಏನೋ, ಇದನ್ನು ಹೆಚ್ಚಿನ ಮಾಧ್ಯಮಗಳು ಗುರುತಿಸಲೇ ಇಲ್ಲವಾಗಿ, ಇತರ ಅಂಶಗಳ ಬಗ್ಗೆಯೇ ಚರ್ಚೆ ಹೆಚ್ಚಾಯಿತು.

ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಯೋಜನೆ ಕಾಂಗ್ರೆಸ್-ದಾದರೆ, ಬಿಜೆಪಿ ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ತರಬೇತಿಯ ಜತೆಗೆ ತರಬೇತಿಭತ್ಯೆ (ಸ್ಟೈಫಂಡ್) ನೀಡುವ ಆಶ್ವಾಸನೆ. ಆದರೆ ಇದನ್ನು ಕೂಡ ಕೆಲವು ಮಾಧ್ಯಮಗಳು ನಿರುದ್ಯೋಗ ಭತ್ಯೆ ಅಂತ ವರದಿ ಮಾಡಿದ ಕಾರಣ ಜೆಡಿಎಸ್ ನಾಯಕರು ’ಯುವಕರನ್ನು ಸೋಮಾರಿಯಾಗಿಸುವ ಯೋಜನೆ ಅದು’ ಅಂತ ಎರಡೂ ಪಕ್ಷಗಳಿಗೂ ಸೇರಿಸಿ ಬೈದರು. ಹೀಗೆ ಬಿಜೆಪಿ ಧರ್ಮಕ್ಕೆ ಬೈಗಳು ತಿಂದಹಾಗಾಯಿತು.

ಕಾಂಗ್ರೆಸ್ ಮತ್ತು ಬಿಜೆಪಿ ಪ್ರಣಾಳಿಕೆಗಳಲ್ಲಿ ಇನ್ನೊಂದು ಗಮನ ಸೆಳೆದ ಅಂಶವೆಂದರೆ, ಪಂಪ್ ಸೆಟ್-ಗಳಿಗೆ ಉಚಿತ ವಿದ್ಯುತ್ ಪೂರೈಕೆ. ಇದಕ್ಕೆ ಜೆಡಿಎಸ್ ನಾಯಕರು, ’ಯೂನಿಟ್ಟಿಗೆ 7-8 ರೂಪಾಯಿ ಕೊಟ್ಟು ವಿದ್ಯುತ್ ಹೊರಗಿನಿಂದ ಖರೀದಿಸುವ ಪರಿಸ್ಥಿತಿ ಇರುವಾಗ ಅದು ಹೇಗೆ ಉಚಿತವಾಗಿ ವಿದ್ಯುತ್ ಕೊಡ್ತಾರೆ’ ಅಂತ ವಾಗ್ದಾಳಿ ನಡೆಸಿದರು.ಕೊನೆಗೆ ಜೆಡಿಎಸ್ ಪ್ರಣಾಳಿಕೆ ಬಿಡುಗಡೆಯಾದಾಗ ಅದರಲ್ಲೂ ಒಂದು ಆಫರ್ ಇತ್ತು, ಕಡುಬಡವರಿಗೆ ಉಚಿತವಾಗಿ ಗ್ಯಾಸ್ ಸಂಪರ್ಕದ ಜತೆಗೆ ಉಚಿತ ಸ್ಟವ್ ನೀಡುವ ಆಫರ್.

ನಮ್ಮ ಮನೆಯಲ್ಲಿ ಗ್ಯಾಸ್ ಬುಕ್ ಮಾಡಿ ಕಡಿಮೆಯೆಂದರೂ ಒಂದು ವಾರ ಕಾಯಬೇಕಾಗುತ್ತದೆ, ಇನ್ನು ಕೆಲ ವರ್ಷಗಳ ನಂತರ ಗ್ಯಾಸ್, ವಿದ್ಯುತ್ ಸಿಕ್ಕಾಪಟ್ಟೆ ದುಬಾರಿಯಾಗುವ ನಿರೀಕ್ಷೆ ಇದೆ, ಜಗತ್ತಿನಲ್ಲಿ ಕೆಲವುಕಡೆಯಾದರೂ alternative renewable energy sources ಹುಡುಕಾಟ ಆರಂಭವಾಗಿದೆ, ಹಾಗಿರುವಾಗ ನಾವು ಇರುವುದು ಯಾವ ಶತಮಾನದಲ್ಲಿ?

++++++++++++++++

ಇನ್ನೊಂದು ಖತರ್-ನಾಕ್ ಯೋಜನೆ ಕಂಡುಬಂದಿದ್ದು ಬಿಜೆಪಿ ಪ್ರಣಾಳಿಕೆಯಲ್ಲಿ. ನಮ್ಮದೇಶದಲ್ಲಿ ನೆಲವನ್ನು ಕೊಳ್ಳಬೇಕೆಂದರೆ land purchase policies ಸುಲಭವಾಗಿ ಬಿಡುವುದಿಲ್ಲ. ಕೃಷಿಗಾಗಿ ಭೂಮಿ ಕೊಳ್ಳುವವರಿಗೆ ಮಾತ್ರ ಸುಲಭವಾಗಿ ಭೂಮಿ ಸಿಗುವ ಕಾರಣ ಅಮಿತಾಭ್ ಬಚ್ಚನ್ ಕೂಡ ’ಕೃಷಿಕ’ ಆದದ್ದು ಇಂದು ಇತಿಹಾಸ. ಈ ಪಾಲಿಸಿಗೆ ತಿದ್ದುಪಡಿ ತಂದು ಯಾರು ಬೇಕಾದರೂ ಭೂಮಿ ಕೊಳ್ಳಲು ಅನುಕೂಲವಾಗುವಂತೆ ಮಾಡುವ ಭರವಸೆ ಬಿಜೆಪಿಯದು. ಮೇಲುನೋಟಕ್ಕೆ ಇದು ಎಲ್ಲರಿಗೂ (ಕೃಷಿಕರಲ್ಲದವರಿಗೆ) ಖುಷಿಕೊಡುವ ವಿಚಾರ. ಆದರೆ, ಈಗಾಗಲೇ ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ಬಿಸಿನೆಸ್-ನಿಂದಾಗಿ ಭೂಮಿಯ ದರ ಸಿಕ್ಕಾಪಟ್ಟೆ ಹೆಚ್ಚಾಗ್ತಿದೆ, ಕೃಷಿಭೂಮಿ ಕಡಿಮೆಯಾಗ್ತಿದೆ, ಆಹಾರ ಧಾನ್ಯ ಉತ್ಪಾದನೆ ಕಡಿಮೆಯಾಗ್ತಿದೆ, ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇವಾಗಲೇ ಇದೆ, ಕಾಡು ಕಡಿಮೆಯಾಗ್ತಿದೆ, ಮಳೆ ಕಡಿಮೆಯಾಗ್ತಿದೆ, ನೀರು ಕಡಿಮೆಯಾಗ್ತಿದೆ, ಕೆಲವು ಪ್ರದೇಶಗಳಲ್ಲಿ ಬರ ಇದೆ... ಹೀಗಿರುವಾಗ ಯಾರು ಬೇಕಾದರೂ ಭೂಮಿ ಕೊಳ್ಳಬಹುದು, ಏನು ಬೇಕಾದರೂ ಮಾಡಬಹುದು ಅಂತ ರೂಲ್ಸ್ ಬಂದ್ರೆ ಗತಿ ಏನು? ಮನೆಗಳ, ಅಪಾರ್ಟ್ಮೆಟುಗಳ contruction ಇನ್ನೂ ಹೆಚ್ಚಾಗ್ತವೆ, demand ಇದ್ದಾಗ ಬೆಲೆಯೂ ಹೆಚ್ಚಾಗ್ತದೆ,ಹ್ಾಗಾಗಿ ಮನೆ ಕಟ್ಟುವ ಸಾಮಗ್ರಿಗಳ ದರ ಕೂಡ ಹೆಚ್ಚಾಗೋದೆ... ಅದೂ, ಆಹಾರ ಸಾಮಗ್ರಿಗಳ ಬೆಲೆ ಹೆಚ್ಚಳಕ್ಕೆ, ಹೆಚ್ತಾ ಇರೋ ಮನೆಸಾಲ ಬಡ್ದಿದರ, ಮನೆಕಟ್ಟೋ ಖರ್ಚಿಗೆ ಇನ್ನೊಂದು ಪಕ್ಷವನ್ನು ಹೊಣೆಯಾಗಿಸಿ ಜಾಹೀರಾತು ಕೊಟ್ಟ ಪಕ್ಷದಿಂದಲೇ ಈ ಘೋಷಣೆ..! ಶಿವಶಿವಾ!

++++++++++++++++

ರಾಜಕಿಯ ಪಕ್ಷಗಳನ್ನ ಬೈದು ಏನು ಉಪಯೋಗ, ಇದು ಹೀಗೆಲ್ಲಾ ಇರ್ಲಿಕ್ಕೆ ನಾವು ನೀವೇ ಕಾರಣ. ಹೆಸರಿಗೆ ನಾಗರಿಕರಾದ ನಮಗೆ ಏನು ಬೇಕು ಅಂತ ನಮಗೇ ಗೊತ್ತಿಲ್ಲ. ಏನಿದೆ ಅಂತ ಸುಮ್ನೆ ನೋಡ್ತೀವಿ. ಇಷ್ಟ ಆದ್ರೆ ಓಕೆ. ಕಷ್ಟ ಆದ್ರೂ ಓಕೆ. ಸಹಿಸ್ಕೋತೀವಿ. ದೂರದೃಷ್ಟಿ ನಮ್ಮಲ್ಲಿ ಪ್ರತಿಯೊಬ್ಬರಲ್ಲಿ ಇದ್ರೂ ಅದು ಉಪಯೋಗಕ್ಕಿಲ್ಲದ ಹಾಗೆ ಆಗಿದೆ. ಎಲ್ಲಾ ಪಕ್ಷಗಳು ಹೇಳುವುದು ಹಸಿಹಸಿ ಸುಳ್ಳು ಅಂತ ಗೊತ್ತಿದ್ದೂ ನಾವೆಲ್ಲ ಸುಮ್ನಿರ್ತೀವಿ.

ಇದಕ್ಕೇನು ಪರಿಹಾರ ಇಲ್ವಾ?

Thursday, May 1, 2008

ಒಡೆದು ಬಿದ್ದ ಕೊಳಲು...

ಒಡೆದು ಬಿದ್ದ ಕೊಳಲು ನಾನು
ನಾದ ಬರದು ನನ್ನಲಿ
ವಿನೋದವಿರದು ನನ್ನಲಿ...

ಕಿವಿಯನೇಕೆ ತೆರೆಯುತಿರುವೆ
ಎದೆಯೊಳೇನ ಹುಡುಕುತಿರುವೆ
ದೊರೆಯದೇನು ನನ್ನಲಿ...
ದೊರೆಯದೇನು ನನ್ನಲಿ...
ದೊರೆಯದೇನು ನನ್ನಲಿ !

ನಲ್ಲೆ ಬಂದು ತುಟಿಗೆ ಕೊಳಲನೊತ್ತಿ ಉಸಿರ ಬಿಟ್ಟಳು...
ತನ್ನ ಒಲವಿನಿಂದ ದನಿಯ ಹರಿದು ಇಳಿಸಿ ಬಿಟ್ಟಳು...

ಬಣ್ಣ ಬಣ್ಣದೆಣಿಪ ಹಾರ ನಲ್ಲ ಚೆಲ್ಲಿ ಕೊಟ್ಟನು...
ಕೊಳಲು ಬೇಸರಾಯಿತೇನೊ
ಹೊಸ ಹಂಬಲವಾಯಿತೇನೊ
ಎದೆಯ ಗಾಯ ಮಾಯಿತೇನೊ
ಬಿಸುಟೆದ್ದಳು ಕೊಳಲನು...

ಒಡೆದು ಬಿದ್ದ ಕೊಳಲು ನಾನು
ನಾದ ಬರದು ನನ್ನಲಿ..
ವಿನೋದವಿರದು ನನ್ನಲಿ...

+++++++++++++++++++++++++++++++++++++++

ಸತತ ಏಳು ವರ್ಷ ಶಿರಸಿಯ ಗೆಳತಿ ಜ್ಯೋತಿಯ ಕೈಲಿ ಮತ್ತೆ ಮತ್ತೆ ಹಾಡಿಸಿಕೊಂಡು ಕೇಳುತ್ತಿದ್ದ ಹಾಡು... ಕೇಳುವುದು ಬಿಟ್ಟು ಹೆಚ್ಚು-ಕಡಿಮೆ 8 ವರ್ಷ ಆಗಿರಬೇಕೇನೋ? ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದಂತೆ ನೆನಪಾಯಿತು. ಯಾಕೋ ಮತ್ತೆ ಮತ್ತೆ ನೆನಪಾಗಿ ತುಂಬಾ ಕಾಡುತ್ತಿದೆ! ಕೆಲವು ಹಾಡುಗಳೇ ಹಾಗೆ, ಮರೆಯಲಾಗದ ಹಾಡುಗಳು... ಇದು ಬರೆದಿದ್ದು ಯಾರು ಅಂತ ಗೊತ್ತಿಲ್ಲ, ಭಾವಗೀತೆ, ಪೂರ್ತಿ ಇಲ್ಲ ಅನಿಸ್ತಿದೆ, ನಾನು ಬರೆದಿದ್ದರಲ್ಲಿ ತಪ್ಪುಗಳೂ ಇರಬಹುದು, ಸರಿಯಾದ version ಸಿಕ್ಕಿದ್ರೆ ಕೊಡಿ ಪ್ಲೀಸ್ :) ಕರೆದು ಕೂಡಿಸಿ ಹಾಡಿ ಕೇಳಿಸಿದರೆ ಇನ್ನೂ ಖುಷಿಯಾಗ್ತದೆ!

(ಇದರ ಹುಡುಕಾಟದಲ್ಲಿ ಗೂಗ್ಲ್ ಮಾಡಿದರೆ, ವಿಕ್ರಂ ಬ್ಲಾಗಲ್ಲಿ ಏನೋ ಬರೆದಿರುವ ಸುಳಿವು ಸಿಕ್ಕಿತು... ಚೆಕ್ ಮಾಡೋಣ ಅಂತ ಓಪನ್ ಮಾಡಿದರೆ, For invited readers only ಅಂತ ಬರ್ತಿದೆ! ಯಾರಾದ್ರು ಅದ್ರದ್ದು ಸ್ಕ್ರೀನ್ ಶಾಟ್ ಅಥವಾ ಕಾಪಿ ಕಳಿಸಿ ಪ್ಲೀಸ್...:) )

Sunday, March 23, 2008

ನೀವೇನಂತೀರಾ?

ಬ್ಲಾಗರ್ಸ್ ಮೀಟು ಕಳೆಯಿತು. ಎಲ್ಲಕ್ಕಿಂತ ಮುಖ್ಯವಾಗಿ, ಅಲ್ಲಿ ಮಾತಾಡಿದ ಹೆಚ್ಚಿನವರು ಹೇಳಿದ್ದು, ಬ್ಲಾಗುಗಳು ಭಾವನೆಗಳ ತೀರದಿಂದಾಚೆಗೆ ಕಾಲಿಟ್ಟು ಗಂಭೀರ ವಿಚಾರಗಳ ಕುರಿತು ಮಾತಾಡಬೇಕು, ಮಾಹಿತಿ ನೀಡುವಂತಹ ಬರಹಗಳು ಹೆಚ್ಚಬೇಕು ಅಂತ. ಈ ಹಿನ್ನೆಲೆಯಲ್ಲಿ ಈ ಬರಹ.

++++++++++

ನಾನು ಬ್ಲಾಗ್ ಪ್ರಪಂಚಕ್ಕೆ ಕಾಲಿಟ್ಟು ಹತ್ತಿರ ಹತ್ತಿರ ಎರಡು ವರ್ಷಗಳಾಯಿತು. ನನಗೆ ಅನಿಸಿದ ಗಂಭೀರ ವಿಚಾರಗಳನ್ನು ಮಾತ್ರ ಬ್ಲಾಗಿನಲ್ಲಿ ಬರೆಯುತ್ತಿದ್ದೆ. ಆಗ ನನಗೆ ಇಂಟರ್ನೆಟ್ಟಿನಲ್ಲಿ ಕನ್ನಡ ಟೈಪು ಮಾಡಬಹುದು ಎಂದಾಗಲೀ, ಕನ್ನಡ ಬ್ಲಾಗರುಗಳ ಸಮುದಾಯವೊಂದು ರೂಪುಗೊಳ್ಳುತ್ತಿರುವುದಾಗಲೀ ಯಾವುದೂ ತಿಳಿದಿರಲಿಲ್ಲ. ನನ್ನ ಬರಹಗಳಿಗೆ ಸಿಗುತ್ತಿದ್ದ ಓದುಗರು ಮತ್ತು ಪ್ರೋತ್ಸಾಹ ಅಷ್ಟೇನಿರಲಿಲ್ಲ. ಬರೆಯಲೇಬೇಕು ಅನಿಸಿದಾಗ ಮಾತ್ರ ಮನಸಿಟ್ಟು ಬರೆಯುತ್ತಿದ್ದೆ.

ಒಂದು ಸಲ ಏನೂ ಬರೆಯದೆಯೇ ತಿಂಗಳುಗಟ್ಟಲೆ ಕಾಲ ಬ್ಲಾಗು ತೆಪ್ಪಗಿತ್ತು. ಹಾಗಿದ್ದಾಗ ರಾಧಾಕೃಷ್ಣ ನನಗೆ ಸಿಂಧು ಮತ್ತು ಶ್ರೀಮಾತಾರ ಬ್ಲಾಗುಗಳನ್ನು ತೋರಿಸಿದ. ಹಲವು ದಿನ ಅವುಗಳನ್ನು ನೋಡಿದೆ. ಅವುಗಳಲ್ಲಿದ್ದ ಲಿಂಕುಗಳಿಂದ ಇನ್ನಿತರ ಹಲವಾರು ಬ್ಲಾಗುಗಳಿಗೆ ಹೋದೆ. ಹೊಸ ಲೋಕವಿತ್ತು ಅಲ್ಲಿ. ಕೊನೆಗೆ ನಾನೂ ಕನ್ನಡ ಕುಟ್ಟುವುದು ಹೇಗೆ ಅಂತ ತಿಳಿದುಕೊಂಡೆ, ಹಲವರಿಗೆ ಅನಿಸಿದ್ದನ್ನು ಕಮೆಂಟು ಮಾಡಿ ಕುಟ್ಟಿದೆ. ನಾನು ಕನ್ನಡ ಕಲಿತಿದ್ದನ್ನು ಜಗತ್ತಿಗೆ ತಿಳಿಸಲಿಕ್ಕಾಗಿ ಮನಸು ಮಾತಾಡ್ತಿದೆ ಅಂತ ಶುರು ಮಾಡಿದೆ.

ಇಷ್ಟೆಲ್ಲ ಆದ ಮೇಲೆ ಒಂದು ದಿನ ಕುಳಿತು ನನ್ನ ಹಳೆಯ ಬ್ಲಾಗು ನೋಡಿದರೆ ಅದರಲ್ಲಿ ನನಗೆ ಬರುವ ಹರಕು ಮುರುಕು ಇಂಗ್ಲಿಷಿನಲ್ಲಿ ಬರೆದ, ನಾನು ಇಂಟರ್-ನೆಟ್ಟಿಗಾಗಿ ಟಾಟಾ ಇಂಡಿಕಾಂ ಮೊರೆಹೋಗಿ ಪಟ್ಟ ಕಷ್ಟಕೋಟಲೆಗಳಿಂದ ಹಿಡಿದು, ರೇಡಿಯೋ-ಟಿವಿ ಜಾಹೀರಾತು ಜಗತ್ತಿನ ಕುರಿತು, ನನ್ನ ಮನೆಯೆದುರು ದಿನಾ ಬರುವ ಮಾಟ ತೆಗೆಯುವವಳ ವರೆಗೆ ಒಂದಿಷ್ಟು ವಿಚಾರಗಳ ಕುರಿತು ಬರಹಗಳಿದ್ದವು. ಅವೆಲ್ಲವೂ ನನಗೆ ಆಗ ಮುಖ್ಯವಾಹಿನಿಯಲ್ಲಿದ್ದ ಬ್ಲಾಗುಗಳಿಗಿಂತ ತುಂಬಾ ಭಿನ್ನವಾಗಿಯೂ ಜಗತ್ತಿನ ಕಷ್ಟಗಳನ್ನೆಲ್ಲಾ ನಾನೊಬ್ಬಳೇ ತಲೆಮೇಲೆ ಹೊತ್ತಿದ್ದೇನೆ ಅನ್ನುವಂತಹ ಭಾವನೆ ಬರುವಂತಹವಾಗಿಯೂ ಕಾಣತೊಡಗಿದವು. ಬಹುಶ: ಇವೆಲ್ಲ ಬ್ಲಾಗಿನಲ್ಲಿ ಹೇಳಿಕೊಳ್ಳುವಂತಹವಲ್ಲ ಅನಿಸಿತು. ಸರಿ, ನಿರ್ದಾಕ್ಷಿಣ್ಯವಾಗಿ ಆ ಬ್ಲಾಗ್ ಡಿಲೀಟ್ ಮಾಡಿದೆ. ಅದಕ್ಕೆ ರೆಗ್ಯುಲರ್ ಆಗಿ ಬಂದು ಓದಿ ಹೋಗುತ್ತಿದ್ದಿದ್ದು ಭಾಗವತರು ಮಾತ್ರ ಅಂತ ನೆನಪು. ನಾನು ಮಾತ್ರ ನನಗೆ ಗೊತ್ತಿರುವುದನ್ನು ನಾನು ಬರೆದು ಕಡಿದು ಕಟ್ಟೆ ಹಾಕುವುದು ಏನೂ ಇಲ್ಲವೆಂದುಕೊಂಡೆ.

++++++++++

ಈಗ ಅನಿಸುತ್ತಿದೆ, ಬಹುಶ ಆ ಕಾಲಕ್ಕೆ ಟ್ರೆಂಡ್ ಹಾಗೆ ಇತ್ತು ಅಂತ. ಆದರೆ ಈ ಕಾಲದಲ್ಲಿ ಮಾಹಿತಿಯುಕ್ತ ಅಥವಾ ಯೋಚನೆಗೆ ಹಚ್ಚುವ ಬರಹಗಳಿಗೆ ಪ್ರೋತ್ಸಾಹ ಇದೆಯೇನೋ ಅಂತ ಮೊನ್ನೆ ಮೊನ್ನೆ ಟೀನಾ, ಚೇತನಾ ಬ್ಲಾಗುಗಳಲ್ಲಿ ವಿಹರಿಸುತ್ತಿದ್ದಾಗ ಅನಿಸಿತು. ಏನು ಮಾಡಬಹುದು? ಅಂತ ಟೀನಾ ಕೇಳಿಕೊಂಡಿದ್ದಾರೆ. ಮಹಿಳಾದಿನ ಮತ್ತು ಅಮೃತಾಳ ಬಗೆಗೆ ಚೇತನಾ ಬರೆದಿದ್ದು ಕೂಡ ಎಲ್ಲರನ್ನೂ ಯೋಚನೆಗೆ ಹಚ್ಚುವ ವಿಷಯವನ್ನೇ.

++++++++++

ನಿಜಕ್ಕೂ ಬ್ಲಾಗಿಂಗ್-ನಲ್ಲಿ ಈಗ ಹೊಸ ಅಧ್ಯಾಯ ಪ್ರಾರಂಭ ಆಗಿದೆ, ಇನ್ನೂ ಏನೇನೋ ಆಗಬೇಕಿದೆ. ಶ್ಯಾಮಿ ಸರ್ ಹೇಳಿದ ಹಾಗೆ ಕ್ಯಾನ್ವಾಸಿನಲ್ಲಿ ಬಣ್ಣ ಚೆಲ್ಲಿದ ಹಾಗಿನ ಬರಹಗಳ ಜತೆಗೆ, ಬರಹಗಾರರಿಗಿರಬೇಕಾದ ಸೂಕ್ಷ್ಮತೆಯನ್ನು ರೂಢಿಸಿಕೊಂಡು ಉತ್ತಮವಾಗಿ ಬರೆಯುವ ಯತ್ನಗಳು ಕೂಡ ಹಲವಾರು. ಮಾಹಿತಿ ನೀಡುವ, ಚಿಂತನೆಗೆ ಹಚ್ಚುವ ಬರಹಗಳೂ ಹೆಚ್ಚುತ್ತಿವೆ. ಅದಕ್ಕೆ ಪ್ರತಿಕ್ರಿಯಿಸುವವರೂ ಹೆಚ್ಚುತ್ತಿದ್ದಾರೆ.

ಆದರೆ, ಯಾವುದೇ ಸೆನ್ಸೇಶನಲ್ ವಿಚಾರಗಳ ಹಂಗಿಲ್ಲದೆ, ಬರೆಯಬೇಕೆಂಬ ಪ್ರೀತಿಗೆ ಮತ್ತು ಹಂಚಿಕೊಳ್ಳಬೇಕೆಂಬ ತುಡಿತಕ್ಕೆ ಶರಣಾಗಿ ಬರೆಯುವ ಬರಹಗಳು ಹೆಚ್ಚಬೇಕಿದೆ. ಇದು ಸಾಧ್ಯವಾಗುವುದು ಸಂಖ್ಯೆಯಲ್ಲಿ ೩೫೦ಕ್ಕೂ ಹೆಚ್ಚಿರುವ ಬ್ಲಾಗರುಗಳ, ಮತ್ತು ಕಮೆಂಟು ಹಾಕಿ ಚರ್ಚಿಸುವ, ಪ್ರೋತ್ಸಾಹಿಸುವ, ಅಥವಾ ಭೇಟಿಕೊಟ್ಟು ಓದುವ- ಆದರೆ ಏನೂ ಹೇಳಲು ಇಷ್ಟ ಪಡದ ಇನ್ನೆಷ್ಟೋ ಅಂತರ್ಜಾಲಿ ಕನ್ನಡಿಗರ ಕ್ರಿಯಾಶೀಲ ಭಾಗವಹಿಸುವಿಕೆಯಿಂದ ಮಾತ್ರ. ಅದು ಆಗಬೇಕಿದೆ.

++++++++++

ಇಷ್ಟು ಮಾತ್ರವಲ್ಲ. ಬರಹದ ತೂಕದ ಮೇಲೆ ಬರಹಗಾರನನ್ನು ಅಥವಾ ಬರಹಗಾರ್ತಿಯನ್ನು ಅಳೆಯುವ ಕೆಲಸ ಆಗಬೇಕು. ಬರಹಗಾರ ಅಥವಾ ಬರಹಗಾರ್ತಿಯ ಹೆಸರಿನ ಮೇಲೆ ಬರಹವನ್ನು ಅಳೆಯುವುದು ತಪ್ಪು ಅಂತ ಹೇಳ್ತಿಲ್ಲ ನಾನು, ಆದ್ರೆ ಸಹೃದಯತೆಯ ಮಟ್ಟ ನಮ್ಮಲ್ಲಿ ಇನ್ನೂ ಹೆಚ್ಚಬೇಕಿದೆ ಅಂತ ನಂಗೆ ಅನಿಸ್ತಿದೆ.

++++++++++

ಕನ್ನಡ ಬ್ಲಾಗುಗಳ ಸಂಖ್ಯೆ ೩೫೦ ದಾಟಿದೆ ಅಂತ ಮೊನ್ನೆ ಸುಶ್ರುತ ಮಾಡಿದ ಪಟ್ಟಿ ನೋಡುವಾಗ ತಿಳಿಯಿತು. ಆ ಪಟ್ಟಿಯಿಂದಲೂ ಅನೇಕ ಬ್ಲಾಗುಗಳು ಮಿಸ್ ಆಗಿವೆ. ಅವುಗಳಲ್ಲಿ ಮುಕ್ಕಾಲುಪಾಲು ನಾನು ನೋಡೇ ಇರಲಿಲ್ಲ, ಅಷ್ಟು ಅಗಾಧವಾಗಿ ಇಂದು ಕನ್ನಡದಲ್ಲಿ ಬ್ಲಾಗಿಂಗ್ ಬೆಳೆದಿದೆ. ಇಷ್ಟು ಜನರಲ್ಲಿ ಅರ್ಧ ಸೇರ್ಕೊಂಡ್ರೂ ಏನಾದ್ರೂ ಒಳ್ಳೆ ಕೆಲಸ ಮಾಡಬಹುದಲ್ವಾ? ಕಥೆ-ಕವನ ಬರೆಯುವುದು ಒಳ್ಳೆಯದು ಅನ್ನುವುದು ನಿಜ. ಆದರೆ ಬರೀ ಬರೆಯುತ್ತಾ ಕೂತರೆ ಅದು ಥಿಯರಿಯ ಹಂತದಲ್ಲಿಯೇ ಕೊನೆಯಾಗುವ ಅಪಾಯ ಇದೆಯೇನೋ ಅಂತ ಇತ್ತೀಚೆಗೆ ನಂಗೆ ಅನಿಸ್ತಿದೆ... ಬರಹಕ್ಕೆ ಉದ್ದೇಶ ಇರಬೇಕೆ ಇರಬೇಡವೆ ಅಂತ ನನ್ನಲ್ಲೇ ಲೆಕ್ಕಾಚಾರ ಶುರುವಾಗಿದೆ! ನೀವೇನಂತೀರಾ?

Saturday, January 26, 2008

ಈ ಕನಸಿಗೆ ನೂರು ತುಂಬಿತು...!



ನಮ್ಮೆಲ್ಲರ ಕನಸಿಗೆ ಆದಿತ್ಯ ಬಣ್ಣ ಹಚ್ಚುತ್ತಿದ್ದಾಗ ತೆಗೆದ ಚಿತ್ರ...
========================================

ಜನವರಿ ೨೯ಕ್ಕೆ ಈ ಕನಸಿಗೆ ನೂರು ತುಂಬಿತು...!

Wednesday, August 8, 2007

ಬಣ್ಣ ಹಚ್ಚುವವರಿಗೆ ಯಾರು ಬರೆದ ಚಿತ್ರವಾದರೇನು...

ಬಣ್ಣ ಹಚ್ಚುವವರಿಗೆ ಯಾರು ಬರೆದ ಚಿತ್ರವಾದರೇನು, ಬಣ್ಣ ಹಚ್ಚುವುದೇ ಕೆಲಸವಾಗಿರುವಾಗ? ಕಥೆ ಹೇಳುವವರಿಗೆ ಎಲ್ಲಾದರೇನು, ಕೇಳಲು ಜನವಿದ್ದರಾಯಿತು. ಬದುಕಿಗದ್ದಿದ ಮನಸಿನ ಕುಂಚ ತನಗೆ ಸಿಕ್ಕ ಕ್ಯಾನ್ವಾಸಿನಲ್ಲಿ ಬಣ್ಣ ತುಂಬಹೊರಟಿದೆ, ಮತ್ತೆ ತನಗೆ ಬೇಕಾದ ಕ್ಯಾನ್ವಾಸು ಮನಸಿಗೆ ಸಿಗುವ ತನಕ ಕನಸು ರೆಕ್ಕೆ ಮುಚ್ಚಿರುತ್ತದೆ, ಬ್ಲಾಗು ತಣ್ಣಗಿರುತ್ತದೆ.

ತಾನೇ ಕಥೆಯಾಗಹೊರಟ ಬದುಕಿಗೆ ಕಥೆ ಬರೆಯುವ ಹುಚ್ಚು... ಇನ್ನೊಬ್ಬರ ಕಥೆಯಾಳಕ್ಕಿಳಿಯುವ ಹುಚ್ಚು. ಹಾಗೆ ನೋಡಿದರೆ ಬದುಕೇ ದೊಡ್ಡ ಕ್ಯಾನ್ವಾಸು... ಇದರಲ್ಲಿ ಬ್ಲಾಗ್ ಪ್ರಪಂಚ ಬಿಡಿಸಿದ ಚಿತ್ರಗಳು ಹಲವು, ನೀಡಿದ ನೋಟಗಳು ನೂರು, ಪರಿಚಯವಾದ ಸಹಪಯಣಿಗರು ಹಲವರು. ಕಲ್ಪನೆಯ ಲೋಕದಲ್ಲಿ ಗರಿಬಿಚ್ಚಿ ಹಾರುವಾಗ ಹಕ್ಕಿ, ಕನಸು, ಚಂದ್ರ, ಬೇಸರ, ಮೆಸೇಜು, ನೆನಪು, ಕುಡುಕ, ಕರಿಪರದೆ, ಚಿನ್ನು, ಮೀನು ಇತ್ಯಾದಿ ಜೀವತಾಳಿದ್ದವು.. ಅಲ್ಲೊಂದು ಇಲ್ಲೊಂದು ಹನಿಗಳು, ಹರಟೆಗಳು ಹುಟ್ಟಿಕೊಂಡಿದ್ದವು.

ರಶೀದ್ ಅಂಕಲ್-ರ ಟ್ರೇಡ್-ಮಾರ್ಕ್ ಪದ್ಯಚಿತ್ರಗಳು, ಜೋಗಿಯವರ ಅದ್ಭುತ ಕಥೆಗಳು, ಮಯ್ಯರ(ಭಾಗವತ್ರ) ಕುಂದಾಪ್ರ ಕನ್ನಡ ಕ್ಲಾಸು, ಸಿಂಧುವಿನ ಭಾವಯಾನದ ಬರಹಗಳು, ಹತ್ವಾರರ ಮಾಯಾಜಗತ್ತು, ತುಳಸೀವನ, ಕುಂಟಿನಿಯವರ ನಾಲ್ಕೇ ನಾಲ್ಕು ಸಾಲುಗಳು, ಸತೀಶರ ಎನ್ನಾರೈ ಕನ್ನಡಿಗನ ಮನದಾಳದ ಹಲುಬುಗಳು, ಈಗಷ್ಟೆ ಮತ್ತೆ ಚಿಗುರಿಕೊಂಡ ಇಸ್ಮಾಯಿಲ್, ನಾಡಿಗ್ ಮತ್ತು ಪಿಚ್ಚರ್ ಬ್ಲಾಗ್ಸ್ ಮತ್ತು ಹಲವಾರು ಬ್ಲಾಗರ್ಸ್ ಬರೆಯುವ ನೂರಾರು ಭರವಸೆ ಮೂಡಿಸುವ ಬರಹಗಳು - ಎಲ್ಲಾ ಇಷ್ಟಪಟ್ಟು ಓದುತ್ತಿದ್ದೆ, ಎಲ್ಲಾದರಿಂದಲೂ ಸ್ವಲ್ಪ ಸಮಯ ನಾನು ದೂರ.

ಮತ್ತೆ ಸಮಯ ಸಿಕ್ಕಾಗ, ಕನಸು ಕರೆದಾಗ, ಕಲ್ಪನೆ ಪದಗಳಲ್ಲಿ ಗೂಡುಕಟ್ಟಿಕೊಳ್ಳುತ್ತ ಕಾಯುವಾಗ, ಇಲ್ಲಿ ಬರುವೆ, ಮನಸಿನ ಮಾತುಗಳನ್ನು ಹಂಚಿಕೊಳ್ಳಲು. ಅಲ್ಲೀತನಕ ನನ್ನ ಕೊರೆತಪುರಾಣದಿಂದ ಮುಕ್ತಿ ಸಿಕ್ಕಿತೆಂದು, ಒಂದು ಬ್ಲಾಗು ಓದುವ ಕಷ್ಟ ಕಡಿಮೆಯಾಯಿತೆಂದು ಖುಷಿ ಪಡಿ :) ಆಮೇಲೆ ಇದ್ದೇ ಇದೆ!!!

Tuesday, June 5, 2007

ಹೊಸ ಕನಸು ಹುಟ್ಟಿದೆ!!!

ಈ ಕನಸಿಗೆ ೨೦ ದಿನ ತುಂಬಿತು. ೪೦೦ಕ್ಕೂ ಹೆಚ್ಚು ಹಿಟ್ಟುಗಳನ್ನು ದಾಖಲಿಸಿಕೊಂಡು ನಾಗಾಲೋಟದಲ್ಲಿ ಸಾಗುತ್ತಿರುವ ಈ ಕನಸನ್ನು ಕಂಡರೆ (ಸ್ವಲ್ಪ) ಖುಷಿಯಾಗುತ್ತದೆ!

ಈ ಕನಸಿನ ಹೆಸರು ಚಿತ್ರಕವನ ...

ಜನ ಯಾಕೆ ಬ್ಲಾಗ್ ಬರೆಯುತ್ತಾರೆ?

ಬ್ಲಾಗ್ ಬರೆಯುವ ಜನ ಎಂಥವರಿರುತ್ತಾರೆ? ಅವರಿಗೇನಿಷ್ಟವಾಗುತ್ತದೆ? ಯಾಕಿಷ್ಟವಾಗುತ್ತದೆ?

ಇವೆಲ್ಲ ಪ್ರಶ್ನೆಗಳಿಗೆ ಉತ್ತರದ ಹುಡುಕಾಟದ ಹಾದಿಯಲ್ಲಿ ಸುಮ್ಮನೇ ಹುಟ್ಟಿಕೊಂಡ ಕೂಸು ಚಿತ್ರಕವನ.

ಇಲ್ಲಿ ಪ್ರತಿವಾರ ಒಂದೊಂದು ಚಿತ್ರವನ್ನು ಹಾಕಲಾಗುತ್ತದೆ. ಚಿತ್ರಗಳು ಇದರ ನಿರ್ವಹಣ ತಂಡದ ಸದಸ್ಯರು ಸೆರೆಹಿಡಿದವಾಗಿರುತ್ತವೆ/ ಸೃಷ್ಟಿಸಿದವಾಗಿರುತ್ತವೆ. ಈ ಚಿತ್ರದ ಮೇಲೆ ಬರಹ/ ಕವನಗಳನ್ನು ಬರೆದು ಹಾಕುವ ಅವಕಾಶ ಇಲ್ಲಿ ಭೇಟಿ ನೀಡುವವರಿಗಿದೆ.


ವಿವಿಧ ರೀತಿಯ ದೃಷ್ಟಿಕೋನಗಳು... ಒಂದೇ ದೃಷ್ಟಿಕೋನದ ಬೇರೆ ಬೇರೆ ರೀತಿಯ ಅಭಿವ್ಯಕ್ತಿಗಳು... ವಿವಿಧ ಭಾಷೆಗಳು... ವಿವಿಧ ಶೈಲಿಗಳು... ವಿವಿಧ ಪೂರ್ವಾಗ್ರಹಗಳು... ವಿಭಿನ್ನ ನೋಟಗಳು.. ಇವೆಲ್ಲವನ್ನೂ ಸೆರೆಹಿಡಿಯುವ ಒಂದು ಯತ್ನ ಚಿತ್ರಕವನ.


**********


ಮೊದಲ ಎರಡು ವಾರ ಈ ಮಗುವಿಗೆ ಅಂಗಿ ಹೊಲಿಸಿ ತೊಡಿಸಿ ಅಲಂಕರಿಸುವುದರಲ್ಲಿ ಕಳೆಯಿತು... ಬೇರೆ ಬೇರೆ ಲೇಔಟ್-ಗಳು, ಬಣ್ಣಗಳು...


ಬಂದು ಹೋದವರ ಲೆಕ್ಕವಿಡಲು ಇಲ್ಲಿರಿಸಿರುವ ಲೆಕ್ಕಿಗ ಹೇಳುತ್ತಾನೆ, ದಿನಕ್ಕೆ ಸರಾಸರಿ ೨೦ ಜನ ಇಲ್ಲಿ ಬಂದು ಹೋಗ್ತಾರಂತೆ...(ಅವನಿಗೆ ನಿರ್ವಾಹಕರೈವರನ್ನು ಲೆಕ್ಕಿಸದಿರಲು ಸೂಚಿಸಲಾಗಿದೆ).

ಬಂದು ಹೋಗುವವರು ಅಷ್ಟಿರುವಾಗ, ಕವನಗಳ ಸಂಖ್ಯೆ ಕಡಿಮೆಯೆನಿಸುತ್ತಿದೆಯಲ್ಲ? ಇದರ ಮರ್ಮವೇನೆಂದು ತಿಳಿಯಲಿಲ್ಲ. ಅದಕ್ಕೆ, ಭೇಟಿಗರಿಗೆ ಅನಿಸಿದ್ದು ಹೇಳಲು, ಸಲಹೆ-ಸಂದೇಶ- ಅಭಿವ್ಯಕ್ತಿಗಳಿಗೋಸ್ಕರವೇ ಒಂದು ಮಾಧ್ಯಮವೂ ಇಲ್ಲಿ ಹಾಕಿದ್ದಾಗಿದೆ...

ಹಲವು ಗೆಳೆಯ-ಗೆಳೆತಿಯರು ಬೆನ್ನು ತಟ್ಟಿ ಒಳ್ಳೆ ಪ್ರಯತ್ನವೆಂದರು.. ಇನ್ನು ಹಲವರು ಸಾವಿರ ಬ್ಲಾಗುಗಳಲ್ಲಿ ಇದೂ ಒಂದಾಗಬಹುದೆಂಬ ಆತಂಕ ತೋರಿಸಿದರು...

ಚಿತ್ರಕವನ ದ ನಿರ್ವಹಣ ತಂಡದ ಸದಸ್ಯರು ಯಾರೂ ಇಲ್ಲಿಯವರೆಗೆ ಒಬ್ಬರು ಇನ್ನೊಬ್ಬರನ್ನು ಭೇಟಿಯಾಗಿಲ್ಲದಿರುವುದು ಒಂದು ವಿಶೇಷ. ಅನಿಕೇತನ್ ಟೋಕಿಯೋದಲ್ಲಿದ್ದರೆ, ಭಾಗವತ ಅಮೆರಿಕಾದಲ್ಲಿ. ಕಿಶೋರ್ ಉತ್ತರಪ್ರದೇಶದ ವಾರಣಾಸಿಯಲ್ಲಿದ್ದರೆ, ಶ್ರೀನಿಧಿ ಮತ್ತು ನಾನು ಬೆಂಗಳೂರಿನಲ್ಲಿ.

ಸಂಪರ್ಕದಲ್ಲಿ ಅವಾಗಾವಾಗ ಉಂಟಾಗುವ ವ್ಯತ್ಯಯ, ಭೌಗೋಳಿಕವಾಗಿ ಇರುವ ದೂರ - ನಮ್ಮ ಉತ್ಸಾಹಕ್ಕೆ ಭಂಗ ತಂದಿಲ್ಲ. ಕನಸು ಕಟ್ಟುವ ಹೊಸ ಉತ್ಸಾಹದಿಂದ ಹೊರಟಿದ್ದೇವೆ.

ದಿನದಿನಕ್ಕೂ ಈ ಕನಸು ಬೆಳೆಯುತ್ತಾ ಹೋಗಬೇಕು...

ಬೆಳೆಯುತ್ತದೆ ಕೂಡಾ...
.
.

Sunday, May 27, 2007

ಅವರವರ ಭಾವಕ್ಕೆ...?

ದಿನಾ ಬೆಳಿಗ್ಗೆ ಈ ಹೆಗ್ಗಣ ನನ್ನ ಕಣ್ಣಿಗೆ ಬೀಳುತ್ತದೆ.

ತನ್ನ ಬಿಲದಿಂದ ಮೆಲ್ಲ ಹೊರಗಿಣುಕಿ ರಸ್ತೆಯುದ್ದಕ್ಕೂ ನೋಡುತ್ತದೆ.

ಬೇಗನೆದ್ದು ಕೆಲಸಕ್ಕೆ ಹೋಗುವವರು, ಪೇಪರ್ ಹಾಕುವ ಹುಡುಗರು, ಕೊಳವೆ ಬಾವಿಯಿಂದ ನೀರು ಹಿಡಿಯಲು ಓಡಾಡುವವರು ಬಿಟ್ಟರೆ ಬೇರ್ಯಾರೂ ಇರುವುದಿಲ್ಲ.

ಮತ್ತು ಇವರೆಲ್ಲ ಹೆಗ್ಗಣ ದಿನಾ ನೋಡುವವರೇ. ಅವರಿದ್ದರೆ ಹೆಗ್ಗಣ ಅಷ್ಟು ಕೇರ್ ಮಾಡುವುದಿಲ್ಲ. ಅಪರಿಚಿತರ್ಯಾರೂ ಇಲ್ಲವೆಂದು ಖಚಿತ ಪಡಿಸಿಕೊಂಡು ತನ್ನ ಬಿಲದಾಚೆಗೆ ಕಾಲಿಡುತ್ತದೆ.

ನಂತರ ತನ್ನದೇ ರಾಜ್ಯವಿದು ಎನ್ನುವಂತೆ ಅತ್ತಿತ್ತ ಓಡಾಡುತ್ತದೆ.

ನೂರು ಫೀಟ್ ಉದ್ದಕ್ಕೆ ರಸ್ತೆಯ ಇಕ್ಕೆಲಗಳಲ್ಲಿರುವ ಮನೆಗಳ ಬದಿಯಲ್ಲಿ ತನಗೆ ಬೇಕಾದುದು ಆರಿಸಿಕೊಳ್ಳುತ್ತದೆ. ಮತ್ತೆ ಭಕ್ತಿಯಿಂದ, ಇದು ತನ್ನ ದಿನ ನಿತ್ಯದ ಕೆಲಸವೋ ಎಂಬಂತೆ ತಿನ್ನುತ್ತದೆ.

ಆ ತಿನ್ನುವ ಕೆಲಸದಲ್ಲಿ ನನಗೆ ಹಸಿವು ಕಾಣುವುದೇ ಇಲ್ಲ.

ನನಗೆ ಈ ಹೆಗ್ಗಣ, ಆ ರಸ್ತೆಯ ಶುಚಿತ್ವದ ಜವಾಬ್ದಾರಿ ಹೊತ್ತ ಜಾಡಮಾಲಿಯ ಹಾಗೆ ಕಾಣುತ್ತದೆ.

ಅದೆಂದೂ ಇದೇ ರಸ್ತೆಯ ಬೇರೆ ಹೆಗ್ಗಣಗಳ ಜತೆ ಬೆರೆತುದು ನಾನು ನೋಡಿಯೇ ಇಲ್ಲ.

ಬೇರೆ ಹೆಗ್ಗಣಗಳು ಸಮಯದ ಪರಿವೆಯೇ ಇಲ್ಲದೆ ಎಲ್ಲಂದರಲ್ಲಿ ಸುತ್ತಾಡುತ್ತವೆ. ಈ ಹೆಗ್ಗಣ ಹಾಗಲ್ಲ. ಟೈಮ್ ಟೇಬಲ್ ನಿಯತ್ತಾಗಿ ಕಾಪಾಡಿಕೊಳ್ಳುತ್ತದೆ.

ಬಹಳಷ್ಟು ಸಲ ಬೇರೆ ಬೇರೆ ಹೆಗ್ಗಣಗಳು ರಸ್ತೆಯಲ್ಲಿ ಗಾಡಿಗಳ ಚಕ್ರದಡಿ ಸಿಕ್ಕಿ ಅಪ್ಪಚ್ಚಿಯಾಗಿ, ಆಮೇಲೆ ಕಾಗೆಗಳಿಗೆ ಆಹಾರವಾದುದು ಕಣ್ಣಾರೆ ನೋಡಿದ್ದೇನೆ. ಕಣ್ಣು ಮುಚ್ಚಿಕೊಳ್ಳುತ್ತಲೇ, ಆ ಹೆಣ ಈ ಹೆಗ್ಗಣದ್ದಾಗಿರದಿರಲಿ ಅಂತ ಪ್ರಾರ್ಥಿಸಿದ್ದೇನೆ.

ಮಾರನೇ ದಿನ ಎಂದಿನಂತೆಯೇ ಬಿಲದಿಂದ ಹೊರಗೆ ಬಂದು ಓಡಾಡುವ ಹೆಗ್ಗಣಕ್ಕಾಗಿ ಕಾದು ಕುಳಿತು ಅದನ್ನು ನೋಡಿ ಸಂತಸ ಪಟ್ಟಿದ್ದೇನೆ.

ಅದು ರಸ್ತೆಯಲ್ಲಿ ತಿರುಗಾಡುವ ಹೊತ್ತು ಏನೆಂಬುದು ನನಗೆ ನಿಖರವಾಗಿ ಗೊತ್ತು.
ಅಷ್ಟು ಹೊತ್ತಿನ ನಂತರ ಅದು ಅದರ ಬಿಲದೊಳಗೆಯೇ ಇರುತ್ತದೆಯೆ ಅಥವಾ ಇನ್ನೆಲ್ಲಿಯಾದರೂ ಹೋಗುತ್ತದೆಯೇ ಅನ್ನುವುದು ನನ್ನ ಪಾಲಿಗೆ ರಹಸ್ಯ.

ಹೆಗ್ಗಣಕ್ಕೆ ಎಷ್ಟು ನಾಚಿಕೆ ಅಂದರೆ, ನಾನು ಕ್ಯಾಮರಾ ಹಿಡಿದು ಕಾಯುತ್ತಿದ್ದರೆ ಅದು ಹೇಗೋ ಅದಕ್ಕೆ ಗೊತ್ತಾಗಿಬಿಡುತ್ತದೆ. ಹೊರಗೆ ಬರುವುದೇ ಇಲ್ಲ...
ಅಥವಾ, ಪಬ್ಲಿಸಿಟಿ ಬೇಡ ಎಂಬ ಇರಾದೆಯೋ ಏನೋ? ನನಗೆ ಗೊತ್ತಿಲ್ಲ.

ಆದರೆ ತುಂಬಾ ಜಾಣ ಹೆಗ್ಗಣ, ಶಿಸ್ತಿನ ಹೆಗ್ಗಣ.
ಅದಕ್ಕೆ ತನ್ನನ್ನು ತಾನು ಹೇಗೆ ಕಾಪಾಡಿಕೊಳ್ಳಬೇಕೆಂದು ಗೊತ್ತು.
ಬೇರೆಯವರಿಗೆ ತೊಂದರೆ ಕೊಡದೆ ಒಳ್ಳೆಯ ರೀತಿಯಲ್ಲಿ ಹೇಗೆ ಬದುಕಬೇಕೆಂದು ಗೊತ್ತು.
........
ಕೆಲವು ರೀತಿಯ ಮನುಷ್ಯರನ್ನು ಹೆಗ್ಗಣಕ್ಕೆ ಹೋಲಿಸುತ್ತಾರಲ್ಲ?
ಈ ಒಳ್ಳೆ ಹೆಗ್ಗಣ ನೋಡಿದ ಮೇಲೆ ಆ ಹೋಲಿಕೆ ಸುಳ್ಳೆನಿಸುತ್ತಿದೆ.
ಮತ್ತೆ ಎಲ್ಲಾ ಹೆಗ್ಗಣಗಳೂ ಹೀಗೇ ಇರಬಹುದೇನೋ ಅಂತ ಸಂಶಯ ಬರುತ್ತದೆ.

ಅಪವಾದಗಳನ್ನು ಉದಾಹರಣೆಗಳಾಗಿ ತೆಗೆದುಕೊಳ್ಳಬಾರದು ಎನ್ನುವುದು ಹಲವಾರು ಬಾರಿ ಅನುಭವವಾಗಿದೆ. ಆದರೂ ಈ ಹೆಗ್ಗಣ ಸತ್ಯವೆಂದು ನಂಬಬೇಕು ಅನಿಸುತ್ತಿದೆ.