Showing posts with label ಬದುಕು. Show all posts
Showing posts with label ಬದುಕು. Show all posts

Saturday, February 1, 2020

ಕಡಲು ಮತ್ತೆ ರೆಕ್ಕೆ ಮುರಿದ ಹಕ್ಕಿ

ನೀ ಕೊಟ್ಟ ನೋವೆಲ್ಲ 
ಮನದ ಚಿಪ್ಪೊಳಗೆ ಕೂಡಿಟ್ಟು 
ಸ್ವಾತಿಯ ಮಳೆಗಾಗಿ ಕಾದೆ 
ಮಳೆ ಬೀಳಲಿಲ್ಲ, 
ಮುತ್ತು ಅರಳಲಿಲ್ಲ
*******
ಅಂದು ಹೊರಗೆ ಹುಣ್ಣಿಮೆ
ಒಳಗೂ ಹುಣ್ಣಿಮೆ
ನೋಡುತ್ತ ಮೈಮರೆತಿದ್ದೆವು
ಕಡಲ ಅಲೆಗಳ ನಾಟ್ಯ
ನನ್ನೊಳಗಿನ ಕಡಲಲ್ಲೂ
ಅಲೆಗಳ ಭೋರ್ಗರೆತ
ನಿನ್ನ ಮುಟ್ಟುವ ತವಕದ ಹೊರಳಾಟ
ಆದರೆ
ನನ್ನೆದೆಗೆ ನೀ ಕಿವಿಯಿಡಲಿಲ್ಲ
ಹಾಗಾಗಿ ನಿನಗದು ತಿಳಿಯಲೇ ಇಲ್ಲ
*******
You sat empty
And I remained dry
And the evening passed
With no high tides
And no high in heart
Where did love vanish?
******
ನೀ ಜತೆಗಿದ್ದರೆ ನನಗೆ
ನೀ ಏನೂ ಕುಡಿಸಬೇಕಿಲ್ಲ ಗೆಳೆಯ
ಯಾಕೆಂದರೆ
ನನಗೆ ನೀನೇ ಒಂದು
ಇಳಿಸಲಾಗದ ಅಮಲು
******
ಆದಿನ ನನ್ನ-ನಿನ್ನ ನಡುವೆ
ನಿಚ್ಚಳವಾಗಿತ್ತು ಗೋಡೆ
ಅದ ಹತ್ತಿ ಹಾರಿ
ನಿನ್ನಾಳಕ್ಕಿಳಿಯುವ ತವಕ
ಆದರೆ ಗೋಡೆ ದೊಡ್ಡದೇ ಇತ್ತು
ನನ್ನ ಎತ್ತರಕ್ಕೆ ನಿಲುಕದ್ದಾಗಿತ್ತು
ಕಷ್ಟಪಟ್ಟು ಹಾರಿದರೆ
ನಾ ಬೀಳಲೂಬಹುದು
ಆಗ ನನ್ನ ಎತ್ತುತ್ತಿದ್ದೆಯಾ ನೀನು
ಇಲ್ಲ ಕಾಲುಮುರಿದು ಬಿದ್ದವಳ
ಹಾಗೇ ಇರು ಅಂತ
ಬಿಟ್ಟು ಹೋಗುತ್ತಿದ್ದೆಯಾ
ತಿಳಿದಿರಲಿಲ್ಲ...
ಅದಕ್ಕೇ ಗೋಡೆ ದಾಟಿರಲಿಲ್ಲ ಗೆಳೆಯ.
ಇಂದು ಹೀಗೆ ಅಚಾನಕ್ ಗೋಡೆ ದಾಟಿ
ಕಾಲು ಮುರಿದು ರೆಕ್ಕೆ ಮುರಿದು
ಬಿಕ್ಕುತ್ತಿರುವ ಈ ದಿವಸ...
ನೀನೆಲ್ಲಿ, ನಿನ್ನಾಳವೆಲ್ಲಿದೆಯೆಂದು
ಇನ್ನೂ ತಿಳಿದಿಲ್ಲ.
******

Wednesday, September 26, 2018

ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ

Image may contain: one or more people
(ಕಾಮನಬಿಲ್ಲು, ಓನಾಮ, ಮಜಲು, ಎಂಜಿರೋಡ್)
ಎಂ ಜಿ ರೋಡಿನ ತುಂಬೆಲ್ಲ ಹೂಳಿದ
ಕರಿಕಾಂಕ್ರೀಟಿನ ಕಂಬಗಳ
ಮೈ ತಿಕ್ಕಿತೊಳೆದು
ಪೋಸ್ಟರುಗಳಿಗೆ ಓನಾಮ ಹಾಕಿ
ಹೊಸ ಬಣ್ಣ ಮೆತ್ತಿದಾಗ
ಮಜಲುಮಜಲಲ್ಲೂ ಕಾಣುವುದು
ಬರೀ ಕೆಂಪುಕಂಬಗಳಲ್ಲ,
ಕಾಮನಬಿಲ್ಲೂ ಕೂಡ.
ಕಾಣಬೇಕೆಂಬವರಿಗೆ ಕಾಣುತ್ತದೆ
ಮಳೆಯಿಲ್ಲದ ಬರಡುಬಾನಿನ
ಎಂಜಿರೋಡಿನ ಭುವಿಯಲ್ಲೂ
ಹಾಸಿ ಕಾಡುವ ಕಾಮನಬಿಲ್ಲು

===================

(ಪುನೀತ -ದರ್ಶನ- ಯಶ- ಸುದೀಪ)
ಬೆಂಗಳೂರ ಆಷಾಢವೆಂದರೆ ಹೀಗೆ...
ಯಾವಾಗಲೋ ಬರುವ ಮಳೆ,
ಹೊರಹೋದರೆ ಕೊಚ್ಚೆಕೊಳಕು,
ಒಂದಿನವೂ ಇರದಾಗದ ಟ್ರಾಫಿಕ್ ಜಾಮು
ಎಲ್ಲೆಲ್ಲೂ ಡಿಸ್ಕೌಂಟ್ ಸೇಲು..
ಮನೆಯೊಳಗೆ ಅಮ್ಮನ ಕೈಯಡುಗೆ,
ಚಳಿಜ್ವರ, ಕಷಾಯ, ಟ್ಯಾಬ್ಲೆಟ್ಟು,
ಉಪಚಾರ, ಬುದ್ಧಿಮಾತು,
ನನಗೆ ಮಾತ್ರ ನಿನ್ನದೇ ಧ್ಯಾನ
ಎಲ್ಲರೂ ಶ್ರಾವಣಕ್ಕೆ ಚಾತಕವಾದರೆ
ನಾ ಮಾತ್ರ ಇನ್ನೆಲ್ಲಿವರೆಗೆ ಕಾಯಬೇಕೋ,
ಅದ್ಯಾವಾಗಲೋ ನಿನ್ನ ದರ್ಶನ?
ಹೊದಿಕೆಯೊಳಗಿನ ಬಿಸುಪು,
ನೀತಂದ ಕನವರಿಕೆಯ ಕೋಶ,
ಅದೇನೋ ಅರಿಯದ ಆತಂಕ,
ವಿಷ್ಣು ಸಹಸ್ರನಾಮ ದಿನಾ ಕೇಳಿದರೆ
ಯಶಂ ಪ್ರಾಪ್ನೋತಿ ವಿಪುಲಂ ಅನ್ನುತ್ತಾಳೆ
ಕಂಪ್ಯೂಟರಿನೊಳಗಿಂದ ಸುಬ್ಬುಲಕ್ಷ್ಮಿ
ಅದ್ಹೇಗೆ ಅಮ್ಮ, ಅಂದರೆ ನನ್ನಮ್ಮ ಬೈಯುತ್ತಾಳೆ,
ಹೊತ್ತಾಯಿತು ಮಲಕೋ ಕೂಸೇ,
ಸಾಕು ತಲೆಹರಟೆ, ಆರಿಸು ದೀಪ.

=======
(ಗಮನ-ಗಹನ-ಗಗನ-ಬೆಂಡೆಕಾಯಿ)
ಬೆಂಡೆಕಾಯಿ ಬೆಳೆಸುವುದೆಂದರೆ ಸುಮ್ಮನೆಯಲ್ಲ
ಬೇಕದಕೆ ಬಹಳ ತಿಳುವಳಿಕೆ, ಅದು ಆಟವಲ್ಲ
ಮಣ್ಣು ಗೊಬ್ಬರ ಹಾಕಿ ಬೀಜ ಬಿತ್ತು
ಹಕ್ಕಿತಿನ್ನದಿರಲಿ, ಅದಕ್ಕೊಂದು ಕೋಟೆ ಕಟ್ಟು
ನೀರು ಹಾಕು, ಹೆಚ್ಚೂ ಬೇಡ, ಕಡಿಮೆಯೂ ಬೇಡ
ನೆರಳಿರಲಿ, ಬೆಳಕಲ್ಲಿ ಬೀಜ ಚಿಗುರೊಡೆಯುವುದು ತಡ
ಮೊಳಕೆ ಬಂದೀತು ಇನ್ನೇನು, ಗಮನವಿರಲಿ,
ಎಳೆಚಿಗುರು ತಿನ್ನಲು ಓಡಿಬರುವವು ಹೆಗ್ಗಣ, ಇಲಿ..
ಗಿಡ ಬಂತೇ, ಮನೆಯ ಚಿಳ್ಳೆಪಿಳ್ಳೆಗಳಿಗೆ ಬಲು ಖುಷಿ
ನೀರು ಹಾಕುವ ಭರಕೆ ಗಿಡದ ಬುಡವೆಂದೂ ಹಸಿಹಸಿ
ಮತ್ತೆ ಸುರಿ ಗೊಬ್ಬರ, ಇದು ಮಗುವಿಗಿಂತ ಹೆಚ್ಚು
ತಾನೆ ಬೆಳೆವ ತರಕಾರಿ ಅಂದ್ರೆ ಅದೊಂದು ಹುಚ್ಚು
ಹಂತ ಹಂತಕ್ಕೆ ಚಿತ್ರ ತೆಗೆದು ಫೇಸ್ಬುಕ್ಕಲ್ಹಾಕು
ಲೈಕು ಕಮೆಂಟು ಶೇರು ಆಹಾ ಎಂಥಾ ಶೋಕು
'ಓಹ್, ಇದ್ಯಾಕೆ ಮುರುಟಿದೆ ಎಲೆ,' ಅಂತಾರೆ ಗೆಳತಿ
'ಹಾಗ್ಮಾಡು ಹೀಗ್ಮಾಡು' ಚರ್ಚೆ ಮುಟ್ಟುತ್ತದೆ ಗಹನಗತಿ
ಅಂತೂ ಇಂತೂ ಬಂತು ಹೂವು, ಎಲ್ಲೆಲ್ಲೂ ಖುಷಿ ಖುಷಿ
ಅಗೋ ಎಳೆಕಾಯಿಯೂ ಬಂತು, ಈಗ ತಟ್ಟುತ್ತಿದೆ ಬಿಸಿ
ಪಕ್ಕದ್ಮನೆ ಆಂಟಿ ಕಣ್ಣಿಂದ ಹೇಗೆ ಕಾಪಾಡಲಿ ಇದನು?
ಹಾಕು ಪುಟ್ಟುಕೂಸಿನ ಸುಸ್ಸು, ಎಕ್ಸೆಲೆಂಟ್ ಪ್ಲಾನು :-)
ಹಾಕಿದರೆ ಸಾಕೇ, ಹೇಳು, ಇದೇ ಗೊಬ್ಬರ ನಮ್ಮನೇಲಿ..
ಆಂಟಿ ಕೇಳಬೇಕು, ಅಂದುಕೊಳ್ಳಬೇಕು, ನಂಗ್ಬೇಡ, ಅಲ್ಲೇ ಇರ್ಲಿ
ಪೇಟೆಯಲ್ಲಿ ಬೆಂಡೆಕಾಯಿ ಬೆಲೆ ಮುಟ್ಟಿದೆ ಗಗನ
ನಾ ಕಷ್ಟಪಟ್ಟು ಉಳಿಸಿದ ಬೆಂಡೆಕಾಯಿ, ಬೆಲೆಕಟ್ಟಲಾಗದ ರತ್ನ!

( :-P :-P :-P ಪಕ್ಕದ್ಮನೆ ತರಕಾರಿ ಕದಿಯೋ ಎಲ್ಲಾ ಆಂಟಿಯರ ಕ್ಷಮೆಕೋರಿ )


Friday, October 20, 2017

ಯಾರಿಗೆಷ್ಟು ಬೇಕೋ ಅಷ್ಟು ಬೆಳಕು, ಕತ್ತಲು ದಕ್ಕಲಿ....



ಕತ್ತಲು ಮತ್ತು ಬೆಳಕಿನ ನಡುವಿನ ಸಂಬಂಧ ಇಂದು ನಿನ್ನೆಯದಲ್ಲ. ಒಂದಿಲ್ಲದೆ ಇನ್ನೊಂದಿಲ್ಲ, ಒಂದಿಲ್ಲದೆ ಇನ್ನೊಂದಕ್ಕೆ ಬೆಲೆಯೂ ಇಲ್ಲ. ನಾಣ್ಯವೊಂದರ ಎರಡು ಮುಖಗಳಂತೆ ಇವು. ಎರಡೂ ಇದ್ದರೇ ಜೀವನ ಪೂರ್ಣ. ನಿತ್ಯದ ಕೆಲಸ ಕಾರ್ಯಗಳನ್ನು ಮುಗಿಸಲು ಬೆಳಕಿನ ಸಾಂಗತ್ಯ ಬೇಕು. ನಂತರದ ವಿಶ್ರಾಂತಿಗೆ ಕತ್ತಲಿನ ಮಡಿಲೇ ಬೇಕು.
ನಿಶೆ ಕನಸು ಹೊತ್ತು ತರುವವಳು, ಭರವಸೆಯ ಬೀಜ ಮನದಲ್ಲಿ ಬಿತ್ತುವವಳು. ಆದರೆ, ಉಷೆಯ ಸಹಕಾರವಿಲ್ಲವಾದಲ್ಲಿ ಇವು ನನಸಾಗುವುದು ಸಾಧ್ಯವೇ? ಉಷೆ ಪ್ರೋತ್ಸಾಹಿಸುವ ಕಾರ್ಯಶೀಲತೆ, ಚಟುವಟಿಕೆಗಳ ಮೂಲಕವೇ ಕನಸುಗಳಿಗೆ ರೆಕ್ಕೆ ಮೂಡಿ ಜೀವತಳೆಯಬೇಕು.. ಹಾಗೇ ಕನಸಿಲ್ಲದ, ಕತ್ತಲೆಯ ನೆಮ್ಮದಿಯಿಂದ ವಂಚಿತವಾದ ಜೀವನವೂ ಒಂದು ಜೀವನವೇ? ಸದಾ ಬೆಳಕು ತುಂಬಿದ ಕೋಣೆಯಲ್ಲಿ ನೆಮ್ಮದಿಯ ನಿದ್ದೆ ಸಾಧ್ಯವೇ?
ಬೆಳಕು-ಕತ್ತಲೆ - ಇವೆರಡರಲ್ಲಿ ಒಂದು ಮಾತ್ರ ಶ್ರೇಷ್ಠವೆಂದು ಪ್ರತಿಪಾದಿಸುವ 'ತಮಸೋಮಾ ಜ್ಯೋತಿರ್ಗಮಯ' ಎಂಬ ಘೋಷಣೆ, ಹುಲುಮಾನವರು ಅತಿ ಬುದ್ಧಿವಂತಿಕೆಯಿಂದ ಮಾಡಿದ ರಾಜಕಾರಣ—ಅಷ್ಟೇ.
******************
ಕಾರ್ಗತ್ತಲ ಹಾದಿ... ಮನೆ ದೂರ, ಕನಿಕರಿಸಿ ನನ್ನ ಕೈಹಿಡಿದು ನಡೆಸು ಬೆಳಕೇ, ಬಾ ಎಂದು ಕೇಳಿದ ಕವಿಗೆ ಈ ರಾಜಕಾರಣದ ಅರಿವಿದ್ದಿರಲಾರದು. ಇದ್ದಿದ್ದರೆ, ಹಾದಿ ತಪ್ಪಿದಾಗ ಕತ್ತಲ ದಾರಿಗೆ ಬೇಕಾದ ಕೈದೀಪ ಮನದೊಳಗೇ ಇದೆ ಎಂಬುದರ ಅರಿವೂ ಆತನಿಗೆ ಆಗಿರುತ್ತಿತ್ತು. ಎಲ್ಲೋ ಇರುವ ಬೆಳಕಿಗೆ ಹಾತೊರೆಯುವ ಬದಲು ಒಳಗಿನ ಬೆಳಕನ್ನು ಆತ ಕಂಡುಕೊಳ್ಳುತ್ತಿದ್ದನೇನೋ...
******************
ಕೆಲವು ವಿಧದ ಬೆಳಕುಗಳು ಅಪಾಯಕಾರಿಯೂ ಹೌದು... ಮಡಿಲಲ್ಲಿರುವ ನಿಗಿನಿಗಿ ಸುಡುವ ಕೆಂಡ ಬೆಳಕೇನೋ ನಿಜ. ಆದರೆ ಅದಕ್ಕೆ ಹಾಕಬೇಕಿರುವುದು ನೀರು, ಇದ್ದಲು ಅಥವಾ ಸೌದೆಯಲ್ಲ. ಸೌದೆ ಹಾಕಿದಲ್ಲಿ ಅದು ಮಡಿಲು ಸುಡುವುದು ಖಚಿತ. ಸುಡುವ ಸತ್ಯಕ್ಕೆ ನೀರು ಹಾಕುವವರು ಬೆಳಕನ್ನು ನಂದಿಸಿದರು, ಸತ್ಯವನ್ನು ಅಡಗಿಸಿದರು ಎಂಬ ಇನ್ನೊಂದು ರೀತಿಯ ಅಪವಾದಕ್ಕೂ ಒಳಗಾಗಬೇಕಾಗುತ್ತದೆ.
ಕುಶಾಲಿಗೆಂದು ಹಚ್ಚುವ ಬಣ್ಣಬಣ್ಣದ ಬಿರುಸುಮತಾಪುಗಳೂ ಅಷ್ಟೆ. ಬಣ್ಣ ಬರಬೇಕೆಂದು ಅದಕ್ಕೆ ಹಾಕುವ ವಿಧವಿಧದ ಪದಾರ್ಥಗಳಿಂದ ಹಾನಿಕಾರಕವಾಗಿ ಬದಲಾಗುತ್ತವೆ. ತಮಾಷೆ ನೋಡುವ ಭರದಲ್ಲಿ ಮಗು ಹಚ್ಚುವ ಬೆಳಕಿನ ಪುಂಜ ಹಾದಿಯಲ್ಲಿ ಹೋಗುವವರ ಕಣ್ಣು ತೆಗೆದರೂ ತೆಗೆದೀತು, ಸಿಕ್ಕಿದ್ದಕ್ಕೆ ಬೆಂಕಿ ಹಚ್ಚಿದರೂ ಹಚ್ಚೀತು.
******************
ಈ ಬೆಳಕಿನ ಹುಚ್ಚು ಇನ್ನೂ ಹಲವು ಬಗೆ ಅನಾಹುತಗಳಿಗೆ ಕಾರಣವಾಗುತ್ತದೆ. ಅರ್ಧ ಜಗತ್ತಿಗೆ ಕತ್ತಲೆ ಯಾವಾಗಲೂ ಇರುತ್ತದೆ. ಇನ್ನರ್ಧಕ್ಕೆ ಬೆಳಕು. ಆದರೆ ಕತ್ತಲಲ್ಲಿರುವವರೂ ಕೃತಕ ಬೆಳಕು ಸೃಷ್ಟಿಸಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವುದು ನಿಜ ತಾನೇ. ಬೆಳಕಿನ ಶ್ರೇಷ್ಠತೆ ಬರುವುದು ಇದರಿಂದಲೇ. ಬೆಳಕಿನ ಬೆಲೆ ವ್ಯಾವಹಾರಿಕವಾಗಿ ಜಾಸ್ತಿ. ಬೆಳಕು ಕತ್ತಲೆಯನ್ನು ಮೀರಿ ನಮ್ಮನ್ನು ಮುನ್ನಡೆಸುವ ಸಾಧನ, ಮತ್ತು ಇದರ ಅವಶ್ಯಕತೆ ಎಲ್ಲರಿಗೂ ಇದೆ. ಬೆಳಕಿಲ್ಲದೇ ಬದುಕು, ವ್ಯವಹಾರ ಯಾವುದೂ ಇಲ್ಲ. ಅದಕ್ಕೇ ತಮಸೋಮಾ ಜ್ಯೋತಿರ್ಗಮಯ ಅಂದರು. ತಪ್ಪಲ್ಲ, ಆದರೆ ಅದು ಬೆಳಕಿಗೆ ಅಗತ್ಯಕ್ಕಿಂತ ಹೆಚ್ಚಿನ ತೂಕ ಕೊಟ್ಟು, ಕತ್ತಲೆ ಕೆಟ್ಟದೆಂಬಂತೆ ತೋರಿಸುತ್ತದೆಯಲ್ಲವೇ? ಅದೇ ಸಮಸ್ಯೆ.
 
******************
ಎಲ್ಲೋ ಇರುವ ಬೆಳಕಿಗೆ ಹಾತೊರೆಯುವುದರಿಂದ ಏನು ತೊಂದರೆ? ಒಂದು ವಸ್ತು ಯಾವುದೋ ರೀತಿಯಲ್ಲಿ ಅಗತ್ಯ ಎನ್ನುವ ಅರಿವು, ಆ ವಸ್ತುವಿನ ಬೆಲೆಯನ್ನು ಹೆಚ್ಚಿಸುತ್ತದೆ. ಮತ್ತು ನಕಲಿ ವ್ಯವಹಾರಗಳಿಗೆ ಎಡೆಮಾಡಿಕೊಡುತ್ತದೆ. ಕಲಬೆರಕೆಗಳು ಹೆಚ್ಚುತ್ತವೆ.
ಬೆಳಕಿನ ವಿಚಾರದಲ್ಲೂ ಅಷ್ಟೇ. ಕತ್ತಲಿಗೂ ಬೆಳಕಿನ ವೇಷ ತೊಡಿಸಿ ಮಾರುವವರು ಹುಟ್ಟಿಕೊಳ್ಳುತ್ತಾರೆ. ಅಂಗೈಯ ಕಿಟಿಕಿಯಲ್ಲಿ ವಿಶ್ವ ನೋಡಬಹುದಾದಷ್ಟು ಬೆಳಕಿರುವ ಈ ಕಾಲಘಟ್ಟದಲ್ಲಿಯೂ ಕಿಟಿಕಿಯಲ್ಲಿ ಕೋಣೆ ತೋರಿಸಿ ಅದನ್ನೇ ವಿಶ್ವವೆಂದು ಮಾರಾಟ ಮಾಡುವವರು ಕಡಿಮೆಯಿಲ್ಲ. ಕತ್ತಲೆಯನ್ನು ಬೆಳಕನ್ನಾಗಿಸಿ, ಬೆಳಕನ್ನು ಕತ್ತಲೆಯಾಗಿಸಿ ಆಟವಾಡುವವರ ಸಂಖ್ಯೆ ಬಲುಜಾಸ್ತಿ. ಅರೆಗತ್ತಲೆಯಲ್ಲಿ ಅಥವಾ ಬಣ್ಣದ ಬೆಳಕಲ್ಲಿ ಏನು ಮಾಡಿದರೂ ಚಂದ—ಹಾಲಿಗೆ ಹುಳಿ ಹಿಂಡಬಹುದು, ಮನಸ್ಸುಗಳನ್ನು ಒಡೆಯಬಹುದು, ವಿಷಬೀಜ ಬಿತ್ತಬಹುದು. ತಮ್ಮೊಳಗಿನ ಬೆಳಕನ್ನು ನಂಬದ, ತಮ್ಮ ತಿಳುವಳಿಕೆಯಲ್ಲಿ ನಂಬಿಕೆಯಿಲ್ಲದ ಜನವನ್ನು ಹೇಗೆ ಬೇಕಾದರೂ ಆಟವಾಡಿಸಬಹುದು.
******************
ನಮ್ಮೊಳಗಿನ ತಿಳಿವಿನ ಬೆಳಕು ಎಷ್ಟು ಕಡಿಮೆಯೋ, ಬಾಹ್ಯದಲ್ಲಿ ಕಾಣುವ ಬೆಳಕು ನಮಗೆ ಅಷ್ಟೇ ಭೀಕರವೆನಿಸುತ್ತದೆ. ಬೆಳಕಿನ ಸಹವಾಸವೇ ಬೇಡವೆನಿಸಿ ಬೆಳಕಿಗೊಂದು ನಮಸ್ಕಾರ ಹಾಕಿ ಕತ್ತಲಲ್ಲೇ ಇರುತ್ತೇವೆ ಎಂಬ ಜನಕ್ಕೇನೂ ಕಡಿಮೆಯಿಲ್ಲ. ಬೆಳಕಿನ ಕುರಿತು ವ್ಯಂಗ್ಯವಾಡುವವರಿಗೂ ಕಡಿಮೆಯಿಲ್ಲ.
ಆದರೆ ಇಷ್ಟು ಮಾತ್ರ ನಿಜ. ಕತ್ತಲೆ-ಬೆಳಕು ಎರಡೂ ಜೀವನಕ್ಕೆ ಅವಶ್ಯಕ. ಯಾರೋ ಹೊಗಳಿದರೆಂದು ಬೆಳಕು ಹಿಗ್ಗುವುದಿಲ್ಲ, ಇನ್ಯಾರೋ ತೆಗಳಿದರೆಂದು ಕತ್ತಲೆ ಕುಗ್ಗುವುದಿಲ್ಲ. ಕತ್ತಲೆಯ ಕೆಲಸವೇ ಬೇರೆ. ಬೆಳಕಿನ ಕೆಲಸವೇ ಬೇರೆ. ಕತ್ತಲಿನಲ್ಲಿ ಬೆಳೆಯುವ ಹೂವು ಅರಳಲು ಸೂರ್ಯಕಿರಣಗಳು ತಾಗಲೇಬೇಕು. ಹಗಲಿನ ಬೆಳಕಲ್ಲಿ ಆಹಾರ ಸಂಪಾದಿಸುವ ಗಿಡ-ಮರಗಳು ಇರುಳಾದಾಗ ಬೆಳೆಯುತ್ತವೆ. ಹಗಲಲ್ಲಾದ ಗಾಯಗಳು ಮಾಯಲು ಇರುಳಿನ ಮಡಿಲೇ ಬೇಕು.
******************
ಹಾಗಂತ ಹಗಲು ನಿದ್ರಿಸುವ, ಇರುಳಲ್ಲೇ ತಮ್ಮ ಕೆಲಸ ಕಾರ್ಯಗಳು ಮಾಡುವವರು ಇಲ್ಲವೆಂದಲ್ಲ. ಸಂಜೆ ಮಲ್ಲಿಗೆ ಅರಳಲು ಮುಳುಗುವ ಸೂರ್ಯನ ಬಿಸಿಲೇ ಬೀಳಬೇಕು. ರಾತ್ರಿರಾಣಿ ಅಥವಾ ಬ್ರಹ್ಮಕಮಲ ಅರಳುವುದು ಸಂಪೂರ್ಣ ಕತ್ತಲೆಯಲ್ಲೇ. ಬಾವಲಿಗಳು, ಜಿರಲೆಗಳು, ಸರೀಸೃಪಗಳು ಇರುಳಿಲ್ಲವೆಂದರೆ, ಕತ್ತಲೆಯಿಲ್ಲವೆಂದರೆ ಸ್ವಾಭಾವಿಕವಾಗಿ ಎದ್ದು ಆಚೆಗೆ ಬರಲಾರವು. ರಾತ್ರಿಯ ಬದಲು ಹಗಲು ನಿದ್ರಿಸುವವರಿಗೆ, ಕನಸು ಕಾಣುವವರಿಗೇನೂ ಕಡಿಮೆಯಿಲ್ಲ. ಇವರೆಲ್ಲರಿಗೂ ಪ್ರಕೃತಿಯಲ್ಲಿ ಅವರದೇ ಆದಂತಹ ಸ್ಥಾನವಿದೆ, ಅಲ್ಲಗಳೆಯಲಾಗದಂತಹ ಕೆಲಸಕಾರ್ಯವಿದೆ.
ಹಾಗೇ ಕಳ್ಳಕಾಕರಿಗೂ ಕತ್ತಲೆಯೆಂದರೆ ಪ್ರೀತಿ, ಬೆಳಕಿದ್ದಲ್ಲಿ ಅವರ ಕಾರ್ಯಗಳು ಕೈಗೂಡುವ ಸಾಧ್ಯತೆ ಕಡಿಮೆ. ಈ ಜಗದ ವಿನ್ಯಾಸದಲ್ಲಿ ಕಳ್ಳಕಾಕರಿಗೂ ಬೆಳಕಿನ ಹೆಸರಲ್ಲಿ ಕತ್ತಲೆ ಹಂಚುವವರಿಗೂ ಅವರದೇ ಆದ ಸ್ಥಾನವಿದೆ. ಇವರೆಲ್ಲರೂ ಜಗತ್ತು ಸಂಪೂರ್ಣವೆನಿಸಿಕೊಳ್ಳಲು ಅತ್ಯಗತ್ಯ.
******************
ಬದುಕೊಂದು ಹಾವು-ಏಣಿ ಆಟದ ಹಾಗೆ. ಕತ್ತಲಿನಲ್ಲಿ ಜಾರಿ ಬೆಳಕಿನಲ್ಲೇಳುವುದು, ಕತ್ತಲಿನಲ್ಲಿ ಏರಿ ಬೆಳಕಿನಲ್ಲಿ ಜಾರುವುದು... ಎಲ್ಲಿ ಕತ್ತಲು ಬೇಕೋ ಅಲ್ಲಿ ಬೆಳಕಿದ್ದರೆ, ಬೆಳಕು ಬೇಕಾದಲ್ಲಿ ಕತ್ತಲಿದ್ದರೆ, ಆಟ ಹದತಪ್ಪಿಬಿಡುತ್ತದೆ.
ಬೆಳಕಿನ ಹಬ್ಬವೇನೋ ಈಗ ಕೊನೆಯಾಗುತ್ತಿದೆ, ಆದರೆ ಬದುಕು ನಿರಂತರ. ಬದುಕಿನಲ್ಲಿ ಯಾರಿಗೆಷ್ಟು ಬೆಳಕು ಬೇಕೋ ಅಷ್ಟು ಬೆಳಕು ದಕ್ಕಲಿ... ಯಾರಿಗೆಷ್ಟು ಬೇಕೋ ಅಷ್ಟು ಕತ್ತಲು ದಕ್ಕಲಿ. ಆದರೆ ಕಳ್ಳಕಾಕರ ಬಗ್ಗೆ, ಹುಳಿ ಹಿಂಡುವವರ ಬಗ್ಗೆ, ವಿಷ ಹಂಚುವವರ ಬಗ್ಗೆ ಎಚ್ಚರವಿರಲಿ, ಮಡಿಲಲ್ಲಿ ಸುಡುವ ಬೆಂಕಿಯ ಬೆಳಕನ್ನು, ಬೆಳಕಿನ ವೇಷ ಧರಿಸಿ ಬರುವ ಕತ್ತಲನ್ನು ಹೇಗೆ ನಿಭಾಯಿಸಬೇಕೆಂಬ ವಿವೇಚನೆ ಹುಟ್ಟಿಕೊಳ್ಳುವಷ್ಟು ತಿಳಿವಿನ ಬೆಳಕು ಮನದಲ್ಲಿರಲಿ. ಈ ತಿಳಿವಿನ ನಂದಾದೀಪ ಕಡುಗತ್ತಲೆಯಲ್ಲೂ ಮನದಲ್ಲಿ ಬೆಳಗುತ್ತಿರಲಿ. ಶುಭಾಶಯ...

Monday, August 29, 2016

ಪರಮಪಾಪಿಯ ಹಾಡುಗಳು...

ಹಳೆಯ ಹಾಳೆ ನಡುವೆ ಸಿಕ್ಕ ನವಿಲುಗರಿಯು ನೀನು
ಅದರ ಕಣ್ಣಿನೊಳಗೆ ಸಿಲುಕಿ ಚಿತ್ರವಾದೆ ನಾನು
ನಗುನಗುತಲೆ ಜಗವ ಸೆಳೆವ ಮೋಡಿಗಾರ ನೀನು
ಕಾಣದಿರುವ ಬಲೆಗೆ ಬಿದ್ದ ಮೊದ್ದುಮಿಕವು ನಾನು
ಬೇಕು ಎಂದು ಕೇಳಲಿಲ್ಲ,  ಸಿಕ್ಕ ಪಾಲು ನೀನು
ಬೇಡ ಎಂದು ಹೇಳಲಿಲ್ಲ, ತುಂಬಿಕೊಂಡೆ ನಾನು
ಸಿಕ್ಕೂ ಸಿಗದ, ಬಿಟ್ಟೂ ಬಿಡದ ಆಟಗಾರ ನೀನು
ಯೋಗವೋ ಅನುರಾಗವೋ ಅರಿಯಲಾರೆ ನಾನು
ನನಸಿನಲ್ಲೇ ಕಾಡಿಕೊಲುವ ಸಿಹಿವೇದನೆ ನೀನು
ನೆನಪಿನಲ್ಲೇ ಕಳೆದುಹೋದ ಮೋಹದಾಹಿ ನಾನು
ಬಿಟ್ಟ ಬಂಧ ಮತ್ತೆ ಬಂದು ಕಾಡಿದಾಗ ನೀನು
ಎದೆಹೂಡಿದ ಮುಷ್ಕರಕ್ಕೆ ನಲುಗಿ ಹೋದೆ ನಾನು
ರೆಪ್ಪೆಯಿಂದ ಜಾರಿ ಬಿದ್ದ ನೋವಹನಿಯು ನೀನು
ಎದೆಯ ಕೀಲಿ ಹಾಕಲೊಲ್ಲೆ, ಪರಮಪಾಪಿ ನಾನು...

(ಚೌಚೌಪದಿಗಾಗಿ ಬರೆದಿದ್ದು. ಪದಗುಚ್ಛ: ರೆಪ್ಪೆ- ಅನುರಾಗ-ಮುಷ್ಕರ -ಕೀಲಿ - 28 ಜುಲೈ 2016)
***********************************
ಸಂಜೆಮಲ್ಲಿಗೆಯು ಎದೆಯಲರಳಿಹುದು
ಬಿಡುವ ಚಿಟ್ಟೆ ನೀನಾ?
ಮೌನ, ಬೆಳಕು, ಹಲಬಣ್ಣ ಹರಡಿಹುದು
ನನ್ನ ಹೊಳಹು ನೀನಾ?
ಬೇಕು ಬೇಡಗಳ ಹಾವು ಏಣಿಯಲಿ
ಸೋತೆ, ತಿಳಿಯಿತೇನಾ?
ತಾರೆಗಳೂರಲಿ ಸೂರ್ಯರು ಹಲವರು
ನನ್ನ ರವಿಯು ನೀನಾ...?
ಬೆಳಕು ನೀನು ಬರಿ ಚಂದ್ರ ನಾನು
ನಿನ್ನಿಂದೆ ನಾನು ಕೇಳಾ...
ನಿನ್ನ ವೃತ್ತದಲಿ ನೀನು ಸುತ್ತುತಿರೆ
ಜಗದ ಪರಿಯು ಸರಳ...
ಅಡ್ಡರಸ್ತೆಯಲಿ ಬರಲೇಬಾರದು
ಎದೆಯಹಾದಿ ಜಟಿಲ...
ಜಾರುವ ದಾರಿಯು ನಲ್ಮೆಯ ನಾಳೆಗೆ
ಕತ್ತರಿಯದು, ತಾಳಾ...
ಒಲವ ಕೊಲ್ಲುವವು ಮಾತಿನಾಟಗಳು
ಬಾಯಿ ಬೀಗವಿರಲಿ..
ಬಾನು ನೀರು ಭುವಿಗ್ಯಾವ ಹಂಗಿಹುದು
ಮನಸಿಗ್ಯಾಕೆ ಬೇಲಿ?
ಎಲ್ಲೆ ಮೀರದೆಯೆ ಬೆಳಕು ಹರಿದಿಹುದು
ಗಾಳಿ ಹಗುರ ಹಗುರಾ..
ಇಲ್ಲಿ ನಾನಿರುವೆ ನೀನು ಅಲ್ಲೇ ಇರು
ಕಲ್ಲಾಗುವ ಬಾರಾ..
(ಚೌಚೌಪದಿಗಾಗಿ ಬರೆದಿದ್ದು. ಪದಗುಚ್ಛ: ಬಾಯಿ-ಬೀಗ-ಕತ್ತರಿ-ಅಡ್ಡರಸ್ತೆ-ಬೇಲಿ-ಹೂವು-ಚಿಟ್ಟೆ-ಹಾವು- 29 ಆಗಸ್ಟ್ 2016)

Thursday, July 26, 2012

ಮಂಗಳಗೌರಿಯ ನೆಪದಲ್ಲಿ....

ಡಾ.ರಾಜ್ ಮತ್ತು ಊರ್ವಶಿ ಅಭಿನಯದ 'ಶ್ರಾವಣ ಬಂತು' ಸಿನಿಮಾ ನೋಡುವಾಗ ಶ್ರಾವಣವೆಂದರೆ ಯಾಕೆ ಸಂಭ್ರಮವೆಂದು ಅರ್ಥವಾಗುತ್ತಿರಲಿಲ್ಲ, ಸುರಿವ ಜಡಿಮಳೆ ಬಿಟ್ಟು ಬೇರೆ ಕಾರಣವೂ ಇರಬಹುದೆಂದು ಹೊಳೆದಿರಲಿಲ್ಲ. ಎಷ್ಟೆಂದರೂ ದಕ್ಷಿಣ ಕನ್ನಡದಲ್ಲಿ ಇರುವ ಹಬ್ಬ-ಹರಿದಿನಗಳ ಪಟ್ಟಿಯಲ್ಲಿ ಶ್ರಾವಣಕ್ಕೆ ಅಷ್ಟೊಂದು ಮಹತ್ವ ಇರುತ್ತಿರಲಿಲ್ಲ, ಅಲ್ಲಿ ಈ ತಿಂಗಳು 'ಆಟಿ' ಎಂದು ಕರೆಯಲ್ಪಡುತ್ತದೆ. ಯಾವ ಶುಭಕಾರ್ಯವನ್ನೂ ಈ ತಿಂಗಳಲ್ಲಿ ಮಾಡುವುದಿಲ್ಲ.
ಆದರೆ ಬೆಂಗಳೂರಿನ ಕಥೆಯೇ ಬೇರೆ. ಶ್ರಾವಣವೆಂದರೇನೆಂದು ಗೊತ್ತಾಗಬೇಕಾದರೆ ಬರಬೇಕು, ಮಲ್ಲೇಶ್ವರದ 8ನೇ ಕ್ರಾಸ್ ಮಾರುಕಟ್ಟೆಗೆ. ಹೂವು, ಹಣ್ಣು, ಪೂಜಾಸಾಮಗ್ರಿಗಳನ್ನು ಜನ ಕೊಳ್ಳುವ ಸಂಭ್ರಮ ನೋಡಿಯೇ ಅರಿಯಬೇಕು.
ಭೀಮನಮಾವಾಸ್ಯೆಯಿಂದ ಆರಂಭವಾಗುವ ಶ್ರಾವಣದ ಹಬ್ಬದ ಸೀಸನ್, ಒಂದು ತಿಂಗಳು ಪೂರ್ತಿ ನಡೆದು, ಗೌರಿ-ಗಣಪತಿ, ದೀಪಾವಳಿ, ನವರಾತ್ರಿಯ ನೆಪದಲ್ಲಿ ಭಾದ್ರಪದ, ಕಾರ್ತೀಕಕ್ಕೂ ಹಬ್ಬುತ್ತದೆ.
ಮದುವೆಯಾದ ಹುಡುಗಿಯರು ಐದು ವರ್ಷಗಳ ಕಾಲ ಶ್ರಾವಣದ ಪ್ರತಿ ಮಂಗಳವಾರ ಆಚರಿಸುವ ವ್ರತ ಮಂಗಳಗೌರಿ. ಇದಕ್ಕಾಗಿ ಬೇಕಾದ ಸಾಮಾನನ್ನು (ಮಂಗಳಗೌರಿ ಮೂರ್ತಿ, ಕಲಶದ ಗಿಂಡಿ, ಉದ್ಧರಣೆ, ಪಂಚಪಾತ್ರೆ, ದೀಪಗಳು ಇತ್ಯಾದಿ, ಹೆಚ್ಚಾಗಿ ಎಲ್ಲವೂ ಬೆಳ್ಳಿಯದು) ಮದುವೆಯಲ್ಲಿಯೇ ತಾಯಿ ಮನೆಯಿಂದ ಕೊಟ್ಟಿರುತ್ತಾರೆ. ಗಂಡನಿಗೆ ಸುದೀರ್ಘ ಆಯುಷ್ಯ ಬರಲೆಂದು ಆಚರಿಸುವ ಈ ವ್ರತ ಮನೆಯಲ್ಲಿರುವ ಮಕ್ಕಳಿಗೆ ಕೂಡ ಅಚ್ಚುಮೆಚ್ಚು, ಯಾಕೆಂದರೆ, ಇದರಲ್ಲಿ ನೈವೇದ್ಯಕ್ಕೆ ಮತ್ತೆ ದೀಪಕ್ಕೆಂದು ಸಿದ್ಧಪಡಿಸುವ ತಂಬಿಟ್ಟು, ತಿನ್ನಲು ತುಂಬಾ ರುಚಿ!


ಬೇಕಾದ ಸಾಮಾನುಗಳು
ಅಂಚಿರುವ ರವಿಕೆ ಕಣ - 3
ಖಾಲಿ ರವಿಕೆ ಕಣ - 1
ಈಶ್ವರ ಪಾರ್ವತಿ ಫೋಟೋ
ಮಂಗಳ ಗೌರಿ, ಗಣಪತಿ ಮೂರ್ತಿಗಳು
ಅರಿಶಿನ, ಕುಂಕುಮ, ಗಂಧ
ಹೂಬತ್ತಿ, ಎಳೆ ಬತ್ತಿ, ಕರ್ಪೂರ
ಬಿಚ್ಚೋಲೆ, ಕನ್ನಡಿ, ಕಲಶದ ಗಿಂಡಿ
ಆರತಿ ಬಟ್ಲು
ಜೋಡಿ ದೀಪಗಳು(ಎಷ್ಟಿದ್ದರೂ ಚೆನ್ನ)
ಮಣೆ (ದೇವರಿಡಲು)
ಮೊಗಚೆ ಕೈ (ಕಾಡಿಗೆ ಹಿಡಿಯಲು)
ಮಂಗಳಗೌರಿ ಹಾಡುಗಳು, ಕಥೆಯಿರುವ ಪುಸ್ತಕ / ಮಂಗಳಗೌರಿ ವ್ರತದ ಕ್ಯಾಸಟ್ ಅಥವಾ ಸೀಡಿ
ಹೂವು - ಮಲ್ಲಿಗೆ, ಜಾಜಿ, ಗುಲಾಬಿ, ಸೇವಂತಿಗೆ, ಮರುಗ, ದವನ, ಸಂಪಿಗೆ (ಪರಿಮಳಯುಕ್ತವಾದದ್ದು)ಟ
ಹಣ್ಣು - ನೈವೇದ್ಯಕ್ಕೆ
ಬೆಲ್ಲದಚ್ಚು - 1
ಕೊಬರಿ ಗಿಟಕು - 2
ವೀಳ್ಯೆದೆಲೆ - 32(ದೇವರಿಗೆ) +2 (ಕಲಶಕ್ಕೆ)+ ಬಂದವರಿಗೆ ತಲಾ 5
ಬಟ್ಲಡಿಕೆ - 32
ತುಪ್ಪ - ದೀಪಕ್ಕೆ, ನೈವೇದ್ಯ ತಯಾರಿಸಲು
ಗೋಧಿಹಿಟ್ಟು, ಬೆಲ್ಲ (ತಂಬಿಟ್ಟಿಗೆ)
ಶಾವಿಗೆ, ಸಕ್ಕರೆ, ಗೋಡಂಬಿ, ದ್ರಾಕ್ಷಿ, ಏಲಕ್ಕಿ (ಪಾಯಸಕ್ಕೆ)
ಅಕ್ಕಿ, ಹೆಸರುಬೇಳೆ, ಜೀರಿಗೆ, ಕಾಳುಮೆಣಸು, ಉಪ್ಪು, ತುರಿದ ಕೊಬರಿ, ಗೋಡಂಬಿ (ಹುಗ್ಗಿ/ಪೊಂಗಲ್ ತಯಾರಿಸಲು)

ಸಿದ್ಧತೆ:
ಸ್ನಾನ ಮಾಡಿ ರೇಷ್ಮೆ ಸೀರೆಯುಟ್ಟುಕೊಂಡು ದೇವರನ್ನಿಡುವ ಜಾಗ ಶುಚಿಯಾಗಿಸಬೇಕು.
ಮಣೆಯಿಟ್ಟು ಅದರ ಸುತ್ತ ರಂಗೋಲಿ ಬಿಡಿಸಿ, ಮಣ ಮೇಲೆ ಖಾಲಿ ರವಿಕೆ ಕಣವನ್ನು ಹಾಕಬೇಕು. ಅದರ ಮೇಲೆ ಹಿಂದೆ ಈಶ್ವರ ಪಾರ್ವತಿ ಫೋಟೋ ಇಡಬೇಕು. ತ್ರಿಕೋನಾಕೃತಿಯಲ್ಲಿ ಮಡಚಿದ ರವಿಕೆ ಕಣಗಳನ್ನು ಫೋಟೋದ ಎಡ, ಬಲ ಹಾಗೂ ಮೇಲೆ ಜೋಡಿಸಬೇಕು.
ಕಲಶದ ಗಿಂಡಿಗೆ ಸುಣ್ಣದಿಂದ ಸುತ್ತಲೂ ಗೆರೆಯೆಳೆದು, ಅದರಲ್ಲಿ ಕುಂಕುಮದ ಚುಕ್ಕೆಗಳನ್ನು ಹಾಕಬೇಕು. ನಂತರ ಅರಿಶಿನ, ಕುಂಕುಮ ಇಡಬೇಕು. ಫೋಟೋದ ಎದುರು ಕನ್ನಡಿಯಿಟ್ಟು ಅದರೆದುರು ಕಲಶದ ಗಿಂಡಿಯಿಡಬೇಕು. ಅದರಲ್ಲಿ ಎರಡು (ದೊಡ್ಡ ಗಿಂಡಿಯಾದರೆ ಐದು) ವೀಳ್ಯದೆಲೆ ಇಟ್ಟು, ಅರಿಶಿನ ಕುಂಕುಮ ಹಾಕಿ, ನಂತರ ನೀರು ಹಾಕಬೇಕು.
ಒಂದಿಷ್ಟು ಅರಿಶಿನವನ್ನು ತೆಗೆದುಕೊಂಡು ನೀರು ಹಾಕಿ ದಪ್ಪಕ್ಕೆ ಕಲಸಬೇಕು. ನಂತರ ಅದನ್ನು ತಿದ್ದಿ ತೀಡಿ ಗೋಪುರಾಕಾರ ಕೊಡಬೇಕು. ಇದನ್ನು ಬೆಲ್ಲದಚ್ಚಿನ ಮೇಲಿಡಬೇಕು. ಇದು ಅರಿಶಿನದ ಗೌರಿ. (ಕೆಲವರು ಇದಕ್ಕೆ ಸುಣ್ಣದ ಚುಕ್ಕೆ ಕೂಡ ಹಾಕುತ್ತಾರೆ). ಇದನ್ನು ಕಲಶದ ಎದುರು ಪುಟ್ಟ ತಟ್ಟೆಯಲ್ಲಿ ಜೋಡಿಸಬೇಕು.
ಅರಿಶಿನದ ಗೌರಿಯೆದುರಿಗೆ ಮಂಗಳಗೌರಿ ಮೂರ್ತಿಯನ್ನಿಡಬೇಕು. ಅದರ ಎಡಬದಿಗೆ ಗಣಪತಿ ಮೂರ್ತಿಯನ್ನಿಡಬೇಕು. 16 ವೀಳ್ಯದೆಲೆಯ ಮೇಲೆ ಕೊಬರಿ ಗಿಟಕು ಇಟ್ಟು ಅದರೊಳಗೆ 16 ಬಟ್ಲಡಿಕೆ ಜೋಡಿಸಬೇಕು. ಈಥರದ ಎರಡು ಸೆಟ್ ಮಾಡಿ ಅವುಗಳನ್ನು ಅರಿಶಿನದ ಗೌರಿಯ ಎಡ ಮತ್ತು ಬಲಬದಿಗೆ ಜೋಡಿಸಬೇಕು. ಇದ್ದಷ್ಟು ಜೋಡಿ ದೀಪಗಳನ್ನು ತುಪ್ಪದ ಹೂಬತ್ತಿ ಹಾಕಿ ಸಿದ್ಧಪಡಿಸಬೇಕು. ಆರತಿ ತಟ್ಟೆ ಸಿದ್ಧ ಪಡಿಸಬೇಕು. ಮೊಗಚೆ ಕೈಗೆ ವೀಳ್ಯದೆಲೆ ಮತ್ತು ತುಪ್ಪದ ರಸ ಹಚ್ಚಿ ಸಿದ್ಧ ಪಡಿಸಿ ಇಟ್ಟುಕೊಳ್ಳಬೇಕು.
ಪೂಜೆಗೆ ಅರಿಶಿನ -ಕುಂಕುಮ-ಅಕ್ಷತೆ ತುಂಬಿದ ಬಟ್ಟಲು, ವೀಳ್ಯದೆಲೆ, ಅಡಿಕೆ, ಆರತಿ, ಕರ್ಪೂರ ಇತ್ಯಾದಿ ಸಿದ್ಧವಾಗಿಟ್ಟುಕೊಳ್ಳಿ.



ತಂಬಿಟ್ಟಿನ ದೀಪ:
ಇದು ಅಕ್ಕಿ ಅಥವಾ ಗೋಧಿಯಲ್ಲಿ ಮಾಡಬಹುದು. ಅಕ್ಕಿ ಅಥವಾ ಗೋಧಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. ಬೇಕಾದಷ್ಟು ಬೆಲ್ಲವನ್ನು ಬಿಸಿಗಿಟ್ಟು ಕರಗಿಸಬೇಕು. ಬೆಲ್ಲವೆಲ್ಲ ನೀರಾದ ಮೇಲೆ ಹುರಿದ ಗೋಧಿ ಅಥವಾ ಅಕ್ಕಿ ಹಿಟ್ಟನ್ನು ಅದಕ್ಕೆ ಸೇರಿಸಿ ಗಟ್ಟಿಯಾಗಿ ಕಲಿಸಿಕೊಳ್ಳಬೇಕು. (ಇದಕ್ಕೆ ಹುರಿಗಡಲೆ ಪುಡಿ, ಗೋಡಂಬಿ, ಏಲಕ್ಕಿ ಪುಡಿ ಇತ್ಯಾದಿ ಸೇರಿಸಬಹುದು, ಸೇರಿಸಿಕೊಂಡರೆ ಆಮೇಲೆ ತಿನ್ನುವಾಗ ರುಚಿ ಹೆಚ್ಚು :-)). ನಂತರ ಇದರಲ್ಲಿ ಉಂಡೆ ಕಟ್ಟಿ ತಂಬಿಟ್ಟು ಸಿದ್ಧಪಡಿಸಬೇಕು. 16 ತಂಬಿಟ್ಟುಗಳಿಗೆ ಮಧ್ಯದಲ್ಲಿ ಹೊಂಡದಂತೆ ಮಾಡಿ ದೀಪ ಸಿದ್ಧಪಡಿಸಬೇಕು. ಉಳಿದ ಹಿಟ್ಟನ್ನು ಸುಮ್ಮನೇ ಉಂಡೆ ಮಾಡಿ ನೈವೇದ್ಯಕ್ಕಿಡಬೇಕು.
ಶಾವಿಗೆ ಪಾಯಸ:
ಸುಲಭ. ಶಾವಿಗೆ ಹುರಿದುಕೊಳ್ಳಿ, ಹಾಲು ಹಾಕಿ ಬೇಯಿಸಿ, ಬೇಕಾದಷ್ಟು ಸಕ್ಕರೆ ಹಾಕಿ, ದ್ರಾಕ್ಷಿ, ಗೋಡಂಬಿ ಸೇರಿಸಿ.
ಹುಗ್ಗಿ:
ಅತಿಸುಲಭ. ಕುಕ್ಕರ್ ನಲ್ಲಿ ತುಪ್ಪ ಹಾಕಿ ತುಪ್ಪದಲ್ಲಿ ಜೀರಿಗೆ, ಮೆಣಸಿನಕಾಳು, ಅಕ್ಕಿ ಹುರಿದುಕೊಳ್ಳಿ. ಅಕ್ಕಿ ಎಷ್ಟಿದೆಯೋ ಅಷ್ಟೇ ಹೆಸರು ಬೇಳೆ ಕೂಡ ಸೇರಿಸಿ ಮತ್ತೆ ಕೈಯಾಡಿಸಿ. ನಂತರ ಎರಡರಷ್ಟು ನೀರು ಸೇರಿಸಿ ಕುಕ್ಕರ್ ಮುಚ್ಚಳ ಹಾಕಿ. ಕುಕ್ಕರ್ 4-5 ಸಲ (ಅಕ್ಕಿ-ಹೆಸರುಬೇಳೆ ಮೆತ್ತಗಾಗುವ ತನಕ) ಕೂಗಬೇಕು. ಇದು ಇಳಿದ ನಂತರ ಗೋಡಂಬಿ ಸೇರಿಸಿ ಚೆನ್ನಾಗಿ ತಿರುಗಿಸಿ, ಉಪ್ಪು, ತುರಿದ ಕೊಬರಿ ಸೇರಿಸಿ. ಒಂದು ಮಧ್ಯಮಗಾತ್ರದ ಬಟ್ಟಲಲ್ಲಿ ಹುಗ್ಗಿ ಹಾಕಿ ನೈವೇದ್ಯಕ್ಕೆ ಸಿದ್ಧವಾಗಿಡಿ.


****************
ಇನ್ನುಳಿದಿದ್ದು ಮುಂದಿನ ವಾರ ಬರೆಯುವೆ. ಇದು ಒಂದು ರೀತಿಯಲ್ಲಿ ನನಗೆ ಮುಂದಿನ ವರ್ಷ ಸಹಾಯವಾಗಲೆಂದು ಬರೆದುಕೊಳ್ಳುತ್ತಿರುವ ಸ್ವಂತಪಾಠವಾದ್ದರಿಂದ ಇವತ್ತೇ ಪೂರ್ತಿಗೊಳಿಸಬೇಕೆಂಬ ಕಮಿಟ್ಮೆಂಟ್ ನನಗಿಲ್ಲ! :-) ಇದರಲ್ಲಿ ಇನ್ನೂ ಏನಾದರೂ value addition ಅಥವಾ ariaions ಇದ್ದಲ್ಲಿ ಕಮೆಂಟಿಸಿ ತಿಳಿಸಿದರೆ ಉಪಕಾರವಾಗುತ್ತದೆ...:-)
****************
ಕನ್ನಡದಲ್ಲಿ ಬರೆಯುವುದು ಮರೆತೇ ಹೋಗಿದೆ ಎಂದುಕೊಳ್ಳುತ್ತಿದ್ದೆ, ಮರೆತು ಹೋಗಿಲ್ಲ ಅಂತ ಸಮಾಧಾನವಾಗುತ್ತಿದೆ. ಸಂಸಾರ ಸಾಗರದಲ್ಲಿ ಮುಳುಗಿ ಹೋದ ಕಾರಣ ಬ್ಲಾಗ್ ಮನೆಯ ದಾರಿ ಆಗಾಗ ಮರೆತುಹೋಗುತ್ತಿದೆ. ಏನು ಮಾಡಲಿ?

Wednesday, April 22, 2009

ಅವಳು, ಬಳ್ಳಿ ಮತ್ತು ನಾನು...

ಮೂರು ತಿಂಗಳ ಹಿಂದೊಂದು ದಿನ. ಹೊಸಮನೆಗೆ ಬಂದ ಸಂಭ್ರಮ. ಆಫೀಸಿಗೆ ರಜೆ ಹಾಕಿದ್ದೆ. ಪ್ಯಾಕಿಂಗ್ ಬಿಡಿಸುವುದು ಸಾಮಾನು ಹೊಂದಿಸುವುದು ಎಲ್ಲಾ ಮುಗಿದು ನಿರಾಳವಾಗಿತ್ತು. ಸಂಜೆ ಹೊತ್ತು ನಮ್ಮಲ್ಲಿದ್ದ ಒಂದೇ ಒಂದು ಚಟ್ಟಿಯಲ್ಲಿರುವ ಒಂದೇ ಒಂದು ಕರವೀರದ ಗಿಡಕ್ಕೆ ಒಂದಿಷ್ಟು ಕಿಚನ್ ಕಾಂಪೋಸ್ಟ್ ಗೊಬ್ಬರ ಹಾಕುತ್ತಿದ್ದೆ. ಆಗ ಕಂಡಿದ್ದು, ಮನೆಯ ಕಾಂಪೌಂಡ್ ಮೇಲೆ ಜೊಂಪೆಯಾಗಿ ಬೆಳೆದು ನಿಂತಿದ್ದ ಮಲ್ಲಿಗೆ ಗಿಡ. ಪುಟ್ಟ ಚಟ್ಟಿಯಲ್ಲಿ ಅದರ ಬೇರುಗಳು ಹಿಡಿಸಲಾಗದಷ್ಟು ದೊಡ್ಡದಾಗಿ ಬೆಳೆದಿತ್ತು.
ಬೇರುಗಳ ನಡುವಲ್ಲಿ ಇನ್ನೂ ಏನೇನೋ ಪುಟ್ಟಪುಟ್ಟ ಗಿಡಗಳು. ಅದರಲ್ಲೊಂದು ಮೆಣಸಿನ ಗಿಡದ ಹಾಗಿತ್ತು. ನೋಡಿ ನಂಗೆ ಆಶ್ಚರ್ಯವಾಯ್ತು. ಅದನ್ನು ಅಷ್ಟು ದೊಡ್ಡದಾಗಿ ಬೆಳೆಸಿದವರಿಗೆ ಮನಸ್ಸಿನಲ್ಲೇ ಒಂದು ನಮಸ್ಕಾರ ಹಾಕಿದೆ. ನನ್ನ ಕೈಲುಳಿದಿದ್ದ ಗೊಬ್ಬರದ ಪುಡಿಯನ್ನು ಅದಕ್ಕೂ ಸ್ವಲ್ಪ ಹಾಕಿ ಮುಗಿಸಿದೆ.
ಅಷ್ಟರಲ್ಲಿ ಆಕೆ ಕೈಯಲ್ಲೊಂದು ಪಾತ್ರೆ ಹಿಡಿದು ಬಂದು, ಗಿಡದ ಹತ್ತಿರ ನಿಂತಳು. ಕೈಯಲ್ಲಿದ್ದ ಪಾತ್ರೆಯಲ್ಲಿ, ತೊಳೆಯಲೆಂದು ನೀರಲ್ಲಿ ಹಾಕಿದ ಅಕ್ಕಿ. ಚೆನ್ನಾಗಿ ಅಕ್ಕಿ ತೊಳೆದು, ನೀರನ್ನು ಜಾಗ್ರತೆಯಾಗಿ ಗಿಡದ ಬುಡಕ್ಕೆ ಚೆಲ್ಲಿದಳು.
ಓಹ್, ಹಾಗಾದ್ರೆ ದಿನಾ ಈಕೆ ಅಕ್ಕಿ-ಬೇಳೆ ತೊಳೆದ ನೀರಲ್ಲೇ ಮಲ್ಲಿಗೆ ಗಿಡ ಬದುಕುತ್ತಿದೆ - ಎಂದು ಗೊತ್ತಾಯ್ತು. ಅದರ ಬುಡದಲ್ಲಿದ್ದ ಪುಟ್ಟಪುಟ್ಟ ಗಿಡಗಳೂ ಹೇಗೆ ಹುಟ್ಟಿರಬಹುದು ಅಂತ ಒಂದು ಐಡಿಯಾ ಬಂತು. ಇಂಥಾ ಐಡಿಯಾಗಳು ನಂಗೆ ಹೊಳೆಯಲೇ ಇಲ್ಲವಲ್ಲ ಅಂತನಿಸಿತು.
ಆಕೆ ನಮ್ಮನೆ ಹಿಂದಿನ ಮನೆಯಲ್ಲಿ ಬಾಡಿಗೆಗಿರುವವಳು. ನಂಗಿನ್ನೂ ಅವಳ ಪರಿಚಯವಾಗಿರಲಿಲ್ಲ. ನಾನು ಗೊಬ್ಬರ ಹಾಕಿದ್ದು ಗಮನಿಸಿದ ಆಕೆ ಅದೇನು, ಎಲ್ಲಿಂದ ಅಂತ ಕೇಳಿದಳು. ಹೇಳಿದೆ. ಕೇಳಿಸಿಕೊಂಡ ಆಕೆ ಹೀಗೂ ಮಾಡ್ಬಹುದು ಅಂತ ಗೊತ್ತಿರಲಿಲ್ಲ ಅಂತ ಖುಷಿಪಟ್ಟಳು. ನಮ್ಮ ಚಟ್ಟಿಯನ್ನು ಕೂಡ ಬಿಸಿಲಿಗೋಸ್ಕರ ಕಾಂಪೌಂಡ್ ಮೇಲೇರಿಸುವಂತೆ ಸಲಹೆ ಕೊಟ್ಟಳು. ನಾನು ಪಾಲಿಸಿದೆ.
ಹಾಗೇ ಮನೆಗೆ ಬೇಕಾದ ಕೊತ್ತಂಬ್ರಿ ಸೊಪ್ಪು ಅದರಲ್ಲೇ ಬೆಳೆಸಿಕೊಳ್ಳಬಹುದು, ಚಟ್ಟಿಯಲ್ಲಿ ನಾಲ್ಕು ಕಾಳು ಕೊತ್ತಂಬರಿ ಹಾಕಿ ಎಂದು ಸಲಹೆ ಕೊಟ್ಟಳು. ನಂಗೆ ಎಲ್ಲಿಲ್ಲದ ಉತ್ಸಾಹ ಬಂತು, ಇಷ್ಟೆಲ್ಲ ಮಾಡಬಹುದು, ಆದ್ರೂ ಇಷ್ಟು ದಿನ ಸುಮ್ನಿದ್ನಲ್ಲ, ಅಂತನಿಸಿತು. ಖುಷಿಯಿಂದಲೇ ನಾನದನ್ನು ಪಾಲಿಸಿದೆ. ಕೊತ್ತಂಬರಿ ಮಾತ್ರವಲ್ಲ, ಅಡಿಗೆ ಮನೆಯಲ್ಲಿ ಏನೇನು ಸಿಕ್ಕಿತೋ ಎಲ್ಲದರದ್ದೂ ನಾಲ್ಕು ನಾಲ್ಕು ಕಾಳು, ಜತೆಗೆ ಕಸದ ಬುಟ್ಟಿಗೆ ಬಿಸಾಡಲೆಂದು ಇಟ್ಟಿದ್ದ ಕಲ್ಲಂಗಡಿ ಹಣ್ಣಿನ ಬೀಜಗಳು, ಎಲ್ಲವನ್ನೂ ಹಾಕಿ, ಗೊಬ್ಬರದ ಜತೆಗೆ ಸೇರಿಸಿ ಕೆದಕಿದೆ. ಅಡಿಗೆಗೆಂದು ಕಟ್ ಮಾಡಿಟ್ಟಿದ್ದ ಪಾಲಕ್ ಸೊಪ್ಪಿನ ಬೇರನ್ನು ಅದರ ಮೇಲಿಂದ ಹಾಕಿ ಮುಚ್ಚಿ, ನೀರು ಹಾಕಿದೆ.
+++++++++++++++++++
ದಿನಾ ಬೆಳಿಗ್ಗೆ ಬೇಗ ಎದ್ದು ಮನೆಹೊರಗೆ ನೀರು ಹಾಕಿ ಗುಡಿಸುವಾಗ ಎರಡೂ ಗಿಡಗಳಿಗೆ ನೀರು ಹಾಕುತ್ತಿದ್ದೆ. ಆಕೆಯೂ ಅಕ್ಕಿ -ಬೇಳೆ ತೊಳೆದ ನೀರನ್ನು ಎರಡೂ ಚಟ್ಟಿಗಳಿಗೆ ಹಂಚುತ್ತಿದ್ದಳು. ಈ unsaid understanding ನಂಗೆ ಖುಷಿ ಕೊಟ್ಟಿತು. ಕೆಲ ದಿನಗಳ ನಂತರ ಚಟ್ಟಿಯಲ್ಲಿ ಎರಡು ಮೂರು ಥರದ ಮೊಳಕೆಗಳು ಕಾಣಿಸಿಕೊಂಡವು. ಅದು ಯಾವುದರದ್ದು ಎಂದು ನಂಗೆ ಗೊತ್ತಾಗಲಿಲ್ಲ.
ಮತ್ತೊಂದು ದಿನ ಹೀಗೇ ಸಿಕ್ಕಿದ ಆಕೆ ನಂಗೆ 'ಸಾಸಿವೆ ಗಿಡ ಹುಟ್ಟಿತ್ತು ಕಣ್ರೀ, ಕಿತ್ತು ಬಿಸಾಕಿದ್ದೇನೆ, ಮನೆಮುಂದೆ ಸಾಸಿವೆ ಗಿಡ ಇರಬಾರದು' ಅಂದಳು.
ಸಾಸಿವೆ ಕಾಳು ಚಟ್ಟಿಗೆ ಸೇರಿಸಿದ್ದು ನಾನೇ ಆಗಿದ್ದರಿಂದ ಸುಮ್ಮನೆ ತಲೆಯಲ್ಲಾಡಿಸಿದೆ. ಆದರೆ ಇನ್ನೂ ಒಂದೆರಡು ಗಿಡಗಳು ಉಳಿದುಕೊಂಡಿತ್ತು. ಅದೇನು ಅಂತ ಕೇಳಿದೆ. ಒಂದು ಹೆಸರು ಕಾಳಿನ ಗಿಡವಿರಬೇಕು, ಇನ್ನೊಂದು ನಂಗೂ ಗೊತ್ತಾಗ್ತಿಲ್ಲ, ಕೊತ್ತಂಬರಿ ಮಾತ್ರ ಬಂದಿಲ್ಲ ಅಂದಳು. ಅದೇನಾದ್ರೂ ಇರಲಿ, ಅದಾಗಿ ಬೆಳೆದಿದ್ದು ಬೆಳೆಯಲಿ ಎಂದು ಸುಮ್ಮನಾದೆ.
+++++++++++++++++++
ನಂತರ ನನ್ನ ಶಿಫ್ಟ್ ಬದಲಾಯ್ತು, ರಾತ್ರಿ ಪಾಳಿ ಮುಗಿಸಿ ಮನೆಗೆ ಬರುವಷ್ಟರಲ್ಲಿ ಕಣ್ಣು ಎಳೆಯುತ್ತಿರುತ್ತಿತ್ತು. ಬಿದ್ದುಕೊಂಡರೆ ಸಾಕೆನಿಸುತ್ತಿತ್ತು. ಸಂಜೆ ಎದ್ದನಂತರ ಮನೆಯಿಂದಲೇ ಕೆಲಸ ಆರಂಭವಾಗುತ್ತಿತ್ತು. ಈ ಬದಲಾದ ದಿನಚರಿಯಲ್ಲಿ ಗಿಡದ ಕುರಿತು ಗಮನವೇ ಹೊರಟುಹೋಯ್ತು. ದಿನಕ್ಕೆ ಐದು ನಿಮಿಷ ಹೊರಗೆ ಹೋಗಿ ಗಿಡಗಳು ಏನಾಯ್ತು ಅಂತ ನೋಡುವಷ್ಟು ಕೂಡಾ ಪುರುಸೊತ್ತಿಲ್ಲದಷ್ಟು ನಾನು 'ಬ್ಯುಸಿ' ಆಗಿಬಿಟ್ಟಿದ್ದೆ... busy for nothing ofcourse.
+++++++++++++++++++
ಮೊನ್ನೆ ಬೆಳಿಗ್ಗೆ ಮನೆಯ ಗೇಟ್ ತೆಗೆದು ಒಳನುಗ್ಗುತ್ತಿದ್ದಂತೆಯೇ ಕಣ್ಣು ಅದ್ಯಾಕೋ ಕಾಂಪೌಂಡ್ ಗೋಡೆ ಮೇಲೆ ಹರಿಯಿತು. ಬಳ್ಳಿಯಾಗಿ ಮೆಲ್ಲಮೆಲ್ಲಗೆ ಹಬ್ಬಲಾರಂಭಿಸಿದ್ದ ಗಿಡ ಕಂಡು ಆಶ್ಚರ್ಯವಾಯಿತು. ಅದರ ಪಕ್ಕದಲ್ಲಿದ್ದ ಮತ್ತೊಂದು ಗಿಡ ಹೆಸರಿನ ಗಿಡವೆಂದು ಗೊತ್ತಾಯಿತು, ಆದರೆ ಏನೇನೋ ಬೀಜಗಳನ್ನು ಹಾಕಿದ್ದೆನಾದ್ದರಿಂದ ಬಳ್ಳಿಯಾಗಿದ್ದು ಯಾವುದರ ಗಿಡವೆಂದು ಗೊತ್ತಾಗಲಿಲ್ಲ.
ಮೆಲ್ಲಮೆಲ್ಲಗೆ ಚಿಗುರೊಡೆದು ಹಬ್ಬುತ್ತಿದ್ದ ಬಳ್ಳಿ, ಇನ್ನು ತನ್ನನ್ನು ಹಾಗೇ ಬೇಕಾಬಿಟ್ಟಿ ಬಿಟ್ಟಲ್ಲಿ ಎಲ್ಲೆಲ್ಲಿಗೂ ಹಬ್ಬಿಯೇನು ಅಂತ ಮೌನದಲ್ಲೇ ವಾರ್ನಿಂಗ್ ಕೊಡುತ್ತಿತ್ತು. ಇದಕ್ಕೇನಾದ್ರೂ ಮಾಡಬೇಕು, ಏನಾದ್ರೂ ಸಪೋರ್ಟ್ ಕೊಟ್ಟು ಸರಿಯಾದ ರೀತಿ ಹಬ್ಬಲಿಕ್ಕೆ ಸಹಾಯ ಮಾಡಬೇಕು ಅಂದುಕೊಂಡು ಒಳಗೆ ಬಂದೆ. ಅಷ್ಟೆ. ಮತ್ತೆ busy for nothing. ಮರೆತೇ ಹೋಯಿತು.
+++++++++++++++++++
ಇವತ್ತು ರಾತ್ರಿ ಪಾಳಿ ಮುಗಿಸಿ ಬಂದು ಮಲಗಿದವಳಿಗೆ ಬೇಗ ಎಚ್ಚರವಾಯ್ತು... ಎದ್ದು ನೋಡುತ್ತೇನೆ, ಹೊರಗೆ ಜೋರು ಮಳೆ. ಒಳಗೂ ಮಳೆ.
ಬಾಗಿಲು ತೆರೆದು ಹೋಗಿ ಸುಮ್ಮನೆ ಮಳೆ ನೋಡುತ್ತ ನಿಂತೆ. ಹಾಗೇ ಬಳ್ಳಿಯ ಕಡೆಗೂ ಗಮನ ಹರಿಯಿತು. ಅದು ಮಲ್ಲಿಗೆ ಬಳ್ಳಿಗೆ ಸುತ್ತಿಕೊಳ್ಳಲಾರಂಭಿಸಿತ್ತು. ಮತ್ತೆ ಅದೇ ಯೋಚನೆ, ಇದು ಹೇಗೆಹೇಗೋ ಬೆಳೆದರೆ ಸುಮ್ಮನೇ ತೊಂದರೆ. ಜತೆಗೆ ಓನರ್ ಕೈಲಿ ಬೇರೆ ಬೈಸಿಕೊಳ್ಳಬೇಕು. ಏನ್ ಮಾಡಲಿ? ಕಾಂಪೌಂಡ್ ಮುಂದೆ ನೇರವಾಗಿ ರಸ್ತೆ. ಕಾಂಪೌಂಡ್ ಒಳಗಿರುವುದು ಹೋಗುವ-ಬರುವ ದಾರಿ. ಹಬ್ಬಿಸಿದರೆ ಮೇಲಕ್ಕೆ ಹಬ್ಬಿಸಬೇಕು, ಅದಕ್ಕೆ ಓನರ್ ಅನುಮತಿ ಬೇಕು.
ಆಕೆ ಕೂಡ ನನ್ನ ಪಕ್ಕದಲ್ಲಿ ಬಂದು ನಿಂತಿದ್ದಳು. ಅವಳಿಗೂ ಅದೇ ಚಿಂತೆಯಿತ್ತು... ಮಲ್ಲಿಗೆ ಬಳ್ಳಿಗೆ ಹಬ್ಬಿದ್ದನ್ನು ಮೆಲ್ಲಗೆ ಬಿಡಿಸಿ ಕೆಳಗೆ ನೇತಾಡಬಿಟ್ಟಳು.. ಇದಕ್ಕೊಂದು ವ್ಯವಸ್ಥೆ ಆಗಬೇಕು ಎಂದಳು, ನನ್ನನ್ನುದ್ದೇಶಿಸಿ. ನಾನು ಸುಮ್ಮನೇ ನಕ್ಕು ತಲೆಯಲ್ಲಾಡಿಸಿದೆ.
ಮಳೆ ಜೋರಾಗಿ ಹನಿಯುತ್ತಿತ್ತು. ಬಳ್ಳಿ ಇದ್ಯಾವುದರ ಗಮನವಿಲ್ಲದೆ ರಾಚುತ್ತಿದ್ದ ಹನಿಗಳಿಗೆ ಮೈಯೊಡ್ಡಿ ಸುಖವಾಗಿ ನಗುತ್ತಿತ್ತು.

Monday, December 29, 2008

ಹಕ್ಕಿ ಗೂಡು ಮರೆತು ಹಾರಿದಾಗ...

ವಲಸೆ ಹಕ್ಕಿ ಸಮಯ ಬಂದಾಗ ತನ್ನ ಪಾಡಿಗೆ ತಾನು ಹಾರಿ ಹೋಗುತ್ತದೆ... ಆದರೆ ಹಕ್ಕಿಯ ಗೂಡು ಮಾತ್ರ ಮತ್ತೆಂದಾದರೂ ಹಕ್ಕಿ ಮರಳುವುದೆಂಬ ಆಸೆಯಲ್ಲಿ ಕಾಯುತ್ತದೆ...
--------
ಗೂಡು ನಿರ್ಜೀವ. ಅದಕ್ಕೆ ಹಾರಲಾಗದು.
--------
ಹಾರಲಾಗದ್ದೆಲ್ಲಾ ನಿರ್ಜೀವವಲ್ಲ... ಹಕ್ಕಿಯೇ ಶ್ರದ್ಧೆಯಿಂದ ಕಟ್ಟಿದ ಗೂಡದು, ಬೇಕಾದಾಗ ಬೆಚ್ಚನೆಯ ಮನೆಯಾಗಿತ್ತು... ಹಕ್ಕಿಗೆ ಎಷ್ಟು ಗೂಡೋ? ಆದರೆ ಗೂಡಿಗೆ ಅದೊಂದೇ ಹಕ್ಕಿ...!
--------
ಹಕ್ಕಿಯೇ ಕಟ್ಟಿದ್ದು ಗೂಡನ್ನ!
--------
ಹೌದು, ಹಕ್ಕಿಯೇ ಕಟ್ಟಿದ್ದು ಗೂಡನ್ನ! ಮತ್ತೆ ಬರೋದಿಲ್ಲ ಅಂತ ಗೊತ್ತಿದ್ಮೇಲೆ ಕಟ್ಬೇಕು ಯಾಕೆ?
--------
ಹಕ್ಕಿಗೆ ಬಯಲಲ್ಲಿ ಮಲಗಲಾಗದು! ಮನೆ ಬೇಕು, ಅದರ ಶ್ರಮ, ಅದರ ಆಸಕ್ತಿ, ಗೂಡು ಕಟ್ಟಿತು.
--------
ಬಯಲಲ್ಲಿ ಮಲಗಲಾಗದಿದ್ದ ಮೇಲೂ ಬಯಲಿನ ಮೋಹ ಹಕ್ಕಿಯನ್ನು ಬಿಡಲಿಲ್ಲ... ಈಗೇನೋ ಇರುವುದೆಲ್ಲವ ಬಿಟ್ಟು ಹಾರಿಹೋಗಿದೆ ಹಕ್ಕಿ, ಎಷ್ಟಂದರೂ ವಲಸೆ ಹಕ್ಕಿ, ಮರಳಿ ಬಂದೀತು ಒಂದು ದಿನ, ಆಗ ಗೂಡಿರದು, ಮತ್ತೆ ಹೊಸ ಗೂಡು ಕಟ್ಟುವ ಸಂಭ್ರಮದ ಹಕ್ಕಿಗೆ ಗೂಡಿನ ನೆನಪೂ ಇರದು!
----------
ಅದು ಜೀವನ ಚಕ್ರ...
----------

Saturday, October 25, 2008

ದೇವರು ಹೆಚ್ಚಿದ ದೀಪ...


ಮಾನವನೆದೆಯಲಿ ಆರದೆ ಉರಿಯಲಿ
ದೇವರು ಹೆಚ್ಚಿದ ದೀಪ
ರೇಗುವ ದನಿಗೂ ರಾಗವು ಒಲಿಯಲಿ
ಮೂಡಲಿ ಮಧುರಾಲಾಪ

ಕೊಲ್ಲಲು ಎತ್ತಿದ ಕೈಗೂ ಗೊತ್ತಿದೆ
ಕೆನ್ನೆಯ ಸವರುವ ಪ್ರೀತಿ
ಇರಿಯುವ ಮುಳ್ಳಿನ ನಡುವೆಯೆ ನಗುವುದು
ಗುಲಾಬಿ ಹೂವಿನ ರೀತಿ...

ಉರಿಯನು ಕಾರುವ ಆಗಸ ತಾರದೆ
ತಂಪನು ತೀಡುವ ಮಳೆಯ?
ಲಾವಾರಸವನು ಕಾರುವ ಧರೆಯೇ
ನೀಡದೆ ಅನ್ನದ ಬೆಳೆಯ?

ಹಮ್ಮು ಬಿಮ್ಮುಗಳ ಮರುಳುಗಾಡಿನಲಿ
ಎಲ್ಲೋ ತಣ್ಣನೆ ಚಿಲುಮೆ
ತಾಪವ ಹರಿಸಿ ಕಾಪಾಡುವುದು
ಒಳಗೇ ಸಣ್ಣಗೆ ಒಲುಮೆ...
- ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ನಿಮ್ಮ ಮನೆ-ಮನಗಳಲ್ಲಿ ಹೊಸಬೆಳಕು ಚೆಲ್ಲಲಿ,
ಬೆಳಕಿನ ಹಬ್ಬದ ಶುಭಾಶಯಗಳು

Sunday, July 6, 2008

ಲೆಕ್ಕವಿಲ್ಲದ ಕನಸುಗಳಲ್ಲಿ ಇದು 50ನೆಯದು... :-)

ಕರುಳ ಚಿಗುರು ಕಳಚಿದಾಗ
ದೇಹ ಬರಿದು ಬರಿದು...
ಮಮತೆಯೊರತೆಯೊಸರಬೇಕು
ಮನಸು ಬರಿದು ಬರಿದು...!

ನಲಿಯುತಿರಲಿ ಮಗುವು, ಬೇಲಿ
ಮೀರಿ ಬೆಳೆದು ಹೊಳೆಯಲಿ...
ಬಂಧವೆಂದು ಬಂಧನದಲಿ
ಅಂತ್ಯ ಕಾಣದಿರಲಿ...!

ಇಂತು ತಿಳಿದ ತಾಯಿ ಮಗುವ
ಹೊರಗೆ ಆಡಬಿಟ್ಟಳು...
ಬರಿದು ಮನವು, ಖಾಲಿ ಹೃದಯ
ಅಡಗಿಸುತಲೆ ನಕ್ಕಳು...

Saturday, January 26, 2008

ಈ ಕನಸಿಗೆ ನೂರು ತುಂಬಿತು...!



ನಮ್ಮೆಲ್ಲರ ಕನಸಿಗೆ ಆದಿತ್ಯ ಬಣ್ಣ ಹಚ್ಚುತ್ತಿದ್ದಾಗ ತೆಗೆದ ಚಿತ್ರ...
========================================

ಜನವರಿ ೨೯ಕ್ಕೆ ಈ ಕನಸಿಗೆ ನೂರು ತುಂಬಿತು...!

Saturday, January 19, 2008

ಬೇಸರವಾದಾಗ..!

ಬೇಸರವಾದಾಗ ಮಾತ್ರ ಇಲ್ಲಿ ಬರುವುದಕ್ಕೆ ಇನ್ನೂ ಬೇಸರವಾಗ್ತಿದೆ!!

ಬಣ್ಣ ಹಚ್ಚುವವರು...

ಚಿತ್ರ ಯಾರದಾದರೇನು,
ನಮ್ಮದೇ ಬಣ್ಣ ಅಂದುಕೊಂಡು ಹಚ್ಚುತ್ತೇವೆ...
ಹಚ್ಚುತ್ತಿರುವ ತನಕ ನಮ್ಮದೇ ಬಣ್ಣ.
ನಮ್ಮದೇ ಚಿತ್ರ ಕೂಡ.
ಇವೆಲ್ಲ ಆಟ ನಡೆಯುವುದು
ನಮಗೆ ಬೇಕಾದ ಬಣ್ಣ
ಬೇಕಾದ ಹಾಗೆ ಹಚ್ಚಲು ಬಿಡುವವರೆಗೆ ಮಾತ್ರ!!


ಯಾಕೆ?

ಹೂಗಿಡಕ್ಕೆ ನೀರು ಹೊಯ್ದು,
ಗೊಬ್ಬರ ಹಾಕಿ,
ದಿನಾ ಅದು ಏನು ಮಾಡುತ್ತಿದೆಯೆಂದು ನೋಡಿ
ಪ್ರೀತಿಯಿಂದ ಬೆಳೆಸುವುದು
ಯಾಕೆ?
ಕೊನೆಗೊಂದು ದಿನ ಹೂಬಿಟ್ಟಾಗ
ಕೊಯ್ದು ಕೊಲ್ಲಲಿಕ್ಕೆಯೇ?


ಬದುಕು ಅಡಗಿರುವುದೇ
ಅಡಗಿರುವುದನ್ನು ಹುಡುಕುವುದರಲ್ಲಿ...


ಅಡಗಿರುವುದನ್ನು ಹುಡುಕುವುದೇ
ಒಂದು ದೊಡ್ಡ ಸಂಭ್ರಮ...
ಆದರೆ,
ಅಡಗಿರುವುದು ಎದುರಿಗೆ ತೆರೆದು ನಿಂತಾಗ
ಇನ್ಯಾವುದೋ ಅಡಗಿರುವುದರ ಕಡೆಗೆ
ಸೆಳೆಯುತ್ತದೆ ಮನ.

ನೋವು

ನೋವಿನಷ್ಟು ಸಿಹಿ ಇನ್ಯಾವುದೂ ಇಲ್ಲ ಅಂದಿದ್ದರು ಅವರು.
ನೋವು ಮನುಷ್ಯನನ್ನು ಬೆಳೆಸುತ್ತದೆ ಎಂದಿದ್ದರು ಇವರು.
ನನಗೆ ಮಾತ್ರ
ಸಿಹಿ ಬೇಕಾಗಿಲ್ಲ
ಬೆಳೆಯೋದೂ ಬೇಕಾಗಿಲ್ಲ
ಹಿಂಡಿ ತಿನ್ನೋ ಈ ನೋವು ಬೇಕಾಗಿಲ್ಲ..!! :-(

Tuesday, December 11, 2007

ಬಹಳ ದಿನಗಳ ಬಳಿಕ

ಬಹಳ ದಿನಗಳ ಬಳಿಕ
ಶಕುಂತಲೆಯ ನೆನಪಾದ ದುಶ್ಯಂತ
ಕಾಡಿಗೆ ಹೋದ
ಅಲ್ಲೇ
ಆತ ಬಿಟ್ಟು ಹೋದಲ್ಲೆ
ಅದೇ ಆಶ್ರಮದಂಗಳದಲ್ಲೆ
ಕುಳಿತಿದ್ದಳು ಆಕೆ...

ಬಳಿಸಾರಿ
ಕಣ್ಣಲ್ಲಿ ಕಣ್ಣಿಟ್ಟು
ನೋಡಹೊರಟನಾತ
ಆಕೆಯ ಕಣ್ಣಲ್ಲಿ
ಅವನಿಗೆ ಕಂಡಿದ್ದು
ಅವಳಲ್ಲ...

ಸತ್ತ ಶಾಕುಂತಲೆ
ಮತ್ತು
ಶೂನ್ಯ

Saturday, June 16, 2007

ಕೊನೆಯ ಚಿತ್ರ



ಇವತ್ತು ತಾರಸಿಯ ಮೇಲೆ ನಿಂತು ಸುಮ್ನೇ ಆಕಾಶ ನೋಡ್ತಾ ಇದ್ದೆ...





ನೋಡ್ತಾ ಇದ್ದ ಹಾಗೇ ಆಕಾಶ ಕಪ್ಪು ಕವಿಯತೊಡಗಿತು...




ಆಕಾಶ ಎಲ್ಲ ಕಪ್ಪು ಮೋಡ ತುಂಬಿಕೊಂಡು ಮಳೆ ಬರುವ ಹಾಗೆ ಕಾಣಿಸುತ್ತಿದೆ...



ಆದರೆ ಈ ತುಂಟ ಮರ ಮಾತ್ರ ಮೋಡ ಸೀಳಿ ತೂರುವ ಸೂರ್ಯನ ಬೆಳಕಿನ ಜತೆ ಚಿನ್ನಾಟವಾಡ್ತಿದೆ...





ಕತ್ತಲಾಗುತ್ತಿದೆ, ಮಳೆಯೂ ಬರಬಹುದು, ಇವತ್ತಿಗೆ ಇದೇ ಕೊನೆಯ ಚಿತ್ರ...



Tuesday, May 8, 2007

ಎಲ್ಲಾ ಚಿತ್ರಗಳಲ್ಲೂ ಒಂದೊಂದು ಕಥೆಯಿದೆ...

ಪುಟ್ಟ Hide & Seek ಬಿಸ್ಕೆಟ್ ತಿಂತಾ ಕೂತಿದ್ದ. ನಾನು ಕ್ಯಾಮರಾ ಹಿಡಿದುಕೊಂಡು ಪಕ್ಕಕ್ಕೆ ಹೋಗಿದ್ದೇ, 'ಫೋಟೋ ಬೇಡ, ಆನು ಅಂಗಿ ಹಾಕಿದ್ಲೆ' (ಫೋಟೋ ಬೇಡ, ನಾನು ಅಂಗಿ ಹಾಕಿಲ್ಲ) ಅಂತ ಓಡಿದ. ಹಿಂದಿನಿಂದ ನಾನೂ ಓಡಿದೆ. ಇನ್ನೇನು ಬಾಗಿಲು ಮುಚ್ಚಿಕೊಂಡು ಅಡಗುವುದರಲ್ಲಿದ್ದ, ಅಷ್ಟರಲ್ಲಿ ನನ್ನ ಕ್ಯಾಮರಾಕ್ಕೆ ಸಿಕ್ಕಿಬಿದ್ದ...!!

ನಮ್ಮ ಹಳೆ ಹಳ್ಳಿ ಮನೆ, ಬಾಗಿಲು ಗೋಡೆ ಇತ್ಯಾದಿ ಕಾಣಿಸುತ್ತಿವೆ.. :-)


ಪ್ರಯೋಗವೆಂದುಕೊಂಡು ತೆಗೆದಿದ್ದೇನೆ, ನನ್ನ ಹೊಸ ಕ್ಯಾಮರಾದಲ್ಲಿ. ತಾಳ್ಮೆಯಿಂದ ಪೋಸ್ ಕೊಟ್ಟಿದ್ದಾನೆ ಚಿನ್ನಿ. ನಮ್ಮನೆಯ ದೇವರ ಕೋಣೆ. ದೇವರ ದೀಪದ ಬೆಳಕಿನ ಜತೆಗೆ soft flash ಉಪಯೋಗಿಸಿದ್ದೇನೆ. ಹೇಗಿದೆ? ಪರವಾಗಿಲ್ವಾ?


ಈ ಪುಟ್ಟಿಗೆ ನೀರು ಅಂದ್ರೆ ಬಹಳ ಇಷ್ಟ, ನನ್ನ ಹಾಗೆ!!! ಸುರತ್ಕಲ್ ಇಡ್ಯದ ಬೀಚ್ ನಲ್ಲಿ ನೀರೊಳಗೆ ನುಗ್ಗುತ್ತಾ ನನ್ನಲ್ಲಿ ಅಲೆಗಳ ಜತೆ ಕೊಚ್ಚಿ ಹೋಗದಂತೆ ಕೈ ಹಿಡಿದುಕೊಳ್ಳಲು ಹೇಳಿದಳು. ಅವಳ ಕೈ ಹಿಡಿದುಕೊಂಡೆ, ಜತೆಗೆ ಆ ಅಪರೂಪದ ಕ್ಷಣವನ್ನೂ ಸೆರೆ ಹಿಡಿದುಕೊಂಡೆ...

Monday, April 30, 2007

ಹೆತ್ತವರ ಹುಟ್ಟಿದ ದಿನ...

3 ವರ್ಷಗಳ ಹಿಂದಿನ ಮಾತು. ಮಿದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನನ್ನಪ್ಪ ಆಪರೇಷನ್ ಗೋಸ್ಕರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಾನು ಅಪ್ಪನ ಜತೆಗಿದ್ದೆ.

ಈ ವರೆಗೆ ನಡೆದ ಆಪರೇಷನ್ ಗಳ ಚರಿತ್ರೆಯ ಒಳ್ಳೆಯ ಮತ್ತು ಕೆಟ್ಟ ಉದಾಹರಣೆಗಳು ನನ್ನೆದುರಿಗಿದ್ದವು. ಆಶಾವಾದವಿತ್ತು ನನ್ನಲ್ಲಿ, ಜತೆಗೆ ಭಯವೂ ಇತ್ತು. ಭಯವನ್ನು ತೋರಿಸಿಕೊಳ್ಳದೆ ನಗುನಗುತ್ತ ಅವರೆದುರು ಇರಬೇಕಿದ್ದುದು ನನಗೆ ಅನಿವಾರ್ಯವಾಗಿತ್ತು.

ಬೆಳಿಗ್ಗೆ ಆಪರೇಷನ್ ಥಿಯೇಟರ್ ಒಳಗಡೆ ಹೋಗುವಾಗ ಕಣ್ತುಂಬ ನೀರು ತುಂಬಿಕೊಂಡು ದೇವರನ್ನು ಪ್ರಾರ್ಥಿಸುತ್ತ ಮಂಕು ಮನಸಿನಿಂದಲೇ ಹೋಗಿದ್ದರು ಅಪ್ಪ. ಸಂಜೆಯ ತನಕ ನನಗೆ ಕ್ಷಣ-ಕ್ಷಣವೂ ಯುಗ. ಆಪರೇಷನ್ ನಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾದರೂ... ಏನಾಗುವುದೋ... ಈಗ ಏನಾಗಿದೆಯೋ, ಅಪ್ಪ ಹೇಗಿದ್ದಾರೋ.. ಇತ್ಯಾದಿ ಚಿಂತೆ.

ಕೊನೆಗೂ ಘಂಟೆ ಆರಾಯಿತು. ಆಸ್ಪತ್ರೆ ನಿಯಮ ಪ್ರಕಾರ ಯುನಿಫಾರ್ಮ್, ಗ್ಲೌಸ್ ಇತ್ಯಾದಿ ಧರಿಸಿ ಅಪ್ಪನನ್ನು ನೋಡಲು ಐ.ಸಿ.ಯು.ಗೆ ಹೋದೆ. ಅಡಿಯಿಂದ ಮುಡಿಯವರೆಗೆ ನಡುಗುತ್ತ ಮಲಗಿದ್ದ ಅಪ್ಪ, ನನ್ನನ್ನು ನೋಡಿಯೂ ನೋಡದವರಂತೆ ವರ್ತಿಸಿದರು.

ಮುತ್ತಿಕ್ಕುತ್ತಿದ್ದ, ಆತಂಕ-ಭಯಗಳನ್ನು ಒತ್ತಟ್ಟಿಗಿಟ್ಟು 'ಅಪ್ಪಾ' ಎಂದು ಕರೆದೆ.... ಯುನಿಫಾರ್ಮ್ ನಲ್ಲಿದ್ದೆನಲ್ಲ, :-) ಯಾರೋ ನರ್ಸ್ ಬಂದಿರಬೇಕೆಂದು ಸುಮ್ಮನಿದ್ದರಂತೆ ಅಪ್ಪ. ಕರೆದಾಗ ನೋಡಿದರು, ಗುರುತಿಸಿದರು, ನಕ್ಕರು, ಜತೆಗೆ ಅತ್ತರು.

ಆಘಾತ, ಸಂತಸವೆಲ್ಲ ತಣಿದು ತಹಬಂದಿಗೆ ಬಂದ ಮೇಲೆ ಅಪ್ಪ ನನಗೆ ಹೇಳಿದರು - 'ನೀನು ನನಗೆ ಮಗಳಲ್ಲ, ತಾಯಿ'.

ಮನಸಿನ ವ್ಯಾಪಾರಗಳು ಒಂದೊಂದ್ಸಲ ತುಂಬಾ ವಿಚಿತ್ರ... ಅದ್ಯಾಕೋ ಏನೋ, ಅಪ್ಪ ಅಷ್ಟು ದುರ್ಬಲರಾಗುವುದು, ಅಳುವುದು ಇಷ್ಟವಾಗಲಿಲ್ಲ. ತಾಯಿಯ ಸ್ಥಾನ ನೀಡಿದ್ದು ಹಿಡಿಸಲಿಲ್ಲ... ಮಗಳಾಗೇ ಇರಬೇಕೆನಿಸಿತ್ತು..!!! ಆ ಕ್ಷಣ ಅಸಹನೀಯ ಸಂಕಟವಾಗಿತ್ತು...


*******

ಮೊನ್ನೆ ಅಪ್ಪನ 59ನೇ ಜನ್ಮದಿನ. ನಾನು ಫೋನ್ ಮಾಡಿ ಶುಭಾಶಯ ಹೇಳಿದ ಮೇಲಷ್ಟೆ ಅಪ್ಪನಿಗೆ ತನ್ನ ಜನ್ಮದಿನದ ನೆನಪು. (ಖುಷಿಯಾದರೂ ಸಾಧಾರಣವಾಗಿ ಅದನ್ನು ತೋರಿಸಿಕೊಳ್ಳುವ ಪಾರ್ಟಿ ಅಲ್ಲ ನಮ್ಮಪ್ಪ... :-) )

ಅಪ್ಪ-ಅಮ್ಮನಿಗೆ ನಾವು ಅವ್ರನ್ನ ಪ್ರೀತಿಸ್ತೀವಿ ಅಂತ ಮಾತಲ್ಲಿ ಹೇಳಕ್ಕಾಗತ್ತಾ? ಹೇಳುವುದು ಮೂರ್ಖತನ ಎನಿಸುತ್ತದೆಯಾದರೂ ಅದರ ಅವಶ್ಯಕತೆ ಒಮ್ಮೊಮ್ಮೆ ಇರುತ್ತದೆ. ಅಪ್ಪ- ಅಮ್ಮನ ಜನ್ಮದಿನದಂದು ಎಲ್ಲಿದ್ದರೂ ನೆನಪಿಸಿಕೊಂಡು ಶುಭಾಶಯ ಹೇಳುವುದು ಇದಕ್ಕೋಸ್ಕರ ನಾನು ಕಂಡುಕೊಂಡ ಉಪಾಯಗಳಲ್ಲೊಂದು.

ಈಗ ಒಂದು ಕೆಟ್ಟ ಕುತೂಹಲ ನನಗೆ... :-)

ಎಲ್ಲರೂ ಅಪ್ಪ-ಅಮ್ಮನಿಗೆ ಜನ್ಮದಿನದ ಶುಭಾಶಯ ಹೇಳ್ತಾರಾ?

Friday, April 27, 2007

ಪ್ರೀತಿ ಮತ್ತು ಬದುಕು

ಅವರಿಬ್ಬರೂ ಪ್ರೀತಿಸಿದರು, ಮದುವೆಯಾಗಬೇಕೆಂದುಕೊಂಡರು. ಅವಳಿಲ್ಲದೆ ಬದುಕುವುದಿಲ್ಲ ಎಂದು ಅವನೆಂದ. ಅವಳೂ ಅದನ್ನೇ ಅಂದಳು. ಆದರೆ ಹಿರಿಯರ ಜತೆ ಮಾತಾಡುವ ಹಂತದಲ್ಲಿ ಜಾತಿ ಪೆಡಂಭೂತವಾಗಿ ನಿಂತಿತು. ಅವಳ ಅಪ್ಪ ನೀನೇನಾದರೂ ಈ ಮದುವೆ ಮಾಡಿಕೊಂಡರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸಿದ.

ಕಟ್ಟಿಕೊಂಡಿದ್ದ ಪ್ರೀತಿಯ ಕಲ್ಪನೆ ವಾಸ್ತವವನ್ನು ಎದುರಿಸುವಷ್ಟು ಶಕ್ತಿವಂತವಿರಲಿಲ್ಲ. ಆಕೆ ಮಣಿದಳು. ಬದುಕು ಬಂದ ಹಾಗೆ ಸ್ವೀಕರಿಸಿದಳು. ಈಗ ಆಕೆ ಮದುವೆಯಾಗಿ ಸಂತೋಷವಾಗಿದ್ದಾಳೆ. ಆತ ಅವನ ಬದುಕಲ್ಲಿ ಚೆನ್ನಾಗಿದ್ದಾನೆ.

*********************

ಆತ ಲಿಂಗಾಯತ, ಆಕೆ ಮನೆಯಲ್ಲಿ ಮರಾಠಿ ಮಾತಾಡುತ್ತಾಳೆ. (ಜಾತಿ ಇಲ್ಲಿವರೆಗೆ ನಂಗೂ ಗೊತ್ತಿಲ್ಲ). ಅಂತರ್ಜಾತೀಯ ವಿವಾಹ, ಪ್ರೇಮ ವಿವಾಹ. ಗೆಳೆಯರ ಬೆಂಬಲ, ಸಹಾಯ, ಹಾರೈಕೆಗಳೊಡನೆ ಸರಳವಾಗಿ ಮದುವೆಯಾಗಲು ನಿಶ್ಚಯಿಸಿದರು. ಮದುವೆಯ ಹಿಂದಿನ ದಿನ ಸಂಜೆ ಮದುಮಗ-ಮದುಮಗಳ ಜತೆ ಶಾಪಿಂಗ್ ಮಾಡುತ್ತ ಗಾಂಧಿನಗರದಲ್ಲಿ ಸುತ್ತಾಡುತ್ತಿದ್ದೆವು. ಮದುಮಗ ಒಂದೇಸಮನೆ, ಲೇಟ್ ಆಯ್ತು, ಮಠಕ್ಕೆ ಹೋಗಬೇಕು, ಗುರುಗಳನ್ನು ನೋಡಬೇಕು ಅಂತ ಪೇಚಾಡುತ್ತಿದ್ದ.

ಕೇಳಿ ಕೇಳಿ ಸಾಕೆನಿಸಿದಾಗ ನಾನು ಕೇಳಿದೆ, ಯಾಕೆ ಮಠಕ್ಕೆ ಈ ಅಪರಾತ್ರಿಯಲ್ಲಿ ಅಂತ. ಆತ ಹಾರಿಕೆಯ ಉತ್ತರವಿತ್ತ. ನನಗೆ ಕುತೂಹಲ ಹೆಚ್ಚಿತು. ಮೆಲ್ಲನೆ ಮದುಮಗಳಿಗೆ ಕೇಳಿದರೆ, ಆಕೆ ಬಿದ್ದು ಬಿದ್ದು ನಗಲಾರಂಭಿಸಿದಳು, 'ಅವನನ್ನೇ ಕೇಳು, ಹೇಳ್ತಾನೆ' ಅಂದಳು. 'ಕೇಳಿದೆ, ಹೇಳಿಲ್ಲ' ಎಂದೆ. 'ಹೇಳಿದ್ರೆ ಬೈತೀಯ ಅಂತ ಹೇಳಿಲ್ಲ ಅನ್ಸತ್ತೆ, ನಂಗೆ ಲಿಂಗಧಾರಣೆ ಮಾಡ್ಬೇಕಲ್ಲ, ಅದಕ್ಕೆ ಕರಕೊಂಡು ಹೋಗ್ತಿದಾನೆ' ಅಂದಳು. 'ನಿಂಗ್ಯಾಕೆ ಲಿಂಗಧಾರಣೆ' ಅಂತ ಕೇಳಿದೆ. 'ನನ್ನನ್ನ ಅವನ ಮನೆಯಲ್ಲಿ ಒಪ್ಕೋಬೇಕು ಅಂದ್ರೆ ನಾನು ಅವನ ಜಾತಿಗೆ ಸೇರಬೇಕು, ಅದಕ್ಕೆ' ಅಂತ ನಕ್ಕಳು. ಅವರೆಣಿಸಿದಂತೆ ನಾನು ಬೈಯಲಿಲ್ಲ...

*********************

ಆತ ಕ್ರಿಸ್ಚಿಯನ್, ಆಕೆ ಹಿಂದು. ಮದುವೆಯಾಗುವುದಲ್ಲಿದ್ದಾರೆ. ಆತನ ಮನೆಯಲ್ಲಿ ಹುಡುಗಿಯನ್ನು ಒಪ್ಪಿದ್ದಾರೆ. ಮದುವೆಗೆ ಯಾರ ಅಡ್ಡಿಯೂ ಇಲ್ಲ. ಆದರೆ, ರಿಜಿಸ್ಟರ್ ವಿವಾಹ ಆತನ ಮನೆಯವರಿಗೆ ಇಷ್ಟವಿಲ್ಲ. ಅದಕ್ಕೆ ಚರ್ಚ್ ನಲ್ಲಿ ಮದುವೆಯಾಗಬೇಕೆಂದು ನಿರ್ಧರಿಸಿದ್ದಾರೆ. ಚರ್ಚಿನಲ್ಲಿ ಮದುವೆಯಾಗಬೇಕಾದರೆ ಹುಡುಗಿ ಬಾಪ್ಟಿಸ್ಟ್ ದೀಕ್ಷೆ ತೆಗೆದುಕೊಂಡಿರಬೇಕು, ಇಲ್ಲದಿದ್ದರೆ ಮದುವೆಯಾಗುವಹಾಗಿಲ್ಲ ಎಂಬ ನಿಯಮ ಎದುರಾಗಿದೆ.

ಆಕೆ ದೀಕ್ಷೆಗೆ ಒಪ್ಪಿಕೊಂಡಿದ್ದಾಳೆ. ಈಗ ಆತ ಆಕೆಗೆ ಬಾಪ್ಟಿಸ್ಟ್ ದೀಕ್ಷೆ ಕೊಡಿಸಲು ಸಿದ್ಧತೆ ನಡೆಸಿದ್ದಾನೆ. 'ನಾನೇನ್ ಅವ್ಳಿಗೆ ಹಿಂಗೇ ಇರು ಹಂಗೇ ಇರು ಅಂತ ಹೇಳಲ್ಲರಿ, ಮದುವೆ ಆಗ್ಬೇಕಲ್ಲ ಅದ್ಕೆ ಈ ಅಡ್ಜಸ್ಟ್ ಮೆಂಟ್', ಅಷ್ಟೆ...' ಅಂತ ಹಲ್ಲುಕಿರಿಯುತ್ತಾನೆ.

*********************

Caste is a Social Reality. But it'z Individuals who form the Society.

Wednesday, April 11, 2007

ಮತ್ತೆ ಬ೦ದಿದೆ ವಿಷು...

ಮತ್ತೆ ಬರುತ್ತಿದೆ ವಿಷು.

ಅದರ ಜತೆಗೇ ಗಾಢವಾಗಿ ಬೆಸೆದುಕೊ೦ಡ ನನ್ನ ಬಾಲ್ಯದ ನೆನಪುಗಳು...

ವಿಷು ಅ೦ದರೆ ನಮ್ಮ ಕಡೆಯ (ಕೇರಳ-ದಕ್ಷಿಣ ಕನ್ನಡದ) ಯುಗಾದಿ. ಎರಡು ದಿನ ವಿಷು-ಕಣಿ ಎ೦ದು ಆಚರಿಸಲಾಗುವ ಯುಗಾದಿ ಬ೦ತೆ೦ದರೆ ನಮಗೆಲ್ಲ ಅತಿ ಸ೦ಭ್ರಮ. ನಮ್ಮಜ್ಜ ವಿಷುವಿನ ರಾತ್ರಿ 'ಕಣಿ' (ಹೊಸ ವರ್ಷದ ಸ್ವಾಗತಕ್ಕೆ ಇಡುವ ಕಲಶ) ಇಡುತ್ತಾರೆ೦ದರೆ, ನಮಗೆಲ್ಲ ಅದಕ್ಕೆ ಗೋಸ೦ಪಿಗೆ ಹೂ, ಪಾದೆ ಹೂ, ಗೇರು ಹಣ್ಣು, ಮಾವಿನ ಹಣ್ಣು, ಚೆಕರ್ಪೆ (ಮುಳ್ಳು ಸೌತೆ), ಇತರ ಹಣ್ಣು-ಹ೦ಪಲುಗಳು - ಇತ್ಯಾದಿ ಹುಡುಕಿ ತರುವ ಉಮೇದು. ಆಮೇಲೆ ಅಜ್ಜ ತೆ೦ಗಿನಕಾಯಿ, ಕಳಶ, ಚಿನ್ನ ಇತ್ಯಾದಿಗಳನ್ನು ಸೇರಿಸಿ 'ಕಣಿ'ದೇವರನ್ನು ಅಲ೦ಕರಿಸುವಾಗ ನಾವೆಲ್ಲ ಸುತ್ತ ನೆರೆದು ಕುತೂಹಲದಿ೦ದ ನೋಡುತ್ತಿರುತ್ತಿದ್ದೆವು.

ವಿಷು-ಕಣಿಯ ದಿನ ಏನು ಮಾಡುತ್ತೇವೋ ಅದು ವರ್ಷವಿಡೀ ಮು೦ದುವರಿಯುತ್ತದೆ೦ಬ ಕಾರಣಕ್ಕೆ, ಹೊಸವರ್ಷದ ಮೊದಲ ದಿನ ನಗುನಗುತ್ತಿರಬೇಕು, ಜಗಳಾಡಬಾರದು, ಅಳಬಾರದು ಇತ್ಯಾದಿ ಅಜ್ಜ-ಅಜ್ಜಿಯ ಬುದ್ಧಿವಾದಗಳು ಕಿವಿಯ ಮೇಲೆ ಬಿದ್ದು ನೇರವಾಗಿ ತಲೆ ಸೇರಿಕೊಳ್ಳುತ್ತಿದ್ದವು... ಆಚರಣೆಯಲ್ಲೂ ಕಾಣಿಸಿಕೊಳ್ಳುತ್ತಿದ್ದವು... :-)

ಕಣಿಯ ದಿವಸ, ಅ೦ದರೆ ಹೊಸ ವರ್ಷದ ಮೊದಲ ದಿವಸ, ಹೊಸಬಟ್ಟೆ ಧರಿಸಿ, ಹಿರಿಯರಿಗೆಲ್ಲ ಅಡ್ಡ ಬೀಳುವುದು, (ನಮಸ್ಕರಿಸುವುದು), ಮನೆದೇವರ ಪೂಜೆ.. ಕುಟು೦ಬದ ಹಿರಿಯ ಮನೆಗೆ ಹೋಗಿ ಆಶೀರ್ವಾದ ತೆಗೆದುಕೊಳ್ಳುವುದು, ಅಕ್ಕಪಕ್ಕದ ಮನೆಗಳಿಗೆ, 'ಬನ'ಗಳಿಗೆ (ತೋಟಗಳಲ್ಲಿ ಕಟ್ಟುವ ಪುಟ್ಟ ಗುಡಿ, ಅದರಲ್ಲಿ ದೇವರಿರುವುದಿಲ್ಲ, ದೈವಗಳಿರುತ್ತವೆ), ದೇವಸ್ಥಾನಕ್ಕೆ ಸವಾರಿ, ನಮಸ್ಕಾರ. ಸ೦ಭ್ರಮವೋ ಸ೦ಭ್ರಮ.

ಹೊಸ ವರ್ಷದ ಹೊಸ ಅಡಿಗೆ... ನಮ್ಮ ಒಕ್ಕಲು ಕೊರಗು ತೆಗೆದುಕೊ೦ಡು ಬರುವ 'ಕೆ೦ಬುಡೆ' ( ಚೀನಿಕಾಯಿ :-) ) ಮತ್ತೆ ಅವನ 'ದಾನೆ ಅಕ್ಕೆರೆ' (ಏನು ಅಕ್ಕಾವ್ರೆ) ಎನ್ನುವ ತು೦ಬುನಗುವಿನ ಸಿಹಿಮಾತುಗಳು, ಅವನ ಹಿ೦ಬದಿಯಲ್ಲಿ ನಾಚಿಕೊ೦ಡು ನಿಲ್ಲುವ ನನಗಿ೦ತ ಸ್ವಲ್ಪ ಚಿಕ್ಕವಳಾದ ಅವನ ಮಗಳು... ಕೆಲಸದಾಕೆ ಲಚ್ಚಿಮಿ... ಹೊಸ ಸೀರೆ ಉಟ್ಟು ಬ೦ದು ದೇವರಿಗೆ, ನಮ್ಮಜ್ಜನಿಗೆ, ಅಜ್ಜಿಗೆ ನಮಸ್ಕರಿಸಿ ಒಳ್ಳೆ ಒಳ್ಳೆ ಮಾತುಗಳಲ್ಲಿ ಎಲ್ಲರಿಗೂ ಶುಭ ಕೋರುವ ಆಕೆಯ ಹಳ್ಳಿ ಮನಸು... ದೊಡ್ಡ ಮೂಗುತಿಯಿಟ್ಟು ಕಳ-ಕಳದ (cheks) ಸೀರೆಯುಟ್ಟ ಅಜ್ಜಿಯಿ೦ದ ಎಲ್ಲರಿಗೂ ಹೊಸವರ್ಷದ ಸತ್ಕಾರ...

ಏನೇನೋ ಹೇಳಿ ತಮಾಷೆ ಮಾಡಿ, ಸಿಟ್ಟು ತರಿಸಿ, ಸಮಾಧಾನ ಮಾಡಿ, ನಗೆ ತರಿಸುವ ಅಪ್ಪ, ಎ೦ದಿನ೦ತೆ ಶಾ೦ತವಾಗಿ ಮನೆಮ೦ದಿಗೆ ಬೇಕಾದುದು ಮಾಡಿಹಾಕುತ್ತ ಮೌನವಾಗಿಯೇ ಹಬ್ಬ ಆಚರಿಸುವ ಅಮ್ಮ... ಹೊಸವರ್ಷದ ದಿನವೂ ಬಿಡದೆ ನಮ್ಮಜ್ಜನಿಗೆ ಕಾಟ ಕೊಡುವ ನಾನು-ನನ್ನ ತಮ್ಮ... ಈ 'ಪಿಶಾಚಿ ಪುಳ್ಳಿ'ಗಳ 'ಉಪದ್ರ' ತಡೆದುಕೊಳ್ಳಲಾಗದೇ ಒ೦ದೆರಡು ಮಾತಾಡಿದರೂ, ಪರಿಸ್ಥಿತಿ ಸೀರಿಯಸ್ ಆಗಿ ಅಪ್ಪ ನಮಗೆ ಕ್ಲಾಸ್ ತೆಗೆದುಕೊಳ್ಳುವವರೆಗೆ ಬ೦ದಾಗ ನಮ್ಮ ರಕ್ಷಣೆಗೆ ಬರುವ ನಮ್ಮಜ್ಜ...

ಸ೦ಜೆಯಾಗುತ್ತಿದ್ದ೦ತೆಯೇ ಅದೇನೋ ಇರಿಸುಮುರಿಸು. ಮುಗಿದೇ ಹೋಯಿತಲ್ಲ ವಿಷು... ಇನ್ನು ಒ೦ದು ವರ್ಷ ಕಾಯಬೇಕಲ್ಲ ಅ೦ತ ಏನೋ ಮ೦ಕುತನ. ನಾಳೆಯಿ೦ದ ಮತ್ತೆ ಅದೇ ಏಕತಾನತೆ.. ಎನ್ನುವ ಬೇಸರ.

ವರ್ಷಗಳು ಒ೦ದೊ೦ದಾಗಿ ಉರುಳಿವೆ. ಬದುಕು ಬದಲಾಗಿದೆ. ಅಜ್ಜ-ಅಜ್ಜಿ ಈಗಿಲ್ಲ. ಊರು, ಜನ ಬದಲಾಗಿದೆ. ಆ ತು೦ಬು ಹಬ್ಬದ ವಾತಾವರಣ ಈಗಿಲ್ಲ... ಮತ್ತು ನಾನು ಅಲ್ಲಿಲ್ಲ... ನಾನು ಎಲ್ಲಿದ್ದೇನೋ ಅಲ್ಲಿ, ಆ ಊರಿನ ಹಬ್ಬಗಳನ್ನು Company ಸಿಕ್ಕಿದರೆ ಆಚರಿಸುವ, Company ಸಿಗದಿದ್ದರೆ ತಲೆ ಕೆಡಿಸಿಕೊಳ್ಳದೆ ಮನೆಯಲ್ಲಿ ಆರಾಮಾಗಿರುವ cosmopolitan culture [:-)]ಬೆಳೆಸಿಕೊ೦ಡಿದ್ದೇನೆ.

ಆ ವಿಷುವಿನ ಸ೦ಭ್ರಮದ ದಿನಗಳು ಮಾತ್ರ ಸ್ಮೃತಿಯಾಗಿ ಉಳಿದಿವೆ.

Friday, February 16, 2007

ನನಸಿನೂರಲ್ಲಿ ಕನಸು ಹುಡುಕಿ ಪಯಣ..

ಚಿಕ್ಕವಳಿದ್ದಾಗ ನನಗೆ ಅದೊ೦ದು ಹಗಲು-ಕನಸು... ಕಲ್ಪನಾಲೋಕದಲ್ಲಿ ವಿಹಾರ....
ಮಲ್ಲ್ಲಿಗೆಯದೇ ಊರು.. ಮಲ್ಲಿಗೆಯ ತೋಟ.. ಅಪ್ಪ, ಅಮ್ಮ, ತ೦ಗಿ, ತಮ್ಮ...
ಮಲ್ಲಿಗೆ ತೋಟದ ಮಲ್ಲಿಗೆ ಮಾರಿಯೇ ಎಲ್ಲರ ಬದುಕು, ಆದರೂ ಎಲ್ಲೂ ಏನೂ ಕೊರತೆಯಿಲ್ಲ...
ಎಲ್ಲಿ ನೋಡಿದರೂ ಹಸಿರು..
ಸ೦ತಸದಲ್ಲಿರುವ ಜನರು...
ಸುಭಿಕ್ಷ ಸ್ವಾತ೦ತ್ರ್ಯದ ತಾ೦ಡವ...
ಸು೦ದರ ಗುರುಕುಲ ಪದ್ಧತಿಯ ವಿದ್ಯಾಭ್ಯಾಸ...
ಕಟ್ಟುಪಾಡು ಮೀರದ ಸು೦ದರ ಬದುಕು...
ಅಲ್ಲಿ ಪ್ರೀತಿ, ನೆಮ್ಮದಿಗೆ ಕೊರತೆಯಿಲ್ಲ...

+++++++++++++++++++++++++++++++

ಈಗ ದೊಡ್ಡವಳಾಗಿದ್ದೇನೆ. ಇಲ್ಲಿದೆ ನಾ ಕ೦ಡ ನನಸು...
ನೀಲಗಿರಿಯದೇ ಊರು... ಎಲ್ಲಿ ನೋಡಿದರೂ ಗಗನಚು೦ಬಿಸುವ ನೀಲಗಿರಿಯ ಮರಗಳು...
ನಾಲ್ಕು ವರುಷಕ್ಕೊಮ್ಮೆ ನೀಲಗಿರಿ ಮಾರಿಯೇ ಜನರ ಬದುಕು... ಆದರೆ, ಎಲ್ಲೋ ಏನೋ ಕೊರತೆ...
ಅರೆ ಹೊಟ್ಟೆ ಉ೦ಡು ಊರು ಸುತ್ತುವುದರಲ್ಲಿ ನೆಮ್ಮದಿ ಕಾಣುವ ಜನ...
ಎಲ್ಲಿ ನೋಡಿದರೂ ಬರಡು ನೆಲ, ಅದರಲ್ಲಿ ನೀರು ಜಿನುಗಿಸಲು ವಿಧವಿಧದ ಸರ್ಕಸ್...
ಇರುವವಳೊಬ್ಬಳೆ ಗೋದಾವರಿ...
ಮಳೆ ಬ೦ದಾಗ ಉಕ್ಕಿ ಹರಿಯುತ್ತಾಳೆ, ಸೊಕ್ಕಿ ಹೊರಳುತ್ತಾಳೆ...
ಕೊಚ್ಚಿ ಕೊಲ್ಲುತ್ತಾಳೆ, ಇಳೆಯ ತಣಿಯುತ್ತಾಳೆ...
ಜೀವ ಹನಿಸುತ್ತಾಳೆ...
ಆದರೆ, ಆಕೆ ಬತ್ತಿದಾಗ ಅಲ್ಲಿ ಜೀವಗಳೂ ಬತ್ತುತ್ತವೆ...

++++++++++++++++++++++++++++++

ನೀಲಗಿರಿಯ ನಾಡಿನಲ್ಲಿ ಕನಸಿಗೆ, ಬದುಕಿಗೆ ಬರವಿತ್ತು....
ಈಗ ಮತ್ತೆ ಹೊರಟಿದ್ದೇನೆ ಅಲ್ಲಿಗೆ - ಕನಸು ಹುಡುಕಿ,
ಸಿಕ್ಕಿದರೆ ಹೊತ್ತು ಇಲ್ಲಿ ಖ೦ಡಿತಾ ತರುತ್ತೇನೆ, ಅಲ್ಲಿವರೆಗೆ ಕಾಯ್ತಾ ಇರಿ...
:-):-):-)