Sunday, May 11, 2008

ಚುನಾವಣೆ, ಮತ್ತು ಒಂದಿಷ್ಟು ಕೊರೆತಪುರಾಣ... :)

ಇದೇನಪ್ಪಾ ಇದ್ದಕ್ಕಿದ್ದಂತೆ ರಾಜಕೀಯದ ಬಗ್ಗೆ ಇಷ್ಟೊಂದು ಕೊರೆತ ಶುರುಮಾಡಿದಾಳಲ್ಲ ಅಂತ ಅನ್ಕೋಬೇಡಿ, ಇದರಷ್ಟು ಕಲರ್-ಫುಲ್ ವಿಷಯ ಇನ್ಯಾವುದೂ ಇಲ್ಲ!

++++++++++++++++

ಕನ್ನಡ ಟೀವಿ ಚಾನೆಲ್-ಗಳಲ್ಲಿ ಇತ್ತೀಚೆಗೆ ಬರ್ತಾ ಇರುವ ರಾಜಕೀಯ ಪಕ್ಷಗಳ ಜಾಹೀರಾತುಗಳನ್ನು ನೋಡ್ತಾ ಇದ್ರೆ ಮಜಾ ಅನ್ನಿಸುತ್ತದೆ. ಅಳಬೇಕೋ ನಗಬೇಕೋ ಗೊತ್ತಾಗುವುದಿಲ್ಲ.

ಕಾಂಗ್ರೆಸ್ ’20 ತಿಂಗಳುಗಳ ದುರಾಡಳಿತ’ದ ಬಗ್ಗೆ ತನ್ನ ಬೇಸರವನ್ನು ಒಂದು ಜಾಹೀರಾತಿನಲ್ಲಿ ಹೇಳಿಕೊಂಡರೆ, ಇನ್ನೊಂದು ಜಾಹೀರಾತಿನಲ್ಲಿ ತನ್ನ ಭರವಸೆಗಳನ್ನು ಹೇಳಿಕೊಂಡಿದೆ... ಕಲರ್ ಟೀವಿ, ಎರಡು ರುಪಾಯಿಗೆ ಅಕ್ಕಿ ಇತ್ಯಾದಿ ಇತ್ಯಾದಿ. ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡ ಬಡವರಿಗೆ ಅಪೀಲ್ ಆಗುವಂತಹ ಅಂಶಗಳನ್ನೇ ಜಾಹೀರಾತಿನಲ್ಲಿ ಹಾಕಿಕೊಂಡಿದೆ. ಇದರಲ್ಲಿ ಹೇಳುವಂತಹದೇನೂ ಇಲ್ಲ.

ಬಿಜೆಪಿಯ ಎಲ್ಲಾ ಜಾಹೀರಾತುಗಳು ನೇರವಾಗಿ ಐವತ್ತು ವರ್ಷ ಆಳಿದ ಪಕ್ಷಕ್ಕೆ ಸಡ್ಡು ಹೊಡೆಯುತ್ತವೆ. ಮೊದಲಿಗೆ ಕಾಂಗ್ರೆಸ್ ಪಕ್ಷದ ಹೆಸರು ನೇರವಾಗಿ ಬರ್ತಾ ಇತ್ತು, ಆಮೇಲೆ ಚುನಾವಣಾ ಆಯೋಗ ಕತ್ತರಿ ಹಾಕಿದ ಮೇಲೆ ಅದು ’ಐವತ್ತು ವರ್ಷ ಆಳಿದ ಪಕ್ಷ’ ಆಯಿತು.

ಇದರಲ್ಲಿ ಮೊದಲ ಜಾಹೀರಾತು ಸುಷ್ಮಾ ಸ್ವರಾಜ್ ಭಾಷಣವಿತ್ತು. ಕಾಂಗ್ರೆಸ್-ಗೆ ಹಿಗ್ಗಾಮುಗ್ಗ ಬೈದ ಕಾರಣ ಸೆನ್ಸಾರ್ ಆಗಿ ಕಾಂಗ್ರೆಸ್ ಅಂತ ಇದ್ದಲ್ಲೆಲ್ಲ ’ಟುಂಯ್’ ಅಂತ ಶಬ್ದ ಹಾಕಿಸಿಕೊಂಡು ಒಂದು ವಾರ ಟೆಲಿಕಾಸ್ಟ್ ಆಯಿತು. ನಂತರ ನಿಂತ ಹಾಗಿದೆ.

ಮುಂದಿನ ಜಾಹೀರಾತುಗಳ ಟಾರ್ಗೆಟ್ ನೇರವಾಗಿ ಮಧ್ಯಮವರ್ಗ. ಆಹಾರವಸ್ತುಗಳ ಬೆಲೆ ಹೆಚ್ಚಳ ಒಂದು ಜಾಹೀರಾತಿನಲ್ಲಿ, ಇನ್ನೊಂದ್ರಲ್ಲಿ ಗೃಹಸಾಲ ಬಡ್ಡಿ, ಮನೆ ಕಟ್ಟುವ ಸಾಮಗ್ರಿಗಳ ಬೆಲೆ ದುಬಾರಿ. ಇವೆಲ್ಲದಕ್ಕೂ ’ಐವತ್ತು ವರ್ಷ ಆಳಿದ ಪಕ್ಷ’ ಹೊಣೆಯಾಗಿದೆ. ಹಿನ್ನೆಲೆಯಲ್ಲಿ ಮೆಲುವಾಗಿ ’ದೋಣಿ ಸಾಗಲಿ ಮುಂದೆ ಹೋಗಲಿ’ ಹಾಡಿನ ಸಂಗೀತ ಕೇಳಿಬರುತ್ತದೆ, ನೋಡಿದವರೆಲ್ಲ ಹೌದು ಹೌದು ಅನ್ನುವ ಹಾಗಿದೆ ಜಾಹೀರಾತು.

ಇನ್ನೊಂದು ಜಾಹೀರಾತಿನಲ್ಲಿ ಭಯೋತ್ಪಾದನೆಯನ್ನು ಮುಖ್ಯವಾಗಿ ತೆಗೆದುಕೊಳ್ಳಲಾಗಿದ್ದು, ಬಿಜೆಪಿಯ ಟ್ರೇಡ್-ಮಾರ್ಕ್ ಆಗಿರುವ ಹಿಂದುತ್ವಕ್ಕೆ ಬದ್ಧತೆಯ agendaಕ್ಕೆ ಲೈಟಾಗಿ ಬಣ್ಣ ಬಳಿದು ಕೂಡಿಸಲಾಗಿದೆ. ಕೇಂದ್ರ ಸರಕಾರದ್ದು ಮುಸ್ಲಿಂ ತುಷ್ಟೀಕರಣ ಧೋರಣೆ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ’ಐವತ್ತು ವರ್ಷ ಆಳಿದ ಪಕ್ಷ’ಕ್ಕೆ ಯಾವುದು ಮುಖ್ಯ, ಅವರ ಸಗಟು ಮತಗಳೋ ಅಥವಾ ನಮ್ಮ ಅಮೂಲ್ಯ ಜೀವಗಳೋ’ ಅಂತ ಕೇಳಿ, ಕೊನೆಗೆ ’ಬಿಜೆಪಿಯೇ ಪರಿಹಾರ’ ಅನ್ನುತ್ತದೆ ಈ ಜಾಹೀರಾತು.

ಇದ್ದಿದ್ದರಲ್ಲಿ ಜೆಡಿ ಎಸ್ ಜಾಹೀರಾತೇ ವಾಸಿ. ಬೇರೆ ಪಕ್ಷಗಳ ಕುರಿತು ಮಾತೇ ಆಡದೆ ತಮ್ಮ ಪಕ್ಷ ಮತ್ತು ನಾಯಕನನ್ನು ಬಿಂಬಿಸುವ ಯತ್ನ ಮಾತ್ರ ಇಲ್ಲಿ ನಡೆದಿದೆ. ಆದರೆ ಹೆಚ್ಚಿನ ಚಾನೆಲ್-ಗಳಲ್ಲಿ ಹೆಚ್ಚು ದಿನ ಈ ಜಾಹೀರಾತು ಬರಲಿಲ್ಲ. ಬಹುಷ ಪಾರ್ಟಿ ಪಾಪರ್ ಆಗಿರುವುದು ಕಾರಣವಿರಬಹುದು, ೧೦ ಸೆಕೆಂಡಿಗೆ ಟೀವಿ ಚಾನೆಲ್-ನಲ್ಲಿ ಪ್ರೈಮ್ ಟೈಮ್-ನಲ್ಲಿ 14000 ರೂಪಾಯಿಯಷ್ಟು ಬೆಲೆಇರುವಾಗ, ಎಷ್ಟಂದರೂ ಪ್ರಾದೇಶಿಕ ಪಕ್ಷವಲ್ಲವೇ, ರಾಷ್ಟ್ರೀಯ ಪಕ್ಷಗಳಷ್ಟು ಕಾಸು ಎಲ್ಲಿಂದ ಬರಬೇಕು... :(

++++++++++++++++

ಏನೇ ಹೇಳಿ, ಇದ್ದಿದ್ರಲ್ಲಿ ಶಿಸ್ತುಬದ್ಧವಾಗಿ campaign ಮಾಡ್ತಾ ಇರೋದು ಈಸಾರಿ ಬಿಜೆಪಿಯೇ. ಮೊದಲ ಹಂತ ಕಳೆದ ಕೂಡಲೇ ಉತ್ತರದ ಕಡೆಗೆ ಹೆಚ್ಚು ಗಮನ ಕೊಡಲಿಕ್ಕಾಗಿ ತಾತ್ಕಾಲಿಕವಾಗಿ ಹುಬ್ಬಳ್ಳಿಗೆ ಪಕ್ಷದ ಆಫೀಸು ಸ್ಥಳಾಂತರಗೊಳ್ತಾ ಇದೆ. ಕಾಕತಾಳೀಯವಾಗಿ, ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಮೊದಲ ಹಂತದ ಮತದಾನದ ದಿನವೇ ಕೋರ್ಟಿನಲ್ಲಿ ಸಿಡಿದ ಬಾಂಬು ಬೇರೇನು ಮಾಡದಿದ್ದರೂ ಜನತೆಯಲ್ಲಿ ಭಯವನ್ನಂತೂ ಖಂಡಿತಾ ಹುಟ್ಟಿಸಿದೆ. ಇಂತಹಾ ಸಮಯದಲ್ಲಿ ಭಯೋತ್ಪಾದನೆಯ ಕುರಿತ ಬಿಜೆಪಿಯೇ ಪರಿಹಾರ ಜಾಹೀರಾತು ಕೆಲವರಿಗಾದರೂ ಪರಿಹಾರ ಸೂಚಿಸಿದರೆ ಆಶ್ಚರ್ಯವಿಲ್ಲ. ಸರಿಯಾದ ಸಮಯಕ್ಕೆ ಸರಿಯಾದ ಜಾಹೀರಾತು.

++++++++++++++++

ಇನ್ನೊಂದು ನನಗೆ ಮಜಾ ಅನಿಸಿದ್ದು ಪ್ರಣಾಳಿಕೆಗಳು. ಸಿಕ್ಕಿದರೆ ಒಂದು ಸಲ ಎಲ್ಲಾ ಪಕ್ಷಗಳ ಪ್ರಣಾಳಿಕೆಗಳನ್ನೂ ತೆಗೆದು ನೋಡಿ, ನನ್ನ ಹಾಗೆಯೇ ನೀವೂ ನಗಬೇಕೋ ಅಳಬೇಕೋ ತಿಳಿಯದೆ ಕಂಗಾಲಾಗುತ್ತೀರಿ. ಒಬ್ಬರು ಕಡುಬಡವರಿಗೆ 3 ರೂಪಾಯಿಗೆ ಅಕ್ಕಿ ಕೊಟ್ಟರೆ ಇನ್ನೊಬ್ಬರು ಅದನ್ನು 2 ರೂಪಾಯಿಗೆ ಇಳಿಸುತ್ತಾರೆ. ಕಡುಬಡವರು ಅಂದರೆ ಯಾರು ಗೊತ್ತಾ... ತಿಂಗಳಿಗೆ 1000 ರೂಪಾಯಿಗಿಂತ ಕಡಿಮೆ ಆದಾಯ ಇರುವವರು - ದಿನಕ್ಕೆ 34 ರೂಪಾಯಿಗಿಂತ ಕಡಿಮೆ ಆದಾಯ ಇರುವವರು. ತಿಂಗಳಿಗೆ 1000 ರೂಪಾಯಿಗಳಿಗಿಂತ ನಿಮ್ಮ ಆದಾಯ ಹೆಚ್ಚಿದ್ದಲ್ಲಿ ನೀವು ಬಡತನದ ರೇಖೆಗಿಂತ ಮೇಲಿದ್ದೀರಿ ಅಂತ ಅರ್ಥ :) ಎಲ್ಲಾ ಪಕ್ಷಗಳೂ ಇದನ್ನು ಗಣನೆಗೆ ತೆಗೆದುಕೊಳ್ಳದೇ ಪ್ರಣಾಳಿಕೆ ರಚಿಸಿದರೆ, ಬಿಜೆಪಿ ಚೂರು ಜಾಣತನ ತೋರಿಸಿತು. ಕಡುಬಡವರ ಆದಾಯಮಿತಿಯನ್ನು ವರ್ಷಕ್ಕೆ 30,000ಕ್ಕೆ ಹೆಚ್ಚಿಸಿ, 30,000ದಿಂದ 60,000ದ ವರೆಗೆ ಆದಾಯವಿರುವವರನ್ನು ಬಡವರು ಅಂತ ವರ್ಗೀಕರಿಸುವ ಭರವಸೆ ನೀಡಿತು, ಪ್ರಣಾಳಿಕೆಯಲ್ಲಿ ಈ ಅಂಶವನ್ನು bold ಮಾಡಿ ಮೊದಲಿಗೇ ಹಾಕಿತು.ಆದರೆ ಅದ್ಯಾಕೋ ಏನೋ, ಇದನ್ನು ಹೆಚ್ಚಿನ ಮಾಧ್ಯಮಗಳು ಗುರುತಿಸಲೇ ಇಲ್ಲವಾಗಿ, ಇತರ ಅಂಶಗಳ ಬಗ್ಗೆಯೇ ಚರ್ಚೆ ಹೆಚ್ಚಾಯಿತು.

ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಯೋಜನೆ ಕಾಂಗ್ರೆಸ್-ದಾದರೆ, ಬಿಜೆಪಿ ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ತರಬೇತಿಯ ಜತೆಗೆ ತರಬೇತಿಭತ್ಯೆ (ಸ್ಟೈಫಂಡ್) ನೀಡುವ ಆಶ್ವಾಸನೆ. ಆದರೆ ಇದನ್ನು ಕೂಡ ಕೆಲವು ಮಾಧ್ಯಮಗಳು ನಿರುದ್ಯೋಗ ಭತ್ಯೆ ಅಂತ ವರದಿ ಮಾಡಿದ ಕಾರಣ ಜೆಡಿಎಸ್ ನಾಯಕರು ’ಯುವಕರನ್ನು ಸೋಮಾರಿಯಾಗಿಸುವ ಯೋಜನೆ ಅದು’ ಅಂತ ಎರಡೂ ಪಕ್ಷಗಳಿಗೂ ಸೇರಿಸಿ ಬೈದರು. ಹೀಗೆ ಬಿಜೆಪಿ ಧರ್ಮಕ್ಕೆ ಬೈಗಳು ತಿಂದಹಾಗಾಯಿತು.

ಕಾಂಗ್ರೆಸ್ ಮತ್ತು ಬಿಜೆಪಿ ಪ್ರಣಾಳಿಕೆಗಳಲ್ಲಿ ಇನ್ನೊಂದು ಗಮನ ಸೆಳೆದ ಅಂಶವೆಂದರೆ, ಪಂಪ್ ಸೆಟ್-ಗಳಿಗೆ ಉಚಿತ ವಿದ್ಯುತ್ ಪೂರೈಕೆ. ಇದಕ್ಕೆ ಜೆಡಿಎಸ್ ನಾಯಕರು, ’ಯೂನಿಟ್ಟಿಗೆ 7-8 ರೂಪಾಯಿ ಕೊಟ್ಟು ವಿದ್ಯುತ್ ಹೊರಗಿನಿಂದ ಖರೀದಿಸುವ ಪರಿಸ್ಥಿತಿ ಇರುವಾಗ ಅದು ಹೇಗೆ ಉಚಿತವಾಗಿ ವಿದ್ಯುತ್ ಕೊಡ್ತಾರೆ’ ಅಂತ ವಾಗ್ದಾಳಿ ನಡೆಸಿದರು.ಕೊನೆಗೆ ಜೆಡಿಎಸ್ ಪ್ರಣಾಳಿಕೆ ಬಿಡುಗಡೆಯಾದಾಗ ಅದರಲ್ಲೂ ಒಂದು ಆಫರ್ ಇತ್ತು, ಕಡುಬಡವರಿಗೆ ಉಚಿತವಾಗಿ ಗ್ಯಾಸ್ ಸಂಪರ್ಕದ ಜತೆಗೆ ಉಚಿತ ಸ್ಟವ್ ನೀಡುವ ಆಫರ್.

ನಮ್ಮ ಮನೆಯಲ್ಲಿ ಗ್ಯಾಸ್ ಬುಕ್ ಮಾಡಿ ಕಡಿಮೆಯೆಂದರೂ ಒಂದು ವಾರ ಕಾಯಬೇಕಾಗುತ್ತದೆ, ಇನ್ನು ಕೆಲ ವರ್ಷಗಳ ನಂತರ ಗ್ಯಾಸ್, ವಿದ್ಯುತ್ ಸಿಕ್ಕಾಪಟ್ಟೆ ದುಬಾರಿಯಾಗುವ ನಿರೀಕ್ಷೆ ಇದೆ, ಜಗತ್ತಿನಲ್ಲಿ ಕೆಲವುಕಡೆಯಾದರೂ alternative renewable energy sources ಹುಡುಕಾಟ ಆರಂಭವಾಗಿದೆ, ಹಾಗಿರುವಾಗ ನಾವು ಇರುವುದು ಯಾವ ಶತಮಾನದಲ್ಲಿ?

++++++++++++++++

ಇನ್ನೊಂದು ಖತರ್-ನಾಕ್ ಯೋಜನೆ ಕಂಡುಬಂದಿದ್ದು ಬಿಜೆಪಿ ಪ್ರಣಾಳಿಕೆಯಲ್ಲಿ. ನಮ್ಮದೇಶದಲ್ಲಿ ನೆಲವನ್ನು ಕೊಳ್ಳಬೇಕೆಂದರೆ land purchase policies ಸುಲಭವಾಗಿ ಬಿಡುವುದಿಲ್ಲ. ಕೃಷಿಗಾಗಿ ಭೂಮಿ ಕೊಳ್ಳುವವರಿಗೆ ಮಾತ್ರ ಸುಲಭವಾಗಿ ಭೂಮಿ ಸಿಗುವ ಕಾರಣ ಅಮಿತಾಭ್ ಬಚ್ಚನ್ ಕೂಡ ’ಕೃಷಿಕ’ ಆದದ್ದು ಇಂದು ಇತಿಹಾಸ. ಈ ಪಾಲಿಸಿಗೆ ತಿದ್ದುಪಡಿ ತಂದು ಯಾರು ಬೇಕಾದರೂ ಭೂಮಿ ಕೊಳ್ಳಲು ಅನುಕೂಲವಾಗುವಂತೆ ಮಾಡುವ ಭರವಸೆ ಬಿಜೆಪಿಯದು. ಮೇಲುನೋಟಕ್ಕೆ ಇದು ಎಲ್ಲರಿಗೂ (ಕೃಷಿಕರಲ್ಲದವರಿಗೆ) ಖುಷಿಕೊಡುವ ವಿಚಾರ. ಆದರೆ, ಈಗಾಗಲೇ ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ಬಿಸಿನೆಸ್-ನಿಂದಾಗಿ ಭೂಮಿಯ ದರ ಸಿಕ್ಕಾಪಟ್ಟೆ ಹೆಚ್ಚಾಗ್ತಿದೆ, ಕೃಷಿಭೂಮಿ ಕಡಿಮೆಯಾಗ್ತಿದೆ, ಆಹಾರ ಧಾನ್ಯ ಉತ್ಪಾದನೆ ಕಡಿಮೆಯಾಗ್ತಿದೆ, ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇವಾಗಲೇ ಇದೆ, ಕಾಡು ಕಡಿಮೆಯಾಗ್ತಿದೆ, ಮಳೆ ಕಡಿಮೆಯಾಗ್ತಿದೆ, ನೀರು ಕಡಿಮೆಯಾಗ್ತಿದೆ, ಕೆಲವು ಪ್ರದೇಶಗಳಲ್ಲಿ ಬರ ಇದೆ... ಹೀಗಿರುವಾಗ ಯಾರು ಬೇಕಾದರೂ ಭೂಮಿ ಕೊಳ್ಳಬಹುದು, ಏನು ಬೇಕಾದರೂ ಮಾಡಬಹುದು ಅಂತ ರೂಲ್ಸ್ ಬಂದ್ರೆ ಗತಿ ಏನು? ಮನೆಗಳ, ಅಪಾರ್ಟ್ಮೆಟುಗಳ contruction ಇನ್ನೂ ಹೆಚ್ಚಾಗ್ತವೆ, demand ಇದ್ದಾಗ ಬೆಲೆಯೂ ಹೆಚ್ಚಾಗ್ತದೆ,ಹ್ಾಗಾಗಿ ಮನೆ ಕಟ್ಟುವ ಸಾಮಗ್ರಿಗಳ ದರ ಕೂಡ ಹೆಚ್ಚಾಗೋದೆ... ಅದೂ, ಆಹಾರ ಸಾಮಗ್ರಿಗಳ ಬೆಲೆ ಹೆಚ್ಚಳಕ್ಕೆ, ಹೆಚ್ತಾ ಇರೋ ಮನೆಸಾಲ ಬಡ್ದಿದರ, ಮನೆಕಟ್ಟೋ ಖರ್ಚಿಗೆ ಇನ್ನೊಂದು ಪಕ್ಷವನ್ನು ಹೊಣೆಯಾಗಿಸಿ ಜಾಹೀರಾತು ಕೊಟ್ಟ ಪಕ್ಷದಿಂದಲೇ ಈ ಘೋಷಣೆ..! ಶಿವಶಿವಾ!

++++++++++++++++

ರಾಜಕಿಯ ಪಕ್ಷಗಳನ್ನ ಬೈದು ಏನು ಉಪಯೋಗ, ಇದು ಹೀಗೆಲ್ಲಾ ಇರ್ಲಿಕ್ಕೆ ನಾವು ನೀವೇ ಕಾರಣ. ಹೆಸರಿಗೆ ನಾಗರಿಕರಾದ ನಮಗೆ ಏನು ಬೇಕು ಅಂತ ನಮಗೇ ಗೊತ್ತಿಲ್ಲ. ಏನಿದೆ ಅಂತ ಸುಮ್ನೆ ನೋಡ್ತೀವಿ. ಇಷ್ಟ ಆದ್ರೆ ಓಕೆ. ಕಷ್ಟ ಆದ್ರೂ ಓಕೆ. ಸಹಿಸ್ಕೋತೀವಿ. ದೂರದೃಷ್ಟಿ ನಮ್ಮಲ್ಲಿ ಪ್ರತಿಯೊಬ್ಬರಲ್ಲಿ ಇದ್ರೂ ಅದು ಉಪಯೋಗಕ್ಕಿಲ್ಲದ ಹಾಗೆ ಆಗಿದೆ. ಎಲ್ಲಾ ಪಕ್ಷಗಳು ಹೇಳುವುದು ಹಸಿಹಸಿ ಸುಳ್ಳು ಅಂತ ಗೊತ್ತಿದ್ದೂ ನಾವೆಲ್ಲ ಸುಮ್ನಿರ್ತೀವಿ.

ಇದಕ್ಕೇನು ಪರಿಹಾರ ಇಲ್ವಾ?

2 comments:

ಅಮರ said...

ದಿನ ಬೆಳಗಾದರೆ ರೋಡಿಲ್ಲ,ಲೈಟಿಲ್ಲ,ನೀರಿಲ್ಲ,ಪವರ್ ಇಲ್ಲ ಅಂತ ಬೊಬ್ಬೆಹಾಕೋ ಮಂದಿಗೆ ಓಟು ಹಾಕೋಕ್ಕೆ ಮಾತ್ರ ಸೋಮಾರಿತನ, ರಜ ಸಿಕ್ಕಿದೆ ಅಂತ ಮನೆಗಳಲ್ಲಿ ಟಿವಿಗಳ ಮುಂದೆಯೋ ಅಥವ ಊರು ಸುತ್ತೊ ಕಾಲ ಕಳೆಯುತ್ತಾರೆ. ಈ ಬಾರಿ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆದ ಮತದಾನದ ಪ್ರಮಾಣ ಅತಿ ಕಡಿಮೆ ಇದೆಯಲ್ಲ ಇದಕ್ಕೆ ಯಾರು ಜವಾಬ್ದಾರರು???
ನನ್ನದೊಂದು ಸಲಹೆ ಮತ ಹಾಕದವರಿಗೆ ಸರ್ಕಾರದ ಯಾವುದೆ ಸವಲತ್ತುಗಳು ಸಿಗದ ಹಾಗೆ ಕಾನೂನನ್ನ ತರಬೇಕು... (ಪಡಿತರ ಚೀಟಿ, ಸಬ್ಸಿಡಿಯಲ್ಲಿ ದೊರೆಯುವ ಗ್ಯಾಸ್.. ಇತರೆ) ಆಗ ಮತದಾರ ಜಾಗ್ರುತನಾದಾನು.
-ಅಮರ

Tina said...

Sri,
Nice analysis!! For someone like me who doesn't have a TV set at home, who watches only movies on weekends, was quite informative. Frankly, I don't think political ads should be aired on TV channels. But from what you say, It sounds very entertaining!! When election commision has policies on giving equal opputunities to all the contestants, some parties spending more money on Tv campaigns may work against this.
Anyways, You sure made me smile a lot!!
Tina