Sunday, April 6, 2008

28ರಲ್ಲಿ ಗುಂಪಿಗೆ ಸೇರದವರು..!

1998 ಅಥವಾ 1999ನೇ ಇಸವಿ. ನಾನು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಕಲಿಯುತ್ತಿದ್ದ ಕಾಲ. ರಜದಲ್ಲಿ ಇರಬೇಕು, ಸರಿಯಾಗಿ ನೆನಪಿಲ್ಲ, ಅಜ್ಜನ ಮನೆಗೆ ಒಂದು ಸಾರಿ ಹೋಗಿದ್ದೆ. ಅಲ್ಲಿ ಮಾವಂದಿರ ಮಕ್ಕಳೊಡನೆ ಮಾತಾಡುತ್ತಿದ್ದಾಗ ನಾನು ಜರ್ನಲಿಸಂ ಸೇರಲಿರುವುದನ್ನು, ಆಮೇಲೆ ನನಗೆ ಜರ್ನಲಿಸ್ಟ್ ಉದ್ಯೋಗ ಸಿಗಲಿರುವುದನ್ನು ತಿಳಿಸಿದೆ. ಆಗ ನನ್ನ ಪುಟ್ಟ ಭಾವ, 6-7 ವರ್ಷದ ಪ್ರಶಾಂತ, ’ಜರ್ನಲಿಸ್ಟಾ?’ ಎಂಬ ಉದ್ಗಾರ ತೆಗೆದ. ಯಾಕೋ ಎಂದು ಕೇಳಿದರೆ, ಸಿಕ್ಕಾಪಟ್ಟೆ ನಾಚಿಕೊಂಡ.


ಸ್ವಲ್ಪ ಒತ್ತಾಯ ಮಾಡಿದ ಮೇಲೆ, ಅವನ ಬಾಯಿಂದ ಕಾರಣ ಹೊರಬಂತು. ಕೆಲದಿನಗಳ ಹಿಂದೆ ಉದಯ ಟಿವಿಯಲ್ಲಿ ಬರುತ್ತಿದ್ದ ಮುಖಾಮುಖಿ ಕಾರ್ಯಕ್ರಮದಲ್ಲಿ ನಿಜಲಿಂಗಪ್ಪನವರ ಸಂದರ್ಶನ ನೋಡಿದ್ದನಂತೆ. ಅದರಲ್ಲಿ ಇಂಟರ್ವ್ಯೂ ಮಾಡುತ್ತಿದ್ದ ತೇಜಸ್ವಿನಿ ಎಂಬ ಪತ್ರಕರ್ತೆಯ ಹಣೆಗೆ, ಇಂಟರ್ವ್ಯೂ ಮುಗಿಸಿ ಏಳುವಾಗ ನಿಜಲಿಂಗಪ್ಪನವರು ಮುತ್ತು ಕೊಟ್ಟಿದ್ದರಂತೆ... :) ಅದಕ್ಕೆ ಪುಟ್ಟ ತನ್ನ ಅತ್ತಿಗೆಗೆ ಎಲ್ಲಿ ಹಾಗಾಗುತ್ತದೋ ಅಂತ ಭಯಪಟ್ಟು, ಜರ್ನಲಿಸಂ ಬಿಟ್ಟುಬಿಡಲು ಸಲಹೆ ನೀಡಿದ್ದ... :)


++++++++++++++++++


ಕನ್ನಡ ದೃಶ್ಯ ಪತ್ರಿಕೋದ್ಯಮದಲ್ಲಿ ’ಜರ್ನಲಿಸ್ಟ್’ ಆಗಿರುವ, extra-ordinary ಎನ್ನುವಂತಹ ಮಹಿಳೆಯರ ಹೆಸರು ಹೆಚ್ಚೇನೂ ಕೇಳಿಬರುವುದಿಲ್ಲ. ಇಂತಹದರಲ್ಲಿ, ತೇಜಸ್ವಿನಿ ತನ್ನ ವೃತ್ತಿಪರತೆಯಿಂದಲೇ ಪ್ರಸಿದ್ಧಿ ಪಡೆದಿದ್ದರು. ಅದರ ಜತೆಗೆ ಬೆಳೆದ ರಾಜಕೀಯದ ನಂಟು 2004ರಲ್ಲಿ ಅವರನ್ನು ದೇವೇಗೌಡರ ವಿರುದ್ಧ ಗೆದ್ದು ಸಂಸದೆಯಾಗುವಂತೆ ಮಾಡಿತು.


ಮೊನ್ನೆ ಮೊನ್ನೆ ಒಂದು ದಿನ ನನ್ನ ಹಣೆಬರಹ ನನ್ನನ್ನು ಕೊನೆಗೂ ಅದೇ ತೇಜಸ್ವಿನಿಯ ಎದುರು ತಂದು ನಿಲ್ಲಿಸಿತು :) ಅಲ್ಲಿ ಕಂಡವರು, ಒಬ್ಬ ಬಿಸಿರಕ್ತದ, ಆದರ್ಶಗಳೇನೆಂದು ಗೊತ್ತಿರುವ, ಕನಸುಗಳನ್ನು ಕಾಣುವ ಶಕ್ತಿಯಿರುವ ರಾಜಕಾರಣಿ, ಸಂಸದೆ. ಆಕೆಯೊಳಗಿನ ಪತ್ರಕರ್ತೆ ಮಾತ್ರ ಸ್ವಲ್ಪ ನಿರಾಶರಾಗಿದ್ದುದನ್ನು ಈ ಹಿಂದೆ ಬೇರ್ಯಾವುದೋ ಸಂದರ್ಶನದಲ್ಲಿ ನೋಡಿದ್ದೆ. ರಾಜಕಾರಣಿಯಾಗಿ ಕನಸು ಕಾಣುವ ಹಕ್ಕು ಕಳೆದುಕೊಂಡಿದ್ದೇನೆ ಎಂದಿದ್ದರು ಆಕೆ. ಬಂದಿದ್ದನ್ನು ಎದುರಿಸಲೇಬೇಕಾದ ಅನಿವಾರ್ಯತೆಯನ್ನು ಆಕೆ ಒಪ್ಪಿಕೊಂಡಿದ್ದರು.


ಕರ್ನಾಟಕದ ಜನ ಆರಿಸಿ ದೆಹಲಿಗೆ ಕಳುಹಿಸಿದ 28 ಮಂದಿಯಲ್ಲಿ ಆಟಿಗೊಮ್ಮೆ, ಹುಣ್ಣಿಮೆಗೊಮ್ಮೆ ಪಾರ್ಲಿಮೆಂಟ್ ಅಧಿವೇಶನದಲ್ಲಿ ಹಾಜರಾಗಿ ತುಟಿ ಹೊಲಿದುಕೊಂಡು ಕೂರುವವರೇ ಹೆಚ್ಚು. ಕೆಲವೇ ಕೆಲವು ಮಂದಿ ಮಾತ್ರ ನಿಯಮಿತವಾಗಿ ಸದನಕ್ಕೆ ಹಾಜರಾಗುವವರು, ಹಾಜರಾದರೂ ಮಾತಾಡುವವರ, ಚರ್ಚೆಯಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯೇ ಇದೆ.

ಪರಿಸ್ಥಿತಿ ಹೀಗಿರುವಾಗ ರೆಗ್ಯುಲರ್ ಆಗಿ ಸಿನ್ಸಿಯರ್ ಆಗಿ ಉತ್ಸಾಹ ಕಳೆದುಕೊಳ್ಳದೆ ಸದನದ ಕಲಾಪಗಳಲ್ಲಿ ಭಾಗವಹಿಸುವ ಈ‍ ಅಪರೂಪದ ಸಂಸದೆಗೆ ಇನ್ನೂ ಹೆಚ್ಚು ಮಹಿಳೆಯರನ್ನು ಸದನದಲ್ಲಿ ನೋಡುವ ಆಸೆಯಿದೆ. ಪಾರ್ಲಿಮೆಂಟಿನಲ್ಲಿ ಎಂದೋ ಚರ್ಚೆಗೆ ಬರಬೇಕಾಗಿದ್ದ 33% ಮಹಿಳಾ ಮೀಸಲಾತಿ ಮಸೂದೆಗಾಗಿ ಇವತ್ತಿಗೂ ಹೋರಾಡುತ್ತಿರುವವರಲ್ಲಿ ಈಕೆಯೂ ಒಬ್ಬರು. ಮಹಿಳೆಯರನ್ನು ಬದಿಗೊತ್ತಿಯೇ ಸಾಗುತ್ತಿರುವ ವ್ಯವಸ್ಥೆಯ ಬಗೆಗೆ ಸಾಧ್ಯವಾದಾಗಲೆಲ್ಲ ದನಿಯೆತ್ತುವ ಈಕೆ, ಪಾರ್ಲಿಮೆಂಟ್ ಅಧಿವೇಶನದಲ್ಲಿ ಅತಿ ಹೆಚ್ಚು ಹಾಜರಾತಿಯಿರುವ ಕರ್ನಾಟಕದ ಸಂಸದೆ.


ರಾಜಕೀಯವೆಂದರೆ ತನ್ನೊಳಗೆ ಇಳಿದವರಿಗೆಲ್ಲ ಕೊಳಕಿನ ಕೆಸರು ಮೆತ್ತುವ ಕೂಪವೆಂಬುದು ಒಂದು ಹಂತದ ತನಕ ಒಪ್ಪಬಹುದಾದ ಮಾತು. ಆದರೆ ಈ ದೇಶದಲ್ಲಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕಾದರೆ ರಾಜಕೀಯದಿಂದ ಮಾತ್ರ ಸಾಧ್ಯ. ಬಹುಶ: ಈ ಸಿದ್ದಾಂತದ ಬೆನ್ನಹಿಂದೆ ಬಿದ್ದು ರಾಜಕೀಯಕ್ಕೆ ಇಳಿದಿರಬೇಕು ತೇಜಸ್ವಿನಿ... ಮೆತ್ತಿದ ಕೆಸರಿನ ನಡುವೆಯೂ ನಗು ಮರೆಯದ ಈಕೆ ಮುಂದೆಯೂ ಹೀಗೆಯೇ ಇರಲಿ, ಸಂಸತ್ ಸದನದಲ್ಲಿ ಇಂತಹ ಬಿಸಿರಕ್ತ-ಹೊಸ ಯೋಚನೆಗಳು ತುಂಬಿದ ಮಹಿಳೆಯರ ಸಂಖ್ಯೆ ಹೆಚ್ಚಲಿ ಅಂತ (ಇಲ್ಲಿವರೆಗೆ ಓಟೇ ಹಾಕದ ಕಾರಣ ಪ್ರಜಾಪ್ರಭುತ್ವದ ಬಗ್ಗೆ ಮಾತಾಡುವ ನೈತಿಕ ಹಕ್ಕು ನನಗೆ ಇಲ್ಲದಿದ್ದರೂ) ಮನದುಂಬಿ ಹಾರೈಸ್ತೀನಿ... :)

(ಚಿತ್ರ ಕೃಪೆ : ಶ್ರೀನಿಧಿ ಡಿ.ಎಸ್.)

6 comments:

Unknown said...

I am happy that, Tejaswini madam is top on the list of karnataka MPs in terms of attendance.

pls take the help of RTI act and just give us the names of those MPs(karnataka) who are suffering from acute attendance shortage. Am sure the list will have the names of all, so called, heavy weights of karnataka politics!!!!!!

ಅಮರ said...

ಶ್ರೀ ಅವರೇ...

ನಿಮ್ಮ ಅನಿಸಿಕೆ ಸಹಜ ರಾಜಕೀಯವೆಂಬ ಕೆಸರಿನಲ್ಲಿ ಯಾರೇ ಇಳಿದರು ಮೆತ್ತಿಕೊಳ್ಳೂತ್ತೆ ಅನ್ನೊದು, ಆದರೆ ಒಬ್ಬರನ್ನ ಕೈಮಾಡಿ ನೀವು ಮಾಡಿದ್ದು ಸರಿ ಇಲ್ಲ ಅಂತ ಹೇಳುವವರು ........ ಮತ್ತನೆ ಕೆಸರಿನ ಕೂಪದಲ್ಲಿ ಬಿದ್ದು ಮೈ ಮನವೆಲ್ಲ ಕೆಸರಾಗಿಸಿಕೊಂಡವರಿಗೆ ಏನು ಮಾಡ್ತಿರಾ.
-ಅಮರ

ಸುಪ್ತದೀಪ್ತಿ suptadeepti said...

ತೇಜಸ್ವಿನಿಯವರನ್ನು ಒಮ್ಮೆ ಭೇಟಿಯಾಗಿದ್ದೆ. ಅವರ ಹರುಷ ತುಂಬಿದ ನಡವಳಿಕೆ, ಲವಲವಿಕೆ, ಮಾತಿನಲ್ಲಿನ ಸರಳತೆ, ಆತ್ಮೀಯತೆ ತುಂಬಾ ಖುಷಿ ಕೊಟ್ಟಿತ್ತು. ಇಂತಹ ರಾಜಕಾರಿಣಿಗಳೇ ನಮ್ಮ ದೇಶಕ್ಕೆ ಬೇಕಾಗಿದ್ದಾರೆ. ಸದನ ತುಂಬಲು ಎಲ್ಲಿಂದ ಹುಡುಕಿ ತರೋಣ?

Shubhada said...

ಶ್ರೀ...

ಇವತ್ತು ನಿಮ್ಮ ಬ್ಲಾಗ್‍ಗೆ ಪಾದಸ್ಪರ್ಶ(!) ಮಾಡಿದೆ. ತುಂಬ ಚೆನ್ನಾಗಿದೆ ರೀ ನಿಮ್ಮ ಬ್ಲಾಗ್ :-) ತುಂಬ ಆಪ್ತವೆನಿಸೋ ರೀತಿ ಬರೀತೀರಾ...

Shree said...

@ Nagaprasad -
Vijaya Karnataka had publiushed all these details, statistics in what I wrote is taken from that. True, RTI's help could be taken, and when people ask questioning, leaders do their duties properly. Right now this isnt the case... "YATHAA PRAJAA THATHAA RAAJAA"!!!

@AMARA -

Berevru sari illantha heLuvaaga avrige bahusha reality gottirlilveno? :) Reality noDak horTu paapa, kesraythu, enmaDakkaagatte? :)

@ Suptadeepthi -
Tharlikke enu kaShTa illa maDan, yaaraadru sari, 5-10 crores dud hiDkonD barli, yav partiyindlaadru ondu MLA ticket Guarantee! amele voting timalli hengaadru gedraaytu... :P

@ Shubhada -
Thanx, keep coming.

createam said...

ಶ್ರೀಯವರೆ, ನಿಮ್ಮ ಬ್ಲಾಗನ್ನ ಸುಮಾರು ದಿನಗಳಿಂದ ಓದ್ತಾ ಇದೀನಿ, ಈ ಬರಹ ಕೂಡಾ ಓದಿದ್ದೆ, ಆದ್ರೆ ಇವತ್ತು comment ಮಾಡೋಣ ಅನ್ಸ್ತು.

"ಆದರೆ ಈ ದೇಶದಲ್ಲಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕಾದರೆ ರಾಜಕೀಯದಿಂದ ಮಾತ್ರ ಸಾಧ್ಯ"

೯೦% ಒಪ್ಕೊತೀನಿ. ನಾನು ಮೊದ್ಲು bureaucracy ಅಲ್ಲಿ ಇದಕ್ಕೆ ಪರಿಹಾರ ಇರ್ಬೋದು ಅಂದುಕೊಂಡಿದ್ದೆ, ಆದ್ರೆ ಅಲ್ಲಿ ತುಂಬ limitationಗಳಿವೆ. ನನಗೂ ಈಗ ರಾಜಕೀಯ ಇದಕ್ಕೆಲ್ಲ ಉತ್ತರ ಅನ್ನಿಸ್ತಾ ಇದೆ. ಕೆಲವು ದಿನಗಳಿಂದ ಹಲವು ರಾಜಕೀಯ ವಿಚಾರಗಳನ್ನ ಓದಿ ಈ conclusion ಗೆ ಬಂದಿದ್ದೇನೆ. ಆದ್ರೆ ಎಲ್ಲರು ಚುನಾವಣೆಯಲ್ಲಿ ನಿಂತೇ ಪರಿಹಾರ ಹುಡಕಬೇಕು ಅನ್ನೋದಲ್ಲ, ಆದ್ರೆ ಪ್ರತಿಯೊಬ್ಬನು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಅನೇಕ ಗೆಳೆಯರಲ್ಲಿ ರಾಜಕೀಯಕ್ಕು ನಮಗೂ ಯಾವ ಸಂಭಂದವು ಇಲ್ಲ ಅನ್ನೊ attitude, ಆದ್ರೆ ರಾಜಕೀಯದವರನ್ನ ಬಯ್ಯೋವಾಗ ಇವ್ರನ್ನ ನಾವೆ ಆರಿಸಿರೋದು ಅಂತ ಮರಿತಾರೆ. ಸಕ್ರಿಯವಾಗಿ ರಾಜಕೀಯ, ಪ್ರಜಾಪ್ರಭುತ್ವದ ಚರ್ಚಾ ಪ್ರಕ್ರಿಯೆಯಲ್ಲಿ ಭಾಗವಹಿಸೋದು ಹಾಗು ಎಶ್ಟು ಮುಖ್ಯ ಅನ್ನೊದು ಎಲ್ಲರಿಗು ಅರಿವಾಗಬೇಕು. ಅದನ್ನ ಹೇಗೆ achieve ಮಾಡ್ಬೋದು ಅಂತ ನನಗೆ ಸ್ಪಶ್ಟವಾದ ನೋಟ ಇಲ್ಲ, ಆದ್ರೂ ಏನಾದ್ರು ಮಾಡ್ಬೋದು ಅಂತ ಮಾತ್ರ ಗೊತ್ತಿದೆ.

ಕಮೆಂಟ್ post ಮಾಡೊವಾಗ ಗೊತ್ತಯ್ತು ಇಲ್ಲಿ openId ಸಪೋರ್ಟ್ ಇಲ್ಲ ಅಂತ. ಎಲ್ಲಾ blogger blogಗಳಲ್ಲಿ ಇರುತ್ತೆ, ನೀವೇನಾದ್ರು disable ಮಾಡಿದೀರ?