Sunday, May 25, 2008

ಬಿಸಿ ಬಿಸಿ ಸುದ್ದಿ ತಣಿದ ಮೇಲೆ....

ಮೊನ್ನೆ ಮೊನ್ನೆ ಎಲ್ಲಾ ಟಿವಿ ಚಾನೆಲಲ್ಲೂ ಸುದ್ದಿಯಾಗಿ, ಇಂದಿಗೂ ಬಗೆಹರಿಯದಿರುವ, ಸುದ್ದಿಯಾಗುತ್ತಲೇ ಇರುವ ಪ್ರಕರಣ ಆರುಶಿ ಕೊಲೆ ಪ್ರಕರಣ. NOIDAದಲ್ಲಿ ಒಂದು ತಣ್ಣನೆಯ ರಾತ್ರಿ, ಆಗಷ್ಟೆ ಹದಿಹರೆಯಕ್ಕೆ ಕಾಲಿಟ್ಟಿದ್ದ ಚಂದದ ಹುಡುಗಿ ಆರುಶಿಯ ಕೊಲೆಯಾಗಿತ್ತ್ತು. ಆಕೆ ಕೊಲೆಯಾದ ಸಮಯ ಮನೆಯಲ್ಲೇ ಇದ್ದ್ದ ಹೆತ್ತವರು ಮಾಧ್ಯಮ ಮತ್ತು ಪೊಲೀಸರಿಗೆ ಹೇಳಿಕೆ ಕೊಡುವಾಗ ಸಂಶಯ ವ್ಯಕ್ತಪಡಿಸಿದ್ದು ಮನೆಯಲ್ಲಿ ಕೆಲಸಕ್ಕೆ ಬರುತ್ತಿದ್ದ (domestic help) ಹೇಮರಾಜ್ ಮೇಲೆ. ಇಷ್ಟು ಸುದ್ದಿ ಸಿಕ್ಕಿದ್ದೇ ತಡ, ಎಲ್ಲಾ ಟಿವಿ ಚಾನೆಲ್-ಗಳಲ್ಲೂ ಶುರು ಬ್ರೇಕಿಂಗ್ ನ್ಯೂಸ್... WHO KILLED ARUSHI ಅಂತ ಹೆಡ್ ಲೈನ್ ಕೊಟ್ಕೊಂಡು ಕೊಲೆಯ ಕುರಿತು ಚರ್ಚೆಗಳು ನಡೆದವು.
ಎಲ್ಲಾ ಚಾನೆಲ್-ಗಳು ಸೇರಿಕೊಂಡು, ಯಾವ ಹಂತಕ್ಕೆ ಮುಟ್ಟಿದವು ಎಂದರೆ, ಈ ಹಿಂದೆ ಮನೆಯಲ್ಲಿ ಕೆಲಸ ಮಾಡುವ ಸಹಾಯಕರು ನಡೆಸಿದ ವಿವಿಧ ಅಪರಾಧ ಕೃತ್ಯಗಳ ಕೇಸ್ ಸ್ಟಡೀಸ್ ಎಲ್ಲ ತೆಗೆದುಕೊಂಡು ಅವುಗಳ ಚರಿತ್ರೆಯನ್ನು ಬಿಚ್ಚಿಟ್ಟರು. TIMES NOW ಅಂತೂ ಇಷ್ಟು ಸುದ್ದಿ ಸಿಕ್ಕಿದ್ದೇ ಹಬ್ಬ ಅಂತ ಸೆಲೆಬ್ರೇಟ್ ಮಾಡಿತು. ಅದಕ್ಕೆ ಇದ್ದಿದ್ದು ಇಲ್ಲದ್ದು ಉಪ್ಪು ಖಾರ ಮಸಾಲೆ ಹಚ್ಚಿ ಇನ್ನಷ್ಟು ಬಣ್ಣ ತುಂಬಿತು.
ಹೋಗಲಿ ಬಿಡಿ, TIMES NOW ಇರುವುದೇ ಹಾಗೆ, ಎಷ್ಟಂದರೂ times of india ಸಂತತಿಯಲ್ಲವೇ ಅಂತ ನಾನು ಚಾನೆಲ್ ಬದಲಾಯಿಸಿ NDTV ಕಡೆ ಹೊರಟೆ. ಅಲ್ಲಿ ನೋಡುತ್ತೇನೆ, ಒಬ್ಬ ಕ್ರಿಮಿನಾಲಜಿಸ್ಟು, ಇನ್ನೊಬ್ಬ ಸೈಕಾಲಜಿಸ್ಟು, ಮತ್ತೊಬ್ಬ ಮಾಜಿ ಪೊಲೀಸ್ ಅಧಿಕಾರಿ, ಮತ್ತೊಬ್ಬ ಮನೆಕೆಲಸದವರಿಂದ ದರೋಡೆಗೊಳಗಾದ ವ್ಯಕ್ತಿ - ಇವರ ಜತೆಗೆ ಒಬ್ಬಳು ಮನೆ ಕೆಲಸ ಮಾಡುವ ಬೇಬಿ ಎಂಬ ಹೆಸರಿನ ಹುಡುಗಿಯನ್ನು ಕೂರಿಸಿಕೊಂಡು ಗಂಭೀರವಾದ ಚರ್ಚೆ ನಡೀತಿತ್ತು.
ಉಳಿದವರೆಲ್ಲ ಇಂಗ್ಲಿಶಿನಲ್ಲಿ ಬಡಬಡಿಸುತ್ತಿದ್ದರೆ, ಬೇಬಿ ಹಿಂದಿ ಮಾತ್ರ ಮಾತಾಡಬಲ್ಲವಳಾಗಿದ್ದಳು. ಅವಳಿಗೆ ಇತರರು ಮಾತಾಡಿದ್ದು ಅರ್ಥವಾಗಿತ್ತೋ ಇಲ್ಲವೋ ಗೊತ್ತಾಗುತ್ತಿರಲಿಲ್ಲ. ಇತರರ ಜತೆ ಈರೀತಿಯ ಅಪರಾಧ ಕೃತ್ಯಗಳ ವಿವಿಧ ಆಯಾಮಗಳ ಕುರಿತು ಮಾತಾಡಿಸಿದ್ದಾದ ಮೇಲೆ ANCHOR ಅವಳಿಗೆ ಹಿಂದಿಯಲ್ಲಿ ಪ್ರಶ್ನೆ ಆರಂಭಿಸಿದಳು... 'ಬೇಬಿ, ಕ್ಯಾ ಆಪ್ ಬತಾ ಸಕ್ತೀ ಹೈಂ ಕಿ ಐಸಾ ಅಪರಾಧ್ ಕೃತ್ಯ್ ಕ್ಯೂಂ ಹೋತಾ ಹೈ...' ಇದಕ್ಕೆ ಉತ್ತರವಾಗಿ ಬೇಬಿ, ಮನೆಯವರು ಕೆಲಸ ಮಾಡಿಸಿಕೊಳ್ಳುವಾಗ ಕೆಲಸದವರಿಗೆ ಸರಿಯಾದ ಮರ್ಯಾದೆ ಕೊಡುವುದಿಲ್ಲ, ಅದರಿಂದ ಹುಟ್ಟುವ ರೋಷ ಈರೀತಿಯ ಕೃತ್ಯಗಳಿಗೆ ಕಾರಣವಾಗುತ್ತದೆಂದು ಹೇಳಿದಳು. ಆಗ ಅಲ್ಲಿ ಕೂತಿದ್ದ ಪ್ರೇಕ್ಷಕರಲ್ಲಿ ಒಬ್ಬಾಕೆ ತಾನು ಅತ್ಯುತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ ಕೆಲಸದಾತ ತನಗೆ ಮೋಸ ಮಾಡಿ ಮನೆ ದೋಚಿದ್ದನ್ನು ಹೇಳಿಕೊಂಡು, ಬಲುಬೇಗನೆ ಧನವಂತರಾಗುವ ಹುಚ್ಚಿನಿಂದ ಕೆಲಸದವರು ಇಂತಹ ಅಪರಾಧಗಳನ್ನು ಮಾಡುತ್ತಾರೆಂಬ ಕನ್-ಕ್ಲೂಶನ್-ಗೆ ಬಂದಳು. ಇದಕ್ಕೆ ಬೇಬಿ ತೀವ್ರವಾಗಿ ವಿರೋಧಿಸಿ, ಸಾಧ್ಯವೇ ಇಲ್ಲ, ನೀವು ಎಲ್ಲಾದರೂ ತಪು ಮಾಡಿರುತ್ತೀರಿ ಎಂಬರ್ಥದ ಮಾತುಗಳನ್ನು ಆಡಿದಳು. ಆಗ ಅಲ್ಲಿದ್ದವರೆಲ್ಲ ಒಗ್ಗಟ್ಟಾಗಿ ಅವಳನ್ನು ವಿರೋಧಿಸಹೊರಟರು. Anchor ಪರಿಸ್ಥಿತಿ ಹತೋಟಿಗೆ ತರಲು ಹೆಣಗಾಡತೊಡಗುತ್ತಿದ್ದಂತೆಯೇ ನಾನು ಚಾನೆಲ್ ಬದಲಾಯಿಸಿದೆ.
ಮತ್ತೆ TIMES NOWಗೆ ಬಂದೆ. ಅಲ್ಲಿ ನೋಡಿದರೆ, ಆಗಷ್ಟೆ ಹೊಸಾ ಬಿಸಿ ಬಿಸಿ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು.. ARUSHI’S SUSPECTED KILLER HEMRAJ FOUND DEAD... DEAD BODY FOUND ON THE TERRACE OF ARUSHI'S HOME... NEIGHBOUR FINDS BODY TWO DAYS LATER AFTER DEATH... POLICE FAILED TO FIND THE DEAD BODY EARLIER .... ETC ETC...

----------

ಸಮಯ 7.30 ಬೆಳಿಗ್ಗೆ, ಆದಿತ್ಯವಾರ, ಮೇ 25. ಚುನಾವಣಾ ಮತ ಎಣಿಕೆ ಕಾರ್ಯ 8 ಘಂಟೆಗೆ ಸರಿಯಾಗಿ ಆರಂಭವಾಗಲಿತ್ತು... ಎಲ್ಲಾ ಚಾನೆಲ್-ಗಳಲ್ಲೂ ಬಿಸಿ ಬಿಸಿ ಸುದ್ದಿ ವೀಕ್ಷಕರಿಗೆ ನೀಡಲು ಎಲ್ಲ್ಕಾ ತಯಾರಿಯೂ ಆಗಿತ್ತು. ಹಾಗೆಯೇ ಎಲ್ಲಾ ಚಾನೆಲ್-ಗಳನ್ನೂ ಸುಮ್ಮನೆ ನೋಡುತ್ತಾ ಸಾಗುತ್ತಿದ್ದರೆ, TIMES NOWನಲ್ಲಿ ರಿಮೋಟ್ ನಿಂತುಬಿಟ್ಟಿತು. ಅಲ್ಲಿ ಹಿಂದಿನ ದಿನ ರಾತ್ರಿ ನಡೆಸಿದ ಚರ್ಚೆಯ ಮರುಪ್ರಸಾರ ನಡೆದಿತ್ತು. ರಿಮೋಟ್ ನಿಂತಿದ್ದು ಮಾತ್ರ ಅದಕ್ಕಲ್ಲ. ಇನ್ನೂ ಯಾವ ಕನ್ನಡ ಚಾನೆಲಲ್ಲೂ ಮತ ಎಣಿಕೆ ಕಾರ್ಯ ಆರಂಭವಾದ ಬಗ್ಗೆ ಸುದ್ದಿಯೇ ಇಲ್ಲ, ಎಷ್ಟು ಸ್ಥಾನಗಳಲ್ಲಿ ಯಾವ ಪಕ್ಷ ಮುಂದಿದೆ ಅಂತ ತಿಳಿಸುವ ಕೌಂಟರ್ TIMES NOWನಲ್ಲಿ ಈಗಾಗಲೇ ಕಾರ್ಯಾರಂಭ ಮಾಡಿತ್ತು. ಈಗಿನ್ನೂ 7.30, ಅದಾಗಲೇ ಕಾಂಗ್ರೆಸ್ - 1 ಅಂತ ತೋರಿಸುತ್ತ ಅಕೌಂಟ್ ಓಪನ್ ಮಾಡಿತ್ತು. ತಕ್ಷಣ ಎಲ್ಲಾ ವರದಿಗಾರರ ಮೂಲಕ ಕ್ರಾಸ್ ಚೆಕ್ ಮಾಡಿ TIMES NOW ಸುಳ್ಳು ಹೇಳುತ್ತಿದೆಯೆಂದು ಖಚಿತಪಡಿಸಿಕೊಂಡಿದ್ದಾಯಿತು.
ಘಂಟೆ 8 ಆಗುತ್ತಿದ್ದಂತೆಯೇ ಎಲ್ಲೆಲ್ಲಿ ಮತ ಎಣಿಕೆ ಕಾರ್ಯ ಆರಂಭವಾಯಿತೋ ಅಲ್ಲಿಂದೆಲ್ಲ ಮೆಲ್ಲಗೆ ಸುದ್ದಿ ಆರಂಭವಾಯಿತು. ಹಾಗೆಯೇ ಬಣ್ಡ್ಣಬಣ್ಣದ ಸುದ್ದಿಗಳೂ ಕೂಡ ಆರಂಭವಾಯಿತು. ಒಂದು ಚಾನೆಲ್ ಕನಕಪುರದಲ್ಲಿ ಡಿಕೆಶಿ ಹಿನ್ನಡೆ ಅಂತ ಕೊಟ್ಟರೆ ಇನ್ನೊಂದು ಮುನ್ನಡೆ ಅಂದಿತು. ಒಂದು ಚಾನೆಲ್-ನಲ್ಲಿ ಅಂಬರೀಶು ಹಿನ್ನಡೆ ಅನುಭವಿಸಿದರೆ ಇನ್ನೊಂದರಲ್ಲಿ ಮುನ್ನಡೆ ಸಾಧಿಸಿದರು.
ಒಂದು ಐದು-ಹತ್ತು ನಿಮಿಷ ಯಾವುದು ಸತ್ಯ ಯಾವುದು ಸುಳ್ಳು ಅಂತಲೇ ತಿಳಿಯದ ಹಾಗೆ ಸುದ್ದಿಗಳು ಓಡಿದವು. ಈ ಓಟದಲ್ಲಿ ಇಂಗ್ಲಿಷ್ ಚಾನೆಲುಗಳು ಕೂಡ ಹಿಂದುಳಿಯಲಿಲ್ಲ. ಆಮೇಲೆ, ಒಂದು ಹಂತಕ್ಕೆ ಬಂದ ಮೇಲೆ ಎಲ್ಲಾ ಚಾನೆಲ್-ನಲ್ಲೂ ಹೆಚ್ಚುಕಡಿಮೆ ಒಂದೇ ವಿಧವಾದ ಸುದ್ದಿಗಳು ಹೋಗಲಾರಂಭಿಸಿದವು. ಹತ್ತಿರವೆನಿಸಬಹುದಾದ ಸಂಖ್ಯೆಗಳು ಕೌಂಟರ್-ನಲ್ಲಿ ಬರಲು ಆರಂಭವಾಯಿತು.
ಕೊನೆಗೆ ಮಧ್ಯಾಹ್ನ 3.30ಕ್ಕೆ ಹೆಚ್ಚು ಕಡಿಮೆ ಎಲ್ಲಾ ಸ್ಥಾನಗಳಲ್ಲೂ ಫಲಿತಾಂಶ ಘೋಷಿತವಾಯಿತು. ಎಲ್ಲಾ ಕನ್ನಡ ಚಾನೆಲುಗಳೂ ಒಂದು ಸ್ಕೋರು ತೋರಿಸುತ್ತಿದ್ದರೆ ಎಲ್ಲಾ ಇಂಗ್ಲಿಷ್ ಚಾನೆಲುಗಳೂ ಇನ್ನೊಂದು ಸ್ಕೋರು ತೋರಿಸುತ್ತಿದ್ದವು. ನಮ್ಮಕ್ಕ ಫೋನ್ ಮಾಡಿ ಯಾವುದು ಸರಿ ಅಂತ ಕೇಳಿದರೆ, ನಾನು ಹೇಳಿದೆ, ಕನ್ನಡ ಚಾನೆಲುಗಳು ತೋರಿಸುತ್ತಿರುವ ಸ್ಕೋರು ಸತ್ಯ, ಅದನ್ನು ನಂಬಬಹುದು ಅಂತ. ಕೊನೆಗೆ ಬಂದಿದ್ದೂ ಅದೇ ಸ್ಕೋರು - 110-80-28-6.

------------

ಜನಾದೇಶ ಅನ್ನಬಹುದೋ, ಚುನಾವಣೆ ಅನ್ನಬಹುದೋ, ರಣರಂಗ ಅನ್ನಬಹುದೋ, ಚದುರಂಗ ಅನ್ನಬಹುದೋ - ಒಟ್ಟಿನಲ್ಲಿ ಪ್ರಜಾಪ್ರಭುತ್ವದ ಹಬ್ಬವೆಂದು ಕರೆಯಲ್ಪಡುವ ಕಾರ್ಯಕ್ರಮದ ಎಲ್ಲಾ ಪ್ರಕ್ರಿಯೆ ಮುಗಿದಿದೆ. ಕೊಟ್ಟೂ ಕೊಡದ ಹಾಗೆ ಬಹುಮತ ಕೊಟ್ಟಿದ್ದಾನೆ ಜಾಣ ಮತದಾರ. ಹಿಂದುತ್ವದ ಹೆಸರಲ್ಲಿ ಕೋಮುಗಲಭೆ ಎಬ್ಬಿಸಿದವರು, 36 ವರ್ಷಗಳಿಂದಲೂ ತಮ್ಮ ಕ್ಷೇತ್ರಕ್ಕೆ ಏನೂ ಉಪಕಾರ ಮಾಡದವರು, ಟಿಕೆಟ್ ಸಿಕ್ಕಲಿಲ್ಲವೆಂದು ಬೇರೆ ಪಕ್ಷಕ್ಕೆ ಹಾರಿದವರು, ಪಾರ್ಲಿಮೆಂಟಿನಿಂದ ಹೊರಬಂದು ವಿಧಾನಸೌಧದೊಳಗೆ ಕಾಲಿಟ್ಟು ಅದನ್ನು ಪಾವನವಾಗಿಸುವ ಆಸೆಹೊತ್ತವರು, ಇದೇ ಕೊನೆ ಚುನಾವಣೆಯೆನ್ನುತ್ತ ಓಟಿಗೆ ನಿಂತವರು, ಎಲ್ಲರ ಕಣ್ಣಿಗೆ ಸುಲಭವಾಗಿ ಕಾಣುವಂತಹ ಕೆಲಸಗಳನ್ನು ಮಾತ್ರ ಮಾಡಿ ಕೆಲಸ ಮಾಡಿದ್ದೇವೆಂದು ಕೊಚ್ಚಿಕೊಂಡವರು, ದುಡ್ಡು ಹ್ಚೆಲ್ಲಿ ಗೆಲ್ಲಬಹುದೆಂದು ತಿಳಿದವರು, ದೂರದಿಂದ ಹಾರಿಬಂದು ಬೆಂಗಳೂರನ್ನು ಉದ್ಧಾರ ಮಾಡುತ್ತೇನೆಂದು ಚುನಾವಣೆಗೆ ನಿಂತು, ಕ್ಯಾಂಪೇನ್ ಮಾಡಬೇಕಾದ ಸಮಯದಲ್ಲಿ ಟೀವಿ ಚಾನೆಲ್-ನಲ್ಲಿ ಚರ್ಚೆ ನಡೆಸುತ್ತಾ ಕೂತವರು - ಎಲ್ಲರಿಗೂ ತನಗೆ ಸಾಧ್ಯವಾದಷ್ಟು ಸರಿಯಾದ ರೀತಿಯಲ್ಲಿ ಮಣ್ಣುಮುಕ್ಕಿಸಿದ್ದಾನೆ ಮತದಾರ. ಆತನ ಎಲ್ಲಾ ಆಯ್ಕೆಗಳೂ ಉತ್ತಮವಾಗಿವೆಯೆಂದಲ್ಲ, ಆದರೆ ತನ್ನ ಮಿತಿಯಲ್ಲಿ, ತನಗೆ ಸಿಕ್ಕ ಅಪರೂಪದ ಒಂದೇ ಅವಕಾಶದಲ್ಲಿ, ಎಲ್ಲರಿಗೂ ಬುದ್ಧಿ ಕಲಿಸಿದ್ದಾನೆ. ಆದರೆ ಯಾರೂ, ಯಾವ ಪಕ್ಷವೂ, ಹೆಚ್ಚು ಹಾರಾಡಲು ಸಾಧ್ಯವಿಲ್ಲದ ರೀತಿಯಲ್ಲಿದೆ ಈ ಸಾರಿಯ ಚುನಾವಣಾಫಲಿತಾಂಶ.

------------

ಈಗ ಅಧಿಕಾರ ಹಿಡಿಯಲಿರುವುದು ಯಾರು ಅಂತ ಹೆಚ್ಚು ಕಡಿಮೆ ತೀರ್ಮಾನವಾಗಿದೆ - ರಾಜಕೀಯದ 'ಆಟ'ಗಳಲ್ಲಿ ಸಂಭವಿಸಬಹುದಾದ ಅನಿರೀಕ್ಷಿತ ಬೆಳವಣಿಗೆಗಳ ಹೊರತಾಗಿ. ಆದರೆ, ಈಗ ನನ್ನನ್ನು ಕಾಡುತ್ತಿರುವ ಪ್ರಶ್ನೆಗಳು ಇವು -

೧. ಅಕ್ರಮ ಗಣಿಗಾರಿಕೆಯ ಮೇಲೆ ಲೋಕಾಯುಕ್ತರು ಸರಕಾರಕ್ಕೆ ನೀಡಿದ ವರದಿಯ ಗತಿ ಏನಾಗಬಹುದು?
೨. ಹಣದುಬ್ಬರ, ಬೆಲೆಯೇರಿಕೆಯನ್ನು ನಿಯಂತ್ರಿಸುತ್ತೇನೆಂಬ ಆಶ್ವಾಸನೆಯ ಗಾಳವನ್ನು ಮತದಾರನಿಗೆ ಎಸೆದು ಅಧಿಕಾರಕ್ಕೆ ಬಂದ ಬಿಜೆಪಿ, ಇವುಗಳನ್ನು ಹೇಗೆ ನಿಯಂತ್ರಿಸಬಹುದು? ಹಣದುಬ್ಬರ-ಬೆಲೆಯೇರಿಕೆಗಳು ಒಂದು ರಾಜ್ಯದ ಒಳಗೆ ನಿಯಂತ್ರಿಸಬಹುದಾದ ಸಂಗತಿಗಳೇ?
೩. ಸರಕಾರ ಬಂದ ಕೂಡಲೇ ಇಂಡಸ್ಟ್ರಿಯಲೈಸೇಶನಿಗೆ ಸಹಾಯ ಮಾಡುತ್ತೇನೆಂದು ಬಹುಮತ ಸಿಕ್ಕಿದಕೂಡಲೇ ನಡೆಸಿದ ಪತ್ರಿಕಾಗೋಷ್ಟಿಯಲ್ಲ್ಲಿ ಯಡಿಯೂರಪ್ಪ ಹೇಳಿದ್ದಾರೆ. ಇದನ್ನು ಸಿಎನ್ ಬಿಸಿ, NDTV PROFIT ಇತ್ಯಾದಿಗಳು ಹೆಡ್ಲೈನ್ ಆಗಿ ತೋರಿಸುತ್ತಿವೆ. ಇದರ ಅರ್ಥ ಏನಿರಬಹುದು?
೪. ಎಲ್ಲಕ್ಕಿಂತ ಹೆಚ್ಚಾಗಿ, ಭೂಮಿ ಖರೀದಿಯ ನಿಯಮಾವಳಿಗಳನ್ನು ಸಡಿಲಗೊಳಿಸುತ್ತೇನೆಂದು ಈಗಾಗಲೇ ಬಿಜೆಪಿ ಹೇಳಿದೆ. ಎಲ್ಲರೂ ಸುಮ್ಮನಿದ್ದರೆ ಅದನ್ನು ಮಾಡಿಯೂ ಮಾಡುತ್ತದೆ. ಇದರಿಂದಾಗಿ ರೈತರು ಭೂಮಿ ಕಳೆದುಕೊಂಡು ನೆಲೆ ಕಳೆದುಕೊಂಡು ಯಾವುದೋ ನಗರದ ಸ್ಲಮ್ಮಿಗೋ ಕಾರ್ಮಿಕವರ್ಗಕ್ಕೋ ಸೇರಿಹೋಗಬಹುದಾದ ಸಾಧ್ಯತೆ - ಅನಿವಾರ್ಯವಾಗಲಿದೆಯೇ?

1 comment:

ಜಾತ್ರೆ said...

Registration- Seminar on the occasion of kannadasaahithya.com 8th year Celebration

Dear shree,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada



Please do come and forward the same to your like minded friends
-kannadasaahithya.com balaga