Wednesday, April 22, 2009

ಅವಳು, ಬಳ್ಳಿ ಮತ್ತು ನಾನು...

ಮೂರು ತಿಂಗಳ ಹಿಂದೊಂದು ದಿನ. ಹೊಸಮನೆಗೆ ಬಂದ ಸಂಭ್ರಮ. ಆಫೀಸಿಗೆ ರಜೆ ಹಾಕಿದ್ದೆ. ಪ್ಯಾಕಿಂಗ್ ಬಿಡಿಸುವುದು ಸಾಮಾನು ಹೊಂದಿಸುವುದು ಎಲ್ಲಾ ಮುಗಿದು ನಿರಾಳವಾಗಿತ್ತು. ಸಂಜೆ ಹೊತ್ತು ನಮ್ಮಲ್ಲಿದ್ದ ಒಂದೇ ಒಂದು ಚಟ್ಟಿಯಲ್ಲಿರುವ ಒಂದೇ ಒಂದು ಕರವೀರದ ಗಿಡಕ್ಕೆ ಒಂದಿಷ್ಟು ಕಿಚನ್ ಕಾಂಪೋಸ್ಟ್ ಗೊಬ್ಬರ ಹಾಕುತ್ತಿದ್ದೆ. ಆಗ ಕಂಡಿದ್ದು, ಮನೆಯ ಕಾಂಪೌಂಡ್ ಮೇಲೆ ಜೊಂಪೆಯಾಗಿ ಬೆಳೆದು ನಿಂತಿದ್ದ ಮಲ್ಲಿಗೆ ಗಿಡ. ಪುಟ್ಟ ಚಟ್ಟಿಯಲ್ಲಿ ಅದರ ಬೇರುಗಳು ಹಿಡಿಸಲಾಗದಷ್ಟು ದೊಡ್ಡದಾಗಿ ಬೆಳೆದಿತ್ತು.
ಬೇರುಗಳ ನಡುವಲ್ಲಿ ಇನ್ನೂ ಏನೇನೋ ಪುಟ್ಟಪುಟ್ಟ ಗಿಡಗಳು. ಅದರಲ್ಲೊಂದು ಮೆಣಸಿನ ಗಿಡದ ಹಾಗಿತ್ತು. ನೋಡಿ ನಂಗೆ ಆಶ್ಚರ್ಯವಾಯ್ತು. ಅದನ್ನು ಅಷ್ಟು ದೊಡ್ಡದಾಗಿ ಬೆಳೆಸಿದವರಿಗೆ ಮನಸ್ಸಿನಲ್ಲೇ ಒಂದು ನಮಸ್ಕಾರ ಹಾಕಿದೆ. ನನ್ನ ಕೈಲುಳಿದಿದ್ದ ಗೊಬ್ಬರದ ಪುಡಿಯನ್ನು ಅದಕ್ಕೂ ಸ್ವಲ್ಪ ಹಾಕಿ ಮುಗಿಸಿದೆ.
ಅಷ್ಟರಲ್ಲಿ ಆಕೆ ಕೈಯಲ್ಲೊಂದು ಪಾತ್ರೆ ಹಿಡಿದು ಬಂದು, ಗಿಡದ ಹತ್ತಿರ ನಿಂತಳು. ಕೈಯಲ್ಲಿದ್ದ ಪಾತ್ರೆಯಲ್ಲಿ, ತೊಳೆಯಲೆಂದು ನೀರಲ್ಲಿ ಹಾಕಿದ ಅಕ್ಕಿ. ಚೆನ್ನಾಗಿ ಅಕ್ಕಿ ತೊಳೆದು, ನೀರನ್ನು ಜಾಗ್ರತೆಯಾಗಿ ಗಿಡದ ಬುಡಕ್ಕೆ ಚೆಲ್ಲಿದಳು.
ಓಹ್, ಹಾಗಾದ್ರೆ ದಿನಾ ಈಕೆ ಅಕ್ಕಿ-ಬೇಳೆ ತೊಳೆದ ನೀರಲ್ಲೇ ಮಲ್ಲಿಗೆ ಗಿಡ ಬದುಕುತ್ತಿದೆ - ಎಂದು ಗೊತ್ತಾಯ್ತು. ಅದರ ಬುಡದಲ್ಲಿದ್ದ ಪುಟ್ಟಪುಟ್ಟ ಗಿಡಗಳೂ ಹೇಗೆ ಹುಟ್ಟಿರಬಹುದು ಅಂತ ಒಂದು ಐಡಿಯಾ ಬಂತು. ಇಂಥಾ ಐಡಿಯಾಗಳು ನಂಗೆ ಹೊಳೆಯಲೇ ಇಲ್ಲವಲ್ಲ ಅಂತನಿಸಿತು.
ಆಕೆ ನಮ್ಮನೆ ಹಿಂದಿನ ಮನೆಯಲ್ಲಿ ಬಾಡಿಗೆಗಿರುವವಳು. ನಂಗಿನ್ನೂ ಅವಳ ಪರಿಚಯವಾಗಿರಲಿಲ್ಲ. ನಾನು ಗೊಬ್ಬರ ಹಾಕಿದ್ದು ಗಮನಿಸಿದ ಆಕೆ ಅದೇನು, ಎಲ್ಲಿಂದ ಅಂತ ಕೇಳಿದಳು. ಹೇಳಿದೆ. ಕೇಳಿಸಿಕೊಂಡ ಆಕೆ ಹೀಗೂ ಮಾಡ್ಬಹುದು ಅಂತ ಗೊತ್ತಿರಲಿಲ್ಲ ಅಂತ ಖುಷಿಪಟ್ಟಳು. ನಮ್ಮ ಚಟ್ಟಿಯನ್ನು ಕೂಡ ಬಿಸಿಲಿಗೋಸ್ಕರ ಕಾಂಪೌಂಡ್ ಮೇಲೇರಿಸುವಂತೆ ಸಲಹೆ ಕೊಟ್ಟಳು. ನಾನು ಪಾಲಿಸಿದೆ.
ಹಾಗೇ ಮನೆಗೆ ಬೇಕಾದ ಕೊತ್ತಂಬ್ರಿ ಸೊಪ್ಪು ಅದರಲ್ಲೇ ಬೆಳೆಸಿಕೊಳ್ಳಬಹುದು, ಚಟ್ಟಿಯಲ್ಲಿ ನಾಲ್ಕು ಕಾಳು ಕೊತ್ತಂಬರಿ ಹಾಕಿ ಎಂದು ಸಲಹೆ ಕೊಟ್ಟಳು. ನಂಗೆ ಎಲ್ಲಿಲ್ಲದ ಉತ್ಸಾಹ ಬಂತು, ಇಷ್ಟೆಲ್ಲ ಮಾಡಬಹುದು, ಆದ್ರೂ ಇಷ್ಟು ದಿನ ಸುಮ್ನಿದ್ನಲ್ಲ, ಅಂತನಿಸಿತು. ಖುಷಿಯಿಂದಲೇ ನಾನದನ್ನು ಪಾಲಿಸಿದೆ. ಕೊತ್ತಂಬರಿ ಮಾತ್ರವಲ್ಲ, ಅಡಿಗೆ ಮನೆಯಲ್ಲಿ ಏನೇನು ಸಿಕ್ಕಿತೋ ಎಲ್ಲದರದ್ದೂ ನಾಲ್ಕು ನಾಲ್ಕು ಕಾಳು, ಜತೆಗೆ ಕಸದ ಬುಟ್ಟಿಗೆ ಬಿಸಾಡಲೆಂದು ಇಟ್ಟಿದ್ದ ಕಲ್ಲಂಗಡಿ ಹಣ್ಣಿನ ಬೀಜಗಳು, ಎಲ್ಲವನ್ನೂ ಹಾಕಿ, ಗೊಬ್ಬರದ ಜತೆಗೆ ಸೇರಿಸಿ ಕೆದಕಿದೆ. ಅಡಿಗೆಗೆಂದು ಕಟ್ ಮಾಡಿಟ್ಟಿದ್ದ ಪಾಲಕ್ ಸೊಪ್ಪಿನ ಬೇರನ್ನು ಅದರ ಮೇಲಿಂದ ಹಾಕಿ ಮುಚ್ಚಿ, ನೀರು ಹಾಕಿದೆ.
+++++++++++++++++++
ದಿನಾ ಬೆಳಿಗ್ಗೆ ಬೇಗ ಎದ್ದು ಮನೆಹೊರಗೆ ನೀರು ಹಾಕಿ ಗುಡಿಸುವಾಗ ಎರಡೂ ಗಿಡಗಳಿಗೆ ನೀರು ಹಾಕುತ್ತಿದ್ದೆ. ಆಕೆಯೂ ಅಕ್ಕಿ -ಬೇಳೆ ತೊಳೆದ ನೀರನ್ನು ಎರಡೂ ಚಟ್ಟಿಗಳಿಗೆ ಹಂಚುತ್ತಿದ್ದಳು. ಈ unsaid understanding ನಂಗೆ ಖುಷಿ ಕೊಟ್ಟಿತು. ಕೆಲ ದಿನಗಳ ನಂತರ ಚಟ್ಟಿಯಲ್ಲಿ ಎರಡು ಮೂರು ಥರದ ಮೊಳಕೆಗಳು ಕಾಣಿಸಿಕೊಂಡವು. ಅದು ಯಾವುದರದ್ದು ಎಂದು ನಂಗೆ ಗೊತ್ತಾಗಲಿಲ್ಲ.
ಮತ್ತೊಂದು ದಿನ ಹೀಗೇ ಸಿಕ್ಕಿದ ಆಕೆ ನಂಗೆ 'ಸಾಸಿವೆ ಗಿಡ ಹುಟ್ಟಿತ್ತು ಕಣ್ರೀ, ಕಿತ್ತು ಬಿಸಾಕಿದ್ದೇನೆ, ಮನೆಮುಂದೆ ಸಾಸಿವೆ ಗಿಡ ಇರಬಾರದು' ಅಂದಳು.
ಸಾಸಿವೆ ಕಾಳು ಚಟ್ಟಿಗೆ ಸೇರಿಸಿದ್ದು ನಾನೇ ಆಗಿದ್ದರಿಂದ ಸುಮ್ಮನೆ ತಲೆಯಲ್ಲಾಡಿಸಿದೆ. ಆದರೆ ಇನ್ನೂ ಒಂದೆರಡು ಗಿಡಗಳು ಉಳಿದುಕೊಂಡಿತ್ತು. ಅದೇನು ಅಂತ ಕೇಳಿದೆ. ಒಂದು ಹೆಸರು ಕಾಳಿನ ಗಿಡವಿರಬೇಕು, ಇನ್ನೊಂದು ನಂಗೂ ಗೊತ್ತಾಗ್ತಿಲ್ಲ, ಕೊತ್ತಂಬರಿ ಮಾತ್ರ ಬಂದಿಲ್ಲ ಅಂದಳು. ಅದೇನಾದ್ರೂ ಇರಲಿ, ಅದಾಗಿ ಬೆಳೆದಿದ್ದು ಬೆಳೆಯಲಿ ಎಂದು ಸುಮ್ಮನಾದೆ.
+++++++++++++++++++
ನಂತರ ನನ್ನ ಶಿಫ್ಟ್ ಬದಲಾಯ್ತು, ರಾತ್ರಿ ಪಾಳಿ ಮುಗಿಸಿ ಮನೆಗೆ ಬರುವಷ್ಟರಲ್ಲಿ ಕಣ್ಣು ಎಳೆಯುತ್ತಿರುತ್ತಿತ್ತು. ಬಿದ್ದುಕೊಂಡರೆ ಸಾಕೆನಿಸುತ್ತಿತ್ತು. ಸಂಜೆ ಎದ್ದನಂತರ ಮನೆಯಿಂದಲೇ ಕೆಲಸ ಆರಂಭವಾಗುತ್ತಿತ್ತು. ಈ ಬದಲಾದ ದಿನಚರಿಯಲ್ಲಿ ಗಿಡದ ಕುರಿತು ಗಮನವೇ ಹೊರಟುಹೋಯ್ತು. ದಿನಕ್ಕೆ ಐದು ನಿಮಿಷ ಹೊರಗೆ ಹೋಗಿ ಗಿಡಗಳು ಏನಾಯ್ತು ಅಂತ ನೋಡುವಷ್ಟು ಕೂಡಾ ಪುರುಸೊತ್ತಿಲ್ಲದಷ್ಟು ನಾನು 'ಬ್ಯುಸಿ' ಆಗಿಬಿಟ್ಟಿದ್ದೆ... busy for nothing ofcourse.
+++++++++++++++++++
ಮೊನ್ನೆ ಬೆಳಿಗ್ಗೆ ಮನೆಯ ಗೇಟ್ ತೆಗೆದು ಒಳನುಗ್ಗುತ್ತಿದ್ದಂತೆಯೇ ಕಣ್ಣು ಅದ್ಯಾಕೋ ಕಾಂಪೌಂಡ್ ಗೋಡೆ ಮೇಲೆ ಹರಿಯಿತು. ಬಳ್ಳಿಯಾಗಿ ಮೆಲ್ಲಮೆಲ್ಲಗೆ ಹಬ್ಬಲಾರಂಭಿಸಿದ್ದ ಗಿಡ ಕಂಡು ಆಶ್ಚರ್ಯವಾಯಿತು. ಅದರ ಪಕ್ಕದಲ್ಲಿದ್ದ ಮತ್ತೊಂದು ಗಿಡ ಹೆಸರಿನ ಗಿಡವೆಂದು ಗೊತ್ತಾಯಿತು, ಆದರೆ ಏನೇನೋ ಬೀಜಗಳನ್ನು ಹಾಕಿದ್ದೆನಾದ್ದರಿಂದ ಬಳ್ಳಿಯಾಗಿದ್ದು ಯಾವುದರ ಗಿಡವೆಂದು ಗೊತ್ತಾಗಲಿಲ್ಲ.
ಮೆಲ್ಲಮೆಲ್ಲಗೆ ಚಿಗುರೊಡೆದು ಹಬ್ಬುತ್ತಿದ್ದ ಬಳ್ಳಿ, ಇನ್ನು ತನ್ನನ್ನು ಹಾಗೇ ಬೇಕಾಬಿಟ್ಟಿ ಬಿಟ್ಟಲ್ಲಿ ಎಲ್ಲೆಲ್ಲಿಗೂ ಹಬ್ಬಿಯೇನು ಅಂತ ಮೌನದಲ್ಲೇ ವಾರ್ನಿಂಗ್ ಕೊಡುತ್ತಿತ್ತು. ಇದಕ್ಕೇನಾದ್ರೂ ಮಾಡಬೇಕು, ಏನಾದ್ರೂ ಸಪೋರ್ಟ್ ಕೊಟ್ಟು ಸರಿಯಾದ ರೀತಿ ಹಬ್ಬಲಿಕ್ಕೆ ಸಹಾಯ ಮಾಡಬೇಕು ಅಂದುಕೊಂಡು ಒಳಗೆ ಬಂದೆ. ಅಷ್ಟೆ. ಮತ್ತೆ busy for nothing. ಮರೆತೇ ಹೋಯಿತು.
+++++++++++++++++++
ಇವತ್ತು ರಾತ್ರಿ ಪಾಳಿ ಮುಗಿಸಿ ಬಂದು ಮಲಗಿದವಳಿಗೆ ಬೇಗ ಎಚ್ಚರವಾಯ್ತು... ಎದ್ದು ನೋಡುತ್ತೇನೆ, ಹೊರಗೆ ಜೋರು ಮಳೆ. ಒಳಗೂ ಮಳೆ.
ಬಾಗಿಲು ತೆರೆದು ಹೋಗಿ ಸುಮ್ಮನೆ ಮಳೆ ನೋಡುತ್ತ ನಿಂತೆ. ಹಾಗೇ ಬಳ್ಳಿಯ ಕಡೆಗೂ ಗಮನ ಹರಿಯಿತು. ಅದು ಮಲ್ಲಿಗೆ ಬಳ್ಳಿಗೆ ಸುತ್ತಿಕೊಳ್ಳಲಾರಂಭಿಸಿತ್ತು. ಮತ್ತೆ ಅದೇ ಯೋಚನೆ, ಇದು ಹೇಗೆಹೇಗೋ ಬೆಳೆದರೆ ಸುಮ್ಮನೇ ತೊಂದರೆ. ಜತೆಗೆ ಓನರ್ ಕೈಲಿ ಬೇರೆ ಬೈಸಿಕೊಳ್ಳಬೇಕು. ಏನ್ ಮಾಡಲಿ? ಕಾಂಪೌಂಡ್ ಮುಂದೆ ನೇರವಾಗಿ ರಸ್ತೆ. ಕಾಂಪೌಂಡ್ ಒಳಗಿರುವುದು ಹೋಗುವ-ಬರುವ ದಾರಿ. ಹಬ್ಬಿಸಿದರೆ ಮೇಲಕ್ಕೆ ಹಬ್ಬಿಸಬೇಕು, ಅದಕ್ಕೆ ಓನರ್ ಅನುಮತಿ ಬೇಕು.
ಆಕೆ ಕೂಡ ನನ್ನ ಪಕ್ಕದಲ್ಲಿ ಬಂದು ನಿಂತಿದ್ದಳು. ಅವಳಿಗೂ ಅದೇ ಚಿಂತೆಯಿತ್ತು... ಮಲ್ಲಿಗೆ ಬಳ್ಳಿಗೆ ಹಬ್ಬಿದ್ದನ್ನು ಮೆಲ್ಲಗೆ ಬಿಡಿಸಿ ಕೆಳಗೆ ನೇತಾಡಬಿಟ್ಟಳು.. ಇದಕ್ಕೊಂದು ವ್ಯವಸ್ಥೆ ಆಗಬೇಕು ಎಂದಳು, ನನ್ನನ್ನುದ್ದೇಶಿಸಿ. ನಾನು ಸುಮ್ಮನೇ ನಕ್ಕು ತಲೆಯಲ್ಲಾಡಿಸಿದೆ.
ಮಳೆ ಜೋರಾಗಿ ಹನಿಯುತ್ತಿತ್ತು. ಬಳ್ಳಿ ಇದ್ಯಾವುದರ ಗಮನವಿಲ್ಲದೆ ರಾಚುತ್ತಿದ್ದ ಹನಿಗಳಿಗೆ ಮೈಯೊಡ್ಡಿ ಸುಖವಾಗಿ ನಗುತ್ತಿತ್ತು.

Saturday, April 18, 2009

ಅಕ್ಕಿ ಬೆಲೆ ಯಾಕೆ ಗಗನಕ್ಕೇರಿದೆ ?


ಅಕ್ಕಿ ಬೆಲೆ ಯಾಕೆ ಗಗನಕ್ಕೇರಿದೆ ಎಂಬ ಪ್ರಶ್ನೆಗೆ ಇದಕ್ಕಿಂತ ಉತ್ತಮ ಉತ್ತರ ಬೇರಿಲ್ಲವೇನೋ!
ಬಿಗ್ ಬಜಾರ್ ಮಾತ್ರವಲ್ಲ, ಎಲ್ಲಾ ಸೂಪರ್ ಮಾರ್ಕೆಟ್ಟುಗಳದೂ ಇದೇ ಕಥೆ. ಅವರೆಲ್ಲ ಸೇರಿಕೊಂಡು ಸಾವಿರಗಟ್ಟಲೆ ಟನ್ ಖರೀದಿಸಿ ಸ್ಟಾಕ್ ಇಟ್ಟುಕೊಂಡರೆ ಶಾರ್ಟೇಜ್ ಆಗದೆ ಇರುತ್ತದೆಯೇ? ಬೆಲೆ ಏರದಿರುತ್ತದೆಯೇ?
ಇದು ಹೊಸಾ ವಿಷಯವೇನಲ್ಲ. ಆದರೆ public ಆಗಿ ಈರೀತಿ ಕಂಪೆನಿಯೊಂದು ತನಗೆ ಗೊತ್ತಿಲ್ಲದೆಯೇ ಒಪ್ಪಿಕೊಂಡಿದ್ದು ಇದೇ ಮೊದಲು.
ಇದು ಅತಿಕೆಟ್ಟ ಜಾಹೀರಾತಿಗೆ ಕೂಡ ಉದಾಹರಣೆ ಅಂತ ನನ್ನ ಅಭಿಪ್ರಾಯ. ನೀವೇನಂತೀರಿ?

Sunday, April 12, 2009

ಒಂದಿಷ್ಟು ಹಾಡು... ಒಂದಿಷ್ಟು ನೆನಪು...



'ತಾತಾ... ಪೀಪೀ...'
(ಇದು ಪ್ರತಿಸಲ ನೋಡಿದಾಗಲೂ ನಂಗೆ ಅಳು ಬರುತ್ತದೆ... ಇವತ್ತಿಗೂ... ಸುಮ್ಮಸುಮ್ಮಗೆ...)



ಈ ಸ್ವರ ಕೇಳ್ತಿದ್ರೆ ಸಾಕು, ಮತ್ತೇನೂ ಬೇಡ ಬದುಕಲ್ಲಿ! :-)



ನಂಗಿಷ್ಟವಾದ ರಾಜ್ ಹಾಡು...



ಕೊನೆಗೆ ಉಳಿದಿದ್ದು ಇಷ್ಟು.
ಒಂದಿಷ್ಟು ಹಾಡು... ಒಂದಿಷ್ಟು ನೆನಪು...
ಮತ್ತು ಅಳಿಸಲಾಗದ ಹೆಜ್ಜೆಗಳು.


ಅಣ್ಣಾವ್ರು ಅಗಲಿ ಇಂದಿಗೆ ಮೂರು ವರ್ಷ.