Tuesday, July 14, 2009

ಕಳೆದುಕೊಳ್ಳುವ ಬಗೆಗೊಂದು ಸ್ವಗತ...

ಎರಡು ವರ್ಷದ ಹಿಂದಿನ ಕಥೆ. ಅವತ್ತೊಂದು ದಿನ ಬನ್ನೇರುಘಟ್ಟದಲ್ಲಿರುವ ಅತ್ತಿಗೆಯ ಮನೆಯಿಂದ ವಾಪಸ್ ಹೊರಟವಳು ಗೆಳತಿಯ ಮನೆಗೆ ಹೋಗುವ ಬಸ್ಸಿನಲ್ಲಿ ಕೂತಿದ್ದೆ. ಅರ್ಧ ದಾರಿಯಲ್ಲಿ ನನ್ನ ಪಕ್ಕದಲ್ಲಿ ನಿಂತಿದ್ದ ಹೆಂಗಳೆಯೊಬ್ಬಳು ತನ್ನ ಮಗುವನ್ನು ನನ್ನ ಮಡಿಲಲ್ಲೇರಿಸಿದಳು. ಮಗುವನ್ನು ನೀಟಾಗಿ ನನ್ನ ಮಡಿಲಲ್ಲಿ ಅವಳು ಕೂರಿಸುವಾಗ ನಾನು ಪಿಳಿಪಿಳಿ ಕಣ್ಣುಬಿಡುತ್ತಿದ್ದ ಮಗುವಿನ ಮುಖ ನೋಡ್ತಾ ಇದ್ದೆ. ಅವಳು ಕೂರಿಸಿಯಾದ ಮೇಲೆ ಮಗುವನ್ನು ನಾನು ಹಿಡಿದುಕೊಂಡು ಕೂತೆ.

ಸ್ವಲ್ಪ ದೂರ ಹೋದನಂತರ ಆಕೆ ಮಗುವನ್ನು ನನ್ನ ಮಡಿಲಿನಿಂದ ತೆಗೆದುಕೊಂಡು ಬಸ್ ಇಳಿದಳು. ಅದ್ಯಾಕೋ ಅವಳು ಸ್ವಲ್ಪ ಜಾಸ್ತಿಯೇ ನನ್ನ ಮಡಿಲು ತಡಕಿದಳೇನೋ ಅಂತನಿಸಿದರೂ ಅದೇಕೋ ಆಕಡೆ ಗಮನ ಕೊಡಲಿಲ್ಲ.

ನಂತರ ಜಯನಗರದಲ್ಲಿ ಬಸ್ಸಿಂದ ಇಳಿಯುವಾಗ ಪರ್ಸ್ ಝಿಪ್ ತೆರೆದಿದ್ದು ಗಮನಕ್ಕೆ ಬಂತು. ಆಗಲೂ ನನಗೇನೂ ಅನಿಸಲಿಲ್ಲ. ಝಿಪ್ ಹಾಕಿಕೊಂಡು ಆಟೋ ಹಿಡಿದು, ವಿದ್ಯಾಪೀಠ ಸರ್ಕಲ್ಲಿಗೆ ಹೋದೆ. ಅಲ್ಲಿ ಫ್ರೆಂಡ್ ಮನೆಯ ಹತ್ತಿರ ಇಳಿದು ದುಡ್ಡಿಗೆಂದು ಪರ್ಸ್ ತಡಕಾಡಿದರೆ- ಬ್ಯಾಂಕಿಗೆ ಹಾಕಬೇಕೆಂದು ಬ್ಯಾಗಲ್ಲಿಟ್ಟುಕೊಂಡಿದ್ದ ಉಳಿತಾಯದ 9,500 ರೂಪಾಯಿ ಇದ್ದ ಕಟ್ಟು ಕಾಣೆ... ಕಳ್ಳಿ ಮೊಬೈಲ್ ಉಳಿಸಿಹೋಗಿದ್ದಳು. ಗೆಳತಿಯ ಮನೆ ಅಲ್ಲೇ ಇದ್ದ ಕಾರಣ ಆಟೋ ಚಾರ್ಜ್ ಕೊಟ್ಟು ಬಚಾವಾದೆ. (ಪೊಲೀಸ್ ಹತ್ತಿರ ದೂರು ಕೊಡಲಿಕ್ಕೆ ಹೋಗಿದ್ದೆ, ಆಕಥೆ ಇನ್ನೊಮ್ಮೆ ಹೇಳ್ತೀನಿ)

--------------------------------

ವರ್ಷದ ಹಿಂದಿನ ಕಥೆ. ಒಂದು ಮಧ್ಯಾಹ್ನ. ಐಸಿಐಸಿಐ ಕ್ರೆಡಿಟ್ ಕಾರ್ಡ್ ವಿಭಾಗದಿಂದ ಕರೆ ಬಂತು. ಏನೆಂದು ಕೇಳಿದರೆ, "ನೀವು ನಿನ್ನೆ ಮಾಡಿದ ಖರೀದಿಯನ್ನು ಇಎಂಐ ಮೂಲಕ ಕಟ್ಟಬಹುದು, ತಿಳಿಸಲಿಕ್ಕೆ ಕರೆ ಮಾಡಿರುವೆವು" ಎಂದರು. ಆ 'ನಿನ್ನೆ' ನಾನೆಲ್ಲೂ ಕ್ರೆಡಿಟ್ ಕಾರ್ಡ್ ಉಜ್ಜಿರಲಿಲ್ಲವಾದ್ದರಿಂದ ಇವರು ಯಾವುದರ ಬಗ್ಗೆ ಹೇಳುತ್ತಿದ್ದಾರೆಂದು ತಿಳಿಯಲಿಲ್ಲ. ಕೇಳಿದರೆ ಹೇಳಿದರು, ನಾನು 37,000+ ಮೌಲ್ಯದ ವಿಮಾನದ ಟಿಕೆಟ್-ಗಳು ಕ್ರೆಡಿಟ್ ಕಾರ್ಡ್ ಮೂಲಕ ಹಿಂದಿನ ದಿನ ಖರೀದಿಸಿದ್ದೆನಂತೆ.

ಕೂಡಲೇ ಎಚ್ಚತ್ತ ನಾನು, ನಾನು ಖರೀದಿಸಿಯೇ ಇಲ್ಲವೆಂದು ಹೇಳಿದೆ. ಸ್ವಲ್ಪ ವಿಚಾರಣೆ ನಡೆಸಿ ನಾನು ಆಸಮಯದಲ್ಲಿ ಬೇರೇನೋ ಮಾಡುತ್ತಿದ್ದೆ, ಮತ್ತು ಕ್ರೆಡಿಟ್ ಕಾರ್ಡ್ ನನ್ನ ಹತ್ತಿರವೇ ಇತ್ತು, ಬೇರೆಲ್ಲೂ ಹೋಗಿರಲಿಲ್ಲ ಎಂಬ ಉತ್ತರ ಪಡೆದ ನಂತರ, ಆಕೆ ನನಗೆ ಕೂಡಲೇ ಐಸಿಐಸಿಐ ಕ್ರೆಡಿಟ್ ಕಾರ್ಡ್ ಡಿವಿಜನ್ನಿಗೆ ಟ್ರಾನ್ಸಾಕ್ಷನ್ ಡಿಸ್ಪ್ಯೂಟ್ ಹಾಕಲು ಹೇಳಿದಳು. ಕೊನೆಗೆ ಅದೇನೇನು ಮಾಡಬೇಕೋ ಎಲ್ಲಾ ಮಾಡಿ, ಬ್ಯಾಂಕಿಗೆ ನಾನು ಮಾಡಿದ ಖರೀದಿಯಲ್ಲವೆಂಬುದನ್ನು ತಿಳಿಯಪಡಿಸಿದೆ. ಅವರು ಒಪ್ಪಿಕೊಂಡು ನನ್ನ ಬಿಲ್-ನಿಂದ ತಾತ್ಕಾಲಿಕವಾಗಿ ಅದನ್ನು ತೆಗೆಯುತ್ತೇವೆಂದರು. ಒಂದು ವೇಳೆ ತಮ್ಮ ತನಿಖೆಯಲ್ಲಿ ನಾನೇ ಖರೀದಿಸಿದ್ದೆಂದು ಪ್ರೂವ್ ಆದರೆ ಮಾತ್ರ ಅದನ್ನು ನಾನೇ ಕಟ್ಟಬೇಕಾಗುತ್ತದೆಂದು ಎಚ್ಚರಿಸಿದರು. ನಾನು ಖರೀದಿಯೇ ಮಾಡಿಲ್ಲವಾದ ಕಾರಣ ಅವರು ಸಾಧಿಸುವ ಪ್ರಶ್ನೆಯೇ ಬರುವುದಿಲ್ಲವೆಂದು ನಾನು ಭರವಸೆ ನೀಡಿದೆ.

ಕೆಲ ದಿನ ಬಿಟ್ಟು ಕ್ರೆಡಿಟ್ ಕಾರ್ಡ್ ಬಿಲ್ ಬಂತು. ಅದರಲ್ಲಿ ನಾನು ಕಟ್ಟಬೇಕಿರುವ ದುಡ್ಡು ಸೊನ್ನೆ ರೂಪಾಯಿಯಿತ್ತು, ನನಗೆ ದುಡ್ಡು ಬರಬೇಕಿತ್ತು. ಏನೆಂದು ಚೆಕ್ ಮಾಡಿದರೆ, ವಿಮಾನ ಟಿಕೆಟ್ ಖರೀದಿಸಿದಾಗ ಅದರಲ್ಲಿ 5% cash-back offer ಇದ್ದುದರಿಂದ 1800 ರೂಪಾಯಿಯಷ್ಟು ನನ್ನ ಅಕೌಂಟಿಗೆ ವಾಪಸ್ ಬಂದು, ನಾ ಕಟ್ಟಬೇಕಿರುವ 1700+ರಷ್ಟು ದುಡ್ಡು ಮಾಫಿಯಾಗಿತ್ತು..!

--------------------------------

ಇವತ್ತು ಶಿವಾಜಿನಗರದಲ್ಲಿ ಬಸ್ಸಿಗೆ ಕಾದುನಿಂತಿದ್ದೆ. ಬಸ್ ಬಂತು, ಸಹಜವಾಗಿಯೇ ರಶ್ ಇತ್ತು. ನೂಕುನುಗ್ಗಲಿನಲ್ಲಿ ಬಸ್ಸಿಗೆ ಹತ್ತುವಾಗ ನನ್ನ ಹಿಂದಿದ್ದವಳ ಕೈ ನನ್ನ ಹ್ಯಾಂಡ್ ಬ್ಯಾಗಿನ ಬದಿಯಲ್ಲಿ ಝಿಪ್ ತೆರೆಯಲು ಯತ್ನಿಸುತ್ತಿದ್ದುದು ಅನುಭವಕ್ಕೆ ಬಂತು. ಮೆಲ್ಲಗೆ ನೋಡಿ ವಿಷಯ ಹೌದೆಂದು ಕನ್-ಫರ್ಮ್ ಮಾಡಿಕೊಂಡೆ. ಬ್ಯಾಗ್ ಹಾಕಿಕೊಂಡಿದ್ದ ಕೈಯಿಂದ ಆಕೆಯ ಕೈಹಿಡಿದೆ. ಬಿಡಿಸಿಕೊಳ್ಳಲು ಯತ್ನಿಸಿದಳು. ನಾ ಬಿಡಲಿಲ್ಲ. ಹಾಗೇ ಹಿಂತಿರುಗಿ ನೋಡಿ "ಏನ್ರೀ ಮಾಡ್ತಿದೀರಾ, ಮರ್ಯಾದಸ್ತರ ಥರ ಕಾಣ್ತೀರಾ, ಮಾಡೋದು ಇಂಥಾ ಕಚಡಾ ಕೆಲಸಾನಾ" ಅಂತ ರೋಪ್ ಹಾಕಿದೆ.

ಆಕೆ ತಕ್ಷಣ ಕೈಬಿಡಿಸಿಕೊಂಡಳು, "ನಾನೇನು ಮಾಡಿದೀನಿ, ನನ್ನ ಪಾಡಿಗೆ ಬಸ್ಸಿಗೆ ಹತ್ತುತಾ ಇದ್ದೀನಿ" ಅಂದಳು. ಬಸ್ಸಿಗೆ ಹತ್ತೋರು ನನ್ "ಬ್ಯಾಗಿಗೆ ಯಾಕ್ ಕೈಹಾಕ್ತಿದೀರಾ" ಅಂದೆ. "ಹಿಡ್ಕೊಳ್ಳೋಕೆ ಏನೂ ಸಿಕ್ಕಿಲ್ಲ, ಹಾಗಾಗಿ ಬ್ಯಾಗ್ ಹಿಡಿದೆ" ಎಂದಳು. ಉಳಿದವರು ನಮ್ಮ ಜಗಳ ನೋಡುತ್ತಿದ್ದರು. ಆದರೆ ಆಕೆ ಕದಿಯಲು ಹೊರಟವಳೆಂದು ಸಾಧಿಸಲು ನನ್ನಲ್ಲೇನೂ ಇರಲಿಲ್ಲವಾದ ಕಾರಣ ಕೊನೆಗೆ ನಾನೇ ಸುಮ್ಮನಾದೆ. ಆಕೆ ತನ್ನನ್ನು ಕಳ್ಳಿಯೆಂದ ನನಗೆ ಹಿಡಿಶಾಪ ಹಾಕುತ್ತಿದ್ದಳು.

---------------------------------

ಕಳ್ಳರು ಬೇರೆ ಬೇರೆ ರೀತಿಯಲ್ಲಿರುತ್ತಾರೆ. ಕೆಲವರಿಗೆ ದೋಚುವುದು ಬದುಕಲಿಕ್ಕಿರುವ ಅನಿವಾರ್ಯತೆ. ಇನ್ನು ಕೆಲವರಿಗೆ ಕದಿಯುವುದು ಚಟ. ಕೆಲವರು ದೋಚಿದ್ದು ಗೊತ್ತೇ ಆಗುವುದಿಲ್ಲ - ತುಂಬಾ ಸೊಫಿಸ್ಟಿಕೇಟೆಡ್ ಆಗಿ ಕೃತ್ಯವನ್ನು ಗೈದಿರುತ್ತಾರೆ, ಮತ್ತು ಅದಕ್ಕೇನಾದರೂ ಹೆಸರು ಕೂಡ ಇಟ್ಟಿರುತ್ತಾರೆ. ಕದ್ದಿದ್ದನ್ನು ಅಥವಾ ದೋಚಿದ್ದನ್ನು ಒಪ್ಪಿಕೊಳ್ಳುವ ಕಳ್ಳರು ತುಂಬಾ ಕಡಿಮೆ. ಕದಿಸಿಕೊಳ್ಳುವುದು, ಕಳೆದುಕೊಳ್ಳುವುದು ನನಗೆ ಅಭ್ಯಾಸವಾಗಿಹೋಗಿದೆ.

ಹಾಗೆಂದು ಬದುಕಲ್ಲಿ ಕಳೆದುಕೊಳ್ಳಲು ಬೇಜಾರಿರಲಿಲ್ಲ ನನಗೆ... ಬದುಕೆಂದರೆ ಕಳೆಯುವ-ಕೂಡುವ ಲೆಕ್ಕಾಚಾರ ಎಂಬ ಮಾತು ಒಪ್ಪಿಕೊಳ್ಳಲು ಹಿಂದೆ-ಮುಂದೆ ನೋಡಿದವಳು ನಾನು.

ಆದರೆ, ಇತ್ತೀಚೆಗೆ ಮಾತ್ರ, ನಿಜ, ಬದುಕೆಂದರೆ ಕೂಡುವುದು - ಕಳೆಯುವುದು ಬಿಟ್ರೆ ಇನ್ನೇನೂ ಇಲ್ಲ ಅಂತ ಅನಿಸ್ತಿದೆ. ಬರೀ ಕಳೆದುಕೊಳ್ಳುವುದರಿಂದ ಏನು ಸಾಧಿಸ್ತೀನಿ, ಬದುಕಿಡೀ ಇದೇ ಆದರೆ, ಪಡೆದುಕೊಳ್ಳುವುದು ಯಾವಾಗ ಅಂತ ಅನಿಸ್ತಿದೆ. ಏನು ಪಡೆದೆವೋ ಅದು ಮಾತ್ರ ಕೊನೆಗೆ ಬದುಕ ಬುತ್ತಿಯಲ್ಲುಳಿಯುತ್ತದೆ, ನಮ್ಮನ್ನು ಅಳೆಯುವವರೂ ಅದರ ಮೂಲಕವೇ ಅಳೆಯುತ್ತಾರೆ... ಕಳೆದುಕೊಂಡಿದ್ದಕ್ಕೆ ಕಣ್ಣೀರಿಡುವುದು ಉಪಯೋಗವಿಲ್ಲ, ಪಡೆಯಲಿಕ್ಕೆ ಪ್ಲಾನ್ ಮಾಡಬೇಕು ಅಂತನಿಸುತ್ತಿದೆ.

ಇದೆಲ್ಲದಕ್ಕಿಂತ ಹೆಚ್ಚಾಗಿ, ಮನುಷ್ಯ ಮೂಲತಹ ತುಂಬಾ ಸ್ವಾರ್ಥಿ, ಸ್ವಾರ್ಥ ಬಿಟ್ಟು ಬದುಕುವುದು ಅಪರೂಪದ ಕೆಲಸ, ಅದು ಮಾಡಿ ನಾನ್ಯಾಕೆ ಬುದ್ಧನ ಶ್ರೇಣಿಗೇರಬೇಕು, ಅದರಿಂದೇನಾಗುತ್ತದೆ - ಅಂತಲೂ ಅನಿಸ್ತಿದೆ. ನಮ್ಮ ಆತ್ಮದ ಒಳಗಿರುವ ಅಹಂ ಯಾವಾಗಲೂ ಲೆಕ್ಕಾಚಾರ ಹಾಕುತ್ತಿರುತ್ತದೆ - ಅದಕ್ಕೆ ಸ್ವಾರ್ಥದಿಂದಲೇ ತೃಪ್ತಿ - ಅಲ್ವಾ...?

Monday, May 18, 2009

ಇದಪ್ಪಾ ಗೂಳಿಕುಣಿತ...!

ಈಬಾರಿ ಕೂಡ ಚೌಚೌ ಗವರ್ಮೆಂಟೇ ಬರುತ್ತೆ ಸೆಂಟರಲ್ಲಿ ಅಂತ ಎಲ್ಲಾ ಎಕ್ಸಿಟ್ ಪೋಲುಗಳೂ ಹೇಳುತ್ತಾ ಇದ್ದ ಹಾಗೆ, ಮಾರ್ಕೆಟ್ ಸ್ವಲ್ಪ ಏರಿದ ಸಮಯ ನೋಡಿ ನಾನು ಕೈಯಲ್ಲಿದ್ದ ಲಾಭದ ಸ್ಕ್ರಿಪ್ ಎಲ್ಲಾ ಮಾರಿಬಿಟ್ಟೆ. ನಾನು ಮಾರಿದ್ದು ಮಾತ್ರವಲ್ಲ, ನನ್ನಜತೆ ಆಗಾಗ ಡಿಸ್ಕಸ್ ಮಾಡುವ ಗೌಡ್ರಿಗೆ ಕೂಡ ನಾನು ಮಾಡಿದ್ದನ್ನು ಹೇಳಿದೆ, ಅವರು ಕೂಡ ಆಗಲೇ ಕೈಯಲ್ಲಿದ್ದುದೆಲ್ಲ ಮಾರಿ ದುಡ್ಡು ರೆಡಿ ಇಟ್ಟುಕೊಂಡಿದ್ದರು. ಚೌಚೌ ಗವರ್ಮೆಂಟು ಬಂದ ಕೂಡಲೇ ಮಾರ್ಕೆಟ್ಟು ಹೇಗೂ ಬೀಳುತ್ತದಲ್ಲ, ಆಗ ಕಡಿಮೆಗೆ ಸಿಗುವ ಒಳ್ಳೆ ಕಂಪೆನಿ ಶೇರುಗಳನ್ನು ಕೊಳ್ಳಬೇಕೆಂಬುದು ನಮ್ಮ ಪ್ಲಾನಾಗಿತ್ತು.

ಆದರೇನು ಮಾಡಲಿ, 16ನೇ ತಾರೀಖು ಶನಿವಾರ ಫಲಿತಾಂಶ ಬರುತ್ತಾ ಬರುತ್ತಾ ಕಾಂಗ್ರೆಸ್ ಸೀಟುಗಳು 180 ದಾಟುತ್ತಿದ್ದ ಹಾಗೆ ನನಗೆ ಚಳಿ ಶುರುವಾಯಿತು... ಮಾರ್ಕೆಟ್ ಮೇಲೇರಲಿರುವುದರ ಬಗ್ಗೆ ಖುಷಿಯ ಬದಲು ದು:ಖವಾಯಿತು. ಛೇ, ಅನ್ಯಾಯವಾಗಿ ರಿಲಯನ್ಸ್ ಮತ್ತು ಐಸಿಐಸಿಐ ತುಂಬಾ ಕಡಿಮೆ ಲಾಭಕ್ಕೆ ಮಾರಿಬಿಟ್ಟೆನಲ್ಲಾ ಅಂತ ಪಶ್ಚಾತ್ತಾಪವಾಗತೊಡಗಿತು... ಬುದ್ಧ ಹೇಳಿದ ಆಸೆಯೇ ದು:ಖಕ್ಕೆ ಮೂಲ ಎಂಬ ಮಾತು ನಂಗೆ ಆದಿನ ತನ್ನ ವಿವಿಧ ಬಣ್ಣಗಳಲ್ಲಿ ಚೆನ್ನಾಗಿ ಅರ್ಥವಾಗತೊಡಗಿತು. ಒಂದು ಕಡೆ ಸ್ಥಿರ ಸರಕಾರ ಬರುವ ಸೂಚನೆಗೆ ಖುಷಿಯಾದರೆ, ಇನ್ನೊಂದು ಕಡೆ ಛೇ, ಲೆಕ್ಕಾಚಾರ ತಪ್ಪಿತಲ್ಲಾ ಅಂತ ವಿಪರೀತ ದು:ಖ... ಮನಸ್ಸಿನಲ್ಲೇ ಶೋಕಾಚರಣೆ ಮಾಡಿದೆ. ಪಾಪ, ಗೌಡರದೂ ಅದೇ ಪರಿಸ್ಥಿತಿಯಾಗಿತ್ತೇನೋ, ಸಮಾನದು:ಖಿಗಳಾಗಿದ್ದರೂ ನಾವಿಬ್ಬರೂ ಆದಿನ ಮಾತಾಡಿಕೊಳ್ಳಲಿಲ್ಲ.

ಹೂಂ, ಇರಲಿ, ಹೇಗೂ ಸೋಮವಾರ ಮಾರ್ಕೆಟ್ ಮೇಲೇರುವುದೇ ಆದರೆ, ಇರುವ ಚೂರುಪಾರನ್ನು ಬೇಗನೇ ಮಾರಿ ಹೊಸದು ತೆಗೆದುಕೊಂಡುಬಿಡುವುದು, ಮತ್ತೆ ಹೊಸ ಸರಕಾರದ ಬಜೆಟ್ ಬಂದಾಗ ಹೇಗೂ ಮತ್ತೊಂದು ಏರಿಕೆ ಇದ್ದೇ ಇರುತ್ತದೆ, ಆಗ ಮತ್ತೆ ಮಾರಿದರಾಯಿತು ಅಂತೆಲ್ಲ ಲೆಕ್ಕಹಾಕಿ ಆದಿತ್ಯವಾರವನ್ನು ಕಷ್ಟದಲ್ಲಿ ಕಳೆದಿದ್ದಾಯಿತು. ಎಲ್ಲಾ ಎಕ್ಸ್-ಪರ್ಟುಗಳೂ 500ರಿಂದ 1000 ಪಾಯಿಂಟು ಮೇಲೆ ಹೋಗಬಹುದು ಸೆನ್ಸೆಕ್ಸು ಅಂತಿದ್ರು. ಶೇಕಡಾ ಹತ್ತರಷ್ಟು ಲಾಭಕ್ಕೇನೂ ಮೋಸವಿಲ್ಲ ಅಂತ ಅಂದುಕೊಂಡು, ಸೋಮವಾರದ 9.50ರ ಶುಭಗಳಿಗೆ ಬರಲಿಕ್ಕೇ ಕಾದುಕೂತಿದ್ದೆ.


ಬಂದೇ ಬಂತು ಶುಭಸೋಮವಾರ... The Golden Monday! 9.00 ಆಗುತ್ತಿದ್ದಂತೇ CNBCTV18 ಹಾಕಿ ಉದಯನ್ ಮುಖರ್ಜಿ ಮತ್ತು ಮಿತಾಲಿ ಶೋ ನೋಡ್ತಾ ಕೂತಿದ್ದೆ. ಉದಯನ್ ಮತ್ತು ಮಿತಾಲಿ ಮಾರ್ಕೆಟ್ ಬಿದ್ದರೆ ಮುಖ ಜೋತುಹಾಕುವ Anchorಗಳು. ನೋಡುಗರ ಭಾವನೆಗಳು ಅವರಲ್ಲೂ reflect ಆಗುತ್ತಿರುತ್ತವೆ. ಅವರು ಮಾತಾಡುತ್ತಿದ್ದಂತೇ, ಮಾರುಕಟ್ಟೆ 10% ಮೇಲೆ ಹೋದರೆ 1 ಗಂಟೆ ಟ್ರೇಡಿಂಗ್ ಇರುವುದಿಲ್ಲ, 15% ಮೇಲೇರಿದರೆ 2 ಗಂಟೆ ಬಂದ್ ಇತ್ಯಾದಿ ಮಾಹಿತಿಗಳು ಬರ್ತಾ ಇತ್ತು.

ಆಯ್ತು, 9.50 ಆಗಿಯೇ ಹೋಯ್ತು... ಅಷ್ಟೆ. ಏನಾಗುತ್ತಿದೆ ಎಂದು ತಿಳಿಯುವುದರೊಳಗಾಗಿ ಸೆನ್ಸೆಕ್ಸ್ 1300 ಅಂಕ ಮೇಲೇರಿತು, ಕೂಡಲೇ ಟ್ರೇಡಿಂಗ್ ಬಂದ್! ಇಷ್ಟಾಗಲಿಕ್ಕೆ ಮಾರ್ಕೆಟ್ ಓಪನ್ ಆಗಿ 20 ಸೆಕೆಂಡ್ ಕೂಡ ತೆಗೆದುಕೊಳ್ಳಲಿಲ್ಲ.

ನಾನು ಇಂಗು ತಿಂದ ಮಂಗನಂತೆ ಏನಾಗುತ್ತಿದೆಯೆಂದೇ ಅರ್ಥವಾಗದೆ ಉದಯನ್ ಮತ್ತು ಮಿತಾಲಿ ಹೇಳುವುದನ್ನೇ ಕೇಳುತ್ತ ಕೂತೆ. ಒಂದು ಗಂಟೆಯ ನಂತರ ಮತ್ತೆ ಮಾರುಕಟ್ಟೆ ತೆರೆಯಲಿದೆ ಎಂದು ಒಂದು ಸಾರಿ ಹೇಳಿದರೆ ಮತ್ತೆ ಎರಡು ಗಂಟೆಯ ನಂತರ ತೆರೆಯಲಿದೆ ಎಂದರು. ಇದಕ್ಕೆ ಕಾದು ಕೂತರೆ ಅಷ್ಟೇ ಗತಿ ಮತ್ತೆ ಅಂತ ನನಗೆ ನಾನೇ ಬುದ್ಧಿ ಹೇಳಿಕೊಂಡು ಆಫೀಸಿಗೆ ಹೊರಟೆ.

ಆಫೀಸಲ್ಲಿದ್ದರೂ, ಕೆಲಸ ಶುರುಮಾಡಿಕೊಂಡರೂ ಮಾರುಕಟ್ಟೆ ಏನಾಗುತ್ತದೋ ಎಂಬ ಕಪಿಕುತೂಹಲ ಸುಮ್ಮನೆ ಕೂರಲು ಬಿಡಲಿಲ್ಲ. ಸಮಾನಮನಸ್ಕರೆಲ್ಲ ಜತೆ ಸೇರಿ 11.45 ಆಗುತ್ತಿದ್ದಂತೆಯೇ ಐಬಿಎನ್ ಹಾಕಿ ಕೂತೆವು. 11.50 ಆಗುತ್ತಿದ್ದಂತೇ ಅಲ್ಲಿ CNBCTV18 ಪಂಚ್ ಆಯಿತು. ಈಗಲೂ ಅಷ್ಟೇ. ಮಾರುಕಟ್ಟೆ ಓಪನ್ ಆದಕೂಡಲೇ 700ರಷ್ಟು ಅಂಕಗಳು ಮೇಲೇರಿತು... And trading halted for the day!


Historical. Fantastic. Amazing. Wonderful. Unbelievable. Unpredictable. ಇನ್ನೇನು ಹೇಳಬಹುದೋ ಗೊತ್ತಿಲ್ಲ. ನಿಫ್ಟಿಯನ್ನು 650 ಅಂಕಗಳಿಂದ, ಸೆನ್ಸೆಕ್ಸನ್ನು 2110 ಅಂಕಗಳಿಂದ ಏರಿಸಿ, ಎಲ್ಲಾ ಮಿತಿಗಳನ್ನ ದಾಟಿ ನರ್ತಿಸಿತ್ತು ಗೂಳಿ! ಕರಡಿಗಳಿಗೆಲ್ಲ ಬೇಸರವಾಗಬೇಕಾದದ್ದೇ. ನಾನು 520ಕ್ಕೆ ಮಾರಿದ್ದ ಐಸಿಐಸಿಐ 745 ಮುಟ್ಟಿತ್ತು. ಇಷ್ಟರಲ್ಲಿ ನಾನು ಬುದ್ಧನ ಮಾತನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರಿಂದ ನಂಗೆ ಬೇಸರವಾಗಲಿಲ್ಲ, ಬದಲಿಗೆ ಸಖತ್ ಖುಷಿಯಾಯಿತು.

Anchor ಮಿತಾಲಿ ನಗುನಗುತ್ತಾ ಏನೇನೋ ಹೇಳಿದಳು, ಒಂದು ಬಾರಿ ತನ್ನ anchoring seatನಿಂದ ಎದ್ದು ಮೈಮುರಿದಳು, ಅವಳು ಅಷ್ಟು ಖುಷಿಯಾಗಿದ್ದು ನಾ ಎಂದೂ ನೋಡಿರಲಿಲ್ಲ. ಇನ್ನು ನಂಗೆ ಇವತ್ತಿಗೆ anchoring ಮಾಡುವ ಕೆಲಸವಿಲ್ಲ, ಇವತ್ತೆಲ್ಲಾ ಆರಾಮ, ಇನ್ನು ಟ್ರೇಡಿಂಗ್ ಇಲ್ಲ, ಇನ್ನು ಕರಡಿ ಕುಣಿತವಿಲ್ಲ, ಮಾರ್ಕೆಟ್ ಏರುತ್ತಿದೆ, ನಾನಿನ್ನು ಮುಖ ಬಾಡಿಸಲಿಕ್ಕಿಲ್ಲ ಇತ್ಯಾದಿ ಅವಳು ಹೇಳಿದ ಹಾಗೆ ನನಗನಿಸಿತು. ಉದಯನ್ ಅಂತೂ ...! ತನ್ನ ಲ್ಯಾಪ್ಟಾಪ್ ಎತ್ತಿ ಅದಕ್ಕೊಂದು ಕಿಸ್ ಕೊಟ್ಟು, ಫುಲ್ ಖುಷ್ ಆಗಿ ಹಲ್ಲುಬಿಟ್ಟು... ಅವರ ಖುಷಿಯನ್ನು ವೈರಸ್ ಥರಾ ನಮ್ಮಮೇಲೆಲ್ಲ ಬಿಟ್ಟು... ಆಹಾ! ಖುಷಿಗೆ ಅವರಿಬ್ಬರು ಹಾರ್ಟ್ ಫೇಲ್ ಒಂದು ಮಾಡಿಕೊಂಡಿಲ್ಲ ನೋಡಿ.

ಸ್ಟಾಕ್ ಮಾರ್ಕೆಟ್ ಹಿಸ್ಟರಿಯಲ್ಲೇ ಇದು ಐತಿಹಾಸಿಕ ದಿನವಂತೆ. ಒಟ್ಟಿನಲ್ಲಿ ಎಲ್ಲರಿಗೂ ಖುಷಿಯೋ ಖುಷಿ. ಗೌಡ್ರೂ ನನ್ನದೇ ಪರಿಸ್ಥಿತಿಯಲ್ಲಿದ್ದರು, ಹಾಗೆ ಮುಕ್ತವಾಗಿ ನಾಕುಮಾತು ಸುಖದು:ಖ ಹಂಚಿಕೊಂಡು ಹಗುರಾದೆವು.

ಸದ್ಯದ ಆರ್ಥಿಕ ಹಿಂಜರಿತದಿಂದ ಮೇಲೇಳಲಿಕ್ಕಾಗಿ ಇಡೀ ಜಗತ್ತು ಭಾರತ ಮತ್ತು ಚೀನಾದೆಡೆಗೆ ನೋಡುತ್ತಿರುವ ಈ ಕಾಲಘಟ್ಟ... ಎಡ-ಬಲಗಳನ್ನು ಬಿಟ್ಟು ಮಧ್ಯವನ್ನು ಆಯ್ಕೆ ಮಾಡಿ ಸುಭದ್ರತೆಯ ತೀರ್ಪು ನೀಡಿದೆ ಭಾರತ. ನಾಳೆ ಮಾರುಕಟ್ಟೆ ಮತ್ತೂ ಮೇಲೇರಬಹುದೇನೋ... ಏನಾಗಬಹುದೆಂದು ಊಹಿಸುವುದು ಸದ್ಯಕ್ಕೆ ನನ್ನ ಮಿತಿಗೆ ಮೀರಿದ್ದು. ಆದರೆ ಇವತ್ತು ಮಾತ್ರ ನಾನು ಖುಷ್... :-)

Wednesday, May 13, 2009

ನೀರಿಲ್ಲ, ಮಾತಿಲ್ಲ

ಇಲ್ಲ
ಎತ್ತೆತ್ತ ನೋಡಿದರೂ ನೀರೇ ನೀರು... ಆದರೆ, ನನಗೆ ಕುಡಿಯಲಿಕ್ಕೆ ಗುಟುಕು ನೀರಿಲ್ಲ.
ಸುತ್ತಲಿರುವುದು ಬಲುದೊಡ್ಡದಾದ ಸಮುದ್ರ... ಉಪ್ಪುನೀರು, ಎಷ್ಟಿದ್ದರೇನು, ಬಾಯಾರಿಕೆ ಹಿಂಗೀತೇ?

---------

ಮಾತು
ಹೋಗಬೇಕಾದ ದಾರಿಯಿನ್ನೂ ಬಲುದೂರ ಬಾಕಿಯುಳಿದಿದೆ.  ಮಾತಾಡಿದ್ದು ಹೆಚ್ಚೇನಿಲ್ಲ, ಆದರೆ ಮನಸೆಲ್ಲ ಖಾಲಿಯಾಗಿದೆ, ಮಾತು ಮುಗಿದುಹೋಗಿದೆ. ಮೌನದಲ್ಲಿ ಮಾತಾಡುವಾತ ನೀನಲ್ಲದಿರುವಾಗ, ಇನ್ನುಳಿದ ದೂರ ಮೌನದಲ್ಲಿ ಹೇಗೆ ಕ್ರಮಿಸಲಿ?

Tuesday, May 5, 2009

ತಿಳಿವಿನತ್ತಲಿನ ಪಯಣಕ್ಕೊಂದು ವಿದಾಯ...

'ಜಾಗೃತಿ ನಿಲ್ಲುತ್ತಿದೆ...' ಹೀಗೊಂದು ಸಂದೇಶ ಇವತ್ತು ಬೆಳಬೆಳಿಗ್ಗೆ ಮೊಬೈಲಿನಲ್ಲಿ ಬಂದು ಕೂತಿದೆ. ನೋಡಿದ ಕೂಡಲೇ ಯಾಕೋ ತುಂಬಾ ಸಂಕಟ, ತಳಮಳ ಶುರುವಾಗಿದೆ.

++++++++++++

ಅಭಿವೃದ್ಧಿ ಪತ್ರಿಕೋದ್ಯಮ ಯಾವುದೇ ಮಾಧ್ಯಮದಲ್ಲಾದರೂ ಇರಲೇಬೇಕು, ಅದು ಮಾಧ್ಯಮದ ಜವಾಬ್ದಾರಿ ಅಂತಲೇ ಪತ್ರಿಕೋದ್ಯಮ ಕಲಿಯುತ್ತಿದ್ದ ದಿನಗಳಿಂದ ಇಂದಿನವರೆಗೂ ನಂಬಿರುವ ನನಗೆ, ಕಸ್ತೂರಿ ಸೇರಿದಾಗ ಸಿಕ್ಕಿದ್ದು ಜಾಗೃತಿ ಎನ್ನುವ ಹೆಸರು, ವಾರಕ್ಕೆ ಏಳು ದಿನವೂ ಬೆಳಗಿನ 10.30ಕ್ಕೆ ಹೊಂದುವ ರೀತಿಯಲ್ಲಿ ಅರ್ಧ ಗಂಟೆ ಕಾರ್ಯಕ್ರಮ ಕೊಡಬೇಕು ಎಂಬ ನಿಯಮ... ಜತೆಗೆ ಓಂಕಾರ್, ಅರುಣ್, ಅಂಬುಕೇಶ್ ಶೂಟಿಂಗ್ ಮಾಡಿದ್ದ ಒಂದಿಷ್ಟು ಸಂದರ್ಶನಗಳು ಕೂಡ.

ಜಾಗೃತಿ ಹೆಸರಿನಡಿಯಲ್ಲಿ ಏನಿರಬೇಕು, ಹೇಗಿರಬೇಕೆಂದು ಹಿರಿಯರ ಜತೆ ಚರ್ಚಿಸಿ, ಅದಕ್ಕೊಂದು ರೂಪ ಕೊಟ್ಟು, ಮೊದಲ ಎಪಿಸೋಡ್ ಸಿದ್ಧಪಡಿಸಿ, ಹಿರಿಯರಿಗೆ ತೋರಿಸಿ, ಅವರು ಸೂಚಿಸಿದ ಬದಲಾವಣೆಗಳು ಮಾಡಿಸಿ... ಅದಕ್ಕೊಂದು ಆಶಯ ಸಂಚಿಕೆ (ಕರ್ಟನ್-ರೈಸರ್) ಎಪಿಸೋಡ್ ಕೂಡ ಮಾಡಿದ್ದು, ಮಾಂಟೇಜ್ ಗ್ರಾಫಿಕ್ಸ್ ಹೀಗೇ ಬೇಕು ಅಂತ ಹಠಹಿಡಿದು ಮತ್ತೆಮತ್ತೆ ಆದಿತ್ಯ ಕೈಲಿ ಮಾಡಿಸಿ ಕೊನೆಗೆ ಅಂತಿಮಗೊಳಿಸಿದ್ದು... ಮೊದಲ ಬಾರಿಗೆ ಕಾರ್ಯಕ್ರಮ ಪ್ರಸಾರವಾದಾಗ ಫೀಡ್-ಬ್ಯಾಕ್-ಗಾಗಿ ಒದ್ದಾಡಿದ್ದು... ಚೆನ್ನಾಗಿಲ್ಲ ಅಂತ ಕೆಲವರು ಅಂದಾಗ ಕುಗ್ಗಿದ್ದು, ಮತ್ತೆ ಚೆನ್ನಾಗಿ ಮಾಡಬೇಕು ಅಂತ ಹುರುಪು ತುಂಬಿಕೊಂಡು ಹೊರಟಿದ್ದು... ನಿನ್ನೆ-ಮೊನ್ನೆಯಷ್ಟೇ ಆದಂತಿದೆ.

This is a program where Content is the Hero ಅಂತ ಅಂದುಕೊಂಡರೂ ಇತರ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದು ಕಡಿಮೆಯೇನಲ್ಲ... ಹಿನ್ನೆಲೆ ದನಿ ಹೀಗೇ ಬೇಕು ಅಂತ ಚೇತನಾ, ಹೇಮಲತಾ, ರೂಪಾಗೆ ಕಾಟ ಕೊಟ್ಟು ಬೋರ್ ಹೊಡಿಯೋಷ್ಟು ಸಲ ರೀಟೇಕ್ ತಗೊಂಡಿದ್ದು, ಸಪ್ನಾ ದನಿಯಲ್ಲಿರೋ ಅಭಿವ್ಯಕ್ತಿಗೆ ಮರುಳಾಗಿದ್ದು, ಎಲ್ಲಿ emotional ಆಗಿ ಅಥವಾ ಖಡಕ್ ಆಗಿ ಬೇಕೋ ಅಲ್ಲಿ ಅವಳದೇ ದನಿಗೆ ಕಾದು ಕೂತು ತಗೊಂಡಿದ್ದು... ನಂತರ ಹೋಗುತ್ತ ಹೋಗುತ್ತ ಸುಕನ್ಯಾ, ಪ್ರತೀಕ್, ವಿನುತಾ, ಕೃತ್ತಿಕಾ ಮುಂತಾದವರ ದನಿಯನ್ನೂ ಸೇರಿಸಿಕೊಂಡಿದ್ದು...

ಹಂಗೇ ಬೇಕು ಹಿಂಗೇ ಬೇಕು ಅಂತ ಕಿರಿಕಿರಿ ಮಾಡಿ, ಕ್ಯಾಮರಾಮನ್ನುಗಳಿಗೆಲ್ಲ ಏನಿದ್ರೂ ಸರಿ, ಜಾಗೃತಿ ಡ್ಯೂಟಿ ಮಾತ್ರ ಬೇಡಪ್ಪಾ ಅಂತ ಅನ್ಕೊಳೋ ಥರ ಮಾಡಿದ್ದು, ಅದರೂ ನಿರೀಕ್ಷಿತವಾದದ್ದು ಕೊಡಲಿಕ್ಕೆ ಅವರೆಲ್ಲ ಪ್ರಯತ್ನಿಸಿದ್ದು... ಕ್ಯಾಮರಾ ಹಿಡಿದು ಹೋದಾಗಲೆಲ್ಲ ಅಳಿಲು ಸಿಗುತ್ತಾ ಅಂತ ಹುಡುಕುವ ರಮೇಶ್ ಸರ್, ಕ್ಯಾಮರಾದಲ್ಲಿ ಮುಳುಗಿದ್ದಾಗ ಡಿಸ್ಟರ್ಬ್ ಮಾಡಿದರೆ ಹಿಡಿದು ಬಾರಿಸಲಿಕ್ಕೂ ಹಿಂಜರಿಯದ ಸುರೇಶ್... ಪೆರುಮಾಳ್, ರಾಜಶೇಖರ್, ತುಷಾರ್... ಬೆಳ್ಳಂಬೆಳಗಿನ ಏರುಬಿಸಿಲು ಮತ್ತು ಇಳಿಹೊತ್ತಿನ ಹಳದಿ ಬೆಳಕಿನ ಉತ್ತಮ ಶಾಟ್-ಗಳಿಗಾಗಿ ಕಾತರಿಸುತ್ತಿದ್ದ ನಾವುಗಳು...

ತಾಳ್ಮೆಯಿಂದ ಎಡಿಟಿಂಗ್ ಟೇಬಲ್ಲಿನಲ್ಲಿ ಕಾರ್ಯಕ್ರಮಕ್ಕೆ ಅಂತಿಮ ರೂಪ ಕೊಡುತ್ತಿದ್ದ ಶಿವು ಸರ್, ಬಾಲು ಸರ್... ಜಗಳಾಡುತ್ತಲೇ ಎಡಿಟಿಂಗ್ ಮಾಡಿಕೊಡುತ್ತಿದ್ದ ಕಿಶೋರ್... ಪ್ರೊಡಕ್ಷನ್-ನಲ್ಲಿ ಸಹಕಾರ ನೀಡಿದ ಗೌಡರು, ವಿಲಾಸ್, ಜಗದೀಶ್... ಎಪಿಸೋಡ್ ಪ್ರಿವ್ಯೂ ಮಾಡಿ ಕಾಲೆಳೆಯುತ್ತಲೇ ಫೀಡ್-ಬ್ಯಾಕ್ ನೀಡುತ್ತಿದ್ದ ಪ್ರಕಾಶ್ ಅಡಿಗ, ವಿಜಯರಾಘವನ್ ಸರ್... ಪಿಸಿಆರ್ ಸ್ಟಾಫ್-ನಿಂದ ಹಿಡಿದು ರಿಸೆಪ್ಶನ್, ಡ್ರೈವರ್ ವರೆಗೆ ಚಾನೆಲ್ ಒಳಗಡೆ ಕೂಡ ಇದ್ದಂತಹ ಅಸಂಖ್ಯ ಅಭಿಮಾನಿಗಳು.. ಕಾರ್ಯಕ್ರಮದ ಮೇಲೆ ಇವರಲ್ಲಿ ಪ್ರತಿಯೊಬ್ಬರೂ ಇಟ್ಟ ಅಭಿಮಾನ, ನೀಡುತ್ತಿದ್ದ ಅಮೂಲ್ಯ ಸಲಹೆಗಳು... ಎಲ್ಲಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ನೋಡಿ ರೇಟಿಂಗ್ ಮೂಲಕ, ಸಂದೇಶಗಳ ಮೂಲಕ ಮೆಚ್ಚಿಕೊಂಡಿದ್ದೇವೆಂದು ಗೊತ್ತುಪಡಿಸುತ್ತಿದ್ದ ವೀಕ್ಷಕರು... ಮಾಹಿತಿ ಆಧರಿತವಾದ ಈ ಕಾರ್ಯಕ್ರಮವನ್ನು ಬೆಂಬಲಿಸಿ ಬೇಕಾಗಿರುವುದೆಲ್ಲ ಮಾಡಿಕೊಟ್ಟ ನಮ್ಮ ಚಾನೆಲ್..... ಪ್ರತಿಫಲವಾಗಿ ಮೊದಲಿಗೆ ಅಂಬೆಗಾಲಲ್ಲಿ ಆರಂಭಿಸಿದ ಪಯಣವನ್ನು ತಲೆಯೆತ್ತಿ ನಿಂತು ಮುಂದುವರಿಸಿದ ಜಾಗೃತಿ...

ಬೆಳಗಿನ ಹತ್ತು ಗಂಟೆ ಬೇಡ, ಯಾರೂ ಆಗ ಟೀವಿ ನೋಡಲ್ಲ, ಒಳ್ಳೇ ಟೈಮು ಕೊಡಿ ಎಂದು ಕೇಳಿಕೊಂಡಿದ್ದು, ಸಿಗದಿದ್ದಾಗ, ಬೆಳಗಿನ ಹತ್ತು ಗಂಟೆಗೆ ತಿಳಿವಿನತ್ತ ಪಯಣ ಎಂದು ಪ್ರೋಮೋ ಬಿಟ್ಟು, ಇದ್ದಿದ್ದರಲ್ಲಿಯೇ ಸಾಧ್ಯವಾದಷ್ಟು ಉತ್ತಮವಾಗಿ ಮಾಡಲು ಯತ್ನಿಸಿದ್ದು...

ಹೆದರಿಕೊಂಡೇ ಜಾಗೃತಿ ತಂಡ ಸೇರಿದ ಚೈತ್ರಾ ಪುಟ್ಟಿ, ಹಿಂಜರಿಯುತ್ತಲೇ ಸಂಶಯಗಳನ್ನು ಕೇಳುವ, ಬಗೆಹರಿಯದ ಹೊರತು ಸಮಾಧಾನ ಮಾಡಿಕೊಳ್ಳದ ಮಸೂದ್, ಸದಾ ಕ್ರಿಯೇಟಿವ್ ಆಗಿ ಏನಾದರೂ ಮಾಡುತ್ತಲೇ ಇರಬೇಕೆನ್ನುವ ಸುನಿಲ್, ಅದ್ಭುತ ಪ್ರದರ್ಶನ ಪ್ರತಿಭೆಯ ದಾಮು, ನಗುವಿನಲ್ಲಿಯೇ ಎಲ್ಲ ಮರೆಸುವ ವಿನುತಾ, ಅಭಿಪ್ರಾಯವ್ಯತ್ಯಾಸದಲ್ಲೂ ಆತ್ಮೀಯತೆ ಮೆರೆದ ಶೀಲಾ, ಯಾವುದಕ್ಕಾದರೂ ಹೊಂದಿಕೊಂಡು ಹೋಗುವ ನಿಧಿ... ಜಾಗೃತಿ ತಂಡವೆಂದರೆ ಒಂದು ಕುಟುಂಬ. ದಿನಾ ಸಂಜೆ ಕ್ಯಾಂಟೀನಿನಲ್ಲಿ ಹೋಗಿ ನಮ್ಮ ಗ್ಯಾಂಗ್ ಜತೆ ಕೂತು ಪಟ್ಟಾಂಗ, ಚರ್ಚೆ, ಮೀಟಿಂಗುಗಳು... ಜತೆಗೆ ಮೂರ್ತಿಯ ಸಮೋಸಾ, ಟೀ.. ಶೂಟಿಂಗ್ ಹೋಗಿ ಬಂದವರಿಂದ ಕಥೆ ಕೇಳೋದು, ಭಿಕ್ಷುಕರ ಮೇಲೆ ಎಪಿಸೋಡ್-ಗೆ ಅವರನ್ನ ಚಿತ್ರಿಸಲಿಕ್ಕೆ ಹೋಗಿದ್ದ ಸುನಿಲ್ ಮತ್ತು ಮಂಜು ಅವರ ಕೈಲಿ ಹೊಡೆಸಿಕೊಂಡು ಬಂದಾಗ ಕಳವಳ ಪಟ್ಟಿದ್ದು...

ಅರ್ಥಶಾಸ್ತ್ರದಿಂದ ಹಿಡಿದು ಚುನಾವಣೆಯವರೆಗೆ, ಅಡಿಗೆ, ಆರೋಗ್ಯದಿಂದ ಹಿಡಿದು ಮನೆಕಟ್ಟುವುದರ ವರೆಗೆ, ಸಿಇಟಿಯಿಂದ ಹಿಡಿದು ಪವಾಡದ ಹಿಂದಿನ ವಿಜ್ಞಾನದವರೆಗೆ ಸೂರ್ಯನಡಿಯ ಎಲ್ಲಾ ಟಾಪಿಕ್ಸೂ ಕೈಗೆತ್ತಿಕೊಂಡಿದ್ದು, ಕೆಲವು ಹಿಟ್, ಇನ್ನು ಕೆಲವು ಫ್ಲಾಪ್... ಇದರ ನಡುವೆ ಕಲಿತಿದ್ದು, ಕಲಿಸಿದ್ದು... ವಿವಿಧ ರೀತಿಯ ಪ್ರಯೋಗಗಳು... ಪವಾಡಗಳ ಅನಾವರಣಕ್ಕಾಗಿ ದೊಡ್ಡಬಳ್ಳಾಪುರಕ್ಕೆ ಹೋಗಿ ಹುಲಿಕಲ್ ನಟರಾಜ್ ಅವರ ಸಹಕಾರದಲ್ಲಿ ಶೂಟಿಂಗ್ ಮುಗಿಸಿದ್ದು... ಎಂಥೆಂಥಾ ಬಾಬಾಗಳು ಮಾಡುವ ಪವಾಡಗಳನ್ನೆಲ್ಲಾ ಇವು ಇಷ್ಟೇ ಎಂದು ತೋರಿಸಿ, ನಮಗೆಲ್ಲಾ ಇಷ್ಟವಾಗುವ ಜತೆಗೆ ಜನಮನ ಕೂಡ ಗೆದ್ದ ಸರಣಿ... ವೈಜ್ಞಾನಿಕ ತಳಹದಿ, ತರ್ಕಬದ್ಧ ವಿವರಣೆ, ಸಮದೃಷ್ಟಿಯ ಪ್ರಸ್ತುತಿಯನ್ನು ಜಾಗೃತಿಯ ಯಾವುದೇ ಎಪಿಸೋಡಿನಲ್ಲೂ ಬಿಟ್ಟುಕೊಡದಿರಲು ಯತ್ನ... ಹೀಗೆ ತಿಳಿವಿನತ್ತಲಿನ ಪಯಣದಲ್ಲಿ ಸಾಗುತ್ತ ಸಾಗುತ್ತ 300 ಎಪಿಸೋಡ್ ಆಗಿದ್ದೇ ಗೊತ್ತಾಗಿರಲಿಲ್ಲ... 300ರ ಸಂಭ್ರಮಕ್ಕೆ ಒಂದು ರಾತ್ರಿ ಕೂತು ಖುದ್ದಾಗಿ ತಯಾರಿಸಿದ ಥ್ಯಾಂಕ್ಯೂ ಕಾರ್ಡ್...
++++++++++++

300ರ ನಂತರ ಜಾಗೃತಿಯಿಂದ ನಾ ದೂರವಾದೆ, ಕಾರ್ಯಕ್ರಮ ಅದರ ಪಾಡಿಗದು ನಡೆಯುತ್ತಿತ್ತು. ಬೇರೆ ಕೆಲಸಗಳೆಡೆಯಲ್ಲಿ ನನಗೆ ನೋಡಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ. ಅಪಾರ ಅನುಭವದ ಬುತ್ತಿ ಕಟ್ಟಿಕೊಟ್ಟಿದ್ದ, ಅದಕ್ಕಾಗಿ ಕೆಲಸ ಮಾಡಿದವರೆಲ್ಲರ ಜಗತ್ತನ್ನು ಶ್ರೀಮಂತವಾಗಿಸಿದ್ದ ಜಾಗೃತಿ, ತನ್ನ ಪಯಣ ಮುಕ್ತಾಯಗೊಳಿಸುತ್ತಿದೆಯೆಂಬ ಸಂದೇಶ ಇದೀಗ ಬಂದಿದೆ...

ನಿಂತಿದ್ದು ಕಾರ್ಯಕ್ರಮ ಮಾತ್ರ, ಅದರ ಹಿಂದಿನ ತತ್ವಗಳಲ್ಲ, ನೀತಿಗಳೂ ಅಲ್ಲ. ಇಷ್ಟೊಂದು ವಿಶಾಲವಾದ ದೃಶ್ಯಮಾಧ್ಯಮದಲ್ಲಿ, ಅಸಂಖ್ಯ ಪ್ರತಿಭೆಗಳಿರುವ ಕನ್ನಡ ದೂರದರ್ಶನಲೋಕದಲ್ಲಿ ಮತ್ತೆ ಅಂತಹದ್ದು ಮೂಡಿಬರುವುದು ಖಂಡಿತ ಕಷ್ಟವಲ್ಲ. ಆದರೆ, ಜಾಗೃತಿ ಪಯಣ ನಿಲ್ಲಿಸುತ್ತಿದೆಯೆಂದು ತಿಳಿದ ಈ ಕ್ಷಣ ಮಾತ್ರ ನಿಜಕ್ಕೂ ಸಂಕಟವಾಗುತ್ತಿದೆ, ಕಣ್ಣಾಲಿ ತುಂಬಿಕೊಂಡಿದೆ.

++++++++++++

Wednesday, April 22, 2009

ಅವಳು, ಬಳ್ಳಿ ಮತ್ತು ನಾನು...

ಮೂರು ತಿಂಗಳ ಹಿಂದೊಂದು ದಿನ. ಹೊಸಮನೆಗೆ ಬಂದ ಸಂಭ್ರಮ. ಆಫೀಸಿಗೆ ರಜೆ ಹಾಕಿದ್ದೆ. ಪ್ಯಾಕಿಂಗ್ ಬಿಡಿಸುವುದು ಸಾಮಾನು ಹೊಂದಿಸುವುದು ಎಲ್ಲಾ ಮುಗಿದು ನಿರಾಳವಾಗಿತ್ತು. ಸಂಜೆ ಹೊತ್ತು ನಮ್ಮಲ್ಲಿದ್ದ ಒಂದೇ ಒಂದು ಚಟ್ಟಿಯಲ್ಲಿರುವ ಒಂದೇ ಒಂದು ಕರವೀರದ ಗಿಡಕ್ಕೆ ಒಂದಿಷ್ಟು ಕಿಚನ್ ಕಾಂಪೋಸ್ಟ್ ಗೊಬ್ಬರ ಹಾಕುತ್ತಿದ್ದೆ. ಆಗ ಕಂಡಿದ್ದು, ಮನೆಯ ಕಾಂಪೌಂಡ್ ಮೇಲೆ ಜೊಂಪೆಯಾಗಿ ಬೆಳೆದು ನಿಂತಿದ್ದ ಮಲ್ಲಿಗೆ ಗಿಡ. ಪುಟ್ಟ ಚಟ್ಟಿಯಲ್ಲಿ ಅದರ ಬೇರುಗಳು ಹಿಡಿಸಲಾಗದಷ್ಟು ದೊಡ್ಡದಾಗಿ ಬೆಳೆದಿತ್ತು.
ಬೇರುಗಳ ನಡುವಲ್ಲಿ ಇನ್ನೂ ಏನೇನೋ ಪುಟ್ಟಪುಟ್ಟ ಗಿಡಗಳು. ಅದರಲ್ಲೊಂದು ಮೆಣಸಿನ ಗಿಡದ ಹಾಗಿತ್ತು. ನೋಡಿ ನಂಗೆ ಆಶ್ಚರ್ಯವಾಯ್ತು. ಅದನ್ನು ಅಷ್ಟು ದೊಡ್ಡದಾಗಿ ಬೆಳೆಸಿದವರಿಗೆ ಮನಸ್ಸಿನಲ್ಲೇ ಒಂದು ನಮಸ್ಕಾರ ಹಾಕಿದೆ. ನನ್ನ ಕೈಲುಳಿದಿದ್ದ ಗೊಬ್ಬರದ ಪುಡಿಯನ್ನು ಅದಕ್ಕೂ ಸ್ವಲ್ಪ ಹಾಕಿ ಮುಗಿಸಿದೆ.
ಅಷ್ಟರಲ್ಲಿ ಆಕೆ ಕೈಯಲ್ಲೊಂದು ಪಾತ್ರೆ ಹಿಡಿದು ಬಂದು, ಗಿಡದ ಹತ್ತಿರ ನಿಂತಳು. ಕೈಯಲ್ಲಿದ್ದ ಪಾತ್ರೆಯಲ್ಲಿ, ತೊಳೆಯಲೆಂದು ನೀರಲ್ಲಿ ಹಾಕಿದ ಅಕ್ಕಿ. ಚೆನ್ನಾಗಿ ಅಕ್ಕಿ ತೊಳೆದು, ನೀರನ್ನು ಜಾಗ್ರತೆಯಾಗಿ ಗಿಡದ ಬುಡಕ್ಕೆ ಚೆಲ್ಲಿದಳು.
ಓಹ್, ಹಾಗಾದ್ರೆ ದಿನಾ ಈಕೆ ಅಕ್ಕಿ-ಬೇಳೆ ತೊಳೆದ ನೀರಲ್ಲೇ ಮಲ್ಲಿಗೆ ಗಿಡ ಬದುಕುತ್ತಿದೆ - ಎಂದು ಗೊತ್ತಾಯ್ತು. ಅದರ ಬುಡದಲ್ಲಿದ್ದ ಪುಟ್ಟಪುಟ್ಟ ಗಿಡಗಳೂ ಹೇಗೆ ಹುಟ್ಟಿರಬಹುದು ಅಂತ ಒಂದು ಐಡಿಯಾ ಬಂತು. ಇಂಥಾ ಐಡಿಯಾಗಳು ನಂಗೆ ಹೊಳೆಯಲೇ ಇಲ್ಲವಲ್ಲ ಅಂತನಿಸಿತು.
ಆಕೆ ನಮ್ಮನೆ ಹಿಂದಿನ ಮನೆಯಲ್ಲಿ ಬಾಡಿಗೆಗಿರುವವಳು. ನಂಗಿನ್ನೂ ಅವಳ ಪರಿಚಯವಾಗಿರಲಿಲ್ಲ. ನಾನು ಗೊಬ್ಬರ ಹಾಕಿದ್ದು ಗಮನಿಸಿದ ಆಕೆ ಅದೇನು, ಎಲ್ಲಿಂದ ಅಂತ ಕೇಳಿದಳು. ಹೇಳಿದೆ. ಕೇಳಿಸಿಕೊಂಡ ಆಕೆ ಹೀಗೂ ಮಾಡ್ಬಹುದು ಅಂತ ಗೊತ್ತಿರಲಿಲ್ಲ ಅಂತ ಖುಷಿಪಟ್ಟಳು. ನಮ್ಮ ಚಟ್ಟಿಯನ್ನು ಕೂಡ ಬಿಸಿಲಿಗೋಸ್ಕರ ಕಾಂಪೌಂಡ್ ಮೇಲೇರಿಸುವಂತೆ ಸಲಹೆ ಕೊಟ್ಟಳು. ನಾನು ಪಾಲಿಸಿದೆ.
ಹಾಗೇ ಮನೆಗೆ ಬೇಕಾದ ಕೊತ್ತಂಬ್ರಿ ಸೊಪ್ಪು ಅದರಲ್ಲೇ ಬೆಳೆಸಿಕೊಳ್ಳಬಹುದು, ಚಟ್ಟಿಯಲ್ಲಿ ನಾಲ್ಕು ಕಾಳು ಕೊತ್ತಂಬರಿ ಹಾಕಿ ಎಂದು ಸಲಹೆ ಕೊಟ್ಟಳು. ನಂಗೆ ಎಲ್ಲಿಲ್ಲದ ಉತ್ಸಾಹ ಬಂತು, ಇಷ್ಟೆಲ್ಲ ಮಾಡಬಹುದು, ಆದ್ರೂ ಇಷ್ಟು ದಿನ ಸುಮ್ನಿದ್ನಲ್ಲ, ಅಂತನಿಸಿತು. ಖುಷಿಯಿಂದಲೇ ನಾನದನ್ನು ಪಾಲಿಸಿದೆ. ಕೊತ್ತಂಬರಿ ಮಾತ್ರವಲ್ಲ, ಅಡಿಗೆ ಮನೆಯಲ್ಲಿ ಏನೇನು ಸಿಕ್ಕಿತೋ ಎಲ್ಲದರದ್ದೂ ನಾಲ್ಕು ನಾಲ್ಕು ಕಾಳು, ಜತೆಗೆ ಕಸದ ಬುಟ್ಟಿಗೆ ಬಿಸಾಡಲೆಂದು ಇಟ್ಟಿದ್ದ ಕಲ್ಲಂಗಡಿ ಹಣ್ಣಿನ ಬೀಜಗಳು, ಎಲ್ಲವನ್ನೂ ಹಾಕಿ, ಗೊಬ್ಬರದ ಜತೆಗೆ ಸೇರಿಸಿ ಕೆದಕಿದೆ. ಅಡಿಗೆಗೆಂದು ಕಟ್ ಮಾಡಿಟ್ಟಿದ್ದ ಪಾಲಕ್ ಸೊಪ್ಪಿನ ಬೇರನ್ನು ಅದರ ಮೇಲಿಂದ ಹಾಕಿ ಮುಚ್ಚಿ, ನೀರು ಹಾಕಿದೆ.
+++++++++++++++++++
ದಿನಾ ಬೆಳಿಗ್ಗೆ ಬೇಗ ಎದ್ದು ಮನೆಹೊರಗೆ ನೀರು ಹಾಕಿ ಗುಡಿಸುವಾಗ ಎರಡೂ ಗಿಡಗಳಿಗೆ ನೀರು ಹಾಕುತ್ತಿದ್ದೆ. ಆಕೆಯೂ ಅಕ್ಕಿ -ಬೇಳೆ ತೊಳೆದ ನೀರನ್ನು ಎರಡೂ ಚಟ್ಟಿಗಳಿಗೆ ಹಂಚುತ್ತಿದ್ದಳು. ಈ unsaid understanding ನಂಗೆ ಖುಷಿ ಕೊಟ್ಟಿತು. ಕೆಲ ದಿನಗಳ ನಂತರ ಚಟ್ಟಿಯಲ್ಲಿ ಎರಡು ಮೂರು ಥರದ ಮೊಳಕೆಗಳು ಕಾಣಿಸಿಕೊಂಡವು. ಅದು ಯಾವುದರದ್ದು ಎಂದು ನಂಗೆ ಗೊತ್ತಾಗಲಿಲ್ಲ.
ಮತ್ತೊಂದು ದಿನ ಹೀಗೇ ಸಿಕ್ಕಿದ ಆಕೆ ನಂಗೆ 'ಸಾಸಿವೆ ಗಿಡ ಹುಟ್ಟಿತ್ತು ಕಣ್ರೀ, ಕಿತ್ತು ಬಿಸಾಕಿದ್ದೇನೆ, ಮನೆಮುಂದೆ ಸಾಸಿವೆ ಗಿಡ ಇರಬಾರದು' ಅಂದಳು.
ಸಾಸಿವೆ ಕಾಳು ಚಟ್ಟಿಗೆ ಸೇರಿಸಿದ್ದು ನಾನೇ ಆಗಿದ್ದರಿಂದ ಸುಮ್ಮನೆ ತಲೆಯಲ್ಲಾಡಿಸಿದೆ. ಆದರೆ ಇನ್ನೂ ಒಂದೆರಡು ಗಿಡಗಳು ಉಳಿದುಕೊಂಡಿತ್ತು. ಅದೇನು ಅಂತ ಕೇಳಿದೆ. ಒಂದು ಹೆಸರು ಕಾಳಿನ ಗಿಡವಿರಬೇಕು, ಇನ್ನೊಂದು ನಂಗೂ ಗೊತ್ತಾಗ್ತಿಲ್ಲ, ಕೊತ್ತಂಬರಿ ಮಾತ್ರ ಬಂದಿಲ್ಲ ಅಂದಳು. ಅದೇನಾದ್ರೂ ಇರಲಿ, ಅದಾಗಿ ಬೆಳೆದಿದ್ದು ಬೆಳೆಯಲಿ ಎಂದು ಸುಮ್ಮನಾದೆ.
+++++++++++++++++++
ನಂತರ ನನ್ನ ಶಿಫ್ಟ್ ಬದಲಾಯ್ತು, ರಾತ್ರಿ ಪಾಳಿ ಮುಗಿಸಿ ಮನೆಗೆ ಬರುವಷ್ಟರಲ್ಲಿ ಕಣ್ಣು ಎಳೆಯುತ್ತಿರುತ್ತಿತ್ತು. ಬಿದ್ದುಕೊಂಡರೆ ಸಾಕೆನಿಸುತ್ತಿತ್ತು. ಸಂಜೆ ಎದ್ದನಂತರ ಮನೆಯಿಂದಲೇ ಕೆಲಸ ಆರಂಭವಾಗುತ್ತಿತ್ತು. ಈ ಬದಲಾದ ದಿನಚರಿಯಲ್ಲಿ ಗಿಡದ ಕುರಿತು ಗಮನವೇ ಹೊರಟುಹೋಯ್ತು. ದಿನಕ್ಕೆ ಐದು ನಿಮಿಷ ಹೊರಗೆ ಹೋಗಿ ಗಿಡಗಳು ಏನಾಯ್ತು ಅಂತ ನೋಡುವಷ್ಟು ಕೂಡಾ ಪುರುಸೊತ್ತಿಲ್ಲದಷ್ಟು ನಾನು 'ಬ್ಯುಸಿ' ಆಗಿಬಿಟ್ಟಿದ್ದೆ... busy for nothing ofcourse.
+++++++++++++++++++
ಮೊನ್ನೆ ಬೆಳಿಗ್ಗೆ ಮನೆಯ ಗೇಟ್ ತೆಗೆದು ಒಳನುಗ್ಗುತ್ತಿದ್ದಂತೆಯೇ ಕಣ್ಣು ಅದ್ಯಾಕೋ ಕಾಂಪೌಂಡ್ ಗೋಡೆ ಮೇಲೆ ಹರಿಯಿತು. ಬಳ್ಳಿಯಾಗಿ ಮೆಲ್ಲಮೆಲ್ಲಗೆ ಹಬ್ಬಲಾರಂಭಿಸಿದ್ದ ಗಿಡ ಕಂಡು ಆಶ್ಚರ್ಯವಾಯಿತು. ಅದರ ಪಕ್ಕದಲ್ಲಿದ್ದ ಮತ್ತೊಂದು ಗಿಡ ಹೆಸರಿನ ಗಿಡವೆಂದು ಗೊತ್ತಾಯಿತು, ಆದರೆ ಏನೇನೋ ಬೀಜಗಳನ್ನು ಹಾಕಿದ್ದೆನಾದ್ದರಿಂದ ಬಳ್ಳಿಯಾಗಿದ್ದು ಯಾವುದರ ಗಿಡವೆಂದು ಗೊತ್ತಾಗಲಿಲ್ಲ.
ಮೆಲ್ಲಮೆಲ್ಲಗೆ ಚಿಗುರೊಡೆದು ಹಬ್ಬುತ್ತಿದ್ದ ಬಳ್ಳಿ, ಇನ್ನು ತನ್ನನ್ನು ಹಾಗೇ ಬೇಕಾಬಿಟ್ಟಿ ಬಿಟ್ಟಲ್ಲಿ ಎಲ್ಲೆಲ್ಲಿಗೂ ಹಬ್ಬಿಯೇನು ಅಂತ ಮೌನದಲ್ಲೇ ವಾರ್ನಿಂಗ್ ಕೊಡುತ್ತಿತ್ತು. ಇದಕ್ಕೇನಾದ್ರೂ ಮಾಡಬೇಕು, ಏನಾದ್ರೂ ಸಪೋರ್ಟ್ ಕೊಟ್ಟು ಸರಿಯಾದ ರೀತಿ ಹಬ್ಬಲಿಕ್ಕೆ ಸಹಾಯ ಮಾಡಬೇಕು ಅಂದುಕೊಂಡು ಒಳಗೆ ಬಂದೆ. ಅಷ್ಟೆ. ಮತ್ತೆ busy for nothing. ಮರೆತೇ ಹೋಯಿತು.
+++++++++++++++++++
ಇವತ್ತು ರಾತ್ರಿ ಪಾಳಿ ಮುಗಿಸಿ ಬಂದು ಮಲಗಿದವಳಿಗೆ ಬೇಗ ಎಚ್ಚರವಾಯ್ತು... ಎದ್ದು ನೋಡುತ್ತೇನೆ, ಹೊರಗೆ ಜೋರು ಮಳೆ. ಒಳಗೂ ಮಳೆ.
ಬಾಗಿಲು ತೆರೆದು ಹೋಗಿ ಸುಮ್ಮನೆ ಮಳೆ ನೋಡುತ್ತ ನಿಂತೆ. ಹಾಗೇ ಬಳ್ಳಿಯ ಕಡೆಗೂ ಗಮನ ಹರಿಯಿತು. ಅದು ಮಲ್ಲಿಗೆ ಬಳ್ಳಿಗೆ ಸುತ್ತಿಕೊಳ್ಳಲಾರಂಭಿಸಿತ್ತು. ಮತ್ತೆ ಅದೇ ಯೋಚನೆ, ಇದು ಹೇಗೆಹೇಗೋ ಬೆಳೆದರೆ ಸುಮ್ಮನೇ ತೊಂದರೆ. ಜತೆಗೆ ಓನರ್ ಕೈಲಿ ಬೇರೆ ಬೈಸಿಕೊಳ್ಳಬೇಕು. ಏನ್ ಮಾಡಲಿ? ಕಾಂಪೌಂಡ್ ಮುಂದೆ ನೇರವಾಗಿ ರಸ್ತೆ. ಕಾಂಪೌಂಡ್ ಒಳಗಿರುವುದು ಹೋಗುವ-ಬರುವ ದಾರಿ. ಹಬ್ಬಿಸಿದರೆ ಮೇಲಕ್ಕೆ ಹಬ್ಬಿಸಬೇಕು, ಅದಕ್ಕೆ ಓನರ್ ಅನುಮತಿ ಬೇಕು.
ಆಕೆ ಕೂಡ ನನ್ನ ಪಕ್ಕದಲ್ಲಿ ಬಂದು ನಿಂತಿದ್ದಳು. ಅವಳಿಗೂ ಅದೇ ಚಿಂತೆಯಿತ್ತು... ಮಲ್ಲಿಗೆ ಬಳ್ಳಿಗೆ ಹಬ್ಬಿದ್ದನ್ನು ಮೆಲ್ಲಗೆ ಬಿಡಿಸಿ ಕೆಳಗೆ ನೇತಾಡಬಿಟ್ಟಳು.. ಇದಕ್ಕೊಂದು ವ್ಯವಸ್ಥೆ ಆಗಬೇಕು ಎಂದಳು, ನನ್ನನ್ನುದ್ದೇಶಿಸಿ. ನಾನು ಸುಮ್ಮನೇ ನಕ್ಕು ತಲೆಯಲ್ಲಾಡಿಸಿದೆ.
ಮಳೆ ಜೋರಾಗಿ ಹನಿಯುತ್ತಿತ್ತು. ಬಳ್ಳಿ ಇದ್ಯಾವುದರ ಗಮನವಿಲ್ಲದೆ ರಾಚುತ್ತಿದ್ದ ಹನಿಗಳಿಗೆ ಮೈಯೊಡ್ಡಿ ಸುಖವಾಗಿ ನಗುತ್ತಿತ್ತು.

Saturday, April 18, 2009

ಅಕ್ಕಿ ಬೆಲೆ ಯಾಕೆ ಗಗನಕ್ಕೇರಿದೆ ?


ಅಕ್ಕಿ ಬೆಲೆ ಯಾಕೆ ಗಗನಕ್ಕೇರಿದೆ ಎಂಬ ಪ್ರಶ್ನೆಗೆ ಇದಕ್ಕಿಂತ ಉತ್ತಮ ಉತ್ತರ ಬೇರಿಲ್ಲವೇನೋ!
ಬಿಗ್ ಬಜಾರ್ ಮಾತ್ರವಲ್ಲ, ಎಲ್ಲಾ ಸೂಪರ್ ಮಾರ್ಕೆಟ್ಟುಗಳದೂ ಇದೇ ಕಥೆ. ಅವರೆಲ್ಲ ಸೇರಿಕೊಂಡು ಸಾವಿರಗಟ್ಟಲೆ ಟನ್ ಖರೀದಿಸಿ ಸ್ಟಾಕ್ ಇಟ್ಟುಕೊಂಡರೆ ಶಾರ್ಟೇಜ್ ಆಗದೆ ಇರುತ್ತದೆಯೇ? ಬೆಲೆ ಏರದಿರುತ್ತದೆಯೇ?
ಇದು ಹೊಸಾ ವಿಷಯವೇನಲ್ಲ. ಆದರೆ public ಆಗಿ ಈರೀತಿ ಕಂಪೆನಿಯೊಂದು ತನಗೆ ಗೊತ್ತಿಲ್ಲದೆಯೇ ಒಪ್ಪಿಕೊಂಡಿದ್ದು ಇದೇ ಮೊದಲು.
ಇದು ಅತಿಕೆಟ್ಟ ಜಾಹೀರಾತಿಗೆ ಕೂಡ ಉದಾಹರಣೆ ಅಂತ ನನ್ನ ಅಭಿಪ್ರಾಯ. ನೀವೇನಂತೀರಿ?

Sunday, April 12, 2009

ಒಂದಿಷ್ಟು ಹಾಡು... ಒಂದಿಷ್ಟು ನೆನಪು...



'ತಾತಾ... ಪೀಪೀ...'
(ಇದು ಪ್ರತಿಸಲ ನೋಡಿದಾಗಲೂ ನಂಗೆ ಅಳು ಬರುತ್ತದೆ... ಇವತ್ತಿಗೂ... ಸುಮ್ಮಸುಮ್ಮಗೆ...)



ಈ ಸ್ವರ ಕೇಳ್ತಿದ್ರೆ ಸಾಕು, ಮತ್ತೇನೂ ಬೇಡ ಬದುಕಲ್ಲಿ! :-)



ನಂಗಿಷ್ಟವಾದ ರಾಜ್ ಹಾಡು...



ಕೊನೆಗೆ ಉಳಿದಿದ್ದು ಇಷ್ಟು.
ಒಂದಿಷ್ಟು ಹಾಡು... ಒಂದಿಷ್ಟು ನೆನಪು...
ಮತ್ತು ಅಳಿಸಲಾಗದ ಹೆಜ್ಜೆಗಳು.


ಅಣ್ಣಾವ್ರು ಅಗಲಿ ಇಂದಿಗೆ ಮೂರು ವರ್ಷ.

Sunday, March 29, 2009

ಥ್ರಿಲ್ ಬೇಕಾ? 13B ನೋಡಿ!

ತುಂಬಾ ದಿನದಿಂದ ನೋಡಬೇಕೆಂದುಕೊಂಡು ನೋಡಲಾಗಿರಲಿಲ್ಲ, ಆದರೆ ಇವತ್ತು 13B ಚಿತ್ರ ನೋಡಿಯೇ ಬಿಟ್ಟೆ. ಮೊದಲೇ ಪ್ಲಾನ್ ಮಾಡದಿದ್ದರೂ ಅಚಾನಕ್ಕಾಗಿ ಹೊರಟದ್ದಾಯ್ತು. ಎದ್ದೂ ಬಿದ್ದೂ ಓಡಿ ಹೋಗಿ ಟಿಕೆಟ್ ತಗೊಂಡು ಥಿಯೇಟರಲ್ಲಿ ಕೂತುಕೊಳ್ಳುವಾಗ ಆಗಲೇ ಮಾಧವನ್ ಮತ್ತು ಕುಟುಂಬ ನಂಬರ್ 13ರ ಹೊಸಾ ಮನೆಗೆ ಪ್ರವೇಶಿಸಿಯಾಗಿತ್ತು. ಇಂಟರ್-ಮಿಶನ್ ಬರುವಷ್ಟರಲ್ಲಿ ಇನ್ನೇನಾಗುತ್ತದೋ ಅಂತ ಉಸಿರು ಬಿಗಿಹಿಡಿದು ಕಾಯುವ ಹಂತಕ್ಕೆ ನಮ್ಮನ್ನು ಚಿತ್ರ ತಂದು ನಿಲ್ಲಿಸಿತ್ತು.

ಇಡಿಯ ಚಿತ್ರ ಎಷ್ಟು ಚೆನ್ನಾಗಿತ್ತೆಂದರೆ, ಚಿತ್ರ ಮುಗಿದಿದ್ದೇ ಗೊತ್ತಾಗಲಿಲ್ಲ. ನಾನು ಯಾವುದೇ ಹಾರರ್-ಗೆ ಸುಲಭಕ್ಕೆ ಹೆದರುವವಳಲ್ಲ, ಸ್ವಲ್ಪಮಟ್ಟಿಗೆ ಗಟ್ಟಿಮನಸ್ಸಿನವಳು ಅಂತ ಅಂದುಕೊಂಡಿದ್ದೆ. ಅಂತಹ ನನ್ನನ್ನು 4-5 ಸಾರಿ ಈಚಿತ್ರ ಬೆಚ್ಚಿಬೀಳಿಸಿತು... ಕೊನೆಗೆ ಪಕ್ಕದಲ್ಲಿದ್ದ ಅರ್ಪಣಾಳ ಕೈಹಿಡಿದುಕೊಂಡು ಕೂತು ಸಿನಿಮಾ ನೋಡಿದ್ದಾಯಿತು :-)

ಕಥೆ ವಿಭಿನ್ನವಾಗಿತ್ತು. ಅದೃಶ್ಯಶಕ್ತಿಗಳು ಇವೆಯೆಂಬುದರಲ್ಲಿ ನಮಗೆ ನಂಬಿಕೆಯಿಲ್ಲದಿದ್ದರೆ 13B ನಂಬಿಸಲು ಯತ್ನಿಸುವುದಂತೂ ನಿಜ. ಚಿತ್ರದೊಳಗಂತೂ ಯಾವುದೇ ಸಂಶಯವಿಲ್ಲದಂತೆ ಅದೃಶ್ಯಶಕ್ತಿಗಳ ಇರವನ್ನು ಚಿತ್ರಿಸಲಾಗಿದೆ. ಇದೇ ವಿಷಯದ ಮೇಲೆ ಈಹಿಂದೆಯೂ ಚಿತ್ರಗಳು ಬಂದಿವೆ, ಆದರೆ ಇದು ಅವ್ಯಾವುದನ್ನೂ ನೆನಪಿಸುವುದಿಲ್ಲ. ನಾ ನೋಡಿದ ಎಲ್ಲಾ ಹಾರರ್ ಚಿತ್ರಗಳಿಗಿಂತ ಇದು ವಿಭಿನ್ನ. ಹಾರರ್ / ಥ್ರಿಲ್ಲರ್ ಚಿತ್ರಗಳಲ್ಲಿ ಸಂಗೀತಕ್ಕೆ ಹೆಚ್ಚು ಮಹತ್ವ ಕೊಟ್ಟು ಹಾರರ್ ಸೃಷ್ಟಿಸಲಾಗುತ್ತದೆ (ಉದಾಹರಣೆ - ಆಪ್ತಮಿತ್ರ, ವಾಸ್ತುಶಾಸ್ತ್ರ ಇತ್ಯಾದಿ). ಈ ಚಿತ್ರದ ಸಂಗೀತ ಹಾರರ್ ಸೃಷ್ಟಿಸುವುದರಲ್ಲಿ ಕೆಲವೆಡೆ ಸಫಲವಾದರೂ ಕೆಲವು ಕಡೆ ಸ್ಟೀರಿಯೋಟೈಪಿಕ್ ಅನಿಸಿ ಕಿರಿಕಿರಿಯಾಗುತ್ತಿತ್ತು. ಮಾಧವನ್ ಪೂಜಾಕೋಣೆಯಲ್ಲಿ ಮೊಳೆ ಹೊಡೆಯುವಾಗ ಧ್ವನಿ ಸುತ್ತಿಗೆಯಚಲನೆಯ ಜತೆ ಸಿಂಕ್ ಆಗದಿರುವುದು, ಒಂದೆರಡು ಶಾಟ್-ಗಳಲ್ಲಿ ತುಟಿ ಚಲನೆಗೂ ಮಾತಿಗೂ ಸಂಬಂಧವಿಲ್ಲದಿರುವುದು ಇತ್ಯಾದಿಗಳಿಂದಾಗಿ, ಧ್ವನಿವಿನ್ಯಾಸ ಕೂಡ ತನ್ನ ಉತ್ಕೃಷ್ಟತೆ ಕಳೆದುಕೊಂಡಿದೆ.

ಆದರೆ ಚಿತ್ರದ ವಿಶೇಷತೆಯೇನಪ್ಪಾ ಅಂದ್ರೆ, ಸಂಗೀತದ ಅಥವಾ ಸೌಂಡ್ ಇಫೆಕ್ಟ್-ಗಳ ಹೊರತಾಗಿಯೂ ಪದೇ ಪದೇ ಬರುವ ಲಿಫ್ಟ್-ನ ಶಾಟ್-ಗಳು, ಮಾಧವನ್ ಮುಖ, ಶಾಟ್ ಸಂಯೋಜನೆ - ಇಷ್ಟರಿಂದಲೇ ಚಿತ್ರ ಥ್ರಿಲ್ಲಿಂಗ್ ಅನಿಸುತ್ತದೆ, ಹಾರರ್ ಸೃಷ್ಟಿಸುತ್ತದೆ. ಮೊದಮೊದಲು ಕೆಲವೆಡೆ silhouette shots ಕಿರಿಕಿರಿ ಅನಿಸಿದರೂ, ಕ್ಯಾಮರಾ ವರ್ಕ್ ಚೆನ್ನಾಗಿತ್ತು. ಕಪ್ಪು-ಬಿಳುಪಿನಲ್ಲೇ ತೋರಿಸಿದ ಭಯಾನಕತೆ ಕೂಡ ಇಷ್ಟವಾಯ್ತು. ಕೆಲಕಡೆ ಚಿತ್ರ ಅದ್ಯಾಕೋ ಹಿಚ್-ಕಾಕ್-ನ ಸೈಕೋದ ಕೆಲ ಶಾಟ್-ಗಳನ್ನು ನೆನಪಿಸಿತು.

ಮೊದಲ ಭಾಗದಲ್ಲಿ ನಾಯಿ ಹಿಡಿದ ಮುದುಕ ಮತ್ತು ಮಾಧವನ್ ಇರುವ ದೃಶ್ಯಗಳ ಸಂರಚನೆ ಚಿತ್ರದ ಪೂರ್ಣ ವಿನ್ಯಾಸಕ್ಕೆ ಹೊಂದುವುದಿಲ್ಲ. ಅವುಗಳನ್ನು ಚಿತ್ರಿಸಿರುವ ರೀತಿ ಆತನೂ ಈ ಹಾರರ್-ನ ಅವಿಭಾಜ್ಯ ಭಾಗವೇನೋ ಅನ್ನುವ ಅನಿಸಿಕೆ ಮೂಡಿಸುತ್ತದೆ. ನಂತರ ಆತ ಏನೂ ಅಲ್ಲದೆ ಹೋಗುತ್ತಾನೆ, ಕಥೆಗೆ ಅನವಶ್ಯಕವಾಗಿ ಹೋಗುತ್ತಾನೆ, ನಾಯಿ ಮಾತ್ರ ಮಹತ್ವ ಪಡೆಯುತ್ತದೆ. ಕೊನೆಗೆ ಆತನ ನಾಯಿ ಮಾತ್ರ ಚಿತ್ರದ ಕ್ಲೈಮಾಕ್ಸ್ ಶಾಟ್-ನಲ್ಲಿರುತ್ತದೆ, ಆತ ಇರುವುದಿಲ್ಲ. ಇಡಿಯ ಚಿತ್ರದಲ್ಲಿ ಯಾರ ಮೇಲೂ ಸಂಶಯ ಪಡಲಾರದೆ ವೀಕ್ಷಕ ಒದ್ದಾಡುತ್ತಾನೆ, ಮಾಧವನ್ ಮತ್ತು ಗೆಳೆಯನ ಮೂಲಕವೇ ಕಥೆ ಗೊತ್ತಾಗುತ್ತ ಹೋಗುತ್ತದೆ. ಹಾಗಿರುವಾಗ ಸುಮ್ಮನೆ ಸಂಶಯ ಹುಟ್ಟಿಸಲಿಕ್ಕಾಗಿ ಮುದುಕನ ವೈಭವೀಕರಣ ಬೇಕಿರಲಿಲ್ಲ. ಈ ಅಂಶ ನನಗೆ ಕಿರಿಕಿರಿ ಹುಟ್ಟಿಸಿತು, ಮತ್ತು ಇದನ್ನು ಸ್ವಲ್ಪ ಜಾಣತನದಿಂದ ಸಂಯೋಜಿಸಿದ್ದರೆ ಸಮಯ ಉಳಿಸಬಹುದಿತ್ತೇನೋ ಅನಿಸಿತು. ಒಂದೇ ಒಂದು ಹಾಡಿದೆ ಚಿತ್ರದಲ್ಲಿ, ಅದು ಕೂಡ ಅನವಶ್ಯಕವಾಗಿತ್ತು.

ಇದು ಬಿಟ್ಟರೆ ಹೆಚ್ಚಿನೆಡೆ ಚಿತ್ರಕಥೆ ಚೆನ್ನಾಗಿತ್ತು. ನ್ಯಾರೇಶನ್ ಟೆಕ್ನಿಕ್ ಕೆಲವೆಡೆ ತುಂಬಾನೇ ಚೆನ್ನಾಗಿತ್ತು. ಮಾಧವನ್ ಮತ್ತು ಡಾಕ್ಟರ್ ಶಿಂಧೆ ನಟನೆಯಂತೂ ಸಿಕ್ಕಾಪಟ್ಟೆ ಖುಷಿಯಾಯಿತು, ಅಷ್ಟು ಸಹಜವಾಗಿತ್ತು. ಅಲ್ಲಲ್ಲಿ ಹಾರರ್ ಜತೆ ಕಾಮೆಡಿ ಮಿಕ್ಸ್ ಚೆನ್ನಾಗಿತ್ತು., ಹೊಟ್ಟೆತುಂಬ ನಗು ತರಿಸಿತು. ಅಲ್ಲಲ್ಲಿ ಕಥೆ ಸಾಗುವ ದಾರಿಯ ಬಗ್ಗೆ ಯಾವುದೋ ಸಂದರ್ಶನದ ಮೂಲಕ, ಮತ್ತು ಗೋಡೆ ಮೇಲಿನ ಒಂದು ಫೋಟೋ ಮೂಲಕ ಕ್ಲೂ ಕೊಟ್ಟರೂ, ಅದು ವೀಕ್ಷಕ ಗಮನಿಸಲಾಗದಷ್ಟು ಸಹಜವಾಗಿತ್ತು. ಇವೆಲ್ಲದರ ನಡುವೆ ಕೊನೆಯ ಎರಡು ದೃಶ್ಯಗಳ ತನಕವೂ ಸಸ್ಪೆನ್ಸ್ ಉಳಿಸಿಕೊಂಡು ಚಿತ್ರ ಖುಷಿಕೊಟ್ಟಿತು.

ಚಿತ್ರವಿಡೀ ಧಾರಾವಾಹಿಯ ಪಾತ್ರಗಳ ಮೂಲಕ ಮಾಧವನ್ ಕುಟುಂಬದ ಸದಸ್ಯರ ಬದುಕಿನ ಘಟನಾವಳಿಗಳನ್ನು ತೋರಿಸಿ, ಮುಂದೆ ಹೀಗೇ ಆಗಲಿದೆ ಅಂತ ಸುಲಭವಾಗಿ ಊಹಿಸಲು ವೀಕ್ಷಕನಿಗೆ ಚಿತ್ರ ಅವಕಾಶ ಕೊಡುತ್ತದೆ. ಅದಕ್ಕೆ ಅಡಿಕ್ಟ್ ಆಗಿಬಿಡುವ ವೀಕ್ಷಕನಿಗೆ ಕೊಲೆಗಾರನ ರೂಪದಲ್ಲಿ ಮಾಧವನ್-ಗೆ ಮಾಧವನ್-ಅನ್ನೇ ತೋರಿಸುವ ಮೂಲಕ ಚಿತ್ರ ಅನಿರೀಕ್ಷಿತವಾಗಿ ಚಮಕ್ ಕೊಡುತ್ತದೆ. ಅಲ್ಲಿ ಧಾರಾವಾಹಿಯಲ್ಲಿ ಮಾಧವನ್ ಪಾತ್ರಧಾರಿಯಾಗಿರುವ ಮಿಹಿರ್-ನ ತೋರಿಸಿದರೂ ತೊಂದರೆಯಿರಲಿಲ್ಲ, ಅದು ಮಾಮೂಲಾಗಿ, ಸಾಂಪ್ರದಾಯಿಕವಾಗಿ ಯೋಚಿಸಬಹುದಾದಂಥದ್ದು. ಆದರೆ, ಮಿಹಿರ್ ಪಾತ್ರ ಕಾಣಿಸುವುದಕ್ಕೂ, ಮಾಧವನ್ ಸ್ವತಹ ಕಾಣಿಸುವುದಕ್ಕೂ ನಡುವಿನ ವ್ಯತ್ಯಾಸದ ಪರಿಣಾಮವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಈ ದೃಶ್ಯ ನಿಜಕ್ಕೂ ಬೆಚ್ಚಿಬೀಳಿಸುತ್ತದೆ. ಇದು ಏನು ನಡೆಯಲಿದೆ, ಮುಂದೆ ಏನಾಗಬಹುದು ಅಂತ ಊಹಿಸಲಿಕ್ಕೇ ಸಾಧ್ಯವಾಗದ ಹಂತಕ್ಕೆ ತಂದು ನಿಲ್ಲಿಸುತ್ತದೆ. ಅದೇ ನಿಜವಾದ ಥ್ರಿಲ್! ಈ ಅಂಶ ನಂಗೆ ಚಿತ್ರದಲ್ಲಿ ಸಿಕ್ಕಾಪಟ್ಟೆ ಇಷ್ಟವಾಯ್ತು. ಕ್ಲೈಮಾಕ್ಸ್-ನಲ್ಲಿ ಬರುವ ಕೊಲೆಯ ದೃಶ್ಯಕ್ಕೆ ಕೊಲೆಗಾರ ಮೊದಲೇ ಪ್ಲಾನ್ ಮಾಡದಿದ್ದರೂ ಆತ ಕೊಲೆಗಾರನಾಗಹೊರಡುವ ದೃಶ್ಯ ಚೆನ್ನಾಗಿತ್ತು.

ತಾಂತ್ರಿಕವಾದ ಹಲವಾರು ತಪ್ಪುಗಳು ಚಿತ್ರದಲ್ಲಿವೆ. ಪೂಜಾಕೋಣೆಯಲ್ಲಿ ಡ್ರಿಲ್ಲರ್ ಬಂದು ಶಾಕ್ ಹೊಡೆದು ಬಿದ್ದಾಗ ಅಲ್ಲಿಯ ಗೋಡೆಯಲ್ಲಿ ಪ್ಲಗ್ ಪಾಯಿಂಟ್ ಇರುತ್ತದೆ, ನಂತರದ ಶಾಟ್-ಗಳಲ್ಲಿ ಅದು ಇಲ್ಲ. ಮಾಧವನ್ ತಾನು ಕೆಲಸ ಮಾಡುವ ಜಾಗದಲ್ಲಿ ಮಾತನಾಡುತ್ತಿರುವ ಶಾಟ್-ನಲ್ಲಿ ಲಾಂಗ್ ಶಾಟ್ ಮತ್ತು ಕ್ಲೋಸ್ ಶಾಟ್-ನಲ್ಲಿ continuity ಇಲ್ಲ.

ಆದರೆ ಇವೆಲ್ಲಾ ಚಿತ್ರವನ್ನು ಕಲಾಕೃತಿಯೆಂದುಕೊಂಡು ನೋಡುವಾಗ ಮಾತ್ರ ಕಾಣಿಸುತ್ತವೆ, ಕಥೆಯನ್ನೇ ಮುಖ್ಯವೆಂದುಕೊಂಡು ಚಿತ್ರ ನೋಡುವಾಗ ಇವ್ಯಾವುದೂ ಮುಖ್ಯವೆನಿಸುವುದಿಲ್ಲ, ಒಟ್ಟಿನಲ್ಲಿ ಹೇಳಬೇಕೆಂದರೆ ಇತ್ತೀಚೆಗೆ ನೋಡಿದ ಉತ್ತಮ ಚಿತ್ರಗಳಲ್ಲೊಂದು 13B.

---------------------

ಮುಗಿಸುವ ಮುನ್ನ...
---------------------

4-5 ವರ್ಷದ ಹಿಂದೊಂದು ರಾತ್ರಿ. ರಾಂಗೋಪಾಲ್ ವರ್ಮಾ ನಿರ್ಮಾಣದ ವಾಸ್ತುಶಾಸ್ತ್ರ ನೋಡಿ ಆಗಷ್ಟೆ ಮನೆಗೆ ಬಂದಿದ್ದೆವು. ಊಟ ಮಾಡಿ ಲೈಟ್ ಆರಿಸಿ ಮಲಗಿಕೊಂಡೆವು. ಸ್ವಲ್ಪ ಹೊತ್ತಿಗೆ ಮನೆಯೊಳಗೆ ವಿಚಿತ್ರ ಸೌಂಡು, ಪರಪರಾ... ಪರಪರಾ... ಅಂತ...
ನಾನು ಸ್ವಲ್ಪ ಹೊತ್ತು ಸೌಂಡ್ ಕೇಳಿಸಿಕೊಂಡೆ... ನಂತರ ಮೆಲ್ಲಗೆ ರೂಂಮೇಟನ್ನು ಎಬ್ಬಿಸಿ ಏನೇ ಅದು ಅಂತ ಕೇಳಿದೆ... ಅವಳಿಗೂ ಗೊತ್ತಾಗಲಿಲ್ಲ... ವಾಸ್ತುಶಾಸ್ತ್ರ ಚಿತ್ರದಲ್ಲಿನ ಬಿಳಿಬಿಳಿ ಕಣ್ಣುಗಳ ದೆವ್ವಗಳು, ಸುಶ್ಮಿತಾ ಸೇನ್ ಮಗುವಿನ ಸಮೇತ ಉಳಿದುಕೊಂಡಳು ಅಂದುಕೊಂಡಾಗಲೇ ಮಗು ಬಿಳಿಕಣ್ಣು ತೋರಿಸಿ ವೀಕ್ಷಕರಿಗೆ ತಾನು ದೆವ್ವವೆಂದು ತೋರಿಸಿಕೊಡುವುದು, ಭಯಂಕರ ಸಂಗೀತ ಎಲ್ಲವೂ ಸೇರಿ ನನ್ನ ಮೇಲೆ ಸಿಕ್ಕಾಪಟ್ಟೆ ಇಫೆಕ್ಟ್ ಆಗಿತ್ತು ಕಾಣುತ್ತೆ... ಆಗೇ ಎದೆಯೊಳಗೆ ಅವಲಕ್ಕಿ ಕುಟ್ಟಲು ಶುರುವಾಗಿತ್ತು... ಆದರೂ ನನಗೇನೇ ಆದರೂ ರೂಂಮೇಟ್-ಗೆ ಕೂಡ ಅದರಲ್ಲ ಪಾಲಿರುತ್ತದೆ ಅಂತ ಧೈರ್ಯ...
ಕೊನೆಗೆ ಮೆಲ್ಲಗೆ ಇಬ್ಬರೂ ಎದ್ದು ಕೂತು ಕತ್ತಲಲ್ಲಿ ಶಬ್ದ ಎತ್ತಲಿಂದ ಬರುತ್ತಿದೆಯೆಂದು ಗಮನಿಸಿದೆವು... ಶಬ್ದ ಬರುತ್ತಿದ್ದುದು ರೂಮಿನ ಬದಿಯಲ್ಲಿ ಎತ್ತರದಲ್ಲಿದ್ದ ಸಾಮಾನು ಪೇರಿಸಿಡುವ ಜಾಗದಿಂದ. ಸರಿ, ಶಬ್ದ ಮಾಡದೆ ಸ್ವಲ್ಪ ಹೊತ್ತು ಕೂತವರು ಇದ್ದಕ್ಕಿದ್ದಂತೆ ಲೈಟ್ ಹಾಕಿದೆವು. ಶಬ್ದ ಬರುತ್ತಿದ್ದುದು ಅಲ್ಲಿ ಏರಿಸಿಟ್ಟಿದ್ದ ಪ್ಲಾಸ್ಟಿಕ್ ಚೀಲದ ಸಂತೆಯೊಳಗಿಂದ. ಅದನ್ನು ಕೂಡಲೇ ಹಿಡಿಸೂಡಿಯಿಂದ ಕೆಳಗೆ ಹಾಕಿದೆವು. ನೋಡುವುದೇನು, ಅದರಲ್ಲಿನ ಪ್ಲಾಸ್ಟಿಕ್ ಚೀಲವೊಂದರಿಂದ ಜಿರಳೆಯೊಂದು ಹೊರಬರಲು ವಿಫಲಯತ್ನ ಮಾಡುತ್ತಾ ಪರಪರಾ ಪರಪರಾ ಅಂತ ಸೌಂಡ್ ಮಾಡುತ್ತಿತ್ತು!!

Tuesday, March 10, 2009

ಮತ್ತೆ ನೆನಪಾದ ಗಾಂಧೀಜಿ ...

ಗಾಂಧೀಜಿ ಹೆಚ್ಚಾಗಿ ನಮಗೆಲ್ಲ ನೆನಪಾಗುವುದು ಅಕ್ಟೋಬರ್ 2ಕ್ಕೆ... ಮತ್ತು ಒಂದೊಂದು ಸಾರಿ ಜನವರಿ 30ಕ್ಕೆ. ಆದರೆ ಈಸಾರಿ ಮಾತ್ರ ಕಾಲವಲ್ಲದ ಕಾಲದಲ್ಲಿ ಗಾಂಧಿ ಸುದ್ದಿಯಾಗಿದ್ದಾರೆ. ಮತ್ತು ನಾನು ಯೋಚಿಸಲು ತೊಡಗಿದ್ದೇನೆ, ಒಬ್ಬ ವ್ಯಕ್ತಿ ಜೀವಿಸುವುದು ಮತ್ತು ಅಮರನಾಗುವುದು ತನ್ನ ಯೋಚನೆಗಳ ಮೂಲಕವಾ, ಅಥವಾ ವಸ್ತುಗಳ ಮೂಲಕವಾ ಅಂತ.
------------------------------
SMALL IS BEAUTIFUL ಅಂತ ಒಂದು ಪುಸ್ತಕ ಇದೆ. It is - A STUDY OF ECONOMICS AS IF PEOPLE MATTERED. ಗಾಂಧೀಜಿಯ ಸರ್ವೋದಯ model of development, ಬುದ್ಧನ ಅರ್ಥಶಾಸ್ತ್ರ ಇತ್ಯಾದಿಗಳಿಂದ ಸ್ಫೂರ್ತಿ ಪಡೆದ ಬ್ರಿಟಿಷ್ ಲೇಖಕ ಇ.ಎಫ್. ಶೂಮೇಕರ್ ಎಂಬವರು ಬರೆದ ಪುಸ್ತಕ. 1973ರಲ್ಲಿ ಬಿಡುಗಡೆಯಾಗಿತ್ತು. ಅದರಲ್ಲಿ ನೆಲವನ್ನು ಹೇಗೆ ಉಪಯೋಗಿಸಬೇಕೆಂಬುದರಿಂದ ಹಿಡಿದು, ನ್ಯೂಕ್ಲಿಯರ್ ತಂತ್ರಜ್ಞಾನದವರೆಗೆ, sustainable economic development ಕುರಿತು ಹಲವಾರು ಲೇಖನಗಳಿವೆ. 30 ವರ್ಷದ ಹಿಂದೆ ಬರೆದಿದ್ದ ಈ ಪುಸ್ತಕದಲ್ಲಿರುವ ವಿಚಾರಗಳನ್ನು ಜಗತ್ತು ಅಂದೇ ಅರಗಿಸಿಕೊಂಡು ಆಚರಿಸಿದ್ದರೆ, ಇಂದು ನಾವು ಅನುಭವಿಸುತ್ತಿರುವ recession ಇರುತ್ತಿರಲಿಲ್ಲ. ಈ ಪುಸ್ತಕದ ಬಗ್ಗೆಯೇ ನಮ್ಮಲ್ಲಿ ಎಷ್ಟೋ ಜನರಿಗೆ ಗೊತ್ತಿಲ್ಲ. (ನಾನು ಇದನ್ನು ಯಾರಿಗೋ ಗಿಫ್ಟ್ ಕೊಟ್ಟಿದ್ದೆ. ಅದು ಒಂದು ದಿನ ಎಲ್ಲೋ ಓದುವವರಿಲ್ಲದೆ ಅನಾಥವಾಗಿ ಬಿದ್ದಿದ್ದು ಕಂಡು, ನಂಗೆ ಎಲ್ಲಿಲ್ಲದ ಸಿಟ್ಟು ಬಂದು, ಅದನ್ನು ಮತ್ತೆ ತೆಗೆದುಕೊಂಡು ಬಂದು ನನ್ನ ಶೋಕೇಸ್-ನಲ್ಲಿ ಇಟ್ಟಿದ್ದೇನೆ, ಹಾಗೂ करो ज्यादा का इरादा ಅನ್ನುವ ಇಂದಿನ ಜನರೇಶನ್ನಿಗೆ SMALL IS BEAUTIFUL ಎಂಬ ಕಲ್ಪನೆಯೇ ಒಪ್ಪಿಕೊಳ್ಳಲು ಸಾಧ್ಯವಾಗದಂತಹುದು, ಗಾಂಧಿಯ ವಿಚಾರಧಾರೆಗಳು ಇಂದಿಗೆ ಅಪ್ರಸ್ತುತ ಅಂತ ಬಲವಾಗಿ ನಂಬಲು ಆರಂಭಿಸಿದ್ದೇನೆ.)
ಗಾಂಧೀಜಿ ಜತೆಗೆ ಬಹುಕಾಲವಿದ್ದ ಮದ್ರಾಸ್ ಮೂಲದ ಡಾ.ಜೆ.ಸಿ. ಕುಮಾರಪ್ಪ ಅವರು ಬರೆದ 'ಶಾಶ್ವತ ಅರ್ಥಶಾಸ್ತ್ರ' ಎಂಬ ಪುಸ್ತಕ ಕೂಡ ಗಾಂಧಿಯನ್ ಫಿಲಾಸಫಿಯ ತಳಹದಿಯಲ್ಲೇ ಬಹಳಷ್ಟು ವಿಚಾರಗಳನ್ನು ವಿವರಿಸುತ್ತದೆ. ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್-ನವರು ಇದನ್ನು 1991ರಲ್ಲಿ ಪ್ರಕಟಿಸಿದ್ದರು. 1997ರಲ್ಲಿ ಇದು ಮರುಮುದ್ರಣ ಕಂಡಿತು, ಇತ್ತೀಚೆಗೆ ಯಾವುದೇ ಪುಸ್ತಕ ಅಂಗಡಿಯಲ್ಲೂ ಇದನ್ನು ನಾನು ಕಂಡೇ ಇಲ್ಲ. ಓದುವವರಿಲ್ಲದ ಮೇಲೆ ಮರುಮುದ್ರಣವಾದರೂ ಯಾಕಾಗಬೇಕು?
------------------------------
ಈಗ ಯಾವನೋ ಗಾಂಧೀಜಿ ಚಪ್ಪಲಿ, ಗಿಂಡಿ, ಕನ್ನಡಕ ಇತ್ಯಾದಿ ವಸ್ತುಗಳನ್ನು ಹರಾಜಿಗೆ ಹಾಕಿದಾಗ. ನಮಗೆಲ್ಲ ಗಾಂಧೀಜಿ ನೆನಪಾಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರಲ್ಲಿ ಗಾಂಧೀಜಿ ಮುಂಚೂಣಿಯಲ್ಲಿದ್ದರು ಎಂಬುದು ಬಿಟ್ಟರೆ ಇಂದಿನ ಜನರೇಶನ್ನಿಗೆ ಗಾಂಧಿ ಬಗ್ಗೆ ಏನೇನೂ ಗೊತ್ತಿರಲಿಕ್ಕಿಲ್ಲ. ಬೇಕೆಂದರೆ ಗಾಂಧೀಜಿ ಇಬ್ಬರು ಹುಡುಗಿಯರ ಜತೆಗೇ ಇರುತ್ತಿದ್ದರು, ಗಾಂಧೀಜಿ ದೇಶ ಒಡೆದರು ಎಂಬಂತಹ ಸೆನ್ಸೇಶನಲ್ ವಿಚಾರಗಳಿಗೆ ಬೇಕಾದಷ್ಟು ಪಬ್ಲಿಸಿಟಿ ಸಿಕ್ಕಿದೆ. ಆದರೆ, ದೇಶ ಹೇಗೆ ನಡೆಯಬೇಕು ಎಂಬುದರ ಬಗ್ಗೆ, ಸ್ವರಾಜ್ಯದ ಬಗ್ಗೆ, ಸ್ವಾವಲಂಬನೆಯ ಬಗ್ಗೆ, ಗ್ರಾಮಸ್ವರಾಜ್ಯದ ಬಗ್ಗೆ, ಸರ್ವೋದಯದ ಬಗ್ಗೆ ಗಾಂಧೀಜಿಯ ಪರಿಕಲ್ಪನೆಗಳು ಇಂದು ಯಾರಿಗೂ ಗೊತ್ತಿಲ್ಲ. ಗಾಂಧಿ ಎಂಬ ಚಾರಿತ್ರಿಕ ವ್ಯಕ್ತಿತ್ವದ ಧನಾತ್ಮಕ ಭಾಗವನ್ನು ಅರಿಯುವ ಅಗತ್ಯ ಇಂದು ಯಾರಿಗೂ ಕಾಣುತ್ತಿಲ್ಲ. ಇಂದು ಖಾದಿ ಡಿಸ್ಕೌಂಟಿನಲ್ಲಿ ಸಿಕ್ಕಿದರೂ ಕೊಳ್ಳುವವರು ಕಡಿಮೆ. ಇನ್ನು ಚರಕ? What's that?
9 ಕೋಟಿ ಕೊಟ್ಟು ಗಾಂಧೀಜಿಯ ವಸ್ತುಗಳನ್ನು ಕೊಂಡ ವಿಜಯ ಮಲ್ಯ ಕರ್ನಾಟಕದ ಹೆಮ್ಮೆಯ ಕುವರ, ಬೆಂಗಳೂರಿನ ಮಿಲಿಯಾಧಿಪತಿ. ಹೀಗೆ, ಇಂಡೈರೆಕ್ಟ್ ಆಗಿ ಭಾರತದ ಮರ್ಯಾದೆ ಉಳಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ... :-) ಆದರೆ ಬೆಂಗಳೂರಲ್ಲಿ ಒಂದು ಗಾಂಧಿ ಭವನವಿದೆ. ಶಿವಾನಂದ ಸರ್ಕಲ್ಲಿಗೆ ಸಮೀಪವಿದೆ. ಇದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಅದರಲ್ಲಿ ಕೆಲಸ ಮಾಡಿದ, ಮಾಡುತ್ತಿರುವ ಹಿರಿಯರ ಬಗ್ಗೆ ಯಾರಿಗೂ ಏನೂ ಗೊತ್ತಿಲ್ಲ. ಈ ಗಾಂಧಿಭವನದಲ್ಲಿ ಏನೇನು ನಡೆಯುತ್ತದೆ, ಅದನ್ನು ನಾವು ಯಾವುದಾದರೂ ರೀತಿಯಲ್ಲಿ ಪ್ರೋತ್ಸಾಹಿಸಬಹುದಾ, ಊಹುಂ, ಯಾರಾದರೂ ಯೋಚಿಸುತ್ತೀವಾ? ಪರಿಣಾಮ, ಇಂದು ಗಾಂಧಿಭವನಕ್ಕೆ ಕೂಡ ಹೆಚ್ಚುಕಡಿಮೆ ಗಾಂಧೀಜಿಗಾದ ಗತಿಯೇ ಆಗಿದೆ. ಕರ್ನಾಟಕ ರಾಜ್ಯ ಗಾಂಧಿ ಸ್ಮಾರಕ ನಿಧಿಯಂತೆ, ಬೆಂಗಳೂರಿನ ಗಾಂಧಿ ಸಾಹಿತ್ಯ ಸಂಘವಂತೆ, ಇವೆಲ್ಲ ಈಗಲೂ ಇವೆಯಾ, ಏನು ಮಾಡುತ್ತಿವೆ, ಯಾವುದೂ ಯಾರಿಗೂ ಗೊತ್ತಿರಲಿಕ್ಕಿಲ್ಲ, ನನಗೂ ಗೊತ್ತಿಲ್ಲ.
------------------------------
ಗಾಂಧಿಯ ವಿಚಾರಗಳನ್ನು ಉಳಿಸಿಕೊಳ್ಳಲು ಗೊತ್ತಿಲ್ಲದ ನಾವು, ಅವರ ವಸ್ತುಗಳನ್ನು ಯಾವನೋ ಕೊಂಡುಕೊಂಡು ವಾಪಸ್ ಭಾರತಕ್ಕೆ 'ದಾನ' ಮಾಡಿದಾಗ ಭಾರತದ 'ಮಾನ' ಉಳಿಯಿತೆಂದು ಸುಳ್ಳುಸುಳ್ಳೇ ಖುಷಿಪಡುತ್ತೇವೆ. ಗಾಂಧಿತಾತನ ಕನ್ನಡಕ, ಚಪ್ಪಲಿ ವಾಪಸ್ ಬಂದಿದ್ದರಿಂದ ಏನು ಉಪಯೋಗವಾಯಿತೋ ತಿಳಿಯದು. ಆದರೆ, ಚುನಾವಣೆಯ ನಡುವೆಯೇ ಐಪಿಎಲ್ ನಡೆಯುವುದೆಂದು ನಿರ್ಧಾರವಂತೂ ಆಗಿದೆ. ಭಾರತಕ್ಕೆ ಕೋಟಿಕೋಟಿ ಲಾಭವಾಗಲಿದೆ. (ಭಾರತದಲ್ಲಿ ಯಾರಿಗೆ ಲಾಭ ಅಂತ ಮಾತ್ರ ಕೇಳಬೇಡಿ ಪ್ಲೀಸ್, ಅದಕ್ಕೆ ನಂಗೆ ಉತ್ತರ ಗೊತ್ತಿಲ್ಲ... ಮ್ಯಾಚ್ ನೋಡುವ ಖುಷಿ ಬಿಟ್ಟರೆ ನನಗೂ ನಿಮಗೂ ಇದರಿಂದ ಏನು ಲಾಭ ಅಂತ ನಿಜಕ್ಕೂ ನಂಗೆ ಗೊತ್ತಿಲ್ಲ)
ವಿಜಯ ಮಲ್ಯ ಹಾಲಿ ರಾಜ್ಯಸಭಾಸದಸ್ಯರು ಅಂತಲೂ ನಾವೆಲ್ಲ ಮರೆತಿದ್ದೇವೆ. ಅವರು ಎಂಪಿ ಆಗಿ ಮಾಡಿದ ಕೆಲಸಗಳ ಲಿಸ್ಟ್ ಇಲ್ಲಿದೆ. http://mplads.nic.in/sslapps/mpladsworks/masterrep.htm. ಈ ವೆಬ್ ಸೈಟಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸರಕಾರದಿಂದ ಎಷ್ಟು ಹಣ sanction ಮಾಡಿಸಿಕೊಂಡಿದ್ದಾರೆ ಎಂಬುದೂ ಲೆಕ್ಕಹಾಕಬಹುದು. ಇದು ಸುಮ್ಮನೆ, ಮಾಹಿತಿಗಾಗಿ.
------------------------------
ಗಾಂಧಿತಾತನ ಶರೀರದ ಕೊಲೆ 1948ರಲ್ಲೇ ಆಗಿತ್ತೇನೋ ನಿಜ, ಆದರೆ ಈಗ ಗಾಂಧಿಯ ವಿಚಾರಧಾರೆಗಳ ಕಗ್ಗೊಲೆ ಭಾರತದೆಲ್ಲೆಡೆ ನಡೆಯುತ್ತಿದೆ. ದಿನದಿನವೂ ನಮ್ಮೆಲ್ಲರೊಳಗಿನ ಗಾಂಧೀಜಿ ಸಾಯುತ್ತಲೇ ಇದ್ದಾರೆ. ನಾವೆಲ್ಲರೂ ನೋಡುತ್ತಲೇ ಇದ್ದೇವೆ ಹೊರತು ಏನು ಮಾಡಲೂ ಸಾಧ್ಯವಾಗಿಲ್ಲ.
ಎಷ್ಟಂದರೂ ನಮ್ಮದು ಹೇಳುವವರು ಕೇಳುವವರು ಇಲ್ಲದ ದೇಶ, ಯಾರಾದರೂ ಯಾವಾಗ ಏನು ಬೇಕಾದರೂ ಇಲ್ಲಿ ಮಾಡಬಹುದು. ದುಡ್ಡು ಇದ್ದವರು ಖಾಸಗಿ ಏರೋಪ್ಲೇನುಗಳಲ್ಲೇ ದೇಶದಿಂದ ದೇಶಕ್ಕೆ ಹಾರಿಕೊಂಡು ಸುಲಭವಾಗಿ ಹೀರೋ ಆಗಿ ಮೆರೆಯಬಹುದು, ದುಡ್ಡು ಬಿತ್ತಿ ಮತ್ತಷ್ಟು ದುಡ್ಡು ಬೆಳೆಯಬಹುದು, ದುಡ್ಡಿಲ್ಲದವರಿಗೆ ಇದ್ದೇ ಇದೆಯಲ್ಲ ಭಿಕ್ಷೆ ಬೇಡುವುದು, ಸ್ಲಂಗಳಲ್ಲಿ ಬದುಕುವುದು, ಅಥವಾ ಯಾರದೋ ತಲೆ ಒಡೆದು ಕೊಲೆ ಮಾಡಿ ದುಡ್ಡು ಎತ್ತುವುದು! ಇರಲಿ ಬಿಡಿ, ನಾವಾದರೂ ಏನು ಮಾಡಲಿಕ್ಕಾಗುತ್ತದೆ, ಗಾಂಧಿ ಪುಸ್ತಕಗಳು ಸಿಕ್ಕಿದರೆ ಶೋಕೇಸಿನಲ್ಲಿಡೋಣ, ಚಪ್ಪಲಿ, ಕನ್ನಡಕ ಸಿಕ್ಕಿದರೆ ಮ್ಯೂಸಿಯಂನಲ್ಲಿಡೋಣ. ಗಾಂಧಿ ವಿಚಾರಗಳು ಯಾರಿಗೆ ಬೇಕು? He's not relevant anymore!

Saturday, March 7, 2009

ದಾನೇದಾನೇಪೇ ಲಿಖಾ ಹೋತಾ ಹೈ...

 ದಾನೇ ದಾನೇ ಪೇ ಲಿಖಾ ಹೋತಾ ಹೈ ಖಾನೇವಾಲೇ ಕಾ ನಾಮ್ ಅಂತಾರೆ. ಇದರ ನಿಜವಾದ ಅರ್ಥ ಏನಂತ ನಂಗೊತ್ತಿರಲಿಲ್ಲ. ನಿನ್ನೆಯಷ್ಟೇ ಸ್ವಲ್ಪಮಟ್ಟಿಗೆ ಅದೇನಂತ ಗೊತ್ತಾಯ್ತು... :-)
ಬಹಳ ದಿನದ ನಂತರ ಕಳೆದ ವಾರ ನಂಗೂ ನನ್ನ ರೂಂಮೇಟ್-ಗೂ ಒಟ್ಟಿಗೆ ಮಾರ್ನಿಂಗ್ ಶಿಫ್ಟ್ ಬಿದ್ದಿತ್ತು. ಮಾಮೂಲಾಗಿ ನಾನು  ಆಫೀಸಿಗೆ ಹೋಗುವುದು ಬೆಳಿಗ್ಗೆ 7.30ಕ್ಕೆ. ಆದರೆ ನಿನ್ನೆ ಬೆಳಿಗ್ಗೆ ಆಫೀಸಿಗೆ ಮಾತ್ರ ರಾತ್ರಿ ತನಕ ಆಫೀಸಲ್ಲಿರಬೇಕಾದ ಕಾರಣ ಸ್ವಲ್ಪ ಲೇಟ್ ಆಗಿ ಹೋಗ್ಬೇಕಿತ್ತು. ರೂಂಮೇಟ್ ಬೇಗ ಎದ್ದು ಚಪಾತಿ ಮಾಡಿದಳು. ಹಿಂದಿನ ದಿನ ಮಂಗಳೂರು ಸ್ಟೋರಿನಿಂದ  ತಂದ ಬ್ರಾಹ್ಮಿ (ಒಂದೆಲಗ) ಚಟ್ನಿ ಮಾಡಿ ಬಾಕ್ಸಿನಲ್ಲಿ ಹಾಕಿಕೊಂಡು 7.30ಕ್ಕೆ ಹೊರಟು ಹೋದಳು. ನಾನು ನಿಧಾನಕ್ಕೆದ್ದು 9ಕ್ಕೆ ಹೊರಟರೆ ಸಾಕಿತ್ತು.
ಗಂಟೆ 9.10 ಆಗಿತ್ತು. ಇನ್ನೂ ನಾನು ಮನೆಯಿಂದ ಹೊರಟಿರಲಿಲ್ಲ, ಆಗ ನನ್ನ ರೂಂಮೇಟ್ ಫೋನ್ ಮಾಡಿದಳು, ಚಟ್ನಿ ಮರೆತು ಬಂದಿದ್ದೇನೆ, ತರುತ್ತೀರಾ ಅಂತ ಕೇಳಿದಳು. ಆಯಿತು, ಅಂತ ಒಪ್ಪಿ, ಚಿಕ್ಕ ಬಾಕ್ಸಿನಲ್ಲಿ ಚಟ್ನಿ ಹಾಕಿ ತಗೊಂಡು ಆಫೀಸಿಗೆ ಹೊರಟೆ. ಬಸ್ಸಿನಲ್ಲಿ ಹೋಗಲು ಉದಾಸೀನವಾದ ಕಾರಣ ಯಾವುದೋ ಆಟೋ ನಿಲ್ಲಿಸಿ ಹತ್ತಿಕೊಂಡೆ. ಬ್ಯಾಗಿನಲ್ಲಿ ಚಟ್ನಿ ಇಡುವ ಬದಲು ನನ್ನ ಬದಿಯಲ್ಲಿ ಇಟ್ಟುಕೊಂಡು ಕೂತೆ. 
ಆಟೋ ಮೀಟರ್ ಯದ್ವಾತದ್ವಾ ಓಡುತ್ತಿದ್ದುದನ್ನೇ ನೋಡುತ್ತ ಕುಳಿತೆ. ಆಟೋದಲ್ಲಿ ಹೋಗುವಾಗ ಇದು ಮಾಮೂಲಾದ ಕಾರಣ ದಾರಿಯಲ್ಲೇ ಮೀಟರ್ ಜಾಸ್ತಿ ಓಡುತ್ತಿದೆ ಅಂತ ಹೇಳಿ ಕೆಟ್ಟವಳಾಗುವ ಅಭ್ಯಾಸ ಬಿಟ್ಟುಬಿಟ್ಟಿದ್ದೇನೆ. ಸರಿಯಾಗಿ ನಲುವತ್ತಮೂರು ರೂಪಾಯಿ ಎಣಿಸಿ ಕೈಲಿ ಹಿಡಿದುಕೊಂಡೆ. ಇಳಿದ ಮೇಲೆ ಅದನ್ನು ಕೊಟ್ಟು ತಿರುಗಿ ನೋಡದೇ ಆಫೀಸಿನೊಳಗೆ ಹೋಗುವುದು ಅಂತ ಪ್ಲಾನ್ ಹಾಕಿದೆ. ಒಂದು ವೇಳೆ  ಡ್ರೈವರ ಎದುರು ಮಾತನಾಡಿದರೆ ಆತನಿಗೆ ಹೇಗೆ ದಬಾಯಿಸಬೇಕು ಅಂತಲೂ ಆಭ್ಯಾಸ ಮಾಡಿಕೊಂಡೆ. 
ಆಫೀಸು ಬಂತು. ಪ್ಲಾನ್ ಮಾಡಿದ ಹಾಗೆಯೇ ನಲುವತ್ತಮೂರು ರೂಪಾಯಿ ಆತನ ಕೈಲಿಟ್ಟು ಆತ ಎಣಿಸುವುದಕ್ಕೆ ಕಾಯದೆ ಕೆಳಗಿಳಿದೆ, ನನ್ನ ಪಾಡಿಗೆ ನಾನು ಆಫೀಸಿನ ಮೆಟ್ಟಿಲು ಹತ್ತಿದೆ. ಬ್ಯಾಗ್ ಇಟ್ಟು ಡೆಸ್ಕಿಗೆ ಬರುತ್ತಿದ್ದ ಹಾಗೇ ರೂಂಮೇಟ್ ಕಾಣಿಸಿದಳು, ಆಗಷ್ಟೇ ನಂಗೆ ಚಟ್ನಿ ನೆನಪಾಗಿದ್ದು. ಮೀಟರ್ ಜಾಸ್ತಿ ಓಡಿದೆ ಅನ್ನುವ ತಲೆಬಿಸಿಯಲ್ಲಿ ನನ್ನ ಬದಿಯಲ್ಲಿಟ್ಟ ಬಾಕ್ಸ್ ಮರೆತು ಬಿಟ್ಟಿದ್ದೆ, ಹಾಗೇ ಎದ್ದುಕೊಂಡು ಬಂದಿದ್ದೆ. ಅವಳಿಗೆ ಹೇಳಿದೆ, ಚಟ್ನಿ ಆಟೋನಲ್ಲಿ ಹೋಯಿತು ಅಂತ. ಕೊನೆಗೆ ಡ್ರೈವರ್ ತಿನ್ನಲಿ ಬಿಡು ಅಂತ ಇಬ್ಬರೂ ನಕ್ಕು ಸುಮ್ಮನಾದೆವು.
ಒಂದು ಗಂಟೆ ಕಳೆದ ನಂತರ ರಿಸೆಪ್ಷನ್-ನಿಂದ ಕರೆ ಬಂತು, ನಿಮಗೊಂದು ಬಾಕ್ಸ್ ತಂದುಕೊಟ್ಟುಹೋಗಿದ್ದಾರೆ ಯಾರೋ, ಬಂದು ಕಲೆಕ್ಟ್ ಮಾಡಿ ಅಂತ. ಸರಿ, ಏನಪ್ಪಾ ಅಂತ ಹೋಗಿ ನೋಡಿದರೆ, ಅದೇ ಚಟ್ನಿ ಬಾಕ್ಸ್..! :-) ಆಟೋ ಡ್ರೈವರ್ ಸೆಕ್ಯೂರಿಟಿಯವರ ಹತ್ತಿರ ಅದನ್ನು ಕೊಟ್ಟುಹೋಗಿದ್ದನಂತೆ. ಚಟ್ನಿ ಸಿಕ್ಕಿತಲ್ಲ, ನನ್ನ ರೂಂಮೇಟ್ ಖುಷಿಯಾದಳು. ಅವಳ ಹಣೆಯಲ್ಲಿ ಆ ಚಟ್ನಿ ತಿನ್ನುವುದು ಅಷ್ಟು ಗಟ್ಟಿಯಾಗಿ ಬರೆದಿತ್ತು ಅನ್ಸುತ್ತೆ... ಇದನ್ನೇ ಹೇಳ್ತಾರೇನೋ, ದಾನೇದಾನೇಪೇ ಲಿಖಾ ಹೋತಾ ಹೈ.. ಅಂತ...! :-)
-----------------
ಕೆಲ ತಿಂಗಳ ಹಿಂದೆ ಇದೇ ರೀತಿ ಕ್ಯಾಮರಾ ಯಾವುದೋ ಆಟೋನಲ್ಲಿ ಮರೆತು ಎದ್ದುಬಂದಿದ್ದೆ. ಆ ಆಟೋದ ಡ್ರೈವರ್ ಕೂಡ ಇಷ್ಟೇ ಒಳ್ಳೆಯವನಾಗಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ಅನಿಸ್ತಿದೆ. ಈಗ ನಂಗೆ ಕ್ಯಾಮರಾ ತಗೊಳ್ಳಲಿಕ್ಕೆಯೇ ಭಯ ಬಿಡ್ತಿಲ್ಲ, ಎಲ್ಲಾದ್ರೂ ಕಳೆದುಹಾಕಿಬಿಡ್ತೀನಿ ಅಂತ.

Monday, February 2, 2009

ಸತ್ಯ...

ಸತ್ಯ ಅಮೀಬದಂತೆ...
ಇಂದಿಗೊಂದು ಆಕಾರ
ನಾಳೆಗಿನ್ನೊಂದೇ ಆಕಾರ
ಈ ಕ್ಷಣಕ್ಕೆ ಸತ್ಯವಾಗಿದ್ದು 
ಮುಂದಿನ ಕ್ಷಣಕ್ಕೆ ಸುಳ್ಳಾಗಬಹುದು
ನಾಳೆಯ ಸತ್ಯ 
ಇಂದಿಗೆ ಸುಳ್ಳಾಗಬಹುದು

ಸತ್ಯ ವಿಶ್ವರೂಪಿ
ಸಾವಿರ ಮುಖಗಳ ಕಾಮರೂಪಿ
ಅವರವರ ಭಾವಕ್ಕೆ 
ಅವರದೇ ಸತ್ಯಗಳು
ಭಾವ-ಬುದ್ಧಿಗೆ ನಿಲುಕದ 
ಇನ್ನೆಷ್ಟೋ ಸತ್ಯಗಳು
ಶಾಶ್ವತ ಸತ್ಯಕ್ಕೆ ಅರಸಿದರೆ
ಎಲ್ಲವೂ ಶಾಶ್ವತವೆನಿಸಬಹುದು!
ಒಂದು ಸತ್ಯವ ಹುಡುಕಿ ಹೊರಟಾಗ
ದಾರಿಯಲಿ ನೂರಾರು ಸತ್ಯಗಳು
ಕೈಬೀಸಿ ಕರೆದಾವು!
ಹುಡುಕುವ ಸತ್ಯ ಮಾತ್ರ ಸಿಗದಾಗಬಹುದು...
ಸುಳ್ಳೆಂಬುದೇ ಇಲ್ಲವಾಗಿ
ಸರ್ವವೂ ಸತ್ಯವಾದೀತು...
ಸತ್ಯದ ಜಾಡು ಹುಡುಕಿ ಹೊರಟಲ್ಲಿ
ಹಾದಿ ಮರೆತು ಜಾಡು ತಪ್ಪಿ 
ನಾವೇ ಕಳೆದುಹೋದೇವು!

ಅಷ್ಟೇನಾ?

ಹೀಗೂ ಆಗುವುದುಂಟು ಹುಡುಗೀ...

ಸತ್ಯಶೋಧನೆಗಾಗಿ 
ಶಬ್ದಗಳ ಕತ್ತರಿಸಿ ಕತ್ತರಿಸಿ
ಅರ್ಥ ಹುಡುಕುತ್ತೇವೆ..
ಕ್ರಿಯೆಗಳ ಕತ್ತು ಕುಯ್ದು
ಅದರಲ್ಲೂ ಅರ್ಥ ಅರಸುತ್ತೇವೆ...
ಪ್ರತಿಕ್ರಿಯೆಗಳಿಗೆ ಕಾಯುತ್ತೇವೆ,
ಅದರಲ್ಲೂ ಅರ್ಥ ಕಾಣುತ್ತೇವೆ...
ಆದರೆ, 
ಇಂದಿಗೆ ಅರ್ಥವಾಗಿದ್ದು 
ನಾಳೆಗೆ ಬಿಡಿಸಲಾಗದ ಕಗ್ಗಂಟಾಗಿ
ಕಗ್ಗಂಟೇ ಪರಮಸತ್ಯವಾಗುವುದು -

ಸತ್ಯಕ್ಕೆ ಅರ್ಥ ಹುಡುಕಹೊರಟಾಗ
ನೂರೆಂಟು ಅರ್ಥಗಳು ಹೊಳೆದು 
ಅಸಲಿ ಸತ್ಯವೆಲ್ಲೋ ಕಳೆದುಹೋಗುವುದು -

ಕಳೆದುಹೋದ ಸತ್ಯವ 
ಮತ್ತೆ ಹುಡುಕಹೊರಟಾಗ
ಏನೇನೂ ಸಿಗದೆ 
ಶೂನ್ಯವೇ ಪರಮಸತ್ಯವಾಗುವುದು!


Sunday, January 18, 2009

ಸ್ಲಂಡಾಗ್ ಸುತ್ತ...


ಹೆಸರು ಕೇಳಿದಾಗ ಮೊದಲಿಗೆ ಅನಿಸಿದ್ದು... ಸ್ಲಂನಲ್ಲಿದ್ದ ಮಾತ್ರಕ್ಕೆ ಅಷ್ಟು derogatory ಆಗಿ ಸ್ಲಂಡಾಗ್ ಅಂತ ಯಾಕೆ ಕರೆಯಬೇಕು- ಅಂತ. ಇರಲಿ. ಎಲ್ಲರೂ ಚಿತ್ರ ಚೆನ್ನಾಗಿದೆ ಅಂತಿದಾರಲ್ಲ, ನೋಡಿಯೇ ಬಿಡುವ ಅಂದುಕೊಂಡೆ.ಈಗೆಲ್ಲ ಚಿತ್ರ ಬಿಡುಗಡೆಯಾಗುವವರೆಗೆ ಕಾಯಬೇಕೆಂದೇನಿಲ್ಲವಲ್ಲ, ಇನ್ನೂ ಥಿಯೇಟರಿಗೆ ಬರುವ ಮೊದಲೇ ಚಿತ್ರದ ಒಳ್ಳೆ ಗುಣಮಟ್ಟದ ಸಿಡಿ ಸಿಕ್ಕಿತು, ನೋಡಿಯೇ ಬಿಟ್ಟೆ.
----------
ನೋಡುವಾಗ ತನ್ಮಯಳಾಗಿ ಹೋದೆ. ಚಂದಚಂದದ ಶಾಟ್-ಗಳು... ಸ್ಲಂ ಚಿಣ್ಣರ ಮುಗಿಲು ಮುಟ್ಟುವ ಸಂಭ್ರಮಕ್ಕೂ, ಹೃದಯ ತಟ್ಟುವ ನೋವುಗಳಿಗೂ ಜತೆಯಾಗುವ, ಖುಷಿಕೊಡುವ ಸಂಗೀತ... ಬದುಕನ್ನೇ ಶಾಲೆಯಾಗಿಸಿದ ಚಿಣ್ಣರ ಜೀವನಪ್ರೀತಿ.... ಭಾರತದಲ್ಲಿ ಯಾವುದೂ ಅಸಾಧ್ಯವಲ್ಲ ಅಂತ ತೋರಿಸುವ ಕಥೆ... ಎಲ್ಲಾ ಚೆನ್ನಾಗಿತ್ತು. ಆದರೆ ಕೊನೆಗೆ ಬರುವ ದೊಡ್ಡ ಹುಡುಗಿಯ ಪಾತ್ರ ಮಾತ್ರ ಅದ್ಯಾಕೋ irritable ಆಗಿತ್ತು. ಅದೊಂದು ಬಿಟ್ರೆ, ನನ್ನ ಮಟ್ಟಿಗೆ ಚಿತ್ರ ಚೆನ್ನಾಗಿತ್ತು. ಪ್ರಶ್ನೆಗಳಿಗೆ ತಪ್ಪು ತಪ್ಪು ಉತ್ತರಗಳನ್ನ ಕೊಟ್ಟಿದ್ರಂತೆ, ಎಡಿಟಿಂಗ್-ನಲ್ಲಿ ಕೆಲವು ತಪ್ಪುಗಳಿತ್ತು.. ಆದರೆ ಇವೇನೂ ಬೇಗನೆ ಗೊತ್ತಾಗುವಂತಹದೇನಲ್ಲವಾದ್ದರಿಂದ ಪರವಾಗಿಲ್ಲ. ಪುಟ್ಟ ಮಕ್ಕಳ ಪಾತ್ರ ಮಾಡಿದ ಹುಡುಗರು ತುಂಬಾ ಇಷ್ಟವಾದರು.
ಒಂದೇ ಬಿಂದುವಿನಿಂದ ಹೊರಡುವ ಇಬ್ಬರು ಚಿಣ್ಣರು... ಬದುಕಿಗಾಗಿ ಆಯ್ದುಕೊಳ್ಳುವ ವಿಭಿನ್ನ ದಾರಿಗಳು... ಭಾರತದಲ್ಲಿ ಕೆಟ್ಟ ರೀತಿಯಲ್ಲಾದರೂ ಬದುಕಬಹುದು, ಒಳ್ಳೆಯ ರೀತಿಯಲ್ಲಿಯೂ ಬದುಕಲು ಸಾಧ್ಯ ಎಂಬುದರ ಸಂಕೇತವೇನೋ, ಅನಿಸಿತು. ಬೀದಿ ದೀಪದಡಿ ಕೂತು ಓದಿ ಮೇಲೆ ಬಂದ ಮಹನೀಯರು... ಚಿಕ್ಕ ವ್ಯಾಪಾರದಿಂದ ಶುರು ಮಾಡಿ ಕರೋಡ್-ಪತಿಗಳಾದವರು... ದೊಡ್ಡ ದೊಡ್ಡ ಗ್ಯಾಂಗ್-ಸ್ಟರ್-ಗಳು... ಹೆಚ್ಚು ಓದದಿದ್ದರೂ ಬದುಕನ್ನೇ ಪಾಠಶಾಲೆಯಾಗಿಸಿಕೊಂಡವರು... ಹೀಗೆ ಎಲ್ಲರನ್ನೂ ನೆನಪಿಸಿತು ಚಲನಚಿತ್ರ. ಪುಟ್ಟ ಹುಡುಗರ ಜೀವನಪ್ರೀತಿ ನಮ್ಮೆಲ್ಲರೊಳಗೆ ಅಡಗಿರುವ ಆಶಯಕ್ಕೆ ರೆಕ್ಕೆ ಮೂಡಿಸುವಂತಿತ್ತು... ಅನಿಲ್ ಕಪೂರ್ ಪಾತ್ರ ನಮ್ಮೆಲ್ಲರೊಳಗಿನ ಸಿನಿಕತನದ ಪ್ರತಿಬಿಂಬದಂತಿತ್ತು...  ಲಗಾನ್ ಚಿತ್ರ ನೋಡುವವರೆಲ್ಲ ಅಮೀರ್ ಖಾನ್ ಟೀಮು ವಿನ್ ಆಗಲೆಂದು ಆಶಿಸುತ್ತಾರಲ್ಲ, ಹಾಗೆಯೇ ಜಮಾಲ್ ಗೆದ್ದರೆ ಸಾಕು ಅಂತ ಕಾಯಿಸಿತು. ಒಟ್ಟಿನಲ್ಲಿ ಚಿತ್ರ ಖುಷಿ ತಂದಿತು.

ಒಂದು ಸಿನಿಮಾ ಮನಸ್ಸಿನಲ್ಲುಳಿದರೆ, ಪದೇಪದೇ ನಮ್ಮ ಆಂತರ್ಯವನ್ನು ಕೆಣಕಿದರೆ ಆ ಸಿನಿಮಾ ಯಶಸ್ವಿಯಾದಂತೆ ಅಂತ ಬಲ್ಲವರು ಹೇಳುತ್ತಾರೆ. ಸ್ಲಂ ಡಾಗ್ ಮಿಲಿಯನೇರ್ ಈ ನಿಟ್ಟಿನಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿವೆ, ಆದರೆ ಭಾರತದ ಒಳಗಿದ್ದುಕೊಂಡು ನೋಡುವ ನನ್ನ ಮಟ್ಟಿಗೆ, ಕಥೆ ಅಷ್ಟೇನೂ ಕಾಡಲಿಲ್ಲ. ಬದುಕಬೇಕೆನ್ನುವ ಛಾತಿಯಿರುವ ಎಲ್ಲರಿಗೂ ಬದುಕಲು ಬಿಡುವ ಮುಂಬೈ ಚಿತ್ರದ ನಿಜವಾದ ಹೀರೋ.
-----------
ಈಗ ಚಿತ್ರ ಐದು ಗೋಲ್ಡನ್ ಗ್ಲೋಬ್ ಬಹುಮಾನಗಳಿಗೆ ಪಾತ್ರವಾಗಿದೆ... ಇದು ವೈಟ್ ಟೈಗರ್-ಗೆ ಬುಕರ್ ಸಿಕ್ಕಿದ ನಂತರ ಭಾರತದ ಬಡವರ ಕಥೆಗೆ ಸಿಕ್ಕಿದ ಮತ್ತೊಂದು ಬಹುಮಾನ. ಹೌದೂ... ಪಾಶ್ಚಾತ್ಯರಿಗೆ ಬಡ ಅಥವಾ ಮಧ್ಯಮ ವರ್ಗದ ಭಾರತವೇ ಯಾಕಿಷ್ಟ? ಸುಮ್ಮನೆ ಯೋಚಿಸುವಾಗ, ಇದೇ ರೀತಿಯ ಭಾರತೀಯರ ಕಥೆಗಳಿರುವ, ಪಾಶ್ಚಿಮಾತ್ಯರ ಪ್ರೊಡಕ್ಷನ್ ಅಥವಾ ನಿರ್ದೇಶನವಿರುವ ಹತ್ತುಹಲವು ಚಿತ್ರಗಳು ಕಣ್ಮುಂದೆ ತೆರೆದುಕೊಳ್ಳುತ್ತವೆ. ಎಲ್ಲಾ ಚಿತ್ರಗಳಲ್ಲೂ ಹೆಚ್ಚುಕಡಿಮೆ, ತಮ್ಮ ಸಾಂಪ್ರದಾಯಿಕ ಕೋಟೆಗಳನ್ನು ದಾಟಿ ಗ್ಲೋಬಲ್ ಆಗುವತ್ತ ಸಾಗುವ ಭಾರತೀಯರ ಕಥೆಗಳೇ ಇರುತ್ತವೆ. ಒಂದು ರೀತಿಯಲ್ಲಿ universal ಎನಿಸುವಂತಹ value system ಕಡೆಗೆ ಹೆಜ್ಜೆ ಹಾಕುವ ಭಾರತೀಯರ ಕಥೆಗಳು. ಹೆಚ್ಚುಕಡಿಮೆ ಎಲ್ಲವೂ ಬಡ ಅಥವಾ ಮಧ್ಯಮ ವರ್ಗದ ಬದುಕಲ್ಲಿ ಹುಟ್ಟಿದ ಕಥೆಗಳು.

ಮಿಸ್ಟ್ರೆಸ್ ಆಫ್ ಸ್ಪೈಸಸ್... ಐಶ್ವರ್ಯಾ ಅಭಿನಯದ ಚಿತ್ರ.  ಕೇರಳದ ಮೂಲೆಯಲ್ಲಿ ಮಾಯಾಶಕ್ತಿಯಿರುವ ಅಜ್ಜಿಯ ಜತೆ ಬೆಳೆದ ಹುಡುಗಿ, ಪಾಶ್ಚಾತ್ಯ ದೇಶದಲ್ಲಿ ಬದುಕಬೇಕಾಗುತ್ತದೆ. ಅಲ್ಲಿ ಆಕೆ ಮಾರುವ ಸ್ಪೈಸ್ ಅಥವಾ ಸಂಭಾರ ಪದಾರ್ಥಗಳಿಗೆ ಔಷಧೀಯ ಗುಣ. ಈ ದೈವೀ ಶಕ್ತಿಯನ್ನು ಆಕೆಗೆ ನೀಡಿದ ಅಜ್ಜಿ, ಜನ್ಮಪೂರ್ತಿ ಆಕೆಗೆ ಯಾರಿಗೂ ಮನಸೋಲದಂತೆ, ಮತ್ತು ಮದುವೆಯಾಗದಂತೆ ಶರತ್ತು ವಿಧಿಸಿರುತ್ತಾಳೆ. ಒಂದು ವೇಳೆ ಹಾಗೇನಾದರೂ ಆದರೆ, ಆಕೆಯ ಕೈಗುಣ ಕೆಟ್ಟು ಸಂಭಾರ ಪದಾರ್ಥಗಳ ಔಷಧೀಯ ಗುಣ ಹೊರಟುಹೋಗುತ್ತದೆ. ಹೀಗೆ ಬದುಕುವ ಅನಿವಾರ್ಯತೆಯ ನಡುವೆ, ಹೃದಯದ ಎಳೆತಸೆಳೆತಗಳಿಗೆ ಸೋತು, ಕೊನೆಗೆ ಮನಗೆದ್ದವನನ್ನೂ ತನ್ನವನಾಗಿಸಿಕೊಳ್ಳುವ ಜತೆಗೆ ಸಂಭಾರ ಪದಾರ್ಥಗಳನ್ನೂ ತನ್ನ ಪಾಲಿಗೆ ಒಲಿಸಿಕೊಳ್ಳುವ ಕಥೆ. ಭಾರತೀಯರ ಪ್ರಕಾರ ಅಡಿಗೆ ಮನೆ ಎಂತಹ ಔಷಧಾಲಯ ಎಂಬುದನ್ನು ತೋರಿಸುವ ಜತೆಗೆ, ಒಂದೊಂದು ಸಂಭಾರ ಪದಾರ್ಥದ ಗುಣವನ್ನೂ ವಿವರಿಸುತ್ತದೆ... ಜತೆಗೆ ಚಿತ್ರವಿಡೀ ಕಾಡುವ ವರ್ಣವೈವಿಧ್ಯ... ತಾಕಲಾಟಗಳು... ಕೆಂಪು ಬಣ್ಣವೆಂದರೇನು ಅಂತ ಈ ಚಿತ್ರ ನೋಡಿ ತಿಳಿದುಕೊಳ್ಳಬೇಕು ಅಂತ ಸಾವಿರ ಸಾರಿ ಅಂದುಕೊಂಡಿದ್ದೇನೆ ನಾನು.

ವರ್ಣವೈವಿಧ್ಯ ಎಂದ ಕೂಡಲೇ ನನಗನಿಸುತ್ತಿದೆ... ಭಾರತೀಯ ಕಥೆ ಹೊಂದಿದ ಚಿತ್ರಗಳ ಬಂಡವಾಳವೇ ಇದು. ಬದುಕಿನ ಬಣ್ಣಗಳು... ಕಣ್ಣಿಗೆ ಕಾಣಿಸುವ ಬಣ್ಣಗಳು... ಮನಸನ್ನು ಕಾಡುವ ಬಣ್ಣಗಳು... ಒಟ್ಟಿನಲ್ಲಿ ಬಣ್ಣಗಳೆಂದರೆ ನಮಗೆಲ್ಲ ಬಲು ಪ್ರೀತಿ... ಅದು ಚಿತ್ರಗಳಲ್ಲೂ ಕಾಣಿಸುತ್ತದೆ. ಸ್ಲಂಡಾಗ್ ಮಿಲಿಯನೇರ್ ಕೂಡ ಇದಕ್ಕೆ ಹೊರತಲ್ಲ.
-----------
ಶ್ರೀಮಂತಿಕೆ ಕೆಲವರ ಕೈಲಿ ಸಿಕ್ಕಿ ನರಳುತ್ತಿರುವ ನಮ್ಮ ದೇಶದಲ್ಲಿ ಬಡವರು ಹಾಗೂ ಮಧ್ಯಮವರ್ಗದ ಜನರೇ ಹೆಚ್ಚು. ಬದುಕಿನ ವಿಧವಿಧದ ಛಾಯೆಗಳನ್ನು ತೆರೆದಿಡುವ ವರ್ಣವೈವಿಧ್ಯ ಕೂಡ ಬಡವರಲ್ಲಿ ಮತ್ತು ಮಧ್ಯಮವರ್ಗದಲ್ಲೇ ಜಾಸ್ತಿ. ಬದುಕುವ ರೀತಿಗಳು, ಚಟುವಟಿಕೆಗಳು, ಉಡುಗೆತೊಡುಗೆಗಳು - ಎಲ್ಲವೂ ಇಲ್ಲಿ visually rich. ಮತ್ತು ಈ ಬದುಕಿನಲ್ಲಿ ಹೊಟ್ಟೆಪಾಡಿಗೆ, ದಿನಕಳೆಯಲು ಬೇಕಾದ ಚಟುವಟಿಕೆಗೆ ಹೆಚ್ಚು ಪ್ರಾಮುಖ್ಯ. ಸೂಕ್ಷ್ಮತೆಗೆ, ಸಂವೇದನೆಗಳಿಗೆ ನಂತರದ ಸ್ಥಾನ. ಈ ದೊಡ್ಡ ದೇಶದ ಒಂದು ಮೂಲೆಯಲ್ಲಿರುವ ಬಡವರಿಗಿಂತ ಇನ್ನೊಂದು ಮೂಲೆಯಲ್ಲಿ ಬದುಕುವ ಬಡವರಿಗೆ ಅಜಗಜಾಂತರವಿರುತ್ತದೆ. ಒಂದು ಬಿಲಿಯನ್ ಜನಸಂಖ್ಯೆಯಿರುವ, 26ಕ್ಕೂ ಹೆಚ್ಚು ಮುಖ್ಯ ಭಾಷೆಗಳ ಮತ್ತು ಅವುಗಳೊಳಗೆ ಉಪಭಾಷೆಗಳ ವೈವಿಧ್ಯವಿರುವ, ಮರಳುಗಾಡಿನಿಂದ ಹಿಡಿದು ಹಸಿರು ಕಾಡಿನ ತನಕ ಎಲ್ಲಾ ರೀತಿಯ ಭೂವೈವಿಧ್ಯವಿರುವ, ಸಾವಿರಾರು ಜಾತಿಗಳಿರುವ, ಅವುಗಳೊಳಗೆ ಸಾವಿರಾರು ಪರಂಪರೆ-ಆಚರಣೆಗಳಿರುವ ನಮ್ಮ ದೇಶದಲ್ಲಿ ಬಡವರ ಬದುಕು ಸಾವಿರ ರೀತಿಗಳಲ್ಲಿ ತೆರೆದುಕೊಳ್ಳುತ್ತದೆ. ಹಾಗಾಗಿ, ಸಹಜವಾಗಿಯೇ ಕಥೆ ಬರೆಯುವವರಿಗೂ ಚಿತ್ರ ನಿರ್ದೇಶಕರಿಗೂ ಬಡಭಾರತದಲ್ಲಿ ಹೆಚ್ಚಿನ ವಿಷಯಗಳು, ವಿಚಾರಗಳು ಸಿಗುತ್ತವೆ.

ಆದರೆ ಶ್ರೀಮಂತರಾಗತೊಡಗಿದಂತೆ ಭಾಷೆ-ಉಡುಗೆ-ತೊಡುಗೆ-ಆಚರಣೆ ಎಲ್ಲವೂ ಯೂನಿವರ್ಸಲ್ ಆಗುತ್ತವೆ. ಬದುಕು ಕಾರ್ಪೋರೆಟೈಸ್ ಆಗಿ ಹೋಗುತ್ತದೆ, ಎಲ್ಲವೂ ಬ್ರಾಂಡೆಡ್ ಆಗುತ್ತದೆ, ಬದುಕಿನ ರೀತಿನೀತಿಗಳೆಲ್ಲವೂ ನಮಗೆ ಬೇಕಾಗಿಯೋ ಬೇಡದೆಯೋ ಪ್ರಿಡಿಫೈನ್ಡ್, ಮತ್ತು ಇಂಟರ್-ನ್ಯಾಶನಲ್ ಆಗಿಹೋಗುತ್ತವೆ. ಒಬ್ಬ ಶ್ರೀಮಂತನಿಗೂ ಮತ್ತೊಬ್ಬ ಶ್ರೀಮಂತನಿಗೂ ಬದುಕಿನ ರೀತಿಗಳಲ್ಲಾಗಲೀ, ನೀತಿಗಳಲ್ಲಾಗಲೀ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಉಡುಗೆ-ತೊಡುಗೆಗಳಲ್ಲಿ, ನೋವು-ನಲಿವುಗಳಲ್ಲಿ ಹೆಚ್ಚು ಭಿನ್ನತೆಯಿರುವುದಿಲ್ಲ. ಕಾಸ್ಮಾಪಾಲಿಟನ್ ಸಂಸ್ಕೃತಿಗೆ ಕಾಲಿಡುವ ಕಾರಣ, ಒಬ್ಬನಿಗೆ ಇನ್ನೊಬ್ಬನನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಕಷ್ಟವಾಗುವುದಿಲ್ಲ. ಈ ಜಗತ್ತಿನ ಸುತ್ತ ಕಥೆ ಹೆಣೆಯಹೊರಟಾಗ ನಾವು ಈವರೆಗೆ ನೋಡಿನೋಡಿ ಬೇಜಾರಾದ ಚಿತ್ರಗಳ ಹಾಗಿನವೇ ಮತ್ತೆ ಹುಟ್ಟಿಕೊಳ್ಳುತ್ತವೆ.

ಬರಿಯ thrill, action, epics, romance, emotionsಗಳಲ್ಲೇ ಕಾಲಕಳೆಯುವ ಪಾಶ್ಚಾತ್ಯ ಜಗತ್ತಿಗೆ ಈ ದೃಶ್ಯವೈವಿಧ್ಯಗಳು, ಇಲ್ಲಿನ ಬದುಕಿನ ಭಿನ್ನತೆಗಳು, ಹೋರಾಟಗಳು ಇಷ್ಟವಾಗುವುದರಲ್ಲಿ ಆಶ್ಚರ್ಯವಿಲ್ಲ. ಶುಭಂ ಹೇಳುವ ಮುಂಚೆ ಹೀರೋ-ಹೀರೋಯಿನ್ನು ಒಂದಾಗುವ ಅದೇ ಹಳೇ ಲವ್ವು, ಅದೇ ಕಥೆಗಳು, ಅದೇ ಜಡ್ಡುಗಟ್ಟಿದ ಮರಸುತ್ತೋ ಸಾಂಗುಗಳು, ಅದೇ ಅದೇ ಲೊಕೇಶನ್ನು, ಅದೇ ಆರ್ಟಿಸ್ಟು, ಅದೇ ಕ್ಯಾಮರಾ ವರ್ಕು, ಅದೇ ಎಡಿಟಿಂಗು ನೋಡಿನೋಡಿ ಬರಗೆಟ್ಟು ಬೇಜಾರಾಗಿದ್ದ ನಮಗೆಲ್ಲ, ಮುಂಗಾರುಮಳೆ ಹೊಸತನದ ಜಡಿಮಳೆ ಸುರಿಸಿತಲ್ಲ, ಅವಾಗ ನಾವೆಲ್ಲ ಅದನ್ನು ಮತ್ತೆ ಮತ್ತೆ ನೋಡಿ, ಸಿಕ್ಕವರಿಗೆಲ್ಲಾ ರೆಕಮೆಂಡ್ ಮಾಡಿ ಸೂಪರ್ ಹಿಟ್ ಮಾಡಿದ್ದೆವಲ್ಲ... ಪಾಶ್ಚಾತ್ಯ ಜಡ್ಜುಗಳಿಗೆ ಭಾರತೀಯ ಚಿತ್ರಗಳು ಇಷ್ಟವಾಗುವುದು ಇಷ್ಟೇ ಸಹಜವೇನೋ... ಅದಲ್ಲದೇ ಭಾರತದ ಬಡತನವನ್ನೇ ನೋಡಲು ಬಯಸುವ ಸೈಕಿಕ್-ಗಳು ಅವರಾಗಿರಲಿಕ್ಕಿಲ್ಲ. ಇದು ನನಗನಿಸಿದ್ದು.
------------
ನಂತರ ಯೋಚಿಸುವಾಗ, ಒಂದು ಸರ್ಕಾರ್-ಗೆ, ಒಂದು ತಾರೇ ಝಮೀಂ ಪರ್-ಗೆ, ಒಂದು ರಂಗ್ ದೇ ಬಸಂತೀಗೆ, ಒಂದು 1947-ಅರ್ಥ್-ಗೆ ಅಥವಾ ಒಂದ್ ಲಗಾನ್-ಗೆ ಸಿಗದ ಅವಾರ್ಡುಗಳು ಸ್ಲಂ ಡಾಗ್ ಚಿತ್ರಕ್ಕೆ ಹೇಗೆ ಬಂದವಪ್ಪಾ ಅಂತ ಯೋಚನೆ ಸಹಜವಾಗಿಯೇ ಆಯಿತು. ಖಂಡಿತವಾಗಿಯೂ ಭಾರತೀಯರೇ ನಿರ್ದೇಶಿಸಿದ ಹಲವಾರು ಚಿತ್ರಗಳು ಇದಕ್ಕಿಂತ ಎಷ್ಟೋ ಚೆನ್ನಾಗಿದ್ದವು. ಇನ್ನೂ ಹೆಚ್ಚು ಖುಷಿ ಕೊಟ್ಟಿದ್ದವು. ಹೆಚ್ಚು ಸಿಂಬಾಲಿಕ್ - ಹೆಚ್ಚು ಅರ್ಥಪೂರ್ಣವಾಗಿದ್ದವು. ಹೆಚ್ಚು ಯೋಚನೆಗೆ ಹಚ್ಚಿದ್ದವು. ಭಾರತೀಯ ವರ್ಣವೈವಿಧ್ಯದ ಜತೆಗೆ ಜಾಗತಿಕವೆನ್ನಬಹುದಾದ ಗುಣಮಟ್ಟವನ್ನೂ ಹೊಂದಿದ್ದವು. ರೆಹಮಾನ್ ಇದಕ್ಕಿಂತ ಉತ್ತಮ ಸಂಗೀತ ಕೊಟ್ಟ ಚಿತ್ರಗಳು ಇನ್ನೂ ಬೇಕಾದಷ್ಟಿವೆ. ಬಹುಶ: ಅಂತರ್ರಾಷ್ಟ್ರೀಯ ಪ್ರಶಸ್ತಿಗಳ ಮಾನದಂಡವೇನು ಅಂತ ಅರ್ಥವಾಗಬೇಕಾದರೆ  ಭಾರತದ ಹೊರಗಿದ್ದು ಚಿತ್ರ ನೋಡಬೇಕೇನೋ ಅಂತ ನನಗನಿಸಿದ್ದು ಮಾತ್ರ ಸುಳ್ಳಲ್ಲ.

Sunday, January 4, 2009

ಭ್ರಮೆಯ ಭೂತ ತೊಲಗಿದೆ...

ಮುಂದುವರಿದಿದೆ...


ಮುಂಬೈ ದಾಳಿಯ ಕುರಿತು ಓದುತ್ತ ಓದುತ್ತ ಅಂತರ್ಜಾಲದಲ್ಲಿ ಓಡಾಡುತ್ತಿರುವಾಗ ಎಲ್ಲೋ ಒಂದು ಕಡೆ ಮುಂಬೈ ದಾಳಿಯನ್ನು ಪಾರ್ಲಿಮೆಂಟ್ ದಾಳಿಗೆ ಹೋಲಿಸಿ ಬರೆದಿದ್ದಿದ್ದು, ಮತ್ತು ಅದಕ್ಕೆ ಅರುಂಧತಿ ರಾಯ್ ಲೇಖನದ ಸಹಾಯ ಕೂಡ ತೆಗೆದುಕೊಂಡಿದ್ದು ಕಾಣಿಸಿತು. ಅರುಂಧತಿ ರಾಯ್ (THE GREATER COMMON GOOD ಲೇಖನಕ್ಕಾಗಿ) ನಾ ಕಂಡ ಧೈರ್ಯವಂತ ಲೇಖಕಿಯರಲ್ಲೊಬ್ಬರು ಆಕೆ... ಗಮನವಿಟ್ಟು ಆಕೆಯ ಲೇಖನ ಓದಿದೆ... ಈಗಾಗಲೇ ಅರ್ಧ ಕೆಟ್ಟಿದ್ದ ತಲೆ, ಸಂಪೂರ್ಣ ಕೆಟ್ಟು ಹೋಯಿತು.

ಅಫ್ಝಲ್ ಗುರುಗೆ ಗಲ್ಲು ಯಾಕಿಲ್ಲ?

ಮುತಾಲಿಕ್ ಅಥವಾ ತೊಗಾಡಿಯಾ ಅಥವಾ ಇನ್ಯಾರೋ ಅಫ್ಝಲ್ ಗುರುವನ್ನು ಗಲ್ಲಿಗೇರಿಸದ ಸರಕಾರದ ಮೇಲೆ ಕೆಂಡಕಾರುವಾಗ ನಮಗೆಲ್ಲ ಹೌದುಹೌದೆನ್ನಿಸಿ ರಕ್ತ ಕುದಿಯುತ್ತದೆ. ಸುಳ್ಯಾಕೆ ಹೇಳಲಿ, ನನಗೂ ರಾಷ್ಟ್ರದ ಹೃದಯವನ್ನೇ ಆಕ್ರಮಿಸಿದ ಒಬ್ಬ ಅಪರಾಧಿಯನ್ನು ಗಲ್ಲಿಗೇರಿಸದಷ್ಟು ಹೀನಾಯವಾಗಿ ಹೋಯಿತಾ ನಮ್ಮ ದೇಶ ಅನಿಸಿ ಬೇಸರವಾಗಿತ್ತು. ನಮ್ಮಲ್ಲಿ ತುಂಬಾ ಜನ, ಅಫ್ಝಲ್ ಗುರು ಭಯೋತ್ಪಾದಕನೆಂದು ಸಾಧಿತವಾಗಿದೆ ಅಂತಲೇ ಅಂದುಕೊಂಡಿರುತ್ತೇವೆ, ಆದರೆ - ವಿಷಯ ಯಾವುದೇ ಇರಲಿ, ಅದನ್ನು ಮನಸ್ಸು ಮುಟ್ಟುವಂತೆ ಶಕ್ತಿಯುತವಾಗಿ ಬರೆಯುವುದು ರಾಯ್-ಗೆ ಚೆನ್ನಾಗಿ ಗೊತ್ತು ಅನ್ನುವುದು ನಿಜವಾದರೂ, ಅದರಲ್ಲಿರುವ ಸತ್ಯಗಳು ಸತ್ಯಗಳೇ ತಾನೇ. ಅರುಂಧತಿ ರಾಯ್ ಬರೆದುದು ಓದಿದಾಗ ನನ್ನ ಭ್ರಮೆ ಸ್ವಲ್ಪ ಮಟ್ಟಿಗೆ ತೊಲಗಿದ್ದಂತೂ ಸತ್ಯ. ನೀವೂ ಓದಿ ನೋಡಿ...

ಆಕೆ ಸೂಚಿಸಿರುವ ಪುಸ್ತಕ, Nirmalangshu Mukherji ಬರೆದಿರುವ December 13th: Terror Over Democracy ನಾನಿನ್ನೂ ಓದಬೇಕಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿ ಸಿಕ್ಕಿದರೆ ಅದನ್ನೂ ನೋಡಬೇಕಿದೆ. ಹಾಗೇ ಅಫ್ಝಲ್ ಗುರುವಿನ ಹೇಳಿಕೆ ಕೂಡ ನೋಡಬೇಕಿದೆ. ಆದರೆ ಮೇಲ್ನೋಟಕ್ಕೆ ಅನಿಸಿದ್ದು - ಇಂದಿಗೂ ಅಫ್ಝಲ್ ಗುರುವನ್ನು ಯಾರು ಕಳುಹಿಸಿದರು, ಯಾಕೆ ಕಳುಹಿಸಿದರು, ಎಂಬುದನ್ನು ನಮ್ಮ ವ್ಯವಸ್ಥೆ ಪತ್ತೆಹಚ್ಚಲು ಸಾಧ್ಯವಾಗದೆಯೇ ವಿಚಾರಣೆ ಮುಗಿದಿರುವುದು ನಮ್ಮ ದೇಶದ ದುರಂತ. ಸಿಪಿಸಿ 313ನೇ ವಿಭಾಗದಡಿ ಆತ ನೀಡಿದ ಹೇಳಿಕೆಯನ್ನು ಯಾಕೆ ಸುಪ್ರೀಂಕೋರ್ಟ್ ಪರಿಗಣಿಸಲಿಲ್ಲ ಎಂಬುದು ಕೂಡ ಉತ್ತರ ಸಿಗದ ಪ್ರಶ್ನೆ. (ಯಾರಾದರೂ ಕಾನೂನು ಬಲ್ಲವರು ಈ ವಿಚಾರಗಳ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಂಡಿದ್ದಲ್ಲಿ, ಅಥವಾ ಅರುಂಧತಿ ರಾಯ್ ಲೇಖನಕ್ಕೆ ಏನಾದರೂ ಪ್ರತಿವಾದಗಳು ಇದ್ದಲ್ಲಿ ತಿಳಿಸಿ, ನಾವೂ ತಿಳಿದುಕೊಳ್ಳುತ್ತೇವೆ...) ಇವೆಲ್ಲ ಗೊತ್ತಾಗದೆ ಏನೇ ಮಾಡಿದರೂ, ನಮ್ಮ ಕಡೆ ಮುಳ್ಳಿಟ್ಟು ಮದ್ದು ಉಜ್ಜುವುದು ಅಂತಾರಲ್ಲ, ಹಾಗಾಗುತ್ತದೆ - ಅಷ್ಟೆ.

ಕರ್ನಾಟಕದ ಚುನಾವಣೆಗೆ ಬಿಜೆಪಿ ಬಿಡುಗಡೆಗೊಳಿಸಿದ, ಬಿಜೆಪಿಯೇ ಪರಿಹಾರ ಸಿರೀಸ್-ನ ಜಾಹೀರಾತುಗಳಲ್ಲಿ ಇನ್ನೂ ಅಫ್ಝಲ್ ಗುರುವಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಿಲ್ಲದ ಕಾಂಗ್ರೆಸ್ ಸರಕಾರವನ್ನು ಹೀಗಳೆಯಲಾಗಿತ್ತು. ದೇಶದ ಯಾವುದೋ ಮೂಲೆಯಲ್ಲಿದ್ದುಕೊಂಡು ಮಾಹಿತಿಗೆ ಮಾಧ್ಯಮವನ್ನೇ ಅವಲಂಬಿಸುವ ನಮ್ಮ ಹಾಗೆಯೇ, ದೇಶದೆಲ್ಲೆಡೆ ಇರುವ ಬಿಜೆಪಿ ನಾಯಕರು ಕೂಡ ಅಫ್ಝಲ್ ಗುರುವಿನ TRIAL ಬಗ್ಗೆ ಹೆಚ್ಚೇನೂ ತಿಳಿದುಕೊಂಡಿಲ್ಲವೋ ಏನೋ... ಅಥವಾ ಅಷ್ಟೊಂದು ಸೂಕ್ಷ್ಮವಾಗಿ ನೋಡುವ ಅವಶ್ಯಕತೆಯಿಲ್ಲ ಎನ್ನುವ ಅಸಡ್ಡೆಯೋ... ಅಥವಾ ಇನ್ನೇನೋ.... ?

ಅಷ್ಟು ಮಾತ್ರವಲ್ಲ. ಈಗ ಈ ಕೇಸ್ ಮೇಲೆ ಏನೇ ಹೇಳಿದರೂ ನ್ಯಾಯಾಂಗ ನಿಂದನೆಯಾಗುವ ಭಯಕ್ಕೆ ಸುಮ್ಮನಿದ್ದರೂ ಇರಬಹುದೇನೋ. ಹಾಗೇ, ಅಫ್ಝಲ್ ಗುರುವನ್ನು ಗಲ್ಲಿಗೇರಿಸಲು ಸರಕಾರ ಮೀನ-ಮೇಷ ಎಣಿಸುತ್ತಿರುವುದಕ್ಕೆ ಆತನ ವಿಚಾರಣೆಯೇ ಸರಿಯಾದ ರೀತಿಯಲ್ಲಿ ಆಗಿಲ್ಲ ಎಂಬುದು ಕಾರಣವಿರಬಹುದೇನೋ, ಆತನನ್ನು ಗಲ್ಲಿಗೇರಿಸಿದರೂ ಆತನ ಹಿಂದಿನ ಸೂತ್ರಧಾರಿಗಳು ಯಾರೆಂಬುದು ತಿಳಿಯುವುದಿಲ್ಲ ಎಂಬ ಸತ್ಯ ಎಲ್ಲೋ ಒಂದು ಕಡೆ ಕಾಂಗ್ರೆಸ್ ಸರಕಾರಕ್ಕೆ ಚುಚ್ಚುತ್ತಿರಬಹುದೇನೋ, ಅಂತ ನನಗನಿಸಿತು. (ಇದಕ್ಕೆ ಸರಬ್ಜಿತ್ ಕೂಡ ಕಾರಣ ಅನ್ನುವ ಹಳೆಯ ವಾದ ಕೂಡ ಇದೆ)

ಅರುಂಧತಿ ರಾಯ್ ಮಾತ್ರ ಇಂದಿಗೂ ತನ್ನ ಈ ಲೇಖನಕ್ಕಾಗಿ ನ್ಯಾಯಾಂಗ ನಿಂದನೆಯ ಆರೋಪ ಹೊತ್ತಿದ್ದಾರೆ. ಆಕೆ ನರ್ಮದಾ ಬಚಾವೋ ಆಂದೋಲನವನ್ನು ಬೆಂಬಲಿಸಿ ಬರೆದ, ನಿರ್ವಸಿತರಿಗೆ ಸರಿಯಾದ ವ್ಯವಸ್ಥೆಯಾಗಿರದಿದ್ದರೂ ಸರ್ದಾರ್ ಸರೋವರ್ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಅನುಮತಿಯಿತ್ತ ಸುಪ್ರೀಂಕೋರ್ಟಿನ ತೀರ್ಮಾನವನ್ನು ಪ್ರಶ್ನಿಸಿದ THE GREATER COMMON GOOD ಕೂಡ ನ್ಯಾಯಾಂಗ ನಿಂದನೆಯ ಆರೋಪ ಎದುರಿಸಿತ್ತು.

ಒಂದಿಷ್ಟು ಸಂಶಯಗಳು...

ಇಷ್ಟೆಲ್ಲ ಬರೆದ ಮೇಲೆ, ನನಗೆ ಕೆಲವು ಸಂಶಯಗಳು ಉಳಿದಿವೆ, ಅವುಗಳನ್ನೂ ಹಂಚಿಕೊಂಡುಬಿಡುತ್ತೇನೆ... ಚುನಾವಣೆಯಲ್ಲಿ ಎರಡನೇ ಹಂತದ ಮತದಾನ - ಉತ್ತರಕರ್ನಾಟಕ ಮತ ಹಾಕುವ ಮೊದಲಿನ ಆದಿತ್ಯವಾರ ಹುಬ್ಬಳ್ಳಿ ಕೋರ್ಟಲ್ಲಿ ಕೂಡ ಸ್ಫೋಟ ಆಗಿತ್ತು. ಧಾರವಾಡದಲ್ಲಿ ಜೀವಂತ ಬಾಂಬುಗಳು ಸಿಕ್ಕಿದ್ದವು. ಇವೆಲ್ಲ ಯಾರ ಕೃತ್ಯ ಅಂತ ಇಲ್ಲಿವರೆಗೆ ಪತ್ತೆಯಾಗಿಲ್ಲ. ನಮ್ಮ ಬೆಂಗಳೂರಿನಲ್ಲಿ ಐದಾರು ನಾಟಿ ಬಾಂಬ್ ಸಿಡಿಸಿ ಒಬ್ಬರನ್ನು ಕೊಂದು ಡ್ರೈ ರನ್ ಮಾಡಿದ್ದು ಯಾರು ಅಂತ ಇಷ್ಟು ದಿನವಾದರೂ ಪತ್ತೆಯಾಗಿಲ್ಲ. ಸಾಕ್ಷ್ಯ ಸಿಗದಿದ್ದರೆ ಏನೂ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇರುವ ನಮ್ಮ ದೇಶದಲ್ಲಿ, ಮುಂಬೈ ಭಯೋತ್ಪಾದಕ ಕೃತ್ಯದ ಪ್ರತಿ ಸಾಕ್ಷ್ಯವೂ ಪಾಕ್ ಕಡೆ ನೇರವಾಗಿ ಬೆಟ್ಟುಮಾಡಿ ತೋರಿಸುತ್ತಿದೆ. ಮುಂಬೈಯ ಇಂಚಿಂಚು ತಿಳಿದುಕೊಂಡು ಅದ್ಭುತವಾಗಿ ಪ್ಲಾನ್ ಮಾಡಿ, ಜಿಪಿಎಸ್, ಸ್ಯಾಟಲೈಟ್ ಫೋನ್ ಇತ್ಯಾದಿ ಉಪಯೋಗಿಸಿಕೊಂಡು ಹೈಟೆಕ್ ವಿಧಾನದಲ್ಲಿ ಭಯೋತ್ಪಾದನೆಯ ಕೆಲಸ ಮಾಡಿಸುವ ಅಂತರ್ರಾಷ್ಟ್ರೀಯ ಉಗ್ರರು - ನಮ್ಮ ನಾಟಿ ಉಗ್ರರಿಗಿಂತ ದಡ್ಡರಾ? ಅದೂ ಸಿಕ್ಕಿಸಿಕ್ಕಿದಲ್ಲಿ ಸಾಕ್ಷ್ಯ ಬಿಟ್ಟು ಹೋಗುವಷ್ಟು? ತಾವು ಉಪಯೋಗಿಸಿದ ಫೋನನ್ನು, ಸಿಮ್ ಕಾರ್ಡುಗಳನ್ನು ಯಾರಾದರೂ ಪೊಲೀಸರಿಗೆ ಸಾಕ್ಷ್ಯವಾಗಿ ಸಿಗುವ ಹಾಗೆ ಬಿಟ್ಟುಹೋಗುತ್ತಾರಾ? ಅಥವಾ, ಇಂತಹ ಕೃತ್ಯ ನಡೆಸಿ ಸಿಕ್ಕಿಬಿದ್ದರೆ ಏನಾಗುತ್ತದೆಂದು ಗೊತ್ತಿದ್ದು ಪೊಲೀಸರಿಗೆ ಸಿಕ್ಕಿಬೀಳುವ ಪರಿಸ್ಥಿತಿಯಲ್ಲಿ ತಮ್ಮನ್ನು ಇಟ್ಟುಕೊಳ್ಳುತ್ತಾರಾ? ಇವೆಲ್ಲ ಪ್ರಜ್ಞಾಪೂರ್ವಕವಾಗಿ ಯೋಚನೆಮಾಡುವ ಯಾರನ್ನೇ ಆದರೂ ಕಾಡುವ ಪ್ರಶ್ನೆಗಳು ಅನ್ನುವುದು ನಿಜ ತಾನೇ ?

ಉಗ್ರವಾದದ ವಿಚಾರದಲ್ಲಿ ಭಾರತಕ್ಕೆ ಬೆಂಬಲ ನೀಡುತ್ತಿರುವ ಅಮೆರಿಕಾ, ಬ್ರಿಟನ್ ಇತ್ಯಾದಿ ರಾಷ್ಟ್ರಗಳಿಗೆ ಎದುರಾಗಿ ನಿಂತರೆ ಆಗುವ ಪರಿಣಾಮಗಳು ಗೊತ್ತಿದ್ದೂ ಪಾಕ್, ಯಾಕೆ ಅಷ್ಟು ಧೃಢವಾಗಿ ಭಾರತಕ್ಕೆ ಸಾಕ್ಷ್ಯ ಸಾಲದು, ಸರಿಯಾದ ಸಾಕ್ಷ್ಯ ತೋರಿಸಿ ಅನ್ನುತ್ತಿದೆ? ಅದರ ಪರವಾದ ಯಾವ ಸತ್ಯ ಅದಕ್ಕೆ ಅಷ್ಟು ಶಕ್ತಿ ಕೊಟ್ಟಿದೆ? ಮೊದಮೊದಲು ಪಾಕ್ ನಡೆಸಿದ ಕೃತ್ಯ ಎಂದು ಪಾಕ್ ಮೇಲೆ ನೇರವಾಗಿ ವಾಗ್ದಾಳಿ ನಡೆಸಿದ ಪ್ರಣಬ್ ಮುಖರ್ಜಿ, ನಂತರ ಪಾಕ್ ನೆಲದಲ್ಲಿನ ಉಗ್ರರು ನಡೆಸಿದ ಕೃತ್ಯ ಅನ್ನಲು ಕಾರಣವೇನು? ನಮ್ಮಲ್ಲಿ ಆದ ಉಗ್ರರ ಕೃತ್ಯಕ್ಕೆ ಅಮೆರಿಕಾದಿಂದ, ಬ್ರಿಟನ್-ನಿಂದ ಸಾಕ್ಷ್ಯ ಹೇಗೆ ಸಿಗುತ್ತಿದೆ? ಅಷ್ಟಕ್ಕೂ, ಭಾರತ ಸರಕಾರ ಇಲ್ಲಿವರೆಗೆ ತೋರಿಸಿದ ಸಾಕ್ಷ್ಯಗಳಲ್ಲಿ ಯಾವುದು ತಾನೇ ಬಂಧಿತ ಉಗ್ರ ಪಾಕ್-ನವ ಅಂತ UNDISPUTABLE ಆಗಿ ಹೇಳುತ್ತಿದೆ? ಇಲ್ಲಿವರೆಗೆ ಭಾರತ ಇತರ ರಾಷ್ಟ್ರಗಳ ಜತೆಗೆ ಸಾಕ್ಷ್ಯ ಹಂಚಿಕೊಳ್ಳದಿದ್ದುದರ ಗುಟ್ಟೇನು? (ಟೀವಿ ಚಾನೆಲ್ಲುಗಳು ಮಾಡಿದ ಸ್ಟಿಂಗ್ ಆಪರೇಶನ್ ಅಥವಾ ಮಾಧ್ಯಮ ವರದಿಗಳು ಸಾಕ್ಷ್ಯವೆಂದು ಒಪ್ಪಿಕೊಳ್ಳಲು ಯ:ಕಶ್ಚಿತ್ ನಾನೇ ಸಿದ್ಧಳಿಲ್ಲ, ಇನ್ನು ಪಾಕ್ ಹೇಗೆ ಒಪ್ಪಿಕೊಳ್ಳುತ್ತದೆ?) ಇವಕ್ಕೆಲ್ಲ ಸರಿಯಾದ ಉತ್ತರಗಳು ಇಲ್ಲಿವರೆಗೆ ಸಿಕ್ಕಿಲ್ಲ ನನಗೆ. ಇವಕ್ಕೆಲ್ಲ ಸರಿಯಾದ ಉತ್ತರಗಳು ಸಿಗುವ ವರೆಗೆ conspiracy theoryಗಳ ಪ್ರಭಾವ ನನ್ನ ತಲೆಯಿಂದಲಂತೂ ಹೋಗುವುದಿಲ್ಲ.

ಇಂದು.....

ನಾ ಬರೆದಿದ್ದರ ಸತ್ಯಾಸತ್ಯತೆ ಪರಿಶೀಲಿಸಿ, ನಂಬಲಿಕ್ಕೆ ಇಷ್ಟವಿದ್ದವರು ನಂಬಬಹುದು, ಇಷ್ಟವಿಲ್ಲದವರು ನಂಬದಿರಬಹುದು, ಅಥವಾ ಇದಕ್ಕೆ ವಿರುದ್ಧವಾದ ಸಂಶೋಧನೆ, ಯೋಚನಾಸರಣಿ ಇತ್ಯಾದಿಗಳ ಮೂಲಕ ನನಗನಿಸಿದ್ದು ತಪ್ಪು ಅಂತ ಸಾಧಿಸಲು ಕೂಡ ಹೊರಡಬಹುದು. ಮೊಸ್ಸಾಡ್ ಮತ್ತು ಇಸ್ರೇಲ್ ಕುರಿತ ಆಪಾದನೆಗಳು ಊಹಾಪೋಹಗಳು ಅಥವಾ conspiracy theory ಕೂಡ ಆಗಿಬಹುದಾದ ಸಾಧ್ಯತೆಯನ್ನೂ ನಾನು ಅಲ್ಲಗಳೆಯುವುದಿಲ್ಲ. ಆದರೆ, ಎಲ್ಲೆಲ್ಲೋ ಅಲೆದಾಡಿ ಜಗತ್ತಿನ ಯಾವ ಭಾಗದಲ್ಲಿ ಏನು ಚರ್ಚೆ ನಡೆಯುತ್ತಿದೆ ಅಂತ ತಿಳಿದುಕೊಂಡದ್ದರಿಂದ ನನ್ನ ಜಗತ್ತು ವಿಶಾಲವಾಗಿದೆ. ನಾನು ತಿಳಿದುಕೊಂಡುದೇ ಸತ್ಯ ಅಂದುಕೊಂಡಿದ್ದೆ ನಾನು, ಅದು ಸುಳ್ಳಾಗಿದೆ, ಭ್ರಮೆಯ ಗುಳ್ಳೆಗಳೆಲ್ಲ ಒಡೆದುಹೋಗಿವೆ.

ಇವೆಲ್ಲಾ ಆದ ಮೇಲೆ ಇಸ್ರೇಲ್ ಮತ್ತೆ ಗಾಜಾ ಪಟ್ಟಿಯ ಮೇಲೆ ದಾಳಿ ಆರಂಭಿಸಿದೆ, ದಾಳಿಯಲ್ಲಿ ಸತ್ತ ನಾಗರಿಕರ ಸಂಖ್ಯೆ ಮುಂಬೈ ದಾಳಿಯಲ್ಲಿ ಸತ್ತವರಿಗಿಂತ ಮೂರು ಪಟ್ಟಿನಷ್ಟು ಹೆಚ್ಚಿದೆ. ಈ ನಡುವೆ ಹೊಟ್ಟೆಪಾಡಿಗಾಗಿ ಬಾಂಗ್ಲಾದಿಂದ ಅಕ್ರಮವಾಗಿ ವಲಸೆ ಹೊರಟಿದ್ದ 400ಕ್ಕೂ ಹೆಚ್ಚು ಜನರನ್ನು ಮೋಸದಿಂದ ಇಂಧನವಿಲ್ಲದ ಬೋಟುಗಳಲ್ಲಿ ಸಮುದ್ರ ಮಧ್ಯದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ನಡೆದಿದೆ, 100ರಷ್ಟು ಜನರನ್ನು ಭಾರತೀಯ ನೌಕಾಪಡೆ ರಕ್ಷಿಸಿತು, ಉಳಿದ 300 ಜನರ ಪತ್ತೆಯಿಲ್ಲ. ಈ ಎರಡೂ ಘಟನೆಗಳು ಮುಂಬೈ ಭಯೋತ್ಪಾದನೆ ಹುಟ್ಟಿಸಿದ ಗಾಬರಿ ಜಗತ್ತಿನಲ್ಲಿ ಹುಟ್ಟಿಸಿಯೇ ಇಲ್ಲ. ಆಲ್ಲಿ ಸತ್ತ ಜೀವಗಳಿಗೆ ಜಗತ್ತು ಮುಂಬೈ ದಾಳಿಯಲ್ಲಿ ಬಲಿಯಾದವರಿಗೆ ಕೊಟ್ಟ ಬೆಲೆ ಕೊಟ್ಟಿಲ್ಲ.

ನನಗೆ ಸಿಕ್ಕಿದ ಇಸ್ರೇಲಿ ಭೂತದ ಕಥೆ ಎಷ್ಟು ಸತ್ಯವೋ ಸುಳ್ಳೋ ಕಾಲವೇ ಹೇಳಬೇಕು. ಆದರೆ, ಧರ್ಮದ ಆಧಾರದಲ್ಲಿಯೇ ಯೋಚಿಸುವ ಬಹಳಷ್ಟು ಜನರಿಗೆ ಈ ಎಲ್ಲಾ ಘಟನೆಗಳು, ರಾಷ್ಟ್ರ-ರಾಷ್ಟ್ರಗಳ ನಡುವಿನ ಸಮೀಕರಣಗಳು, ರಾಜಕೀಯ ಪಕ್ಷಗಳ ಜಾಣ ಕೃತ್ಯಗಳು ಈಗಲಾದರೂ ಕಣ್ಣು ತೆರೆಸಬೇಕು. ಮತ್ತು ಸದ್ಯ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಜಗತ್ತು ಎಲ್ಲಿ ಸಾಗುತ್ತಿದೆ ಎಂಬುದೂ ಅರಿವಾಗಬೇಕು. ಯುದ್ಧ-ಯುದ್ಧವೆಂದು ಕುಣಿಯುತ್ತಿರುವವರು ಯಾರೆಂದು ಕಣ್ಣುಬಿಟ್ಟು ನೋಡಿದರೆ ಸತ್ಯ ಗೊತ್ತಾಗುತ್ತದೆ. ಯುದ್ಧದ ಮಾತು, ಹಾಗೂ ಅಮೆರಿಕಾ-ಫ್ರಾನ್ಸ್ ಮತ್ತಿತರ ದೇಶಗಳ ಜತೆಗಿನ ನಾಗರಿಕ ಅಣು ಒಪ್ಪಂದದ ಭರದಲ್ಲಿ ಇಂಡೋ-ಇರಾನ್ ಗ್ಯಾಸ್ ಪೈಪ್ ಲೈನ್ ಮಾತುಕತೆಯನ್ನು ಮುಂದೆ ತೆಗೆದುಕೊಂಡು ಹೋಗುವುದನ್ನು ಮರೆತೇ ಬಿಟ್ಟಿತು ಭಾರತ... ದೂರದಲ್ಲಿರುವ ನೆಂಟರನ್ನು ಮೆಚ್ಚಿಸಲು ಪಕ್ಕದ ಮನೆಯವರನ್ನು ದೂರವಿಟ್ಟ ತಪ್ಪಿಗೆ ಮುಂದೆಂದೋ ಒಂದು ದಿನ ಪಶ್ಚಾತ್ತಾಪ ಪಡುವ ದಿನ ಬರಬಹುದು. ಯಾರಿಗೆ ಯುದ್ಧದಿಂದ ಉಪಕಾರವೋ, ಅವರು ನಾವಲ್ಲ - ಅಂದರೆ ಭಾರತವಲ್ಲ, ಪಾಕಿಸ್ತಾನವೂ ಅಲ್ಲ. ಶಾಂತಿಗಿರುವ ಶಕ್ತಿ ಯುದ್ಧಕ್ಕಿಲ್ಲ ಎಂಬುದು ನಮಗೆಲ್ಲ ಎಷ್ಟು ಬೇಗ ಅರ್ಥವಾಗುತ್ತದೋ ಅಷ್ಟು ಎರಡೂ ರಾಷ್ಟ್ರಗಳಿಗೆ ಒಳ್ಳೆಯದಾಗುತ್ತದೆ. ಮತ್ತು ನಮ್ಮೊಳಗಿದ್ದುಕೊಂಡು ಪಾಕ್ ನಮ್ಮ ಬದ್ಧ ವೈರಿಯೆಂಬಂತೆ ಆಡುತ್ತ ನಿಜವಾದ ಹಿತಶತ್ರುಗಳ ಬಗ್ಗೆ ಜಾಣಕುರುಡರಾಗುವ ಮಹಾನುಭಾವರುಗಳಿಗೂ ಒಳ್ಳೆಯದಾಗುತ್ತದೆ.

ಉಗ್ರರು ಯಾರೇ ಇರಲಿ, ಅವರು ತಮ್ಮ ಕೃತಿಗಳ ಮೂಲಕ ಕೊಲ್ಲುವುದು ಯಾವಾಗಲೂ ಮುಗ್ಧರನ್ನು. ಇಬ್ಬರ ಜಗಳ ಮೂರನೆಯವನಿಗೆ ಲಾಭ - ಸರಳ ಸಿದ್ಧಾಂತ, ಇತರ ಧರ್ಮಗಳ ರಾಷ್ಟ್ರಗಳು ತಮ್ಮ ಹಿತಾಸಕ್ತಿಗೋಸ್ಕರ ಹಿಂದುಗಳಲ್ಲಿ ಅಡಕವಾಗಿರುವ ಮುಸ್ಲಿಂ ವಿರೋಧಿ ಭಾವನೆಯ ದುರುಪಯೋಗವನ್ನು ಪಡೆದುಕೊಳ್ಳುತ್ತಿರುವುದು ಅರ್ಥವಾದಾಗಲಾದರೂ ಹಿಂದು ಹಿಂದು ಎಂದು ಸಾಯುವವರು ಬದಲಾಗಬಹುದು ಅಂತ ಆಶಿಸಲೇ? ಒಂದು ಕಡೆ ಕಡೆ ಹಿಂದುತ್ವವೆಂದರೆ ವೇ ಆಫ್ ಲೈಫ್ ಅಂತ ಭಾಷಣ ಮಾಡುತ್ತ, ಇನ್ನೊಂದು ಕಡೆ ಚರ್ಚ್-ಗಳ ಮೇಲೆ ದಾಳಿ ನಡೆಸುತ್ತ so-called ಹಿಂದುತ್ವ ಮೆರೆಯುವ FANATICಗಳಿಗೆ, ಇನ್ನೊಂದು ಕಡೆ CHRISTIAN AGGRESSION ಬಗ್ಗೆ ದೊಡ್ಡದೊಡ್ಡದಾಗಿ ಮಾತಾಡುತ್ತ ಚರಿತ್ರೆಯ ಭಾರವನ್ನೆಲ್ಲ ಇಂದಿನ ಜನತೆಯ ಮೇಲೆ ಹಾಕಿ ನಾಳೆಗಳನ್ನು ಹಾಳುಮಾಡುವ SO-CALLED ಇತಿಹಾಸಕಾರರಿಗೆ ಅಥವಾ ಬುದ್ಧಿಜೀವಿಗಳಿಗೆ, ಮತ್ತು ಅದಕ್ಕೆ ಅಗತ್ಯವಿಲ್ಲದಷ್ಟು ಪ್ರಚಾರ ಕೊಟ್ಟು ಮನಸುಗಳನ್ನು ಕದಡಿದ ಮಾಧ್ಯಮಕ್ಕೆ ಈಗಲಾದರೂ ಜ್ಞಾನೋದಯವಾಗಬೇಕು.

ನಿನ್ನೆಯ ಕರಿನೆರಳುಗಳು ನಾಳೆಗಳನ್ನು ಹಾಳುಗೆಡವದಿರಲಿ...

ಒಂದು ಕಾಲದಲ್ಲಿ, ಮಂದಿರವಲ್ಲೇ ಕಟ್ಟುವೆವು ಅಂದವರ ಹಾಡಿಗೆ ದನಿಗೂಡಿಸಿದವರಲ್ಲಿ ನಾನೂ ಇದ್ದೆ. ಆಗ ತುಂಬಾ ಚಿಕ್ಕವಳಿದ್ದೆ. ಆರ್ ಎಸ್ ಎಸ್-ನವರಿಂದ ಬದುಕಿನಲ್ಲಿ ಶಿಸ್ತು, ಕರ್ತವ್ಯಪರತೆ, ದೇಶಪ್ರೇಮ ಮೈಗೂಡಿಸಿಕೊಂಡವರು ನಾವು. ನಮ್ಮನೆಯಲ್ಲಿ ಇವತ್ತಿಗೂ ಬಿಜೆಪಿಗೇ ಓಟು. ಒಂದಾನೊಂದು ಕಾಲದಲ್ಲಿ ನಾನೇ ಅನ್ನುತ್ತಿದ್ದೆ, ಸೇರಿದರೆ ಬಿಜೆಪಿ ಸೇರ್ತೇನೆ, ಬಿಜೆಪಿಯಿಂದಲೇ ಓಟಿಗೆ ನಿಲ್ತೇನೆ ಅಂತ... ಆದರೆ, ಈಗ ಅದೆಲ್ಲಾ ಹುಚ್ಚೂ ಬಿಟ್ಟುಹೋಗಿದೆ :-) ಸತ್ಯದ ವಿವಿಧ ಮಜಲುಗಳನ್ನು ಅರಿತುಕೊಳ್ಳುತ್ತ ಹೋದಂತೆ , ಕಾಲ ತನ್ನ ಹೆಜ್ಜೆಗಳನ್ನು ಹಾಕುತ್ತ ಹೋಗುವಾಗ ತಂದ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳುತ್ತ ಹೋದಂತೆ, ನನಗಿದ್ದ ಭ್ರಮೆಗಳು ತೊಲಗಿವೆ.

ಭಯೋತ್ಪಾದನೆ ಇಂದು ಚುನಾವಣಾವಿಷಯವಾಗಿ ಉಳಿದಿಲ್ಲ. ಈಗ ಅದು ನಮ್ಮಲ್ಲಿ ಪ್ರತಿಯೊಬ್ಬರ ಅಸ್ತಿತ್ವದ ಪ್ರಶ್ನೆ, ಸರಿ-ತಪ್ಪಿನ ನಡುವಿನ ತೂಗಾಟದ ಪ್ರಶ್ನೆ, ನಿನ್ನೆಗಳ ನೆರಳಿನಲ್ಲಿ ಇಂದು ಎಸಗುವ ಕೃತ್ಯಗಳ ಮೂಲಕ, ನಾಳೆಗಳನ್ನು ನಾಶಪಡಿಸಹೊರಟ ಪಿಡುಗು. ಇದು ಎಲ್ಲಾ ಜಾತಿ-ಮತಗಳನ್ನು ಮೀರಿದ ಸಾರ್ವತ್ರಿಕ ಸಮಸ್ಯೆ. ಇದನ್ನು ಹೇಳಹೊರಟವರು ಮೊದಮೊದಲು ವಿರೋಧ ಎದುರಿಸಿಯೇ ಎದುರಿಸುತ್ತಾರೆ, ಯಾಕೆಂದರೆ ನಮ್ಮ ಕೆಟ್ಟತನವನ್ನು ಒಪ್ಪಿಕೊಳ್ಳಲು ನಮಗೆ ಸಮಯ ಬೇಕು. ಕೆಲವೊಮ್ಮೆ ಬಹಳ ಸಮಯ ಕಳೆದ ನಂತರವೂ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿರಬಹುದು, ಅಥವಾ ಒಪ್ಪಿಕೊಳ್ಳುವುದು ಬೇಕಿಲ್ಲವಿರಬಹುದು. ಭಯೋತ್ಪಾದನೆ ನಿಗ್ರಹವಾಗಬೇಕು ಎಂದು ಹೋರಾಡುವವರೆಲ್ಲರೂ ಈ ಬೇಸಿಕ್ ಸತ್ಯವನ್ನು ಒಪ್ಪಿಕೊಂಡಾಗ ಮಾತ್ರ ಹೋರಾಟ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯ. ಈನಿಟ್ಟಿನಲ್ಲಿ ಯೋಚಿಸುವಾಗ, ನಮ್ಮ ರಾಜ್ಯದಲ್ಲಿ ಹೀಗಾದರೆ ಎಷ್ಟು ಚೆನ್ನ ಅಂತ ಮನಸು ಲೆಕ್ಕ ಹಾಕುತ್ತದೆ...

1) ಒಂದಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಲ್ಲಿ, ಯುವಜನತೆಗೆ ಉದ್ಯೋಗಗಳು ಕಲ್ಪಿಸಿ ಕೊಟ್ಟಲ್ಲಿ, ಅವರ ವಿಚಾರಧಾರೆಗಳು ಸರಿದಾರಿಯಲ್ಲಿ ಸಾಗುವಂತೆ ಮಾಡಿದಲ್ಲಿ, ಮುಂದೆ ಕೈಯಲ್ಲಿ ಕೋವಿ ಹಿಡಿದು ಭಯೋತ್ಪಾದಕರಾಗಬಹುದಾದ ಯುವಜನತೆ ಹಾದಿ ತಪ್ಪುವ ಬದಲು ತಮ್ಮ ಬದುಕಿನಲ್ಲಿ ತಾವು ವ್ಯಸ್ತರಾಗಬಹುದಲ್ಲವೇ?

2) ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯವಾಗಿಸುತ್ತೇವೆಂದು ಪ್ರಾಥಮಿಕ ಶಿಕ್ಷಣ ಸಚಿವರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಅದರ ಜತೆಗೆ, ನಮ್ಮ ರಾಷ್ಟ್ರದ ಪ್ರತಿ ಪ್ರಜೆಗೂ ಗೊತ್ತಿರಬೇಕಾದ ಪ್ರತಿಜ್ಞೆ, ಮತ್ತು ರಾಷ್ಟ್ರೀಯ ಭಾವೈಕ್ಯದ ಪ್ರತಿಜ್ಞೆ ಕೂಡ ಕಡ್ಡಾಯವಾಗಿಸಬಹುದಲ್ಲವೇ?

3) ಯಾವ್ಯಾವುದೋ ಸಂಘಸಂಸ್ಥೆಗಳಿಗೆ ಸೇನೆಯ ತರಬೇತಿ ನೀಡಲು ಅನುಮತಿ ನೀಡುವ ಬದಲು, ಸರಕಾರದೊಳಗಿನ ವ್ಯವಸ್ಥೆಯಲ್ಲಿ ನೇರವಾಗಿಯೇ ಇರುವ ಪೊಲೀಸರಿಗೇ ಅದನ್ನು ನೀಡಬಹುದಲ್ಲವೇ, ಸಂಘಸಂಸ್ಥೆಗಳಿಂದ ಈರೀತಿಯ ತರಬೇತಿ ತೆಗೆದುಕೊಳ್ಳುವವರನ್ನು ನೇರವಾಗಿ ಪೊಲೀಸ್ ಇಲಾಖೆ ಅಥವಾ ಸೇನೆಗೆ ಸೇರಲು ಪ್ರೋತ್ಸಾಹಿಸಬಹುದಲ್ಲವೇ?

4) ಭಯೋತ್ಪಾದನೆಯನ್ನು ಚುನಾವಣಾ ವಿಷಯವನ್ನಾಗಿಸಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿ ಅಂತ ಬೊಬ್ಬೆ ಹಾಕುವ ಬದಲು, ಎಲ್ಲೆಲ್ಲಿ ಅಧಿಕಾರವಿದೆಯೋ ಅಲ್ಲಿ ಚೆನ್ನಾಗಿ, ಭ್ರಷ್ಟಾಚಾರವಿಲ್ಲದೆ ಕೆಲಸ ಮಾಡಿ, ಒಳ್ಳೆ ಹೆಸರು ತೆಗೆದುಕೊಳ್ಳಬಾರದೇ?

5) ರಾಜ್ಯದಲ್ಲಿ ಸ್ಫೋಟಕ ವಸ್ತುಗಳು, ರಾಸಾಯನಿಕಗಳು ಇತ್ಯಾದಿಗಳ ಸಾಗಣಿಕೆ, ಉಪಯೋಗಗಳ ಮೇಲೆ ಇಂದಿಗೂ ಸರಿಯಾದ ನಿಯಂತ್ರಣವಿಲ್ಲ. ಅದನ್ನೆಲ್ಲ ಸರಿಪಡಿಸಿ, ಪೊಲೀಸ್ ಇಲಾಖೆಗೆ ಬೇಕಾದ ಸೌಲಭ್ಯ ಕೊಟ್ಟು ಆಧುನೀಕರಿಸಿ, ಸರಿಯಾದ ವ್ಯವಸ್ಥೆಗಳನ್ನು ಮಾಡಬಹುದಲ್ಲವೇ? ರೈಲು ಹೋದ ಮೇಲೆ ಟಿಕೇಟು ತೆಗೆದುಕೊಳ್ಳುವ ಉದಾಸೀನದ ಬುದ್ಧಿ ಬಿಟ್ಟು ಮುಂದಾಲೋಚನೆಯಿಂದ ಕಾಲಕಾಲಕ್ಕೆ ಸರಿಯಾಗಿ ಮಾಡಬೇಕಾದ್ದು ಮಾಡಬಹುದಲ್ಲವೇ?

6) ಭಯೋತ್ಪಾದನೆ ವಿರುದ್ಧ ನಮ್ಮ ಬಿಜೆಪಿ ಸರಕಾರ ನೇರವಾಗಿ ಕಾಲೇಜುಗಳಲ್ಲಿ ಭಾಷಣಗಳನ್ನು ಆಯೋಜಿಸುತ್ತಿದೆ, ಕಾಲೇಜು ವಿದ್ಯಾರ್ಥಿಗಳ ಮೂಲಕ ರ್ಯಾಲಿಗಳನ್ನು ಆಯೋಜಿಸುತ್ತಿದೆ. ಈ ರ್ಯಾಲಿಗಳಲ್ಲಿ, ಭಾಷಣಗಳಲ್ಲಿ ಉಗ್ರವಾದದ definition ಮತ್ತು ವ್ಯಾಪ್ತಿ ಮತ್ತು ವಿಸ್ತಾರವನ್ನು ಹೆಚ್ಚಿಸಿ, ಜಾತಿ-ಮತ-ದೇಶ-ಕಾಲ ರಹಿತವಾಗಿ ಉಗ್ರವಾದದ ಬಗ್ಗೆ ಮಾತ್ರ ಜಾಗೃತಿ ಮೂಡಿಸಲು ಯತ್ನಿಸಿದರೆ ಅದು ಶ್ಲಾಘನೀಯ. ಅದು ಬಿಟ್ಟು, ಪಾಕಿಸ್ತಾನದ ಮೇಲೆ ಕೆಂಡಕಾರುತ್ತ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಮೇಲೆ ವಾಗ್ದಾಳಿ ಮಾಡಿದರೆ ಅದು ವೋಟ್ ಬ್ಯಾಂಕ್ ರಾಜಕೀಯ.

7) ಎಲ್ಲಕ್ಕಿಂತ ಹೆಚ್ಚಾಗಿ, ಉಗ್ರವಾದವನ್ನು ವೈಚಾರಿಕ ನೆಲೆಗಟ್ಟಿನಲ್ಲಿಯೇ ಇಲ್ಲವಾಗಿಸುವ ಯತ್ನ ನಡೆಯಬೇಕಿದೆ. ಇಂದು ನಡೆಯುತ್ತಿರುವಷ್ಟು intellectual terrorism, ಮತ್ತು manipulation of media ಬಹುಶ ಎಂದೂ ನಡೆದಿರಲಿಲ್ಲ. ಸರ್ಕಾರ್ ಚಿತ್ರದಲ್ಲಿ ಕುತಂತ್ರಿ ಸಾಧು ಹೇಳುವ ಮಾತು ನೆನಪಿಗೆ ಬರುತ್ತಿದೆ... "अगर तुम सर्कार को मारना चाहते हो, तो पहले उसकी सोच को मारो..." ಉಗ್ರವಾದ ಹುಟ್ಟುವುದೂ ಯೋಚನೆಗಳಲ್ಲಿ, ಅದರ ಸಾವೂ ಕೂಡ ಯೋಚನೆಗಳಲ್ಲೇ ಅಡಗಿದೆ. ಯೋಚನೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ವ್ಯಕ್ತಿತ್ವವನ್ನೇ ಬದಲಾಯಿಸುತ್ತೇವಂತೆ, ನಮ್ಮ ಮನಸುಗಳಲ್ಲಿ ಹುದುಗಿರುವ ಉಗ್ರನನ್ನು ಕೊಲ್ಲುವುದು ಕಷ್ಟವಾ?

10 ಜನರನ್ನಿಟ್ಟುಕೊಂಡು ಇಡೀ ರಾಷ್ಟ್ರದ ನಿದ್ದೆ ಮೂರುದಿನ ಕೆಡಿಸಿದ, ಒಂದು ಬಿಲಿಯನ್ ಜನರ ಧೈರ್ಯಗೆಡಿಸಿದ ಮುಂಬೈ ದಾಳಿಯಂತಹ ಹೇಯಕೃತ್ಯಗಳು ಮುಂದೆಂದೂ ನಡೆಯದಿರಲಿ, ಯಾರಿಂದಲೂ ನಡೆಯದಿರಲಿ. ಎಲ್ಲೂ ನಡೆಯದಿರಲಿ... ನಾವು ಒಬ್ಬೊಬ್ಬರೂ ಬದಲಾಗೋಣ, ಆಮೂಲಕ ಇಡೀ ಸಮಾಜ ಬದಲಾಗಲಿ... ನಮ್ಮಲ್ಲಿ ಸಾಯುತ್ತಿರುವ ಮಾನವತ್ವವನ್ನು ಮತ್ತೆ ನೀರೆರೆದು ಬದುಕಿಸೋಣ, ಸುತ್ತಲವರ ನೋವಿಗೆ ನಮ್ಮ ಜೀವಗಳೂ ಜಾತಿ-ಮತ ಮರೆತು ಸ್ಪಂದಿಸಲಿ... ಮರೆತುಬಿಡೋಣ ಕಪ್ಪುಕಾಲನ ಮಡಿಲಲ್ಲಿ ಸೇರಿಹೋದ ನಿನ್ನೆಗಳನ್ನು... ನಿನ್ನೆಯ ಕರಿನೆರಳುಗಳು ನಾಳೆಗಳನ್ನು ಎಂದಿಗೂ ಹಾಳುಗೆಡವದಿರಲಿ...

(ವಿ.ಸೂ. - ವೈಯಕ್ತಿಕ ಹಾಗೂ ಅಸಭ್ಯ ಕಮೆಂಟುಗಳನ್ನು ಪ್ರಕಟಿಸಲಾಗುವುದಿಲ್ಲ, ಮತ್ತು ಗಣನೆಗೂ ತೆಗೆದುಕೊಳ್ಳಲಾಗುವುದಿಲ್ಲ, ಆರೋಗ್ಯಕರ ಚರ್ಚೆಗೆ ಮಾತ್ರ ಅವಕಾಶ)

Friday, January 2, 2009

ಇಸ್ರೇಲಿ ಭೂತ ತಲೆಗೆ ಹೊಕ್ಕಿದೆ...

ನವೆಂಬರ್ - 29:

ಚೆನ್ನೈಯಲ್ಲಿ ಎಡೆಬಿಡದೆ ಮಳೆ ಸುರಿದಿತ್ತು. ಬೆಂಗಳೂರಿನಲ್ಲೂ ಅದರ ಪರಿಣಾಮ, ಥಂಡಿ ಹವೆ, ವಿಚಿತ್ರ ಮಳೆ. ಸೈಕ್ಲೋನ್ ನಿಶಾಕ್ಕೆ 82 ಜನ ಸತ್ತಿದ್ದು ದೊಡ್ಡದಾಗಿಯೇನೂ ಸುದ್ದಿಯಾಗಿರಲಿಲ್ಲ. ಇನ್ನು ಮುಂದೆ ಮಾನವನ ಅಟ್ಟಹಾಸದೆದುರು ಕಾಲನ ಅಬ್ಬರ ಏನೂ ಅಲ್ಲ ಬಿಡಿ... ಹಿಂದಿನ ದಿನ ಮಳೆಗೆ ನೆನೆದ ಪರಿಣಾಮ ಜ್ವರ ಕಾಡುತ್ತಿತ್ತು. ಆಫೀಸಿಗೆ ರಜಾ ಹಾಕಿ ಮನೆಯಲ್ಲೇ ಕೂತಿದ್ದೆ. ಮುಂಬೈಯಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರಿದಿತ್ತು. ತಾಜ್ ಇನ್ನೂ ಬಿಡುಗಡೆಯಾಗಿರಲಿಲ್ಲ. ಟೀವಿ ನೋಡಿನೋಡಿ ತಲೆ ಸಿಡಿಯುತ್ತಿತ್ತು.

ಹಾಗೆಂದು ಮಲಗಲೂ ಆಗದೆ, ಹಳಸಿದ ಸುದ್ದಿಯಿದ್ದ ನಿನ್ನೆಯ ಪೇಪರ್ ಓದಲು ಇಷ್ಟವಿಲ್ಲದೆ, ಬೇರೆ ವಿಧಿಯಿಲ್ಲದೇ ಮತ್ತೆ ಟೀವಿಗೆ ಮೊರೆ ಹೋದೆ. ಚಾನೆಲಿಂದ ಚಾನೆಲಿಗೆ ಬದಲಾಯಿಸುತ್ತ ಕೂತಿದ್ದೆ. ಟೈಮ್ಸ್ ನವ್ ಯಥಾಪ್ರಕಾರ ಕಿರುಚುತ್ತಿತ್ತು... ಹಿಂದಿ ಚಾನೆಲುಗಳ ಗತಿಯೋ, ದೇವರಿಗೇ ಪ್ರೀತಿ. NDTV ಮತ್ತು CNN IBN ಆಗಷ್ಟೇ ಬುದ್ಧಿ ಕಲಿತಂತೆ LIVE ಕೊಡುವುದು ಬಿಟ್ಟು ಹುತಾತ್ಮರಾದವರ ಬಗ್ಗೆ ಗಮನ ಹರಿಸಲು ಆರಂಭಿಸಿದ್ದವು.

ನೋಡುತ್ತ ನೋಡುತ್ತ ನನಗೆ ಘಟನೆಯ ಬಗ್ಗೆ ಅಂತರ್ರಾಷ್ಟ್ರೀಯ ಪ್ರತಿಕ್ರಿಯೆಗಳು ಏನಿವೆ ಅಂತ ತಿಳಿಯಬೇಕೆನಿಸಿತು, ಯಾವ ಚಾನೆಲ್ಲೂ ಏನೂ ಕೊಡುತ್ತಿರಲಿಲ್ಲ. CNNನಲ್ಲೂ ಏನೂ ಇರಲಿಲ್ಲ. ಸರಿ, ಇಂಟರ್ನೆಟ್ಟಲ್ಲಿ ಏನಾದರೂ ಸಿಗಬಹುದು ಅಂತ ಎಣಿಸಿಕೊಂಡು ಸಿಸ್ಟಮ್ ಆನ್ ಮಾಡಿದೆ. ಪಕ್ಕದ ಮನೆಯಲ್ಲೆಲ್ಲೋ ಇರುವ ಅದೃಶ್ಯ ಅನ್-ಸೆಕ್ಯೂರ್ಡ್ ಇಂಟರ್ನೆಟ್ ನೀಟಾಗಿ ಕನೆಕ್ಷನ್ನು ಕೆಲಸ ಮಾಡುತ್ತಿತ್ತು. ಸರಿ, ಲಾಗಿನ್ ಆದೆ. ಅಲ್ಲೂ ಸುಲಭಕ್ಕೆ ಏನೂ ಸಿಗಲಿಲ್ಲ, ಆಸ್ಟ್ರೇಲಿಯಾ ಮತ್ತು ಅಮೆರಿಕಾದ ತೂಕದ ಪ್ರತಿಕ್ರಿಯೆಗಳ ಹೊರತಾಗಿ.

ಚಾನೆಲ್ಲುಗಳಲ್ಲಿ ಪದೇಪದೇ ದಾಳಿಯ ಹೊಣೆಹೊತ್ತ ಡೆಕ್ಕನ್ ಮುಜಾಹಿದೀನ್ ಸಂಸ್ಥೆಯ ಹೆಸರು ಕೇಳಿ ಬರುತ್ತಿತ್ತು. ಹಿಂದಿಯಲ್ಲಿ ಮೈಲ್ ಕಳುಹಿಸಿತ್ತು ಅದು, ಹಾಗಿತ್ತು, ಹೀಗಿತ್ತು ಇತ್ಯಾದಿ. ನನಗೆ ಭಯೋತ್ಪಾದಕರು ಮೈಲ್ ಮಾಡಿದರೆ ಹೇಗಿರುತ್ತದೆ, ಪೂರ್ತಿಯಾಗಿ ಒಂದು ಸಲ ಓದಬೇಕಲ್ಲ ಅನಿಸಿ ಒಂದಷ್ಟು ಹುಡುಕಿದೆ. ಸಿಕ್ಕಿಯೇ ಬಿಟ್ಟಿತು - ಇಂಡಿಯನ್ ಮುಜಾಹಿದೀನ್ ಕಳುಹಿಸಿದ ಮೈಲ್.... ದೆಹಲಿ ಸ್ಫೋಟದ ಸಮಯ ಕಳುಹಿಸಿದ್ದು.
ಇದರಲ್ಲಿ, ಉಗ್ರರು ಹಲವು ರಾಜ್ಯಗಳಲ್ಲಿ ಶಂಕಿತ ಉಗ್ರರ ಹೆಸರಲ್ಲಿ ಮುಸ್ಲಿಮರನ್ನು ಬಂಧಿಸಿ ಕಾಟ ಕೊಡುವುದಕ್ಕೆ ಕೆಂಡಾಮಂಡಲವಾಗಿದ್ದರು. (ಇಂತಹ ಕೇಸುಗಳು ಹಲವಾರು. ನಾಲ್ಕೈದು ವರ್ಷಗಳ ಹಿಂದೆ ಒಂದು ದಿನ ಹೈದರಾಬಾದಿನಲ್ಲಿ ದಿನಾ ಹಾಲು ಮಾರುತ್ತ ಎಲ್ಲರಂತೆ ಬದುಕುತ್ತಿದ್ದ ಮಾಮೂಲು ಹುಡುಗನನ್ನು ಉಗ್ರನೆಂದು ಗುಂಡುಹಾರಿಸಿ ಕೊಂದಿದ್ದರು ಪೊಲೀಸ್. ಹೈದರಾಬಾದಿನಲ್ಲಿ ಮತ್ತೆ ಹಲವರನ್ನು ಶಂಕಿತರೆಂದು ಬಂಧಿಸಿ ಕೊನೆಗವರು ಮುಗ್ಧರೆಂದು ಸಾಧಿತವಾದ ಬಳಿಕ ಬಿಡುಗಡೆಗೊಳಿಸುವಾಗ ಅವರಿಗೆ ಪರಿಹಾರ ಕೂಡ ಕೊಟ್ಟಿತ್ತು ಆಂಧ್ರಪ್ರದೇಶ ಸರಕಾರ. ಧಾರವಾಡದಲ್ಲಿ ತನ್ನ ಹೊಲದಲ್ಲಿ ಬಾಂಬ್ ಸಿಕ್ಕಿತೆಂದು ಪೊಲೀಸರಿಗೆ ತಿಳಿಸಹೊರಟ ಮುಸ್ಲಿಂ ರೈತನನ್ನು ಮನಬಂದಂತೆ ಹೊಡೆದು, ಕೊನೆಗೆ ಅವನ ತಪ್ಪಿಲ್ಲವೆಂದು ತಿಳಿದಾಗ ವಾಪಸ್ ಕಳುಹಿಸಿತ್ತು ಅಲ್ಲಿನ ಪೊಲೀಸ್. ಇತ್ತೀಚೆಗೆ ಮಂಗಳೂರಿನಲ್ಲಿ ಬಂಧಿತರಾದ ಶಂಕಿತ ಉಗ್ರರನ್ನು ಮುಂಬೈಗೆ, ಮತ್ತೆ ಬೆಂಗಳೂರಿಗೆ, ಪುನಹ ಗುಜರಾತಿಗೆ, ಹೀಗೆ ಬೇಕಾದಲ್ಲಿಗೆ ಕರೆಸಿಕೊಂಡು ಇನ್ವೆಸ್ಟಿಗೇಟ್ ಮಾಡುತ್ತಾರೆ. ಮುಂಬೈಯಲ್ಲಿ ಇದೇ ಖರ್ಖರೆಯ ಕೈಲಿ ಇನ್ವೆಸ್ಟಿಗೇಶನ್ ನಡೆದು ಅವರಿಗೆ ಬೇಕಾದ್ದು ಏನೂ ಸಿಗಲಿಲ್ಲವಾಗಿ ವಾಪಸ್ ತಂದುಬಿಟ್ಟಿದ್ದರು. ಆದರೂ ಅವರಿಗೆ ಮುಕ್ತಿ ಸಿಕ್ಕಿಲ್ಲ. ಮುಗ್ಧರು ಶಂಕಿತರ ಹೆಸರಲ್ಲಿ ಪೊಲೀಸರ ವಶವಾಗುವುದು ಹೊಸತೇನಲ್ಲ, ಒಬ್ಬ ಕಳ್ಳನನ್ನು ಹಿಡಿಯಲು ಕೆಲವೊಮ್ಮೆ ನೂರು ಜನ ಮುಗ್ಧರನ್ನು ಪರೀಕ್ಷೆ ಮಾಡಬೇಕಾಗುತ್ತದೆ, ಅದು ಅನಿವಾರ್ಯ ಕೂಡ, ಒಪ್ಪಬಹುದಾದದ್ದು ಕೂಡ - ಕಾನೂನಿನ ಚೌಕಟ್ಟಿನಲ್ಲಿ ನಡೆಯವ ವರೆಗೆ) ಉಗ್ರ ಮೈಲ್ ಕಳುಹಿಸಿದವರು ತಮ್ಮ ಮುಂದಿನ ಗುರಿ ಮುಂಬೈ ಅಂತ ನೇರವಾಗಿ ಹೇಳಿದ್ದರು. ಮುಂಬೈ ಎಟಿಎಸ್ (ಹೇಮಂತ್ ಕಾರ್ಕರೆ), ಗುಜರಾತ್ ಎಟಿಎಸ್ (ಪಿಸಿ ಪಾಂಡೆ), ಮೋದಿ, ವಿಲಾಸ್ ರಾವ್ ದೇಶಮುಖ್, ಆರ್ ಆರ್ ಪಾಟೀಲ್, ರಾಜಸ್ತಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ - ಎಲ್ಲರ ಮೇಲೆ ಕಿಡಿಕಾರಲಾಗಿತ್ತು. ಸಂಘಪರಿವಾರದ ಉಗ್ರಕೃತ್ಯಗಳ ಮೇಲೆ ಕ್ರಮ ಕೈಗೊಂಡಿಲ್ಲವೆಂದು ನೇರವಾಗಿ ಮುಂಬೈ ಎಟಿಎಸ್ ಮೇಲೆ ಆಪಾದಿಸಲಾಗಿತ್ತು. ಕೇಸರಿ ಭಯೋತ್ಪಾದನೆಯ ವಿಚಾರ ಬಂದಾಗ ಮಾಧ್ಯಮಗಳು ಹೇಗೆ ಇಡಿಯ ಎಪಿಸೋಡನ್ನು ಮುಚ್ಚಿಹಾಕಿದವೆಂದು reference ಸಮೇತ ವಿವರಿಸಲಾಗಿತ್ತು. ಅಲ್ಲಿಂದ ಎಲ್ಲೆಲ್ಲೋ ಹೋಗಿ, ಕೊನೆಗೆ ಜೆಹಾದ್ ಪ್ರತಿಜ್ಞೆಯೊಡನೆ ಮುಕ್ತಾಯವಾಗಿತ್ತು.

ಸರಿ, ಅದರಲ್ಲಿ ಹೇಳಿದ ಬಜರಂಗ್ ಬಾಂಬ್ ಬಗ್ಗೆ ಏನಾದರೂ ಇಂಡಿಯನ್ ಎಕ್ಸ್-ಪ್ರೆಸ್ ವೆಬ್-ಸೈಟಲ್ಲಿ ಸಿಗುತ್ತದಾ ಅಂತ ಹುಡುಕಿದೆ. ಸರ್ಚ್ ರಿಸಲ್ಟ್-ನಲ್ಲಿ ಹಲವು ವರದಿಗಳು ಸಿಕ್ಕಿದವು. ಲಿಂಕ್ ತೆರೆಯಹೋದರೆ ಯಾಕೋ ಗೊತ್ತಿಲ್ಲ, ಹಲವು ಲಿಂಕುಗಳಲ್ಲಿದ್ದ ಲೇಖನಗಳು ಡಿಲೀಟ್ ಆಗಿಬಿಟ್ಟಿದ್ದವು, ಇನ್ನು ಹಲವು ಓದಲು ಸಿಕ್ಕಿದವು. ಓದಲು ಸಿಕ್ಕಿದ್ದೆಲ್ಲವನ್ನೂ ಓದಿದೆ. ಓದುತ್ತ ಓದುತ್ತ ಎಲ್ಲೆಲ್ಲೋ ಹೋಗಿ, ನಾನು ಈ ಪುಟಕ್ಕೆ ಬಂದು ನಿಂತೆ... ಅಂತರ್ರಾಷ್ಟ್ರೀಯ ವಿಚಾರಗಳ ಬಗ್ಗೆ ಎಂದೂ ಹೆಚ್ಚು ತಲೆಕೆಡಿಸಿಕೊಂಡಿಲ್ಲದ ನಾನು ಇಲ್ಲಿವರೆಗೆ ಕೇಳಿಯೇ ಇರದ ಹೆಸರು - ಮೊಸ್ಸಾಡ್, ಮೊದಲ ಬಾರಿಗೆ ಅತ್ಯಂತ ಶಾಕಿಂಗ್ ಅನಿಸುವ ರೀತಿಯಲ್ಲಿ ಕಣ್ಣೆದುರಿಗೆ ಬಂದು ನಿಂತಿತ್ತು..

ಅಲ್ಲಿಂದ ಮತ್ತೆ ಅಲ್ಲಿರುವ ಎಲ್ಲಾ ಲಿಂಕುಗಳಿಗೂ ವಿಸಿಟ್ ಕೊಟ್ಟು, ಏನೇನಿದೆ ಅಂತ ನೋಡಿದೆ, ಅರ್ಥವಾದದ್ದು ಓದಿದೆ, ಅರ್ಥವಾಗದ್ದು ಬಿಟ್ಟೆ. ನನಗೆ ಅರ್ಥವಾದುದರ ಸಾರಾಂಶ ಇಷ್ಟು - ಭಾರತದಲ್ಲಿ ನಡೆಯುತ್ತಿರುವ anti-islamic ಉಗ್ರವಾದದ ಹಿಂದೆ - ಅಂದರೆ ಸಪ್ಟೆಂಬರ್ 26 -2008ರ ಮಾಲೆಗಾಂವ್ ಸ್ಫೋಟ, ನಾಂದೆಡ್-ನಲ್ಲಿ ಭಜರಂಗ ಕಾರ್ಯಕರ್ತರು ಸತ್ತ ಸ್ಫೋಟದ ಹಿಂದೆ, 64 ಜನ ಪಾಕಿಸ್ತಾನಿಗಳನ್ನು ಕೊಂದ, ಭಾರತ-ಪಾಕ್ ಸ್ನೇಹಸೇತುವಾದ ಸಂಝೋತಾ ಎಕ್ಸ್-ಪ್ರೆಸ್ ಸ್ಫೋಟದ ಹಿಂದೆ, ಹೈದರಾಬಾದಿನ ಲುಂಬಿನಿ ಗಾರ್ಡನ್ ಮಸೀದಿ ಸ್ಫೋಟದ ಹಿಂದೆ - ಸಂಘಪರಿವಾರವಿದೆ; ಅದರ ಹಿಂದೆ ಇಸ್ರೇಲಿ ಗುಪ್ತಚರ ಸಂಸ್ಥೆ MOSSADನ ಕೈವಾಡವಿದೆ, ಪ್ರೋತ್ಸಾಹವಿದೆ ಅಂತ ಈ ಲೇಖನಗಳನ್ನು ಬರೆದವರ ಹೇಳಿಕೆ. MOSSADಗೆ ಮತ್ತು ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಸಂಬಂಧವಿದೆಯೆಂದು ಕೂಡ ಇಲ್ಲಿ ಕಂಡುಬರುವ ಲೇಖನಗಳಲ್ಲಿ ಓದಲು ಸಿಗುತ್ತದೆ. ಅಮೆರಿಕಾದ CIA ಮತ್ತು ಭಾರತದ RAW MOSSADನ ಬೆಂಬಲಕ್ಕಿದ್ದು ಭಾರತದಲ್ಲಿ ಮತ್ತು ಜಗತ್ತಿನ ಇತರೆಡೆ ಕೆಲಸ ಮಾಡಿಸುತ್ತವೆ ಅಂತಲೂ ಓದಿ, ತಲೆಬಿಸಿಯಾಯಿತು. ಇವನ್ನೆಲ್ಲ ಸತ್ಯವೇ ಸುಳ್ಳೇ ಅಂತ ತೂಗುವುದು ನನ್ನ ಪೆದ್ದು ತಲೆಯ ಲಾಜಿಕ್-ಗೆ ಸಾಧ್ಯವಾಗಲಿಲ್ಲ. ಯಾವುದು ಸರಿ, ಯಾವುದು ತಪ್ಪು ಅಂತ ಗೊತ್ತಾಗದೆ ಸುಮ್ಮನೆ ಎಲ್ಲವನ್ನೂ ಓದುತ್ತಾ ಹೋದೆ.

ಹೀಗೆ ಇಸ್ರೇಲ್ ಬಗ್ಗೆ ಓದುತ್ತಿರುವಾಗ, ಇಸ್ರೇಲ್-ನವರು ಯಾರೋ ಈ ಸ್ಫೋಟದಲ್ಲಿ ಸತ್ತಿದ್ದರಲ್ಲ, ಯಾವುದೋ ಪುಟ್ಟ ಅನಾಥ ಮಗುವಿದು ಸುದ್ದಿಯಾಗಿತ್ತಲ್ಲ ಅಂತ ನೆನಪಾಯ್ತು. ಹುಡುಕಿದರೆ ಹೌದು - ಮೂವತ್ತೂ ದಾಟದ ಯುವಜೋಡಿ Gavriel Holtzberg ಮತ್ತು Rivka Holtzberg, ನಾರಿಮನ್ ಹೌಸ್-ನಲ್ಲಿ ಮುಂಬೈನ ಯಹೂದಿಗಳ ಸಮುದಾಯಕ್ಕೆ ಬೇಕಾದ ಧಾರ್ಮಿಕ ಮತ್ತು ಸಾಮುದಾಯಿಕ ಕೆಲಸ ಕಾರ್ಯಗಳನ್ನು ನಡೆಸುತ್ತಿದ್ದವರು... ಇವರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಕೊನೆಗೆ ಉಗ್ರರು ಸಾಯಿಸಿದ್ದರು. ನಾರಿಮನ್ ಹೌಸ್-ಗೆ ಚಬಡ್ ಹೌಸ್ ಅನ್ನುತ್ತಾರೆ, ಅದರಲ್ಲಿದ್ದವರು ಮುಖ್ಯವಾಗಿ ಇಸ್ರೇಲಿ ಯಹೂದಿಗಳೇ, ಮತ್ತು ಇಸ್ರೇಲಿಗಳಿಗಾಗಿಯೇ ಅದು ಇತ್ತು ಅಂತ ಆಗಷ್ಟೇ ನಂಗೆ ಗೊತ್ತಾಯಿತು.

ಹಾಗೆಯೇ, MOSSAD ವೆಬ್-ಸೈಟಿಗೆ ಹೋದೆ. ಗುಪ್ತಚರ ಕೆಲಸಗಳ ಜತೆಗೆ ಅಗತ್ಯವಿರುವ counterterrorism ಕೆಲಸಗಳನ್ನು ಕೂಡ ತಾನು ನಡೆಸುವುದಾಗಿ ತನ್ನ ವೆಬ್-ಸೈಟಿನಲ್ಲಿ MOSSAD ಹೇಳಿಕೊಳ್ಳುತ್ತದೆ. ಇಷ್ಟೆಲ್ಲ ಓದಿದ ನಂತರ ತಲೆಯೆಲ್ಲ ಕೆಟ್ಟು ಚಿತ್ರಾನ್ನವಾಯಿತು. ಸರಿ, ಸಹವಾಸ ಬೇಡವೆಂದುಕೊಂಡು ಕಂಪ್ಯೂಟರ್ ಲಾಗಾಫ್ ಮಾಡಿದೆ.
---------------
ನವೆಂಬರ್ 30, ಡಿಸೆಂಬರ್ 1:
ಆ ಪುಟ್ಟ ಮಗು, ಅದರ ಸತ್ತುಹೋದ ಇಸ್ರೇಲಿ ಅಪ್ಪ-ಅಮ್ಮನ ಬಗ್ಗೆ ಕರುಳು ಮಿಡಿಯುವ ಹಾಗೆ ಚಾನೆಲುಗಳು ಕೊಡುತ್ತಿದ್ದವು. ಕೆಲವು ಚಾನೆಲುಗಳು 22 ಉಗ್ರರಿದ್ದರು, 10 ಜನ ಮಾತ್ರ ಸಿಕ್ಕಿದ್ದಾರೆ, ಉಳಿದ ಉಗ್ರರು ಮಿಸ್ ಆಗಿದ್ದಾರೆ, ಅಂದವು. ಮತ್ತೆ ಕೆಲವು ಚಾನೆಲುಗಳು ಹೇಮಂತ ಖರ್ಖರೆಯ ಸಾವಿನ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದವು. ಪಾಟೀಲ್ ಮತ್ತು ದೇಶಮುಖ್ ತಲೆದಂಡದ ಪ್ರಕ್ರಿಯೆ ಆರಂಭವಾಗಿತ್ತು. ಸುತ್ತಮುತ್ತಿಂದೆಲ್ಲ ತನ್ನ ಮೇಲೆ ಬರುತ್ತಿದ್ದ ಆಪಾದನೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಪಾಕ್ ಕಕ್ಕಾಬಿಕ್ಕಿಯಾಗಿತ್ತು. ತಲೆ ಕೆಡಿಸುವ ಇಂಟರ್ನೆಟ್ಟು, ಮೂರ್ಖ ಟೀವಿಗಳ ಸಹವಾಸ ಬೇಡವೆಂದು ನಾನು ಮನೆಯ ಕೆಲಸಕಾರ್ಯಗಳಲ್ಲಿ, ಎಷ್ಟೋದಿನಗಳಿಂದ ಮಾಡಲು ಬಾಕಿಯಿದ್ದಂತಹ ಕೆಲಸಗಳಲ್ಲಿ ತೊಡಗಿದೆ. ಒಂದಿಷ್ಟು ಕಥೆಗಳು ಓದಿದೆ. ಆದರೂ ಕುತೂಹಲ ತಡೆಯಲಾಗದೆ ನಮ್ಮ ಬ್ಲಾಗಿಗರು ಏನು ಬರೆದಿದ್ದಾರೆ ಅಂತ ನೋಡಿದೆ. ಖುಷಿಯಾದದ್ದನ್ನು ಗೂಗಲ್-ರೀಡರಿನಲ್ಲಿ ಶೇರ್ ಮಾಡಿಕೊಂಡೆ.

ಡಿಸೆಂಬರ್ 2:
ಬೆಳಗಾಗೆದ್ದು ನೋಡಿದರೆ ಕನ್ನಡಪ್ರಭದಲ್ಲಿ ಇಸ್ರೇಲ್-ನ ಮೇಜರ್ ಜನರಲ್ ಭಾರತದ NSG ಕಾರ್ಯಾಚರಣೆ ಸರಿಯಿಲ್ಲವೆಂದಿದ್ದು ಕಾಣಿಸಿತು. ಆದರೆ ಇಸ್ರೇಲ್ ಸರಕಾರ ಭಾರತದ ಕಾರ್ಯಾಚರಣೆಯನ್ನು ಶ್ಲಾಘಿಸಿತ್ತು. ಇರಲಿ, ಕನ್ನಡ ಬ್ಲಾಗಿಗರೆಲ್ಲ ಏನೇನು ಬರೆದಿದ್ದಾರೆ ಅಂತ ನೋಡಹೊರಟರೆ ಗೃಹಸಚಿವರ ಬ್ಲಾಗಿನಲ್ಲಿ ಇಸ್ರೇಲಿಗೆ ಹೊಗಳಿ ಬರೆದಿದ್ದು ಕಾಣಿಸಿತು. ಹಾಗೇ ವೇಣುವಿನೋದ್ ಬ್ಲಾಗಿನಲ್ಲೂ ಕೂಡ. ಇದ್ಯಾಕಪ್ಪಾ ಕೇವಲ ಎರಡು-ಮೂರು ದಿನದಲ್ಲಿ ಎಲ್ಲೆಲ್ಲೂ ನಂಗೆ ಇಸ್ರೇಲೇ ಕಾಣ್ತಿದೆ... ಇಷ್ಟು ದಿನ ಗೊತ್ತೇ ಇಲ್ಲದ ವಿಚಾರಗಳೆಲ್ಲ ಗೊತ್ತಾಗ್ತಿವೆ ಅಂತ ತಲೆಬಿಸಿಯಾಯಿತು. ಇದ್ದಕ್ಕಿದ್ದಂತೆ ಇಸ್ರೇಲ್ ಭಾರತದಲ್ಲಿ ಇಷ್ಟು ಹೆಸರು ಯಾಕೆ ಮಾಡುತ್ತಿದೆ ಅಂತ ಟೆನ್ಶನ್ ಆಯಿತು.

ಡಿಸೆಂಬರ್ 5:

ಇವತ್ತು ಇದೇ ವಿಚಾರದಲ್ಲಿ ಮತ್ತಷ್ಟು ಲಿಂಕುಗಳು ಸಿಕ್ಕಿವೆ. ವಿವಿಧ ಆಧಾರಗಳನ್ನಿಟ್ಟುಕೊಂಡು ಈಸಲದ ದಾಳಿ ಕೂಡ ಇಸ್ರೇಲ್ ಮತ್ತು ಅಮೆರಿಕಾ ಕುಮ್ಮಕ್ಕಿನಿಂದಲೇ ನಡೆದಿವೆ ಅನ್ನುತ್ತಿವೆ. ಇವರ ಲೆಕ್ಕಾಚಾರಗಳ ಮತ್ತು ಅಭಿಪ್ರಾಯಗಳ ಪ್ರಕಾರ, ಪಾಕಿಸ್ತಾನವನ್ನು ಸಿಕ್ಕಿಸಲು ಮತ್ತು ಜೆಹಾದ್ ಹೆಸರಲ್ಲಿ ನಡೆಯುವ ಉಗ್ರವಾದವನ್ನು ಹತ್ತಿಕ್ಕಲು ಉಳಿದೆಲ್ಲಾ ದೇಶಗಳು ಸೇರಿಕೊಂಡು ಮಾಡಿದ ಷಡ್ಯಂತ್ರವೇ ಈ ಉಗ್ರರ ದಾಳಿ. ಇವರು ಹೇಳುವುದನ್ನು ನಂಬುವುದಾದರೆ, ಪಾಕ್ ಈಗ ಪಾಪ, ಮೊಸರು ತಿಂದ ಮಂಗನ ಪಕ್ಕದಲ್ಲಿದ್ದ ಆಡಿನಂತಾಗಿದೆ. ಭಾರತ ಕೊಟ್ಟ ಮೋಸ್ಟ್ ವಾಂಟೆಡ್ ಲಿಸ್ಟ್-ನ ವ್ಯಕ್ತಿಗಳನ್ನು ಪಾಕ್ ಒಪ್ಪಿಸದಿದ್ದರೆ, ಮುಂದಾಗುವುದು ಬಹುಶ: ಸಮರವೇ. ಅದಕ್ಕಾಗಿ ಅತ್ತಕಡೆಯಿಂದ ಈಗಾಗಲೇ ತಾಲಿಬಾನನ್ನೂ ಎತ್ತಿಕಟ್ಟಿಯಾಗಿದೆ.

ಹಾಗೆಂದು ಇಸ್ರೇಲಿ ರಾಬ್ಬಿಗಳು ಸತ್ತಿದ್ದಕ್ಕೂ ಇವರು ಕಾರಣ ಹೇಳುತ್ತಾರೆ - ಸತ್ತ ರಾಬ್ಬಿಗಳು ಝಿಯೋನಿಸ್ಟ್-ಗಳು ಅಲ್ಲವಂತೆ, MOSSAD ಯಹೂದಿಗಳು ವಿಶ್ವವನ್ನಾಳಬೇಕೆಂದು ಹೇಳುವ ಕಟ್ಟಾ ಝಿಯೋನಿಸ್ಟ್ ಪಂಗಡವನ್ನು ಬೆಂಬಲಿಸುತ್ತದಂತೆ. ಅಂದಹಾಗೆ, ಸತ್ತ ಇಸ್ರೇಲಿಗಳ ಶರೀರಗಳನ್ನು ವಾಪಸ್ ತಗೊಂಡು ಹೋದಾಗ ಅಲ್ಲಿ ಸರಕಾರ STATE HONOURS ಕೊಡುತ್ತೇನೆಂದರೆ ಸಂಬಂಧಿಕರೆಲ್ಲ ಅದನ್ನು ತಿರಸ್ಕರಿಸಿದರಂತೆ. ಯಾಕೆಂದರೆ, ಚಬಡ್ ಹೌಸ್-ನಲ್ಲಿ ಸತ್ತವರು ಕಟ್ಟಾ ಝಿಯೋನಿಸ್ಟ್-ಗಳು ಆಗಿರಲಿಲ್ಲವಂತೆ. ಅವರ ಮೇಲೆ ಸೇಡು ತೀರಿಸಿದ ಹಾಗೂ ಆಯಿತು, ಭಾರತದ ಮುಸ್ಲಿಮರ ಮೇಲೆ ಸೇಡು ತೀರಿಸಿದ ಹಾಗೂ ಆಯಿತು ಅಂತ ನಾರಿಮನ್ ಹೌಸ್ ಮೇಲೆ ಕೂಡ ಅಟ್ಯಾಕ್ ಮಾಡಿದರಂತೆ.

ಇದಕ್ಕಿಂತ ಹಿಂದೆ ನಾನು ಏಳೆಂಟು ವರ್ಷದ ಹಿಂದೆ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಮಾಡುವ ದಾಳಿಗಳ ಮೂಲಕ ಮಾತ್ರ ಇಸ್ರೇಲ್ ಬಗ್ಗೆ ತಿಳಿದಿದ್ದೆ. ಎಷ್ಟೋ ವರ್ಷಗಳ ನಂತರ ನಂಗೆ ಇಸ್ರೇಲ್ ಬಗ್ಗೆ ಹುಟ್ಟಿದ್ದು ಒಂದುರೀತಿಯ ಪವಿತ್ರ ಕಲ್ಪನೆ, ಅದು ಬಂದಿದ್ದು ನೇಮಿಚಂದ್ರ ಬರೆದ ಯಾದ್ ವಶೇಮ್ ಓದಿ. ಈಗ ನಂಗೆ ಕಾಣುತ್ತಿರುವ ಇಸ್ರೇಲ್ ಬೇರೆಯದೇ... ಇದು, ಅಮೆರಿಕಾ ಜತೆ ಸೇರಿ ಯಹೂದಿ ಜಗತ್ತು ಕಟ್ಟಹೊರಟಿರುವ ಇಸ್ರೇಲ್. ಜೆಹಾದಿ ಭಯೋತ್ಪಾದನೆಯನ್ನು, ಮುಸ್ಲಿಂ ರಾಷ್ಟ್ರಗಳನ್ನು ಹದ್ದುಬಸ್ತಿನಲ್ಲಿಡಲು ಕಟಿಬದ್ಧವಾದ ರಾಷ್ಟ್ರ...

ನನಗೆ ಈ ಮಾಹಿತಿಗಳು ಮತ್ತು ಸಂಬಂಧಿಸಿದ ವಿಷಯಗಳು ಸಿಕ್ಕಿದ ಲಿಂಕುಗಳು...

http://ghulammuhammed.blogspot.com/2008/11/cia-mossad-hand-behind-sangh-parivars.html

http://www.wakeupfromyourslumber.com/node/8534

http://en.wikipedia.org/wiki/Mossad

http://en.wikipedia.org/wiki/Mumbai_Chabad_House

http://en.wikipedia.org/wiki/Gavriel_Holtzberg

http://www.chabad.org/centers/default_cdo/aid/118651/jewish/Chabad-Mumbai.htm

http://timesofindia.indiatimes.com/India/Rabbi_wife_found_dead_at_Nariman/articleshow/3771244.cms
http://www.wakeupfromyourslumber.com/node/8534

http://www.indianmuslims.info/book/export/html/2736

http://www.wakeupfromyourslumber.com/comment/reply/9310#comment-form

http://www.thenews.com.pk/updates.asp?id=62200

http://www.hindu.com/2008/12/11/stories/2008121155660900.htm

http://www.hindu.com/2008/12/17/stories/2008121752001000.htm

http://therearenosunglasses.wordpress.com/

http://www.countercurrents.org/gatade241208.htm

(ಮುಂದುವರಿಯುವುದು...)