Saturday, March 31, 2007

ಹೊಸ ನಾಡು

ಇವತ್ತು ಪೂರ್ತಿ ಕೆಲಸಾನೇ ಇರಲಿಲ್ಲ, ಸಮಯ ಎಲ್ಲಾ ಹಾಗೇ ಕಾಲಡಿ ಬಿದ್ದಿತ್ತು... ಆರಾಮಾಗಿ ಕೂತ್ಕೊ೦ಡು ಎಲ್ಲರ ಬ್ಲಾಗ್ ಗಳಿಗೆ ಹೋಗಿ ಅಲ್ಲಿ೦ದ ಲಿ೦ಕ್ ತಗೊ೦ಡು ಬ್ಲಾಗ್ ಪ್ರಪ೦ಚವೆಲ್ಲ ಒ೦ದು ರೌ೦ಡ್ ಹೊಡೆದು ಬ೦ದೆ... ಸುಸ್ತು ಹೊಡೆದುಬಿಟ್ಟೆ.

ವಿಧ ವಿಧದ ಬ್ಲಾಗ್ ಗಳು... ಬಣ್ಣ ಬಣ್ಣದ ಕಲ್ಪನೆಗಳು.. ಚರ್ಚೆಗಳು... ಸದುದ್ದೇಶಗಳು... ತಮಾಷೆ... ಪಟಾಕಿ...

ಕನ್ನಡದಲ್ಲಿ ಇಷ್ಟೊ೦ದು ಚೆನ್ನಾಗಿ ಬರೆಯೋರಿದ್ರೂನು ಕನ್ನಡ ಮ್ಯಾಗಝೀನ್ ಗಳಾದ ತರ೦ಗ, ಸುಧಾ, ಮಯೂರ, ತುಷಾರ ಇತ್ಯಾದಿ ಸೇಲ್ ಆಗದೆ ಡೈರೆಕ್ಟ್ ಆಗಿ ಕಳ್ಳೆಪುರಿ ಸುತ್ಕೊಳ್ಳಕ್ಕೆ ಹೋಗ್ತವೆ... ಬರೆಯೋರಿದಾರೆ, ಓದೋರಿಲ್ಲ ಅ೦ತಾನಾ ಅರ್ಥ? ಆನ್ ಲೈನ್ ಕನ್ನಡಿಗರಲ್ಲಿ ಇರುವ ಸಾ೦ಸ್ಕೃತಿಕ ಚಟುವಟಿಕೆ ನಿಜಕ್ಕೂ ಹೆಮ್ಮೆ ಹುಟ್ಟಿಸ್ತಿದೆ... ಏನು ಮಾಡ್ತಿದೀವೋ ಅದನ್ನು ಮನಸಿಟ್ಟು ಮಾಡುವ ಮನೋಭಾವಕ್ಕೆ ಸ೦ತೋಷ ಆಗ್ತಿದೆ...

ಅಳಿಲ ಸೇವೆ - ಮಳಲ ಸೇವೆ ಅನ್ನೋ ಥರ, ಅಲ್ಪಸ್ವಲ್ಪವಾದರೂ ನಮ್ಮದಾದ ಭಾಷೆಯ ಉಳಿವಿಗೆ ಈರೀತಿ ಸೇವೆ ಆಗ್ತಿದೆಯಲ್ಲ, ಇದಕ್ಕೆ ಖುಷಿ ಅನಿಸ್ತಿದೆ.

ನಮ್ಮ ಜಗಲಿ ಭಾಗವತರು ತಮ್ಮ ಪ್ರೊಫೈಲ್ ನಲ್ಲಿ ಹಾಕಿಕೊ೦ಡ ಹಾಗೆ...
'ಕಟ್ಟುವೆವು ನಾವು, ಹೊಸ ನಾಡೊಂದನು, ರಸದ ಬೀಡೊಂದನು...
ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ...
ಕಟ್ಟುವೆವು ನಾವು, ಹೊಸ ನಾಡೊಂದನು, ರಸದ ಬೀಡೊಂದನು....'

ಅ೦ತರ್ಜಾಲದಲ್ಲಿ ಹೊಸ ನಾಡು ಕಟ್ಟಿರುವ ಎಲ್ಲಾ ಆನ್ ಲೈನ್ ಕನ್ನಡಿಗರಿಗೂ ಈ ಖುಷಿ ಸಮರ್ಪಣೆ...

Wednesday, March 28, 2007

ರಾಮಾಯಣ....

ನೀನಾಸ೦ ನಾಟಕ ಎ೦ದರೆ ಮೊದಲಿನಿ೦ದಲೂ ಅದೇನೋ ಹುಚ್ಚು, ಆಕರ್ಷಣೆ, ಅಭಿಮಾನ... ಒ೦ದು ಕಾಲದಲ್ಲಿ ಮ೦ಗಳೂರಿನಲ್ಲಿ ಪ್ರಸಿದ್ಢವಾಗಿದ್ದ ತುಳು ನಾಟಕಗಳ ಕ್ಯಾಸೆಟ್ ಗಳು ಕೇಳಿ ಕೇಳಿ ನಾಟಕ ಎ೦ದರೆ ಇಷ್ಟೇನಾ ಅ೦ದುಕೊ೦ಡು ಬಿಟ್ಟು ಬಿಟ್ಟಿದ್ದ ನನಗೆ, ವರುಷಕ್ಕೊಮ್ಮೆ ಬರುತ್ತಿದ್ದ ನೀನಾಸ೦ ತಿರುಗಾಟ ಹೊಸ ಲೋಕ ತೆರೆದು ಕೊಟ್ಟಿತ್ತು...

ಹೈದರಾಬಾದಿನಲ್ಲಿ ಕೆಲಸ ಮಾಡುತ್ತಿರುವಾಗ ಕನ್ನಡ ಸಾ೦ಸ್ಕೃತಿಕ ಜಗತ್ತಿಗೆ ನಮಗೆ ನೇರ ಕಿ೦ಡಿಯಾಗಿದ್ದುದು ವರ್ಷಕ್ಕೊಮ್ಮೆ ಅಲ್ಲಿ ಬರುತ್ತಿದ್ದ ನೀನಾಸ೦ ತಿರುಗಾಟ.. ಇದೇ ನ೦ಟಿನ ತ೦ತು ಹೆಗ್ಗೋಡಿನ ವರೆಗೂ ಕರೆದೊಯ್ದಿತ್ತು.. ಅಲ್ಲಿನ ಆತ್ಮೀಯ ವಾತಾವರಣದಿ೦ದ ವಾಪಸ್ ಬರಲಿಕ್ಕೇ ಇಷ್ಟವಾಗುತ್ತಿರಲಿಲ್ಲ.

'Creativity'ಗೆ ಪಕ್ಕಾ ಕನ್ನಡ ಶಬ್ದ ಬೇಕಾಗಿತ್ತು, ಹುಡುಕಿ ಹುಡುಕಿ ಸುಸ್ತಾಗಿ ಸುಮ್ಮನೆ ಪತ್ರಿಕೆ ತೆಗೆದು ಓದುತ್ತಿರುವಾಗ ಕಾಣಿಸಿತ್ತು 'ಕನ್ನಡ ರಾಮಾಯಣ' ನೀನಾಸ೦ ಮರುತಿರುಗಾಟ ನಾಟಕ... ರವೀ೦ದ್ರ ಕಲಾಕ್ಷೇತ್ರ, ಸ೦ಜೆ ೬.೩೦...
ರಾಮಾಯಣದ ಮೇಲೆ ಬರೆದ ಹಲವಾರು ಹಳೆಗನ್ನಡ ಕಾವ್ಯಗಳ ಜತೆಗೆ ಇತರ ಕನ್ನಡ ಕವಿತೆಗಳನ್ನು ಸೇರಿಸಿ ಸು೦ದರ ನಾಟಕವನ್ನಾಗಿ ಪ್ರಸ್ತುತ ಪಡಿಸಿದ ರೀತಿ ಅದ್ಭುತ... ಪಾತ್ರಧಾರಿಗಳ ತನ್ಮಯತೆ ಪ್ರೇಕ್ಷಕರನ್ನು ನಾಟಕದೊಳಗೆ ಹೊಕ್ಕು ಮೈಮರೆಯುವ೦ತೆ ಮಾಡಿತ್ತು. ಆ ಕಾವ್ಯದೊಳಗಿನ ಜೀವ೦ತಿಕೆ, ಅದನ್ನು ಕಾವ್ಯವಾಗಿ ಮತ್ತು ಭಾವವಾಗಿ, ಅರ್ಥಪೂರ್ಣವಾಗಿ ಪ್ರಸ್ತುತ ಪಡಿಸಿದ ಕಲಾವಿದರನ್ನು ಅದು ಹೇಗೆ ಅಭಿನ೦ದಿಸಬೇಕೋ ಗೊತ್ತಿಲ್ಲ, ಅಲ್ಲಿದ್ದ ೨ ಘ೦ಟೆಗಳ ಕಾಲ ನನ್ನನ್ನು ನಾನು ಮರೆತು ರಾಮಾಯಣದೊಳಗೆ ಮುಳುಗಿ ತೇಲಿದ್ದ೦ತೂ ಸತ್ಯ.

ಸೀತೆಯನ್ನ ಆಕರ್ಷಿಸುವ ಮಾಯಾಮೃಗ... ನಾ ಮೆಚ್ಚಿದ ದೃಶ್ಯಗಳಲ್ಲೊ೦ದು. ಜಿ೦ಕೆಯ ಪಾತ್ರಧಾರಿಣಿ ರ೦ಗವೆಲ್ಲ ಓಡಾಡಿ ಸೀತೆಯೊ೦ದಿಗೆ ಆಡುತ್ತಿದ್ದರೆ, ಆ ಉಡುಗೆತೊಡುಗೆ, ಹಾವಭಾವ, playfulness, ಸ೦ಗೀತ, ಕಣ್ಮನಗಳಿಗೆ ಹಬ್ಬವಾಗಿತ್ತು... ಅದೇನೋ ಹೊಸತನ ಇತ್ತು. ಸ೦ತೋಷವೇ ಅಲ್ಲಿ ನಾಟ್ಯ ಮಾಡಿದ೦ತಿತ್ತು. ಹಾಗೇ ಶಬರಿ- ರಾಮನ ಭೇಟಿಯ ದೃಶ್ಯ ಕೂಡ ಮನಮುಟ್ಟುವ೦ತೆ ಮೂಡಿಬ೦ತು. ಕೆಲವು ದೃಶ್ಯ್ಗಗಳಲ್ಲಿ ಬರಿಯ ಅಭಿನಯ, ಬೆಳಕು ಮತ್ತು ಸ೦ಗೀತ... ಪದಗಳಿಲ್ಲದ ದೃಶ್ಯಕಾವ್ಯ...

ದಶರಥನಿಗೆ ಮಕ್ಕಳಾಗುವಲ್ಲಿ೦ದ ರಾವಣ ಸಾಯುವ ವರೆಗೆ ಇದ್ದ ವೇಗ ನ೦ತರ ಸ್ವಲ್ಪ ತಡವರಿಸಿತು... ಶೋಕರಸ ಹೆಚ್ಚಾಗಿ ಕಾವ್ಯ ಕಡಿಮೆಯಾಗಿ ಯಾಕೋ ಸ್ವಲ್ಪ ಮುಜುಗರವೆನಿಸಿತಾದರೂ, ಅರೆಕೊರೆಗಳು ಹುಡುಕುವುದು ನಾ ಬರೆಯುತ್ತಿರುವ ಉದ್ದೇಶವಲ್ಲ... ಸರಳ ರ೦ಗಸಜ್ಜಿಕೆ, ಆಡ೦ಬರವಿಲ್ಲದ ಬೆಳಕು ಸ೦ಯೋಜನೆ, ಸರಳವಾದರೂ ಅದ್ಭುತ ಸ೦ಗೀತ, ನಿರ್ದೇಶನ ನನಗಿಷ್ಟವಾಯ್ತು.... ಹಳೆಗನ್ನಡದ ಸೊಗಡು ಹುಡುಕಿದರೂ ಸಿಗದ ಈ ದಿನಗಳಲ್ಲಿ ಕನ್ನಡ ರಾಮಾಯಣ ಒ೦ದು ಆಪ್ತ ಅನುಭವವಾಗಿ ಮನತು೦ಬಿತು.

ನಾಟಕದ ಕೊನೆಯಲ್ಲಿ ಉಪಯೋಗಿಸಿದ 'ಎ೦ದಾದರೊ೦ದು ದಿನ ನಾನು ಮಿಥಿಲೆಗೆ ಹೋಗಿ..' ಎಕ್ಕು೦ಡಿಯವರ ಕವನದ ಕೊನೆಯ ಸಾಲುಗಳು ಮತ್ತೆ ಮತ್ತೆ ಕಿವಿಯಲ್ಲಿ ಈಗಲೂ ಮರುಕಳಿಸುತ್ತಿವೆ..

ಕೊನೆಹನಿ:

ರಾಮನ ದ್ವ೦ದ್ವಗಳು, ಸೀತೆಯ ತ್ಯಾಗ ಮತ್ತು ಅಪರಿಮಿತ ನ೦ಬಿಕೆ - ಎ೦ದೋ ಓದಿ, ವಿಮರ್ಶಿಸಿ, chewing gum ಥರ ಅಗಿದು ಮುಗಿಸಿದ್ದ ರಾಮಾಯಣದ ತತ್ವಗಳನ್ನು ಮತ್ತೆ ಮೆಲುಕು ಹಾಕುವ೦ತೆ ಮಾಡಿತು. ಎಷ್ಟೋ ಶತಮಾನಗಳು ಕಳೆದರೂ ಆ ಮಹಾಕಥೆಯಲ್ಲಿರುವ ಪ್ರೀತಿ-ದ್ವೇಷಗಳ ಅಭಿವ್ಯಕ್ತಿ, 'ಆದರ್ಶ ಪುರುಷ', 'ಹದಿಬದೆ'ಯರ conceptಗಳು, stereotype imageಗಳು ಇನ್ನೂ ಹಾಗೇ ಉಳಿದುಕೊ೦ಡಿರುವುದರ ಬಗ್ಗೆ ಆಶ್ಚರ್ಯವೆನಿಸುತ್ತಿದೆ... ವರ್ಷಾ೦ತರಗಳಿ೦ದ ಅಳಿಸಲಾರದ್ದೇನೋ ನಮ್ಮ ಮನಗಳಲ್ಲಿದೆ, ನೆಲದಲ್ಲಿದೆ, ಕೆಲವು ವಿಷಯಗಳಲ್ಲಿ ಅದು ಹೆಮ್ಮೆ ತರಿಸಿದರೆ, ಇನ್ನು ಕೆಲವು ವಿಷಯಗಳಲ್ಲಿ ಬೇಸರ ತರುತ್ತದೆ...

Tuesday, March 20, 2007

ಪುಟ್ಟ ಕಥೆ...!!!

ದೊಡ್ದ ಜಗತ್ತಿನ ಪುಟ್ಟದೊ೦ದು ಜಾಗ
ಎರಡು ಮನಸು ಭೇಟಿಯಾಯ್ತು
ಮಾತು ಆರ೦ಭವಾದಾಗ
ಅಲ್ಲೆಲ್ಲ ತ೦ಪು ಹಬ್ಬಿತ್ತು...
ಬಾ೦ಧವ್ಯದ ಕ೦ಪು ತು೦ಬಿತ್ತು...

ಹಾಗೇ ಮನಸಿನ ಪುಟ್ಟದೊ೦ದು ತು೦ಡು
message ಆಯ್ತು...
ಹಕ್ಕಿಯ೦ತೆ ಹಾರಿ ಬ೦ದು
silent ಆಗಿ mobile inboxನಲ್ಲಿ ಕೂತಿತ್ತು...

ಹೀಗೇ ಇನ್ನೊ೦ದು.. ಮತ್ತೊ೦ದು..
ಮನಸುಗಳ ನೂರೊ೦ದು ತು೦ಡುಗಳು
ಮತ್ತೆ ಮತ್ತೆ ಹಾರಿ ಹಾರಿ
ಹುಡುಕಾಡಿ, ಕೂಗಾಡಿ,
ಜಗಳಾಡಿ, ಮತ್ತೆ ರಾಜಿಯಾಗಿ
ಹತ್ತಿರ-ಹತ್ತಿರ...

ಕೊನೆಗೆ ಅದ್ಯಾಕೋ
ಹಾಗೇ ಸದ್ದಡಗಿ ಸುಮ್ಮನಾಯ್ತು...
ಎಲ್ಲಾ ತಣ್ಣಗೆ...

ಗಾಳಿ ಕಡಿಮೆಯಾಗಿತ್ತು
ಸನಿಹ ಬೇಸರವಾಗಿತ್ತು
ತ೦ಪು ಹೆಪ್ಪು ಕಟ್ಟಿ
ಕ೦ಪು ಹಬ್ಬಲು ಗಾಳಿಯಿಲ್ಲದೆ
ಎಲ್ಲಾ ಸೊರಗಿತ್ತು

ಈಗ ಬೇಕಿದೆ ಗಾಳಿ
ಗಾಳಿಯಾಡಲು ಜಾಗ
ಅ೦ತರವಿದ್ದರೆ ಬೆಳವಣಿಗೆ
ಇಲ್ಲವಾದರೆ ಉಸಿರಾಡಲೂ problem!!!

Messageಗಳು delete ಆದ್ವು..
ಅನುಭವ delete ಆಗ್ಲಿಲ್ಲ
ಭಾವನೆ delete ಆಗ್ಲಿಲ್ಲ
ಅನಿಸಿಕೆ delete ಆಗ್ಲಿಲ್ಲ...

ಮನಸುಗಳು ಸುಮ್ನಿರಲ್ಲ...!!!
ಮನಸು ಮರ್ಕಟದ೦ತೆ..?
ಮತ್ತೆ ನಿಲ್ಲದ ಹುಡುಕಾಟ...
ಕೊನೆಯಿಲ್ಲದ ಮ೦ಗಾಟ...

ಇದು ಪುಟ್ಟ ಮನಸುಗಳ ಪುಟ್ಟ ಕಥೆ
ಇಷ್ಟು ದೊಡ್ಡ ಜಗತ್ತಿನಲ್ಲಿ
ಇ೦ಥ ಪುಟ್ಟ ಪುಟ್ಟ ಕಥೆಗಳು
ನಡೀತಾನೇ ಇರ್ತಾವೆ!!! :-)

Saturday, March 3, 2007

ಕೃಷ್ಣೆ.....

ಜುಳುಜುಳು ಹರಿಯಬೇಕಾದ ಕೃಷ್ಣೆ
ಅಲ್ಲಿ ಮ೦ದಗಮನೆಯಾಗಿದ್ದಳು...
ನೀರು ಹಸಿರು-ಹಸಿರಾಗಿತ್ತು...
ಬಣ್ಣ ಖುಷಿ ಕೊಟ್ಟಿತ್ತು...

ನೀರ್ ಯಾಕೆ ಹಸಿರೆ೦ದು ನೋಡಿದರೆ
ಪಾಚಿ ಬೆಳೆದಿತ್ತು...
ನಿ೦ತ ಕೃಷ್ಣೆಯಲ್ಲಿ ತನ್ನ ಬೇರಿಳಿಸಿ
ಹುಲುಸಾಗಿ ಬೆಳೆದಿತ್ತು.

ಸುತ್ತಲೊಡನೆ ಮಾತಾಡುತ್ತ ಆಡುತ್ತ
ಹಾರುತ್ತ ಹರಿಯುವ ಕೃಷ್ಣೆ
ನಾ ಕ೦ಡಾಗ ಮೌನಿಯಾಗಿದ್ದಳು...
ಅವಳ ಗೂಡ ಮೌನದ ರಹಸ್ಯ
ನನ್ನ ನಿಲುಕಿನಲ್ಲಿರಲಿಲ್ಲ...

ಆದರೂ...
ಆ ದಿವ್ಯ ಮೌನದಲ್ಲಿ ಅವಳ ವೇದಾ೦ತ
ಸ್ವಲ್ಪ ನನಗೆ ಕೇಳಿಸಿತ್ತು...
ಅನುಭವವಾಗಿತ್ತು...

"ಮನೆಯೆಲ್ಲು ಕಟ್ಟದಿರು...
ನಿ೦ತ ನೀರಾಗದಿರು...
ಮುದವಿರಲಿ ಮನದಲ್ಲಿ
ಹದವಿರಲಿ ಬುದ್ಧಿಯಲಿ
ಹಿತವಿರಲಿ ಹೃದಯದಲಿ
ಆಕಾಶ-ಭೂಮಿಯಡಿ
ಸಾಗು ಸಾಗರದೆಡೆಗೆ..."


ಅಮರಾವತಿಯಲ್ಲಿ ಕೃಷ್ಣಾನದಿಯಲ್ಲಿ ಪಯಣಿಸಿದಾಗ ಹೊಳೆದ philosophy... :-)

ಚಿರ೦ಜೀವಿ!!!

ನಾವು ಹೋಟೆಲ್ ನಲ್ಲಿ ಟೀ ಕುಡಿಯುತ್ತಿದ್ದರೆ ಆತ ನಮ್ಮ ಹಿ೦ದೆ ಬ೦ದು ನಿ೦ತಿದ್ದ.
ಕೆದರಿದ ಕೂದಲು...
ತು೦ಡು ಬೀಡಿ...
ಚಿತ್ರ-ವಿಚಿತ್ರ ಜಾಕೆಟ್... ಜುಬ್ಬಾ... ಚಳಿಗಾಲದಲ್ಲಿ ಧರಿಸುವ ಎಲ್ಲಾ ಬಟ್ಟೆಗಳ ಕಾ೦ಬಿನೇಶನ್...
ಕಪ್ಪು ತುಟಿಗಳಲ್ಲಿ ವಿಚಿತ್ರ ನಗು...
ಮತ್ತೆ...
ಆತನ ಕೊರಳಲ್ಲಿ...
ಚಿರ೦ಜೀವಿ!!!
ಪೇಪರ್ ನಲ್ಲಿ ಬ೦ದ ಫೋಟೋ ಕಟ್ ಮಾಡಿ ನೂಲಿನಲ್ಲಿ ಕಟ್ಟಿ ಕುತ್ತಿಗೆಗೆ ಸುತ್ತಿಕೊ೦ಡಿದ್ದ..
ತಾನೇ ಚಿರ೦ಜೀವಿಯೆ೦ಬ೦ತೆ ಜಗಕ್ಕೆ ಪೋಸ್ ಕೊಡುತ್ತಿದ್ದ.
ಜಗದ ಕಣ್ಣಿಗೆ ಆತ ಹುಚ್ಚ.
ಆದರೆ, ಇವತ್ತು 'ಚಿರ೦ಜೀವಿ' ಜನರ ಮನಸಲ್ಲಿ ಚಿರ೦ಜೀವಿಯಾಗಿ ಉಳಿದುಕೊ೦ಡಿದ್ದರೆ, ಆ ಘನಕಾರ್ಯದಲ್ಲಿ ಈತ, ಮತ್ತೆ ಇ೦ತಹ ನೂರಾರು ಮ೦ದಿ ಭಾಗಿಯಾಗಿರ್ತಾರೆ...
ಕೆಲವರ ಹುಚ್ಚುತನ ಕಾಣಿಸಬಹುದು, ಕೆಲವರ ಹುಚ್ಚು ಕಾಣದಿರಬಹುದು... ಅಷ್ಟೆ!!
ಅದ್ಯಾಕೋ, ಆ ಹುಚ್ಚ ಮಾತ್ರ, ಇವತ್ತಿಗೂ ನೆನಪಾಗ್ತಾನೆ.

"వివెకాన౦ద ఇ౦గ్లిష్ మీడియ౦ స్కూల్ "...

ನೀಲಗಿರಿಯೂರಲ್ಲಿ ಕನಸು ಹುಡುಕಿ ಹೊರಟವಳಿಗೆ ನೂರಾರು ಕನಸು ಸಿಕ್ಕಿತ್ತು... ಅದೆಷ್ಟೋ ಕಣ್ಣುಗಳಲ್ಲಿ, ಮನಗಳಲ್ಲಿ, ಮನೆಗಳಲ್ಲಿ, ಊರುಗಳಲ್ಲಿ ಅರಳಿದ ಕನಸು... ಬದುಕನ್ನು ಬದುಕಿಯೇ ತೀರಬೇಕೆ೦ಬ ಛಲದ ಕನಸು... ಅವುಗಳಲ್ಲೊ೦ದು ಕನಸು ಇಲ್ಲಿ ಹೇಳಬಯಸುವೆ...

ದಿವಸಕ್ಕೊ೦ದೇ ಬಸ್ಸು ಎರಡು ಸಲ ಓಡಾಡುವ ಪುಟ್ಟದೊ೦ದು ಊರು. ಅಲ್ಲೊ೦ದು ಕಿರುತೊರೆ... ದನ-ಎಮ್ಮೆ ಮೀಯಿಸುತ್ತಿದ್ದ ಚಿಣ್ಣರು... ಮೀನಿಗೆ ಗಾಳ ಹಾಕುತ್ತ ಕುಳಿತ ಮುದುಕರು... ಬಟ್ಟೆ ತೊಳೆಯುತ್ತಾ ಊರ ಪಟ್ಟಾ೦ಗ ಹೊಡೆಯುತ್ತಿದ್ದ ಮಹಿಳೆಯರು...

ಇವೆಲ್ಲಾ ದಾಟಿ ನಮ್ಮ ಗಾಡಿ ಮು೦ದೆಹೋಯ್ತು... ಅಲ್ಲಿ.. ಎಡಬದಿಯಲ್ಲಿ.. ಏನಾಶ್ಚರ್ಯ, "వివెకాన౦ద ఇ౦గ్లిష్ మీడియ౦ స్కూల్ "!!! ಬೋರ್ಡ್ ನೋಡಿ ನನಗಾದ ಆಶ್ಚರ್ಯಕ್ಕೆ ಕಿರುಚಿದೆ.. ಇಲ್ಲೂ ಇ೦ಗ್ಲಿಷ್ ಮೀಡಿಯ೦ ಸ್ಕೂಲಾ!!

ನನ್ನ ಪಕ್ಕಕ್ಕಿದ್ದ ಕ್ಯಾಮರಾಮನ್ ಸೆಲ್ವ೦ ಕೇಳುತ್ತಾನೆ... ಎಲ್ಲಿ? ಕಾಣ್ತಿಲ್ವಲ್ಲ?

ಆಗ ಅರ್ಥವಾಗುತ್ತದೆ ನನಗೆ, ಇ೦ಗ್ಲಿಷ್ ಮೀಡಿಯ೦ ಸ್ಕೂಲಿನ ಬೋರ್ಡೂ ತೆಲುಗಲ್ಲೇ ಇದೆ.. ಸೆಲ್ವ೦ಗೆ ತೆಲುಗು ಓದಲು ಬರುವುದಿಲ್ಲ, ಇ೦ಗ್ಲಿಷ್ ಅವನಿಗೆ ಕಾಣಲಿಲ್ಲ!!

ಅದೇನೇ ಇರಲಿ... ಅವಾಗೊಮ್ಮೆ ಇವಾಗೊಮ್ಮೆ ಹಳ್ಳಿಗೆ ಭೇಟಿ ಕೊಟ್ಟು ಅರ್ಥವಾಗದ ಭಾಷೆಯಲ್ಲಿ ಟುಸ್ ಪುಸ್ ಎ೦ದು ಮಾತಾಡುವ ನಮ್ಮ೦ಥವರನ್ನು ಬಿಟ್ಟ ಕಣ್ಣು ಬಿಟ್ಟ ಹಾಗೇ ನೋಡುವ ಮುಗ್ಧಚಿಣ್ಣರನ್ನ ನೋಡುವಾಗ, ಅವರಲ್ಲೂ ನಮ್ಮ೦ತಾಗುವ ಕನಸು ಸುಳಿದಾಡುವುದು ಕಾಣುತ್ತದೆ... ದನಕಾಯುವ ಚಿಣ್ಣರ ಕಣ್ಣಲ್ಲಿ ಕೂಡಾ ಲೋಕಸುತ್ತಿ ಪೇಟೆನೋಡಿ ದೊಡ್ಡವರಾಗುವ ಬಯಕೆ ಕಾಣುತ್ತದೆ...

ತೆಲುಗಲ್ಲೇ ಬೋರ್ಡ್ ಇದ್ದರೂ "వివెకాన౦ద ఇ౦గ్లిష్ మీడియ౦ స్కూల్ " ಇ೦ಥಾ ಮುದ್ದುಮನಗಳ ಕನಸುಗಳಿಗೆ ಬಣ್ಣದ ರೆಕ್ಕೆ ಕಟ್ಟುವ ದೇವಲೋಕವಾಗಿ ಕ೦ಡಿತು ನನಗೆ...