Monday, December 29, 2008

ಹಕ್ಕಿ ಗೂಡು ಮರೆತು ಹಾರಿದಾಗ...

ವಲಸೆ ಹಕ್ಕಿ ಸಮಯ ಬಂದಾಗ ತನ್ನ ಪಾಡಿಗೆ ತಾನು ಹಾರಿ ಹೋಗುತ್ತದೆ... ಆದರೆ ಹಕ್ಕಿಯ ಗೂಡು ಮಾತ್ರ ಮತ್ತೆಂದಾದರೂ ಹಕ್ಕಿ ಮರಳುವುದೆಂಬ ಆಸೆಯಲ್ಲಿ ಕಾಯುತ್ತದೆ...
--------
ಗೂಡು ನಿರ್ಜೀವ. ಅದಕ್ಕೆ ಹಾರಲಾಗದು.
--------
ಹಾರಲಾಗದ್ದೆಲ್ಲಾ ನಿರ್ಜೀವವಲ್ಲ... ಹಕ್ಕಿಯೇ ಶ್ರದ್ಧೆಯಿಂದ ಕಟ್ಟಿದ ಗೂಡದು, ಬೇಕಾದಾಗ ಬೆಚ್ಚನೆಯ ಮನೆಯಾಗಿತ್ತು... ಹಕ್ಕಿಗೆ ಎಷ್ಟು ಗೂಡೋ? ಆದರೆ ಗೂಡಿಗೆ ಅದೊಂದೇ ಹಕ್ಕಿ...!
--------
ಹಕ್ಕಿಯೇ ಕಟ್ಟಿದ್ದು ಗೂಡನ್ನ!
--------
ಹೌದು, ಹಕ್ಕಿಯೇ ಕಟ್ಟಿದ್ದು ಗೂಡನ್ನ! ಮತ್ತೆ ಬರೋದಿಲ್ಲ ಅಂತ ಗೊತ್ತಿದ್ಮೇಲೆ ಕಟ್ಬೇಕು ಯಾಕೆ?
--------
ಹಕ್ಕಿಗೆ ಬಯಲಲ್ಲಿ ಮಲಗಲಾಗದು! ಮನೆ ಬೇಕು, ಅದರ ಶ್ರಮ, ಅದರ ಆಸಕ್ತಿ, ಗೂಡು ಕಟ್ಟಿತು.
--------
ಬಯಲಲ್ಲಿ ಮಲಗಲಾಗದಿದ್ದ ಮೇಲೂ ಬಯಲಿನ ಮೋಹ ಹಕ್ಕಿಯನ್ನು ಬಿಡಲಿಲ್ಲ... ಈಗೇನೋ ಇರುವುದೆಲ್ಲವ ಬಿಟ್ಟು ಹಾರಿಹೋಗಿದೆ ಹಕ್ಕಿ, ಎಷ್ಟಂದರೂ ವಲಸೆ ಹಕ್ಕಿ, ಮರಳಿ ಬಂದೀತು ಒಂದು ದಿನ, ಆಗ ಗೂಡಿರದು, ಮತ್ತೆ ಹೊಸ ಗೂಡು ಕಟ್ಟುವ ಸಂಭ್ರಮದ ಹಕ್ಕಿಗೆ ಗೂಡಿನ ನೆನಪೂ ಇರದು!
----------
ಅದು ಜೀವನ ಚಕ್ರ...
----------

Friday, December 12, 2008

......


ಮೊಗತುಂಬಿದ ಗತ್ತು ಕರಗಿಸಿ
ನಗುವಿನ ಮುಖವಾಡ ಸರಿಸುತ್ತ
ಖಾಲಿಖಾಲಿಯ ಹೊತ್ತುಬರುವ
ನೀಲಿನೀಲಿಯ ಈ ಹೊತ್ತು
ನೀ ನನ್ನೊಡನಿರಬೇಕಿತ್ತು...

ನಾನಲ್ಲದ ನಾನು
ನನ್ನಿಂದ ಹೊರಬಂದು
ನಾನು ನಾನಾಗುವ ಹೊತ್ತು
ನೀ ನನ್ನೊಡನಿರಬೇಕಿತ್ತು...

ಮನತುಂಬಿದ ಸೊನ್ನೆಗೆ ಅರಿವಿದೆ
ಕಣ್ಣಂಚಲರಳಿದ ಹನಿಗೆ ಅನಿಸಿದೆ
ಸೋಗಲಾಡಿ ನಗುವಿಗೂ ಬೇಕಿದೆ

ನೀನಿದ್ದರೆ ಚೆನ್ನಾಗಿತ್ತು...
ನೀನಿರಬೇಕಿತ್ತು...

ನೀ ನನ್ನೊಡನಿರಬೇಕಿತ್ತು...

Wednesday, December 3, 2008

ನಾವು ಮರೆತ ಪ್ರತಿಜ್ಞೆ...

GENERAL PLEDGE

India is my country. All Indians are my brothers and sisters. I Love my country. I am proud of its rich and varied culture. I shall always strive to be worthy of it. I shall love and respect my parents, teachers and elders. To my country and my people I pledge my devotion. In their well being and prosperity alone lies my happiness.

NATIONAL INTEGRATION PLEDGE
I solemnly pledge to work with dedication to preserve and strengthen the freedom and integrity of the nation. I further affirm that I shall never resort to violence and that all differences and disputes relating to religion, language, region or other political or economic grievances should be settled by peaceful and constitutional means.

ಚಿಕ್ಕಂದಿನಲ್ಲಿ ಶಾಲೆಯಲ್ಲಿ ಕಲಿತಿದ್ದು

ಭಾರತವು ನನ್ನ ದೇಶ. ಭಾರತೀಯರೆಲ್ಲರೂ ನನ್ನ ಸಹೋದರ ಸಹೋದರಿಯರು. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಅದರ ಸಂಪನ್ನ ಹಾಗೂ ವೈವಿಧ್ಯಪೂರ್ಣ ಪರಂಪರೆಗೆ ನಾನು ಹೆಮ್ಮೆ ಪಡುತ್ತೇನೆ. ಅದಕ್ಕೆ ಅರ್ಹನಾಗಲು ನಾನು ಸದಾ ಪ್ರಯತ್ನಿಸುತ್ತೇನೆ. ನಾನು ನನ್ನ ತಂದೆತಾಯಿ ಮತ್ತು ಗುರುಹಿರಿಯರನ್ನು ಗೌರವಿಸುತ್ತೇನೆ ಹಾಗೂ ಅವರೊಡನೆ ಸೌಜನ್ಯದಿಂದ ವರ್ತಿಸುತ್ತೇನೆ. ನಾನು ನನ್ನ ದೇಶ ಮತ್ತು ಜನರಿಗೆ ನನ್ನ ಶ್ರದ್ಧೆಯನ್ನು ಮುಡಿಪಾಗಿಡುತ್ತೇನೆ. ಅವರ ಕ್ಷೇಮ ಮತ್ತು ಸಮೃದ್ಧಿಯಲ್ಲೇ ನನ್ನ ಆನಂದವಿದೆ.

ನಾವೆಲ್ಲ ಚಿಕ್ಕವರಿರುವಾಗ, ನಾ ಕಲಿತ ಕೇರಳದ ಕಾಸರಗೋಡಿನಲ್ಲಿರುವ ಸರಕಾರಿ ಶಾಲೆಯಲ್ಲಿ ದಿನವೂ ಬೆಳಿಗ್ಗೆ ಪ್ರತಿಜ್ಞೆ ಮತ್ತು ಪ್ರಾರ್ಥನೆಗಳ ನಂತರವೇ ಪಾಠಗಳು ಆರಂಭವಾಗುತ್ತಿದ್ದವು. ಕರ್ನಾಟಕದಲ್ಲೂ ಹಾಗೆಯೇ ಇತ್ತಾ? ಈಗಲೂ ಈ ಪದ್ಧತಿ ಇದೆಯಾ? ಬೇರೆ ರಾಜ್ಯಗಳಲ್ಲಿ ಕೂಡ ಪ್ರತಿಜ್ಞೆ ಬೋಧಿಸುವ ಪದ್ಧತಿ ಇದೆಯಾ? ನೀವೆಲ್ಲಾ ನನ್ನ ಹಾಗೆ ದಿನವೂ ಪ್ರತಿಜ್ಞೆ ಮಾಡಿಕೊಂಡೇ ಬೆಳೆದವರಾ? :-)

ಗೊತ್ತಿದ್ದವರಿಂದ ಉತ್ತರದ ನಿರೀಕ್ಷೆಯಲ್ಲಿದ್ದೇನೆ.

Saturday, November 29, 2008

ಈಶ್ವರ್ ಅಲ್ಲಾ...

ಸುಮ್ಮನಿರೋಣ ಅಂದುಕೊಂಡಿದ್ದು ನಿಜ. ಆದರೆ ಯಾಕೋ ಬೇಜಾರಾಗಿದೆ. ಯಾಕೋ ಬರೆಯಲೇಬೇಕೆನ್ನಿಸಿದೆ.
ईश्वर अल्लाह तेरे जहाँ में
नफ़रत क्यों है जंग है क्यों
तेरा दिल तो इतना बड़ा है
इन्साँ का दिल तंग है क्यों...

क़दम क़दम पर सरहद क्यों है
सारी ज़मीं जो तेरी है
सूरज के फेरे करती है
फिर भी कितनी अंधेरी है
इस दुनिया के दामन पर
इन्साँ के लहू का रंग है क्यों...

ईश्वर अल्लाह तेरे जहाँ में
नफ़रत क्यों है, जंग है क्यों
तेरा दिल तो इतना बड़ा है
इन्साँ का दिल तंग है क्यों...

गूँज रही हैं कितनी चीखें
प्यार की बातें कौन सुने
टूट रहे हैं कितने सपने
इनके टुकड़े कौन चुने
दिल के दरवाज़ों पर ताले
तालों पर ये ज़ंग है क्यों...

ईश्वर अल्लाह तेरे जहाँ में
नफ़रत क्यों है, जंग है क्यों
तेरा दिल तो इतना बड़ा है
इन्सां का दिल तंग है क्यों...

ಜಾವೇದ್ ಅಖ್ತರ್ ಬರೆದ ಚಂದದ ಈ ಹಾಡು, 1947-EARTH ಚಿತ್ರದ್ದು. ಎ ಆರ್ ರೆಹಮಾನ್ ಸಂಗೀತ, ದೀಪಾ ಮೆಹ್ತಾ ನಿರ್ದೇಶನದ ಈ ಚಿತ್ರದಲ್ಲಿ, ದೇಶವಿಭಜನೆಯ ಸಮಯದಲ್ಲಿ ಆದ ದಂಗೆಗಳ ಸಮಯ ನಡೆದ ಘಟನೆಗಳ ಕುರಿತು ಚಿತ್ರಣವಿದೆ... ಸ್ವಾರ್ಥಕ್ಕೆ ಅಡಿಯಾಳಾಗುವ ಮಾನವ, ಧರ್ಮದ ಹೆಸರಲ್ಲಿ ತನ್ನ ಸ್ವಾರ್ಥಸಾಧನೆ ಹೇಗೆ ಮಾಡಿಕೊಳ್ಳುತ್ತಾನೆಂಬುದನ್ನು ಎಳೆಎಳೆಯಾಗಿ ಬಿಡಿಸಲಾಗಿದೆ... ನಂದಿತಾ ದಾಸ್, ಅಮೀರ್ ಖಾನ್, ರಾಹುಲ್ ಖನ್ನಾರ ಅದ್ಭುತ ನಟನೆಯಿದೆ... ಬೆಚ್ಚಿಬೀಳಿಸುವಂತಹ ಕೋಲ್ಡ್-ಬ್ಲಡೆಡ್ ಮರ್ಡರ್-ನ ದೃಶ್ಯಗಳಿವೆ... ಜತೆಗೆ ಈ ಚಂದದ ಹಾಡೂ ಕೂಡ. ಈ ಚಿತ್ರ ನೋಡದವರಿಗೆ ನೋಡಲಿಕ್ಕಿದು ಸಕಾಲ.

--------------------

ಒಬ್ಬನಿದ್ದ, ಸೃಜನಶೀಲ ವ್ಯಕ್ತಿ. ಬರಿಯ ನಗೆಚಾಟಿಕೆ ಹಾರಿಸಿಕೊಂಡು, ಸರಳವಾಗಿದ್ದ ಆತ, ಎಲ್ಲರ ನಡುವಿದ್ದೂ ಎಲ್ಲರಿಗಿಂತ ಭಿನ್ನವಾಗಿದ್ದ. ನಗುವಿದ್ದರೆ ಎಲ್ಲರಿಗೂ ಹಂಚುತ್ತಿದ್ದ ಗೆಳೆಯ, ಅಳುವಿದ್ದರೆ ಬಿಸ್ಮಿಲ್ಲಾಖಾನ್ ಜತೆ ಮಾತ್ರ ಹಂಚಿಕೊಳ್ಳುತ್ತಿದ್ದ.
ಸುಮ್ಮನೆ ಕೂತಲ್ಲಿ ಕೂರಲಾರದವ, ಏನಾದರೂ ವಿಭಿನ್ನವಾಗಿ ಮಾಡುತ್ತಲೇ ಇರುತ್ತಿದ್ದವ. ದೇಶದ ವಿವಿಧೆಡೆಯಿಂದ ಬಂದ ದೃಶ್ಯಗಳನ್ನು ಕತ್ತರಿಸಿ, ಈ ಹಾಡಿಗೆ ಸೂಕ್ತವಾಗುವಂತೆ ದೃಶ್ಯಗಳನ್ನು ಸೂಪರ್-ಇಂಪೋಸ್ ಮಾಡಿದ್ದ. ಸೂಕ್ತವಾದ ದೃಶ್ಯಗಳು ಸಿಗದಿದ್ದಲ್ಲಿ ಸಿಗುವವರೆಗೆ ಹುಡುಕಿ ಹಾಕಿದ್ದ. ಚಲನಚಿತ್ರದಲ್ಲಿರುವ visualizationಗಿಂತ ಭಿನ್ನವಾಗಿ, ಪ್ರಸ್ತುತ ಪರಿಸ್ಥಿತಿಗೆ ಅನ್ವಯವಾಗುವಂತೆ ಅದನ್ನು ದೃಶ್ಯೀಕರಿಸಿ ಎಡಿಟ್ ಮಾಡಿದ್ದ. (ಅದರ ವೀಡಿಯೋ ನನ್ನ ಬಳಿ ಇಲ್ಲ, ಇದ್ದವರು ಇಂಟರ್ನೆಟ್ಟಿಗೆ ಅಪ್-ಲೋಡ್ ಮಾಡಿ, ತುಂಬಾನೇ ಚೆನ್ನಾಗಿದೆ ಅದು.)

--------------------

ಇನ್ನೊಂದು ಪ್ರೋಮೋ ಮಾಡಿದ್ದ ಈತ, ನಂಗಂತೂ ತುಂಬಾ ಇಷ್ಟವಾಗಿತ್ತು ಅದು. abstract ಆಗಿದ್ದರೂ ಸುಲಭವಾಗಿ ಅರ್ಥವಾಗುವ ಯೋಚನಾ ಸರಣಿ... (ಸಿದ್ದೇಶ್, ಅದರ ಆಡಿಯೋ ಸರಿಮಾಡಿ ಅಪ್-ಲೋಡ್ ಮಾಡಿದರೆ ಉತ್ತಮ...)
" ನಮ್ಮ ಊರುಗಳು, ಮತ್ತೆ ನಮಗೆ ಸಿಗಬೇಕಾಗಿದೆ...
ನಮ್ಮ ಮನೆಗಳಲ್ಲಿ ದೀಪಗಳು ಪ್ರೀತಿಯಿಂದ ಉರಿಯಬೇಕಾಗಿದೆ...
ನಾವು, ಬಾಪೂಜಿಯ ಆದರ್ಶಗಳೊಂದಿಗೆ ಬೆಳೆದವರು...
ಬಸವಣ್ಣನ ಕರ್ಮಭೂಮಿ ನಮ್ಮದು...
ಪ್ರಾಮಾಣಿಕತೆ, ನೇರ ನೋಡುವ ಶಕ್ತಿ
ಅನಿಸಿದ್ದನ್ನು ಸ್ಪಷ್ಟವಾಗಿ ಹೇಳುವ ನಿಷ್ಠುರತೆ...
ನಮ್ಮಲ್ಲಿರಬೇಕು..
ಅದೇ ಪ್ರಜಾಪ್ರಭುತ್ವದ ಗೆಲುವು...
ಅದೇ ಪ್ರಜಾಪ್ರಭುತ್ವದ ಹೆಮ್ಮೆ.

ಈ ಹೆಮ್ಮೆಗಾಗಿ, ಈ ಗೆಲುವಿಗಾಗಿ, ನಾವು ನಿಮ್ಮೊಂದಿಗಿದ್ದೇವೆ..."

-----------------------------------
ಈಗ ರವೀಂದ್ರ ಇಲ್ಲ... ಇರಬೇಕಿತ್ತು.

Saturday, November 22, 2008

ಕರಿಪರದೆ


ಆರ್ಕಿಡ್ ಹೋಟೆಲ್ ಕಟ್ಟಿದ ಹೋಟೆಲಿಯರ್ ವಿಠಲ ಕಾಮತ್ ಆತ್ಮಕಥೆ ಓದುತ್ತಿದ್ದೆ, ಅದರಲ್ಲಿದ್ದ ಸಾಲುಗಳು...

डूबता सूरज् हूँ, कोई पूजता नहीँ...

कल सुबह निकलूँगा, देवता बन जावूँगा...

ಜಗತ್ತಿನಲ್ಲಿ ಗೆಲುವು ಎಷ್ಟು ಮುಖ್ಯ ಎನ್ನುವ ಕಹಿ ಸತ್ಯದ ಬಗ್ಗೆ ಪ್ರಾಕ್ಟಿಕಲ್ ಆಗಿ ಬರೆದ ಸಾಲುಗಳು, ಯಾಕೋ ಅರಗಿಸಿಕೊಳ್ಳಲು ಕಷ್ಟವಾದರೂ ಸತ್ಯವೆನಿಸಿದವು.

-----------------------------

ಯಾಕೋ ಮಾತಿನ ಜಗತ್ತು ಸಾಕಾಗಿದೆ, ಕನಸು ಕಟ್ಟುವುದು ನಿಲ್ಲಬೇಕಿದೆ... ಮೌನ ಒಂದಿಷ್ಟು ದಿನ ಬೇಕೆನಿಸಿದೆ.

ಸದ್ಯಕ್ಕೆ ಬರಹಕ್ಕೆ ಟಾಟಾ. ಮತ್ತೆ ಬರೀತೀನಿ ಯಾವತ್ತಾದ್ರೂ, ನೋಡೋಣ.

Saturday, November 15, 2008

ನೀವು ಕಾಣುವುದರ ಹಿಂದಿರುವ ನೀವು ಕಂಡಿಲ್ಲದವರು...!

ನನ್ನಂಥ ನೂರಾರು ಮಂದಿಯನ್ನು ಹುಟ್ಟುಹಾಕಿದ ಸಂಸ್ಥೆ... ಅದರ ಹಿಂದಿನ ಶಕ್ತಿಯನ್ನು ಈಗ ಇಷ್ಟು ದೂರದಿಂದ ನೋಡುವಾಗಲೂ ಹೆಮ್ಮೆಯೆನಿಸುತ್ತದೆ, ಬರೆಯಲು ಒಂದು ಸಾರಿ ಸಂಕೋಚವಾಯಿತು, ಆದರೂ, ಬರೆಯುತ್ತಿದ್ದೇನೆ...

'ಟೆಲಿವಿಶನ್ ಪ್ರೊಡಕ್ಷನ್ ಬಗ್ಗೆ ನಿಂಗೆ ಏನೇನು ಗೊತ್ತು?'

ಓದಿದ್ದು ಸಮೂಹ ಸಂವಹನವಾದರೂ, ಪ್ರೊಡಕ್ಷನ್ ಅಂದರೇನು ಅಂತ ಪ್ರಾಯೋಗಿಕವಾಗಿ ಗೊತ್ತಿಲ್ಲದಿದ್ದ ಕಾಲವದು. ಹಾಗಾಗಿ ನನಗೆ ಸುಳ್ಳುಹೇಳುವ ಇರಾದೆಯಿರಲಿಲ್ಲ, 'ಏನೂ ಗೊತ್ತಿಲ್ಲ' ಅಂತ ನೀಟಾಗಿ ಒಪ್ಪಿಕೊಂಡು ಬಿಟ್ಟೆ...

ಇಂಟರ್ವ್ಯೂ ತೆಗೆದುಕೊಳ್ಳುತ್ತಿದ್ದ ಹಿರಿಯ, ಆಗ ಈಟಿವಿ ನ್ಯೂಸ್-ನ ಮುಖ್ಯಸ್ಥರಾಗಿದ್ದ ಎಸ್.ರಾಮಾನುಜನ್. ಒಂದು ಕ್ಷಣ ಸುಮ್ಮನಿದ್ದವರು, ಮತ್ತೆ ಕೇಳಿದರು... 'ಕಲೀತೀಯಾ ಹೇಳ್ಕೊಟ್ಟಿದ್ದನ್ನ?'

'ಕಲೀತೇನೆ' ಅಂದೆ.

ಹಾಗೆ ಸೇರಿಕೊಂಡಿದ್ದೆ ಈಟಿವಿ, 8 ವರ್ಷಗಳ ಹಿಂದೆ. ಸುದ್ದಿಯ output ಕೊಡುವ production ವಿಭಾಗದಲ್ಲಿ ಆರಂಭವಾಗಿತ್ತು ನನ್ನ ವೃತ್ತಿ. ಅಲ್ಲಿ ಕಲಿಯುವ ಮನಸಿದ್ದವರಿಗೆ ಯಾವುದೇ boundary ಇರಲಿಲ್ಲವಾಗಿ, ಕಲಿಯುವ ಮನಸೂ ಇದ್ದುದರಿಂದ ಸುದ್ದಿ ನಿರ್ವಹಣೆಗೆ ಸಂಬಂಧಿಸಿದ್ದೆಲ್ಲವನ್ನೂ ಕಲಿಯುವ ಸದವಕಾಶ ಸಿಕ್ಕಿತ್ತು... ತಾಂತ್ರಿಕವಾಗಿ ಎಡಿಟಿಂಗ್-ನಿಂದ ಹಿಡಿದು, ಪಿಸಿಆರ್ ಕೆಲಸ, ಕಾರ್ಯಕ್ರಮ ನಿರ್ವಹಣೆ, ಸುದ್ದಿ ನೀಡುವ ಕಲೆ... ಹೀಗೆ ಎಲ್ಲವೂ ಒಂದೊಂದಾಗಿ ಒಲಿದು ಬಂತು.

ಟೇಪ್-ಗಳನ್ನು ಹಾಕಿಕೊಂಡು MANUAL ಆಗಿ, ಲಕ್ಷಗಟ್ಟಲೆ ಬೆಲೆಯ ಎಡಿಟಿಂಗ್ ಮೆಶಿನುಗಳ ಮೂಲಕ ಎಡಿಟಿಂಗ್ ಮಾಡುತ್ತಿದ್ದ ಕಾಲದಲ್ಲಿ ನಾವೆಲ್ಲ ಈಟಿವಿ ಸೇರಿಕೊಂಡಿದ್ದೆವು. ನಂತರ ಒಂದೆರಡು ವರ್ಷಗಳಲ್ಲಿ ಪ್ರವೇಶಿಸಿದ್ದು NON-LINEAR ಯುಗ. ಇದರಲ್ಲಿ ಕಂಪ್ಯೂಟರ್ ಮೂಲಕ ಎಡಿಟಿಂಗ್ ಸಾಫ್ಟ್-ವೇರ್ ಉಪಯೋಗಿಸಿ ಎಡಿಟಿಂಗ್ ಮಾಡಬಹುದಿತ್ತು. ಬಂದ ಸುದ್ದಿಚಿತ್ರಗಳನ್ನು ಕಂಪ್ಯೂಟರಿನಲ್ಲಿ ನೋಡಿ, ಕೇಳಿ, ಚೊಕ್ಕವಾಗಿ ಸ್ಕ್ರಿಪ್ಟ್ ಬರೆಯುವ ಜತೆಗೆ, ಅವರವರು ಬರೆದ ಸುದ್ದಿ ಅವರವರೇ ಎಡಿಟಿಂಗ್ ಮಾಡಬಹುದಿತ್ತು, ಸೃಜನಾತ್ಮಕವಾಗಿ ಏನಾದರೂ ಮಾಡಬಹುದಿತ್ತು...ಈ ವ್ಯವಸ್ಥೆಯಲ್ಲಿ ಸುದ್ದಿ ಕೊಡಲು ಬೇಕಾದ ಸಮಯ ಕಡಿಮೆಯಾಯಿತು, ವೇಗ ಹೆಚ್ಚಿತು.

ಎಲ್ಲಾ ಚಾನೆಲ್-ಗಳಿಗೆ ಬರುವ ಸುದ್ದಿಚಿತ್ರಗಳನ್ನು ಸ್ಟೋರ್ ಮಾಡಲು ಸೆಂಟ್ರಲೈಸ್ಡ್ ಸರ್ವರ್- ವ್ಯವಸ್ಥೆಯಿತ್ತು. ಕಡಿಮೆ ಸ್ಟೋರೇಜ್ ಸ್ಪೇಸ್-ನಲ್ಲಿ ಹೆಚ್ಚು ಸುದ್ದಿಚಿತ್ರಗಳನ್ನು ಇಟ್ಟುಕೊಳ್ಳಬಹುದಿತ್ತು. ಯಾವುದೇ ಜಿಲ್ಲೆಯ ಸುದ್ದಿಯಿರಲಿ, ಬಂದ ತಕ್ಷಣ ತಂತಾನೇ copy ಆಗಿ ಅದಕ್ಕಿರುವ ಫೋಲ್ಡರಲ್ಲಿ ಹೋಗಿ ಕೂರುತ್ತಿತ್ತು, ಹುಡುಕುವ ಕಷ್ಟವಿಲ್ಲದೆ ಬಂದ ತಕ್ಷಣ ಕೈಗೆ ಸಿಗುತ್ತಿತ್ತು. ತಾಂತ್ರಿಕವಾಗಿ ಯಾವುದೇ ಗ್ಲೋಬಲ್ ಸಂಸ್ಥೆಯ ಕಾಪಿರೈಟ್-ಗೆ ಒಳಗಾಗದ, ಕಡಿಮೆ ಖರ್ಚಿನ ಸರಳವಾದ NEWS EDITING SOFTWARES, ON-AIR SOFTWARE, LOWER THIRD GRAPHICS, ಮತ್ತು ಬರೆಯಲು ಬೇಕಿರುವ ಸಾಫ್ಟ್-ವೇರ್ ಅಭಿವೃದ್ಧಿಯಾಗಿತ್ತು. ಅದೂ ಲೈನಕ್ಸ್-ಬೇಸ್ಡ್ ಪ್ಲಾಟ್-ಫಾರಂನಲ್ಲಿ. ಟೀವಿ ಚಾನೆಲ್ಲುಗಳು ಸಾಫ್ಟ್-ವೇರ್-ಗಳಲ್ಲಿ ಸ್ವಾವಲಂಬನ ಸಾಧಿಸಬಹುದು ಎಂದು ಇಲ್ಲಿನ ವ್ಯವಸ್ಥೆ ಸಾಧಿಸಿ ತೋರಿಸಹೊರಟಿತ್ತು. ಈಗ ಹೊಸದಾಗಿ ಬರುತ್ತಿರುವ ಟೀವಿ ಚಾನೆಲ್ಲುಗಳೆಲ್ಲ ಎಡಿಟಿಂಗ್, ಸುದ್ದಿಕೋಣೆಯ ಸಾಫ್ಟ್-ವೇರ್ ಎಲ್ಲ ಒಟ್ಟು ಸೇರಿಸಿರುವ ನೆಟ್ವರ್ಕುಗಳಿಗೆ ತಲೆಬಾಗುತ್ತಿವೆ, ಲೈಸೆನ್ಸಿಗಾಗಿ ಪ್ರತಿವರ್ಷ ಕೋಟಿಗಟ್ಟಲೆ ದುಡ್ಡು ಮಲ್ಟಿನ್ಯಾಶನಲ್ ಸಾಫ್ಟ್-ವೇರ್ ಕಂಪೆನಿಗೆ ಸುರಿದು ದಾಸ್ಯದ ಬದುಕು ಬದುಕಹೊರಡುತ್ತಿವೆ.

ಮುಖ್ಯ ಸುದ್ದಿವಿಭಾಗವಿರುವುದು ಆಂಧ್ರದಲ್ಲಾದರೂ ಅದು ಗೊತ್ತೇ ಆಗದ ಹಾಗೆ, ಕರ್ನಾಟಕದ - ಮಾತ್ರವಲ್ಲ ದೇಶದೆಲ್ಲೆಡೆಯ ಸುದ್ದಿಗಳನ್ನು ವೇಗವಾಗಿ ಕೊಡುವ ತಾಂತ್ರಿಕತೆ ಈಟಿವಿಯಲ್ಲಿತ್ತು. ಸೆಟ್ - ತಯಾರಿ, ಗ್ರಾಫಿಕ್ಸ್-ನಿಂದ ಹಿಡಿದು, ಸ್ಟುಡಿಯೋ ಲೈಟಿಂಗ್-ವರೆಗೆ ಎಲ್ಲವನ್ನೂ ಗೊತ್ತಿಲ್ಲವೆಂಬ ಕುತೂಹಲಕ್ಕೆ ಕೇಳಿದರೆ ಹೇಳಿಕೊಡುವವರಿದ್ದರು. ಸಾಮರ್ಥ್ಯ ಮತ್ತು ಆಸಕ್ತಿಯಿದ್ದವರಿಗೆ ಇತರ ಭಾಷೆಗಳ ಚಾನೆಲ್-ಗಳಿಗೋಸ್ಕರ ಭಾರತದ ಇತರ ಭಾಗಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತಿತ್ತು. ಆಸಕ್ತಿಯಿಂದ ಏನಾದರೂ ಮಾಡಹೊರಟರೆ ಪ್ರೋತ್ಸಾಹ ಸಿಗುತ್ತಿತ್ತು. ಒಳ್ಳೆಯ value addition-ಗಳಿಗೆ ಸ್ವಾಗತವಿರುತ್ತಿತ್ತು. ಅಲ್ಲಿ ಸರಿ-ತಪ್ಪುಗಳನ್ನು ಪ್ರಶ್ನಿಸಬಹುದಿತ್ತು, ಕೇಳುವವರಿದ್ದರು, ಸ್ಪಂದಿಸುವವರಿದ್ದರು. ತಪ್ಪಿದ್ದರೆ ತಿಳಿಸಿ ಹೇಳುವವರೂ ಇದ್ದರು. ವೃತ್ತಿಯಲ್ಲಿ ಹೆಚ್ಚುಹೆಚ್ಚು ಕಲಿಸುವ ಜತೆಗೆ ಬದುಕಲಿಕ್ಕೂ ಕಲಿಸಿದ ಪಾಠಶಾಲೆ ರಾಮೋಜಿ ಫಿಲ್ಮ್ ಸಿಟಿ.

ಆಫೀಸ್ ಕ್ಯಾಂಟೀನ್-ನಲ್ಲಿ ಕಡಿಮೆ ಬೆಲೆಗೆ ಹಲವಾರು ಐಟಂಗಳಿರುವ ಊಟ ಸಿಗುತ್ತಿತ್ತು. ಕ್ಯಾಂಟೀನ್ ಊಟವಾದ ಕಾರಣ ಸರಿಯಿಲ್ಲವೆಂದು ಬೈದುಕೊಳ್ಳುತ್ತಿದ್ದರೂ ಹೊಟ್ಟೆಹಸಿವಿಗೆ ಸೋತು ಕಬಳಿಸುತ್ತಿದ್ದವರು ಹಲವರು. ಯುಗಾದಿಯ ದಿನ ಪಕ್ಕಾ ಆಂಧ್ರ ಶೈಲಿಯ ಬೇವು-ಬೆಲ್ಲದ ಪಾನಕ ಸಿಗುತ್ತಿತ್ತು. ಉದ್ಯೋಗಿಗಳಿಗೆ ಪ್ರಿಯಾ ಉಪ್ಪಿನಕಾಯಿ ಕಡಿಮೆ ಬೆಲೆಯಲ್ಲಿ ಸಿಗುತ್ತಿತ್ತು... :-) ಮನೆಯ ಹತ್ತಿರದ ಪಿಕಪ್ ಪಾಯಿಂಟ್-ನಿಂದ ನಿಗದಿತ ಸಮಯಕ್ಕೆ ಬಸ್, ನಂತರ ವಾಪಸ್ ಅದೇ ಪಾಯಿಂಟ್-ನಲ್ಲಿ ಡ್ರಾಪ್...

ರಾಮೋಜಿ ಫಿಲ್ಮ್ ಸಿಟಿಯೆಂದರೆ ಮಿನಿ ಇಂಡಿಯಾ. ದೇಶದೆಲ್ಲೆಡೆಯ ವ್ಯಕ್ತಿಗಳನ್ನು ಮತ್ತು ಭಾಷೆಗಳನ್ನು ಅಲ್ಲಿ ಕಾಣಬಹುದು. ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ರಾಜಸ್ತಾನ - ನಾಲ್ಕು ರಾಜ್ಯಗಳಿಗೆ ನಾಲ್ಕು ಚಾನೆಲ್... ಉರ್ದು, ಬಾಂಗ್ಲಾ, ಮರಾಠಿ, ಗುಜರಾತಿ, ಒರಿಯಾ, ಕನ್ನಡ... ತೆಲುಗಿನಲ್ಲಿ ಎರಡು ಚಾನೆಲ್. ಎಲ್ಲಾ ರಾಜ್ಯಗಳಲ್ಲಿ ವರದಿಗಾರರು... ದೇಶದ ಅತಿದೊಡ್ಡ ಮೈಕ್ರೋ ನ್ಯೂಸ್ ನೆಟ್ವರ್ಕ್ ಇರುವ ಖ್ಯಾತಿ ಈಟಿವಿಯದು. 8 ವರ್ಷದ ಹಿಂದೆ ಕನ್ನಡದಲ್ಲಿ ದೂರದರ್ಶನ, ಉದಯ ಟೀವಿ ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲದ ಸಮಯ ಆರಂಭವಾದ ಈಟಿವಿ, 'ಹಚ್ಚೇವು ಕನ್ನಡದ ದೀಪ...' ಹಾಡಿನ ಜತೆಗೆ ಪ್ರಸಾರ ಆರಂಭಿಸಿತು. ಕನ್ನಡಿಗರ ಮನೆ-ಮಮನ ತಟ್ಟಿ, ಮಧ್ಯಮವರ್ಗದ ಆಶೋತ್ತರಗಳ ಪ್ರತೀಕವಾಗಿ ಮೂಡಿಬರಲಾರಂಭಿಸಿತು. ನಿಧನಿಧಾನವಾಗಿ ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆಯಿತು.

ಒಂದು ವ್ಯವಸ್ಥೆ ಇಷ್ಟು ಆಳವಾಗಿ, ಚೆನ್ನಾಗಿ ಬೇರುಬಿಡಬೇಕೆಂದರೆ, ಗಟ್ಟಿಯಾಗಿ ನಿಲ್ಲಬೇಕೆಂದರೆ, ಅದರ ಹಿಂದೆ ಒಂದು ಕನಸುಗಾರ ಹೃದಯ ಇರಲೇಬೇಕು. ಈಟಿವಿಯ ಹಿಂದಿರುವ ಇಚ್ಛಾಶಕ್ತಿ, ಶ್ರೀಯುತ ರಾಮೋಜಿ ರಾವ್.



ಈ ಯಶೋಗಾಥೆಯ ಹಿಂದಿನ ರೂವಾರಿಯ ಬದುಕಿನ ಕಥೆ, ಮುಗಿಯದ ಹೋರಾಟದ್ದು. ಪ್ರಿಯಾ ಉಪ್ಪಿನಕಾಯಿಯಿಂದ ಆರಂಭಿಸಿ, ಮಾರ್ಗದರ್ಶಿ ಚಿಟ್ ಫಂಡ್, ಈನಾಡು, ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಸ್, ಕಲಾಂಜಲಿ ಇತ್ಯಾದಿ ಸಂಸ್ಥೆಗಳನ್ನು ಸ್ಥಾಪಿಸಿ, ಗೆಲುವು ಕಂಡವರು ರಾಮೋಜಿ ರಾವ್. ರಾಮೋಜಿ ಫಿಲ್ಮ್ ಸಿಟಿ, ಉಷೋದಯ ಎಂಟರ್-ಪ್ರೈಸಸ್, ಉಷಾಕಿರಣ ಮೂವೀಸ್, ನ್ಯೂಸ್ ಟುಡೇ ಪ್ರೈವೇಟ್ ಲಿಮಿಟೆಡ್ - ಹೀಗೆ ಹಲವು ರೀತಿಯಲ್ಲಿ ದೃಶ್ಯ ಮಾಧ್ಯಮದ ಹಲವು ಆಯಾಮಗಳನ್ನು ಅನ್ವೇಷಿಸಿ ಗೆದ್ದವರು. ಬರಿಯ ಈಟೀವಿ-ಈನಾಡು ಸಮೂಹದ ಮೂಲಕವೇ 2000ಕ್ಕೂ ಹೆಚ್ಚು ಕುಟುಂಬಗಳಿಗೆ ಇವರು ಅನ್ನದಾತರಾಗಿರುವವರು.

ಅನ್ನದಾತ ಎಂದ ತಕ್ಷಣ ಹೇಳಲೇಬೇಕಾದ ಮಾತೊಂದು ನೆನಪಾಗುತ್ತದೆ... ನಿರಂತರವಾಗಿ 8 ವರ್ಷಗಳಿಂದ ಈಟಿವಿಯಲ್ಲಿ ಬೆಳಗಿನ 6.30ಕ್ಕೆ ಮೂಡಿಬರುತ್ತಿದೆ, ಅನ್ನದಾತ ಕಾರ್ಯಕ್ರಮ. ಭಾರತ ಕೃಷಿಪ್ರಧಾನ ದೇಶವೆಂಬ ಸತ್ಯವನ್ನು ನಾವೆಲ್ಲರೂ ಮರೆತು ಕೃಷಿ ಮಾಡುವವರೂ ಕಡಿಮೆಯಾಗುತ್ತಿರುವ ಈದಿನಗಳಲ್ಲಿ ಅಳಿದುಳಿದ ಕೃಷಿಕರಿಗೆ ಧೈರ್ಯ ತುಂಬುವಂತೆ ಇರುವ ಈ ಕಾರ್ಯಕ್ರಮ ವಿವಿಧ ಬೆಳೆಗಳ ಕೃಷಿಯ ಮೇಲೆ ಬೆಳಕು ಚೆಲ್ಲುತ್ತದೆ. ಯಂತ್ರೋಪಕರಣಗಳ ಕುರಿತು, ಹೊಸ ಕೃಷಿವಿಧಾನಗಳ ಕುರಿತು, ಮಾರುಕಟ್ಟೆಯ ಕುರಿತು ಮಾಹಿತಿ... ಸೋತವರಿಗೆ ಧೈರ್ಯ ತುಂಬುವ ಗೆದ್ದವರ ಕಥೆಗಳು...

ಇತ್ತೀಚೆಗೆ ಇಂಥದೇ ಯತ್ನ ಮಾಡಹೊರಟ ಇತರ ಹಲವು ವಾಹಿನಿಗಳು ಟಿಆರ್-ಪಿಯೆಂಬ ಭೂತ ಕೈಕೊಟ್ಟ ತಕ್ಷಣ ಕಾರ್ಯಕ್ರಮವನ್ನು ನಿಲ್ಲಿಸಿದವು. ಆದರೆ ಎಂಥದೇ ಪರಿಸ್ಥಿತಿಯಲ್ಲಿ ಕೂಡ, ಟಿಆರ್-ಪಿ ಬರಲಿ-ಬಿಡಲಿ, ನಿರಂತರವಾಗಿ 8 ವರ್ಷದಿಂದ ನಡೆದುಬರುತ್ತಿದೆ ಅನ್ನದಾತ. ಇದು ಕನ್ನಡದ ವಾಹಿನಿಗಳಲ್ಲಿ ಬಹುಶ: ದೂರದರ್ಶನ ಬಿಟ್ಟರೆ ಕೃಷಿಕರಿಗೋಸ್ಕರವಿರುವ ಒಂದೇ ಒಂದು ಕಾರ್ಯಕ್ರಮ ಅಂತ ನನ್ನ ತಿಳುವಳಿಕೆ. (ಉದಯ ಟೀವಿಯಲ್ಲಿ ಇದೆಯೇನೋ ಗೊತ್ತಿಲ್ಲ, ನಾನು ಉದಯ ಟೀವಿ ನೋಡುವುದೇ ಇಲ್ಲ).

ತುಂಬಿದ ಕೊಡ ತುಳುಕುವುದಿಲ್ಲ, ದೊಡ್ಡ ಮನುಷ್ಯರು ಯಾವಾಗಲೂ ದೊಡ್ಡ ಮನಸ್ಸಿನವರೇ ಆಗಿರುತ್ತಾರೆಂಬುದಕ್ಕೆ ಅತ್ಯುತ್ತಮ ಉದಾಹರಣೆ ರಾಮೋಜಿ ರಾವ್... ನಾವಿದ್ದ ಕಾಲದಲ್ಲಿ ಈಟಿವಿಯಲ್ಲಿ ಪ್ರತಿ ವಾಹಿನಿಯ ಸುದ್ದಿವಿಭಾಗಕ್ಕೂ ನೇರವಾಗಿ ಚೇರ್ಮನ್ ರಾಮೋಜಿ ರಾವ್ ಜತೆ ಮೂರು ತಿಂಗಳಿಗೊಮ್ಮೆ ಮೀಟಿಂಗ್ ಇರುತ್ತಿತ್ತು. ಅದಕ್ಕಾಗಿ ನಾವೆಲ್ಲ ಚಾನೆಲ್ ಬಗ್ಗೆ, ಒಳ್ಳೆದು-ಕೆಟ್ಟದರ ಬಗ್ಗೆ ನಮ್ಮ ವಿಶ್ಲೇಷಣೆ ಕೊಡಬೇಕಿತ್ತು. ಹಾಗೆ ಕೊಟ್ಟ ವಿಶ್ಲೇಷಣೆಗಳನ್ನು ಖುದ್ದು ಚೇರ್ಮನ್ನರೇ ಓದಿ, ಫೀಡ್-ಬ್ಯಾಕ್ ತೆಗೆದುಕೊಳ್ಳುತ್ತಿದ್ದರು, ಮೀಟಿಂಗ್-ನಲ್ಲಿ ಅದರ ಬಗ್ಗೆ ಮಾತಾಡುತ್ತಿದ್ದರು. ಮೀಟಿಂಗ್-ನಲ್ಲಿ ತಾಂತ್ರಿಕ ವಿಭಾಗದವರು, ಗ್ರಾಫಿಕ್ಸ್, ಎಂಜಿನಿಯರುಗಳು, ಕ್ಯಾಮರಾ ವಿಭಾಗದವರು, ಅಡ್ಮಿನಿಸ್ಟ್ರೇಶನ್-ನವರು, ಹೆಚ್ಚಾರ್-ನವರು - ಎಲ್ಲರೂ ಇರಬೇಕಿತ್ತು. ಆಯಾ ವಿಭಾಗಕ್ಕೆ ಸಂಬಂಧಿಸಿದ ವಿಚಾರಗಳನ್ನು ಅಲ್ಲಿಯೇ ಆ ವಿಭಾಗದ ಗಮನಕ್ಕೆ ತರಲಾಗುತ್ತಿತ್ತು. ಅತ್ಯಂತ ground levelನಿಂದ ಕೂಡ ಅಭಿಪ್ರಾಯಗಳು ಬರಬಹುದಿತ್ತು, ಅವುಗಳಲ್ಲಿ ಸತ್ವವಿದ್ದರೆ ಅದಕ್ಕೆ ಸಲ್ಲಬೇಕಾದ ಮರ್ಯಾದೆ ಸಲ್ಲುತ್ತಿತ್ತು. ವ್ಯವಸ್ಥೆ ಹಾಗಿತ್ತು.

ಈ ರೀತಿಯ ಮೀಟಿಂಗ್-ಗೆ ಸಂಬಂಧಿಸಿದಂತೆ ನಡೆದ ಘಟನೆಯೊಂದು ನನಗೆ ಈ ಹಿರಿಯ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ಪರಿಚಯಿಸಿತು... ಆಸಮಯದಲ್ಲಿ ಈಟಿವಿ ಸುದ್ದಿವಾಚಕಿಯರು ಉಡುತ್ತಿದ್ದ ಸೀರೆಗಳು, ಹತ್ತಿಯ ಸೀರೆಗಳಾಗಿದ್ದು, ವಿಧವಿಧದ dignified ವಿನ್ಯಾಸಗಳೊಡನೆ ಸುದ್ದಿವಾಚಕಿಯರ ವ್ಯಕ್ತಿತ್ವವನ್ನೇ ಬದಲಾಯಿಸುವಂತಿದ್ದವು. ಹೈದರಾಬಾದಿನಲ್ಲಿದ್ದ 'ಕಲಾಂಜಲಿ'ಯಿಂದ ತರುತ್ತಿದ್ದ ಹತ್ತಿ ಸೀರೆಗಳು ಸಾವಿರ-ಸಾವಿರದೈನೂರು ರೂಪಾಯಿ ಬೆಲೆಯವಾದರೂ, ಉಟ್ಟವರನ್ನು ನೋಡಿದರೆ ಬೆಲೆ ಹೆಚ್ಚಾಯಿತು ಎನಿಸುತ್ತಿರಲಿಲ್ಲ. ಹೀಗಿರಲು ಒಂದು ಸಾರಿ, ಹೊಸ ಸೀರೆಗಳನ್ನು ತರುವಾಗ ಹತ್ತಿ ಸೀರೆಯ ಬದಲು ಗ್ರಾಂಡ್ ಆದ ಜರತಾರಿ ಅಂಚಿನ ರೇಷ್ಮೆ ಸೀರೆಗಳನ್ನು ತರಲಾಯಿತು. ಸುದ್ದಿ ಓದುವವರು ಆ ಸೀರೆಗಳಲ್ಲಿ ಮದುವಣಗಿತ್ತಿಯರಂತೆ ಕಾಣುತ್ತಿದ್ದುದು ನ್ಯೂಸ್ ಪ್ರೊಡಕ್ಷನ್-ನಲ್ಲಿದ್ದ ನನಗೆ ಹಿತವಾಗಿರಲಿಲ್ಲ. ಜತೆಗೆ ಕ್ಯಾಮರಾದಲ್ಲೂ ಸರಿಯಾಗಿರುತ್ತಿರಲಿಲ್ಲ. ಮೊದಲೇ ಹೇಳಿದ್ನಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದ ಸಂಸ್ಥೆ ಅದು. ನಾನು ಕಾರಣಗಳ ಸಹಿತ ಜರತಾರಿ ಸೀರೆಗಳ ವಿರುದ್ಧ ಆಸಲದ ಮೀಟಿಂಗ್-ಗೆ ಸಿದ್ಧಪಡಿಸಿದ ರಿಪೋರ್ಟ್-ನಲ್ಲಿ ಬರೆದೆ.

ಮೀಟಿಂಗ್-ನಲ್ಲಿ ನನ್ನ ವರದಿಯ ಬಗ್ಗೆ ಚರ್ಚೆಗೆ ಬಂತು. ಮೀಟಿಂಗಲ್ಲಿ ಈಸಲ ನನಗೂ ಜಾಗವಿತ್ತು. ಒಳಗೊಳಗೇ ನನಗೆ ಭಯ, ಬರೆಯುವುದು ಬರೆದಾಗಿತ್ತು, ಇನ್ನೇನಾಗುತ್ತದೋ ಅಂತ. ನನ್ನ ಅಭಿಪ್ರಾಯಗಳ ಸತ್ಯಾಸತ್ಯತೆಯ ಬಗ್ಗೆ ಚೇರ್ಮನ್ ತಾಂತ್ರಿಕ ವಿಭಾಗದವರಲ್ಲಿ ಕೇಳಿದಾಗ ಅವರು ನಾ ಕೊಟ್ಟ ಕಾರಣಗಳನ್ನು ಒಪ್ಪಿಕೊಂಡು ವಿವರಿಸಿದರು. ಸ್ವಲ್ಪ ಹೊತ್ತಿನ ವಿಚಾರವಿನಿಮಯದ ನಂತರ ಸುದ್ದಿವಾಚಕಿಯರಿಗೆ ಹತ್ತಿ ಸೀರೆಯೇ ಬೇಕೆಂಬ ನನ್ನ ವಾದವನ್ನು ಒಪ್ಪಿದ ಚೇರ್ಮನ್, ರೇಷ್ಮೆ ಸೀರೆಗಳನ್ನು ಖರೀದಿಸಲು ಹೇಳಿದ್ದು ತಾನೇ ಆಗಿದ್ದು, ಅದು ಸರಿಯಲ್ಲವೆಂದಾದಲ್ಲಿ ಸರಿಮಾಡಿಕೊಳ್ಳೋಣ ಅಂತ ಹೇಳಿದರು... ನನ್ನ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಂಡು ಸುದ್ದಿ ವಾಚಕರಿಗೆ ಸೂಕ್ತ ಡ್ರೆಸ್ ಕೋಡ್ ಸಿದ್ಧಪಡಿಸಲು ತಾಂತ್ರಿಕ ವಿಭಾಗದವರಿಗೆ ಹೇಳಿದರು. ಅಷ್ಟು ನೇರವಾಗಿ, ಎಲ್ಲರ ಎದುರು, ಅನುಭವದಲ್ಲಿ ಎಷ್ಟೋ ವರ್ಷ ಚಿಕ್ಕವಳಾದರೂ ನನ್ನ ಅಭಿಪ್ರಾಯಕ್ಕೆ ಬೆಲೆ ಕೊಟ್ಟು, ಸರಿ-ತಪ್ಪು ತೂಗಿ ನೋಡಿದ ಹಿರಿತನಕ್ಕೆ ಹೃದಯ ತುಂಬಿ ಬಂತು ನನಗೆ.

ಕಹಿ ಮರೆತು ಸಿಹಿ ನೆನಪಿಟ್ಟುಕೊಂಡು ಮುನ್ನಡೆಯುವಲ್ಲಿ ನನಗೆ ಸ್ಫೂರ್ತಿಯಾದ ಹಿರಿಯರಿವರು. ಸರಳತೆ, ವೃತ್ತಿಯ ಮೇಲೆ ಪ್ರೀತಿ, ಒಳ್ಳೆಯದು ಎಲ್ಲಿಂದ ಬಂದರೂ ತೆಗೆದುಕೊಳ್ಳುವ ಮನಸ್ಸು, ಮನಸು ಒಪ್ಪಿದ ತತ್ವಕ್ಕೆ ಬದ್ಧವಾಗಿ ಮುನ್ನಡೆಯುವ ಛಾತಿ - ನಾನು ಈ ಹಿರಿಯರಿಂದ ಕಲಿತೆ. ಅವರ ಜತೆಗಾಗಿದ್ದು ಒಂದೋ ಎರಡೋ ಭೇಟಿಗಳಾದರೂ ನನಗೆ ಅವು ಸ್ಮರಣೀಯ. ಬದುಕಲು ಕಲಿಯುವಲ್ಲಿ, ಬದುಕು ಕಟ್ಟಿಕೊಳ್ಳುವಲ್ಲಿ, ಸಹಾಯ ಮಾಡಿದವರಲ್ಲಿ, ಕುಸಿಯುವ ಹೆಜ್ಜೆಗಳಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಡೆಯುವ ಧೈರ್ಯ ತುಂಬಿದ ಹಿರಿಯರಲ್ಲಿ ಒಬ್ಬರು ರಾಮೋಜಿ ರಾವ್.

ಸದಾ ಬಿಳಿ ಬಟ್ಟೆಯ ಹಸನ್ಮುಖಿ, ಅಷ್ಟೇ ಒಳ್ಳೆಯ ಮನಸ್ಸಿನ ಈ ಹಿರಿಯರಿಗೆ ನಾಳೆಗೆ 72 ತುಂಬುತ್ತದೆ. ಸದ್ದಿಲ್ಲದೆ ಉರಿದು ಸುತ್ತಲಿಗೆ ಬೆಳಕ ನೀಡುವ ದೀಪಗಳಲ್ಲೊಬ್ಬರು ರಾಮೋಜಿರಾವ್... ನೂರ್ಕಾಲ ಬಾಳಲೆಂಬ ಹಾರೈಕೆ ಎಂದೆಂದೂ ನನ್ನದು.

Sunday, November 9, 2008

ನಂಗೆ ಖುಷಿಯಾಗಿದೆ...! :-)


ವೀರಪ್ಪನ್-ಗೆ ಆನೆಕಳ್ಳ, ದಂತಚೋರ ಇತ್ಯಾದಿ ಬಿರುದುಗಳಿಟ್ಟು ಆತನನ್ನು ಕಳ್ಳರ ಕಳ್ಳನಾಗಿ, ಮಹಾಖದೀಮನಾಗಿ ಮಾಡಿದ್ದರಲ್ಲಿ ಮಾಧ್ಯಮಗಳ ಪಾಲೂ ಇದೆ ಎಂದರೆ ಒಪ್ಪತಕ್ಕಂಥ ಮಾತು. ಅದಕ್ಕೆ ನೂರು ಕಾರಣಗಳಿದ್ದಿರಬಹುದು, ಅದು ಬೇರೆ ಮಾತು. ಆದರೆ, ಗೊತ್ತಿದ್ದವರಿಗೆ ಗೊತ್ತಿರುತ್ತದೆ, ವೀರಪ್ಪನ್ ಹೆಸರಲ್ಲಿ ಆನೆ ಕೊಲ್ಲುತ್ತಿದ್ದವರು ಯಾರು ಅಂತ. ವೀರಪ್ಪನ್ ಆನೆ ಕೊಂದೇ ಇಲ್ಲ ಅಂತಲ್ಲ, ಆದ್ರೆ ಸತ್ತ ಎಲ್ಲಾ ಆನೆಗಳೂ ವೀರಪ್ಪನ್ ಕೈಲಿ ಸಾಯಲಿಲ್ಲ ಅನ್ನುವುದು ಹಸಿ ಹಸಿ ಸತ್ಯ.

ತಂತಿಬೇಲಿಗೆ ಹೈ ವೋಲ್ಟೇಜ್ ವಿದ್ಯುತ್ ಹಾಯಿಸಿಡುವುದು ರೈತರು ಆನೆ ನಿಗ್ರಹಕ್ಕೆ ಕಂಡುಕೊಂಡ ಉಪಾಯ. ಅದಕ್ಕೆ ತಾಗಿ ಆನೆಯೇನಾದರೂ ಸತ್ತರೆ, ಅದಕ್ಕೆ ಊದುಬತ್ತಿ, ಗಂಧ, ಅರಿಶಿನ, ಹೂವು ಇತ್ಯಾದಿ ಹಾಕಿ ಪೂಜೆ ಮಾಡಿ ಅದನ್ನು ಕೊಂದ ಪಾಪವನ್ನು ಪರಿಹಾರ ಮಾಡಿಕೊಳ್ಳುವ ರೂಢಿ ಕೂಡ ಕೆಲವು ಊರುಗಳಲ್ಲಿ ಇದೆ.

ಹೀಗೆ ಅಲ್ಲಲ್ಲಿ ಆಗಾಗ ನಡೆದ ಆನೆಗಳ ಸಾವುಗಳನ್ನು ವರದಿ ಮಾಡುವ ಮೂಲಕ ಮಾಧ್ಯಮಗಳು ಒಳ್ಳೆ ಕೆಲಸ ಮಾಡಿವೆ. ಮಾರುಕಟ್ಟೆಯ ಓಟದ ರಭಸದ ನಡುವೆ ಪರಿಸರದ ಬಗೆಗೆ ನಿಜವಾದ ಅರಿವು ಮಾಧ್ಯಮಗಳಲ್ಲಿ ಮಾಯವಾಗುತ್ತಿರುವ ಈ ದಿನಗಳಲ್ಲಿ ಕೂಡ, ತಾವು ಮಾಡುತ್ತಿರುವ ಕೆಲಸ ಎಷ್ಟು ದೊಡ್ಡದು ಅಂತ ಕೆಲವರಿಗೆ ಗೊತ್ತಿದ್ದು ಮಾಡಿದರೆ ಇನ್ನು ಕೆಲವರು ಗೊತ್ತಿಲ್ಲದೆಯೂ ಮಾಡಿದ್ದಾರೆ, ಆದರೆ ಹೆಚ್ಚುಕಡಿಮೆ ಎಲ್ಲಾ ಪತ್ರಿಕೆಗಳು ಮತ್ತು ಖಾಸಗಿ ವಾಹಿನಿಗಳ ಸುದ್ದಿಗಳೂ ಆನೆಗಳ ಸಾವಿನ ಬಗ್ಗೆ ಎಲ್ಲರಿಗೂ ಗೊತ್ತಾಗುವ ಹಾಗೆ ಮಾಡಿದ್ದಾರೆ ಅನ್ನುವುದು ಮುಖ್ಯ.ಅಷ್ಟೆಲ್ಲ ವರದಿಗಳು ಬರ್ತಾ ಇದ್ದರೂ ದಪ್ಪ ಚರ್ಮದ ಅರಣ್ಯ ಇಲಾಖೆ ಮಾತ್ರ ತೆಪ್ಪಗೆ ಕೂತಿತ್ತು.

ರಾಜ್ಯದಲ್ಲಿ ನಡೆಯುತ್ತಿರುವ ಆನೆಗಳ ಸಾವಿನ ಬಗ್ಗೆ ಮಾಧ್ಯಮಗಳ ವರದಿಗಳನ್ನು ಆಧರಿಸಿ, suo motu ಆಗಿ, ಅಂದರೆ ಸ್ವಯಂಪ್ರೇರಿತವಾಗಿ ಹೈಕೋರ್ಟ್ ಅರಣ್ಯ ಇಲಾಖೆಗೆ ನೋಟಿಸ್ ನೀಡಿದೆ. ಮಾಧ್ಯಮಗಳ ಗುಣಮಟ್ಟದ ಬಗ್ಗೆ HOPE ಕಳೆದುಕೊಂಡವರಿಗೆಲ್ಲ ಇದೊಂದು ಬೆಳಕಿನ ಕಿರಣ... ಒಳ್ಳೆಯ ಉದ್ದೇಶಗಳಿಗೆ ಸಿಗಬೇಕಾದ ಗೌರವವನ್ನು ಎತ್ತಿಹಿಡಿದ ಹೈಕೋರ್ಟಿನ ಈ ಕ್ರಮದಿಂದ ನನಗಂತೂ ತುಂಬಾ ಖುಷಿಯಾಗಿದೆ. ಪಿ.ಡಿ.ದಿನಕರನ್ ಅವರನ್ನು ದೇವರು ನೂರು ವರ್ಷ ಚೆನ್ನಾಗಿಟ್ಟಿರಲಿ.

ಇಲ್ಲಿವರೆಗೆ ತಣ್ಣಗಿದ್ದ ಅರಣ್ಯ ಇಲಾಖೆಗೂ ಇದರಿಂದ ಚೂರು ಬಿಸಿ ಮುಟ್ಟಿದೆ. "ಡೀಪ್ ಫಾರೆಸ್ಟ್ ಜಾಸ್ತಿ ಆಗಿ ಆನೆಗಳಿಗೆ ಅಲ್ಲಿ ಹೊಟ್ಟೆಗೆ ಸರಿಯಾಗಿ ಸಿಗದೆ ನಾಡಿಗೆ ಬರ್ತಾ ಇವೆ", "ಆನೆಗಳ ಸಂಖ್ಯೆ ಜಾಸ್ತಿ ಆಗಿದೆ" "ಹೊಲಕ್ಕೆ ನುಗ್ಗುವುದು ಕಂಟ್ರೋಲ್ ಮಾಡಲಿಕ್ಕೆ ಬೇಕಾದಷ್ಟು ಸಿಬ್ಬಂದಿ ಇಲ್ಲ" ಇತ್ಯಾದಿ ಆನೆಗಳು ನಾಡಿಗೆ ನುಗ್ಗುವುದಕ್ಕೆ ಮತ್ತು ಅವುಗಳ ಸಾವಿಗೆ ಅರಣ್ಯ ಇಲಾಖೆ ಹೇಳುವ ಕಾರಣಗಳು. ಈಗ plan of action ತಯಾರಿಸಿ ಆನೆಗಳನ್ನು ಉಳಿಸುವ ಬಗ್ಗೆ ಅಧಿಕಾರಿಗಳು ಚಿಂತಿಸುತ್ತಿದ್ದಾರೆ.

ಕೆಲವು ದಿನಕ್ಕೊಂದರಂತೆಯಾದರೂ ಕಳೆದ ಕೆಲ ತಿಂಗಳುಗಳಿಂದ ಪದೇ ಪದೇ ಬರುತ್ತಿರುವ ಆತಂಕಕಾರಿ ಸುದ್ದಿ ಇನ್ನೊಂದಿದೆ. ಇತ್ತೀಚೆಗೆ ಚಿಕ್ಕಮಗಳೂರು, ಮಂಗಳೂರು, ಉಡುಪಿ ಮತ್ತಿತರ ಜಿಲ್ಲೆಗಳಲ್ಲಿ, ಅಷ್ಟ್ಯಾಕೆ, ಬೆಂಗಳೂರಲ್ಲಿ ಕೂಡ ಜಿಂಕೆ ಚರ್ಮ, ಚಿರತೆ ಚರ್ಮ, ಹುಲಿಯುಗುರು ಇತ್ಯಾದಿ ಮಾರುತ್ತ ಸಿಕ್ಕಿಬಿದ್ದವರ ಸಂಖ್ಯೆ ಹೆಚ್ಚುತ್ತಲೇ ಇದೆ. ಪೊಲೀಸರಿಗೆ ಸಿಕ್ಕಿಬೀಳುವವರೇ ಇಷ್ಟೊಂದು ಮಂದಿಯಾದರೆ, ಸಿಕ್ಕಿಬೀಳದವರು ಇನ್ನೆಷ್ಟಿದ್ದಾರೋ? ಪೊಲೀಸರಿಗೆ ಕೊಲೆಗಾರರು ಸಿಕ್ಕಿದರೂ ಸಿಗದಿದ್ದರೂ, ಒಂದು ಸಾರಿ ಸತ್ತ ಪ್ರಾಣಿ ಮತ್ತೆ ಬದುಕದು, ಪೊಲೀಸರು ಯಾರನ್ನು ಹಿಡಿದು ಏನು ಪ್ರಯೋಜನ?

ಹಾಗೆಯೇ, ಗದಗ, ಚಿತ್ರದುರ್ಗ, ಉತ್ತರಕನ್ನಡ ಇತ್ಯಾದಿ ಜಿಲ್ಲೆಗಳಲ್ಲಿ ಚಿರತೆ, ಜಿಂಕೆ ಇತ್ಯಾದಿಗಳು ಕಾಡು ಬಿಟ್ಟು ನಾಡಿಗೆ ಬಂದು ಜನರಲ್ಲಿ ಭಯವುಂಟುಮಾಡಿದ ಪ್ರಕರಣಗಳು ಕೂಡ ಬಹಳಷ್ಟಿವೆ. ಕೆಲವು ಕಡೆ ಇಂಥ ಪ್ರಾಣಿಗಳು ಸತ್ತು ಹೋಗಿದ್ದೂ ಇದೆ. ಇಂತಹ ಪ್ರಕರಣಗಳು ಸಿಕ್ಕಿದಾಗಲೆಲ್ಲ ಅದನ್ನು ಇಟ್ಟುಕೊಂಡು ಅರ್ಧರ್ಧ ಗಂಟೆ ಸುದ್ದಿ ಕೊಡುವ ಕನ್ನಡದ ಸುದ್ದಿವಾಹಿನಿಗಳಲ್ಲಿ, ಹೀಗೆ ಯಾಕೆ ಕಾಡುಪ್ರಾಣಿಗಳು ನಾಡಿಗೆ ಬರುತ್ತವೆ ಎಂಬುದರ ಬಗ್ಗೆ ಸರಿಯಾದ, ಮನಮುಟ್ಟುವ ವಿಶ್ಲೇಷಣೆ ಕೊಟ್ಟು, ಮನುಷ್ಯರದೂ ಅದರಲ್ಲಿ ತಪ್ಪಿದೆ ಅಂತ ಹೇಳುವ ಗಟ್ಟಿತನದ ಕೊರತೆಯಿದೆ. ಇದನ್ನು ಸರಿಪಡಿಸಿಕೊಂಡಲ್ಲಿ ಸುದ್ದಿವಾಹಿನಿಗಳ ಗುಣಮಟ್ಟ ಇನ್ನಷ್ಟು ಹೆಚ್ಚುತ್ತದೆ.

ಆನೆಗಳ ಸಾವಿನ ಬಗ್ಗೆ ಕಾರಣಗಳನ್ನು ಹುಡುಕಿಕೊಂಡಿರುವ ಅರಣ್ಯ ಇಲಾಖೆ ತಕ್ಷಣಕ್ಕೆ ಬಚಾವಾಗಿದೆ. ಹೆಚ್ಚಿನ ಮಾಧ್ಯಮಗಳು ಅರಣ್ಯ ಇಲಾಖೆಯ ಪ್ರಮುಖ ಅಧಿಕಾರಿಗಳನ್ನು ಈ ಬಗ್ಗೆ ನೇರವಾಗಿ ಪ್ರಶ್ನಿಸಿಲ್ಲ. ಅರಣ್ಯ ಇಲಾಖೆ ತನ್ನಲ್ಲಿರುವ ಕಾರಣಗಳನ್ನು ಕೊಟ್ಟು ಹೈಕೋರ್ಟಿನಿಂದಲೂ ಬಚಾವಾಗಬಹುದು, ಹೇಳಲಾಗದು. ಜಿಂಕೆ, ಚಿರತೆ ಇತ್ಯಾದಿ ಪ್ರಾಣಿಗಳ ಕೊಲೆಗಳ ಬಗ್ಗೆ ಯಾರೂ ಇನ್ನೂ ಏನೂ ಪ್ರಶ್ನೆ ಎತ್ತಿಲ್ಲ. ಯಾರು ಕೇಳಬೇಕು, ಯಾರು ಕೇಳುತ್ತಾರೆ ಅನ್ನುವುದೂ ಗೊತ್ತಿಲ್ಲ. ಒಂದು ವೇಳೆ ಯಾರಾದರೂ ಕೇಳಿದರೆ ಅರಣ್ಯ ಇಲಾಖೆ ಏನು ಉತ್ತರ ಕೊಡುತ್ತದೆಯೋ ಗೊತ್ತಿಲ್ಲ.

ಅರಣ್ಯ ಇಲಾಖೆಯೊಳಗೆ ಮತ್ತು ಹೊರಗೆ ಇರುವ ಹೆಗ್ಗಣಗಳ ನಿಗ್ರಹ, ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಆಗದಂತೆ ತಡೆಯುವುದು, ಅರಣ್ಯ ಪ್ರದೇಶ ನಿಜವಾಗಿಯೂ ಹೆಚ್ಚುವಂತೆ ಮಾಡುವುದು, ಇವೆಲ್ಲ ಸಾಧ್ಯವಾದರೆ ಎಲ್ಲಾ ಅಕ್ರಮಗಳು ಕಡಿಮೆಯಾಗಬಹುದು... ಇವೆಲ್ಲವನ್ನೂ ಸಾಧ್ಯಮಾಡಿ, ನಮಗೆಲ್ಲ LIVE-AND LET LIVE ಪಾಠ ಕಲಿಸುವ ಸೂಪರ್ ಮ್ಯಾನ್ ಯಾರಾದ್ರೂ ಇದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ನನ್ನದೊಂದು ಕನಸು... ಮತ್ತು ನಮಗೆಲ್ಲಾ ಒಳ್ಳೆ ಬುದ್ಧಿ ಆದಷ್ಟು ಬೇಗ ಬರಲಿ ಅಂತ ಹಾರೈಕೆ...

Saturday, October 25, 2008

ದೇವರು ಹೆಚ್ಚಿದ ದೀಪ...


ಮಾನವನೆದೆಯಲಿ ಆರದೆ ಉರಿಯಲಿ
ದೇವರು ಹೆಚ್ಚಿದ ದೀಪ
ರೇಗುವ ದನಿಗೂ ರಾಗವು ಒಲಿಯಲಿ
ಮೂಡಲಿ ಮಧುರಾಲಾಪ

ಕೊಲ್ಲಲು ಎತ್ತಿದ ಕೈಗೂ ಗೊತ್ತಿದೆ
ಕೆನ್ನೆಯ ಸವರುವ ಪ್ರೀತಿ
ಇರಿಯುವ ಮುಳ್ಳಿನ ನಡುವೆಯೆ ನಗುವುದು
ಗುಲಾಬಿ ಹೂವಿನ ರೀತಿ...

ಉರಿಯನು ಕಾರುವ ಆಗಸ ತಾರದೆ
ತಂಪನು ತೀಡುವ ಮಳೆಯ?
ಲಾವಾರಸವನು ಕಾರುವ ಧರೆಯೇ
ನೀಡದೆ ಅನ್ನದ ಬೆಳೆಯ?

ಹಮ್ಮು ಬಿಮ್ಮುಗಳ ಮರುಳುಗಾಡಿನಲಿ
ಎಲ್ಲೋ ತಣ್ಣನೆ ಚಿಲುಮೆ
ತಾಪವ ಹರಿಸಿ ಕಾಪಾಡುವುದು
ಒಳಗೇ ಸಣ್ಣಗೆ ಒಲುಮೆ...
- ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ನಿಮ್ಮ ಮನೆ-ಮನಗಳಲ್ಲಿ ಹೊಸಬೆಳಕು ಚೆಲ್ಲಲಿ,
ಬೆಳಕಿನ ಹಬ್ಬದ ಶುಭಾಶಯಗಳು

Sunday, October 12, 2008

ಲ್ಯಾಂಡ್ ಲೈನೂ - ಮೊಬೈಲೂ


>>>>>>>>>>>>>>>>>>>>>>>

ಗಂಟೆ ಸರಿಯಾಗಿ ಹನ್ನೊಂದೂಮುಕ್ಕಾಲು. ರಾಜ್ಯದ ಒಂದು ಕಡೆ ಸಿಎಂ ಭೇಟಿ ಇದ್ದರೆ, ಇನ್ನೊಂದು ಕಡೆ ಯಾವುದೋ ಮಠದ ಸ್ವಾಮೀಜಿ ಪ್ರೆಸ್ ಕಾನ್ಫರೆನ್ಸ್, ಮತ್ತೊಂದೆಡೆ ಇಂಧನ ಸಚಿವರ ಭೇಟಿ... ಇದಲ್ಲದೇ ಅಲ್ಲಲ್ಲಿ ನಡೆಯುತ್ತಿರುವ ಧರಣಿಗಳು... ದಸರಾ ಮುಗಿಸಿ ಕಾಡಿಗೆ ಹೋಗ್ತಾ ಇರೋ ಆನೆಗಳು... ಹೀಗೆ ಒಂದು ಗಂಟೆಯ ಬುಲೆಟಿನ್ನಿಗೆ ಸುದ್ದಿಯ ಮಹಾಪೂರ ಹರಿದು ಹರ್ತಾ ಇರೋ ಟೈಮು. ಒಂದಾದ ಮೇಲೊಂದರ ಹಾಗೆ ಮೊಬೈಲಿಗೆ ಬರುತ್ತಾ ಇರುವ ಸುದ್ದಿ ಕರೆಗಳನ್ನು ರಿಸೀವ್ ಮಾಡುತ್ತ ಮಾತಾಡುತ್ತ ಕೆಲಸದಲ್ಲಿ ಕುತ್ತಿಗೆ ತನಕ ಮುಳುಗಿದ್ದಳು ಅವಳು. ಅಷ್ಟರಲ್ಲಿ ಪಕ್ಕದಲ್ಲಿದ್ದ ಪರ್ಸನಲ್ ಫೋನ್ ರಿಂಗ್ ಆಯಿತು. ಯಾರೆಂದು ನೋಡಿದರೆ, ಅಮ್ಮ ನಿನ್ನೆ ತಾನೇ ತೆಗೆದುಕೊಂಡ ಹೊಸಾ ಮೊಬೈಲಿನಿಂದ ಕರೆ ಬರುತ್ತಿದೆ.

ಸಾಧ್ಯವಾದಷ್ಟು ಬೇಗ ಸುದ್ದಿ ಕಳುಹಿಸಲು ಹೇಳಿ ಮಾತು ಮುಗಿಸಿ ಅಮ್ಮನ ಕರೆ ರಿಸೀವ್ ಮಾಡಿದಳು. ಹಲೋ ಎಂದಳು. ಆ ಕಡೆಯಿಂದ ಸುದ್ದಿಯೇ ಇಲ್ಲ. ಯಾರೂ ಮಾತಾಡುತ್ತಿಲ್ಲ. ಮತ್ತೆರಡು ಸಲ ಹಲೋ ಹಲೋ ಎಂದಳು. ಊಹುಂ, ಏನೂ ಕೇಳುತ್ತಿಲ್ಲ. ಹಾಗೇ ಕೆಲ ಸೆಕೆಂಡುಗಳ ನಂತರ ಫೋನ್ ಕಟ್ ಆಯಿತು. ರಿಡಯಲ್ ಮಾಡಿದಳು. ರಿಸೀವ್ ಆಯಿತು, ಆದರೆ ಏನೂ ಸ್ವರ ಕೇಳಲಿಲ್ಲ. ಕಟ್ ಮಾಡಿ ಮತ್ತೆ ಕರೆ ಮಾಡಿದರೆ ನಾಟ್ ರೀಚೇಬಲ್ ಬಂತು.

ಮನದಲ್ಲೇ ಬೈದುಕೊಳ್ಳುತ್ತ ಮನೆಯ ಲ್ಯಾಂಡ್ ಲೈನ್ ನಂಬರಿಗೆ ಕರೆ ಮಾಡಿದರೆ, ಯಥಾಪ್ರಕಾರ ಅಮ್ಮ ಫೋನೆತ್ತಲಿಲ್ಲ. ಏನಾದ್ರೂ ಮಾಡ್ಕೊಳ್ಳಲಿ, ಈಗ ತಲೆಕೆಡಿಸಿಕೊಳ್ಳುವುದಿಲ್ಲ ಅಂತ ಮತ್ತೆ ಕೆಲಸದಲ್ಲಿ ಮುಳುಗಿದಳು.

ಕೆಲಸ ನಡೆಯುತ್ತಲೇ ಇದ್ದರೂ ಅಮ್ಮನ ಬಗ್ಗೆ ಆರಂಭವಾದ ಯೋಚನೆ ಮಾತ್ರ ನಿಲ್ಲಲಿಲ್ಲ. ಇತ್ತೀಚೆಗೆ ಕರೆ ಮಾಡಿದಾಗ ಅಮ್ಮ ಸ್ವಲ್ಪ ಹಿಂಜರಿಕೆಯಿಂದಲೇ 'ನಿಂಗೇನೋ ಹೇಳ್ಬೇಕಿತ್ತು, ನೀನು ಕೋಪ ಮಾಡ್ಕೋಬಾರ್ದು' ಅಂದಳು. ಮಗಳು ಏನಪ್ಪಾ ವಿಷಯ ಅಂದುಕೊಳ್ಳುತ್ತಲೇ "ಇಲ್ಲ, ಕೋಪ ಮಾಡ್ಕೊಳ್ಳುವುದಿಲ್ಲ, ಏನು ಹೇಳು" ಅಂದಳು. "ಅಪ್ಪ ನಿಂಗೆ ಅಂತ ಚಿನ್ನ ತೆಗೆದಿದ್ದಾರೆ, ನಿನ್ನ ಮದುವೆಯಲ್ಲಿ ಕೊಡಲಿಕ್ಕಾಯಿತು ಅಂತ... ನಲುವತ್ತು ಸಾವಿರ ಆಯ್ತು..."

ಕೇಳುತ್ತಿದ್ದಂತೆ ಇವಳಿಗೆ ತಲೆ ಚಚ್ಚಿಕೊಳ್ಳಬೇಕು ಅಂತನಿಸಿತು. ಕೆಲದಿನದ ಹಿಂದಷ್ಟೇ ಚಿನ್ನ ಕೊಳ್ಳುವ ಪ್ರಸ್ತಾಪ ಮಾಡಿದ್ದಾಗ ಅಮ್ಮನಿಗೆ ಹೇಳಿದ್ದಳು, "ಈಗ ಚಿನ್ನಕ್ಕೆ ರೇಟು ಜಾಸ್ತಿ, ಕಡಿಮೆಯಾದಾಗ ತೆಗೆದುಕೊಳ್ಳುವ, ನಾನಿದ್ದಾಗಲೇ ತೆಗೆದುಕೊಳ್ಳುವ, ನಾನೇ ಹೇಳುತ್ತೇನೆ ಯಾವಾಗ ಅಂತ, ಈಗ ಬೇಡ..." ಅಮ್ಮ ಆಯಿತು ಎಂದಿದ್ದಳು. ಮತ್ತು ಈಗ, ಸ್ಟಾಕ್ ಮಾರ್ಕೆಟ್ ಪೂರ್ತಿ ಕುಸಿದಿರುವಾಗ, ಚಿನ್ನಕ್ಕೆ ದಿನದಿಂದ ದಿನಕ್ಕೆ ಬೆಲೆ ಏರುತ್ತಿರುವಾಗ, 1350 ರೂಪಾಯಿ ಕೊಟ್ಟು ಅಪ್ಪ-ಅಮ್ಮ ಚಿನ್ನ ಕೊಂಡಿದ್ದರು. ಏನು ಅರ್ಜೆಂಟಿತ್ತು ಚಿನ್ನ ಕೊಳ್ಳಲಿಕ್ಕೆ ಅಷ್ಟು? ಇಷ್ಟು ಸಮಯ ಕಾದವರಿಗೆ ಇನ್ನೊಂದಿಷ್ಟು ದಿನ ಕಾಯಬಾರದಿತ್ತೇ ಎನಿಸಿ ಬೇಸರವಾಗಿತ್ತು. ತನ್ನ ಇಷ್ಟು ವರ್ಷಗಳ ಲೋಕಜ್ಞಾನ, ತಿಳುವಳಿಕೆ, ವಿವೇಚನೆ ಎಲ್ಲವೂ ಜಗತ್ತಿಗೆ ಉಪದೇಶ ಕೊಡಲಿಕ್ಕೆ ಮಾತ್ರ ಉಪಯೋಗವಾಗುತ್ತಿದ್ದು, ದೀಪದ ಬುಡ ಕತ್ತಲಾಯಿತಲ್ಲ ಅಂತನಿಸಿತು. ಈಗ ಬೇಡಾಂತ ಹೇಳಿದ್ನಲ್ಲ, ಮತ್ತೆ ಯಾಕೆ ತಗೊಂಡಿದ್ದು ಅಂತ ಅಮ್ಮನಿಗೆ ಕೇಳಿದಳು. ಅಮ್ಮ ಅಪ್ಪನ ಮೇಲೆ ಹಾಕಿದಳು, "ಅವರೇ ಹಠ ಮಾಡಿ ತಗೊಂಡ್ರು, ನಾನು ಏನು ಮಾಡ್ಲಿಕ್ಕೂ ಆಗ್ಲಿಲ್ಲ" ಅಂತ...

ಆಫೀಸ್ ಮೊಬೈಲು ರಿಂಗಾಯಿತು, ಯೋಚನೆ ಕಟ್ಟಾಯಿತು. ಕರೆಮಾಡಿದವರಿಗೆ ಉತ್ತರಿಸಿ, ಹೇಳಬೇಕಾದ್ದು ಹೇಳಿ ಮತ್ತೆ ಇಟ್ಟಳು, ಮತ್ತೆ ಮುಂದುವರಿಯಿತು ಯೋಚನೆ... ಚಿನ್ನ ತೆಗೆದುಕೊಳ್ಳುವಾಗ ಮಾಡಿದ್ದನ್ನೇ ಈಗ ಮತ್ತೆ ಮಾಡಿದ್ದಾರೆ. ಆಗ ಚಿನ್ನ, ಈಗ ಮೊಬೈಲು.

ನಿಜವಾಗಿ ಹೇಳಬೇಕೆಂದರೆ ಮೊಬೈಲು ತೆಗೆದುಕೊಳ್ಳುವುದು ಅಮ್ಮನ ಸ್ವಂತ ನಿರ್ಧಾರವಲ್ಲವೆಂಬುದು ಅವಳಿಗೂ ಗೊತ್ತು. ಅಮ್ಮನಿಗೆ ಮೊಬೈಲು ತೆಗೆದುಕೊಳ್ಳುವ ಐಡಿಯಾ ಕೊಟ್ಟು, ಅಪ್ಪನನ್ನೂ ಅದಕ್ಕೆ ಒಪ್ಪಿಸಿ ಮೊಬೈಲು ತೆಗೆಸಿಕೊಟ್ಟವರ ಬಗ್ಗೆ ಅವಳಿಗೆ ವಿಪರೀತ ಕೋಪವಿತ್ತು. ಮೂರನೇ ಕ್ಲಾಸು ಓದಿದ, ಇಂಗ್ಲೀಷು-ಪಂಗ್ಲೀಷು ಅರಿಯದ ಅಮ್ಮನ ಮುಗ್ಧತೆಯ ಲಾಭ, ಮೇಸ್ತರಾಗಿದ್ದರೂ ಅಪ್ಪನಲ್ಲಿದ್ದ ವ್ಯವಹಾರ ಜ್ಞಾನದ ಕೊರತೆಯ ಸದುಪಯೋಗವನ್ನು ಪಡೆದವರು ತಮ್ಮ ಲಾಭಕ್ಕೋಸ್ಕರ ಅಪ್ಪ-ಅಮ್ಮನಿಗೆ ಮೊಬೈಲು ಹಿಡಿಸಿದ್ದರು. ಆದರೂ ಅಮ್ಮ ಸ್ವಲ್ಪ ಗಟ್ಟಿಯಾಗಿ ನಿಂತು ನನಗೆ ಮೊಬೈಲು ಬೇಡವೆಂದಿದ್ದರೆ ಮೊಬೈಲು ಖಂಡಿತಾ ಬರುತ್ತಿರಲಿಲ್ಲ.

ಅದಕ್ಕೇ ಅಮ್ಮನಿಗೆ ತಿಳಿಸಿ ಹೇಳಿದ್ದಳು. "ಅಮ್ಮಾ, ಅಲ್ಲಿ ನೆಟ್ ವರ್ಕೇ ಇಲ್ಲ, ಮೊಬೈಲಲ್ಲಿ ಮಾತಾಡಬೇಕೆಂದರೆ ನೀನು ನೆಟ್ ವರ್ಕ್ ಹುಡುಕಿಕೊಂಡು ಗುಡ್ಡೆ ಹತ್ತಬೇಕು. ಯಾಕಮ್ಮಾ ಅಷ್ಟೊಂದು ಕಷ್ಟ? ನೀನು ಹೋದರೆ ಎಲ್ಲಿಗೆ ಹೋಗುತ್ತೀ? ಹೆಚ್ಚೆಂದರೆ ತಂಗಿ ಮನೆ, ಅದು ಬಿಟ್ಟು ಬೇರೆಲ್ಲಿ ಹೋಗುವಾಗಲೂ ಹೇಳಿಯೇ ಹೋಗುತ್ತೀಯಲ್ಲ, ಅಲ್ಲೆಲ್ಲ ಲ್ಯಾಂಡ್ ಲೈನ್ ಫೋನ್ ಇರ್ತದೆ, ಎಲ್ಲರ ನಂಬರೂ ನನ್ನ ಹತ್ರ ಇದೆ... ಮತ್ಯಾಕೆ ಮೊಬೈಲಿನ ಸಹವಾಸ... ನಿಂಗೆ ಗೊತ್ತಾಗುವುದಿಲ್ಲ ಮೊಬೈಲಿನ ಕಷ್ಟಗಳು, ನಾವೆಲ್ಲ ಅನುಭವಿಸ್ತಾ ಇದೇವೆ, ಅನಿವಾರ್ಯ.. ನಿಂಗೂ ಯಾಕಮ್ಮಾ ಅದು... ಒಂದು ವೇಳೆ ಮೊಬೈಲು ನೆಟ್ ವರ್ಕು ಬಂತು ಅಂತಿಟ್ಕೋ, ಮೊಬೈಲು ಎಷ್ಟು ಡೇಂಜರ್ ಅಂತ ಗೊತ್ತಾ ನಿಂಗೆ, ತುಂಬಾ ಹೊತ್ತು ಮಾತಾಡಿದ್ರೆ ಕಿವಿ ಬಿಸಿಯಾಗ್ತದೆ, ತಲೆನೋವಾಗ್ತದೆ, ಆರೋಗ್ಯಕ್ಕೆ ಒಳ್ಳೇದಲ್ಲ ಅಂತ ಕೂಡ ಹೇಳ್ತಾರೆ, ತಂಗಿಮನೆಯಲ್ಲಿ ಪೆಟ್ಟಿಗೆಯಲ್ಲಿಟ್ಟ ಜೇನುಹುಳುವೆಲ್ಲ ವಾಪಸ್ ಬರದೇ ಹೋಗಿದ್ದು, ಹೊಸ ಜೇನುಹುಳು ತರಲಿಕ್ಕೆ ಎಲ್ಲೂ ಸಿಗದಿದ್ದದ್ದು, ಎಲ್ಲವೂ ನಿಂಗೇ ಗೊತ್ತು, ಅದಕ್ಕೆ ಮೊಬೈಲೇ ಕಾರಣ ಅನ್ನುವುದು ತಂಗಿ ಮನೆಯವರಿಗೂ ಗೊತ್ತು, ನಿಂಗೂ ಗೊತ್ತು, ಬೇಡಮ್ಮಾ ಮೊಬೈಲಿನ ಸಹವಾಸ... "

ಊಹುಂ. ಯಾವುದೇ ಉಪಯೋಗವಾಗಿರಲಿಲ್ಲ. ಲ್ಯಾಂಡ್ ಲೈನು ಸರಿ ಮಾಡಿಸಲು 500 ರುಪಾಯಿ ಖರ್ಚಿದೆ ಅಂತ ತಿಂಗಳಾನುಗಟ್ಟಲೆ ಸುಮ್ಮನೆ ಕೂತಿದ್ದ ಅಪ್ಪ-ಅಮ್ಮ, 1500 ರುಪಾಯಿ ಕೊಟ್ಟು ಹೊಸಾ ಮೊಬೈಲು ತೆಗೆದುಕೊಂಡು ಅಂಗಡಿಯಿಂದಲೇ ಫೋನ್ ಮಾಡಿ ಸುದ್ದಿ ಹೇಳಿದ್ದರು. ಅಪ್ಪ-ಅಮ್ಮನ ಖುಷಿಗೆ ನೀರೆರಚುವುದು ಸರಿಯಲ್ಲ... ಈಗ ತೆಗೆದುಕೊಂಡಾಗಿದೆಯಲ್ಲ, ಏನು ಹೇಳಿ ಏನು ಉಪಯೋಗ ಅಂದುಕೊಳ್ಳುತ್ತ ಅವಳು ತೆಪ್ಪಗಾಗಿದ್ದಳು.

ಹಾಗೆ ಅಂಗಡಿಯಲ್ಲಿ ಮಾತಾಡಿದ್ದೇ ಕೊನೆ. ಮನೆಯಲ್ಲಿ ಹೋಗಿ ಮೊಬೈಲಿನಿಂದ ಕರೆ ಮಾಡಲು ಯತ್ನಿಸಿರಬಹುದು, ಮೊಬೈಲ್ ನೆಟ್ ವರ್ಕು ಸರಿಯಾಗಿ ಬರುತ್ತಿರಲಿಕ್ಕಿಲ್ಲ. ಬಂದರೂ ತುಂಬಾ ದುರ್ಬಲವಾಗಿರುತ್ತದೆ, ಅದಕ್ಕೇ ಮಾತಾಡಿದ್ದು ಕೇಳುತ್ತಿಲ್ಲ. ಈಗ ಗೊತ್ತಾಗಿರುತ್ತದೆ, ನೆಟ್ ವರ್ಕೇ ಬರದ ಮನೆಯಲ್ಲಿ ಮೊಬೈಲು ಇಟ್ಟುಕೊಂಡು ಏನು ಮಾಡುತ್ತಾರೆ. ಲ್ಯಾಂಡ್ ಲೈನ್ ಸರಿಮಾಡಿಸಿದ್ದರೆ ಮನೆಯೊಳಗೇ ಕುಳಿತು ಮಾತಾಡುವ ಸೌಲಭ್ಯ. ಅದು ಬಿಟ್ಟು ನೆಟ್-ವರ್ಕ್ ಎಲ್ಲಿದೆ ಅಂತ ಹುಡುಕಿಕೊಂಡು ಗುಡ್ಡೆ ಹತ್ತಬೇಕಾದ ಖರ್ಮ... ತಿಳಿಸಿ ಹೇಳಿದರೆ ಅರ್ಥವೇ ಆಗಲಿಲ್ಲ...

ಆಫೀಸ್ ಮೊಬೈಲು ಮತ್ತೆ ರಿಂಗಾಯಿತು, ಯೋಚನೆಗಳಿಗೆ ಫುಲ್-ಸ್ಟಾಪ್ ಹಾಕಿ ಕರ್ತವ್ಯದ ಕರೆಗೆ ಓಗೊಟ್ಟು ಮತ್ತೆ ಕೆಲಸದಲ್ಲಿ ಮುಳುಗಿದಳು. ಒಂದು ಗಂಟೆ ಲೈವ್ ನ್ಯೂಸ್ ಶುರುವಾಯಿತು. ಬರಬೇಕಾದ ಸುದ್ದಿಯೆಲ್ಲ ಬಂದಾಗಿತ್ತು. ನಂತರ ಸ್ವಲ್ಪ ಆರಾಮಾಗಿ ಕುಳಿತರೆ, ಮತ್ತೆ ಅಮ್ಮನ ಕರೆ, ಈಸಾರಿ ಲ್ಯಾಂಡ್ ಲೈನಿನಿಂದ. "ನಿಂಗೆ ಮೊಬೈಲಿನಿಂದ ಫೋನ್ ಮಾಡಿದ್ರೆ ರಿಂಗ್ ಆಗ್ತದೆ ಮಗಾ, ಮಾತಾಡಲಿಕ್ಕೆ ಆಗುವುದಿಲ್ಲ ... ಪಕ್ಕದ ಮನೆಯವ್ರು ಹೇಳ್ತಾರೆ, ಸ್ವಲ್ಪದಿನದಲ್ಲಿ ಸರಿಯಾಗ್ಬಹುದು ಅಂತ..."

ಅವಳಿಗೆ ವಿಪರೀತ ಬೇಸರವಾಯಿತು... ನಾನು ತಿಳಿದುಕೊಂಡು ಹೇಳುವ ಮಾತ್ಯಾವುದೂ ಇವರಿಗೆ ತಲೆಗೇ ಹೋಗುವುದಿಲ್ಲ. ಯಾರ್ಯಾರೋ ಹೇಳುವುದು ಮಾತ್ರ ಸರಿಯೆನಿಸುತ್ತದೆ. "ನೋಡಮ್ಮಾ, ನಾನು ಹೇಳುವುದು ಮೊದಲೇ ಹೇಳಿದ್ದೆ, ನೀವಿಬ್ರೂ ನನ್ನ ಮಾತು ಕೇಳ್ಲಿಲ್ಲ... ನಂಗಂತೂ ಅರ್ಥವಾಗ್ತಿಲ್ಲ, ಇದರಿಂದ ಯಾರಿಗೆ ಉಪಯೋಗ ಅಂತ. ಬೇಡ ಅಂದಿದ್ದು ಮಾಡಿ ಈಗ ಪಶ್ಚಾತ್ತಾಪ ಪಟ್ರೆ ಏನುಪಯೋಗ, ನಿಂಗೆ ಈಗ್ಲೂ ಅಕ್ಕಪಕ್ಕದವ್ರು ಹೇಳುವುದೇ ಸರಿ ಅನಿಸಿದರೆ ಇಟ್ಕೋ ಮೊಬೈಲು. ನಂಗೇನಿಲ್ಲ"

"ಹಾಗಲ್ಲ ಮಗಾ. ಏನು ಮಾಡ್ಬೇಕು ಅಂತ ಕೇಳೋಣಾಂತ ಮಾಡಿದೆ, ಈಗ ರಿಲಯನ್ಸ್ ಇದೆ, ಪಕ್ಕದ ಮನೆ ಅಣ್ಣ ಹೇಳ್ತಾರೆ ಏರ್ ಟೆಲ್ ಹಾಕಿದ್ರೆ ನೆಟ್ ವರ್ಕು ಸಿಗಬಹುದು ಅಂತ... ಹಾಕಿಸಲಾ ಅಂತ ಕೇಳಲಿಕ್ಕೆ ಫೋನ್ ಮಾಡಿದೆ..." ಅಮ್ಮ ಸಮಜಾಯಿಷಿ ಕೊಡುತ್ತಿದ್ದಳು. ಅವಳ ಬೇಸರ ಕೋಪಕ್ಕೆ ತಿರುಗಿತು. "ನನ್ನ ಕೇಳೋದಿದ್ರೆ ಆ ಮೊಬೈಲು ಎಲ್ಲಿಂದ ತಂದ್ರೋ ಅಲ್ಲಿಯೇ ವಾಪಸ್ ಕೊಡಿ, ದುಡ್ಡು ವಾಪಸ್ ತಗೊಂಡು ಅದೇ ದುಡ್ಡಲ್ಲಿ ಲ್ಯಾಂಡ್ ಲೈನು ಸರಿಮಾಡಿಸಿ... ಮೊಬೈಲು ಸಹವಾಸ ಬೇಡ... ಇಷ್ಟರ ಮೇಲೆ ನಿನ್ನಿಷ್ಟ ಅಮ್ಮಾ, ಈಸಲ ನಾನು ಹೇಳಿದ್ದು ನಿಂಗರ್ಥ ಆಗದೇ ಇದ್ರೆ ಮತ್ತೆ ನನ್ ಹತ್ರ ಏನೂ ಕೇಳ್ಬೇಡ" ಅಂದಳು. ಅಮ್ಮ "ಸರಿ, ಅಪ್ಪನ ಹತ್ರ ಹೇಳ್ತೇನೆ" ಅಂತ ಹೇಳಿ ಫೋನಿಟ್ಟಳು.

>>>>>>>>>>>>>>

ಮೂರು ದಿನ ಕಳೆಯಿತು. ನಡುವಿನಲ್ಲಿ ಎರಡು ಸಾರಿ ಅಮ್ಮ ಏನು ಮಾಡಿದಳು ಅಂತ ತಿಳಿದುಕೊಳ್ಳಲು ಅಮ್ಮನಿಗೆ ಫೋನ್ ಮಾಡಿದರೆ, ಯಥಾಪ್ರಕಾರ, ಲ್ಯಾಂಡ್ ಲೈನು ರಿಸೀವಾಗಿರಲಿಲ್ಲ, ಮೊಬೈಲು ರೀಚಾಗಿರಲಿಲ್ಲ. ಕೋಪ, ಬೇಸರದಿಂದ ಕರೆ ಮಾಡುವುದು ನಿಲ್ಲಿಸಿದ್ದಳು. ಆ ಮಧ್ಯಾಹ್ನ ಅಮ್ಮನ ಕರೆ ಬಂತು, ಲ್ಯಾಂಡ್ ಲೈನಿನಿಂದ... ಏನಂತ ಕೇಳಿದರೆ, ''ಬಿಎಸ್ಸೆನ್ನೆಲ್ ನೆಟ್ವರ್ಕು ಬರಬಹುದು, ಅದನ್ನು ಹಾಕುವ ಅಂತ ಹೇಳ್ತಿದಾರೆ... ಏನ್ಮಾಡ್ಲಿ...'' ಪ್ರತಿ ಸಲ ಮನೆಗೆ ಹೋದಾಗಲೂ ನೆಟ್ ವರ್ಕ್ ಸರ್ಚ್ ಕೊಟ್ಟು ಫೇಲ್ ಆಗಿದ್ದ ಅವಳಿಗೆ ಗೊತ್ತಿತ್ತು, ಬಿಎಸ್ಸೆನ್ನೆಲ್ ಮೊಬೈಲ್ ಕಥೆ ಕೂಡ ಇದೇ ಅಂತ.


"ನೀನಿನ್ನೂ ವಾಪಸ್ ಕೊಟ್ಟಿಲ್ವಾ ಅದನ್ನು..." ಕೇಳಿದಳು. ಇಲ್ಲ, "ಏನಾದ್ರೂ ಮಾಡ್ಬಹುದಾ ಅಂತ ನೋಡ್ಲಿಕ್ಕೆ ಹೇಳಿದರು ಅಂಗಡಿಯವರು..." ಅಂದಳು ಅಮ್ಮ. ಪ್ರತೀ ಸಲ ಏನು ಮಾಡಬೇಕು ಅಂತ ತನ್ನ ಅಭಿಪ್ರಾಯ ಹೇಳಿದ ಮೇಲೂ ಮತ್ತೆ ಅಕ್ಕಪಕ್ಕದವರ ಮಾತು ಕೇಳಿಕೊಂಡು ಒದ್ದಾಡುವ ಅಮ್ಮನ ಮೇಲೆ ಅವಳಿಗೆ ವಿಪರೀತ ಕೋಪ ಬಂತು. ಕೇಳಿಯೇ ಬಿಟ್ಟಳು ಅಮ್ಮನಿಗೆ, "ಅಮ್ಮಾ ನೀನು ಮೊಬೈಲು ತಗೊಳ್ಳುವ ಉದ್ದೇಶ ಏನು" ಅಂತ. "ನಿನ್ನ ಹತ್ರ ಬೇಕಾದಾಗ ಮಾತಾಡಲಿಕ್ಕೆ ಅನುಕೂಲವಾಗಲಿ ಅಂತ" ಅಂದಳು ಅಮ್ಮ.


ಅವಳ ತಲೆ ಕೆಟ್ಟು ಹೋಯಿತು. ಆ ವ್ಯವಸ್ಥೆ ಈಗಲೂ ಅಮ್ಮನಿಗಿತ್ತು. ಮಾತಾಡಬೇಕೆನಿಸಿದಾಗಲೆಲ್ಲ ಲ್ಯಾಂಡ್ ಲೈನಿಂದ ಫೋನ್ ಮಾಡುವ ಅಮ್ಮ ಆಫೀಸಿನಲ್ಲಿದೀಯಾ ಅಂತ ಕೇಳುತ್ತಿದ್ದಳು. ಹೌದೆಂದ ಮೇಲೂ ಅಲ್ಲಿ ಬೊಜ್ಜ, ಇಲ್ಲಿ ಇಂಥವರ ಸೊಸೆ ಹೆತ್ತಳು, ನಾಳೆ ಅವರ ಮಗಳಿಗೆ ಮದುವೆ, ಇವರ ಮನೆಯ ಗೃಹಪ್ರವೇಶ - ಇತ್ಯಾದಿ ಸಿಕ್ಕಿಸಿಕ್ಕಿದವರ ವಿಚಾರಗಳನ್ನು ಮಗಳಿಗೆ ಬೇಕೋ ಬೇಡವೋ ಅಂತ ಯೋಚಿಸದೆ ಅಮ್ಮ ಹೇಳುತ್ತಿದ್ದಳು. ಅದನ್ನೆಲ್ಲ ಕೇಳಿಸಿಕೊಳ್ಳುವ ತಾಳ್ಮೆಯಿಲ್ಲದಿದ್ದರೂ, ಫೋನ್ ಕಟ್ ಮಾಡಿದರೆ ಅಮ್ಮನಿಗೆ ಬೇಸರವಾಗುತ್ತದೆಂದು ಸುಮ್ಮನೆ ಕೇಳಿಸಿಕೊಳ್ಳುತ್ತಲೇ ಬೇರೆ ಕೆಲಸ ಮಾಡುತ್ತಿದ್ದಳು ಅವಳು. ಕೊನೆಗೆ ಇಡಲಾ ಅಂತ ಕೇಳಿ ಅಮ್ಮ ಫೋನಿಟ್ಟ ಮೇಲೆ, ಅಷ್ಟು ಹೊತ್ತು ಅದೇನು ಮಾತಾಡಿದಳೋ ನೆನಪಿರುತ್ತಿರಲಿಲ್ಲ. ಹಾಗೆಯೇ ಅವಳಿಗೆ ಬೇಕಾದಾಗ ಅಮ್ಮನಿಗೆ ಫೋನ್ ಮಾಡಿದರೆ ಅದು ರಿಂಗಾಗಿದ್ದೇ ಕೇಳದ ಕಾರಣ ತನಗೆ ಬೇಕಾದಾಗ ಅಮ್ಮನ ಜತೆ ಮಾತಾಡುವ ಸೌಲಭ್ಯ ಅವಳಿಗಿಲ್ಲವಾಗಿತ್ತು.


ಎಲ್ಲಾ ಅಸಮಾಧಾನ, ಸಿಟ್ಟು ಹೊಟ್ಟೆಯಿಂದ ಹೊರಬರುವ ಕಾಲ ಬಂದಿತ್ತು. ಹೇಳಿದಳು - "ಅಮ್ಮಾ ದಮ್ಮಯ್ಯ, ನನ್ನ ಮಾತಿಗೆ ಏನಾದ್ರೂ ಒಂಚೂರು ಬೆಲೆ ಇದೆ ಅಂತಾದ್ರೆ ಆ ಮೊಬೈಲು ವಾಪಸ್ ಕೊಡು, ಲ್ಯಾಂಡ್ ಲೈನು ಸರಿಮಾಡಿಸು. ಹಾಗೆ ನೀ ಮಾಡಿಸ್ಲಿಲ್ಲಾಂದ್ರೆ ಮತ್ತೆ ನನ್ ಹತ್ರ ಮಾತಾಡೂದೇ ಬೇಡ, ನಿಂಗೆ ಯೂರ್ ಬೇಕೋ ಅವರ ಮಾತು ಕೇಳ್ಕೊಂಡು ನಿಂಗೆ ಬೇಕಾದ್ದು ಮಾಡ್ಕೋ, ನಾ ನಿನ್ನ ತಂಟೆಗೇ ಬರೂದಿಲ್ಲ... ಊರಿಗೂ ಬರೂದಿಲ್ಲ" ಅಷ್ಟು ಹೇಳಬೇಕಾದರೆ ಅವಳ ದನಿ ಗದ್ಗದವಾಗಿತ್ತು...


ಅಮ್ಮ ಏನು ಮಾಡಬೇಕೆಂದು ತಿಳಿಯದೇ ಮಗಳನ್ನು ಸಮಾಧಾನಿಸತೊಡಗಿದಳು... "ಹಾಗೆಲ್ಲಾ ಹೇಳ್ಬೇಡ, ಕೋಪ ಮಾಡ್ಬೇಡ, ನೀ ಹೇಳಿದಂಗೇ ಮಾಡ್ತೇನೆ, ನಿನ್ನ ಹತ್ರ ಮಾತಾಡ್ಲಿಕ್ಕಾಗದಿದ್ದ ಮೇಲೆ ಮೊಬೈಲು ಯಾಕೆ ನಂಗೆ, ಊರಿಗೇ ಬರೂದಿಲ್ಲ ಅಂತೆಲ್ಲ ಹೇಳ್ಬೇಡ, ಅಪ್ಪ ಬೇಜಾರ್ ಮಾಡ್ಕೊಳ್ತಾರೆ, ನಿನಗೋಸ್ಕರವೇ ತಾನೇ ಇಷ್ಟೆಲ್ಲ ಮಾಡ್ತಿರೂದು..." ಇತ್ಯಾದಿ... ಮಾತಾಡುತ್ತ ಮಾತಾಡುತ್ತ ಅಮ್ಮನ ದನಿ ಒದ್ದೆಯಾಗಿ ನೀರೊಡೆದಿತ್ತು, ಸುಮ್ಮನೇ ಕೇಳಿಸಿಕೊಳ್ಳುತ್ತಿದ್ದ ಮಗಳ ಕಣ್ಣಲ್ಲೂ ಗಂಗಾಧಾರೆ ಹರಿದಿತ್ತು...

ಆತುದಿಯ ರಿಂಗಾಗಲಾರದ ಲ್ಯಾಂಡ್ ಲೈನು ಅಮ್ಮನ ಕಣ್ಣೀರಿಗೆ ಸಾಕ್ಷಿಯಾದರೆ, ಈ ತುದಿಯಲ್ಲಿದ್ದ ಮೊಬೈಲು ಮಗಳ ಸಂಕಟಕ್ಕೆ ಸಾಥ್ ಕೊಟ್ಟಿತ್ತು.

Saturday, October 4, 2008

ಎಲ್ಲವೂ ಸರಿಯಿತ್ತು...


ಮಟಮಟ ಮಧ್ಯಾಹ್ನ, ಅಂದು ದೂರದೂರಿಗೆ ಪಯಣ... ಕಣ್ಣು ತೇವವಾಗಿಸಿಕೊಂಡು ಕಳಿಸಿಕೊಟ್ಟ ಅಮ್ಮ, ಕಾಳಜಿಯಿಂದ ಬಸ್ಸು ಹತ್ತಿಸಿದ ಅಪ್ಪನ ಮುಖಗಳನ್ನು ಮರೆಯಲೆತ್ನಿಸುತ್ತಾ ಆಕೆ ಬಸ್ಸಿನಲ್ಲಿ ಕುಳಿತಿದ್ದಳು.

ಒಂದು ದಿನದ ಪಯಣ, ಕಿಟಿಕಿ ಬದಿಯ ಸೀಟು. ಓದಲೆಂದು ಸುಧಾ, ತರಂಗ... ಬೋರಾದಾಗ ಬಾಯಿಯಾಡಿಸಲೆಂದು ಅಮ್ಮ ಕಟ್ಟಿಕೊಟ್ಟ ಚಕ್ಕುಲಿ... ಜತೆಗೆ ರಜಾದಲ್ಲಿ ಮನೆಯಲ್ಲಿ ಕಳೆದ ನೆನಪುಗಳು.

ಆಕೆ ಸುಧಾ ತೆರೆದು ಕಥೆಯೊಂದನ್ನು ಓದಲು ಶುರುಮಾಡಿದಳು. ಹಾಗೇ ಅದರಲ್ಲಿ ಮುಳುಗಿದಳು. ಬಸ್ಸು ಹೊರಡಲು ಇನ್ನು ಹತ್ತೇ ನಿಮಿಷ. 

ಆಕೆಯ ಪಕ್ಕದ ಸೀಟಿನಲ್ಲಿ ಬಂದು ಕುಳಿತನಾತ. ಲಗೇಜನ್ನೆಲ್ಲ ಮೇಲಿಟ್ಟು, ಜಾಕೆಟು ಸೀಟಿನ ಮೇಲೆ ಬಿಚ್ಚಿಟ್ಟು ಸುತ್ತಮುತ್ತ ಎಲ್ಲಾ ನೋಡಿ, ಮತ್ತೆ ಕೆಳಗಿಳಿದು, ನೀರು ಕೊಂಡು ತಂದು, ಹೋಲ್ಡರಲ್ಲಿ ಇಟ್ಟು ಸೆಟಲ್ ಆದ. 

ಅವಳು ಪುಸ್ತಕದೊಳಗಿದ್ದರೂ ಅವಳೊಳಗೆ ಕಳವಳ. ಎಂತಹವನೋ ಏನೋ, ಅಪರಿಚಿತನ ಜತಗೆ ಕುಳಿತುಕೊಳ್ಳುವ ಕರ್ಮ. ಲೇಡೀಸ್ ಸೀಟ್ ಕೇಳಬೇಕಿತ್ತು ಅಂದುಕೊಂಡಳು. 

ಆಮೇಲೆ ತನಗೆ ತಾನೇ ಬೈದುಕೊಂಡಳು, ಕಂಡವರನ್ನೆಲ್ಲ ಸಂಶಯದ ದೃಷ್ಟಿಯಿಂದ ನೋಡುತ್ತಿದ್ದೀನಲ್ಲ ಅಂತ ತನ್ನ ಬಗ್ಗೆ ತನಗೇ ಅಸಹ್ಯವೆನಿಸಿತು. ಸರಿ ಹೋಗದಿದ್ದರೆ ಇದ್ದೇ ಇದ್ದಾನೆ ಕಂಡಕ್ಟರ್. ಆತನಲ್ಲಿ ಸಿಂಗಲ್ ಸೀಟ್ ಕೇಳಿದರಾಯಿತು ಅಂದುಕೊಂಡಳು.

ಸ್ವಲ್ಪ ಹೊತ್ತಲ್ಲಿ ಬಸ್ ಹೊರಟಿತು. ಒಬ್ಬೊಬ್ಬರದೇ ಟಿಕೆಟ್ ಚೆಕ್ ಮಾಡುತ್ತಾ ಕಂಡಕ್ಟರ್ ಇವರ ಹತ್ತಿರಕ್ಕೆ ಬಂದ. ಆತ ಟಿಕೆಟ್ ತೋರಿಸಿದ. ಓದಿನಿಂದ ಬ್ರೇಕ್ ತೆಗೆದುಕೊಂಡ ಆಕೆಯೂ ಟಿಕೆಟ್ ತೋರಿಸಿದಳು. ಒಂದು ಕಥೆ ಓದಿ ಮುಗಿಸಿಯಾಗಿತ್ತು. ಹಾಗೇ ಅದನ್ನು ಮೆಲುಕು ಹಾಕುತ್ತಿದ್ದರೆ ಆತ ಇಂಗ್ಲೀಷಿನಲ್ಲಿ ಕೇಳಿದ, ಎಲ್ಲಿ ಹೋಗುತ್ತಿದ್ದೀಯಾ ಅಂತ. 

ಯಾಕೋ ಒಳ್ಳೆಯವನ ಥರ ಕಂಡ. ಯಾವಾಗಲೂ ಸುಳ್ಳು ಹೇಳುವ ಅವಳು ಈಸಲ ಸತ್ಯ ಹೇಳಿದಳು. ಪ್ರಯಾಣದ ಉದ್ದೇಶ ಕೇಳಿದ. ಕೆಲಸದ ಮೇಲೆಂದಳು. ಇದು ಸ್ವಂತ ಊರಾ ಅಂತ ಕೇಳಿದ. ಹೌದೆಂದಳು. 

ಮತ್ತೆ ಆಕೆಯನ್ನು ಪುಸ್ತಕದೆಡೆಗೆ ಕಣ್ಣು ಹಾಯಿಸಲು ಬಿಡದೆ ಮಾತು ಆರಂಭಿಸಿದನಾತ. ದಿಲ್ಲಿಯವನಂತೆ. ಈ ಊರಲ್ಲಿ ಕೆಲಸ ಮಾಡುತ್ತಾನಂತೆ. ಆ ಊರಲ್ಲಿ ಅವನ ತಮ್ಮನಿದ್ದಾನಂತೆ. ಆತನನ್ನು ಭೇಟಿ ಮಾಡಲು ಹೋಗುತ್ತಿರುವುದಂತೆ. ಅಲ್ಲಿಂದ ಹಾಗೇ ದಿಲ್ಲಿಗೆ ಹೋಗುತ್ತಾನಂತೆ. ಆ ಊರಿನ ಬಗ್ಗೆ ಏನೂ ಗೊತ್ತಿಲ್ಲವಂತೆ. ಮೊದಲ ಸಲ ಹೋಗುತ್ತಿರುವುದಂತೆ.

ಬಸ್ಸು ನಿಂತಲ್ಲಿ ಊಟಕ್ಕೆ ಕರೆದ. ಆಕೆ ನಯವಾಗಿ ನಿರಾಕರಿಸಿದಳು, ಅಮ್ಮ ಚಪಾತಿ ಕಟ್ಟಿಕೊಟ್ಟಿದ್ದಳಲ್ಲ. ತಿಂದು ಮುಗಿಸಿ ನೀರು ಕುಡಿಯುತ್ತಿದ್ದರೆ ಆತ ಫ್ರೂಟಿ ಪ್ಯಾಕೆಟ್ ಹಿಡಿದು ಬಂದ. This is for you ಅಂದ. ಅಯ್ಯೋ ಇದ್ಯಾಕೆ ತರಲಿಕ್ಕೆ ಹೋದೆ ಎಂದಳು. ಅವನು ನಾನು ಅಲ್ಲೇ ಕುಡಿದೆ, ನಿನಗೆಂದೇ ತಂದೆ ಎಂದ. ಮತ್ತೆ ಬೇಡವೆನ್ನದೆ ತೆಗೆದುಕೊಂಡಳು. 

ಮತ್ತೆ ಮಾತು ಶುರು. ಶುದ್ಧ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಮಾತಾಡುತ್ತಿದ್ದ ಆತ ರಾಜಕೀಯದಿಂದ ಹಿಡಿದು ದಿಲ್ಲಿಯವರೆಗೆ, ತಾನಿದ್ದ ಊರಿನ ಸಮುದ್ರತೀರದಿಂದ ಹಿಡಿದು ಚೆನ್ನೈಯ ಹೋಟೆಲುಗಳ ವರೆಗೆ ಸುಮಾರು ವಿಚಾರಗಳನ್ನು ಹೇಳುತ್ತಿದ್ದರೆ ಆಕೆಯೂ ಹೂಂಗುಟ್ಟಿದಳು, ತನಗನಿಸಿದ್ದು ಹೇಳಿದಳು. ಆತನ ವಾಗ್ಧಾರೆಯ ನಡುವೆ ಪುಸ್ತಕ ಓದುವುದಂತೂ ದೂರದ ಮಾತು. ಮಾತಾಡುತ್ತ ಹೋದಂತೆ ಅಪರಿಚಿತ ಭಾವ ಕಳೆಯುತ್ತ ತಕ್ಕಮಟ್ಟಿಗೆ ಪರಿಚಿತನೆಂಬಷ್ಟು ಮಟ್ಟದ ಬಂಧ ಆತನ ಜತೆಗೆ ಬೆಳೆಯಿತು.

ಹಾಗೇ ಸಮಯ ಕಳೆದು ರಾತ್ರಿಯಾಯಿತು. ಎಲ್ಲೋ ಬಸ್ ಊಟಕ್ಕೆಂದು ನಿಂತಲ್ಲಿ ಜತೆಗೇ ಊಟವೂ ಮುಗಿಯಿತು. ಬಸ್ ಮತ್ತೆ ಹೊರಟಿತು. ಹೊರಗೆ ಕೊರೆವ ಚಳಿ, ಬೆಚ್ಚಗಿನ ಸ್ವೆಟರ್, ಅಮ್ಮ ಕಟ್ಟಿಕೊಟ್ಟ ಚಕ್ಕುಲಿ ಅವನ ಜತೆ ಹಂಚಿಕೊಂಡು ಹರಟೆ ಹೊಡೆದಳು. ದೇವರ ಬಗ್ಗೆ, ಅಮ್ಮನ ಬಗ್ಗೆ, ಬಾಲ್ಯದ ಬಗ್ಗೆ, ಬದುಕಿನ ಬಗ್ಗೆ, ದ್ವೇಷದ ಬಗ್ಗೆ, ಪ್ರೀತಿಯ ಬಗ್ಗೆ… 

ಆತನ ಬಗ್ಗೆ ತಪ್ಪು ತಿಳಿದುಕೊಂಡಿದ್ದಕ್ಕೆ ತನ್ನ ಬಗ್ಗೆಯೇ ನಾಚಿಕೆಯಾಗಿದ್ದಕ್ಕೋ ಏನೋ, ಸ್ವಲ್ಪ ಹೆಚ್ಚಾಗಿಯೇ ಆತನ ಜತೆಗೆ ಮಾತಾಡಿದಳು. 

****

ಮಾತಾಡುತ್ತ ಮಾತಾಡುತ್ತ ಎಷ್ಟು ಹೊತ್ತು ಕಳೆಯಿತೋ ಗೊತ್ತಿಲ್ಲ. ಅದ್ಯಾವುದೋ ಅಪರಾತ್ರಿಯಲ್ಲಿ ಅವಳಿಗೆ ಆಕಳಿಕೆ, ಕಣ್ಣು ಎಳೆಯಲಾರಂಭಿಸಿತು. ಅಷ್ಟರಲ್ಲಿ ಅವನೇ ಗುಡ್ ನೈಟ್ ಹೇಳಿದ. ತಿರುಗಿ ಗುಡ್ ನೈಟ್ ಹೇಳಿ ಮಲಗಿದಳು. ಆದರೆ ನಿದ್ದೆ ಬರಲಿಲ್ಲ.

ನಾಳೆಯಿಂದ ಅದೇ ಆಫೀಸು. ಅದೇ ಕೆಲಸ... ದಿನಾ ಆಫೀಸಿಗೆ ಹೋಗುವ ಅದೇ ಹಳೆಯ ದಾರಿ... ಮಾತಿಲ್ಲದ, ಯಾವುದೇ ಉದ್ದೇಶವಿಲ್ಲದೆ ಸುಮ್ಮನೆ ಕಾಡುವ ಅದೇ ಅವನು... ತಲೆಗೊಂದು ಮಾತಾಡುವ ಅದೇ ಅವರು... ಎಲ್ಲವೂ ಬೋರ್ ಅನಿಸುತ್ತಿತ್ತು. ಮಾತಿದ್ದಷ್ಟು ಹೊತ್ತು ಕಾಡದ ಭಾವಗಳು ಶೂನ್ಯದಲ್ಲಿ ಬಂಡಿ ಹೊಡೆಯುತ್ತ ಬಂದು ಮನದೊಳಗೆ ನುಗ್ಗಿದವು. 

ಪಕ್ಕದಲ್ಲಿದ್ದ ಆತ ನಿದ್ದೆಯಲ್ಲೇ ಆಕೆಯ ಕಡೆ ತಿರುಗಿ ಮಲಗಿದ. ಅವಳು ನಿದ್ದೆ ಮರೆತುಹೋಗಿ ಸುಮ್ಮನೆ ಯೋಚಿಸುತ್ತ ಕಿಟಿಕಿಯಾಚೆಗೆ ಕತ್ತಲು ನೋಡುತ್ತ ಮಲಗಿದ್ದಳು.

ಆತ ನಿದ್ದೆಯಲ್ಲೇ ಹತ್ತಿರ ಸರಿದ. ಮಗುವಿನಂತೆ ನಿದ್ದೆ ಮಾಡುತ್ತಿದ್ದಾನೆ. ತಾನು ಪುಟ್ಟ ಮಗುವಾಗಿದ್ದಾಗ ಕೋಣೆಯ ಒಂದು ಬದಿಯಲ್ಲಿ ಮಲಗಿದವಳು ನಿದ್ದೆಯಲ್ಲೇ ಮೀಟರ್-ಗಟ್ಟಲೆ ದೂರ ಉರುಳಿ ಎಚ್ಚರವಾದಾಗ ಇನ್ನೊಂದು ಬದಿಯಲ್ಲಿರುತ್ತಿದ್ದುದು ನೆನಪಾಗಿ ನಗು ಬಂತು. ಹಾಗೇ ಮತ್ತೆ ನೆನಪುಗಳಲ್ಲಿ ಕಳೆದುಹೋದಳು.

ಸ್ವಲ್ಪ ಹೊತ್ತಿನ ನಂತರ ನಿದ್ದೆಯಲ್ಲಿದ್ದ ಆತನ ಕೈ ನಿಧಾನವಾಗಿ ಅವಳ ಕಾಲಿನ ಮೇಲೆ ಬಂತು. ನಿದ್ದೆಯಲ್ಲಿ ಹೀಗೆಲ್ಲಾ ಆಗೋ ಸಾಧ್ಯತೆ ಇದೆಯಾ ಅಂತ ಸಂಶಯದಲ್ಲಿ ಆತನ ಮುಖ ನೋಡಿದರೆ ಹೌದು, ಆತನಿಗೆ ಗಾಢ ನಿದ್ರೆ. ಕೈಯನ್ನು ಪಕ್ಕಕ್ಕೆ ಸರಿಸಿದಳು, ಆದರೆ ತಲೆಲ್ಲಿ ಅಲಾರಂ ಜೋರಾಗಿ ಹೊಡೆಯಲಾರಂಭಿಸಿತು.

ಮತ್ತೆ ಸ್ವಲ್ಪ ಹೊತ್ತಿಗೆ ಪುನಹ ಆತನ ಕೈ ಅವಳ ಕಾಲಮೇಲೆ ಬಂತು. ಮತ್ತೆ ಅದನ್ನು ಸರಿಸಿದವಳ ನಿದ್ರೆ ಹಾರಿಹೋಯಿತು. ತಲೆ ಮಿಂಚಿನ ವೇಗದಲ್ಲಿ ಕೆಲಸ ಮಾಡಲಾರಂಭಿಸಿತು. ಅವನ ಉಸಿರಾಟ ನಿದ್ರೆಯಲ್ಲಿದ್ದಾಗ ಇರಬೇಕಾದಂತೆ ಮಾಮೂಲಾಗಿಯೇನೂ ಇರಲಿಲ್ಲ, ನಿದ್ರೆಯ ನಟನೆ ಮಾಡುತ್ತಿದ್ದುದು ಸ್ಪಷ್ಟವಾಗಿತ್ತು. ಎಷ್ಟು ಸಲ ಇದನ್ನು ಸಹಿಸಲು ಸಾಧ್ಯ?

ಅಲ್ಲಿಯವರೆಗಿನ ಪ್ರಯಾಣದಲ್ಲಿ ಆತನ ಜತೆಗೆ ಚೆನ್ನಾಗಿ ಹೊಂದಿಕೊಂಡು, ಮಾತಾಡುತ್ತ ಬಂದಿದ್ದಳಾದ ಕಾರಣ, ಈಗ ಆತನ ಬಗ್ಗೆ ಕಂಡಕ್ಟರನಿಗೆ ದೂರು ಕೊಡುವುದು ಯಾಕೋ ಸರಿಯೆನ್ನಿಸಲಿಲ್ಲ. ಅಕ್ಕಪಕ್ಕದವರಿಗೆ ಹೇಳುವುದಂತೂ ದೂರವೇ ಉಳಿಯಿತು. ಏನು ಮಾಡಬಹುದು?

ಕಾಲೇಜು ಓದುತ್ತಿದ್ದಾಗಲೊಮ್ಮೆ ಬಸ್-ನಲ್ಲಿ ಹೋಗುವಾಗ ಹದಮೀರಿ ವರ್ತಿಸಿದವನನ್ನು ಎದುರಿಸಲಾಗದೆ, ಆಡಲಾಗದೆ, ಅನುಭವಿಸಲಾಗದೆ ಕಷ್ಟಪಟ್ಟಿದ್ದು ನೆನಪಾಯಿತು. ಮತ್ತೊಂದು ಸಾರಿ ಇದೇ ರೀತಿ ದೂರಪ್ರಯಾಣದ ಸಮಯ ಪಕ್ಕ ಕೂತ ರಾಜಕಾರಣಿಯೊಬ್ಬ ಈಕೆಯ ಪೂರ್ವಾಪರವೆಲ್ಲ ವಿಚಾರಿಸಿದ್ದಾದ ಮೇಲೆ, ನನ್ನೂರಿಗೆ ಬಾ, ನಿನಗೆ ಕೆಲಸ ಕೊಡಿಸುತ್ತೇನೆಂದು ಕಣ್ಣುಹೊಡೆದು ಹೇಳಿದ್ದು, ಲೈಟು ಆರಿದ ಮೇಲೆ ತನ್ನ ಮಿತಿ ದಾಟಹೊರಟ ಆತನಿಗೆ ತಾನು ಕೆಲಸ ಮಾಡುವುದು ಎಲ್ಲಿ ಎಂದು ತಿಳಿಸಿ ಸಾರಿ ಕೇಳುವಂತೆ ಮಾಡಿದ್ದು, ಎಲ್ಲಾ ನೆನಪಾಯ್ತು…

ಈ ಬಾರಿ ಏನು ಮಾಡುವುದು ಅಂತ ಮಿಂಚಿನ ವೇಗದಲ್ಲಿ ತಲೆ ಕೆಲಸ ಮಾಡುತ್ತಿರುವಾಗ ಆತನ ಕೈ ಮತ್ತೆ, ಮೆಲ್ಲಗೆ, ಅವಳ ಕಾಲಮೇಲೆ ಸ್ವಲ್ಪವೇ ಸ್ವಲ್ಪ ಚಲಿಸಿತು. ಅಚಾನಕ್ಕಾಗಿ ಆಕೆ ತನ್ನ ಎಡಗೈಯನ್ನು ಆತನ ಕೈಯ ಮೇಲಿಟ್ಟಳು. ಆತನ ಕೈ ಇದ್ದಲ್ಲೇ ಸ್ತಬ್ಧವಾಯಿತು. 

ಆತನೆಡೆಗೆ ನೋಡಿದರೆ ಮುದ್ದುಮಗುವಿನಂತೆ ಮಲಗಿದ್ದ ಅವನಿಗೆ ಏನೊಂದೂ ತಿಳಿಯದಂತಹ ಗಾ....ಢ ನಿದ್ರೆ… ಅಂತ ಯಾರೇ ಆದರೂ ನಂಬಬೇಕು, ಆರೀತಿಯ ನಟನೆ! ಆಕೆ ತನ್ನ ಕೈಯನ್ನು ಹಿಡಿದಿಟ್ಟಿದ್ದು ಕೂಡ ಗೊತ್ತಾಗದಂತೆ. ಸಿಕ್ಕಿಬಿದ್ದ ನಂತರ ಹೇಗೆ ಪಾರಾಗುವುದೆಂದು ತಿಳಿಯದಾಗಿದ್ದ ಆತ ನಿದ್ರೆ ನಟಿಸುವ ಹೊರತು ಬೇರೇನೂ ಮಾಡುವ ಹಾಗಿರಲಿಲ್ಲ.

ಅವಳಿಂದ ಬೇರೆಲ್ಲ ಯೋಚನೆ ಓಡಿಹೋಗಿ, ಸದ್ಯದ ಪರಿಸ್ಥಿತಿ ಮಾತ್ರ ಸತ್ಯವಾಯಿತು. ಎಲ್ಲೂ ತಪ್ಪಿಸಿಕೊಳ್ಳಲು, ಚಲಿಸಲು ಸಾಧ್ಯವಿಲ್ಲದಂತೆ ಆ ಕೈ ಹಿಡಿದಿದ್ದ ಅವಳಿಗೆ ಅದೆಷ್ಟು ಹೊತ್ತಿಗೆ ನಿದ್ರೆ ಬಂತೋ ಗೊತ್ತಿಲ್ಲ. ಬೆಳಗಿನ ಜಾವಕ್ಕೆ ಎಚ್ಚರಾದಾಗಲೂ ಆತ ಅವಳ ಕಡೆಗೇ ತಿರುಗಿ ಮಲಗಿದ್ದ. ಆತನ ಕೈ ಅವಳ ಕೈಯೊಳಗೆ ಹಾಗೇ ಇತ್ತು. ಇನ್ನು ಸಾಕು, ಇನ್ನೇನೂ ಆಗಲಾರದು ಅಂತ ಖಚಿತವಾದ ಮೇಲೆ ಆತನ ಕೈ ಕಿತ್ತೆಸೆದಳು. ಆತ ಏನೂ ಗೊತ್ತಾಗದವನಂತೆ ಹಾಗೇ ಬಿದ್ದುಕೊಂಡಿದ್ದ.

ಸ್ವಲ್ಪ ಹೊತ್ತಿಗೆ ಆತ ಎಚ್ಚರಾದ ನಟನೆ ಮಾಡಿದ. ಆಕೆಯನ್ನು ಮಾತಾಡಿಸಲು ಯತ್ನಿಸಿದ. ಅಷ್ಟರಲ್ಲಾಗಲೇ ಪುಸ್ತಕದಲ್ಲಿ ಮುಳುಗಿದ್ದ ಅವಳು ಪ್ರತಿಕ್ರಿಯಿಸಲಿಲ್ಲ. ಆತ ಉಗುರು ಕಚ್ಚುತ್ತ ಅವಳ ಪಕ್ಕದಲ್ಲಿ ಕೂತಿದ್ದರೆ, ಅವಳು ಬಂಡೆಕಲ್ಲಾಗಿದ್ದಳು.

ಅವಳೊಳಗೆ ಯೋಚನೆ ಸಾಗಿಯೇ ಇತ್ತು. ಇದು ನನಗೆ ಬೇಕಾಗಿದ್ದಾಗಿತ್ತಾ ಅಥವಾ ಬೇಡವಿದ್ದೂ ಅನಿವಾರ್ಯವಾಗಿ ಆತನ ಜತೆ ಅಷ್ಟು ಮಾತಾಡಿದೆನಾ ಅಥವಾ ನಾನು ಮಾತಾಡದಿರುವ ಆಯ್ಕೆ ಇತ್ತಾ? ಆತನ ಜತೆ ಮಾತಾಡಿದಾಗ ಖುಷಿಯಾಗಿದ್ದು ಸುಳ್ಳಾ? ಅಷ್ಟೆಲ್ಲ ತಿಳಿದುಕೊಂಡಂತಿದ್ದ ವ್ಯಕ್ತಿ ನಾ ಮಾತಾಡಿದ್ದೇ ಗಡಿ ಮೀರಲಿಕ್ಕೆ ಅನುಮತಿ ಎಂದುಕೊಂಡಿದ್ದು ಯಾಕಿರಬಹುದು? ಮನಸು ಕಲ್ಲಾಗಿದ್ದು ಯಾವ ಬಿಂದುವಿನಲ್ಲಿ?

ಅವಳ ತಲೆಯಲ್ಲಿ ಗಾಡಿ ಹೀಗೆಲ್ಲಓಡುತ್ತಿದ್ದರೂ ಬೇರೆ ಯಾರೂ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. ನಿನ್ನೆ ಅಷ್ಟೆಲ್ಲ ಮಾತಾಡುತ್ತಿದ್ದವರು ಇವತ್ತು ಯಾಕೆ ಮಾತಾಡುತ್ತಿಲ್ಲವೆಂದು ಯಾರಿಗೂ ಪ್ರಶ್ನೆಗಳಿದ್ದಂತೆ ಕಾಣಲಿಲ್ಲ. ಇವರ ನಡುವಿನ ಖಾಸಗಿ ವ್ಯವಹಾರಗಳು ಖಾಸಗಿಯಾಗಿಯೇ ಉಳಿದಿತ್ತು. ಎಲ್ಲವೂ ಸರಿಯಿತ್ತು. ಬಸ್ ಅದರ ಪಾಡಿಗೆ ಓಡುತ್ತಿತ್ತು. ಬದುಕೂ ಅದರ ಪಾಡಿಗೆ ಓಡುತ್ತಲೇ ಇತ್ತು.

Wednesday, September 24, 2008

ಪರಿಚಯವಿದ್ದವ್ರು ಎದುರು ಸಿಕ್ರೆ...

ಆದಿನ ಬೆಳಿಗ್ಗೆ ಸುಶ್ರುತನ ಮೆಸೇಜು, ''ಗುಲಾಬಿ ಟಾಕೀಸು, ಪಿವಿಆರ್-ನಲ್ಲಿ, ಬರ್ತೀಯಾದ್ರೆ ಕನ್ಫರ್ಮ್ ಮಾಡು, ಟಿಕೆಟ್ ಬುಕ್ ಮಾಡ್ತಿದೀನಿ". ಕನ್ನಡ ಸಿನಿಮಾ ನೋಡಿ ತುಂಬಾ ದಿನವಾಗಿತ್ತು. ಜತೆಗೆ ನೆಚ್ಚಿನ ಲೇಖಕಿ ವೈದೇಹಿಯ ಕಥೆ ಆಧರಿತ ಚಿತ್ರ, ಕಾಸರವಳ್ಳಿ ಆಕರ್ಷಣೆ ಬೇರೆ. ಸರಿಯೆಂದೆ. ಹಾಗೆ ಆ ಸಂಜೆ ಗುಲಾಬಿ ಟಾಕೀಸು ನೋಡುವುದೆಂದು ನಿರ್ಧಾರವಾಯಿತು. ಬೆಂಗಳೂರಿನ ಟ್ರಾಫಿಕ್ಕಿನಲ್ಲೂ ಸಮಯಕ್ಕೆ ಸರಿಯಾಗಿ ಥಿಯೇಟರಿನ ಎದುರಿಗೆ ತಲುಪಿದೆವು. ನಮ್ಮ ಗುಂಪಿನ ಉಳಿದವರೂ ಬರಲಿ ಅಂತ ಥಿಯೇಟರಿನೆದುರು ಕಾಯುತ್ತಿದ್ದೆವು.
ಇದ್ದಕ್ಕಿದ್ದಂತೆ ನನ್ನ ಜತೆಗಿದ್ದ ನಿಧಿ ಖುಷಿಯಿಂದ ಕುಣಿದ, ನನ್ನೆಡೆಗೆ ತಿರುಗಿ ಗುಟ್ಟುಗುಟ್ಟಾಗಿ ಕಿರುಚಿಕೊಂಡ, ''ಅಲ್ಲಿ ನೋಡಿ, ಅವರ ಹೆಸರೇನು, ಕನ್ನಡ ಚಲನಚಿತ್ರರಂಗದ ಮಹಾನ್ ತಾರೆ ಅವ್ರು... ಹೆಸ್ರು ಮರ್ತು ಹೋಯ್ತು...'' ನಾನು ಎಲ್ಲಿ, ಯಾರು ಅಂತ ತಿರುಗಿ ನೋಡಿದರೆ.. ಹೌದು...! ಶೃತಿ... ಸಿನಿಮಾ ನಟಿ ಶೃತಿ...! ತಾಯಿ ಮತ್ತು ತವರಿಗೆ ಸಂಬಂಧಿಸಿದ ಚಿತ್ರಗಳಲ್ಲಿ ಮನೋಜ್ಞವಾಗಿ ನಟಿಸಿ, ಪ್ರೇಕ್ಷಕರ - ಅದರಲ್ಲೂ ಹೆಂಗಳೆಯರ ಮನಗೆದ್ದಿದ್ದ ಖ್ಯಾತ ನಟಿ, ಶ್ವೇತವಸ್ತ್ರಧಾರಿಣಿಯಾಗಿ ನಿಂತಿದ್ದರು. ಪಕ್ಕಕ್ಕೆ ಆಕೆಯ ಪತಿ ಮಹೇಂದರ್ ಅವರೂ ಇದ್ದರು. ನಾವು ಅವರನ್ನು ನೋಡಿದರೆ ಅವರೂ ನಮ್ಮನ್ನು ಅಪರಿಚಿತಭಾವದಲ್ಲಿ ನೋಡಿದರು. ನಮಗೆ ಅವರ ಪರಿಚಯವಿತ್ತೇನೋ ನಿಜ. ಆದರೆ ಅವರಿಗೆ ನಮ್ಮ ಪರಿಚಯವಿರಲಿಲ್ಲವಲ್ಲ.. ಹಾಗಾಗಿ ಅವರೆಡೆಗೆ ಪರಿಚಯದ ನಗು ಬೀರಬೇಕೆಂದರೂ ನಗಲಾಗಲಿಲ್ಲ..
ಅಷ್ಟರಲ್ಲಿ ಶೃತಿಯ ಜತೆಗೆ ಗುಲಾಬಿ ಟಾಕೀಸು ನಾಯಕಿ ಉಮಾಶ್ರೀ ಕೂಡ ಕಂಡುಬಂದರು. ಮಾತ್ರವಲ್ಲ, ಇನ್ನಷ್ಟು ಜನ ಸಿಲೆಬ್ರಿಟಿಗಳ ದಂಡೇ ನೆರೆದಿತ್ತು. ಅವರನ್ನೆಲ್ಲ ನೋಡಿಕೊಂಡು, ಈರೀತಿಯ ಹೈಫೈ ಕ್ರೌಡ್ ಜತೆ ಕೂತು ಫಿಲಂ ನೋಡೋ ಭಾಗ್ಯ ನಮ್ಮದಾದದ್ದಕ್ಕೆ ಒಳಗೊಳಗೇ ಖುಷಿಪಡುತ್ತಾ ಥಿಯೇಟರಿನ ಆವರಣದೊಳಗೆ ಹೋದೆವು.
ಥಿಯೇಟರಿನ ಆವರಣದೊಳಗೆ ನಾವೆಲ್ಲ ಥಿಯೇಟರಿನ ಬಾಗಿಲು ತೆರೆಯಲು ಕಾಯುತ್ತಿದ್ದರೆ, ನಮ್ಮಂತೇ ಕಾಯುತ್ತಿದ್ದ ಇನ್ನಷ್ಟು ಸೆಲೆಬ್ರಿಟಿಗಳ ದಂಡು ಕಾಣಿಸಿತು. ಅದರಲ್ಲೊಬ್ಬರು ನೀಲಿ ಅಂಗಿ ಹಾಕಿದವರನ್ನು ಎಲ್ಲೋ ನೋಡಿದ ನೆನಪು ನನಗೆ... ಆದರೆ, ಎಷ್ಟು ನೆನಪಿಸಿಕೊಂಡರೂ ಯಾರೆಂದು ನೆನಪಾಗಲೊಲ್ಲದು. ತುಂಬಾ ಪರಿಚಿತ ಚರ್ಯೆ, ತುಂಬಾ ಆತ್ಮೀಯರೆನ್ನುವ ಅನಿಸಿಕೆ. ಅವರೂ ನನ್ನನ್ನು ಒಂದೆರಡು ಬಾರಿ ನೋಡಿದರು. ಆಗ ಖಂಡಿತವಾಗಿಯೂ ಇವರನ್ನು ನಾನು ಭೇಟಿಯಾಗಿರಬೇಕು ಅಂತ ಅನಿಸಿತು. ಆದರೆ ಯಾವಾಗ, ಹೇಗೆ, ಎಲ್ಲಿ ಭೇಟಿಯಾಗಿದ್ದೇನೆ ಅಂತ ಮಾತ್ರ ಎಷ್ಟು ತಲೆಕೆರೆದುಕೊಂಡರೂ ಗೊತ್ತಾಗಲಿಲ್ಲ.
ಕೊನೆಗೆ, ಪಕ್ಕದಲ್ಲಿ ನಿಂತಿದ್ದ ಸುಶ್ರುತನಿಗೆ ಮೆಲ್ಲಗೆ ಕೇಳಿದೆ, ಅವರು ಯಾರು ಅಂತ. ಸುಶ್ರುತ ಜೋರಾಗಿ ನಕ್ಕು ''ಹೆಚ್ಚೆಸ್ ವೆಂಕಟೇಶ್ ಮೂರ್ತಿ ಕಣೇ, ಗೊತ್ತಿಲ್ವಾ'' ಅಂತ ವಿಚಿತ್ರಪ್ರಾಣಿಯನ್ನು ನೋಡುವಂತೆ ನನ್ನನ್ನು ನೋಡಿದ. ನನಗೆ ಆಕ್ಷಣ ಭೂಮಿ ಬಿರಿದು ನನ್ನನ್ನು ನುಂಗಬಾರದೇ ಅನಿಸಿತು. ಯಾಕೆಂದರೆ, ಹೆಚ್ಚು ಕಡಿಮೆ ಒಂದುವರೆ ವರ್ಷದ ಹಿಂದೆ ನಾನು ಜಾಹೀರಾತು ಸಂಸ್ಥೆಯೊಂದರಲ್ಲಿ ಕೆಲಸಮಾಡುತ್ತಿದ್ದಾಗ ಹೆಚ್ಚೆಸ್ವಿ ಮನೆಗೆ ಹೋಗಿ, ಅರ್ಧಗಂಟೆ ಕೂತು ಅವರ ಜತೆ ಯಾವುದೋ ಪ್ರಾಜೆಕ್ಟ್ ಬಗ್ಗೆ ಚರ್ಚಿಸಿದ್ದೆವು. ನನಗವರ ಮುಖ ಮಾತ್ರ ಪರಿಚಿತವೆನ್ನಿಸಿದರೂ ಮರೆತೇ ಹೋಗಿತ್ತು...!
ಅಷ್ಟು ಮಾತ್ರವಲ್ಲ.... ಚಿನ್ನಾರಿಮುತ್ತದ ''ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು'' ನನ್ನ ಫೇವರಿಟ್ ಹಾಡುಗಳಲ್ಲೊಂದು. ಹಾಗೇ ಮುಕ್ತದ ''ಮೊಗ್ಗಿನಿಂದ ಸೆರೆಯೊಡೆದ ಗಂಧ ಹೂವಿಂದ ದೂರದೂರಾ... ಎಲ್ಲುಂಟು ಆಚೆ ತೀರಾ...'' "ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ ಕಲಿಸಿದೆ ಜೀವನ ಪಾಠ..." ಮತ್ತು ಸಹಗಮನ ಧಾರಾವಾಹಿಯ '' ಗಾಳಿಯ ಜತೆಯಲಿ ಯಾರಿಗು ಕಾಣದ ಗಂಧದ ಸಹಗಮನ..." ಇತ್ಯಾದಿಗಳನ್ನು ತುಂಬಾ ಇಷ್ಟ ಪಡುವ ನನಗೆ ಇವೆಲ್ಲದರ ಕರ್ತೃ ಹೆಚ್ಚೆಸ್ವಿ ಅಂತ ಚೆನ್ನಾಗಿ ಗೊತ್ತಿತ್ತು. ಆದರೆ, ಅವರು ಭಾಗವಹಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಎಂದೂ ಹೋಗಿಯೇ ಇರದ ನನಗೆ ಅವರ ಮುಖ ಹೇಗಿದೆಯೆಂದೇ ಮರೆತು ಹೋಗಿತ್ತು! ಅವರೇನಾದರೂ ನನ್ನ ಗುರುತು ಹಿಡಿದರೆ ಏನು ಮಾಡಲಿ ಅಂತ ಭಯವಾಯಿತಾದರೂ ನನ್ನ ಪುಣ್ಯಕ್ಕೆ ಅವರಿಗೂ ನನ್ನ ಪರಿಚಯ ಮರೆತುಹೋಗಿದ್ದ ಕಾರಣ ನಾನು ಬಚಾವಾಗಿದ್ದೆ... :-)
ಅಷ್ಟರಲ್ಲಿ ಥಿಯೇಟರ್ ಬಾಗಿಲು ತೆರೆಯಿತು. ಸರಿ, ಒಳಗೆ ಹೋಗಿ ಸೀಟು ಹಿಡಿದು ಕುಳಿತೆವು. ಅಲ್ಲಿ ಗಿರೀಶ್ ಕಾಸರವಳ್ಳಿ, ವಿಧಾನಪರಿಷತ್ ಮಾಜಿ ಸಭಾಪತಿ ಸುದರ್ಶನ್, ಮಾಜಿ ನೀರಾವರಿ ಸಚಿವ ಹೆಚ್ ಕೆ ಪಾಟೀಲ್, ಜಯಂತಿ, ಅನು ಪ್ರಭಾಕರ್, ಇನ್ನೂ ಹಲವಾರು ಜನ. ಕುಳಿತು ನೋಡುತ್ತಿದ್ದರೆ ಅದೇನೋ ಖುಷಿ... ಪರವಾಗಿಲ್ಲ, ಒಳ್ಳೆ ದಿನವೇ ಸಿನಿಮಾ ನೋಡಲು ಬಂದಿದ್ದೇವೆ ಅಂತ ಏನೋ ಉನ್ನತವಾದಂತಹ ಭಾವ ...

ಅಂತೂ ಇಂತೂ ಫಿಲಂ ಶುರುವಾಯಿತು. ನನಗೆ ಬದಿಯ ಸೀಟು ದೊರೆತಿತ್ತು. ಯಾರ ತಂಟೆಯಿಲ್ಲದೆ ಸಿನಿಮಾ ನೋಡತೊಡಗಿದೆ. ನನ್ನ ಪಕ್ಕದಲ್ಲಿ ಕೂತಿದ್ದವರ ಜತೆ ಕೂಡ ಹೆಚ್ಚು ಮಾತಾಡಲಿಲ್ಲ. ಸುಪ್ಪರ್ ಸಿನಿಮಾ, ಎಲ್ಲಾ ಸಿಲೆಬ್ರಿಟಿಗಳನ್ನು, ಎಲ್ಲವನ್ನೂ ಮರೆಸಿ ತನ್ನೊಳಗೆ ಕರೆದೊಯ್ದಿತು. ಗುಲಾಬಿಯ ಬದುಕನ್ನು ಮತ್ತು ಕಡಲ ಮಕ್ಕಳ ಬವಣೆಯನ್ನು ಪ್ರೇಕ್ಷಕರಾಗಿ ಮಾತ್ರವಲ್ಲ, ಅಲ್ಲೇ ಅಕ್ಕಪಕ್ಕದ ಊರವಳಾಗಿ ತಲ್ಲೀನತೆಯಿಂದ ನೋಡುತ್ತಿದ್ದವಳಿಗೆ ಇಂಟರ್ವಲ್ಲು ಬಂದದ್ದೇ ಗೊತ್ತಾಗಲಿಲ್ಲ..
ಇಂಟರ್ವಲ್ಲು ಬಂತು, ಜತೆಗಿದ್ದವರೆಲ್ಲ ಎದ್ದು ಹೊರಹೋದರೆ ನಾನು ಕಾಲಮೇಲೆ ಕಾಲು ಹಾಕಿ ಅಲ್ಲೇ ಕುಳಿತು ಸಿನಿಮಾ ಮೆಲುಕು ಹಾಕುತ್ತಿದ್ದೆ. ನಾನು ಕುಳಿತ ಸೀಟಿನ ಬದಿಯಲ್ಲಿ ಮೇಲಿನ ಸಾಲುಗಳಿಗೆ ಹತ್ತುವ ದಾರಿಯಿತ್ತು. ಹೀಗೇ ಚೂರು ಹೊತ್ತಾಗಿರಬಹುದು... ಎದುರಿಂದ ಜುಬ್ಬಾ ಹಾಕಿದ ಎತ್ತರದ ಪರಿಚಿತ, ಧೀರಗಂಭೀರ ವ್ಯಕ್ತಿತ್ವವೊಂದು ಮೇಲಿನ ಸಾಲಿನ ಕಡೆಗೆ ಬರುತ್ತಿದೆ...! ಮೆದುಳಿಗೆ ತಕ್ಷಣ ಫ್ಲಾಷ್ ಆಯಿತು... ಜ್ಞಾನಪೀಠ ಪ್ರಶಸ್ತಿಭಾಜನರಾದ ಗಿರೀಶ್ ಕಾರ್ನಾಡ್!
ಹುಹ್ಹ್... ಎಷ್ಟು ದೊಡ್ಡ ವ್ಯಕ್ತಿ ಎದುರಿಂದ ಬರುತ್ತಿದ್ದಾರೆ, ನಾನು ಕಾಲಮೇಲೆ ಕಾಲು ಹಾಕಿ ಕುಳಿತು ನನ್ನದೇ ಲೋಕದಲ್ಲಿದ್ದೇನೆ... ಈ ಯೋಚನೆ ಮೂಡಿದ್ದೇ ತಡ, ಕಾಲು ಥಟ್ಟಂತ ಕೆಳಗಿಳಿಯಿತು, ನನ್ನ ಕಣ್ಣುಗಳು ವಿನಮ್ರಭಾವದೊಡನೆ ಅವರ ಮುಖ ನೋಡಿದವು. ಮುಖದಲ್ಲಿ ನಗುವೂ ಮೂಡಿತು. ಅದೇಕ್ಷಣ ಅವರೂ ನನ್ನನ್ನು ನೋಡಿದರು. ಅವರೇನಾದರೂ ಸ್ವಲ್ಪವೇ ಸ್ವಲ್ಪ ಮುಖ ಸಡಿಲಿಸಿದ್ದರೂ ನಾನು ಅವರಿಗೊಂದು ನಮಸ್ಕಾರ ಕೊಟ್ಟೇ ಬಿಡುತ್ತಿದ್ದೆ. ಆದರೆ ಹಾಗಾಗಲಿಲ್ಲ.ಗಂಭೀರಭಾವದಲ್ಲಿ ನನ್ನನ್ನು ನೋಡುತ್ತಲೇ ಅವರು ಮೇಲೆ ನಡೆದುಹೋದರು. ಹಾಗಂತ ನನಗೇನೂ ಬೇಸರವಾಗಲಿಲ್ಲ. ನನಗೆ ಅವರೊಬ್ಬರೇ ಕಾರ್ನಾಡರು, ಆದರೆ ಅವರು ನನ್ನಂತಹ ಎಷ್ಟು ವ್ಯಕ್ತಿಗಳನ್ನು ನೋಡಿದ್ದಾರೋ ಏನೋ ಎಂಬುದು ಸತ್ಯ ತಾನೇ...?
ಅಷ್ಟರಲ್ಲಿ ಇಂಟರ್ವಲ್ಲು ಮುಗಿ.ಯಿತು. ಸಿನಿಮಾವೂ ಮುಗಿಯಿತು. ವಾಪಸ್ ಮನೆಗೆ ಬರಬೇಕಲ್ಲ. ಗಂಟೆ ರಾತ್ರಿ 9.30. ಮೆಜೆಸ್ಟಿಕ್-ಗೆ ಬಸ್ ಎಲ್ಲಿ ಬರುತ್ತದೆಂದು ನನಗೆ ಗೊತ್ತಿರಲಿಲ್ಲ. ಅಲ್ಲಿ ಪೆಟ್ರೋಲ್ ಬಂಕಿನ ಹುಡುಗನಿಗೆ ಬಸ್ ಎಲ್ಲಿ ಬರುತ್ತದೆಂದು ಕೇಳಿದೆ. ಆತ ಉತ್ತರಿಸುವ ಮುನ್ನವೇ ಆತನ ಪಕ್ಕದಲ್ಲಿ ಗಾಡಿಗೆ ಡೀಸೆಲ್ ಹಾಕಿಸಿಕೊಳ್ಳುತ್ತಿದ್ದ ವ್ಯಕ್ತಿ ''ಎದುರುಗಡೆ ರಸ್ತೆಯ ಆಭಾಗದಲ್ಲಿ ಬಸ್ ಸ್ಟಾಪ್ ಇದೆ, 5 ನಿಮಿಷ ನಡೆಯಬೇಕು'' ಎಂದ. ಸರಿಯೆಂದು ನಾನು ಹೊರಟಾಗ, ''ಎರಡೇ ನಿಮಿಷ ನಿಲ್ಲಿ, ನಾನೇ ಡ್ರಾಪ್ ಮಾಡುತ್ತೇನೆ''' ಅಂದ. ಆತನ ಉದ್ದೇಶವೇನಿತ್ತೋ ಏನೋ ದೇವರಾಣೆಗೂ ನನಗೆ ಗೊತ್ತಿಲ್ಲ... ಆದರೆ ನನ್ನ ತಲೆಯಲ್ಲಿ ಕೂಡಲೇ ಅಲಾರಂ ಹೊಡೆಯಲಾರಂಭಿಸಿ ಫೋನು ಕೈಯಲ್ಲಿ ಹಿಡಿದುಕೊಂಡು ಯಾರಿಗೋ ಡಯಲ್ ಮಾಡುತ್ತಾ ಅಲ್ಲಿಂದ ಸತ್ತೆನೋ ಕೆಟ್ಟೆನೋ ಎಂಬಂತೆ ಓಟಕಿತ್ತೆ.
>>>>>>>>>>>>>>>>>
ಮನೆಗೆ ವಾಪಸ್ ಬಂದಮೇಲೆ ಹಾಗೇ ಯೋಚನೆ ಮಾಡುತ್ತಿದ್ದರೆ ಕೆಲ ತಿಂಗಳುಗಳ ಹಳೆಯ ಒಂದು ಘಟನೆ ನೆನಪಾಯಿತು. ಅದೊಂದು ದಿನ ಸಂಜೆಹೊತ್ತು ರವೀಂದ್ರ ಕಲಾಕ್ಷೇತ್ರದಲ್ಲಿ ಯಾವುದೋ ನಾಟಕವಿತ್ತು. ಆದಿನ ನಾನು ಬಿಡುವಾಗಿದ್ದುದರಿಂದ ನೋಡೋಣವೆಂದು ಹೋಗಿದ್ದೆ. ಟಿಕೆಟ್ ತೆಗೆದುಕೊಂಡೆ. ಒಳಗೆ ಹೋಗುವ ಮುನ್ನ ರಿವಾಜಿನಂತೆ ಬಾಗಿಲಲ್ಲಿ ನಿಂತಿದ್ದ ಟಿಕೆಟ್ ಚೆಕರ್/ ಗೇಟ್ ಕೀಪರ್-ಗೆ ಟಿಕೆಟ್ ತೋರಿಸಿದೆ. ಹಾಗೆಯೇ ಅವನ ಮುಖ ನೋಡಿದರೆ ಏನಾಶ್ಟರ್ಯ! ಆತ ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯ ದೀಪಕ್...! ಅವನ ನಿಜಹೆಸರು ಇವತ್ತಿಗೂ ಗೊತ್ತಿಲ್ಲ ನಂಗೆ. ಆದರೆ, ಈಟಿವಿಯ ಎಲ್ಲಾ ಧಾರಾವಾಹಿಗಳನ್ನೂ ಹೆಚ್ಚುಕಮ್ಮಿ ಬಿಡದೇ ನೋಡುತ್ತಿದ್ದ ನನಗೆ, ಚಂದದ ಅಭಿವ್ಯಕ್ತಿಯಿದ್ದ ದೊಡ್ಡದೊಡ್ಡ ಕಣ್ಣುಗಳ ಆತ ದಿನನಿತ್ಯ ಏನಿಲ್ಲವೆಂದರೂ ಎರಡು ಮೂರು ಧಾರಾವಾಹಿಯಲ್ಲಿ ನೋಡಿನೋಡಿ ತುಂಬಾ ಪರಿಚಿತನಾಗಿದ್ದ.
ಅದೇ ಪರಿಚಯದ ಗುಂಗಿನಲ್ಲಿ ನನಗೇ ಅರಿವಿಲ್ಲದೆ ಮುಗುಳ್ನಕ್ಕು ಹಾಯ್ ಎಂದೆ. ಆತನೂ ಅಷ್ಟೇ ಸಹಜವಾಗಿ ನಕ್ಕು ಹಾಯ್ ಎಂದ. ಆಮೇಲಷ್ಟೇ ನನಗೆ ಅರಿವಾಯಿತು, ನನಗೆ ಮಾತ್ರ ಆತ ಪರಿಚಿತ, ಆತನಿಗೆ ನನ್ನ ಪರಿಚಯವಿಲ್ಲ ಅಂತ. ಆದರೂ ಪರಿಚಯವಿಲ್ಲ ಎನ್ನುವ ಸಂಗತಿ ನಮ್ಮ ನಡುವಿನ ಮುಗುಳುನಗುವಿನ, ಕಿರುಮಾತಿನ ವಿನಿಮಯಕ್ಕೆ ಗೋಡೆಯಾಗಲಿಲ್ಲವೆಂಬುದು ಆಕ್ಷಣದ ಸತ್ಯವಾಗಿತ್ತು.
>>>>>>>>>>>>>>>>>>
ಮೊನ್ನೆ ಮೊನ್ನೆ ಹೀಗೇ ಒಂದು ದಿನ ರಿಲಯನ್ಸ್ ಟೈಮೌಟ್-ಗೆ ಭೇಟಿಯಿತ್ತಿದ್ದೆ. ಅಲ್ಲಿ ಒಂದು ಕಡೆ ಮಳೆಬಿಲ್ಲು ಧಾರಾವಾಹಿಯ ಮಲ್ಲಿಕಾ ಆರಾಮಾಗಿ ಕೂತಿದ್ದಳು. ಈಬಾರಿ ನನಗೇನೂ ಅನಿಸಲಿಲ್ಲ. ಪರಿಚಿತ ವ್ಯಕ್ತಿಯನ್ನು ನೋಡುತ್ತಿರುವೆನೆಂಬ ಭಾವ ಮರೆತು ನನ್ನಪಾಡಿಗೆ ನಾನು ನಡೆದು ಹೋದೆ. ಏನೂ ಆಗಲಿಲ್ಲ. ಗೋಡೆಗಳು ನಮಗೆ ಬೇಕಾದಲ್ಲೆಲ್ಲ, ನಾವು ಕಟ್ಟಿಕೊಂಡಲ್ಲೆಲ್ಲ ಹುಟ್ಟಿಕೊಳ್ಳುತ್ತವೆ ಎಂಬ ಸತ್ಯದ ದರ್ಶನ ನನಗಾಗಿತ್ತು.

ನಮ್ಮ ಪಕ್ಕದವರೇ ಸ್ವಲ್ಪ ಹೆಚ್ಚು ಸಲಿಗೆಯಿಂದಿದ್ದರೆ ಸಂಶಯದಿಂದ ನೋಡುವ ನಾವು, ಯಾರದೋ ಮುಗುಳ್ನಗುವಿಗೆ, ಗಮನಕ್ಕೆ ಹಾತೊರೆಯುತ್ತೇವೆ. ನಮಗೆ ಸುತ್ತಲವರಿಂದ ಗುರುತಿಸುವಿಕೆ ಬೇಕು, ಅದು ತರುವ ಕಿರಿಕಿರಿಗಳು ಬೇಡ. ಅದೇ ಗುರುತಿಸುವಿಕೆಯನ್ನು ಅವರೂ ನಮ್ಮಿಂದ ನಿರೀಕ್ಷಿಸುತ್ತಾರೇನೋ ಎಂದು ನಾವು ಚಿಂತಿಸುವುದಿಲ್ಲ. ಹಾದಿಯ ಕೊನೆಯಲ್ಲೆಲ್ಲೋ ಸಂತೋಷದ ಮನೆ ಕಾದಿದೆ ಅಂತಂದುಕೊಳ್ಳುವ ನಾವು ಹಾದಿಬದಿಯ ಪುಟ್ಟಪುಟ್ಟ ಸಂತೋಷಗಳಿಗೆ ಸ್ಪಂದಿಸದೇ ಸಾಗುತ್ತೇವೆ. ಒಳಿತು-ಕೆಡುಕನ್ನು ವಿವೇಚಿಸುವ ಶಕ್ತಿಯಿಲ್ಲದೇ ಎಲ್ಲವನ್ನೂ, ಎಲ್ಲರನ್ನೂದೂರವಿಡುತ್ತೇವೆ... ಸೇತುವೆಗಳ ಬಗೆಗೆ ಚಿಂತಿಸದೇ ಗೋಡೆಗಳನ್ನು ಕಟ್ಟಿಕೊಳ್ಳುತ್ತ ಸಾಗುತ್ತೇವೆ.
ಇಷ್ಟೆಲ್ಲ ಯೋಚಿಸಿದ ಮೇಲೂ, ಬಹುಷ: ಈ ಕಾಲಕ್ಕೆ ಹೀಗಿರುವುದೇ ಸರಿಯೇನೋ ಎಂಬ ಸಂಶಯ ನನ್ನನ್ನು ಆಗಾಗ ಕಾಡುತ್ತದೆ...!

Monday, August 25, 2008

ಕೊನೆಗೂ ಅಣ್ಣಾವ್ರನ್ನು ಭೇಟಿಯಾದೆ...


ನಾನಾಗ ತುಂಬಾ ಚಿಕ್ಕವಳು, ಅದು ಸಿನಿಮಾ ಅಂದರೆ ನನಗೆ ಏನೇನೂ ಗೊತ್ತಿರದಿದ್ದ ಕಾಲ. ಥಿಯೇಟರುಗಳಿಗೆ ಹೋಗಿ ಸಿನಿಮಾ ನೋಡ್ತಿದ್ದಿದ್ದು ತುಂಬಾ ಅಪರೂಪ. ಅಜ್ಜನ ಮನೆಗೆ ಹೋದಾಗ ಒಂದು ಸಲ ಅಜ್ಜ ನಮ್ಮನ್ನು ಸಿನಿಮಾ ನೋಡಲು ಕರೆದುಕೊಂಡು ಹೋದರು. ಪುತ್ತೂರಿನ ಸಿನಿಮಾ ಥಿಯೇಟರ್. ಸಿಪಾಯಿ ರಾಮು ಅನ್ನುವ ಆ ಚಿತ್ರದಲ್ಲಿ ನಟ-ನಟಿಯರು ಯಾರು, ಚಿತ್ರದ ಕಥೆ ಏನು, ಯಾವುದೂ ಅರ್ಥ ಮಾಡಿಕೊಳ್ಳಲು ಗೊತ್ತಾಗದಿದ್ದ ಪ್ರಾಯ ನನ್ನದು...

ಸಿನಿಮಾ ಥಿಯೇಟರಿನೊಳಗೆ ಹೋಗಿ ಕೂತು ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿ ಸ್ಕ್ರೀನಿನಲ್ಲಿ ಇಬ್ಬರು ಕತ್ತಿ ಹಿಡಿದುಕೊಂಡು ಜೋರಾಗಿ ಯುದ್ಧ ಮಾಡುತ್ತಿದ್ದಂತೆ ನೆನಪು. ಇನ್ನೇನೂ ನೆನಪಿಲ್ಲ, ಅವರು ಬಡಿದಾಡಿಕೊಳ್ಳುತ್ತಿದ್ದಾರೆ, ನಾವು ಹೋಗುವ ಇಲ್ಲಿಂದ ಅಂತ ಹಠಮಾಡಿದ್ದು ಬಿಟ್ಟರೆ... ಹೋಗಿ ಅರ್ಧವೇ ಗಂಟೆಯಲ್ಲಿ ರಚ್ಚೆಹಿಡಿದು, ಹಠ ಮಾಡಿ, ಸಿನಿಮಾ ಥಿಯೇಟರಿನಿಂದ ವಾಪಸ್ ಬಂದಿದ್ದು ಮಾತ್ರ ಗೊತ್ತು. ಪಾಪ, ನನ್ನಿಂದಾಗಿ ನಮ್ಮಮ್ಮ, ಅಜ್ಜನಿಗೆ ಕೂಡ ಸಿನಿಮಾ ಮಿಸ್ ಆಯಿತು. ಅದರಲ್ಲಿದ್ದ ನಟ ರಾಜ್ಕುಮಾರ್ ಅಂತ ಗೊತ್ತಾಗಿದ್ದು ಎಷ್ಟೋ ವರ್ಷಗಳ ನಂತರ. ಆದರೆ ಆ ಸಿನಿಮಾ ನಾನಿನ್ನೂ ನೋಡಲು ಸಾಧ್ಯವಾಗಿಲ್ಲ.

ನಾನಾಗ 6ನೇ ಕ್ಲಾಸೋ 7ನೇ ಕ್ಲಾಸೋ ಇರಬೇಕು. ಅತ್ತೆಮನೆಗೆ ಹೋದಾಗ ಅಲ್ಲಿದ್ದ ಸನಾದಿ ಅಪ್ಪಣ್ಣದ ಧ್ವನಿಮುದ್ರಿಕೆಯನ್ನು ಕೇಳುತ್ತಿದ್ದೆ. ಅದರಲ್ಲಿ ಅಪ್ಪಣ್ಣನ ಪಾತ್ರದ ದನಿಗೆ ನಾನು ಮರುಳಾಗಿ ಬಿಟ್ಟೆ. ಕೇಳುತ್ತಾ ಕೇಳುತ್ತಾ ಆ ದನಿ ತುಂಬಾ ಆತ್ಮೀಯವಾಗುತ್ತ ಹೋಯಿತು. ಅದರ ಡೈಲಾಗು ಡೈಲಾಗೂ ಮನಸ್ಸಲ್ಲಿ ಉಳಿಯುವಷ್ಟು ಸಲ ಕೇಳಿದ್ದೆ.


+++++++++

ನಾನು ಎಂಟನೇ ಕ್ಲಾಸಿರಬಹುದು. ಅದು ನಮ್ಮೂರಲ್ಲಿ ಟಿವಿ ಯುಗ ಇನ್ನೂ ಆರಂಭವಾಗುತ್ತಿದ್ದ ಕಾಲ. ನಮ್ಮ ಪಕ್ಕದ ಮನೆಯಲ್ಲೇ ಟಿವಿ ತಂದರು. ದೂರದರ್ಶನ ಮಾತ್ರ ಅದರಲ್ಲಿ ಕಾಣುತ್ತಿತ್ತು. ನನ್ನನ್ನು
ಸೇರಿದಂತೆ ಅಕ್ಕಪಕ್ಕದ ಮನೆಗಳ ಚಿಳ್ಳೆಪಿಳ್ಳೆಗಳಿಗೆಲ್ಲಾ ಟೀವಿ ನೋಡಲು ಅಲ್ಲಿ ಹೋಗುವ ಸಂಭ್ರಮ. ನಾನಂತೂ ಏನಿದ್ದರೂ ಇಲ್ಲದಿದ್ದರೂ ಶುಕ್ರವಾರ ಚಿತ್ರಮಂಜರಿ, ಭಾನುವಾರ ಚಲನಚಿತ್ರ - ಇವೆರಡನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಓದು, ಹೋಂವರ್ಕ್, ಕೊನೆಗೆ ಪರೀಕ್ಷೆಗೆ ಓದುವುದನ್ನೂ ಬಿಟ್ಟು ಶ್ರದ್ಧೆಯಿಂದ ಸಿನಿಮಾ ನೋಡಿದ ದಿನಗಳಿತ್ತು.

ಈ ಎಲ್ಲಾ ವ್ಯವಹಾರದಲ್ಲಿ ನನಗೆ ರಾಜ್ಕುಮಾರ ಮತ್ತಷ್ಟು ಆತ್ಮೀಯವಾಗಿದ್ದ. ರಾಜ್ಕುಮಾರ್ ಸಿನಿಮಾ ದೂರದರ್ಶನದಲ್ಲಿ ಹಾಕಿದರೆ ಸಾಕು, ಬೇರೆಲ್ಲವನ್ನೂ ಮಿಸ್ ಮಾಡ್ಕೊಂಡಾದರೂ ಅದನ್ನು ನೋಡಿಯೇ ನೋಡುತ್ತಿದ್ದೆ. ಅಪರೇಶನ್ ಡೈಮಂಡ್ ರಾಕೆಟ್, ಗೋವಾದಲ್ಲಿ ಸಿಐಡಿ 999, ನಾಂದಿ ಇತ್ಯಾದಿ ಚಿತ್ರಗಳಿಂದ ಶುರುವಾಗಿ, ದಾರಿ ತಪ್ಪಿದಮಗ, ಶ್ರಾವಣ ಬಂತು ವರೆಗೆ ದೂರದರ್ಶನ ಯಾವ್ಯಾವ ಚಿತ್ರಗಳನ್ನು ಹಾಕಿದ್ದರೋ ಅದೆಲ್ಲವನ್ನೂ ನೋಡಿದ ಸಾಧನೆ ನನ್ನದು. ರಾಜ್ಕುಮಾರನ ಜೇನುದನಿಯ ಜತೆಗೆ ಆ ಉದ್ದ ಮೂಗು ಕೂಡ ಆತ್ಮೀಯವೆನಿಸಿತು.

ಬರಬರುತ್ತಾ ನನ್ನ ರಾಜ್ಕುಮಾರ್ ಅಭಿಮಾನ ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ, ಸಿನಿಮಾದಲ್ಲಿ ರಾಜ್ಕುಮಾರ್ ಅತ್ತುಬಿಟ್ಟರೆ ನಾನೂ ಅತ್ತುಬಿಡುತ್ತಿದ್ದೆ. ಆಗ ಚಾಲ್ತಿಯಲ್ಲಿದ್ದ ಚಲನಚಿತ್ರ ಪತ್ರಿಕೆಗಳಾದ ವಿಜಯಚಿತ್ರ, ರೂಪತಾರಾ ಇತ್ಯಾದಿಗಳನ್ನು ಸುರತ್ಕಲ್ಲಿನಲ್ಲಿದ್ದ ಅತ್ತೆ ಮನೆಗೆ ತರಿಸುತ್ತಿದ್ದರು. ನಾನು ಅಲ್ಲಿ ರಜೆಯಲ್ಲಿ ಹೋದಾಗೆಲ್ಲ ಹಳೆಯ ಪತ್ರಿಕೆಗಳೆಲ್ಲವನ್ನೂ ಅಲ್ಲಿಂದ ತಂದು ಭಕ್ತಿಯಿಂದ ಓದುತ್ತಿದ್ದೆ. ಆಮೇಲೆ ಅದರಲ್ಲಿರುತ್ತಿದ್ದ ಚಿತ್ರನಟ-ನಟಿಯರ ಚಿತ್ರಗಳನ್ನು ಕತ್ತರಿಸಿ ಆಲ್ಬಂ ಮಾಡುವ ಹುಚ್ಚು ಹತ್ತಿಕೊಂಡಿತು. ಇದರಲ್ಲಿಯೂ ರಾಜ್ಕುಮಾರ್-ಗೆ ಮಾತ್ರ ವಿಶೇಷ ಸ್ಥಾನ. ರಾಜಕುಮಾರ್ ಸಿನಿಮಾಗಳ ಪಟ್ಟಿಯೊಂದನ್ನು ರೆಡಿ ಮಾಡಿದ್ದೆ. ಅದರಲ್ಲಿ ಯಾರು ಸಂಗೀತ ನಿರ್ದೇಶಕರಿದ್ದರು, ಯಾರು ಹೀರೋಯಿನ್, ಯಾವ್ಯಾವ ಹಾಡಿತ್ತು, ಯರು ಹಾಡಿದ್ದರು ಇತ್ಯಾದಿಗಳೆಲ್ಲವನ್ನೂ ಪಟ್ಟಿ ಮಾಡಿ ಇಟ್ಟುಕೊಂಡಿದ್ದೆ. ರಾಜ್ಕುಮಾರ್ ಜೀವನದ ಬಗ್ಗೂ ಸ್ವಲ್ಪ ಹೆಚ್ಚು ತಿಳಿಯಿತು. ಏನು ತಿಳಿದರೂ ತಿಳಿಯದಿದ್ದರೂ ಅವರ ಮೇಲಿದ್ದ ಅಭಿಮಾನ ಮಾತ್ರ ಹೆಚ್ಚುತ್ತಲೇ ಹೋಯಿತು.


+++++++++


ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಅನ್ನುವ ಗಾದೆ ನಮ್ಮನೆಯಲ್ಲಿ ನಿಜವಾಗಲಿಲ್ಲ. ನನ್ನ ಹಾಗೇ ಟೀವಿ ನೋಡುತ್ತಿದ್ದ ತಮ್ಮ ನಟ ಅಂಬರೀಷ್-ನ ಅಭಿಮಾನಿಯಾಗಿ ಬೆಳೆದ. ಅಂಬರೀಷ್ ನಟರಲ್ಲಿ ಶ್ರೇಷ್ಠಾತಿಶ್ರೇಷ್ಠನೆಂದು ತಮ್ಮ ವಾದಿಸಿದರೆ, ನಾನು ಇಲ್ಲ, ಅಂಬರೀಷೆಂದರೆ ಕೆಂಗಣ್ಣಿನ ಕುಡುಕ, ರಾಜ್ಕುಮಾರನೇ ಶ್ರೇಷ್ಠನೆಂದು ವಾದಿಸುತ್ತಿದ್ದೆ. ನನಗಿಂತ ಆರು ವರ್ಷ ಚಿಕ್ಕವನಾದರೂ ವಾದ ಮಾಡುವುದರಲ್ಲಿ ನನ್ನ ತಮ್ಮನನ್ನು ಬಿಟ್ಟರಿಲ್ಲ... ಈ ವಿಚಾರವಾಗಿ ನಾವಿಬ್ಬರು ಸೇರಿ ಮನೆಯನ್ನು ಕುರುಕ್ಷೇತ್ರ ಮಾಡಿದ್ದೂ ಇತ್ತು. ಕೊನೆಗೆ ಅಮ್ಮ ಬಂದು ನೀನ್ ದೊಡ್ಡೋಳು, ತಮ್ಮನ ಜತೆ ಜಗಳವಾಡಲು ನಾಚಿಕೆಯಾಗುವುದಿಲ್ವಾ ಅಂತ ನನಗೆ ಬಯ್ಯುವುದರೊಡನೆ ಪರ್ಯವಸಾನವಾಗುತ್ತಿತ್ತು.

ಚಿಕ್ಕಂದಿನಲ್ಲಿ ನನಗೆ ಚಿತ್ರ ಬಿಡಿಸುವ ಗೀಳು ಕೂಡ ಇತ್ತು. ಆಗ ಅದ್ಯಾಕೋ ಗೊತ್ತಿಲ್ಲ, ಪದೇ ಪದೇ, ಸದಾ ಕಣ್ಣಲೀ ಪ್ರಣಯದಾ ಗೀತೆ ಹಾಡಿದೇ... ಹಾಡಿನ ಕಣ್ಣೆರಡು ಕಮಲಗಳಂತೆ, ಮುಂಗುರುಳು ದುಂಬಿಗಳಂತೆ... ಹಾಡು ನೆನಪಿಸಿಕೊಳ್ಳುತ್ತಿದ್ದೆ. ಅದರಲ್ಲಿ ಇಂಟ್ರ್-ಲ್ಯೂಡ್ ಆಗಿ ಬರುವ ಸಂಗೀತ ನನಗೆ ಇವತ್ತಿಗೂ ಇಷ್ಟ.

ಇದರ ಜತೆ ಅಂಟಿಕೊಂಡಿದ್ದು ರೇಡಿಯೋ ಕೇಳುವ ಚಾಳಿ. ರಾತ್ರಿ ರೇಡಿಯೋ ಹಾಕಿ, ಅದರಲ್ಲಿ 11 ಗಂಟೆಗೆ ಬರುತ್ತಿದ್ದ ಹಳೆ ಕನ್ನಡ ಚಿತ್ರಗೀತೆಗಳ ಕಾರ್ಯಕ್ರಮ ಕೇಳದೆ ನಾನು ಮಲಗುತ್ತಲೇ ಇರಲಿಲ್ಲ. ಇತರೆಲ್ಲಾ ಹಾಡುಗಳ ಜತೆಗೆ ಅದರಲ್ಲಿ ಬರುವ ರಾಜ್ಕುಮಾರ್ ಸಿನಿಮಾದ ಹಾಡುಗಳನ್ನು ಕೂಡ ಭಕ್ತಿಯಿಂದ ಕೇಳುತ್ತಿದ್ದೆ. ಅದರ ಲಿರಿಕ್ಸ್ ನೆನಪಿಟ್ಟುಕೊಳ್ಳುತ್ತಿದ್ದೆ. ಹಾಡುಗಳಿಗೆ ರಾಜ್ಕುಮಾರ್-ದೇ ದನಿಯಿದ್ದರಂತೂ ಕೇಳುವುದೇ ಬೇಡ, ನನಗೆ ಫುಲ್ ಖುಷಿಯೋ ಖುಷಿ.

+++++++++

ಕಾಲ ಉರುಳಿತು. ನಾನು 10ನೇ ತರಗತಿ ಮುಗಿಸಿ ಕಾಲೇಜಿಗೆಂದು ದೂರದ ಉಜಿರೆಗೆ ಸೇರಿಕೊಂಡೆ. ಆಗ ಟೀವಿಯಲ್ಲಿ ಸಿನಿಮಾ ಬಿಟ್ಟು ಬೇರೆ ಕಾರ್ಯಕ್ರಮಗಳೂ ಕುತೂಹಲಕರವಾಗಿಬಲ್ಲವು ಅಂತ ಗೊತ್ತಾಯಿತು. ಪಿಯುಸಿ ಮತ್ತು ಡಿಗ್ರಿ ದಿನಗಳಲ್ಲಿ ನನ್ನ ಟೀವಿ ನೋಡುವಿಕೆ ಕ್ರಿಕೆಟ್ ಮ್ಯಾಚ್-ಗಳಿಗೆ ಮಾತ್ರ ಸೀಮಿತವಾಗಿತ್ತು. ನಂತರ ಎಂಎ ಮಾಡುವಾಗ ಸಿದ್ಧಾರ್ಥಕಾಕ್ ಮತ್ತು ರೇಣುಕಾ ಶಹಾಣೆ ನಡೆಸಿಕೊಡುತ್ತಿದ್ದ 'ಸುರಭಿ' ಕಾರ್ಯಕ್ರಮಕ್ಕೆ, ಹಾಗೂ ಒಂದು ಸೀರಿಯಲ್ ನೂರ್-ಜಹಾನ್-ಗೆ ಮೀಸಲಾಯಿತು. ಇವುಗಳ ನಡುವೆ, ಮತ್ತು ಓದಿನ ಸೀರಿಯಸ್-ನೆಸ್ ನಡುವೆ ನನ್ನ ಆರಾಧ್ಯದೇವತೆ ರಾಜ್ಕುಮಾರ ಮಸುಕಾಗಿ ಹೋದ. ನಾನು ಟೀವಿಯೇ ನೋಡದಿದ್ದ ಕಾಲವೂ ಇತ್ತು. ಇದೇ ರೀತಿ ನನ್ನ ಪೋಸ್ಟ್ ಗ್ರಾಜುವೇಶನ್ ಕಳೆಯುವ ತನಕವೂ ಮುಂದುವರಿಯಿತು.

ನಡುನಡುವೆ ರಜೆಯಲ್ಲಿ ಊರಿಗೆ ಹೋದಾಗ ಮಾತ್ರ ಹಳೆಯ ಚಾಳಿ ಬೆಂಬಿಡದೆ ಕಾಡುತ್ತಿತ್ತು, ರಾಜ್ಕುಮಾರ ಸಿನಿಮಾ ಇದ್ದರೆ ತಪ್ಪದೇ ನೋಡುತ್ತಿದ್ದೆ. ಹಾಡುಗಳನ್ನಂತೂ ತಪ್ಪದೇ ಕೇಳುತ್ತಿದ್ದೆ. ಪ್ರತಿ ಸಲವೂ ಆ ದನಿಗೆ, ಆ ನಟನಾಕೌಶಲ್ಯಕ್ಕೆ ಬೆರಗಾಗುತ್ತಿದ್ದೆ. ಅದು ಹೇಗೆ ಇಷ್ಟೆಲ್ಲ ಶ್ರೇಷ್ಠಗುಣಗಳು ಒಂದೇ ವ್ಯಕ್ತಿಯಲ್ಲಿರುವಂತೆ ಮಾಡಿದ ಆ ಸೃಷ್ಟಿಕರ್ತ ಅಂದುಕೊಳ್ಳುತ್ತಿದ್ದೆ.

+++++++++
ಪೋಸ್ಟ್ ಗ್ರಾಜುವೇಶನ್ ಮುಗಿದು, ಇಂಟರ್ನ್-ಶಿಪ್-ಗೋಸ್ಕರ ಬೆಂಗಳೂರಿಗೆ ಬಂದೆ. 2000ನೇ ಇಸವಿಯ ಮೇ ತಿಂಗಳ ಆ ಮುಂಜಾವು, ನಾನಿನ್ನೂ ಮರೆತಿಲ್ಲ. ಮೊದಲ ಬಾರಿ ನಾನು ಬೆಂಗಳೂರಿಗೆ ಬರುವ ಉತ್ಸಾಹಕ್ಕೆ ಹೊರಗೆ ಬೆಳಕು ಮೂಡುವ ಮೊದಲೇ ಬಸ್ಸಿನಲ್ಲಿ ಎದ್ದು ಕುಳಿತು ಚನ್ನಪಟ್ನ ದಾಟಿ ಬೆಂಗಳೂರಿನತ್ತ ಬರುವ ದಾರಿಯಲ್ಲಿ ಮುಂಜಾವಿನ ಸೊಬಗನ್ನು ಸವಿಯುತ್ತಿದ್ದೆ. ಹಾಗೇ ಬೆಂಗಳೂರಿನಲ್ಲಿ ನಾನಿರುವ ಎರಡು ತಿಂಗಳಲ್ಲಿ ಮಾಡಬೇಕಿರುವ ಕಾರ್ಯಗಳ ಬಗ್ಗೆ ಲಿಸ್ಟ್ ಹಾಕಿಕೊಳ್ಳುತ್ತಿದ್ದೆ. ಅದರಲ್ಲಿ ರಾಜ್ಕುಮಾರ್ ಭೇಟಿಯೂ ಒಂದು.

ಈ ಸಮಯಕ್ಕೆ ಹುಚ್ಚು ಅಭಿಮಾನವೆ
ಲ್ಲ ಕೊಚ್ಚಿ ಹೋಗಿ, ರಾಜ್ಕುಮಾರ್ ವ್ಯಕ್ತಿತ್ವದ ಮೇಲೊಂದು ಬಗೆಯ ಗೌರವ ಹುಟ್ಟಿತ್ತು ನನಗೆ. ಇಂಟರ್ನ್-ಶಿಪ್ ಮಾಡುತ್ತಿದ್ದಾಗಲೊಂದು ದಿನ, ಅದ್ಯಾವುದೋ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಇಟ್ಟಿದ್ದ ಪ್ರೆಸ್ ಟ್ರಿಪ್-ನ ಮೂಲಕ ದೇವನಹಳ್ಳಿಯ ಆಸುಪಾಸಿನಲ್ಲಿರುವ ಕೆಂಪತಿಮ್ಮನಹಳ್ಳಿ ಎಂಬ ಊರಿಗೆ ಹೋಗುವ ಅವಕಾಶ ಸಿಕ್ಕಿತು. ಅಲ್ಲಿ ಹೋದಾಗ, ಬೆಳ್ಳಿ ಮೂಡಿತೋ ಕೋಳಿ ಕೂಗಿತು ಅಂತ ಕುಣಿಯುತ್ತಿದ್ದ ರಾಜ್ಕುಮಾರ್ ದನಿ ನಮ್ಮನ್ನು ಸ್ವಾಗತಿಸಿತು. ರಾಜ್ಕುಮಾರ್ ಅಭಿಮಾನಿ ಸಂಘಗಳ ಬಗೆಗೆ ಬಹಳವಾಗಿ ಕೇಳಿದ್ದ ನನಗೆ ಅದನ್ನು ನೋಡುವ, ಅನುಭವಿಸುವ ಅವಕಾಶ ಸಿಕ್ಕಿತು. ನಮ್ಮೂರ ಫಂಕ್ಷನುಗಳಲ್ಲಿ ದೇವರ ಭಜನೆಗಳನ್ನು ಹಾಕಿಟ್ಟಿರುತ್ತಾರಲ್ಲ, ಅದೇ ರೀತಿ ಅಲ್ಲಿ ರಾಜ್ಕುಮಾರ್ ಹಾಡಿದ ಹಾಡುಗಳ ಸುರಿಮಳೆಯಾಗುತ್ತಿತ್ತು. ಆ ಊರಲ್ಲೆಲ್ಲ ರಾಜ್ಕುಮಾರ್ ಅಭಿಮಾನಿಗಳು ತುಂಬಿ ಹೋಗಿದ್ದರು.

ಇದನ್ನೆಲ್ಲ ನೋಡಿದ ಮೇಲೆ ನನಗೆ ರಾಜ್ಕುಮಾರನ್ನು ಒಂದ್ಸಲವಾದರೂ ಭೇಟಿಯಾಗಬೇಕೆಂಬ ಆಸೆ ಬಲವಾಗುತ್ತ ಹೋಯಿತು. ಆದರೆ ನನ್ನ ಹೊಸ ದಿನಚರಿಯ ನಡುವೆ ಕಾಲ ಕೂಡಿ ಬರಲಿಲ್ಲ. ಹೀಗೆ ತಿಂಗಳೊಂದು ಕಳೆದಿರಬಹುದೇನೋ... ಗೆಳತಿಯೊಬ್ಬಳ ಮನೆಗೆ ಹೋಗುತ್ತಿದ್ದ ಸಮಯ ಸಂಭವಿಸಿದ ಅಪಘಾತದಲ್ಲಿ ನನ್ನ ಕೈ ಫ್ರಾಕ್ಚರ್ ಆಯಿತು. ಗುಣಪಡಿಸಿಕೊಂಡು ಬರೋಣವೆಂದು ಊರಿಗೆ ಹೊರಟುಹೋದೆ. ನಂತರ ಇಂಟರ್ನ್-ಶಿಪ್ ಮುಗಿಸಲು ಪುನಃ ಬೆಂಗಳೂರಿಗೆ ಬಂದೆ.

ಹಾಗೆ ನಾನು ಬರುವ ಹಿಂದಿನ ದಿನವೇ ರಾಜ್ಕುಮಾರನ ಕಿಡ್ನ್ಯಾಪ್ ಅಗಿತ್ತು. ಬೆಂಗಳೂರೆಲ್ಲ ಬಂದ್... ಗಲಾಟೆಯೋ ಗಲಾಟೆ... ಸರಿ, ಆ ಪರಿಸ್ಥಿತಿಯಲ್ಲಿ ಏನು ಮಾಡಲೂ ಸಾಧ್ಯವಿಲ್ಲದೆ, ಇಂಟರ್ನ್-ಶಿಪ್ ಮುಗಿಸುವುದೂ ಕಷ್ಟವಾದ ಕಾರಣ ವಾಪಸ್ ಊರಿಗೆ ಹೊರಟುಹೋದೆ. ನಂತರ ಬೆಂಗಳೂರಿಗೆ ಬರಲಾಗಲಿಲ್ಲ. ಹಾಗಾಗಿ ರಾಜ್ಕುಮಾರ್ ನೋಡುವ ಮಹದಾಸೆ ಮೂಲೆಸರಿಯಿತು.

+++++++++
ರಾಜ್ಕುಮಾರ್ ಕ್ಷೇಮವಾಗಿ ವೀರಪ್ಪನ್ ಕೈಯಿಂದ ತಪ್ಪಿಸಿಕೊಂಡು ವಾಪಸ್ ಬರಲೆಂದು ಬೇಡಿಕೊಂಡವರಲ್ಲಿ ನಾನೂ ಒಬ್ಬಳು. ರಾಜ್ಕುಮಾರ್ ವಾಪಸ್ ಬರುವ ಸಮಯದಲ್ಲಿ ನಾನು ಮಾಧ್ಯಮ ಜಗತ್ತಿನೊಳಗೆ ಪ್ರವೇಶ ಪಡೆದಿದ್ದೆ, ಹೈದರಾಬಾದಿಗೆ ವಲಸೆ ಹೋದೆ. ಆ ಸಮಯದ ಕಥೆಗಳನ್ನೆಲ್ಲ ಮಾಧ್ಯಮದೊಳಗಿನಿಂದಲೇ ಕುತೂಹಲದಿಂದ ಕೇಳಿದೆ, ನೋಡಿದೆ. ವೀರಪ್ಪನ್, ನಕ್ಕೀರನ್ ಗೋಪಾಲನ್, ಕರುಣಾನಿಧಿ, ಎಸ್ಸೆಂ ಕೃಷ್ಣ ಇತ್ಯಾದಿ ಪಾತ್ರಗಳು ನನಗೆ ಹೊಸದಾಗಿ ಪರಿಚಯವಾದವು. ದಿನಕರ್ ಅವರು ಬರೆದ ರಾಜರಹಸ್ಯ - ರಾಜ್ಕುಮಾರ್ ಬಿಡುಗಡೆಗಾಗಿ ನಡೆದ ನಾಟಕಗಳನ್ನೆಲ್ಲ ಅನಾವರಣಗೊಳಿಸಿದ ಪುಸ್ತಕವನ್ನೂ ಓದಿದೆ. ಇವೆಲ್ಲದರ ನಡುವೆ, ರಾಜ್ಕುಮಾರ್ ನೋಡುವ, ಮಾತಾಡುವ ಆಸೆ ಮಾತ್ರ ಆಸೆಯಾಗಿಯೇ ಉಳಿಯಿತು.

+++++++++
ಮತ್ತೆ ನಾಲ್ಕು ವರ್ಷಗಳು ಕಳೆದವು. ಬದುಕಿನ ಹೊಳೆಯಲ್ಲಿ ಸಾಕಷ್ಟು ನೀರು ಹರಿದಿತ್ತು. ಎಪ್ರಿಲ್ 4, 2006. ಹೈದರಾಬಾದಿನ ನಂಟು ಮುಗಿದು ಬೆಂಗಳೂರಿಗೆ ಕಾಲಿಟ್ಟಿದ್ದೆ. ಇನ್ನೇನು, ಇಲ್ಲೇ ಟೆಂಟು, ಯಾವಾಗ ಬೇಕಾದರೂ ರಾಜ್ಕುಮಾರ್ ನೋಡಬಹುದು ಅಂದುಕೊಂಡೆ.

ಆದರೆ, ಕಾಲ ಯಾರಿಗೂ ಕಾಯದ ಕ್ರೂರಿ... ನಾನಿನ್ನೂ ಸರಿಯಾಗಿ ರಾಜ್ಕುಮಾರ್ ನೋಡುವ ಪ್ಲಾನ್ ಹಾಕುವ ಮೊದಲೇ ಕಾದಿತ್ತು ನನಗೆ ಆಘಾತ... ಎಪ್ರಿಲ್ 13, 2006ರಂದು, ರಾಜ್ಕುಮಾರ್ ಇದ್ದಕ್ಕಿದ್ದಂತೆ ಇನ್ನಿಲ್ಲವಾದರು.

+++++++++
ಅಣ್ಣಾವ್ರು ಇನ್ನಿಲ್ಲವಾದ ದಿನ ಎಲ್ಲೆಲ್ಲೂ ಗಲಾಟೆ... ಯಾಕೆ ಗಲಾಟೆ ಅಂತ ಯಾರಿಗೂ ಗೊತ್ತಿಲ್ಲ. ರಸ್ತೆಯಲ್ಲೆಲ್ಲ ಗ್ಲಾಸಿನ ಚೂರುಚೂರು, ಮುಚ್ಚಿದ ಕಟ್ಟಡಗಳು... ಒಡೆದ ಗಾಜಿನ ಕಿಟಿಕಿಗಳು... ರಸ್ತೆಯಲ್ಲಿ ಅಲ್ಲಲ್ಲಿ ಬೆಂಕಿ... ಸುಡುತ್ತಿದ್ದ ಟಯರುಗಳು... ರಸ್ತೆಗಳಲ್ಲಿ ವಾಹನಸಂಚಾರ ಬಲುವಿರಳ... ಜನರ ಸುಳಿವೇ ಇಲ್ಲ... ಎಲ್ಲೆಡೆ ಹಾರುತ್ತಿದ್ದ ಹಳದಿ-ಕೆಂಪು ಬಣ್ಣದ ಬಾವುಟ...
ಆರ್. ಟಿ. ನಗರದಿಂದ ವಿಜಯನಗರಕ್ಕೆ ಕಾರ್ಡ್ ರೋಡಿನಲ್ಲಿ ಆಟೋವೊಂದರಲ್ಲಿ ಕುಳಿತು ಓಡುತ್ತಿದ್ದ ನಾನು, ಎಲ್ಲಿ ಕಲ್ಲು ಬೀಳುತ್ತದೋ, ಎಲ್ಲಿ ಗೂಂಡಾಗಳು ಬರುತ್ತಾರೋ, ಏನು ಮಾಡುತ್ತಾರೋ ಅಂತ ಹೆದರಿ ಜೀವ ಕೈಲಿ ಹಿಡ್ಕೊಂಡು ಕೂತಿದ್ದೆ... ಹಿಂಸೆಯನ್ನು ಎಂದೂ ಬೆಂಬಲಿಸದ ಸಾಧು ರಾಜ್ಕುಮಾರ್ ಹೆಸರಲ್ಲಿ, ಕನ್ನಡತನದ ಹೆಸರಲ್ಲಿ ಆದಿನ ಬೆಂಕಿ ಹಚ್ಚಿದವರನ್ನು, ಗಲಾಟೆ ಮಾಡಿದವರನ್ನು, ಗ್ಲಾಸು ಒಡೆದವರನ್ನು, ದುಡ್ಡು ಕಿತ್ತವರನ್ನು, ನಾನೆಷ್ಟು ದ್ವೇಷಿಸುತ್ತೇನೆಂದರೆ, ಕೆಂಪು-ಹಳದಿ ಬಣ್ಣದ 'ಕನ್ನಡ' ಬಾವುಟವೇನಾದರೂ ಕಣ್ಣಿಗೆ ಕಂಡರೆ ಇಂದಿಗೂ ನನಗೆ ಸಿಟ್ಟು ನೆತ್ತಿಗೇರುತ್ತದೆ. ಆ ಬಾವುಟದ ಜತೆ ಗುರುತಿಸಿಕೊಂಡ ಗೂಂಡಾಗಳು ಮಾಡುತ್ತಿರುವ ಅನ್ಯಾಯವನ್ನು ಹತ್ತಿಕ್ಕಲು ಯಾರೂ ಇಲ್ಲವಲ್ಲಾ ಅನಿಸುತ್ತದೆ.
+++++++++
ಕೊನೆಗೂ ನಾನು ಅಣ್ಣಾವ್ರನ್ನು ಭೇಟಿಯಾದೆ... ಅವರು ಸತ್ತು ಒಂದು ವಾರದ ನಂತರ. ಕಂಠೀರವ ಸ್ಟುಡಿಯೋ ಆವರಣದಲ್ಲಿ ಅವರ ಸಮಾಧಿಯ ಎದುರು ಫೋಟೋವಾಗಿ ಕುಳಿತಿದ್ದರು ಅಣ್ಣಾವ್ರು... 80ರ ದಶಕದ ಫೋಟೋ ಇರಬೇಕು. ಇನ್ನೂ ತಲೆ ಬೋಳಾಗುತ್ತಿದ್ದಂತಿತ್ತು. ಆದರೆ ಅದೇ ತುಂಬು ನಗು... ಅದೇ ಉದ್ದ ಮೂಗು... ನೋಡುತ್ತಿದ್ದರೆ ಅವರ ಜೇನುದನಿಯೂ ಕೇಳಿದಂತಾಗುತ್ತಿತ್ತು. ಭೇಟಿಯಾಗಿದ್ದರೆ ಏನು ಮಾತಾಡುತ್ತಿದ್ದೆನೋ ಗೊತ್ತಿಲ್ಲ. ಆದರೆ, ಜಗದಲ್ಲಿಲ್ಲದೆಯೂ ಮನದಲ್ಲುಳಿದುಹೋದವರ ಭಾವಚಿತ್ರದೆದುರು ನಿಂತ ಕ್ಷಣ ಯೋಚನೆಗಳೆಲ್ಲ ಫುಲ್-ಸ್ಟಾಪ್ ಹೂಡಿ ನಿಂತವು. ರಾಜ್ ಸಮಾಧಿಯ ಸಾನ್ನಿಧ್ಯದ ತಂಗಾಳಿಗೆ ಖಾಲಿ ಮನಸ್ಸು ಅಂತರ್ಮುಖಿಯಾಗಿತ್ತು... ಸ್ಮೃತಿಯಲ್ಲಿ ಅಚ್ಚೊತ್ತಿ ಕುಳಿತಿದ್ದ ಹಾಡೊಂದು ಸುಮ್ಮನೇ ಸುಳಿದಾಡತೊಡಗಿತು...
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು...
ನಾವು ಬಯಸಿದಂತೆ ಬಾಳಲೇನು ನಡೆಯದು...
ವಿಷಾದವಾಗಲೀ ವಿನೋದವಾಗಲಿ...
ಅದೇನೆ ಆಗಲೀ ಅವನೆ ಕಾರಣ...

ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು...
ಬಯಸಿದಾಗ ಕಾಣದಿರುವ ಎರಡು ಮುಖಗಳು...
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ...
ಹೂವು ಮುಳ್ಳು ಎರಡು ಉಂಟು ಬಾಳಲತೆಯಲಿ...
ದುರಾಸೆಯೇತಕೆ... ನಿರಾಸೆಯೇತಕೆ...
ಅದೇನೆ ಬಂದರೂ ಅವನ ಕಾಣಿಕೆ...
+++++++++
ಇಂದು ರಾಜ್ ಇಲ್ಲದಿರಬಹುದು. ಆದರೆ, ಆ ಜೇನ ದನಿ, ಆ ವಿನೀತ ಭಾವ, ಮೇರು ವ್ಯಕ್ತಿತ್ವ.. ಎಂದೆಂದೂ ಮರೆಯದ ಸ್ಮೃತಿಯಾಗಿ ನೆಲೆಯಾಗಿದೆ.

Friday, July 18, 2008

ಬೆಳಕಿಲ್ಲದ ದಾರಿಯಲ್ಲಿ...

ಸುತ್ತಲೆತ್ತಲೆತ್ತಲೂ ಬರಿಯ ಕತ್ತಲೇ ಕತ್ತಲು... ಅದರ ನಡುವೆಯೂ ಗುಡ್ಡ... ಬೆಟ್ಟ... ಕಾಡು... ಕತ್ತಲಲ್ಲಿ ತೂರಿದ ಕಣ್ಣುಗಳಿಗೆ ಅಸ್ಪಷ್ಟವಾಗಿ ಗೋಚರಿಸುತ್ತಿದೆ. ಒಳಗಣ್ಣು ಒಂಚೂರು ತೆರೆದು ಹೊರಗೆ ನೋಡಿದರೆ ಕಾಣುವುದು, ಕಣ್ಣು ಹಾಯುವಷ್ಟು ದೂರಕ್ಕೆ ಮತ್ತು ಅದರಿಂದಲೂ ಆಚೆಗೆ ಗುಡ್ಡಕ್ಕೆ ಹಾಸಿದ ಹಸಿರು ಮರಗಳ ಹಾಸು...

ಕಿಟಿಕಿಯ ಗಾಜು ಪೂರ್ತಿ ತೆರೆದು, ನೋಟ ಹೊರಗೆ ತೂರುತ್ತಾ ಹೊರಗಿನ ಶಬ್ದ ಜಗತ್ತಿಗೆ ಕಿವಿಯಾಗುತ್ತೇನೆ... ದಾರಿಯುದ್ದಕ್ಕೂ ಸಿಗುವ ಪುಟ್ಟ ಪುಟ್ಟ ತೊರೆಗಳ ಜುಳುಜುಳು... ಜೀರುಂಡೆಗಳ ಜೀರ್ಗುಟ್ಟುವಿಕೆ... ಹೆಸರು ತಿಳಿಯದ ಹಕ್ಕಿಗಳು ಮಾಡುವ ಇಲ್ಲಿವರೆಗೆ ಕೇಳದ ಶಬ್ದಗಳು...

ಇವೆಲ್ಲವನ್ನೂ ತೂರಿಕೊಂಡು, ಮೀರಿಕೊಂಡು ರೈಲು ತನ್ನದೇ ಆದ ಹದದಲ್ಲಿ ಸಾಗುತ್ತದೆ... ಅದರಲ್ಲಿರುವವರಲ್ಲಿ ಕೆಲವರಿಗೆ ತಮ್ಮದೇ ಚಿಂತೆ.. ಇನ್ನು ಕೆಲವರಿಗೆ ಯಾವುದೋ ಧ್ಯಾನ... ಗುಂಪುಗಳಿದ್ದ ಕಂಪಾರ್ಟ್-ಮೆಂಟುಗಳಲ್ಲಿ ತಡೆಯಿಲ್ಲದೆ ಸಾಗಿದ ಹರಟೆಗಳು... ಯಾವ ಉಸಾಬರಿಯೂ ಬೇಡವೆಂದು ಆಗಲೇ ಮುಸುಕು ಹೊದ್ದು ಮಲಗಿರುವ ಹಲವರು... ಇವರೆಲ್ಲರ ನಡುವೆ, ಕಿಟಿಕಿ ತೆಗೆದು ಕುಳಿತಿರುವವರು ಅಲ್ಲೊಬ್ಬರು, ಇಲ್ಲೊಬ್ಬರು...

ಹೌದು, ಕಿಟಿಕಿ ತೆಗೆದು ಹೆಚ್ಚಿನವರು ಹೊರನೋಡಲಿಕ್ಕಿಲ್ಲ... ಯಾಕೆಂದರೆ, ಆಗಾಗ ತಿರುವಿನಲ್ಲಿ ಕಾಣುವ ಅಲ್ಪಸ್ವಲ್ಪ ಬೆಳಕಲ್ಲಿ ರೈಲು ಹೋಗುವ ಹಾದಿ ನೋಡಿದರೆ ಸಾಕು, ಎಂಟೆದೆಯವರಿಗೂ ಒಂದು ಕ್ಷಣ ಎದೆ ಝಲ್ಲೆನ್ನಬಹುದು... ಗುಡ್ಡಗಳನ್ನೇ ಕಡಿದು ಮಾಡಿದ ರೈಲಿನ ಹಾದಿ, ಕೊರಕಲಿದ್ದಲ್ಲಿ ಅದು ಹೇಗೋ ಅದರ ಮೇಲೆಯೇ ಹಾದುಹೋಗುತ್ತದೆ... ಇದರ ಬಗ್ಗೆ ನಾ ಹೇಳುವುದನ್ನು ಕೇಳುವ ಬದಲು, ನೀವೇ ಅನುಭವಿಸಿದರೆ ಚೆನ್ನ...

ದೂರದೂರದವರೆಗೂ ಸುತ್ತ ಬರೀ ಕಾಡು... ಮರ... ಗುಡ್ಡ... ರಾತ್ರಿ ಮಾಡಿದ ಕರಾಮತ್ತೋ ಅಥವಾ ನಿಜವಾಗಿಯೂ ಅದು ಹಾಗೆಯೋ, ಮನುಷ್ಯರ ಅಥವಾ ಜನವಾಸದ ಸುಳಿವೇ ಇಲ್ಲ... ಯಾಮಿನಿ ತನ್ನೆಲ್ಲಾ ಸೌಂದರ್ಯದೊಡನೆ ಕಾಲುಮುರಿದುಕೊಂಡು ಬಿದ್ದ ಹಾಗಿದೆ ಇಲ್ಲಿ... ಹತ್ತಿಯ ಹಾಗೆ ಹರಡಿದ ಬಿಳಿಮೋಡಗಳು ಇನ್ನೇನು, ಕೈಚಾಚಿದರೆ ಕೈಗೆ ಸಿಕ್ಕೇಬಿಡುತ್ತವೇನೋ ಎಂಬ ಭ್ರಮೆ ಹುಟ್ಟಿಸುತ್ತವೆ... ಒಂದು ಗುಡ್ಡದಿಂದ ಇನ್ನೊಂದಕ್ಕಿರುವ ನಡುವಿನ ಅಂತರದಲ್ಲೆಲ್ಲ ಈ ಹತ್ತಿಮೋಡಗಳದೇ ಕಾರುಬಾರು...

ಮತ್ತೂ ಮೇಲೆ ಆಗಸಕ್ಕೆ ದೃಷ್ಟಿ ತೂರಿದರೆ ಕಾಣುವುದು, ಇನ್ನೇನು ಮಳೆ ಸುರಿಸಿಯೇ ಬಿಡುತ್ತವೆನ್ನುವ ಭಾರವಾದ ಕರಿಮೋಡಗಳ ರಾಶಿ ರಾಶಿ... ಚಂದ್ರನ ತಣ್ಣಗಿನ ಮಂದ ಬೆಳಕಿನ ಹೊನಲು ಆಗೀಗ ಇವುಗಳ ನಡುವೆ ಇಣುಕಿ ತಾನಿದ್ದೇನೆನ್ನುತ್ತದೆ...

ಬೆಟ್ಟಗಳ ನಡುವಿನ ಕೊರಕಲಿನಲ್ಲಿ ತಿರುವಿನ ದಾರಿಯಲ್ಲಿ ನಿಧಾನವಾಗಿ ರೈಲು ಸಾಗುವಾಗ ಮೆಲ್ಲನೆದ್ದು ಕಂಪಾರ್ಟ್ಮೆಂಟಿನ ಬಾಗಿಲು ತೆಗೆಯುವ ಸಾಹಸಕ್ಕಿಳಿಯುತ್ತೇನೆ. ಮೆಲ್ಲಗಿಣುಕಿದರೆ, ಆ ಕಡೆಯೂ ದೂರದಲ್ಲಿ ಬೆಟ್ಟ, ಈ ಕಡೆಯೂ ದೂರದಲ್ಲಿಯೇ ಬೆಟ್ಟ... ಹಿಂದೆ ಬೆಟ್ಟದ ನಡುವೆ ಕಾಣುವ ಸಾಗಿ ಬಂದ ದಾರಿ, ಮುಂದೆ ಕಾಣುವುದು ಇನ್ನೊಂದು ಬೆಟ್ಟ, ಮತ್ತು ಹೋಗಲಿರುವ ದಾರಿ. ಕೆಳಗೆ ಕೆಲವು ಅಡಿಗಳ ಆಳದಲ್ಲಿ ಸುಮ್ಮನೇ ಜುಳುಜುಳು ಹರಿವ ನೀರು ಚಂದ್ರನ ಬೆಳಕಿಗೆ ಪ್ರತಿಫಲಿಸುತ್ತದೆ. ಅಷ್ಟರಲ್ಲಿಯೇ ಅಲ್ಲಿ ಬಂದ ಗಾರ್ಡ್ ಕೈಲಿ ಬೈಗುಳ ತಿಂದು ಬಾಗಿಲು ಮುಚ್ಚಿ ತೆಪ್ಪಗೆ ನನ್ನ ಜಾಗದಲ್ಲಿ ಹೋಗಿ ಕೂರುತ್ತೇನೆ.

ಇದೊಂದು ಏಕಾಂಗಿ ಜಗತ್ತು. ಯಾವುದೋ ಲೋಕಕ್ಕೆ ಹೋಗುವ ದಾರಿಯಿದು ಎನ್ನುವ ಭ್ರಮೆ ಹುಟ್ಟಿಸುವ ಮಾಯಾಪ್ರಪಂಚ. ಹೊರಜಗತ್ತಿನೊಡನೆ ಸಂಪರ್ಕ ಸಾಧಿಸಬೇಕೆಂದರೆ ಇಲ್ಲಿ ಏನೇನೂ ಇಲ್ಲ... ದೂರದೂರದ ವರೆಗೆ ರೈಲು ಹೋಗುವ ದಾರಿಯಲ್ಲೆಲ್ಲೂ ಮೊಬೈಲ್ ನೆಟ್-ವರ್ಕ್ ಇಲ್ಲ... ಟೆಲಿಫೋನ್ ಅಂತೂ ಇಲ್ಲವೇ ಇಲ್ಲ. ಸುಮ್ಮಸುಮ್ಮನೇ ಮೊಬೈಲಿನಿಂದ SOS ಕಾಲ್ ಪ್ರಯತ್ನಿಸಿ ವಿಫಲಳಾಗುತ್ತೇನೆ.

ಇಲ್ಲಿ ಎಲ್ಲೂ ವಿದ್ಯುತ್ ಸಂಪರ್ಕವಿಲ್ಲ, ಬೆಳಕೇ ಇಲ್ಲ.. ಹಾಂ, ಬೆಳಕು ಇಲ್ಲವೇ ಇಲ್ಲವೆನ್ನುವುದು ಸುಳ್ಳು. ಅಲ್ಲಲ್ಲಿ, ಕೆಲವು ಕಿಲೋಮೀಟರುಗಳಿಗೊಮ್ಮೆ, ರೈಲ್ವೇ ಕಟ್ಟಿಸಿದ ಚಿಕ್ಕಚಿಕ್ಕ ನಿಲ್ದಾಣಗಳಂತಹ ಕಟ್ಟಡಗಳು ಕಾಣಬರುತ್ತವೆ... ಪ್ರತಿ ಕಟ್ಟಡಕ್ಕೊಬ್ಬ ರೈಲ್ವೇ ಸಿಬ್ಬಂದಿಯಿರುತ್ತಾನೆ... ಆತ ರೈಲು ಬರುವವರೆಗೆ ಎಚ್ಚರವಿದ್ದು, ಸಿಳ್ಳೆ ಹಾಕಿ ರೈಲು ಮುಂದೆ ಹೋಗಬಹುದೆನ್ನುವ ಸೂಚನೆ ನೀಡುತ್ತಾನೆ. ಬೆಳಕೇ ಇಲ್ಲದ ಈ ವಾತಾವರಣದಲ್ಲಿ ಒಂದು ರೀತಿಯಲ್ಲಿ ಈತನೇ ಬೆಳಕು... ಅರೆಬೆಳಕಿನ ದಾರಿಯನ್ನು ಕಾಯುತ್ತಿರುವ ಇಂತಹ ಹಲವಾರು ಮಾನವರೂಪದ ದೇವದೂತರಿಗೆ ಬೆಳಕು ನೀಡಲು ಸೋಲಾರ್ ಅಳವಡಿಸಿದ ಕಂಬಗಳಲ್ಲಿರುವ ದೀಪ ತಕ್ಕಮಟ್ಟಿಗೆ ಸಹಾಯ ಮಾಡುತ್ತದೆ. ಇವರನ್ನು ಬಿಟ್ಟರೆ ಸುತ್ತಮುತ್ತ ಎಲ್ಲೂ ನರಮಾನವರೆನ್ನುವವರ ಕುರುಹೇ ಇಲ್ಲ... ಅದ್ಯಾಕೋ ಭಾರತೀಯ ರೈಲ್ವೇ ಬಗೆಗೆ ಹೆಮ್ಮೆ ಮೂಡುತ್ತದೆ.

ಈ ಜಗತ್ತಿನ ಮಾಯೆಗೆ ಮರುಳಾಗಿ ಕಳೆದು ಹೋಗಿದ್ದೇನೆ... ಇದ್ದಕ್ಕಿದ್ದಂತೆ, ದೂರದಲ್ಲಿ, ಗುಡ್ಡಗಳ ನಡುವಿನ ತಳಭಾಗದಲ್ಲಿ, ಕತ್ತಲನ್ನು ಸೀಳಿ, ಸಾಲುಸಾಲು ಬೆಳಕಿನ ಮಾಲೆ ಗೋಚರಿಸುತ್ತದೆ...

ಕತ್ತಲ ಸೀಳಿ ಬೆಳಕು ನುಗ್ಗಿದರೆ ಅದಕ್ಕೊಂದು ಒಳ್ಳೆಯ ಅರ್ಥವಿದೆ... ಬೆಳಕು ಬದುಕಿನ ಸಂಕೇತ. ಇದಕ್ಕಾಗಿಯೇ ತಮಸೋಮಾ ಜ್ಯೋತಿರ್ಗಮಯ ಅಂತ ಮಾತೇ ಇದೆ... ಆದರೆ, ಇಲ್ಲಿ ಕಾಣುವ ಬೆಳಕು ಯಾಕೋ ಕ್ರೂರವಾಗಿದೆ... ಈ ಬೆಳಕು ಸುತ್ತ ಹೊನಲಾಗಿ ಸೂಸುತ್ತಿರುವ ಚಂದ್ರಧಾರೆಯ ಜತೆಗೆ ಬೆರೆಯದಾಗಿದೆ. ಅಲ್ಲಿ ಸೃಷ್ಟಿಯಾಗಿರುವ ಮಾಯಾಜಾಲದ ಪ್ರಪಂಚಕ್ಕೆ ಸೇರದಾಗಿದೆ... ಕೃತಕವಾದ ಬೆಳಕು ಏನೋ ಅಪಶಕುನದಂತೆ ತೋರುತ್ತದೆ.

ಅಷ್ಟೊಂದು ಬೆಳಕು ಚೆಲ್ಲುತ್ತ ದೂರದ ಗುಡ್ಡದ ತಪ್ಪಲಲ್ಲಿ ಕಾಣುತ್ತಿರುವುದು ಸಾಲು ಸಾಲಾಗಿ ಹೋಗುತ್ತಿರುವ ವಾಹನಗಳ ಫ್ಲಡ್ ಲೈಟ್-ಗಳ ಬೆಳಕು. ಗಂಟೆ ನೋಡುತ್ತೇನೆ. ಸರಿಯಾಗಿ ಒಂದು. ಅಷ್ಟು ಹೊತ್ತಿನಲ್ಲಿ ಆ ಗುಡ್ಡಗಳ ತಪ್ಪಲಲ್ಲಿ ಅಷ್ಟೊಂದು ವಾಹನಗಳಿಗೇನು ಕೆಲಸ? ಈ ಅಪರಾತ್ರಿಯಲ್ಲಿ ಏನು ಮಾಡುತ್ತಿರಬಹುದು? ಇತ್ಯಾದಿ ತರ್ಕಗಳು ಮನದಲ್ಲಿ ಮೂಡಲಾರಂಭಿಸುತ್ತವೆ...

ರಸಭಂಗವೆಂದರೆ ಇದೇ ಇರಬೇಕು. ಹಾಗೇ ಹೊರಗೆ ಕಣ್ಣು ತೂರಿಸಿ ಕೂರುವ ಯತ್ನ ಮಾಡುತ್ತೇನೆ. ಝರಿ-ತೊರೆಗಳ ಜುಳುಜುಳ ಆಗಲೇ ಕಡಿಮೆಯಾಗಿಬಿಟ್ಟಿದೆ. ಸ್ವಲ್ಪವೇ ಸಮಯದಲ್ಲಿ ಗುಡ್ಡ-ಬೆಟ್ಟಗಳ ಶ್ರೇಣಿಯೂ ಬರಬರುತ್ತ ಕಡಿಮೆಯಾಗಿ, ಅಲ್ಲೊಂದು-ಇಲ್ಲೊಂದು ಮನೆಗಳು ಕಾಣಲಾರಂಭ... ಯಾವುದೋ ಪಟ್ಟಣದ ಕುರುಹುಗಳು ಇಲ್ಲಿವರೆಗೆ ನೋಡಿದ್ದೆಲ್ಲ ಕನಸೆಂಬಷ್ಟು ಸತ್ಯವಾಗಿ ಕಣ್ಣಿಗೆದುರಾಗುತ್ತವೆ... ಸರಿ, ಇನ್ನೇನೂ ನೋಡಲು ಉಳಿದಿಲ್ಲ, ಕಿಟಿಕಿ ಹಾಕಿ ಮಲಗಿ ಕಣ್ಣು ಮುಚ್ಚುತ್ತೇನೆ...

ಕಣ್ಮುಚ್ಚಿದವಳೇ, ಇಲ್ಲಿವರೆಗೆ ನೋಡಿದ್ದರಲ್ಲಿ ಒಳ್ಳೆಯದು ಕನಸಲ್ಲದಿರಲಿ, ಕೆಟ್ಟದು ನನಸಾಗದಿರಲಿ ಎಂದು ಜಗತ್ತನ್ನು ನಡೆಸುವ ಶಕ್ತಿಯೊಡನೆ ಬೇಡಿಕೊಳ್ಳುತ್ತೇನೆ...

Sunday, July 6, 2008

ಲೆಕ್ಕವಿಲ್ಲದ ಕನಸುಗಳಲ್ಲಿ ಇದು 50ನೆಯದು... :-)

ಕರುಳ ಚಿಗುರು ಕಳಚಿದಾಗ
ದೇಹ ಬರಿದು ಬರಿದು...
ಮಮತೆಯೊರತೆಯೊಸರಬೇಕು
ಮನಸು ಬರಿದು ಬರಿದು...!

ನಲಿಯುತಿರಲಿ ಮಗುವು, ಬೇಲಿ
ಮೀರಿ ಬೆಳೆದು ಹೊಳೆಯಲಿ...
ಬಂಧವೆಂದು ಬಂಧನದಲಿ
ಅಂತ್ಯ ಕಾಣದಿರಲಿ...!

ಇಂತು ತಿಳಿದ ತಾಯಿ ಮಗುವ
ಹೊರಗೆ ಆಡಬಿಟ್ಟಳು...
ಬರಿದು ಮನವು, ಖಾಲಿ ಹೃದಯ
ಅಡಗಿಸುತಲೆ ನಕ್ಕಳು...

Thursday, June 12, 2008

ಕರಿಪರದೆ...

ಬಾನ ಕವಿದಿದೆ ಮುಗಿಲು
ಕತ್ತಲಾಗಿದೆ ಹಗಲು

ಬೆಳಕು ಕಾಣದ ಬದುಕು
ದಾರಿ ಮುಚ್ಚಿದೆ ಮುಸುಕು

ಮನಸಿನೊಳಗಿನ ಮುನಿಸು
ಸುಟ್ಟುಬಿಟ್ಟಿದೆ ಕನಸು...

Sunday, May 25, 2008

ಬಿಸಿ ಬಿಸಿ ಸುದ್ದಿ ತಣಿದ ಮೇಲೆ....

ಮೊನ್ನೆ ಮೊನ್ನೆ ಎಲ್ಲಾ ಟಿವಿ ಚಾನೆಲಲ್ಲೂ ಸುದ್ದಿಯಾಗಿ, ಇಂದಿಗೂ ಬಗೆಹರಿಯದಿರುವ, ಸುದ್ದಿಯಾಗುತ್ತಲೇ ಇರುವ ಪ್ರಕರಣ ಆರುಶಿ ಕೊಲೆ ಪ್ರಕರಣ. NOIDAದಲ್ಲಿ ಒಂದು ತಣ್ಣನೆಯ ರಾತ್ರಿ, ಆಗಷ್ಟೆ ಹದಿಹರೆಯಕ್ಕೆ ಕಾಲಿಟ್ಟಿದ್ದ ಚಂದದ ಹುಡುಗಿ ಆರುಶಿಯ ಕೊಲೆಯಾಗಿತ್ತ್ತು. ಆಕೆ ಕೊಲೆಯಾದ ಸಮಯ ಮನೆಯಲ್ಲೇ ಇದ್ದ್ದ ಹೆತ್ತವರು ಮಾಧ್ಯಮ ಮತ್ತು ಪೊಲೀಸರಿಗೆ ಹೇಳಿಕೆ ಕೊಡುವಾಗ ಸಂಶಯ ವ್ಯಕ್ತಪಡಿಸಿದ್ದು ಮನೆಯಲ್ಲಿ ಕೆಲಸಕ್ಕೆ ಬರುತ್ತಿದ್ದ (domestic help) ಹೇಮರಾಜ್ ಮೇಲೆ. ಇಷ್ಟು ಸುದ್ದಿ ಸಿಕ್ಕಿದ್ದೇ ತಡ, ಎಲ್ಲಾ ಟಿವಿ ಚಾನೆಲ್-ಗಳಲ್ಲೂ ಶುರು ಬ್ರೇಕಿಂಗ್ ನ್ಯೂಸ್... WHO KILLED ARUSHI ಅಂತ ಹೆಡ್ ಲೈನ್ ಕೊಟ್ಕೊಂಡು ಕೊಲೆಯ ಕುರಿತು ಚರ್ಚೆಗಳು ನಡೆದವು.
ಎಲ್ಲಾ ಚಾನೆಲ್-ಗಳು ಸೇರಿಕೊಂಡು, ಯಾವ ಹಂತಕ್ಕೆ ಮುಟ್ಟಿದವು ಎಂದರೆ, ಈ ಹಿಂದೆ ಮನೆಯಲ್ಲಿ ಕೆಲಸ ಮಾಡುವ ಸಹಾಯಕರು ನಡೆಸಿದ ವಿವಿಧ ಅಪರಾಧ ಕೃತ್ಯಗಳ ಕೇಸ್ ಸ್ಟಡೀಸ್ ಎಲ್ಲ ತೆಗೆದುಕೊಂಡು ಅವುಗಳ ಚರಿತ್ರೆಯನ್ನು ಬಿಚ್ಚಿಟ್ಟರು. TIMES NOW ಅಂತೂ ಇಷ್ಟು ಸುದ್ದಿ ಸಿಕ್ಕಿದ್ದೇ ಹಬ್ಬ ಅಂತ ಸೆಲೆಬ್ರೇಟ್ ಮಾಡಿತು. ಅದಕ್ಕೆ ಇದ್ದಿದ್ದು ಇಲ್ಲದ್ದು ಉಪ್ಪು ಖಾರ ಮಸಾಲೆ ಹಚ್ಚಿ ಇನ್ನಷ್ಟು ಬಣ್ಣ ತುಂಬಿತು.
ಹೋಗಲಿ ಬಿಡಿ, TIMES NOW ಇರುವುದೇ ಹಾಗೆ, ಎಷ್ಟಂದರೂ times of india ಸಂತತಿಯಲ್ಲವೇ ಅಂತ ನಾನು ಚಾನೆಲ್ ಬದಲಾಯಿಸಿ NDTV ಕಡೆ ಹೊರಟೆ. ಅಲ್ಲಿ ನೋಡುತ್ತೇನೆ, ಒಬ್ಬ ಕ್ರಿಮಿನಾಲಜಿಸ್ಟು, ಇನ್ನೊಬ್ಬ ಸೈಕಾಲಜಿಸ್ಟು, ಮತ್ತೊಬ್ಬ ಮಾಜಿ ಪೊಲೀಸ್ ಅಧಿಕಾರಿ, ಮತ್ತೊಬ್ಬ ಮನೆಕೆಲಸದವರಿಂದ ದರೋಡೆಗೊಳಗಾದ ವ್ಯಕ್ತಿ - ಇವರ ಜತೆಗೆ ಒಬ್ಬಳು ಮನೆ ಕೆಲಸ ಮಾಡುವ ಬೇಬಿ ಎಂಬ ಹೆಸರಿನ ಹುಡುಗಿಯನ್ನು ಕೂರಿಸಿಕೊಂಡು ಗಂಭೀರವಾದ ಚರ್ಚೆ ನಡೀತಿತ್ತು.
ಉಳಿದವರೆಲ್ಲ ಇಂಗ್ಲಿಶಿನಲ್ಲಿ ಬಡಬಡಿಸುತ್ತಿದ್ದರೆ, ಬೇಬಿ ಹಿಂದಿ ಮಾತ್ರ ಮಾತಾಡಬಲ್ಲವಳಾಗಿದ್ದಳು. ಅವಳಿಗೆ ಇತರರು ಮಾತಾಡಿದ್ದು ಅರ್ಥವಾಗಿತ್ತೋ ಇಲ್ಲವೋ ಗೊತ್ತಾಗುತ್ತಿರಲಿಲ್ಲ. ಇತರರ ಜತೆ ಈರೀತಿಯ ಅಪರಾಧ ಕೃತ್ಯಗಳ ವಿವಿಧ ಆಯಾಮಗಳ ಕುರಿತು ಮಾತಾಡಿಸಿದ್ದಾದ ಮೇಲೆ ANCHOR ಅವಳಿಗೆ ಹಿಂದಿಯಲ್ಲಿ ಪ್ರಶ್ನೆ ಆರಂಭಿಸಿದಳು... 'ಬೇಬಿ, ಕ್ಯಾ ಆಪ್ ಬತಾ ಸಕ್ತೀ ಹೈಂ ಕಿ ಐಸಾ ಅಪರಾಧ್ ಕೃತ್ಯ್ ಕ್ಯೂಂ ಹೋತಾ ಹೈ...' ಇದಕ್ಕೆ ಉತ್ತರವಾಗಿ ಬೇಬಿ, ಮನೆಯವರು ಕೆಲಸ ಮಾಡಿಸಿಕೊಳ್ಳುವಾಗ ಕೆಲಸದವರಿಗೆ ಸರಿಯಾದ ಮರ್ಯಾದೆ ಕೊಡುವುದಿಲ್ಲ, ಅದರಿಂದ ಹುಟ್ಟುವ ರೋಷ ಈರೀತಿಯ ಕೃತ್ಯಗಳಿಗೆ ಕಾರಣವಾಗುತ್ತದೆಂದು ಹೇಳಿದಳು. ಆಗ ಅಲ್ಲಿ ಕೂತಿದ್ದ ಪ್ರೇಕ್ಷಕರಲ್ಲಿ ಒಬ್ಬಾಕೆ ತಾನು ಅತ್ಯುತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ ಕೆಲಸದಾತ ತನಗೆ ಮೋಸ ಮಾಡಿ ಮನೆ ದೋಚಿದ್ದನ್ನು ಹೇಳಿಕೊಂಡು, ಬಲುಬೇಗನೆ ಧನವಂತರಾಗುವ ಹುಚ್ಚಿನಿಂದ ಕೆಲಸದವರು ಇಂತಹ ಅಪರಾಧಗಳನ್ನು ಮಾಡುತ್ತಾರೆಂಬ ಕನ್-ಕ್ಲೂಶನ್-ಗೆ ಬಂದಳು. ಇದಕ್ಕೆ ಬೇಬಿ ತೀವ್ರವಾಗಿ ವಿರೋಧಿಸಿ, ಸಾಧ್ಯವೇ ಇಲ್ಲ, ನೀವು ಎಲ್ಲಾದರೂ ತಪು ಮಾಡಿರುತ್ತೀರಿ ಎಂಬರ್ಥದ ಮಾತುಗಳನ್ನು ಆಡಿದಳು. ಆಗ ಅಲ್ಲಿದ್ದವರೆಲ್ಲ ಒಗ್ಗಟ್ಟಾಗಿ ಅವಳನ್ನು ವಿರೋಧಿಸಹೊರಟರು. Anchor ಪರಿಸ್ಥಿತಿ ಹತೋಟಿಗೆ ತರಲು ಹೆಣಗಾಡತೊಡಗುತ್ತಿದ್ದಂತೆಯೇ ನಾನು ಚಾನೆಲ್ ಬದಲಾಯಿಸಿದೆ.
ಮತ್ತೆ TIMES NOWಗೆ ಬಂದೆ. ಅಲ್ಲಿ ನೋಡಿದರೆ, ಆಗಷ್ಟೆ ಹೊಸಾ ಬಿಸಿ ಬಿಸಿ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು.. ARUSHI’S SUSPECTED KILLER HEMRAJ FOUND DEAD... DEAD BODY FOUND ON THE TERRACE OF ARUSHI'S HOME... NEIGHBOUR FINDS BODY TWO DAYS LATER AFTER DEATH... POLICE FAILED TO FIND THE DEAD BODY EARLIER .... ETC ETC...

----------

ಸಮಯ 7.30 ಬೆಳಿಗ್ಗೆ, ಆದಿತ್ಯವಾರ, ಮೇ 25. ಚುನಾವಣಾ ಮತ ಎಣಿಕೆ ಕಾರ್ಯ 8 ಘಂಟೆಗೆ ಸರಿಯಾಗಿ ಆರಂಭವಾಗಲಿತ್ತು... ಎಲ್ಲಾ ಚಾನೆಲ್-ಗಳಲ್ಲೂ ಬಿಸಿ ಬಿಸಿ ಸುದ್ದಿ ವೀಕ್ಷಕರಿಗೆ ನೀಡಲು ಎಲ್ಲ್ಕಾ ತಯಾರಿಯೂ ಆಗಿತ್ತು. ಹಾಗೆಯೇ ಎಲ್ಲಾ ಚಾನೆಲ್-ಗಳನ್ನೂ ಸುಮ್ಮನೆ ನೋಡುತ್ತಾ ಸಾಗುತ್ತಿದ್ದರೆ, TIMES NOWನಲ್ಲಿ ರಿಮೋಟ್ ನಿಂತುಬಿಟ್ಟಿತು. ಅಲ್ಲಿ ಹಿಂದಿನ ದಿನ ರಾತ್ರಿ ನಡೆಸಿದ ಚರ್ಚೆಯ ಮರುಪ್ರಸಾರ ನಡೆದಿತ್ತು. ರಿಮೋಟ್ ನಿಂತಿದ್ದು ಮಾತ್ರ ಅದಕ್ಕಲ್ಲ. ಇನ್ನೂ ಯಾವ ಕನ್ನಡ ಚಾನೆಲಲ್ಲೂ ಮತ ಎಣಿಕೆ ಕಾರ್ಯ ಆರಂಭವಾದ ಬಗ್ಗೆ ಸುದ್ದಿಯೇ ಇಲ್ಲ, ಎಷ್ಟು ಸ್ಥಾನಗಳಲ್ಲಿ ಯಾವ ಪಕ್ಷ ಮುಂದಿದೆ ಅಂತ ತಿಳಿಸುವ ಕೌಂಟರ್ TIMES NOWನಲ್ಲಿ ಈಗಾಗಲೇ ಕಾರ್ಯಾರಂಭ ಮಾಡಿತ್ತು. ಈಗಿನ್ನೂ 7.30, ಅದಾಗಲೇ ಕಾಂಗ್ರೆಸ್ - 1 ಅಂತ ತೋರಿಸುತ್ತ ಅಕೌಂಟ್ ಓಪನ್ ಮಾಡಿತ್ತು. ತಕ್ಷಣ ಎಲ್ಲಾ ವರದಿಗಾರರ ಮೂಲಕ ಕ್ರಾಸ್ ಚೆಕ್ ಮಾಡಿ TIMES NOW ಸುಳ್ಳು ಹೇಳುತ್ತಿದೆಯೆಂದು ಖಚಿತಪಡಿಸಿಕೊಂಡಿದ್ದಾಯಿತು.
ಘಂಟೆ 8 ಆಗುತ್ತಿದ್ದಂತೆಯೇ ಎಲ್ಲೆಲ್ಲಿ ಮತ ಎಣಿಕೆ ಕಾರ್ಯ ಆರಂಭವಾಯಿತೋ ಅಲ್ಲಿಂದೆಲ್ಲ ಮೆಲ್ಲಗೆ ಸುದ್ದಿ ಆರಂಭವಾಯಿತು. ಹಾಗೆಯೇ ಬಣ್ಡ್ಣಬಣ್ಣದ ಸುದ್ದಿಗಳೂ ಕೂಡ ಆರಂಭವಾಯಿತು. ಒಂದು ಚಾನೆಲ್ ಕನಕಪುರದಲ್ಲಿ ಡಿಕೆಶಿ ಹಿನ್ನಡೆ ಅಂತ ಕೊಟ್ಟರೆ ಇನ್ನೊಂದು ಮುನ್ನಡೆ ಅಂದಿತು. ಒಂದು ಚಾನೆಲ್-ನಲ್ಲಿ ಅಂಬರೀಶು ಹಿನ್ನಡೆ ಅನುಭವಿಸಿದರೆ ಇನ್ನೊಂದರಲ್ಲಿ ಮುನ್ನಡೆ ಸಾಧಿಸಿದರು.
ಒಂದು ಐದು-ಹತ್ತು ನಿಮಿಷ ಯಾವುದು ಸತ್ಯ ಯಾವುದು ಸುಳ್ಳು ಅಂತಲೇ ತಿಳಿಯದ ಹಾಗೆ ಸುದ್ದಿಗಳು ಓಡಿದವು. ಈ ಓಟದಲ್ಲಿ ಇಂಗ್ಲಿಷ್ ಚಾನೆಲುಗಳು ಕೂಡ ಹಿಂದುಳಿಯಲಿಲ್ಲ. ಆಮೇಲೆ, ಒಂದು ಹಂತಕ್ಕೆ ಬಂದ ಮೇಲೆ ಎಲ್ಲಾ ಚಾನೆಲ್-ನಲ್ಲೂ ಹೆಚ್ಚುಕಡಿಮೆ ಒಂದೇ ವಿಧವಾದ ಸುದ್ದಿಗಳು ಹೋಗಲಾರಂಭಿಸಿದವು. ಹತ್ತಿರವೆನಿಸಬಹುದಾದ ಸಂಖ್ಯೆಗಳು ಕೌಂಟರ್-ನಲ್ಲಿ ಬರಲು ಆರಂಭವಾಯಿತು.
ಕೊನೆಗೆ ಮಧ್ಯಾಹ್ನ 3.30ಕ್ಕೆ ಹೆಚ್ಚು ಕಡಿಮೆ ಎಲ್ಲಾ ಸ್ಥಾನಗಳಲ್ಲೂ ಫಲಿತಾಂಶ ಘೋಷಿತವಾಯಿತು. ಎಲ್ಲಾ ಕನ್ನಡ ಚಾನೆಲುಗಳೂ ಒಂದು ಸ್ಕೋರು ತೋರಿಸುತ್ತಿದ್ದರೆ ಎಲ್ಲಾ ಇಂಗ್ಲಿಷ್ ಚಾನೆಲುಗಳೂ ಇನ್ನೊಂದು ಸ್ಕೋರು ತೋರಿಸುತ್ತಿದ್ದವು. ನಮ್ಮಕ್ಕ ಫೋನ್ ಮಾಡಿ ಯಾವುದು ಸರಿ ಅಂತ ಕೇಳಿದರೆ, ನಾನು ಹೇಳಿದೆ, ಕನ್ನಡ ಚಾನೆಲುಗಳು ತೋರಿಸುತ್ತಿರುವ ಸ್ಕೋರು ಸತ್ಯ, ಅದನ್ನು ನಂಬಬಹುದು ಅಂತ. ಕೊನೆಗೆ ಬಂದಿದ್ದೂ ಅದೇ ಸ್ಕೋರು - 110-80-28-6.

------------

ಜನಾದೇಶ ಅನ್ನಬಹುದೋ, ಚುನಾವಣೆ ಅನ್ನಬಹುದೋ, ರಣರಂಗ ಅನ್ನಬಹುದೋ, ಚದುರಂಗ ಅನ್ನಬಹುದೋ - ಒಟ್ಟಿನಲ್ಲಿ ಪ್ರಜಾಪ್ರಭುತ್ವದ ಹಬ್ಬವೆಂದು ಕರೆಯಲ್ಪಡುವ ಕಾರ್ಯಕ್ರಮದ ಎಲ್ಲಾ ಪ್ರಕ್ರಿಯೆ ಮುಗಿದಿದೆ. ಕೊಟ್ಟೂ ಕೊಡದ ಹಾಗೆ ಬಹುಮತ ಕೊಟ್ಟಿದ್ದಾನೆ ಜಾಣ ಮತದಾರ. ಹಿಂದುತ್ವದ ಹೆಸರಲ್ಲಿ ಕೋಮುಗಲಭೆ ಎಬ್ಬಿಸಿದವರು, 36 ವರ್ಷಗಳಿಂದಲೂ ತಮ್ಮ ಕ್ಷೇತ್ರಕ್ಕೆ ಏನೂ ಉಪಕಾರ ಮಾಡದವರು, ಟಿಕೆಟ್ ಸಿಕ್ಕಲಿಲ್ಲವೆಂದು ಬೇರೆ ಪಕ್ಷಕ್ಕೆ ಹಾರಿದವರು, ಪಾರ್ಲಿಮೆಂಟಿನಿಂದ ಹೊರಬಂದು ವಿಧಾನಸೌಧದೊಳಗೆ ಕಾಲಿಟ್ಟು ಅದನ್ನು ಪಾವನವಾಗಿಸುವ ಆಸೆಹೊತ್ತವರು, ಇದೇ ಕೊನೆ ಚುನಾವಣೆಯೆನ್ನುತ್ತ ಓಟಿಗೆ ನಿಂತವರು, ಎಲ್ಲರ ಕಣ್ಣಿಗೆ ಸುಲಭವಾಗಿ ಕಾಣುವಂತಹ ಕೆಲಸಗಳನ್ನು ಮಾತ್ರ ಮಾಡಿ ಕೆಲಸ ಮಾಡಿದ್ದೇವೆಂದು ಕೊಚ್ಚಿಕೊಂಡವರು, ದುಡ್ಡು ಹ್ಚೆಲ್ಲಿ ಗೆಲ್ಲಬಹುದೆಂದು ತಿಳಿದವರು, ದೂರದಿಂದ ಹಾರಿಬಂದು ಬೆಂಗಳೂರನ್ನು ಉದ್ಧಾರ ಮಾಡುತ್ತೇನೆಂದು ಚುನಾವಣೆಗೆ ನಿಂತು, ಕ್ಯಾಂಪೇನ್ ಮಾಡಬೇಕಾದ ಸಮಯದಲ್ಲಿ ಟೀವಿ ಚಾನೆಲ್-ನಲ್ಲಿ ಚರ್ಚೆ ನಡೆಸುತ್ತಾ ಕೂತವರು - ಎಲ್ಲರಿಗೂ ತನಗೆ ಸಾಧ್ಯವಾದಷ್ಟು ಸರಿಯಾದ ರೀತಿಯಲ್ಲಿ ಮಣ್ಣುಮುಕ್ಕಿಸಿದ್ದಾನೆ ಮತದಾರ. ಆತನ ಎಲ್ಲಾ ಆಯ್ಕೆಗಳೂ ಉತ್ತಮವಾಗಿವೆಯೆಂದಲ್ಲ, ಆದರೆ ತನ್ನ ಮಿತಿಯಲ್ಲಿ, ತನಗೆ ಸಿಕ್ಕ ಅಪರೂಪದ ಒಂದೇ ಅವಕಾಶದಲ್ಲಿ, ಎಲ್ಲರಿಗೂ ಬುದ್ಧಿ ಕಲಿಸಿದ್ದಾನೆ. ಆದರೆ ಯಾರೂ, ಯಾವ ಪಕ್ಷವೂ, ಹೆಚ್ಚು ಹಾರಾಡಲು ಸಾಧ್ಯವಿಲ್ಲದ ರೀತಿಯಲ್ಲಿದೆ ಈ ಸಾರಿಯ ಚುನಾವಣಾಫಲಿತಾಂಶ.

------------

ಈಗ ಅಧಿಕಾರ ಹಿಡಿಯಲಿರುವುದು ಯಾರು ಅಂತ ಹೆಚ್ಚು ಕಡಿಮೆ ತೀರ್ಮಾನವಾಗಿದೆ - ರಾಜಕೀಯದ 'ಆಟ'ಗಳಲ್ಲಿ ಸಂಭವಿಸಬಹುದಾದ ಅನಿರೀಕ್ಷಿತ ಬೆಳವಣಿಗೆಗಳ ಹೊರತಾಗಿ. ಆದರೆ, ಈಗ ನನ್ನನ್ನು ಕಾಡುತ್ತಿರುವ ಪ್ರಶ್ನೆಗಳು ಇವು -

೧. ಅಕ್ರಮ ಗಣಿಗಾರಿಕೆಯ ಮೇಲೆ ಲೋಕಾಯುಕ್ತರು ಸರಕಾರಕ್ಕೆ ನೀಡಿದ ವರದಿಯ ಗತಿ ಏನಾಗಬಹುದು?
೨. ಹಣದುಬ್ಬರ, ಬೆಲೆಯೇರಿಕೆಯನ್ನು ನಿಯಂತ್ರಿಸುತ್ತೇನೆಂಬ ಆಶ್ವಾಸನೆಯ ಗಾಳವನ್ನು ಮತದಾರನಿಗೆ ಎಸೆದು ಅಧಿಕಾರಕ್ಕೆ ಬಂದ ಬಿಜೆಪಿ, ಇವುಗಳನ್ನು ಹೇಗೆ ನಿಯಂತ್ರಿಸಬಹುದು? ಹಣದುಬ್ಬರ-ಬೆಲೆಯೇರಿಕೆಗಳು ಒಂದು ರಾಜ್ಯದ ಒಳಗೆ ನಿಯಂತ್ರಿಸಬಹುದಾದ ಸಂಗತಿಗಳೇ?
೩. ಸರಕಾರ ಬಂದ ಕೂಡಲೇ ಇಂಡಸ್ಟ್ರಿಯಲೈಸೇಶನಿಗೆ ಸಹಾಯ ಮಾಡುತ್ತೇನೆಂದು ಬಹುಮತ ಸಿಕ್ಕಿದಕೂಡಲೇ ನಡೆಸಿದ ಪತ್ರಿಕಾಗೋಷ್ಟಿಯಲ್ಲ್ಲಿ ಯಡಿಯೂರಪ್ಪ ಹೇಳಿದ್ದಾರೆ. ಇದನ್ನು ಸಿಎನ್ ಬಿಸಿ, NDTV PROFIT ಇತ್ಯಾದಿಗಳು ಹೆಡ್ಲೈನ್ ಆಗಿ ತೋರಿಸುತ್ತಿವೆ. ಇದರ ಅರ್ಥ ಏನಿರಬಹುದು?
೪. ಎಲ್ಲಕ್ಕಿಂತ ಹೆಚ್ಚಾಗಿ, ಭೂಮಿ ಖರೀದಿಯ ನಿಯಮಾವಳಿಗಳನ್ನು ಸಡಿಲಗೊಳಿಸುತ್ತೇನೆಂದು ಈಗಾಗಲೇ ಬಿಜೆಪಿ ಹೇಳಿದೆ. ಎಲ್ಲರೂ ಸುಮ್ಮನಿದ್ದರೆ ಅದನ್ನು ಮಾಡಿಯೂ ಮಾಡುತ್ತದೆ. ಇದರಿಂದಾಗಿ ರೈತರು ಭೂಮಿ ಕಳೆದುಕೊಂಡು ನೆಲೆ ಕಳೆದುಕೊಂಡು ಯಾವುದೋ ನಗರದ ಸ್ಲಮ್ಮಿಗೋ ಕಾರ್ಮಿಕವರ್ಗಕ್ಕೋ ಸೇರಿಹೋಗಬಹುದಾದ ಸಾಧ್ಯತೆ - ಅನಿವಾರ್ಯವಾಗಲಿದೆಯೇ?

Sunday, May 11, 2008

ಚುನಾವಣೆ, ಮತ್ತು ಒಂದಿಷ್ಟು ಕೊರೆತಪುರಾಣ... :)

ಇದೇನಪ್ಪಾ ಇದ್ದಕ್ಕಿದ್ದಂತೆ ರಾಜಕೀಯದ ಬಗ್ಗೆ ಇಷ್ಟೊಂದು ಕೊರೆತ ಶುರುಮಾಡಿದಾಳಲ್ಲ ಅಂತ ಅನ್ಕೋಬೇಡಿ, ಇದರಷ್ಟು ಕಲರ್-ಫುಲ್ ವಿಷಯ ಇನ್ಯಾವುದೂ ಇಲ್ಲ!

++++++++++++++++

ಕನ್ನಡ ಟೀವಿ ಚಾನೆಲ್-ಗಳಲ್ಲಿ ಇತ್ತೀಚೆಗೆ ಬರ್ತಾ ಇರುವ ರಾಜಕೀಯ ಪಕ್ಷಗಳ ಜಾಹೀರಾತುಗಳನ್ನು ನೋಡ್ತಾ ಇದ್ರೆ ಮಜಾ ಅನ್ನಿಸುತ್ತದೆ. ಅಳಬೇಕೋ ನಗಬೇಕೋ ಗೊತ್ತಾಗುವುದಿಲ್ಲ.

ಕಾಂಗ್ರೆಸ್ ’20 ತಿಂಗಳುಗಳ ದುರಾಡಳಿತ’ದ ಬಗ್ಗೆ ತನ್ನ ಬೇಸರವನ್ನು ಒಂದು ಜಾಹೀರಾತಿನಲ್ಲಿ ಹೇಳಿಕೊಂಡರೆ, ಇನ್ನೊಂದು ಜಾಹೀರಾತಿನಲ್ಲಿ ತನ್ನ ಭರವಸೆಗಳನ್ನು ಹೇಳಿಕೊಂಡಿದೆ... ಕಲರ್ ಟೀವಿ, ಎರಡು ರುಪಾಯಿಗೆ ಅಕ್ಕಿ ಇತ್ಯಾದಿ ಇತ್ಯಾದಿ. ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡ ಬಡವರಿಗೆ ಅಪೀಲ್ ಆಗುವಂತಹ ಅಂಶಗಳನ್ನೇ ಜಾಹೀರಾತಿನಲ್ಲಿ ಹಾಕಿಕೊಂಡಿದೆ. ಇದರಲ್ಲಿ ಹೇಳುವಂತಹದೇನೂ ಇಲ್ಲ.

ಬಿಜೆಪಿಯ ಎಲ್ಲಾ ಜಾಹೀರಾತುಗಳು ನೇರವಾಗಿ ಐವತ್ತು ವರ್ಷ ಆಳಿದ ಪಕ್ಷಕ್ಕೆ ಸಡ್ಡು ಹೊಡೆಯುತ್ತವೆ. ಮೊದಲಿಗೆ ಕಾಂಗ್ರೆಸ್ ಪಕ್ಷದ ಹೆಸರು ನೇರವಾಗಿ ಬರ್ತಾ ಇತ್ತು, ಆಮೇಲೆ ಚುನಾವಣಾ ಆಯೋಗ ಕತ್ತರಿ ಹಾಕಿದ ಮೇಲೆ ಅದು ’ಐವತ್ತು ವರ್ಷ ಆಳಿದ ಪಕ್ಷ’ ಆಯಿತು.

ಇದರಲ್ಲಿ ಮೊದಲ ಜಾಹೀರಾತು ಸುಷ್ಮಾ ಸ್ವರಾಜ್ ಭಾಷಣವಿತ್ತು. ಕಾಂಗ್ರೆಸ್-ಗೆ ಹಿಗ್ಗಾಮುಗ್ಗ ಬೈದ ಕಾರಣ ಸೆನ್ಸಾರ್ ಆಗಿ ಕಾಂಗ್ರೆಸ್ ಅಂತ ಇದ್ದಲ್ಲೆಲ್ಲ ’ಟುಂಯ್’ ಅಂತ ಶಬ್ದ ಹಾಕಿಸಿಕೊಂಡು ಒಂದು ವಾರ ಟೆಲಿಕಾಸ್ಟ್ ಆಯಿತು. ನಂತರ ನಿಂತ ಹಾಗಿದೆ.

ಮುಂದಿನ ಜಾಹೀರಾತುಗಳ ಟಾರ್ಗೆಟ್ ನೇರವಾಗಿ ಮಧ್ಯಮವರ್ಗ. ಆಹಾರವಸ್ತುಗಳ ಬೆಲೆ ಹೆಚ್ಚಳ ಒಂದು ಜಾಹೀರಾತಿನಲ್ಲಿ, ಇನ್ನೊಂದ್ರಲ್ಲಿ ಗೃಹಸಾಲ ಬಡ್ಡಿ, ಮನೆ ಕಟ್ಟುವ ಸಾಮಗ್ರಿಗಳ ಬೆಲೆ ದುಬಾರಿ. ಇವೆಲ್ಲದಕ್ಕೂ ’ಐವತ್ತು ವರ್ಷ ಆಳಿದ ಪಕ್ಷ’ ಹೊಣೆಯಾಗಿದೆ. ಹಿನ್ನೆಲೆಯಲ್ಲಿ ಮೆಲುವಾಗಿ ’ದೋಣಿ ಸಾಗಲಿ ಮುಂದೆ ಹೋಗಲಿ’ ಹಾಡಿನ ಸಂಗೀತ ಕೇಳಿಬರುತ್ತದೆ, ನೋಡಿದವರೆಲ್ಲ ಹೌದು ಹೌದು ಅನ್ನುವ ಹಾಗಿದೆ ಜಾಹೀರಾತು.

ಇನ್ನೊಂದು ಜಾಹೀರಾತಿನಲ್ಲಿ ಭಯೋತ್ಪಾದನೆಯನ್ನು ಮುಖ್ಯವಾಗಿ ತೆಗೆದುಕೊಳ್ಳಲಾಗಿದ್ದು, ಬಿಜೆಪಿಯ ಟ್ರೇಡ್-ಮಾರ್ಕ್ ಆಗಿರುವ ಹಿಂದುತ್ವಕ್ಕೆ ಬದ್ಧತೆಯ agendaಕ್ಕೆ ಲೈಟಾಗಿ ಬಣ್ಣ ಬಳಿದು ಕೂಡಿಸಲಾಗಿದೆ. ಕೇಂದ್ರ ಸರಕಾರದ್ದು ಮುಸ್ಲಿಂ ತುಷ್ಟೀಕರಣ ಧೋರಣೆ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ’ಐವತ್ತು ವರ್ಷ ಆಳಿದ ಪಕ್ಷ’ಕ್ಕೆ ಯಾವುದು ಮುಖ್ಯ, ಅವರ ಸಗಟು ಮತಗಳೋ ಅಥವಾ ನಮ್ಮ ಅಮೂಲ್ಯ ಜೀವಗಳೋ’ ಅಂತ ಕೇಳಿ, ಕೊನೆಗೆ ’ಬಿಜೆಪಿಯೇ ಪರಿಹಾರ’ ಅನ್ನುತ್ತದೆ ಈ ಜಾಹೀರಾತು.

ಇದ್ದಿದ್ದರಲ್ಲಿ ಜೆಡಿ ಎಸ್ ಜಾಹೀರಾತೇ ವಾಸಿ. ಬೇರೆ ಪಕ್ಷಗಳ ಕುರಿತು ಮಾತೇ ಆಡದೆ ತಮ್ಮ ಪಕ್ಷ ಮತ್ತು ನಾಯಕನನ್ನು ಬಿಂಬಿಸುವ ಯತ್ನ ಮಾತ್ರ ಇಲ್ಲಿ ನಡೆದಿದೆ. ಆದರೆ ಹೆಚ್ಚಿನ ಚಾನೆಲ್-ಗಳಲ್ಲಿ ಹೆಚ್ಚು ದಿನ ಈ ಜಾಹೀರಾತು ಬರಲಿಲ್ಲ. ಬಹುಷ ಪಾರ್ಟಿ ಪಾಪರ್ ಆಗಿರುವುದು ಕಾರಣವಿರಬಹುದು, ೧೦ ಸೆಕೆಂಡಿಗೆ ಟೀವಿ ಚಾನೆಲ್-ನಲ್ಲಿ ಪ್ರೈಮ್ ಟೈಮ್-ನಲ್ಲಿ 14000 ರೂಪಾಯಿಯಷ್ಟು ಬೆಲೆಇರುವಾಗ, ಎಷ್ಟಂದರೂ ಪ್ರಾದೇಶಿಕ ಪಕ್ಷವಲ್ಲವೇ, ರಾಷ್ಟ್ರೀಯ ಪಕ್ಷಗಳಷ್ಟು ಕಾಸು ಎಲ್ಲಿಂದ ಬರಬೇಕು... :(

++++++++++++++++

ಏನೇ ಹೇಳಿ, ಇದ್ದಿದ್ರಲ್ಲಿ ಶಿಸ್ತುಬದ್ಧವಾಗಿ campaign ಮಾಡ್ತಾ ಇರೋದು ಈಸಾರಿ ಬಿಜೆಪಿಯೇ. ಮೊದಲ ಹಂತ ಕಳೆದ ಕೂಡಲೇ ಉತ್ತರದ ಕಡೆಗೆ ಹೆಚ್ಚು ಗಮನ ಕೊಡಲಿಕ್ಕಾಗಿ ತಾತ್ಕಾಲಿಕವಾಗಿ ಹುಬ್ಬಳ್ಳಿಗೆ ಪಕ್ಷದ ಆಫೀಸು ಸ್ಥಳಾಂತರಗೊಳ್ತಾ ಇದೆ. ಕಾಕತಾಳೀಯವಾಗಿ, ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಮೊದಲ ಹಂತದ ಮತದಾನದ ದಿನವೇ ಕೋರ್ಟಿನಲ್ಲಿ ಸಿಡಿದ ಬಾಂಬು ಬೇರೇನು ಮಾಡದಿದ್ದರೂ ಜನತೆಯಲ್ಲಿ ಭಯವನ್ನಂತೂ ಖಂಡಿತಾ ಹುಟ್ಟಿಸಿದೆ. ಇಂತಹಾ ಸಮಯದಲ್ಲಿ ಭಯೋತ್ಪಾದನೆಯ ಕುರಿತ ಬಿಜೆಪಿಯೇ ಪರಿಹಾರ ಜಾಹೀರಾತು ಕೆಲವರಿಗಾದರೂ ಪರಿಹಾರ ಸೂಚಿಸಿದರೆ ಆಶ್ಚರ್ಯವಿಲ್ಲ. ಸರಿಯಾದ ಸಮಯಕ್ಕೆ ಸರಿಯಾದ ಜಾಹೀರಾತು.

++++++++++++++++

ಇನ್ನೊಂದು ನನಗೆ ಮಜಾ ಅನಿಸಿದ್ದು ಪ್ರಣಾಳಿಕೆಗಳು. ಸಿಕ್ಕಿದರೆ ಒಂದು ಸಲ ಎಲ್ಲಾ ಪಕ್ಷಗಳ ಪ್ರಣಾಳಿಕೆಗಳನ್ನೂ ತೆಗೆದು ನೋಡಿ, ನನ್ನ ಹಾಗೆಯೇ ನೀವೂ ನಗಬೇಕೋ ಅಳಬೇಕೋ ತಿಳಿಯದೆ ಕಂಗಾಲಾಗುತ್ತೀರಿ. ಒಬ್ಬರು ಕಡುಬಡವರಿಗೆ 3 ರೂಪಾಯಿಗೆ ಅಕ್ಕಿ ಕೊಟ್ಟರೆ ಇನ್ನೊಬ್ಬರು ಅದನ್ನು 2 ರೂಪಾಯಿಗೆ ಇಳಿಸುತ್ತಾರೆ. ಕಡುಬಡವರು ಅಂದರೆ ಯಾರು ಗೊತ್ತಾ... ತಿಂಗಳಿಗೆ 1000 ರೂಪಾಯಿಗಿಂತ ಕಡಿಮೆ ಆದಾಯ ಇರುವವರು - ದಿನಕ್ಕೆ 34 ರೂಪಾಯಿಗಿಂತ ಕಡಿಮೆ ಆದಾಯ ಇರುವವರು. ತಿಂಗಳಿಗೆ 1000 ರೂಪಾಯಿಗಳಿಗಿಂತ ನಿಮ್ಮ ಆದಾಯ ಹೆಚ್ಚಿದ್ದಲ್ಲಿ ನೀವು ಬಡತನದ ರೇಖೆಗಿಂತ ಮೇಲಿದ್ದೀರಿ ಅಂತ ಅರ್ಥ :) ಎಲ್ಲಾ ಪಕ್ಷಗಳೂ ಇದನ್ನು ಗಣನೆಗೆ ತೆಗೆದುಕೊಳ್ಳದೇ ಪ್ರಣಾಳಿಕೆ ರಚಿಸಿದರೆ, ಬಿಜೆಪಿ ಚೂರು ಜಾಣತನ ತೋರಿಸಿತು. ಕಡುಬಡವರ ಆದಾಯಮಿತಿಯನ್ನು ವರ್ಷಕ್ಕೆ 30,000ಕ್ಕೆ ಹೆಚ್ಚಿಸಿ, 30,000ದಿಂದ 60,000ದ ವರೆಗೆ ಆದಾಯವಿರುವವರನ್ನು ಬಡವರು ಅಂತ ವರ್ಗೀಕರಿಸುವ ಭರವಸೆ ನೀಡಿತು, ಪ್ರಣಾಳಿಕೆಯಲ್ಲಿ ಈ ಅಂಶವನ್ನು bold ಮಾಡಿ ಮೊದಲಿಗೇ ಹಾಕಿತು.ಆದರೆ ಅದ್ಯಾಕೋ ಏನೋ, ಇದನ್ನು ಹೆಚ್ಚಿನ ಮಾಧ್ಯಮಗಳು ಗುರುತಿಸಲೇ ಇಲ್ಲವಾಗಿ, ಇತರ ಅಂಶಗಳ ಬಗ್ಗೆಯೇ ಚರ್ಚೆ ಹೆಚ್ಚಾಯಿತು.

ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಯೋಜನೆ ಕಾಂಗ್ರೆಸ್-ದಾದರೆ, ಬಿಜೆಪಿ ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ತರಬೇತಿಯ ಜತೆಗೆ ತರಬೇತಿಭತ್ಯೆ (ಸ್ಟೈಫಂಡ್) ನೀಡುವ ಆಶ್ವಾಸನೆ. ಆದರೆ ಇದನ್ನು ಕೂಡ ಕೆಲವು ಮಾಧ್ಯಮಗಳು ನಿರುದ್ಯೋಗ ಭತ್ಯೆ ಅಂತ ವರದಿ ಮಾಡಿದ ಕಾರಣ ಜೆಡಿಎಸ್ ನಾಯಕರು ’ಯುವಕರನ್ನು ಸೋಮಾರಿಯಾಗಿಸುವ ಯೋಜನೆ ಅದು’ ಅಂತ ಎರಡೂ ಪಕ್ಷಗಳಿಗೂ ಸೇರಿಸಿ ಬೈದರು. ಹೀಗೆ ಬಿಜೆಪಿ ಧರ್ಮಕ್ಕೆ ಬೈಗಳು ತಿಂದಹಾಗಾಯಿತು.

ಕಾಂಗ್ರೆಸ್ ಮತ್ತು ಬಿಜೆಪಿ ಪ್ರಣಾಳಿಕೆಗಳಲ್ಲಿ ಇನ್ನೊಂದು ಗಮನ ಸೆಳೆದ ಅಂಶವೆಂದರೆ, ಪಂಪ್ ಸೆಟ್-ಗಳಿಗೆ ಉಚಿತ ವಿದ್ಯುತ್ ಪೂರೈಕೆ. ಇದಕ್ಕೆ ಜೆಡಿಎಸ್ ನಾಯಕರು, ’ಯೂನಿಟ್ಟಿಗೆ 7-8 ರೂಪಾಯಿ ಕೊಟ್ಟು ವಿದ್ಯುತ್ ಹೊರಗಿನಿಂದ ಖರೀದಿಸುವ ಪರಿಸ್ಥಿತಿ ಇರುವಾಗ ಅದು ಹೇಗೆ ಉಚಿತವಾಗಿ ವಿದ್ಯುತ್ ಕೊಡ್ತಾರೆ’ ಅಂತ ವಾಗ್ದಾಳಿ ನಡೆಸಿದರು.ಕೊನೆಗೆ ಜೆಡಿಎಸ್ ಪ್ರಣಾಳಿಕೆ ಬಿಡುಗಡೆಯಾದಾಗ ಅದರಲ್ಲೂ ಒಂದು ಆಫರ್ ಇತ್ತು, ಕಡುಬಡವರಿಗೆ ಉಚಿತವಾಗಿ ಗ್ಯಾಸ್ ಸಂಪರ್ಕದ ಜತೆಗೆ ಉಚಿತ ಸ್ಟವ್ ನೀಡುವ ಆಫರ್.

ನಮ್ಮ ಮನೆಯಲ್ಲಿ ಗ್ಯಾಸ್ ಬುಕ್ ಮಾಡಿ ಕಡಿಮೆಯೆಂದರೂ ಒಂದು ವಾರ ಕಾಯಬೇಕಾಗುತ್ತದೆ, ಇನ್ನು ಕೆಲ ವರ್ಷಗಳ ನಂತರ ಗ್ಯಾಸ್, ವಿದ್ಯುತ್ ಸಿಕ್ಕಾಪಟ್ಟೆ ದುಬಾರಿಯಾಗುವ ನಿರೀಕ್ಷೆ ಇದೆ, ಜಗತ್ತಿನಲ್ಲಿ ಕೆಲವುಕಡೆಯಾದರೂ alternative renewable energy sources ಹುಡುಕಾಟ ಆರಂಭವಾಗಿದೆ, ಹಾಗಿರುವಾಗ ನಾವು ಇರುವುದು ಯಾವ ಶತಮಾನದಲ್ಲಿ?

++++++++++++++++

ಇನ್ನೊಂದು ಖತರ್-ನಾಕ್ ಯೋಜನೆ ಕಂಡುಬಂದಿದ್ದು ಬಿಜೆಪಿ ಪ್ರಣಾಳಿಕೆಯಲ್ಲಿ. ನಮ್ಮದೇಶದಲ್ಲಿ ನೆಲವನ್ನು ಕೊಳ್ಳಬೇಕೆಂದರೆ land purchase policies ಸುಲಭವಾಗಿ ಬಿಡುವುದಿಲ್ಲ. ಕೃಷಿಗಾಗಿ ಭೂಮಿ ಕೊಳ್ಳುವವರಿಗೆ ಮಾತ್ರ ಸುಲಭವಾಗಿ ಭೂಮಿ ಸಿಗುವ ಕಾರಣ ಅಮಿತಾಭ್ ಬಚ್ಚನ್ ಕೂಡ ’ಕೃಷಿಕ’ ಆದದ್ದು ಇಂದು ಇತಿಹಾಸ. ಈ ಪಾಲಿಸಿಗೆ ತಿದ್ದುಪಡಿ ತಂದು ಯಾರು ಬೇಕಾದರೂ ಭೂಮಿ ಕೊಳ್ಳಲು ಅನುಕೂಲವಾಗುವಂತೆ ಮಾಡುವ ಭರವಸೆ ಬಿಜೆಪಿಯದು. ಮೇಲುನೋಟಕ್ಕೆ ಇದು ಎಲ್ಲರಿಗೂ (ಕೃಷಿಕರಲ್ಲದವರಿಗೆ) ಖುಷಿಕೊಡುವ ವಿಚಾರ. ಆದರೆ, ಈಗಾಗಲೇ ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ಬಿಸಿನೆಸ್-ನಿಂದಾಗಿ ಭೂಮಿಯ ದರ ಸಿಕ್ಕಾಪಟ್ಟೆ ಹೆಚ್ಚಾಗ್ತಿದೆ, ಕೃಷಿಭೂಮಿ ಕಡಿಮೆಯಾಗ್ತಿದೆ, ಆಹಾರ ಧಾನ್ಯ ಉತ್ಪಾದನೆ ಕಡಿಮೆಯಾಗ್ತಿದೆ, ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇವಾಗಲೇ ಇದೆ, ಕಾಡು ಕಡಿಮೆಯಾಗ್ತಿದೆ, ಮಳೆ ಕಡಿಮೆಯಾಗ್ತಿದೆ, ನೀರು ಕಡಿಮೆಯಾಗ್ತಿದೆ, ಕೆಲವು ಪ್ರದೇಶಗಳಲ್ಲಿ ಬರ ಇದೆ... ಹೀಗಿರುವಾಗ ಯಾರು ಬೇಕಾದರೂ ಭೂಮಿ ಕೊಳ್ಳಬಹುದು, ಏನು ಬೇಕಾದರೂ ಮಾಡಬಹುದು ಅಂತ ರೂಲ್ಸ್ ಬಂದ್ರೆ ಗತಿ ಏನು? ಮನೆಗಳ, ಅಪಾರ್ಟ್ಮೆಟುಗಳ contruction ಇನ್ನೂ ಹೆಚ್ಚಾಗ್ತವೆ, demand ಇದ್ದಾಗ ಬೆಲೆಯೂ ಹೆಚ್ಚಾಗ್ತದೆ,ಹ್ಾಗಾಗಿ ಮನೆ ಕಟ್ಟುವ ಸಾಮಗ್ರಿಗಳ ದರ ಕೂಡ ಹೆಚ್ಚಾಗೋದೆ... ಅದೂ, ಆಹಾರ ಸಾಮಗ್ರಿಗಳ ಬೆಲೆ ಹೆಚ್ಚಳಕ್ಕೆ, ಹೆಚ್ತಾ ಇರೋ ಮನೆಸಾಲ ಬಡ್ದಿದರ, ಮನೆಕಟ್ಟೋ ಖರ್ಚಿಗೆ ಇನ್ನೊಂದು ಪಕ್ಷವನ್ನು ಹೊಣೆಯಾಗಿಸಿ ಜಾಹೀರಾತು ಕೊಟ್ಟ ಪಕ್ಷದಿಂದಲೇ ಈ ಘೋಷಣೆ..! ಶಿವಶಿವಾ!

++++++++++++++++

ರಾಜಕಿಯ ಪಕ್ಷಗಳನ್ನ ಬೈದು ಏನು ಉಪಯೋಗ, ಇದು ಹೀಗೆಲ್ಲಾ ಇರ್ಲಿಕ್ಕೆ ನಾವು ನೀವೇ ಕಾರಣ. ಹೆಸರಿಗೆ ನಾಗರಿಕರಾದ ನಮಗೆ ಏನು ಬೇಕು ಅಂತ ನಮಗೇ ಗೊತ್ತಿಲ್ಲ. ಏನಿದೆ ಅಂತ ಸುಮ್ನೆ ನೋಡ್ತೀವಿ. ಇಷ್ಟ ಆದ್ರೆ ಓಕೆ. ಕಷ್ಟ ಆದ್ರೂ ಓಕೆ. ಸಹಿಸ್ಕೋತೀವಿ. ದೂರದೃಷ್ಟಿ ನಮ್ಮಲ್ಲಿ ಪ್ರತಿಯೊಬ್ಬರಲ್ಲಿ ಇದ್ರೂ ಅದು ಉಪಯೋಗಕ್ಕಿಲ್ಲದ ಹಾಗೆ ಆಗಿದೆ. ಎಲ್ಲಾ ಪಕ್ಷಗಳು ಹೇಳುವುದು ಹಸಿಹಸಿ ಸುಳ್ಳು ಅಂತ ಗೊತ್ತಿದ್ದೂ ನಾವೆಲ್ಲ ಸುಮ್ನಿರ್ತೀವಿ.

ಇದಕ್ಕೇನು ಪರಿಹಾರ ಇಲ್ವಾ?

Thursday, May 1, 2008

ಒಡೆದು ಬಿದ್ದ ಕೊಳಲು...

ಒಡೆದು ಬಿದ್ದ ಕೊಳಲು ನಾನು
ನಾದ ಬರದು ನನ್ನಲಿ
ವಿನೋದವಿರದು ನನ್ನಲಿ...

ಕಿವಿಯನೇಕೆ ತೆರೆಯುತಿರುವೆ
ಎದೆಯೊಳೇನ ಹುಡುಕುತಿರುವೆ
ದೊರೆಯದೇನು ನನ್ನಲಿ...
ದೊರೆಯದೇನು ನನ್ನಲಿ...
ದೊರೆಯದೇನು ನನ್ನಲಿ !

ನಲ್ಲೆ ಬಂದು ತುಟಿಗೆ ಕೊಳಲನೊತ್ತಿ ಉಸಿರ ಬಿಟ್ಟಳು...
ತನ್ನ ಒಲವಿನಿಂದ ದನಿಯ ಹರಿದು ಇಳಿಸಿ ಬಿಟ್ಟಳು...

ಬಣ್ಣ ಬಣ್ಣದೆಣಿಪ ಹಾರ ನಲ್ಲ ಚೆಲ್ಲಿ ಕೊಟ್ಟನು...
ಕೊಳಲು ಬೇಸರಾಯಿತೇನೊ
ಹೊಸ ಹಂಬಲವಾಯಿತೇನೊ
ಎದೆಯ ಗಾಯ ಮಾಯಿತೇನೊ
ಬಿಸುಟೆದ್ದಳು ಕೊಳಲನು...

ಒಡೆದು ಬಿದ್ದ ಕೊಳಲು ನಾನು
ನಾದ ಬರದು ನನ್ನಲಿ..
ವಿನೋದವಿರದು ನನ್ನಲಿ...

+++++++++++++++++++++++++++++++++++++++

ಸತತ ಏಳು ವರ್ಷ ಶಿರಸಿಯ ಗೆಳತಿ ಜ್ಯೋತಿಯ ಕೈಲಿ ಮತ್ತೆ ಮತ್ತೆ ಹಾಡಿಸಿಕೊಂಡು ಕೇಳುತ್ತಿದ್ದ ಹಾಡು... ಕೇಳುವುದು ಬಿಟ್ಟು ಹೆಚ್ಚು-ಕಡಿಮೆ 8 ವರ್ಷ ಆಗಿರಬೇಕೇನೋ? ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದಂತೆ ನೆನಪಾಯಿತು. ಯಾಕೋ ಮತ್ತೆ ಮತ್ತೆ ನೆನಪಾಗಿ ತುಂಬಾ ಕಾಡುತ್ತಿದೆ! ಕೆಲವು ಹಾಡುಗಳೇ ಹಾಗೆ, ಮರೆಯಲಾಗದ ಹಾಡುಗಳು... ಇದು ಬರೆದಿದ್ದು ಯಾರು ಅಂತ ಗೊತ್ತಿಲ್ಲ, ಭಾವಗೀತೆ, ಪೂರ್ತಿ ಇಲ್ಲ ಅನಿಸ್ತಿದೆ, ನಾನು ಬರೆದಿದ್ದರಲ್ಲಿ ತಪ್ಪುಗಳೂ ಇರಬಹುದು, ಸರಿಯಾದ version ಸಿಕ್ಕಿದ್ರೆ ಕೊಡಿ ಪ್ಲೀಸ್ :) ಕರೆದು ಕೂಡಿಸಿ ಹಾಡಿ ಕೇಳಿಸಿದರೆ ಇನ್ನೂ ಖುಷಿಯಾಗ್ತದೆ!

(ಇದರ ಹುಡುಕಾಟದಲ್ಲಿ ಗೂಗ್ಲ್ ಮಾಡಿದರೆ, ವಿಕ್ರಂ ಬ್ಲಾಗಲ್ಲಿ ಏನೋ ಬರೆದಿರುವ ಸುಳಿವು ಸಿಕ್ಕಿತು... ಚೆಕ್ ಮಾಡೋಣ ಅಂತ ಓಪನ್ ಮಾಡಿದರೆ, For invited readers only ಅಂತ ಬರ್ತಿದೆ! ಯಾರಾದ್ರು ಅದ್ರದ್ದು ಸ್ಕ್ರೀನ್ ಶಾಟ್ ಅಥವಾ ಕಾಪಿ ಕಳಿಸಿ ಪ್ಲೀಸ್...:) )

Friday, April 18, 2008

ಅಧರ್ಮ

ಕಾಸರಗೋಡಿನಲ್ಲಿ ಕೋಮು ಗಲಭೆ ಅನ್ನುವಾಗ ಮನಸ್ಸು ಅದ್ಯಾಕೋ ಹುಳಿ ಹುಳಿಯಾಗುತ್ತದೆ. ನಾನು ಹಲ ವರ್ಷಗಳ ಹಿಂದೆ ಭೌತಿಕವಾಗಿ ಮತ್ತು ಮಾನಸಿಕವಾಗಿ ಬಿಟ್ಟು ಬಂದ ನನ್ನ ಹುಟ್ಟೂರಿನಲ್ಲಿ ಇನ್ನೂ ಅದೇ ನಡೆಯುತ್ತಿದೆ ಎನ್ನುವ ಸತ್ಯ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ.

++++++++++

ನಮ್ಮ ಊರಲ್ಲಿ ಇರುವುದು ೪೦-೫೦ ಮನೆಗಳು. ಹಲವಾರು ಹಿಂದು ಮನೆಗಳ ನಡುವೆ ಒಂದೇ ಒಂದು ಮುಸ್ಲಿಂ ಮನೆ ಇದೆ. ನಮ್ಮ ಊರಿನಿಂದ ಬೇರೆಲ್ಲಿ ಹೋಗಬೇಕಾದರೂ ಗುಡ್ಡ ಹತ್ತಿ ಇನ್ನೊಂದು ಸಣ್ಣ ಊರಿಗೆ ಇಳಿಯಬೇಕು, ೨೦ ನಿಮಿಷದ ನಡಿಗೆ. ಆ ಊರಿನಲ್ಲಿ ಹೆಚ್ಚಿರುವುದು ಮುಸ್ಲಿಂ ಮನೆಗಳು. ಬಸ್ಸಿಗೆ ಕಾಯುವಾಗ ಅಲ್ಲೆ ಪಕ್ಕದ ಮನೆಯಲಿ ನೀರು ಕುಡಿಯುವಾಗ, ಯಾರಿಗೂ ಅದು ಮುಸ್ಲಿಂ ಮನೆಯ ನೀರಾಗಿ ಕಾಣುತ್ತಿರಲಿಲ್ಲ. ಹಾಗೆಯೇ, ಮೊಳಕೆ ಬರಿಸಿದ ತೆಂಗಿನ ಗಿಡಗಳನ್ನು ನಮ್ಮಪ್ಪ ಅಲ್ಲಿನ ದರ್ಗಾಕ್ಕೆ ಹರಿಕೆಯೆಂದು ಕೊಡುವಾಗ ಆ ದೇವರು ಮುಸ್ಲಿಂ ದೇವರಾಗಿರುತ್ತಿರಲಿಲ್ಲ. ಅಲ್ಲಿಂದ ಅಪ್ಪ ಪ್ರಸಾದವೆಂದು ತರುವ ಖರ್ಜೂರವನ್ನು ತಿನ್ನುವುದೇ ನಮಗೆಲ್ಲ ಒಂದು ದೊಡ್ಡ ಸಂಭ್ರಮ. ಹಾಗೆಯೇ ವಿಷುವಿನ ಸಂಭ್ರಮ ಸವಿಯಲು ಮತ್ತು ಆಗಾಗ ನಡೆಯುವ ಭೂತ ಕೋಲಗಳಿಗೆ, ನಾಗನ ತಂಬಿಲಕ್ಕೆ ಹರಿಕೆ ತೆಗೆದುಕೊಂಡು ಬರುವ ಮೋಞಿ ಬ್ಯಾರಿ, ಹಮೀದ್ ಮುಂತಾದವರು ನಮ್ಮನ್ನು ಬೇರೆಯವರೆಂದು ಎಣಿಸಿರಲಿಲ್ಲ.

ಅದೊಂದು ರಾತ್ರಿ. ಹುಂಬಾ ಚಿಕ್ಕವಳಿದ್ದೆ, ಅಜ್ಜ, ಅಜ್ಜಿ, ಅಮ್ಮ ಇದ್ದರು ಮನೆಯಲ್ಲಿ. ಕರೆಂಟು, ಫೋನು ಏನೂ ಇಲ್ಲದ ಕಾಲ. ಸಂಜೆ ಹೊತ್ತಿಗೆ ಪಕ್ಕದ ಮನೆಯ ಮಾಸ್ತರು ಮಾವ ಶಾಲೆಯಿಂದ ಎಂದಿಗಿಂತ ಬೇಗನೆ ಬಂದವರು, ನಮ್ಮನೆ ಅಂಗಳದಲ್ಲಿ ಹೋಗುವಾಗ, ಅಜ್ಜನಿಗೆ ಹೇಳಿದರು, ಹಿಂದು ಮುಸ್ಲಿಂ ಗಲಾಟೆ ಶುರುವಾಗಿದೆ ಕಾಸರಗೋಡಲ್ಲಿ, ಸೆಕ್ಷನ್ ಹಾಕಿದ್ದಾರೆ, ಹಾಗಾಗಿ ನಾಳೆ ಹೊರಗೆಲ್ಲೂ ಹೋಗಬೇಡಿ ಅಂತ. ಇದ್ದಕ್ಕಿದ್ದಂತೆ ಎಲ್ಲರಲ್ಲೂ ಭಯ ಹುಟ್ಟಿಕೊಂಡಿತು. ಬಹುಶ ಅವರು ಕೋಮು ಗಲಭೆ ಅಂದ್ರೆ ಹೇಗಿರುತ್ತದೆ ಅಂತ ಕಣ್ಣಾರೆ ನೋಡಿರಬೇಕೇನೋ... ಬೇಗ ಬೇಗನೆ ಕೆಲಸ ಮುಗಿಸಿ ಬಾಗಿಲು ಹಾಕಿಕೊಂಡರು. ಯಾಕೋ ಏನೋ ಒಂದು ರೀತಿಯ ಉದ್ವಿಗ್ನತೆ ಇತ್ತು. ಏನೂ ಗೊತ್ತಿಲ್ಲದ ನಾನು ಅಮ್ಮನಿಗೆ ಕೇಳಿದೆ, ಹಿಂದು ಮುಸ್ಲಿಂ ಗಲಾಟೆಯಲ್ಲಿ ಏನಾಗ್ತದೆ, ಅದು ಯಾಕೆ ಆಗ್ತದೆ ಅಂತ. ಯಾಕೆ ಆಗ್ತದೆ ಅಂತ ಹೇಳಲಿಕ್ಕೆ ಬೇಕಾದ ಲೋಕಜ್ಞಾನ ಅಮ್ಮನಿಗಿರಲಿಲ್ಲ, ಆದರೆ, ರಾತ್ರಿಯಾಗುತ್ತಿದ್ದಂತೆ ಪಕ್ಕದ ಊರಿನಿಂದ ದೊಂದಿ ಹಿಡ್ಕೊಂಡು ಕಳ್ರು ಬರ್ತಾರೆ ಅದಕ್ಕೆ ಬೇಗ ಬೇಗ ಉಂಡು ಮಲಗಬೇಕು ಅಂತ ಹೇಳಿ ನಂಗೆ ಅಮ್ಮ ಸಮಾಧಾನ ಮಾಡಿದಳು.

ಆನಂತರ ಹಲವು ಸಲ ಕಾಸರಗೋಡಿನಲ್ಲಿ ಈರೀತಿಯ ಗಲಭೆಗಳು, ಪರಿಣಾಮವಾಗಿ ಬಂದ್, ಸರ್ವೇ ಸಾಮಾನ್ಯವಾಗಿತ್ತು. ಬಂದ್ ಇದ್ದಾಗ ಶಾಲೆಗೆ ರಜೆ ಇರುತ್ತಿತ್ತು ಅನ್ನುವುದು ಬಿಟ್ಟರೆ ಗಲಭೆಯ ಜ್ವಾಲೆ ನಮ್ಮೂರ ತನಕ ಎಂದೂ ಬಂದಿದ್ದು ನನಗೆ ನೆನಪಿಲ್ಲ. ಆದರೆ, ೧೦ನೇ ತರಗತಿ ಮುಗಿಸಿದ ಮೇಲೆ ಕಾಸರಗೋಡಿನಲ್ಲೇ ಕೇರಳದ ಸಿಲೇಬಸ್ ಪ್ರಕಾರ ಓದು ಮುಂದುವರಿಸುವ ಅವಕಾಶವಿದ್ದ ನನ್ನಂತಹ ಹಲವಾರು ಮಂದಿ, ವಿಶೇಷವಾಗಿ ಹುಡುಗಿಯರು ಓದು ಮುಂದುವರಿಸಲು ಕರ್ನಾಟಕಕ್ಕೆ ವಲಸೆ ಬರುತ್ತಿದ್ದುದಕ್ಕೆ ಈ ಹಿಂದು ಮುಸ್ಲಿಂ ಗಲಾಟೆಯೂ ಒಂದು ಕಾರಣ. ಹೆತ್ತವರಿಗೆ ಕಾಳಜಿ, ಯಾವಾಗೆಂದರವಾಗ ಕಾರಣವೇ ಇಲ್ಲದೆ ಹುಟ್ಟಿಕೊಳ್ಳುತ್ತಿದ್ದ ಕಿಚ್ಚು ತೊಂದರೆ ಕೊಟ್ಟರೆ ಅಂತ. ಹಾಗಾಗಿ ಪಕ್ಕದ ದಕ್ಷಿಣ ಕನ್ನಡದ ಒಳ್ಳೆಯ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದರು. ( ಹಾಗೆ ನಾನೂ ಕರ್ನಾಟಕಕ್ಕೆ ಬಂದು, ಓದಿ, ಬೆಳೆದು, ಈ ಬ್ಲಾಗು ನೀವು ಓದುವಂತಾಗಿದೆ :) ಇಲ್ಲವಾದರೆ ನಾನು ಈ ಹೊತ್ತಿಗೆ ಕೇರಳದ ಯಾವುದೋ ಮೂಲೆಯಲ್ಲೋ ನಗರದಲ್ಲೋ ಸುಖವಾಗಿರುತ್ತಿದ್ದೆ :) )

+++++++++++++

ಹಿಂದು ಮುಸ್ಲಿಂ ಗಲಭೆ ಅಂದರೆ ಏನು ಅಂತ ಕಣ್ಣಾರೆ ನಾನು ನೋಡಿಲ್ಲದಿದ್ದರೂ ತಿಳಿಯುವ ಕುತೂಹಲಕ್ಕೆ ಓದಿದ್ದು ಖುಶ್ವಂತ್ ಸಿಂಗರ "ಟ್ರೈನ್ ಟು ಪಾಕಿಸ್ತಾನ್"... ಡಿಗ್ರಿಯಲ್ಲಿದ್ದಾಗ ಓದಿದ್ದೆ, ಅತ್ತುಬಿಟ್ಟಿದ್ದೆ. ಆಮೇಲೆ ನೋಡಿದ್ದು "EARTH - 1947". ದೀಪಾ ಮೆಹ್ತಾ ನಿರ್ದೇಶನದ ಈ ಚಿತ್ರ, ಮಾನವತ್ವ ಮಾಸಿ ಹೋಗಿ ದಾನವ ಹುಟ್ಟುವ ಕ್ಷಣಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು... ಇದರಲ್ಲಿನ ಈ ಹಾಡು ನನಗೆ ಎಂದಿಗೂ ಇಷ್ಟದ ಹಾಡು.

+++++++++++++

ಝಾರ್ಖಂಡದ ರಾಂಚಿಗೆ ಮೂರು ವರ್ಷದ ಹಿಂದೆ, ಚುನಾವಣೆಯ ಸಮಯ ಭೇಟಿ ನೀಡಿದ್ದೆ. ಆಗ ಮೊಹರಂ ಹಬ್ಬ ನಡೀತಾ ಇತ್ತು. ಅದರ ಮೆರವಣಿಗೆ ಹೋಗುತ್ತಿತ್ತು. ಸರಿ, ಕ್ಯಾಮರಾಮನ್ ಕ್ಯಾಮರಾ ಹಿಡಿದುಕೊಂಡು ಶೂಟಿಂಗ್ ಮಾಡಲು ಹೊರಟ, ನಾನೂ ಅವನ ಜತೆ ಹೊರಟೆ. ಮೆರವಣಿಗೆಯ ಶಾಟ್ಸ್ ತೆಗೆದಿದ್ದಾಯಿತು. ನಂತರ ಅದನ್ನು ನೋಡುತ್ತಿದ್ದ ಜನಜಂಗುಳಿಯ ಶಾಟ್ಸ್ ತೆಗೆಯಬೇಕಿತ್ತು. ಕ್ಯಾಮರಾ ಜನರತ್ತ ತಿರುಗಿಸಿದ್ದೇ ತಡ. ನಾಲ್ಕೈದು ಯುವಕರು ಮೆರವಣಿಗೆಯೊಳಗಿಂದ ಈಚೆಗೆ ಬಂದು ಕ್ಯಾಮರಾಮನ್-ನನ್ನು ತಡೆದರು. "ಹಮಾರೇ ಔರತೋಂಕೋ ತುಮಾರೇ ಟಿವಿ ಮೇ ಮತ್ ದಿಖಾವೋ, ಶೂಟಿಂಗ್ ಮತ್ ಕರ್ನಾ" ಅಂತ ಹೇಳಿದರು. ಕ್ಯಾಮರಾಮನ್ ಒಪ್ಪಿ, ಬುರ್ಖಾಧಾರಿ ಹೆಂಗಸರನ್ನು ಶೂಟ್ ಮಾಡದೆ ಬಿಟ್ಟ. ಬೇರೆ ಗಂಡಸರ ಶಾಟ್ಸ್ ತೆಗೆದುಕೊಂಡ.

+++++++++++++

ಮೆರವಣಿಗೆ ಹೋಗುತ್ತಿದ್ದವರಲ್ಲಿ ಹಲವು ಚಿಣ್ಣರು ಕೂಡ ದಂಡ, ಕತ್ತಿ ಹಿಡಿದು ವರಸೆ (ಕತ್ತಿಯುದ್ಧವಾ? ಏನು ಹೇಳ್ತಾರೋ ಗೊತ್ತಿಲ್ಲ.) ಅಭ್ಯಾಸ ಮಾಡುತ್ತ ಸಾಗಿದ್ದರು. ನಾನು ಮೆಲ್ಲನೆ ಒಬ್ಬ ೫-೬ ವರ್ಷದ ಪುಟ್ಟ ಪೋರನನ್ನು ನಿಲ್ಲಿಸಿ ಕೇಳಿದೆ, "ಯೇ ಕ್ಯೂಂ ಪಕಡೇ ಹೋ" ಅಂತ. ಆತ ಹೇಳಿದ ಒಂದೇ ಶಬ್ದದಲ್ಲಿ ಉತ್ತರ - "ಜೆಹಾದ್ ಕೇ ಲಿಯೇ".

ನಾನು ದಂಗು ಬಡಿದವಳು ಮತ್ತೆ ಕೇಳಿದೆ, "ಜೆಹಾದ್ ಕ್ಯಾ ಹೈ" ಅಂತ. ಆ ಪುಟ್ಟ ಚಂದಕ್ಕೆ ನಕ್ಕು ಉತ್ತರ ಕೊಡದೆ ಮುಂದೆ ಸಾಗಿದ.

+++++++++++++

ಏನೇ ಆದರೂ, ನನ್ನ ಸುತ್ತಲ ವಾತಾವರಣದಲ್ಲಿ ನನ್ನ ಕಣ್ಣೆದುರಿಗೆ ಕೋಮು ಗಲಭೆಗಳು ಆದದ್ದಿಲ್ಲ. ಧರ್ಮದ ಹೆಸರಲ್ಲಿ ಜಗಳಗಳು ಯಾಕೆ ಆಗುತ್ತವೆಂಬುದಕ್ಕೆ ಲಾಜಿಕಲ್ ಉತ್ತರ ನನಗಿನ್ನೂ ಸಿಕ್ಕಿಲ್ಲ.

Sunday, April 6, 2008

28ರಲ್ಲಿ ಗುಂಪಿಗೆ ಸೇರದವರು..!

1998 ಅಥವಾ 1999ನೇ ಇಸವಿ. ನಾನು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಕಲಿಯುತ್ತಿದ್ದ ಕಾಲ. ರಜದಲ್ಲಿ ಇರಬೇಕು, ಸರಿಯಾಗಿ ನೆನಪಿಲ್ಲ, ಅಜ್ಜನ ಮನೆಗೆ ಒಂದು ಸಾರಿ ಹೋಗಿದ್ದೆ. ಅಲ್ಲಿ ಮಾವಂದಿರ ಮಕ್ಕಳೊಡನೆ ಮಾತಾಡುತ್ತಿದ್ದಾಗ ನಾನು ಜರ್ನಲಿಸಂ ಸೇರಲಿರುವುದನ್ನು, ಆಮೇಲೆ ನನಗೆ ಜರ್ನಲಿಸ್ಟ್ ಉದ್ಯೋಗ ಸಿಗಲಿರುವುದನ್ನು ತಿಳಿಸಿದೆ. ಆಗ ನನ್ನ ಪುಟ್ಟ ಭಾವ, 6-7 ವರ್ಷದ ಪ್ರಶಾಂತ, ’ಜರ್ನಲಿಸ್ಟಾ?’ ಎಂಬ ಉದ್ಗಾರ ತೆಗೆದ. ಯಾಕೋ ಎಂದು ಕೇಳಿದರೆ, ಸಿಕ್ಕಾಪಟ್ಟೆ ನಾಚಿಕೊಂಡ.


ಸ್ವಲ್ಪ ಒತ್ತಾಯ ಮಾಡಿದ ಮೇಲೆ, ಅವನ ಬಾಯಿಂದ ಕಾರಣ ಹೊರಬಂತು. ಕೆಲದಿನಗಳ ಹಿಂದೆ ಉದಯ ಟಿವಿಯಲ್ಲಿ ಬರುತ್ತಿದ್ದ ಮುಖಾಮುಖಿ ಕಾರ್ಯಕ್ರಮದಲ್ಲಿ ನಿಜಲಿಂಗಪ್ಪನವರ ಸಂದರ್ಶನ ನೋಡಿದ್ದನಂತೆ. ಅದರಲ್ಲಿ ಇಂಟರ್ವ್ಯೂ ಮಾಡುತ್ತಿದ್ದ ತೇಜಸ್ವಿನಿ ಎಂಬ ಪತ್ರಕರ್ತೆಯ ಹಣೆಗೆ, ಇಂಟರ್ವ್ಯೂ ಮುಗಿಸಿ ಏಳುವಾಗ ನಿಜಲಿಂಗಪ್ಪನವರು ಮುತ್ತು ಕೊಟ್ಟಿದ್ದರಂತೆ... :) ಅದಕ್ಕೆ ಪುಟ್ಟ ತನ್ನ ಅತ್ತಿಗೆಗೆ ಎಲ್ಲಿ ಹಾಗಾಗುತ್ತದೋ ಅಂತ ಭಯಪಟ್ಟು, ಜರ್ನಲಿಸಂ ಬಿಟ್ಟುಬಿಡಲು ಸಲಹೆ ನೀಡಿದ್ದ... :)


++++++++++++++++++


ಕನ್ನಡ ದೃಶ್ಯ ಪತ್ರಿಕೋದ್ಯಮದಲ್ಲಿ ’ಜರ್ನಲಿಸ್ಟ್’ ಆಗಿರುವ, extra-ordinary ಎನ್ನುವಂತಹ ಮಹಿಳೆಯರ ಹೆಸರು ಹೆಚ್ಚೇನೂ ಕೇಳಿಬರುವುದಿಲ್ಲ. ಇಂತಹದರಲ್ಲಿ, ತೇಜಸ್ವಿನಿ ತನ್ನ ವೃತ್ತಿಪರತೆಯಿಂದಲೇ ಪ್ರಸಿದ್ಧಿ ಪಡೆದಿದ್ದರು. ಅದರ ಜತೆಗೆ ಬೆಳೆದ ರಾಜಕೀಯದ ನಂಟು 2004ರಲ್ಲಿ ಅವರನ್ನು ದೇವೇಗೌಡರ ವಿರುದ್ಧ ಗೆದ್ದು ಸಂಸದೆಯಾಗುವಂತೆ ಮಾಡಿತು.


ಮೊನ್ನೆ ಮೊನ್ನೆ ಒಂದು ದಿನ ನನ್ನ ಹಣೆಬರಹ ನನ್ನನ್ನು ಕೊನೆಗೂ ಅದೇ ತೇಜಸ್ವಿನಿಯ ಎದುರು ತಂದು ನಿಲ್ಲಿಸಿತು :) ಅಲ್ಲಿ ಕಂಡವರು, ಒಬ್ಬ ಬಿಸಿರಕ್ತದ, ಆದರ್ಶಗಳೇನೆಂದು ಗೊತ್ತಿರುವ, ಕನಸುಗಳನ್ನು ಕಾಣುವ ಶಕ್ತಿಯಿರುವ ರಾಜಕಾರಣಿ, ಸಂಸದೆ. ಆಕೆಯೊಳಗಿನ ಪತ್ರಕರ್ತೆ ಮಾತ್ರ ಸ್ವಲ್ಪ ನಿರಾಶರಾಗಿದ್ದುದನ್ನು ಈ ಹಿಂದೆ ಬೇರ್ಯಾವುದೋ ಸಂದರ್ಶನದಲ್ಲಿ ನೋಡಿದ್ದೆ. ರಾಜಕಾರಣಿಯಾಗಿ ಕನಸು ಕಾಣುವ ಹಕ್ಕು ಕಳೆದುಕೊಂಡಿದ್ದೇನೆ ಎಂದಿದ್ದರು ಆಕೆ. ಬಂದಿದ್ದನ್ನು ಎದುರಿಸಲೇಬೇಕಾದ ಅನಿವಾರ್ಯತೆಯನ್ನು ಆಕೆ ಒಪ್ಪಿಕೊಂಡಿದ್ದರು.


ಕರ್ನಾಟಕದ ಜನ ಆರಿಸಿ ದೆಹಲಿಗೆ ಕಳುಹಿಸಿದ 28 ಮಂದಿಯಲ್ಲಿ ಆಟಿಗೊಮ್ಮೆ, ಹುಣ್ಣಿಮೆಗೊಮ್ಮೆ ಪಾರ್ಲಿಮೆಂಟ್ ಅಧಿವೇಶನದಲ್ಲಿ ಹಾಜರಾಗಿ ತುಟಿ ಹೊಲಿದುಕೊಂಡು ಕೂರುವವರೇ ಹೆಚ್ಚು. ಕೆಲವೇ ಕೆಲವು ಮಂದಿ ಮಾತ್ರ ನಿಯಮಿತವಾಗಿ ಸದನಕ್ಕೆ ಹಾಜರಾಗುವವರು, ಹಾಜರಾದರೂ ಮಾತಾಡುವವರ, ಚರ್ಚೆಯಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯೇ ಇದೆ.

ಪರಿಸ್ಥಿತಿ ಹೀಗಿರುವಾಗ ರೆಗ್ಯುಲರ್ ಆಗಿ ಸಿನ್ಸಿಯರ್ ಆಗಿ ಉತ್ಸಾಹ ಕಳೆದುಕೊಳ್ಳದೆ ಸದನದ ಕಲಾಪಗಳಲ್ಲಿ ಭಾಗವಹಿಸುವ ಈ‍ ಅಪರೂಪದ ಸಂಸದೆಗೆ ಇನ್ನೂ ಹೆಚ್ಚು ಮಹಿಳೆಯರನ್ನು ಸದನದಲ್ಲಿ ನೋಡುವ ಆಸೆಯಿದೆ. ಪಾರ್ಲಿಮೆಂಟಿನಲ್ಲಿ ಎಂದೋ ಚರ್ಚೆಗೆ ಬರಬೇಕಾಗಿದ್ದ 33% ಮಹಿಳಾ ಮೀಸಲಾತಿ ಮಸೂದೆಗಾಗಿ ಇವತ್ತಿಗೂ ಹೋರಾಡುತ್ತಿರುವವರಲ್ಲಿ ಈಕೆಯೂ ಒಬ್ಬರು. ಮಹಿಳೆಯರನ್ನು ಬದಿಗೊತ್ತಿಯೇ ಸಾಗುತ್ತಿರುವ ವ್ಯವಸ್ಥೆಯ ಬಗೆಗೆ ಸಾಧ್ಯವಾದಾಗಲೆಲ್ಲ ದನಿಯೆತ್ತುವ ಈಕೆ, ಪಾರ್ಲಿಮೆಂಟ್ ಅಧಿವೇಶನದಲ್ಲಿ ಅತಿ ಹೆಚ್ಚು ಹಾಜರಾತಿಯಿರುವ ಕರ್ನಾಟಕದ ಸಂಸದೆ.


ರಾಜಕೀಯವೆಂದರೆ ತನ್ನೊಳಗೆ ಇಳಿದವರಿಗೆಲ್ಲ ಕೊಳಕಿನ ಕೆಸರು ಮೆತ್ತುವ ಕೂಪವೆಂಬುದು ಒಂದು ಹಂತದ ತನಕ ಒಪ್ಪಬಹುದಾದ ಮಾತು. ಆದರೆ ಈ ದೇಶದಲ್ಲಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕಾದರೆ ರಾಜಕೀಯದಿಂದ ಮಾತ್ರ ಸಾಧ್ಯ. ಬಹುಶ: ಈ ಸಿದ್ದಾಂತದ ಬೆನ್ನಹಿಂದೆ ಬಿದ್ದು ರಾಜಕೀಯಕ್ಕೆ ಇಳಿದಿರಬೇಕು ತೇಜಸ್ವಿನಿ... ಮೆತ್ತಿದ ಕೆಸರಿನ ನಡುವೆಯೂ ನಗು ಮರೆಯದ ಈಕೆ ಮುಂದೆಯೂ ಹೀಗೆಯೇ ಇರಲಿ, ಸಂಸತ್ ಸದನದಲ್ಲಿ ಇಂತಹ ಬಿಸಿರಕ್ತ-ಹೊಸ ಯೋಚನೆಗಳು ತುಂಬಿದ ಮಹಿಳೆಯರ ಸಂಖ್ಯೆ ಹೆಚ್ಚಲಿ ಅಂತ (ಇಲ್ಲಿವರೆಗೆ ಓಟೇ ಹಾಕದ ಕಾರಣ ಪ್ರಜಾಪ್ರಭುತ್ವದ ಬಗ್ಗೆ ಮಾತಾಡುವ ನೈತಿಕ ಹಕ್ಕು ನನಗೆ ಇಲ್ಲದಿದ್ದರೂ) ಮನದುಂಬಿ ಹಾರೈಸ್ತೀನಿ... :)

(ಚಿತ್ರ ಕೃಪೆ : ಶ್ರೀನಿಧಿ ಡಿ.ಎಸ್.)

Sunday, March 23, 2008

ನೀವೇನಂತೀರಾ?

ಬ್ಲಾಗರ್ಸ್ ಮೀಟು ಕಳೆಯಿತು. ಎಲ್ಲಕ್ಕಿಂತ ಮುಖ್ಯವಾಗಿ, ಅಲ್ಲಿ ಮಾತಾಡಿದ ಹೆಚ್ಚಿನವರು ಹೇಳಿದ್ದು, ಬ್ಲಾಗುಗಳು ಭಾವನೆಗಳ ತೀರದಿಂದಾಚೆಗೆ ಕಾಲಿಟ್ಟು ಗಂಭೀರ ವಿಚಾರಗಳ ಕುರಿತು ಮಾತಾಡಬೇಕು, ಮಾಹಿತಿ ನೀಡುವಂತಹ ಬರಹಗಳು ಹೆಚ್ಚಬೇಕು ಅಂತ. ಈ ಹಿನ್ನೆಲೆಯಲ್ಲಿ ಈ ಬರಹ.

++++++++++

ನಾನು ಬ್ಲಾಗ್ ಪ್ರಪಂಚಕ್ಕೆ ಕಾಲಿಟ್ಟು ಹತ್ತಿರ ಹತ್ತಿರ ಎರಡು ವರ್ಷಗಳಾಯಿತು. ನನಗೆ ಅನಿಸಿದ ಗಂಭೀರ ವಿಚಾರಗಳನ್ನು ಮಾತ್ರ ಬ್ಲಾಗಿನಲ್ಲಿ ಬರೆಯುತ್ತಿದ್ದೆ. ಆಗ ನನಗೆ ಇಂಟರ್ನೆಟ್ಟಿನಲ್ಲಿ ಕನ್ನಡ ಟೈಪು ಮಾಡಬಹುದು ಎಂದಾಗಲೀ, ಕನ್ನಡ ಬ್ಲಾಗರುಗಳ ಸಮುದಾಯವೊಂದು ರೂಪುಗೊಳ್ಳುತ್ತಿರುವುದಾಗಲೀ ಯಾವುದೂ ತಿಳಿದಿರಲಿಲ್ಲ. ನನ್ನ ಬರಹಗಳಿಗೆ ಸಿಗುತ್ತಿದ್ದ ಓದುಗರು ಮತ್ತು ಪ್ರೋತ್ಸಾಹ ಅಷ್ಟೇನಿರಲಿಲ್ಲ. ಬರೆಯಲೇಬೇಕು ಅನಿಸಿದಾಗ ಮಾತ್ರ ಮನಸಿಟ್ಟು ಬರೆಯುತ್ತಿದ್ದೆ.

ಒಂದು ಸಲ ಏನೂ ಬರೆಯದೆಯೇ ತಿಂಗಳುಗಟ್ಟಲೆ ಕಾಲ ಬ್ಲಾಗು ತೆಪ್ಪಗಿತ್ತು. ಹಾಗಿದ್ದಾಗ ರಾಧಾಕೃಷ್ಣ ನನಗೆ ಸಿಂಧು ಮತ್ತು ಶ್ರೀಮಾತಾರ ಬ್ಲಾಗುಗಳನ್ನು ತೋರಿಸಿದ. ಹಲವು ದಿನ ಅವುಗಳನ್ನು ನೋಡಿದೆ. ಅವುಗಳಲ್ಲಿದ್ದ ಲಿಂಕುಗಳಿಂದ ಇನ್ನಿತರ ಹಲವಾರು ಬ್ಲಾಗುಗಳಿಗೆ ಹೋದೆ. ಹೊಸ ಲೋಕವಿತ್ತು ಅಲ್ಲಿ. ಕೊನೆಗೆ ನಾನೂ ಕನ್ನಡ ಕುಟ್ಟುವುದು ಹೇಗೆ ಅಂತ ತಿಳಿದುಕೊಂಡೆ, ಹಲವರಿಗೆ ಅನಿಸಿದ್ದನ್ನು ಕಮೆಂಟು ಮಾಡಿ ಕುಟ್ಟಿದೆ. ನಾನು ಕನ್ನಡ ಕಲಿತಿದ್ದನ್ನು ಜಗತ್ತಿಗೆ ತಿಳಿಸಲಿಕ್ಕಾಗಿ ಮನಸು ಮಾತಾಡ್ತಿದೆ ಅಂತ ಶುರು ಮಾಡಿದೆ.

ಇಷ್ಟೆಲ್ಲ ಆದ ಮೇಲೆ ಒಂದು ದಿನ ಕುಳಿತು ನನ್ನ ಹಳೆಯ ಬ್ಲಾಗು ನೋಡಿದರೆ ಅದರಲ್ಲಿ ನನಗೆ ಬರುವ ಹರಕು ಮುರುಕು ಇಂಗ್ಲಿಷಿನಲ್ಲಿ ಬರೆದ, ನಾನು ಇಂಟರ್-ನೆಟ್ಟಿಗಾಗಿ ಟಾಟಾ ಇಂಡಿಕಾಂ ಮೊರೆಹೋಗಿ ಪಟ್ಟ ಕಷ್ಟಕೋಟಲೆಗಳಿಂದ ಹಿಡಿದು, ರೇಡಿಯೋ-ಟಿವಿ ಜಾಹೀರಾತು ಜಗತ್ತಿನ ಕುರಿತು, ನನ್ನ ಮನೆಯೆದುರು ದಿನಾ ಬರುವ ಮಾಟ ತೆಗೆಯುವವಳ ವರೆಗೆ ಒಂದಿಷ್ಟು ವಿಚಾರಗಳ ಕುರಿತು ಬರಹಗಳಿದ್ದವು. ಅವೆಲ್ಲವೂ ನನಗೆ ಆಗ ಮುಖ್ಯವಾಹಿನಿಯಲ್ಲಿದ್ದ ಬ್ಲಾಗುಗಳಿಗಿಂತ ತುಂಬಾ ಭಿನ್ನವಾಗಿಯೂ ಜಗತ್ತಿನ ಕಷ್ಟಗಳನ್ನೆಲ್ಲಾ ನಾನೊಬ್ಬಳೇ ತಲೆಮೇಲೆ ಹೊತ್ತಿದ್ದೇನೆ ಅನ್ನುವಂತಹ ಭಾವನೆ ಬರುವಂತಹವಾಗಿಯೂ ಕಾಣತೊಡಗಿದವು. ಬಹುಶ: ಇವೆಲ್ಲ ಬ್ಲಾಗಿನಲ್ಲಿ ಹೇಳಿಕೊಳ್ಳುವಂತಹವಲ್ಲ ಅನಿಸಿತು. ಸರಿ, ನಿರ್ದಾಕ್ಷಿಣ್ಯವಾಗಿ ಆ ಬ್ಲಾಗ್ ಡಿಲೀಟ್ ಮಾಡಿದೆ. ಅದಕ್ಕೆ ರೆಗ್ಯುಲರ್ ಆಗಿ ಬಂದು ಓದಿ ಹೋಗುತ್ತಿದ್ದಿದ್ದು ಭಾಗವತರು ಮಾತ್ರ ಅಂತ ನೆನಪು. ನಾನು ಮಾತ್ರ ನನಗೆ ಗೊತ್ತಿರುವುದನ್ನು ನಾನು ಬರೆದು ಕಡಿದು ಕಟ್ಟೆ ಹಾಕುವುದು ಏನೂ ಇಲ್ಲವೆಂದುಕೊಂಡೆ.

++++++++++

ಈಗ ಅನಿಸುತ್ತಿದೆ, ಬಹುಶ ಆ ಕಾಲಕ್ಕೆ ಟ್ರೆಂಡ್ ಹಾಗೆ ಇತ್ತು ಅಂತ. ಆದರೆ ಈ ಕಾಲದಲ್ಲಿ ಮಾಹಿತಿಯುಕ್ತ ಅಥವಾ ಯೋಚನೆಗೆ ಹಚ್ಚುವ ಬರಹಗಳಿಗೆ ಪ್ರೋತ್ಸಾಹ ಇದೆಯೇನೋ ಅಂತ ಮೊನ್ನೆ ಮೊನ್ನೆ ಟೀನಾ, ಚೇತನಾ ಬ್ಲಾಗುಗಳಲ್ಲಿ ವಿಹರಿಸುತ್ತಿದ್ದಾಗ ಅನಿಸಿತು. ಏನು ಮಾಡಬಹುದು? ಅಂತ ಟೀನಾ ಕೇಳಿಕೊಂಡಿದ್ದಾರೆ. ಮಹಿಳಾದಿನ ಮತ್ತು ಅಮೃತಾಳ ಬಗೆಗೆ ಚೇತನಾ ಬರೆದಿದ್ದು ಕೂಡ ಎಲ್ಲರನ್ನೂ ಯೋಚನೆಗೆ ಹಚ್ಚುವ ವಿಷಯವನ್ನೇ.

++++++++++

ನಿಜಕ್ಕೂ ಬ್ಲಾಗಿಂಗ್-ನಲ್ಲಿ ಈಗ ಹೊಸ ಅಧ್ಯಾಯ ಪ್ರಾರಂಭ ಆಗಿದೆ, ಇನ್ನೂ ಏನೇನೋ ಆಗಬೇಕಿದೆ. ಶ್ಯಾಮಿ ಸರ್ ಹೇಳಿದ ಹಾಗೆ ಕ್ಯಾನ್ವಾಸಿನಲ್ಲಿ ಬಣ್ಣ ಚೆಲ್ಲಿದ ಹಾಗಿನ ಬರಹಗಳ ಜತೆಗೆ, ಬರಹಗಾರರಿಗಿರಬೇಕಾದ ಸೂಕ್ಷ್ಮತೆಯನ್ನು ರೂಢಿಸಿಕೊಂಡು ಉತ್ತಮವಾಗಿ ಬರೆಯುವ ಯತ್ನಗಳು ಕೂಡ ಹಲವಾರು. ಮಾಹಿತಿ ನೀಡುವ, ಚಿಂತನೆಗೆ ಹಚ್ಚುವ ಬರಹಗಳೂ ಹೆಚ್ಚುತ್ತಿವೆ. ಅದಕ್ಕೆ ಪ್ರತಿಕ್ರಿಯಿಸುವವರೂ ಹೆಚ್ಚುತ್ತಿದ್ದಾರೆ.

ಆದರೆ, ಯಾವುದೇ ಸೆನ್ಸೇಶನಲ್ ವಿಚಾರಗಳ ಹಂಗಿಲ್ಲದೆ, ಬರೆಯಬೇಕೆಂಬ ಪ್ರೀತಿಗೆ ಮತ್ತು ಹಂಚಿಕೊಳ್ಳಬೇಕೆಂಬ ತುಡಿತಕ್ಕೆ ಶರಣಾಗಿ ಬರೆಯುವ ಬರಹಗಳು ಹೆಚ್ಚಬೇಕಿದೆ. ಇದು ಸಾಧ್ಯವಾಗುವುದು ಸಂಖ್ಯೆಯಲ್ಲಿ ೩೫೦ಕ್ಕೂ ಹೆಚ್ಚಿರುವ ಬ್ಲಾಗರುಗಳ, ಮತ್ತು ಕಮೆಂಟು ಹಾಕಿ ಚರ್ಚಿಸುವ, ಪ್ರೋತ್ಸಾಹಿಸುವ, ಅಥವಾ ಭೇಟಿಕೊಟ್ಟು ಓದುವ- ಆದರೆ ಏನೂ ಹೇಳಲು ಇಷ್ಟ ಪಡದ ಇನ್ನೆಷ್ಟೋ ಅಂತರ್ಜಾಲಿ ಕನ್ನಡಿಗರ ಕ್ರಿಯಾಶೀಲ ಭಾಗವಹಿಸುವಿಕೆಯಿಂದ ಮಾತ್ರ. ಅದು ಆಗಬೇಕಿದೆ.

++++++++++

ಇಷ್ಟು ಮಾತ್ರವಲ್ಲ. ಬರಹದ ತೂಕದ ಮೇಲೆ ಬರಹಗಾರನನ್ನು ಅಥವಾ ಬರಹಗಾರ್ತಿಯನ್ನು ಅಳೆಯುವ ಕೆಲಸ ಆಗಬೇಕು. ಬರಹಗಾರ ಅಥವಾ ಬರಹಗಾರ್ತಿಯ ಹೆಸರಿನ ಮೇಲೆ ಬರಹವನ್ನು ಅಳೆಯುವುದು ತಪ್ಪು ಅಂತ ಹೇಳ್ತಿಲ್ಲ ನಾನು, ಆದ್ರೆ ಸಹೃದಯತೆಯ ಮಟ್ಟ ನಮ್ಮಲ್ಲಿ ಇನ್ನೂ ಹೆಚ್ಚಬೇಕಿದೆ ಅಂತ ನಂಗೆ ಅನಿಸ್ತಿದೆ.

++++++++++

ಕನ್ನಡ ಬ್ಲಾಗುಗಳ ಸಂಖ್ಯೆ ೩೫೦ ದಾಟಿದೆ ಅಂತ ಮೊನ್ನೆ ಸುಶ್ರುತ ಮಾಡಿದ ಪಟ್ಟಿ ನೋಡುವಾಗ ತಿಳಿಯಿತು. ಆ ಪಟ್ಟಿಯಿಂದಲೂ ಅನೇಕ ಬ್ಲಾಗುಗಳು ಮಿಸ್ ಆಗಿವೆ. ಅವುಗಳಲ್ಲಿ ಮುಕ್ಕಾಲುಪಾಲು ನಾನು ನೋಡೇ ಇರಲಿಲ್ಲ, ಅಷ್ಟು ಅಗಾಧವಾಗಿ ಇಂದು ಕನ್ನಡದಲ್ಲಿ ಬ್ಲಾಗಿಂಗ್ ಬೆಳೆದಿದೆ. ಇಷ್ಟು ಜನರಲ್ಲಿ ಅರ್ಧ ಸೇರ್ಕೊಂಡ್ರೂ ಏನಾದ್ರೂ ಒಳ್ಳೆ ಕೆಲಸ ಮಾಡಬಹುದಲ್ವಾ? ಕಥೆ-ಕವನ ಬರೆಯುವುದು ಒಳ್ಳೆಯದು ಅನ್ನುವುದು ನಿಜ. ಆದರೆ ಬರೀ ಬರೆಯುತ್ತಾ ಕೂತರೆ ಅದು ಥಿಯರಿಯ ಹಂತದಲ್ಲಿಯೇ ಕೊನೆಯಾಗುವ ಅಪಾಯ ಇದೆಯೇನೋ ಅಂತ ಇತ್ತೀಚೆಗೆ ನಂಗೆ ಅನಿಸ್ತಿದೆ... ಬರಹಕ್ಕೆ ಉದ್ದೇಶ ಇರಬೇಕೆ ಇರಬೇಡವೆ ಅಂತ ನನ್ನಲ್ಲೇ ಲೆಕ್ಕಾಚಾರ ಶುರುವಾಗಿದೆ! ನೀವೇನಂತೀರಾ?

Thursday, March 6, 2008

LET'S MEET...!!!


ಇಂಟರ್ನೆಟ್ಟಲ್ಲಿ ಒಬ್ರು ಬರೆದಿದ್ದು ಇನ್ನೊಬ್ರು ಓದಿ ಖುಶಿ ಪಡ್ತೀವಿ, ಒಬ್ರಿಗೊಬ್ರು ಪರಿಚಯ ಇರ್ತೀವಿ.. ಆದ್ರೆ, ನಿಜಜಗತ್ತಿನಲ್ಲಿ ಒಬ್ರಿಗೊಬ್ರು ಭೇಟಿ ಆದಾಗ ಆ ಮಜಾನೇ ಬೇರೆ!

ನವ ಪ್ರಕಾಶನ ಸಂಸ್ಥೆ 'ಪ್ರಣತಿ', blogger's meet ಮಾಡ್ಬೇಕು ಅಂತ ಹೊರಟಿದೆ. ಮಾರ್ಚ್ ೧೬ರ ಭಾನುವಾರ ಸಂಜೆ ನಾವೆಲ್ಲ ಪರಸ್ಪರ ಭೇಟಿಯಾಗಬಹುದಾದ ಅವಕಾಶ ಒದಗಿ ಬಂದಿದೆ...

ದಿನ - ೧೬ ಮಾರ್ಚ್ ೨೦೦೮
ಸಮಯ - ಸಂಜೆ ನಾಲ್ಕು ಗಂಟೆ
ಜಾಗ - ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ಡಾ ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಬರ್ತಾರೆ, ಇರ್ತಾರೆ, ಮಾತಾಡ್ತಾರೆ. ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ನಂಗೆ 'ಪ್ರಣತಿ' ತಂಡ ಪ್ರೀತಿಯಿಂದ ಆಹ್ವಾನಿಸಿದೆ... ನೀವೂ ಬನ್ನಿ.

ಈ ಪೋಸ್ಟ್ ನೋಡಿದವರೆಲ್ರಿಗೂ ಜಾಲಿಗರ GET-TOGETHERಗೆ ಸುಸ್ವಾಗತ...
:-)

Saturday, February 16, 2008

ಎರಡು ಹನಿಗಳು...

*************************
ಕೇಳದೇ ಇದ್ದಿದ್ದು
ನೂರಾರು ಕೊಟ್ಟು
ಕೇಳಿದ್ದೊಂದೂ ಕೊಡದೆ
ಆಟವಾಡಿಸುವ ಬದುಕಿಗೆ

ಕೊನೆಯದಾಗಿ ಕೇಳಿದ್ದು
ನಿನ್ನನ್ನು...

ಕೇಳದೆ ಇದ್ದಿದ್ದು
ನಿನ್ನನ್ನು...

***************************

ಇಲ್ಲಿರುವುದೆಲ್ಲ ಕೋಮಾಗಳೇ...
ಎಂದು ತಿಳಿದೂ ತಿಳಿದೂ
ಒಂದೇ ಒಂದು
ಪೂರ್ಣವಿರಾಮ
ಕಾಣುವಾಸೆ

ಕೋಮಾದೊಡನೆ
ಮುಂದೆ ಹೋಗಲೇ ಬೇಕು

ಪೂರ್ಣವಿರಾಮದೊಡನೆಯೂ
ಮುಂದೋಡುವಾಸೆ!!!
**********************

Saturday, January 26, 2008

ಈ ಕನಸಿಗೆ ನೂರು ತುಂಬಿತು...!



ನಮ್ಮೆಲ್ಲರ ಕನಸಿಗೆ ಆದಿತ್ಯ ಬಣ್ಣ ಹಚ್ಚುತ್ತಿದ್ದಾಗ ತೆಗೆದ ಚಿತ್ರ...
========================================

ಜನವರಿ ೨೯ಕ್ಕೆ ಈ ಕನಸಿಗೆ ನೂರು ತುಂಬಿತು...!

Saturday, January 19, 2008

ಬೇಸರವಾದಾಗ..!

ಬೇಸರವಾದಾಗ ಮಾತ್ರ ಇಲ್ಲಿ ಬರುವುದಕ್ಕೆ ಇನ್ನೂ ಬೇಸರವಾಗ್ತಿದೆ!!

ಬಣ್ಣ ಹಚ್ಚುವವರು...

ಚಿತ್ರ ಯಾರದಾದರೇನು,
ನಮ್ಮದೇ ಬಣ್ಣ ಅಂದುಕೊಂಡು ಹಚ್ಚುತ್ತೇವೆ...
ಹಚ್ಚುತ್ತಿರುವ ತನಕ ನಮ್ಮದೇ ಬಣ್ಣ.
ನಮ್ಮದೇ ಚಿತ್ರ ಕೂಡ.
ಇವೆಲ್ಲ ಆಟ ನಡೆಯುವುದು
ನಮಗೆ ಬೇಕಾದ ಬಣ್ಣ
ಬೇಕಾದ ಹಾಗೆ ಹಚ್ಚಲು ಬಿಡುವವರೆಗೆ ಮಾತ್ರ!!


ಯಾಕೆ?

ಹೂಗಿಡಕ್ಕೆ ನೀರು ಹೊಯ್ದು,
ಗೊಬ್ಬರ ಹಾಕಿ,
ದಿನಾ ಅದು ಏನು ಮಾಡುತ್ತಿದೆಯೆಂದು ನೋಡಿ
ಪ್ರೀತಿಯಿಂದ ಬೆಳೆಸುವುದು
ಯಾಕೆ?
ಕೊನೆಗೊಂದು ದಿನ ಹೂಬಿಟ್ಟಾಗ
ಕೊಯ್ದು ಕೊಲ್ಲಲಿಕ್ಕೆಯೇ?


ಬದುಕು ಅಡಗಿರುವುದೇ
ಅಡಗಿರುವುದನ್ನು ಹುಡುಕುವುದರಲ್ಲಿ...


ಅಡಗಿರುವುದನ್ನು ಹುಡುಕುವುದೇ
ಒಂದು ದೊಡ್ಡ ಸಂಭ್ರಮ...
ಆದರೆ,
ಅಡಗಿರುವುದು ಎದುರಿಗೆ ತೆರೆದು ನಿಂತಾಗ
ಇನ್ಯಾವುದೋ ಅಡಗಿರುವುದರ ಕಡೆಗೆ
ಸೆಳೆಯುತ್ತದೆ ಮನ.

ನೋವು

ನೋವಿನಷ್ಟು ಸಿಹಿ ಇನ್ಯಾವುದೂ ಇಲ್ಲ ಅಂದಿದ್ದರು ಅವರು.
ನೋವು ಮನುಷ್ಯನನ್ನು ಬೆಳೆಸುತ್ತದೆ ಎಂದಿದ್ದರು ಇವರು.
ನನಗೆ ಮಾತ್ರ
ಸಿಹಿ ಬೇಕಾಗಿಲ್ಲ
ಬೆಳೆಯೋದೂ ಬೇಕಾಗಿಲ್ಲ
ಹಿಂಡಿ ತಿನ್ನೋ ಈ ನೋವು ಬೇಕಾಗಿಲ್ಲ..!! :-(