Tuesday, December 11, 2007

ಬಹಳ ದಿನಗಳ ಬಳಿಕ

ಬಹಳ ದಿನಗಳ ಬಳಿಕ
ಶಕುಂತಲೆಯ ನೆನಪಾದ ದುಶ್ಯಂತ
ಕಾಡಿಗೆ ಹೋದ
ಅಲ್ಲೇ
ಆತ ಬಿಟ್ಟು ಹೋದಲ್ಲೆ
ಅದೇ ಆಶ್ರಮದಂಗಳದಲ್ಲೆ
ಕುಳಿತಿದ್ದಳು ಆಕೆ...

ಬಳಿಸಾರಿ
ಕಣ್ಣಲ್ಲಿ ಕಣ್ಣಿಟ್ಟು
ನೋಡಹೊರಟನಾತ
ಆಕೆಯ ಕಣ್ಣಲ್ಲಿ
ಅವನಿಗೆ ಕಂಡಿದ್ದು
ಅವಳಲ್ಲ...

ಸತ್ತ ಶಾಕುಂತಲೆ
ಮತ್ತು
ಶೂನ್ಯ

Wednesday, August 8, 2007

ಬಣ್ಣ ಹಚ್ಚುವವರಿಗೆ ಯಾರು ಬರೆದ ಚಿತ್ರವಾದರೇನು...

ಬಣ್ಣ ಹಚ್ಚುವವರಿಗೆ ಯಾರು ಬರೆದ ಚಿತ್ರವಾದರೇನು, ಬಣ್ಣ ಹಚ್ಚುವುದೇ ಕೆಲಸವಾಗಿರುವಾಗ? ಕಥೆ ಹೇಳುವವರಿಗೆ ಎಲ್ಲಾದರೇನು, ಕೇಳಲು ಜನವಿದ್ದರಾಯಿತು. ಬದುಕಿಗದ್ದಿದ ಮನಸಿನ ಕುಂಚ ತನಗೆ ಸಿಕ್ಕ ಕ್ಯಾನ್ವಾಸಿನಲ್ಲಿ ಬಣ್ಣ ತುಂಬಹೊರಟಿದೆ, ಮತ್ತೆ ತನಗೆ ಬೇಕಾದ ಕ್ಯಾನ್ವಾಸು ಮನಸಿಗೆ ಸಿಗುವ ತನಕ ಕನಸು ರೆಕ್ಕೆ ಮುಚ್ಚಿರುತ್ತದೆ, ಬ್ಲಾಗು ತಣ್ಣಗಿರುತ್ತದೆ.

ತಾನೇ ಕಥೆಯಾಗಹೊರಟ ಬದುಕಿಗೆ ಕಥೆ ಬರೆಯುವ ಹುಚ್ಚು... ಇನ್ನೊಬ್ಬರ ಕಥೆಯಾಳಕ್ಕಿಳಿಯುವ ಹುಚ್ಚು. ಹಾಗೆ ನೋಡಿದರೆ ಬದುಕೇ ದೊಡ್ಡ ಕ್ಯಾನ್ವಾಸು... ಇದರಲ್ಲಿ ಬ್ಲಾಗ್ ಪ್ರಪಂಚ ಬಿಡಿಸಿದ ಚಿತ್ರಗಳು ಹಲವು, ನೀಡಿದ ನೋಟಗಳು ನೂರು, ಪರಿಚಯವಾದ ಸಹಪಯಣಿಗರು ಹಲವರು. ಕಲ್ಪನೆಯ ಲೋಕದಲ್ಲಿ ಗರಿಬಿಚ್ಚಿ ಹಾರುವಾಗ ಹಕ್ಕಿ, ಕನಸು, ಚಂದ್ರ, ಬೇಸರ, ಮೆಸೇಜು, ನೆನಪು, ಕುಡುಕ, ಕರಿಪರದೆ, ಚಿನ್ನು, ಮೀನು ಇತ್ಯಾದಿ ಜೀವತಾಳಿದ್ದವು.. ಅಲ್ಲೊಂದು ಇಲ್ಲೊಂದು ಹನಿಗಳು, ಹರಟೆಗಳು ಹುಟ್ಟಿಕೊಂಡಿದ್ದವು.

ರಶೀದ್ ಅಂಕಲ್-ರ ಟ್ರೇಡ್-ಮಾರ್ಕ್ ಪದ್ಯಚಿತ್ರಗಳು, ಜೋಗಿಯವರ ಅದ್ಭುತ ಕಥೆಗಳು, ಮಯ್ಯರ(ಭಾಗವತ್ರ) ಕುಂದಾಪ್ರ ಕನ್ನಡ ಕ್ಲಾಸು, ಸಿಂಧುವಿನ ಭಾವಯಾನದ ಬರಹಗಳು, ಹತ್ವಾರರ ಮಾಯಾಜಗತ್ತು, ತುಳಸೀವನ, ಕುಂಟಿನಿಯವರ ನಾಲ್ಕೇ ನಾಲ್ಕು ಸಾಲುಗಳು, ಸತೀಶರ ಎನ್ನಾರೈ ಕನ್ನಡಿಗನ ಮನದಾಳದ ಹಲುಬುಗಳು, ಈಗಷ್ಟೆ ಮತ್ತೆ ಚಿಗುರಿಕೊಂಡ ಇಸ್ಮಾಯಿಲ್, ನಾಡಿಗ್ ಮತ್ತು ಪಿಚ್ಚರ್ ಬ್ಲಾಗ್ಸ್ ಮತ್ತು ಹಲವಾರು ಬ್ಲಾಗರ್ಸ್ ಬರೆಯುವ ನೂರಾರು ಭರವಸೆ ಮೂಡಿಸುವ ಬರಹಗಳು - ಎಲ್ಲಾ ಇಷ್ಟಪಟ್ಟು ಓದುತ್ತಿದ್ದೆ, ಎಲ್ಲಾದರಿಂದಲೂ ಸ್ವಲ್ಪ ಸಮಯ ನಾನು ದೂರ.

ಮತ್ತೆ ಸಮಯ ಸಿಕ್ಕಾಗ, ಕನಸು ಕರೆದಾಗ, ಕಲ್ಪನೆ ಪದಗಳಲ್ಲಿ ಗೂಡುಕಟ್ಟಿಕೊಳ್ಳುತ್ತ ಕಾಯುವಾಗ, ಇಲ್ಲಿ ಬರುವೆ, ಮನಸಿನ ಮಾತುಗಳನ್ನು ಹಂಚಿಕೊಳ್ಳಲು. ಅಲ್ಲೀತನಕ ನನ್ನ ಕೊರೆತಪುರಾಣದಿಂದ ಮುಕ್ತಿ ಸಿಕ್ಕಿತೆಂದು, ಒಂದು ಬ್ಲಾಗು ಓದುವ ಕಷ್ಟ ಕಡಿಮೆಯಾಯಿತೆಂದು ಖುಷಿ ಪಡಿ :) ಆಮೇಲೆ ಇದ್ದೇ ಇದೆ!!!

Thursday, August 2, 2007

ನಿಶೆ, ನಶೆ, ಉಷೆ... ಮತ್ತು ಹೀಗೊಬ್ಬ ಪ್ರೀತಿಕಾರ :)

ಇಳೆಯನ್ನು ನಿಶೆ ತಬ್ಬಿಕೊಳ್ಳುತ್ತಿರುವ ತಂಪು ಹೊತ್ತಿನಲ್ಲಿ ನಶೆಯ ರಂಗೇರಿಸಿಕೊಂಡ ನಿಶಾಚರನೊಬ್ಬ ರಸ್ತೆ ಬದಿಯ ಮಸುಕು ದೀಪದಡಿ ಮಿಸುಕಾಡುತ್ತ ಕುಳಿತಿದ್ದ. ಅವನ ಜೋಶ್-ಬಾರಿತನಕ್ಕೆ ಕೈಲಿದ್ದ ಮೊಬೈಲು ಕಂಪೆನಿ ನೀಡಿತ್ತು.

ಮೊಬೈಲಿನ ಎಲ್ಲಾ ನಂಬರುಗಳನ್ನೂ ಒಂದರ ನಂತರ ಒಂದರಂತೆ ನೋಡುತ್ತ ಕುಳಿತವನಿಗೆ ಒಂದು ನಂಬರು ಸಿಕ್ಕಾಪಟ್ಟೆ ಸೆಳೆಯಿತು. ಅದು ಚಂದದ ನಂಬರಾಗಿ ಕಂಡಿತು. ಹಾಗೇ ಅದರಲ್ಲಿದ್ದ ಎಲ್ಲಾ ನಂಬರನ್ನೂ ಒಂದಕ್ಕೊಂದು ಕೂಡಿಸಿದ. ಒಂದೊಂದು ಸರ್ತಿ ಕೂಡಿಸಿದಾಗ ಒಂದೊಂದು ಉತ್ತರ ಬಂತು. ಅವನಿಗೆ ಪ್ರತಿಸಲ ಕೂಡಿಸಿದಾಗವೂ ಬೇರೆ ಬೇರೆ ಉತ್ತರ ಕೊಡುವ ಅದ್ಭುತ ನಂಬರು ಅಂತನಿಸಿತು... ಏನೋ ಕಂಡುಹಿಡಿದ ಹಾಗೆ ಸಿಕ್ಕಾಪಟ್ಟೆ ಖುಷಿಯಾಯಿತು.

ಬೇರೆಬೇರೆ ದಿಕ್ಕಿನಲ್ಲಿ ಮೊಬೈಲು ಹಿಡಿದು ತಿರುಗಿಸಿ ತಿರುಗಿಸಿ ನೋಡಿದ ಕುಡುಕ. ಹೇಗೆ ನೋಡಿದರೂ ಆ ನಂಬರಿನ ಚಂದ ಮತ್ತು ರಹಸ್ಯ ಇಮ್ಮಡಿಸುತ್ತ ಹೋಯಿತು. ಕೊನೆಗೆ ಮನಸೋತ ಕುಡುಕ ಆ ನಂಬರಿಗೆ ಒಂದು ಎಸ್ಸೆಮ್ಮೆಸ್ಸು ಕಳಿಸಿದ... 'ನೀನಂದ್ರೆ ನಂಗೆ ತುಂಬಾ ಪ್ರೀತಿ'!!

ಅಷ್ಟು ಕಳಿಸಿದ್ದೇ ತಡ, ಕುಡುಕನ ಹೃದಯ ಹಕ್ಕಿಯಾಗಿ ಡವಡವನೆ ಹೊಡೆದುಕೊಂಡಿತು... ಏನೋ ಸಂಭ್ರಮಕ್ಕೆ ಕಾಯತೊಡಗಿತು... ಚೂರು ಹೊತ್ತಿನ ನಂತರ ಆ ನಂಬರು ಮಾರುತ್ತರ ಕೊಟ್ಟಿತು... 'ಈ ಸಮಯದಲ್ಲಿ ಈ ಮಾತಾ? ಅದೂ ನಿನ್ನಿಂದ?'

ಕುಡುಕ ಡವಗುಟ್ಟುವ ಎದೆಯನ್ನು ಒಂದು ಕೈಯಲ್ಲಿ ನೀವಿಕೊಳ್ಳುತ್ತ ಉತ್ತರಿಸಿದ... 'ಹೌದು... ನನಗೆ ಹೇಳಲು ಭಯ... ನನಗೆ ಕೆಲದಿನಗಳಿಂದ ಹೊಸದಾಗಿ ನೀನು ಕಾಡುತ್ತಿದ್ದೀಯ... ಇದನ್ನು ಹೇಳಲು ಈಗ ಧೈರ್ಯ ಬಂದಿದೆ...'

ನಂಬರು ಸ್ವಲ್ಪ ಸಮಯದ ನಂತರ ಉತ್ತರಿಸಿತು... 'ತಿಂಗಳ ಬೆಳಕು, ತಂಪು ಗಾಳಿ, ರಾತ್ರಿಯ ಅಮಲು ಹುಟ್ಟಿಸುವ ಮ್ಯಾಜಿಕ್, ಬೆಳಗಿನ ಸೂರ್ಯ ಹುಟ್ಟಿದಾಗ ನಿಜದ ಬಿಸಿಲಿಗೆ ಕರಗಿಹೋಗುತ್ತೆ... ಎಲ್ಲೋ ಒಂದು ಸ್ವರ ಮನಸನ್ನ ಮಿಡಿಯುತ್ತೆ... ಇನ್ನೆಲ್ಲೋ ಒಂದು ಮುಖ ಕನಸಾಗಿ ಕಾಡುತ್ತೆ... ಇವತ್ತು ಮನಸಲ್ಲೇನೋ ಹುಟ್ಕೊಳ್ಳುತ್ತೆ... ನಾಳೆ ಅದೃಶ್ಯವಾಗುತ್ತೆ... ಹಗಲನ್ನ ಮತ್ತು ನಿಜವನ್ನ ಎದುರಿಸೋ ಧೈರ್ಯ ಇರೋದು ಮಾತ್ರ ಉಳ್ಕೊಳ್ಳತ್ತೆ...'

ಕುಡುಕ ಇದನ್ನು ಒಂದು ಸಲ ಓದಿದ. ಅರ್ಥವಾಗಲಿಲ್ಲ. ಎರಡು ಸಲ ಓದಿದ. ಅರ್ಥವಾಗಲಿಲ್ಲ. ಮೂರು ಸಲ ಓದಿದ. ಅರ್ಥವಾಗಲಿಲ್ಲ. ನಾಲ್ಕನೇ ಸಲವೂ ಅರ್ಥವಾಗಲಿಲ್ಲ. ಐದನೇ ಸಲ ಎಲ್ಲವೂ ಕಲಸುಮೇಲೋಗರವಾಯಿತು, ತಲೆ ಕೆರೆದುಕೊಂಡ ರಭಸಕ್ಕೆ ನಾಲ್ಕು ಕೂದಲು ಕಿತ್ತುಬಂತು.

ಯಾಕೋ ಇವತ್ತು ಪರಮಾತ್ಮ ಸ್ವಲ್ಪ ಹೆಚ್ಚಾದ ಹಾಗಿದೆ, ಇದೇನು ಅಂತಲೇ ಅರ್ಥವಾಗುತ್ತಿಲ್ಲವಲ್ಲ... ಇಷ್ಟು ಚಂದದ ನಂಬರು ಹೀಗ್ಯಾಕೆ ಮೆಸೇಜು ಕಳಿಸುತ್ತೆ ಅಂತ ಮೂಗಿನ ಮೇಲೆ ಬೆರಳಿಟ್ಟು ಯೋಚಿಸಿದ... 'ಹಂಗಂದ್ರೇನು, ಅರ್ಥವಾಗಲಿಲ್ಲ, ನಾನು ದಡ್ಡ, ಬಿಡಿಸಿ ಹೇಳು' ಅಂತ ಮತ್ತೆ ಮೆಸೇಜು ಮಾಡಿ ನಂಬರಿಗೆ ಕೇಳಿದ.

ನಂಬರು 'ಅರ್ಥಗಳು ನೀನು ಕಟ್ಟಿಕೊಂಡ ಹಾಗಿರುತ್ತವೆ' ಅಂತ ಉತ್ತರಿಸಿತು.

ಅರ್ಥಗಳನ್ನು ನಾನು ಕಟ್ಟಿಕೊಳ್ಳುವುದೆಂದರೇನು, ಹೇಗೆ? ಈ ನಂಬರೇ ಹಾಗೆ ಹೇಳುತ್ತದಾದರೆ ಅರ್ಥ ಕಾಣುತ್ತದೆ ಅಂತಾಯಿತಲ್ಲ. ಇಲ್ಲೇ ಎಲ್ಲಿಯೋ ಇರಬೇಕು. ಕಂಡರೆ ಕಟ್ಟಬಹುದು, ಕಾಣದಿದ್ದರೆ ಹುಡುಕಿಕೊಂಡು ಎಲ್ಲಿ ಹೋಗುವುದು, ಹೇಗೆ ಕಟ್ಟುವುದು ಅಂತೆಲ್ಲ ಯೋಚಿಸಿ ತಲೆಬಿಸಿಯಾಯಿತು.

ಇರಲಿರಲಿ, ಈಗ ರಾತ್ರಿ ಬಹಳವಾಗಿದೆ, ಏನೂ ಕಾಣಿಸುತ್ತಿಲ್ಲ, ರಸ್ತೆದೀಪದ ಬೆಳಕು ಸಾಲುತ್ತಿಲ್ಲ, ನಾಳೆ ಸೂರ್ಯ ಹುಟ್ಟಲಿ, ಅರ್ಥ ಎಲ್ಲಿದ್ದರೂ ಹುಡುಕಿ ಕಟ್ಟುತ್ತೇನೆ ಅಂತ ಪ್ರತಿಜ್ಞೆ ಮಾಡಿ ಕುಡುಕ ರಸ್ತೆಬದಿಯಲ್ಲೇ ಬಿದ್ದುಕೊಂಡು ನಿದ್ದೆ ಹೋದ.

........................

ತಿಂಗಳ ಬೆಳಕು ಕರಗಿ ಉಷೆ ಮೆಲ್ಲನೆ ಮುಸುಕು ತೆಗೆದು ಹೊರಗಿಣುಕಿದಳು. ಅವಳ ಕಿರುನಗುವಿನ ಎಳೆಬಿಸಿಲು ಜಗವೆಲ್ಲ ಹಬ್ಬಿ, ರಸ್ತೆಬದಿಯಲ್ಲಿ ಮಲಗಿದವನ ಮುಖದ ಮೇಲೆ ತುಂಟುತುಂಟಾಗಿ ಕುಣಿದು ಎಬ್ಬಿಸಿತು. ಆತ ಎದ್ದು ಕುಳಿತ. ನಿದ್ರೆ ರಾತ್ರಿಯ ನೆನಪೆಲ್ಲ ಅಳಿಸಿ ಹಾಕಿದ್ದಳು. ಅರ್ಥವನ್ನು ಹುಡುಕಿ ಕಟ್ಟಬೇಕೆಂದು ಆತ ಮಾಡಿದ ಪ್ರತಿಜ್ಞೆ ಅಲ್ಲೇ ಪಕ್ಕದ ಚರಂಡಿ ಪಾಲಾದಳು. ಮೈಮುರಿಯುತ್ತ ಎದ್ದು ಮನೆಯ ಹಾದಿ ಹಿಡಿದು ನಡೆದ ಆತ.

ಹೀಗೆ ಅಮಲು ಇಳಿದಿತ್ತು. ಪ್ರೀತಿ ಅಳಿದಿತ್ತು. ತಿಂಗಳ ಬೆಳಕಿನ ಜತೆ ಹಾರಿ ಬಂದು ಮೊಬೈಲಿನಲ್ಲಿ ಕುಳಿತಿದ್ದ ಮೆಸೇಜು, ನಿಶೆನಶೆಯರು ಹುಟ್ಟಿಸಿದ ಪ್ರೀತಿ ಉಷೆಗೆ ಹೆದರಿ ಕಾಣೆಯಾಗಿದ್ದು ಕಂಡು ಸದ್ದಿಲ್ಲದೆ ನಗುತ್ತಿತ್ತು.

Thursday, July 26, 2007

ಒಂದಿಷ್ಟು ಮಳೆಗಾಲ, ಮೀನು ಮತ್ತು ಚಿನ್ನು

ಕಮಲನ ಮನೆಯಲ್ಲಿದ್ದ ದೊಡ್ಡ ಕರಿ ಭೂತಬೆಕ್ಕು ಕಳೆದ ಬೇಸಗೆ ಶುರುವಾಗುತ್ತಿದ್ದಂತೆ ಒಂದೇ ಸಲಕ್ಕೆ ಆರು ಮರಿ ಹಾಕಿತ್ತು. ಅಲ್ಲೇ ಇದ್ದ ಪುಟ್ಟಣ್ಣಜ್ಜನ ಮನೆಗೆ ಹಾಲು ತರಲು ಅಮ್ಮನ ಜತೆ ಚಿನ್ನು ಹೋಗಿದ್ದಾಗ 'ಪುಚ್ಚೆ ಕಿಞ್ಞಿ ದೀತುಂಡು, ತೂಪರಾ ಅಕ್ಕ' ಅಂತ ಕಮಲ ಕರೆದಿದ್ದಳು. ಚಿನ್ನುವಿಗೆ ಬೆಕ್ಕೆಂದರೆ ತುಂಬ ಇಷ್ಟವಾದ ಕಾರಣ ಅಮ್ಮನಿಗೂ ಮನೆಗೊಂದು ಬೆಕ್ಕಿನ ಮರಿ ತರೋಣವೆಂದು ಮನಸಿತ್ತು. ಹಾಗೆ ಚಿನ್ನು ಮತ್ತೆ ಅಮ್ಮ ಕಮಲನ ಮನೆಗೆ ಹೋದರು.

ಇನ್ನೂ ಪೂರ್ತಿ ಕಣ್ಣು ಬಿಡದ ಕರಿಯ ಮತ್ತು ಕಪ್ಪು-ಬಿಳಿ ಚುಕ್ಕೆಯಿದ್ದ ಮರಿಗಳ ಜತೆಗೆ ಹಾಲು ಬಣ್ಣದ ಮರಿಯೊಂದಿತ್ತು. ಕಣ್ಣುಗಳು ಅವಾಗಷ್ಟೆ ಚೂರೇ ಚೂರು ಬಿರಿಯುತ್ತ, ತನ್ನ ಗುಲಾಬಿ ಬಣ್ಣದ ತುಟಿಗಳನ್ನು ಅರೆತೆರೆದು ಅದೇನನ್ನೋ ಹುಡುಕುತ್ತಿದ್ದ ಮುದ್ದು ಬಿಳಿ ಮರಿ ಚಿನ್ನುಗೆ ಮೊದಲ ನೋಟಕ್ಕೇ ಆತ್ಮೀಯವಾಗಿಬಿಟ್ಟಿತು. ಚಿನ್ನು ಮೆಲ್ಲನೆ ತನ್ನ ಕಿರಿಬೆರಳು ಅದರ ಬಾಯಿಯ ಹತ್ತಿರ ತಂದರೆ ತುಂಟುಮರಿ ತನ್ನ ಪುಟ್ಟಪುಟ್ಟ ಬಿಳಿಯ ಹಲ್ಲುಗಳಿಂದ ಬೆರಳನ್ನು ಮೆತ್ತಗೆ ಕಚ್ಚಿತು. ಚಿನ್ನುಗೆ ಖುಷಿಯೋ ಖುಷಿ.

ಆಮೇಲಿನ ದಿನಗಳಲ್ಲಿ ಚಿನ್ನು ದಿನಾ ಸಂಜೆಯಾಗಲು ಕಾಯುತ್ತಿದ್ದಳು. ಅಮ್ಮನ ಜತೆ ಹಾಲಿಗೆಂದು ಹೋಗಿ, ತಾನು ಕಮಲನ ಮನೆಯಲ್ಲುಳಿದು, ಪುಟ್ಟಮರಿಗಳ ಜತೆ ಅಮ್ಮ ಬರುವವರೆಗೆ ಆಡುತ್ತಿದ್ದಳು. ಮರಿಗಳು ಸ್ವಲ್ಪ ದೊಡ್ಡದಾಗತೊಡಗಿದಾಗ ಚಿನ್ನು ಮತ್ತು ಅಮ್ಮ ಹಾಲು ಬಣ್ಣದ ಮರಿಯನ್ನು ಮನೆಗೆ ತಂದರು. ಚುರುಕು ಚುರುಕಾಗಿ ಮೀನಿನಂತೆ ಅತ್ತಿತ್ತ ಓಡಾಡುತ್ತಿದ್ದ ಅದಕ್ಕೆ ಮೀನು ಅಂತ ಹೆಸರಿಟ್ಟರು.
ooooooooooooooooooooooooooooooo

ಮೀನು ಬಂದಮೇಲೆ ಚಿನ್ನುವಿನ ದಿನಚರಿಯೇ ಬದಲಾಯಿತು. ಚಿನ್ನು ಬೆಳಿಗ್ಗೆ ಎದ್ದು ಸ್ನಾನಕ್ಕೆ ಹೋದಾಗ ಹಿಂಬಾಲಿಸಿ ಬಚ್ಚಲೊಳಗೆ ಸೇರಿಕೊಳ್ಳುವ ಮೀನು, ಬಚ್ಚಲುಮನೆಯ ಕಟ್ಟೆಯ ಮೇಲೆ ಕುಳಿತು ಕಣ್ಣು ಪಿಳಿಪಿಳಿ ಬಿಡುತ್ತಾ ನೋಡುತ್ತಿದ್ದರೆ, ಚಿನ್ನು ಪ್ರೀತಿಯಿಂದ ಮೀನುಗೆ ಬೈಯುತ್ತಿದ್ದಳು. ಚಿನ್ನು ರಾತ್ರಿ ಮಲಗುವಾಗ ತನ್ನ ಜತೆ ಮೀನುವನ್ನೂ ಮಲಗಿಸಿಕೊಳ್ಳುತ್ತಿದ್ದಳು. ಅದು ಅಮ್ಮನಿಗೆ ಅಷ್ಟು ಇಷ್ಟವಾಗುತ್ತಿರಲಿಲ್ಲ. ಆದರೆ ಅದು ಹೇಗೋ ಅಮ್ಮನ ಕಣ್ಣು ತಪ್ಪಿಸಿ ಚಿನ್ನುವಿನ ಹೊದಿಕೆಯೊಳಗೆ ತೂರಿಕೊಂಡು ಪುರುಗುಡುತ್ತ ಬೆಚ್ಚಗೆ ಮಲಗುತ್ತಿದ್ದಳು ಮೀನು, ಬೆಳಗ್ಗೆ ಅಮ್ಮನಿಗೆ ಗೊತ್ತಾಗದಂತೆ ಚಿನ್ನುವಿನ ಪಕ್ಕದಿಂದ ಜಾರಿಕೊಳ್ಳುತ್ತಿದ್ದಳು. ಇವರ ಕಣ್ಣು ಮುಚ್ಚಾಲೆಯಾಟವನ್ನು ಅಮ್ಮ ನೋಡಿಯೂ ನೋಡದಂತಿರುತ್ತಿದ್ದಳು.

ಅಲ್ಲಿಯ ವರೆಗೆ ದಿನಾ ಸಂಜೆಹೊತ್ತು ಅಜ್ಜನಿಗೆ ರಾಮಾಯಣ, ಭಾಗವತ, ಜೈಮಿನಿ ಭಾರತ ಓದಿಹೇಳುತ್ತ ಹೆಚ್ಚಿನ ಸಮಯ ಕಳೆಯುತ್ತಿದ್ದ ಚಿನ್ನು ಈಗ ಹೆಚ್ಚಿನ ಸಮಯ ಮೀನುವಿನ ಜತೆ ಆಟದಲ್ಲಿ ಕಳೆಯುತ್ತಿದ್ದಳು. ಅಜ್ಜ ಕಟ್ಟಿಟ್ಟಿದ್ದ ಕನ್ನಡಕವನ್ನು ಮತ್ತೆ ಹಾಕಿಕೊಂಡು ಸಂಜೆಹೊತ್ತು ತಾವೇ ಏನಾದರೂ ಓದುತ್ತ ಕೂರುವುದು ಆರಂಭವಾಯಿತು.

ಚಿನ್ನು ಮೀನು ಹೋದಲ್ಲೆಲ್ಲ ಹೋಗುತ್ತಿದ್ದಳು. ಚಿಟ್ಟೆ ಹಿಡಿಯಲು ನೋಟ ಹಾಕುತ್ತ ಮೀನು ಕೂತಿದ್ದರೆ, ಚಿನ್ನು ಅಲ್ಲಿ ಹೋಗುವಳು. ಅವಳು ಮೆಲ್ಲಮೆಲ್ಲಗೆ ಹೆಜ್ಜೆಯಿಟ್ಟಲ್ಲಿ ಹುಲ್ಲುಗಳು ಮೆಲ್ಲಗೆ ಅಲುಗಾಡಿರೂ ಚಿಟ್ಟೆಗಳಿಗೆ ಯಾರೋ ಬಂದರು ಅಂತ ಗೊತ್ತಾಗಿ ಅಲ್ಲಿಂದ ಎದ್ದು ಹಾರುವವು. ಅಷ್ಟು ಹೊತ್ತು ಸಮಯ ಕಾಯುತ್ತ ನೋಟ ಹಾಕುತ್ತಿದ್ದ ಮೀನುಗೆ ನಿರಾಸೆ. ಮತ್ತೆ ಎದ್ದು ಬಂದು ಪಕ್ಕಕ್ಕೆ ನಿಂದು ಚಿನ್ನುವಿನ ಕಾಲಿಗೆ ಜೋರಾಗಿ ತಲೆ ಉಜ್ಜುತ್ತ ತನ್ನ ಭಾಷೆಯಲ್ಲಿ ಬೈದುಕೊಳ್ಳುತ್ತ ಏನೋ ಹೇಳುತ್ತಿದ್ದಳು. ಚಿನ್ನು ಇನ್ನೆಲ್ಲಿ ಚಿಟ್ಟೆ ಕೂತಿದೆ ಅಂತ ಹುಡುಕುತ್ತಿದ್ದಳು.

ಪ್ರತಿ ವರ್ಷ ಮನೆಯ ಕೆಳಗೆ ಹರಿಯುವ ಪುಟ್ಟ ತೋಡಿಗೆ ಕಟ್ಟ ಕಟ್ಟುತ್ತಾರೆ. ಆ ನೀರಿನಿಂದ ಚಳಿಗಾಲದಲ್ಲಿ ಮತ್ತು ಬೇಸಗೆಯಲ್ಲಿ ತೋಟಕ್ಕೆ ನೀರು ಹಾಯಿಸುತ್ತಾರೆ. ಕಟ್ಟದಲ್ಲಿ ನೀರು ತುಂಬಿದಾಗ ಅದು ಒಂದು ಪುಟ್ಟ ತೂಬಿನ ಮೂಲಕ ಹರಿಯುತ್ತ ಮತ್ತೆ ತೋಡಿಗೆ ಸೇರಿ ತೋಡು ಮುಂದೆ ಹರಿಯುತ್ತದೆ. ಈ ತೋಡಿನ ಆರಂಭದ ಜಾಗದಲ್ಲಿ ಚಿನ್ನು ಯಾವಾಗಲೂ ಹೋಗಿ ಕುಳಿತು ನೀರಿನಲ್ಲಿ ಆಡುತ್ತಿರುತ್ತಾಳೆ.

ಅಲ್ಲಿ ಓಡಾಡುವ ಪುಟ್ಟ ಪುಟ್ಟ ಮೀನುಗಳನ್ನು ನೋಡುವುದು, ಅವಕ್ಕೆ ಅಕ್ಕಿಕಾಳು, ಅನ್ನ, ಅರಳು ಇತ್ಯಾದಿ ಹಾಕುವುದು, ಪಾದದಿಂದ ಸ್ವಲ್ಪವೇ ಮೇಲಕ್ಕೆ ಬರುವ ನೀರಿನಲ್ಲಿ ನಿಂತು, ಮೀನುಗಳಿಂದ ಕಾಲಿಗೆ ಕಚ್ಚಿಸಿಕೊಳ್ಳುವುದು, ಕಚಗುಳಿ ಅನುಭವಿಸುವುದು ಚಿನ್ನುಗೆ ಸಂತೋಷ ಕೊಡುವ ದಿನನಿತ್ಯದ ಆಟ. ಅದರಲ್ಲೂ ಒಂದು ಪುಟ್ಟ ಮರಿಮೀನು, ಸಣ್ಣ ಕೆಂಪು ಚುಕ್ಕೆಯಿರುವ ಮೀನುಮರಿ ಭಯಂಕರ ತುಂಟ. ಚಿನ್ನುವಿನ ಬಿಳೀ ಕಾಲಿಗೆ ಸಿಕ್ಕಾಪಟ್ಟೆ ಕಚ್ಚಿ ಕಚ್ಚಿ ಕಚಗುಳಿಯಿಡುತ್ತದೆ. ಈ ತುಂಟಮೀನನ್ನೂ ಸೇರಿಸಿದಂತೆ ಪುಟ್ಟ ಪುಟ್ಟ ಮೀನುಮರಿಗಳನ್ನು ಕೈಯಲ್ಲೇ ಅಟ್ಟಿಸಿ ಅಟ್ಟಿಸಿ ನೀರು ಸ್ವಲ್ಪ ಕಡಿಮೆಯಿದ್ದಲ್ಲಿಗೆ ತಂದು, ಅವುಗಳ ಸುತ್ತ ಹೊಯಿಗೆಯ ಕೋಟೆ ಕಟ್ಟಿ ಕೂಡಿಹಾಕಿ ಅವುಗಳ ಓಡಾಟ ಹತ್ತಿರದಿಂದ ನೋಡಿ ಮಜಾ ಮಾಡುವುದು ಚಿನ್ನುಗೆ ಅಭ್ಯಾಸ.

ಮೀನು ಬಂದ ಮೇಲೆ ಚಿನ್ನು ಅವಳನ್ನೂ ಜತೆಗೆ ಕರೆದುಕೊಂಡು ಹೋಗತೊಡಗಿದಳು. ಚಿನ್ನು ನೀರಿನಲ್ಲಿ ಆಡುತ್ತಿದ್ದರೆ ಮೊದಮೊದಲು ನೀರಿಗೆ ಹೆದರಿ ದೂರ ನಿಂತು ನೋಡುತ್ತಿದ್ದಳು ಮೀನು. ನಿಧನಿಧಾನವಾಗಿ ತಾನೂ ನೀರಿಗಿಳಿಯದೆ, ಕೈಕಾಲು ಒದ್ದೆ ಮಾಡಿಕೊಳ್ಳದೆ ಗಮ್ಮತ್ತು ಮಾಡತೊಡಗಿದಳು. ಚಿನ್ನು ಹೊಯಿಗೆ ಕೋಟೆ ಕಟ್ಟಿ ಮೀನುಮರಿಗಳನ್ನು ಕೂಡಿಹಾಕುತ್ತ ಸಂಭ್ರಮಿಸಿದರೆ, ಮೀನು ಅದರ ಹತ್ತಿರ ನೀರಿಲ್ಲದ ಜಾಗದಲ್ಲಿ ಕುಳಿತು ಮೀನುಗಳ ಓಡಾಟಕ್ಕೆ ಸರಿಯಾಗಿ ತಾನೂ ತಲೆ ಕುಣಿಸುತ್ತ ಕೂರುತ್ತಿದ್ದಳು.
ooooooooooooooooooooooooooooooo

ಹೀಗೇ ಒಂದು ದಿನ ಚಿನ್ನು ಮತ್ತು ಮೀನು ನೀರಲ್ಲಿ ಆಡುತ್ತಿದ್ದರು. ಹೊಯಿಗೆಕೋಟೆಯೊಳಗೆ ನಾಲ್ಕೈದು ಮೀನು ಮರಿಗಳನ್ನು ಕೂಡಿಹಾಕಿ ಗಮ್ಮತ್ತುಮಾಡುತ್ತಿದ್ದಳು ಚಿನ್ನು. ಮೀನು ಎಂದಿನಂತೆ ಬದಿಯಲ್ಲಿ ಕುಳಿತು ಮೀನುಗಳಾಟವನ್ನು ಗಮನವಿಟ್ಟು ನೋಡುತ್ತಿದ್ದಳು. ಅವಾಗ ಅಕಸ್ಮಾತ್ತಾಗಿ ಆ ಕೆಂಪು ಚುಕ್ಕೆಯ ತುಂಟ ಮೀನಿನ ಮರಿ ಮರಳುಕೋಟೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಹಾರಿ, ನೀರಿಲ್ಲದಲ್ಲಿ ಹೊಯಿಗೆಕಲ್ಲುಗಳ ಮೇಲೆ ಬಿದ್ದಿತು. ವಿಲವಿಲನೆ ಒದ್ದಾಡಿ ಎತ್ತರೆತ್ತರಕ್ಕೆ ಹಾರಿತು.

ಅಷ್ಟೇ ಅನಿರೀಕ್ಷಿತವಾಗಿ ಟಪಕ್ಕನೆ ಕೂತಲ್ಲಿಂದ ಜಿಗಿದ ಮೀನು ಆ ಮೀನುಮರಿ ಹಾರಿದಂತೆಲ್ಲ ಹಾರಿ, ಕೊನೆಗೂ ಅದನ್ನು ಹಿಡಿದು, ಹೊಡೆದು, ಬೀಳಿಸಿ, ಕಚ್ಚಿ, ಬಾಯಿಯೊಳಗೆ ಹಾಕಿಕೊಂಡು 'ಮುರ್ರ್...' ಅಂತ ಶಬ್ದ ಮಾಡುತ್ತ, ತುಂಟು ಮೀನಿನ ಮರಿಯನ್ನು ತಿಂದೇ ಬಿಟ್ಟಳು. ಚಿನ್ನುಗೆ ಏನೂ ಯೋಚಿಸುವ ಅವಕಾಶವೇ ಕೊಡದೆ ನಡೆದ ಈ ಎಲ್ಲ ಘಟನೆಗಳನ್ನೆಲ್ಲಾ ನೋಡುತ್ತ ಏನು ಮಾಡಬೇಕೋ ತಿಳಿಯದೆ ಚಿನ್ನು ಸುಮ್ಮನೆ ಕೂತುಬಿಟ್ಳು.

ಮೀನು ತಿಂದಾದಮೇಲೆ ಮೀನು ಹೊಯಿಗೆ ಮೇಲೆ ಕುಕ್ಕರಗಾಲಲ್ಲಿ ಕುಳಿತು ಒಂದು ಕೈ ನೆಲಕ್ಕೂರಿ ಕಣ್ಣುಮುಚ್ಚಿ ಇನ್ನೊಂದು ಕೈಯಲ್ಲಿ ಸುಖವಾಗಿ ಮುಖ ಉಜ್ಜಿಕೊಳ್ಳುತ್ತ ಕೈಯನ್ನು ನೆಕ್ಕತೊಡಗಿದಳು. ಹೀಗೆ ಮೀನು ದಿವ್ಯ ಆನಂದವನ್ನು ಅನುಭವಿಸುತ್ತಿದ್ದರೆ, ಅದೇನೋ ತಪ್ಪುಮಾಡಿದ ಭಾವ ಚಿನ್ನುವಿನಲ್ಲಿ. ಛೆ, ತಾನು ಹೊಯಿಗೆ ಕೋಟೆ ಕಟ್ಟಿ ಆ ತುಂಟುಮೀನನ್ನು ಕೂಡುಹಾಕದಿದ್ದರೆ ಮೀನುಗೆ ಅದನ್ನು ಹಿಡಿದು ತಿನ್ನಲು ಸಿಗುತ್ತಲೇ ಇರಲಿಲ್ಲ, ತಾನು ಹೊಯಿಗೆಕೋಟೆ ಕಟ್ಟಿ ಆಡಬಾರದಿತ್ತೇನೋ ಅನ್ನುವ ಸಂಶಯ. ಜತೆಗೆ ಆ ಪುಟ್ಟ ಮೀನಿನ ಮರಿಗೆ ಅದೆಷ್ಟು ನೋವಾಯಿತೋ, ಕೊಂದು ತಿಂದೇ ಬಿಟ್ಟಳು ರಾಕ್ಷಸಿ ಅಂತ ಮೀನುಳ ಮೇಲೆ ಕೋಪ. ಕೆಂಪು ಚುಕ್ಕೆಯ ತುಂಟು ಮೀನುಮರಿಯಿಂದ ಕಚ್ಚಿಸಿಕೊಳ್ಳುವುದು ಇನ್ನೆಂದಿಗೂ ಇಲ್ಲ ಅಂತ ಸಂಕಟ. ಅಜ್ಜನಿಗೆ ಇದೆಲ್ಲವನ್ನ ಹೇಳಿದರೆ, ಅಜ್ಜ ನಕ್ಕುಬಿಟ್ಟರು.

ಆದರೆ ಎಷ್ಟು ಬೈದುಕೊಂಡರೂ ತುಂಟು ಮೀನಿನ ಮರಿಯ ಮೇಲೆ ಎಷ್ಟು ಪ್ರೀತಿ ಇತ್ತೋ ಮೀನುಳ ಮೇಲೆ ಅದಕ್ಕಿಂತ ಒಂದು ತೊಲ ಹೆಚ್ಚೇ ಪ್ರೀತಿ ಚಿನ್ನುಗೆ. ಎಷ್ಟಂದರೂ ನನ್ನ ಮೀನು ತಾನೆ ಅಂತ.

ಮರುದಿನ ಚಿನ್ನು ಸುಮ್ಮನೆ ಮನೆಯಲ್ಲಿ ಕುಳಿತುಕೊಂಡಿದ್ದರೆ, ಮೀನು ಪಕ್ಕಕ್ಕೆ ಬಂದು, ಮಡಿಲೇರಿ ನಿಂದು ಅವಳ ಗದ್ದಕ್ಕೆ ತನ್ನ ಮುಖವನ್ನು ತಾಡಿಸುತ್ತ ನೀರಲ್ಲಿ ಆಡಲು ಹೋಗೋಣ ಅಂತ ಹಠ ಮಾಡಿದಳು. ಮೀನಿನ ರುಚಿ ಸಿಕ್ಕಿದೆ ನಿಂಗೆ ರಕ್ಕಸಿ ಅಂತ ಬೈದಳು ಚಿನ್ನು. ಹಾಗೇ ಕೊನೆಗೆ ಮೀನುನ ರಗಳೆ ತಡೆಯದೆ ನೀರಲ್ಲಾಡಲು ಹೋದಳು ಚಿನ್ನು. ಅಲ್ಲಿ ಹೋಗಿ ನೀರಲ್ಲಿ ಕಾಲು ಮುಳುಗಿಸಿ ನಿಂತಳು ಚಿನ್ನು, ಕಾಲಿಗೆ ಮೀನು ಕಚ್ಚತೊಡಗಿದವು. ಹಾಗೇ ನೋಡುತ್ತಾಳೆ, ಬೇರೆಲ್ಲಾ ಮೀನುಗಳ ಜತೆ ಕೆಂಪು ಚುಕ್ಕೆಯ ಎರಡು ಮೀನುಗಳಿವೆ..! ಯಾಕೋ ಚಿನ್ನುಗೆ ತುಂಬ ಸಮಾಧಾನವಾಯಿತು. ಅಜ್ಜನಿಗೆ ಹೇಳಿದರೆ ಅಜ್ಜ 'ಆ ಸತ್ ಹೋದ ಮೀನು ಸ್ವರ್ಗಂದ ಇನ್ನೆರಡ್ ಮೀನ್ ಕಳ್ಸಿಂತ್ ಕಾಣ್' ಅಂತ ವೀಳ್ಯದೆಲೆ ತಿಂದು ಕೆಂಪಾದ ಬೊಚ್ಚು ಬಾಯಿ ಬಿಟ್ಟು ನಕ್ಕರು.
ooooooooooooooooooooooooooooooo

ಚಿನ್ನು ಮತ್ತು ಮೀನು ಆಡುತ್ತಿದ್ದ ಇನ್ನೊಂದು ಆಟವೆಂದರೆ, ಅಡಿಕೆ ಅಂಗಳದಲ್ಲಿ. ಬಿದಿರುಮುಳ್ಳಿನ ಬೇಲಿ ಹಾಕಿ ಅಂಗಳದ ಭಾಗವೊಂದನ್ನು ಅಡಿಕೆ ಒಣಗಿಸಲು ಮೀಸಲಿಡುತ್ತಿದ್ದರು. ಸಂಜೆ ಹೊತ್ತು ಮೀನು ಹೋಗಿ ಹರವಿದ್ದ ಅಡಿಕೆಯ ನಡುವೆ ಕೂರುವಳು. ಎಲ್ಲಾ ಕಡೆ ದೃಷ್ಟಿ ಬೀರುವಳು. ಇದ್ದಕ್ಕಿದ್ದಂತೆ ತನ್ನ ಪಕ್ಕದಲ್ಲಿರುವ ಕಿತ್ತಳೆ ಬಣ್ಣದ ಸಿಪ್ಪೆ ಜೂಲುಜೂಲಾಗಿ ಹೊರಬಂದ ಹೊಸ ಹಣ್ಣಡಿಕೆಯನ್ನು ಕಚ್ಚಿಕೊಂಡು ಆಟವಾಡತೊಡಗುವಳು. ಅದನ್ನು ಮುಂಗೈಯಲ್ಲಿ ಹೊತ್ತು ಬಾಯಿಂದ ಕಚ್ಚುತ್ತ ನೆಲದಲ್ಲಿ ಉರುಳಿ ಉರುಳಿ ಜಗಳಾಡುವಳು. ಯಾವುದೋ ಹಾವಿನೊಡನೆಯೋ ಹಲ್ಲಿಯೊಡನೆಯೋ ಕಾದಾಡುವ ರೀತಿಯಲ್ಲಿ ಜೀವವಿಲ್ಲದ ಹಣ್ಣಡಿಕೆಯೊಂದಿಗೆ ಮೀನು ಜಗಳಾಡುತ್ತಿದ್ದರೆ, ಚಿನ್ನುವಿಗೆ ಅದು ನೋಡಲು ಎಲ್ಲಿಲ್ಲದ ಸಂಭ್ರಮ.

ಚಿನ್ನು ಮೀನುನೆದುರಿಗೆ ನಿಂತು ಅಜ್ಜನ ಊರುಗೋಲನ್ನೋ ದಾರವನ್ನೋ ಅಲ್ಲಾಡಿಸುತ್ತ ಮೀನುಳಿಗೆ ಅದು ಹಾವು ಅಥವಾ ಜೀವವಿರುವ ಪ್ರಾಣಿ ಅಂತ ಭ್ರಮೆ ತರಿಸುವಳು. ಮೀನು ಹಾರಿ ಹಾರಿ ಅದನ್ನು ಹಿಡಿಯ ಹೊರಟಾಗ ಅವಳಿಗೆ ಎಟುಕಗೊಡದೆ ಎತ್ತರೆತ್ತರಕ್ಕೆ ಅಲ್ಲಾಡಿಸುವಳು. ಅಜ್ಜ ಇವರ ಎಲ್ಲಾ ಆಟಗಳನ್ನು ದೂರ ನಿಂತು ನೋಡುವರು.
ooooooooooooooooooooooooooooooo

ಬೇಸಗೆ ಮುಗಿಯುತ್ತ ಬಂದಿತ್ತು. ಆಳುಗಳು ಅಂಗಳದಲ್ಲಿದ್ದ ಅಡಿಕೆಯನ್ನೆಲ್ಲ ಬಾಚಿ ಗೋಣಿಯಲ್ಲಿ ಕಟ್ಟಿ, ಬಿದಿರುಮುಳ್ಳಿನ ಬೇಲಿಯನ್ನು ತೆಗೆದು ಮನೆಯ ಬದಿಯಲ್ಲಿಟ್ಟು ಅಂಗಳವನ್ನು ಖಾಲಿ ಮಾಡಿದರು. ಚಿನ್ನು ಮತ್ತು ಮೀನುನಿಗೆ ಆಡಲು ಅಡಿಕೆಯಂಗಳ ಇಲ್ಲವಾಯಿತು. ಅಷ್ಟರಲ್ಲಿ ಗಂಗಾವತಾರವಾಗಿ ಮಳೆಗಾಲ ಬಂದುಬಿಟ್ಟಿತು. ಅಜ್ಜ ಚಿನ್ನುವಿಗೆ ಶಾಲೆಗೆ ಸೇರಿಸಿದರು. ಚಿನ್ನು ಶಾಲೆಚೀಲ ಹೆಗಲಿಗೇರಿಸಿ ಮಳೆಗೆ ನೆನೆಯದ ಹಾಗೆ ರೈನ್-ಕೋಟ್ ಹಾಕಿಕೊಂಡು ಅಕ್ಕಪಕ್ಕದ ಮನೆಯ ಮಕ್ಕಳೊಂದಿಗೆ ಶಾಲೆಗೆ ಹೋಗತೊಡಗಿದಳು.

ಆಟಿಯ ಮಳೆ ಎಡೆಬಿಡದೆ ಸುರಿಯಿತು. ಗುಡ್ಡದ ನೀರೆಲ್ಲ ತೋಡಿಗೆ ಬಂದು, ಕಟ್ಟ ಕಡಿದು, ತೋಡಿನ ಎಂದಿನ ಸೌಮ್ಯರೂಪ ಕಳೆದು, ಸಿಕ್ಕಸಿಕ್ಕಿದ್ದೆಲ್ಲ ಕೊಚ್ಚಿಕೊಂಡು ಕೆಂಪಾಗಿ ಮೈದುಂಬಿ ಹರಿಯಿತು. ಚಿನ್ನು ಮತ್ತು ಮೀನು ಜತೆಗೆ ಕಳೆಯಲು ಹೆಚ್ಚಿನ ಸಮಯ ಸಿಗುತ್ತಿರಲಿಲ್ಲ. ಸಿಕ್ಕಿದ ಕಾಲವನ್ನು ಮನೆಯೊಳಗೇ ಕಳೆಯಬೇಕಾಗುತ್ತಿತ್ತು. ಅವಾಗಾವಾಗ ಮಳೆ ಬಿಟ್ಟಾಗ ಮೀನು ಹೊರಗೆ ಹೋಗಿ ಹಿತ್ತಲಿನಲ್ಲಿ ಹುಲ್ಲಿನ ನಡುವೆ, ಕೂರುತ್ತಿದ್ದಳು. ಅಲ್ಲಿ ಹಾವೋ ಹರಣೆಯೋ ಹರಿದಾಡಿದಾಗ ಬೆಂಬತ್ತಿ ಹೋಗುತ್ತಿದ್ದಳು. ಅವಳು ಓಡಾಡುವಾಗ ಚಿನ್ನುವೂ ದೂರ ನಿಂತು ನೋಡುವಳು. ಎಲ್ಲೆಂದರಲ್ಲಿ ಹೋಗುವ ಮೀನುವಿನ ಜತೆ ಸಾಧ್ಯವಾದಲ್ಲೆಲ್ಲ ತಾನೂ ಹೋಗುತ್ತಿದ್ದಳು.

oooooooooooooooooooooooooooooo

ಅದೊಂದು ದಿನ ರೈನ್-ಕೋಟಿದ್ದರೂ ಮಳೆಗೆ ಒದ್ದೆ ಮುದ್ದೆಯಾಗಿ ಚಳಿಗೆ ಗಡಗಡನೆ ನಡುಗುತ್ತ ಮನೆ ಜಗಲಿ ಹತ್ತಿದ ಚಿನ್ನು ನೀರು ಬಸಿಯುತ್ತಿದ್ದ ರೈನ್-ಕೋಟ್ ಬಿಚ್ಚಿ ಜಗಲಿಯ ಬದಿಗಿಟ್ಟಳು. ಅಮ್ಮ ಬಂದು 'ನಿಂಗೆ ರೈನ್-ಕೋಟ್ ಇದ್ರೂ ಒಂದೆ ಹೆಣ್ಣೆ, ಇಲ್ಲದಿದ್ರೂ ಒಂದೆ' ಅಂತ ಪ್ರೀತಿಯಲ್ಲಿ ಬೈಯುತ್ತ ಚಿನ್ನುವಿನ ಬೆನ್ನಿಂದ ಶಾಲೆಚೀಲವನ್ನು ತೆಗೆದು ಚಾವಡಿಯಲ್ಲಿಟ್ಟಳು, ಮನೆಯಲ್ಲಿ ಹಾಕುವ ಬೆಚ್ಚನೆಯ ಹಳೆಬಟ್ಟೆ ಕೊಟ್ಟಳು. ಚಿನ್ನು ಶಾಲೆಯ ಚೀಲವನ್ನು ಚಾವಡಿಯಲ್ಲಿಟ್ಟು ಒಳಮನೆಗೆ ನಡೆದಳು.

ಬಟ್ಟೆ ಬದಲಾಯಿಸುತ್ತ ಅತ್ತಿತ್ತ ಹುಡುಕುನೋಟ ಬೀರಿದ ಚಿನ್ನು, ಮಿಯಾಂವ್ ಅಂತ ಮೆಲ್ಲನೆ ಕೂಗಿದಳು. 'ಮೊದ್ಲು ಬಿಸಿಬಿಸಿ ಕಾಫಿ ಕುಡಿ, ಹಪ್ಪಳ ತಿನ್ನು, ಮತ್ತೆ ಎಷ್ಟು ಹೊತ್ತು ಬೇಕಾರೂ ಪುಚ್ಚೆಯೊಟ್ಟಿಗೆ ಆಡು' ಅಂತ ಅಂದ ಅಮ್ಮ ಬೆಚ್ಚನೆಯ ಬೈರಾಸಿನಲ್ಲಿ ಚಿನ್ನುವಿನ ತಲೆಯೊರಸತೊಡಗಿದಳು.

ಅಡಿಗೆಮನೆಯಾಚೆಗಿನ ಚಾವಡಿಯಲ್ಲಿ ಚಕ್ಕಳಮಕ್ಕಳ ಹಾಕಿ ಕೂತ ಚಿನ್ನು ಬಿಸಿಬಿಸಿ ಕಾಫಿ ಕುಡಿಯುತ್ತ, ಕೆಂಡದಲ್ಲಿ ಕಾಯಿಸಿದ ಹಪ್ಪಳದಿಂದ ಪುಟ್ಟ ತುಂಡೊಂದನ್ನು ಕರಕ್ಕೆಂದು ಮುರಿದಳು. ಅಲ್ಲೆಲ್ಲ ಘಮ್ಮೆಂದು ಹಪ್ಪಳದ ಕಂಪು ಹಬ್ಬಿತು. ಕರಕ್ಕೆಂಬ ಸದ್ದು ಕೇಳುತ್ತಲೂ ಅಲ್ಲಿವರೆಗೆ ಆಡಿಗೆಮನೆಯ ಕತ್ತಲಲ್ಲಿ ಒಲೆಯ ಪಕ್ಕ ಬೆಚ್ಚಗೆ ಮೈಕಾಸಿಕೊಳ್ಳುತ್ತಿದ್ದ ಮೀನು ಮಿಯಾಂವ್ ಅನ್ನುತ್ತ ಓಡಿ ಬಂದು ಚಿನ್ನುವಿನ ಮಡಿಲೇರಿದಳು. ಚಿನ್ನು ಖುಷಿಯಿಂದ ನಗುತ್ತ ಮೀನುವಿನ ಮೈಸವರಿ ಮಡಿಲಲ್ಲಿ ಕೂರಿಸಿ ಹಪ್ಪಳದ ಚೂರುಗಳನ್ನು ಒಂದೊಂದೇ ಅವಳ ಬಾಯಿಗಿಡತೊಡಗಿದಳು. ಮೀನು ಕಣ್ಣುಮುಚ್ಚಿ ಆ ಚೂರುಗಳನ್ನು ತಿನ್ನತೊಡಗಿದಳು.

ರಾತ್ರಿಯ ಅಡಿಗೆಗೆ ತಯಾರು ಮಾಡಲಾರಂಭಿಸಿದ ಅಮ್ಮ ಇವರ ಸಂಭ್ರಮವನ್ನು ನೋಡುತ್ತ, 'ಅದಕ್ಕೆ ಆಗಲೂ ಹಾಕಿದೆ ನಾನು ಹಪ್ಪಳ, ಹೆಚ್ಚು ತಿಂದ್ರೆ ನಾಳೆ ಮತ್ತೆ ಹೊಟ್ಟೆ ಉಬ್ಬರಿಸ್ತ್ ಕಾಣ್ ಪುಚ್ಚೆಗೆ', ಅಂದಳು. 'ಪಾಪ ಮೀನುಂಗೆ ನನ್ನೊಟ್ಟಿಗೆ ತಿನ್ನದೆ ಉದಾಸೀನ ಆತಿಲ್ಯಾ ಅಮ್ಮ', ಅನ್ನುತ್ತ ಮೀನುಳ ತಲೆಸವರಿದ ಚಿನ್ನು, 'ಅಲ್ದಾ ಮೀನು' ಅಂತ ಮೀನುಳ ಹತ್ತಿರ ಕೇಳಿದಳು. ಭಾವಸಮಾಧಿಗೆ ಭಂಗ ಬಂದವರ ಹಾಗೆ, ನಿದ್ರೆಯಿಂದ ಎದ್ದವರ ಹಾಗೆ ಹೂಂ ಎಂದು ಮುಲುಗಿದ ಮೀನು ಕಣ್ಣು ಮುಚ್ಚಿ ಚಿನ್ನು ಕೊಟ್ಟ ಇನ್ನೊಂದು ಚೂರು ಹಪ್ಪಳ ತಿನ್ನತೊಡಗಿದಳು. 'ನೋಡಮ್ಮ, ಮೀನು ಹೌದು ಹೇಳ್ತ್-ಳ್ ಕಾಣ್' ಅಂತ ಚಿನ್ನು ಸಂಭ್ರಮಿಸಿದಳು. 'ಪುಚ್ಚೆಗೆ ಮಾತಾಡ್-ಗೆ ಕಲ್ಸಿಯಲ್ಲ ನೀನ್, ಹುಷಾರಿ ಹೆಣ್ಣ್' ಅಂತ ಅಜ್ಜ ಬೊಚ್ಚುಬಾಯಿ ಬಿಟ್ಟು ನಕ್ಕರು.

ತಿಂಡಿಯ ಕಾರ್ಯಕ್ರಮ ಮುಗಿದಮೇಲೆ ಮೆಲ್ಲಗೆ ಹೊರಗಿಣುಕುತ್ತಾಳೆ ಚಿನ್ನು, ಬಿಸಿಲು ಮೂಡಿತ್ತು! ಮಳೆಬಂದುದರ ಕುರುಹೇ ಇಲ್ಲದ ಹಾಗೆ ಜಗತ್ತೆಲ್ಲ ನಗುತ್ತಿತ್ತು. ಮನೆಯ ಹಿಂದಿನ ಗುಡ್ಡದಾಚೆಗೆ ಆಕಾಶದಲ್ಲಿ ಕಾಮನಬಿಲ್ಲು ಮೂಡಿತ್ತು. ಮನೆಯ ಕೆಳಗಿನ ಅಡಿಕೆ ತೋಟ, ತೆಂಗಿನ ಮರಗಳು, ಮರಗಳಿಗೆ ಸುತ್ತಿಕೊಂಡ ಕರಿಮೆಣಸಿನ ಗಿಡಗಳು, ಮನೆಯೆದುರಿನ ದಾಸವಾಳದ ಗಿಡ, ಬಯ್ಯಮಲ್ಲಿಗೆ, ದುಂಡುಮಲ್ಲಿಗೆ, ರಾತ್ರಿರಾಣಿಗಿಡ, ತೋಡಿನ ಮತ್ತು ಅಂಗಳದ ನಡುವೆ ಬೇಲಿಯಾಗಿ ನೆಟ್ಟಿದ್ದ ಬಣ್ಣ ಬಣ್ಣದ ಕ್ರೋಟನ್ ಗಿಡಗಳು - ಎಲ್ಲವೂ ಸಂಜೆಬಿಸಿಲಿನ ಚಿನ್ನದ ರಂಗಿಗೆ ತಿರುಗಿ ಶೋಭಿಸುತ್ತಿತ್ತು. ರಾತ್ರಿರಾಣಿ ಗಿಡದಲ್ಲೆರಡು ಮೊಗ್ಗು ಈ ಸಂಜೆಗೆ ಅರಳುವ ತಯಾರಿ ನಡೆಸಿತ್ತು. ಇದ್ಯಾವುದರ ಪರಿವೆಯಿಲ್ಲದೆ ಮನೆಯ ಕೆಳಗಿನ ತೋಡು ತನ್ನಪಾಡಿಗೆ ತಾನು ಮೈದುಂಬಿ ಧೋ ಎಂದು ಹರಿಯುತ್ತಿತ್ತು. ಅಂಗಳದ ನೀರು ಮತ್ತು ತೋಡಿನ ನೀರಿನ 'ಧೋ..' ಶಬ್ದ ಬಿಟ್ಟರೆ ಮಳೆ ಬಂದದ್ದಕ್ಕೆ ಸಾಕ್ಷಿಯೇ ಇರದ ಹಾಗಿತ್ತು.

ಚಿನ್ನುವಿಗೆ ಈ ಸುಂದರ ಸಂಜೆಯ ವೈಭವ ಕಂಡು ತುಂಬಾ ಖುಷಿಯಾಯಿತು. ಮೀನುಗೂ ಸಿಕ್ಕಾಪಟ್ಟೆ ಖುಷಿಯಾಗಿ ಛಂಗನೆ ಜಿಗಿದು ಹೂಗಿಡಗಳ ನಡುವೆ ಓಡಿದಳು. ಅಲ್ಲಿ ಬಯ್ಯಮಲ್ಲಿಗೆ ಹೂಗಳ ಮೇಲೆ ಅವಾಗಷ್ಟೆ ಬಂದು ಕೂತಿದ್ದ ಹಳದಿ ಹಾತೆಯ ಹಿಂದೆ ಬಿದ್ದು ಬೆನ್ನಟ್ಟಿದಳು. ಅಂಗಳದಲ್ಲಿ ಹರಡಿದ ಮಳೆನೀರನ್ನು ಕಾಲಲ್ಲಿ ಚಿಮ್ಮುತ್ತ ಚಿನ್ನು ಹಿಂಬಾಲಿಸಿದಳು. ಅಜ್ಜ ಜಗಲಿಯಲ್ಲಿ ನಿಂತು ಇವರಾಟ ನೋಡುತ್ತಿದ್ದರು.

ಮೀನು ಎಲ್ಲಾಕಡೆ ಓಡಾಡಿದಳು. ದೊಡ್ಡದೊಡ್ಡ ರೆಕ್ಕೆಗಳಿದ್ದ ಆ ಹಳದಿ ಹಾತೆ ಅಲ್ಲಿದ್ದ ಎಲ್ಲ ಗಿಡಗಳ ಮೇಲೆ ಹೂಗಳ ಮೇಲೆ ಹಾರಿ ಹಾರಿ ಮೀನುವನ್ನು ಆಟವಾಡಿಸಿತು. ಕೊನೆಗೆ ಅಂಗಳದ ಬದಿಗೆ ಬೇಲಿಗಿಡವಾಗಿ ನೆಟ್ಟಿದ್ದ ಕ್ರೋಟನ್ ಗಿಡಗಳ ಕಡೆ ಹಾರಿತು. ಮೀನು ಕೂಡ ಅದರ ಜತೆಗೆ ಹಾರಿದಳು. ಚಿನ್ನುವೂ ಗಿಡಗಳ ನಡುವೆ ದಾರಿಮಾಡಿಕೊಂಡು ಅಲ್ಲಿಗೆ ತಲುಪಿದಳು.

ತೋಡಿನ ಬದಿಯಿಂದ ಮೇಲಕ್ಕೆ ಬೆಳೆದ ಸಂಪಿಗೆ ಮರದ ಕೊಂಬೆಯೊಂದು ಕ್ರೋಟನ್ ಗಿಡಕ್ಕೆ ತಾಗಿಕೊಂಡಂತೆ ಅಂಗಳಕ್ಕೆ ಇಣುಕಿತ್ತು. ಮಾಯಾಮೃಗದಂತಹ ಹಳದಿ ಹಾತೆ ಹಾರಿ ಹೋಗಿ ಸಂಪಿಗೆ ಮೊಗ್ಗಿನ ಮೇಲೆ ಕುಳಿತಿತು. ಮೀನು ಹಠ ಬಿಡದೆ ತಾನೂ ಹೋಗಿ ಸಂಪಿಗೆ ಗಿಡದ ಕಡೆಗೆ ಹಾರಿದಳು. ಹಾತೆ ಅಲ್ಲಿಂದಲೂ ಹಾರಿತು. ಅದನ್ನು ಹಿಡಿಯಲು ಮತ್ತೆ ಹಾರಿದ ಮೀನುಳ ಕೈಗೆ ಸಂಪಿಗೆ ಗಿಡದ ರೆಂಬೆಯೊಂದು ಆಧಾರವಾಗಿ ಸಿಕ್ಕಿ ಅದಕ್ಕೆ ನೇತಾಡಿದಳು. ರೆಂಬೆ ಅವಳ ಭಾರಕ್ಕೆ ಜಗ್ಗಿ ನೇರವಾಗಿ ಕೆಳಗಿದ್ದ ತೋಡಿನ ಮೇಲೆ ನೇತಾಡತೊಡಗಿತು. ಈಗ ಮೀನು ಏನಾದರೂ ಕೈಬಿಟ್ಟು ಹೋದರೆ ನೇರ ಕೆಳಗೆ ತೋಡಿಗೆ ಬೀಳುತ್ತಾಳೆ.

ಚಿನ್ನುವಿಗೆ ಕಳವಳವಾಯಿತು. ಮೀನು ಅದು ಹೇಗೆ ಈಚೆ ಬರುತ್ತಾಳೋ ಅಂತ ಗಡಿಬಿಡಿಯಲ್ಲಿ ಕ್ರೋಟನ್ ಗಿಡಗಳನ್ನು ದಾಟಿ ಹೋಗಿ ದರೆಯ ಬದಿಯಲ್ಲಿ ನಿಂತ ಚಿನ್ನು ನೇತಾಡುತ್ತಿದ್ದ ಮೀನುವನ್ನು ಕೈಗೆಟಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆಯೇ, ಕಾಲಕೆಳಗಿನ ಸಡಿಲ ಮಣ್ಣು ಜಾರಿ ಕುಸಿಯಿತು. ಕಾಲೂ ಜಾರಿತು. ಅಮ್ಮಾ ಎಂದು ಕಿರುಚುತ್ತ ದರೆಯ ಬದಿಯಲ್ಲಿ ಕೆಳಗಡೆ ಬೀಳುತ್ತಾ ಇದ್ದಾಗ ಚಿನ್ನುವಿನ ಕಣ್ಣಿಗೆ ಕಂಡಿದ್ದು ಮೇಲೆ ಸಂಪಿಗೆ ರೆಂಬೆಯಲ್ಲಿ ನೇತಾಡುತ್ತಿದ್ದ ಮೀನು, ಮತ್ತೆ ಹತ್ತಡಿ ಜಾರಿದಾಗ ಹತ್ತಿರವಾಗುತ್ತಿದ್ದ ಇಪ್ಪತ್ತಡಿ ಆಳದಲ್ಲಿ ರಭಸವಾಗಿ ಹರಿಯುತ್ತಿದ್ದ ತೋಡಿನ ಕೆಂಪುನೀರು.

ooooooooooooooooooooooooooooooo

ಅಮ್ಮಾ... ಅಂತ ನರಳುತ್ತ ಚಿನ್ನು ಕಣ್ಣುಬಿಟ್ಟಾಗ ಮೊದಲು ಕಂಡಿದ್ದು ಪಕ್ಕದಲ್ಲಿ ಕುಳಿತು ಕನ್ನಡಕವಿಟ್ಟು ಏನೋ ಪುಸ್ತಕ ಕೈಯಲ್ಲಿ ಹಿಡಿದಿದ್ದ ಅಜ್ಜ. ತಾನು ಮನೆಯೊಳಗಿನ ಬೆಡ್-ರೂಮಿನಲ್ಲಿ ಮೆತ್ತಗಿನ ಹಾಸಿಗೆಯ ಮೇಲೆ ಮಲಗಿದ್ದೇನೆ ಅಂತ ಅರಿವಾಯಿತು. ಅವಳು ಕಣ್ಣುಬಿಟ್ಟಿದ್ದು ಕಂಡ ಅಜ್ಜ 'ಎಚ್ರಾಯ್ತ ಚಿನ್ನೂ, ಮಾತಾಡ್ ಮಗಾ' ಅಂತ ಅವಳನ್ನು ಮಾತಾಡಿಸುವ ಪ್ರಯತ್ನ ಮಾಡುತ್ತಿದ್ದರು. ಮೈಕೈಯಲ್ಲ ಅಸಾಧ್ಯ ನೋವು, ತಡೆಯಲಾರದೆ ಚಿನ್ನು ಮುಲುಗಿದಳು. 'ಮುಗು ಕಣ್ ಬಿಟ್ಲ್ ಕಾಣ್ ' ಅನ್ನುತ್ತ ಅಜ್ಜ ಅಮ್ಮನನ್ನು ಕರೆದರು.

ಅಮ್ಮ ಬಂದವಳು ಚಿನ್ನುಗೆ ಮೆಲ್ಲಗೆ ಎಬ್ಬಿಸಿ ಕೂರಿಸಿದಳು. ಬಿಸಿ ಹಾಲು ಕುಡಿಸಿದಳು. ನೋವಿನಿಂದ ಮುಖ ಕಿವಿಚಿಕೊಳ್ಳುತ್ತಿದ್ದಂತೆಯೇ ಚಿನ್ನುವಿಗೆ ಥಟ್ಟಂತ ನೆನಪಾಯಿತು, ಮೀನು ಎಲ್ಲಿ? ತಾನು ಬಿದ್ದಿದ್ದು, ಬೀಳುತ್ತಾ ಮೀನು ಸಂಪಿಗೆ ರೆಂಬೆಗೆ ನೇತಾಡುತ್ತಿದ್ದಿದ್ದು ನೋಡಿದ್ದು ಎಲ್ಲಾ ನೆನಪಾಯಿತು. 'ಮೀನು ಎಲ್ಲಿದ್ಲಮ್ಮಾ' ಅಂತ ಕೇಳಿದಳು. 'ಆ ಹಾಳು ಪುಚ್ಚೆಂದಾಗಿಯೇ ಇಷ್ಟೆಲ್ಲಾ ಆದ್ದ್, ಇನ್ನೊಂದ್ ಸರ್ತಿ ಪುಚ್ಚೆ ಸಾವಾಸ ಮಾಡ್ರೆ ಕಾಣ್ ನಿಂಗೆ... ಅಜ್ಜ ಕಾಣದೇ ಇದ್ದಿದ್ರೆ, ಆಚಮನೆ ಅಣ್ಣ ತೋಡಿಗೆ ಹಾರಿ ನಿನ್ನ ಹಿಡ್ಕಣದೇ ಇದ್ದಿದ್ರೆ ಈಗ ಆಯಿಪ್ಪ್ ಕಥೆ ನಂಗೆ ಜನ್ಮಕ್ಕೆ ಅನುಭವಿಸ್-ಗೆ, ಮೀನು ಅಂಬ್ರ್ ಮೀನು' ಅಂತ ಕಣ್ಣೀರಿನ ಜತೆ ಕಾಳಜಿ ಸೇರಿಸಿ ಬೈಯುತ್ತ ಚಿನ್ನುಗೆ ಬ್ರೆಡ್ ತಿನಿಸತೊಡಗಿದಳು ಅಮ್ಮ.

ಹಂಗಾದ್ರೆ ಮೀನು ಏನಾದ್ಲು? ನೀರಿಗೆ ಬಿದ್ದುಹೋದ್ಲಾ? ಗೊತ್ತಾಗ್ಲಿಲ್ಲ ಚಿನ್ನುಗೆ. ಅಮ್ಮ ಅಳುತ್ತಿದ್ದಾಳೆ, ಸಹಸ್ರನಾಮಾರ್ಚನೆ ಮಾಡುತ್ತಿದ್ದಾಳೆ ವಿನಹ ಮೀನುಗೇನಾಯಿತು ಅಂತ ಹೇಳುತ್ತಿಲ್ಲ. ಕಲ್ಪಿಸಿಕೊಳ್ಳಹೊರಟರೆ, ಏನಾಗಿರಬಹುದು ಅಂತ? ಊಹೂಂ.. ಭಯವಾಯ್ತು ಚಿನ್ನುಗೆ. ದಿಕ್ಕುತೋಚದೆ ಚಿನ್ನು ಸುಮ್ಮನಾದಳು. ಅಮ್ಮ ಚಿನ್ನುವಿಗೆ ಮಾತ್ರೆ ತಿನಿಸಿ, ಮದ್ದು ಕುಡಿಸಿ ಮೈತುಂಬ ಹೊದಿಸಿ ಹೊರಗಡೆ ಹೋದಳು.

ಚಿನ್ನುವಿಗೆ ಹಾಗೇ ಮೆಲ್ಲನೆ ಮಂಪರು ಕವಿದು ನಿದ್ರೆ ಬರಲಾರಂಭಿಸಿತು. ಸ್ವಲ್ಪ ಸ್ವಲ್ಪವೇ ಮಂಪರಿಗೆ ಜಾರುತ್ತಿದ್ದ ಹಾಗೆ ಯಾರೋ ಪಕ್ಕದಲ್ಲಿ ಬಂದು ಆತ್ಮೀಯವಾಗಿ ಕೂತಂತೆ, ಪ್ರೀತಿಯಲ್ಲಿ ಮುಖ ಸವರಿದಂತೆ, ಮೈಯನ್ನೆಲ್ಲ ನೇವರಿಸಿದಂತೆನಿಸಿ ಚಿನ್ನು ಮೆಲ್ಲನೆ ಯಾರೆಂದು ಕಣ್ಣು ಬಿಟ್ಟು ನೋಡಿದರೆ... ಅಜ್ಜ ಚಿನ್ನುವಿನ ಒಂದು ಬದಿಗೆ ಕೂತು ಕನ್ನಡಕ ಕೈಯಲ್ಲಿ ಹಿಡಿದು ಸಂತೋಷವಾಗಿ ನಗುತ್ತಿದ್ದರು. ಇನ್ನೊಂದು ಬದಿ... ಹಾಸಿಗೆಯ ಮೇಲೆ ನಿಂತುಕೊಂಡು ತನ್ನ ತಲೆಯನ್ನು ಚಿನ್ನುವಿನ ಹೊದಿಕೆಗೆ ಜೋರಾಗಿ ಉಜ್ಜುತ್ತ ಗುಟುರ್ರ್.ರ್ರ್ ಅಂತ ಮೈಯೊಳಗಿಂದ ಸಂಗೀತ ಹೊರಡಿಸುತ್ತ ಚಿನ್ನುವಿನ ಹೊದಿಕೆಯೊಳಗೆ ಸೇರಿಕೊಳ್ಳುವ ಪ್ರಯತ್ನ ನಡೆಸಿದ್ದಳು, ತುಂಟಿ ಮೀನು... :) :) :)

Tuesday, July 17, 2007

ರೆಕ್ಕೆ ಇದ್ದರೂ ಹಕ್ಕಿ...


ಈ ಹಕ್ಕಿ ಏನು ಮಾಡುತ್ತಿದೆ?

ಹಕ್ಕಿ ವಿಶ್ರಮಿಸುತ್ತಿದೆ.
ಅಲ್ಲ, ಬರಲಿರುವ ಪ್ರೀತಿಯ ಒಡನಾಡಿಗಾಗಿ ಕಾಯುತ್ತಿದೆ.
ರೆಕ್ಕೆಯ ಬಲ ಕುಂದಿ ಶಕ್ತಿ ರಿಚಾರ್ಜ್ ಮಾಡಿಕೊಳ್ಳಲೆಂದು ಸುಮ್ಮನೆ ಕೂತಿದೆ.

ಆಟವಾಡಲು ಒಡಹುಟ್ಟುಗಳು ಬರಲೆಂದು ಕಾಯುತ್ತಿದೆ.
ಹೊರಗೆ ಹೋದ ಅಮ್ಮನಿಗೆ ಕಾಯುತ್ತಿದೆ.
ಪ್ರಿಯನ ಸಂದೇಶ ಒಪ್ಪಿಸಲು ಪ್ರಿಯತಮೆಗಾಗಿ ಕಾಯುತ್ತಿದೆ.
ಮಳೆ ಬರಲಿದೆಯಲ್ಲ, ನೆನೆದು ಹಾಡಲಿಕ್ಕಾಗಿ ಕಾದಿದೆ.

ಅಲ್ಲಲ್ಲ, ಮಳೆ ಬರಲಿದೆ, ಇನ್ನೇನಪ್ಪಾ ಅಂತ ಕಂಗಾಲಾಗಿ ಕೂತಿದೆ.
ಈ ಬಿಲ್ಡಿಂಗ್ ಎಷ್ಟು ಎತ್ತರವಪ್ಪಾ ಅಂತ ಆಶ್ಚರ್ಯಪಡುತ್ತಾ ಕೂತಿದೆ.
ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಸರಿಯಾದ ಸಮಯಕ್ಕಾಗಿ ಕಾದುಕೂತಿದೆ.

ಇದು ಪ್ರಸಿದ್ಧ ಜೊನಾಥನ್ ಸೀಗಲ್ ಥರಾ, ಹಾರುವ ಮುನ್ನ ಆಕಾಶದ ಉದ್ದಗಲ ಮನದಲ್ಲೇ ಅಳೆಯುತ್ತ ತನ್ನ ಹೋಂವರ್ಕ್ ಮಾಡುತ್ತ ಕೂತಿದೆ...

ಇಲ್ಲ, ಇದು ಹಿಚ್-ಕಾಕ್-ನ ಸಿನಿಮಾದಲ್ಲಿರುವ ಹಕ್ಕಿಗಳಂತೆ ಯಾರಿಗೋ ಹೋಗಿ ಕುಕ್ಕಲು ಕಾಯುತ್ತಿದೆ.
ಇದು ಯಾವುದೋ ಕಾಗೆಯ ಗೂಡಿನಲ್ಲಿ ಮೊಟ್ಟೆಯಿಟ್ಟು, ಹೊರಬರಲಿರುವ ಮರಿಗಾಗಿ ಕಾಯುತ್ತಿರುವ ಕೋಗಿಲೆ.
ಇದ್ಯಾವುದೂ ಅಲ್ಲ, ಸುಶ್ರುತನ ಚುಂಚು ಇದು, ಸುಶ್ರುತ ಬರ್ಲಿ, ವಾಕಿಂಗ್ ಹೋಗೋಣ ಅಂತ ಕಾಯ್ತಿದೆ. (ಜುಟ್ಟಿನ ರಿಬ್ಬನ್, ಹಣೆಯ ಮೇಲಿನ ಬಿಂದಿ, ಕಣ್ಣಹುಬ್ಬಿನ ಕಪ್ಪು, ಕೊಕ್ಕಿನ ಲಿಪ್-ಸ್ಟಿಕ್ ವಿವರವಾಗಿ ಕಾಣಿಸುವಷ್ಟು ಹತ್ತಿರ ನನ್ನ ಕ್ಯಾಮರಾ ಇರಲಿಲ್ಲ :) )

ಕಟ್ಟಿಕೊಳ್ಳಬಹುದಾದ, ಕಟ್ಟಿಕೊಡಬಹುದಾದ ಅರ್ಥಗಳು ನೂರಾರಿರುತ್ತವೆ.
ಆದರೆ, ಹಕ್ಕಿ ಮಾತ್ರ ತನ್ನದೇ ಆದ ಕಾರಣಕ್ಕೆ ಕೂತಿದೆ ಇಲ್ಲಿ.

----------------

ಅರ್ಥಗಳ ಹುಡುಕಾಟ ಸಾಕಾಗಿದೆ. ಹೈಗನ್ಸ್-ಬರ್ಗನ Uncertainty principle ನೆನಪಾಗುತ್ತಿದೆ.
ನಾವೇನು ಹುಡುಕುತ್ತೇವೋ ಅದೇ ಎಲ್ಲೆಲ್ಲೂ ಕಾಣಿಸುತ್ತದೆ.

ಅನರ್ಥಕೋಶ ಶ್ರೀಮಂತವಾಗುತ್ತಿದೆ.
ಅದರದೇ ಹುಡುಕಾಟ ಸಾಗಿರುವಾಗ ಮಾತು ಬರಿದಾಗುತ್ತದೆ. ಮೌನದ ಸಂಗ ಪ್ರಿಯವಾಗುತ್ತದೆ.

ದೂರ, ದೂರ ಹಾರಬೇಕಿದೆ ಹಕ್ಕಿ...
ಕಾಣುತ್ತಿರುವ ಬಾನಿನುದ್ದಗಲಕ್ಕೆ...
ತಿಳಿದಿರುವುದರಾಚೆಗೆ.
ಕಾಣುವುದರಾಚೆಗಿರುವ ಸ್ವಾತಂತ್ರ್ಯದ ಕಡೆಗೆ...
ಅನಂತವಾದ ಜೀವನಪ್ರೀತಿಯ ಕಡೆಗೆ.

ಆದರೆ...

ಜಬ್ ಕದಂ ಹೀ ಸಾಥ್ ನಾ ದೇ... ತೋ ಮುಸಾಫಿರ್ ಕ್ಯಾ ಕರೇಂ? ಅನ್ನುವಂತಾಗಿದೆ.
ಎಷ್ಟು ಹಾರಿದರೇನು, ಬಾನು ತುಂಬಿದ ಶೂನ್ಯವನ್ನು ಅಳೆಯಲಾಗುವುದೇ? ಅಥವಾ ತುಂಬಲಾಗುವುದೇ?
ರೆಕ್ಕೆಗಳು ಬಡಿಯುತ್ತ ಕಷ್ಟಪಟ್ಟು ಹಾರುವಾಗ ಹಕ್ಕಿ ಮನಸು ಸುಮ್ಮನಿರಬೇಕಿದೆ.
ಅಥವಾ ಹಕ್ಕಿ ಹಾರದೆ ಸುಮ್ಮನಿರಬೇಕಿದೆ.

----------------

ರೆಕ್ಕೆ ಇದ್ದರೆ ಸಾಕೆ, ಹಕ್ಕಿಗೆ ಬೇಕು ಬಾನು, ಮೇಲೆ ಹಾರೋಕೆ...

ಹಕ್ಕಿಗೆ ರೆಕ್ಕೆ ಇದೆ.
ಬಾನಿದ್ದರೂ ಇರದಂತಿದೆ.

ಬೆಳಕು ಇದೆ. ಮೋಡವಿದೆ.
ಕಾಣದ ಸಂಕಲೆಯ ಬಂಧವಿದೆ.
ಗಾಳಿ ಸುಮ್ಮನಿದೆ. ಮನಸು ಸುಮ್ಮನಿದೆ.
ಹಕ್ಕಿ ಸುಮ್ಮನಿದೆ. ಸುಮ್ಮನೆ ಕುಳಿತಿದೆ.

ಜೀವನ್ಮುಖಿ ಸೂರ್ಯ ಮೋಡ ಸೀಳಿ ಮತ್ತೆ ಹುಟ್ಟುವ ತನಕ.
ಚಳಿಬೆಳಗಿನ ಗಾಳಿ ಮತ್ತೆ ತಣ್ಣನೆ ಬೀಸಿ ಮನಸೋಕುವ ತನಕ.
ಬಂಧನ ಕಳಚಿ ಹಾರುವ ತವಕ ಮತ್ತೆ ಚಿಗುರುವ ತನಕ.
ರೆಕ್ಕೆಗಳು ಇಷ್ಟಪಟ್ಟು ತಾವಾಗಿ ಹಾರಲಿರುವ ಕ್ಷಣ ಮತ್ತೆ ಬರುವ ತನಕ.
ಮನದೊಳಗೆ ಮನೆ ಮಾಡಿ ಕಾಡಿದ ಹಕ್ಕಿ
ಮತ್ತೆ ಹಾರುವ ತನಕ ವಿಶ್ರಮಿಸುತ್ತದೆ.

ಜೋಗಿ ಹೇಳಿದಂತೆ - ಹೇಳದೆಯು ಇದ್ದಂತೆ...
ಇದು ಪೂರ್ಣವಿರಾಮವಲ್ಲ... 'ಕೋಮಾ'....

Monday, July 16, 2007

ಆರೋ ಬರೆದ ಚಿತ್ರಕ್ಕಾಗಿ...

ಆರೋ ಬರೆದ ಚಿತ್ರಕ್ಕೆ
ಬಣ್ಣ ತುಂಬುವ ಸಂಭ್ರಮದಲ್ಲಿ
ಎದೆಯೊಳಗಿನ ಕನಸಿನ ಬಣ್ಣ
ಖಾಲಿಯಾಗಿದ್ದು ಯಾವಾಗಲೋ
ಗೆರೆಗಳು ಮಾಸಿದ್ದು ಯಾವಾಗಲೋ

ಕನಸು ಬರಿದಾಗಿದ್ದು ಯಾವಾಗಲೋ

ತಿಳಿಯಲೇ ಇಲ್ಲ...

Saturday, July 7, 2007

ಒಂದು ಒಳ್ಳೇ ದಿವಸ...

ಇವತ್ತು 07-07-07 ಶನಿವಾರ, ವಾರದ 7ನೇ ದಿನ, ಸಪ್ತಮಿ - ಒಳ್ಳೇ ದಿವಸವಂತೆ, ಒಳ್ಳೇ ಕೆಲಸ ಮಾಡಬೇಕಂತೆ. ಮೂರು ದಿವಸದಿಂದ ಬೇರೆ ಬೇರೆಯವರು ಹೇಳುತ್ತಲೇ ಇದ್ದಾರೆ. ಮೆಸೇಜುಗಳು ಬರುತ್ತಲೇ ಇವೆ. ಒಳ್ಳೇ ಕೆಲಸ ಅಂದ್ರೇನು? ಅದು ಮಾಡ್ಲಿಕ್ಕೆ ಒಳ್ಳೇ ದಿವಸವೇ ಬೇಕಾ? ಇವತ್ತು ಯಾರಿಗೂ ಏನೂ ಕೆಟ್ಟದಾಗುವುದಿಲ್ಲ ಅಂತೇನು ಗ್ಯಾರಂಟಿ? ಹೀಗೆಲ್ಲ ನಿನ್ನೆ ರಾತ್ರಿ ಯೋಚಿಸುತ್ತ ಕುಳಿತಿದ್ದೆ.
ಇವತ್ತು ಎದ್ದಾಗ ಮತ್ತೆ ಯಾರದೋ ಮೆಸೇಜು. ನೋಡುತ್ತಿದ್ದ ಹಾಗೇ ನನ್ನಿಂದಾಗುವ ನಾನು ಒಳ್ಳೇದು ಅಂದ್ಕೊಳ್ಳುವ ಕೆಲಸಗಳನ್ನು ಇವತ್ತು ಒಳ್ಳೇ ದಿವಸ ಅನ್ನುವ ನೆಪದಲ್ಲಾದರೂ ಮಾಡಿಬಿಡೋಣ ಅಂತನಿಸಿತು. ಹಾಗೆ ಒಂದು ಸಲ ಅನಿಸುವುದಷ್ಟೇ ಮುಖ್ಯ, ಅನಿಸಿದ ಮೇಲೆ ಕಾರ್ಯರೂಪಕ್ಕೆ ತರುವುದೇನು ಕಷ್ಟವಲ್ಲ!


************

ಕೆಲ ಸಮಯದ ಹಿಂದೆ ನಮ್ಮ ಚಿನ್ನಿ ಜತೆ ಮಾತಾಡುತ್ತ ಕುಳಿತಿದ್ದೆ. ಅವನು ವಿಶ್ವಗೋಸಮ್ಮೇಳನಕ್ಕೆ ಹೋಗಿ ಅಲ್ಲಿಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದ. ಅದನ್ನು ನನಗೂ ಹಂಚುತ್ತಿದ್ದ. ಅಲ್ಲಿ ಏನೇನು ಇತ್ತು, ಹೇಗಿತ್ತು, ಗುರುಗಳು ಏನು ಮಾತಾಡಿದರು, ಬೇರೆಬೇರೆ ಸೆಲೆಬ್ರಿಟಿಗಳು ಏನು ಮಾಡಿದರು, ಯಾವ್ಯಾವ ರೀತಿಯ ದನ ಇತ್ತು, ಇತ್ಯಾದಿ ಇತ್ಯಾದಿ. ಜತೆಗೆ ಅಲ್ಲಿಯ ಪರಿಸರ ಹೇಗಿತ್ತು, ಸುತ್ತಮುತ್ತ ಹೇಗಿತ್ತು, ಅಲ್ಲಿ ಪಕ್ಕದ ಕಾಡು ಹೇಗಿದೆ -ಇತ್ಯಾದಿ ಕೂಡಾ.

ಕೊನೆಗೆ ಆತ ಕೇಳಿದ, 'ಅಕ್ಕಾ, ನಾನು ದೊಡ್ಡೋನಾದ್ಮೇಲೆ ಏನ್ಮಾಡ್ತೀನಿ ಗೊತ್ತಾ?'

'ಗೊತ್ತಿಲ್ಲ, ಏನ್ಮಾಡ್ತಿ?' - ನಾನು.

'ಯಾವ್ದಾದ್ರು ದೂರದ ಹಳ್ಳಿಯಲ್ಲಿ ಜಾಗ ತಗೊಂಡು ಮನೆ ಕಟ್ಟಿಸ್ತೀನಿ, ನಾನು ರಿಟೈರ್ಡ್ ಆದ್ಮೇಲೆ ಅಲ್ಲಿ ಹೋಗಿ ಬದುಕ್ತೀನಿ... ಅಲ್ಲಿ ಜನ ಜಾಸ್ತಿ ಇರಲ್ಲ, ಗಲಾಟೆ ಇರಲ್ಲ, ಸುತ್ತಲೂ ಹಸಿರಿರತ್ತೆ, ಚೆನ್ನಾಗಿರತ್ತೆ...'

11ರ ಪುಟ್ಟ ಪೋರನಿಗೆ ಎಷ್ಟು ದೂರದೃಷ್ಟಿ ಬೆಳೆದುಬಿಟ್ಟಿದೆ! ಇವಾಗ್ಲೇ ರಿಟೈರ್-ಮೆಂಟ್ ನಂತರ ಏನ್ಮಾಡ್ಬೇಕು ಅಂತ ಪ್ಲಾನ್! ನನಗೆ ಮೊದಲಿಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಆಮೇಲೆ ಅಂದೆ, 'ಸೂಪರ್ ಆಗಿದೆ ನಿನ್ ಐಡಿಯಾ. ನನ್ನೂ ಕರೀತೀಯ ತಾನೇ?'

ಏನಿಲ್ಲವೆಂದರೂ ಇನ್ನೂ 45 ವರ್ಷಗಳ ನಂತರದ ಮಾತು. ಅವಾಗ ಹಳ್ಳಿಗಳು ಹಳ್ಳಿಗಳಾಗಿ ಉಳಿದಿರುತ್ತವೆಯಾ? ಪಟ್ಟಣಗಳಲ್ಲಿ ಇರಲು ಜಾಗವಿಲ್ಲದೆ ಮಹಡಿಯ ಮೇಲೆ ಮಹಡಿ ಕಟ್ಟಿಸಿ ಅದರಲ್ಲಿ ಬದುಕುತ್ತಾರೆ. ಹೀಗೆ Vertical ಆಗಿ ಎಷ್ಟು ದಿನ ಪಟ್ಟಣಗಳು ಬೆಳೆಯಲು ಸಾಧ್ಯ? Horizontal ಆಗಿ ಬೆಳೆಯಲು ಇನ್ನು ಪಟ್ಟಣಗಳಲ್ಲಿ ಜಾಗವಿಲ್ಲವೆಂದ ಮೇಲೆ ಪಟ್ಟಣಗಳು ಹಳ್ಳಿ ಕಡೆ ಹಬ್ಬಲೇ ಬೇಕು, ಹಬ್ಬಿಯೇ ಹಬ್ಬುತ್ತವೆ. ಇವನ್ನೆಲ್ಲಾ ಅವನಿಗೆ ಹೇಳಿ, ಅವನಿಗೆ ಅರ್ಥವಾಗದೆ, ಈ ಅಕ್ಕ ಏನು ಹೀಗೆ ಮಾತಾಡ್ತಾಳೆ ಅಂತ ಅವನಿಗನಿಸುವುದು ಬೇಡವೆಂದುಕೊಂಡೆ.

ಜತೆಗೇ ಪೇಟೆಯಲ್ಲಿಯೇ ಹುಟ್ಟಿ ಪೇಟೆಯಲ್ಲೇ ಬೆಳೆದ, ಸಹಜವಾಗಿಯೇ ಹಳ್ಳಿಯೆಂದರೆ ಅಕ್ಕರೆಗಳಿರಲಾರದ 5ನೇ ಕ್ಲಾಸಿನ ಹುಡುಗನಲ್ಲಿ ಇಷ್ಟು ಯೋಚನೆಯನ್ನಾದರೂ ಹುಟ್ಟಿಸಲು ಶಕ್ತವಾದ ವಿಶ್ವ ಗೋಸಮ್ಮೇಳನಕ್ಕೆ ನಾನು ಮನಸಿನಲ್ಲಿಯೇ ಥ್ಯಾಂಕ್ಸ್ ಹೇಳಿದೆ.

************

ಭಾಗಮಂಡಲದಿಂದ ಬಂದ ನಮ್ಮ ಹುಡುಗಿಯೊಬ್ಬಳು ಮೊನ್ನೆ ಅಲ್ಲಿಯ ಮಳೆಯ ಕಥೆ ಹೇಳುತ್ತಿದ್ದರೆ, ಮೈಯೆಲ್ಲ ಕಿವಿಯಾಗಿ ಕೇಳುತ್ತಿದ್ದೆ. ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡು, ಕೇರಳ, ಪಾಂಡಿಚೆರಿ- ಹೀಗೆ ಮನಬಂದಲ್ಲಿ ಹರಿದು ಜಗಳ ಹುಟ್ಟಿಸಿದ ತುಂಟಿ ಕಾವೇರಿ ಹುಟ್ಟುವ ಆ ಜಾಗದಲ್ಲಿ ಈ ಸಲ ಮಳೆ ಹೆಚ್ಚಂತೆ. (ಮಳೆರಾಯನಿಗೂ ಸುಪ್ರೀಕೋರ್ಟ್ ತೀರ್ಪು, ಅದರಿಂದಾಗಿ ಆಗುತ್ತಿರುವ ಜಗಳ ಗೊತ್ತಾಗಿ ಕರುಣೆ ತೋರಿದ್ದಾನೇನೋ?) ಎಲ್ಲಿ ನೋಡಿದರೂ ನೀರೇ ನೀರಂತೆ. ಸಿಕ್ಕಾಪಟ್ಟೆ ಚಳಿಯಂತೆ. ವರ್ಷಕ್ಕೆ ಆರು ತಿಂಗಳು ಚಳಿಗೆ ಗಾಡಿಯ ಬ್ಯಾಟರಿ ಸತ್ತು ಹೋಗಿ ಗಾಡಿ ಸ್ಟಾರ್ಟ್ ಮಾಡಲು ಹರಸಾಹಸ ಪಡುತ್ತಾರಂತೆ.

ಹಳೇಕಾಲದ ಅವರ ಮನೆಯಲ್ಲಿ ಮಣ್ಣಿನಲ್ಲಿ ಮಾಡಿದ ಎರಡು ಅಂತಸ್ತು ಇವೆಯಂತೆ. ಒಂದರಲ್ಲಿರುವ ಕೋಣೆಗಳನ್ನು ಯಾರೂ ಉಪಯೋಗಿಸುವುದಿಲ್ಲವಂತೆ, ಇನ್ನೊಂದನ್ನು ಮಳೆಗಾಲದಲ್ಲಿ ಶಟಲ್ ಆಡಲು ಉಪಯೋಗಿಸುತ್ತಾರಂತೆ. ಅದರ ವಿಸ್ತಾರವೆಷ್ಟಿರಬಹುದು, ಹೇಗೆ ಕಟ್ಟಿರಬಹುದು, ಅದನ್ನೊಮ್ಮೆ ಕಣ್ಣಿಂದಾದರೂ ನೋಡಬೇಕಲ್ಲಾ ಅಂತೆಲ್ಲಾ ಯೋಚಿಸುತ್ತಿದ್ದೆ ನಾನು.

ಅಲ್ಲಿ ಕಾವೇರೀ ನದೀ ಪಾತ್ರದಲ್ಲಿ ಅವರಿಗೆ ಸೇರಿದ ಮಟ್ಟಸವಾದ ಬಯಲು ಜಾಗವಿದೆ, ಅದರ ಮೇಲೆ ಅವಾಗಲೇ ಯಾರ್ಯಾರದೋ ಕಣ್ಣು ಬಿದ್ದಿದೆಯಂತೆ. ಸ್ವಿಮ್ಮಿಂಗ್ ಪೂಲ್ ಮಾಡುತ್ತೇವೆ, ಅದನ್ನು ನಮಗೆ ಮಾರಿ ಅಂತ ಕೇಳುತ್ತಿದ್ದಾರಂತೆ. ಅವಳ ಅಪ್ಪ ಒಪ್ಪಿಲ್ಲವಂತೆ.

************

ವರ್ಷಗಳ ಹಿಂದೆ ನಮ್ಮೂರಲ್ಲಿ ಒಂದು ಮಲಯಾಳಂ ಸಿನಿಮಾದ ಶೂಟಿಂಗ್ ನಡೆದಿತ್ತು. ಸಿನಿಮಾದ ಹೆಸರು WAR AND LOVE. ನಮ್ಮೂರಿನ ಗುಂಪೆ ಗುಡ್ಡೆಯನ್ನು ಕಥೆಯಲ್ಲಿ ಕಾರ್ಗಿಲ್ ಸಮೀಪದ ಯಾವುದೋ ಬೆಟ್ಟವೆಂದು ತೆಗೆದುಕೊಂಡಿದ್ದರು. ಅಲ್ಲಿಯೇ ಶೂಟಿಂಗ್ ನಡೆಸಿದ್ದರು. ಒಂದು ವಾರ ಅಲ್ಲಿ ಶೂಟಿಂಗ್ ತಂಡ ಬೀಡುಬಿಟ್ಟಿತ್ತು. ಊರಿನಲ್ಲಿ ಚಿಳ್ಳೆಪಿಳ್ಳೆಗಳಿಂದ ಹಿಡಿದು ಮುದುಕರ ವರೆಗೆ ಎಲ್ಲರಿಗೂ ಸಂಭ್ರಮ, ಗುಂಪೆಗುಡ್ಡೆಲಿ ಸಿನ್ಮಾ ಶೂಟಿಂಗ್ ಆಗ್ತಿದೆ ಅಂತ. ಊರಿಗೆ ಊರೇ ದಿನಾ ಶೂಟಿಂಗ್ ನೋಡಲು ಗುಂಪೆಗುಡ್ಡೆಗೆ ಹೋಗುತ್ತಿತ್ತು. ಅಷ್ಟು ದೂರ ಹೋಗಲು ಆಗದವರು ಅಕ್ಕಪಕ್ಕದ ಗುಡ್ಡಗಳನ್ನೇರಿ ಚುಕ್ಕೆಯ ಹಾಗೆ ಕಾಣುವ ಮನುಷ್ಯರನ್ನೂ, ಅಲ್ಲಿದ್ದ ಕ್ರೇನ್ ಇತ್ಯಾದಿಗಳನ್ನೂ ನೋಡಿ ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ನಾನು ಊರಿಗೆ ಹೋಗಿದ್ದು ಶೂಟಿಂಗ್-ನ ಕೊನೆಯ ದಿನ. ಆದಿನ ಅದೇನ್ಮಾಡ್ತಾರೋ ನೋಡೋಣ ಅಂತ ನಾನೂ ಗುಂಪೆಗುಡ್ಡೆಗೆ ಹೋದೆ. ಕಥೆ ನೆನಪಿಲ್ಲ ನನಗೆ. ಬೆಂಕಿ ಹತ್ತಿಕೊಂಡು ಉರಿಯುವ ದೃಶ್ಯ, ಯಾರೋ ಯಾರನ್ನೋ ಉಳಿಸುವ ದೃಶ್ಯ ಇತ್ಯಾದಿಗಳ ಶೂಟಿಂಗ್ ನಡೆಯಿತು.

ಶೂಟಿಂಗ್ ಮುಗಿಸಿ ತಂಡ ಹೊರಟುಹೋದ ಮೇಲೆ ಗುಂಪೆ ಗುಡ್ಡೆ ಹೇಗಿತ್ತು ಅಂತೀರಾ? ಚಾ ಕುಡಿದು ಬಿಸಾಕಿದ ಪ್ಲಾಸ್ಟಿಕ್ ಲೋಟಗಳು, ಕೂಲ್ ಡ್ರಿಂಕ್ಸ್ ಬಾಟಲ್-ಗಳು, ಪ್ಲಾಸ್ಟರ್ ಆಫ್ ಪ್ಯಾರಿಸ್-ನಿಂದ ಮಾಡಿದ ಮಾಡೆಲ್ ಗೊಂಬೆಗಳು, ಥರ್ಮಾಕೋಲ್, ಬ್ರಾಂಡಿ, ವಿಸ್ಕಿ ರಂ ಬಾಟಲ್-ಗಳು, ಅರ್ಧಮರ್ಧ ಉರಿದ ಮರದ ದಿಮ್ಮಿಗಳು, ಮಸಿ ಮೆತ್ತಿಕೊಂಡ ಕಲ್ಲುಗಳು, ನಿಜವಾಗಿಯೂ ಅಲ್ಲಿ WAR ಕಾಣುತ್ತಿತ್ತು... ಮನುಷ್ಯನ ಮತ್ತೆ ಪ್ರಕೃತಿಯ ನಡುವೆ. ಪ್ರಕೃತಿ ಸ್ವಲ್ಪ ಘಾಸಿಗೊಂಡು ಬಿದ್ದ ಹಾಗಿತ್ತು.

ಆದರೆ ಪ್ರಕೃತಿ ಅದನ್ನೆಲ್ಲ ಮರೆತು ಮತ್ತೆ ಅರಳುತ್ತಾಳೆ. ಈಗ ನೋಡಿ, ಅದೇ ಗುಂಪೆಗುಡ್ಡೆ. ಮಳೆಗೆ ಚಿಗುರಿಸಿಕೊಂಡಿದೆ, ಹಸಿರಾಗಿದೆ. ಕೆಲ ದಿನಗಳ ಹಿಂದೆ ತೆಗೆದಿದ್ದು.





(ಚಿತ್ರಗಳನ್ನು ಉಪಯೋಗಿಸಲು ಅನುಮತಿಯಿತ್ತ ಮಹೇಶನಿಗೆ ಪ್ರೀತಿಯಿಂದ ಥ್ಯಾಂಕ್ಸ್)





(ಪ್ರಕೃತಿ ಎಲ್ಲಿಯವರೆಗೆ ಚೇತರಿಸಿಕೊಳ್ಳಲು ಸಾಧ್ಯ? ಆಗಿರುವ ಹಾನಿ ಮಿತಿಯಲ್ಲಿರುವವರೆಗೆ ಮಾತ್ರ. ಗುಂಪೆಗುಡ್ಡೆಗೆ ಅಥವಾ ಇನ್ಯಾವುದೇ ಪಸಿರು ಪರಿಸರದ ತಾಣಕ್ಕೆ ಜಾಗಕ್ಕೆ ಟ್ರೆಕ್ಕಿಂಗ್ ಹೋಗುವ ಮಿತ್ರರೆಲ್ಲರಿಗೂ ಒಂದು ಸಲಹೆ... ನಿಮ್ಮಿಂದಾಗಿ ಅಲ್ಲಿಯ ಪರಿಸರ, ಜನ ತೊಂದರೆಗೊಳಗಾಗದಂತೆ ಪ್ರಕೃತಿಯ ಚೆಲುವನ್ನು ಆನಂದಿಸಿ. ಪ್ಲಾಸ್ಟಿಕ್, ಗ್ಲಾಸ್, ರಬ್ಬರ್, ರಾಸಾಯನಿಕಗಳಿಂದ ಮಾಡಿದ ಇನ್ಯಾವುದೇ ವಸ್ತು ಇತ್ಯಾದಿಗಳು ಮಣ್ಣೊಳಗೆ ಸೇರಿಕೊಂಡರೆ, non-biodegradable ಆಗಿರುವ ಕಾರಣ ಅವು ವರ್ಷಾನುಗಟ್ಟಲೆ FOREIGN BODYಗಳಾಗಿ ಹಾಗೇ ಉಳಿದುಕೊಳ್ಳುತ್ತವೆ. ಹಾಗಾಗಿ ಅಂಥವುಗಳ ಕೊಡುಗೆ ಪರಿಸರಕ್ಕೆ, ಮಣ್ಣಿಗೆ ನಿಮ್ಮಿಂದ ಸಿಗದ ಹಾಗೆ ನೋಡಿಕೊಳ್ಳಿ. ನಿಮಗೆಲ್ಲ ಇದು ಗೊತ್ತಿರಲಾರದು ಅಂತಲ್ಲ, ಆದರೆ ಗೊತ್ತಿಲ್ಲದವರು, ಅಥವಾ ಇದರ ಬಗ್ಗೆ ಹೆಚ್ಚು ಯೋಚಿಸದವರೂ ಕೂಡಾ ಇರಬಹುದು ಅನ್ನುವುದಕ್ಕೋಸ್ಕರ ಈ ಮಾತು)

************

ಹಣ್ಣು, ತರಕಾರಿ, ಸೊಪ್ಪುಗಳನ್ನು ರೈತರಿಂದ ಪಡೆದುಕೊಂಡು ಸುಪರ್ ಮಾರ್ಕೆಟಿನಲ್ಲಿ ಮಾರುವ ರಿಲಯನ್ಸ್ ಫ್ರೆಷ್ ಕೇರಳದಲ್ಲಿ ತನ್ನ ಚಟುವಟಿಕೆಗಳನ್ನು ಹಬ್ಬಿಸದ ಹಾಗೆ ಕೇರಳ ಸರಕಾರ ತಡೆದ ಸುದ್ದಿಯ ಮೇಲೆ ಗೆಳತಿ ನನ್ನ ಗಮನ ಸೆಳೆದಳು. ಆಗ ಹೈದರಾಬಾದಿನಲ್ಲಿದ್ದಾಗ ನಾವೆಲ್ಲ ರೈತ ಬಜಾರಿಗೆ ಹೋಗಿ ತರಕಾರಿ ಕೊಳ್ಳುತ್ತಿದ್ದ ದಿನಗಳು ನೆನಪಾಯಿತು. ಆ ರೈತ ಬಜಾರಿನಲ್ಲಿ ಎಷ್ಟು ಗಮ್ಮತ್ತು ಗೊತ್ತಾ? ಸಂಜೆಹೊತ್ತು ನಾವೆಲ್ಲ ಪುಟ್ಟ ಪುಟ್ಟ ಗುಂಪು ಕಟ್ಟಿಕೊಂಡು ತಿರುಗಾಡಲೆಂದು ರೈತಬಜಾರಿಗೆ ಹೋಗುತ್ತಿದ್ದುದು... ಆ ಸಂತೆಗೆ ಬರುತ್ತಿದ್ದ ಚಿಗುರುತ್ತಿರುವ ಮಕ್ಕಳು, ಬದುಕಿನ ಸಂಜೆಯಲ್ಲಿದ್ದ ಮುದುಕರು, ಜವಾಬ್ದಾರಿ ಹೊತ್ತ ಹೆಂಗಸರು, ಹಣ್ಣಿನ ವ್ಯಾಪಾರಿಗಳು, ಬದುಕಿನ ಬವಣೆಗೆ ಒರಟಾದರೂ ಒಳ್ಳೆ ಹೃದಯದ ಮೋಸವರಿಯದ ರೈತರು... ತೆಲುಗು ಬಿಟ್ಟು ಬೇರೆ ಭಾಷೆ ಬರದ ಆ ರೈತರು ಮತ್ತು ತೆಲುಗು ಬಿಟ್ಟು ಬೇರೆಲ್ಲ ಭಾಷೆಗಳು ಗೊತ್ತಿದ್ದ ನಾವುಗಳು ಸಂವಹನ ಸಾಧಿಸಲು ಪಡುತ್ತಿದ್ದ ಸಾಹಸ, ಕೊನೆಗೂ ಹರಕು ಮುರುಕು ಉರ್ದುವಿನಲ್ಲಿ ಡೀಲ್ ಮಾಡಿ ಕಡಿಮೆ ಬೆಲೆಗೆ ತರಕಾರಿ ಕೊಳ್ಳುತ್ತಿದ್ದುದು...

ಹೈದರಾಬಾದಿನ ಗೆಳತಿಯೊಬ್ಬಳು ಇತ್ತೀಚೆಗೆ ಹೇಳುತ್ತಿದ್ದಳು, ಈಗ ಆ ರೈತಬಜಾರಿನೆದುರಿಗೇ ರಿಲಯನ್ಸ್ ಫ್ರೆಶ್ ಸುಪರ್ ಮಾರ್ಕೆಟ್ ಬಂದಿದೆಯಂತೆ. ರೈತ ಬಜಾರಿನಲ್ಲಿ ರೈತರು ಮಾರುವುದಕ್ಕಿಂತ ಕಡಿಮೆ ಬೆಲೆಗೆ ತರಕಾರಿ ಅವರು ಮಾರುತ್ತಾರಂತೆ. ಅದರ ಜತೆಗೆ SUPER MARKETನ AMBIENCE ಬೇರೆ ಇರುತ್ತದಲ್ಲ? SOPHISTICATED ಜನ ರೈತಬಜಾರಿಗೆ ಹೋಗುವುದು ನಿಲ್ಲಿಸಿ ರಿಲಯನ್ಸ್ ಫ್ರೆಶ್-ಗೇ ಹೋಗುತ್ತಿದ್ದಾರಂತೆ.

ನಾನು ಕೇರಳ ಸರಕಾರ ಒಳ್ಳೆಯದೇ ಮಾಡಿದೆ ಅಂದುಕೊಂಡೆ. ಈ ತಡೆ ಕೂಡ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ. ಕೇರಳ ಸರಕಾರ ರಿಲಯನ್ಸ್-ಗೆ ತಡೆಯೊಡ್ಡಿದ್ದು ಸರಿಯೇ ತಪ್ಪೇ ಅನ್ನುವುದರ ಬಗ್ಗೆ CNN IBNನಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆದಿತ್ತು. SMS POLL ನಲ್ಲಿ 70% ಜನ ತಡೆಯೊಡ್ಡಿದ್ದು ಸರಿಯಲ್ಲ ಅಂದಿದ್ದರು. ಎಷ್ಟು ಜನ SMS ಕಳಿಸಿದ್ದರು ಅನ್ನುವುದು ಗೊತ್ತಾಗಲಿಲ್ಲ.

************

ಮೊನ್ನೆ ಮೊನ್ನೆ ಎಲ್ಲಾ ಪತ್ರಿಕೆಗಳಲ್ಲಿ, ರಿಯಲ್ ಎಸ್ಟೇಟ್ ಕುರಿತ ವೆಬ್ಸೈಟ್-ಗಳಲ್ಲಿ, ಪಬ್ಲಿಕ್ ರಿಲೇಶನ್ ವೆಬ್-ಸೈಟ್-ಗಳಲ್ಲಿ - ಒಂದು ಮಹತ್ವದ ಸುದ್ದಿ. ರಿಯಲ್ ಎಸ್ಟೇಟಿಗೆಂದೇ ಒಂದು ಟಿವಿ ಚಾನೆಲ್ ಆರಂಭವಾಗುತ್ತದಂತೆ. ಭಾರತಕ್ಕೆ ಮೊತ್ತಮೊದಲನೆಯದಾದ ಈ ಚಾನೆಲ್ ರಿಯಲ್ ಎಸ್ಟೇಟ್ ಕುರಿತ ಎಲ್ಲಾ ಸುದ್ದಿಗಳನ್ನೂ ನೀಡುತ್ತದಂತೆ. 24 ಘಂಟೆ, 365 ದಿವಸ ತುಂಬಬೇಕು ಅವರು, ದೇಶದೆಲ್ಲಾ ಮೂಲೆಗೂ ಹೋಗಲಿದ್ದಾರೆ, unexplored ಜಾಗಗಳ ಬಗ್ಗೆ ಮಾಹಿತಿಯಂತೆ. ಟೂರಿಸ್ಟ್ ಸ್ಪಾಟ್-ಗಳ ಬಗ್ಗೆ, heritage homeಗಳ ಬಗ್ಗೆ, ಪರಿಸರದ ಬಗ್ಗೆ (:-]) ಮಾಹಿತಿಯಂತೆ.

ಇದಕ್ಕೆ ಜಾಹೀರಾತುಗಳ ಮಳೆಯೇ ಸುರಿಯಲಿದೆ, ಯಾಕಂದರೆ ಚಾನೆಲ್-ನ ಗುರಿ ಧನಿಕರು, ದುಡ್ಡಿರುವವರು, ಅಂದುಕೊಂಡದ್ದನ್ನು ಕ್ಷಣಮಾತ್ರದಲ್ಲಿ ಕೊಳ್ಳುವ ಶಕ್ತಿಯುಳ್ಳವರು ಮಾತ್ರ. ಚಾನೆಲ್ ಜತೆ ನಾವೂ ಅವರನ್ನು ಮುಟ್ಟೋಣ, ಅವರ ದುಡ್ಡಿನ ಪಾಲೊಂದು ತಮಗಿರಲಿ ಎಂದು ವಿವಿಧ ಬ್ರಾಂಡ್-ಗಳು ಆಶಿಸುವುದು ತಪ್ಪಲ್ಲ ಬಿಡಿ. ಅದು ಉಳ್ಳವರಿಂದ, ಉಳ್ಳವರಿಗಾಗಿ ಉಳ್ಳವರೇ ನಡೆಸುವ ಚಾನೆಲ್, ಉಳ್ಳವರುಳಿದು ಬೇರೆಲ್ಲರೂ ಅಲ್ಲಿ ಅಪ್ರಸ್ತುತ.

ಒಂದು ಕ್ಷೇತ್ರಕ್ಕೆ ಒಬ್ಬನೇ ರಾಜ ಸಾಧಾರಣವಾಗಿ ಈಗಿನ ಕಾಲದಲ್ಲಿ ಎಲ್ಲೂ ಇಲ್ಲ. ಇನ್ನೂ ಒಂದಷ್ಟು ಇದೇ ರೀತಿಯ ಚಾನೆಲ್-ಗಳು ಆರಂಭವಾಗಲಿಕ್ಕಿದೆ. ರಿಯಲ್ ಎಸ್ಟೇಟ್ ಕುರಿತ ಮಾಹಿತಿ ಮುಂದಿನ ದಿನಗಳಲ್ಲಿ ವೇಗವಾಗಿ ಹಬ್ಬಲಿದೆ, ಹಾಗೇ Suburban area ಮತ್ತು ಹಳ್ಳಿಗಳಲ್ಲಿ ಜಾಗಗಳ ಕೊಡು-ಕೊಳ್ಳುವಿಕೆ ಕೂಡಾ ಹಾಗೇ ಹೆಚ್ಚಲಿದೆ. ಮನೆಗಳು ಹೆಚ್ಚಲಿವೆ. Construction companyಗಳು, ಮತ್ತು ಇದಕ್ಕೆ ಸಂಬಂಧಿಸಿದ ಬೇರೆ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚಟುವಟಿಕೆ ಹೆಚ್ಚಲಿದೆ. ಈ ಬೆಳವಣಿಗೆಗೆ ಪೂರಕವಾಗಿ ಸೂಪರ್ ಮಾರ್ಕೆಟ್-ಗಳು, ಮಾಲ್-ಗಳು, ಐಷಾರಾಮದ ವಸ್ತುಗಳು ಮತ್ತಿತರ ಬಿಸಿನೆಸ್-ಗಳು ಹಳ್ಳಿಗಳಿಗೆ ಹಬ್ಬುವ ದಿನಗಳು ದೂರವಿಲ್ಲ.

ಅದೆಲ್ಲಾ ಹಾಗಿರಲಿ, ನಾನು ಮಾತ್ರ ನಮ್ಮ ಚಿನ್ನಿ 45 ವರ್ಷಗಳ ನಂತರ ಕೊಂಡುಕೊಳ್ಳಲಿಕ್ಕಿರುವ ದೂರದ ಹಳ್ಳಿಯಲ್ಲಿರುವ ಪರಿಸರದ ನಡುವಿರುವ ಗಲಾಟೆಯಿಲ್ಲದ ಶಾಂತ ಜಾಗ ಸಿಗಬಹುದೇ ಅಂತ ಯೋಚಿಸುತ್ತಿದ್ದೇನೆ. ಜಾಹೀರಾತು, ಮಾಧ್ಯಮ ಎಲ್ಲವೂ ಎಷ್ಟು ಹಾನಿ ಮಾಡಬಲ್ಲವು ಅಂತ ಗೊತ್ತಿದ್ದೂ ಅದರಲ್ಲೇ ಬದುಕಬೇಕಾದ ಅನಿವಾರ್ಯತೆ, ಮೋನೋಕಲ್ಚರ್ ಪರಿಸರಕ್ಕೆ ಕೆಟ್ಟದು ಅಂತ ಗೊತ್ತಿದ್ದೂ ಅದರ ಬಗ್ಗೆ ಸುಳ್ಳುಸುಳ್ಳೇ ಹೊಗಳಿ ಡಾಕ್ಯುಮೆಂಟರಿ ಮಾಡಬೇಕಾದ ನನ್ನ ಖರ್ಮ, ಎಲ್ಲಾ ಗೊತ್ತಿದ್ದೂ ಏನೂ ಮಾಡಲಾಗದ ಅಸಹಾಯಕತೆಗೆ ಮೌನ ಸಾಥಿಯಾಗಿದೆ.

*************

ಒಳ್ಳೇ ಕೆಲಸ ಅಂದ್ನಲ್ಲ, ನಮ್ಮನೆ ಎದುರು ಹೂವಿನ ಗಿಡದ ಚಟ್ಟಿ ಹಾಕುತ್ತಿದ್ದೇನೆ. ಮತ್ತು ಬಿಡಬ್ಲ್ಯುಎಸ್ ಎಸ್ ಬಿಯವರು ಪ್ರತಿ ಎರಡು ದಿವಸಕ್ಕೆ ಒಂದು ಸಲ ಮರೆಯದೇ ನೀರುಬಿಡುವ ಕೃಪೆ ತೋರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ.

*************

WORLD IS NOT WHAT WE INHERIT FROM OUR ANCESTORS, BUT WHAT WE BORROW FROM OUR CHILDREN...

Sunday, July 1, 2007

ಹುಡುಕಾಟ

ಕಾಡು ಕಪ್ಪಿತ್ತು, ಅದರಾಳ ಘನವಿತ್ತು
ಬೇಕಿರುವುದರ ಹುಡುಕಾಟದಲ್ಲಿ
ಹೊರಟಿದ್ದ ಬೇಟೆಗಾರನಿಗೆ
ಕಾಡಲ್ಲಡಗಿದ್ದರ ಸುಳಿವು ಸಿಕ್ಕಿತ್ತು

ಕಿವಿ ನಿಮಿರಿಸಿ ಕೇಳಿದ...
ಕಾಡಿನಾಳದ ಕತ್ತಲಲ್ಲಿ ಕಣ್ಣು ತೂರಿಸಿದ...
ಮೂಗುಹೊಳ್ಳೆಯರಳಿಸಿ ಅರಸಿದ...
ಪೊದೆಗಳನ್ನೆಲ್ಲ ಸರಿಸಿ ಹುಡುಕಿದ...

ಲೆಕ್ಕಹಾಕಿ ಎಲ್ಲೆಡೆ ಜಾಲಾಡಿದ ಬೇಟೆಗಾರನಿಗೆ
ಕೊನೆಗೂ ಅದು ಸಿಕ್ಕಿತ್ತು...
ತಿನ್ನಬೇಕಿರುವ ಚಿಗರೆಯ ಬದಲು
ಬೇಡವಾಗಿದ್ದ ದೈತ್ಯ ಬೆನ್ಹತ್ತಿ ಬಂದಿತ್ತು...

ಕೋರೆಹಲ್ಲುಗಳ, ಚೂಪಿನುಗುರುಗಳ,
ಹಸಿದ ದೈತ್ಯನಿಗೆ ಆಹಾರ ಕಂಡಿತ್ತು
ಅದು ಅವನನ್ನೇ ಬೇಟೆಯಾಡಹೊರಟಿತ್ತು,
ಈಗ ಅದನ್ನವನು ಕೊಲ್ಲಲೇಬೇಕಿತ್ತು!!!

Thursday, June 21, 2007

ನಾ ಕೊಂದ ಹೂವು

ನನ್ನ ಜತೆ ನಮ್ಮೂರಿಗೆ ಬರುತ್ತೇನೆಂದಿದ್ದೆಯಲ್ಲವೆ ಗೆಳತಿ... ಹಾಗೆ ಹೇಳಿ, ವರುಷಗಳ ಹಿಂದಿನ ಇಂಥದೇ ಒಂದು ನೆನಪನ್ನು ಕೆದಕಿದ್ದೀಯ... ಜೇನುಗೂಡಿಗೆ ಕಲ್ಲೆಸೆದಿದ್ದೀಯ. ನಿನಗೆ ಇದನ್ನು ಹೇಳಲೇಬೇಕು.

*************

ಗಂಗೋತ್ರಿಯ ಹಾಸ್ಟೆಲ್. ನನ್ನ ಮೊದಲದಿನ. ಹಿಂದಿನ ದಿನವಷ್ಟೇ ಸಾಮಾನುಸಮೇತ ಬಂದು ಗಂಗೋತ್ರಿಯ ಹಾಸ್ಟೆಲಿಗೆ ಸೇರಿಕೊಂಡಿದ್ದೇನೆ. ರೂಂಮೇಟ್ ಗಳ ಪರಿಚಯವಾಗಿದೆ. ಹೊಸ ಹಾಸ್ಟೆಲ್ ಬದುಕು ಆರಂಭವಾಗಿದೆ. ಕಳೆದ ಐದು ವರ್ಷಗಳಿಂದಲೂ ಹಾಸ್ಟೆಲ್-ನಲ್ಲೇ ಇದ್ದುಕೊಂಡು ಓದಿದ ನನಗೆ ಇದು just another hostel.

ಬೆಳಿಗ್ಗೆ ತಿಂಡಿಯ ಸಮಯ. ಡೈನಿಂಗ್ ಹಾಲ್-ನಲ್ಲಿ ನಾನು, ನನ್ನ ಹೊಸ ರೂಂಮೇಟ್-ಗಳಾದ ರೂಪ ಮತ್ತು ಸ್ವಾತಿ ಕುಳಿತುಕೊಂಡಿದ್ದೇವೆ. ಡೈನಿಂಗ್ ಹಾಲ್ ಭರ್ತಿಯಾಗಿದೆ. ನಮ್ಮ ಟೇಬಲ್-ನಲ್ಲಿ ನನ್ನೆದುರಿಗಿನ ನಾಲ್ಕನೇ ಕುರ್ಚಿ ಖಾಲಿಯಿದೆ. ನಮ್ಮ ಊರುಗಳ ಬಗ್ಗೆ, ಕಾಲೇಜು ಬದುಕಿನ ಬಗ್ಗೆ ಮಾತಾಡುತ್ತಾ ತಿಂಡಿ ತಿನ್ನುತ್ತಿದ್ದೆವು.

ನನ್ನ ಹಿಂದಿನಿಂದ Hi, can I sit here? ವಿನಯಭರಿತ ದನಿ ಕೇಳಿಸಿತು. ಹಿಂದೆ ತಿರುಗಿದರೆ ನಿಂತಿದ್ದಳಾಕೆ. ಒಂದು ಕೈಯಲ್ಲಿ ಚಹಾ, ಇನ್ನೊಂದು ಕೈಯಲ್ಲಿ ತಿಂಡಿಯ ತಟ್ಟೆ ಹಿಡಿದು. ಬಾಬ್ ಕಟ್ ಕೂದಲು. ಸ್ವಲ್ಪವೇ ಉಬ್ಬಿ ಎದುರು ಬಂದ ಹಲ್ಲುಗಳನ್ನು ಮುಂಬರದಂತೆ ತಡೆಯುತ್ತಿರುವ ಸ್ಪ್ರಿಂಗ್. ಕುತೂಹಲದ ಮುಗುಳ್ನಗು.

ನನ್ನೆದುರಿಗಿದ್ದ ರೂಪ Ofcourse ಅನ್ನುತ್ತ ಪರ್ಮಿಶನ್ ಕೊಟ್ಟಳು. ಖಾಲಿಯಿದ್ದ ಕುರ್ಚಿಯಲ್ಲಿ ಕೂತುಕೊಂಡು ಸೆಟಲ್ ಆಗುತ್ತ ಅವಳು ತನ್ನನ್ನು ತಾನು ಪರಿಚಯಿಸಿಕೊಂಡಳು - I'm Priya, doing my PG in Sociology... I come from Delhi, Can't understand Kannada...ಇತ್ಯಾದಿ. ನಾವೂ ನಮ್ಮನ್ನ ಪರಿಚಯಿಸಿಕೊಂಡೆವು. ಹಾಗೆ ನಮಗೆ ಆಕೆ ಹೊಸ ಒಡನಾಡಿಯಾದಳು.

ನಮ್ಮ ರೂಮಿನಿಂದ ಎರಡು ರೂಂಗಳಾಚೆಗಿದ್ದ ಆಕೆಯ ಕೋಣೆಯಲ್ಲಿ ಕನ್ನಡ ಎಂಎ ಮಾಡುವ ವಿದ್ಯಾರ್ಥಿನಿಯರಿದ್ದು, ಅವರ ನಡುವೆ ಭಾಷೆ ಗೋಡೆಯಾಗಿ ನಿಂತಿತ್ತು. ಆಕೆ ತನ್ನ ರೂಂಮೇಟ್-ಗಳಿಗಿಂತ ಹೆಚ್ಚಾಗಿ ನಮ್ಮ ಜತೆ ಒಗ್ಗಿಕೊಂಡಳು. ದಿನದಿನದ ಕಥೆಗಳು, ಜೋಕುಗಳು, ನಗೆಚಾಟಿಕೆಗಳು - ಎಲ್ಲವೂ ಹಂಚಿಕೆಯಾದವು. ಹೊಸತನದ ಬೆಸುಗೆಗೆ ಸೇತುವೆಯಾದವು.

***********

ಭಾನುವಾರ ಬಂತು. ರೂಪ, ಸ್ವಾತಿ ಇಬ್ಬರೂ ಮಲಗಿದ್ದರೆ, ನಾನು ಚಹಾ ತೆಗೆದುಕೊಂಡು ಬರೋಣವೆಂದು ಡೈನಿಂಗ್ ಹಾಲಿಗೆ ಹೋದೆ. ಟೀವಿ ಹಚ್ಚಿತ್ತು. ಟೀವಿಯಲ್ಲಿ ಡಿಸ್ಕವರಿ ಚಾನೆಲ್ ಹಾಕಿದ್ದರು. ಅದ್ಯಾವುದೋ ದೇಶದಲ್ಲಿ ತಮ್ಮ ಮೂಲ ವಾಸಸ್ಥಳವನ್ನು ಬಿಟ್ಟು ಹೊರಹೋಗಲೊಲ್ಲದ ಬುಡಕಟ್ಟು ಜನಾಂಗದವರ ಮೇಲೆ ಸಾಕ್ಷ್ಯಚಿತ್ರ ಬರುತ್ತಿತ್ತು. ಮೊನ್ನೆ ಮೊನ್ನೆಯಷ್ಟೆ ಅಭಿವೃದ್ಧಿ ಪತ್ರಿಕೋದ್ಯಮವೆಂದರೇನು, ಅದು ಹೇಗಿರಬೇಕು ಎನ್ನುವುದರ ಬಗ್ಗೆ ಪ್ರೊಫೆಸರ್ ತರಗತಿಯಲ್ಲಿ ಹೇಳುತ್ತಿದ್ದಾಗ ಮನಸಿಟ್ಟು ಕೇಳಿಕೊಂಡಿದ್ದೆ. ಈ ಸಾಕ್ಷ್ಯಚಿತ್ರ ಅವರು ಹೇಳಿದ ಮಾತುಗಳಿಗೆಲ್ಲ ನೇರ ಸಂಬಂಧವುಳ್ಳದ್ದಾಗಿ ಕಂಡು ನಾನು ಚಹಾ ಕುಡಿಯುತ್ತಾ ನೋಡುತ್ತಾ ಕುಳಿತೆ.

Oh, you are here? ಪ್ರಿಯಾ ದನಿ ಕೇಳಿ ಹಿಂತಿರುಗಿದೆ. ನಮ್ಮ ಕೋಣೆಗೆ ಹೋಗಿದ್ದಳಂತೆ, ಅವರಿಬ್ಬರು ಮಲಗಿದ್ದರಂತೆ, ನಾನೂ ಕಾಣಲಿಲ್ಲವಾದ್ದರಿಂದ ಒಬ್ಬಳೇ ಡೈನಿಂಗ್ ಹಾಲಿಗೆ ಬಂದಳಂತೆ. ಯಾಕಷ್ಟು ಆಸಕ್ತಿಯಿಂದ ಸಾಕ್ಷ್ಯಚಿತ್ರ ನೋಡುತ್ತಿದ್ದೀಯೆಂದು ಪ್ರಶ್ನಿಸಿದಳು. ಹೇಳಿದೆ. ಅವಳೂ ಅಭಿವೃದ್ಧಿ ಪತ್ರಿಕೋದ್ಯಮದ ಬಗ್ಗೆ ಮೊದಲ ಬಾರಿಗೆ ಕೇಳಿದ್ದಳು. ಹೊಸ ವಿಷಯವೊಂದು ತಿಳಿದುಕೊಂಡ ಹಿಗ್ಗು, ಅವಳಿಗೆ ತಿಳಿಸಿದವಳ ಮೇಲೆ ತಣಿಯದ ಕುತೂಹಲಕ್ಕೆ ಕಾರಣವಾಯಿತು.

ಹಾಗೇ ನನ್ನ ಹಿನ್ನೆಲೆ ಕೇಳಿದಳು. 'I can't believe you are a Brahmin...' ಆಶ್ಚರ್ಯದಿಂದ ಉದ್ಗರಿಸಿದಳು. 'ಜಾತಿಯ ಬಗ್ಗೆ ಯಾಕಷ್ಟು ಯೋಚನೆ ಮಾಡ್ತೀಯ, ಆ ಕಾಲ ಎಂದೋ ಹೋಯ್ತು, ಈಗೇನಿದ್ರೂ ನಾವು ಏನಾಗಿದ್ದೇವೆ ಅನ್ನುವುದಷ್ಟೆ ಮುಖ್ಯ' ಅಂದೆ. ಬಸವಣ್ಣ 'ಜ್ಯೋತಿ ಯಾವ ಜಾತಿಯಮ್ಮ' ಅಂದಿದ್ದು ನೆನಪಾಯಿತು, ಅದನ್ನೂ ಹೇಳಿದೆ.

ಅವಳು ನನ್ನ ಬಗ್ಗೆ ಇನ್ನಷ್ಟು ಗೌರವ ತುಂಬಿಕೊಂಡಳು. ತನ್ನ ಜಗತ್ತಿಗೆ ನನ್ನನ್ನು ಸ್ವಾಗತಿಸಿದಳು. ಆಂಧ್ರದ ರಾಯಲಸೀಮೆಯ ಯಾವುದೋ ಹಳ್ಳಿಗೆ ಸೇರಿದ ತನ್ನ ದಲಿತ ಹಿನ್ನೆಲೆಯ ಬಗ್ಗೆ, ಆ ಹಳ್ಳಿಯಲ್ಲಿ ದಲಿತರು ಅನುಭವಿಸುವ ಕಷ್ಟಗಳ ಬಗ್ಗೆ, ಅವಳ ಈ ಹಿಂದಿನ ಹಾಸ್ಟೆಲ್ ಬದುಕಿನ ಬಗ್ಗೆ, ದೆಹಲಿಯಲ್ಲಿ ಸಮಾಜಶಾಸ್ತ್ರದ ಅಧ್ಯಾಪಕರಾಗಿರುವ ಅಕ್ಕ-ಭಾವನ ಬಗ್ಗೆ, ಅವರ ಪ್ರೇಮವಿವಾಹದ ಬಗ್ಗೆ, ದೆಹಲಿಯಲ್ಲಿ ಕಳೆದ ದಿನಗಳ ಬಗ್ಗೆ, ಐಎಎಸ್ ಅಧಿಕಾರಿಯಾಗಬೇಕೆನ್ನುವ ತನ್ನ ಬಯಕೆಯ ಬಗ್ಗೆ - ಹೀಗೇ ಸಾವಿರ ವಿಷಯಗಳನ್ನು ಹಂಚಿಕೊಂಡಳು. ಅವಳ ಜಗತ್ತನ್ನು ಅರ್ಥ ಮಾಡಿಕೊಳ್ಳುವ ಹಂಬಲ ನನ್ನಲ್ಲೂ ಹುಟ್ಟಿತು. ಅವಳ ಮಾತುಗಳಿಗೆ ಕಿವಿಯಾಗುತ್ತಿದ್ದೆ.

ನನ್ನ ಬಗ್ಗೆ ಕೇಳಿದಳು. ಹೇಳಿಕೊಂಡೆ. ಪಕ್ಕಾ ಸಂಪ್ರದಾಯಸ್ತ ಮನೆತನದ ಬಗ್ಗೆ, ನಿಯಮಗಳನ್ನು ಮುರಿಯುವ ನನ್ನ ತುಂಟತನದ ಬಗ್ಗೆ. ಯಾರೇ ಗೆಳತಿಯರ, ಗೆಳೆಯರ ಅಥವಾ ಗುರುಗಳ ಹೆಸರು ನಾನು ಮಾತಾಡುವಾಗ ನುಸುಳಿದರೂ ಅವರು ಯಾವ ಜಾತಿಯೆಂದು ಕಳಕಳಿಯಿಂದ ಕೇಳುವ ಅಮ್ಮನ ಬಗ್ಗೆ, ಮನುಷ್ಯ ಜಾತಿ ಎನ್ನುವ ನನ್ನ ಧಿಮಾಕಿನ ಉತ್ತರದ ಬಗ್ಗೆ. ನಮ್ಮನೆಗೆ ಕೆಲಸಕ್ಕೆ ಬರುವ ಲಚ್ಚಿಮಿಯ ಬಗ್ಗೆ, ನಮ್ಮನೆಯ ಎದುರಿನ ಗುಡ್ಡದಾಚೆಗೆ ಗುಡಿಸಲು ಕಟ್ಟಿಕೊಂಡು ಬುಟ್ಟಿ ನೇಯ್ದು ಬದುಕುವ ಐತ ಮತ್ತು ತುಕ್ರುವಿನ ಬಗ್ಗೆ. ನಮ್ಮ ತೋಟದಲ್ಲಿ ಅಜ್ಜ ಮಲೆನಾಡಿನಿಂದ ತಂದು ನೆಟ್ಟ ಏಲಕ್ಕಿಯ ಬಗ್ಗೆ, ಏಲಕ್ಕಿ ಹೂವರಳುತ್ತಿದ್ದಂತೆಯೇ ಅದನ್ನು ಕಾಯಾಗಲು ಬಿಡದೆ ಬಂದು ತಿನ್ನುವ ಕೇರೆಹಾವಿನ ಬಗ್ಗೆ. ಮಳೆಗಾಲ ಶುರುವಾಗಿ ಕೆಲದಿನಕ್ಕೆ ಅರಳುವ ವಿಶೇಷ ಹೂವುಗಳಾದ ರಾತ್ರಿರಾಣಿ ಮತ್ತು ಕೇನೆಹೂಗಳ ಬಗ್ಗೆ, ಬೇರೆ ಹೂಗಳಿಗಿಂತ ಅವು ಹೇಗೆ ಭಿನ್ನವೆಂಬುದರ ಬಗ್ಗೆ. ಅವಳ ಕಣ್ಣಿಗೆ ಕಟ್ಟುವಂತೆ ನಾ ವಿವರಿಸುತ್ತಿದ್ದರೆ, ಅಕ್ಷರವೂ ಬಿಡದೆ ಅವಳು ಕೇಳಿಕೊಳ್ಳುವಳು.

ಹಾಗೇ ಚರ್ಚೆಗಳು. ನರ್ಮದಾ ಬಚಾವೋ ಆಂದೋಲನದ ಬಗ್ಗೆ. ದಕ್ಷಿಣ ಕನ್ನಡವೆಲ್ಲ ಒಮ್ಮೆ ಹೊಗೆಯೆಬ್ಬಿಸಿ ತಣ್ಣಗಾದ ಎಂ.ಆರ್.ಪಿ.ಎಲ್ ಪೈಪ್ಲೈನ್ ವಿವಾದ ಬಗ್ಗೆ, ಇನ್ನೂ ಹೊಗೆಯುಗುಳುತ್ತ ಪರಿಸರವನ್ನು ನುಂಗುತ್ತಿರುವ ಎಂ.ಆರ್.ಪಿ.ಎಲ್ ಬಗ್ಗೆ. ಅಭಿವೃದ್ಧಿಯ ಬಗ್ಗೆ. ಸಾಮಾನ್ಯ ಮನುಷ್ಯನ ಬಗ್ಗೆ. ಬುದ್ಧಿಜೀವಿಗಳ ಬಗ್ಗೆ. ಗಾಂಧೀಜಿಯ ಬಗ್ಗೆ. ಕೇರಳದಲ್ಲಿ ಅವಾಗಷ್ಟೆ ಕಾಲಿಟ್ಟಿದ್ದ ಡಿ.ಪಿ.ಇ.ಪಿ.ವಿದ್ಯಾಭ್ಯಾಸ ಪದ್ಧತಿಯ ಬಗ್ಗೆ. ಮಂಗಳೂರಿನ ಪೀತಪತ್ರಿಕೆಗಳ ಬಗ್ಗೆ. ಸಾಮಾಜಿಕ ಜವಾಬ್ದಾರಿರಹಿತ ಜರ್ನಲಿಸ್ಟ್-ಗಳ ಬಗ್ಗೆ. ಮುಗಿಯದ ಕಾಸರಗೋಡು ಗಡಿವಿವಾದದ ಬಗ್ಗೆ. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಉಗ್ರವಾಗಿ ಹೋರಾಡಿ, ಅದಕ್ಕಾಗಿ ಮರಣಶಯ್ಯೆಯಲ್ಲೂ ಹಂಬಲಿಸಿದ ನನ್ನಜ್ಜನ ಬಗ್ಗೆ. ಕಾಸರಗೋಡು ಕೇರಳದಲ್ಲೇ ಇರಬೇಕೆಂಬ, ಯಾರೂ ಒಪ್ಪಲು ಸಿದ್ಧವಿಲ್ಲದ ನನ್ನ ವಾದದ ಬಗ್ಗೆ.

ಆಂಧ್ರದಲ್ಲಿ ತಾಂಡವವಾಡುತ್ತಿದ್ದ, ಅವಾಗಷ್ಟೆ ಚಿಕ್ಕಮಗಳೂರು ಕಡೆ ಸುದ್ದಿ ಶುರು ಮಾಡಿದ್ದ ನಕ್ಸಲಿಸಂ ಬಗ್ಗೆ. ನನ್ನೂರಲ್ಲಿ ಕಾಲಕ್ರಮೇಣ ತೋಟಗಳಾಗಿ ಮಾರ್ಪಟ್ಟ ಭತ್ತದ ಗದ್ದೆಗಳ ಬಗ್ಗೆ. ಗ್ಲೋಬಲೈಸೇಶನ್ ಬಗ್ಗೆ. ವ್ಯಾಪಾರಿ ಪತ್ರಿಕೋದ್ಯಮದಿಂದ ಮತ್ತು ತನ್ನ ಬ್ರಿಗೇಡ್ ರೋಡ್ ಲ್ಯಾಂಗ್ವೇಜ್-ನಿಂದ ಮಾಧ್ಯಮಜಗತ್ತನ್ನೇ ಹಾಳುಮಾಡುತ್ತಿರುವ ಟೈಮ್ಸ್ ಆಫ್ ಇಂಡಿಯಾದ ಬಗ್ಗೆ. ಸಾಯಿನಾಥರ ಅಭಿವೃದ್ಧಿ ಪತ್ರಿಕೋದ್ಯಮ ಲೇಖನಗಳ ಬಗ್ಗೆ. ಕಿರಣ್ ಬೇಡಿಯ ಬಗ್ಗೆ. ಸಮಾಜದ ಮತ್ತು ಮಾಧ್ಯಮದ ಭವಿಷ್ಯದ ಬಗ್ಗೆ. ದಲಿತ ಸಂಘರ್ಷದ ಬಗ್ಗೆ.

***********

ವಾರಾಂತ್ಯಕ್ಕೆ ರಜೆ ಸಿಕ್ಕಿದಾಗ ಮನೆಗೆ ಹೋಗುತ್ತಿದ್ದೆ. ಅಮ್ಮ ಕಟ್ಟಿಕೊಡುವ ಹಲಸಿನಕಾಯಿ ಚಿಪ್ಸ್, ತೆಂಗಿನಕಾಯಿ ಹೋಳಿಗೆ, ಉಪ್ಪಿನಕಾಯಿ ಚಟ್ನಿಪುಡಿ ಇತ್ಯಾದಿಗಳು ಹೊತ್ತುತರುತ್ತಿದ್ದೆ. ಸ್ವಾತಿ, ರೂಪಾಗೆ ಇವು ಹೊಸದಲ್ಲ, ಆದರೆ ಪ್ರಿಯಾ ಮಾತ್ರ ಇವನ್ನೆಲ್ಲ ತಿನ್ನುವುದು ಬಿಡು, ಕಂಡುಕೇಳರಿಯಳು. ಅದರ ರುಚಿಗೆ ಮಾರುಹೋಗಿದ್ದಳು. ಹೇಗೆ ಮಾಡುವುದೆಂದು ಕೇಳಿದಳು. ಗೊತ್ತಿದ್ದದ್ದು ಹೇಳಿದೆ. ಗೊತ್ತಿಲ್ಲದ್ದು ನಮ್ಮನೆಗೆ ಹೋದಾಗ ಅಮ್ಮನ ಕೈಯಲ್ಲಿ ಹೇಳಿಸಿಕೊಳ್ಳೋಣವೆಂದೆ.

ಹುಟ್ಟಿದ ಮೇಲೆ ಸಮುದ್ರ ಕಂಡಿಲ್ಲದ ಪ್ರಿಯಾಗೆ ಸುರತ್ಕಲ್-ನ ಇಡ್ಯದ ಬೀಚಿಗೆ ಕರೆದುಕೊಂಡುಹೋಗಿ ಸಮುದ್ರ, ಬೀಚ್ ತೋರಿಸಿದೆ. ಬೀಚ್-ನಲ್ಲಿ ಕೂತು ಶೆಟ್ಟಿ ಐಸ್ಕ್ರೀಂ ತಿಂದೆವು. ವಾಪಸ್ ಬರುವಾಗ ಬೈಕಂಪಾಡಿಯ ಸಂಕದ ಮೇಲಿಂದ ಕತ್ತಲಲ್ಲಿ ಹೊತ್ತಿ ಉರಿಯುತ್ತಿದ್ದ ಎಂ.ಆರ್.ಪಿ.ಎಲ್. ಬೆಂಕಿ ಮತ್ತು ಹೊಗೆ ತೋರಿಸಿದೆ.

ನನ್ನ – ಪ್ರಿಯಾಳ ಗೆಳೆತನ ಆರಂಭವಾಗಿ ಎರಡು ತಿಂಗಳು ಕಳೆದಿತ್ತು. ಒಂದು ದಿನ ಪ್ರಿಯಾಗೆ ನನ್ನ ಜತೆ ನನ್ನ ಮನೆಗೆ ಬರಬೇಕೆಂದು ತುಂಬಾ ಅನಿಸಿಬಿಟ್ಟಿತು. ನನ್ನ ಅನುಭವಗಳ ಭಾವಧಾಮಕ್ಕೆ ಪಯಣಿಸಿ ನಾನು ಬದುಕಿದ ಬದುಕನ್ನು ಸವಿಯಬೇಕೆಂಬ ಅವಳ ಹಂಬಲ ನನಗೂ ಇಷ್ಟವಾಯಿತು. ಅಮ್ಮನಿಗೆ ಫೋನ್ ಮಾಡಿ ಹೇಳಿದೆ, ನನ್ನ ಗೆಳತಿಯನ್ನು ಕರೆದುಕೊಂಡು ಬರುತ್ತಿದ್ದೇನೆಂದು. ಅಮ್ಮ ಎಂದಿನಂತೆ ಜಾತಿಯ ಬಗ್ಗೆ ಕಾಳಜಿಯಿಂದ ಕೇಳಿದರೆ ನಾನು ಹೇಳದೆಯೆ ಎಂದಿನಂತೆ ಉಡಾಫೆಯಿಂದ ಮಾತು ಹಾರಿಸಿದೆ. ನಾನು, ಪ್ರಿಯಾ ಒಂದು ಶುಕ್ರವಾರ ಸಂಜೆ ನಮ್ಮನೆಗೆ ಹೊರಟೆವು.

ದಾರಿಯುದ್ದಕ್ಕೂ ಪ್ರಿಯಾಗೆ ನನ್ನ ವಿವರಣೆಗಳು. ಬಸ್ಸು ರಾಷ್ಟ್ರೀಯ ಹೆದ್ದಾರಿ ಬಿಟ್ಟು ನಮ್ಮೂರಿಗೆ ಹೋಗುವ ಒಳದಾರಿ ಹಿಡಿಯುತ್ತಿದ್ದಂತೆಯೇ ಪುಟ್ಟ ಪುಟ್ಟ ಹಸಿರು ಗುಡ್ಡಗಳ ನಡುವೆ ಹಾವಿನಂತೆ ಹರಿದ ಕಪ್ಪು ಟಾರುರೋಡು, ಎತ್ತ ನೋಡಿದರೂ ಹಸಿರನ್ನೇ ಹೊದ್ದು ಮಲಗಿದ ಊರು, ಭಯ ಹುಟ್ಟಿಸುವಷ್ಟು ಕಡಿದಾದ ಒಂದೆರಡು ತಿರುವುಗಳು, ಸಣ್ಣಗೆ ಜಿನುಗುತ್ತಿದ್ದ ಮಳೆ, ಕೆಂಪು ಮಣ್ಣಿನೊಳಗಿಂದ ಅವಾಗಷ್ಟೆ ಎದ್ದು ತೆವಳುವ ಕೆಂಪು ದೇವರ ಹುಳ, ಒದ್ದೆ ಒದ್ದೆ ಗಾಳಿ - ಎಲ್ಲವೂ ಹಸಿರು ಕಾಣದ, ಕಡಲತೀರದ ಮಳೆಯ ಸವಿಯರಿಯದ ಪ್ರಿಯಾಗೆ ಹೊಸದು. ಅವಳು ಅನಿರ್ವಚನೀಯ ಭಾವದ ಭಾರದಿಂದ ಕಂಗೆಟ್ಟರೆ, ನಾನು ಧನ್ಯತಾಭಾವದಿಂದ ಬೀಗಿದೆ.

ನನ್ನೊಡನೆ ಮನೆಯೊಳಗೆ ಕಾಲಿಟ್ಟ ಪ್ರಿಯಾಳನ್ನು ಅಮ್ಮ – ಅಪ್ಪ ಸ್ವಾಗತಿಸಿದರು. ಅಪ್ಪ ಅಷ್ಟಾಗಿ ಜಾತಿಯ ಬಗ್ಗೆ ತಲೆಕೆಡಿಸಿಕೊಳ್ಳುವವರಲ್ಲವಾಗಿ ಆರಾಮಾಗಿ ಪ್ರಿಯಾ ಜತೆ ಇಂಗ್ಲಿಷಿನಲ್ಲಿ, ಹಿಂದಿಯಲ್ಲಿ ಮಾತಾಡಿದರು. (ಅಮ್ಮ ಜಾತಿಯ ಬಗ್ಗೆ ತಲೆಕೆಡಿಸಿಕೊಳ್ಳುವಾಗಲೆಲ್ಲ ಅಪ್ಪ ತಾವು ಮಡಪ್ಪಾಡಿಯಲ್ಲಿದ್ದಾಗ ದಿನಾ ಮುಸಲ್ಮಾನ ಅಡಿಗೆ ಭಟ್ಟನ ಕೈರುಚಿ ತಿನ್ನುತ್ತಿದ್ದಿದ್ದು, ಆಮೂಲಕ ತನಗೂ ಜಾತಿಯಿಲ್ಲದಾಗಿರುವುದು ಹೇಳಿ ಅಮ್ಮನಿಗೆ ರೇಗಿಸುತ್ತಾರೆ)

ಅಮ್ಮ ಒಳಗೊಳಗೆಯೇ ಗೊಣಗಿಕೊಂಡಳು, 'ಯಾವ ಜಾತಿಯೋ ಏನೋ, ನಾಳೆ ಅಶುದ್ಧ-ಗಿಶುದ್ಧ ಆಗಿ ನಾಗ ಬಂದಮೇಲೆ ಗೊಂತಕ್ಕು... ಆರಿಂಗೆಂತ, ಅನುಭವಿಸೂದು ಇಲ್ಲಿಪ್ಪೋರಲ್ದಾ...' ಪ್ರಿಯಾ ಅವರೇನು ಹೇಳುತ್ತಿದ್ದಾರೆಂದು ಕೇಳಿದಳು, ನಾನು ಸಾಕು ಇನ್ನು ಸುತ್ತಾಡಬೇಡ, ಅವಳಿಗೆ ಸುಸ್ತಾಗಿರುತ್ತದೆ, ರೆಸ್ಟ್ ತೆಗೆದುಕೊಳ್ಳಲು ಬಿಡು ಅನ್ನುತ್ತಿದ್ದಾರೆ ಅಂದೆ. ಅವಳು ನನಗೇನು ಸುಸ್ತಾಗಿಲ್ಲ ಆಂಟೀ ಅಂತ ಅಮ್ಮನಿಗೆ ಇಂಗ್ಲಿಷಿನಲ್ಲಿ ಹೇಳಿ ನಕ್ಕಳು. ಇಂಗ್ಲಿಷ್ ಅರ್ಥವಾಗದಿದ್ದರೂ ಅಮ್ಮ ನಗಲೇ ಬೇಕಾಯಿತು.

ಪ್ರಿಯಾ ನನ್ನೊಡನೆ ಮನೆಯಿಡೀ ಸುತ್ತಾಡಿದಳು. ಅಟ್ಟದಲ್ಲಿ ಕಟ್ಟಿಟ್ಟಿದ್ದ ನನ್ನಜ್ಜ ಕಾಸರಗೋಡು ಹೋರಾಟಕಾಲದಲ್ಲಿ ಉಪಯೋಗಿಸುತ್ತಿದ್ದ ಮೈಕು, ಹಳೆಯ ಪುಸ್ತಕಗಳನ್ನಿಟ್ಟ ಮಸಿಹಿಡಿದ ಬೆತ್ತದ ಪೆಟ್ಟಿಗೆಯಿಂದ ಹಿಡಿದು ಅನೇಕಾನೇಕ ವಸ್ತುಗಳನ್ನು ತೋರಿಸಿದೆ. ಮಣ್ಣಿನಿಂದಲೇ ಕಟ್ಟಿದ ಮನೆಯ ಎರಡಂತಸ್ತುಗಳನ್ನು ಕಂಡು ಜಗತ್ತಿನ ಯಾವುದೋ ಅದ್ಭುತ ವಾಸ್ತುವನ್ನು ನೋಡಿದಂತೆ ರೋಮಾಂಚನಗೊಂಡಳು ಆಕೆ. (ಈಗ ಗೊತ್ತಾಗಿದೆ ನನಗೆ, ರಾಯಲಸೀಮೆಯಲ್ಲಿ ಆಕೆ ಹುಟ್ಟಿದ್ದು ಮಾತ್ರ, ಅಲ್ಲಿಯ ಬದುಕು ಆಕೆಗೆ ನಿಜವಾಗಿ ಗೊತ್ತಿರಲಿಲ್ಲ ಅಂತ. ಯಾಕೆಂದರೆ, ಆಂಧ್ರದಲ್ಲಿ ಮಣ್ಣಿನಲ್ಲಿಯೇ ಕಟ್ಟಿದ ಮನೆಗಳು ಅತಿಸಾಮಾನ್ಯ.)

ಅದೇನು ಇದೇನು ಅನ್ನುತ್ತ ಸಾವಿರ ಪ್ರಶ್ನೆಗಳೆಸೆಯವ ಪ್ರಿಯಾಳ ಕುತೂಹಲವನ್ನು ಸಮರ್ಪಕವಾದ ಉತ್ತರಗಳಿಂದ ತಣಿಸುತ್ತಿದ್ದೆ ನಾನು. ಎಲ್ಲ ಕಡೆ ಸುತ್ತಾಡಿ ಕೊನೆಗೆ ದೇವರಮನೆಗೆ ಬಂದೆವು. ದೇವರ ಮಂಟಪದೊಳಗೆ ಸಾಲಿಗ್ರಾಮ ಮತ್ತಿತರ ದೇವರುಗಳನ್ನು ಸಣ್ಣ ತಾಮ್ರದ ತೆರೆದ ಪೆಟ್ಟಿಗೆಯೊಳಗೆ ಹಾಕಿ ಇಟ್ಟಿರುತ್ತಾರೆ. ಕಟೀಲು ದುರ್ಗಾಪರಮೇಶ್ವರಿ, ಪಂಚಲಿಂಗೇಶ್ವರ, ಮಹಾಲಿಂಗೇಶ್ವರ ಇತ್ಯಾದಿ ದೇವರ ಫೋಟೋಗಳನ್ನೂ ಕಟ್ಟುಹಾಕಿ ಮಂಟಪದೊಳಗಿಟ್ಟಿದ್ದಾರೆ. ಇದರ ವೈಭವವನ್ನು ಪ್ರಿಯಾ ನೋಡುತ್ತಿದ್ದರೆ, ಅಮ್ಮ ಅಡಿಗೆಗೆ ಸಹಾಯಕ್ಕೆಂದು ಕರೆದಳು, ನಾನು ಈಗ ಬಂದೆ ಎಂದು ಪ್ರಿಯಾಗೆ ಹೇಳಿ ಅಡಿಗೆಮನೆಗೆ ಹೋದೆ.


ಅಮ್ಮನಿಗೆ ಸಣ್ಣ ಪುಟ್ಟ ಸಹಾಯಗಳನ್ನು ಮಾಡಿ ಆರೇಳು ನಿಮಿಷಗಳಲ್ಲಿ ವಾಪಸ್ ಬಂದಾಗ ನಾನು ಕಂಡಿದ್ದೇನು... ಪೆಟ್ಟಿಗೆಯೊಳಗಿನ ದೇವರು ಪ್ರಿಯಾಳ ಕೈಯಲ್ಲಿತ್ತು. ದೇವರನ್ನಲಂಕರಿಸಿದ್ದ ರುದ್ರಾಕ್ಷಿ ಸರವನ್ನು ತನ್ನ ಕುತ್ತಿಗೆಗೆ ಧರಿಸಿ ಕನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದಳು ಪ್ರಿಯಾ.

ನನಗೆ ಮನಸಿನ ಅದ್ಯಾವುದೋ ಮೂಲೆಯಲ್ಲಿ ವಿಚಿತ್ರ ಸಂಕಟ ಹುಟ್ಟಿಕೊಂಡಂತೆ ಅನಿಸಿತು. ಯಾಕೆ, ಏನು - ಒಂದೂ ಗೊತ್ತಾಗಲಿಲ್ಲ. ನಾನು ಆ ಮನೆಯಲ್ಲಿ ಬದುಕಿದ 20 ವರ್ಷಗಳಲ್ಲಿ ಇಲ್ಲಿಯವರೆಗೆ ನಾನೇ ನಮ್ಮನೆ ದೇವರನ್ನು, ರುದ್ರಾಕ್ಷಿಯನ್ನು - ಯಾವುದನ್ನೂ ಮುಟ್ಟಿರಲಿಲ್ಲ. ನನಗೆ ಅವುಗಳನ್ನು ಮುಟ್ಟಲು ಅವಕಾಶಗಳಿತ್ತು, ಆದರೆ ಬುದ್ಧಿಪೂರ್ವಕವಾಗಿಯೇ ಮುಟ್ಟಿರಲಿಲ್ಲ. ಅದಕ್ಕಾಗಿ ಅವಳು ಅದನ್ನು ಮುಟ್ಟಿದ್ದು ಅಸಹನೀಯವಾಯಿತೆ...? ಇಂದಿಗೂ ಗೊತ್ತಿಲ್ಲ ನನಗೆ.

ಊಟಕ್ಕೆ ಕರೆದೆ ಅವಳಿಗೆ. ಎಲ್ಲ ದೇವರನ್ನೂ ಪೆಟ್ಟಿಗೆಯೊಳಗಿಡುವ ಬದಲು ಮಂಟಪದೊಳಗೆ ಅವಳು ಇಟ್ಟು ಬಂದದ್ದು ನನ್ನ ಅಸಹನೆಯ ಕಿಡಿಗೆ ಗಾಳಿಯೂದಿತು.

ಊಟ ಮಾಡುವಾಗ ನನ್ನ-ಅವಳ ನಡುವಿನ ಅಂತರ ನಿಚ್ಚಳವಾಗುತ್ತ ಹೋಯಿತು. ನೀಟಾಗಿ, ಕ್ರಮಪ್ರಕಾರವಾಗಿ ಬಡಿಸಿಕೊಂಡು ಊಟಮಾಡುವ ನಾನು. ಮೊದಲು ಕಂಡಿದ್ದನ್ನು, ಕುತೂಹಲ ಹುಟ್ಟಿಸಿದ್ದನ್ನು ಮೊದಲು ತಿನ್ನುವ ಅವಳು. ನಿಯಮಗಳು ಗೊತ್ತಿದ್ದೂ ಮುರಿಯುವ ನಾನು, ಗೊತ್ತಿಲ್ಲದೆ ಮುರಿಯುವ ಅವಳು. ನನಗೆ ಅವಳು-ನಾನು ಒಂದೇ ಎನ್ನುವ ಭ್ರಮೆಯಿರಲಿಲ್ಲವಾದರೂ, ನನಗೆ ಇಷ್ಟವಾಗದ ರೀತಿಯ ಭಿನ್ನತೆಗಳು ನನ್ನ-ಅವಳ ನಡುವೆ ಇರಬಹುದೆಂಬ, ಇದೆಯೆಂಬ ಸತ್ಯ ನನ್ನ ಅನುಭವದ ಕಡಲಿಗೆ ಅವಳು ಬಂದಾಗ ಹೊಸದಾಗಿ ಹುಟ್ಟಿಕೊಂಡಿತ್ತು.

ಹಾಸಿಗೆ ಹಾಕಿ ಮಲಗಿಕೊಂಡೆವು. ಅವಳು ಮಾತಿಗೆಳೆಯಲು ನೋಡಿದರೆ, ನನಗೆ ಮಾತು ಬೇಕಿರಲಿಲ್ಲ. 'ಸುಸ್ತು, ಮಲ್ಕೋ, ನಾಳೆ ಮಾತಾಡೋಣ' ಅಂದೆ. ಅವಳಿಗೆ ಸುಸ್ತಾಗಿತ್ತು. ಬೇಗನೆ ನಿದ್ದೆ ಹೋದಳು... ನಾನು ನನ್ನ ಅಂತಃಸತ್ವದ ಜತೆ ಮಾತಾಡತೊಡಗಿದೆ. ಅವಳಿಗೆ ನಾನು ನಂಬಿಕೆಗರ್ಹ ಗೆಳತಿಯೆಂದು ಅನಿಸುವ ಹಾಗೆ ನಾನು ನಡೆದುಕೊಂಡಿದ್ದು ನನಗೆ ನಾನು ಮಾಡಿಕೊಂಡ ಮೋಸವಾಗಿ ಮಾರ್ಪಟ್ಟಿತ್ತು. ಇಂದಿನವರೆಗೆ ಚೆನ್ನಾಗಿದ್ದ ಬಾಂಧವ್ಯಕ್ಕೆ ನನ್ನ ಮನೆಯ ಆವರಣದಲ್ಲಿ ಹುಳಿ ಬೆರೆತಿತ್ತು. ಹೇಗೆ... ಯಾಕೆ... ಇದು ನಾನು ಮಾಡುತ್ತಿರುವ ತಪ್ಪಲ್ಲವೆ... ಅಥವಾ ಇದು ಕ್ಷಣಿಕವಾಗಿ ನನ್ನ ಮನದಲ್ಲಿ ಹುಟ್ಟಿಕೊಂಡ ದೆವ್ವವಿರಬಹುದೆ...ನಾಳೆ ಎಲ್ಲ ಸರಿಯಾದೀತೆ... ಸರಿಯಾಗಬೇಕಲ್ವಾ... ಕೊರೆವ ಸಾವಿರ ಪ್ರಶ್ನೆಗಳ, ಹೊಳೆಯುವ ಸಾವಿರ ಉತ್ತರಗಳ ನಡುವೆ ನಿದ್ದೆ ಯಾವಾಗ ಬಂತೋ ತಿಳಿಯಲಿಲ್ಲ.

***************

'ಉಠೋ ಯಾರ್, enough sleeping...' ಪ್ರಿಯಾ ಪ್ರೀತಿಯಲ್ಲಿಯೇ ಗದರುತ್ತ ಎಬ್ಬಿಸಿದಾಗ ನಿದ್ದೆಯಿನ್ನೂ ಸಿಹಿಸಿಹಿಯಾಗಿತ್ತು. ಸಮಯ ಇನ್ನೂ ಬೆಳಿಗ್ಗೆ 5.45 ಅಷ್ಟೇ. ಅಯ್ಯೋ ಇಷ್ಟು ಬೇಗ ಎದ್ದೇನು ಮಾಡೋಣ ಅಂತ ಮತ್ತೆ ಮಲಗಹೊರಟೆ. 'U had told me that we will go for a morning walk...' ನೆನಪಿಸಿದಳು. ಹೌದಲ್ಲಾ, ನಾನೇ ಹೇಳಿದ್ದೆ ಅವಳಿಗೆ. ಸೋಮಾರಿಯಂತೆ ಬಿದ್ದುಕೊಳ್ಳುವ ಅವಕಾಶಕ್ಕೆ ಕೈಯಾರ ಕಲ್ಲುಹಾಕಿಕೊಂಡಿದ್ದಕ್ಕೆ ನನಗೆ ನಾನೇ ಬೈದುಕೊಳ್ಳುತ್ತ ಎದ್ದೆ. ಮಳೆಯೂ ಕೈಕೊಟ್ಟಿದ್ದಳು, ಅವಳಾದರೂ ಬಂದಿದ್ದರೆ ಹೊರಗೆ ಹೋಗುವ ಮಾತೇ ಇರಲಿಲ್ಲ.

ಅಮ್ಮ ಕೊಟ್ಟ ಚಹಾ ಉರ್ಪಿ, ಪ್ರಿಯಾಳ ಕ್ಯಾಮರಾ ಜತೆಯಲ್ಲಿ ತೆಗೆದುಕೊಂಡು ನಮ್ಮನೆಯ ಹಿಂದಿನ ಉಕ್ಕುಡ ಗುಡ್ಡೆಗೆ ವಾಕಿಂಗ್ ಹೊರಟೆವು. ಮನೆಯಿಂದ ಮೇಲೆ ಸ್ವಲ್ಪ ಕಡಿದಾದ ದಾರಿಯಲ್ಲಿ ಮೇಲೆ ಹತ್ತುತ್ತಿದ್ದಂತೆಯೇ ಕೆಳಗಿದ್ದ ನಮ್ಮ ಪುಟ್ಟ ಊರು ಮಳೆಹೊಗೆಯಿಂದ ಆವೃತವಾಗಿತ್ತು. ಮನಮೋಹಕ ದೃಶ್ಯವಿಲಾಸ ನಮ್ಮಿಬ್ಬರನ್ನೂ ಮುದಗೊಳಿಸಿತು.

ಅರ್ಧದಾರಿ ಕ್ರಮಿಸಿದಾಗ ಪಂಜಿಕಲ್ಲು ಸಿಗುತ್ತದೆ. ಆಮೇಲೆ ಉಕ್ಕುಡ ಗುಡ್ಡೆಗೆ ಕ್ರಮಿಸುವ ದಾರಿ ಇನ್ನಷ್ಟು ಕಡಿದಾಗಿದೆ. ನಾವು ಪಂಜಿಕಲ್ಲಿನಲ್ಲಿರುವಾಗ ಸೂರ್ಯ ಅವಾಗಷ್ಟೇ ಮೇಲೆಬರುತ್ತಿದ್ದ. ಹಂಗೇ ಒಂದಷ್ಟು ಫೋಟೋಗಳು ಕ್ಲಿಕ್ಕಿಸಿದ್ದಾಯಿತು. ನಮ್ಮ ಗುರಿ ಉಕ್ಕುಡಗುಡ್ಡೆಯ ತುದಿಯಾಗಿದ್ದು, ಅದೂ ಇದೂ ಮಾತಾಡುತ್ತ ಮುಂದೆ ಸಾಗಿದೆವು.

ಹೀಗೆ ಐದು ನಿಮಿಷಗಳು ಕಳೆದಿರಬಹುದು. ಪುಟ್ಟ ಕಣಿವೆಯೊಂದು ಎದುರಾಯಿತು. ಚಿಕ್ಕಂದಿನಿಂದಲೂ ಸಾವಿರ ಸಲ ಈ ಗುಡ್ಡ ಹತ್ತಿದ್ದೆ ನಾನು. ಸಲೀಸಾಗಿ ಹಾರಿ ದಾಟಿಹೋದೆ. ಪ್ರಿಯಾಗೆ ದಾಟಲಾಗಲಿಲ್ಲ. ಹಾರುವಾಗ ಬಿದ್ದರೆ ಎಂದು ಹೆದರಿದಳು.

ಅಷ್ಟೆ. ಮತ್ತೆ ಹೆಡೆಯೆತ್ತಿತ್ತು ಮನದೊಳಡಗಿದ್ದ ಮರೆತ ಹಾವು... ಕಾಲೇಜಿನಲ್ಲಿ ಓದುತ್ತಿದ್ದಾಗ ತಾನು ಯೂನಿವರ್ಸಿಟಿ ಲಾಂಗ್ ಜಂಪ್ ಚಾಂಪಿಯನ್ ಆಗಿದ್ದೆ ಅನ್ನುತ್ತಿದ್ದಳು. ನಿಜಜೀವನದಲ್ಲಿ ಅದು ಉಪಯೋಗಕ್ಕೆ ಬರಲಿಲ್ಲವೆ...? ತನ್ನ ಬಗ್ಗೆ ತಾನು ಹೇಳಿಕೊಳ್ಳುವಾಗ ಅತಿಶಯೋಕ್ತಿ ನುಸುಳಿತ್ತೆ... ಅಥವಾ ಅದು ನನ್ನನ್ನು ಇಂಪ್ರೆಸ್ ಮಾಡುತ್ತದೆಂದುಕೊಂಡು ಸುಳ್ಳು ಹೇಳಿದಳೆ... ಅಥವಾ ಈ ಕ್ಷಣದ ಭಯವೆ... ಇವೆಲ್ಲದರಲ್ಲಿ ಯಾವುದೇ ಆದರೂ ಅವು ನನಗಿಷ್ಟವಾದವುಗಳಲ್ಲ... ನನ್ನ ಒಡನಾಡಿಗಳಲ್ಲಿ ನಾನು ಬಯಸುವ ಗುಣಗಳಲ್ಲ.

*******************

ಆಮೇಲೆ ಆದಿನ, ಮರುದಿನ ಇಡೀ ಜತೆಗಿದ್ದೆವು. ನನ್ನೊಳಗಿನ ಬದಲಾವಣೆ ಅವಳಿಗೆ ಗೊತ್ತಾಗಲಿಲ್ಲ. ಬೇರೇನೋ ಬೇಸರದಲ್ಲಿರಬೇಕು ನಾನು ಎಂದುಕೊಂಡಳು, ನನ್ನನ್ನು ತಪ್ಪುತಿಳಿದುಕೊಳ್ಳುವಂಥವಳಲ್ಲ ಪಾಪದ ಹುಡುಗಿ, ಸರಿಯಾಗಿ ತಿಳಿದುಕೊಳ್ಳುವಲ್ಲಿ ವಿಫಲಳಾಗಿದ್ದಳು. ನಾನು ನನ್ನೊಳಗೆ ಹೆಡೆಯೆತ್ತಿದ ಅಸಮಾಧಾನವನ್ನು, ನಿರಾಸೆಯನ್ನು ಕೊಲ್ಲಲು ಹೆಣಗುತ್ತಿದ್ದೆ.

ಕೇನೆಹೂವು ಹುಡುಕಿ ತೋರಿಸಿದರೆ ಮುಖ ಸಿಂಡರಿಸಿಕೊಂಡಳು. ಇಷ್ಟು ಚಂದದ ಹೂವಿಗೆ ಇಷ್ಟು ಕೊಳಕು ವಾಸನೆ ಯಾಕಿರಬಹುದು ಅಂತ ಪ್ರಶ್ನಿಸಿದಳು. ಬಹುಶಃ ಪ್ರಕೃತಿ ಒದಗಿಸಿದ ಪ್ರೊಟೆಕ್ಷನ್ ಮೆಕ್ಯಾನಿಸಂ ಇರಬಹುದೆಂದು ನಾನಂದರೆ, ಇರಬಹುದು ಎಂದು ಒಪ್ಪಿಕೊಂಡಳು. ನನಗೆ ಇರಲಿಕ್ಕಿಲ್ಲ ಎಂದು ವಾದಿಸುವವರು ಬೇಕಿತ್ತು. ಹೀಗೂ ಇರಬಹುದು ಅಂತ ಇನ್ನೊಂದು ದೃಷ್ಟಿಕೋನದತ್ತ ನನ್ನ ಗಮನಸೆಳೆಯುವವರು ಬೇಕಿತ್ತು. ಇವೆಲ್ಲ ಈ ಹಿಂದೆ ಯಾಕೆ ನನಗೆ ಕಾಣಲಿಲ್ಲ...

ಗುಡ್ಡೆ ಗುಡ್ಡೆ ಅಲೆದಾಡುತ್ತಿದ್ದಾಗ ನಾಟಿ ಸಾರಾಯಿ ತಯಾರು ಮಾಡಲಿಕ್ಕೆಂದು ಮಣ್ಣಿನ ಮಡಕೆಯಲ್ಲಿಟ್ಟು ಯಾವುದೋ ಕಣಿಯಲ್ಲಿ ಅಡಗಿಸಿಟ್ಟಿದ್ದ ಗೋಂಕು (ಗೇರುಹಣ್ಣಿನ ರಸ) ನನ್ನ ಕಣ್ಣಿಗೆ ಬಿತ್ತು. ಅದೇನೆಂದು ಅವಳಿಗೆ ವಿವರಿಸಿದೆ. ಅದೇನೋ ಉದ್ವೇಗ ಅವಳಲ್ಲಿ ಕಂಡಿತು. ಅವಳ ಹಿರಿಯರೂ ಇದನ್ನೇ ಮಾಡುತ್ತಿದ್ದರಂತೆ, ಅದರ ವೀರಕಥೆ ನನಗೆ ಹೇಳಿದಳು.

ಅವಳು ಹೇಳಿ ಮುಗಿಸುವುದನ್ನೇ ಕಾದಿದ್ದೆ. ದಲಿತರು ಬೇರೆಯವರಿಂದ ಸಮಾಜದಲ್ಲಿ ಹಿಂದುಳಿದಿರುವುದಕ್ಕೆ ಮುಖ್ಯ ಕಾರಣಗಳಲ್ಲೊಂದು ಕುಡಿತ ಎನ್ನುವುದು ನನ್ನ ಬಲವಾದ ಅಭಿಪ್ರಾಯವಾಗಿದ್ದು, ಅದನ್ನು ಅವಳಿಗೆ ಹೇಳಿದೆ. ನಾಟಿ ಸಾರಾಯಿ ಮಾಡುವುದು ಅತಿದೊಡ್ಡ ಕಲೆಯೇ ಇರಬಹುದು, ನಿನ್ನ ಅಪ್ಪನಿಗೆ ಅದರಿಂದ ದುಡ್ಡು ಬಿಟ್ಟು ಬೇರೇನಾದರೂ ಉಪಯೋಗ ಆಯ್ತಾ ಅಂತ ಕೇಳಿದೆ. ಉತ್ತರವಿರಲಿಲ್ಲ ಆಕೆಯಲ್ಲಿ. ನನ್ನ ಪ್ರಶ್ನೆ ಅವಳಿಗೆ ಯೋಚನೆಗೆ ಹಚ್ಚಿತ್ತು.

ಅವಳಾಸೆಯಂತೆ ದಲಿತರು ವಾಸವಾಗಿದ್ದ ನಮ್ಮ ಮನೆಯೆದುರಿನ ಗುಡ್ಡದ ಕಡೆಗೆ ಹೋದೆವು. ಗುಡ್ಡದ ನಡುವೆ ನಾಕೈದು ದಲಿತರ ಮನೆಗಳಿದ್ದವು ಅಲ್ಲಿ. ಕೇರಳ ಸರಕಾರ ಕಟ್ಟಿಸಿಕೊಟ್ಟ ಮನೆಗಳು. ಅವುಗಳಲ್ಲಿ ಎರಡು ಮನೆಗಳು ಯಾವ ನರಪ್ರಾಣಿಯೂ ಇಲ್ಲದೆ, ಹಂಚುಗಳು ಕಿತ್ತುಹೋಗಿ ಕಾಲದ ಜತೆ ಇವತ್ತೋ ನಾಳೆಯೋ ಅಂತ ಸೆಣಸುತ್ತಿದ್ದವು. ಐತ ವಿನಯವೇ ಜೀವವಾಗಿ 'ದಾನೆ ದೆತ್ತೀ' ಅನ್ನುತ್ತ ನಮಗೆ ಸ್ವಾಗತಿಸಿ ಮಾತಾಡಿಸಿದ. ಅವನಿಗೆ ಆ ಮನೆಗಳಲ್ಲಿ ಯಾರೂ ಇಲ್ಲವಾ, ಯಾಕೆ ಹಾಗಿವೆ ಅಂತ ಕೇಳಿದೆ.

ಅವನು ಹೇಳಿದ, ಮನೆಯಲ್ಲಿ ಯಾರಾದರೂ ಸತ್ತರೆ ಆ ಮನೆಯನ್ನು ಬಿಟ್ಟುಹೋಗುವುದು ಅವರ ಸಂಪ್ರದಾಯವಂತೆ. ಹಾಗೇ ಯಾರೋ ಸತ್ತಾಗ ಈ ಎರಡು ಮನೆಗಳು ಖಾಲಿಯಾಗಿವೆ. ನಾಳೆ ಐತ ಸತ್ತರೆ ತುಕ್ರು ಕೂಡ ತನ್ನ ಮನೆ ಖಾಲಿ ಮಾಡುತ್ತಾಳೆ. ನಾನು ಕೇಳಿದೆ, ಸರಕಾರ ನಿಮಗೆ ಮನೆ ಮಾಡಿಕೊಟ್ಟಿದ್ದೇ ದೊಡ್ಡದು, ಅಂಥದರಲ್ಲಿ ನೀವು ಹೀಗೆ ಮಾಡಿದರೆ ಹೇಗೆ ಅಂತ. ನಾವೇನು ಸರಕಾರಕ್ಕೆ ಹೇಳಿದ್ದೇವಾ ದೆತ್ತೀ ಮನೆ ಕಟ್ಟಿಕೊಡಿ ಅಂತ.. ಅವರಾಗವರೇ ಮಾಡಿಕೊಟ್ಟರು, ನಾವೇನು ಮಾಡೋಣ ಅಂತ ಬೊಚ್ಚುಬಾಯಿ ಬಿಟ್ಟು ನಕ್ಕ ಐತ. ಅವನ ಮುಗ್ಧತನಕ್ಕೆ, ನೇರಮಾತುಗಳಿಗೆ ಯಾವಾಗಲೂ ಸೋಲುತ್ತೇನೆ ನಾನು, ಮಾತುಮರೆಯುತ್ತೇನೆ. ನಾನು ಗೌರವಿಸುವ ಪ್ರೀತಿಯ ಹಿರಿಯ ಜೀವ ಆತ. ನಮ್ಮಜ್ಜನ ಹಾಗೆ.

ಪ್ರಿಯಾಗೆ ದಲಿತರು ಮನೆಖಾಲಿಮಾಡುವ ವಿಷಯ ವಿವರಿಸಿದರೆ, ಮಂಕಾದಳು. ಒಬ್ಬ ವ್ಯಕ್ತಿ ಶೋಷಣೆಗೊಳಗಾದರೆ, ಅದರ ಕಾರಣ ಎಲ್ಲೋ ಇರುವುದಿಲ್ಲ, ಅವನಲ್ಲೇ ಇರುತ್ತದೆ, ಅದನ್ನು ಸರಿಪಡಿಸಿಕೊಳ್ಳುವವರೆಗೆ ಶೋಷಣೆ ಮುಂದುವರಿಯುತ್ತದೆ ಅನ್ನುವುದು ನನ್ನ ವಾದ. ಅವಳು ಇದನ್ನೊಪ್ಪಲಿಲ್ಲ. ಕೆಲವರಿಗೆ ಶೋಷಣೆಗೊಳಗಾಗಿದ್ದೇವೆಂದು ಗೊತ್ತೇ ಇರದಷ್ಟು, ಕಾರಣಗಳು ಗೊತ್ತಿರದಷ್ಟು ಮುಗ್ಧರಿರುತ್ತಾರೆ ಅಂದಳು. ಹಾಗಿದ್ದಾಗ ಅವರ ಜಗತ್ತಿನಲ್ಲಿ ಅವರು ಚೆನ್ನಾಗಿರುತ್ತಾರೆ, ಸಂತೋಷವಾಗಿರುತ್ತಾರೆ, ಐತನ ಹಾಗೆ. ಅವರ ಮನಸ್ಸಲ್ಲಿ ದೊಡ್ಡ ದೊಡ್ಡ ಮಾತಾಡಿ ವೈರಸ್ ಯಾಕೆ ಬಿಡಬೇಕು ನಾವು, ನಮ್ಮ ಕೈಲಾದ ಸಹಾಯ ಮಾಡೋಣ, ಅವರಿಗೆ ಬೇಕಾದ್ದನ್ನು ಕೊಡದೇ, ಬೇಡದ್ದನ್ನು ಕೊಟ್ಟು, ದೊಡ್ಡ ದಾನಿಗಳಂತೆ ಪೋಸ್ ಯಾರಾದರೂ ಯಾಕೆ ಕೊಡಬೇಕು ಅಂತ ನಾನು. ಅವರಿಗೇನು ಬೇಕು ಏನು ಬೇಡ ಎಂಬುದು ಅವರಿಗೇ ಗೊತ್ತಿಲ್ಲವಲ್ಲ ಅಂತ ಅವಳು. ಹಾಗಂತ ನೀನಂದುಕೊಂಡಿರ್ತೀಯ, ಅವರು ಅಂದುಕೊಂಡಿರಬೇಕಿಲ್ಲ ಅಂತ ನಾನು.

ದಲಿತ ಚಳವಳಿಯ ಹೆಸರಲ್ಲಿ ರಾಜಕೀಯ ಪಕ್ಷಗಳು ಸಮಾಜವನ್ನು ಒಡೆಯುವ ಕೆಲಸವನ್ನೇ ಮಾಡುತ್ತ ಬಂದಿವೆ ಅಂತ ನಾನು. ಆರ್ಥಿಕವಾಗಿ ದಲಿತರೇ ಅತ್ಯಂತ ಹಿಂದುಳಿದವರು, ಅದಕ್ಕೆ ಚಳವಳಿ ಅಗತ್ಯ ಅಂತ ಅವಳು. ಬೇರೆಯವರ ದುಡ್ಡು ನುಂಗಿ ಸೊಕ್ಕುತ್ತಿರುವ ಶ್ರೀಮಂತ ಲಂಚಕೋರ 'ದಲಿತ'ರನ್ನೂ, ಅರೆಹೊಟ್ಟೆ ಊಟಕ್ಕೆ ಗತಿಯಿಲ್ಲದೆ ವೈದೀಕಗಳು ಮಾಡಿ, ಬೇರೆಯವರ ಮನೆಯಲ್ಲಿ ಕೆಲಸಮಾಡಿ ಬದುಕುವ ಬ್ರಾಹ್ಮಣರನ್ನೂ ತೋರಿಸಲೆ ನಿನಗೆ, ಅವರೂ ಚಳುವಳಿ ಅಂತ ಹೊರಟರೆ ಚೆನ್ನಾಗಿರುತ್ತದಲ್ಲವೆ ಅಂತ ನಾನು.

ವಾದದಲ್ಲಿ ವಿಜೃಂಭಿಸಿದ್ದು ನಮ್ಮ ನಡುವಿನ ವ್ಯತ್ಯಾಸಗಳು. ನಂಬಿಕೆಯ ಆಧಾರ ಬೇಕಿಲ್ಲದ / ಬಯಸದ ಬಾಂಧವ್ಯಗಳಲ್ಲಿ ನಂಬಿಕೆಯಿಟ್ಟ ನಾನು. ತಾನು ಕಾಣುತ್ತಿರುವ ವ್ಯಕ್ತಿಯೇ ಸರ್ವಸ್ವವೆಂದು ತನ್ನನ್ನು ಪೂರ್ತಿಯಾಗಿ ಸಂಬಂಧಕ್ಕೆ ಒಪ್ಪಿಸಿಕೊಳ್ಳುವ ಅವಳು. ಸಂಬಂಧಕ್ಕೂ ಬಾಂಧವ್ಯಕ್ಕೂ ಸ್ಪಷ್ಟ ಗಡಿಗಳನ್ನಿಟ್ಟು ಉತ್ತಮ ಬಾಂಧವ್ಯಗಳಿಗಾಗಿ ಆಶಿಸುವ ನಾನು, ಅವೆರಡರ ನಡುವೆ ವ್ಯತ್ಯಾಸವೇ ಅರಿಯದ ಅವಳು. ಮುಗ್ಧೆಯಂತೆ ಕಂಡೂ ಮುಗ್ಧೆಯಲ್ಲದ ನಾನು. ಮುಗ್ಧೆಯಂತೆ ಕಾಣದೆಯೂ ಮುಗ್ಧೆಯಾದ ಅವಳು. ಮನಸಿಗನಿಸಿದ್ದು ತಕ್ಷಣ ಹೇಳುವ ನಾನು. ಏನೇನೋ ಅನಿಸಿಯೂ ಏನೂ ಹೇಳದೆ ಕೊರಗುವ ಅವಳು. ಮಾತಾಡುವ ಮೊದಲೇ ಯೋಚಿಸಿ ಮಾತಾಡುವ ನಾನು. ಏನೋ ಮಾತಾಡಿ ಅದು ತಪ್ಪೆಂದು ಮನವರಿಕೆಯಾದಾಗ ಕೊರಗುವ ಅವಳು.

ಹೀಗೇ ಕೊನೆಯಿಲ್ಲದೆ ಮುಂದುವರಿದ ವಾದಧಾರೆಯಲ್ಲಿ ನನಗಂತೂ ಒಂದು ವಿಷಯ ಸ್ಪಷ್ಟವಾಗಿ ಅರ್ಥವಾಯಿತು. ಈ ಒಂದು ಸಂಬಂಧ ಶುರುವಾದಾಗ ಇದ್ದಂತಹ ನನ್ನನ್ನು ನಾನು ಕಳೆದುಕೊಂಡಿದ್ದೆ. ಅವಳಿಲ್ಲದ ರೀತಿಯಲ್ಲಿ ಅವಳನ್ನು ಅರ್ಥೈಸಿಕೊಂಡಿದ್ದೆ. ನಾನಿಲ್ಲದ ರೀತಿಯಲ್ಲಿ ಅವಳು ನನ್ನನ್ನು ಅರ್ಥೈಸಿಕೊಂಡಿದ್ದಳು. ಅಥವಾ ನಾವಿಬ್ಬರೂ ಪರಸ್ಪರರ ಬಗ್ಗೆ ಭ್ರಮೆಗಳಲ್ಲೇ ಬದುಕಿದ್ದೆವು. ವಿಚಾರಸಾಮ್ಯವಿಲ್ಲದ ಈ ಇಂಟೆಲೆಕ್ಚುವಲ್ ಸಂಬಂಧ ಈಗ ಬಾಂಧವ್ಯದ ವ್ಯಾಪ್ತಿಯಿಂದ ಕುಸಿದಿತ್ತು. ಮತ್ತೆ ಅದನ್ನು ಬೆಳೆಸಲು ಶಕ್ತವಾದ ಭಾವಸಾಮ್ಯ ಇನ್ನೂ ಹುಟ್ಟಿಯೇ ಇರಲಿಲ್ಲ.


ಆದಿತ್ಯವಾರ ಸಂಜೆ ಗಂಗೋತ್ರಿಗೆ ವಾಪಸ್ ಹೊರಟಾಗ ಪ್ರಿಯಾ ಕಣ್ಣುಗಳು ಹನಿಗೂಡಿದರೆ, ನನ್ನ ಮನಸು ವಿಚಿತ್ರ ಸಂಕಟದಿಂದ ತುಂಬಿತ್ತು. ಒಂದು ಕಡೆ ಅವಳ ಮುಗ್ಧತನಕ್ಕೆ ನಾನು ಸರಿಯಾದ ಗೆಳತಿಯಲ್ಲವೆನಿಸಿದರೆ, ಇನ್ನೊಂದು ಕಡೆ ನನ್ನ ಸಂಕೀರ್ಣ ಸಂವೇದನೆಗಳಿಗೆ ತಕ್ಕ ಗೆಳತಿ ಅವಳಲ್ಲವೆನಿಸುತ್ತಿತ್ತು. ಇಂಟಲೆಕ್ಚುವಲ್ ಅಲ್ಲದೇ ಇರುವ ಬೇರೆ ಯಾವುದೇ ರೀತಿಯ ಗೆಳೆತನ ನನಗೆ ಪ್ರಿಯಾಳಿಂದ ಬೇಕಿರಲಿಲ್ಲ. ಇಲ್ಲಿಯವರೆಗೆ ಅದು ಬೆಳೆದೂ ಇರಲಿಲ್ಲ. ಆಗಸ್ಟ್ ಕಾಂಪ್ಟೆಯ ಬಗ್ಗಾಗಲಿ, ಸಮಾಜಶಾಸ್ತ್ರ ಕಲಿಸುವ ಇತರ ವಿಚಾರಗಳ ಬಗ್ಗಾಗಲಿ ಪ್ರಿಯಾ ನನ್ನ ಜತೆಗೆ ಎಂದೂ ಹಂಚಿಕೊಂಡಿರಲಿಲ್ಲ. ನಾನು ನಾ ಕಲಿಯುತ್ತಿದ್ದ ಪತ್ರಿಕೋದ್ಯಮದ ಬಗ್ಗೆ ಅವಳಲ್ಲಿ ಹಂಚಿಕೊಂಡಷ್ಟು, ಅವಳು ಕಲಿಯುತ್ತಿದ್ದ ಸಮಾಜಶಾಸ್ತ್ರದ ಬಗ್ಗೆ ಅವಳಿಂದ ತಿಳಿದುಕೊಳ್ಳುವ ಅವಕಾಶ ಬಂದಿರಲಿಲ್ಲ. ಇದನ್ನೆಲ್ಲ ಅವಳ ಹತ್ತಿರ ಹೇಳಿದರೆ ಅವಳಿಗೆಷ್ಟು ನೋವಾಗುವುದು ಎಂಬುದೂ ನನಗೆ ಗೊತ್ತಿತ್ತು. ಏನೂ ಹೇಳದಿರುವುದು ಉತ್ತಮ ಅಂತಲೂ ಅನಿಸಿತು.

ನಾನು ಪ್ರಿಯಾ ಜತೆ ಮಾತಾಡುವುದು ಅಪರೂಪವಾಯಿತು. ಅವಳು ಪಾಪ, ಹುಡುಕಿಕೊಂಡು ಬಂದು ಹತ್ತಿರ ಕೂರುತ್ತಿದ್ದಳು. ಆದರೆ, ನಾನು ಕೆಲ ವಿಷಯಗಳನ್ನು ಎಂದಿಗೂ ಆಕೆಯೊಡನೆ ಮಾತಾಡಲಾರೆ ಅಂತ ನಿರ್ಧರಿಸಿಬಿಟ್ಟಿದ್ದೆ. ಹಾಗಾಗಿ ನಮ್ಮ ನಡುವೆ ವಿಷಯಗಳ ಕೊರತೆ ಕಾಡುತ್ತಿತ್ತು.

*****************

ಈಗ ಪ್ರಿಯಾ ಎಲ್ಲಿದ್ದಾಳೆ, ಏನು ಮಾಡುತ್ತಾಳೆ - ಒಂದೂ ಗೊತ್ತಿಲ್ಲ. ಈ ಕಥೆ ಕೇಳಿದರೆ ನೀನು ಖಂಡಿತಾ ನಗುವುದಿಲ್ಲವೆಂದು ಗೊತ್ತು ನನಗೆ. ಹಾಗಂತ, ಒಂದು SORRYಯಲ್ಲಿ ಎಲ್ಲ ಸರಿಹೋಗುತ್ತಿತ್ತಲ್ಲಾ, ಸುಮ್ಮನೆ ಕಾಂಪ್ಲಿಕೇಟ್ ಮಾಡಿಕೊಂಡೆ ನಾನು ಅಂತ ನಿನಗೆ ಅನಿಸಿದರೆ, ಮತ್ತೆ SORRY, ನಿನಗರ್ಥವಾಗುವುದಿಲ್ಲ ಅದು ಅನ್ನಬೇಕಾಗುತ್ತದೆ ನಾನು.

ನನ್ನ 'ಇಂಟಲೆಕ್ಚುವಲ್' ಮಾತುಗಳು ಪ್ರಿಯಾಗೆ ನೋವುಕೊಟ್ಟಿದ್ದು ನಾನೆಂದೂ ಮರೆತಿಲ್ಲ. ಹಾಗೆಯೇ ಅವಳ ಮನಸಿಗನಿಸಿದ್ದು ಅವಳು ಮಾಡಿದಾಗ ನನಗೆ ಇಷ್ಟವಾಗದಿದ್ದದ್ದು ಕೂಡಾ ಮರೆತಿಲ್ಲ. ಜಾತಿ-ಭಾಷೆ-ದೇಶಗಳ ಎಲ್ಲೆ ಮೀರಿ ಬೆಳೆಯಲಿದ್ದ ಬಾಂಧವ್ಯ ಕಾರಣವೇ ಇಲ್ಲದೆ ಕುಲಗೆಟ್ಟಂತಿತ್ತು. ಆದರೆ ಬಲವಾದ ಕಾರಣವಿತ್ತು ಅಲ್ಲಿ.

ಈಗ ಈ ನೋವಿನ ಬಿಂದು ದಾಟಿ ಬಲುದೂರ ಬಂದಿದ್ದೇನೆ. ಜಗತ್ತು ತುಂಬ ವಿಶಾಲ ಮತ್ತು ಉದಾರ, ಹಾಗಾಗಿ ಎಲ್ಲಾ ರೀತಿಯ ಗೆಳೆಯ ಗೆಳತಿಯರ ದೊಡ್ಡ ನಿಧಿಯೇ ಇದೆ ನನ್ನ ಜತೆ. ಅವರ್ಯಾವ ಜಾತಿಯೋ ನಾನೆಂದೂ ತಲೆಕೆಡಿಸಿಕೊಂಡಿಲ್ಲ. ಜಾತಿಯ ಬಗ್ಗೆ ಚರ್ಚೆಗಳು ಅಲ್ಲಿ ಬರುವುದೇ ಇಲ್ಲ. ಬಂದರೂ ನಾನದನ್ನು ಮುಂದುವರಿಸುವುದಿಲ್ಲ. ಮೊನ್ನೆ ಮೊನ್ನೆಯಷ್ಟೇ ಎಲ್ಲೋ ಓದಿದ ಮಾತು, 'There are good people doing good things and evil people doing bad things, but, for good people to do bad things, it takes Religion...' ನೂರಕ್ಕೆ ನೂರು ಸತ್ಯವೆಂದು ನನಗೆಂದೋ ಅರಿವಾಗಿದೆ.

ಬದುಕೇ ಹೀಗೆ ಗೆಳತಿ, ಯಾವುದೋ ಇನ್ಯಾವುದನ್ನೋ ನೆನಪಿಸುತ್ತದೆ. ನೀನು ನನ್ನ ಜತೆ ನಮ್ಮೂರಿಗೆ ಬರುತ್ತೇನೆಂದಿದ್ದು ಹೇಗೆ ಹಳೆಯ ಗಾಯವೊಂದನ್ನು ನೆನಪಿಸಿತು ನೋಡು. ಗಾಯ ನಿಜಕ್ಕೂ ಬಹಳ ಹಳೆಯದೇ, ಮಾಗಿದೆ, ಕಲೆ ಮಾತ್ರ ಸ್ವಲ್ಪ ಉಳಿದಿದೆ. ನಾನೂ ಆಗಿದ್ದ ಹಾಗೆ ಈಗಿಲ್ಲ. ಸಂಬಂಧವೆಂದರೆ ಬರಿಯ ಮಿದುಳಿಂದಲ್ಲ, ಹೃದಯವೂ ಇರುತ್ತದೆ, ಹಾಗೆಯೇ ಬರಿಯ ಹೃದಯದಿಂದಲ್ಲ, ಮಿದುಳೂ ಇರುತ್ತದೆ ಎನ್ನುವುದು ಸದಾ ನೆನಪಲ್ಲಿಟ್ಟಿದ್ದೇನೆ. ಆಡುವ ಮಾತಿಗಿಂತ ಬದುಕುವ ರೀತಿ ಹೆಚ್ಚು ಅರ್ಥಪೂರ್ಣವಾಗಿರಬೇಕೆಂದು ನನಗೆ ಪ್ರಿಯಾಳ ಜತೆಯ ಗೆಳೆತನ ಕಲಿಸಿಕೊಟ್ಟಿತು. ಅವಳು ಯಾವತ್ತೂ ನನ್ನ ಮನಸಲ್ಲಿ ಎಚ್ಚರಿಕೆಯ ಗಂಟೆಯಂತೆ, ನಾ ಕೊಂದ ಒಂದು ಹೂವಿನ ಹಾಗೆ ಬದುಕಿರುತ್ತಾಳೆ.

Saturday, June 16, 2007

ಕೊನೆಯ ಚಿತ್ರ



ಇವತ್ತು ತಾರಸಿಯ ಮೇಲೆ ನಿಂತು ಸುಮ್ನೇ ಆಕಾಶ ನೋಡ್ತಾ ಇದ್ದೆ...





ನೋಡ್ತಾ ಇದ್ದ ಹಾಗೇ ಆಕಾಶ ಕಪ್ಪು ಕವಿಯತೊಡಗಿತು...




ಆಕಾಶ ಎಲ್ಲ ಕಪ್ಪು ಮೋಡ ತುಂಬಿಕೊಂಡು ಮಳೆ ಬರುವ ಹಾಗೆ ಕಾಣಿಸುತ್ತಿದೆ...



ಆದರೆ ಈ ತುಂಟ ಮರ ಮಾತ್ರ ಮೋಡ ಸೀಳಿ ತೂರುವ ಸೂರ್ಯನ ಬೆಳಕಿನ ಜತೆ ಚಿನ್ನಾಟವಾಡ್ತಿದೆ...





ಕತ್ತಲಾಗುತ್ತಿದೆ, ಮಳೆಯೂ ಬರಬಹುದು, ಇವತ್ತಿಗೆ ಇದೇ ಕೊನೆಯ ಚಿತ್ರ...



Thursday, June 7, 2007

ಭೂಮಿಗೊಬ್ಬ ಚಂದ್ರ...

ಹೀಗೇ ಒಂದು ಮೋಡಕವಿದ ಬೇಸರದ ರಾತ್ರಿ ತಾರಸಿಯಲ್ಲಿ ಕುಳಿತು ಬಾನು ದಿಟ್ಟಿಸುತ್ತೇನೆ.

ಅಲ್ಲೆಲ್ಲೋ ಇರಬಹುದಾದ ನನ್ನ ನಕ್ಷತ್ರವನ್ನು, ನನ್ನ ತಾರಾಪುಂಜವನ್ನು, ನನ್ನ ರಾಶಿಯನ್ನು, ನನ್ನ ಆಕಾಶಗಂಗೆಯನ್ನು, ನನ್ನ ಕ್ಷೀರಪಥವನ್ನು ಹುಡುಕಲು ಪ್ರಯತ್ನಿಸುತ್ತೇನೆ.

ಬಾನ ತುಂಬಾ ಕರಿಮೋಡ ಕವಿದು ಮಳೆಯ ಆಶೆ ಹುಟ್ಟಿಸುತ್ತಿವೆ... ಯಾವಾಗಲೋ ಎಲ್ಲೋ ಕೇಳಿದ ’ಆಸೆ-ಮೋಸ’ ಪದ ನೆನಪಾಗುತ್ತದೆ...

ಮಳೆ ಯಾಕೋ ಕಣ್ಣುಮುಚ್ಚಾಲೆಯಾಡುತ್ತಿದ್ದಾಳೆ.

ಮೋಡಗಳ ನಡುವಿನಿಂದ ಒಬ್ಬ ಹಳದಿ ಚಂದ್ರ ಆಗಷ್ಟೆ ಇಣುಕಿದ್ದಾನೆ.

ಕೇಳುತ್ತಾನೆ, ’ಒಬ್ಬಳೇ ಕುಳಿತು ಆಕಾಶದ ಚಂದ ನೋಡುತ್ತಿದ್ದೀಯಾ?’

’ಹೌದು, ನಿಂಗೇನು ಕಷ್ಟ?’ ನನ್ನ ಕೊಂಕು ನುಡಿ.

’ಸುಮ್ನೆ ಕೇಳಿದೆ ಅಷ್ಟೆ’ ಅಂತಾನೆ ಚಂದ್ರ.

’ನೀನು ಹಾಗೆ ಕೇಳಲಿ ನನ್ಹತ್ರ ಅಂತ ಒಬ್ಬಳೇ ಕುಳಿತಿದ್ದೇನೆ’ - ನೇರ ಉತ್ತರ ನೀಡುವ ಇಚ್ಛೆಯಿಲ್ಲದ ನಾನು ಮಾತು ಹಾರಿಸುತ್ತೇನೆ.

’ಸರಿ ಕೇಳಿ ಆಯಿತಲ್ಲ, ಇನ್ನೇನು?’ ಅವನ ಕೆಣಕು ನುಡಿ.

’ಇನ್ನೇನು ಅಂದ್ರೆ? ನಿನ್ಹತ್ರ ಕೇಳು ಅಂತ ನಾನಂದ್ನಾ?’ ಮತ್ತೆ ನನ್ನ ಕೊಂಕು.

’ಬಾಯಿಬಿಟ್ಟು ಹೇಳದಿದ್ರೂ ನಾನು ಕೇಳಲಿ ಅಂತ ಅಂದ್ಕೊಂಡಿದ್ದು ನಿಜ ತಾನೇ?’ ದಿವ್ಯಜ್ಞಾನಿಯಂತೆ ಪೋಸು ಕೊಟ್ಟು ಕೇಳುತ್ತಾನೆ ಚಂದ್ರ.

ಇಲ್ಲವೆನ್ನಲಾರೆ, ನಾನೇ ನನ್ನ ಬಾಯಾರ ಹೇಳಿದೆನಲ್ಲ ಹಾಗೆಂದು?

ಹೌದು ಎಂದು ಯಾಕೆನ್ನಲಿ? ಹಾಗೇನು ಅಂದುಕೊಂಡಿರಲಿಲ್ಲವಲ್ಲ ನಾನು?

ಇವತ್ತು ಆಕಾಶ ನೋಡುತ್ತ ಕುಳಿತುಕೊಳ್ಳುತ್ತೇನೆ, ಅಲ್ಲಿ ಈ ಚಂದ್ರ ಬರುತ್ತಾನೆ ಅಂತ ಕನಸು ಬಿದ್ದಿತ್ತೆ ನನಗೆ, ಅವನ ಬಗ್ಗೆ ಏನಾದರೂ ಅಂದುಕೊಳ್ಳಲಿಕ್ಕೆ?

ಅವನ ವಾದಕ್ಕೆ ಪ್ರತಿವಾದ ಬೆಳೆಸುವ ಇರಾದೆ ಬದಿಗಿಟ್ಟು ಸುಮ್ಮನೆ ನಗುತ್ತೇನೆ.

ಚಂದ್ರನೂ ನಗುತ್ತಾನೆ. ತಾನು ಗೆದ್ದೆನೆಂಬ ಹೆಮ್ಮೆ ಕಾಣುತ್ತದೆ ದೂರದಿಂದ ಕಾಣಿಸುವ ಅವನ ಹೊಳೆವ ಮುಖದಲ್ಲಿ.

’ನನ್ನ ಗೆಳೆಯನಾಗುತ್ತೀಯಾ’ ಕೇಳುತ್ತೇನೆ.

ಸಂತಸದಿಂದ ಒಪ್ಪಿಕೊಳ್ಳುತ್ತಾನೆ ಚಂದ್ರ.

ಇರುಳು ಕಳೆದು, ಮತ್ತೆ ಹಗಲಾಗಿ ಮತ್ತೆ ರಾತ್ರಿ ಬರುತ್ತದೆ. ಮತ್ತೆ ನಾನು ತಾರಸಿಗೆ ಹೋಗುತ್ತೇನೆ. ಮತ್ತೆ ಅಲ್ಲಿ ಚಂದ್ರ ಕಾಣಿಸುತ್ತಾನೆ.

ಮತ್ತೆ ಮಾತಾಡುತ್ತೇವೆ. ಸೂರ್ಯನಡಿ ಇರುವ ಎಲ್ಲಾ ವಿಷಯ. ಸುಮ್ಮಸುಮ್ಮಗೆ ಕಾಡುತ್ತಾನೆ ಅವನು. ನಾನೇನು ಕಡಿಮೆಯೆ? ನಾನೂ ಕಾಡುತ್ತೇನೆ.

ಹೀಗೇ ಒಂದು ದಿನ ಯಾಕೋ ಉದಾಸೀನವಾಯಿತು. ರಾತ್ರಿ ತಾರಸಿಗೆ ಹೋಗಿರಲಿಲ್ಲ... ಮನೆಯ ಕಿಟಿಕಿಯಲ್ಲಿ ಪರದೆಯೆಡೆಯಿಂದ ಬೆಳಕು ಇಣುಕುತ್ತಿದೆ..! ಏನೆಂದು ನೋಡಿದರೆ, ಅಲ್ಲಿ ನಿಂತು ಹೊರಗೆ ಬಾರೆಂದು ಕರೆಯುತ್ತಾನೆ ಚಂದ್ರ..!!!

ಎಷ್ಟೊಂದು ಜನ ತಾರೆಯರು ಇವನನ್ನು ಸುತ್ತುವರಿದಿರುತ್ತಾರೆ, ನನ್ನನ್ನೊಬ್ಬಳನ್ನೇ ಯಾಕೆ ಕರೆಯುತ್ತಾನೆ? ಪ್ರಶ್ನೆ ಅವನಿಗೆ ಕೇಳುತ್ತೇನೆ. ಉತ್ತರ ಸಿಗುವುದಿಲ್ಲ.

ಹಾಗೇ ಅವನ ಜಗತ್ತಿನ ಬಗ್ಗೆ, ಅವನೊಳಗಿನ ಜಗತ್ತಿನ ಬಗ್ಗೆ ಮಾತಾಡುತ್ತಾನೆ. ನಾನು ಮನಸೆಲ್ಲ ಕಿವಿಯಾಗುತ್ತೇನೆ.

ನನಗೂ ಅವನ ಜತೆ ತುಂಬಾ ಮಾತಾಡಬೇಕೆನಿಸುತ್ತದೆ. ಆದರ್ಯಾಕೋ ಅಂತರ್ಯಾಮಿಯಾಗಿರುವ ಮೌನ ಮಾತಾಡಲು ಬಿಡುವುದಿಲ್ಲ.

ಅವನು ಚತುರ ಮಾತುಗಾರ. ಕೇಳುತ್ತ ಕುಳಿತರೆ ಸಮಯದ ಗಾಡಿ ಸಾಗಿಹೋಗುವುದೇ ತಿಳಿಯುವುದಿಲ್ಲ.

*********

ಚಂದ್ರನ ಜತೆ ಜಗಳಗಳೂ ಆಗುತ್ತವೆ. ಅವನಿಗೆ ಬೇಕಾದ ಸಮಯ ನಾನು ಕೊಡಲಿಲ್ಲ, ಅವನಿಗೆ ಬೇಕಾದಹಾಗೆ ವರ್ತಿಸಲಿಲ್ಲ, ಅವನು ಅಂದುಕೊಂಡ ಹಾಗೆ ನಾನಿರಲಿಲ್ಲ - ಇತ್ಯಾದಿ ದೂರುಗಳು.

ಪುಟ್ಟ ಮಗುವಿಗೆ ಸಮಾಧಾನಿಸುವಂತೆ ಅವನಿಗೆ ಸಮಾಧಾನಿಸುತ್ತೇನೆ. ಅವನು ಸಮಾಧಾನಗೊಳ್ಳುತ್ತಾನೆ.

*********

ಚಂದ್ರ ಯಾಕೆ ನನ್ನ ಜತೆ ಅಷ್ಟು ಮಾತಾಡುತ್ತಾನೆಂಬುದಕ್ಕೆ ಉತ್ತರ ಹುಡುಕುವ ಯತ್ನ ಮುಂದುವರಿದಿವೆ.. ಆದರೆ ಅವೆಲ್ಲ ಕತ್ತಲಲ್ಲಿ ಕಣ್ಮುಚ್ಚಿಕೊಂಡು ಹುಡುಕಿದಂತಾಗುತ್ತವೆ.

ಇನ್ನೊಮ್ಮೆ ಚಂದ್ರನಿಗೆ ಕೇಳುತ್ತೇನೆ.. ’ಯಾಕೆ ಅಷ್ಟು ಹಚ್ಚಿಕೊಂಡಿದ್ದೀಯ’ ಅಂತ.

ಅವನು ಕಳ್ಳನಗುವಿನ ಜತೆ ಮಗುವಿನಂತೆ ಹೇಳುತ್ತಾನೆ.. ’ನಾನು ಬದುಕಿನಿಂದ ಕದಿಯುತ್ತೇನೆ, ಕದ್ದ ಬುತ್ತಿ ತಿಂದು ಬದುಕುತ್ತೇನೆ’ ಅಂತ.

ತಾನು ಕಳ್ಳನೆಂದು ಪ್ರಾಮಾಣಿಕವಾಗಿ ಹೇಳಿಕೊಳ್ಳುವ ಚಂದ್ರನನ್ನು ನಂಬುವುದೇ ಬಿಡುವುದೇ ಅಂತ ಯೋಚನೆ ಶುರುವಾಗುತ್ತದೆ ನನಗೆ... ಜತೆಗೇ ನಂಬುವುದು ಅಂದರೇನು ಅಂತ ಪ್ರಶ್ನೆಯೂ ಮೂಡುತ್ತದೆ.
ಎಲ್ಲ ಪ್ರಶ್ನೆಗಳ ನಡುವೆ, ಸಿಗದ ಉತ್ತರಗಳಾಚೆಗೆ, ವಿವಿಧ ಬಣ್ಣಗಳನ್ನು ತುಂಬಿಕೊಂಡು, ಕಹಿಯನ್ನು ದೂರವಿಟ್ಟು, ಸಿಹಿಭರವಸೆಗಳ ಜತೆ, ಮಾತು ಮುಂದುವರಿಯುತ್ತದೆ.

*********

ನನಗೆ ಹತ್ತಿರವಾಗಿ ಚಂದ್ರ ಇಂದು ಹಾದುಹೋಗಲಿದ್ದಾನೆ. ಹತ್ತಿರದಿಂದ ಅವನನ್ನು ನೋಡಲಿದ್ದೇನೆ, ಮಾತಾಡಿಸುತ್ತೇನೆ.

*********

ಇವತ್ತು ಚಂದ್ರ ಬಂದಿದ್ದಾನೆ. ನನ್ನ ಹತ್ತಿರವಿದ್ದಾನೆ. ಆದರೆ ಯಾಕೋ ಇವನು ದೂರದಲ್ಲಿ ನಿಂತು ನನ್ನನ್ನು ಕಾಡುತ್ತಿದ್ದ ಚಂದ್ರನಲ್ಲವೆನಿಸುತ್ತದೆ.
ಗಾಬರಿಗೋ.. ನಾಚಿಕೆಗೋ.. ಕೆಂಪಾಗಿದ್ದಾನೆ ಚಂದ್ರ. ಮತ್ತೆ ನನ್ನ ಅನುಭವಕ್ಕೆ, ಅಳತೆಗೆ ನಿಲುಕದ ಇನ್ನೇನೋ ತಣ್ಣಗಿನ ಭಾವನೆ ಅವನಲ್ಲಿ ಕಾಣಿಸುತ್ತದೆ.

ದೂರದಲ್ಲಿದ್ದಾಗ ಅವನು ಚೆಲ್ಲುತ್ತಿದ್ದ ಬೆಚ್ಚನೆ ಬೆಳದಿಂಗಳು ಹತ್ತಿರ ಬಂದಾಗ ಕಾಣೆಯಾಗಿದೆ.. ಚಂದ್ರ ತಣ್ಣತಣ್ಣಗೆ ಮಾತು ಮರೆತು ಕುಳಿತಿದ್ದರೆ ನನಗೂ ಮಾತು ಬೇಡವೆನಿಸುತ್ತದೆ.

ಅವನ ಕಣ್ಣುಗಳ ಅಪರಿಚಿತ ಭಾವ ತಣ್ಣನೆ ಕೊಲ್ಲುತ್ತದೆ.

*************
ಚಂದ್ರ ಆಚೆ ಹೋದಮೇಲೆ ಅದ್ಯಾಕೋ ಹೇಳತೀರದ ನೋವು ಕಾಡುತ್ತದೆ. ಅದೇನೆಂದು ವಿವರಿಸಲಾಗದೆ ಶಬ್ದಗಳು ಪರದಾಡುತ್ತವೆ..

ಮತ್ತೆ ಹೋಗಿ ತಾರಸಿಯಲ್ಲಿ ಕುಳಿತುಕೊಳ್ಳುತ್ತೇನೆ. ಚುಕ್ಕಿ ಕಾಣುವವೇ ನೋಡುತ್ತೇನೆ. ಹಬ್ಬಿದ ಕತ್ತಲಿಗೆ ನೀಲಿ ಆಕಾಶದ ಕರಿಮೋಡ ಸಾಥ್ ನೀಡುತ್ತದೆ. ಆದರೆ ನನಗೆ ಅನಿಸುತ್ತದೆ, ಆ ಮೋಡ ಮುಂಗಾರು ಮಳೆ ತರುವುದಿಲ್ಲ ಅಂತ.

ಹೀಗೇ ಮೌನದ ಜತೆ ಗೆಳೆತನದಲ್ಲಿ ಸ್ವಲ್ಪ ಹೊತ್ತು ಕಳೆಯುತ್ತದೆ.

ಹಾಗೇ ಕರಿಮೋಡಗಳ ದಿಬ್ಬಣ ನೋಡುತ್ತ ಕುಳಿತವಳಿಗೆ ಅಚಾನಕ್ ಚಂದ್ರ ಕಾಣಿಸುತ್ತಾನೆ.

ಇವನು ಅದೇ ಚಂದ್ರ, ಆದರೆ ಅವನಲ್ಲ. ಅವನಲ್ಲಿ ನಾ ಕಂಡ ಅವನಿಲ್ಲ.

ಚಂದ್ರನ ಬಣ್ಣ ಮತ್ತೆ ಬದಲಾಗಿದೆ. ಈಗ ಅವನು ಕಪ್ಪು-ಬಿಳುಪಿನ ಮಿಶ್ರಣವಾಗಿದ್ದಾನೆ.



ಕರಿಮೋಡಗಳ ಕೋಟೆ ತನ್ನ ಸುತ್ತ ಕಟ್ಟಿಕೊಂಡು ಹೊರಗಿಣುಕುವ ಚಂದ್ರ ಅದ್ಯಾಕೋ ಕ್ರೂರಿಯಾಗಿ ಕಾಣುತ್ತಾನೆ.
*************

Tuesday, June 5, 2007

ಹೊಸ ಕನಸು ಹುಟ್ಟಿದೆ!!!

ಈ ಕನಸಿಗೆ ೨೦ ದಿನ ತುಂಬಿತು. ೪೦೦ಕ್ಕೂ ಹೆಚ್ಚು ಹಿಟ್ಟುಗಳನ್ನು ದಾಖಲಿಸಿಕೊಂಡು ನಾಗಾಲೋಟದಲ್ಲಿ ಸಾಗುತ್ತಿರುವ ಈ ಕನಸನ್ನು ಕಂಡರೆ (ಸ್ವಲ್ಪ) ಖುಷಿಯಾಗುತ್ತದೆ!

ಈ ಕನಸಿನ ಹೆಸರು ಚಿತ್ರಕವನ ...

ಜನ ಯಾಕೆ ಬ್ಲಾಗ್ ಬರೆಯುತ್ತಾರೆ?

ಬ್ಲಾಗ್ ಬರೆಯುವ ಜನ ಎಂಥವರಿರುತ್ತಾರೆ? ಅವರಿಗೇನಿಷ್ಟವಾಗುತ್ತದೆ? ಯಾಕಿಷ್ಟವಾಗುತ್ತದೆ?

ಇವೆಲ್ಲ ಪ್ರಶ್ನೆಗಳಿಗೆ ಉತ್ತರದ ಹುಡುಕಾಟದ ಹಾದಿಯಲ್ಲಿ ಸುಮ್ಮನೇ ಹುಟ್ಟಿಕೊಂಡ ಕೂಸು ಚಿತ್ರಕವನ.

ಇಲ್ಲಿ ಪ್ರತಿವಾರ ಒಂದೊಂದು ಚಿತ್ರವನ್ನು ಹಾಕಲಾಗುತ್ತದೆ. ಚಿತ್ರಗಳು ಇದರ ನಿರ್ವಹಣ ತಂಡದ ಸದಸ್ಯರು ಸೆರೆಹಿಡಿದವಾಗಿರುತ್ತವೆ/ ಸೃಷ್ಟಿಸಿದವಾಗಿರುತ್ತವೆ. ಈ ಚಿತ್ರದ ಮೇಲೆ ಬರಹ/ ಕವನಗಳನ್ನು ಬರೆದು ಹಾಕುವ ಅವಕಾಶ ಇಲ್ಲಿ ಭೇಟಿ ನೀಡುವವರಿಗಿದೆ.


ವಿವಿಧ ರೀತಿಯ ದೃಷ್ಟಿಕೋನಗಳು... ಒಂದೇ ದೃಷ್ಟಿಕೋನದ ಬೇರೆ ಬೇರೆ ರೀತಿಯ ಅಭಿವ್ಯಕ್ತಿಗಳು... ವಿವಿಧ ಭಾಷೆಗಳು... ವಿವಿಧ ಶೈಲಿಗಳು... ವಿವಿಧ ಪೂರ್ವಾಗ್ರಹಗಳು... ವಿಭಿನ್ನ ನೋಟಗಳು.. ಇವೆಲ್ಲವನ್ನೂ ಸೆರೆಹಿಡಿಯುವ ಒಂದು ಯತ್ನ ಚಿತ್ರಕವನ.


**********


ಮೊದಲ ಎರಡು ವಾರ ಈ ಮಗುವಿಗೆ ಅಂಗಿ ಹೊಲಿಸಿ ತೊಡಿಸಿ ಅಲಂಕರಿಸುವುದರಲ್ಲಿ ಕಳೆಯಿತು... ಬೇರೆ ಬೇರೆ ಲೇಔಟ್-ಗಳು, ಬಣ್ಣಗಳು...


ಬಂದು ಹೋದವರ ಲೆಕ್ಕವಿಡಲು ಇಲ್ಲಿರಿಸಿರುವ ಲೆಕ್ಕಿಗ ಹೇಳುತ್ತಾನೆ, ದಿನಕ್ಕೆ ಸರಾಸರಿ ೨೦ ಜನ ಇಲ್ಲಿ ಬಂದು ಹೋಗ್ತಾರಂತೆ...(ಅವನಿಗೆ ನಿರ್ವಾಹಕರೈವರನ್ನು ಲೆಕ್ಕಿಸದಿರಲು ಸೂಚಿಸಲಾಗಿದೆ).

ಬಂದು ಹೋಗುವವರು ಅಷ್ಟಿರುವಾಗ, ಕವನಗಳ ಸಂಖ್ಯೆ ಕಡಿಮೆಯೆನಿಸುತ್ತಿದೆಯಲ್ಲ? ಇದರ ಮರ್ಮವೇನೆಂದು ತಿಳಿಯಲಿಲ್ಲ. ಅದಕ್ಕೆ, ಭೇಟಿಗರಿಗೆ ಅನಿಸಿದ್ದು ಹೇಳಲು, ಸಲಹೆ-ಸಂದೇಶ- ಅಭಿವ್ಯಕ್ತಿಗಳಿಗೋಸ್ಕರವೇ ಒಂದು ಮಾಧ್ಯಮವೂ ಇಲ್ಲಿ ಹಾಕಿದ್ದಾಗಿದೆ...

ಹಲವು ಗೆಳೆಯ-ಗೆಳೆತಿಯರು ಬೆನ್ನು ತಟ್ಟಿ ಒಳ್ಳೆ ಪ್ರಯತ್ನವೆಂದರು.. ಇನ್ನು ಹಲವರು ಸಾವಿರ ಬ್ಲಾಗುಗಳಲ್ಲಿ ಇದೂ ಒಂದಾಗಬಹುದೆಂಬ ಆತಂಕ ತೋರಿಸಿದರು...

ಚಿತ್ರಕವನ ದ ನಿರ್ವಹಣ ತಂಡದ ಸದಸ್ಯರು ಯಾರೂ ಇಲ್ಲಿಯವರೆಗೆ ಒಬ್ಬರು ಇನ್ನೊಬ್ಬರನ್ನು ಭೇಟಿಯಾಗಿಲ್ಲದಿರುವುದು ಒಂದು ವಿಶೇಷ. ಅನಿಕೇತನ್ ಟೋಕಿಯೋದಲ್ಲಿದ್ದರೆ, ಭಾಗವತ ಅಮೆರಿಕಾದಲ್ಲಿ. ಕಿಶೋರ್ ಉತ್ತರಪ್ರದೇಶದ ವಾರಣಾಸಿಯಲ್ಲಿದ್ದರೆ, ಶ್ರೀನಿಧಿ ಮತ್ತು ನಾನು ಬೆಂಗಳೂರಿನಲ್ಲಿ.

ಸಂಪರ್ಕದಲ್ಲಿ ಅವಾಗಾವಾಗ ಉಂಟಾಗುವ ವ್ಯತ್ಯಯ, ಭೌಗೋಳಿಕವಾಗಿ ಇರುವ ದೂರ - ನಮ್ಮ ಉತ್ಸಾಹಕ್ಕೆ ಭಂಗ ತಂದಿಲ್ಲ. ಕನಸು ಕಟ್ಟುವ ಹೊಸ ಉತ್ಸಾಹದಿಂದ ಹೊರಟಿದ್ದೇವೆ.

ದಿನದಿನಕ್ಕೂ ಈ ಕನಸು ಬೆಳೆಯುತ್ತಾ ಹೋಗಬೇಕು...

ಬೆಳೆಯುತ್ತದೆ ಕೂಡಾ...
.
.

Sunday, May 27, 2007

ಅವರವರ ಭಾವಕ್ಕೆ...?

ದಿನಾ ಬೆಳಿಗ್ಗೆ ಈ ಹೆಗ್ಗಣ ನನ್ನ ಕಣ್ಣಿಗೆ ಬೀಳುತ್ತದೆ.

ತನ್ನ ಬಿಲದಿಂದ ಮೆಲ್ಲ ಹೊರಗಿಣುಕಿ ರಸ್ತೆಯುದ್ದಕ್ಕೂ ನೋಡುತ್ತದೆ.

ಬೇಗನೆದ್ದು ಕೆಲಸಕ್ಕೆ ಹೋಗುವವರು, ಪೇಪರ್ ಹಾಕುವ ಹುಡುಗರು, ಕೊಳವೆ ಬಾವಿಯಿಂದ ನೀರು ಹಿಡಿಯಲು ಓಡಾಡುವವರು ಬಿಟ್ಟರೆ ಬೇರ್ಯಾರೂ ಇರುವುದಿಲ್ಲ.

ಮತ್ತು ಇವರೆಲ್ಲ ಹೆಗ್ಗಣ ದಿನಾ ನೋಡುವವರೇ. ಅವರಿದ್ದರೆ ಹೆಗ್ಗಣ ಅಷ್ಟು ಕೇರ್ ಮಾಡುವುದಿಲ್ಲ. ಅಪರಿಚಿತರ್ಯಾರೂ ಇಲ್ಲವೆಂದು ಖಚಿತ ಪಡಿಸಿಕೊಂಡು ತನ್ನ ಬಿಲದಾಚೆಗೆ ಕಾಲಿಡುತ್ತದೆ.

ನಂತರ ತನ್ನದೇ ರಾಜ್ಯವಿದು ಎನ್ನುವಂತೆ ಅತ್ತಿತ್ತ ಓಡಾಡುತ್ತದೆ.

ನೂರು ಫೀಟ್ ಉದ್ದಕ್ಕೆ ರಸ್ತೆಯ ಇಕ್ಕೆಲಗಳಲ್ಲಿರುವ ಮನೆಗಳ ಬದಿಯಲ್ಲಿ ತನಗೆ ಬೇಕಾದುದು ಆರಿಸಿಕೊಳ್ಳುತ್ತದೆ. ಮತ್ತೆ ಭಕ್ತಿಯಿಂದ, ಇದು ತನ್ನ ದಿನ ನಿತ್ಯದ ಕೆಲಸವೋ ಎಂಬಂತೆ ತಿನ್ನುತ್ತದೆ.

ಆ ತಿನ್ನುವ ಕೆಲಸದಲ್ಲಿ ನನಗೆ ಹಸಿವು ಕಾಣುವುದೇ ಇಲ್ಲ.

ನನಗೆ ಈ ಹೆಗ್ಗಣ, ಆ ರಸ್ತೆಯ ಶುಚಿತ್ವದ ಜವಾಬ್ದಾರಿ ಹೊತ್ತ ಜಾಡಮಾಲಿಯ ಹಾಗೆ ಕಾಣುತ್ತದೆ.

ಅದೆಂದೂ ಇದೇ ರಸ್ತೆಯ ಬೇರೆ ಹೆಗ್ಗಣಗಳ ಜತೆ ಬೆರೆತುದು ನಾನು ನೋಡಿಯೇ ಇಲ್ಲ.

ಬೇರೆ ಹೆಗ್ಗಣಗಳು ಸಮಯದ ಪರಿವೆಯೇ ಇಲ್ಲದೆ ಎಲ್ಲಂದರಲ್ಲಿ ಸುತ್ತಾಡುತ್ತವೆ. ಈ ಹೆಗ್ಗಣ ಹಾಗಲ್ಲ. ಟೈಮ್ ಟೇಬಲ್ ನಿಯತ್ತಾಗಿ ಕಾಪಾಡಿಕೊಳ್ಳುತ್ತದೆ.

ಬಹಳಷ್ಟು ಸಲ ಬೇರೆ ಬೇರೆ ಹೆಗ್ಗಣಗಳು ರಸ್ತೆಯಲ್ಲಿ ಗಾಡಿಗಳ ಚಕ್ರದಡಿ ಸಿಕ್ಕಿ ಅಪ್ಪಚ್ಚಿಯಾಗಿ, ಆಮೇಲೆ ಕಾಗೆಗಳಿಗೆ ಆಹಾರವಾದುದು ಕಣ್ಣಾರೆ ನೋಡಿದ್ದೇನೆ. ಕಣ್ಣು ಮುಚ್ಚಿಕೊಳ್ಳುತ್ತಲೇ, ಆ ಹೆಣ ಈ ಹೆಗ್ಗಣದ್ದಾಗಿರದಿರಲಿ ಅಂತ ಪ್ರಾರ್ಥಿಸಿದ್ದೇನೆ.

ಮಾರನೇ ದಿನ ಎಂದಿನಂತೆಯೇ ಬಿಲದಿಂದ ಹೊರಗೆ ಬಂದು ಓಡಾಡುವ ಹೆಗ್ಗಣಕ್ಕಾಗಿ ಕಾದು ಕುಳಿತು ಅದನ್ನು ನೋಡಿ ಸಂತಸ ಪಟ್ಟಿದ್ದೇನೆ.

ಅದು ರಸ್ತೆಯಲ್ಲಿ ತಿರುಗಾಡುವ ಹೊತ್ತು ಏನೆಂಬುದು ನನಗೆ ನಿಖರವಾಗಿ ಗೊತ್ತು.
ಅಷ್ಟು ಹೊತ್ತಿನ ನಂತರ ಅದು ಅದರ ಬಿಲದೊಳಗೆಯೇ ಇರುತ್ತದೆಯೆ ಅಥವಾ ಇನ್ನೆಲ್ಲಿಯಾದರೂ ಹೋಗುತ್ತದೆಯೇ ಅನ್ನುವುದು ನನ್ನ ಪಾಲಿಗೆ ರಹಸ್ಯ.

ಹೆಗ್ಗಣಕ್ಕೆ ಎಷ್ಟು ನಾಚಿಕೆ ಅಂದರೆ, ನಾನು ಕ್ಯಾಮರಾ ಹಿಡಿದು ಕಾಯುತ್ತಿದ್ದರೆ ಅದು ಹೇಗೋ ಅದಕ್ಕೆ ಗೊತ್ತಾಗಿಬಿಡುತ್ತದೆ. ಹೊರಗೆ ಬರುವುದೇ ಇಲ್ಲ...
ಅಥವಾ, ಪಬ್ಲಿಸಿಟಿ ಬೇಡ ಎಂಬ ಇರಾದೆಯೋ ಏನೋ? ನನಗೆ ಗೊತ್ತಿಲ್ಲ.

ಆದರೆ ತುಂಬಾ ಜಾಣ ಹೆಗ್ಗಣ, ಶಿಸ್ತಿನ ಹೆಗ್ಗಣ.
ಅದಕ್ಕೆ ತನ್ನನ್ನು ತಾನು ಹೇಗೆ ಕಾಪಾಡಿಕೊಳ್ಳಬೇಕೆಂದು ಗೊತ್ತು.
ಬೇರೆಯವರಿಗೆ ತೊಂದರೆ ಕೊಡದೆ ಒಳ್ಳೆಯ ರೀತಿಯಲ್ಲಿ ಹೇಗೆ ಬದುಕಬೇಕೆಂದು ಗೊತ್ತು.
........
ಕೆಲವು ರೀತಿಯ ಮನುಷ್ಯರನ್ನು ಹೆಗ್ಗಣಕ್ಕೆ ಹೋಲಿಸುತ್ತಾರಲ್ಲ?
ಈ ಒಳ್ಳೆ ಹೆಗ್ಗಣ ನೋಡಿದ ಮೇಲೆ ಆ ಹೋಲಿಕೆ ಸುಳ್ಳೆನಿಸುತ್ತಿದೆ.
ಮತ್ತೆ ಎಲ್ಲಾ ಹೆಗ್ಗಣಗಳೂ ಹೀಗೇ ಇರಬಹುದೇನೋ ಅಂತ ಸಂಶಯ ಬರುತ್ತದೆ.

ಅಪವಾದಗಳನ್ನು ಉದಾಹರಣೆಗಳಾಗಿ ತೆಗೆದುಕೊಳ್ಳಬಾರದು ಎನ್ನುವುದು ಹಲವಾರು ಬಾರಿ ಅನುಭವವಾಗಿದೆ. ಆದರೂ ಈ ಹೆಗ್ಗಣ ಸತ್ಯವೆಂದು ನಂಬಬೇಕು ಅನಿಸುತ್ತಿದೆ.

Saturday, May 19, 2007

. . . . . ಏನರ್ಥ...?

ಮುತ್ತಿರುವ ಸಾಗರದಿ ಮುಳುಗಹೊರಟಿರುವಾಗ

ನೀರಿಗಂಜುವ ಮನಕೆ ಏನರ್ಥ...?

ಮುಂದಿರುವ ಬೆಳಕನ್ನೆ ನೋಡುತ್ತ ನಡೆವಾಗ

ಬೆಂಬಿಡದ ನೆರಳಿಗೆ ಏನರ್ಥ...?

ಮನಸು ಮಾತಿನ ಶರಣು ಹೋಗಹೊರಟಾಗೆಲ್ಲ

ಬಿಡದೆ ಕಾಡುವ ಮೌನಕೇನರ್ಥ...?

Saturday, May 12, 2007

ಕಡಲು ಮುನಿದಿದೆ...


ರಾಶಿ ರಾಶಿ ನೊರೆಯ ಚೆಲ್ಲಿ ಸದಾ ನಗುವ ಕಡಲಿದು...
ಇಂದು ಏಕೊ ಅರಿಯೆ ನಾನು, ನನ್ನ ಮೇಲೆ ಮುನಿದಿದೆ...

ಕಪ್ಪೆ ಚಿಪ್ಪು ದಡಕೆ ದೂಡಿ ಸಂಭ್ರಮಿಸುವ ಅಂಬುಧಿ..
ಮೌನದಲ್ಲಿ ಮಿಡುಕುತಿಹುದು, ಯಾಕೊ? ನನಗೆ ತಿಳಿಯದು...

ನೀಲಿ ಬಾನು ಎಲ್ಲೋ ಕಾಣೆ, ಬೆಳಕು ಎಲ್ಲೂ ಕಾಣದು
ಕರಿಯ ಮೋಡ, ಬೂದಿ ಮೋಡ, ದುಗುಡ ತುಂಬಿಕೊಂಡಿದೆ...

ಮುಳುಗು ಹಾಕೊ ಮುನ್ನ ನಿಶೆಗೆ ಸಪ್ತವರ್ಣದುಡುಗೆಯ
ತೊಡಿಸಿ ನಲಿವ ರವಿಗೆ ಇಂದು ಮಂಕು ಕಟ್ಟಿಕೊಂಡಿದೆ...

ಸ್ವರ್ಣ ವರ್ಣ ನೀರ ಮೇಲೆ ಚೆಲ್ಲಿ ಆಟವಾಡುವ
ಇವನು ಇಂದು ಯಾಕೋ ಕಾಣೆ, ಮುದುಡಿ ತಣ್ಣಗಾಗಿಹ...

ದೋಣಿಯೆರಡು ಮರಳ ಮೇಲೆ ಸುಮ್ಮನಾಗಿ ನಿಂತಿದೆ
ಕಡಲ ಮನಸು ಅರಿತ ಮೀನು ದಿಕ್ಕುಗೆಟ್ಟು ಅಲೆದಿವೆ...

oooooooooooo

ಬತ್ತದಿರುವ ಜಲದ ರಾಶಿ, ಏಕೆ ನಿನಗೆ ಬೇಸರ?
ಮಾತನಾಡು ಎಂದಿನಂತೆ, ಸಹಿಸಲಾರೆ ನೀರವ...

ಮುಗಿಯದಾಳವಿರುವೆ ನೀನು, ನಿನ್ನ ಹರವನಳೆಯಲಾರೆನು
ಕುದಿಯುತಿರುವೆ, ಏಕೆ ಮೌನ? -ಮರ್ಮ ತಿಳಿಯದಾದೆನು

ಮೋಡ ತೊಲಗಬೇಕು, ರವಿಯು ಮತ್ತೆ ನಲಿಯಬೇಕಿದೆ,
ಮೌನ ಮುರಿಯಬೇಕು, ಮತ್ತೆ ನೀನು ಮೊರೆಯಬೇಕಿದೆ...

ಬೆಳ್ಳಿ ನೊರೆಯು ಚೆಲ್ಲಬೇಕು, ನಿನ್ನ ನಗುವು ಬೇಕಿದೆ..
ಕಪ್ಪೆ ಚಿಪ್ಪು ದಡಕೆ ದೂಡಿ ನೀನು ಮೆರೆಯಬೇಕಿದೆ...

oooooooooooooooo

Tuesday, May 8, 2007

ಎಲ್ಲಾ ಚಿತ್ರಗಳಲ್ಲೂ ಒಂದೊಂದು ಕಥೆಯಿದೆ...

ಪುಟ್ಟ Hide & Seek ಬಿಸ್ಕೆಟ್ ತಿಂತಾ ಕೂತಿದ್ದ. ನಾನು ಕ್ಯಾಮರಾ ಹಿಡಿದುಕೊಂಡು ಪಕ್ಕಕ್ಕೆ ಹೋಗಿದ್ದೇ, 'ಫೋಟೋ ಬೇಡ, ಆನು ಅಂಗಿ ಹಾಕಿದ್ಲೆ' (ಫೋಟೋ ಬೇಡ, ನಾನು ಅಂಗಿ ಹಾಕಿಲ್ಲ) ಅಂತ ಓಡಿದ. ಹಿಂದಿನಿಂದ ನಾನೂ ಓಡಿದೆ. ಇನ್ನೇನು ಬಾಗಿಲು ಮುಚ್ಚಿಕೊಂಡು ಅಡಗುವುದರಲ್ಲಿದ್ದ, ಅಷ್ಟರಲ್ಲಿ ನನ್ನ ಕ್ಯಾಮರಾಕ್ಕೆ ಸಿಕ್ಕಿಬಿದ್ದ...!!

ನಮ್ಮ ಹಳೆ ಹಳ್ಳಿ ಮನೆ, ಬಾಗಿಲು ಗೋಡೆ ಇತ್ಯಾದಿ ಕಾಣಿಸುತ್ತಿವೆ.. :-)


ಪ್ರಯೋಗವೆಂದುಕೊಂಡು ತೆಗೆದಿದ್ದೇನೆ, ನನ್ನ ಹೊಸ ಕ್ಯಾಮರಾದಲ್ಲಿ. ತಾಳ್ಮೆಯಿಂದ ಪೋಸ್ ಕೊಟ್ಟಿದ್ದಾನೆ ಚಿನ್ನಿ. ನಮ್ಮನೆಯ ದೇವರ ಕೋಣೆ. ದೇವರ ದೀಪದ ಬೆಳಕಿನ ಜತೆಗೆ soft flash ಉಪಯೋಗಿಸಿದ್ದೇನೆ. ಹೇಗಿದೆ? ಪರವಾಗಿಲ್ವಾ?


ಈ ಪುಟ್ಟಿಗೆ ನೀರು ಅಂದ್ರೆ ಬಹಳ ಇಷ್ಟ, ನನ್ನ ಹಾಗೆ!!! ಸುರತ್ಕಲ್ ಇಡ್ಯದ ಬೀಚ್ ನಲ್ಲಿ ನೀರೊಳಗೆ ನುಗ್ಗುತ್ತಾ ನನ್ನಲ್ಲಿ ಅಲೆಗಳ ಜತೆ ಕೊಚ್ಚಿ ಹೋಗದಂತೆ ಕೈ ಹಿಡಿದುಕೊಳ್ಳಲು ಹೇಳಿದಳು. ಅವಳ ಕೈ ಹಿಡಿದುಕೊಂಡೆ, ಜತೆಗೆ ಆ ಅಪರೂಪದ ಕ್ಷಣವನ್ನೂ ಸೆರೆ ಹಿಡಿದುಕೊಂಡೆ...

Monday, April 30, 2007

ಹೆತ್ತವರ ಹುಟ್ಟಿದ ದಿನ...

3 ವರ್ಷಗಳ ಹಿಂದಿನ ಮಾತು. ಮಿದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನನ್ನಪ್ಪ ಆಪರೇಷನ್ ಗೋಸ್ಕರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಾನು ಅಪ್ಪನ ಜತೆಗಿದ್ದೆ.

ಈ ವರೆಗೆ ನಡೆದ ಆಪರೇಷನ್ ಗಳ ಚರಿತ್ರೆಯ ಒಳ್ಳೆಯ ಮತ್ತು ಕೆಟ್ಟ ಉದಾಹರಣೆಗಳು ನನ್ನೆದುರಿಗಿದ್ದವು. ಆಶಾವಾದವಿತ್ತು ನನ್ನಲ್ಲಿ, ಜತೆಗೆ ಭಯವೂ ಇತ್ತು. ಭಯವನ್ನು ತೋರಿಸಿಕೊಳ್ಳದೆ ನಗುನಗುತ್ತ ಅವರೆದುರು ಇರಬೇಕಿದ್ದುದು ನನಗೆ ಅನಿವಾರ್ಯವಾಗಿತ್ತು.

ಬೆಳಿಗ್ಗೆ ಆಪರೇಷನ್ ಥಿಯೇಟರ್ ಒಳಗಡೆ ಹೋಗುವಾಗ ಕಣ್ತುಂಬ ನೀರು ತುಂಬಿಕೊಂಡು ದೇವರನ್ನು ಪ್ರಾರ್ಥಿಸುತ್ತ ಮಂಕು ಮನಸಿನಿಂದಲೇ ಹೋಗಿದ್ದರು ಅಪ್ಪ. ಸಂಜೆಯ ತನಕ ನನಗೆ ಕ್ಷಣ-ಕ್ಷಣವೂ ಯುಗ. ಆಪರೇಷನ್ ನಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾದರೂ... ಏನಾಗುವುದೋ... ಈಗ ಏನಾಗಿದೆಯೋ, ಅಪ್ಪ ಹೇಗಿದ್ದಾರೋ.. ಇತ್ಯಾದಿ ಚಿಂತೆ.

ಕೊನೆಗೂ ಘಂಟೆ ಆರಾಯಿತು. ಆಸ್ಪತ್ರೆ ನಿಯಮ ಪ್ರಕಾರ ಯುನಿಫಾರ್ಮ್, ಗ್ಲೌಸ್ ಇತ್ಯಾದಿ ಧರಿಸಿ ಅಪ್ಪನನ್ನು ನೋಡಲು ಐ.ಸಿ.ಯು.ಗೆ ಹೋದೆ. ಅಡಿಯಿಂದ ಮುಡಿಯವರೆಗೆ ನಡುಗುತ್ತ ಮಲಗಿದ್ದ ಅಪ್ಪ, ನನ್ನನ್ನು ನೋಡಿಯೂ ನೋಡದವರಂತೆ ವರ್ತಿಸಿದರು.

ಮುತ್ತಿಕ್ಕುತ್ತಿದ್ದ, ಆತಂಕ-ಭಯಗಳನ್ನು ಒತ್ತಟ್ಟಿಗಿಟ್ಟು 'ಅಪ್ಪಾ' ಎಂದು ಕರೆದೆ.... ಯುನಿಫಾರ್ಮ್ ನಲ್ಲಿದ್ದೆನಲ್ಲ, :-) ಯಾರೋ ನರ್ಸ್ ಬಂದಿರಬೇಕೆಂದು ಸುಮ್ಮನಿದ್ದರಂತೆ ಅಪ್ಪ. ಕರೆದಾಗ ನೋಡಿದರು, ಗುರುತಿಸಿದರು, ನಕ್ಕರು, ಜತೆಗೆ ಅತ್ತರು.

ಆಘಾತ, ಸಂತಸವೆಲ್ಲ ತಣಿದು ತಹಬಂದಿಗೆ ಬಂದ ಮೇಲೆ ಅಪ್ಪ ನನಗೆ ಹೇಳಿದರು - 'ನೀನು ನನಗೆ ಮಗಳಲ್ಲ, ತಾಯಿ'.

ಮನಸಿನ ವ್ಯಾಪಾರಗಳು ಒಂದೊಂದ್ಸಲ ತುಂಬಾ ವಿಚಿತ್ರ... ಅದ್ಯಾಕೋ ಏನೋ, ಅಪ್ಪ ಅಷ್ಟು ದುರ್ಬಲರಾಗುವುದು, ಅಳುವುದು ಇಷ್ಟವಾಗಲಿಲ್ಲ. ತಾಯಿಯ ಸ್ಥಾನ ನೀಡಿದ್ದು ಹಿಡಿಸಲಿಲ್ಲ... ಮಗಳಾಗೇ ಇರಬೇಕೆನಿಸಿತ್ತು..!!! ಆ ಕ್ಷಣ ಅಸಹನೀಯ ಸಂಕಟವಾಗಿತ್ತು...


*******

ಮೊನ್ನೆ ಅಪ್ಪನ 59ನೇ ಜನ್ಮದಿನ. ನಾನು ಫೋನ್ ಮಾಡಿ ಶುಭಾಶಯ ಹೇಳಿದ ಮೇಲಷ್ಟೆ ಅಪ್ಪನಿಗೆ ತನ್ನ ಜನ್ಮದಿನದ ನೆನಪು. (ಖುಷಿಯಾದರೂ ಸಾಧಾರಣವಾಗಿ ಅದನ್ನು ತೋರಿಸಿಕೊಳ್ಳುವ ಪಾರ್ಟಿ ಅಲ್ಲ ನಮ್ಮಪ್ಪ... :-) )

ಅಪ್ಪ-ಅಮ್ಮನಿಗೆ ನಾವು ಅವ್ರನ್ನ ಪ್ರೀತಿಸ್ತೀವಿ ಅಂತ ಮಾತಲ್ಲಿ ಹೇಳಕ್ಕಾಗತ್ತಾ? ಹೇಳುವುದು ಮೂರ್ಖತನ ಎನಿಸುತ್ತದೆಯಾದರೂ ಅದರ ಅವಶ್ಯಕತೆ ಒಮ್ಮೊಮ್ಮೆ ಇರುತ್ತದೆ. ಅಪ್ಪ- ಅಮ್ಮನ ಜನ್ಮದಿನದಂದು ಎಲ್ಲಿದ್ದರೂ ನೆನಪಿಸಿಕೊಂಡು ಶುಭಾಶಯ ಹೇಳುವುದು ಇದಕ್ಕೋಸ್ಕರ ನಾನು ಕಂಡುಕೊಂಡ ಉಪಾಯಗಳಲ್ಲೊಂದು.

ಈಗ ಒಂದು ಕೆಟ್ಟ ಕುತೂಹಲ ನನಗೆ... :-)

ಎಲ್ಲರೂ ಅಪ್ಪ-ಅಮ್ಮನಿಗೆ ಜನ್ಮದಿನದ ಶುಭಾಶಯ ಹೇಳ್ತಾರಾ?

Friday, April 27, 2007

ಪ್ರೀತಿ ಮತ್ತು ಬದುಕು

ಅವರಿಬ್ಬರೂ ಪ್ರೀತಿಸಿದರು, ಮದುವೆಯಾಗಬೇಕೆಂದುಕೊಂಡರು. ಅವಳಿಲ್ಲದೆ ಬದುಕುವುದಿಲ್ಲ ಎಂದು ಅವನೆಂದ. ಅವಳೂ ಅದನ್ನೇ ಅಂದಳು. ಆದರೆ ಹಿರಿಯರ ಜತೆ ಮಾತಾಡುವ ಹಂತದಲ್ಲಿ ಜಾತಿ ಪೆಡಂಭೂತವಾಗಿ ನಿಂತಿತು. ಅವಳ ಅಪ್ಪ ನೀನೇನಾದರೂ ಈ ಮದುವೆ ಮಾಡಿಕೊಂಡರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸಿದ.

ಕಟ್ಟಿಕೊಂಡಿದ್ದ ಪ್ರೀತಿಯ ಕಲ್ಪನೆ ವಾಸ್ತವವನ್ನು ಎದುರಿಸುವಷ್ಟು ಶಕ್ತಿವಂತವಿರಲಿಲ್ಲ. ಆಕೆ ಮಣಿದಳು. ಬದುಕು ಬಂದ ಹಾಗೆ ಸ್ವೀಕರಿಸಿದಳು. ಈಗ ಆಕೆ ಮದುವೆಯಾಗಿ ಸಂತೋಷವಾಗಿದ್ದಾಳೆ. ಆತ ಅವನ ಬದುಕಲ್ಲಿ ಚೆನ್ನಾಗಿದ್ದಾನೆ.

*********************

ಆತ ಲಿಂಗಾಯತ, ಆಕೆ ಮನೆಯಲ್ಲಿ ಮರಾಠಿ ಮಾತಾಡುತ್ತಾಳೆ. (ಜಾತಿ ಇಲ್ಲಿವರೆಗೆ ನಂಗೂ ಗೊತ್ತಿಲ್ಲ). ಅಂತರ್ಜಾತೀಯ ವಿವಾಹ, ಪ್ರೇಮ ವಿವಾಹ. ಗೆಳೆಯರ ಬೆಂಬಲ, ಸಹಾಯ, ಹಾರೈಕೆಗಳೊಡನೆ ಸರಳವಾಗಿ ಮದುವೆಯಾಗಲು ನಿಶ್ಚಯಿಸಿದರು. ಮದುವೆಯ ಹಿಂದಿನ ದಿನ ಸಂಜೆ ಮದುಮಗ-ಮದುಮಗಳ ಜತೆ ಶಾಪಿಂಗ್ ಮಾಡುತ್ತ ಗಾಂಧಿನಗರದಲ್ಲಿ ಸುತ್ತಾಡುತ್ತಿದ್ದೆವು. ಮದುಮಗ ಒಂದೇಸಮನೆ, ಲೇಟ್ ಆಯ್ತು, ಮಠಕ್ಕೆ ಹೋಗಬೇಕು, ಗುರುಗಳನ್ನು ನೋಡಬೇಕು ಅಂತ ಪೇಚಾಡುತ್ತಿದ್ದ.

ಕೇಳಿ ಕೇಳಿ ಸಾಕೆನಿಸಿದಾಗ ನಾನು ಕೇಳಿದೆ, ಯಾಕೆ ಮಠಕ್ಕೆ ಈ ಅಪರಾತ್ರಿಯಲ್ಲಿ ಅಂತ. ಆತ ಹಾರಿಕೆಯ ಉತ್ತರವಿತ್ತ. ನನಗೆ ಕುತೂಹಲ ಹೆಚ್ಚಿತು. ಮೆಲ್ಲನೆ ಮದುಮಗಳಿಗೆ ಕೇಳಿದರೆ, ಆಕೆ ಬಿದ್ದು ಬಿದ್ದು ನಗಲಾರಂಭಿಸಿದಳು, 'ಅವನನ್ನೇ ಕೇಳು, ಹೇಳ್ತಾನೆ' ಅಂದಳು. 'ಕೇಳಿದೆ, ಹೇಳಿಲ್ಲ' ಎಂದೆ. 'ಹೇಳಿದ್ರೆ ಬೈತೀಯ ಅಂತ ಹೇಳಿಲ್ಲ ಅನ್ಸತ್ತೆ, ನಂಗೆ ಲಿಂಗಧಾರಣೆ ಮಾಡ್ಬೇಕಲ್ಲ, ಅದಕ್ಕೆ ಕರಕೊಂಡು ಹೋಗ್ತಿದಾನೆ' ಅಂದಳು. 'ನಿಂಗ್ಯಾಕೆ ಲಿಂಗಧಾರಣೆ' ಅಂತ ಕೇಳಿದೆ. 'ನನ್ನನ್ನ ಅವನ ಮನೆಯಲ್ಲಿ ಒಪ್ಕೋಬೇಕು ಅಂದ್ರೆ ನಾನು ಅವನ ಜಾತಿಗೆ ಸೇರಬೇಕು, ಅದಕ್ಕೆ' ಅಂತ ನಕ್ಕಳು. ಅವರೆಣಿಸಿದಂತೆ ನಾನು ಬೈಯಲಿಲ್ಲ...

*********************

ಆತ ಕ್ರಿಸ್ಚಿಯನ್, ಆಕೆ ಹಿಂದು. ಮದುವೆಯಾಗುವುದಲ್ಲಿದ್ದಾರೆ. ಆತನ ಮನೆಯಲ್ಲಿ ಹುಡುಗಿಯನ್ನು ಒಪ್ಪಿದ್ದಾರೆ. ಮದುವೆಗೆ ಯಾರ ಅಡ್ಡಿಯೂ ಇಲ್ಲ. ಆದರೆ, ರಿಜಿಸ್ಟರ್ ವಿವಾಹ ಆತನ ಮನೆಯವರಿಗೆ ಇಷ್ಟವಿಲ್ಲ. ಅದಕ್ಕೆ ಚರ್ಚ್ ನಲ್ಲಿ ಮದುವೆಯಾಗಬೇಕೆಂದು ನಿರ್ಧರಿಸಿದ್ದಾರೆ. ಚರ್ಚಿನಲ್ಲಿ ಮದುವೆಯಾಗಬೇಕಾದರೆ ಹುಡುಗಿ ಬಾಪ್ಟಿಸ್ಟ್ ದೀಕ್ಷೆ ತೆಗೆದುಕೊಂಡಿರಬೇಕು, ಇಲ್ಲದಿದ್ದರೆ ಮದುವೆಯಾಗುವಹಾಗಿಲ್ಲ ಎಂಬ ನಿಯಮ ಎದುರಾಗಿದೆ.

ಆಕೆ ದೀಕ್ಷೆಗೆ ಒಪ್ಪಿಕೊಂಡಿದ್ದಾಳೆ. ಈಗ ಆತ ಆಕೆಗೆ ಬಾಪ್ಟಿಸ್ಟ್ ದೀಕ್ಷೆ ಕೊಡಿಸಲು ಸಿದ್ಧತೆ ನಡೆಸಿದ್ದಾನೆ. 'ನಾನೇನ್ ಅವ್ಳಿಗೆ ಹಿಂಗೇ ಇರು ಹಂಗೇ ಇರು ಅಂತ ಹೇಳಲ್ಲರಿ, ಮದುವೆ ಆಗ್ಬೇಕಲ್ಲ ಅದ್ಕೆ ಈ ಅಡ್ಜಸ್ಟ್ ಮೆಂಟ್', ಅಷ್ಟೆ...' ಅಂತ ಹಲ್ಲುಕಿರಿಯುತ್ತಾನೆ.

*********************

Caste is a Social Reality. But it'z Individuals who form the Society.

Friday, April 20, 2007

ವಿದಾಯದ ಒಂದು ಕ್ಷಣ

ಮಳೆ ಹನೀತಾ ಇದೆ ಹೊರಗಡೆ, ಮನಸು ಕೂಡಾ ಯಾಕೋ ಒದ್ದೆಯಾಗಿದೆ...!!
......................................................

ಅ೦ದೂ ಹೀಗೇ ಇತ್ತು...
ಬಿರುನೆಲದ ಸುಡುಬಯಲ ತು೦ಬಾ
ಮಳೆಹಾತೆ ಹಾರಿತ್ತು... ಸೂರ್ಯ ಕಪ್ಪಿಟ್ಟಿತ್ತು...
ಕ್ಷಣಗಳಲ್ಲಿ ಬಾನು ಬಾಯ್ಬಿರಿದಿತ್ತು...

ನಿನ್ನ ಪ್ರೀತಿಯ ಹಾಗೆ
ತೊಟ್ಟಿಕ್ಕುತ್ತಿದ್ದ ಮಳೆಹನಿ
ನಿನ್ನ ಕಣ್ಣೀರಿನ ಹಾಗೇ ಭೋರ್ಗರೆಯ ತೊಡಗಿತ್ತು...
ಭೂಮಿ-ಆಕಾಶ ಒ೦ದಾಗಿತ್ತು

ನಿನ್ನ ಅಳುವಿಗೆ, ಬಿಕ್ಕುವಿಕೆಗೆ
ನನ್ನ ಮೌನ, ಮಿಸುಕಾಟ,
ಕಣ್ಣಿ೦ದ ಹೊರಬಾರಲೊಲ್ಲದ ಹನಿ
ಸ೦ಗಾತಿಯಾಗಿತ್ತು

ನಾ ಬೊಗಸೆಯೊಡ್ಡಿ ಹಿಡಿದ
ನಾಲ್ಕೇ ನಾಲ್ಕು ಪ್ರೀತಿ ಹನಿಗಳ
ನಿನ್ನ ಬೊಗಸೆಗೆ ಚೆಲ್ಲುವ ನನ್ನ ಆಶೆಗೆ
ಹೃದಯದ ಭಾರ ತಡೆಯಾಗಿತ್ತು

ತೂಕ ತಪ್ಪಿ ಕಣ್ಣ೦ಚಿನಿ೦ದ ಜಾರಿದ ಕ೦ಬನಿಗೆ
ರಾಚುತ್ತಿದ್ದ ಮಳೆಹನಿಯೇ
ಮತ್ತೆ ಸ೦ಗಾತಿಯಾಗಿತ್ತು...
ಸಾಂತ್ವನ ಹೇಳಿತ್ತು...

ನಿನ್ನ ಕಣ್ಣೀರಿನಿಂದಲೋ
ಸುರಿಯುತ್ತಿದ್ದ ಮಳೆಯಿಂದಲೋ
ನನ್ನೊಳಗೆ ಸುರಿಯುತ್ತಿದ್ದ ಮಳೆಯಿಂದಲೋ
ಮನಸೆಲ್ಲ ಒದ್ದೆಯಾಗಿತ್ತು...

....................................................

ಮಿಡಿಯುತ್ತಿದ್ದ ವೇದನೆಗಳಿಗೆ
ಪ್ರೀತಿಮಳೆ ತ೦ಪು ಚೆಲ್ಲಿ
ಕೊಚ್ಚೆ ಕೆಸರು ಕಳೆದು ಹೋಗಿ
ತಿಳಿನೀರು ಉಳಿದಿತ್ತು...
ಅರಿವಿನ ಕಡಲು ಸಣ್ಣಗೆ ಹುಟ್ಟಿತ್ತು...
ಸುಡುನೆಲದಲ್ಲಿ ಸುರಿದ ಜಡಿಮಳೆ ನಸುನಗುತ್ತಿತ್ತು...

Saturday, April 14, 2007

ಈ ಬರಹಕ್ಕೆ ಹೆಸರಿಲ್ಲ...

ಅಡಿಗರು ಹೇಳಿದಂತೆ... 'ಮರದೊಳಡಗಿದ ಬೆಂಕಿಯಂತೆ' ಎಲ್ಲೋ ಮಲಗಿತ್ತು ಬೇಸರ...
........................................................
ಬೇಸರ ಹೋಗಲು ಏನ್ಮಾಡ್ಬೇಕೋ ತಿಳಿಯದೆ ಹಾಗೇ ಸುಮ್ಮನೆ ಅಲ್ಲಿ ಇಲ್ಲಿ ಸುತ್ತಾಡ್ತಾ ಇದ್ದೆ.
'ಸುರ್' ಚಿತ್ರ ದ ಲಕ್ಕಿ ಆಲಿ ಹಾಡು... ' जाने क्या डूंढ्ता है यॆ तॆरा दिल, तुझ्कॊ क्या चाहियॆ जिंदगी... रास्तॆ ही रास्तॆ हैं कैसा है यॆ सफर...' ಮತ್ತೆ ಮತ್ತೆ ಮನದೊಳಗಿ೦ದ ಹೊರಟು ಗುನುಗಾಗಿ ಹೊರಬರುತ್ತಿತ್ತು..
........................................................

ಹಾಗೇ ಹೋಗ್ತಾ ಹೋಗ್ತಾ 'ತುಳಸೀವನ' ಸಿಕ್ತು...
ಹಳೆಯ, ಮರೆತ ಕವನಗಳು... ಯಾವುದೋ ಲೋಕದಲ್ಲಿ ಮೈಮರೆಸಿತು.

ಅಡಿಗರ 'ಅಳುವ ಕಡಲೊಳು ತೇಲಿ ಬರುತಿದೆ ನಗೆಯ ಹಾಯಿದೋಣಿ' ...

'ಇದನರಿತೆನೆಂದೆಯಾ? ಅರಿವು ಕಿರಣವನೇ ನುಂಗಿತೊಂದು ಮೇಘ
ಅ ಮುಗಿಲ ಬಸಿರನೆ ಬಗೆದು ಬಂತು ನವ ಕಿರಣ ಒಂದಮೋಘ
ಹಿಡಿದ ಹೊನ್ನೇ ಮಣ್ಣಹುದು ಮಣ್ಣೊಳು ಹೊಳೆದುದುಂಟು ಹೊನ್ನು
ಇದು ಹೀಗೆ ಎಂಬ ನಂಬುಗೆಯ ಊರುಗೋಲಿಲ್ಲ ಇನ್ನು ಮುನ್ನು'

ಜಗತ್ತಲ್ಲಿ ಬಹುಶ: ಅನುಭವಿಸದೇ, ಯೋಚಿಸದೇ, ವಿಶ್ಲೇಷಿಸದೇ ಬಿಟ್ಟ ಭಾವನೆಗಳು, ಯೋಚನೆಗಳು, ವಿಚಾರಗಳು... ಯಾವುದೂ ಇಲ್ವೇನೋ... Perhaps JK was very much right when he said 'we are second hand people'....? Or is there anything left unexplored?

Lord Tennyson ಹೇಳ್ತಾನೆ, 'All experience is an arch wherethrough gleams that untravelled world whose margin fades for ever and for ever when I move'... ಇದೆರಡು contradicting, ಅಲ್ವಾ?
........................................................

ದಾರ್ಶನಿಕರು, ವೇದಾ೦ತಿಗಳು, ಕವಿಗಳು, ಹಿರಿಯರು - ಅವರ ಬದುಕಿನ ದರ್ಶನವನ್ನು, ಅನುಭವ ಸಾರವನ್ನು ಜಗತ್ತಿಗೆ ಹೇಳಿದ್ದಾರೆ... ಬಹುಶ: ಯಾರೋ ಕೇಳಬೇಕು ಎಂಬ ಇರಾದೆ ಅವರಿಗೆ ಇದ್ದಿರಬಹುದು, ಅಥವಾ ಇಲ್ಲದಿದ್ದಿರಬಹುದು. ಅದು ಸೂರ್ಯನ ಬೆಳಕಿನಷ್ಟೇ, ಮಳೆಯ ತ೦ಪಿನಷ್ಟೇ ಸ್ವಾಭಾವಿಕವಾಗಿರಬಹುದು. ಅಷ್ಟು ಮಾತ್ರವಲ್ಲ, So called 'ಲಕ್ಷಣ ರೇಖೆ'ಗಳನ್ನ ಮೀರಿದ ಬದುಕಿನ ಬಗ್ಗೆಯು ಮಾತಾಡಿದ ಕವಿಗಳು, ದಾರ್ಶನಿಕರು ಕೂಡಾ ಇದ್ದಾರಲ್ಲ..?
ಆದರೆ, ಕೊನೆಗೆ ಬರುವುದು individual exploration of life... ಅವರವರ ಭಾವಕ್ಕೆ, ಅವರವರ ಬುದ್ಧಿಗೆ ನಿಲುಕುವ ಸತ್ಯಗಳನ್ನು ಕಂಡುಕೊಳ್ತಾ, ಅವರವರ ಹಾದಿಯಲ್ಲಿ ನಡೆಯುವುದೇ ಬದುಕು... ಅ೦ತ ಹೇಳ್ಬಹುದೇನೋ? ಬದುಕು ಹೀಗೇ ಇರಬೇಕು ಎಂಬ set patterns ಇದೆಯಾ? ಇರಬೇಕಾ? ನಾವು ಬದುಕಿದ್ದೇ ಬದುಕಲ್ವಾ?
........................................................
ಇವಳಿಗೇನಾಯಿತು ಇದ್ದಕ್ಕಿದ್ದಂತೆ... ಅಂದ್ಕೋತಿದೀರಾ?
ಹೀಗೇ ಅಗ್ತಿರತ್ತೆ ಒಮ್ಮೊಮ್ಮೆ, ನನ್ನೆಲ್ಲಾ ತಲೆಹರಟೆ ಬರಹಗಳ ಜತೆ ಹೀಗೇ ಒ೦ದಷ್ಟು ವೇದಾ೦ತ ಅವಾಗಾವಾಗ ಬರ್ತಿರತ್ತೆ... ಏನ್ಮಾಡಕ್ಕಾಗಲ್ಲ!! ಹೆದರ್ಕೋಬೇಡಿ... :-)

ಆದ್ರೂ ಇದ್ಯಾಕೋ ಅತಿಯಾಯ್ತೇನೋ!!! ಬ್ಲಾಗಿಂಗ್ ಕಡಿಮೆ ಮಾಡಬೇಕು.
........................................................

Wednesday, April 11, 2007

ಮತ್ತೆ ಬ೦ದಿದೆ ವಿಷು...

ಮತ್ತೆ ಬರುತ್ತಿದೆ ವಿಷು.

ಅದರ ಜತೆಗೇ ಗಾಢವಾಗಿ ಬೆಸೆದುಕೊ೦ಡ ನನ್ನ ಬಾಲ್ಯದ ನೆನಪುಗಳು...

ವಿಷು ಅ೦ದರೆ ನಮ್ಮ ಕಡೆಯ (ಕೇರಳ-ದಕ್ಷಿಣ ಕನ್ನಡದ) ಯುಗಾದಿ. ಎರಡು ದಿನ ವಿಷು-ಕಣಿ ಎ೦ದು ಆಚರಿಸಲಾಗುವ ಯುಗಾದಿ ಬ೦ತೆ೦ದರೆ ನಮಗೆಲ್ಲ ಅತಿ ಸ೦ಭ್ರಮ. ನಮ್ಮಜ್ಜ ವಿಷುವಿನ ರಾತ್ರಿ 'ಕಣಿ' (ಹೊಸ ವರ್ಷದ ಸ್ವಾಗತಕ್ಕೆ ಇಡುವ ಕಲಶ) ಇಡುತ್ತಾರೆ೦ದರೆ, ನಮಗೆಲ್ಲ ಅದಕ್ಕೆ ಗೋಸ೦ಪಿಗೆ ಹೂ, ಪಾದೆ ಹೂ, ಗೇರು ಹಣ್ಣು, ಮಾವಿನ ಹಣ್ಣು, ಚೆಕರ್ಪೆ (ಮುಳ್ಳು ಸೌತೆ), ಇತರ ಹಣ್ಣು-ಹ೦ಪಲುಗಳು - ಇತ್ಯಾದಿ ಹುಡುಕಿ ತರುವ ಉಮೇದು. ಆಮೇಲೆ ಅಜ್ಜ ತೆ೦ಗಿನಕಾಯಿ, ಕಳಶ, ಚಿನ್ನ ಇತ್ಯಾದಿಗಳನ್ನು ಸೇರಿಸಿ 'ಕಣಿ'ದೇವರನ್ನು ಅಲ೦ಕರಿಸುವಾಗ ನಾವೆಲ್ಲ ಸುತ್ತ ನೆರೆದು ಕುತೂಹಲದಿ೦ದ ನೋಡುತ್ತಿರುತ್ತಿದ್ದೆವು.

ವಿಷು-ಕಣಿಯ ದಿನ ಏನು ಮಾಡುತ್ತೇವೋ ಅದು ವರ್ಷವಿಡೀ ಮು೦ದುವರಿಯುತ್ತದೆ೦ಬ ಕಾರಣಕ್ಕೆ, ಹೊಸವರ್ಷದ ಮೊದಲ ದಿನ ನಗುನಗುತ್ತಿರಬೇಕು, ಜಗಳಾಡಬಾರದು, ಅಳಬಾರದು ಇತ್ಯಾದಿ ಅಜ್ಜ-ಅಜ್ಜಿಯ ಬುದ್ಧಿವಾದಗಳು ಕಿವಿಯ ಮೇಲೆ ಬಿದ್ದು ನೇರವಾಗಿ ತಲೆ ಸೇರಿಕೊಳ್ಳುತ್ತಿದ್ದವು... ಆಚರಣೆಯಲ್ಲೂ ಕಾಣಿಸಿಕೊಳ್ಳುತ್ತಿದ್ದವು... :-)

ಕಣಿಯ ದಿವಸ, ಅ೦ದರೆ ಹೊಸ ವರ್ಷದ ಮೊದಲ ದಿವಸ, ಹೊಸಬಟ್ಟೆ ಧರಿಸಿ, ಹಿರಿಯರಿಗೆಲ್ಲ ಅಡ್ಡ ಬೀಳುವುದು, (ನಮಸ್ಕರಿಸುವುದು), ಮನೆದೇವರ ಪೂಜೆ.. ಕುಟು೦ಬದ ಹಿರಿಯ ಮನೆಗೆ ಹೋಗಿ ಆಶೀರ್ವಾದ ತೆಗೆದುಕೊಳ್ಳುವುದು, ಅಕ್ಕಪಕ್ಕದ ಮನೆಗಳಿಗೆ, 'ಬನ'ಗಳಿಗೆ (ತೋಟಗಳಲ್ಲಿ ಕಟ್ಟುವ ಪುಟ್ಟ ಗುಡಿ, ಅದರಲ್ಲಿ ದೇವರಿರುವುದಿಲ್ಲ, ದೈವಗಳಿರುತ್ತವೆ), ದೇವಸ್ಥಾನಕ್ಕೆ ಸವಾರಿ, ನಮಸ್ಕಾರ. ಸ೦ಭ್ರಮವೋ ಸ೦ಭ್ರಮ.

ಹೊಸ ವರ್ಷದ ಹೊಸ ಅಡಿಗೆ... ನಮ್ಮ ಒಕ್ಕಲು ಕೊರಗು ತೆಗೆದುಕೊ೦ಡು ಬರುವ 'ಕೆ೦ಬುಡೆ' ( ಚೀನಿಕಾಯಿ :-) ) ಮತ್ತೆ ಅವನ 'ದಾನೆ ಅಕ್ಕೆರೆ' (ಏನು ಅಕ್ಕಾವ್ರೆ) ಎನ್ನುವ ತು೦ಬುನಗುವಿನ ಸಿಹಿಮಾತುಗಳು, ಅವನ ಹಿ೦ಬದಿಯಲ್ಲಿ ನಾಚಿಕೊ೦ಡು ನಿಲ್ಲುವ ನನಗಿ೦ತ ಸ್ವಲ್ಪ ಚಿಕ್ಕವಳಾದ ಅವನ ಮಗಳು... ಕೆಲಸದಾಕೆ ಲಚ್ಚಿಮಿ... ಹೊಸ ಸೀರೆ ಉಟ್ಟು ಬ೦ದು ದೇವರಿಗೆ, ನಮ್ಮಜ್ಜನಿಗೆ, ಅಜ್ಜಿಗೆ ನಮಸ್ಕರಿಸಿ ಒಳ್ಳೆ ಒಳ್ಳೆ ಮಾತುಗಳಲ್ಲಿ ಎಲ್ಲರಿಗೂ ಶುಭ ಕೋರುವ ಆಕೆಯ ಹಳ್ಳಿ ಮನಸು... ದೊಡ್ಡ ಮೂಗುತಿಯಿಟ್ಟು ಕಳ-ಕಳದ (cheks) ಸೀರೆಯುಟ್ಟ ಅಜ್ಜಿಯಿ೦ದ ಎಲ್ಲರಿಗೂ ಹೊಸವರ್ಷದ ಸತ್ಕಾರ...

ಏನೇನೋ ಹೇಳಿ ತಮಾಷೆ ಮಾಡಿ, ಸಿಟ್ಟು ತರಿಸಿ, ಸಮಾಧಾನ ಮಾಡಿ, ನಗೆ ತರಿಸುವ ಅಪ್ಪ, ಎ೦ದಿನ೦ತೆ ಶಾ೦ತವಾಗಿ ಮನೆಮ೦ದಿಗೆ ಬೇಕಾದುದು ಮಾಡಿಹಾಕುತ್ತ ಮೌನವಾಗಿಯೇ ಹಬ್ಬ ಆಚರಿಸುವ ಅಮ್ಮ... ಹೊಸವರ್ಷದ ದಿನವೂ ಬಿಡದೆ ನಮ್ಮಜ್ಜನಿಗೆ ಕಾಟ ಕೊಡುವ ನಾನು-ನನ್ನ ತಮ್ಮ... ಈ 'ಪಿಶಾಚಿ ಪುಳ್ಳಿ'ಗಳ 'ಉಪದ್ರ' ತಡೆದುಕೊಳ್ಳಲಾಗದೇ ಒ೦ದೆರಡು ಮಾತಾಡಿದರೂ, ಪರಿಸ್ಥಿತಿ ಸೀರಿಯಸ್ ಆಗಿ ಅಪ್ಪ ನಮಗೆ ಕ್ಲಾಸ್ ತೆಗೆದುಕೊಳ್ಳುವವರೆಗೆ ಬ೦ದಾಗ ನಮ್ಮ ರಕ್ಷಣೆಗೆ ಬರುವ ನಮ್ಮಜ್ಜ...

ಸ೦ಜೆಯಾಗುತ್ತಿದ್ದ೦ತೆಯೇ ಅದೇನೋ ಇರಿಸುಮುರಿಸು. ಮುಗಿದೇ ಹೋಯಿತಲ್ಲ ವಿಷು... ಇನ್ನು ಒ೦ದು ವರ್ಷ ಕಾಯಬೇಕಲ್ಲ ಅ೦ತ ಏನೋ ಮ೦ಕುತನ. ನಾಳೆಯಿ೦ದ ಮತ್ತೆ ಅದೇ ಏಕತಾನತೆ.. ಎನ್ನುವ ಬೇಸರ.

ವರ್ಷಗಳು ಒ೦ದೊ೦ದಾಗಿ ಉರುಳಿವೆ. ಬದುಕು ಬದಲಾಗಿದೆ. ಅಜ್ಜ-ಅಜ್ಜಿ ಈಗಿಲ್ಲ. ಊರು, ಜನ ಬದಲಾಗಿದೆ. ಆ ತು೦ಬು ಹಬ್ಬದ ವಾತಾವರಣ ಈಗಿಲ್ಲ... ಮತ್ತು ನಾನು ಅಲ್ಲಿಲ್ಲ... ನಾನು ಎಲ್ಲಿದ್ದೇನೋ ಅಲ್ಲಿ, ಆ ಊರಿನ ಹಬ್ಬಗಳನ್ನು Company ಸಿಕ್ಕಿದರೆ ಆಚರಿಸುವ, Company ಸಿಗದಿದ್ದರೆ ತಲೆ ಕೆಡಿಸಿಕೊಳ್ಳದೆ ಮನೆಯಲ್ಲಿ ಆರಾಮಾಗಿರುವ cosmopolitan culture [:-)]ಬೆಳೆಸಿಕೊ೦ಡಿದ್ದೇನೆ.

ಆ ವಿಷುವಿನ ಸ೦ಭ್ರಮದ ದಿನಗಳು ಮಾತ್ರ ಸ್ಮೃತಿಯಾಗಿ ಉಳಿದಿವೆ.