Thursday, July 26, 2012

ಮಂಗಳಗೌರಿಯ ನೆಪದಲ್ಲಿ....

ಡಾ.ರಾಜ್ ಮತ್ತು ಊರ್ವಶಿ ಅಭಿನಯದ 'ಶ್ರಾವಣ ಬಂತು' ಸಿನಿಮಾ ನೋಡುವಾಗ ಶ್ರಾವಣವೆಂದರೆ ಯಾಕೆ ಸಂಭ್ರಮವೆಂದು ಅರ್ಥವಾಗುತ್ತಿರಲಿಲ್ಲ, ಸುರಿವ ಜಡಿಮಳೆ ಬಿಟ್ಟು ಬೇರೆ ಕಾರಣವೂ ಇರಬಹುದೆಂದು ಹೊಳೆದಿರಲಿಲ್ಲ. ಎಷ್ಟೆಂದರೂ ದಕ್ಷಿಣ ಕನ್ನಡದಲ್ಲಿ ಇರುವ ಹಬ್ಬ-ಹರಿದಿನಗಳ ಪಟ್ಟಿಯಲ್ಲಿ ಶ್ರಾವಣಕ್ಕೆ ಅಷ್ಟೊಂದು ಮಹತ್ವ ಇರುತ್ತಿರಲಿಲ್ಲ, ಅಲ್ಲಿ ಈ ತಿಂಗಳು 'ಆಟಿ' ಎಂದು ಕರೆಯಲ್ಪಡುತ್ತದೆ. ಯಾವ ಶುಭಕಾರ್ಯವನ್ನೂ ಈ ತಿಂಗಳಲ್ಲಿ ಮಾಡುವುದಿಲ್ಲ.
ಆದರೆ ಬೆಂಗಳೂರಿನ ಕಥೆಯೇ ಬೇರೆ. ಶ್ರಾವಣವೆಂದರೇನೆಂದು ಗೊತ್ತಾಗಬೇಕಾದರೆ ಬರಬೇಕು, ಮಲ್ಲೇಶ್ವರದ 8ನೇ ಕ್ರಾಸ್ ಮಾರುಕಟ್ಟೆಗೆ. ಹೂವು, ಹಣ್ಣು, ಪೂಜಾಸಾಮಗ್ರಿಗಳನ್ನು ಜನ ಕೊಳ್ಳುವ ಸಂಭ್ರಮ ನೋಡಿಯೇ ಅರಿಯಬೇಕು.
ಭೀಮನಮಾವಾಸ್ಯೆಯಿಂದ ಆರಂಭವಾಗುವ ಶ್ರಾವಣದ ಹಬ್ಬದ ಸೀಸನ್, ಒಂದು ತಿಂಗಳು ಪೂರ್ತಿ ನಡೆದು, ಗೌರಿ-ಗಣಪತಿ, ದೀಪಾವಳಿ, ನವರಾತ್ರಿಯ ನೆಪದಲ್ಲಿ ಭಾದ್ರಪದ, ಕಾರ್ತೀಕಕ್ಕೂ ಹಬ್ಬುತ್ತದೆ.
ಮದುವೆಯಾದ ಹುಡುಗಿಯರು ಐದು ವರ್ಷಗಳ ಕಾಲ ಶ್ರಾವಣದ ಪ್ರತಿ ಮಂಗಳವಾರ ಆಚರಿಸುವ ವ್ರತ ಮಂಗಳಗೌರಿ. ಇದಕ್ಕಾಗಿ ಬೇಕಾದ ಸಾಮಾನನ್ನು (ಮಂಗಳಗೌರಿ ಮೂರ್ತಿ, ಕಲಶದ ಗಿಂಡಿ, ಉದ್ಧರಣೆ, ಪಂಚಪಾತ್ರೆ, ದೀಪಗಳು ಇತ್ಯಾದಿ, ಹೆಚ್ಚಾಗಿ ಎಲ್ಲವೂ ಬೆಳ್ಳಿಯದು) ಮದುವೆಯಲ್ಲಿಯೇ ತಾಯಿ ಮನೆಯಿಂದ ಕೊಟ್ಟಿರುತ್ತಾರೆ. ಗಂಡನಿಗೆ ಸುದೀರ್ಘ ಆಯುಷ್ಯ ಬರಲೆಂದು ಆಚರಿಸುವ ಈ ವ್ರತ ಮನೆಯಲ್ಲಿರುವ ಮಕ್ಕಳಿಗೆ ಕೂಡ ಅಚ್ಚುಮೆಚ್ಚು, ಯಾಕೆಂದರೆ, ಇದರಲ್ಲಿ ನೈವೇದ್ಯಕ್ಕೆ ಮತ್ತೆ ದೀಪಕ್ಕೆಂದು ಸಿದ್ಧಪಡಿಸುವ ತಂಬಿಟ್ಟು, ತಿನ್ನಲು ತುಂಬಾ ರುಚಿ!


ಬೇಕಾದ ಸಾಮಾನುಗಳು
ಅಂಚಿರುವ ರವಿಕೆ ಕಣ - 3
ಖಾಲಿ ರವಿಕೆ ಕಣ - 1
ಈಶ್ವರ ಪಾರ್ವತಿ ಫೋಟೋ
ಮಂಗಳ ಗೌರಿ, ಗಣಪತಿ ಮೂರ್ತಿಗಳು
ಅರಿಶಿನ, ಕುಂಕುಮ, ಗಂಧ
ಹೂಬತ್ತಿ, ಎಳೆ ಬತ್ತಿ, ಕರ್ಪೂರ
ಬಿಚ್ಚೋಲೆ, ಕನ್ನಡಿ, ಕಲಶದ ಗಿಂಡಿ
ಆರತಿ ಬಟ್ಲು
ಜೋಡಿ ದೀಪಗಳು(ಎಷ್ಟಿದ್ದರೂ ಚೆನ್ನ)
ಮಣೆ (ದೇವರಿಡಲು)
ಮೊಗಚೆ ಕೈ (ಕಾಡಿಗೆ ಹಿಡಿಯಲು)
ಮಂಗಳಗೌರಿ ಹಾಡುಗಳು, ಕಥೆಯಿರುವ ಪುಸ್ತಕ / ಮಂಗಳಗೌರಿ ವ್ರತದ ಕ್ಯಾಸಟ್ ಅಥವಾ ಸೀಡಿ
ಹೂವು - ಮಲ್ಲಿಗೆ, ಜಾಜಿ, ಗುಲಾಬಿ, ಸೇವಂತಿಗೆ, ಮರುಗ, ದವನ, ಸಂಪಿಗೆ (ಪರಿಮಳಯುಕ್ತವಾದದ್ದು)ಟ
ಹಣ್ಣು - ನೈವೇದ್ಯಕ್ಕೆ
ಬೆಲ್ಲದಚ್ಚು - 1
ಕೊಬರಿ ಗಿಟಕು - 2
ವೀಳ್ಯೆದೆಲೆ - 32(ದೇವರಿಗೆ) +2 (ಕಲಶಕ್ಕೆ)+ ಬಂದವರಿಗೆ ತಲಾ 5
ಬಟ್ಲಡಿಕೆ - 32
ತುಪ್ಪ - ದೀಪಕ್ಕೆ, ನೈವೇದ್ಯ ತಯಾರಿಸಲು
ಗೋಧಿಹಿಟ್ಟು, ಬೆಲ್ಲ (ತಂಬಿಟ್ಟಿಗೆ)
ಶಾವಿಗೆ, ಸಕ್ಕರೆ, ಗೋಡಂಬಿ, ದ್ರಾಕ್ಷಿ, ಏಲಕ್ಕಿ (ಪಾಯಸಕ್ಕೆ)
ಅಕ್ಕಿ, ಹೆಸರುಬೇಳೆ, ಜೀರಿಗೆ, ಕಾಳುಮೆಣಸು, ಉಪ್ಪು, ತುರಿದ ಕೊಬರಿ, ಗೋಡಂಬಿ (ಹುಗ್ಗಿ/ಪೊಂಗಲ್ ತಯಾರಿಸಲು)

ಸಿದ್ಧತೆ:
ಸ್ನಾನ ಮಾಡಿ ರೇಷ್ಮೆ ಸೀರೆಯುಟ್ಟುಕೊಂಡು ದೇವರನ್ನಿಡುವ ಜಾಗ ಶುಚಿಯಾಗಿಸಬೇಕು.
ಮಣೆಯಿಟ್ಟು ಅದರ ಸುತ್ತ ರಂಗೋಲಿ ಬಿಡಿಸಿ, ಮಣ ಮೇಲೆ ಖಾಲಿ ರವಿಕೆ ಕಣವನ್ನು ಹಾಕಬೇಕು. ಅದರ ಮೇಲೆ ಹಿಂದೆ ಈಶ್ವರ ಪಾರ್ವತಿ ಫೋಟೋ ಇಡಬೇಕು. ತ್ರಿಕೋನಾಕೃತಿಯಲ್ಲಿ ಮಡಚಿದ ರವಿಕೆ ಕಣಗಳನ್ನು ಫೋಟೋದ ಎಡ, ಬಲ ಹಾಗೂ ಮೇಲೆ ಜೋಡಿಸಬೇಕು.
ಕಲಶದ ಗಿಂಡಿಗೆ ಸುಣ್ಣದಿಂದ ಸುತ್ತಲೂ ಗೆರೆಯೆಳೆದು, ಅದರಲ್ಲಿ ಕುಂಕುಮದ ಚುಕ್ಕೆಗಳನ್ನು ಹಾಕಬೇಕು. ನಂತರ ಅರಿಶಿನ, ಕುಂಕುಮ ಇಡಬೇಕು. ಫೋಟೋದ ಎದುರು ಕನ್ನಡಿಯಿಟ್ಟು ಅದರೆದುರು ಕಲಶದ ಗಿಂಡಿಯಿಡಬೇಕು. ಅದರಲ್ಲಿ ಎರಡು (ದೊಡ್ಡ ಗಿಂಡಿಯಾದರೆ ಐದು) ವೀಳ್ಯದೆಲೆ ಇಟ್ಟು, ಅರಿಶಿನ ಕುಂಕುಮ ಹಾಕಿ, ನಂತರ ನೀರು ಹಾಕಬೇಕು.
ಒಂದಿಷ್ಟು ಅರಿಶಿನವನ್ನು ತೆಗೆದುಕೊಂಡು ನೀರು ಹಾಕಿ ದಪ್ಪಕ್ಕೆ ಕಲಸಬೇಕು. ನಂತರ ಅದನ್ನು ತಿದ್ದಿ ತೀಡಿ ಗೋಪುರಾಕಾರ ಕೊಡಬೇಕು. ಇದನ್ನು ಬೆಲ್ಲದಚ್ಚಿನ ಮೇಲಿಡಬೇಕು. ಇದು ಅರಿಶಿನದ ಗೌರಿ. (ಕೆಲವರು ಇದಕ್ಕೆ ಸುಣ್ಣದ ಚುಕ್ಕೆ ಕೂಡ ಹಾಕುತ್ತಾರೆ). ಇದನ್ನು ಕಲಶದ ಎದುರು ಪುಟ್ಟ ತಟ್ಟೆಯಲ್ಲಿ ಜೋಡಿಸಬೇಕು.
ಅರಿಶಿನದ ಗೌರಿಯೆದುರಿಗೆ ಮಂಗಳಗೌರಿ ಮೂರ್ತಿಯನ್ನಿಡಬೇಕು. ಅದರ ಎಡಬದಿಗೆ ಗಣಪತಿ ಮೂರ್ತಿಯನ್ನಿಡಬೇಕು. 16 ವೀಳ್ಯದೆಲೆಯ ಮೇಲೆ ಕೊಬರಿ ಗಿಟಕು ಇಟ್ಟು ಅದರೊಳಗೆ 16 ಬಟ್ಲಡಿಕೆ ಜೋಡಿಸಬೇಕು. ಈಥರದ ಎರಡು ಸೆಟ್ ಮಾಡಿ ಅವುಗಳನ್ನು ಅರಿಶಿನದ ಗೌರಿಯ ಎಡ ಮತ್ತು ಬಲಬದಿಗೆ ಜೋಡಿಸಬೇಕು. ಇದ್ದಷ್ಟು ಜೋಡಿ ದೀಪಗಳನ್ನು ತುಪ್ಪದ ಹೂಬತ್ತಿ ಹಾಕಿ ಸಿದ್ಧಪಡಿಸಬೇಕು. ಆರತಿ ತಟ್ಟೆ ಸಿದ್ಧ ಪಡಿಸಬೇಕು. ಮೊಗಚೆ ಕೈಗೆ ವೀಳ್ಯದೆಲೆ ಮತ್ತು ತುಪ್ಪದ ರಸ ಹಚ್ಚಿ ಸಿದ್ಧ ಪಡಿಸಿ ಇಟ್ಟುಕೊಳ್ಳಬೇಕು.
ಪೂಜೆಗೆ ಅರಿಶಿನ -ಕುಂಕುಮ-ಅಕ್ಷತೆ ತುಂಬಿದ ಬಟ್ಟಲು, ವೀಳ್ಯದೆಲೆ, ಅಡಿಕೆ, ಆರತಿ, ಕರ್ಪೂರ ಇತ್ಯಾದಿ ಸಿದ್ಧವಾಗಿಟ್ಟುಕೊಳ್ಳಿ.



ತಂಬಿಟ್ಟಿನ ದೀಪ:
ಇದು ಅಕ್ಕಿ ಅಥವಾ ಗೋಧಿಯಲ್ಲಿ ಮಾಡಬಹುದು. ಅಕ್ಕಿ ಅಥವಾ ಗೋಧಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. ಬೇಕಾದಷ್ಟು ಬೆಲ್ಲವನ್ನು ಬಿಸಿಗಿಟ್ಟು ಕರಗಿಸಬೇಕು. ಬೆಲ್ಲವೆಲ್ಲ ನೀರಾದ ಮೇಲೆ ಹುರಿದ ಗೋಧಿ ಅಥವಾ ಅಕ್ಕಿ ಹಿಟ್ಟನ್ನು ಅದಕ್ಕೆ ಸೇರಿಸಿ ಗಟ್ಟಿಯಾಗಿ ಕಲಿಸಿಕೊಳ್ಳಬೇಕು. (ಇದಕ್ಕೆ ಹುರಿಗಡಲೆ ಪುಡಿ, ಗೋಡಂಬಿ, ಏಲಕ್ಕಿ ಪುಡಿ ಇತ್ಯಾದಿ ಸೇರಿಸಬಹುದು, ಸೇರಿಸಿಕೊಂಡರೆ ಆಮೇಲೆ ತಿನ್ನುವಾಗ ರುಚಿ ಹೆಚ್ಚು :-)). ನಂತರ ಇದರಲ್ಲಿ ಉಂಡೆ ಕಟ್ಟಿ ತಂಬಿಟ್ಟು ಸಿದ್ಧಪಡಿಸಬೇಕು. 16 ತಂಬಿಟ್ಟುಗಳಿಗೆ ಮಧ್ಯದಲ್ಲಿ ಹೊಂಡದಂತೆ ಮಾಡಿ ದೀಪ ಸಿದ್ಧಪಡಿಸಬೇಕು. ಉಳಿದ ಹಿಟ್ಟನ್ನು ಸುಮ್ಮನೇ ಉಂಡೆ ಮಾಡಿ ನೈವೇದ್ಯಕ್ಕಿಡಬೇಕು.
ಶಾವಿಗೆ ಪಾಯಸ:
ಸುಲಭ. ಶಾವಿಗೆ ಹುರಿದುಕೊಳ್ಳಿ, ಹಾಲು ಹಾಕಿ ಬೇಯಿಸಿ, ಬೇಕಾದಷ್ಟು ಸಕ್ಕರೆ ಹಾಕಿ, ದ್ರಾಕ್ಷಿ, ಗೋಡಂಬಿ ಸೇರಿಸಿ.
ಹುಗ್ಗಿ:
ಅತಿಸುಲಭ. ಕುಕ್ಕರ್ ನಲ್ಲಿ ತುಪ್ಪ ಹಾಕಿ ತುಪ್ಪದಲ್ಲಿ ಜೀರಿಗೆ, ಮೆಣಸಿನಕಾಳು, ಅಕ್ಕಿ ಹುರಿದುಕೊಳ್ಳಿ. ಅಕ್ಕಿ ಎಷ್ಟಿದೆಯೋ ಅಷ್ಟೇ ಹೆಸರು ಬೇಳೆ ಕೂಡ ಸೇರಿಸಿ ಮತ್ತೆ ಕೈಯಾಡಿಸಿ. ನಂತರ ಎರಡರಷ್ಟು ನೀರು ಸೇರಿಸಿ ಕುಕ್ಕರ್ ಮುಚ್ಚಳ ಹಾಕಿ. ಕುಕ್ಕರ್ 4-5 ಸಲ (ಅಕ್ಕಿ-ಹೆಸರುಬೇಳೆ ಮೆತ್ತಗಾಗುವ ತನಕ) ಕೂಗಬೇಕು. ಇದು ಇಳಿದ ನಂತರ ಗೋಡಂಬಿ ಸೇರಿಸಿ ಚೆನ್ನಾಗಿ ತಿರುಗಿಸಿ, ಉಪ್ಪು, ತುರಿದ ಕೊಬರಿ ಸೇರಿಸಿ. ಒಂದು ಮಧ್ಯಮಗಾತ್ರದ ಬಟ್ಟಲಲ್ಲಿ ಹುಗ್ಗಿ ಹಾಕಿ ನೈವೇದ್ಯಕ್ಕೆ ಸಿದ್ಧವಾಗಿಡಿ.


****************
ಇನ್ನುಳಿದಿದ್ದು ಮುಂದಿನ ವಾರ ಬರೆಯುವೆ. ಇದು ಒಂದು ರೀತಿಯಲ್ಲಿ ನನಗೆ ಮುಂದಿನ ವರ್ಷ ಸಹಾಯವಾಗಲೆಂದು ಬರೆದುಕೊಳ್ಳುತ್ತಿರುವ ಸ್ವಂತಪಾಠವಾದ್ದರಿಂದ ಇವತ್ತೇ ಪೂರ್ತಿಗೊಳಿಸಬೇಕೆಂಬ ಕಮಿಟ್ಮೆಂಟ್ ನನಗಿಲ್ಲ! :-) ಇದರಲ್ಲಿ ಇನ್ನೂ ಏನಾದರೂ value addition ಅಥವಾ ariaions ಇದ್ದಲ್ಲಿ ಕಮೆಂಟಿಸಿ ತಿಳಿಸಿದರೆ ಉಪಕಾರವಾಗುತ್ತದೆ...:-)
****************
ಕನ್ನಡದಲ್ಲಿ ಬರೆಯುವುದು ಮರೆತೇ ಹೋಗಿದೆ ಎಂದುಕೊಳ್ಳುತ್ತಿದ್ದೆ, ಮರೆತು ಹೋಗಿಲ್ಲ ಅಂತ ಸಮಾಧಾನವಾಗುತ್ತಿದೆ. ಸಂಸಾರ ಸಾಗರದಲ್ಲಿ ಮುಳುಗಿ ಹೋದ ಕಾರಣ ಬ್ಲಾಗ್ ಮನೆಯ ದಾರಿ ಆಗಾಗ ಮರೆತುಹೋಗುತ್ತಿದೆ. ಏನು ಮಾಡಲಿ?