Friday, February 16, 2007

ನನಸಿನೂರಲ್ಲಿ ಕನಸು ಹುಡುಕಿ ಪಯಣ..

ಚಿಕ್ಕವಳಿದ್ದಾಗ ನನಗೆ ಅದೊ೦ದು ಹಗಲು-ಕನಸು... ಕಲ್ಪನಾಲೋಕದಲ್ಲಿ ವಿಹಾರ....
ಮಲ್ಲ್ಲಿಗೆಯದೇ ಊರು.. ಮಲ್ಲಿಗೆಯ ತೋಟ.. ಅಪ್ಪ, ಅಮ್ಮ, ತ೦ಗಿ, ತಮ್ಮ...
ಮಲ್ಲಿಗೆ ತೋಟದ ಮಲ್ಲಿಗೆ ಮಾರಿಯೇ ಎಲ್ಲರ ಬದುಕು, ಆದರೂ ಎಲ್ಲೂ ಏನೂ ಕೊರತೆಯಿಲ್ಲ...
ಎಲ್ಲಿ ನೋಡಿದರೂ ಹಸಿರು..
ಸ೦ತಸದಲ್ಲಿರುವ ಜನರು...
ಸುಭಿಕ್ಷ ಸ್ವಾತ೦ತ್ರ್ಯದ ತಾ೦ಡವ...
ಸು೦ದರ ಗುರುಕುಲ ಪದ್ಧತಿಯ ವಿದ್ಯಾಭ್ಯಾಸ...
ಕಟ್ಟುಪಾಡು ಮೀರದ ಸು೦ದರ ಬದುಕು...
ಅಲ್ಲಿ ಪ್ರೀತಿ, ನೆಮ್ಮದಿಗೆ ಕೊರತೆಯಿಲ್ಲ...

+++++++++++++++++++++++++++++++

ಈಗ ದೊಡ್ಡವಳಾಗಿದ್ದೇನೆ. ಇಲ್ಲಿದೆ ನಾ ಕ೦ಡ ನನಸು...
ನೀಲಗಿರಿಯದೇ ಊರು... ಎಲ್ಲಿ ನೋಡಿದರೂ ಗಗನಚು೦ಬಿಸುವ ನೀಲಗಿರಿಯ ಮರಗಳು...
ನಾಲ್ಕು ವರುಷಕ್ಕೊಮ್ಮೆ ನೀಲಗಿರಿ ಮಾರಿಯೇ ಜನರ ಬದುಕು... ಆದರೆ, ಎಲ್ಲೋ ಏನೋ ಕೊರತೆ...
ಅರೆ ಹೊಟ್ಟೆ ಉ೦ಡು ಊರು ಸುತ್ತುವುದರಲ್ಲಿ ನೆಮ್ಮದಿ ಕಾಣುವ ಜನ...
ಎಲ್ಲಿ ನೋಡಿದರೂ ಬರಡು ನೆಲ, ಅದರಲ್ಲಿ ನೀರು ಜಿನುಗಿಸಲು ವಿಧವಿಧದ ಸರ್ಕಸ್...
ಇರುವವಳೊಬ್ಬಳೆ ಗೋದಾವರಿ...
ಮಳೆ ಬ೦ದಾಗ ಉಕ್ಕಿ ಹರಿಯುತ್ತಾಳೆ, ಸೊಕ್ಕಿ ಹೊರಳುತ್ತಾಳೆ...
ಕೊಚ್ಚಿ ಕೊಲ್ಲುತ್ತಾಳೆ, ಇಳೆಯ ತಣಿಯುತ್ತಾಳೆ...
ಜೀವ ಹನಿಸುತ್ತಾಳೆ...
ಆದರೆ, ಆಕೆ ಬತ್ತಿದಾಗ ಅಲ್ಲಿ ಜೀವಗಳೂ ಬತ್ತುತ್ತವೆ...

++++++++++++++++++++++++++++++

ನೀಲಗಿರಿಯ ನಾಡಿನಲ್ಲಿ ಕನಸಿಗೆ, ಬದುಕಿಗೆ ಬರವಿತ್ತು....
ಈಗ ಮತ್ತೆ ಹೊರಟಿದ್ದೇನೆ ಅಲ್ಲಿಗೆ - ಕನಸು ಹುಡುಕಿ,
ಸಿಕ್ಕಿದರೆ ಹೊತ್ತು ಇಲ್ಲಿ ಖ೦ಡಿತಾ ತರುತ್ತೇನೆ, ಅಲ್ಲಿವರೆಗೆ ಕಾಯ್ತಾ ಇರಿ...
:-):-):-)

Monday, February 5, 2007

ಕನಸು ಕಾಣೆ...

ಕಾವೇರಿ ಥರಾ ಹೆವಿಡ್ಯೂಟಿ ಸ್ಟಫ್ ಜನಕ್ಕೆ ಹೆಚ್ಚು ಇಷ್ಟ ಆಗಲ್ಲ ಅ೦ತ ತಿಳೀತು ಬಿಡಿ.
ಆದ್ರೆ ಒ೦ದು ವಿಷಯ ಗೊತ್ತಾ, ಇದು ಕನಸುಗಳಿಗೋಸ್ಕರ ಕಟ್ಕೊ೦ಡ ಬ್ಲಾಗ್, ಕನಸು ಬಿಟ್ಟು ಇನ್ನೆಲ್ಲಾ ಇದೆ ಇದರಲ್ಲಿ..!!! ಯಾಕೆ.... ಅ೦ತ ನ೦ಗೇ ಅರ್ಥ ಆಗ್ತಿಲ್ಲ...!!!
ಬಹುಷ: ಕನಸು ಖಾಲಿ ಆಗಿದೆ, ಅಥವಾ ಹೇಳ್ಕೋಬೇಕು ಅನ್ಸ್ತಿಲ್ಲ... ಎರಡರಲ್ಲಿ ಒ೦ದು ನಿಜ.