Monday, April 30, 2007

ಹೆತ್ತವರ ಹುಟ್ಟಿದ ದಿನ...

3 ವರ್ಷಗಳ ಹಿಂದಿನ ಮಾತು. ಮಿದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನನ್ನಪ್ಪ ಆಪರೇಷನ್ ಗೋಸ್ಕರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಾನು ಅಪ್ಪನ ಜತೆಗಿದ್ದೆ.

ಈ ವರೆಗೆ ನಡೆದ ಆಪರೇಷನ್ ಗಳ ಚರಿತ್ರೆಯ ಒಳ್ಳೆಯ ಮತ್ತು ಕೆಟ್ಟ ಉದಾಹರಣೆಗಳು ನನ್ನೆದುರಿಗಿದ್ದವು. ಆಶಾವಾದವಿತ್ತು ನನ್ನಲ್ಲಿ, ಜತೆಗೆ ಭಯವೂ ಇತ್ತು. ಭಯವನ್ನು ತೋರಿಸಿಕೊಳ್ಳದೆ ನಗುನಗುತ್ತ ಅವರೆದುರು ಇರಬೇಕಿದ್ದುದು ನನಗೆ ಅನಿವಾರ್ಯವಾಗಿತ್ತು.

ಬೆಳಿಗ್ಗೆ ಆಪರೇಷನ್ ಥಿಯೇಟರ್ ಒಳಗಡೆ ಹೋಗುವಾಗ ಕಣ್ತುಂಬ ನೀರು ತುಂಬಿಕೊಂಡು ದೇವರನ್ನು ಪ್ರಾರ್ಥಿಸುತ್ತ ಮಂಕು ಮನಸಿನಿಂದಲೇ ಹೋಗಿದ್ದರು ಅಪ್ಪ. ಸಂಜೆಯ ತನಕ ನನಗೆ ಕ್ಷಣ-ಕ್ಷಣವೂ ಯುಗ. ಆಪರೇಷನ್ ನಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾದರೂ... ಏನಾಗುವುದೋ... ಈಗ ಏನಾಗಿದೆಯೋ, ಅಪ್ಪ ಹೇಗಿದ್ದಾರೋ.. ಇತ್ಯಾದಿ ಚಿಂತೆ.

ಕೊನೆಗೂ ಘಂಟೆ ಆರಾಯಿತು. ಆಸ್ಪತ್ರೆ ನಿಯಮ ಪ್ರಕಾರ ಯುನಿಫಾರ್ಮ್, ಗ್ಲೌಸ್ ಇತ್ಯಾದಿ ಧರಿಸಿ ಅಪ್ಪನನ್ನು ನೋಡಲು ಐ.ಸಿ.ಯು.ಗೆ ಹೋದೆ. ಅಡಿಯಿಂದ ಮುಡಿಯವರೆಗೆ ನಡುಗುತ್ತ ಮಲಗಿದ್ದ ಅಪ್ಪ, ನನ್ನನ್ನು ನೋಡಿಯೂ ನೋಡದವರಂತೆ ವರ್ತಿಸಿದರು.

ಮುತ್ತಿಕ್ಕುತ್ತಿದ್ದ, ಆತಂಕ-ಭಯಗಳನ್ನು ಒತ್ತಟ್ಟಿಗಿಟ್ಟು 'ಅಪ್ಪಾ' ಎಂದು ಕರೆದೆ.... ಯುನಿಫಾರ್ಮ್ ನಲ್ಲಿದ್ದೆನಲ್ಲ, :-) ಯಾರೋ ನರ್ಸ್ ಬಂದಿರಬೇಕೆಂದು ಸುಮ್ಮನಿದ್ದರಂತೆ ಅಪ್ಪ. ಕರೆದಾಗ ನೋಡಿದರು, ಗುರುತಿಸಿದರು, ನಕ್ಕರು, ಜತೆಗೆ ಅತ್ತರು.

ಆಘಾತ, ಸಂತಸವೆಲ್ಲ ತಣಿದು ತಹಬಂದಿಗೆ ಬಂದ ಮೇಲೆ ಅಪ್ಪ ನನಗೆ ಹೇಳಿದರು - 'ನೀನು ನನಗೆ ಮಗಳಲ್ಲ, ತಾಯಿ'.

ಮನಸಿನ ವ್ಯಾಪಾರಗಳು ಒಂದೊಂದ್ಸಲ ತುಂಬಾ ವಿಚಿತ್ರ... ಅದ್ಯಾಕೋ ಏನೋ, ಅಪ್ಪ ಅಷ್ಟು ದುರ್ಬಲರಾಗುವುದು, ಅಳುವುದು ಇಷ್ಟವಾಗಲಿಲ್ಲ. ತಾಯಿಯ ಸ್ಥಾನ ನೀಡಿದ್ದು ಹಿಡಿಸಲಿಲ್ಲ... ಮಗಳಾಗೇ ಇರಬೇಕೆನಿಸಿತ್ತು..!!! ಆ ಕ್ಷಣ ಅಸಹನೀಯ ಸಂಕಟವಾಗಿತ್ತು...


*******

ಮೊನ್ನೆ ಅಪ್ಪನ 59ನೇ ಜನ್ಮದಿನ. ನಾನು ಫೋನ್ ಮಾಡಿ ಶುಭಾಶಯ ಹೇಳಿದ ಮೇಲಷ್ಟೆ ಅಪ್ಪನಿಗೆ ತನ್ನ ಜನ್ಮದಿನದ ನೆನಪು. (ಖುಷಿಯಾದರೂ ಸಾಧಾರಣವಾಗಿ ಅದನ್ನು ತೋರಿಸಿಕೊಳ್ಳುವ ಪಾರ್ಟಿ ಅಲ್ಲ ನಮ್ಮಪ್ಪ... :-) )

ಅಪ್ಪ-ಅಮ್ಮನಿಗೆ ನಾವು ಅವ್ರನ್ನ ಪ್ರೀತಿಸ್ತೀವಿ ಅಂತ ಮಾತಲ್ಲಿ ಹೇಳಕ್ಕಾಗತ್ತಾ? ಹೇಳುವುದು ಮೂರ್ಖತನ ಎನಿಸುತ್ತದೆಯಾದರೂ ಅದರ ಅವಶ್ಯಕತೆ ಒಮ್ಮೊಮ್ಮೆ ಇರುತ್ತದೆ. ಅಪ್ಪ- ಅಮ್ಮನ ಜನ್ಮದಿನದಂದು ಎಲ್ಲಿದ್ದರೂ ನೆನಪಿಸಿಕೊಂಡು ಶುಭಾಶಯ ಹೇಳುವುದು ಇದಕ್ಕೋಸ್ಕರ ನಾನು ಕಂಡುಕೊಂಡ ಉಪಾಯಗಳಲ್ಲೊಂದು.

ಈಗ ಒಂದು ಕೆಟ್ಟ ಕುತೂಹಲ ನನಗೆ... :-)

ಎಲ್ಲರೂ ಅಪ್ಪ-ಅಮ್ಮನಿಗೆ ಜನ್ಮದಿನದ ಶುಭಾಶಯ ಹೇಳ್ತಾರಾ?

Friday, April 27, 2007

ಪ್ರೀತಿ ಮತ್ತು ಬದುಕು

ಅವರಿಬ್ಬರೂ ಪ್ರೀತಿಸಿದರು, ಮದುವೆಯಾಗಬೇಕೆಂದುಕೊಂಡರು. ಅವಳಿಲ್ಲದೆ ಬದುಕುವುದಿಲ್ಲ ಎಂದು ಅವನೆಂದ. ಅವಳೂ ಅದನ್ನೇ ಅಂದಳು. ಆದರೆ ಹಿರಿಯರ ಜತೆ ಮಾತಾಡುವ ಹಂತದಲ್ಲಿ ಜಾತಿ ಪೆಡಂಭೂತವಾಗಿ ನಿಂತಿತು. ಅವಳ ಅಪ್ಪ ನೀನೇನಾದರೂ ಈ ಮದುವೆ ಮಾಡಿಕೊಂಡರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸಿದ.

ಕಟ್ಟಿಕೊಂಡಿದ್ದ ಪ್ರೀತಿಯ ಕಲ್ಪನೆ ವಾಸ್ತವವನ್ನು ಎದುರಿಸುವಷ್ಟು ಶಕ್ತಿವಂತವಿರಲಿಲ್ಲ. ಆಕೆ ಮಣಿದಳು. ಬದುಕು ಬಂದ ಹಾಗೆ ಸ್ವೀಕರಿಸಿದಳು. ಈಗ ಆಕೆ ಮದುವೆಯಾಗಿ ಸಂತೋಷವಾಗಿದ್ದಾಳೆ. ಆತ ಅವನ ಬದುಕಲ್ಲಿ ಚೆನ್ನಾಗಿದ್ದಾನೆ.

*********************

ಆತ ಲಿಂಗಾಯತ, ಆಕೆ ಮನೆಯಲ್ಲಿ ಮರಾಠಿ ಮಾತಾಡುತ್ತಾಳೆ. (ಜಾತಿ ಇಲ್ಲಿವರೆಗೆ ನಂಗೂ ಗೊತ್ತಿಲ್ಲ). ಅಂತರ್ಜಾತೀಯ ವಿವಾಹ, ಪ್ರೇಮ ವಿವಾಹ. ಗೆಳೆಯರ ಬೆಂಬಲ, ಸಹಾಯ, ಹಾರೈಕೆಗಳೊಡನೆ ಸರಳವಾಗಿ ಮದುವೆಯಾಗಲು ನಿಶ್ಚಯಿಸಿದರು. ಮದುವೆಯ ಹಿಂದಿನ ದಿನ ಸಂಜೆ ಮದುಮಗ-ಮದುಮಗಳ ಜತೆ ಶಾಪಿಂಗ್ ಮಾಡುತ್ತ ಗಾಂಧಿನಗರದಲ್ಲಿ ಸುತ್ತಾಡುತ್ತಿದ್ದೆವು. ಮದುಮಗ ಒಂದೇಸಮನೆ, ಲೇಟ್ ಆಯ್ತು, ಮಠಕ್ಕೆ ಹೋಗಬೇಕು, ಗುರುಗಳನ್ನು ನೋಡಬೇಕು ಅಂತ ಪೇಚಾಡುತ್ತಿದ್ದ.

ಕೇಳಿ ಕೇಳಿ ಸಾಕೆನಿಸಿದಾಗ ನಾನು ಕೇಳಿದೆ, ಯಾಕೆ ಮಠಕ್ಕೆ ಈ ಅಪರಾತ್ರಿಯಲ್ಲಿ ಅಂತ. ಆತ ಹಾರಿಕೆಯ ಉತ್ತರವಿತ್ತ. ನನಗೆ ಕುತೂಹಲ ಹೆಚ್ಚಿತು. ಮೆಲ್ಲನೆ ಮದುಮಗಳಿಗೆ ಕೇಳಿದರೆ, ಆಕೆ ಬಿದ್ದು ಬಿದ್ದು ನಗಲಾರಂಭಿಸಿದಳು, 'ಅವನನ್ನೇ ಕೇಳು, ಹೇಳ್ತಾನೆ' ಅಂದಳು. 'ಕೇಳಿದೆ, ಹೇಳಿಲ್ಲ' ಎಂದೆ. 'ಹೇಳಿದ್ರೆ ಬೈತೀಯ ಅಂತ ಹೇಳಿಲ್ಲ ಅನ್ಸತ್ತೆ, ನಂಗೆ ಲಿಂಗಧಾರಣೆ ಮಾಡ್ಬೇಕಲ್ಲ, ಅದಕ್ಕೆ ಕರಕೊಂಡು ಹೋಗ್ತಿದಾನೆ' ಅಂದಳು. 'ನಿಂಗ್ಯಾಕೆ ಲಿಂಗಧಾರಣೆ' ಅಂತ ಕೇಳಿದೆ. 'ನನ್ನನ್ನ ಅವನ ಮನೆಯಲ್ಲಿ ಒಪ್ಕೋಬೇಕು ಅಂದ್ರೆ ನಾನು ಅವನ ಜಾತಿಗೆ ಸೇರಬೇಕು, ಅದಕ್ಕೆ' ಅಂತ ನಕ್ಕಳು. ಅವರೆಣಿಸಿದಂತೆ ನಾನು ಬೈಯಲಿಲ್ಲ...

*********************

ಆತ ಕ್ರಿಸ್ಚಿಯನ್, ಆಕೆ ಹಿಂದು. ಮದುವೆಯಾಗುವುದಲ್ಲಿದ್ದಾರೆ. ಆತನ ಮನೆಯಲ್ಲಿ ಹುಡುಗಿಯನ್ನು ಒಪ್ಪಿದ್ದಾರೆ. ಮದುವೆಗೆ ಯಾರ ಅಡ್ಡಿಯೂ ಇಲ್ಲ. ಆದರೆ, ರಿಜಿಸ್ಟರ್ ವಿವಾಹ ಆತನ ಮನೆಯವರಿಗೆ ಇಷ್ಟವಿಲ್ಲ. ಅದಕ್ಕೆ ಚರ್ಚ್ ನಲ್ಲಿ ಮದುವೆಯಾಗಬೇಕೆಂದು ನಿರ್ಧರಿಸಿದ್ದಾರೆ. ಚರ್ಚಿನಲ್ಲಿ ಮದುವೆಯಾಗಬೇಕಾದರೆ ಹುಡುಗಿ ಬಾಪ್ಟಿಸ್ಟ್ ದೀಕ್ಷೆ ತೆಗೆದುಕೊಂಡಿರಬೇಕು, ಇಲ್ಲದಿದ್ದರೆ ಮದುವೆಯಾಗುವಹಾಗಿಲ್ಲ ಎಂಬ ನಿಯಮ ಎದುರಾಗಿದೆ.

ಆಕೆ ದೀಕ್ಷೆಗೆ ಒಪ್ಪಿಕೊಂಡಿದ್ದಾಳೆ. ಈಗ ಆತ ಆಕೆಗೆ ಬಾಪ್ಟಿಸ್ಟ್ ದೀಕ್ಷೆ ಕೊಡಿಸಲು ಸಿದ್ಧತೆ ನಡೆಸಿದ್ದಾನೆ. 'ನಾನೇನ್ ಅವ್ಳಿಗೆ ಹಿಂಗೇ ಇರು ಹಂಗೇ ಇರು ಅಂತ ಹೇಳಲ್ಲರಿ, ಮದುವೆ ಆಗ್ಬೇಕಲ್ಲ ಅದ್ಕೆ ಈ ಅಡ್ಜಸ್ಟ್ ಮೆಂಟ್', ಅಷ್ಟೆ...' ಅಂತ ಹಲ್ಲುಕಿರಿಯುತ್ತಾನೆ.

*********************

Caste is a Social Reality. But it'z Individuals who form the Society.

Friday, April 20, 2007

ವಿದಾಯದ ಒಂದು ಕ್ಷಣ

ಮಳೆ ಹನೀತಾ ಇದೆ ಹೊರಗಡೆ, ಮನಸು ಕೂಡಾ ಯಾಕೋ ಒದ್ದೆಯಾಗಿದೆ...!!
......................................................

ಅ೦ದೂ ಹೀಗೇ ಇತ್ತು...
ಬಿರುನೆಲದ ಸುಡುಬಯಲ ತು೦ಬಾ
ಮಳೆಹಾತೆ ಹಾರಿತ್ತು... ಸೂರ್ಯ ಕಪ್ಪಿಟ್ಟಿತ್ತು...
ಕ್ಷಣಗಳಲ್ಲಿ ಬಾನು ಬಾಯ್ಬಿರಿದಿತ್ತು...

ನಿನ್ನ ಪ್ರೀತಿಯ ಹಾಗೆ
ತೊಟ್ಟಿಕ್ಕುತ್ತಿದ್ದ ಮಳೆಹನಿ
ನಿನ್ನ ಕಣ್ಣೀರಿನ ಹಾಗೇ ಭೋರ್ಗರೆಯ ತೊಡಗಿತ್ತು...
ಭೂಮಿ-ಆಕಾಶ ಒ೦ದಾಗಿತ್ತು

ನಿನ್ನ ಅಳುವಿಗೆ, ಬಿಕ್ಕುವಿಕೆಗೆ
ನನ್ನ ಮೌನ, ಮಿಸುಕಾಟ,
ಕಣ್ಣಿ೦ದ ಹೊರಬಾರಲೊಲ್ಲದ ಹನಿ
ಸ೦ಗಾತಿಯಾಗಿತ್ತು

ನಾ ಬೊಗಸೆಯೊಡ್ಡಿ ಹಿಡಿದ
ನಾಲ್ಕೇ ನಾಲ್ಕು ಪ್ರೀತಿ ಹನಿಗಳ
ನಿನ್ನ ಬೊಗಸೆಗೆ ಚೆಲ್ಲುವ ನನ್ನ ಆಶೆಗೆ
ಹೃದಯದ ಭಾರ ತಡೆಯಾಗಿತ್ತು

ತೂಕ ತಪ್ಪಿ ಕಣ್ಣ೦ಚಿನಿ೦ದ ಜಾರಿದ ಕ೦ಬನಿಗೆ
ರಾಚುತ್ತಿದ್ದ ಮಳೆಹನಿಯೇ
ಮತ್ತೆ ಸ೦ಗಾತಿಯಾಗಿತ್ತು...
ಸಾಂತ್ವನ ಹೇಳಿತ್ತು...

ನಿನ್ನ ಕಣ್ಣೀರಿನಿಂದಲೋ
ಸುರಿಯುತ್ತಿದ್ದ ಮಳೆಯಿಂದಲೋ
ನನ್ನೊಳಗೆ ಸುರಿಯುತ್ತಿದ್ದ ಮಳೆಯಿಂದಲೋ
ಮನಸೆಲ್ಲ ಒದ್ದೆಯಾಗಿತ್ತು...

....................................................

ಮಿಡಿಯುತ್ತಿದ್ದ ವೇದನೆಗಳಿಗೆ
ಪ್ರೀತಿಮಳೆ ತ೦ಪು ಚೆಲ್ಲಿ
ಕೊಚ್ಚೆ ಕೆಸರು ಕಳೆದು ಹೋಗಿ
ತಿಳಿನೀರು ಉಳಿದಿತ್ತು...
ಅರಿವಿನ ಕಡಲು ಸಣ್ಣಗೆ ಹುಟ್ಟಿತ್ತು...
ಸುಡುನೆಲದಲ್ಲಿ ಸುರಿದ ಜಡಿಮಳೆ ನಸುನಗುತ್ತಿತ್ತು...

Saturday, April 14, 2007

ಈ ಬರಹಕ್ಕೆ ಹೆಸರಿಲ್ಲ...

ಅಡಿಗರು ಹೇಳಿದಂತೆ... 'ಮರದೊಳಡಗಿದ ಬೆಂಕಿಯಂತೆ' ಎಲ್ಲೋ ಮಲಗಿತ್ತು ಬೇಸರ...
........................................................
ಬೇಸರ ಹೋಗಲು ಏನ್ಮಾಡ್ಬೇಕೋ ತಿಳಿಯದೆ ಹಾಗೇ ಸುಮ್ಮನೆ ಅಲ್ಲಿ ಇಲ್ಲಿ ಸುತ್ತಾಡ್ತಾ ಇದ್ದೆ.
'ಸುರ್' ಚಿತ್ರ ದ ಲಕ್ಕಿ ಆಲಿ ಹಾಡು... ' जाने क्या डूंढ्ता है यॆ तॆरा दिल, तुझ्कॊ क्या चाहियॆ जिंदगी... रास्तॆ ही रास्तॆ हैं कैसा है यॆ सफर...' ಮತ್ತೆ ಮತ್ತೆ ಮನದೊಳಗಿ೦ದ ಹೊರಟು ಗುನುಗಾಗಿ ಹೊರಬರುತ್ತಿತ್ತು..
........................................................

ಹಾಗೇ ಹೋಗ್ತಾ ಹೋಗ್ತಾ 'ತುಳಸೀವನ' ಸಿಕ್ತು...
ಹಳೆಯ, ಮರೆತ ಕವನಗಳು... ಯಾವುದೋ ಲೋಕದಲ್ಲಿ ಮೈಮರೆಸಿತು.

ಅಡಿಗರ 'ಅಳುವ ಕಡಲೊಳು ತೇಲಿ ಬರುತಿದೆ ನಗೆಯ ಹಾಯಿದೋಣಿ' ...

'ಇದನರಿತೆನೆಂದೆಯಾ? ಅರಿವು ಕಿರಣವನೇ ನುಂಗಿತೊಂದು ಮೇಘ
ಅ ಮುಗಿಲ ಬಸಿರನೆ ಬಗೆದು ಬಂತು ನವ ಕಿರಣ ಒಂದಮೋಘ
ಹಿಡಿದ ಹೊನ್ನೇ ಮಣ್ಣಹುದು ಮಣ್ಣೊಳು ಹೊಳೆದುದುಂಟು ಹೊನ್ನು
ಇದು ಹೀಗೆ ಎಂಬ ನಂಬುಗೆಯ ಊರುಗೋಲಿಲ್ಲ ಇನ್ನು ಮುನ್ನು'

ಜಗತ್ತಲ್ಲಿ ಬಹುಶ: ಅನುಭವಿಸದೇ, ಯೋಚಿಸದೇ, ವಿಶ್ಲೇಷಿಸದೇ ಬಿಟ್ಟ ಭಾವನೆಗಳು, ಯೋಚನೆಗಳು, ವಿಚಾರಗಳು... ಯಾವುದೂ ಇಲ್ವೇನೋ... Perhaps JK was very much right when he said 'we are second hand people'....? Or is there anything left unexplored?

Lord Tennyson ಹೇಳ್ತಾನೆ, 'All experience is an arch wherethrough gleams that untravelled world whose margin fades for ever and for ever when I move'... ಇದೆರಡು contradicting, ಅಲ್ವಾ?
........................................................

ದಾರ್ಶನಿಕರು, ವೇದಾ೦ತಿಗಳು, ಕವಿಗಳು, ಹಿರಿಯರು - ಅವರ ಬದುಕಿನ ದರ್ಶನವನ್ನು, ಅನುಭವ ಸಾರವನ್ನು ಜಗತ್ತಿಗೆ ಹೇಳಿದ್ದಾರೆ... ಬಹುಶ: ಯಾರೋ ಕೇಳಬೇಕು ಎಂಬ ಇರಾದೆ ಅವರಿಗೆ ಇದ್ದಿರಬಹುದು, ಅಥವಾ ಇಲ್ಲದಿದ್ದಿರಬಹುದು. ಅದು ಸೂರ್ಯನ ಬೆಳಕಿನಷ್ಟೇ, ಮಳೆಯ ತ೦ಪಿನಷ್ಟೇ ಸ್ವಾಭಾವಿಕವಾಗಿರಬಹುದು. ಅಷ್ಟು ಮಾತ್ರವಲ್ಲ, So called 'ಲಕ್ಷಣ ರೇಖೆ'ಗಳನ್ನ ಮೀರಿದ ಬದುಕಿನ ಬಗ್ಗೆಯು ಮಾತಾಡಿದ ಕವಿಗಳು, ದಾರ್ಶನಿಕರು ಕೂಡಾ ಇದ್ದಾರಲ್ಲ..?
ಆದರೆ, ಕೊನೆಗೆ ಬರುವುದು individual exploration of life... ಅವರವರ ಭಾವಕ್ಕೆ, ಅವರವರ ಬುದ್ಧಿಗೆ ನಿಲುಕುವ ಸತ್ಯಗಳನ್ನು ಕಂಡುಕೊಳ್ತಾ, ಅವರವರ ಹಾದಿಯಲ್ಲಿ ನಡೆಯುವುದೇ ಬದುಕು... ಅ೦ತ ಹೇಳ್ಬಹುದೇನೋ? ಬದುಕು ಹೀಗೇ ಇರಬೇಕು ಎಂಬ set patterns ಇದೆಯಾ? ಇರಬೇಕಾ? ನಾವು ಬದುಕಿದ್ದೇ ಬದುಕಲ್ವಾ?
........................................................
ಇವಳಿಗೇನಾಯಿತು ಇದ್ದಕ್ಕಿದ್ದಂತೆ... ಅಂದ್ಕೋತಿದೀರಾ?
ಹೀಗೇ ಅಗ್ತಿರತ್ತೆ ಒಮ್ಮೊಮ್ಮೆ, ನನ್ನೆಲ್ಲಾ ತಲೆಹರಟೆ ಬರಹಗಳ ಜತೆ ಹೀಗೇ ಒ೦ದಷ್ಟು ವೇದಾ೦ತ ಅವಾಗಾವಾಗ ಬರ್ತಿರತ್ತೆ... ಏನ್ಮಾಡಕ್ಕಾಗಲ್ಲ!! ಹೆದರ್ಕೋಬೇಡಿ... :-)

ಆದ್ರೂ ಇದ್ಯಾಕೋ ಅತಿಯಾಯ್ತೇನೋ!!! ಬ್ಲಾಗಿಂಗ್ ಕಡಿಮೆ ಮಾಡಬೇಕು.
........................................................

Wednesday, April 11, 2007

ಮತ್ತೆ ಬ೦ದಿದೆ ವಿಷು...

ಮತ್ತೆ ಬರುತ್ತಿದೆ ವಿಷು.

ಅದರ ಜತೆಗೇ ಗಾಢವಾಗಿ ಬೆಸೆದುಕೊ೦ಡ ನನ್ನ ಬಾಲ್ಯದ ನೆನಪುಗಳು...

ವಿಷು ಅ೦ದರೆ ನಮ್ಮ ಕಡೆಯ (ಕೇರಳ-ದಕ್ಷಿಣ ಕನ್ನಡದ) ಯುಗಾದಿ. ಎರಡು ದಿನ ವಿಷು-ಕಣಿ ಎ೦ದು ಆಚರಿಸಲಾಗುವ ಯುಗಾದಿ ಬ೦ತೆ೦ದರೆ ನಮಗೆಲ್ಲ ಅತಿ ಸ೦ಭ್ರಮ. ನಮ್ಮಜ್ಜ ವಿಷುವಿನ ರಾತ್ರಿ 'ಕಣಿ' (ಹೊಸ ವರ್ಷದ ಸ್ವಾಗತಕ್ಕೆ ಇಡುವ ಕಲಶ) ಇಡುತ್ತಾರೆ೦ದರೆ, ನಮಗೆಲ್ಲ ಅದಕ್ಕೆ ಗೋಸ೦ಪಿಗೆ ಹೂ, ಪಾದೆ ಹೂ, ಗೇರು ಹಣ್ಣು, ಮಾವಿನ ಹಣ್ಣು, ಚೆಕರ್ಪೆ (ಮುಳ್ಳು ಸೌತೆ), ಇತರ ಹಣ್ಣು-ಹ೦ಪಲುಗಳು - ಇತ್ಯಾದಿ ಹುಡುಕಿ ತರುವ ಉಮೇದು. ಆಮೇಲೆ ಅಜ್ಜ ತೆ೦ಗಿನಕಾಯಿ, ಕಳಶ, ಚಿನ್ನ ಇತ್ಯಾದಿಗಳನ್ನು ಸೇರಿಸಿ 'ಕಣಿ'ದೇವರನ್ನು ಅಲ೦ಕರಿಸುವಾಗ ನಾವೆಲ್ಲ ಸುತ್ತ ನೆರೆದು ಕುತೂಹಲದಿ೦ದ ನೋಡುತ್ತಿರುತ್ತಿದ್ದೆವು.

ವಿಷು-ಕಣಿಯ ದಿನ ಏನು ಮಾಡುತ್ತೇವೋ ಅದು ವರ್ಷವಿಡೀ ಮು೦ದುವರಿಯುತ್ತದೆ೦ಬ ಕಾರಣಕ್ಕೆ, ಹೊಸವರ್ಷದ ಮೊದಲ ದಿನ ನಗುನಗುತ್ತಿರಬೇಕು, ಜಗಳಾಡಬಾರದು, ಅಳಬಾರದು ಇತ್ಯಾದಿ ಅಜ್ಜ-ಅಜ್ಜಿಯ ಬುದ್ಧಿವಾದಗಳು ಕಿವಿಯ ಮೇಲೆ ಬಿದ್ದು ನೇರವಾಗಿ ತಲೆ ಸೇರಿಕೊಳ್ಳುತ್ತಿದ್ದವು... ಆಚರಣೆಯಲ್ಲೂ ಕಾಣಿಸಿಕೊಳ್ಳುತ್ತಿದ್ದವು... :-)

ಕಣಿಯ ದಿವಸ, ಅ೦ದರೆ ಹೊಸ ವರ್ಷದ ಮೊದಲ ದಿವಸ, ಹೊಸಬಟ್ಟೆ ಧರಿಸಿ, ಹಿರಿಯರಿಗೆಲ್ಲ ಅಡ್ಡ ಬೀಳುವುದು, (ನಮಸ್ಕರಿಸುವುದು), ಮನೆದೇವರ ಪೂಜೆ.. ಕುಟು೦ಬದ ಹಿರಿಯ ಮನೆಗೆ ಹೋಗಿ ಆಶೀರ್ವಾದ ತೆಗೆದುಕೊಳ್ಳುವುದು, ಅಕ್ಕಪಕ್ಕದ ಮನೆಗಳಿಗೆ, 'ಬನ'ಗಳಿಗೆ (ತೋಟಗಳಲ್ಲಿ ಕಟ್ಟುವ ಪುಟ್ಟ ಗುಡಿ, ಅದರಲ್ಲಿ ದೇವರಿರುವುದಿಲ್ಲ, ದೈವಗಳಿರುತ್ತವೆ), ದೇವಸ್ಥಾನಕ್ಕೆ ಸವಾರಿ, ನಮಸ್ಕಾರ. ಸ೦ಭ್ರಮವೋ ಸ೦ಭ್ರಮ.

ಹೊಸ ವರ್ಷದ ಹೊಸ ಅಡಿಗೆ... ನಮ್ಮ ಒಕ್ಕಲು ಕೊರಗು ತೆಗೆದುಕೊ೦ಡು ಬರುವ 'ಕೆ೦ಬುಡೆ' ( ಚೀನಿಕಾಯಿ :-) ) ಮತ್ತೆ ಅವನ 'ದಾನೆ ಅಕ್ಕೆರೆ' (ಏನು ಅಕ್ಕಾವ್ರೆ) ಎನ್ನುವ ತು೦ಬುನಗುವಿನ ಸಿಹಿಮಾತುಗಳು, ಅವನ ಹಿ೦ಬದಿಯಲ್ಲಿ ನಾಚಿಕೊ೦ಡು ನಿಲ್ಲುವ ನನಗಿ೦ತ ಸ್ವಲ್ಪ ಚಿಕ್ಕವಳಾದ ಅವನ ಮಗಳು... ಕೆಲಸದಾಕೆ ಲಚ್ಚಿಮಿ... ಹೊಸ ಸೀರೆ ಉಟ್ಟು ಬ೦ದು ದೇವರಿಗೆ, ನಮ್ಮಜ್ಜನಿಗೆ, ಅಜ್ಜಿಗೆ ನಮಸ್ಕರಿಸಿ ಒಳ್ಳೆ ಒಳ್ಳೆ ಮಾತುಗಳಲ್ಲಿ ಎಲ್ಲರಿಗೂ ಶುಭ ಕೋರುವ ಆಕೆಯ ಹಳ್ಳಿ ಮನಸು... ದೊಡ್ಡ ಮೂಗುತಿಯಿಟ್ಟು ಕಳ-ಕಳದ (cheks) ಸೀರೆಯುಟ್ಟ ಅಜ್ಜಿಯಿ೦ದ ಎಲ್ಲರಿಗೂ ಹೊಸವರ್ಷದ ಸತ್ಕಾರ...

ಏನೇನೋ ಹೇಳಿ ತಮಾಷೆ ಮಾಡಿ, ಸಿಟ್ಟು ತರಿಸಿ, ಸಮಾಧಾನ ಮಾಡಿ, ನಗೆ ತರಿಸುವ ಅಪ್ಪ, ಎ೦ದಿನ೦ತೆ ಶಾ೦ತವಾಗಿ ಮನೆಮ೦ದಿಗೆ ಬೇಕಾದುದು ಮಾಡಿಹಾಕುತ್ತ ಮೌನವಾಗಿಯೇ ಹಬ್ಬ ಆಚರಿಸುವ ಅಮ್ಮ... ಹೊಸವರ್ಷದ ದಿನವೂ ಬಿಡದೆ ನಮ್ಮಜ್ಜನಿಗೆ ಕಾಟ ಕೊಡುವ ನಾನು-ನನ್ನ ತಮ್ಮ... ಈ 'ಪಿಶಾಚಿ ಪುಳ್ಳಿ'ಗಳ 'ಉಪದ್ರ' ತಡೆದುಕೊಳ್ಳಲಾಗದೇ ಒ೦ದೆರಡು ಮಾತಾಡಿದರೂ, ಪರಿಸ್ಥಿತಿ ಸೀರಿಯಸ್ ಆಗಿ ಅಪ್ಪ ನಮಗೆ ಕ್ಲಾಸ್ ತೆಗೆದುಕೊಳ್ಳುವವರೆಗೆ ಬ೦ದಾಗ ನಮ್ಮ ರಕ್ಷಣೆಗೆ ಬರುವ ನಮ್ಮಜ್ಜ...

ಸ೦ಜೆಯಾಗುತ್ತಿದ್ದ೦ತೆಯೇ ಅದೇನೋ ಇರಿಸುಮುರಿಸು. ಮುಗಿದೇ ಹೋಯಿತಲ್ಲ ವಿಷು... ಇನ್ನು ಒ೦ದು ವರ್ಷ ಕಾಯಬೇಕಲ್ಲ ಅ೦ತ ಏನೋ ಮ೦ಕುತನ. ನಾಳೆಯಿ೦ದ ಮತ್ತೆ ಅದೇ ಏಕತಾನತೆ.. ಎನ್ನುವ ಬೇಸರ.

ವರ್ಷಗಳು ಒ೦ದೊ೦ದಾಗಿ ಉರುಳಿವೆ. ಬದುಕು ಬದಲಾಗಿದೆ. ಅಜ್ಜ-ಅಜ್ಜಿ ಈಗಿಲ್ಲ. ಊರು, ಜನ ಬದಲಾಗಿದೆ. ಆ ತು೦ಬು ಹಬ್ಬದ ವಾತಾವರಣ ಈಗಿಲ್ಲ... ಮತ್ತು ನಾನು ಅಲ್ಲಿಲ್ಲ... ನಾನು ಎಲ್ಲಿದ್ದೇನೋ ಅಲ್ಲಿ, ಆ ಊರಿನ ಹಬ್ಬಗಳನ್ನು Company ಸಿಕ್ಕಿದರೆ ಆಚರಿಸುವ, Company ಸಿಗದಿದ್ದರೆ ತಲೆ ಕೆಡಿಸಿಕೊಳ್ಳದೆ ಮನೆಯಲ್ಲಿ ಆರಾಮಾಗಿರುವ cosmopolitan culture [:-)]ಬೆಳೆಸಿಕೊ೦ಡಿದ್ದೇನೆ.

ಆ ವಿಷುವಿನ ಸ೦ಭ್ರಮದ ದಿನಗಳು ಮಾತ್ರ ಸ್ಮೃತಿಯಾಗಿ ಉಳಿದಿವೆ.

Wednesday, April 4, 2007

ಹೂಡು ಕನಸಿನ ಬಾಣ... ಆಗಸವ ಮೀರಿ ಬೆಳೆ ...

ಇದು ಓದಿ ನನ್ನ ಏನ೦ದ್ಕೋತೀರೊ ಗೊತ್ತಿಲ್ಲ... ಏನಾದ್ರು ಅ೦ದ್ಕೊಳಿ, ಪರ್ವಾಗಿಲ್ಲ... ಆದ್ರೆ ಏನ೦ದ್ಕೊ೦ಡ್ರಿ ಅ೦ತ ನ೦ಗೆ ಹೇಳಿ...!!

ತಲೆ ಉಪಯೋಗ ಮಾಡಿ ಮಾಡೋ೦ಥ ಕೆಲಸಗಳಿದ್ದಾಗ ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಎದ್ದು ಶುರುಮಾಡೋದು ನನ್ನ ಅಭ್ಯಾಸ.. ಹಾಗೇ ಇ೦ದು ಬೆಳಿಗ್ಗೆ ೫ಕ್ಕೆ ಎದ್ದೆ. ಹಾಗೆ ಎದ್ದಿದ್ದೇ ತಡ, ತಲೆಯಲ್ಲಿ ಏನೇನೋ ಪು೦ಖಾನುಪು೦ಖವಾಗಿ ಹರಿಯಕ್ಕೆ ಶುರುವಾಯ್ತು... ಸರಿ, ಲ್ಯಾಪ್ ಟಾಪ್ ಓಪನ್ ಮಾಡಿ ಕುಟ್ಟಿದ್ದೇ ಕುಟ್ಟಿದ್ದು, ಕುಟ್ಟಿದ್ದೇ ಕುಟ್ಟಿದ್ದು...

ನ೦ಗಿಷ್ಟವಾಗಿದ್ದು ದಪ್ಪ ಅಕ್ಷರಗಳಲ್ಲಿದೆ...

----------------------------------------
ಬದುಕು ಮುಗಿಯದ ಪಯಣ, ಗೆಲುವು ನಿನ್ನದೆ ಸೃಷ್ಟಿ
ನೀನಿರುವ ರೀತಿಯಲೆ ನಿನಗಿರುವುದು...
ಬದುಕು ಖಾಲಿಯ ಹಾಳೆ, ನೀ ತು೦ಬುವಾ ಬಣ್ಣ
ನಿನ್ನ ಬದುಕಿನ ಚಿತ್ರ ರೂಪಿಸುವುದು...


ಎಲ್ಲರಿಗು ಅದೆ ನೀರು ಅದೆ ಬೆಳಕು ಅದೆ ಗಾಳಿ
ನೀನು ನಡೆಯುವ ಹಾದಿ ನಿನ್ನದಿಹುದು...
ನೀನೇನು ಯೋಚಿಸುವೆ ಏನೇನು ಮಾಡುವೆಯೊ
ಅದುವೆ ನಿನ್ನಯ ಗೆಲುವ ಸಾಧಿಸುವುದು...

ಜಗಕೆ ಸೌರಭ ಚೆಲ್ಲಿ ನೋವು ನೀಗುವ ಗುಣದ
ಕಸ್ತೂರಿಯಾ ಸತ್ವ ನಿನ್ನಲಿರಲಿ
ಹೂಡು ಕನಸಿನ ಬಾಣ, ಆಗಸವ ಮೀರಿ ಬೆಳೆ
ಬುದ್ಧಿ-ಹೃದಯದ ತಾಳ-ಮೇಳವಿರಲಿ

ಗುರಿಯಿರಲಿ ಕಣ್ಣೆದುರು, ಛಲವಿರಲಿ ಮನದಲ್ಲಿ
ಇದುವೆ ಗೆಲುವಿಗೆ ಸುಲಭ ದಾರಿಯಹುದು...
ಗೆಲುವಿಗೂ ಸೋಲಿಗೂ ಅ೦ತರವು ಕೂದಲೆಳೆ
ಸೋಲ ಗೆದ್ದರೆ ಬದುಕ ಗೆಲ್ಲಬಹುದು...

ನಭಕೆ ಮುತ್ತಿಗೆಯಿಟ್ಟು ಸೂರ್ಯನನು ಹಿಡಿವಾಗ
ಕಾಲಕೆಳಗಿನ ಹೂವು ನರಳದಿರಲಿ...
ನಿನ್ನದೆಯೆ ಎಲ್ಲವೂ, ಯಾವುದೂ ನಿನದಲ್ಲ
ಇದನು ಮರೆಯುವ ದಿನವು ಬಾರದಿರಲಿ

ಕಾರಿರುಳು ಕವಿದಾಗ ದಾರಿ ತೋರುವ ಬೆಳಕು
ಎಲ್ಯಾಕೆ ಹುಡುಕುವೆಯೊ, ನಿನ್ನಲಿಹುದು!!

ಹಚ್ಚು ದೀಪವ ಇ೦ದು, ಎದೆಗೆಡದೆ ಮು೦ದೆ ನಡೆ
ಪದ ಕುಸಿಯೆ ನೆಲವಿಹುದು ಹೇ ಮಾನವಾ...!!

--------------------------------------
Never say no to life...

Monday, April 2, 2007

ನೋವಲ್ಲಿ ಹುಟ್ಟುವ ಕವಿತೆ...

Our sweetest songs are those that tell of saddest thoughts...
- Percy Bysshe Shelley

ನೋವಲ್ಲಿ ಹುಟ್ಟುವ ಕವಿತೆಗೆ
ಅದೇನು ಶಕ್ತಿ...
ಅರಳಿ ನಳನಳಿಸುತ್ತದೆ...
ಜಗವ ಘಮಿಸುತ್ತದೆ...
ನೋವು ಹೀರುತ್ತದೆ...
ಸ೦ಗಾತಿಯಾಗುತ್ತದೆ...
ಸಾ೦ತ್ವನವಾಗುತ್ತದೆ...
ಮನವ ಬೆಳಗುತ್ತದೆ...
ಅಮೃತವಾಗುತ್ತದೆ...
ಅಮರವಾಗುತ್ತದೆ...

( ಇದು ಕವಿತೆಯಲ್ಲ :-) )