Monday, May 18, 2009

ಇದಪ್ಪಾ ಗೂಳಿಕುಣಿತ...!

ಈಬಾರಿ ಕೂಡ ಚೌಚೌ ಗವರ್ಮೆಂಟೇ ಬರುತ್ತೆ ಸೆಂಟರಲ್ಲಿ ಅಂತ ಎಲ್ಲಾ ಎಕ್ಸಿಟ್ ಪೋಲುಗಳೂ ಹೇಳುತ್ತಾ ಇದ್ದ ಹಾಗೆ, ಮಾರ್ಕೆಟ್ ಸ್ವಲ್ಪ ಏರಿದ ಸಮಯ ನೋಡಿ ನಾನು ಕೈಯಲ್ಲಿದ್ದ ಲಾಭದ ಸ್ಕ್ರಿಪ್ ಎಲ್ಲಾ ಮಾರಿಬಿಟ್ಟೆ. ನಾನು ಮಾರಿದ್ದು ಮಾತ್ರವಲ್ಲ, ನನ್ನಜತೆ ಆಗಾಗ ಡಿಸ್ಕಸ್ ಮಾಡುವ ಗೌಡ್ರಿಗೆ ಕೂಡ ನಾನು ಮಾಡಿದ್ದನ್ನು ಹೇಳಿದೆ, ಅವರು ಕೂಡ ಆಗಲೇ ಕೈಯಲ್ಲಿದ್ದುದೆಲ್ಲ ಮಾರಿ ದುಡ್ಡು ರೆಡಿ ಇಟ್ಟುಕೊಂಡಿದ್ದರು. ಚೌಚೌ ಗವರ್ಮೆಂಟು ಬಂದ ಕೂಡಲೇ ಮಾರ್ಕೆಟ್ಟು ಹೇಗೂ ಬೀಳುತ್ತದಲ್ಲ, ಆಗ ಕಡಿಮೆಗೆ ಸಿಗುವ ಒಳ್ಳೆ ಕಂಪೆನಿ ಶೇರುಗಳನ್ನು ಕೊಳ್ಳಬೇಕೆಂಬುದು ನಮ್ಮ ಪ್ಲಾನಾಗಿತ್ತು.

ಆದರೇನು ಮಾಡಲಿ, 16ನೇ ತಾರೀಖು ಶನಿವಾರ ಫಲಿತಾಂಶ ಬರುತ್ತಾ ಬರುತ್ತಾ ಕಾಂಗ್ರೆಸ್ ಸೀಟುಗಳು 180 ದಾಟುತ್ತಿದ್ದ ಹಾಗೆ ನನಗೆ ಚಳಿ ಶುರುವಾಯಿತು... ಮಾರ್ಕೆಟ್ ಮೇಲೇರಲಿರುವುದರ ಬಗ್ಗೆ ಖುಷಿಯ ಬದಲು ದು:ಖವಾಯಿತು. ಛೇ, ಅನ್ಯಾಯವಾಗಿ ರಿಲಯನ್ಸ್ ಮತ್ತು ಐಸಿಐಸಿಐ ತುಂಬಾ ಕಡಿಮೆ ಲಾಭಕ್ಕೆ ಮಾರಿಬಿಟ್ಟೆನಲ್ಲಾ ಅಂತ ಪಶ್ಚಾತ್ತಾಪವಾಗತೊಡಗಿತು... ಬುದ್ಧ ಹೇಳಿದ ಆಸೆಯೇ ದು:ಖಕ್ಕೆ ಮೂಲ ಎಂಬ ಮಾತು ನಂಗೆ ಆದಿನ ತನ್ನ ವಿವಿಧ ಬಣ್ಣಗಳಲ್ಲಿ ಚೆನ್ನಾಗಿ ಅರ್ಥವಾಗತೊಡಗಿತು. ಒಂದು ಕಡೆ ಸ್ಥಿರ ಸರಕಾರ ಬರುವ ಸೂಚನೆಗೆ ಖುಷಿಯಾದರೆ, ಇನ್ನೊಂದು ಕಡೆ ಛೇ, ಲೆಕ್ಕಾಚಾರ ತಪ್ಪಿತಲ್ಲಾ ಅಂತ ವಿಪರೀತ ದು:ಖ... ಮನಸ್ಸಿನಲ್ಲೇ ಶೋಕಾಚರಣೆ ಮಾಡಿದೆ. ಪಾಪ, ಗೌಡರದೂ ಅದೇ ಪರಿಸ್ಥಿತಿಯಾಗಿತ್ತೇನೋ, ಸಮಾನದು:ಖಿಗಳಾಗಿದ್ದರೂ ನಾವಿಬ್ಬರೂ ಆದಿನ ಮಾತಾಡಿಕೊಳ್ಳಲಿಲ್ಲ.

ಹೂಂ, ಇರಲಿ, ಹೇಗೂ ಸೋಮವಾರ ಮಾರ್ಕೆಟ್ ಮೇಲೇರುವುದೇ ಆದರೆ, ಇರುವ ಚೂರುಪಾರನ್ನು ಬೇಗನೇ ಮಾರಿ ಹೊಸದು ತೆಗೆದುಕೊಂಡುಬಿಡುವುದು, ಮತ್ತೆ ಹೊಸ ಸರಕಾರದ ಬಜೆಟ್ ಬಂದಾಗ ಹೇಗೂ ಮತ್ತೊಂದು ಏರಿಕೆ ಇದ್ದೇ ಇರುತ್ತದೆ, ಆಗ ಮತ್ತೆ ಮಾರಿದರಾಯಿತು ಅಂತೆಲ್ಲ ಲೆಕ್ಕಹಾಕಿ ಆದಿತ್ಯವಾರವನ್ನು ಕಷ್ಟದಲ್ಲಿ ಕಳೆದಿದ್ದಾಯಿತು. ಎಲ್ಲಾ ಎಕ್ಸ್-ಪರ್ಟುಗಳೂ 500ರಿಂದ 1000 ಪಾಯಿಂಟು ಮೇಲೆ ಹೋಗಬಹುದು ಸೆನ್ಸೆಕ್ಸು ಅಂತಿದ್ರು. ಶೇಕಡಾ ಹತ್ತರಷ್ಟು ಲಾಭಕ್ಕೇನೂ ಮೋಸವಿಲ್ಲ ಅಂತ ಅಂದುಕೊಂಡು, ಸೋಮವಾರದ 9.50ರ ಶುಭಗಳಿಗೆ ಬರಲಿಕ್ಕೇ ಕಾದುಕೂತಿದ್ದೆ.


ಬಂದೇ ಬಂತು ಶುಭಸೋಮವಾರ... The Golden Monday! 9.00 ಆಗುತ್ತಿದ್ದಂತೇ CNBCTV18 ಹಾಕಿ ಉದಯನ್ ಮುಖರ್ಜಿ ಮತ್ತು ಮಿತಾಲಿ ಶೋ ನೋಡ್ತಾ ಕೂತಿದ್ದೆ. ಉದಯನ್ ಮತ್ತು ಮಿತಾಲಿ ಮಾರ್ಕೆಟ್ ಬಿದ್ದರೆ ಮುಖ ಜೋತುಹಾಕುವ Anchorಗಳು. ನೋಡುಗರ ಭಾವನೆಗಳು ಅವರಲ್ಲೂ reflect ಆಗುತ್ತಿರುತ್ತವೆ. ಅವರು ಮಾತಾಡುತ್ತಿದ್ದಂತೇ, ಮಾರುಕಟ್ಟೆ 10% ಮೇಲೆ ಹೋದರೆ 1 ಗಂಟೆ ಟ್ರೇಡಿಂಗ್ ಇರುವುದಿಲ್ಲ, 15% ಮೇಲೇರಿದರೆ 2 ಗಂಟೆ ಬಂದ್ ಇತ್ಯಾದಿ ಮಾಹಿತಿಗಳು ಬರ್ತಾ ಇತ್ತು.

ಆಯ್ತು, 9.50 ಆಗಿಯೇ ಹೋಯ್ತು... ಅಷ್ಟೆ. ಏನಾಗುತ್ತಿದೆ ಎಂದು ತಿಳಿಯುವುದರೊಳಗಾಗಿ ಸೆನ್ಸೆಕ್ಸ್ 1300 ಅಂಕ ಮೇಲೇರಿತು, ಕೂಡಲೇ ಟ್ರೇಡಿಂಗ್ ಬಂದ್! ಇಷ್ಟಾಗಲಿಕ್ಕೆ ಮಾರ್ಕೆಟ್ ಓಪನ್ ಆಗಿ 20 ಸೆಕೆಂಡ್ ಕೂಡ ತೆಗೆದುಕೊಳ್ಳಲಿಲ್ಲ.

ನಾನು ಇಂಗು ತಿಂದ ಮಂಗನಂತೆ ಏನಾಗುತ್ತಿದೆಯೆಂದೇ ಅರ್ಥವಾಗದೆ ಉದಯನ್ ಮತ್ತು ಮಿತಾಲಿ ಹೇಳುವುದನ್ನೇ ಕೇಳುತ್ತ ಕೂತೆ. ಒಂದು ಗಂಟೆಯ ನಂತರ ಮತ್ತೆ ಮಾರುಕಟ್ಟೆ ತೆರೆಯಲಿದೆ ಎಂದು ಒಂದು ಸಾರಿ ಹೇಳಿದರೆ ಮತ್ತೆ ಎರಡು ಗಂಟೆಯ ನಂತರ ತೆರೆಯಲಿದೆ ಎಂದರು. ಇದಕ್ಕೆ ಕಾದು ಕೂತರೆ ಅಷ್ಟೇ ಗತಿ ಮತ್ತೆ ಅಂತ ನನಗೆ ನಾನೇ ಬುದ್ಧಿ ಹೇಳಿಕೊಂಡು ಆಫೀಸಿಗೆ ಹೊರಟೆ.

ಆಫೀಸಲ್ಲಿದ್ದರೂ, ಕೆಲಸ ಶುರುಮಾಡಿಕೊಂಡರೂ ಮಾರುಕಟ್ಟೆ ಏನಾಗುತ್ತದೋ ಎಂಬ ಕಪಿಕುತೂಹಲ ಸುಮ್ಮನೆ ಕೂರಲು ಬಿಡಲಿಲ್ಲ. ಸಮಾನಮನಸ್ಕರೆಲ್ಲ ಜತೆ ಸೇರಿ 11.45 ಆಗುತ್ತಿದ್ದಂತೆಯೇ ಐಬಿಎನ್ ಹಾಕಿ ಕೂತೆವು. 11.50 ಆಗುತ್ತಿದ್ದಂತೇ ಅಲ್ಲಿ CNBCTV18 ಪಂಚ್ ಆಯಿತು. ಈಗಲೂ ಅಷ್ಟೇ. ಮಾರುಕಟ್ಟೆ ಓಪನ್ ಆದಕೂಡಲೇ 700ರಷ್ಟು ಅಂಕಗಳು ಮೇಲೇರಿತು... And trading halted for the day!


Historical. Fantastic. Amazing. Wonderful. Unbelievable. Unpredictable. ಇನ್ನೇನು ಹೇಳಬಹುದೋ ಗೊತ್ತಿಲ್ಲ. ನಿಫ್ಟಿಯನ್ನು 650 ಅಂಕಗಳಿಂದ, ಸೆನ್ಸೆಕ್ಸನ್ನು 2110 ಅಂಕಗಳಿಂದ ಏರಿಸಿ, ಎಲ್ಲಾ ಮಿತಿಗಳನ್ನ ದಾಟಿ ನರ್ತಿಸಿತ್ತು ಗೂಳಿ! ಕರಡಿಗಳಿಗೆಲ್ಲ ಬೇಸರವಾಗಬೇಕಾದದ್ದೇ. ನಾನು 520ಕ್ಕೆ ಮಾರಿದ್ದ ಐಸಿಐಸಿಐ 745 ಮುಟ್ಟಿತ್ತು. ಇಷ್ಟರಲ್ಲಿ ನಾನು ಬುದ್ಧನ ಮಾತನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರಿಂದ ನಂಗೆ ಬೇಸರವಾಗಲಿಲ್ಲ, ಬದಲಿಗೆ ಸಖತ್ ಖುಷಿಯಾಯಿತು.

Anchor ಮಿತಾಲಿ ನಗುನಗುತ್ತಾ ಏನೇನೋ ಹೇಳಿದಳು, ಒಂದು ಬಾರಿ ತನ್ನ anchoring seatನಿಂದ ಎದ್ದು ಮೈಮುರಿದಳು, ಅವಳು ಅಷ್ಟು ಖುಷಿಯಾಗಿದ್ದು ನಾ ಎಂದೂ ನೋಡಿರಲಿಲ್ಲ. ಇನ್ನು ನಂಗೆ ಇವತ್ತಿಗೆ anchoring ಮಾಡುವ ಕೆಲಸವಿಲ್ಲ, ಇವತ್ತೆಲ್ಲಾ ಆರಾಮ, ಇನ್ನು ಟ್ರೇಡಿಂಗ್ ಇಲ್ಲ, ಇನ್ನು ಕರಡಿ ಕುಣಿತವಿಲ್ಲ, ಮಾರ್ಕೆಟ್ ಏರುತ್ತಿದೆ, ನಾನಿನ್ನು ಮುಖ ಬಾಡಿಸಲಿಕ್ಕಿಲ್ಲ ಇತ್ಯಾದಿ ಅವಳು ಹೇಳಿದ ಹಾಗೆ ನನಗನಿಸಿತು. ಉದಯನ್ ಅಂತೂ ...! ತನ್ನ ಲ್ಯಾಪ್ಟಾಪ್ ಎತ್ತಿ ಅದಕ್ಕೊಂದು ಕಿಸ್ ಕೊಟ್ಟು, ಫುಲ್ ಖುಷ್ ಆಗಿ ಹಲ್ಲುಬಿಟ್ಟು... ಅವರ ಖುಷಿಯನ್ನು ವೈರಸ್ ಥರಾ ನಮ್ಮಮೇಲೆಲ್ಲ ಬಿಟ್ಟು... ಆಹಾ! ಖುಷಿಗೆ ಅವರಿಬ್ಬರು ಹಾರ್ಟ್ ಫೇಲ್ ಒಂದು ಮಾಡಿಕೊಂಡಿಲ್ಲ ನೋಡಿ.

ಸ್ಟಾಕ್ ಮಾರ್ಕೆಟ್ ಹಿಸ್ಟರಿಯಲ್ಲೇ ಇದು ಐತಿಹಾಸಿಕ ದಿನವಂತೆ. ಒಟ್ಟಿನಲ್ಲಿ ಎಲ್ಲರಿಗೂ ಖುಷಿಯೋ ಖುಷಿ. ಗೌಡ್ರೂ ನನ್ನದೇ ಪರಿಸ್ಥಿತಿಯಲ್ಲಿದ್ದರು, ಹಾಗೆ ಮುಕ್ತವಾಗಿ ನಾಕುಮಾತು ಸುಖದು:ಖ ಹಂಚಿಕೊಂಡು ಹಗುರಾದೆವು.

ಸದ್ಯದ ಆರ್ಥಿಕ ಹಿಂಜರಿತದಿಂದ ಮೇಲೇಳಲಿಕ್ಕಾಗಿ ಇಡೀ ಜಗತ್ತು ಭಾರತ ಮತ್ತು ಚೀನಾದೆಡೆಗೆ ನೋಡುತ್ತಿರುವ ಈ ಕಾಲಘಟ್ಟ... ಎಡ-ಬಲಗಳನ್ನು ಬಿಟ್ಟು ಮಧ್ಯವನ್ನು ಆಯ್ಕೆ ಮಾಡಿ ಸುಭದ್ರತೆಯ ತೀರ್ಪು ನೀಡಿದೆ ಭಾರತ. ನಾಳೆ ಮಾರುಕಟ್ಟೆ ಮತ್ತೂ ಮೇಲೇರಬಹುದೇನೋ... ಏನಾಗಬಹುದೆಂದು ಊಹಿಸುವುದು ಸದ್ಯಕ್ಕೆ ನನ್ನ ಮಿತಿಗೆ ಮೀರಿದ್ದು. ಆದರೆ ಇವತ್ತು ಮಾತ್ರ ನಾನು ಖುಷ್... :-)

Wednesday, May 13, 2009

ನೀರಿಲ್ಲ, ಮಾತಿಲ್ಲ

ಇಲ್ಲ
ಎತ್ತೆತ್ತ ನೋಡಿದರೂ ನೀರೇ ನೀರು... ಆದರೆ, ನನಗೆ ಕುಡಿಯಲಿಕ್ಕೆ ಗುಟುಕು ನೀರಿಲ್ಲ.
ಸುತ್ತಲಿರುವುದು ಬಲುದೊಡ್ಡದಾದ ಸಮುದ್ರ... ಉಪ್ಪುನೀರು, ಎಷ್ಟಿದ್ದರೇನು, ಬಾಯಾರಿಕೆ ಹಿಂಗೀತೇ?

---------

ಮಾತು
ಹೋಗಬೇಕಾದ ದಾರಿಯಿನ್ನೂ ಬಲುದೂರ ಬಾಕಿಯುಳಿದಿದೆ.  ಮಾತಾಡಿದ್ದು ಹೆಚ್ಚೇನಿಲ್ಲ, ಆದರೆ ಮನಸೆಲ್ಲ ಖಾಲಿಯಾಗಿದೆ, ಮಾತು ಮುಗಿದುಹೋಗಿದೆ. ಮೌನದಲ್ಲಿ ಮಾತಾಡುವಾತ ನೀನಲ್ಲದಿರುವಾಗ, ಇನ್ನುಳಿದ ದೂರ ಮೌನದಲ್ಲಿ ಹೇಗೆ ಕ್ರಮಿಸಲಿ?

Tuesday, May 5, 2009

ತಿಳಿವಿನತ್ತಲಿನ ಪಯಣಕ್ಕೊಂದು ವಿದಾಯ...

'ಜಾಗೃತಿ ನಿಲ್ಲುತ್ತಿದೆ...' ಹೀಗೊಂದು ಸಂದೇಶ ಇವತ್ತು ಬೆಳಬೆಳಿಗ್ಗೆ ಮೊಬೈಲಿನಲ್ಲಿ ಬಂದು ಕೂತಿದೆ. ನೋಡಿದ ಕೂಡಲೇ ಯಾಕೋ ತುಂಬಾ ಸಂಕಟ, ತಳಮಳ ಶುರುವಾಗಿದೆ.

++++++++++++

ಅಭಿವೃದ್ಧಿ ಪತ್ರಿಕೋದ್ಯಮ ಯಾವುದೇ ಮಾಧ್ಯಮದಲ್ಲಾದರೂ ಇರಲೇಬೇಕು, ಅದು ಮಾಧ್ಯಮದ ಜವಾಬ್ದಾರಿ ಅಂತಲೇ ಪತ್ರಿಕೋದ್ಯಮ ಕಲಿಯುತ್ತಿದ್ದ ದಿನಗಳಿಂದ ಇಂದಿನವರೆಗೂ ನಂಬಿರುವ ನನಗೆ, ಕಸ್ತೂರಿ ಸೇರಿದಾಗ ಸಿಕ್ಕಿದ್ದು ಜಾಗೃತಿ ಎನ್ನುವ ಹೆಸರು, ವಾರಕ್ಕೆ ಏಳು ದಿನವೂ ಬೆಳಗಿನ 10.30ಕ್ಕೆ ಹೊಂದುವ ರೀತಿಯಲ್ಲಿ ಅರ್ಧ ಗಂಟೆ ಕಾರ್ಯಕ್ರಮ ಕೊಡಬೇಕು ಎಂಬ ನಿಯಮ... ಜತೆಗೆ ಓಂಕಾರ್, ಅರುಣ್, ಅಂಬುಕೇಶ್ ಶೂಟಿಂಗ್ ಮಾಡಿದ್ದ ಒಂದಿಷ್ಟು ಸಂದರ್ಶನಗಳು ಕೂಡ.

ಜಾಗೃತಿ ಹೆಸರಿನಡಿಯಲ್ಲಿ ಏನಿರಬೇಕು, ಹೇಗಿರಬೇಕೆಂದು ಹಿರಿಯರ ಜತೆ ಚರ್ಚಿಸಿ, ಅದಕ್ಕೊಂದು ರೂಪ ಕೊಟ್ಟು, ಮೊದಲ ಎಪಿಸೋಡ್ ಸಿದ್ಧಪಡಿಸಿ, ಹಿರಿಯರಿಗೆ ತೋರಿಸಿ, ಅವರು ಸೂಚಿಸಿದ ಬದಲಾವಣೆಗಳು ಮಾಡಿಸಿ... ಅದಕ್ಕೊಂದು ಆಶಯ ಸಂಚಿಕೆ (ಕರ್ಟನ್-ರೈಸರ್) ಎಪಿಸೋಡ್ ಕೂಡ ಮಾಡಿದ್ದು, ಮಾಂಟೇಜ್ ಗ್ರಾಫಿಕ್ಸ್ ಹೀಗೇ ಬೇಕು ಅಂತ ಹಠಹಿಡಿದು ಮತ್ತೆಮತ್ತೆ ಆದಿತ್ಯ ಕೈಲಿ ಮಾಡಿಸಿ ಕೊನೆಗೆ ಅಂತಿಮಗೊಳಿಸಿದ್ದು... ಮೊದಲ ಬಾರಿಗೆ ಕಾರ್ಯಕ್ರಮ ಪ್ರಸಾರವಾದಾಗ ಫೀಡ್-ಬ್ಯಾಕ್-ಗಾಗಿ ಒದ್ದಾಡಿದ್ದು... ಚೆನ್ನಾಗಿಲ್ಲ ಅಂತ ಕೆಲವರು ಅಂದಾಗ ಕುಗ್ಗಿದ್ದು, ಮತ್ತೆ ಚೆನ್ನಾಗಿ ಮಾಡಬೇಕು ಅಂತ ಹುರುಪು ತುಂಬಿಕೊಂಡು ಹೊರಟಿದ್ದು... ನಿನ್ನೆ-ಮೊನ್ನೆಯಷ್ಟೇ ಆದಂತಿದೆ.

This is a program where Content is the Hero ಅಂತ ಅಂದುಕೊಂಡರೂ ಇತರ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದು ಕಡಿಮೆಯೇನಲ್ಲ... ಹಿನ್ನೆಲೆ ದನಿ ಹೀಗೇ ಬೇಕು ಅಂತ ಚೇತನಾ, ಹೇಮಲತಾ, ರೂಪಾಗೆ ಕಾಟ ಕೊಟ್ಟು ಬೋರ್ ಹೊಡಿಯೋಷ್ಟು ಸಲ ರೀಟೇಕ್ ತಗೊಂಡಿದ್ದು, ಸಪ್ನಾ ದನಿಯಲ್ಲಿರೋ ಅಭಿವ್ಯಕ್ತಿಗೆ ಮರುಳಾಗಿದ್ದು, ಎಲ್ಲಿ emotional ಆಗಿ ಅಥವಾ ಖಡಕ್ ಆಗಿ ಬೇಕೋ ಅಲ್ಲಿ ಅವಳದೇ ದನಿಗೆ ಕಾದು ಕೂತು ತಗೊಂಡಿದ್ದು... ನಂತರ ಹೋಗುತ್ತ ಹೋಗುತ್ತ ಸುಕನ್ಯಾ, ಪ್ರತೀಕ್, ವಿನುತಾ, ಕೃತ್ತಿಕಾ ಮುಂತಾದವರ ದನಿಯನ್ನೂ ಸೇರಿಸಿಕೊಂಡಿದ್ದು...

ಹಂಗೇ ಬೇಕು ಹಿಂಗೇ ಬೇಕು ಅಂತ ಕಿರಿಕಿರಿ ಮಾಡಿ, ಕ್ಯಾಮರಾಮನ್ನುಗಳಿಗೆಲ್ಲ ಏನಿದ್ರೂ ಸರಿ, ಜಾಗೃತಿ ಡ್ಯೂಟಿ ಮಾತ್ರ ಬೇಡಪ್ಪಾ ಅಂತ ಅನ್ಕೊಳೋ ಥರ ಮಾಡಿದ್ದು, ಅದರೂ ನಿರೀಕ್ಷಿತವಾದದ್ದು ಕೊಡಲಿಕ್ಕೆ ಅವರೆಲ್ಲ ಪ್ರಯತ್ನಿಸಿದ್ದು... ಕ್ಯಾಮರಾ ಹಿಡಿದು ಹೋದಾಗಲೆಲ್ಲ ಅಳಿಲು ಸಿಗುತ್ತಾ ಅಂತ ಹುಡುಕುವ ರಮೇಶ್ ಸರ್, ಕ್ಯಾಮರಾದಲ್ಲಿ ಮುಳುಗಿದ್ದಾಗ ಡಿಸ್ಟರ್ಬ್ ಮಾಡಿದರೆ ಹಿಡಿದು ಬಾರಿಸಲಿಕ್ಕೂ ಹಿಂಜರಿಯದ ಸುರೇಶ್... ಪೆರುಮಾಳ್, ರಾಜಶೇಖರ್, ತುಷಾರ್... ಬೆಳ್ಳಂಬೆಳಗಿನ ಏರುಬಿಸಿಲು ಮತ್ತು ಇಳಿಹೊತ್ತಿನ ಹಳದಿ ಬೆಳಕಿನ ಉತ್ತಮ ಶಾಟ್-ಗಳಿಗಾಗಿ ಕಾತರಿಸುತ್ತಿದ್ದ ನಾವುಗಳು...

ತಾಳ್ಮೆಯಿಂದ ಎಡಿಟಿಂಗ್ ಟೇಬಲ್ಲಿನಲ್ಲಿ ಕಾರ್ಯಕ್ರಮಕ್ಕೆ ಅಂತಿಮ ರೂಪ ಕೊಡುತ್ತಿದ್ದ ಶಿವು ಸರ್, ಬಾಲು ಸರ್... ಜಗಳಾಡುತ್ತಲೇ ಎಡಿಟಿಂಗ್ ಮಾಡಿಕೊಡುತ್ತಿದ್ದ ಕಿಶೋರ್... ಪ್ರೊಡಕ್ಷನ್-ನಲ್ಲಿ ಸಹಕಾರ ನೀಡಿದ ಗೌಡರು, ವಿಲಾಸ್, ಜಗದೀಶ್... ಎಪಿಸೋಡ್ ಪ್ರಿವ್ಯೂ ಮಾಡಿ ಕಾಲೆಳೆಯುತ್ತಲೇ ಫೀಡ್-ಬ್ಯಾಕ್ ನೀಡುತ್ತಿದ್ದ ಪ್ರಕಾಶ್ ಅಡಿಗ, ವಿಜಯರಾಘವನ್ ಸರ್... ಪಿಸಿಆರ್ ಸ್ಟಾಫ್-ನಿಂದ ಹಿಡಿದು ರಿಸೆಪ್ಶನ್, ಡ್ರೈವರ್ ವರೆಗೆ ಚಾನೆಲ್ ಒಳಗಡೆ ಕೂಡ ಇದ್ದಂತಹ ಅಸಂಖ್ಯ ಅಭಿಮಾನಿಗಳು.. ಕಾರ್ಯಕ್ರಮದ ಮೇಲೆ ಇವರಲ್ಲಿ ಪ್ರತಿಯೊಬ್ಬರೂ ಇಟ್ಟ ಅಭಿಮಾನ, ನೀಡುತ್ತಿದ್ದ ಅಮೂಲ್ಯ ಸಲಹೆಗಳು... ಎಲ್ಲಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ನೋಡಿ ರೇಟಿಂಗ್ ಮೂಲಕ, ಸಂದೇಶಗಳ ಮೂಲಕ ಮೆಚ್ಚಿಕೊಂಡಿದ್ದೇವೆಂದು ಗೊತ್ತುಪಡಿಸುತ್ತಿದ್ದ ವೀಕ್ಷಕರು... ಮಾಹಿತಿ ಆಧರಿತವಾದ ಈ ಕಾರ್ಯಕ್ರಮವನ್ನು ಬೆಂಬಲಿಸಿ ಬೇಕಾಗಿರುವುದೆಲ್ಲ ಮಾಡಿಕೊಟ್ಟ ನಮ್ಮ ಚಾನೆಲ್..... ಪ್ರತಿಫಲವಾಗಿ ಮೊದಲಿಗೆ ಅಂಬೆಗಾಲಲ್ಲಿ ಆರಂಭಿಸಿದ ಪಯಣವನ್ನು ತಲೆಯೆತ್ತಿ ನಿಂತು ಮುಂದುವರಿಸಿದ ಜಾಗೃತಿ...

ಬೆಳಗಿನ ಹತ್ತು ಗಂಟೆ ಬೇಡ, ಯಾರೂ ಆಗ ಟೀವಿ ನೋಡಲ್ಲ, ಒಳ್ಳೇ ಟೈಮು ಕೊಡಿ ಎಂದು ಕೇಳಿಕೊಂಡಿದ್ದು, ಸಿಗದಿದ್ದಾಗ, ಬೆಳಗಿನ ಹತ್ತು ಗಂಟೆಗೆ ತಿಳಿವಿನತ್ತ ಪಯಣ ಎಂದು ಪ್ರೋಮೋ ಬಿಟ್ಟು, ಇದ್ದಿದ್ದರಲ್ಲಿಯೇ ಸಾಧ್ಯವಾದಷ್ಟು ಉತ್ತಮವಾಗಿ ಮಾಡಲು ಯತ್ನಿಸಿದ್ದು...

ಹೆದರಿಕೊಂಡೇ ಜಾಗೃತಿ ತಂಡ ಸೇರಿದ ಚೈತ್ರಾ ಪುಟ್ಟಿ, ಹಿಂಜರಿಯುತ್ತಲೇ ಸಂಶಯಗಳನ್ನು ಕೇಳುವ, ಬಗೆಹರಿಯದ ಹೊರತು ಸಮಾಧಾನ ಮಾಡಿಕೊಳ್ಳದ ಮಸೂದ್, ಸದಾ ಕ್ರಿಯೇಟಿವ್ ಆಗಿ ಏನಾದರೂ ಮಾಡುತ್ತಲೇ ಇರಬೇಕೆನ್ನುವ ಸುನಿಲ್, ಅದ್ಭುತ ಪ್ರದರ್ಶನ ಪ್ರತಿಭೆಯ ದಾಮು, ನಗುವಿನಲ್ಲಿಯೇ ಎಲ್ಲ ಮರೆಸುವ ವಿನುತಾ, ಅಭಿಪ್ರಾಯವ್ಯತ್ಯಾಸದಲ್ಲೂ ಆತ್ಮೀಯತೆ ಮೆರೆದ ಶೀಲಾ, ಯಾವುದಕ್ಕಾದರೂ ಹೊಂದಿಕೊಂಡು ಹೋಗುವ ನಿಧಿ... ಜಾಗೃತಿ ತಂಡವೆಂದರೆ ಒಂದು ಕುಟುಂಬ. ದಿನಾ ಸಂಜೆ ಕ್ಯಾಂಟೀನಿನಲ್ಲಿ ಹೋಗಿ ನಮ್ಮ ಗ್ಯಾಂಗ್ ಜತೆ ಕೂತು ಪಟ್ಟಾಂಗ, ಚರ್ಚೆ, ಮೀಟಿಂಗುಗಳು... ಜತೆಗೆ ಮೂರ್ತಿಯ ಸಮೋಸಾ, ಟೀ.. ಶೂಟಿಂಗ್ ಹೋಗಿ ಬಂದವರಿಂದ ಕಥೆ ಕೇಳೋದು, ಭಿಕ್ಷುಕರ ಮೇಲೆ ಎಪಿಸೋಡ್-ಗೆ ಅವರನ್ನ ಚಿತ್ರಿಸಲಿಕ್ಕೆ ಹೋಗಿದ್ದ ಸುನಿಲ್ ಮತ್ತು ಮಂಜು ಅವರ ಕೈಲಿ ಹೊಡೆಸಿಕೊಂಡು ಬಂದಾಗ ಕಳವಳ ಪಟ್ಟಿದ್ದು...

ಅರ್ಥಶಾಸ್ತ್ರದಿಂದ ಹಿಡಿದು ಚುನಾವಣೆಯವರೆಗೆ, ಅಡಿಗೆ, ಆರೋಗ್ಯದಿಂದ ಹಿಡಿದು ಮನೆಕಟ್ಟುವುದರ ವರೆಗೆ, ಸಿಇಟಿಯಿಂದ ಹಿಡಿದು ಪವಾಡದ ಹಿಂದಿನ ವಿಜ್ಞಾನದವರೆಗೆ ಸೂರ್ಯನಡಿಯ ಎಲ್ಲಾ ಟಾಪಿಕ್ಸೂ ಕೈಗೆತ್ತಿಕೊಂಡಿದ್ದು, ಕೆಲವು ಹಿಟ್, ಇನ್ನು ಕೆಲವು ಫ್ಲಾಪ್... ಇದರ ನಡುವೆ ಕಲಿತಿದ್ದು, ಕಲಿಸಿದ್ದು... ವಿವಿಧ ರೀತಿಯ ಪ್ರಯೋಗಗಳು... ಪವಾಡಗಳ ಅನಾವರಣಕ್ಕಾಗಿ ದೊಡ್ಡಬಳ್ಳಾಪುರಕ್ಕೆ ಹೋಗಿ ಹುಲಿಕಲ್ ನಟರಾಜ್ ಅವರ ಸಹಕಾರದಲ್ಲಿ ಶೂಟಿಂಗ್ ಮುಗಿಸಿದ್ದು... ಎಂಥೆಂಥಾ ಬಾಬಾಗಳು ಮಾಡುವ ಪವಾಡಗಳನ್ನೆಲ್ಲಾ ಇವು ಇಷ್ಟೇ ಎಂದು ತೋರಿಸಿ, ನಮಗೆಲ್ಲಾ ಇಷ್ಟವಾಗುವ ಜತೆಗೆ ಜನಮನ ಕೂಡ ಗೆದ್ದ ಸರಣಿ... ವೈಜ್ಞಾನಿಕ ತಳಹದಿ, ತರ್ಕಬದ್ಧ ವಿವರಣೆ, ಸಮದೃಷ್ಟಿಯ ಪ್ರಸ್ತುತಿಯನ್ನು ಜಾಗೃತಿಯ ಯಾವುದೇ ಎಪಿಸೋಡಿನಲ್ಲೂ ಬಿಟ್ಟುಕೊಡದಿರಲು ಯತ್ನ... ಹೀಗೆ ತಿಳಿವಿನತ್ತಲಿನ ಪಯಣದಲ್ಲಿ ಸಾಗುತ್ತ ಸಾಗುತ್ತ 300 ಎಪಿಸೋಡ್ ಆಗಿದ್ದೇ ಗೊತ್ತಾಗಿರಲಿಲ್ಲ... 300ರ ಸಂಭ್ರಮಕ್ಕೆ ಒಂದು ರಾತ್ರಿ ಕೂತು ಖುದ್ದಾಗಿ ತಯಾರಿಸಿದ ಥ್ಯಾಂಕ್ಯೂ ಕಾರ್ಡ್...
++++++++++++

300ರ ನಂತರ ಜಾಗೃತಿಯಿಂದ ನಾ ದೂರವಾದೆ, ಕಾರ್ಯಕ್ರಮ ಅದರ ಪಾಡಿಗದು ನಡೆಯುತ್ತಿತ್ತು. ಬೇರೆ ಕೆಲಸಗಳೆಡೆಯಲ್ಲಿ ನನಗೆ ನೋಡಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ. ಅಪಾರ ಅನುಭವದ ಬುತ್ತಿ ಕಟ್ಟಿಕೊಟ್ಟಿದ್ದ, ಅದಕ್ಕಾಗಿ ಕೆಲಸ ಮಾಡಿದವರೆಲ್ಲರ ಜಗತ್ತನ್ನು ಶ್ರೀಮಂತವಾಗಿಸಿದ್ದ ಜಾಗೃತಿ, ತನ್ನ ಪಯಣ ಮುಕ್ತಾಯಗೊಳಿಸುತ್ತಿದೆಯೆಂಬ ಸಂದೇಶ ಇದೀಗ ಬಂದಿದೆ...

ನಿಂತಿದ್ದು ಕಾರ್ಯಕ್ರಮ ಮಾತ್ರ, ಅದರ ಹಿಂದಿನ ತತ್ವಗಳಲ್ಲ, ನೀತಿಗಳೂ ಅಲ್ಲ. ಇಷ್ಟೊಂದು ವಿಶಾಲವಾದ ದೃಶ್ಯಮಾಧ್ಯಮದಲ್ಲಿ, ಅಸಂಖ್ಯ ಪ್ರತಿಭೆಗಳಿರುವ ಕನ್ನಡ ದೂರದರ್ಶನಲೋಕದಲ್ಲಿ ಮತ್ತೆ ಅಂತಹದ್ದು ಮೂಡಿಬರುವುದು ಖಂಡಿತ ಕಷ್ಟವಲ್ಲ. ಆದರೆ, ಜಾಗೃತಿ ಪಯಣ ನಿಲ್ಲಿಸುತ್ತಿದೆಯೆಂದು ತಿಳಿದ ಈ ಕ್ಷಣ ಮಾತ್ರ ನಿಜಕ್ಕೂ ಸಂಕಟವಾಗುತ್ತಿದೆ, ಕಣ್ಣಾಲಿ ತುಂಬಿಕೊಂಡಿದೆ.

++++++++++++