Sunday, March 23, 2008

ನೀವೇನಂತೀರಾ?

ಬ್ಲಾಗರ್ಸ್ ಮೀಟು ಕಳೆಯಿತು. ಎಲ್ಲಕ್ಕಿಂತ ಮುಖ್ಯವಾಗಿ, ಅಲ್ಲಿ ಮಾತಾಡಿದ ಹೆಚ್ಚಿನವರು ಹೇಳಿದ್ದು, ಬ್ಲಾಗುಗಳು ಭಾವನೆಗಳ ತೀರದಿಂದಾಚೆಗೆ ಕಾಲಿಟ್ಟು ಗಂಭೀರ ವಿಚಾರಗಳ ಕುರಿತು ಮಾತಾಡಬೇಕು, ಮಾಹಿತಿ ನೀಡುವಂತಹ ಬರಹಗಳು ಹೆಚ್ಚಬೇಕು ಅಂತ. ಈ ಹಿನ್ನೆಲೆಯಲ್ಲಿ ಈ ಬರಹ.

++++++++++

ನಾನು ಬ್ಲಾಗ್ ಪ್ರಪಂಚಕ್ಕೆ ಕಾಲಿಟ್ಟು ಹತ್ತಿರ ಹತ್ತಿರ ಎರಡು ವರ್ಷಗಳಾಯಿತು. ನನಗೆ ಅನಿಸಿದ ಗಂಭೀರ ವಿಚಾರಗಳನ್ನು ಮಾತ್ರ ಬ್ಲಾಗಿನಲ್ಲಿ ಬರೆಯುತ್ತಿದ್ದೆ. ಆಗ ನನಗೆ ಇಂಟರ್ನೆಟ್ಟಿನಲ್ಲಿ ಕನ್ನಡ ಟೈಪು ಮಾಡಬಹುದು ಎಂದಾಗಲೀ, ಕನ್ನಡ ಬ್ಲಾಗರುಗಳ ಸಮುದಾಯವೊಂದು ರೂಪುಗೊಳ್ಳುತ್ತಿರುವುದಾಗಲೀ ಯಾವುದೂ ತಿಳಿದಿರಲಿಲ್ಲ. ನನ್ನ ಬರಹಗಳಿಗೆ ಸಿಗುತ್ತಿದ್ದ ಓದುಗರು ಮತ್ತು ಪ್ರೋತ್ಸಾಹ ಅಷ್ಟೇನಿರಲಿಲ್ಲ. ಬರೆಯಲೇಬೇಕು ಅನಿಸಿದಾಗ ಮಾತ್ರ ಮನಸಿಟ್ಟು ಬರೆಯುತ್ತಿದ್ದೆ.

ಒಂದು ಸಲ ಏನೂ ಬರೆಯದೆಯೇ ತಿಂಗಳುಗಟ್ಟಲೆ ಕಾಲ ಬ್ಲಾಗು ತೆಪ್ಪಗಿತ್ತು. ಹಾಗಿದ್ದಾಗ ರಾಧಾಕೃಷ್ಣ ನನಗೆ ಸಿಂಧು ಮತ್ತು ಶ್ರೀಮಾತಾರ ಬ್ಲಾಗುಗಳನ್ನು ತೋರಿಸಿದ. ಹಲವು ದಿನ ಅವುಗಳನ್ನು ನೋಡಿದೆ. ಅವುಗಳಲ್ಲಿದ್ದ ಲಿಂಕುಗಳಿಂದ ಇನ್ನಿತರ ಹಲವಾರು ಬ್ಲಾಗುಗಳಿಗೆ ಹೋದೆ. ಹೊಸ ಲೋಕವಿತ್ತು ಅಲ್ಲಿ. ಕೊನೆಗೆ ನಾನೂ ಕನ್ನಡ ಕುಟ್ಟುವುದು ಹೇಗೆ ಅಂತ ತಿಳಿದುಕೊಂಡೆ, ಹಲವರಿಗೆ ಅನಿಸಿದ್ದನ್ನು ಕಮೆಂಟು ಮಾಡಿ ಕುಟ್ಟಿದೆ. ನಾನು ಕನ್ನಡ ಕಲಿತಿದ್ದನ್ನು ಜಗತ್ತಿಗೆ ತಿಳಿಸಲಿಕ್ಕಾಗಿ ಮನಸು ಮಾತಾಡ್ತಿದೆ ಅಂತ ಶುರು ಮಾಡಿದೆ.

ಇಷ್ಟೆಲ್ಲ ಆದ ಮೇಲೆ ಒಂದು ದಿನ ಕುಳಿತು ನನ್ನ ಹಳೆಯ ಬ್ಲಾಗು ನೋಡಿದರೆ ಅದರಲ್ಲಿ ನನಗೆ ಬರುವ ಹರಕು ಮುರುಕು ಇಂಗ್ಲಿಷಿನಲ್ಲಿ ಬರೆದ, ನಾನು ಇಂಟರ್-ನೆಟ್ಟಿಗಾಗಿ ಟಾಟಾ ಇಂಡಿಕಾಂ ಮೊರೆಹೋಗಿ ಪಟ್ಟ ಕಷ್ಟಕೋಟಲೆಗಳಿಂದ ಹಿಡಿದು, ರೇಡಿಯೋ-ಟಿವಿ ಜಾಹೀರಾತು ಜಗತ್ತಿನ ಕುರಿತು, ನನ್ನ ಮನೆಯೆದುರು ದಿನಾ ಬರುವ ಮಾಟ ತೆಗೆಯುವವಳ ವರೆಗೆ ಒಂದಿಷ್ಟು ವಿಚಾರಗಳ ಕುರಿತು ಬರಹಗಳಿದ್ದವು. ಅವೆಲ್ಲವೂ ನನಗೆ ಆಗ ಮುಖ್ಯವಾಹಿನಿಯಲ್ಲಿದ್ದ ಬ್ಲಾಗುಗಳಿಗಿಂತ ತುಂಬಾ ಭಿನ್ನವಾಗಿಯೂ ಜಗತ್ತಿನ ಕಷ್ಟಗಳನ್ನೆಲ್ಲಾ ನಾನೊಬ್ಬಳೇ ತಲೆಮೇಲೆ ಹೊತ್ತಿದ್ದೇನೆ ಅನ್ನುವಂತಹ ಭಾವನೆ ಬರುವಂತಹವಾಗಿಯೂ ಕಾಣತೊಡಗಿದವು. ಬಹುಶ: ಇವೆಲ್ಲ ಬ್ಲಾಗಿನಲ್ಲಿ ಹೇಳಿಕೊಳ್ಳುವಂತಹವಲ್ಲ ಅನಿಸಿತು. ಸರಿ, ನಿರ್ದಾಕ್ಷಿಣ್ಯವಾಗಿ ಆ ಬ್ಲಾಗ್ ಡಿಲೀಟ್ ಮಾಡಿದೆ. ಅದಕ್ಕೆ ರೆಗ್ಯುಲರ್ ಆಗಿ ಬಂದು ಓದಿ ಹೋಗುತ್ತಿದ್ದಿದ್ದು ಭಾಗವತರು ಮಾತ್ರ ಅಂತ ನೆನಪು. ನಾನು ಮಾತ್ರ ನನಗೆ ಗೊತ್ತಿರುವುದನ್ನು ನಾನು ಬರೆದು ಕಡಿದು ಕಟ್ಟೆ ಹಾಕುವುದು ಏನೂ ಇಲ್ಲವೆಂದುಕೊಂಡೆ.

++++++++++

ಈಗ ಅನಿಸುತ್ತಿದೆ, ಬಹುಶ ಆ ಕಾಲಕ್ಕೆ ಟ್ರೆಂಡ್ ಹಾಗೆ ಇತ್ತು ಅಂತ. ಆದರೆ ಈ ಕಾಲದಲ್ಲಿ ಮಾಹಿತಿಯುಕ್ತ ಅಥವಾ ಯೋಚನೆಗೆ ಹಚ್ಚುವ ಬರಹಗಳಿಗೆ ಪ್ರೋತ್ಸಾಹ ಇದೆಯೇನೋ ಅಂತ ಮೊನ್ನೆ ಮೊನ್ನೆ ಟೀನಾ, ಚೇತನಾ ಬ್ಲಾಗುಗಳಲ್ಲಿ ವಿಹರಿಸುತ್ತಿದ್ದಾಗ ಅನಿಸಿತು. ಏನು ಮಾಡಬಹುದು? ಅಂತ ಟೀನಾ ಕೇಳಿಕೊಂಡಿದ್ದಾರೆ. ಮಹಿಳಾದಿನ ಮತ್ತು ಅಮೃತಾಳ ಬಗೆಗೆ ಚೇತನಾ ಬರೆದಿದ್ದು ಕೂಡ ಎಲ್ಲರನ್ನೂ ಯೋಚನೆಗೆ ಹಚ್ಚುವ ವಿಷಯವನ್ನೇ.

++++++++++

ನಿಜಕ್ಕೂ ಬ್ಲಾಗಿಂಗ್-ನಲ್ಲಿ ಈಗ ಹೊಸ ಅಧ್ಯಾಯ ಪ್ರಾರಂಭ ಆಗಿದೆ, ಇನ್ನೂ ಏನೇನೋ ಆಗಬೇಕಿದೆ. ಶ್ಯಾಮಿ ಸರ್ ಹೇಳಿದ ಹಾಗೆ ಕ್ಯಾನ್ವಾಸಿನಲ್ಲಿ ಬಣ್ಣ ಚೆಲ್ಲಿದ ಹಾಗಿನ ಬರಹಗಳ ಜತೆಗೆ, ಬರಹಗಾರರಿಗಿರಬೇಕಾದ ಸೂಕ್ಷ್ಮತೆಯನ್ನು ರೂಢಿಸಿಕೊಂಡು ಉತ್ತಮವಾಗಿ ಬರೆಯುವ ಯತ್ನಗಳು ಕೂಡ ಹಲವಾರು. ಮಾಹಿತಿ ನೀಡುವ, ಚಿಂತನೆಗೆ ಹಚ್ಚುವ ಬರಹಗಳೂ ಹೆಚ್ಚುತ್ತಿವೆ. ಅದಕ್ಕೆ ಪ್ರತಿಕ್ರಿಯಿಸುವವರೂ ಹೆಚ್ಚುತ್ತಿದ್ದಾರೆ.

ಆದರೆ, ಯಾವುದೇ ಸೆನ್ಸೇಶನಲ್ ವಿಚಾರಗಳ ಹಂಗಿಲ್ಲದೆ, ಬರೆಯಬೇಕೆಂಬ ಪ್ರೀತಿಗೆ ಮತ್ತು ಹಂಚಿಕೊಳ್ಳಬೇಕೆಂಬ ತುಡಿತಕ್ಕೆ ಶರಣಾಗಿ ಬರೆಯುವ ಬರಹಗಳು ಹೆಚ್ಚಬೇಕಿದೆ. ಇದು ಸಾಧ್ಯವಾಗುವುದು ಸಂಖ್ಯೆಯಲ್ಲಿ ೩೫೦ಕ್ಕೂ ಹೆಚ್ಚಿರುವ ಬ್ಲಾಗರುಗಳ, ಮತ್ತು ಕಮೆಂಟು ಹಾಕಿ ಚರ್ಚಿಸುವ, ಪ್ರೋತ್ಸಾಹಿಸುವ, ಅಥವಾ ಭೇಟಿಕೊಟ್ಟು ಓದುವ- ಆದರೆ ಏನೂ ಹೇಳಲು ಇಷ್ಟ ಪಡದ ಇನ್ನೆಷ್ಟೋ ಅಂತರ್ಜಾಲಿ ಕನ್ನಡಿಗರ ಕ್ರಿಯಾಶೀಲ ಭಾಗವಹಿಸುವಿಕೆಯಿಂದ ಮಾತ್ರ. ಅದು ಆಗಬೇಕಿದೆ.

++++++++++

ಇಷ್ಟು ಮಾತ್ರವಲ್ಲ. ಬರಹದ ತೂಕದ ಮೇಲೆ ಬರಹಗಾರನನ್ನು ಅಥವಾ ಬರಹಗಾರ್ತಿಯನ್ನು ಅಳೆಯುವ ಕೆಲಸ ಆಗಬೇಕು. ಬರಹಗಾರ ಅಥವಾ ಬರಹಗಾರ್ತಿಯ ಹೆಸರಿನ ಮೇಲೆ ಬರಹವನ್ನು ಅಳೆಯುವುದು ತಪ್ಪು ಅಂತ ಹೇಳ್ತಿಲ್ಲ ನಾನು, ಆದ್ರೆ ಸಹೃದಯತೆಯ ಮಟ್ಟ ನಮ್ಮಲ್ಲಿ ಇನ್ನೂ ಹೆಚ್ಚಬೇಕಿದೆ ಅಂತ ನಂಗೆ ಅನಿಸ್ತಿದೆ.

++++++++++

ಕನ್ನಡ ಬ್ಲಾಗುಗಳ ಸಂಖ್ಯೆ ೩೫೦ ದಾಟಿದೆ ಅಂತ ಮೊನ್ನೆ ಸುಶ್ರುತ ಮಾಡಿದ ಪಟ್ಟಿ ನೋಡುವಾಗ ತಿಳಿಯಿತು. ಆ ಪಟ್ಟಿಯಿಂದಲೂ ಅನೇಕ ಬ್ಲಾಗುಗಳು ಮಿಸ್ ಆಗಿವೆ. ಅವುಗಳಲ್ಲಿ ಮುಕ್ಕಾಲುಪಾಲು ನಾನು ನೋಡೇ ಇರಲಿಲ್ಲ, ಅಷ್ಟು ಅಗಾಧವಾಗಿ ಇಂದು ಕನ್ನಡದಲ್ಲಿ ಬ್ಲಾಗಿಂಗ್ ಬೆಳೆದಿದೆ. ಇಷ್ಟು ಜನರಲ್ಲಿ ಅರ್ಧ ಸೇರ್ಕೊಂಡ್ರೂ ಏನಾದ್ರೂ ಒಳ್ಳೆ ಕೆಲಸ ಮಾಡಬಹುದಲ್ವಾ? ಕಥೆ-ಕವನ ಬರೆಯುವುದು ಒಳ್ಳೆಯದು ಅನ್ನುವುದು ನಿಜ. ಆದರೆ ಬರೀ ಬರೆಯುತ್ತಾ ಕೂತರೆ ಅದು ಥಿಯರಿಯ ಹಂತದಲ್ಲಿಯೇ ಕೊನೆಯಾಗುವ ಅಪಾಯ ಇದೆಯೇನೋ ಅಂತ ಇತ್ತೀಚೆಗೆ ನಂಗೆ ಅನಿಸ್ತಿದೆ... ಬರಹಕ್ಕೆ ಉದ್ದೇಶ ಇರಬೇಕೆ ಇರಬೇಡವೆ ಅಂತ ನನ್ನಲ್ಲೇ ಲೆಕ್ಕಾಚಾರ ಶುರುವಾಗಿದೆ! ನೀವೇನಂತೀರಾ?

Thursday, March 6, 2008

LET'S MEET...!!!


ಇಂಟರ್ನೆಟ್ಟಲ್ಲಿ ಒಬ್ರು ಬರೆದಿದ್ದು ಇನ್ನೊಬ್ರು ಓದಿ ಖುಶಿ ಪಡ್ತೀವಿ, ಒಬ್ರಿಗೊಬ್ರು ಪರಿಚಯ ಇರ್ತೀವಿ.. ಆದ್ರೆ, ನಿಜಜಗತ್ತಿನಲ್ಲಿ ಒಬ್ರಿಗೊಬ್ರು ಭೇಟಿ ಆದಾಗ ಆ ಮಜಾನೇ ಬೇರೆ!

ನವ ಪ್ರಕಾಶನ ಸಂಸ್ಥೆ 'ಪ್ರಣತಿ', blogger's meet ಮಾಡ್ಬೇಕು ಅಂತ ಹೊರಟಿದೆ. ಮಾರ್ಚ್ ೧೬ರ ಭಾನುವಾರ ಸಂಜೆ ನಾವೆಲ್ಲ ಪರಸ್ಪರ ಭೇಟಿಯಾಗಬಹುದಾದ ಅವಕಾಶ ಒದಗಿ ಬಂದಿದೆ...

ದಿನ - ೧೬ ಮಾರ್ಚ್ ೨೦೦೮
ಸಮಯ - ಸಂಜೆ ನಾಲ್ಕು ಗಂಟೆ
ಜಾಗ - ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ಡಾ ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಬರ್ತಾರೆ, ಇರ್ತಾರೆ, ಮಾತಾಡ್ತಾರೆ. ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ನಂಗೆ 'ಪ್ರಣತಿ' ತಂಡ ಪ್ರೀತಿಯಿಂದ ಆಹ್ವಾನಿಸಿದೆ... ನೀವೂ ಬನ್ನಿ.

ಈ ಪೋಸ್ಟ್ ನೋಡಿದವರೆಲ್ರಿಗೂ ಜಾಲಿಗರ GET-TOGETHERಗೆ ಸುಸ್ವಾಗತ...
:-)