Sunday, May 25, 2008

ಬಿಸಿ ಬಿಸಿ ಸುದ್ದಿ ತಣಿದ ಮೇಲೆ....

ಮೊನ್ನೆ ಮೊನ್ನೆ ಎಲ್ಲಾ ಟಿವಿ ಚಾನೆಲಲ್ಲೂ ಸುದ್ದಿಯಾಗಿ, ಇಂದಿಗೂ ಬಗೆಹರಿಯದಿರುವ, ಸುದ್ದಿಯಾಗುತ್ತಲೇ ಇರುವ ಪ್ರಕರಣ ಆರುಶಿ ಕೊಲೆ ಪ್ರಕರಣ. NOIDAದಲ್ಲಿ ಒಂದು ತಣ್ಣನೆಯ ರಾತ್ರಿ, ಆಗಷ್ಟೆ ಹದಿಹರೆಯಕ್ಕೆ ಕಾಲಿಟ್ಟಿದ್ದ ಚಂದದ ಹುಡುಗಿ ಆರುಶಿಯ ಕೊಲೆಯಾಗಿತ್ತ್ತು. ಆಕೆ ಕೊಲೆಯಾದ ಸಮಯ ಮನೆಯಲ್ಲೇ ಇದ್ದ್ದ ಹೆತ್ತವರು ಮಾಧ್ಯಮ ಮತ್ತು ಪೊಲೀಸರಿಗೆ ಹೇಳಿಕೆ ಕೊಡುವಾಗ ಸಂಶಯ ವ್ಯಕ್ತಪಡಿಸಿದ್ದು ಮನೆಯಲ್ಲಿ ಕೆಲಸಕ್ಕೆ ಬರುತ್ತಿದ್ದ (domestic help) ಹೇಮರಾಜ್ ಮೇಲೆ. ಇಷ್ಟು ಸುದ್ದಿ ಸಿಕ್ಕಿದ್ದೇ ತಡ, ಎಲ್ಲಾ ಟಿವಿ ಚಾನೆಲ್-ಗಳಲ್ಲೂ ಶುರು ಬ್ರೇಕಿಂಗ್ ನ್ಯೂಸ್... WHO KILLED ARUSHI ಅಂತ ಹೆಡ್ ಲೈನ್ ಕೊಟ್ಕೊಂಡು ಕೊಲೆಯ ಕುರಿತು ಚರ್ಚೆಗಳು ನಡೆದವು.
ಎಲ್ಲಾ ಚಾನೆಲ್-ಗಳು ಸೇರಿಕೊಂಡು, ಯಾವ ಹಂತಕ್ಕೆ ಮುಟ್ಟಿದವು ಎಂದರೆ, ಈ ಹಿಂದೆ ಮನೆಯಲ್ಲಿ ಕೆಲಸ ಮಾಡುವ ಸಹಾಯಕರು ನಡೆಸಿದ ವಿವಿಧ ಅಪರಾಧ ಕೃತ್ಯಗಳ ಕೇಸ್ ಸ್ಟಡೀಸ್ ಎಲ್ಲ ತೆಗೆದುಕೊಂಡು ಅವುಗಳ ಚರಿತ್ರೆಯನ್ನು ಬಿಚ್ಚಿಟ್ಟರು. TIMES NOW ಅಂತೂ ಇಷ್ಟು ಸುದ್ದಿ ಸಿಕ್ಕಿದ್ದೇ ಹಬ್ಬ ಅಂತ ಸೆಲೆಬ್ರೇಟ್ ಮಾಡಿತು. ಅದಕ್ಕೆ ಇದ್ದಿದ್ದು ಇಲ್ಲದ್ದು ಉಪ್ಪು ಖಾರ ಮಸಾಲೆ ಹಚ್ಚಿ ಇನ್ನಷ್ಟು ಬಣ್ಣ ತುಂಬಿತು.
ಹೋಗಲಿ ಬಿಡಿ, TIMES NOW ಇರುವುದೇ ಹಾಗೆ, ಎಷ್ಟಂದರೂ times of india ಸಂತತಿಯಲ್ಲವೇ ಅಂತ ನಾನು ಚಾನೆಲ್ ಬದಲಾಯಿಸಿ NDTV ಕಡೆ ಹೊರಟೆ. ಅಲ್ಲಿ ನೋಡುತ್ತೇನೆ, ಒಬ್ಬ ಕ್ರಿಮಿನಾಲಜಿಸ್ಟು, ಇನ್ನೊಬ್ಬ ಸೈಕಾಲಜಿಸ್ಟು, ಮತ್ತೊಬ್ಬ ಮಾಜಿ ಪೊಲೀಸ್ ಅಧಿಕಾರಿ, ಮತ್ತೊಬ್ಬ ಮನೆಕೆಲಸದವರಿಂದ ದರೋಡೆಗೊಳಗಾದ ವ್ಯಕ್ತಿ - ಇವರ ಜತೆಗೆ ಒಬ್ಬಳು ಮನೆ ಕೆಲಸ ಮಾಡುವ ಬೇಬಿ ಎಂಬ ಹೆಸರಿನ ಹುಡುಗಿಯನ್ನು ಕೂರಿಸಿಕೊಂಡು ಗಂಭೀರವಾದ ಚರ್ಚೆ ನಡೀತಿತ್ತು.
ಉಳಿದವರೆಲ್ಲ ಇಂಗ್ಲಿಶಿನಲ್ಲಿ ಬಡಬಡಿಸುತ್ತಿದ್ದರೆ, ಬೇಬಿ ಹಿಂದಿ ಮಾತ್ರ ಮಾತಾಡಬಲ್ಲವಳಾಗಿದ್ದಳು. ಅವಳಿಗೆ ಇತರರು ಮಾತಾಡಿದ್ದು ಅರ್ಥವಾಗಿತ್ತೋ ಇಲ್ಲವೋ ಗೊತ್ತಾಗುತ್ತಿರಲಿಲ್ಲ. ಇತರರ ಜತೆ ಈರೀತಿಯ ಅಪರಾಧ ಕೃತ್ಯಗಳ ವಿವಿಧ ಆಯಾಮಗಳ ಕುರಿತು ಮಾತಾಡಿಸಿದ್ದಾದ ಮೇಲೆ ANCHOR ಅವಳಿಗೆ ಹಿಂದಿಯಲ್ಲಿ ಪ್ರಶ್ನೆ ಆರಂಭಿಸಿದಳು... 'ಬೇಬಿ, ಕ್ಯಾ ಆಪ್ ಬತಾ ಸಕ್ತೀ ಹೈಂ ಕಿ ಐಸಾ ಅಪರಾಧ್ ಕೃತ್ಯ್ ಕ್ಯೂಂ ಹೋತಾ ಹೈ...' ಇದಕ್ಕೆ ಉತ್ತರವಾಗಿ ಬೇಬಿ, ಮನೆಯವರು ಕೆಲಸ ಮಾಡಿಸಿಕೊಳ್ಳುವಾಗ ಕೆಲಸದವರಿಗೆ ಸರಿಯಾದ ಮರ್ಯಾದೆ ಕೊಡುವುದಿಲ್ಲ, ಅದರಿಂದ ಹುಟ್ಟುವ ರೋಷ ಈರೀತಿಯ ಕೃತ್ಯಗಳಿಗೆ ಕಾರಣವಾಗುತ್ತದೆಂದು ಹೇಳಿದಳು. ಆಗ ಅಲ್ಲಿ ಕೂತಿದ್ದ ಪ್ರೇಕ್ಷಕರಲ್ಲಿ ಒಬ್ಬಾಕೆ ತಾನು ಅತ್ಯುತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ ಕೆಲಸದಾತ ತನಗೆ ಮೋಸ ಮಾಡಿ ಮನೆ ದೋಚಿದ್ದನ್ನು ಹೇಳಿಕೊಂಡು, ಬಲುಬೇಗನೆ ಧನವಂತರಾಗುವ ಹುಚ್ಚಿನಿಂದ ಕೆಲಸದವರು ಇಂತಹ ಅಪರಾಧಗಳನ್ನು ಮಾಡುತ್ತಾರೆಂಬ ಕನ್-ಕ್ಲೂಶನ್-ಗೆ ಬಂದಳು. ಇದಕ್ಕೆ ಬೇಬಿ ತೀವ್ರವಾಗಿ ವಿರೋಧಿಸಿ, ಸಾಧ್ಯವೇ ಇಲ್ಲ, ನೀವು ಎಲ್ಲಾದರೂ ತಪು ಮಾಡಿರುತ್ತೀರಿ ಎಂಬರ್ಥದ ಮಾತುಗಳನ್ನು ಆಡಿದಳು. ಆಗ ಅಲ್ಲಿದ್ದವರೆಲ್ಲ ಒಗ್ಗಟ್ಟಾಗಿ ಅವಳನ್ನು ವಿರೋಧಿಸಹೊರಟರು. Anchor ಪರಿಸ್ಥಿತಿ ಹತೋಟಿಗೆ ತರಲು ಹೆಣಗಾಡತೊಡಗುತ್ತಿದ್ದಂತೆಯೇ ನಾನು ಚಾನೆಲ್ ಬದಲಾಯಿಸಿದೆ.
ಮತ್ತೆ TIMES NOWಗೆ ಬಂದೆ. ಅಲ್ಲಿ ನೋಡಿದರೆ, ಆಗಷ್ಟೆ ಹೊಸಾ ಬಿಸಿ ಬಿಸಿ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು.. ARUSHI’S SUSPECTED KILLER HEMRAJ FOUND DEAD... DEAD BODY FOUND ON THE TERRACE OF ARUSHI'S HOME... NEIGHBOUR FINDS BODY TWO DAYS LATER AFTER DEATH... POLICE FAILED TO FIND THE DEAD BODY EARLIER .... ETC ETC...

----------

ಸಮಯ 7.30 ಬೆಳಿಗ್ಗೆ, ಆದಿತ್ಯವಾರ, ಮೇ 25. ಚುನಾವಣಾ ಮತ ಎಣಿಕೆ ಕಾರ್ಯ 8 ಘಂಟೆಗೆ ಸರಿಯಾಗಿ ಆರಂಭವಾಗಲಿತ್ತು... ಎಲ್ಲಾ ಚಾನೆಲ್-ಗಳಲ್ಲೂ ಬಿಸಿ ಬಿಸಿ ಸುದ್ದಿ ವೀಕ್ಷಕರಿಗೆ ನೀಡಲು ಎಲ್ಲ್ಕಾ ತಯಾರಿಯೂ ಆಗಿತ್ತು. ಹಾಗೆಯೇ ಎಲ್ಲಾ ಚಾನೆಲ್-ಗಳನ್ನೂ ಸುಮ್ಮನೆ ನೋಡುತ್ತಾ ಸಾಗುತ್ತಿದ್ದರೆ, TIMES NOWನಲ್ಲಿ ರಿಮೋಟ್ ನಿಂತುಬಿಟ್ಟಿತು. ಅಲ್ಲಿ ಹಿಂದಿನ ದಿನ ರಾತ್ರಿ ನಡೆಸಿದ ಚರ್ಚೆಯ ಮರುಪ್ರಸಾರ ನಡೆದಿತ್ತು. ರಿಮೋಟ್ ನಿಂತಿದ್ದು ಮಾತ್ರ ಅದಕ್ಕಲ್ಲ. ಇನ್ನೂ ಯಾವ ಕನ್ನಡ ಚಾನೆಲಲ್ಲೂ ಮತ ಎಣಿಕೆ ಕಾರ್ಯ ಆರಂಭವಾದ ಬಗ್ಗೆ ಸುದ್ದಿಯೇ ಇಲ್ಲ, ಎಷ್ಟು ಸ್ಥಾನಗಳಲ್ಲಿ ಯಾವ ಪಕ್ಷ ಮುಂದಿದೆ ಅಂತ ತಿಳಿಸುವ ಕೌಂಟರ್ TIMES NOWನಲ್ಲಿ ಈಗಾಗಲೇ ಕಾರ್ಯಾರಂಭ ಮಾಡಿತ್ತು. ಈಗಿನ್ನೂ 7.30, ಅದಾಗಲೇ ಕಾಂಗ್ರೆಸ್ - 1 ಅಂತ ತೋರಿಸುತ್ತ ಅಕೌಂಟ್ ಓಪನ್ ಮಾಡಿತ್ತು. ತಕ್ಷಣ ಎಲ್ಲಾ ವರದಿಗಾರರ ಮೂಲಕ ಕ್ರಾಸ್ ಚೆಕ್ ಮಾಡಿ TIMES NOW ಸುಳ್ಳು ಹೇಳುತ್ತಿದೆಯೆಂದು ಖಚಿತಪಡಿಸಿಕೊಂಡಿದ್ದಾಯಿತು.
ಘಂಟೆ 8 ಆಗುತ್ತಿದ್ದಂತೆಯೇ ಎಲ್ಲೆಲ್ಲಿ ಮತ ಎಣಿಕೆ ಕಾರ್ಯ ಆರಂಭವಾಯಿತೋ ಅಲ್ಲಿಂದೆಲ್ಲ ಮೆಲ್ಲಗೆ ಸುದ್ದಿ ಆರಂಭವಾಯಿತು. ಹಾಗೆಯೇ ಬಣ್ಡ್ಣಬಣ್ಣದ ಸುದ್ದಿಗಳೂ ಕೂಡ ಆರಂಭವಾಯಿತು. ಒಂದು ಚಾನೆಲ್ ಕನಕಪುರದಲ್ಲಿ ಡಿಕೆಶಿ ಹಿನ್ನಡೆ ಅಂತ ಕೊಟ್ಟರೆ ಇನ್ನೊಂದು ಮುನ್ನಡೆ ಅಂದಿತು. ಒಂದು ಚಾನೆಲ್-ನಲ್ಲಿ ಅಂಬರೀಶು ಹಿನ್ನಡೆ ಅನುಭವಿಸಿದರೆ ಇನ್ನೊಂದರಲ್ಲಿ ಮುನ್ನಡೆ ಸಾಧಿಸಿದರು.
ಒಂದು ಐದು-ಹತ್ತು ನಿಮಿಷ ಯಾವುದು ಸತ್ಯ ಯಾವುದು ಸುಳ್ಳು ಅಂತಲೇ ತಿಳಿಯದ ಹಾಗೆ ಸುದ್ದಿಗಳು ಓಡಿದವು. ಈ ಓಟದಲ್ಲಿ ಇಂಗ್ಲಿಷ್ ಚಾನೆಲುಗಳು ಕೂಡ ಹಿಂದುಳಿಯಲಿಲ್ಲ. ಆಮೇಲೆ, ಒಂದು ಹಂತಕ್ಕೆ ಬಂದ ಮೇಲೆ ಎಲ್ಲಾ ಚಾನೆಲ್-ನಲ್ಲೂ ಹೆಚ್ಚುಕಡಿಮೆ ಒಂದೇ ವಿಧವಾದ ಸುದ್ದಿಗಳು ಹೋಗಲಾರಂಭಿಸಿದವು. ಹತ್ತಿರವೆನಿಸಬಹುದಾದ ಸಂಖ್ಯೆಗಳು ಕೌಂಟರ್-ನಲ್ಲಿ ಬರಲು ಆರಂಭವಾಯಿತು.
ಕೊನೆಗೆ ಮಧ್ಯಾಹ್ನ 3.30ಕ್ಕೆ ಹೆಚ್ಚು ಕಡಿಮೆ ಎಲ್ಲಾ ಸ್ಥಾನಗಳಲ್ಲೂ ಫಲಿತಾಂಶ ಘೋಷಿತವಾಯಿತು. ಎಲ್ಲಾ ಕನ್ನಡ ಚಾನೆಲುಗಳೂ ಒಂದು ಸ್ಕೋರು ತೋರಿಸುತ್ತಿದ್ದರೆ ಎಲ್ಲಾ ಇಂಗ್ಲಿಷ್ ಚಾನೆಲುಗಳೂ ಇನ್ನೊಂದು ಸ್ಕೋರು ತೋರಿಸುತ್ತಿದ್ದವು. ನಮ್ಮಕ್ಕ ಫೋನ್ ಮಾಡಿ ಯಾವುದು ಸರಿ ಅಂತ ಕೇಳಿದರೆ, ನಾನು ಹೇಳಿದೆ, ಕನ್ನಡ ಚಾನೆಲುಗಳು ತೋರಿಸುತ್ತಿರುವ ಸ್ಕೋರು ಸತ್ಯ, ಅದನ್ನು ನಂಬಬಹುದು ಅಂತ. ಕೊನೆಗೆ ಬಂದಿದ್ದೂ ಅದೇ ಸ್ಕೋರು - 110-80-28-6.

------------

ಜನಾದೇಶ ಅನ್ನಬಹುದೋ, ಚುನಾವಣೆ ಅನ್ನಬಹುದೋ, ರಣರಂಗ ಅನ್ನಬಹುದೋ, ಚದುರಂಗ ಅನ್ನಬಹುದೋ - ಒಟ್ಟಿನಲ್ಲಿ ಪ್ರಜಾಪ್ರಭುತ್ವದ ಹಬ್ಬವೆಂದು ಕರೆಯಲ್ಪಡುವ ಕಾರ್ಯಕ್ರಮದ ಎಲ್ಲಾ ಪ್ರಕ್ರಿಯೆ ಮುಗಿದಿದೆ. ಕೊಟ್ಟೂ ಕೊಡದ ಹಾಗೆ ಬಹುಮತ ಕೊಟ್ಟಿದ್ದಾನೆ ಜಾಣ ಮತದಾರ. ಹಿಂದುತ್ವದ ಹೆಸರಲ್ಲಿ ಕೋಮುಗಲಭೆ ಎಬ್ಬಿಸಿದವರು, 36 ವರ್ಷಗಳಿಂದಲೂ ತಮ್ಮ ಕ್ಷೇತ್ರಕ್ಕೆ ಏನೂ ಉಪಕಾರ ಮಾಡದವರು, ಟಿಕೆಟ್ ಸಿಕ್ಕಲಿಲ್ಲವೆಂದು ಬೇರೆ ಪಕ್ಷಕ್ಕೆ ಹಾರಿದವರು, ಪಾರ್ಲಿಮೆಂಟಿನಿಂದ ಹೊರಬಂದು ವಿಧಾನಸೌಧದೊಳಗೆ ಕಾಲಿಟ್ಟು ಅದನ್ನು ಪಾವನವಾಗಿಸುವ ಆಸೆಹೊತ್ತವರು, ಇದೇ ಕೊನೆ ಚುನಾವಣೆಯೆನ್ನುತ್ತ ಓಟಿಗೆ ನಿಂತವರು, ಎಲ್ಲರ ಕಣ್ಣಿಗೆ ಸುಲಭವಾಗಿ ಕಾಣುವಂತಹ ಕೆಲಸಗಳನ್ನು ಮಾತ್ರ ಮಾಡಿ ಕೆಲಸ ಮಾಡಿದ್ದೇವೆಂದು ಕೊಚ್ಚಿಕೊಂಡವರು, ದುಡ್ಡು ಹ್ಚೆಲ್ಲಿ ಗೆಲ್ಲಬಹುದೆಂದು ತಿಳಿದವರು, ದೂರದಿಂದ ಹಾರಿಬಂದು ಬೆಂಗಳೂರನ್ನು ಉದ್ಧಾರ ಮಾಡುತ್ತೇನೆಂದು ಚುನಾವಣೆಗೆ ನಿಂತು, ಕ್ಯಾಂಪೇನ್ ಮಾಡಬೇಕಾದ ಸಮಯದಲ್ಲಿ ಟೀವಿ ಚಾನೆಲ್-ನಲ್ಲಿ ಚರ್ಚೆ ನಡೆಸುತ್ತಾ ಕೂತವರು - ಎಲ್ಲರಿಗೂ ತನಗೆ ಸಾಧ್ಯವಾದಷ್ಟು ಸರಿಯಾದ ರೀತಿಯಲ್ಲಿ ಮಣ್ಣುಮುಕ್ಕಿಸಿದ್ದಾನೆ ಮತದಾರ. ಆತನ ಎಲ್ಲಾ ಆಯ್ಕೆಗಳೂ ಉತ್ತಮವಾಗಿವೆಯೆಂದಲ್ಲ, ಆದರೆ ತನ್ನ ಮಿತಿಯಲ್ಲಿ, ತನಗೆ ಸಿಕ್ಕ ಅಪರೂಪದ ಒಂದೇ ಅವಕಾಶದಲ್ಲಿ, ಎಲ್ಲರಿಗೂ ಬುದ್ಧಿ ಕಲಿಸಿದ್ದಾನೆ. ಆದರೆ ಯಾರೂ, ಯಾವ ಪಕ್ಷವೂ, ಹೆಚ್ಚು ಹಾರಾಡಲು ಸಾಧ್ಯವಿಲ್ಲದ ರೀತಿಯಲ್ಲಿದೆ ಈ ಸಾರಿಯ ಚುನಾವಣಾಫಲಿತಾಂಶ.

------------

ಈಗ ಅಧಿಕಾರ ಹಿಡಿಯಲಿರುವುದು ಯಾರು ಅಂತ ಹೆಚ್ಚು ಕಡಿಮೆ ತೀರ್ಮಾನವಾಗಿದೆ - ರಾಜಕೀಯದ 'ಆಟ'ಗಳಲ್ಲಿ ಸಂಭವಿಸಬಹುದಾದ ಅನಿರೀಕ್ಷಿತ ಬೆಳವಣಿಗೆಗಳ ಹೊರತಾಗಿ. ಆದರೆ, ಈಗ ನನ್ನನ್ನು ಕಾಡುತ್ತಿರುವ ಪ್ರಶ್ನೆಗಳು ಇವು -

೧. ಅಕ್ರಮ ಗಣಿಗಾರಿಕೆಯ ಮೇಲೆ ಲೋಕಾಯುಕ್ತರು ಸರಕಾರಕ್ಕೆ ನೀಡಿದ ವರದಿಯ ಗತಿ ಏನಾಗಬಹುದು?
೨. ಹಣದುಬ್ಬರ, ಬೆಲೆಯೇರಿಕೆಯನ್ನು ನಿಯಂತ್ರಿಸುತ್ತೇನೆಂಬ ಆಶ್ವಾಸನೆಯ ಗಾಳವನ್ನು ಮತದಾರನಿಗೆ ಎಸೆದು ಅಧಿಕಾರಕ್ಕೆ ಬಂದ ಬಿಜೆಪಿ, ಇವುಗಳನ್ನು ಹೇಗೆ ನಿಯಂತ್ರಿಸಬಹುದು? ಹಣದುಬ್ಬರ-ಬೆಲೆಯೇರಿಕೆಗಳು ಒಂದು ರಾಜ್ಯದ ಒಳಗೆ ನಿಯಂತ್ರಿಸಬಹುದಾದ ಸಂಗತಿಗಳೇ?
೩. ಸರಕಾರ ಬಂದ ಕೂಡಲೇ ಇಂಡಸ್ಟ್ರಿಯಲೈಸೇಶನಿಗೆ ಸಹಾಯ ಮಾಡುತ್ತೇನೆಂದು ಬಹುಮತ ಸಿಕ್ಕಿದಕೂಡಲೇ ನಡೆಸಿದ ಪತ್ರಿಕಾಗೋಷ್ಟಿಯಲ್ಲ್ಲಿ ಯಡಿಯೂರಪ್ಪ ಹೇಳಿದ್ದಾರೆ. ಇದನ್ನು ಸಿಎನ್ ಬಿಸಿ, NDTV PROFIT ಇತ್ಯಾದಿಗಳು ಹೆಡ್ಲೈನ್ ಆಗಿ ತೋರಿಸುತ್ತಿವೆ. ಇದರ ಅರ್ಥ ಏನಿರಬಹುದು?
೪. ಎಲ್ಲಕ್ಕಿಂತ ಹೆಚ್ಚಾಗಿ, ಭೂಮಿ ಖರೀದಿಯ ನಿಯಮಾವಳಿಗಳನ್ನು ಸಡಿಲಗೊಳಿಸುತ್ತೇನೆಂದು ಈಗಾಗಲೇ ಬಿಜೆಪಿ ಹೇಳಿದೆ. ಎಲ್ಲರೂ ಸುಮ್ಮನಿದ್ದರೆ ಅದನ್ನು ಮಾಡಿಯೂ ಮಾಡುತ್ತದೆ. ಇದರಿಂದಾಗಿ ರೈತರು ಭೂಮಿ ಕಳೆದುಕೊಂಡು ನೆಲೆ ಕಳೆದುಕೊಂಡು ಯಾವುದೋ ನಗರದ ಸ್ಲಮ್ಮಿಗೋ ಕಾರ್ಮಿಕವರ್ಗಕ್ಕೋ ಸೇರಿಹೋಗಬಹುದಾದ ಸಾಧ್ಯತೆ - ಅನಿವಾರ್ಯವಾಗಲಿದೆಯೇ?

Sunday, May 11, 2008

ಚುನಾವಣೆ, ಮತ್ತು ಒಂದಿಷ್ಟು ಕೊರೆತಪುರಾಣ... :)

ಇದೇನಪ್ಪಾ ಇದ್ದಕ್ಕಿದ್ದಂತೆ ರಾಜಕೀಯದ ಬಗ್ಗೆ ಇಷ್ಟೊಂದು ಕೊರೆತ ಶುರುಮಾಡಿದಾಳಲ್ಲ ಅಂತ ಅನ್ಕೋಬೇಡಿ, ಇದರಷ್ಟು ಕಲರ್-ಫುಲ್ ವಿಷಯ ಇನ್ಯಾವುದೂ ಇಲ್ಲ!

++++++++++++++++

ಕನ್ನಡ ಟೀವಿ ಚಾನೆಲ್-ಗಳಲ್ಲಿ ಇತ್ತೀಚೆಗೆ ಬರ್ತಾ ಇರುವ ರಾಜಕೀಯ ಪಕ್ಷಗಳ ಜಾಹೀರಾತುಗಳನ್ನು ನೋಡ್ತಾ ಇದ್ರೆ ಮಜಾ ಅನ್ನಿಸುತ್ತದೆ. ಅಳಬೇಕೋ ನಗಬೇಕೋ ಗೊತ್ತಾಗುವುದಿಲ್ಲ.

ಕಾಂಗ್ರೆಸ್ ’20 ತಿಂಗಳುಗಳ ದುರಾಡಳಿತ’ದ ಬಗ್ಗೆ ತನ್ನ ಬೇಸರವನ್ನು ಒಂದು ಜಾಹೀರಾತಿನಲ್ಲಿ ಹೇಳಿಕೊಂಡರೆ, ಇನ್ನೊಂದು ಜಾಹೀರಾತಿನಲ್ಲಿ ತನ್ನ ಭರವಸೆಗಳನ್ನು ಹೇಳಿಕೊಂಡಿದೆ... ಕಲರ್ ಟೀವಿ, ಎರಡು ರುಪಾಯಿಗೆ ಅಕ್ಕಿ ಇತ್ಯಾದಿ ಇತ್ಯಾದಿ. ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡ ಬಡವರಿಗೆ ಅಪೀಲ್ ಆಗುವಂತಹ ಅಂಶಗಳನ್ನೇ ಜಾಹೀರಾತಿನಲ್ಲಿ ಹಾಕಿಕೊಂಡಿದೆ. ಇದರಲ್ಲಿ ಹೇಳುವಂತಹದೇನೂ ಇಲ್ಲ.

ಬಿಜೆಪಿಯ ಎಲ್ಲಾ ಜಾಹೀರಾತುಗಳು ನೇರವಾಗಿ ಐವತ್ತು ವರ್ಷ ಆಳಿದ ಪಕ್ಷಕ್ಕೆ ಸಡ್ಡು ಹೊಡೆಯುತ್ತವೆ. ಮೊದಲಿಗೆ ಕಾಂಗ್ರೆಸ್ ಪಕ್ಷದ ಹೆಸರು ನೇರವಾಗಿ ಬರ್ತಾ ಇತ್ತು, ಆಮೇಲೆ ಚುನಾವಣಾ ಆಯೋಗ ಕತ್ತರಿ ಹಾಕಿದ ಮೇಲೆ ಅದು ’ಐವತ್ತು ವರ್ಷ ಆಳಿದ ಪಕ್ಷ’ ಆಯಿತು.

ಇದರಲ್ಲಿ ಮೊದಲ ಜಾಹೀರಾತು ಸುಷ್ಮಾ ಸ್ವರಾಜ್ ಭಾಷಣವಿತ್ತು. ಕಾಂಗ್ರೆಸ್-ಗೆ ಹಿಗ್ಗಾಮುಗ್ಗ ಬೈದ ಕಾರಣ ಸೆನ್ಸಾರ್ ಆಗಿ ಕಾಂಗ್ರೆಸ್ ಅಂತ ಇದ್ದಲ್ಲೆಲ್ಲ ’ಟುಂಯ್’ ಅಂತ ಶಬ್ದ ಹಾಕಿಸಿಕೊಂಡು ಒಂದು ವಾರ ಟೆಲಿಕಾಸ್ಟ್ ಆಯಿತು. ನಂತರ ನಿಂತ ಹಾಗಿದೆ.

ಮುಂದಿನ ಜಾಹೀರಾತುಗಳ ಟಾರ್ಗೆಟ್ ನೇರವಾಗಿ ಮಧ್ಯಮವರ್ಗ. ಆಹಾರವಸ್ತುಗಳ ಬೆಲೆ ಹೆಚ್ಚಳ ಒಂದು ಜಾಹೀರಾತಿನಲ್ಲಿ, ಇನ್ನೊಂದ್ರಲ್ಲಿ ಗೃಹಸಾಲ ಬಡ್ಡಿ, ಮನೆ ಕಟ್ಟುವ ಸಾಮಗ್ರಿಗಳ ಬೆಲೆ ದುಬಾರಿ. ಇವೆಲ್ಲದಕ್ಕೂ ’ಐವತ್ತು ವರ್ಷ ಆಳಿದ ಪಕ್ಷ’ ಹೊಣೆಯಾಗಿದೆ. ಹಿನ್ನೆಲೆಯಲ್ಲಿ ಮೆಲುವಾಗಿ ’ದೋಣಿ ಸಾಗಲಿ ಮುಂದೆ ಹೋಗಲಿ’ ಹಾಡಿನ ಸಂಗೀತ ಕೇಳಿಬರುತ್ತದೆ, ನೋಡಿದವರೆಲ್ಲ ಹೌದು ಹೌದು ಅನ್ನುವ ಹಾಗಿದೆ ಜಾಹೀರಾತು.

ಇನ್ನೊಂದು ಜಾಹೀರಾತಿನಲ್ಲಿ ಭಯೋತ್ಪಾದನೆಯನ್ನು ಮುಖ್ಯವಾಗಿ ತೆಗೆದುಕೊಳ್ಳಲಾಗಿದ್ದು, ಬಿಜೆಪಿಯ ಟ್ರೇಡ್-ಮಾರ್ಕ್ ಆಗಿರುವ ಹಿಂದುತ್ವಕ್ಕೆ ಬದ್ಧತೆಯ agendaಕ್ಕೆ ಲೈಟಾಗಿ ಬಣ್ಣ ಬಳಿದು ಕೂಡಿಸಲಾಗಿದೆ. ಕೇಂದ್ರ ಸರಕಾರದ್ದು ಮುಸ್ಲಿಂ ತುಷ್ಟೀಕರಣ ಧೋರಣೆ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ’ಐವತ್ತು ವರ್ಷ ಆಳಿದ ಪಕ್ಷ’ಕ್ಕೆ ಯಾವುದು ಮುಖ್ಯ, ಅವರ ಸಗಟು ಮತಗಳೋ ಅಥವಾ ನಮ್ಮ ಅಮೂಲ್ಯ ಜೀವಗಳೋ’ ಅಂತ ಕೇಳಿ, ಕೊನೆಗೆ ’ಬಿಜೆಪಿಯೇ ಪರಿಹಾರ’ ಅನ್ನುತ್ತದೆ ಈ ಜಾಹೀರಾತು.

ಇದ್ದಿದ್ದರಲ್ಲಿ ಜೆಡಿ ಎಸ್ ಜಾಹೀರಾತೇ ವಾಸಿ. ಬೇರೆ ಪಕ್ಷಗಳ ಕುರಿತು ಮಾತೇ ಆಡದೆ ತಮ್ಮ ಪಕ್ಷ ಮತ್ತು ನಾಯಕನನ್ನು ಬಿಂಬಿಸುವ ಯತ್ನ ಮಾತ್ರ ಇಲ್ಲಿ ನಡೆದಿದೆ. ಆದರೆ ಹೆಚ್ಚಿನ ಚಾನೆಲ್-ಗಳಲ್ಲಿ ಹೆಚ್ಚು ದಿನ ಈ ಜಾಹೀರಾತು ಬರಲಿಲ್ಲ. ಬಹುಷ ಪಾರ್ಟಿ ಪಾಪರ್ ಆಗಿರುವುದು ಕಾರಣವಿರಬಹುದು, ೧೦ ಸೆಕೆಂಡಿಗೆ ಟೀವಿ ಚಾನೆಲ್-ನಲ್ಲಿ ಪ್ರೈಮ್ ಟೈಮ್-ನಲ್ಲಿ 14000 ರೂಪಾಯಿಯಷ್ಟು ಬೆಲೆಇರುವಾಗ, ಎಷ್ಟಂದರೂ ಪ್ರಾದೇಶಿಕ ಪಕ್ಷವಲ್ಲವೇ, ರಾಷ್ಟ್ರೀಯ ಪಕ್ಷಗಳಷ್ಟು ಕಾಸು ಎಲ್ಲಿಂದ ಬರಬೇಕು... :(

++++++++++++++++

ಏನೇ ಹೇಳಿ, ಇದ್ದಿದ್ರಲ್ಲಿ ಶಿಸ್ತುಬದ್ಧವಾಗಿ campaign ಮಾಡ್ತಾ ಇರೋದು ಈಸಾರಿ ಬಿಜೆಪಿಯೇ. ಮೊದಲ ಹಂತ ಕಳೆದ ಕೂಡಲೇ ಉತ್ತರದ ಕಡೆಗೆ ಹೆಚ್ಚು ಗಮನ ಕೊಡಲಿಕ್ಕಾಗಿ ತಾತ್ಕಾಲಿಕವಾಗಿ ಹುಬ್ಬಳ್ಳಿಗೆ ಪಕ್ಷದ ಆಫೀಸು ಸ್ಥಳಾಂತರಗೊಳ್ತಾ ಇದೆ. ಕಾಕತಾಳೀಯವಾಗಿ, ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಮೊದಲ ಹಂತದ ಮತದಾನದ ದಿನವೇ ಕೋರ್ಟಿನಲ್ಲಿ ಸಿಡಿದ ಬಾಂಬು ಬೇರೇನು ಮಾಡದಿದ್ದರೂ ಜನತೆಯಲ್ಲಿ ಭಯವನ್ನಂತೂ ಖಂಡಿತಾ ಹುಟ್ಟಿಸಿದೆ. ಇಂತಹಾ ಸಮಯದಲ್ಲಿ ಭಯೋತ್ಪಾದನೆಯ ಕುರಿತ ಬಿಜೆಪಿಯೇ ಪರಿಹಾರ ಜಾಹೀರಾತು ಕೆಲವರಿಗಾದರೂ ಪರಿಹಾರ ಸೂಚಿಸಿದರೆ ಆಶ್ಚರ್ಯವಿಲ್ಲ. ಸರಿಯಾದ ಸಮಯಕ್ಕೆ ಸರಿಯಾದ ಜಾಹೀರಾತು.

++++++++++++++++

ಇನ್ನೊಂದು ನನಗೆ ಮಜಾ ಅನಿಸಿದ್ದು ಪ್ರಣಾಳಿಕೆಗಳು. ಸಿಕ್ಕಿದರೆ ಒಂದು ಸಲ ಎಲ್ಲಾ ಪಕ್ಷಗಳ ಪ್ರಣಾಳಿಕೆಗಳನ್ನೂ ತೆಗೆದು ನೋಡಿ, ನನ್ನ ಹಾಗೆಯೇ ನೀವೂ ನಗಬೇಕೋ ಅಳಬೇಕೋ ತಿಳಿಯದೆ ಕಂಗಾಲಾಗುತ್ತೀರಿ. ಒಬ್ಬರು ಕಡುಬಡವರಿಗೆ 3 ರೂಪಾಯಿಗೆ ಅಕ್ಕಿ ಕೊಟ್ಟರೆ ಇನ್ನೊಬ್ಬರು ಅದನ್ನು 2 ರೂಪಾಯಿಗೆ ಇಳಿಸುತ್ತಾರೆ. ಕಡುಬಡವರು ಅಂದರೆ ಯಾರು ಗೊತ್ತಾ... ತಿಂಗಳಿಗೆ 1000 ರೂಪಾಯಿಗಿಂತ ಕಡಿಮೆ ಆದಾಯ ಇರುವವರು - ದಿನಕ್ಕೆ 34 ರೂಪಾಯಿಗಿಂತ ಕಡಿಮೆ ಆದಾಯ ಇರುವವರು. ತಿಂಗಳಿಗೆ 1000 ರೂಪಾಯಿಗಳಿಗಿಂತ ನಿಮ್ಮ ಆದಾಯ ಹೆಚ್ಚಿದ್ದಲ್ಲಿ ನೀವು ಬಡತನದ ರೇಖೆಗಿಂತ ಮೇಲಿದ್ದೀರಿ ಅಂತ ಅರ್ಥ :) ಎಲ್ಲಾ ಪಕ್ಷಗಳೂ ಇದನ್ನು ಗಣನೆಗೆ ತೆಗೆದುಕೊಳ್ಳದೇ ಪ್ರಣಾಳಿಕೆ ರಚಿಸಿದರೆ, ಬಿಜೆಪಿ ಚೂರು ಜಾಣತನ ತೋರಿಸಿತು. ಕಡುಬಡವರ ಆದಾಯಮಿತಿಯನ್ನು ವರ್ಷಕ್ಕೆ 30,000ಕ್ಕೆ ಹೆಚ್ಚಿಸಿ, 30,000ದಿಂದ 60,000ದ ವರೆಗೆ ಆದಾಯವಿರುವವರನ್ನು ಬಡವರು ಅಂತ ವರ್ಗೀಕರಿಸುವ ಭರವಸೆ ನೀಡಿತು, ಪ್ರಣಾಳಿಕೆಯಲ್ಲಿ ಈ ಅಂಶವನ್ನು bold ಮಾಡಿ ಮೊದಲಿಗೇ ಹಾಕಿತು.ಆದರೆ ಅದ್ಯಾಕೋ ಏನೋ, ಇದನ್ನು ಹೆಚ್ಚಿನ ಮಾಧ್ಯಮಗಳು ಗುರುತಿಸಲೇ ಇಲ್ಲವಾಗಿ, ಇತರ ಅಂಶಗಳ ಬಗ್ಗೆಯೇ ಚರ್ಚೆ ಹೆಚ್ಚಾಯಿತು.

ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಯೋಜನೆ ಕಾಂಗ್ರೆಸ್-ದಾದರೆ, ಬಿಜೆಪಿ ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ತರಬೇತಿಯ ಜತೆಗೆ ತರಬೇತಿಭತ್ಯೆ (ಸ್ಟೈಫಂಡ್) ನೀಡುವ ಆಶ್ವಾಸನೆ. ಆದರೆ ಇದನ್ನು ಕೂಡ ಕೆಲವು ಮಾಧ್ಯಮಗಳು ನಿರುದ್ಯೋಗ ಭತ್ಯೆ ಅಂತ ವರದಿ ಮಾಡಿದ ಕಾರಣ ಜೆಡಿಎಸ್ ನಾಯಕರು ’ಯುವಕರನ್ನು ಸೋಮಾರಿಯಾಗಿಸುವ ಯೋಜನೆ ಅದು’ ಅಂತ ಎರಡೂ ಪಕ್ಷಗಳಿಗೂ ಸೇರಿಸಿ ಬೈದರು. ಹೀಗೆ ಬಿಜೆಪಿ ಧರ್ಮಕ್ಕೆ ಬೈಗಳು ತಿಂದಹಾಗಾಯಿತು.

ಕಾಂಗ್ರೆಸ್ ಮತ್ತು ಬಿಜೆಪಿ ಪ್ರಣಾಳಿಕೆಗಳಲ್ಲಿ ಇನ್ನೊಂದು ಗಮನ ಸೆಳೆದ ಅಂಶವೆಂದರೆ, ಪಂಪ್ ಸೆಟ್-ಗಳಿಗೆ ಉಚಿತ ವಿದ್ಯುತ್ ಪೂರೈಕೆ. ಇದಕ್ಕೆ ಜೆಡಿಎಸ್ ನಾಯಕರು, ’ಯೂನಿಟ್ಟಿಗೆ 7-8 ರೂಪಾಯಿ ಕೊಟ್ಟು ವಿದ್ಯುತ್ ಹೊರಗಿನಿಂದ ಖರೀದಿಸುವ ಪರಿಸ್ಥಿತಿ ಇರುವಾಗ ಅದು ಹೇಗೆ ಉಚಿತವಾಗಿ ವಿದ್ಯುತ್ ಕೊಡ್ತಾರೆ’ ಅಂತ ವಾಗ್ದಾಳಿ ನಡೆಸಿದರು.ಕೊನೆಗೆ ಜೆಡಿಎಸ್ ಪ್ರಣಾಳಿಕೆ ಬಿಡುಗಡೆಯಾದಾಗ ಅದರಲ್ಲೂ ಒಂದು ಆಫರ್ ಇತ್ತು, ಕಡುಬಡವರಿಗೆ ಉಚಿತವಾಗಿ ಗ್ಯಾಸ್ ಸಂಪರ್ಕದ ಜತೆಗೆ ಉಚಿತ ಸ್ಟವ್ ನೀಡುವ ಆಫರ್.

ನಮ್ಮ ಮನೆಯಲ್ಲಿ ಗ್ಯಾಸ್ ಬುಕ್ ಮಾಡಿ ಕಡಿಮೆಯೆಂದರೂ ಒಂದು ವಾರ ಕಾಯಬೇಕಾಗುತ್ತದೆ, ಇನ್ನು ಕೆಲ ವರ್ಷಗಳ ನಂತರ ಗ್ಯಾಸ್, ವಿದ್ಯುತ್ ಸಿಕ್ಕಾಪಟ್ಟೆ ದುಬಾರಿಯಾಗುವ ನಿರೀಕ್ಷೆ ಇದೆ, ಜಗತ್ತಿನಲ್ಲಿ ಕೆಲವುಕಡೆಯಾದರೂ alternative renewable energy sources ಹುಡುಕಾಟ ಆರಂಭವಾಗಿದೆ, ಹಾಗಿರುವಾಗ ನಾವು ಇರುವುದು ಯಾವ ಶತಮಾನದಲ್ಲಿ?

++++++++++++++++

ಇನ್ನೊಂದು ಖತರ್-ನಾಕ್ ಯೋಜನೆ ಕಂಡುಬಂದಿದ್ದು ಬಿಜೆಪಿ ಪ್ರಣಾಳಿಕೆಯಲ್ಲಿ. ನಮ್ಮದೇಶದಲ್ಲಿ ನೆಲವನ್ನು ಕೊಳ್ಳಬೇಕೆಂದರೆ land purchase policies ಸುಲಭವಾಗಿ ಬಿಡುವುದಿಲ್ಲ. ಕೃಷಿಗಾಗಿ ಭೂಮಿ ಕೊಳ್ಳುವವರಿಗೆ ಮಾತ್ರ ಸುಲಭವಾಗಿ ಭೂಮಿ ಸಿಗುವ ಕಾರಣ ಅಮಿತಾಭ್ ಬಚ್ಚನ್ ಕೂಡ ’ಕೃಷಿಕ’ ಆದದ್ದು ಇಂದು ಇತಿಹಾಸ. ಈ ಪಾಲಿಸಿಗೆ ತಿದ್ದುಪಡಿ ತಂದು ಯಾರು ಬೇಕಾದರೂ ಭೂಮಿ ಕೊಳ್ಳಲು ಅನುಕೂಲವಾಗುವಂತೆ ಮಾಡುವ ಭರವಸೆ ಬಿಜೆಪಿಯದು. ಮೇಲುನೋಟಕ್ಕೆ ಇದು ಎಲ್ಲರಿಗೂ (ಕೃಷಿಕರಲ್ಲದವರಿಗೆ) ಖುಷಿಕೊಡುವ ವಿಚಾರ. ಆದರೆ, ಈಗಾಗಲೇ ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ಬಿಸಿನೆಸ್-ನಿಂದಾಗಿ ಭೂಮಿಯ ದರ ಸಿಕ್ಕಾಪಟ್ಟೆ ಹೆಚ್ಚಾಗ್ತಿದೆ, ಕೃಷಿಭೂಮಿ ಕಡಿಮೆಯಾಗ್ತಿದೆ, ಆಹಾರ ಧಾನ್ಯ ಉತ್ಪಾದನೆ ಕಡಿಮೆಯಾಗ್ತಿದೆ, ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇವಾಗಲೇ ಇದೆ, ಕಾಡು ಕಡಿಮೆಯಾಗ್ತಿದೆ, ಮಳೆ ಕಡಿಮೆಯಾಗ್ತಿದೆ, ನೀರು ಕಡಿಮೆಯಾಗ್ತಿದೆ, ಕೆಲವು ಪ್ರದೇಶಗಳಲ್ಲಿ ಬರ ಇದೆ... ಹೀಗಿರುವಾಗ ಯಾರು ಬೇಕಾದರೂ ಭೂಮಿ ಕೊಳ್ಳಬಹುದು, ಏನು ಬೇಕಾದರೂ ಮಾಡಬಹುದು ಅಂತ ರೂಲ್ಸ್ ಬಂದ್ರೆ ಗತಿ ಏನು? ಮನೆಗಳ, ಅಪಾರ್ಟ್ಮೆಟುಗಳ contruction ಇನ್ನೂ ಹೆಚ್ಚಾಗ್ತವೆ, demand ಇದ್ದಾಗ ಬೆಲೆಯೂ ಹೆಚ್ಚಾಗ್ತದೆ,ಹ್ಾಗಾಗಿ ಮನೆ ಕಟ್ಟುವ ಸಾಮಗ್ರಿಗಳ ದರ ಕೂಡ ಹೆಚ್ಚಾಗೋದೆ... ಅದೂ, ಆಹಾರ ಸಾಮಗ್ರಿಗಳ ಬೆಲೆ ಹೆಚ್ಚಳಕ್ಕೆ, ಹೆಚ್ತಾ ಇರೋ ಮನೆಸಾಲ ಬಡ್ದಿದರ, ಮನೆಕಟ್ಟೋ ಖರ್ಚಿಗೆ ಇನ್ನೊಂದು ಪಕ್ಷವನ್ನು ಹೊಣೆಯಾಗಿಸಿ ಜಾಹೀರಾತು ಕೊಟ್ಟ ಪಕ್ಷದಿಂದಲೇ ಈ ಘೋಷಣೆ..! ಶಿವಶಿವಾ!

++++++++++++++++

ರಾಜಕಿಯ ಪಕ್ಷಗಳನ್ನ ಬೈದು ಏನು ಉಪಯೋಗ, ಇದು ಹೀಗೆಲ್ಲಾ ಇರ್ಲಿಕ್ಕೆ ನಾವು ನೀವೇ ಕಾರಣ. ಹೆಸರಿಗೆ ನಾಗರಿಕರಾದ ನಮಗೆ ಏನು ಬೇಕು ಅಂತ ನಮಗೇ ಗೊತ್ತಿಲ್ಲ. ಏನಿದೆ ಅಂತ ಸುಮ್ನೆ ನೋಡ್ತೀವಿ. ಇಷ್ಟ ಆದ್ರೆ ಓಕೆ. ಕಷ್ಟ ಆದ್ರೂ ಓಕೆ. ಸಹಿಸ್ಕೋತೀವಿ. ದೂರದೃಷ್ಟಿ ನಮ್ಮಲ್ಲಿ ಪ್ರತಿಯೊಬ್ಬರಲ್ಲಿ ಇದ್ರೂ ಅದು ಉಪಯೋಗಕ್ಕಿಲ್ಲದ ಹಾಗೆ ಆಗಿದೆ. ಎಲ್ಲಾ ಪಕ್ಷಗಳು ಹೇಳುವುದು ಹಸಿಹಸಿ ಸುಳ್ಳು ಅಂತ ಗೊತ್ತಿದ್ದೂ ನಾವೆಲ್ಲ ಸುಮ್ನಿರ್ತೀವಿ.

ಇದಕ್ಕೇನು ಪರಿಹಾರ ಇಲ್ವಾ?

Thursday, May 1, 2008

ಒಡೆದು ಬಿದ್ದ ಕೊಳಲು...

ಒಡೆದು ಬಿದ್ದ ಕೊಳಲು ನಾನು
ನಾದ ಬರದು ನನ್ನಲಿ
ವಿನೋದವಿರದು ನನ್ನಲಿ...

ಕಿವಿಯನೇಕೆ ತೆರೆಯುತಿರುವೆ
ಎದೆಯೊಳೇನ ಹುಡುಕುತಿರುವೆ
ದೊರೆಯದೇನು ನನ್ನಲಿ...
ದೊರೆಯದೇನು ನನ್ನಲಿ...
ದೊರೆಯದೇನು ನನ್ನಲಿ !

ನಲ್ಲೆ ಬಂದು ತುಟಿಗೆ ಕೊಳಲನೊತ್ತಿ ಉಸಿರ ಬಿಟ್ಟಳು...
ತನ್ನ ಒಲವಿನಿಂದ ದನಿಯ ಹರಿದು ಇಳಿಸಿ ಬಿಟ್ಟಳು...

ಬಣ್ಣ ಬಣ್ಣದೆಣಿಪ ಹಾರ ನಲ್ಲ ಚೆಲ್ಲಿ ಕೊಟ್ಟನು...
ಕೊಳಲು ಬೇಸರಾಯಿತೇನೊ
ಹೊಸ ಹಂಬಲವಾಯಿತೇನೊ
ಎದೆಯ ಗಾಯ ಮಾಯಿತೇನೊ
ಬಿಸುಟೆದ್ದಳು ಕೊಳಲನು...

ಒಡೆದು ಬಿದ್ದ ಕೊಳಲು ನಾನು
ನಾದ ಬರದು ನನ್ನಲಿ..
ವಿನೋದವಿರದು ನನ್ನಲಿ...

+++++++++++++++++++++++++++++++++++++++

ಸತತ ಏಳು ವರ್ಷ ಶಿರಸಿಯ ಗೆಳತಿ ಜ್ಯೋತಿಯ ಕೈಲಿ ಮತ್ತೆ ಮತ್ತೆ ಹಾಡಿಸಿಕೊಂಡು ಕೇಳುತ್ತಿದ್ದ ಹಾಡು... ಕೇಳುವುದು ಬಿಟ್ಟು ಹೆಚ್ಚು-ಕಡಿಮೆ 8 ವರ್ಷ ಆಗಿರಬೇಕೇನೋ? ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದಂತೆ ನೆನಪಾಯಿತು. ಯಾಕೋ ಮತ್ತೆ ಮತ್ತೆ ನೆನಪಾಗಿ ತುಂಬಾ ಕಾಡುತ್ತಿದೆ! ಕೆಲವು ಹಾಡುಗಳೇ ಹಾಗೆ, ಮರೆಯಲಾಗದ ಹಾಡುಗಳು... ಇದು ಬರೆದಿದ್ದು ಯಾರು ಅಂತ ಗೊತ್ತಿಲ್ಲ, ಭಾವಗೀತೆ, ಪೂರ್ತಿ ಇಲ್ಲ ಅನಿಸ್ತಿದೆ, ನಾನು ಬರೆದಿದ್ದರಲ್ಲಿ ತಪ್ಪುಗಳೂ ಇರಬಹುದು, ಸರಿಯಾದ version ಸಿಕ್ಕಿದ್ರೆ ಕೊಡಿ ಪ್ಲೀಸ್ :) ಕರೆದು ಕೂಡಿಸಿ ಹಾಡಿ ಕೇಳಿಸಿದರೆ ಇನ್ನೂ ಖುಷಿಯಾಗ್ತದೆ!

(ಇದರ ಹುಡುಕಾಟದಲ್ಲಿ ಗೂಗ್ಲ್ ಮಾಡಿದರೆ, ವಿಕ್ರಂ ಬ್ಲಾಗಲ್ಲಿ ಏನೋ ಬರೆದಿರುವ ಸುಳಿವು ಸಿಕ್ಕಿತು... ಚೆಕ್ ಮಾಡೋಣ ಅಂತ ಓಪನ್ ಮಾಡಿದರೆ, For invited readers only ಅಂತ ಬರ್ತಿದೆ! ಯಾರಾದ್ರು ಅದ್ರದ್ದು ಸ್ಕ್ರೀನ್ ಶಾಟ್ ಅಥವಾ ಕಾಪಿ ಕಳಿಸಿ ಪ್ಲೀಸ್...:) )