Friday, October 8, 2010

ಮುಂಗಾರು ಮಳೆಯೇ...

ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ... ಮಹಾಮಾರಿ ಜನರಿಗೆ ಉರುಳೇ
ಸುರಿವ ಬಲುಮೆಯಾ ಜಡಿಮಳೆಗೆ ಭೀತಿ ಮೂಡಿದೆ...
ಯಾವ ತಿಪ್ಪೆಯಲ್ಲಿ ಎಷ್ಟು ಪ್ಲಾಸ್ಟಿಕ್ ಬ್ಲಾಕಾಗುವುದೊ
ಎಲ್ಲಿ ಕೆಸರು ಹೊರಚಿಮ್ಮುವುದೋ ತಿಳಿಯದಾಗಿದೇ...

ಎದುರು ರೋಡಿನಲ್ಲಿ.. ನೀರು ತುಂಬಿ ಹರಿವಾ ಒನಪು
ನನ್ನ ಮನೆಯ ಎದುರು.. ಕೆಂಪು ಮಣ್ಣ ಹೆಜ್ಜೆಯ ಗುರುತು
ಗುಡುಗು ಸಿಡಿಲಿನಾ ಅಡಚಿಕ್ಕು... ಏನು ರಭಸವೋ...
ಅಕ್ಕ ಪಕ್ಕದಾ ಮನೆಗಳಿಗೆ ನೀರು ನುಗ್ಗಿ ಚೆಲ್ಲಾಪಿಲ್ಲಿ
ಕಂಗಾಲಾದ ಮನುಜರ ನೋಡು.. ಯಾಕೆ ಹೀಗೆಯೋ...

ಮನೆಯು ಮುಳುಗಿ ಹೋಯ್ತು.. ಅಳುತ ನಿಂದ ಹೆಂಗಸರೆಲ್ಲಾ
ಇದ್ದಬದ್ದದ್ದೆಲ್ಲಾ.. ಕಟ್ಟಿ ಹೊರಟರು ಮೆರವಣಿಗೆ...
ನೆರೆಯು ಬರದ ಊರಿನ ಕಡೆಗೆ... ವಿಧಿಯ ಆಟವೋ...
ಕೂಡಿಇಟ್ಟುದೆಲ್ಲಾ... ಕಳೆದು ಹೋದ ದು:ಖವು ಕಾಡಿ
ನೆಲೆಯು ಇಲ್ಲದಾಗಿ ಹೋಗಿ... ಏನು ನೋವಿದೂ...
...............

ಎಂದೋ ಬರೆದಿದ್ದು, ಅರ್ಧಕ್ಕೇ ನಿಂತುಬಿಟ್ಟಿದೆ. ಮುಂಗಾರು ಮಳೆ ಪಿಚ್ಚರ್ ಬಿಡುಗಡೆಯಾದ ಸಮಯದಲ್ಲಿ ಬರೆದಿದ್ದು... ಅದಾದ ನಂತರ ಎರಡು ಮುಂಗಾರು ಮಳೆ ಸೀಸನ್ ಕಳೆದಿದೆ, ಈಗಂತೂ ಪಕ್ಕಾ ಹಿಂಗಾರು ಮಳೆ ಸೀಸನ್... ಬರೆಯುವುದು ಬಿಟ್ಟು ಎಷ್ಟು ಸಮಯವಾಗಿದೆಯೆಂದರೆ, ಮುಂದುವರಿಸುವುದು ಹೇಗೆಂದೇ ಹೊಳೆಯುತ್ತಿಲ್ಲ!

Sunday, February 14, 2010

ವ್ಯಾಲೆಂಟೈನ್ಸ್ ಡೇ ಮತ್ತು ಒಂದಿಷ್ಟು ಸ್ವಗತ

ವ್ಯಾಲೆಂಟೈನ್ಸ್ ಡೇ ಅಂದ್ರೆ ನನ್ನ ಪಾಲಿಗೆ ಮೊದಲೆಲ್ಲ ಎಲ್ಲಾ ದಿನಗಳಂತೆ ಅದೂ ಒಂದು ದಿನವಾಗಿತ್ತು. ಆಮೇಲೆ ಮಾಧ್ಯಮ ಜಗತ್ತಿಗೆ ಎಂಟ್ರಿ ಕೊಟ್ಟ ಮೇಲೆ ಆ ದಿನವನ್ನ ಆಚರಿಸುವವರಿಗೆ Good feeling ತರಲಿಕ್ಕೆ ಸಹಾಯ ಮಾಡುವ ಕೆಲಸ ನಮ್ಮದು ಅಂತ ಅರ್ಥವಾಯ್ತು. ಆದರೆ ಕಳೆದ 2 ವರ್ಷಗಳಿಂದ, ಈ ದಿನ ಬಂತೆಂದರೆ ಸಾಕು, ಎಲ್ಲಿ ಏನು ಗಲಾಟೆಯಾಗುತ್ತದೋ ಅಂತ ಕಾಯಲು ಆರಂಭಿಸಿರುವುದು ವಿಚಿತ್ರವಾದರೂ ಸತ್ಯ. ಈಬಾರಿಯೂ ಅಷ್ಟೆ, ಗಲಾಟೆಯೋ ಗಲಾಟೆ.
-----------------------------------------------------
ಪ್ರೇಮಯುದ್ಧ - ನಮ್ಮ ಚಾನೆಲ್ ಆಯೋಜಿಸಿದ್ದ ಕಾರ್ಯಕ್ರಮ. ಅದರ ಶೂಟಿಂಗ್ ಟೀಮ್ ಕಾರ್ಯಕ್ರಮ ಶೂಟ್ ಮಾಡಿಕೊಂಡು ಬರಲು ಹೋಗಿದ್ದು ಗೊತ್ತಿತ್ತು. ಎಲ್ಲರೂ ಅವರವರ ಕೆಲಸದಲ್ಲಿ ನಿರತರಾಗಿ, ಸುದ್ದಿಯ ಪಾಡಿಗೆ ಸುದ್ದಿ ಶಾಂತವಾಗಿ ಹೋಗುತ್ತಿದ್ದ ಸಮಯ. ಇದ್ದಕ್ಕಿದ್ದಂತೆ ಇನ್ನೊಂದು ಚಾನೆಲ್ಲಿನಲ್ಲಿ ಬ್ರೇಕಿಂಗ್ ನ್ಯೂಸ್ ಬರಲು ಆರಂಭವಾಯ್ತು, ಟೌನ್ ಹಾಲ್ ಬಳಿ ಮುತಾಲಿಕ್ ಮುಖಕ್ಕೆ ಮಸಿ ಬಳಿದಿದ್ದಾರೆ, ಕಾಂಗ್ರೆಸ್ ಕಾರ್ಯಕರ್ತರ ಕೆಲಸ ಅಂತ. ನಮಗೂ ಸುದ್ದಿ ಬಂತು, ನಮ್ಮ ಕಾರ್ಯಕ್ರಮದಲ್ಲೇ ನಡೆದಿದ್ದು ಈ ಕೆಲಸ ಅಂತ. ಎಲ್ಲರಿಗೂ ಏನು ನಡೆಯುತ್ತಿದೆ ಅಂತ ಸರಿಯಾಗಿ ಗೊತ್ತಾಗದ ಪರಿಸ್ಥಿತಿ.
ಅಷ್ಟರಲ್ಲಿ ಪಕ್ಕದ ಚಾನೆಲ್ ಮಸಿಬಳಿಯುವ ನೀಟಾದ ದೃಶ್ಯಗಳನ್ನು ಕೊಡಲಾರಂಭಿಸಿತು. ಅಚಾನಕ್ ಆದಂತಹ ಈ ಮಸಿ ಬಳಿವ ಕೆಲಸದ ಬಗ್ಗೆ ಸ್ವಲ್ಪವೂ ಕೂಡ ಐಡಿಯಾ ಇಲ್ಲದ ಕಾರಣ ನಮಗೆ ಆ ದೃಶ್ಯಗಳು ಸಿಕ್ಕಿಲ್ಲವೆಂಬುದು ಕೂಡ ಗೊತ್ತಾಯಿತು. ನಂತರ ಬಂದಂತಹ ದೃಶ್ಯಗಳಲ್ಲಿ ಪೊಲೀಸರು ಕೂಡ ಕಾಣಿಸಿಕೊಂಡರು. ನಂತರ ನಡೆದ ವಾಗ್ವಿವಾದದ ಸಮಯ, ಮುತಾಲಿಕ್ ಬೆಂಬಲಿಗರಲ್ಲಿ ಪ್ರಮುಖನೊಬ್ಬ ವಿಮಲಾ ಮೇಡಂ ಮುಖಕ್ಕೆ ಉಗಿದು ಬಿಟ್ಟ. 4-5 ವರ್ಷಗಳಿಂದ ವಿಮಲಾ ಮೇಡಂ ಪರಿಚಯ ನನಗೆ. ಇವರು ಮುತಾಲಿಕ್ ಅಥವಾ ಬಜರಂಗಿಗಳ ಸಿದ್ಧಾಂತವನ್ನು ವಿವಿಧ ವೇದಿಕೆಗಳಲ್ಲಿ ವಿರೋಧಿಸುತ್ತಲೇ ಬಂದವರು. ಬರಿಯ ವಾಗ್-ವಿರೋಧಕ್ಕಾಗಿಯೇ ಮುತಾಲಿಕ್ ಬೆಂಬಲಿಗರ ವಿರೋಧ ಕಟ್ಟಿಕೊಂಡವರು. ಕಳೆದ ವರ್ಷ ಪತ್ರಿಕೆಯೊಂದು ನಡೆಸಿದ್ದ ಕಾರ್ಯಕ್ರಮದಲ್ಲಿ ಮೊನ್ನೆ ಅವರ ಮುಖಕ್ಕೆ ಉಗಿದಾತ ಬೆದರಿಕೆ ಕೂಡ ಹಾಕಿದ್ದ ಎಂದು ವಿಮಲಾ ಮೇಡಂ ಹೇಳಿದ ನೆನಪು ನನಗೆ.
ಕಳೆದ ವರ್ಷ ಪಬ್ ಅಟಾಕ್ ಸಂಬಂಧ ಚರ್ಚೆಗೆ ಬಂದಿದ್ರು ಮೇಡಂ ಕಸ್ತೂರಿಗೆ, ಅವಾಗ ಮೇಡಂ ಹತ್ರ ಕೇಳಿದ್ದೆ, ಇವರ ಜತೆ ಚರ್ಚೆ ಮಾಡಿದ್ರೆ ಇವ್ರು ಸರಿ ಹೋಗ್ತಾರಾ ಮೇಡಂ, ವೇಸ್ಟ್ ಆಫ್ ಎನರ್ಜಿ ಅಲ್ವಾ ಅಂತ. ಇದು ವಿಚಾರಕ್ಕೆ ಸಂಬಂಧಿಸಿದ್ದಾದ ಕಾರಣ ವೈಚಾರಿಕವಾಗಿಯೇ ಎದುರಿಸಬೇಕು, ಚರ್ಚೆ ಮಾಡಿ ಮಾಡಿಯೇ ಸರಿ ಹೋಗಬಹುದೇ ಹೊರತು ದಂಡ ಮಾರ್ಗದಿಂದಲ್ಲ ಅನ್ನುವುದು ವಿಮಲಾ ಮೇಡಂ ನಿಲುವಾಗಿತ್ತು, ಇಂದು ಕೂಡ ಅದೇ ಮಾತೇ ಅವ್ರು ಹೇಳ್ತಾರೆ.
-----------------------------------------------------
TV9 ನಿಂದ ತೆಗೆದುಕೊಂಡ ಮಸಿ ಬಳಿವ ವಿಶುವಲ್ಸ್ ಹಾಕಿಕೊಂಡ TIMES NOW, SELF-STYLED MORAL POLICEMAN GETS THE TASTE OF HIS OWN MEDICINE ಅಂದಿತು. ನನಗೆ ಪಬ್ ಅಟಾಕ್ ಮತ್ತೊಮ್ಮೆ ನೆನಪಾಯಿತು.
-----------------------------------------------------
ಮಸಿ ಬಳಿದವರನ್ನು ಬಂಧಿಸಲಾಯಿತು, ಕೆಲವು ಕಾಂಗ್ರೆಸ್ಸಿಗರು ನಮ್ಮವರು ಮಾಡಿರುವುದಿಲ್ಲ ಇಂಥಾ ಕೆಲಸ ಅಂದ್ರು. ಇನ್ನು ಕೆಲವರು ಟೈಮ್ಸ್ ನವ್ ಧಾಟಿಯಲ್ಲೇ ಮಾತಾಡಿದ್ರು. ಮತ್ತೆ ಕೆಲವ್ರು ಅವರವರ ಸ್ವಂತ ಇಚ್ಛೆಯಿಂದ ಮಾಡಿದ ಕೆಲಸ, ಪಕ್ಷಕ್ಕೆ ಸಂಬಂಧಿಸಿದ್ದಲ್ಲ ಇದು ಅಂದ್ರು. ಮತ್ತೆ ಕೆಲವ್ರು ಅವ್ರನ್ನ ಬಂಧಿಸಿಟ್ಟಿದ್ದ ಪೊಲೀಸ್ ಠಾಣೆಗೇ ಭೇಟಿ ಕೊಟ್ಟು ನಮ್ಮ ಕ್ಯಾಮರಾಕ್ಕೆ ಸಿಗಾಕ್ಕೊಂಡ್ರು. ಮುಖಕ್ಕೆ ಮಸಿ ಬಳಿದೋರ್ನ ಬಿಡೋದಿಲ್ಲ ಅಂತ ಮುತಾಲಿಕ್ ಹೇಳಿಕೆ, ಅಂದ್ರೆ ಕಥೆ ಇಲ್ಲಿಗೇ ನಿಲ್ಲೂದಿಲ್ಲ ಅಂತ ಅರ್ಥ... There is more to come.
-----------------------------------------------------
ವಿಮಲಾ ಮೇಡಂ ಮುಖಕ್ಕೆ ಉಗಿದವ ಬಿಂದಾಸ್ ಆಗಿ ತಿರುಗಾಡ್ತಿದ್ದ. ಸಂಜೆ ನಮ್ಮ ಆಫೀಸಲ್ಲಿ ಡಿಸ್ಕಶನ್ ಇತ್ತಲ್ಲ, ಅಲ್ಲಿಗೂ ಬಂದಿತ್ತು ಕೋತಿ ಸೇನೆ, ಅವನೂ ಬಂದಿದ್ದ. ಬಾಯಲ್ಲಿ ಹೆಂಗಸರು ಅಂದ್ರೆ ದೇವ್ರು ಅದೂ ಇದೂ ಅಂತ ಬಾಯಲ್ಲಿ ಹೊಗೆ ಬಿಡುವ ಪಾರ್ಟಿಗಳು, ಮಹಿಳೆಯರು ಪಬ್-ನಲ್ಲಿ ಕೂರಬಾರದು ಅಂತ ಹೆಂಗಸರಿಗೆ ಹೊಡೆದು ಹೋರಾಡಿದ(!) ಪಾರ್ಟಿಗಳು, ಅದ್ಯಾಕೆ ನೀಟಾಗಿ ಸೀರೆಯುಟ್ಟಿದ್ದ ಅಪ್ಪಟ ಭಾರತೀಯ ನಾರಿಯಾಗಿಯೇ ಕಾಣುವ ಗೌರವಾನ್ವಿತ ಮಹಿಳೆಯೋರ್ವಳ ಮುಖದ ಮೇಲೆ ಉಗಿಯುವ ಸಂಸ್ಕೃತಿ ಬೆಳೆಸಿಕೊಂಡರೋ ಗೊತ್ತಾಗಲಿಲ್ಲ.
-----------------------------------------------------
ಲವ್ ಜೆಹಾದ್ ಆರೋಪಕ್ಕೆ ಒಳಗಾಗಿದ್ದ ಇರ್ಫಾನ್-ಅಶ್ವಿನಿ ಮತ್ತು ತೌಫೀಕ್-ಸಹನಾ ಜೋಡಿ, ರವಿ ಬೆಳಗೆರೆ ಜತೆಗೆ ಭಾಗವಹಿಸಿದ್ದ ಕಾರ್ಯಕ್ರಮ, 'ಅಹಂ ಪ್ರೇಮಾಸ್ಮಿ' . ಇದು ನೋಡಿದ ಮೇಲೆ ಅನಿಸಿದ್ದು, ಇಸ್ಲಾಂ ಧರ್ಮ ಸ್ವಲ್ಪ ಲಿಬರಲ್ ಆಗಿ ಬದಲಾಗಿದ್ರೆ ಬಹುಶ: ಈ ಲವ್-ಜೆಹಾದ್ ಅನ್ನುವ ಐಡಿಯಾವೇ ಯಾರ ತಲೆಗೂ ಬರ್ತಿರಲಿಲ್ಲ.
ಹಿಂದೂ ಧರ್ಮದಲ್ಲಿಯೂ ಬೇಕಾದಷ್ಟು ಅರೆಕೊರೆಗಳಿರಲಿಲ್ವಾ, ಈಗ ಎಲ್ಲಾ ಕಾಲಕ್ಕೆ ತಕ್ಕ ಹಾಗೆ ತಿದ್ದಿಕೊಂಡು ಮುಂದೆ ಹೋಗ್ತಾ ಇಲ್ವಾ? ಸತೀ ಪದ್ಧತಿ, ಬಾಲ್ಯವಿವಾಹ ಇತ್ಯಾದಿಗಳ ತಡೆಗೆ ಕಾಯಿದೆ-ಕಾನೂನುಗಳ ಸಹಕಾರವಿದೆ. ಆದರೆ ಮುಸ್ಲಿಂ ಮದುವೆಗಳ ರೀತಿ ಬೇರೆ. ಇವು ಪ್ರೇಮವಿವಾಹ ಅಥವಾ ಅಂತರ್ಜಾತೀಯ ವಿವಾಹವೇ ಆದರೂ, ಶೆರಿಯತ್-ನ ನಿಯಮಗಳಿಗನುಸಾರವಾಗಿ ಮುಸ್ಲಿಂ ಧರ್ಮಗುರುಗಳ ಸಮಕ್ಷಮದಲ್ಲಿ ವಿವಾಹವಾದರೆ ಮಾತ್ರ ಮಾನ್ಯವಾಗುತ್ತವೆ. ಅಂತರ್ಜಾತೀಯ ವಿವಾಹಗಳಿಗೆ ಒಪ್ಪಿಗೆ ನೀಡಿರುವ ಇಸ್ಲಾಂ, ಅನ್ಯಧರ್ಮೀಯರು ಮುಸ್ಲಿಂ ಹುಡುಗ ಅಥವಾ ಹುಡುಗಿಯನ್ನು ವಿವಾಹವಾಗಬೇಕಾದರೆ, ತಮ್ಮ ಧರ್ಮವನ್ನು ಮುಸ್ಲಿಂ ಧರ್ಮಕ್ಕೆ ಬದಲಾಯಿಸಿಕೊಳ್ಳಬೇಕಾದುದು ಕಡ್ಡಾಯವೆಂಬ ನಿಯಮ ರೂಢಿಯಲ್ಲಿಟ್ಟಿದೆ. ಇದೇ ಎಲ್ಲಾ ಗೊಂದಲಕ್ಕೂ ಮೂಲ. ಪ್ರೇಮಕ್ಕೂ ಭಯೋತ್ಪಾದನೆಯ ಬಣ್ಣ ಬರಲು ಕಾರಣ. ಬಹುಶ: ಹಿಂದೂ ಧರ್ಮದ ಹಾಗೇ ಇಸ್ಲಾಂ ಕೂಡ ಕೆಟ್ಟದನ್ನು, ಕಾಲಕ್ಕೆ ಸಲ್ಲದ್ದನ್ನು ಕಳಚಿಕೊಳ್ಳುವ ಹಾಗಿದ್ರೆ ಚೆನ್ನಾಗಿತ್ತು, ಜಗತ್ತಲ್ಲಿ ಶಾಂತಿಗೆ ಸ್ವಲ್ಪ ಹೆಚ್ಚು ಜಾಗ ಇರ್ತಿತ್ತು...
ಇದು ಧರ್ಮದ ಮಾತಾಯ್ತು. ಆದರೆ ಇಂದಿನ ದಿನದಲ್ಲಿ ಧರ್ಮಕ್ಕಿಂತ INDIVIDUAL DECISIONS ಹೆಚ್ಚು ತೂಕದ್ದು ಅಂತ ನನ್ನ ಭಾವನೆ. ಮುಸ್ಲಿಂ ಹುಡುಗನ ಜತೆಗೆ ಬದುಕು ಕಟ್ಟಿಕೊಂಡಿರುವ ನನ್ನ ಗೆಳತಿ ಹೆಸರು ಬದಲಾಯಿಸಿಕೊಂಡಿಲ್ಲ, ದೇವರನ್ನು ನಂಬದ ಆಕೆ ನಮಾಜು ಮಾಡುವುದಿಲ್ಲ. ಆಕೆಯ ಸಂಗಾತಿಯೂ ಒತ್ತಾಯಿಸಿಲ್ಲ. ಆದರೆ ಅವರ ಪಾಲಿಗೆ ಬದುಕೇನೂ ನಿಂತಿಲ್ಲ, ನಡೆಯುತ್ತಲೇ ಇದೆ.
ಆ ಇಬ್ರೂ ಹುಡುಗಿಯರು ಹೆಸರು ಬದಲಾಯಿಸಿಕೊಂಡಿದ್ದಾರೆ, ಬುರ್ಖಾ ಹಾಕ್ತಾರೆ. ಅವರಲ್ಲಿ ಒಬ್ಳು ಹೇಳಿದ್ಲು, ಮೊದ್ಲು ಇಸ್ಲಾಂನ ಇಷ್ಟ ಪಟ್ಟೆ, ಹಾಗೇ ಇಸ್ಲಾಂ ಇಷ್ಟಪಡೋ ಹುಡುಗನ್ನೂ ಇಷ್ಟ ಪಟ್ಟೆ ಅಂತ. ನಿಜವಾಗಿ ಅವರ ಕೇಸಲ್ಲಿ ಪ್ರೀತಿ ಮೊದಲು ಹುಟ್ಟಿತ್ತು, ನಂತರ ಬಂದಿದ್ದು ಜಾತಿ. ಇದೇ ಪಾಯಿಂಟ್ ಮುಂದಿಟ್ಟು ಅವ್ರು ಕೋರ್ಟಲ್ಲೂ ಗೆದ್ದಿದ್ದು. ಹೀಗಾಗಿ ಈ ಡೈಲಾಗು ನಂಗ್ಯಾಕೋ ಸ್ವಲ್ಪ ಓವರ್ ಆಯ್ತು ಅನಿಸಿತು... ಈಗ ಇಸ್ಲಾಂ ಧರ್ಮ ಫಾಲೋ ಮಾಡ್ತಿರೋದಕ್ಕೆ ಅನಗತ್ಯವಾಗಿ ಬೇಕಾದ್ದಕ್ಕಿಂತ ಹೆಚ್ಚು ಸಮರ್ಥನೆ ಕೊಡ್ತಿದಾಳೆ ಅನಿಸ್ತು. ಸೋ ಕಾಲ್ಡ್ ಲವ್ ಜೆಹಾದ್ ಬಗ್ಗೆ ಇಷ್ಟೆಲ್ಲಾ ಬರೀಬೇಕು ಅನಿಸಿತು.
-----------------------------------------------------
ನನ್ನ ಎಲ್ಲಾ ತಾಕಲಾಟಗಳ ನಡುವೆ ಲೈಫ್ ಕೊಟ್ಟಿರೋ ಗಿಫ್ಟ್ ನನ್ನವ... he makes life easier to live. ವ್ಯಾಲೆಂಟೈನ್ಸ್ ಡೇ ದಿನ ಬೇರೆಲ್ಲಾ ಬರೆದು, ಇವನ ಬಗ್ಗೆ ಮಾತ್ರ ಬರೀದಿದ್ರೆ ಹ್ಯಾಗೆ? ನಿನ್ನೆ ಪೂನಾದಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ತಿಂಗಳಿಗೆ ಎರಡು ಸರ್ತಿ ಪೂನಾಕ್ಕೆ ಭೇಟಿ ನೀಡುವ ನನ್ನವ, ನಾಡಿದು ಮತ್ತೆ ಪೂನಾಕ್ಕೆ ಹೋಗ್ತಾನೆ. 'ಪೂನಾಕ್ಕಾ...' ಅಂತ ಗಾಬರಿ ಕಣ್ಣು ತೋರಿಸಿದ್ದಕ್ಕೆ, ಈಗಷ್ಟೇ ಬಾಂಬ್ ಬ್ಲಾಸ್ಟ್ ಆಯ್ತಲ್ಲ, ಇನ್ನು 15 ದಿನ ಸೆಕ್ಯೂರಿಟಿ ಹೆಚ್ಚಾಗಿರುತ್ತೆ, ನಥಿಂಗ್ ಟು ವರಿ ಅಂತ ನಕ್ಕುಬಿಟ್ಟ. ಕಳ್ಳ.