Sunday, January 18, 2009

ಸ್ಲಂಡಾಗ್ ಸುತ್ತ...


ಹೆಸರು ಕೇಳಿದಾಗ ಮೊದಲಿಗೆ ಅನಿಸಿದ್ದು... ಸ್ಲಂನಲ್ಲಿದ್ದ ಮಾತ್ರಕ್ಕೆ ಅಷ್ಟು derogatory ಆಗಿ ಸ್ಲಂಡಾಗ್ ಅಂತ ಯಾಕೆ ಕರೆಯಬೇಕು- ಅಂತ. ಇರಲಿ. ಎಲ್ಲರೂ ಚಿತ್ರ ಚೆನ್ನಾಗಿದೆ ಅಂತಿದಾರಲ್ಲ, ನೋಡಿಯೇ ಬಿಡುವ ಅಂದುಕೊಂಡೆ.ಈಗೆಲ್ಲ ಚಿತ್ರ ಬಿಡುಗಡೆಯಾಗುವವರೆಗೆ ಕಾಯಬೇಕೆಂದೇನಿಲ್ಲವಲ್ಲ, ಇನ್ನೂ ಥಿಯೇಟರಿಗೆ ಬರುವ ಮೊದಲೇ ಚಿತ್ರದ ಒಳ್ಳೆ ಗುಣಮಟ್ಟದ ಸಿಡಿ ಸಿಕ್ಕಿತು, ನೋಡಿಯೇ ಬಿಟ್ಟೆ.
----------
ನೋಡುವಾಗ ತನ್ಮಯಳಾಗಿ ಹೋದೆ. ಚಂದಚಂದದ ಶಾಟ್-ಗಳು... ಸ್ಲಂ ಚಿಣ್ಣರ ಮುಗಿಲು ಮುಟ್ಟುವ ಸಂಭ್ರಮಕ್ಕೂ, ಹೃದಯ ತಟ್ಟುವ ನೋವುಗಳಿಗೂ ಜತೆಯಾಗುವ, ಖುಷಿಕೊಡುವ ಸಂಗೀತ... ಬದುಕನ್ನೇ ಶಾಲೆಯಾಗಿಸಿದ ಚಿಣ್ಣರ ಜೀವನಪ್ರೀತಿ.... ಭಾರತದಲ್ಲಿ ಯಾವುದೂ ಅಸಾಧ್ಯವಲ್ಲ ಅಂತ ತೋರಿಸುವ ಕಥೆ... ಎಲ್ಲಾ ಚೆನ್ನಾಗಿತ್ತು. ಆದರೆ ಕೊನೆಗೆ ಬರುವ ದೊಡ್ಡ ಹುಡುಗಿಯ ಪಾತ್ರ ಮಾತ್ರ ಅದ್ಯಾಕೋ irritable ಆಗಿತ್ತು. ಅದೊಂದು ಬಿಟ್ರೆ, ನನ್ನ ಮಟ್ಟಿಗೆ ಚಿತ್ರ ಚೆನ್ನಾಗಿತ್ತು. ಪ್ರಶ್ನೆಗಳಿಗೆ ತಪ್ಪು ತಪ್ಪು ಉತ್ತರಗಳನ್ನ ಕೊಟ್ಟಿದ್ರಂತೆ, ಎಡಿಟಿಂಗ್-ನಲ್ಲಿ ಕೆಲವು ತಪ್ಪುಗಳಿತ್ತು.. ಆದರೆ ಇವೇನೂ ಬೇಗನೆ ಗೊತ್ತಾಗುವಂತಹದೇನಲ್ಲವಾದ್ದರಿಂದ ಪರವಾಗಿಲ್ಲ. ಪುಟ್ಟ ಮಕ್ಕಳ ಪಾತ್ರ ಮಾಡಿದ ಹುಡುಗರು ತುಂಬಾ ಇಷ್ಟವಾದರು.
ಒಂದೇ ಬಿಂದುವಿನಿಂದ ಹೊರಡುವ ಇಬ್ಬರು ಚಿಣ್ಣರು... ಬದುಕಿಗಾಗಿ ಆಯ್ದುಕೊಳ್ಳುವ ವಿಭಿನ್ನ ದಾರಿಗಳು... ಭಾರತದಲ್ಲಿ ಕೆಟ್ಟ ರೀತಿಯಲ್ಲಾದರೂ ಬದುಕಬಹುದು, ಒಳ್ಳೆಯ ರೀತಿಯಲ್ಲಿಯೂ ಬದುಕಲು ಸಾಧ್ಯ ಎಂಬುದರ ಸಂಕೇತವೇನೋ, ಅನಿಸಿತು. ಬೀದಿ ದೀಪದಡಿ ಕೂತು ಓದಿ ಮೇಲೆ ಬಂದ ಮಹನೀಯರು... ಚಿಕ್ಕ ವ್ಯಾಪಾರದಿಂದ ಶುರು ಮಾಡಿ ಕರೋಡ್-ಪತಿಗಳಾದವರು... ದೊಡ್ಡ ದೊಡ್ಡ ಗ್ಯಾಂಗ್-ಸ್ಟರ್-ಗಳು... ಹೆಚ್ಚು ಓದದಿದ್ದರೂ ಬದುಕನ್ನೇ ಪಾಠಶಾಲೆಯಾಗಿಸಿಕೊಂಡವರು... ಹೀಗೆ ಎಲ್ಲರನ್ನೂ ನೆನಪಿಸಿತು ಚಲನಚಿತ್ರ. ಪುಟ್ಟ ಹುಡುಗರ ಜೀವನಪ್ರೀತಿ ನಮ್ಮೆಲ್ಲರೊಳಗೆ ಅಡಗಿರುವ ಆಶಯಕ್ಕೆ ರೆಕ್ಕೆ ಮೂಡಿಸುವಂತಿತ್ತು... ಅನಿಲ್ ಕಪೂರ್ ಪಾತ್ರ ನಮ್ಮೆಲ್ಲರೊಳಗಿನ ಸಿನಿಕತನದ ಪ್ರತಿಬಿಂಬದಂತಿತ್ತು...  ಲಗಾನ್ ಚಿತ್ರ ನೋಡುವವರೆಲ್ಲ ಅಮೀರ್ ಖಾನ್ ಟೀಮು ವಿನ್ ಆಗಲೆಂದು ಆಶಿಸುತ್ತಾರಲ್ಲ, ಹಾಗೆಯೇ ಜಮಾಲ್ ಗೆದ್ದರೆ ಸಾಕು ಅಂತ ಕಾಯಿಸಿತು. ಒಟ್ಟಿನಲ್ಲಿ ಚಿತ್ರ ಖುಷಿ ತಂದಿತು.

ಒಂದು ಸಿನಿಮಾ ಮನಸ್ಸಿನಲ್ಲುಳಿದರೆ, ಪದೇಪದೇ ನಮ್ಮ ಆಂತರ್ಯವನ್ನು ಕೆಣಕಿದರೆ ಆ ಸಿನಿಮಾ ಯಶಸ್ವಿಯಾದಂತೆ ಅಂತ ಬಲ್ಲವರು ಹೇಳುತ್ತಾರೆ. ಸ್ಲಂ ಡಾಗ್ ಮಿಲಿಯನೇರ್ ಈ ನಿಟ್ಟಿನಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿವೆ, ಆದರೆ ಭಾರತದ ಒಳಗಿದ್ದುಕೊಂಡು ನೋಡುವ ನನ್ನ ಮಟ್ಟಿಗೆ, ಕಥೆ ಅಷ್ಟೇನೂ ಕಾಡಲಿಲ್ಲ. ಬದುಕಬೇಕೆನ್ನುವ ಛಾತಿಯಿರುವ ಎಲ್ಲರಿಗೂ ಬದುಕಲು ಬಿಡುವ ಮುಂಬೈ ಚಿತ್ರದ ನಿಜವಾದ ಹೀರೋ.
-----------
ಈಗ ಚಿತ್ರ ಐದು ಗೋಲ್ಡನ್ ಗ್ಲೋಬ್ ಬಹುಮಾನಗಳಿಗೆ ಪಾತ್ರವಾಗಿದೆ... ಇದು ವೈಟ್ ಟೈಗರ್-ಗೆ ಬುಕರ್ ಸಿಕ್ಕಿದ ನಂತರ ಭಾರತದ ಬಡವರ ಕಥೆಗೆ ಸಿಕ್ಕಿದ ಮತ್ತೊಂದು ಬಹುಮಾನ. ಹೌದೂ... ಪಾಶ್ಚಾತ್ಯರಿಗೆ ಬಡ ಅಥವಾ ಮಧ್ಯಮ ವರ್ಗದ ಭಾರತವೇ ಯಾಕಿಷ್ಟ? ಸುಮ್ಮನೆ ಯೋಚಿಸುವಾಗ, ಇದೇ ರೀತಿಯ ಭಾರತೀಯರ ಕಥೆಗಳಿರುವ, ಪಾಶ್ಚಿಮಾತ್ಯರ ಪ್ರೊಡಕ್ಷನ್ ಅಥವಾ ನಿರ್ದೇಶನವಿರುವ ಹತ್ತುಹಲವು ಚಿತ್ರಗಳು ಕಣ್ಮುಂದೆ ತೆರೆದುಕೊಳ್ಳುತ್ತವೆ. ಎಲ್ಲಾ ಚಿತ್ರಗಳಲ್ಲೂ ಹೆಚ್ಚುಕಡಿಮೆ, ತಮ್ಮ ಸಾಂಪ್ರದಾಯಿಕ ಕೋಟೆಗಳನ್ನು ದಾಟಿ ಗ್ಲೋಬಲ್ ಆಗುವತ್ತ ಸಾಗುವ ಭಾರತೀಯರ ಕಥೆಗಳೇ ಇರುತ್ತವೆ. ಒಂದು ರೀತಿಯಲ್ಲಿ universal ಎನಿಸುವಂತಹ value system ಕಡೆಗೆ ಹೆಜ್ಜೆ ಹಾಕುವ ಭಾರತೀಯರ ಕಥೆಗಳು. ಹೆಚ್ಚುಕಡಿಮೆ ಎಲ್ಲವೂ ಬಡ ಅಥವಾ ಮಧ್ಯಮ ವರ್ಗದ ಬದುಕಲ್ಲಿ ಹುಟ್ಟಿದ ಕಥೆಗಳು.

ಮಿಸ್ಟ್ರೆಸ್ ಆಫ್ ಸ್ಪೈಸಸ್... ಐಶ್ವರ್ಯಾ ಅಭಿನಯದ ಚಿತ್ರ.  ಕೇರಳದ ಮೂಲೆಯಲ್ಲಿ ಮಾಯಾಶಕ್ತಿಯಿರುವ ಅಜ್ಜಿಯ ಜತೆ ಬೆಳೆದ ಹುಡುಗಿ, ಪಾಶ್ಚಾತ್ಯ ದೇಶದಲ್ಲಿ ಬದುಕಬೇಕಾಗುತ್ತದೆ. ಅಲ್ಲಿ ಆಕೆ ಮಾರುವ ಸ್ಪೈಸ್ ಅಥವಾ ಸಂಭಾರ ಪದಾರ್ಥಗಳಿಗೆ ಔಷಧೀಯ ಗುಣ. ಈ ದೈವೀ ಶಕ್ತಿಯನ್ನು ಆಕೆಗೆ ನೀಡಿದ ಅಜ್ಜಿ, ಜನ್ಮಪೂರ್ತಿ ಆಕೆಗೆ ಯಾರಿಗೂ ಮನಸೋಲದಂತೆ, ಮತ್ತು ಮದುವೆಯಾಗದಂತೆ ಶರತ್ತು ವಿಧಿಸಿರುತ್ತಾಳೆ. ಒಂದು ವೇಳೆ ಹಾಗೇನಾದರೂ ಆದರೆ, ಆಕೆಯ ಕೈಗುಣ ಕೆಟ್ಟು ಸಂಭಾರ ಪದಾರ್ಥಗಳ ಔಷಧೀಯ ಗುಣ ಹೊರಟುಹೋಗುತ್ತದೆ. ಹೀಗೆ ಬದುಕುವ ಅನಿವಾರ್ಯತೆಯ ನಡುವೆ, ಹೃದಯದ ಎಳೆತಸೆಳೆತಗಳಿಗೆ ಸೋತು, ಕೊನೆಗೆ ಮನಗೆದ್ದವನನ್ನೂ ತನ್ನವನಾಗಿಸಿಕೊಳ್ಳುವ ಜತೆಗೆ ಸಂಭಾರ ಪದಾರ್ಥಗಳನ್ನೂ ತನ್ನ ಪಾಲಿಗೆ ಒಲಿಸಿಕೊಳ್ಳುವ ಕಥೆ. ಭಾರತೀಯರ ಪ್ರಕಾರ ಅಡಿಗೆ ಮನೆ ಎಂತಹ ಔಷಧಾಲಯ ಎಂಬುದನ್ನು ತೋರಿಸುವ ಜತೆಗೆ, ಒಂದೊಂದು ಸಂಭಾರ ಪದಾರ್ಥದ ಗುಣವನ್ನೂ ವಿವರಿಸುತ್ತದೆ... ಜತೆಗೆ ಚಿತ್ರವಿಡೀ ಕಾಡುವ ವರ್ಣವೈವಿಧ್ಯ... ತಾಕಲಾಟಗಳು... ಕೆಂಪು ಬಣ್ಣವೆಂದರೇನು ಅಂತ ಈ ಚಿತ್ರ ನೋಡಿ ತಿಳಿದುಕೊಳ್ಳಬೇಕು ಅಂತ ಸಾವಿರ ಸಾರಿ ಅಂದುಕೊಂಡಿದ್ದೇನೆ ನಾನು.

ವರ್ಣವೈವಿಧ್ಯ ಎಂದ ಕೂಡಲೇ ನನಗನಿಸುತ್ತಿದೆ... ಭಾರತೀಯ ಕಥೆ ಹೊಂದಿದ ಚಿತ್ರಗಳ ಬಂಡವಾಳವೇ ಇದು. ಬದುಕಿನ ಬಣ್ಣಗಳು... ಕಣ್ಣಿಗೆ ಕಾಣಿಸುವ ಬಣ್ಣಗಳು... ಮನಸನ್ನು ಕಾಡುವ ಬಣ್ಣಗಳು... ಒಟ್ಟಿನಲ್ಲಿ ಬಣ್ಣಗಳೆಂದರೆ ನಮಗೆಲ್ಲ ಬಲು ಪ್ರೀತಿ... ಅದು ಚಿತ್ರಗಳಲ್ಲೂ ಕಾಣಿಸುತ್ತದೆ. ಸ್ಲಂಡಾಗ್ ಮಿಲಿಯನೇರ್ ಕೂಡ ಇದಕ್ಕೆ ಹೊರತಲ್ಲ.
-----------
ಶ್ರೀಮಂತಿಕೆ ಕೆಲವರ ಕೈಲಿ ಸಿಕ್ಕಿ ನರಳುತ್ತಿರುವ ನಮ್ಮ ದೇಶದಲ್ಲಿ ಬಡವರು ಹಾಗೂ ಮಧ್ಯಮವರ್ಗದ ಜನರೇ ಹೆಚ್ಚು. ಬದುಕಿನ ವಿಧವಿಧದ ಛಾಯೆಗಳನ್ನು ತೆರೆದಿಡುವ ವರ್ಣವೈವಿಧ್ಯ ಕೂಡ ಬಡವರಲ್ಲಿ ಮತ್ತು ಮಧ್ಯಮವರ್ಗದಲ್ಲೇ ಜಾಸ್ತಿ. ಬದುಕುವ ರೀತಿಗಳು, ಚಟುವಟಿಕೆಗಳು, ಉಡುಗೆತೊಡುಗೆಗಳು - ಎಲ್ಲವೂ ಇಲ್ಲಿ visually rich. ಮತ್ತು ಈ ಬದುಕಿನಲ್ಲಿ ಹೊಟ್ಟೆಪಾಡಿಗೆ, ದಿನಕಳೆಯಲು ಬೇಕಾದ ಚಟುವಟಿಕೆಗೆ ಹೆಚ್ಚು ಪ್ರಾಮುಖ್ಯ. ಸೂಕ್ಷ್ಮತೆಗೆ, ಸಂವೇದನೆಗಳಿಗೆ ನಂತರದ ಸ್ಥಾನ. ಈ ದೊಡ್ಡ ದೇಶದ ಒಂದು ಮೂಲೆಯಲ್ಲಿರುವ ಬಡವರಿಗಿಂತ ಇನ್ನೊಂದು ಮೂಲೆಯಲ್ಲಿ ಬದುಕುವ ಬಡವರಿಗೆ ಅಜಗಜಾಂತರವಿರುತ್ತದೆ. ಒಂದು ಬಿಲಿಯನ್ ಜನಸಂಖ್ಯೆಯಿರುವ, 26ಕ್ಕೂ ಹೆಚ್ಚು ಮುಖ್ಯ ಭಾಷೆಗಳ ಮತ್ತು ಅವುಗಳೊಳಗೆ ಉಪಭಾಷೆಗಳ ವೈವಿಧ್ಯವಿರುವ, ಮರಳುಗಾಡಿನಿಂದ ಹಿಡಿದು ಹಸಿರು ಕಾಡಿನ ತನಕ ಎಲ್ಲಾ ರೀತಿಯ ಭೂವೈವಿಧ್ಯವಿರುವ, ಸಾವಿರಾರು ಜಾತಿಗಳಿರುವ, ಅವುಗಳೊಳಗೆ ಸಾವಿರಾರು ಪರಂಪರೆ-ಆಚರಣೆಗಳಿರುವ ನಮ್ಮ ದೇಶದಲ್ಲಿ ಬಡವರ ಬದುಕು ಸಾವಿರ ರೀತಿಗಳಲ್ಲಿ ತೆರೆದುಕೊಳ್ಳುತ್ತದೆ. ಹಾಗಾಗಿ, ಸಹಜವಾಗಿಯೇ ಕಥೆ ಬರೆಯುವವರಿಗೂ ಚಿತ್ರ ನಿರ್ದೇಶಕರಿಗೂ ಬಡಭಾರತದಲ್ಲಿ ಹೆಚ್ಚಿನ ವಿಷಯಗಳು, ವಿಚಾರಗಳು ಸಿಗುತ್ತವೆ.

ಆದರೆ ಶ್ರೀಮಂತರಾಗತೊಡಗಿದಂತೆ ಭಾಷೆ-ಉಡುಗೆ-ತೊಡುಗೆ-ಆಚರಣೆ ಎಲ್ಲವೂ ಯೂನಿವರ್ಸಲ್ ಆಗುತ್ತವೆ. ಬದುಕು ಕಾರ್ಪೋರೆಟೈಸ್ ಆಗಿ ಹೋಗುತ್ತದೆ, ಎಲ್ಲವೂ ಬ್ರಾಂಡೆಡ್ ಆಗುತ್ತದೆ, ಬದುಕಿನ ರೀತಿನೀತಿಗಳೆಲ್ಲವೂ ನಮಗೆ ಬೇಕಾಗಿಯೋ ಬೇಡದೆಯೋ ಪ್ರಿಡಿಫೈನ್ಡ್, ಮತ್ತು ಇಂಟರ್-ನ್ಯಾಶನಲ್ ಆಗಿಹೋಗುತ್ತವೆ. ಒಬ್ಬ ಶ್ರೀಮಂತನಿಗೂ ಮತ್ತೊಬ್ಬ ಶ್ರೀಮಂತನಿಗೂ ಬದುಕಿನ ರೀತಿಗಳಲ್ಲಾಗಲೀ, ನೀತಿಗಳಲ್ಲಾಗಲೀ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಉಡುಗೆ-ತೊಡುಗೆಗಳಲ್ಲಿ, ನೋವು-ನಲಿವುಗಳಲ್ಲಿ ಹೆಚ್ಚು ಭಿನ್ನತೆಯಿರುವುದಿಲ್ಲ. ಕಾಸ್ಮಾಪಾಲಿಟನ್ ಸಂಸ್ಕೃತಿಗೆ ಕಾಲಿಡುವ ಕಾರಣ, ಒಬ್ಬನಿಗೆ ಇನ್ನೊಬ್ಬನನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಕಷ್ಟವಾಗುವುದಿಲ್ಲ. ಈ ಜಗತ್ತಿನ ಸುತ್ತ ಕಥೆ ಹೆಣೆಯಹೊರಟಾಗ ನಾವು ಈವರೆಗೆ ನೋಡಿನೋಡಿ ಬೇಜಾರಾದ ಚಿತ್ರಗಳ ಹಾಗಿನವೇ ಮತ್ತೆ ಹುಟ್ಟಿಕೊಳ್ಳುತ್ತವೆ.

ಬರಿಯ thrill, action, epics, romance, emotionsಗಳಲ್ಲೇ ಕಾಲಕಳೆಯುವ ಪಾಶ್ಚಾತ್ಯ ಜಗತ್ತಿಗೆ ಈ ದೃಶ್ಯವೈವಿಧ್ಯಗಳು, ಇಲ್ಲಿನ ಬದುಕಿನ ಭಿನ್ನತೆಗಳು, ಹೋರಾಟಗಳು ಇಷ್ಟವಾಗುವುದರಲ್ಲಿ ಆಶ್ಚರ್ಯವಿಲ್ಲ. ಶುಭಂ ಹೇಳುವ ಮುಂಚೆ ಹೀರೋ-ಹೀರೋಯಿನ್ನು ಒಂದಾಗುವ ಅದೇ ಹಳೇ ಲವ್ವು, ಅದೇ ಕಥೆಗಳು, ಅದೇ ಜಡ್ಡುಗಟ್ಟಿದ ಮರಸುತ್ತೋ ಸಾಂಗುಗಳು, ಅದೇ ಅದೇ ಲೊಕೇಶನ್ನು, ಅದೇ ಆರ್ಟಿಸ್ಟು, ಅದೇ ಕ್ಯಾಮರಾ ವರ್ಕು, ಅದೇ ಎಡಿಟಿಂಗು ನೋಡಿನೋಡಿ ಬರಗೆಟ್ಟು ಬೇಜಾರಾಗಿದ್ದ ನಮಗೆಲ್ಲ, ಮುಂಗಾರುಮಳೆ ಹೊಸತನದ ಜಡಿಮಳೆ ಸುರಿಸಿತಲ್ಲ, ಅವಾಗ ನಾವೆಲ್ಲ ಅದನ್ನು ಮತ್ತೆ ಮತ್ತೆ ನೋಡಿ, ಸಿಕ್ಕವರಿಗೆಲ್ಲಾ ರೆಕಮೆಂಡ್ ಮಾಡಿ ಸೂಪರ್ ಹಿಟ್ ಮಾಡಿದ್ದೆವಲ್ಲ... ಪಾಶ್ಚಾತ್ಯ ಜಡ್ಜುಗಳಿಗೆ ಭಾರತೀಯ ಚಿತ್ರಗಳು ಇಷ್ಟವಾಗುವುದು ಇಷ್ಟೇ ಸಹಜವೇನೋ... ಅದಲ್ಲದೇ ಭಾರತದ ಬಡತನವನ್ನೇ ನೋಡಲು ಬಯಸುವ ಸೈಕಿಕ್-ಗಳು ಅವರಾಗಿರಲಿಕ್ಕಿಲ್ಲ. ಇದು ನನಗನಿಸಿದ್ದು.
------------
ನಂತರ ಯೋಚಿಸುವಾಗ, ಒಂದು ಸರ್ಕಾರ್-ಗೆ, ಒಂದು ತಾರೇ ಝಮೀಂ ಪರ್-ಗೆ, ಒಂದು ರಂಗ್ ದೇ ಬಸಂತೀಗೆ, ಒಂದು 1947-ಅರ್ಥ್-ಗೆ ಅಥವಾ ಒಂದ್ ಲಗಾನ್-ಗೆ ಸಿಗದ ಅವಾರ್ಡುಗಳು ಸ್ಲಂ ಡಾಗ್ ಚಿತ್ರಕ್ಕೆ ಹೇಗೆ ಬಂದವಪ್ಪಾ ಅಂತ ಯೋಚನೆ ಸಹಜವಾಗಿಯೇ ಆಯಿತು. ಖಂಡಿತವಾಗಿಯೂ ಭಾರತೀಯರೇ ನಿರ್ದೇಶಿಸಿದ ಹಲವಾರು ಚಿತ್ರಗಳು ಇದಕ್ಕಿಂತ ಎಷ್ಟೋ ಚೆನ್ನಾಗಿದ್ದವು. ಇನ್ನೂ ಹೆಚ್ಚು ಖುಷಿ ಕೊಟ್ಟಿದ್ದವು. ಹೆಚ್ಚು ಸಿಂಬಾಲಿಕ್ - ಹೆಚ್ಚು ಅರ್ಥಪೂರ್ಣವಾಗಿದ್ದವು. ಹೆಚ್ಚು ಯೋಚನೆಗೆ ಹಚ್ಚಿದ್ದವು. ಭಾರತೀಯ ವರ್ಣವೈವಿಧ್ಯದ ಜತೆಗೆ ಜಾಗತಿಕವೆನ್ನಬಹುದಾದ ಗುಣಮಟ್ಟವನ್ನೂ ಹೊಂದಿದ್ದವು. ರೆಹಮಾನ್ ಇದಕ್ಕಿಂತ ಉತ್ತಮ ಸಂಗೀತ ಕೊಟ್ಟ ಚಿತ್ರಗಳು ಇನ್ನೂ ಬೇಕಾದಷ್ಟಿವೆ. ಬಹುಶ: ಅಂತರ್ರಾಷ್ಟ್ರೀಯ ಪ್ರಶಸ್ತಿಗಳ ಮಾನದಂಡವೇನು ಅಂತ ಅರ್ಥವಾಗಬೇಕಾದರೆ  ಭಾರತದ ಹೊರಗಿದ್ದು ಚಿತ್ರ ನೋಡಬೇಕೇನೋ ಅಂತ ನನಗನಿಸಿದ್ದು ಮಾತ್ರ ಸುಳ್ಳಲ್ಲ.

Sunday, January 4, 2009

ಭ್ರಮೆಯ ಭೂತ ತೊಲಗಿದೆ...

ಮುಂದುವರಿದಿದೆ...


ಮುಂಬೈ ದಾಳಿಯ ಕುರಿತು ಓದುತ್ತ ಓದುತ್ತ ಅಂತರ್ಜಾಲದಲ್ಲಿ ಓಡಾಡುತ್ತಿರುವಾಗ ಎಲ್ಲೋ ಒಂದು ಕಡೆ ಮುಂಬೈ ದಾಳಿಯನ್ನು ಪಾರ್ಲಿಮೆಂಟ್ ದಾಳಿಗೆ ಹೋಲಿಸಿ ಬರೆದಿದ್ದಿದ್ದು, ಮತ್ತು ಅದಕ್ಕೆ ಅರುಂಧತಿ ರಾಯ್ ಲೇಖನದ ಸಹಾಯ ಕೂಡ ತೆಗೆದುಕೊಂಡಿದ್ದು ಕಾಣಿಸಿತು. ಅರುಂಧತಿ ರಾಯ್ (THE GREATER COMMON GOOD ಲೇಖನಕ್ಕಾಗಿ) ನಾ ಕಂಡ ಧೈರ್ಯವಂತ ಲೇಖಕಿಯರಲ್ಲೊಬ್ಬರು ಆಕೆ... ಗಮನವಿಟ್ಟು ಆಕೆಯ ಲೇಖನ ಓದಿದೆ... ಈಗಾಗಲೇ ಅರ್ಧ ಕೆಟ್ಟಿದ್ದ ತಲೆ, ಸಂಪೂರ್ಣ ಕೆಟ್ಟು ಹೋಯಿತು.

ಅಫ್ಝಲ್ ಗುರುಗೆ ಗಲ್ಲು ಯಾಕಿಲ್ಲ?

ಮುತಾಲಿಕ್ ಅಥವಾ ತೊಗಾಡಿಯಾ ಅಥವಾ ಇನ್ಯಾರೋ ಅಫ್ಝಲ್ ಗುರುವನ್ನು ಗಲ್ಲಿಗೇರಿಸದ ಸರಕಾರದ ಮೇಲೆ ಕೆಂಡಕಾರುವಾಗ ನಮಗೆಲ್ಲ ಹೌದುಹೌದೆನ್ನಿಸಿ ರಕ್ತ ಕುದಿಯುತ್ತದೆ. ಸುಳ್ಯಾಕೆ ಹೇಳಲಿ, ನನಗೂ ರಾಷ್ಟ್ರದ ಹೃದಯವನ್ನೇ ಆಕ್ರಮಿಸಿದ ಒಬ್ಬ ಅಪರಾಧಿಯನ್ನು ಗಲ್ಲಿಗೇರಿಸದಷ್ಟು ಹೀನಾಯವಾಗಿ ಹೋಯಿತಾ ನಮ್ಮ ದೇಶ ಅನಿಸಿ ಬೇಸರವಾಗಿತ್ತು. ನಮ್ಮಲ್ಲಿ ತುಂಬಾ ಜನ, ಅಫ್ಝಲ್ ಗುರು ಭಯೋತ್ಪಾದಕನೆಂದು ಸಾಧಿತವಾಗಿದೆ ಅಂತಲೇ ಅಂದುಕೊಂಡಿರುತ್ತೇವೆ, ಆದರೆ - ವಿಷಯ ಯಾವುದೇ ಇರಲಿ, ಅದನ್ನು ಮನಸ್ಸು ಮುಟ್ಟುವಂತೆ ಶಕ್ತಿಯುತವಾಗಿ ಬರೆಯುವುದು ರಾಯ್-ಗೆ ಚೆನ್ನಾಗಿ ಗೊತ್ತು ಅನ್ನುವುದು ನಿಜವಾದರೂ, ಅದರಲ್ಲಿರುವ ಸತ್ಯಗಳು ಸತ್ಯಗಳೇ ತಾನೇ. ಅರುಂಧತಿ ರಾಯ್ ಬರೆದುದು ಓದಿದಾಗ ನನ್ನ ಭ್ರಮೆ ಸ್ವಲ್ಪ ಮಟ್ಟಿಗೆ ತೊಲಗಿದ್ದಂತೂ ಸತ್ಯ. ನೀವೂ ಓದಿ ನೋಡಿ...

ಆಕೆ ಸೂಚಿಸಿರುವ ಪುಸ್ತಕ, Nirmalangshu Mukherji ಬರೆದಿರುವ December 13th: Terror Over Democracy ನಾನಿನ್ನೂ ಓದಬೇಕಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿ ಸಿಕ್ಕಿದರೆ ಅದನ್ನೂ ನೋಡಬೇಕಿದೆ. ಹಾಗೇ ಅಫ್ಝಲ್ ಗುರುವಿನ ಹೇಳಿಕೆ ಕೂಡ ನೋಡಬೇಕಿದೆ. ಆದರೆ ಮೇಲ್ನೋಟಕ್ಕೆ ಅನಿಸಿದ್ದು - ಇಂದಿಗೂ ಅಫ್ಝಲ್ ಗುರುವನ್ನು ಯಾರು ಕಳುಹಿಸಿದರು, ಯಾಕೆ ಕಳುಹಿಸಿದರು, ಎಂಬುದನ್ನು ನಮ್ಮ ವ್ಯವಸ್ಥೆ ಪತ್ತೆಹಚ್ಚಲು ಸಾಧ್ಯವಾಗದೆಯೇ ವಿಚಾರಣೆ ಮುಗಿದಿರುವುದು ನಮ್ಮ ದೇಶದ ದುರಂತ. ಸಿಪಿಸಿ 313ನೇ ವಿಭಾಗದಡಿ ಆತ ನೀಡಿದ ಹೇಳಿಕೆಯನ್ನು ಯಾಕೆ ಸುಪ್ರೀಂಕೋರ್ಟ್ ಪರಿಗಣಿಸಲಿಲ್ಲ ಎಂಬುದು ಕೂಡ ಉತ್ತರ ಸಿಗದ ಪ್ರಶ್ನೆ. (ಯಾರಾದರೂ ಕಾನೂನು ಬಲ್ಲವರು ಈ ವಿಚಾರಗಳ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಂಡಿದ್ದಲ್ಲಿ, ಅಥವಾ ಅರುಂಧತಿ ರಾಯ್ ಲೇಖನಕ್ಕೆ ಏನಾದರೂ ಪ್ರತಿವಾದಗಳು ಇದ್ದಲ್ಲಿ ತಿಳಿಸಿ, ನಾವೂ ತಿಳಿದುಕೊಳ್ಳುತ್ತೇವೆ...) ಇವೆಲ್ಲ ಗೊತ್ತಾಗದೆ ಏನೇ ಮಾಡಿದರೂ, ನಮ್ಮ ಕಡೆ ಮುಳ್ಳಿಟ್ಟು ಮದ್ದು ಉಜ್ಜುವುದು ಅಂತಾರಲ್ಲ, ಹಾಗಾಗುತ್ತದೆ - ಅಷ್ಟೆ.

ಕರ್ನಾಟಕದ ಚುನಾವಣೆಗೆ ಬಿಜೆಪಿ ಬಿಡುಗಡೆಗೊಳಿಸಿದ, ಬಿಜೆಪಿಯೇ ಪರಿಹಾರ ಸಿರೀಸ್-ನ ಜಾಹೀರಾತುಗಳಲ್ಲಿ ಇನ್ನೂ ಅಫ್ಝಲ್ ಗುರುವಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಿಲ್ಲದ ಕಾಂಗ್ರೆಸ್ ಸರಕಾರವನ್ನು ಹೀಗಳೆಯಲಾಗಿತ್ತು. ದೇಶದ ಯಾವುದೋ ಮೂಲೆಯಲ್ಲಿದ್ದುಕೊಂಡು ಮಾಹಿತಿಗೆ ಮಾಧ್ಯಮವನ್ನೇ ಅವಲಂಬಿಸುವ ನಮ್ಮ ಹಾಗೆಯೇ, ದೇಶದೆಲ್ಲೆಡೆ ಇರುವ ಬಿಜೆಪಿ ನಾಯಕರು ಕೂಡ ಅಫ್ಝಲ್ ಗುರುವಿನ TRIAL ಬಗ್ಗೆ ಹೆಚ್ಚೇನೂ ತಿಳಿದುಕೊಂಡಿಲ್ಲವೋ ಏನೋ... ಅಥವಾ ಅಷ್ಟೊಂದು ಸೂಕ್ಷ್ಮವಾಗಿ ನೋಡುವ ಅವಶ್ಯಕತೆಯಿಲ್ಲ ಎನ್ನುವ ಅಸಡ್ಡೆಯೋ... ಅಥವಾ ಇನ್ನೇನೋ.... ?

ಅಷ್ಟು ಮಾತ್ರವಲ್ಲ. ಈಗ ಈ ಕೇಸ್ ಮೇಲೆ ಏನೇ ಹೇಳಿದರೂ ನ್ಯಾಯಾಂಗ ನಿಂದನೆಯಾಗುವ ಭಯಕ್ಕೆ ಸುಮ್ಮನಿದ್ದರೂ ಇರಬಹುದೇನೋ. ಹಾಗೇ, ಅಫ್ಝಲ್ ಗುರುವನ್ನು ಗಲ್ಲಿಗೇರಿಸಲು ಸರಕಾರ ಮೀನ-ಮೇಷ ಎಣಿಸುತ್ತಿರುವುದಕ್ಕೆ ಆತನ ವಿಚಾರಣೆಯೇ ಸರಿಯಾದ ರೀತಿಯಲ್ಲಿ ಆಗಿಲ್ಲ ಎಂಬುದು ಕಾರಣವಿರಬಹುದೇನೋ, ಆತನನ್ನು ಗಲ್ಲಿಗೇರಿಸಿದರೂ ಆತನ ಹಿಂದಿನ ಸೂತ್ರಧಾರಿಗಳು ಯಾರೆಂಬುದು ತಿಳಿಯುವುದಿಲ್ಲ ಎಂಬ ಸತ್ಯ ಎಲ್ಲೋ ಒಂದು ಕಡೆ ಕಾಂಗ್ರೆಸ್ ಸರಕಾರಕ್ಕೆ ಚುಚ್ಚುತ್ತಿರಬಹುದೇನೋ, ಅಂತ ನನಗನಿಸಿತು. (ಇದಕ್ಕೆ ಸರಬ್ಜಿತ್ ಕೂಡ ಕಾರಣ ಅನ್ನುವ ಹಳೆಯ ವಾದ ಕೂಡ ಇದೆ)

ಅರುಂಧತಿ ರಾಯ್ ಮಾತ್ರ ಇಂದಿಗೂ ತನ್ನ ಈ ಲೇಖನಕ್ಕಾಗಿ ನ್ಯಾಯಾಂಗ ನಿಂದನೆಯ ಆರೋಪ ಹೊತ್ತಿದ್ದಾರೆ. ಆಕೆ ನರ್ಮದಾ ಬಚಾವೋ ಆಂದೋಲನವನ್ನು ಬೆಂಬಲಿಸಿ ಬರೆದ, ನಿರ್ವಸಿತರಿಗೆ ಸರಿಯಾದ ವ್ಯವಸ್ಥೆಯಾಗಿರದಿದ್ದರೂ ಸರ್ದಾರ್ ಸರೋವರ್ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಅನುಮತಿಯಿತ್ತ ಸುಪ್ರೀಂಕೋರ್ಟಿನ ತೀರ್ಮಾನವನ್ನು ಪ್ರಶ್ನಿಸಿದ THE GREATER COMMON GOOD ಕೂಡ ನ್ಯಾಯಾಂಗ ನಿಂದನೆಯ ಆರೋಪ ಎದುರಿಸಿತ್ತು.

ಒಂದಿಷ್ಟು ಸಂಶಯಗಳು...

ಇಷ್ಟೆಲ್ಲ ಬರೆದ ಮೇಲೆ, ನನಗೆ ಕೆಲವು ಸಂಶಯಗಳು ಉಳಿದಿವೆ, ಅವುಗಳನ್ನೂ ಹಂಚಿಕೊಂಡುಬಿಡುತ್ತೇನೆ... ಚುನಾವಣೆಯಲ್ಲಿ ಎರಡನೇ ಹಂತದ ಮತದಾನ - ಉತ್ತರಕರ್ನಾಟಕ ಮತ ಹಾಕುವ ಮೊದಲಿನ ಆದಿತ್ಯವಾರ ಹುಬ್ಬಳ್ಳಿ ಕೋರ್ಟಲ್ಲಿ ಕೂಡ ಸ್ಫೋಟ ಆಗಿತ್ತು. ಧಾರವಾಡದಲ್ಲಿ ಜೀವಂತ ಬಾಂಬುಗಳು ಸಿಕ್ಕಿದ್ದವು. ಇವೆಲ್ಲ ಯಾರ ಕೃತ್ಯ ಅಂತ ಇಲ್ಲಿವರೆಗೆ ಪತ್ತೆಯಾಗಿಲ್ಲ. ನಮ್ಮ ಬೆಂಗಳೂರಿನಲ್ಲಿ ಐದಾರು ನಾಟಿ ಬಾಂಬ್ ಸಿಡಿಸಿ ಒಬ್ಬರನ್ನು ಕೊಂದು ಡ್ರೈ ರನ್ ಮಾಡಿದ್ದು ಯಾರು ಅಂತ ಇಷ್ಟು ದಿನವಾದರೂ ಪತ್ತೆಯಾಗಿಲ್ಲ. ಸಾಕ್ಷ್ಯ ಸಿಗದಿದ್ದರೆ ಏನೂ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇರುವ ನಮ್ಮ ದೇಶದಲ್ಲಿ, ಮುಂಬೈ ಭಯೋತ್ಪಾದಕ ಕೃತ್ಯದ ಪ್ರತಿ ಸಾಕ್ಷ್ಯವೂ ಪಾಕ್ ಕಡೆ ನೇರವಾಗಿ ಬೆಟ್ಟುಮಾಡಿ ತೋರಿಸುತ್ತಿದೆ. ಮುಂಬೈಯ ಇಂಚಿಂಚು ತಿಳಿದುಕೊಂಡು ಅದ್ಭುತವಾಗಿ ಪ್ಲಾನ್ ಮಾಡಿ, ಜಿಪಿಎಸ್, ಸ್ಯಾಟಲೈಟ್ ಫೋನ್ ಇತ್ಯಾದಿ ಉಪಯೋಗಿಸಿಕೊಂಡು ಹೈಟೆಕ್ ವಿಧಾನದಲ್ಲಿ ಭಯೋತ್ಪಾದನೆಯ ಕೆಲಸ ಮಾಡಿಸುವ ಅಂತರ್ರಾಷ್ಟ್ರೀಯ ಉಗ್ರರು - ನಮ್ಮ ನಾಟಿ ಉಗ್ರರಿಗಿಂತ ದಡ್ಡರಾ? ಅದೂ ಸಿಕ್ಕಿಸಿಕ್ಕಿದಲ್ಲಿ ಸಾಕ್ಷ್ಯ ಬಿಟ್ಟು ಹೋಗುವಷ್ಟು? ತಾವು ಉಪಯೋಗಿಸಿದ ಫೋನನ್ನು, ಸಿಮ್ ಕಾರ್ಡುಗಳನ್ನು ಯಾರಾದರೂ ಪೊಲೀಸರಿಗೆ ಸಾಕ್ಷ್ಯವಾಗಿ ಸಿಗುವ ಹಾಗೆ ಬಿಟ್ಟುಹೋಗುತ್ತಾರಾ? ಅಥವಾ, ಇಂತಹ ಕೃತ್ಯ ನಡೆಸಿ ಸಿಕ್ಕಿಬಿದ್ದರೆ ಏನಾಗುತ್ತದೆಂದು ಗೊತ್ತಿದ್ದು ಪೊಲೀಸರಿಗೆ ಸಿಕ್ಕಿಬೀಳುವ ಪರಿಸ್ಥಿತಿಯಲ್ಲಿ ತಮ್ಮನ್ನು ಇಟ್ಟುಕೊಳ್ಳುತ್ತಾರಾ? ಇವೆಲ್ಲ ಪ್ರಜ್ಞಾಪೂರ್ವಕವಾಗಿ ಯೋಚನೆಮಾಡುವ ಯಾರನ್ನೇ ಆದರೂ ಕಾಡುವ ಪ್ರಶ್ನೆಗಳು ಅನ್ನುವುದು ನಿಜ ತಾನೇ ?

ಉಗ್ರವಾದದ ವಿಚಾರದಲ್ಲಿ ಭಾರತಕ್ಕೆ ಬೆಂಬಲ ನೀಡುತ್ತಿರುವ ಅಮೆರಿಕಾ, ಬ್ರಿಟನ್ ಇತ್ಯಾದಿ ರಾಷ್ಟ್ರಗಳಿಗೆ ಎದುರಾಗಿ ನಿಂತರೆ ಆಗುವ ಪರಿಣಾಮಗಳು ಗೊತ್ತಿದ್ದೂ ಪಾಕ್, ಯಾಕೆ ಅಷ್ಟು ಧೃಢವಾಗಿ ಭಾರತಕ್ಕೆ ಸಾಕ್ಷ್ಯ ಸಾಲದು, ಸರಿಯಾದ ಸಾಕ್ಷ್ಯ ತೋರಿಸಿ ಅನ್ನುತ್ತಿದೆ? ಅದರ ಪರವಾದ ಯಾವ ಸತ್ಯ ಅದಕ್ಕೆ ಅಷ್ಟು ಶಕ್ತಿ ಕೊಟ್ಟಿದೆ? ಮೊದಮೊದಲು ಪಾಕ್ ನಡೆಸಿದ ಕೃತ್ಯ ಎಂದು ಪಾಕ್ ಮೇಲೆ ನೇರವಾಗಿ ವಾಗ್ದಾಳಿ ನಡೆಸಿದ ಪ್ರಣಬ್ ಮುಖರ್ಜಿ, ನಂತರ ಪಾಕ್ ನೆಲದಲ್ಲಿನ ಉಗ್ರರು ನಡೆಸಿದ ಕೃತ್ಯ ಅನ್ನಲು ಕಾರಣವೇನು? ನಮ್ಮಲ್ಲಿ ಆದ ಉಗ್ರರ ಕೃತ್ಯಕ್ಕೆ ಅಮೆರಿಕಾದಿಂದ, ಬ್ರಿಟನ್-ನಿಂದ ಸಾಕ್ಷ್ಯ ಹೇಗೆ ಸಿಗುತ್ತಿದೆ? ಅಷ್ಟಕ್ಕೂ, ಭಾರತ ಸರಕಾರ ಇಲ್ಲಿವರೆಗೆ ತೋರಿಸಿದ ಸಾಕ್ಷ್ಯಗಳಲ್ಲಿ ಯಾವುದು ತಾನೇ ಬಂಧಿತ ಉಗ್ರ ಪಾಕ್-ನವ ಅಂತ UNDISPUTABLE ಆಗಿ ಹೇಳುತ್ತಿದೆ? ಇಲ್ಲಿವರೆಗೆ ಭಾರತ ಇತರ ರಾಷ್ಟ್ರಗಳ ಜತೆಗೆ ಸಾಕ್ಷ್ಯ ಹಂಚಿಕೊಳ್ಳದಿದ್ದುದರ ಗುಟ್ಟೇನು? (ಟೀವಿ ಚಾನೆಲ್ಲುಗಳು ಮಾಡಿದ ಸ್ಟಿಂಗ್ ಆಪರೇಶನ್ ಅಥವಾ ಮಾಧ್ಯಮ ವರದಿಗಳು ಸಾಕ್ಷ್ಯವೆಂದು ಒಪ್ಪಿಕೊಳ್ಳಲು ಯ:ಕಶ್ಚಿತ್ ನಾನೇ ಸಿದ್ಧಳಿಲ್ಲ, ಇನ್ನು ಪಾಕ್ ಹೇಗೆ ಒಪ್ಪಿಕೊಳ್ಳುತ್ತದೆ?) ಇವಕ್ಕೆಲ್ಲ ಸರಿಯಾದ ಉತ್ತರಗಳು ಇಲ್ಲಿವರೆಗೆ ಸಿಕ್ಕಿಲ್ಲ ನನಗೆ. ಇವಕ್ಕೆಲ್ಲ ಸರಿಯಾದ ಉತ್ತರಗಳು ಸಿಗುವ ವರೆಗೆ conspiracy theoryಗಳ ಪ್ರಭಾವ ನನ್ನ ತಲೆಯಿಂದಲಂತೂ ಹೋಗುವುದಿಲ್ಲ.

ಇಂದು.....

ನಾ ಬರೆದಿದ್ದರ ಸತ್ಯಾಸತ್ಯತೆ ಪರಿಶೀಲಿಸಿ, ನಂಬಲಿಕ್ಕೆ ಇಷ್ಟವಿದ್ದವರು ನಂಬಬಹುದು, ಇಷ್ಟವಿಲ್ಲದವರು ನಂಬದಿರಬಹುದು, ಅಥವಾ ಇದಕ್ಕೆ ವಿರುದ್ಧವಾದ ಸಂಶೋಧನೆ, ಯೋಚನಾಸರಣಿ ಇತ್ಯಾದಿಗಳ ಮೂಲಕ ನನಗನಿಸಿದ್ದು ತಪ್ಪು ಅಂತ ಸಾಧಿಸಲು ಕೂಡ ಹೊರಡಬಹುದು. ಮೊಸ್ಸಾಡ್ ಮತ್ತು ಇಸ್ರೇಲ್ ಕುರಿತ ಆಪಾದನೆಗಳು ಊಹಾಪೋಹಗಳು ಅಥವಾ conspiracy theory ಕೂಡ ಆಗಿಬಹುದಾದ ಸಾಧ್ಯತೆಯನ್ನೂ ನಾನು ಅಲ್ಲಗಳೆಯುವುದಿಲ್ಲ. ಆದರೆ, ಎಲ್ಲೆಲ್ಲೋ ಅಲೆದಾಡಿ ಜಗತ್ತಿನ ಯಾವ ಭಾಗದಲ್ಲಿ ಏನು ಚರ್ಚೆ ನಡೆಯುತ್ತಿದೆ ಅಂತ ತಿಳಿದುಕೊಂಡದ್ದರಿಂದ ನನ್ನ ಜಗತ್ತು ವಿಶಾಲವಾಗಿದೆ. ನಾನು ತಿಳಿದುಕೊಂಡುದೇ ಸತ್ಯ ಅಂದುಕೊಂಡಿದ್ದೆ ನಾನು, ಅದು ಸುಳ್ಳಾಗಿದೆ, ಭ್ರಮೆಯ ಗುಳ್ಳೆಗಳೆಲ್ಲ ಒಡೆದುಹೋಗಿವೆ.

ಇವೆಲ್ಲಾ ಆದ ಮೇಲೆ ಇಸ್ರೇಲ್ ಮತ್ತೆ ಗಾಜಾ ಪಟ್ಟಿಯ ಮೇಲೆ ದಾಳಿ ಆರಂಭಿಸಿದೆ, ದಾಳಿಯಲ್ಲಿ ಸತ್ತ ನಾಗರಿಕರ ಸಂಖ್ಯೆ ಮುಂಬೈ ದಾಳಿಯಲ್ಲಿ ಸತ್ತವರಿಗಿಂತ ಮೂರು ಪಟ್ಟಿನಷ್ಟು ಹೆಚ್ಚಿದೆ. ಈ ನಡುವೆ ಹೊಟ್ಟೆಪಾಡಿಗಾಗಿ ಬಾಂಗ್ಲಾದಿಂದ ಅಕ್ರಮವಾಗಿ ವಲಸೆ ಹೊರಟಿದ್ದ 400ಕ್ಕೂ ಹೆಚ್ಚು ಜನರನ್ನು ಮೋಸದಿಂದ ಇಂಧನವಿಲ್ಲದ ಬೋಟುಗಳಲ್ಲಿ ಸಮುದ್ರ ಮಧ್ಯದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ನಡೆದಿದೆ, 100ರಷ್ಟು ಜನರನ್ನು ಭಾರತೀಯ ನೌಕಾಪಡೆ ರಕ್ಷಿಸಿತು, ಉಳಿದ 300 ಜನರ ಪತ್ತೆಯಿಲ್ಲ. ಈ ಎರಡೂ ಘಟನೆಗಳು ಮುಂಬೈ ಭಯೋತ್ಪಾದನೆ ಹುಟ್ಟಿಸಿದ ಗಾಬರಿ ಜಗತ್ತಿನಲ್ಲಿ ಹುಟ್ಟಿಸಿಯೇ ಇಲ್ಲ. ಆಲ್ಲಿ ಸತ್ತ ಜೀವಗಳಿಗೆ ಜಗತ್ತು ಮುಂಬೈ ದಾಳಿಯಲ್ಲಿ ಬಲಿಯಾದವರಿಗೆ ಕೊಟ್ಟ ಬೆಲೆ ಕೊಟ್ಟಿಲ್ಲ.

ನನಗೆ ಸಿಕ್ಕಿದ ಇಸ್ರೇಲಿ ಭೂತದ ಕಥೆ ಎಷ್ಟು ಸತ್ಯವೋ ಸುಳ್ಳೋ ಕಾಲವೇ ಹೇಳಬೇಕು. ಆದರೆ, ಧರ್ಮದ ಆಧಾರದಲ್ಲಿಯೇ ಯೋಚಿಸುವ ಬಹಳಷ್ಟು ಜನರಿಗೆ ಈ ಎಲ್ಲಾ ಘಟನೆಗಳು, ರಾಷ್ಟ್ರ-ರಾಷ್ಟ್ರಗಳ ನಡುವಿನ ಸಮೀಕರಣಗಳು, ರಾಜಕೀಯ ಪಕ್ಷಗಳ ಜಾಣ ಕೃತ್ಯಗಳು ಈಗಲಾದರೂ ಕಣ್ಣು ತೆರೆಸಬೇಕು. ಮತ್ತು ಸದ್ಯ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಜಗತ್ತು ಎಲ್ಲಿ ಸಾಗುತ್ತಿದೆ ಎಂಬುದೂ ಅರಿವಾಗಬೇಕು. ಯುದ್ಧ-ಯುದ್ಧವೆಂದು ಕುಣಿಯುತ್ತಿರುವವರು ಯಾರೆಂದು ಕಣ್ಣುಬಿಟ್ಟು ನೋಡಿದರೆ ಸತ್ಯ ಗೊತ್ತಾಗುತ್ತದೆ. ಯುದ್ಧದ ಮಾತು, ಹಾಗೂ ಅಮೆರಿಕಾ-ಫ್ರಾನ್ಸ್ ಮತ್ತಿತರ ದೇಶಗಳ ಜತೆಗಿನ ನಾಗರಿಕ ಅಣು ಒಪ್ಪಂದದ ಭರದಲ್ಲಿ ಇಂಡೋ-ಇರಾನ್ ಗ್ಯಾಸ್ ಪೈಪ್ ಲೈನ್ ಮಾತುಕತೆಯನ್ನು ಮುಂದೆ ತೆಗೆದುಕೊಂಡು ಹೋಗುವುದನ್ನು ಮರೆತೇ ಬಿಟ್ಟಿತು ಭಾರತ... ದೂರದಲ್ಲಿರುವ ನೆಂಟರನ್ನು ಮೆಚ್ಚಿಸಲು ಪಕ್ಕದ ಮನೆಯವರನ್ನು ದೂರವಿಟ್ಟ ತಪ್ಪಿಗೆ ಮುಂದೆಂದೋ ಒಂದು ದಿನ ಪಶ್ಚಾತ್ತಾಪ ಪಡುವ ದಿನ ಬರಬಹುದು. ಯಾರಿಗೆ ಯುದ್ಧದಿಂದ ಉಪಕಾರವೋ, ಅವರು ನಾವಲ್ಲ - ಅಂದರೆ ಭಾರತವಲ್ಲ, ಪಾಕಿಸ್ತಾನವೂ ಅಲ್ಲ. ಶಾಂತಿಗಿರುವ ಶಕ್ತಿ ಯುದ್ಧಕ್ಕಿಲ್ಲ ಎಂಬುದು ನಮಗೆಲ್ಲ ಎಷ್ಟು ಬೇಗ ಅರ್ಥವಾಗುತ್ತದೋ ಅಷ್ಟು ಎರಡೂ ರಾಷ್ಟ್ರಗಳಿಗೆ ಒಳ್ಳೆಯದಾಗುತ್ತದೆ. ಮತ್ತು ನಮ್ಮೊಳಗಿದ್ದುಕೊಂಡು ಪಾಕ್ ನಮ್ಮ ಬದ್ಧ ವೈರಿಯೆಂಬಂತೆ ಆಡುತ್ತ ನಿಜವಾದ ಹಿತಶತ್ರುಗಳ ಬಗ್ಗೆ ಜಾಣಕುರುಡರಾಗುವ ಮಹಾನುಭಾವರುಗಳಿಗೂ ಒಳ್ಳೆಯದಾಗುತ್ತದೆ.

ಉಗ್ರರು ಯಾರೇ ಇರಲಿ, ಅವರು ತಮ್ಮ ಕೃತಿಗಳ ಮೂಲಕ ಕೊಲ್ಲುವುದು ಯಾವಾಗಲೂ ಮುಗ್ಧರನ್ನು. ಇಬ್ಬರ ಜಗಳ ಮೂರನೆಯವನಿಗೆ ಲಾಭ - ಸರಳ ಸಿದ್ಧಾಂತ, ಇತರ ಧರ್ಮಗಳ ರಾಷ್ಟ್ರಗಳು ತಮ್ಮ ಹಿತಾಸಕ್ತಿಗೋಸ್ಕರ ಹಿಂದುಗಳಲ್ಲಿ ಅಡಕವಾಗಿರುವ ಮುಸ್ಲಿಂ ವಿರೋಧಿ ಭಾವನೆಯ ದುರುಪಯೋಗವನ್ನು ಪಡೆದುಕೊಳ್ಳುತ್ತಿರುವುದು ಅರ್ಥವಾದಾಗಲಾದರೂ ಹಿಂದು ಹಿಂದು ಎಂದು ಸಾಯುವವರು ಬದಲಾಗಬಹುದು ಅಂತ ಆಶಿಸಲೇ? ಒಂದು ಕಡೆ ಕಡೆ ಹಿಂದುತ್ವವೆಂದರೆ ವೇ ಆಫ್ ಲೈಫ್ ಅಂತ ಭಾಷಣ ಮಾಡುತ್ತ, ಇನ್ನೊಂದು ಕಡೆ ಚರ್ಚ್-ಗಳ ಮೇಲೆ ದಾಳಿ ನಡೆಸುತ್ತ so-called ಹಿಂದುತ್ವ ಮೆರೆಯುವ FANATICಗಳಿಗೆ, ಇನ್ನೊಂದು ಕಡೆ CHRISTIAN AGGRESSION ಬಗ್ಗೆ ದೊಡ್ಡದೊಡ್ಡದಾಗಿ ಮಾತಾಡುತ್ತ ಚರಿತ್ರೆಯ ಭಾರವನ್ನೆಲ್ಲ ಇಂದಿನ ಜನತೆಯ ಮೇಲೆ ಹಾಕಿ ನಾಳೆಗಳನ್ನು ಹಾಳುಮಾಡುವ SO-CALLED ಇತಿಹಾಸಕಾರರಿಗೆ ಅಥವಾ ಬುದ್ಧಿಜೀವಿಗಳಿಗೆ, ಮತ್ತು ಅದಕ್ಕೆ ಅಗತ್ಯವಿಲ್ಲದಷ್ಟು ಪ್ರಚಾರ ಕೊಟ್ಟು ಮನಸುಗಳನ್ನು ಕದಡಿದ ಮಾಧ್ಯಮಕ್ಕೆ ಈಗಲಾದರೂ ಜ್ಞಾನೋದಯವಾಗಬೇಕು.

ನಿನ್ನೆಯ ಕರಿನೆರಳುಗಳು ನಾಳೆಗಳನ್ನು ಹಾಳುಗೆಡವದಿರಲಿ...

ಒಂದು ಕಾಲದಲ್ಲಿ, ಮಂದಿರವಲ್ಲೇ ಕಟ್ಟುವೆವು ಅಂದವರ ಹಾಡಿಗೆ ದನಿಗೂಡಿಸಿದವರಲ್ಲಿ ನಾನೂ ಇದ್ದೆ. ಆಗ ತುಂಬಾ ಚಿಕ್ಕವಳಿದ್ದೆ. ಆರ್ ಎಸ್ ಎಸ್-ನವರಿಂದ ಬದುಕಿನಲ್ಲಿ ಶಿಸ್ತು, ಕರ್ತವ್ಯಪರತೆ, ದೇಶಪ್ರೇಮ ಮೈಗೂಡಿಸಿಕೊಂಡವರು ನಾವು. ನಮ್ಮನೆಯಲ್ಲಿ ಇವತ್ತಿಗೂ ಬಿಜೆಪಿಗೇ ಓಟು. ಒಂದಾನೊಂದು ಕಾಲದಲ್ಲಿ ನಾನೇ ಅನ್ನುತ್ತಿದ್ದೆ, ಸೇರಿದರೆ ಬಿಜೆಪಿ ಸೇರ್ತೇನೆ, ಬಿಜೆಪಿಯಿಂದಲೇ ಓಟಿಗೆ ನಿಲ್ತೇನೆ ಅಂತ... ಆದರೆ, ಈಗ ಅದೆಲ್ಲಾ ಹುಚ್ಚೂ ಬಿಟ್ಟುಹೋಗಿದೆ :-) ಸತ್ಯದ ವಿವಿಧ ಮಜಲುಗಳನ್ನು ಅರಿತುಕೊಳ್ಳುತ್ತ ಹೋದಂತೆ , ಕಾಲ ತನ್ನ ಹೆಜ್ಜೆಗಳನ್ನು ಹಾಕುತ್ತ ಹೋಗುವಾಗ ತಂದ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳುತ್ತ ಹೋದಂತೆ, ನನಗಿದ್ದ ಭ್ರಮೆಗಳು ತೊಲಗಿವೆ.

ಭಯೋತ್ಪಾದನೆ ಇಂದು ಚುನಾವಣಾವಿಷಯವಾಗಿ ಉಳಿದಿಲ್ಲ. ಈಗ ಅದು ನಮ್ಮಲ್ಲಿ ಪ್ರತಿಯೊಬ್ಬರ ಅಸ್ತಿತ್ವದ ಪ್ರಶ್ನೆ, ಸರಿ-ತಪ್ಪಿನ ನಡುವಿನ ತೂಗಾಟದ ಪ್ರಶ್ನೆ, ನಿನ್ನೆಗಳ ನೆರಳಿನಲ್ಲಿ ಇಂದು ಎಸಗುವ ಕೃತ್ಯಗಳ ಮೂಲಕ, ನಾಳೆಗಳನ್ನು ನಾಶಪಡಿಸಹೊರಟ ಪಿಡುಗು. ಇದು ಎಲ್ಲಾ ಜಾತಿ-ಮತಗಳನ್ನು ಮೀರಿದ ಸಾರ್ವತ್ರಿಕ ಸಮಸ್ಯೆ. ಇದನ್ನು ಹೇಳಹೊರಟವರು ಮೊದಮೊದಲು ವಿರೋಧ ಎದುರಿಸಿಯೇ ಎದುರಿಸುತ್ತಾರೆ, ಯಾಕೆಂದರೆ ನಮ್ಮ ಕೆಟ್ಟತನವನ್ನು ಒಪ್ಪಿಕೊಳ್ಳಲು ನಮಗೆ ಸಮಯ ಬೇಕು. ಕೆಲವೊಮ್ಮೆ ಬಹಳ ಸಮಯ ಕಳೆದ ನಂತರವೂ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿರಬಹುದು, ಅಥವಾ ಒಪ್ಪಿಕೊಳ್ಳುವುದು ಬೇಕಿಲ್ಲವಿರಬಹುದು. ಭಯೋತ್ಪಾದನೆ ನಿಗ್ರಹವಾಗಬೇಕು ಎಂದು ಹೋರಾಡುವವರೆಲ್ಲರೂ ಈ ಬೇಸಿಕ್ ಸತ್ಯವನ್ನು ಒಪ್ಪಿಕೊಂಡಾಗ ಮಾತ್ರ ಹೋರಾಟ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯ. ಈನಿಟ್ಟಿನಲ್ಲಿ ಯೋಚಿಸುವಾಗ, ನಮ್ಮ ರಾಜ್ಯದಲ್ಲಿ ಹೀಗಾದರೆ ಎಷ್ಟು ಚೆನ್ನ ಅಂತ ಮನಸು ಲೆಕ್ಕ ಹಾಕುತ್ತದೆ...

1) ಒಂದಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಲ್ಲಿ, ಯುವಜನತೆಗೆ ಉದ್ಯೋಗಗಳು ಕಲ್ಪಿಸಿ ಕೊಟ್ಟಲ್ಲಿ, ಅವರ ವಿಚಾರಧಾರೆಗಳು ಸರಿದಾರಿಯಲ್ಲಿ ಸಾಗುವಂತೆ ಮಾಡಿದಲ್ಲಿ, ಮುಂದೆ ಕೈಯಲ್ಲಿ ಕೋವಿ ಹಿಡಿದು ಭಯೋತ್ಪಾದಕರಾಗಬಹುದಾದ ಯುವಜನತೆ ಹಾದಿ ತಪ್ಪುವ ಬದಲು ತಮ್ಮ ಬದುಕಿನಲ್ಲಿ ತಾವು ವ್ಯಸ್ತರಾಗಬಹುದಲ್ಲವೇ?

2) ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯವಾಗಿಸುತ್ತೇವೆಂದು ಪ್ರಾಥಮಿಕ ಶಿಕ್ಷಣ ಸಚಿವರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಅದರ ಜತೆಗೆ, ನಮ್ಮ ರಾಷ್ಟ್ರದ ಪ್ರತಿ ಪ್ರಜೆಗೂ ಗೊತ್ತಿರಬೇಕಾದ ಪ್ರತಿಜ್ಞೆ, ಮತ್ತು ರಾಷ್ಟ್ರೀಯ ಭಾವೈಕ್ಯದ ಪ್ರತಿಜ್ಞೆ ಕೂಡ ಕಡ್ಡಾಯವಾಗಿಸಬಹುದಲ್ಲವೇ?

3) ಯಾವ್ಯಾವುದೋ ಸಂಘಸಂಸ್ಥೆಗಳಿಗೆ ಸೇನೆಯ ತರಬೇತಿ ನೀಡಲು ಅನುಮತಿ ನೀಡುವ ಬದಲು, ಸರಕಾರದೊಳಗಿನ ವ್ಯವಸ್ಥೆಯಲ್ಲಿ ನೇರವಾಗಿಯೇ ಇರುವ ಪೊಲೀಸರಿಗೇ ಅದನ್ನು ನೀಡಬಹುದಲ್ಲವೇ, ಸಂಘಸಂಸ್ಥೆಗಳಿಂದ ಈರೀತಿಯ ತರಬೇತಿ ತೆಗೆದುಕೊಳ್ಳುವವರನ್ನು ನೇರವಾಗಿ ಪೊಲೀಸ್ ಇಲಾಖೆ ಅಥವಾ ಸೇನೆಗೆ ಸೇರಲು ಪ್ರೋತ್ಸಾಹಿಸಬಹುದಲ್ಲವೇ?

4) ಭಯೋತ್ಪಾದನೆಯನ್ನು ಚುನಾವಣಾ ವಿಷಯವನ್ನಾಗಿಸಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿ ಅಂತ ಬೊಬ್ಬೆ ಹಾಕುವ ಬದಲು, ಎಲ್ಲೆಲ್ಲಿ ಅಧಿಕಾರವಿದೆಯೋ ಅಲ್ಲಿ ಚೆನ್ನಾಗಿ, ಭ್ರಷ್ಟಾಚಾರವಿಲ್ಲದೆ ಕೆಲಸ ಮಾಡಿ, ಒಳ್ಳೆ ಹೆಸರು ತೆಗೆದುಕೊಳ್ಳಬಾರದೇ?

5) ರಾಜ್ಯದಲ್ಲಿ ಸ್ಫೋಟಕ ವಸ್ತುಗಳು, ರಾಸಾಯನಿಕಗಳು ಇತ್ಯಾದಿಗಳ ಸಾಗಣಿಕೆ, ಉಪಯೋಗಗಳ ಮೇಲೆ ಇಂದಿಗೂ ಸರಿಯಾದ ನಿಯಂತ್ರಣವಿಲ್ಲ. ಅದನ್ನೆಲ್ಲ ಸರಿಪಡಿಸಿ, ಪೊಲೀಸ್ ಇಲಾಖೆಗೆ ಬೇಕಾದ ಸೌಲಭ್ಯ ಕೊಟ್ಟು ಆಧುನೀಕರಿಸಿ, ಸರಿಯಾದ ವ್ಯವಸ್ಥೆಗಳನ್ನು ಮಾಡಬಹುದಲ್ಲವೇ? ರೈಲು ಹೋದ ಮೇಲೆ ಟಿಕೇಟು ತೆಗೆದುಕೊಳ್ಳುವ ಉದಾಸೀನದ ಬುದ್ಧಿ ಬಿಟ್ಟು ಮುಂದಾಲೋಚನೆಯಿಂದ ಕಾಲಕಾಲಕ್ಕೆ ಸರಿಯಾಗಿ ಮಾಡಬೇಕಾದ್ದು ಮಾಡಬಹುದಲ್ಲವೇ?

6) ಭಯೋತ್ಪಾದನೆ ವಿರುದ್ಧ ನಮ್ಮ ಬಿಜೆಪಿ ಸರಕಾರ ನೇರವಾಗಿ ಕಾಲೇಜುಗಳಲ್ಲಿ ಭಾಷಣಗಳನ್ನು ಆಯೋಜಿಸುತ್ತಿದೆ, ಕಾಲೇಜು ವಿದ್ಯಾರ್ಥಿಗಳ ಮೂಲಕ ರ್ಯಾಲಿಗಳನ್ನು ಆಯೋಜಿಸುತ್ತಿದೆ. ಈ ರ್ಯಾಲಿಗಳಲ್ಲಿ, ಭಾಷಣಗಳಲ್ಲಿ ಉಗ್ರವಾದದ definition ಮತ್ತು ವ್ಯಾಪ್ತಿ ಮತ್ತು ವಿಸ್ತಾರವನ್ನು ಹೆಚ್ಚಿಸಿ, ಜಾತಿ-ಮತ-ದೇಶ-ಕಾಲ ರಹಿತವಾಗಿ ಉಗ್ರವಾದದ ಬಗ್ಗೆ ಮಾತ್ರ ಜಾಗೃತಿ ಮೂಡಿಸಲು ಯತ್ನಿಸಿದರೆ ಅದು ಶ್ಲಾಘನೀಯ. ಅದು ಬಿಟ್ಟು, ಪಾಕಿಸ್ತಾನದ ಮೇಲೆ ಕೆಂಡಕಾರುತ್ತ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಮೇಲೆ ವಾಗ್ದಾಳಿ ಮಾಡಿದರೆ ಅದು ವೋಟ್ ಬ್ಯಾಂಕ್ ರಾಜಕೀಯ.

7) ಎಲ್ಲಕ್ಕಿಂತ ಹೆಚ್ಚಾಗಿ, ಉಗ್ರವಾದವನ್ನು ವೈಚಾರಿಕ ನೆಲೆಗಟ್ಟಿನಲ್ಲಿಯೇ ಇಲ್ಲವಾಗಿಸುವ ಯತ್ನ ನಡೆಯಬೇಕಿದೆ. ಇಂದು ನಡೆಯುತ್ತಿರುವಷ್ಟು intellectual terrorism, ಮತ್ತು manipulation of media ಬಹುಶ ಎಂದೂ ನಡೆದಿರಲಿಲ್ಲ. ಸರ್ಕಾರ್ ಚಿತ್ರದಲ್ಲಿ ಕುತಂತ್ರಿ ಸಾಧು ಹೇಳುವ ಮಾತು ನೆನಪಿಗೆ ಬರುತ್ತಿದೆ... "अगर तुम सर्कार को मारना चाहते हो, तो पहले उसकी सोच को मारो..." ಉಗ್ರವಾದ ಹುಟ್ಟುವುದೂ ಯೋಚನೆಗಳಲ್ಲಿ, ಅದರ ಸಾವೂ ಕೂಡ ಯೋಚನೆಗಳಲ್ಲೇ ಅಡಗಿದೆ. ಯೋಚನೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ವ್ಯಕ್ತಿತ್ವವನ್ನೇ ಬದಲಾಯಿಸುತ್ತೇವಂತೆ, ನಮ್ಮ ಮನಸುಗಳಲ್ಲಿ ಹುದುಗಿರುವ ಉಗ್ರನನ್ನು ಕೊಲ್ಲುವುದು ಕಷ್ಟವಾ?

10 ಜನರನ್ನಿಟ್ಟುಕೊಂಡು ಇಡೀ ರಾಷ್ಟ್ರದ ನಿದ್ದೆ ಮೂರುದಿನ ಕೆಡಿಸಿದ, ಒಂದು ಬಿಲಿಯನ್ ಜನರ ಧೈರ್ಯಗೆಡಿಸಿದ ಮುಂಬೈ ದಾಳಿಯಂತಹ ಹೇಯಕೃತ್ಯಗಳು ಮುಂದೆಂದೂ ನಡೆಯದಿರಲಿ, ಯಾರಿಂದಲೂ ನಡೆಯದಿರಲಿ. ಎಲ್ಲೂ ನಡೆಯದಿರಲಿ... ನಾವು ಒಬ್ಬೊಬ್ಬರೂ ಬದಲಾಗೋಣ, ಆಮೂಲಕ ಇಡೀ ಸಮಾಜ ಬದಲಾಗಲಿ... ನಮ್ಮಲ್ಲಿ ಸಾಯುತ್ತಿರುವ ಮಾನವತ್ವವನ್ನು ಮತ್ತೆ ನೀರೆರೆದು ಬದುಕಿಸೋಣ, ಸುತ್ತಲವರ ನೋವಿಗೆ ನಮ್ಮ ಜೀವಗಳೂ ಜಾತಿ-ಮತ ಮರೆತು ಸ್ಪಂದಿಸಲಿ... ಮರೆತುಬಿಡೋಣ ಕಪ್ಪುಕಾಲನ ಮಡಿಲಲ್ಲಿ ಸೇರಿಹೋದ ನಿನ್ನೆಗಳನ್ನು... ನಿನ್ನೆಯ ಕರಿನೆರಳುಗಳು ನಾಳೆಗಳನ್ನು ಎಂದಿಗೂ ಹಾಳುಗೆಡವದಿರಲಿ...

(ವಿ.ಸೂ. - ವೈಯಕ್ತಿಕ ಹಾಗೂ ಅಸಭ್ಯ ಕಮೆಂಟುಗಳನ್ನು ಪ್ರಕಟಿಸಲಾಗುವುದಿಲ್ಲ, ಮತ್ತು ಗಣನೆಗೂ ತೆಗೆದುಕೊಳ್ಳಲಾಗುವುದಿಲ್ಲ, ಆರೋಗ್ಯಕರ ಚರ್ಚೆಗೆ ಮಾತ್ರ ಅವಕಾಶ)

Friday, January 2, 2009

ಇಸ್ರೇಲಿ ಭೂತ ತಲೆಗೆ ಹೊಕ್ಕಿದೆ...

ನವೆಂಬರ್ - 29:

ಚೆನ್ನೈಯಲ್ಲಿ ಎಡೆಬಿಡದೆ ಮಳೆ ಸುರಿದಿತ್ತು. ಬೆಂಗಳೂರಿನಲ್ಲೂ ಅದರ ಪರಿಣಾಮ, ಥಂಡಿ ಹವೆ, ವಿಚಿತ್ರ ಮಳೆ. ಸೈಕ್ಲೋನ್ ನಿಶಾಕ್ಕೆ 82 ಜನ ಸತ್ತಿದ್ದು ದೊಡ್ಡದಾಗಿಯೇನೂ ಸುದ್ದಿಯಾಗಿರಲಿಲ್ಲ. ಇನ್ನು ಮುಂದೆ ಮಾನವನ ಅಟ್ಟಹಾಸದೆದುರು ಕಾಲನ ಅಬ್ಬರ ಏನೂ ಅಲ್ಲ ಬಿಡಿ... ಹಿಂದಿನ ದಿನ ಮಳೆಗೆ ನೆನೆದ ಪರಿಣಾಮ ಜ್ವರ ಕಾಡುತ್ತಿತ್ತು. ಆಫೀಸಿಗೆ ರಜಾ ಹಾಕಿ ಮನೆಯಲ್ಲೇ ಕೂತಿದ್ದೆ. ಮುಂಬೈಯಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರಿದಿತ್ತು. ತಾಜ್ ಇನ್ನೂ ಬಿಡುಗಡೆಯಾಗಿರಲಿಲ್ಲ. ಟೀವಿ ನೋಡಿನೋಡಿ ತಲೆ ಸಿಡಿಯುತ್ತಿತ್ತು.

ಹಾಗೆಂದು ಮಲಗಲೂ ಆಗದೆ, ಹಳಸಿದ ಸುದ್ದಿಯಿದ್ದ ನಿನ್ನೆಯ ಪೇಪರ್ ಓದಲು ಇಷ್ಟವಿಲ್ಲದೆ, ಬೇರೆ ವಿಧಿಯಿಲ್ಲದೇ ಮತ್ತೆ ಟೀವಿಗೆ ಮೊರೆ ಹೋದೆ. ಚಾನೆಲಿಂದ ಚಾನೆಲಿಗೆ ಬದಲಾಯಿಸುತ್ತ ಕೂತಿದ್ದೆ. ಟೈಮ್ಸ್ ನವ್ ಯಥಾಪ್ರಕಾರ ಕಿರುಚುತ್ತಿತ್ತು... ಹಿಂದಿ ಚಾನೆಲುಗಳ ಗತಿಯೋ, ದೇವರಿಗೇ ಪ್ರೀತಿ. NDTV ಮತ್ತು CNN IBN ಆಗಷ್ಟೇ ಬುದ್ಧಿ ಕಲಿತಂತೆ LIVE ಕೊಡುವುದು ಬಿಟ್ಟು ಹುತಾತ್ಮರಾದವರ ಬಗ್ಗೆ ಗಮನ ಹರಿಸಲು ಆರಂಭಿಸಿದ್ದವು.

ನೋಡುತ್ತ ನೋಡುತ್ತ ನನಗೆ ಘಟನೆಯ ಬಗ್ಗೆ ಅಂತರ್ರಾಷ್ಟ್ರೀಯ ಪ್ರತಿಕ್ರಿಯೆಗಳು ಏನಿವೆ ಅಂತ ತಿಳಿಯಬೇಕೆನಿಸಿತು, ಯಾವ ಚಾನೆಲ್ಲೂ ಏನೂ ಕೊಡುತ್ತಿರಲಿಲ್ಲ. CNNನಲ್ಲೂ ಏನೂ ಇರಲಿಲ್ಲ. ಸರಿ, ಇಂಟರ್ನೆಟ್ಟಲ್ಲಿ ಏನಾದರೂ ಸಿಗಬಹುದು ಅಂತ ಎಣಿಸಿಕೊಂಡು ಸಿಸ್ಟಮ್ ಆನ್ ಮಾಡಿದೆ. ಪಕ್ಕದ ಮನೆಯಲ್ಲೆಲ್ಲೋ ಇರುವ ಅದೃಶ್ಯ ಅನ್-ಸೆಕ್ಯೂರ್ಡ್ ಇಂಟರ್ನೆಟ್ ನೀಟಾಗಿ ಕನೆಕ್ಷನ್ನು ಕೆಲಸ ಮಾಡುತ್ತಿತ್ತು. ಸರಿ, ಲಾಗಿನ್ ಆದೆ. ಅಲ್ಲೂ ಸುಲಭಕ್ಕೆ ಏನೂ ಸಿಗಲಿಲ್ಲ, ಆಸ್ಟ್ರೇಲಿಯಾ ಮತ್ತು ಅಮೆರಿಕಾದ ತೂಕದ ಪ್ರತಿಕ್ರಿಯೆಗಳ ಹೊರತಾಗಿ.

ಚಾನೆಲ್ಲುಗಳಲ್ಲಿ ಪದೇಪದೇ ದಾಳಿಯ ಹೊಣೆಹೊತ್ತ ಡೆಕ್ಕನ್ ಮುಜಾಹಿದೀನ್ ಸಂಸ್ಥೆಯ ಹೆಸರು ಕೇಳಿ ಬರುತ್ತಿತ್ತು. ಹಿಂದಿಯಲ್ಲಿ ಮೈಲ್ ಕಳುಹಿಸಿತ್ತು ಅದು, ಹಾಗಿತ್ತು, ಹೀಗಿತ್ತು ಇತ್ಯಾದಿ. ನನಗೆ ಭಯೋತ್ಪಾದಕರು ಮೈಲ್ ಮಾಡಿದರೆ ಹೇಗಿರುತ್ತದೆ, ಪೂರ್ತಿಯಾಗಿ ಒಂದು ಸಲ ಓದಬೇಕಲ್ಲ ಅನಿಸಿ ಒಂದಷ್ಟು ಹುಡುಕಿದೆ. ಸಿಕ್ಕಿಯೇ ಬಿಟ್ಟಿತು - ಇಂಡಿಯನ್ ಮುಜಾಹಿದೀನ್ ಕಳುಹಿಸಿದ ಮೈಲ್.... ದೆಹಲಿ ಸ್ಫೋಟದ ಸಮಯ ಕಳುಹಿಸಿದ್ದು.
ಇದರಲ್ಲಿ, ಉಗ್ರರು ಹಲವು ರಾಜ್ಯಗಳಲ್ಲಿ ಶಂಕಿತ ಉಗ್ರರ ಹೆಸರಲ್ಲಿ ಮುಸ್ಲಿಮರನ್ನು ಬಂಧಿಸಿ ಕಾಟ ಕೊಡುವುದಕ್ಕೆ ಕೆಂಡಾಮಂಡಲವಾಗಿದ್ದರು. (ಇಂತಹ ಕೇಸುಗಳು ಹಲವಾರು. ನಾಲ್ಕೈದು ವರ್ಷಗಳ ಹಿಂದೆ ಒಂದು ದಿನ ಹೈದರಾಬಾದಿನಲ್ಲಿ ದಿನಾ ಹಾಲು ಮಾರುತ್ತ ಎಲ್ಲರಂತೆ ಬದುಕುತ್ತಿದ್ದ ಮಾಮೂಲು ಹುಡುಗನನ್ನು ಉಗ್ರನೆಂದು ಗುಂಡುಹಾರಿಸಿ ಕೊಂದಿದ್ದರು ಪೊಲೀಸ್. ಹೈದರಾಬಾದಿನಲ್ಲಿ ಮತ್ತೆ ಹಲವರನ್ನು ಶಂಕಿತರೆಂದು ಬಂಧಿಸಿ ಕೊನೆಗವರು ಮುಗ್ಧರೆಂದು ಸಾಧಿತವಾದ ಬಳಿಕ ಬಿಡುಗಡೆಗೊಳಿಸುವಾಗ ಅವರಿಗೆ ಪರಿಹಾರ ಕೂಡ ಕೊಟ್ಟಿತ್ತು ಆಂಧ್ರಪ್ರದೇಶ ಸರಕಾರ. ಧಾರವಾಡದಲ್ಲಿ ತನ್ನ ಹೊಲದಲ್ಲಿ ಬಾಂಬ್ ಸಿಕ್ಕಿತೆಂದು ಪೊಲೀಸರಿಗೆ ತಿಳಿಸಹೊರಟ ಮುಸ್ಲಿಂ ರೈತನನ್ನು ಮನಬಂದಂತೆ ಹೊಡೆದು, ಕೊನೆಗೆ ಅವನ ತಪ್ಪಿಲ್ಲವೆಂದು ತಿಳಿದಾಗ ವಾಪಸ್ ಕಳುಹಿಸಿತ್ತು ಅಲ್ಲಿನ ಪೊಲೀಸ್. ಇತ್ತೀಚೆಗೆ ಮಂಗಳೂರಿನಲ್ಲಿ ಬಂಧಿತರಾದ ಶಂಕಿತ ಉಗ್ರರನ್ನು ಮುಂಬೈಗೆ, ಮತ್ತೆ ಬೆಂಗಳೂರಿಗೆ, ಪುನಹ ಗುಜರಾತಿಗೆ, ಹೀಗೆ ಬೇಕಾದಲ್ಲಿಗೆ ಕರೆಸಿಕೊಂಡು ಇನ್ವೆಸ್ಟಿಗೇಟ್ ಮಾಡುತ್ತಾರೆ. ಮುಂಬೈಯಲ್ಲಿ ಇದೇ ಖರ್ಖರೆಯ ಕೈಲಿ ಇನ್ವೆಸ್ಟಿಗೇಶನ್ ನಡೆದು ಅವರಿಗೆ ಬೇಕಾದ್ದು ಏನೂ ಸಿಗಲಿಲ್ಲವಾಗಿ ವಾಪಸ್ ತಂದುಬಿಟ್ಟಿದ್ದರು. ಆದರೂ ಅವರಿಗೆ ಮುಕ್ತಿ ಸಿಕ್ಕಿಲ್ಲ. ಮುಗ್ಧರು ಶಂಕಿತರ ಹೆಸರಲ್ಲಿ ಪೊಲೀಸರ ವಶವಾಗುವುದು ಹೊಸತೇನಲ್ಲ, ಒಬ್ಬ ಕಳ್ಳನನ್ನು ಹಿಡಿಯಲು ಕೆಲವೊಮ್ಮೆ ನೂರು ಜನ ಮುಗ್ಧರನ್ನು ಪರೀಕ್ಷೆ ಮಾಡಬೇಕಾಗುತ್ತದೆ, ಅದು ಅನಿವಾರ್ಯ ಕೂಡ, ಒಪ್ಪಬಹುದಾದದ್ದು ಕೂಡ - ಕಾನೂನಿನ ಚೌಕಟ್ಟಿನಲ್ಲಿ ನಡೆಯವ ವರೆಗೆ) ಉಗ್ರ ಮೈಲ್ ಕಳುಹಿಸಿದವರು ತಮ್ಮ ಮುಂದಿನ ಗುರಿ ಮುಂಬೈ ಅಂತ ನೇರವಾಗಿ ಹೇಳಿದ್ದರು. ಮುಂಬೈ ಎಟಿಎಸ್ (ಹೇಮಂತ್ ಕಾರ್ಕರೆ), ಗುಜರಾತ್ ಎಟಿಎಸ್ (ಪಿಸಿ ಪಾಂಡೆ), ಮೋದಿ, ವಿಲಾಸ್ ರಾವ್ ದೇಶಮುಖ್, ಆರ್ ಆರ್ ಪಾಟೀಲ್, ರಾಜಸ್ತಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ - ಎಲ್ಲರ ಮೇಲೆ ಕಿಡಿಕಾರಲಾಗಿತ್ತು. ಸಂಘಪರಿವಾರದ ಉಗ್ರಕೃತ್ಯಗಳ ಮೇಲೆ ಕ್ರಮ ಕೈಗೊಂಡಿಲ್ಲವೆಂದು ನೇರವಾಗಿ ಮುಂಬೈ ಎಟಿಎಸ್ ಮೇಲೆ ಆಪಾದಿಸಲಾಗಿತ್ತು. ಕೇಸರಿ ಭಯೋತ್ಪಾದನೆಯ ವಿಚಾರ ಬಂದಾಗ ಮಾಧ್ಯಮಗಳು ಹೇಗೆ ಇಡಿಯ ಎಪಿಸೋಡನ್ನು ಮುಚ್ಚಿಹಾಕಿದವೆಂದು reference ಸಮೇತ ವಿವರಿಸಲಾಗಿತ್ತು. ಅಲ್ಲಿಂದ ಎಲ್ಲೆಲ್ಲೋ ಹೋಗಿ, ಕೊನೆಗೆ ಜೆಹಾದ್ ಪ್ರತಿಜ್ಞೆಯೊಡನೆ ಮುಕ್ತಾಯವಾಗಿತ್ತು.

ಸರಿ, ಅದರಲ್ಲಿ ಹೇಳಿದ ಬಜರಂಗ್ ಬಾಂಬ್ ಬಗ್ಗೆ ಏನಾದರೂ ಇಂಡಿಯನ್ ಎಕ್ಸ್-ಪ್ರೆಸ್ ವೆಬ್-ಸೈಟಲ್ಲಿ ಸಿಗುತ್ತದಾ ಅಂತ ಹುಡುಕಿದೆ. ಸರ್ಚ್ ರಿಸಲ್ಟ್-ನಲ್ಲಿ ಹಲವು ವರದಿಗಳು ಸಿಕ್ಕಿದವು. ಲಿಂಕ್ ತೆರೆಯಹೋದರೆ ಯಾಕೋ ಗೊತ್ತಿಲ್ಲ, ಹಲವು ಲಿಂಕುಗಳಲ್ಲಿದ್ದ ಲೇಖನಗಳು ಡಿಲೀಟ್ ಆಗಿಬಿಟ್ಟಿದ್ದವು, ಇನ್ನು ಹಲವು ಓದಲು ಸಿಕ್ಕಿದವು. ಓದಲು ಸಿಕ್ಕಿದ್ದೆಲ್ಲವನ್ನೂ ಓದಿದೆ. ಓದುತ್ತ ಓದುತ್ತ ಎಲ್ಲೆಲ್ಲೋ ಹೋಗಿ, ನಾನು ಈ ಪುಟಕ್ಕೆ ಬಂದು ನಿಂತೆ... ಅಂತರ್ರಾಷ್ಟ್ರೀಯ ವಿಚಾರಗಳ ಬಗ್ಗೆ ಎಂದೂ ಹೆಚ್ಚು ತಲೆಕೆಡಿಸಿಕೊಂಡಿಲ್ಲದ ನಾನು ಇಲ್ಲಿವರೆಗೆ ಕೇಳಿಯೇ ಇರದ ಹೆಸರು - ಮೊಸ್ಸಾಡ್, ಮೊದಲ ಬಾರಿಗೆ ಅತ್ಯಂತ ಶಾಕಿಂಗ್ ಅನಿಸುವ ರೀತಿಯಲ್ಲಿ ಕಣ್ಣೆದುರಿಗೆ ಬಂದು ನಿಂತಿತ್ತು..

ಅಲ್ಲಿಂದ ಮತ್ತೆ ಅಲ್ಲಿರುವ ಎಲ್ಲಾ ಲಿಂಕುಗಳಿಗೂ ವಿಸಿಟ್ ಕೊಟ್ಟು, ಏನೇನಿದೆ ಅಂತ ನೋಡಿದೆ, ಅರ್ಥವಾದದ್ದು ಓದಿದೆ, ಅರ್ಥವಾಗದ್ದು ಬಿಟ್ಟೆ. ನನಗೆ ಅರ್ಥವಾದುದರ ಸಾರಾಂಶ ಇಷ್ಟು - ಭಾರತದಲ್ಲಿ ನಡೆಯುತ್ತಿರುವ anti-islamic ಉಗ್ರವಾದದ ಹಿಂದೆ - ಅಂದರೆ ಸಪ್ಟೆಂಬರ್ 26 -2008ರ ಮಾಲೆಗಾಂವ್ ಸ್ಫೋಟ, ನಾಂದೆಡ್-ನಲ್ಲಿ ಭಜರಂಗ ಕಾರ್ಯಕರ್ತರು ಸತ್ತ ಸ್ಫೋಟದ ಹಿಂದೆ, 64 ಜನ ಪಾಕಿಸ್ತಾನಿಗಳನ್ನು ಕೊಂದ, ಭಾರತ-ಪಾಕ್ ಸ್ನೇಹಸೇತುವಾದ ಸಂಝೋತಾ ಎಕ್ಸ್-ಪ್ರೆಸ್ ಸ್ಫೋಟದ ಹಿಂದೆ, ಹೈದರಾಬಾದಿನ ಲುಂಬಿನಿ ಗಾರ್ಡನ್ ಮಸೀದಿ ಸ್ಫೋಟದ ಹಿಂದೆ - ಸಂಘಪರಿವಾರವಿದೆ; ಅದರ ಹಿಂದೆ ಇಸ್ರೇಲಿ ಗುಪ್ತಚರ ಸಂಸ್ಥೆ MOSSADನ ಕೈವಾಡವಿದೆ, ಪ್ರೋತ್ಸಾಹವಿದೆ ಅಂತ ಈ ಲೇಖನಗಳನ್ನು ಬರೆದವರ ಹೇಳಿಕೆ. MOSSADಗೆ ಮತ್ತು ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಸಂಬಂಧವಿದೆಯೆಂದು ಕೂಡ ಇಲ್ಲಿ ಕಂಡುಬರುವ ಲೇಖನಗಳಲ್ಲಿ ಓದಲು ಸಿಗುತ್ತದೆ. ಅಮೆರಿಕಾದ CIA ಮತ್ತು ಭಾರತದ RAW MOSSADನ ಬೆಂಬಲಕ್ಕಿದ್ದು ಭಾರತದಲ್ಲಿ ಮತ್ತು ಜಗತ್ತಿನ ಇತರೆಡೆ ಕೆಲಸ ಮಾಡಿಸುತ್ತವೆ ಅಂತಲೂ ಓದಿ, ತಲೆಬಿಸಿಯಾಯಿತು. ಇವನ್ನೆಲ್ಲ ಸತ್ಯವೇ ಸುಳ್ಳೇ ಅಂತ ತೂಗುವುದು ನನ್ನ ಪೆದ್ದು ತಲೆಯ ಲಾಜಿಕ್-ಗೆ ಸಾಧ್ಯವಾಗಲಿಲ್ಲ. ಯಾವುದು ಸರಿ, ಯಾವುದು ತಪ್ಪು ಅಂತ ಗೊತ್ತಾಗದೆ ಸುಮ್ಮನೆ ಎಲ್ಲವನ್ನೂ ಓದುತ್ತಾ ಹೋದೆ.

ಹೀಗೆ ಇಸ್ರೇಲ್ ಬಗ್ಗೆ ಓದುತ್ತಿರುವಾಗ, ಇಸ್ರೇಲ್-ನವರು ಯಾರೋ ಈ ಸ್ಫೋಟದಲ್ಲಿ ಸತ್ತಿದ್ದರಲ್ಲ, ಯಾವುದೋ ಪುಟ್ಟ ಅನಾಥ ಮಗುವಿದು ಸುದ್ದಿಯಾಗಿತ್ತಲ್ಲ ಅಂತ ನೆನಪಾಯ್ತು. ಹುಡುಕಿದರೆ ಹೌದು - ಮೂವತ್ತೂ ದಾಟದ ಯುವಜೋಡಿ Gavriel Holtzberg ಮತ್ತು Rivka Holtzberg, ನಾರಿಮನ್ ಹೌಸ್-ನಲ್ಲಿ ಮುಂಬೈನ ಯಹೂದಿಗಳ ಸಮುದಾಯಕ್ಕೆ ಬೇಕಾದ ಧಾರ್ಮಿಕ ಮತ್ತು ಸಾಮುದಾಯಿಕ ಕೆಲಸ ಕಾರ್ಯಗಳನ್ನು ನಡೆಸುತ್ತಿದ್ದವರು... ಇವರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಕೊನೆಗೆ ಉಗ್ರರು ಸಾಯಿಸಿದ್ದರು. ನಾರಿಮನ್ ಹೌಸ್-ಗೆ ಚಬಡ್ ಹೌಸ್ ಅನ್ನುತ್ತಾರೆ, ಅದರಲ್ಲಿದ್ದವರು ಮುಖ್ಯವಾಗಿ ಇಸ್ರೇಲಿ ಯಹೂದಿಗಳೇ, ಮತ್ತು ಇಸ್ರೇಲಿಗಳಿಗಾಗಿಯೇ ಅದು ಇತ್ತು ಅಂತ ಆಗಷ್ಟೇ ನಂಗೆ ಗೊತ್ತಾಯಿತು.

ಹಾಗೆಯೇ, MOSSAD ವೆಬ್-ಸೈಟಿಗೆ ಹೋದೆ. ಗುಪ್ತಚರ ಕೆಲಸಗಳ ಜತೆಗೆ ಅಗತ್ಯವಿರುವ counterterrorism ಕೆಲಸಗಳನ್ನು ಕೂಡ ತಾನು ನಡೆಸುವುದಾಗಿ ತನ್ನ ವೆಬ್-ಸೈಟಿನಲ್ಲಿ MOSSAD ಹೇಳಿಕೊಳ್ಳುತ್ತದೆ. ಇಷ್ಟೆಲ್ಲ ಓದಿದ ನಂತರ ತಲೆಯೆಲ್ಲ ಕೆಟ್ಟು ಚಿತ್ರಾನ್ನವಾಯಿತು. ಸರಿ, ಸಹವಾಸ ಬೇಡವೆಂದುಕೊಂಡು ಕಂಪ್ಯೂಟರ್ ಲಾಗಾಫ್ ಮಾಡಿದೆ.
---------------
ನವೆಂಬರ್ 30, ಡಿಸೆಂಬರ್ 1:
ಆ ಪುಟ್ಟ ಮಗು, ಅದರ ಸತ್ತುಹೋದ ಇಸ್ರೇಲಿ ಅಪ್ಪ-ಅಮ್ಮನ ಬಗ್ಗೆ ಕರುಳು ಮಿಡಿಯುವ ಹಾಗೆ ಚಾನೆಲುಗಳು ಕೊಡುತ್ತಿದ್ದವು. ಕೆಲವು ಚಾನೆಲುಗಳು 22 ಉಗ್ರರಿದ್ದರು, 10 ಜನ ಮಾತ್ರ ಸಿಕ್ಕಿದ್ದಾರೆ, ಉಳಿದ ಉಗ್ರರು ಮಿಸ್ ಆಗಿದ್ದಾರೆ, ಅಂದವು. ಮತ್ತೆ ಕೆಲವು ಚಾನೆಲುಗಳು ಹೇಮಂತ ಖರ್ಖರೆಯ ಸಾವಿನ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದವು. ಪಾಟೀಲ್ ಮತ್ತು ದೇಶಮುಖ್ ತಲೆದಂಡದ ಪ್ರಕ್ರಿಯೆ ಆರಂಭವಾಗಿತ್ತು. ಸುತ್ತಮುತ್ತಿಂದೆಲ್ಲ ತನ್ನ ಮೇಲೆ ಬರುತ್ತಿದ್ದ ಆಪಾದನೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಪಾಕ್ ಕಕ್ಕಾಬಿಕ್ಕಿಯಾಗಿತ್ತು. ತಲೆ ಕೆಡಿಸುವ ಇಂಟರ್ನೆಟ್ಟು, ಮೂರ್ಖ ಟೀವಿಗಳ ಸಹವಾಸ ಬೇಡವೆಂದು ನಾನು ಮನೆಯ ಕೆಲಸಕಾರ್ಯಗಳಲ್ಲಿ, ಎಷ್ಟೋದಿನಗಳಿಂದ ಮಾಡಲು ಬಾಕಿಯಿದ್ದಂತಹ ಕೆಲಸಗಳಲ್ಲಿ ತೊಡಗಿದೆ. ಒಂದಿಷ್ಟು ಕಥೆಗಳು ಓದಿದೆ. ಆದರೂ ಕುತೂಹಲ ತಡೆಯಲಾಗದೆ ನಮ್ಮ ಬ್ಲಾಗಿಗರು ಏನು ಬರೆದಿದ್ದಾರೆ ಅಂತ ನೋಡಿದೆ. ಖುಷಿಯಾದದ್ದನ್ನು ಗೂಗಲ್-ರೀಡರಿನಲ್ಲಿ ಶೇರ್ ಮಾಡಿಕೊಂಡೆ.

ಡಿಸೆಂಬರ್ 2:
ಬೆಳಗಾಗೆದ್ದು ನೋಡಿದರೆ ಕನ್ನಡಪ್ರಭದಲ್ಲಿ ಇಸ್ರೇಲ್-ನ ಮೇಜರ್ ಜನರಲ್ ಭಾರತದ NSG ಕಾರ್ಯಾಚರಣೆ ಸರಿಯಿಲ್ಲವೆಂದಿದ್ದು ಕಾಣಿಸಿತು. ಆದರೆ ಇಸ್ರೇಲ್ ಸರಕಾರ ಭಾರತದ ಕಾರ್ಯಾಚರಣೆಯನ್ನು ಶ್ಲಾಘಿಸಿತ್ತು. ಇರಲಿ, ಕನ್ನಡ ಬ್ಲಾಗಿಗರೆಲ್ಲ ಏನೇನು ಬರೆದಿದ್ದಾರೆ ಅಂತ ನೋಡಹೊರಟರೆ ಗೃಹಸಚಿವರ ಬ್ಲಾಗಿನಲ್ಲಿ ಇಸ್ರೇಲಿಗೆ ಹೊಗಳಿ ಬರೆದಿದ್ದು ಕಾಣಿಸಿತು. ಹಾಗೇ ವೇಣುವಿನೋದ್ ಬ್ಲಾಗಿನಲ್ಲೂ ಕೂಡ. ಇದ್ಯಾಕಪ್ಪಾ ಕೇವಲ ಎರಡು-ಮೂರು ದಿನದಲ್ಲಿ ಎಲ್ಲೆಲ್ಲೂ ನಂಗೆ ಇಸ್ರೇಲೇ ಕಾಣ್ತಿದೆ... ಇಷ್ಟು ದಿನ ಗೊತ್ತೇ ಇಲ್ಲದ ವಿಚಾರಗಳೆಲ್ಲ ಗೊತ್ತಾಗ್ತಿವೆ ಅಂತ ತಲೆಬಿಸಿಯಾಯಿತು. ಇದ್ದಕ್ಕಿದ್ದಂತೆ ಇಸ್ರೇಲ್ ಭಾರತದಲ್ಲಿ ಇಷ್ಟು ಹೆಸರು ಯಾಕೆ ಮಾಡುತ್ತಿದೆ ಅಂತ ಟೆನ್ಶನ್ ಆಯಿತು.

ಡಿಸೆಂಬರ್ 5:

ಇವತ್ತು ಇದೇ ವಿಚಾರದಲ್ಲಿ ಮತ್ತಷ್ಟು ಲಿಂಕುಗಳು ಸಿಕ್ಕಿವೆ. ವಿವಿಧ ಆಧಾರಗಳನ್ನಿಟ್ಟುಕೊಂಡು ಈಸಲದ ದಾಳಿ ಕೂಡ ಇಸ್ರೇಲ್ ಮತ್ತು ಅಮೆರಿಕಾ ಕುಮ್ಮಕ್ಕಿನಿಂದಲೇ ನಡೆದಿವೆ ಅನ್ನುತ್ತಿವೆ. ಇವರ ಲೆಕ್ಕಾಚಾರಗಳ ಮತ್ತು ಅಭಿಪ್ರಾಯಗಳ ಪ್ರಕಾರ, ಪಾಕಿಸ್ತಾನವನ್ನು ಸಿಕ್ಕಿಸಲು ಮತ್ತು ಜೆಹಾದ್ ಹೆಸರಲ್ಲಿ ನಡೆಯುವ ಉಗ್ರವಾದವನ್ನು ಹತ್ತಿಕ್ಕಲು ಉಳಿದೆಲ್ಲಾ ದೇಶಗಳು ಸೇರಿಕೊಂಡು ಮಾಡಿದ ಷಡ್ಯಂತ್ರವೇ ಈ ಉಗ್ರರ ದಾಳಿ. ಇವರು ಹೇಳುವುದನ್ನು ನಂಬುವುದಾದರೆ, ಪಾಕ್ ಈಗ ಪಾಪ, ಮೊಸರು ತಿಂದ ಮಂಗನ ಪಕ್ಕದಲ್ಲಿದ್ದ ಆಡಿನಂತಾಗಿದೆ. ಭಾರತ ಕೊಟ್ಟ ಮೋಸ್ಟ್ ವಾಂಟೆಡ್ ಲಿಸ್ಟ್-ನ ವ್ಯಕ್ತಿಗಳನ್ನು ಪಾಕ್ ಒಪ್ಪಿಸದಿದ್ದರೆ, ಮುಂದಾಗುವುದು ಬಹುಶ: ಸಮರವೇ. ಅದಕ್ಕಾಗಿ ಅತ್ತಕಡೆಯಿಂದ ಈಗಾಗಲೇ ತಾಲಿಬಾನನ್ನೂ ಎತ್ತಿಕಟ್ಟಿಯಾಗಿದೆ.

ಹಾಗೆಂದು ಇಸ್ರೇಲಿ ರಾಬ್ಬಿಗಳು ಸತ್ತಿದ್ದಕ್ಕೂ ಇವರು ಕಾರಣ ಹೇಳುತ್ತಾರೆ - ಸತ್ತ ರಾಬ್ಬಿಗಳು ಝಿಯೋನಿಸ್ಟ್-ಗಳು ಅಲ್ಲವಂತೆ, MOSSAD ಯಹೂದಿಗಳು ವಿಶ್ವವನ್ನಾಳಬೇಕೆಂದು ಹೇಳುವ ಕಟ್ಟಾ ಝಿಯೋನಿಸ್ಟ್ ಪಂಗಡವನ್ನು ಬೆಂಬಲಿಸುತ್ತದಂತೆ. ಅಂದಹಾಗೆ, ಸತ್ತ ಇಸ್ರೇಲಿಗಳ ಶರೀರಗಳನ್ನು ವಾಪಸ್ ತಗೊಂಡು ಹೋದಾಗ ಅಲ್ಲಿ ಸರಕಾರ STATE HONOURS ಕೊಡುತ್ತೇನೆಂದರೆ ಸಂಬಂಧಿಕರೆಲ್ಲ ಅದನ್ನು ತಿರಸ್ಕರಿಸಿದರಂತೆ. ಯಾಕೆಂದರೆ, ಚಬಡ್ ಹೌಸ್-ನಲ್ಲಿ ಸತ್ತವರು ಕಟ್ಟಾ ಝಿಯೋನಿಸ್ಟ್-ಗಳು ಆಗಿರಲಿಲ್ಲವಂತೆ. ಅವರ ಮೇಲೆ ಸೇಡು ತೀರಿಸಿದ ಹಾಗೂ ಆಯಿತು, ಭಾರತದ ಮುಸ್ಲಿಮರ ಮೇಲೆ ಸೇಡು ತೀರಿಸಿದ ಹಾಗೂ ಆಯಿತು ಅಂತ ನಾರಿಮನ್ ಹೌಸ್ ಮೇಲೆ ಕೂಡ ಅಟ್ಯಾಕ್ ಮಾಡಿದರಂತೆ.

ಇದಕ್ಕಿಂತ ಹಿಂದೆ ನಾನು ಏಳೆಂಟು ವರ್ಷದ ಹಿಂದೆ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಮಾಡುವ ದಾಳಿಗಳ ಮೂಲಕ ಮಾತ್ರ ಇಸ್ರೇಲ್ ಬಗ್ಗೆ ತಿಳಿದಿದ್ದೆ. ಎಷ್ಟೋ ವರ್ಷಗಳ ನಂತರ ನಂಗೆ ಇಸ್ರೇಲ್ ಬಗ್ಗೆ ಹುಟ್ಟಿದ್ದು ಒಂದುರೀತಿಯ ಪವಿತ್ರ ಕಲ್ಪನೆ, ಅದು ಬಂದಿದ್ದು ನೇಮಿಚಂದ್ರ ಬರೆದ ಯಾದ್ ವಶೇಮ್ ಓದಿ. ಈಗ ನಂಗೆ ಕಾಣುತ್ತಿರುವ ಇಸ್ರೇಲ್ ಬೇರೆಯದೇ... ಇದು, ಅಮೆರಿಕಾ ಜತೆ ಸೇರಿ ಯಹೂದಿ ಜಗತ್ತು ಕಟ್ಟಹೊರಟಿರುವ ಇಸ್ರೇಲ್. ಜೆಹಾದಿ ಭಯೋತ್ಪಾದನೆಯನ್ನು, ಮುಸ್ಲಿಂ ರಾಷ್ಟ್ರಗಳನ್ನು ಹದ್ದುಬಸ್ತಿನಲ್ಲಿಡಲು ಕಟಿಬದ್ಧವಾದ ರಾಷ್ಟ್ರ...

ನನಗೆ ಈ ಮಾಹಿತಿಗಳು ಮತ್ತು ಸಂಬಂಧಿಸಿದ ವಿಷಯಗಳು ಸಿಕ್ಕಿದ ಲಿಂಕುಗಳು...

http://ghulammuhammed.blogspot.com/2008/11/cia-mossad-hand-behind-sangh-parivars.html

http://www.wakeupfromyourslumber.com/node/8534

http://en.wikipedia.org/wiki/Mossad

http://en.wikipedia.org/wiki/Mumbai_Chabad_House

http://en.wikipedia.org/wiki/Gavriel_Holtzberg

http://www.chabad.org/centers/default_cdo/aid/118651/jewish/Chabad-Mumbai.htm

http://timesofindia.indiatimes.com/India/Rabbi_wife_found_dead_at_Nariman/articleshow/3771244.cms
http://www.wakeupfromyourslumber.com/node/8534

http://www.indianmuslims.info/book/export/html/2736

http://www.wakeupfromyourslumber.com/comment/reply/9310#comment-form

http://www.thenews.com.pk/updates.asp?id=62200

http://www.hindu.com/2008/12/11/stories/2008121155660900.htm

http://www.hindu.com/2008/12/17/stories/2008121752001000.htm

http://therearenosunglasses.wordpress.com/

http://www.countercurrents.org/gatade241208.htm

(ಮುಂದುವರಿಯುವುದು...)